ಬಸವ ಜಯಂತಿ ವಿಶೇಷ ಬರಹ

ಬಸವ ಜಯಂತಿ ವಿಶೇಷ ಬರಹ

ಬಸವ ಜಯಂತಿ’ಯ ಮಹತ್ವ

ಕೆ.ಶಿವು.ಲಕ್ಕಣ್ಣವರ

ಬಸವೇಶ್ವರ ಜಯಂತಿಯು ಮೇ 3 ರಂದು ಆಚರಿಸ್ಪಡುತ್ತದೆ. ಈ ದಿನದ ಮಹತ್ವವೇನು, ಆಚರಣೆ ಹೇಗೆ ಎಲ್ಲವನ್ನೂ ಈಗ ನೋಡೋಣವೇ..!

ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯಾ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯಾ

ಕೂಡಲಸಂಗಮದೇವಾ ಕೇಳಯ್ಯಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಹೀಗೆಯೇ ಮನುಕುಲಕ್ಕೆ ಮಹಾ ಸಂದೇಶಗಳನ್ನು ನೀಡಿದ ಬಸವಣ್ನನವರ ಜಯಂತಿ ಮೇ 3 ರಂದು ಬರುತ್ತದೆ.

ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮಾಜ ಈ ದಿನವನ್ನು ಅತ್ಯಂತ ದೊಡ್ಡದಾಗಿ ಆಚರಿಸುತ್ತದೆ. ಇದಲ್ಲದೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿಯೂ ಬಸವ ಜಯಂತಿ ಆಚರಣೆಯು ನಡೆಯುತ್ತದೆ.

ಹನ್ನೆರಡನೇ ಶತಮಾನದ ಬಹು ದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಮೇಲು ಕೀಳು, ಜಾತಿ ಧರ್ಮ, ಮಡಿ ಮೈಲಿಗೆ ತುಂಬಿದ್ದ ಸಮಾಜದ ಸಮಯದಲ್ಲಿ ನೊಂದವರ, ದೀನ ದಲಿತರ ಉದ್ಧಾರಕ್ಕೆ ನಿಂತವರು..! ಕೆಳವರ್ಗದವರನ್ನು ಮೇಲ್ವರ್ಗದವರು ಅತ್ಯಂತ ಹೀನಾಯವಾಗಿ ಕಾಣುತಿದ್ದ ಆ ಅನ್ಯಾಯವನ್ನು ಹೋಗಲಾಡಿಸಲೆಂದೇ ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಬಿಜ್ಜಳನ ವಿರುದ್ಧ, ಅಂಧ ಶ್ರದ್ಧೆಯ ವಿರುದ್ಧ ಸಿಡಿದು ನಿಂತು ಅನುಭವ ಮಂಟಪ ನಿರ್ಮಿಸಿದರು. ಅದರಡಿ ಎಲ್ಲಾ ವರ್ಗದವರನ್ನೂ ಬರ ಮಾಡಿಕೊಂಡರು. ಕಾಯಕವೇ ಕೈಲಾಸ ಎಂದು ಸಾರಿ, ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಹುಮ್ಮಸ್ಸುನ್ನು ತುಂಬಿದರು. ‘ವಸುದೈವ ಕುಟುಂಬಕಂ’ ಎನ್ನುತ್ತಾ ಎಲ್ಲರಲ್ಲೂ ಸಹೋದರತ್ವದ ಸಂದೇಶ ಸಾರಿದರು ನಮ್ಮ ಬಸವಣ್ಣನವರು..!

ಮೂಢನಂಬಿಕೆ, ಮಡಿ ಮೈಲಿಗೆಯಿಂದ ತುಂಬಿದ್ದ ಸಮಾಜದ ನಡುವೆ ಬಸವಣ್ಣನವರ ವಚನಗಳು ಜೀವನವನ್ನು ಮತ್ತು ದೇವರನ್ನು ವಿಭಿನ್ನವಾಗಿ ನೋಡುವ ದೃಷ್ಟಿ ನೀಡಿದವು.

ಜಾತಿರಹಿತ ಸಮಾಜದ ಕನಸನ್ನು ಕಂಡ ಬಸವಣ್ಣನವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏಳ್ಗೆ ಪಡೆಯಲು ಸಮಾನ ಅವಕಾಶ ಬೇಕೆಂದು ಬಯಸಿದವರು. ತಮ್ಮೆಲ್ಲ ಈ ದೂರದೃಷ್ಟಿಯ ಸಮಾಜ ನಿರ್ಮಾಣಕ್ಕಾಗಿ ‘ಅನುಭವ ಮಂಟಪ’ವನ್ನು ಹುಟ್ಟು ಹಾಕಿದರು. ಈ ಅನುಭವ ಮಂಟಪದಲ್ಲಿ ಲಿಂಗಾಯತ ಮತ ನಂಬಿಕೆಯ ತತ್ವಜ್ಞಾನಿಗಳನ್ನು ಕಲೆ ಹಾಕಿ ಮನುಷ್ಯನ ನೈತಿಕತೆ ಮತ್ತು ಆದರ್ಶಗಳ ಬಗೆಗೆ ನಿರಂತರ ಚರ್ಚೆಗಳನ್ನು ಹುಟ್ಟು ಹಾಕಿದರು. ‘ಅಲ್ಲಮ ಪ್ರಭು’ ಸೇರಿದಂತೆ ಸಮಾಜದ ಕೆಳವರ್ಗ ಎನಿಸಿಕೊಂಡಿದ್ದ ಸಾಕಷ್ಟು ಜನರು ಶರಣರಾಗಿ ಈ ಅನುಭವ ಮಂಟಪದಿಂದ ಹೊರಬಂದರು..!

ಬಸವಣ್ಣ ಕೂಡಾ ಈ ಅನುಭವ ಮಂಟಪದಲ್ಲಿ ಅಭ್ಯರ್ಥಿಯಾಗಿ ಪಾಲು ವಹಿಸಿದರು. ಅಕ್ಕ ಮಹಾದೇವಿ, ಚನ್ನಬಸವಣ್ಣ ಇವರೆಲ್ಲರೂ ‘ಅನುಭವ ಮಂಟಪ’ದ ಮಹಾನ್ ಶರಣರು. 

ಈ ನಾಲ್ಕು ರಾಶಿಗಳ ಜನ ತಮ್ಮ ಆರೋಗ್ಯ ಲೆಕ್ಕಿಸದೇ ಇತರರನ್ನು ಕಾಳಜಿ ಮಾಡ್ತಾರೆ..!

 ಅಕ್ಷಯ ತೃತೀಯದಂದೇ ಬಸವ ಜಯಂತಿ ಆಚರಣೆ ಏಕೆ? —

ಬಸವ ಜಯಂತಿಯಂದು ಕರ್ನಾಟಕದಲ್ಲಿ ಸಾರ್ವಜನಿಕ ರಜೆ ನೀಡಲಾಗುತ್ತದೆ. ಪ್ರತಿ ವರ್ಷವೂ ಅಕ್ಷಯ ತೃತೀಯದಂದೇ ಬಸವ ಜಯಂತಿಯೂ ಬರುತ್ತದೆ. ಆದರೆ, ಬಸವಣ್ಣನವರು ಯಾವಾಗ ಜನಿಸಿದರೆಂಬ ಉಲ್ಲೇಖ ಎಲ್ಲಿಯೂ ಸಿಗುವುದೂ ಇಲ್ಲ. ಆದರೂ ಅಕ್ಷಯ ತೃತೀಯದಂದೇ ಬಸವ ಜಯಂತಿ ಆಚರಿಸುವುದರ ಹಿನ್ನೆಲೆ ಇಲ್ಲಿದೆ..!

ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ‘ಹರ್ಡೇಕರ ಮಂಜಪ್ಪನವರು’ 1913 ರಲ್ಲಿ ಸಾರ್ವಜನಿಕವಾಗಿ ‘ಬಸವ ಜಯಂತಿ’ಯ ಆಚರಣೆ ಶುರು ಮಾಡಲು ನಿಶ್ಚಯಿಸಿದರು.

ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ‘ಬಸವ ಜಯಂತಿ’ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕ ತಿಳಿಯದಿರುವುದು ದೊಡ್ಡ ಗೊಂದಲವಾಯಿತು. ಆಗ ಮುರುಘಾಮಠದ ‘ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು’ ಅಕ್ಷಯ ತದಿಗೆಯಂದು ‘ಬಸವ ಜಯಂತಿ’ಯನ್ನು ಆಚರಿಸಲು ತಿಳಿಸಿದರು. ಅಂದಿನಿಂದಲೂ ಅಕ್ಷಯ ತೃತೀಯದಂದು ‘ಬಸವ ಜಯಂತಿ’ ಆಚರಿಸಿಕೊಂಡು ಬರಲಾಗುತ್ತಿದೆ. 

ಈ ದಿನ ಎಲ್ಲಾ ‘ಬಸವಣ್ಣ’ನ ಬೆಂಬಲಿಗರು ಅವರ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಸಮಾಜಕ್ಕೆ ಬಸವಣ್ಣನವರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾರೆ. ಜೊತೆಗೆ ಬಸವಣ್ಣನ ವಚನಗಳು ಎಲ್ಲೆಡೆ ಹರಿದಾಡುತ್ತವೆ..!ಹೀಗಿದೆ ‘ಬಸವಣ್ಣ’ನವರ ‘ಬಸವ ಜಯಂತಿ’ಯ ಆಚರಣೆಯ ಹಿನ್ನೆಲೆ!


 ಕೆ.ಶಿವು.ಲಕ್ಕಣ್ಣವರ

One thought on “ಬಸವ ಜಯಂತಿ ವಿಶೇಷ ಬರಹ

  1. ಬಸವ ಜಯಂತಿ ಆಚರಣೆಯ ಹಿನ್ನೆಲೆ ತಿಳಿಸುವ ಲೇಖನಕ್ಕಾಗಿ ಧನ್ಯವಾದಗಳು ಸರ್.

Leave a Reply

Back To Top