ಗೋವು ಮತ್ತು ರೈತ

ಕವಿತೆ

ಗೋವು ಮತ್ತು ರೈತ

ಡಾ.ಶಿವಕುಮಾರ್ ಮಾಲಿಪಾಟೀಲ

ಗೋವು ಪುಣ್ಯಕೋಟಿ
ರೈತ ಪುಣ್ಯಾತ್ಮ
ಗೋವು ತ್ಯಾಗಿ
ರೈತ ಯೋಗಿ

ಗೋವು ಬೀದಿಪಾಲಾಗಿದೆ
ರೈತ ಗುಳೆ ಹೊರಟಿದ್ದಾನೆ

ಇಬ್ಬರೂ ಮೂಖರೆ
ಇಬ್ಬರೂ ಅಮಾಯಕರೆ

ರೈತ ಕಷ್ಟ ಪಡುತ್ತಾನೆ
ಹಗಲು ರಾತ್ರಿ ಎನ್ನದೆ
ಜಗಕೆ ಅನ್ನ ಕೊಡಲು
ಜಾತಿ ಧರ್ಮ ನೋಡದೆ

ಎತ್ತು ಕಷ್ಟ ಪಡುತ್ತದೆ
ರೈತ ಮಿತ್ರನಾಗಿ ಉಳಿಮೆ
ಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟು
ತಿಂದರೂ ಒಮ್ಮೆಯೂ ಎದುರಾಡದೆ

ಗೋವಿನ ಹಾಲು ಮೊಸರು
ತುಪ್ಪ ನೀಡುತ್ತದೆ ಮಕ್ಕಳಿಂದ
ಮುದುಕರವರೆಗೆ
ಜಾತಿ ಧರ್ಮ ಕೇಳದೆ

ಹೌದು
ಗೋವಿನ ಹೊಟ್ಟೆಯಲ್ಲಿ ಬಂಗಾರವಿದೆ
ರೈತನ ಬೆನ್ನಿನ ಮೇಲೆ
ದೇಶ ನಿಂತಿದೆ

ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ ಬಂಗಾರ ಹುಡುಕಲು

ರೈತನ ಬೆನ್ನು ಮುರಿಯುತ್ತಿದ್ದಾರೆ ಅಧಿಕಾರ ಪಡೆಯಲು

ಯಾರು ರಾಜನಾದರೂ
ಬಡವನಿಗೆ ಹೊಡೆಯುವುದೆ ಕಾಯಕ
ಇದು ಶತ ಶತಮಾನದ ಬಳುವಳಿ

ಪ್ರತಿ ಚುನಾವಣೆಯಲ್ಲಷ್ಟೆ
ರೈತನ ಮೂಳೆಗಳು
ಗೋವಿನ ಮಾಂಸ
ಕಾಣುತ್ತದೆ
ನಂತರ ಮತ್ತೆ
ರೈತ
ಮಾರಾಟವಾಗುತ್ತಾನೆ
ಗೋವು ರಪ್ತಾಗುತ್ತದೆ

ಜನರಿಗೂ ಗೋವು ಬೇಕು
ಗೃಹ ಪ್ರವೇಶಕ್ಕೆ ಹೋಮ ಹವನಕ್ಕೆ ನಂತರ ಬೀದಿಪಾಲು

ರೈತನೂ ಬೇಕು ಸಭೆ ಸಮಾರಂಭಗಳಿಗೆ ,ನಾಯಕರ
ಭಾಷಣಕ್ಕೆ ನಂತರ ಸಾಲದ ಪಾಲು

ಪ್ರಕೃತಿ ,ಸಮಾಜದ ಜೊತೆಗೆ
ಹೋರಾಡಿ ಸೋತು ಗೋವಿನ
ಹಗ್ಗ ರೈತನ ಕೊರಳಲಿ ಅಂತ್ಯ ಆಗುತ್ತಿದೆ

ಹೌದು ,
ಈಗೀಗ ಹಳ್ಳಿಗಳಲ್ಲಿ
ಗೋವು ಅಂಬಾ ಅನ್ನುತ್ತಿಲ್ಲ
ರೈತ ಉಳಿಮೆ ಮಾಡುತ್ತಿಲ್ಲ

ರೈತ ,ಗೋವಿನ ಬೆಲೆ ಬಾರಿ ಕುಸಿದಿದೆ
ಆದರೆ ಮಣ್ಣಿಗೆ ,ಮರಳಿಗೆ
ಭೂಮಿಯ ಬೆಲೆ ಏರುತ್ತಿದೆ

ಗೋವಿನ ಹಾಲು ಕುಡಿದವರು
ವಿಷ ಕಕ್ಕುತ್ತಿದ್ದಾರೆ
ರೈತನ ಅನ್ನ ತಿಂದವರು
ರೈತನಿಗೆ ,ರೈತನ ಬೆಳೆದ ಬೆಳೆಗೆ
ಬೆಲೆ ನಿಗದಿ ಪಡಿಸುತ್ತಿದ್ದಾರೆ

ಹಾಲಿನ ಡೈರಿಯ ಹಾಲು
ಕುಡಿಯುವವರಿಗೆ
ಪುಡ್ ಬಜಾರ್ ನಲ್ಲಿ ಪುಡ್
ತಿನ್ನುವವರಿಗೆ

ರೈತ ,ಗೋವು ಯಾಕೆ ಬೇಕು???

**********************************************

2 thoughts on “ಗೋವು ಮತ್ತು ರೈತ

Leave a Reply

Back To Top