ನೆತ್ತರ ಚಿತ್ತಾರ

ಕವಿತೆ

ನೆತ್ತರ ಚಿತ್ತಾರ

ಜಹಾನ್ ಆರಾ ಕುಷ್ಟಗಿ

Image result for photos of human masks in arts

ಬಯಲು ಬಿಳಿಹಾಳೆಯಾಗಿರಲಿಲ್ಲ
ಸುಂದರ ರಂಗವಲ್ಲಿಯ
ಅಂಗವು ಆಗಿರಲಿಲ್ಲ
ರಶ್ಮಿಕೆಯ ಬಾನು ಇದಾಗಿರಲಿಲ್ಲ
ಚಂಚಲ ರೇಶಿಮೆಯ
ಸೆರಗಂತೂ ಮೊದಲೇ ಅಲ್ಲ

ಬಯಲಾಗಿದ್ದರೆ…
ಹೊಲ ಮಾಡಿ ಉತ್ತಬಹುದಿತ್ತು
ರಂಗೋಲಿಯಾಗಿದ್ದಿದ್ದರೆ…
ನಕ್ಷತ್ರಗಳ ತಂದಿರಿಬಹುದಿತ್ತು
ರಶ್ಮಿಕೆಯ ರಿಂಗಣ ತಾನಾಗಿದ್ದರೆ..
ಕಾಮನಬಿಲ್ಲುಗಳನ್ನು ರಿಂಗಣಕೆ
ಅಣಿಗೊಳಿಸಬಹುದಿತ್ತು
ಚೆಲುವೆಯ ಮೈಸಿರಿಯಂತೆ
ರೇಷ್ಮೆಯ ಅಂಚಾಗಿದ್ದರೆ…..
ನೋವಾದರೂ ಸೆರಗಿನಲ್ಲಿ
ಭದ್ರ ಪಡಿಸಬಹುದಿತ್ತು
ಇದು ಯಾವುದು ಆಗಲಿಲ್ಲವಲ್ಲ!

ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು
ಉಸಿರು ಕಟ್ಟಿಸಿ
ಇನ್ನೇನು ಸತ್ತೇ ಹೋದೆ…
ಧಿಗ್ಗನೇ ಎದ್ದರೂ ಇದು ಸ್ಮಶಾನಮೌನ

ಸುತ್ತಮುತ್ತ ಇರುವವರೆಲ್ಲಾ
ನನ್ನವರೆಂದು ಬಗೆದರೂ
ಬಗೆಬಗೆಯ ಮುಖವಾಡಧಾರಿಗಳು
ಮರವಾಗಬೇಕೆಂದರೂ ಬಿಡದೇ
ಬೇರನ್ನೇ ನೆಕ್ಕಿ ಕಚ್ಚಿ ತಿಂದವರು
ಫಲಗಳ ಸಿಪ್ಪೆ ಗೊರಟೆ ಸಹಿತ
ರಸ ಹೀರಿ ಕಚ್ಚಿದವರು
ಬೀಜವಾಗಿಯಾದರೂ ಉಳಿಸಿದ್ದರೆ ನಾ
ಮತ್ತೊಂದು ಮರವನ್ನು ಸೃಷ್ಟಿಸುತ್ತಿದೆ.

ಅವರೆಲ್ಲರನ್ನೂ ಹೂತಿರುವ
ಭೂಮಿ ವಿಷವಾಗಿದೆ
ಅದರಲ್ಲಿ ಮೊಳಕೆ ಒಡೆದು
ವಿಷವೃಕ್ಷ ನಾನಾಗಲಾರೆ
ವಿಷಹರವೂ ನಾನಾಗಲಾರೆ

ಗಾಳಿಯಾಗಿ ನಿಲ್ಲಬಲ್ಲೆ ಅಷ್ಟೇ
ಬಿಳಿಯ ಹಾಳೆಯ ಮೇಲೆ
ಚಂದದ ಚಿತ್ರವಾಗಬಲ್ಲೆ
ಚಂಚಲಯ ಮೈದುಂಬಿದ ಸೆರೆಗಾಗಬಲ್ಲೆ
ಸಾಲದೆಂಬಂತೆ ಭೂಮಿತೂಕ
ನಾನಾಗಿ ಇನ್ನು ಝಳಪಿಸಿ
ನವದುರ್ಗಿಯು ಆಗಬಲ್ಲೆ
ಎಲ್ಲಿಯವರೆಗೆ?
ಈ ವಿಷ ಅಮೃತವಾಗುವವರೆಗೆ.

***************************************

4 thoughts on “ನೆತ್ತರ ಚಿತ್ತಾರ

  1. ಎಲ್ಲೇ ಮೀರಿದ ಕಲ್ಪನೆ, ಸೊಗಸಾದ ಪದಗಳ ಜೋಡಣೆ ಮುಂದುವರಿಸು ಮಗಳೇ. ನಿನಗೆ ಸದಾ ಶುಭವನ್ನೇ ಕೋರುವೆ

Leave a Reply

Back To Top