ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ ಭಾವನೆಗಳು ಅನುಕ್ಷಣವು ತೇಜಾಳ ಹೃದಯ ಭಕ್ತಿಯಿಂದ ಪ್ರಾರ್ಥಿಸುತ್ತದೆ ನಿನ್ನನ್ನೆ **********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಇರುಳ ಹೊಕ್ಕುಳ ಸೀಳಿ ಸುಡುಕೆಂಡದ ಪಾದಗಳ ಮೆಲ್ಲನೂರಿ ಅಂಬೆಗಾಲಿಟ್ಟವನ ಸ್ವಾಗತಕೆ ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ ಹಸಿದ ನಾಯಿಗಳು ಊಳಿಟ್ಟು ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ ಊರೂರೇ ತೆರೆದ ಮಶಾಣದಂತೆ ಬಾಸವಾಗಲು ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ತರಾತುರಿಯಲ್ಲಿ ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ ಬೆಳಕೊಂದು ಮೂಡಿದಂತಾಗಿ ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ ಸಾಲುಗಟ್ಟಿನಿಂತ ದುಡ್ಡಿದ್ದ ವಿಟಪುರುಷರು ಇವರುಗಳ ಕಾಯಲು ನೇಮಿಸಿದ ಮೇಸ್ತ್ರಿಗಳ ಕಣ್ಣಲ್ಲೂ ಕಮೀಷನ್ನಿನ ದುರಾಸೆಯ ಚಿತ್ರ ಇದೀಗ ಉರುಳುತ್ತಿರುವುದು ದಿನಗಳಷ್ಟೆ ಒಳ್ಳೆಯವೊ ಕೆಟ್ಟವೊ? ಹೇಳಬೇಕಾದ ಬಲ್ಲವರೆಲ್ಲ ಸೆಮಿನಾರುಗಳ ಕೊಠಡಿಯೊಳಗೆ ಮಾತುಕತೆಯೊಳಗೆ ಮುಳುಗಿ ಆಳುವ ಪ್ರಭುಗಳ ಪರವಿರೋಧಿಗಳೆಲ್ಲ ರಸ್ತೆಯ ನಟ್ಟನಡೂವೆ ಮದ್ಯೆ ಪ್ರತಿಕೃತಿಗಳ ಸುಡುತ್ತ ಮದ್ಯಾಹದೂಟಕ್ಕೆ ಕಾಯುತ್ತ ಇಳಿ ಮದ್ಯಾಹ್ನ ಸಣ್ಣ ನಿದ್ದೆ ಮಗಿಸೆದ್ದ ಗೃಹಿಣಿ ಮಕ್ಕಳಿಗಾಗಿ ಕಾಯುತ್ತ ಗೇಟಿನಂಚಲ್ಲಿ ನಿಂತಾಗ ದಿನದ ಚಕ್ರದ ಕೊನೆಯ ಸುತ್ತು ಉರಿಯುತ್ತಿದ್ದ ಕೆಂಡದವನು ಕೊಂಡದೊಳಗೆ ಹಾದಂತೆ ಕತ್ತಲೊಳಗೆ ಸರಿದು ನಡೆಯುತ್ತಾನೆ ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನನ್ನೆದೆಯ ಒಳಗ ನೋವು ತಂದಿರುವೆ ಹೇಳಿ ಹೋಗುಕಾರಣ ಸತ್ತ ಕನಸುಗಳ ಹೊತ್ತು ಹರದಾರಿ ನಡೆದಿರುವೆ ಹೇಳಿಹೋಗುಕಾರಣ ಜೀವ ಪ್ರೀತಿಯ ಒಡಲೊಳಗೆ ತುಂಬಿಕೊಂಡಿದ್ದೆನೆ ಗಂಜಿಯಾದರು ಕುಡಿದು ಬದುಕಿಸುವೆ ಹೇಳಿ ಹೋಗುಕಾರಣ ಸಂದುಕದಲ್ಲಿದ್ದ ಒಂಕಿ ಡಾಬು ಜೂಲ್ಪಿಹೂ ತೋಳ್ ಬಂದಿ ತೊಡಿಸಿರುವೆ ರೇಶ್ಮಿ ಇಳಕಲ್ಲ ಜರತಾರಿ ಸಿರೆ ಉಡಿಸಿರುವೆ ಹೇಳಿ ಹೋಗುಕಾರಣ ನನ್ನೊಂದಿಗೆ ಒಮ್ಮೆಯೂ ಮಾತನಾಡಲಿಲ್ಲ ಮೌನ ಮುರಿದು ನಿನ್ನೊಳಗೆ ಎನು ತುಂಬಿಕೊಂಡಿರುವೆ ಹೇಳಿ ಹೋಗುಕಾರಣ ಅನುಮಾನಗಳಿದ್ದರೆ ಬಿಡು ಅಗ್ನಿ ಪರಿಕ್ಷೆಯ ನೇಪ ಮಾತ್ರ ಬೇಡ ಮರುಳ ನಿನ್ನ ಜೊತೆಯಾಗಿ ಹೆಜ್ಜೆ ಹಾಕ ಬೇಕೆಂದಿರುವೆ ಹೇಳಿ ಹೋಗುಕಾರಣ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಕೃತಿ ಆಚರಿಸುತಿದೆ ಹಬ್ಬ ಶಾಲಿನಿ ಆರ್. ಮಾನವನ ತಗ್ಗು ದಿಬ್ಬಗಳ ಲೀಲೆಗೆ, ನಲಿದಿದೆ  ಪ್ರಕೃತಿ ಈ ಸೋಜಿಗೆ, ಹಲವು ಜೀವನವ ಕಸಿದ ಕರೋನಾ, ಪ್ರಕೃತಿಗೆ ಇದುವೇ ವರವಾಯಿತೇನಾ? ಮನುಜನ ವಿಪರೀತಗಳನ್ನೆಲ್ಲ ಅಳಿಸಿ ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ, ಹಾಡುವ ಹಕ್ಕಿಗಳೆಲ್ಲ ಹಾರುತಿವೆ ಮನಸಾರೆ ಖುಷಿಯಾಗಿ, ನಭದ ನೀಲಿಯಲಿ ನೀಲವಾಗಿ, ಬೀಸುವ ತಂಪೆಲರಿಗು ಬಂದಿದೆ ಅಭಿಮಾನ, ನಾ ನಾಗಿಹೆನೆಂಬ ಸಮ್ಮಾನ, ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ, ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ ಸಡಗರಿಸುತಿಹದಂತೆ, ಪ್ರಾಣಿ ಪಕ್ಷಿಗಳೆಲ್ಲ ಸೇರಿ ನಡೆಸಿದೆ ವನಮೋಹತ್ಸವ, ಮರೆತು  ಮಾನವನ ದಬ್ಬಾಳಿಕೆಯ ರಣೋತ್ಸವ, ಪಕೃತಿಯ ಈ ಉತ್ಸವ ನಿತ್ಯೋತ್ಸವವಾಗಲಿ, ಪರಿಸರದಲಿ ಸದಾ ಶುದ್ದತೆಯ ಹಸಿರು ತೂಗಲಿ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******

ಕಾವ್ಯಯಾನ Read Post »

ಇತರೆ

ಮಕ್ಕಳ ವಿಭಾಗ

ಗುಬ್ಬಚ್ಚಿ ಮಲಿಕಜಾನ್ ಶೇಖ್  ಒಂದು ಸುಂದರ ಕಾಡು. ಅಲ್ಲೊಂದು ಸಿಹಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿ ಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು. ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು.            ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛತೆ ಬಹಳ ಇಷ್ಟ. ಅರುಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, ಚಿಲಿಪಿಲಿ ಗಾನದಿ ಮರದಿಂದ ಮರಕ್ಕೆ ಜಿಗಿಯುತ್ತಾ, ನಲಿಯುತ್ತಾ… ಹೊಂಡಕ್ಕೆ ಸ್ನಾನಕ್ಕಾಗಿ ಹೋಗುತಿತ್ತು. ಸ್ನಾನ ಮಾಡಿ ಸೂರ್ಯನ ಎಳೆಯ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕೂತು, ಬುರ್ರೆಂದು ಗೂಡಿಗೆ ಬಂದು ಮಕ್ಕಳ ನೋಡಿ ತಿಂಡಿ ಹುಡುಕಲು ಭರ್ರೆಂದು ಹೋಗುತ್ತಿತ್ತು.         ಅತ್ತ ಕಾಗೆಗಳ ದಿನಚರಿ ಬೇರೇನೆ. ಎಲ್ಲರಿಗಿಂತ ತಡವಾಗಿ ಎದ್ದು ಕಾವ್ ಕಾವ್ ಗದ್ದಲ ಸುರು ಇಡುತ್ತಿದ್ದವು. ಅಲ್ಲಿ, ಇಲ್ಲಿ ಎಲ್ಲಿಯೂ ಸಿಕ್ಕ ಸಿಕ್ಕಲ್ಲಿ ಶೌಚ ಮಾಡುತ್ತಿದ್ದವು. ಗಾನವಿಲ್ಲ, ಸ್ನಾನವಿಲ್ಲ . ನೇರ ಹಳಸಿದ ಅನ್ನ ಅಥವಾ ಸತ್ತ ಪ್ರಾಣಿ ತಿನ್ನಲು ಅವರ ಗ್ಯಾಂಗು ಭರ್ರೆಂದು ರವಾನೆ ಆಗುತಿತ್ತು. ಅವೆಲ್ಲಾ ಹೋದ ನಂತರ ಕೋಗಿಲೆ ಮಾತ್ರ ಗುಬ್ಬಚ್ಚಿಯಂತೆ ಸ್ವಚ್ಛ ಸ್ನಾನ ಮಾಡಿ ಮಾವಿನ ಅಥವಾ ಹುಣಸೆ ಚಿಗುರು ತಿಂದು ಕೂಡುತ್ತಿತ್ತು.               ಒಂದು ದಿನ ಗುಬ್ಬಚ್ಚಿ ಮಕ್ಕಳ ತಿಂಡಿಗಾಗಿ ಹೋದಾಗ ಕಾಗೆಗಳೆಲ್ಲಾ ಕೂಡಿ ದೊಡ್ಡ ರಂಪಾಟವನ್ನೆ ಮಾಡಿದ್ದವು. “ಕೋಗಿಲೆ ನಮ್ಮ ಜಾತಿಯವಳಲ್ಲಾ, ಅವಳಿಗೆ ನಮ್ಮ ಪರಂಪರೆ ಗೊತ್ತಿಲ್ಲಾ..” ಎಂದು ಹೇಳಿ ಕಾಗೆ ಗ್ಯಾಂಗು ಅದಕ್ಕೆ  ಕಾಡಿ, ಕಚ್ಚಿ ಹಾರಿ ಹೋಗಿತ್ತು. ಅಷ್ಟರಲ್ಲಿ ಗುಬ್ಬಚ್ಚಿ ಚುಂಚಿನಲ್ಲಿ ತಿಂಡಿ ತಂದು ಚಿಂವ್ ಚಿಂವ್ ಎಂದು ಬಾಯಿ ತೆರೆದು ಕೂತ ಮಕ್ಕಳ ಬಾಯಿಗೆ ಹಾಕಿದಾಗ ಮಕ್ಕಳು, “ಅಮ್ಮಾ, ಛೀ.. ಥೂ ಏನೋ ವಾಸನೆ,,” ಎಂದವು. ಅದಕ್ಕೂ ವಾಸನೆ ಸಹಿಸದು, ಹೊರಬಂದು ನೋಡಿದರೆ ಅಲ್ಲಿ ಕಾಗೆ ಶೌಚ ಮಾಡಿತ್ತು. ಸಿಟ್ಟು ಬಂತು. ಆದರೆ ಅಲ್ಲಿ ಯಾರು ಇಲ್ಲ. ಸುಮ್ಮನಾಗಿ ಸ್ವತಃ ಕಡ್ಡಿಯಿಂದ ತೆಗೆದು ಹಾಕಿತು. ಆಗ ಅದರ ಗಮನ ಎಲೆಯಲ್ಲಿ ಭಯದಿಂದ ಅವಿತ ಕೋಗಿಲೆಯತ್ತ ಹೋಯಿತು. “ಏನ್ ಕೋಗಿಲಕ್ಕಾ ಹೀಗೆ ಕೂತೆಯಲ್ಲಾ ಏನಾಯಿತು..?” ಎಂದು ಕೇಳಿತು. ಆಗ ಕೋಗಿಲೆ ಅಳುತ್ತಾ, “ಗುಬ್ಬಕ್ಕಾ ಏನ್ ಹೇಳಲಿ ನನ್ನ ಪಾಡು, ಇಷ್ಟು ದಿನ ಸುಮ್ಮನಿದ್ದು ಇಂದು ಒಮ್ಮೇಲೆ ನೀನು ನಮ್ಮ ಜಾತಿಯವಳು ಅಲ್ಲಾ, ಹೋಗು ಇಲ್ಲಿಂದ ಅಂದವು. ನೀನೆ ಹೇಳು ಗುಬ್ಬಕ್ಕಾ,, ನಮ್ಮಮ್ಮಾ ಇಲ್ಲಿ ಮೊಟ್ಟೆ ಇಡುವಾಗ ಇವರ ಜಾತಿ ಕೇಳಿದಳಾ, ಇಲ್ಲವಲ್ಲ.” ಎಂದು ಹೇಳಿತು. ಆಗ “ಇರಲಿ ಬಿಡು ಕೋಗಿಲಕ್ಕಾ, ಹುಚ್ಚು ಕಾಗೆಗಳು ಅವು..” ಗುಬ್ಬಚ್ಚಿ ಸಾಂತ್ವನ ಮಾಡಲು ಕೋಗಿಲೆ, “ಇಲ್ಲ.. ನಾನಿಲ್ಲಿ ಇರುವದಿಲ್ಲಾ, ಸಂಕಟದಲ್ಲಿ ಇವರೆ ನನ್ನ ಹತ್ತಿರ ಬರುತ್ತಾರೆ..” ಹೇಳಿ ಬುರ್ರೆಂದು ಹಾರಿತು.                  ಎಲ್ಲ ಹಕ್ಕಿಗಳು ರವಿ ಮುಳುಗುತ್ತಿದ್ದಂತೆ ಗೂಡು ಸೇರುತಿದ್ದವು. ಆದರೆ ಕಾಗೆಗಳು ಮಾತ್ರ ತಡವಾಗಿ ಬಂದು ಒಂದೆರಡು ತಾಸು ಗಲಭೆ ಮಾಡಿ ಮಲಗುವ ರೂಢಿ. ಕಾಗೆಗಳು ಬಂದ ತಕ್ಷಣ ಗುಬ್ಬಚ್ಚಿ, “ಯಾರು ನನ್ನ ಗೂಡಿನ ಮೇಲೆ  ಶೌಚ ಮಾಡಿದಿರಿ, ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ನಿಮಗೆ..?” ಎಂದು ರೇಗುತ್ತದೆ. ಈ ಮಾತು ಕೇಳಿದ ನಾಯಕ ಕಾಗೆ, “ಯಾರು ಗುಬ್ಬಿನಾ, ಲೇ ನೀನು ನನ್ನ ಕೊಕ್ಕಿನಷ್ಟು ಇದ್ದಿಯಾ..? ನನ್ನ ಮುಂದೆ ಮಾತನಾಡುವ ಧೈರ್ಯ ನಿನಗೆ. ನಿಲ್ಲು ನಿನ್ನನ್ನು..” ಅಷ್ಟರಲ್ಲಿ ಇನ್ನೊಂದು ಕಾಗೆ, “ಇರಲಿ, ಶಾಂತ ಆಗಣ್ಣಾ, ಬೇಡಾ. ಅದು ನಮಗೆಲ್ಲಿ ಸಾಲುತ್ತದೆ, ಲೇ ಗುಬ್ಬಿ ನಾನೇ ಶೌಚ ಮಾಡಿದ್ದು, ಏನು ಇವಾಗ..?” “ಅಲ್ಲಪ್ಪಾ ಕಾಗೆಗಳಿರಾ, ನೀವೆಲ್ಲಾ ಹೀಗೆ ಹೊಲಸು ತಿಂದು ಸುತ್ತಮುತ್ತ ಗಲೀಜು ಮಾಡಿದರೆ ಹೇಗೆ..? ನಿಮ್ಮ ಕ್ರೂರ ಕರ್ಮ ನಾಳೆ ನಮ್ಮ ಇಡಿ ಪಕ್ಷಿ ಸಂಕುಲಕ್ಕೆ ಸಂಕಟ ತರಬಹುದು..” ಎಂದು ಗುಬ್ಬಚ್ಚಿ ಬುದ್ಧಿ ಮಾತು ಹೇಳಲು ಹೋದಾಗ, ಕಾಗೆಗಳೆಲ್ಲಾ ಗಹ ಗಹಿಸಿ ನಗುತ್ತಾ, “ನಮಗೆ ಬುದ್ಧಿ ಮಾತು ಹೇಳಬೇಡ. ನೀನ್ಯಾರು,,? ನಮ್ಮ ರಕ್ಷಣೆಗೆ ದೇವಿ ಕಾಗಮ್ಮಾ ಇದ್ದಾಳೆ..” ಎಂದವು. ಆಗ ಗುಬ್ಬಚ್ಚಿ ಸುಮ್ಮನೆ ಹೋಗಿ ಮಕ್ಕಳೊಂದಿಗೆ ಮಲಗುತ್ತದೆ.              ರಾತ್ರಿ ಪೂರ್ಣ ಮಳೆ. ರವಿ ಬಂದಿದ್ದು ಕಾಣುತ್ತಿರಲಿಲ್ಲ, ಅಷ್ಟು ಧಾರಾಕಾರ ಮಳೆ. ಮಧ್ಯಾಹ್ನ ಕಾಗೆಗಳಿಗೆ ಹಸಿವೆಯಾಗಿ ಜಿಟಿ ಜಿಟಿ ಮಳೆಯಲ್ಲಿಯೆ ರಾತ್ರಿ ತಂದ ಕೊಳೆತ ಮೌಂಸವನ್ನು ತಿನ್ನಲು ಪ್ರಾರಂಭ ಮಾಡುತ್ತವೆ. ಅದರಲ್ಲಿ ಒಂದು ಕಾಗೆ ಗುಬ್ಬಚ್ಚಿಯನ್ನು ತೆಗಳುತ್ತಾ, “ಏ ಸಾಧು ಗುಬ್ಬಿ, ನಿನ್ನೆ ರಾತ್ರಿ ಬಹಳ ಮಾತನಾಡುತಿದ್ದಿಯಲ್ಲಾ ಈಗೇನು ತಿನ್ನುತ್ತೀಯಾ, ಚಳಿ ಇದೆ, ಸಾಯುತ್ತಿ ಹಿಡಿ ತಿನ್ನು” ಎಂದು ಕೊಳೆತ ಮೌಂಸದ ತುಣುಕು ಗೂಡಿನತ್ತ ಬೀಸಿತು.          ಕಾಗೆಯ ಬಾಯಿಗೆ ಏಕೆ ಸಿಕ್ಕಬೇಕೆಂದು ಗುಬ್ಬಚ್ಚಿ ಗೂಡು ಬಿಟ್ಟು ಬರಲಿಲ್ಲ. ಗೂಡಿನಲ್ಲಿದ್ದ ಸ್ವಲ್ಪ ಕಾಳು ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಎರಡು ದಿನ ಉಪವಾಸ ಮಾಡಿತು. ಅದಕ್ಕೆ ಗೊತ್ತಿತ್ತು ಸಂಕಟ ಬಹಳ ದಿನ ಇರುವದಿಲ್ಲ. ಮಾರನೆಯ ದಿನ ಮಳೆ ನಿಂತಿತು. ಏನಾದರೂ ತಿನ್ನಲು ತರಬೇಕೆಂಬ ವಿಚಾರದಲ್ಲಿ ಹೊರಗೆ ಬಂದು ನೋಡಿದರೆ, ಕಾಗೆಗಳು ಅದರ ಗೂಡಿನ ಸುತ್ತಲೆಲ್ಲಾ ಶೌಚ ಮಾಡಿ, ಎಲುಬು ತೂಗು ಹಾಕಿದ್ದವು. ಗುಬ್ಬಚ್ಚಿಗೆ ಭಯವಾಯಿತು. ಇಲ್ಲಿಯೆ ಇದ್ದರೆ ಈ ಕಾಗೆಗಳು ಬದುಕಲು ಬಿಡುವದಿಲ್ಲ ಎಂದು ತಿಳಿದು ಮಕ್ಕಳನ್ನು  ತನ್ನ ರೆಕ್ಕೆ ಮೇಲೆ ಕೂಡಿಸಿಕೊಂಡು ಮತ್ತೊಂದು ಕಾಡಿಗೆ ಬುರ್ರನೆ ಹಾರಿತು.               ಗುಬ್ಬಚ್ಚಿ ಹೇಳುತಿತ್ತು, ಕೇಳುತಿತ್ತು ಆದರೆ ಈಗ ಮಾತ್ರ ಕಾಗೆಗಳಿಗೆ ಹೇಳುವರಿಲ್ಲಾ, ಕೇಳುವವರಿಲ್ಲಾ. ಅವುಗಳ ಕ್ರೂರತೆ ಮತ್ತಷ್ಟು ಹೆಚ್ಚಾಯಿತು. ಸಿಕ್ಕಿದೆಲ್ಲಾ, ಸತ್ತಿದೆಲ್ಲಾ ತಿನ್ನಲು ಪ್ರಾರಂಭ ಮಾಡಿದವು. ಒಮ್ಮೆ ದೂರ ದೇಶದ ಬಾವುಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತೀರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ ಕಾಗೆ, “ಏ,, ಏನು ತಿನ್ನುತ್ತಿದ್ದೀರಿ.. ಛೀ, ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮೂರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅವು ಸಹ ಅಲ್ಲಿಂದ ಭರ್ರೆಂದು ಹಾರಿ ಹೋದವು.                        ಮರುದಿನ ನೋಡಿದರೆ ಎಲ್ಲ ಕಾಗೆಗಳು ಅಲ್ಲಲ್ಲೆ ಸಾಯಲು ಪ್ರಾರಂಭ ಮಾಡಿದವು. ಅವುಗಳಿಗೆ ಬಾವುಲಿಯ ರೋಗ ತಗಲಿತ್ತು. ಆ ಮಹಾಮಾರಿ ಅತ್ಯಂತ ವೇಗವಾಗಿ ಕಾಡಿನ ತುಂಬೆಲ್ಲಾ ಪಸರಿಸಿತು. ಎಲ್ಲ ಪಕ್ಷಿಗಳ ಪ್ರಾಣಕ್ಕೆ ಕುತ್ತು ಬಂತು. ಇಡೀ ಕಾಡು ಹಕ್ಕಿ ಇಲ್ಲದಂತೆ ಆಗುವ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇದು ಆ ಮುದಿ ಕಾಗೆಗಳಿಗೆ ಗೊತ್ತಾಯಿತು. ಒಂದು ಕಾಲದಲ್ಲಿ ಇಂತಹ ಮಹಾಮಾರಿ ಬಂದಾಗ ಕೋಗಿಲೆ ತಂದ ಸಂಜೀವಿನಿ ಕಡ್ಡಿಯಿಂದ ಪಕ್ಷಿ ಸಂಕುಲ ಉಳಿದಿದ್ದು ಅವುಗಳ ನೆನಪಿಗೆ ಬಂತು. ಆದರೆ “ಕೋಗಿಲೆ ನಮ್ಮ ಮೇಲೆ ಸಿಟ್ಟಾಗಿ ಹೋಗಿದೆ ಅದನ್ನು ನಾವು ಕೇಳಿದರೆ ಕೊಡುವದಿಲ್ಲ,, ಏನು ಮಾಡುವುದೆಂದು..” ಮುದಿ ಕಾಗೆ ಚಿಂತಿಸಲು ಮತ್ತೊಂದು ಕಾಗೆ, “ಅದರ ಪ್ರೀತಿಯ ಗೆಳತಿ ಗುಬ್ಬಚ್ಚಿ ಕೇಳಿದರೆ ಇದಕ್ಕೆ ಸಹಕರಿಸಬಹುದು…” ಎಂಬ ವಿಚಾರದಲ್ಲಿ ಗುಬ್ಬಚ್ಚಿ ಹುಡುಕಿ ಮತ್ತೊಂದು ಕಾಡಿಗೆ ಹೊರಟವು.                ಕೊನೆಗೆ ಬಹಳ ಪರಿಶ್ರಮದಿಂದ ಗುಬ್ಬಚ್ಚಿಯನ್ನು ಹುಡುಕಿ, ಕ್ಷಮೆ ಕೇಳಿ, “ಗುಬ್ಬಕ್ಕಾ, ನಮ್ಮ ಕಾಗೆಗಳು ಮಾಡಿದ ತಪ್ಪಿನಿಂದ ನಾವೆಲ್ಲರೂ ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೀಗ ಸಂಜೀವಿನಿ ಕಡ್ಡಿ ಬೇಕು. ನೀನು ಸಹಕರಿಸಿದರೆ ಕೋಗಿಲೆ ನಮಗೆ ಕೊಡುತ್ತದೆ. ನಮ್ಮೆಲ್ಲರ ಪ್ರಾಣ ಉಳಿಯುತ್ತದೆ..” ಎಂದು ವಿನಂತಿಸಿ ಕೊಂಡವು. ತಕ್ಷಣ ಗುಬ್ಬಚ್ಚಿ ಕೋಗಿಲಕ್ಕನ ಹತ್ತಿರ ಹೋಗಿ ಎಲ್ಲ ಪರಿಸ್ಥಿತಿಯನ್ನು ಹೇಳುತ್ತಾಳೆ. ‘ಅಯ್ಯೋ..! ದೊಡ್ಡ ಸಂಕಟವೇ ಉದ್ಭವ ಆಗಿದೆಯಲ್ಲಾ..” ಎಂದು ಜೀವ ಪರ್ವತದ ಮೇಲೆ ಹೋಗಿ ಸಂಜೀವಿನಿ ಕಡ್ಡಿಯನ್ನು ತಂದು ಆ ಮಹಾಮಾರಿಯಿಂದ ಪಕ್ಷಿ ಸಂಕುಲವನ್ನು ಬದುಕಿಸುತ್ತದೆ. ಎಲ್ಲ ಹಕ್ಕಿಗಳು ಕೋಗಿಲೆಗೆ ಧನ್ಯವಾದ ಹೇಳುತ್ತವೆ. ಮುಂದೆ ಎಲ್ಲ ಹಕ್ಕಿ ಸಭ್ಯರಾಗಿ, ಪ್ರೀತಿಯಿಂದ ಒಬ್ಬರನೊಬ್ಬರು ವಿಶ್ವಾಸದಲ್ಲಿ ಕಾಣುತ್ತಾ ಬದುಕುತ್ತವೆ. *****

ಮಕ್ಕಳ ವಿಭಾಗ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಕೆ.ಮಹದೇವನಾಯಕ ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ ಮನದ ಒಲುಮೆ ತೊರೆಯು ಮೊರೆದು ಸರಿ ಸರಿಗೆ ಸರಿದಿದೆ ನಗುತ ಇದು ಇರುಳೋ ಹಗಲೋ ಕಾಡೋ ಬಾನೋ ಭುವಿಯೋ ನಾನರಿಯೇ ನೀ ಬಂದು ಎಚ್ಚರಿಸು ‘ಪ್ರಜ್ಯೋಮ’ನ ಒಳ ಮನಸ ನಗುತ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಬಿಂದುವೊಂದು ಸರಳ ರೇಖೆಯಮುಂದೆ ಸಾಗುತ್ತಿದೆ ಎಂದರೇನರ್ಥ ಲೋಕದೊಳಗೆ ಸಕಲವೂ ಸನ್ಮಾರ್ಗ ನೀಗುತ್ತಿದೆ ಎಂದರೇನರ್ಥ ಲೋಭ,ಮೋಹಾದಿಗಳೊಳಗೆ ಬಂಧಿಯಾಗುವೆವು ಈ ಭವದೊಳಗೆ ಬಾಳಿನರ್ಥವ ಸಾರಿದವನ ತ್ಯಾಗವೇ ಸಂಶಯವಾಗುತ್ತಿದೆ ಎಂದರೇನರ್ಥ ಲೋಕ ಬಿಡಲೂ ಬೇಕು, ಅಳಲೂ ಬೇಕು ಅಂತರಂಗವು ಕದಡಿ,ಅವನೆಲ್ಲಿ ಮುಕ್ತ ಮೆಚ್ಚಿ ಆಡಿದ,ಅಚ್ಚೊತ್ತಿದ ಅಭಿನಯವೇ ಮರೆಯುತ್ತಿದೆ ಎಂದರೇನರ್ಥ. ಒಬ್ಬನೇ ನಿರ್ಗಮಿಸುವಾಗ ಯಾರೂ ಹತ್ತಿರವಿರೆ,ಇಲ್ಲದಿರೆ ಏನು ಅಂತರ? ಮುಗಿಯಲಾರದ್ದು,ಮುಗಿಯಾಬಾರದ್ದು,ಮುಗಿದಂತೆ ತೋರುತ್ತಿದೆ ಎಂದರೇನರ್ಥ ಅಗಲಿಕೆಯ ಸಂಕಟವ ಹೆಚ್ಚಿಸುವುದು ಜೊತೆಯಾದ ಬಂಧ ಏಕಾಂಗಿ ಬಯಲಿನಲಿ ಮರವೊಂದು ರೋದಿಸುತ್ತಿದೆ ಎಂದರೇನರ್ಥ . ದೌರ್ಬಲ್ಯಗಳು ಇಲ್ಲದೆಯೇ ಬದುಕು ಚಲಿಸದ ಪಯಣ “ಸ್ಮಿತ” ಹೃದಯದ ಭಾಷೆ ಅರಿಯಲು ಅಶಕ್ತವಾಗುತ್ತಿದೆ ಎಂದರೇನರ್ಥ ********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ ಅನ್ನುವ ವಿಚಾರವೂ ಹೊಳೆಯಿತು! ಹಳೆ ಕಾಲದಲ್ಲಿ ಭಟ್ರ ಪೂರ್ವಜರು ಕಟ್ಟಿದ್ದ ಬೆಲ್ಲದ ಕತೆಯ ನೆನಪು ಮರುಕಳಿಸತೊಡಗಿತು. ಮೆದ್ದವನೇ ಬಲ್ಲ ಬೆಲ್ಲದ ರುಚಿಯ…. ಆದರೆ ಬೆಳೆದವನೇ ಬಲ್ಲ ಬೆಲ್ಲದ ನಿಜಬಂಡವಾಳವ. ಒಂದು ಮಾರಗಲದ ಚೌಕದಲ್ಲಿ ಬೆಳೆದಿರುವ ಎರಡು ಹೊರೆಯಷ್ಟು ಕಬ್ಬನ್ನು ಗಾಣದಲ್ಲಿ ಅರೆದು ಮೂರು ಸೇರು ಕಬ್ಬಿನ ಹಾಲು ಹಿಂಡಿ, ನಾಲ್ಕಡಿ ಬಾಯಗಲದ ಬಾಣಲೆಯೊಳಗೆ ಐದು ಗಂಟೆ ನಿಧಾನದ ಉರಿಯಲ್ಲಿ ಕುದಿಯಿಸಿ ಕುದಿಯಿಸಿ ಕುದಿಸುತ್ತಲೇ ಅರೆದ್ರವಘನರೂಪದ ಪಾಕದ ಹದಕ್ಕೆ ತಂದು ಕಡೆಗೆ ಒಂದಡಿ ಅಗಲದ ಅಚ್ಚಿನ ಮಣೆಯೊಳಗೆ ಸುರಿಯಬಹುದಾದಷ್ಟು ಪಾಕವಷ್ಟೇ… ಒಂದು ವಾರದ ಕಾಫಿಗೆ ಸಾಕಾಗದೆ ಉಳಿಯದಷ್ಟು ಬೆಲ್ಲಕ್ಕಾಗಿ ಎರಡು ದೊಡ್ಡ ಹೊರೆ ಕಬ್ಬನ್ನು ಅರೆಯುವುದರ ಹಿಂದಿನ ನಿಜ ಅರ್ಥ ಪೂರ್ವಜರಿಗೆ ಗೊತ್ತಿತ್ತು. ಖುದ್ದಾಗಿ ಕಬ್ಬಿನ ಜಲ್ಲೆಯನ್ನು ಹಿಡಿದು ಸೀಳುವಾಗ ಒಂದೋ ಅಥವಾ ಅಬ್ಬಬ್ಬಾ ಅಂದರೆ ಎರಡು ಜಲ್ಲೆಯನ್ನು ಜಗಿಯುವಷ್ಟರಲ್ಲಿ ವಸಡುಗಳು ತಡವರಿಸುವಂತಾಗಿ ಕಬ್ಬಿನ ಸಿಹಿಯನ್ನು ಹೀರುವುದರ ಮಹತ್ವದ ಜೊತೆಯಲ್ಲೇ ಅದಕ್ಕೆ ಪಡಬೇಕಾದ ಶ್ರಮದ ಅರಿವೂ ಆಗುತ್ತಿತ್ತು. ಆ ಅರಿವಿನ ಹಿನ್ನೆಲೆಯಲ್ಲಿ ಎರಡು ಹೊರೆ ಕಬ್ಬಿನಿಂದಾದ ಬೆಲ್ಲದ ಅಚ್ಚು ಎಷ್ಟು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಭಟ್ರ ಪೂರ್ವಜರಿಗೆ ಗೊತ್ತಿತ್ತು. ಆದರೆ ಆರೋಗ್ಯದ ವಿಚಾರವನ್ನೇನೂ ಹೇಳದೇ, ಅವರು ಆವಿಷ್ಕರಿಸಿದ ಆಕರ್ಷಕ ಬೆಲ್ಲದ ರುಚಿಯನ್ನಷ್ಟೇ ಮುಂದುವರಿಸಿಕೊಂಡು ಬಂದು ಕಡೆಗೆ ದಾಸರ ಪದವೂ ಸೇರಿ ʼಸಕ್ಕರೆ ತುಪ್ಪದ ಕಾಲುವೆ ಹರಿಸಿ…ʼ. ತನಕವೂ ಬಂದು ಬೆಲ್ಲ ಸಕ್ಕರೆಯೆಲ್ಲವೂ ರುಚಿಯ ಮಾರುಕಟ್ಟೆಯಲ್ಲಿ ಹೊಳೆಯುವಾಗ, ಆರೋಗ್ಯದ ಅರಿವು ಮೂಲೆ ಹಿಡಿದು ಕೂತಿತ್ತು. ಈಗ ಭಟ್ಟರಿಗೆ ಸಕ್ಕರೆಯೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಮುಖ್ಯವಾಹಿನಿಯಲ್ಲಿ ಸಕ್ಕರೆಯದೇ ಕಾರುಬಾರು. ಈ ಸಕ್ಕರೆ ಬಣ್ಣಾತೀತ. ಪಾನಕ ಮಾಡಿದರೆ ಅದರಲ್ಲಿ ಬಣ್ಣವೇ ಇಲ್ಲ ಹಾಗಾಗಿ ಸಿಹಿಯಲ್ಲಿರುವ ಬೇರೆ ಪದಾರ್ಥಗಳನ್ನು ಹೆಚ್ಚು ಆಕರ್ಷಕವನ್ನಾಗಿಸಬಹುದು. ಸಕ್ಕರೆಯ ಹಿಂದಿನ ಆರೋಗ್ಯದ ಗುಟ್ಟಂತೂ ಬೆಲ್ಲಕ್ಕಿಂತ ಇನ್ನೂ ಅತ್ತತ್ತ. ಯಾಕೆಂದ್ರೆ ಮುಖ್ಯವಾಹಿನಿಗೆ ಸಕ್ಕರೆಯನ್ನು ತರುವುದಕ್ಕೋಸುಗ, ಅದನ್ನು ಕಾರ್ಖಾನೆಗಳಲ್ಲಿ ತಯಾರಿಸಬೇಕಾದ್ದು. ದೊಡ್ಡದೊಡ್ಡ ಕಾರ್ಖಾನೆ, ಅದಕ್ಕಂಟಿಕೊಂಡ ಕುಂಠಿತ ಆಡಳಿತ ವಗೈರೆ ವಗೈರೆ… ಆದರೆ ಈಗ ಭಟ್ರಿಗಿನ್ನೊಂದು ವಿಷಯ ಹೊಳೆಯಿತು. ಪೂರ್ವಜರ ಬೆಲ್ಲದ ಹಿನ್ನೆಲೆಯ ಕತೆ. ಈಗಿರುವ ಮುಖ್ಯವಾಹಿನಿಯ ಬಣ್ಣಾತೀತ ಸಕ್ಕರೆಯ ಕತೆ. ಎರಡನ್ನೂ ಒಮ್ಮೆ ಮಿಲಾಯಿಸಿದರೆ! ಬಣ್ಣರೂಪಾಂತರ… ಕತೆ…ಪೂರ್ವಜರ ಬೆಲ್ಲದ ಪಾಯಸದ ಘಮಲು ಮನೆಯಲ್ಲಷ್ಟೇ ಆವರಿಸದೇ ಊರಿಗೂರೇ ಆವರಿಸುತ್ತಿತ್ತು. ಸಕ್ಕರೆಯವರು ಬಂದು ಸುವಾಸೆಯನ್ನು ಕಡಿಮೆ ಮಾಡಲಾಗಿ, ಸದ್ಯ ಮನೆಯನ್ನಷ್ಟೇ ಆವರಿಸುತ್ತಿದೆ. ಭಟ್ಟರು ಮರೆತ ವಿಚಾರ, ಬೆಲ್ಲವೂ ಸಕ್ಕರೆಯೂ ಅಥವಾ ಮತ್ತೊಂದು ಸಿಹಿಯೂ ಮೂಲದಲ್ಲಿ ಕಬ್ಬಿನ ಹೊರೆಗಳೆಲ್ಲ ಒಂದೇ ಆಗಿದ್ದು, ಅದರ ಹಿಂದಿರುವ ಆರೋಗ್ಯದ ಅರಿವಿನ ಕತೆ ಅತಿ ಮುಖ್ಯವಾದುದೆಂದು. ಹಾಗೆಂದುಬಿಟ್ಟರೆ ಭಟ್ಟರ ಪಾಯಸದ ಕತೆಯ ಗತಿಯೇನು? *******

ಕಥಾಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-2 ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಸಮಾನ ಶಿಕ್ಷೆ ಸರಿಯೇ ಹರಿಯೇ? ಅಷ್ಟರಲ್ಲಿ ಹೊರಗಡೆಯಿಂದಲೇ ನಾಯ್ಕ ಮಾಸ್ತರು ಬಾಗಿಲು ತೆರೆದರು. ಅವರ ಕಂಗಳು ಕೋಪದಿಂದ ಕೆಂಪಾಗಿದ್ದವು. ರೌದ್ರಾವತಾರ ತಾಳಿ ಒಳಗೆ ಬಂದವರೆ ಎಲ್ಲರೂ ಅವರವರ ಜಾಗದಲ್ಲಿ ನಿಲ್ಲಿ, ಎರಡೂ ಕೈ ಮುಂದೆ ಚಾಚಿ ಎಂದರು. ಎಲ್ಲರೂ ಹೆದರುತ್ತ ಅವರವರ ಜಾಗಕ್ಕೆ ಹೋಗಿ ನಿಂತೆವು. ಬೋರ್ಡ ಹಿಂದಿಟ್ಟ ಬೆತ್ತ ತೆಗೆದು ಎಲ್ಲರ ಕೈಮೇಲೂ ಎರಡೇಟು ಬಿಗಿದರು. ಉರಿ ತಾಳದೇ ಅನೇಕರು ಚೀರಿದರು, ಅಳಲಾರಂಭಿಸಿದರು. ಕೆಲವರು ‘ನಾನು ಗಲಾಟೆ ಮಾಡಲಿಲ್ಲಾಗಿತ್ತು’ ಎನ್ನುತ್ತಾ ತಾವು ಬರೆದಿದ್ದನ್ನು ತೋರಿಸಿದರು. (ಶಾಲಾಧ್ಯಕ್ಷರು ಬಂದಾಗಲೇ ನಾವು ಗಲಾಟೆ ಮಾಡಿದ್ದರಿಂದ ಅವರಿಗೆ ಅವಮಾನವಾಗಿ ಸಿಟ್ಟು ಬಂದಿತ್ತು. ಆದರೆ ನಮ್ಮ ಬಾಲ ಬುದ್ಧಿಗೆ ಆಗ ಅದು ಅರ್ಥ ಆಗಿರಲಿಲ್ಲ) ಎಂದೂ ಮಕ್ಕಳ ಮೇಲೆ ಸಿಟ್ಟು ಮಾಡದ ಮಾಸ್ತರು ಅಂದು ತಾಳ್ಮೆ ಕಳೆದುಕೊಂಡಿದ್ದರು. ಗಲಾಟೆ ಮಾಡಿದವರಿಗೆ, ಮಾತಾಡಿದವರಿಗೆ, ಮೌನವಾಗಿ ಕುಳಿತವರಿಗೆ ಸಮಾನವಾದ ಶಿಕ್ಷೆ ಕೊಟ್ಟರು. ಕೆಲವರು ಶಾಲೆಯಲ್ಲಿ ಅತ್ತು ಮನೆಗೆ ಹೋಗಿ ಹೇಳದೆ ವಿಷಯ ಮುಚ್ಚಿಟ್ಟರು. ಕೆಲವರು ಮನೆಗೆ ಹೋಗುವಾಗ ದಾರಿಯುದ್ದಕ್ಕೂ ಮಾಸ್ತರು ಹೊಡೆದಿದ್ದು ಸರಿಯೋ ತಪ್ಪೋ ಎನ್ನುವ ಕುರಿತು ತಮಗೆ ತಿಳಿದಂತೆ ವಿಮರ್ಶೆ ಮಾಡಿದರು. ಕೆಲವರು ಅಪ್ಪ ಅಮ್ಮನವರೆಗೆ ದೂರನ್ನು ಕೊಂಡೊಯ್ದರು. ರಾತ್ರಿ ಎಲ್ಲ ಮಕ್ಕಳ ಮನೆಗಳಲ್ಲಿ ಚರ್ಚೆ ಆಯಿತು. ಮರುದಿನ ಒಬ್ಬ ಪಾಲಕರು ಶಾಲೆಗೆ ಬಂದು ಮಾಸ್ತರರಿಗೇ ‘ಹುಡುಗರಿಗೆ ಹಿಂಗೆಲ್ಲ ಹೊಡೆಯುದೆಂತಕ್ಕೆ? ಮಕ್ಕಳಿಗೆ ನಾವೇ ಹೊಡೆಯೋದಿಲ್ಲ. ನೀವೆಂತಕ್ಕೆ ಹೊಡೆದಿದ್ದು? ಬಾಸುಂಡೆ ಬರೋ ಹಂಗೆ ಹೊಡೆದು ಬಿಟ್ಟೀರಿ. ಊಟ ಮಾಡಲಿಕ್ಕು ಆಗಲಿಲ್ಲ ನಮ್ಮ ಮಗನಿಗೆ…’ ಎಂದು ಬೈದು ಹೋದರು. ಇನ್ನೊಬ್ಬ ಪಾಲಕರು ‘ತಪ್ಪು ಮಾಡಿದ್ರೆ ನಮ್ಮ ಮಕ್ಕಳಿಗೆ ನಾಲ್ಕು ಬಿಗೀರಿ ಬುದ್ದಿ ಬರ್ತದೆ ಎಂದರು! ಕರೋನಾ ಶಿಕ್ಷೆಯೂ ಥೇಟ್ ಮಾಸ್ತರು ಕೊಟ್ಟ ಶಿಕ್ಷೆಯಂತೆನಿಸುತ್ತದೆ. ಭುವಿಯ ಮೇಲಿನ ಎಲ್ಲ ಜೀವಿಗಳಂತೆ ನಾವು ಎನ್ನುವುದನ್ನು ಒಪ್ಪದೇ ನಾವೇ ಶ್ರೇಷ್ಠರೆಂಬ ಹಮ್ಮಿನಲ್ಲಿ ಮೆರೆದೆವು. ಚೀನಿಯರಂತೂ ಆಧುನಿಕ ಬಕಾಸುರರಂತೆ ಸಿಕ್ಕಿದ್ದನ್ನೆಲ್ಲ ಮೆದ್ದು ಕೋವಿಡ್ ೧೯ ವೈರಸ್ಸನ್ನು ಪ್ರಾಣಿಗಳಿಂದ ಮನುಕುಲಕ್ಕೆ ವರ್ಗಾ ಯಿಸಿದರು. ನೆಲ ಜಲ, ಗಾಳಿಯನ್ನು ಮಲಿನಗೊಳಿಸುವಲ್ಲಿ, ನಮ್ಮ ಅಗತ್ಯಕ್ಕೆ ಮೀರಿ ಸಂಗ್ರಹಿಸುವುದರಲ್ಲಿ ಎಲ್ಲರೂ ನಾ ಮುಂದೆ, ತಾ ಮುಂದೆ.. ಸೋಂಕನ್ನು ತಿಳಿದೋ ತಿಳಿಯದೆಯೋ ಹಬ್ಬಿಸುತ್ತಿರುವವರು, ಅರಿತೋ ಅರಿಯದೆಯೋ ಅವರ ಸಂಪರ್ಕಕ್ಕೆ ಬಂದವರು.. ಹೀಗೆ ಎಲ್ಲರಿಗೂ ತಪ್ಪಿಗೆತಕ್ಕ ಶಿಕ್ಷೆಯೋ ಅಥವಾ ಮಾಸ್ತರರ ಹೊಡೆತದಂತೆಯೋ? ತಪ್ಪು ಮಾಡಿದವರಿಗೆ ತಪ್ಪಿನ ಅರಿವಾದರೂ ಇದೆಯೋ? ಇಲ್ಲವೋ ?ಕನಿಷ್ಟ ಪಕ್ಷ ಪಶ್ಚಾತ್ತಾಪವಾದರೂ ಇದೆಯೋ? ಕಾಲವೇ ಉತ್ತರಿಸಬೇಕು… ********** (ಮುಂದುವರಿಯುವುದು….) ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

You cannot copy content of this page

Scroll to Top