ಕಾವ್ಯಯಾನ

ಮೂಕವೇದನೆ

ಶಿವಲೀಲಾ ಹುಣಸಗಿ

ಮೌನಕ್ಕೆ ನೂರು ಭಾವಲೇಪನದ ನಂಟು
ಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆ
ಕಣ್ಣಂಚಲಿ ಕಂಬನಿಯ ಹನಿಗಳು
ತೊಟ್ಟಿಕ್ಕಿದಂತೆ ಸಂತೈಸದಾ ಮನವು
ಮೂಲೆಗುಂಪಾಗಿ ರೋಧಿಸುತ್ತಿದೆ.
ಹೊದ್ದ ಕಂಬಳಿಯ ತುಂಬಾ ತೂತು
ಬಿತ್ತರಿಸಲಾದಿತೇ ಅಂತರಾಳದ ಹೊರತು
ಬರದ ಮೇಲೆ ಬರೆಯಳೆದಂತೆ ನೆನಪು
ಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪು
ಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆ
ನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆ
ಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆ
ಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆ
ಬರಿದಾದ ಒಡಲು ಬೆಸದು ಮಿಸುಕಿದಂತೆ
ಕಣ್ಣು,ಮೂಗು ಕೈಕಾಲು ಮೂಡಿದ್ದಂತೆ
ಯಾವ ಮೂರ್ತವೋ ಕೊನೆಗಾಲಕೆ
ಕಡಲ ಸೇರದಾ ಮರ್ಮವನು ಬಲ್ಲವರಾರು
ತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವು
ಮೌನವೊಂದು ಉತ್ತರವಾದಿತೆ ಕಂಗಳಿಗೆ
ನಿನ್ನ ಎದೆಯ ಅಗ್ನಿಯಲಿ ಬೇಯುವ
ಮೂಕವೇದನೆಯ ಹಸುಗೂಸಾದಿತೆ.
ಇರಳು ಕರಗಿ ಹಗಲು ತೆರೆದರೂ
ಮೂಡದಾ ಕಾಮನಬಿಲ್ಲುಗಳು
ನೀರಿಗೆಗಳು ನೀರೆಯರಿಲ್ಲದೆ ಒದ್ದಾಡಿ
ಕರಗಿದ ಮೇಣದಂತೆ ಕಮರಿ ಹೋಗಿವೆ
ಗುಡಿಸಲೊಳಗೆ ಕೊಸರಾಡಿ ಸೋತಿವೆ
ಹರೆಯದ ಹಂಗು ತೊರೆದ ಬಾಳಿಗೆ
ತ್ಯಾಪೆಯಾಗಿ ಹೊಸೆಯ ಹೊರಟಂತೆ
ಉಸಿರಾದ ಪ್ರಕೃತಿಯ ಗರ್ಭದೊಳು
ಮತ್ತೆ ಮೂಡನೆ ನಭದಲಿ ಭಾಸ್ಕರ
ಮೌನ ಮುರಿದು ತಾರೆಯಾಗಲು
ಮನ ಬಿಚ್ಚಿ ಹಾರಲು ಅನುವಾಗಲು.

5 thoughts on “ಕಾವ್ಯಯಾನ

  1. ಮೌನದೊಳಗೆ ಏನೆಲ್ಲ ಅಡಗಿದೆ? ಅದರೊಂದಿಗೆ ಈ ಬದುಕು ಹೇಗೆ ಸಾಗುತ್ತಿದೆ ಎಂದು ತುಂಬಾ ಮಾರ್ಮಿಕವಾಗಿ ಕವನದಲ್ಲಿ ಬಿಂಬಿಸಿದ್ದಾರೆ ಅಭಿನಂದನೆಗಳು

Leave a Reply

Back To Top