ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಕೊಡಚಾದ್ರಿ”


ಕೊಡಚಾದ್ರಿ—
ನೀನು ಪರ್ವತವಲ್ಲ,
ಪ್ರತಿದಿನ ಹೊಸದಾಗಿ ಹುಟ್ಟುವ
ನಿತ್ಯ ಸುಂದರಿ.
ಶೋಲಾ ಕಾಡಿನ ಹಸಿರು ಸೀರೆಯಲಿ
ನೀನು ಮೌನವಾಗಿ ನಿಂತಾಗ,
ಮೋಡಗಳು ನಿನ್ನ ಕೆನ್ನೆಗೆ
ಮುತ್ತಿಟ್ಟು ಹೋಗುತ್ತವೆ—
ನನಗೆ ಮಾತ್ರ
ದೂರದಿಂದ ನೋಡುವ ಹಕ್ಕು.
ಹಿಡ್ಲುಮನೆ
ನಿನ್ನ ಕೂದಲ ತುದಿಯಿಂದ
ಜಾರಿ ಬೀಳುವ ನಗುವಿನಂತೆ,
ಅದು ನೆಲ ತಾಕುವ ಮುನ್ನವೇ
ನನ್ನ ಮನಸ್ಸು ತಾಕಿ
ನನ್ನನ್ನು ಕರಗಿಸುತ್ತದೆ.
ನಿನ್ನ ಹಾದಿಯಲ್ಲಿ
ಜಿಗಣೆ ನನ್ನ ರಕ್ತ ಹೀರುವಾಗ,
ನೋವಿಗಿಂತ
ನಿನ್ನ ಹತ್ತಿರ ಇರುವ ಸವಿ
ಹೆಚ್ಚಾಗಿ ಗೊತ್ತಾಗುತ್ತದೆ.
ಬೆವರು ದೇಹ ಬಿಟ್ಟು
ನಿನ್ನ ಮಣ್ಣಲ್ಲಿ ಬೆರೆತಾಗ,
ನಾನು ನಿಧಾನವಾಗಿ
ನಿನ್ನೊಳಗೆ ಲೀನವಾಗುತ್ತೇನೆ—
ಹೆಸರಿಲ್ಲದೆ,
ಆಕಾರವಿಲ್ಲದೆ.
ಏರುವೆಡೆಗೆ ಹೆಜ್ಜೆ ಹಾಕುತ್ತಾ
ಉಸಿರು ಕಷ್ಟವಾದಾಗ,
ನಿನ್ನ ಗಾಳಿ ಬಂದು
ಎದೆಯ ಮೇಲೆ ಕೈ ಇಟ್ಟು
ಹೇಳುತ್ತದೆ—
“ನನ್ನನ್ನು ಬಯಸುವುದೂ
ಒಂದು ತಪಸ್ಸೇ”.
ಸರ್ವಜ್ಞ ಪೀಠದ ಬಳಿ
ನೀನು ಶಾಂತಳಾಗುತ್ತೀಯ,
ಅಲ್ಲಿ
ನನ್ನ ಆಸೆಗಳು ಕೂಡ
ತಲೆಯೊಗ್ಗಿ ಕುಳಿತುಕೊಳ್ಳುತ್ತವೆ.
ಚಿತ್ರಮೂಲದ ಮೌನದಲ್ಲಿ
ನಿನ್ನ ಕಣ್ಣು ಮಿಟುಕಿದಂತೆ
ಒಂದು ಸಂಕೆತ,
ಅದು ನನ್ನೊಳಗೆ
ಹುಟ್ಟು–ಸಾವು ಎರಡನ್ನೂ
ಒಂದೇ ಕ್ಷಣದಲ್ಲಿ ಕಲಿಸುತ್ತದೆ.
ಸೂರ್ಯಾಸ್ತದ ಹೊತ್ತಿಗೆ
ನೀನು ಕೆಂಪಾಗಿ ನಾಚಿದಾಗ,
ಅರಬ್ಬೀ ಸಮುದ್ರವೂ
ನಿನ್ನ ಸೌಂದರ್ಯಕ್ಕೆ
ಅಲೆಗಳನ್ನೇ ಮರೆತು ನಿಂತುಬಿಡುತ್ತದೆ.
ಕೊಡಚಾದ್ರಿ—
ನಿನ್ನನ್ನು ಏರುವುದು
ಚಾರಣವಲ್ಲ,
ನಿನ್ನೊಳಗೆ ಕಳೆದುಕೊಳ್ಳುವ
ಪ್ರೇಮಯಾನ.
ನೀನು ಆಧ್ಯಾತ್ಮ,
ನೀನು ಆಕಾಂಕ್ಷೆ,
ನೀನು ಶಿಖರ,
ನೀನು ಶೃಂಗಾರ.
ಒಂದು ದಿನ
ನಾನು ಸಂಪೂರ್ಣವಾಗಿ
ನಿನ್ನೊಳಗೆ ಲೀನವಾದರೆ—
ಅಂದು
ನಾನು ಮಾನವನಲ್ಲ,
ನಿನ್ನ ಮೌನದ
ಒಂದು ಉಸಿರಾಗಿಬಿಡುತ್ತೇನೆ.
ಅಷ್ಟೇ ಸಾಕು.
ಡಾ. ಹೆಚ್. ನಟರಾಜ್ ಆರ್ಯ




1 thought on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ””