ರೈತ ಗಝಲ್

ಗೈರ್ ಮುರಧ್ಹಫ್ ಗಜ಼ಲ್

This organisation is working with the government to provide relief in  India's drought-hit areas

ಘಮ್ಮೆನ್ನುವ ನೆಲದಲ್ಲಿ ಹೊನ್ನ ಬಿತ್ತಿದವರ ಮನೆಯ ಬಳ್ಳಗಳು ಬರಿದಾಗಿವೆ
ನಮ್ಮದೆನುವ ದೇಹಕ್ಕೆ ಅನ್ನ ಉಣಿಸಿದವರ ಕಣಜದ ಕಾಳುಗಳು ಖಾಲಿಯಾಗಿವೆ

ಕಣ್ಣು ಮುಚ್ಚಾಲೆಯಾಡುವ ಮೋಜಿನಲಿ ಮೋಡಗಳುಮಡುಗಟ್ಟಿವೆ
ಬರಗಾಲದ ಬರಸಿಡಿಲಿಗೆ ಮುರಿದಮನಗಳು ಕಂಬನಿ ಮಳೆ ಸುರಿಸುತಿವೆ

ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ

ಭರವಸೆಯ ವಾರಸುದಾರರು ನಗರದತ್ತ ಮುಖಮಾಡಿಹರು ಕನಸುಗಳ ಬೆಂಬತ್ತಿ
ನಿರಾಸೆಯ ಕಾರ್ಮೋಡವ ಒಲಿಸುವ ಸಾಹಸಗಳು ಉಸುಕಿನಲಿ ಉಚ್ಚೆ ಹೊಯ್ಯುತಿವೆ

ಬಯಸಿದ ಬೆಲೆಗಳು ಗಗನ ಕುಸುಮಗಳಾಗಿ ಹರಿಯುವ ಬೆವರ ಶ್ರಮ ಕಸಿಯುತಿವೆ
ಬೆಳೆಯುತಿಹ ಸಾಲಭಾರಕೆ ಭಾರತದ ಬೆನ್ನೆಲುಬುಗಳು ಬಾಗಿ ನೆಲ ಅಳೆಯುತಿವೆ

ಬರಲಾರದ ವರ್ಷಧಾರೆಗೆ ಉಗಿದುಗಿದು ಹಿಡಿಶಾಪ ಹಾಕಿಹಳು ಇಳೆ ಮೋಸವೆಂದು
ಮದುವೆಯಾಗದ ಮಗಳ ಹರೆಯದ ನಿಟ್ಟುಸಿರುಗಳು ಎದೆಯನು ಬಗೆಯುತಿವೆ

ಕೊಟ್ಟಿಗೆಯ ದನಗಳು ಸಾಲು ಸಾಲಾಗಿ ಕಸಾಯಿಖಾನೆ ಸೇರಿದವು ಮೇವಿಲ್ಲದೆ
ಬಾಳಿನಲಿ ಬೆಳಕ ಹರಡಿದ ನಂಬಿಕೆಯ ಶಮೆಗಳು ಎಣ್ಣೆಯಿರದೆ ಆರುತಿವೆ

*************************

ಶಮಾ. ಜಮಾದಾರ.

3 thoughts on “

Leave a Reply

Back To Top