Day: April 4, 2024

ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಹೋಗಿ ತೀರಬೇಕು” ತೆಲುಗು ಕವಿತೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳಿ ಮೋಹನ್

“ಹೋಗಿ ತೀರಬೇಕು” ತೆಲುಗು ಕವಿತೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳಿ ಮೋಹನ್

“ಭಾಷೆ ಜನಸ್ನೇಹಿಯಾಗಿರಬೇಕು”ಲೋಹಿತೇಶ್ವರಿ ಎಸ್ ಪಿ ಅವರ ವಿಶೇಷ ಲೇಖನ

ಜಗತ್ತಿನ ಎಲ್ಲಾ ಭಾಷೆಗಳ ಪದಕೋಶದಲ್ಲಿ ಅನೇಕ ಭಾಷೆಗಳ ಪದಗಳು ಎರವಲಾಗಿ ಸಹಜರೀತಿಯಲ್ಲಿ ಬಳಕೆಗೊಳ್ಳುತ್ತಿರುತ್ತವೆ. ಅದು ಕನ್ನಡದ ಸಂದರ್ಭವಾಗಿರಬಹುದು, ಇಲ್ಲವೆ ಸಂಸ್ಕೃತ ಹಾಗೂ ಯಾವುದೇ ಭಾಷೆಯ ಸಂದರ್ಭವೂ ಆಗಿರಬಹುದು. ಕನ್ನಡ ಪದಕೋಶ ಸಂಸ್ಕೃತ, ಇಂಗ್ಲಿಶ್, ಗ್ರೀಕ್, ಲ್ಯಾಟೀನ್, ಪೋರ್ಚುಗೀಸ್, ಮರಾಠಿ, ಹಿಂದಿ, ಉರ್ದು, ಅರೇಬಿಕ್ ಮೊದಲಾದ ಭಾಷೆಗಳ ಪದಗಳನ್ನು ತನ್ನದಾಗಿಸಿಕೊಂಡಿದೆ. ಉದಾಹರಣೆಗೆ ಇಂಗ್ಲಿಶಿನ ಸ್ಕೂಲ್, ಬಸ್, ಕಾರ್, ಬುಕ್ ಎಂಬ ಪದಗಳು ಕನ್ನಡದಲ್ಲಿ ಇಸ್ಕೂಲ್, ಬಸ್ಸು, ಕಾರು, ಬುಕ್ಕು ಎಂದು ಆದಿಸ್ವರಾಗಮ ಹಾಗೂ ಸ್ವರಾಂತ್ಯ ಪ್ರಕ್ರಿಯೆಗೆ ಒಳಪಟ್ಟು ಬದಲಾವಣೆಗೊಂಡು ಕನ್ನಡ ಸಮಾಜದಲ್ಲಿ ಬಳಕೆಗೊಳ್ಳುತ್ತಿವೆ. ಚೌಕಾಸಿ, ಅಭಿಯಂತರ, ಆರಕ್ಷಕ, ಸಾಬೂನು, ಜಬರ‍್ದಸ್ತ್, ಗುಲಾಮ, ಅಲಮಾರು, ಕಛೇರಿ, ಅಸಲಿ, ನಕಲಿ, ರಸ್ತೆ ಮೊದಲಾದ ಪದಗಳು ಸಹ ಅದೇರೀತಿಯಲ್ಲಿ ಬಳಕೆಗೊಳ್ಳುತ್ತಿವೆ.

ಕೆಲವು ಸಂಶೋಧನಾರ್ಥಿಗಳು ಬೇರೆ ಭಾಷೆಯ ಅನೇಕ ಪದಗಳ ಬದಲಿಗೆ (ಅಭಿಯಂತರ, ಆರಕ್ಷಕ )ಕನ್ನಡ ಪದಗಳನ್ನೆ ರಚಿಸಬೇಕು. ಸೂರ್ಯ ಎಂಬುದು ಸಂಸ್ಕೃತ ಪದ ಅದಕ್ಕೆ ಪರಿಯಾಯವಾಗಿ ಕನ್ನಡದ್ದೇ ಪದದ ರಚನೆಯಾಗಿ ಜನರಿಗೆ ಪರಿಚಯವಾಗಬೇಕು ಎಂಬಂತಹ ಅಭಿಪ್ರಾಯವನ್ನು ಅಧ್ಯಯನದ ಸಂದರ್ಭದಲ್ಲಿ ಪ್ರಸ್ತುತ ಪಡಿಸುತ್ತಾರೆ. ಈ ರೀತಿ ಅಭಿಪ್ರಾಯ ಹೊಂದಿರುವ ಅಧ್ಯಯನಕಾರರು ಬೇರೆ ಭಾಷೆಯ ಪದಗಳ ವಿಚಾರದಲ್ಲಿ ಅಪಕಲ್ಪನೆಗೆ ಒಳಗಾಗಿ ಬೇರೆ ಭಾಷೆಯ ಪದಗಳ ಬಳಕೆ ಸಮಸ್ಯಾತ್ಮಕ ಎಂದೇ ಅಭಿಪ್ರಾಯಿಸುತ್ತಾರೆ.
ಮೊದಲೇ ಹೇಳಿದಂತೆ ಜಗತ್ತಿನೆಲ್ಲಾ ಭಾಷೆಯ ಪದಕೋಶದಲ್ಲಿ ಬೇರೆ ಬೇರೆ ಭಾಷೆಗಳ ಪದಗಳು ಒಳಗಾಗಿರುವಾಗ ಅಂತಹ ಪ್ರಕ್ರಿಯೆ ಕನ್ನಡದಲ್ಲಿ ನಡೆದರೆ ತಪ್ಪೇನು? ಅವು ಅರ್ಥದ ನೆಲೆಯಲ್ಲಾಗಲಿ, ಬಳಕೆಯ ನೆಲೆಯಲ್ಲಾಗಲಿ ತೊಂದರೆ ಉಂಟು ಮಾಡುತ್ತಿದ್ದರೆ ಅದರ ಬಳಕೆ ತನ್ನಷ್ಟಕ್ಕೆ ನಿಂತು ಹೋಗುತ್ತದೆ. ಉದಾಹರಣೆಗೆ ಸಂಸ್ಕೃತದ ಅಭಿಯಂತರ, ಆರಕ್ಷಕ ಎಂಬ ಪದಗಳ ಬಳಕೆ ಜನಬಳಕೆಯಲ್ಲಿ ಇಲ್ಲವಾಗಿ ಇಂಗ್ಲಿಶಿನ ಇಂಜಿನಿಯರ್ ಹಾಗೂ ಪೋಲೀಸ್ ಎಂಬ ಪದಗಳ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.
ಭಾಷಿಕರು ಸೌಲಭ್ಯಾಕಾಂಕ್ಷಿಗಳು. ಭಾಷಾಬಳಕೆಯನ್ನು ಸುಲಭವಾಗಿಸಿಕೊಳ್ಳುವಲ್ಲಿ ನಿಪುಣರು. ಅದರ ಪರಿಣಾಮವೇ ಕನ್ನಡ ವರ್ಣಮಾಲೆಯಲ್ಲಿನ ಋ ೠ ವರ್ಣಗಳ ಬಳಕೆ ನಿಂತುಹೋಗಿರುವುದು. ಆರಂಭದಲ್ಲಿ ೠ ಕಾರ ಸಂಪೂರ್ಣವಾಗಿ ಕೈಬಿಟ್ಟ ಭಾಷಿಕರು ಇತ್ತೀಚಿನ ದಿನಮಾನದಲ್ಲಿ ಋ ಕಾರವನ್ನು ಸಹ ೯೦% ಬಳಕೆಯಿಂದ ಕೈಬಿಟ್ಟಿರುವ ಉದಾಹರಣೆಯಿದೆ. ಋ ಕಾರದ ಕೆಲಸ ರ ಕಾರವೇ ನಿರ್ವಹಿಸುತ್ತಿದೆ. ಇದು ಅಕ್ಷರಗಳ ವಿಚಾರದಲ್ಲಿ ಮಾತ್ರವಲ್ಲದೇ ಅನೇಕ ಪದಗಳ ಸಂದರ್ಭದಲ್ಲಿಯೂ ನಡೆದಿದೆ.
ಇಲ್ಲಿ ನನ್ನ ಮಾತಿನ ಉದ್ದೇಶ ಹೊಸಪದಗಳ ರಚನೆ ತಪ್ಪು ಎಂದೊ, ಸರಿ ಎಂದೊ ಅಥವಾ ಬೇರೆ ನುಡಿಯ ಪದಗಳ ಎರವಲು ಪ್ರಕ್ರಿಯೆ ಸರಿ, ತಪ್ಪು ಎಂದು ಹೇಳುವುದಲ್ಲ . ಕನ್ನಡ ಪದಗಳು ಇದ್ದಾಗ ಅವುಗಳನ್ನೇ ಬಳಸೋಣ. ಹೊಸಪದಗಳನ್ನು ರಚಿಸುವ ಸಾಧ್ಯತೆಯಿದ್ದು, ಅವು ಬಳಕೆಗೆ ಯುಕ್ತವಾಗಿದ್ದರೆ ಹೊಸಪದಗಳನ್ನೂ ರಚಿಸಿಕೊಳ್ಳೋಣ. ಆದರೆ, ಕನ್ನಡದಲ್ಲಿ ಪದಗಳಿಲ್ಲದಿದ್ದರೂ, ಕನ್ನಡ ಪದರಚನೆಗೆ ಅವಕಾಶಗಳಿಲ್ಲದಿದ್ದರೂ, ಜನಬಳಕೆಗೆ ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಕನ್ನಡ ಪದಗಳನ್ನೇ ರಚಿಸಬೇಕು ಎಂದು ವಾದಿಸುವುದು ಸರಿಯಲ್ಲ. ಈ ರೀತಿ ವಾದಿಸುತ್ತಾ ಹೋದರೆ ಜಗತ್ತಿನ ಯಾವ ನುಡಿಗಳ ನಡುವೆಯೂ ಕೋಡುಕೊಳ್ಳುವಿಕೆಯ ಸಂಬಂಧ ಏರ್ಪಡುವುದಿಲ್ಲ. ಭಾಷೆ ಜನಸ್ನೇಹಿಯಾಗಿರಬೇಕು. ಇಲ್ಲದಿದ್ದರೆ ಅಳಿವು ಉಳಿವಿನ ವಿಚಾರಗಳ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬರುತ್ತವೆ.

ಲೋಹಿತೇಶ್ವರಿ ಎಸ್ ಪಿ

Back To Top