ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ”

ಕಥಾ ಸಂಗಾತಿ ಸುಮಲತಾ ಗಡಿಯಪ್ಪನವರ “ಒಂಟಿತನ” ನಾರಾಯಣರಾಯರ ಮನೆಗೆ ಬೆಳಕು ಬರುವುದು ಸೂರ್ಯನಿಂದಲ್ಲ; ಅದು ನೆನಪುಗಳ ಮಿಡಿತದಿಂದ. ಮುಂಜಾನೆ ಕಿಟಕಿಯ ಅಂಚಿನಿಂದ ಸರಿದುಬರುವ ತಣ್ಣನೆಯ ಗಾಳಿ, ಅವರ ಕಿವಿಯಲ್ಲಿ ಲಕ್ಷ್ಮೀದೇವಿಯ ಧ್ವನಿಯಾಗಿ ಅರಳುತ್ತಿತ್ತು—“ಏಳಿ… ಕಾಫಿ ತಣ್ಣಗಾಗುತ್ತಿದೆ.” ಆದರೆ ಕಣ್ಣು ತೆರೆದ ಕ್ಷಣವೇ ಎದುರುಗೊಳ್ಳುವುದು ಖಾಲಿ ಹಾಸಿಗೆ. ಹತ್ತು ವರ್ಷಗಳ ಹಿಂದೆ ಶಾಶ್ವತ ನಿದ್ರೆಗೆ ಜಾರಿದ ಪತ್ನಿಯ ಕೊರತೆ, ಪ್ರತಿದಿನವೂ ಹೊಸ ಗಾಯದಂತೆ ಎದೆಯನ್ನು ಕೀಳುತ್ತಿತ್ತು. ಕಾಲ ಮುಂದಕ್ಕೆ ಓಡುತ್ತಿತ್ತು; ಅವರ ಮನಸ್ಸು ಮಾತ್ರ ಹಿಂದೆ ಉಳಿದಿತ್ತು. ಕನ್ನಡಿಯ ಮುಂದೆ ನಿಂತಾಗ ಅವರು ತಮ್ಮ ಪ್ರತಿಬಿಂಬವನ್ನೇ ಗುರುತಿಸಲಾರರು. ಒಮ್ಮೆ ಈ ಮನೆಯ ಆಧಾರವಾಗಿದ್ದ ಮುಖ ಈಗ ನೆರಳಿನಂತೆ ಕುಗ್ಗಿತ್ತು—ಬಿಳಿಬಿದ್ದ ಕೂದಲು, ಒಳಗೆ ಕುಸಿದ ಕಣ್ಣುಗಳು, ನಿಶ್ಯಬ್ದ ನಿಟ್ಟುಸಿರು. ಗೋಡೆಗಳಲ್ಲೂ ಒಂಟಿತನದ ವಾಸನೆ ಅಂಟಿಕೊಂಡಂತಿತ್ತು. ಅಡುಗೆಮನೆಯ ಪಾತ್ರೆಗಳು ನೆನಪಿನಲ್ಲಿ ಮಾತನಾಡುತ್ತಿದ್ದವು. ಲಕ್ಷ್ಮೀದೇವಿಯ ಕೈರೇಖೆಯ ರುಚಿ ಇನ್ನೂ ಅವುಗಳೊಳಗೆ ಉಳಿದಿತ್ತು; ಆದರೆ ಅನ್ನಕ್ಕೆ ರುಚಿ ಇರಲಿಲ್ಲ. ಆಗ ಅವರಿಗೆ ಅರಿವಾಯಿತು—ರುಚಿ ಅನ್ನದಲ್ಲಿರಲಿಲ್ಲ, ಜೊತೆಯಲ್ಲಿತ್ತು. ಮಕ್ಕಳು ಇದ್ದರು—ದೂರದ ನಗರಗಳಲ್ಲಿ. ದೊಡ್ಡ ಹುದ್ದೆ, ದೊಡ್ಡ ಮನೆ, ದೊಡ್ಡ ಕನಸುಗಳು. ಆದರೆ ಅಪ್ಪನ ಬದುಕು ಮಾತ್ರ ನಿಧಾನವಾಗಿ ಕರಗುತ್ತಿತ್ತು. ತಿಂಗಳಲ್ಲಿ ಒಮ್ಮೆ ಬರುವ ಫೋನ್ ಕರೆ—“ಅಪ್ಪ, ಆರೋಗ್ಯ ಹೇಗಿದೆ?” ಪ್ರಶ್ನೆಯಲ್ಲೇ ಮುಗಿದುಹೋಗುತ್ತಿತ್ತು. ಅವರು ಎಂದಿನಂತೆ “ಚೆನ್ನಾಗಿದ್ದೇನೆ” ಎನ್ನುತ್ತಿದ್ದರು. ಸಮಾಜ ಕಲಿಸಿದ ಪಾಠ—ಗಂಡಸು ಅಳಬಾರದು, ನೋವು ತೋರಿಸಬಾರದು—ಅವರ ನಾಲಿಗೆಯನ್ನು ಕಟ್ಟಿಹಾಕಿತ್ತು. ಸಂಜೆಯಾದರೆ ಮನೆ ಇನ್ನಷ್ಟು ಭಾರವಾಗುತ್ತಿತ್ತು. ಗೋಡಿಯ ಮೇಲಿನ ಲಕ್ಷ್ಮೀದೇವಿಯ ಫೋಟೋ ಮುಂದೆ ಕುಳಿತು ಅವರು ಮೃದುವಾಗಿ ಮಾತಾಡುತ್ತಿದ್ದರು:“ನೀನಿಲ್ಲದೆ ಮಾತಾಡೋದಕ್ಕೂ ಅರ್ಥವಿಲ್ಲ ಲಕ್ಷ್ಮೀ…” ಉತ್ತರ ಸಿಗುತ್ತಿರಲಿಲ್ಲ. ಮೌನ ಮಾತ್ರ ಉಸಿರಾಡುತ್ತಿತ್ತು. ಒಂದು ರಾತ್ರಿ ಎದೆನೋವು ಹಠಾತ್ತಾಗಿ ದಾಳಿ ಮಾಡಿತು. ಉಸಿರು ಭಾರ, ಕೈ ಕಾಲು ಜಡ. ಫೋನ್ ಪಕ್ಕದಲ್ಲೇ ಇತ್ತು; ಆದರೆ ಕರೆ ಮಾಡಲು ಮನಸ್ಸು ಒಪ್ಪಲಿಲ್ಲ—“ಮಕ್ಕಳಿಗೆ ತೊಂದರೆ ಕೊಡಬಾರದು.” ಆ ಕ್ಷಣದಲ್ಲಿ ಅವರಿಗೆ ಸಾವು ಭಯವಲ್ಲ; ಯಾರಿಗೂ ಗೊತ್ತಾಗದೆ ಸಾಯುವ ಭಯ ಹೆಚ್ಚಾಗಿತ್ತು. ವರ್ಷಗಳ ಕಾಲ ಒತ್ತಿಹಿಡಿದ ನೋವು ಒಮ್ಮೆಲೆ ಒಡೆದು ಹರಿಯಿತು. ಕಣ್ಣೀರು ಜಾರಿ ಬಿದ್ದಿತು. ಅವರು ತಮ್ಮೊಳಗೆ ನುಡಿಯಿದರು:“ನಾನು ಗಂಡಸು… ಆದರೂ ನನಗೂ ಭಯವಾಗುತ್ತೆ.” ಮರುದಿನ ಬೆಳಗ್ಗೆ ಪಕ್ಕದ ಮನೆಯ ಚಿಕ್ಕ ಹುಡುಗಿ ಹಾಲು ಕೊಡಲು ಬಂದಳು. ಬಾಗಿಲು ಅರ್ಧ ತೆರೆದಿತ್ತು. ಅವಳು ಒಳಗೆ ಬಂದು ಆತಂಕದಿಂದ ಹೇಳಿದಳು:“ಅಜ್ಜ, ನಿನ್ನೆ ನೀವು ಕಾಣಿಸಲಿಲ್ಲ… ನನಗೆ ಭಯ ಆಯ್ತು.” ಆ ಒಂದು ವಾಕ್ಯ ಅವರ ಒಳಗಿನ ಕತ್ತಲೆಗೆ ದೀಪ ಹಚ್ಚಿತು. ಯಾರೋ ತನ್ನ ನ್ನು ಗಮನಿಸಿದ್ದಾರೆ ಎಂಬ ಅರಿವು, ಅವರನ್ನು ಮತ್ತೆ ಬದುಕಿನ ಕಡೆ ತಿರುಗಿಸಿತು. ಆ ದಿನ ಅವರು ಮೊದಲ ಬಾರಿ ನಗುಸಹಿತ “ಬಾ ಮಗಳೇ, ಕುಡಿ ಕಾಫಿ” ಎಂದರು. ನಾರಾಯಣರಾಯರಿಗೆ ಸ್ಪಷ್ಟವಾಯಿತು—ಮನುಷ್ಯನಿಗೆ ಅನ್ನ, ನೀರು, ಔಷಧಿ ಮಾತ್ರ ಸಾಲದು; ಮಾತು, ಕಾಳಜಿ, ಜೊತೆಗಾರಿಕೆ ಬೇಕು.ಹಿರಿಯ ವಿಧುರನ ನೋವು ಕಣ್ಣಿಗೆ ಕಾಣುವುದಿಲ್ಲ.ಅವನು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ—ಮೌನವಾಗಿ ಕರಗುತ್ತಾನೆ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ” Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ಪ್ರೀತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಹೇಳದೆ ಉಳಿದಿಹ ಮಾತು…. ನೂರಿವೆ” ಅಮ್ಮ ನಿಮ್ಮ ಕಾಲದ ಜನರು ಅದೆಷ್ಟು ಅನ್ ರೋಮ್ಯಾಂಟಿಕ್ ಅಲ್ಲವೇ ? ತಬ್ಬಿಕೊಳ್ಳುವುದು ದೂರ ಬಿಡು..ಐ ಲವ್ ಯು ಅಂತ ಹೇಳಿ ಪ್ರೀತಿಯನ್ನು ಅಭಿವ್ಯಕ್ತ ಪಡಿಸುವುದು ಅವರಿಗೆ ಗೊತ್ತೇ ಇಲ್ಲ ಎಂದು ಮಗಳು ಕೇಳಿದಾಗ ತಾಯಿ ಮೆಲ್ಲನೆ ನಸುನಕ್ಕು ಸುಮ್ಮನಾದಳು.ಕಣ್ಣರಿಯದ ಮಾತನ್ನು ಕರುಳರಿಯುತ್ತದೆ ಎಂದು ಹೇಳುತ್ತಾರೆ ಅಲ್ಲವೇ… ಹಾಗೆಯೇ ಮಾತುಗಳಲ್ಲಿ ಹೇಳಲಾಗದ ನೂರೆಂಟು ಭಾವಗಳನ್ನು ತಮ್ಮ ವರ್ತನೆಯಲ್ಲಿ ತೋರುವ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದು ನಮ್ಮ ಹಿರಿಯರಿಗೆ ಸಿದ್ಧಿಸಿದ ಕಲೆ. ಅಲ್ಲಿ ಯಾವುದೇ ನಾಟಕೀಯ ಪ್ರದರ್ಶನವಿಲ್ಲ ನೈಜತೆಯೇ ಎಲ್ಲ. ಮನೆಯ ಹಿರಿಯರಲ್ಲಿ ನಸು ಮುನಿಸಿನ ಜಗಳಗಳನ್ನು ನೋಡಿದಾಗ ಈ ಕುರಿತು ನಮಗೆ ಅರಿವಾಗುತ್ತದೆ. ಊಟದ ಸಮಯಕ್ಕೆ ಸರಿಯಾಗಿ ಅಜ್ಜ ಊಟ ಮಾಡದೆ ಹೋದಾಗ ಮುನಿಯುವ ಅಜ್ಜಿಯ ಮನಸ್ಸಿನಲ್ಲಿ ತನ್ನ ಪತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲಿ ಎಂಬ ಆಶಯವಿರುತ್ತದೆ. ಆದರೆ ಅದೇ ಅಜ್ಜ ದಿನವಿಡೀ ಕೆಲಸ ಮಾಡಿದ್ದೀಯ! ಕೊಂಚ ಹೊತ್ತು ಕುಳಿತು ವಿಶ್ರಾಂತಿ ಮಾಡಲಿ. ತನ್ನ ವಯಸ್ಸಿನವರ ಜೊತೆ ಮನೆಯ ಕಟ್ಟೆಯ ಮೇಲೆ ಕುಳಿತು ಇಲ್ಲವೇ ದೇವಸ್ಥಾನದ ಆವರಣದಲ್ಲಿ ಕುಳಿತು ಹರಟೆ ಹೊಡೆದು ದಣಿವಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಕೆಯನ್ನು ದೂರದರ್ಶನದಲ್ಲಿ ಬರುವ ಯಾವುದೋ ಕಾರ್ಯಕ್ರಮವನ್ನು ನೋಡಲು ಕರೆಯುತ್ತಾರೆ ಇಲ್ಲವೇ ಸಾಯಂಕಾಲದ ಸಮಯದಲ್ಲಿ ಒಂದಷ್ಟು ವಾಕಿಂಗ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿ ಊರ ಹೊರಗಿನ ದೇವಸ್ಥಾನದ ಬಳಿಯೋ ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮಾತನಾಡಿ ವಾಪಸ್ ಕರೆ ತರುತ್ತಾರೆ…. ಇದೆಲ್ಲದರ ಹಿಂದೆ ಇರುವುದು ಅವರ ಅನನ್ಯವಾದ ಕಾಳಜಿ. ಇಲ್ಲಿ ಅವರಿಬ್ಬರೂ ಪರಸ್ಪರರ ಕಾಳಜಿ ಮಾಡುವುದರ ಹಿಂದೆ ಇರುವುದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ರೂಪ.ಇನ್ನು ತನ್ನ ಪತ್ನಿಯ ಇಷ್ಟದ ಬಣ್ಣದ ಉಡುಪನ್ನು, ಸೀರೆಯನ್ನು ಆಗಾಗ ಪತಿ ತರುತ್ತಾನೆ. ಹೂವನ್ನು, ಸಿಹಿತಿಂಡಿಯನ್ನು ತಂದುಕೊಡುವ ಪತಿ ಮನೆಗೆ ಬಂದ ಕೂಡಲೇ ಅದನ್ನು ಆಕೆಯ ಕೈಗಿಟ್ಟು ಬೇಗ ತಟ್ಟೆಯಲ್ಲಿ ಹಾಕಿ ತಗೊಂಡು ಬಾ ನಾವೆಲ್ಲರೂ ಸೇರಿ ತಿನ್ನೋಣ ಎನ್ನುವ ಮೂಲಕ ಆಕೆಯ ಕುರಿತು ಕಾಳಜಿ ವಹಿಸುತ್ತಾನೆ. ಹೊರಗಿನಿಂದ ದುಡಿದು ದಣಿದು ಬರುವ ಪತಿ ತನ್ನಿಷ್ಟದ ತಿಂಡಿ ತಿನಿಸುಗಳನ್ನು ತಂದು ಕೊಟ್ಟಾಗ ಪತ್ನಿ ಆತನ ಅವಸರದ ಕರೆಗೆ ಓಗೊಟ್ಟು ಗಂಡ ಮಕ್ಕಳೊಡನೆ ತಾನೂ ಕುಳಿತು ತಿಂದು ನಂತರ ಕಾಫಿ ಮಾಡಿಕೊಡುತ್ತಾಳೆ. ಇದು ಕೂಡ ಪ್ರೀತಿಯೇ ಅಲ್ಲವೇ ? ನಾಲ್ಕು ಜನರ ನಡುವೆ ಹೊರಗೆ ಓಡಾಡುವ ತನ್ನ ಪತಿ ಯಾವಾಗಲೂ ಇಸ್ತ್ರಿಯಾದ ಗರಿ ಗರಿ ಬಟ್ಟೆಗಳನ್ನು ಧರಿಸಿ ಲವಲವಿಕೆಯಿಂದ ಓಡಾಡಲಿ ಎಂದು ಪತ್ನಿ ಆಶಿಸಿದರೆ, ತನ್ನ ಇಡೀ ಕುಟುಂಬದ ನಿರ್ವಹಣೆ ಮಾಡುವ ಪತ್ನಿ ಚೆನ್ನಾಗಿ ತಿಂದುಂಡು ಆರೋಗ್ಯವಾಗಿರಲಿ ಎಂದು ಪತಿ ಆಶಿಸುತ್ತಾನೆ.ಹರೆಯದಲ್ಲಿ ಪತಿಯ ಹಿಂದೆ ಮುಂದೆ ಓಡಾಡಿ ಆತನ ಕೆಲಸಗಳನ್ನು ಮಾಡಿಕೊಡುವ ಪತ್ನಿಗೆ ಮಧ್ಯ ವಯಸ್ಸಿನಲ್ಲಿ ವಯೋ ಸಹಜವಾಗಿ ಉಂಟಾಗುವ ತಲೆನೋವು, ಸೊಂಟ ನೋವುಗಳಿಗೆ ಝಂಡು ಬಾಮ್ ಹಚ್ಚಿ ಮಾಲೀಶು ಮಾಡುವ ಪತಿಗಳನ್ನು ನಾವು ಕಾಣಬಹುದು… ಮತ್ತೆ ಕೆಲವರು ಅಷ್ಟೆಲ್ಲವನ್ನು ಮಾಡದೆ ಹೋದರೂ ತಮ್ಮದೇ ಧೋರಣೆಯ ದಾಟಿಯಲ್ಲಿ ‘ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದರೆ ಇನ್ನೇನಾದೀತು ಊಟ ಮಾಡಿ ಮಾತ್ರೆ ನುಂಗಿ ಮಲಗಿಕೋ ‘ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.‘ ಋಣಾನು ಬಂಧ ರೂಪೇಣ, ಪಶು ಪತ್ನಿ ಸುತಾಲಯ’ ಎಂದು ನಮ್ಮ ಹಿರಿಯರು ಹೇಳಿರುವುದು ಬಹುಶಃ ಇದೇ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ರಕ್ತ ಸಂಬಂಧವಲ್ಲದ ಆದರೂ ಕೂಡ ಋಣ ಮತ್ತು ಅನುಬಂಧದ ಕಾರಣದಿಂದಾಗಿ ಸತಿಪತಿಗಳಾಗಿ ಬದುಕುವ ಅವರಿಬ್ಬರೂ ತಾರುಣ್ಯದಲ್ಲಿ ವಯೋಸಹಜ ಪ್ರೇಮ ಕಾಮಗಳಲ್ಲಿ ಒಂದಾದರೂ ಮಧ್ಯ ವಯಸ್ಸಿಗೆ ಬಂದಾಗಲೂ ಕೂಡ ಮಕ್ಕಳ ಪಾಲನೆ ಪೋಷಣೆಯನ್ನು ಜೊತೆಯಾಗಿ ಮಾಡುವ ಮೂಲಕ ಕೌಟುಂಬಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ. ಇನ್ನು ವೃದ್ಧಾಪ್ಯದಲ್ಲಂತೂ ಕೇಳಲೇಬೇಡಿ ಅದುವರೆಗೂ ಅತ್ಯಂತ ಕಠಿಣ ವ್ಯಕ್ತಿ ಎಂದು ಎನಿಸಿಕೊಂಡಿರುವಾತ ಕೂಡ ತನ್ನ ಕುಟುಂಬದ ಮೂಲ ಸೆಲೆಯಾದ ತನ್ನ ಪತ್ನಿಯನ್ನು ಕಾಳಜಿ ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಹಿಂದೆ ಕೇಳಿದರೂ ತಂದುಕೊಡದ ತಾರುಣ್ಯದ ಮೈಮರೆವನ್ನು ಹೊತ್ತು ಮೆರೆಯುತ್ತಿದ್ದ ಆತ ಇದೀಗ ಆಕೆ ಕೇಳದೆಯೂ ಆಕೆಯ ಮನದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ. ಇನ್ನು ಆಕೆ ಏನು ಕಡಿಮೆಯೇ! ಆಕೆ ಕೂಡ ಆತನ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಆತನ ಒಳಿತು ಕೆಡುಕುಗಳಿಗೆ ತನ್ನನ್ನು ತಾನು ಜವಾಬ್ದಾರಿಯನ್ನಾಗಿಸಿಕೊಂಡು ಎಲ್ಲ ರೀತಿಯಲ್ಲಿಯೂ ಆತನ ಕಾಳಜಿ ಮಾಡುತ್ತಾಳೆ. . ಇದೀಗ ಕೇವಲ ಆಕೆ ಆತನ ಪ್ರೇಮದ ಕಾಮದ ಸಿಟ್ಟು ಸೆಡವನ್ನು ಹೊರುವ ಪತ್ನಿ ಮಾತ್ರವಲ್ಲ ಬದಲಾಗಿ ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಾಮಾತೆ. ಆತನ ಪಾಲಕರನ್ನು ಆದರಿಸಿ ಸತ್ಕರಿಸುವ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಮನೆ ಯಜಮಾನಿ. ಆತನ ಮಕ್ಕಳನ್ನು ಅತ್ಯುತ್ತಮ ಶಿಕ್ಷೆ ಮತ್ತು ರಕ್ಷೆಗಳ ಜೊತೆಯಲ್ಲಿ ಉತ್ತಮ ನಾಗರಿಕರನ್ನಾಗಿಸಿ ಬೆಳೆಸುವ ಮಮತಾಮಯಿ. ಹೀಗೆ ಅವರು ಪರಸ್ಪರರನ್ನು ದೂರುವ ಮೂಲಕ ಕಾಳಜಿ ಮಾಡಿಕೊಳ್ಳಲು ಹೇಳುವ ಮೂಲಕ ಖುದ್ದು ತಾವೇ ಕಾಳಜಿ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮಧ್ಯ ವಯಸ್ಸಿನಲ್ಲಿ ಮಕ್ಕಳ ಮುಂದೆ ಅವರ ಸಂಗಾತಿಯನ್ನು ತುಸು ದೂರುವುದು ಹೆಚ್ಚೇ ಆದರೂ ಅದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ಸ್ವರೂಪ.ಮಕ್ಕಳ ಮುಂದೆ ಪರಸ್ಪರರನ್ನು ದೂರಿದರು ಕೂಡ ಒಂದೊಮ್ಮೆ ಮಕ್ಕಳು ಅವರನ್ನು ತಮಾಷೆಯಾಗಿ ಅಂದು ಆಡಿದರೂ ಕೂಡ ಅದನ್ನು ಸಹಿಸದೆ ತಮ್ಮ ಸಂಗಾತಿಯನ್ನು ವಹಿಸಿಕೊಂಡು ಬರುವುದು ಹಾಗೂ ಅದಕ್ಕೂ ಮಿಗಿಲಾಗಿ ಮಕ್ಕಳು ತಮಾಷೆ ಮಾಡಿದರೆ ಅವರಿಬ್ಬರೂ ಒಂದು ಗುಂಪಾಗಿ ನಸು ಕೋಪವು ಉಗ್ರ ಕೋಪವಾಗಿ ಮಕ್ಕಳ ಮೇಲೆ ಹರಿಹಾಯುವುದು ಕೂಡ ಅವರ ಪ್ರೀತಿಯ ಮತ್ತೊಂದು ಸ್ವರೂಪ. ಆಗ ಮಕ್ಕಳು ಅಯ್ಯೋ! ಇವರಿಬ್ಬರ ಮಧ್ಯದಲ್ಲಿ ನಾವು ಸಿಲುಕಿ ಕೊಳ್ಳುವುದು ಬೇಡ ಎಂದು ತಮಾಷೆ ಮಾಡಿ ಹಿಂದೆ ಸರಿಯುವುದೂ ಉಂಟು. ಎಷ್ಟೋ ಬಾರಿ ದಂಪತಿಗಳು ಮದುವೆಯಾದ ಕೆಲ ವರ್ಷಗಳ ನಂತರ ಪರಸ್ಪರ ವಿಭಿನ್ನ ವ್ಯಕ್ತಿತ್ವಗಳು ಎಂಬಂತೆ ಕಂಡರೂ ಮುಂದಿನ ಕೆಲ ದಶಕಗಳ ಬದುಕಿನಲ್ಲಿ ಇವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಒಂದೇ ರೀತಿಯ ಮಾತುಕತೆ, ರೀತಿ ನೀತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ….. ಅವರಿಬ್ಬರೂ ಒಬ್ಬರಾಗುವ ಈ ಪ್ರಕ್ರಿಯೆಗೆ ಕಾರಣ ಹಲವಾರು ವರ್ಷಗಳ ಜೊತೆಯಾಗಿರುವಿಕೆ. ದೇಹವೆರಡು ಪ್ರಾಣ ಒಂದು, ಕಣ್ಣೆರಡು ನೋಟ ಒಂದು ಎಂಬಂತಿರುವ ಅವರ ಬದುಕುಇದಕ್ಕೆ ವ್ಯತಿರಿಕ್ತವಾಗಿಯೂ ಸಾಕಷ್ಟು ಜನ ಬದುಕಬಹುದು. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಪರಸ್ಪರ ಗೌರವದಿಂದ ದೂರ ಸರಿದಿರಬಹುದು. ಅಂತಹ ದೂರ ಸರಿದಿರುವ ದಂಪತಿಗಳು ಕೂಡ ತಮ್ಮ ಸಂಗಾತಿಯ ಮೇಲಿನ ನಿಜವಾದ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಹಾಗೂ ತಾವು ಆ ರೀತಿ ದೂರವಾದರೂ ಕೂಡ ಒಂದೊಳ್ಳೆಯ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಮೂಲಕ ಪರಸ್ಪರರನ್ನು ಗೌರವಿಸುತ್ತಾರೆ. ಇದು ಕೂಡ ಹೇಳದೆ ಉಳಿದಿಹ ಮಾತುಗಳಲ್ಲಿ ಒಂದಾಗಬಹುದು.ಇದಕ್ಕೆ ಉದಾಹರಣೆಯಾಗಿ ಕಿರಣ್ ಬೇಡಿ ಮತ್ತು ಆಕೆಯ ಪ್ರತಿ ಹಸ್ತ ಕಲೆಗಳ ಜನಕರು ಎಂದೆ ಹೆಸರಾದ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಆಕೆಯ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಾಲಿವುಡ್ ಚಲನಚಿತ್ರರಂಗದ ಅಶೀಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ, ಖ್ಯಾತ ಹಿಂದಿ ಚಲನಚಿತ್ರ ತಾರೆ ಅಮೀರ್ ಖಾನ್ ಮತ್ತು ಅವರ ಪತ್ನಿ ರೀನಾ, ಹೃತಿಕ್ ರೋಷನ್ ಹಾಗೂ ಅವರ ಪತ್ನಿ ಸುಸಾನೆ ಹೀಗೆ ಹತ್ತು ಹಲವು ಜನರನ್ನು ನಾವು ಉದಾಹರಿಸಬಹುದು….. ಆದರೆ ಇಂಥವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಪ್ರತಿ ಮಾತಿಗೂ ಐ ಲವ್ ಯು ಎಂದು ಹೇಳುವ, ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುವ ಭಾವ ಮಾತ್ರ ಪ್ರೀತಿಯಲ್ಲ ಬದಲಾಗಿ ಮಾತುಗಳಲ್ಲಿ ಹೇಳದೆ ಹೋದರು ತಮ್ಮ ಕೃತಿಯಲ್ಲಿ ವ್ಯಕ್ತಪಡಿಸುವ, ವರ್ತನೆಯ ಮೂಲಕ ಅರಿವು ಮೂಡಿಸುವ ಪ್ರೀತಿ ಎಷ್ಟೋ ಮೇಲು ಅಲ್ಲವೇ ? ವೀಣಾ ಹೇಮಂತಗೌಡ ಪಾಟೀಲ್

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಪುಸ್ತಕ ಸಂಗಾತಿ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ

ಪುಸ್ತಕ ಸಂಗಾತಿ ತಿಲಕಾ ನಾಗರಾಜ್ ಹಿರಿಯಡಕ ಡಾ| ಶ್ರುತಿ ಮಧುಸೂದನ್ “ಪೇರಳೆ ಕಾಕು” ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.           ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.  ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ  ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ,  ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.       ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ. ತಿಲಕಾ ನಾಗರಾಜ್ ಹಿರಿಯಡಕ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ Read Post »

ಇತರೆ, ಪರಿಸರ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ

ಪರಿಸರ ಸಂಗಾತಿ ಪೃಥ್ವಿರಾಜ್ ಟಿ ಬಿ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” (ಭೂತಾಯಿಯ ಮನದಾಳದ ಮಾತು) “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಮಾನವನ ಇತಿಹಾಸವನ್ನು ನಾವು ಓದಿದಾಗ, ಒಂದು ನೋವು ತುಂಬಿದ ಸತ್ಯ ನಮ್ಮ ಮುಂದೆ ಬರುತ್ತದೆ—ಅದು ಯುದ್ಧ. ಯುದ್ಧಗಳು ಕಾಲಕಾಲಕ್ಕೆ ರೂಪ ಬದಲಿಸಿಕೊಂಡರೂ, ಅದರ ಮೂಲ ಕಾರಣ ಒಂದೇ: ಸ್ವಾರ್ಥ, ಅಧಿಕಾರದ ಆಸೆ, ಸಂಪನ್ಮೂಲಗಳ ಮೇಲಿನ ಹಕ್ಕು. ಆದರೆ ಈ ಎಲ್ಲದಕ್ಕೂ ಮೌನ ಸಾಕ್ಷಿಯಾಗಿರುವಳು ಭೂತಾಯಿ. ಮಾನವನು ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಅದೇ ಪ್ರಯತ್ನದಲ್ಲಿ ಭೂತಾಯಿಯನ್ನೇ ಗಾಯಗೊಳಿಸುತ್ತಿರುವುದು ಅತ್ಯಂತ ದುಃಖದ ಸಂಗತಿ. “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಮಾತು ಭೂತಾಯಿಯ ಮನದಾಳದ ಕಿರುಚಾಟ. ಇದು ಕೇವಲ ಕಾವ್ಯಾತ್ಮಕ ವಾಕ್ಯವಲ್ಲ; ಇಂದಿನ ಜಗತ್ತಿನ ವಾಸ್ತವಿಕ ಚಿತ್ರಣ. ಯುದ್ಧಗಳ ಮೂಲ ಕಾರಣಗಳು ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳಿಗೆ ಹಲವಾರು ಕಾರಣಗಳಿವೆ. ಭೂಮಿಯ ಮೇಲಿನ ಹಕ್ಕು, ಖನಿಜ ಸಂಪನ್ಮೂಲಗಳ ಮೇಲಿನ ಹಿಡಿತ, ನೀರಿನ ಕೊರತೆ, ರಾಜಕೀಯ ಪ್ರಭಾವ—ಇವೆಲ್ಲವೂ ಯುದ್ಧಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ತೈಲ ಸಂಪತ್ತುಳ್ಳ ಪ್ರದೇಶಗಳಲ್ಲಿ ಯುದ್ಧಗಳು ಹೆಚ್ಚಾಗಿ ನಡೆಯುತ್ತವೆ. ಏಕೆಂದರೆ ಆ ಸಂಪತ್ತು ಆರ್ಥಿಕ ಶಕ್ತಿಯನ್ನು ನಿರ್ಧರಿಸುತ್ತದೆ. ಆದರೆ ಪ್ರಶ್ನೆ ಏನೆಂದರೆ: ಈ ಸಂಪತ್ತಿನಿಗಾಗಿ ಯುದ್ಧ ಮಾಡುತ್ತಿರುವವರು ಯಾರ ಮೇಲೆ ಯುದ್ಧ ಮಾಡುತ್ತಿದ್ದಾರೆ? ಉತ್ತರ ಸರಳ—ಅದೇ ಭೂಮಿಯ ಮೇಲೆ. ಅವರು ಪಡೆಯಲು ಬಯಸುತ್ತಿರುವುದು ಭೂಮಿಯ ಸಂಪತ್ತು; ಆದರೆ ಅದನ್ನೇ ಪಡೆಯಲು ಭೂಮಿಯನ್ನೇ ಹಾಳು ಮಾಡುತ್ತಿದ್ದಾರೆ. ಭೂತಾಯಿಯ ನೋವು ಯುದ್ಧವೆಂದರೆ ಕೇವಲ ಮನುಷ್ಯರ ನಾಶವಲ್ಲ. ಅದು ಪರಿಸರದ ನಾಶ. ಬಾಂಬ್ ಸ್ಫೋಟಗಳು, ರಾಸಾಯನಿಕ ದಾಳಿಗಳು, ಅಣ್ವಸ್ತ್ರಗಳ ಬಳಕೆ—ಇವುಗಳ ಪರಿಣಾಮವಾಗಿ ಮಣ್ಣು ವಿಷಕಾರಿ ಆಗುತ್ತದೆ, ನೀರು ಮಾಲಿನ್ಯಗೊಳ್ಳುತ್ತದೆ, ಗಾಳಿ ಕಲುಷಿತವಾಗುತ್ತದೆ. ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ನಡೆದ ಅಣುಬಾಂಬ್ ದಾಳಿಗಳ ಪರಿಣಾಮವಾಗಿ, ದಶಕಗಳವರೆಗೆ ಆ ಪ್ರದೇಶದಲ್ಲಿ ಜನರು ರೋಗಗಳಿಂದ ಬಳಲಿದರು. ಇದು ಕೇವಲ ಮಾನವೀಯ ನಷ್ಟವಲ್ಲ, ಪರಿಸರದ ಮೇಲಿನ ದೀರ್ಘಕಾಲದ ಪರಿಣಾಮವೂ ಆಗಿದೆ. ಯುದ್ಧ ನಡೆಯುವ ಪ್ರದೇಶಗಳಲ್ಲಿ ಅರಣ್ಯಗಳು ನಾಶವಾಗುತ್ತವೆ. ಮರಗಳು ಕಡಿದುಹಾಕಲ್ಪಡುತ್ತವೆ. ಪ್ರಾಣಿಗಳು ತಮ್ಮ ವಾಸಸ್ಥಾನ ಕಳೆದುಕೊಳ್ಳುತ್ತವೆ. ನದಿಗಳು ರಕ್ತದಿಂದ ಮತ್ತು ರಾಸಾಯನಿಕಗಳಿಂದ ಕಲುಷಿತವಾಗುತ್ತವೆ. ಇದು ಭೂತಾಯಿಯ ಹೃದಯಕ್ಕೆ ಬಿದ್ದ ಗಾಯಗಳಂತೆ. ಆಧುನಿಕ ಯುದ್ಧಗಳ ಭಯಾನಕತೆ ಇಂದಿನ ಯುದ್ಧಗಳು ತಂತ್ರಜ್ಞಾನದಿಂದ ತುಂಬಿವೆ. ಡ್ರೋನ್ ದಾಳಿಗಳು, ಕ್ಷಿಪಣಿಗಳು, ಸೈಬರ್ ಯುದ್ಧ—ಇವು ಎಲ್ಲವೂ ಆಧುನಿಕ ಯುದ್ಧದ ಭಾಗ. ಆದರೆ ಇದರ ಪರಿಣಾಮ ಇನ್ನೂ ಭೀಕರವಾಗಿದೆ. ಅಣ್ವಸ್ತ್ರಗಳು ಮಾನವಕುಲಕ್ಕೆ ಅತಿ ದೊಡ್ಡ ಅಪಾಯ. ಒಂದು ಅಣುಬಾಂಬ್ ಸ್ಫೋಟವೇ ಲಕ್ಷಾಂತರ ಜೀವಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಹುದು. ಅದರ ಪರಿಣಾಮವಾಗಿ ಭೂಮಿಯ ಮೇಲೆ ದೀರ್ಘಕಾಲದ ವಿಕಿರಣ ಉಂಟಾಗುತ್ತದೆ. ಇದರಿಂದ ಭೂತಾಯಿ ಪ್ರಶ್ನಿಸುತ್ತಾಳೆ: “ನೀವು ನನ್ನನ್ನು ಉಳಿಸಬೇಕೆಂದು ಹೇಳುತ್ತೀರಿ, ಆದರೆ ನನ್ನನ್ನೇ ನಾಶ ಮಾಡುತ್ತಿರುವಿರಿ. ಇದು ಯಾವ ನ್ಯಾಯ?” ಮಾನವನ ಸ್ವಾರ್ಥ ಮಾನವನು ತನ್ನ ಸೌಲಭ್ಯಕ್ಕಾಗಿ ಎಲ್ಲವನ್ನೂ ತ್ಯಜಿಸಲು ಸಿದ್ಧನಾಗಿದ್ದಾನೆ. ಆದರೆ ಈ ಸೌಲಭ್ಯಗಳು ಯಾವ ಬೆಲೆಗೆ ಬರುತ್ತಿವೆ? ಯುದ್ಧಗಳ ಮೂಲಕ ಸಿಕ್ಕ ಸಂಪತ್ತು ತಾತ್ಕಾಲಿಕ. ಆದರೆ ಅದರ ಪರಿಣಾಮ ಶಾಶ್ವತ. ಯುದ್ಧಗಳಿಂದ ದೇಶಗಳು ಆರ್ಥಿಕವಾಗಿ ಹಿನ್ನಡೆಯಾಗುತ್ತವೆ. ಜನರು ಮನೆ ಕಳೆದುಕೊಳ್ಳುತ್ತಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಆದರೆ ಇದಕ್ಕಿಂತಲೂ ದೊಡ್ಡ ನಷ್ಟವೆಂದರೆ, ಮಾನವೀಯತೆ ಕಳೆದುಹೋಗುವುದು. ಯುದ್ಧದಲ್ಲಿ ಗೆದ್ದವರು ಯಾರು? ಸೋತವರು ಯಾರು? ಕೊನೆಗೆ ನೋವು ಅನುಭವಿಸುವವರು ಎಲ್ಲರೂ. ಭೂತಾಯಿಯ ಕಿರುಚಾಟ ಭೂತಾಯಿ ಮೌನವಾಗಿದ್ದರೂ, ಅವಳ ನೋವು ಸ್ಪಷ್ಟವಾಗಿ ಕಾಣಿಸುತ್ತದೆ. ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್, ಪ್ರಕೃತಿ ವಿಕೋಪಗಳು—ಇವೆಲ್ಲವೂ ಭೂತಾಯಿಯ ಪ್ರತಿಕ್ರಿಯೆಗಳು. ಯುದ್ಧಗಳು ಈ ಸಮಸ್ಯೆಗಳನ್ನು ಇನ್ನಷ್ಟು ಗಂಭೀರವಾಗಿಸುತ್ತವೆ. ಕಾರ್ಬನ್ ಉತ್ಸರ್ಗ ಹೆಚ್ಚಾಗುತ್ತದೆ. ಪರಿಸರ ಸಮತೋಲನ ಹಾಳಾಗುತ್ತದೆ. ಭೂತಾಯಿ ಕೇಳುತ್ತಾಳೆ: “ನಾನು ನಿಮ್ಮ ಮನೆ. ನೀವು ನನ್ನನ್ನು ಏಕೆ ಹಾಳು ಮಾಡುತ್ತಿದ್ದೀರಿ?” ಶಾಂತಿಯ ಅಗತ್ಯತೆ ಈ ಎಲ್ಲ ಸಮಸ್ಯೆಗಳ ಪರಿಹಾರ ಒಂದೇ—ಶಾಂತಿ. ಯುದ್ಧವು ಯಾವ ಸಮಸ್ಯೆಯಿಗೂ ಶಾಶ್ವತ ಪರಿಹಾರ ನೀಡುವುದಿಲ್ಲ. ಸಂವಾದ, ಸಹಕಾರ, ಪರಸ್ಪರ ಗೌರವ—ಇವುಗಳ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಬಹುದು. ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳು ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣವು ಕೂಡ ಮಹತ್ವದ ಪಾತ್ರವಹಿಸುತ್ತದೆ. ಜನರಲ್ಲಿ ಶಾಂತಿ, ಸಹಾನುಭೂತಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಬೇಕು. ಭವಿಷ್ಯದ ಜವಾಬ್ದಾರಿ ಭವಿಷ್ಯ ನಮ್ಮ ಕೈಯಲ್ಲಿದೆ. ನಾವು ಯಾವ ರೀತಿಯ ಜಗತ್ತನ್ನು ಬಯಸುತ್ತೇವೆ? ಯುದ್ಧಗಳಿಂದ ತುಂಬಿದ ಜಗತ್ತಾ, ಅಥವಾ ಶಾಂತಿಯಿಂದ ಕೂಡಿದ ಜಗತ್ತಾ? ಪ್ರತಿ ವ್ಯಕ್ತಿಯೂ ತನ್ನ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಪರಿಸರವನ್ನು ಕಾಪಾಡಬೇಕು. ಯುದ್ಧದ ವಿರುದ್ಧ ಧ್ವನಿ ಎತ್ತಬೇಕು. ಶಾಂತಿಯ ಪರವಾಗಿ ನಿಲ್ಲಬೇಕು. ಸಮಾರೋಪ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಭೂತಾಯಿಯ ಮಾತು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ. ನಾವು ನಮ್ಮ ತಪ್ಪುಗಳನ್ನು ಅರಿತುಕೊಳ್ಳಬೇಕು. ಯುದ್ಧಗಳ ಮೂಲಕ ನಾವು ಯಾವುದನ್ನೂ ಪಡೆಯುವುದಿಲ್ಲ; ನಾವು ಕಳೆದುಕೊಳ್ಳುವುದೇ ಹೆಚ್ಚು. ಭೂತಾಯಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ. ನಾವು ಅವಳನ್ನು ರಕ್ಷಿಸಿದರೆ, ಅವಳು ನಮ್ಮನ್ನು ರಕ್ಷಿಸುತ್ತಾಳೆ. ಆದುದರಿಂದ, ಶಾಂತಿಯನ್ನು ಆರಿಸೋಣ. ಮಾನವೀಯತೆಯನ್ನು ಉಳಿಸೋಣ. ಭೂತಾಯಿಯ ಕಿರುಚಾಟವನ್ನು ಕೇಳೋಣ—ಮತ್ತು ಅದಕ್ಕೆ ಸ್ಪಂದಿಸೋಣ. ಇದು ಕೇವಲ ಲೇಖನವಲ್ಲ; ಇದು ಒಂದು ಕರೆ—ಬದುಕನ್ನು ಉಳಿಸುವ ಕರೆ. ಪೃಥ್ವಿರಾಜ್ ಟಿ ಬಿ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ Read Post »

You cannot copy content of this page

Scroll to Top