ಅನುವಾದ ಸಂಗಾತಿ
ಶ್ರೀಶೈಲಂ -ಶಿವರಾತ್ರಿ
ತೆಲುಗು ಮೂಲ –ಜಿ. ಉಮಾಮಹೇಶ್ವರ್
ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು



ನಾವು ಸುನ್ನಿಪೆಂಟದಲ್ಲಿ ಆಚರಿಸಿದ ಮೂರು ಶಿವರಾತ್ರಿಗಳಲ್ಲಿ ನನ್ನ ಏಳನೇ ತರಗತಿಯ ಶಿವರಾತ್ರಿಗೆ ಒಂದು ವಿಶೇಷವಿದೆ. ಅದು ನಾನು ಮೊಟ್ಟಮೊದಲಬಾರಿಗೆ ಗೆಳೆಯರೊಂದಿಗೆ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿರುವ ಶಿವರಾತ್ರಿ. ಪ್ರತಿಬಾರೀ ಕುಟುಂಬವೆಲ್ಲಾ ಯಾವುದಾದರೂ ಒಂದು ಜೀಪುನಲ್ಲಿ ಹೊರಟು ಸದಾಶಿವ ಛತ್ರದಲ್ಲಿ ಉಳಿದುಕೊಂಡು, ಅಲ್ಲೇ ನಮ್ಮ ಲಗೆಜುಗಳನ್ನು ಮಡಗಿ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ಆದರೆ ಪ್ರತಿಬಾರೀ ಎಲ್ಲರೂ ಆಸೆ ತೋರಿಸುವ ಕಾಲುದಾರಿ ಯಲ್ಲಿ ಹೋಗಬೇಕೆಂದು ಬಹಳ ಕಾಲದಿಂದ ಒಂದು ಆಸೆ ಯಿತ್ತು. ಅದಕ್ಕಾಗಿ ಆ ಆ ಬಾರಿ ಹಿರಿಯರನ್ನು ಒಪ್ಪಿಸಿ ಗೆಳೆಯರೊಂದಿಗೆ ಹೊರಟೆ. ನಮ್ಮ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಂದು ನಾನು ಊಹಿಸಲಿಲ್ಲ. ಆದರೆ ಅವರು ಒಂದು ಕಂಡಿಷನ್ ಮೇಲೆ ಓಕೆ ಅಂದರು. ಹೋಗುವಾಗ ಗೆಳೆಯರೊಂದಿಗೆ ಹೋದರೂ ಅಲ್ಲಿ ಸದಾಶಿವ ಸತ್ರದ ಬಳಿ ಮತ್ತೆ ತಮ್ಮನ್ನು ಭೇಟಿಯಾಗಬೇಕು ಎಂಬ ಷರತ್ತು ಹಾಕಿ ಕಳುಹಿಸಿದರು.
ಶಿವರಾತ್ರಿಯ ಹಿಂದಿನ ದಿನ ಮಲ್ಲಿ, ರಮಣ, ಜೀ. ಶೀನು, ಸತ್ತಾರು, ಎಂ. ಪ್ರಸಾದ್, ಇನ್ನೂ ಕೆಲವು ಸ್ನೇಹಿತರು ಶಾಲೆಯ ಬಳಿ ಭೇಟಿಯಾಗಲು ನಿರ್ಧರಿಸಿದವು. ಎಲ್ಲರೂ ಬಂದಾಗ,ಅಲ್ಲಿಂದ ಒಟ್ಟಿಗೆ ಕೇಕೆಹಾಕುತ್ತಾ ಶಿಳ್ಳೆ ಹೊಡೆಯುತ್ತಾ ಐ.ಟಿ.ಐ. ದಾಟಿ ಮುಂದಕ್ಕೆ ಹೋಗುತ್ತಿದ್ದೆವು. ನನಗೆ ಈ ದಾರಿಯಲ್ಲಿ ಬರುತ್ತಿರುವುದು ಇದೇ ಮೊದಲು. ಅವರಂತೆ ವೇಗವಾಗಿ ಹೆಜ್ಜೆಗಳು ಹಾಕಲು ಸಾಧ್ಯವಾಗುತ್ತ ಇಲ್ಲ. ಸತ್ತಾರು,ರಮಣ,ನನ್ನೊಂದಿಗೆ ನಿಧಾನವಾಗಿ ನಡೆಯುತ್ತಿದ್ದಾರೆ. ಸ್ವಲ್ಪ ದೂರ ಸಾಗಿದಮೇಲೆ ‘ಸಾಕಲಿ ಸೆಲ/ಹಳ್ಳ’ ತಲುಪಿದೆವು. ಅಲ್ಲೊಂದು ಪುಟ್ಟ ಹಳ್ಳ ಹರಿಯುತ್ತಿದೆ. ಅಲ್ಲೇ ನಾವು ಬೇಕಾದಷ್ಟುನೀರು ಕುಡಿದು, ಸ್ವಲ್ಪ ನೀರಿನಲ್ಲಿ ಪಾದಗಳನ್ನು ಒದ್ದೆಮಾಡಿಕೊಂಡು, ಒಬ್ಬರಮೇಲೊಬ್ಬರು ನೀರು ಸುರಿದುಕೊಳ್ಳುತ್ತಾ, ತಮಾಷೆಮಾಡುತ್ತಾ ನಡೆಯುತ್ತಿದ್ದೇವು. ನಮ್ಮ ಜಾತ್ರೆ ಕೋಲಾಹಲದಿಂದ ನಡೆಯುತ್ತಿದೆ.
ಅಲ್ಲಿಂದ ಹಾಗೆ ನಡೆಯುತ್ತಾ ಮುಂದಕ್ಕೆ ಹೋದರೆ ‘ಮಾವಿನ ಹಳ್ಳ ಸಿಗುತ್ತದೆ. ಅಲ್ಲಿ ಮಾವಿನ ತೋಪುಗಳಿದ್ದವು. ಅದಕ್ಕಾಗಿ ಆ ಹೆಸರು ಬಂದಿರಬಹುದೆಂದು ರಮಣ ಹೇಳಿದ. ಹಾಗೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತದೆ. ದಾರಿಯಲ್ಲಿ ಮರ, ಕೊಂಬೆಗಳಿಂದ ಹಣ್ಣು, ಹಾಲಿನಹಣ್ಣು, ಚಿಟಿಮಿಟಿಹಣ್ಣು, ಬಚ್ಚಲಿ ಹಣ್ಣುಗಳನ್ನು ಯಾರಿಗೆ ಬೇಕಾದನ್ನು ಅವರು ಹಾಗೆ ಮರಗಳಿಂದ, ಗಿಡಗಳಿಂದ ಕಿತ್ತುಕೊಂಡು ತಿನ್ನುತ್ತಿದ್ದರು. ಮರಗಳಲ್ಲಿ ಇದ್ದ ಹಣ್ಣನ್ನು ಕೊಯ್ದುಕೊಂಡು ತಿನ್ನುವ ಆನಂದವೇ ಬೇರೆ. ಯಾರೋ ಕುಯ್ದು ತಂದು ಮಾರಿದ ಹಣ್ಣಿನಲ್ಲಿನ ಸಿಹಿಗಿಂತ, ಆಗಿಂದಾಗಲೆ ಕಿತ್ತುಕೊಂಡು ತಿಂದ ಕಾಡಿನ ಹಣ್ಣುಗಳ ರುಚಿ ತುಂಬಾ ಚೆನ್ನಾಗಿತ್ತು. ಸುತ್ತಲೂ ಕತ್ತಲಾದಂತಹ ಕಾಡು. ಮರಗಳ ಸಂದುಗಳಿಂದ ಬೀಳುವ ಸೂರ್ಯನ ಕಿರಣಗಳು ಯಾರೋ ಲಕ್ಷ ವಾಟ್ ಬಲ್ಬು ನಿಂದ ಬೆಳಕು ಚೆಲ್ಲುತ್ತಿರುವಂತೆ, ಕತ್ತಲೆಯ ಪರದೆಗಳನ್ನು ತೆಗೆದುಹಾಕುತ್ತಿವೆ. ಎಂದೂ ಕೇಳದ ಹಕ್ಕಿಗಳ ಕಲರಾವಗಳು, ಅವು ಅರ್ಥವಾದಂತೆ ಮೂಲೆಮೂಲೆಗಳಿಂದ ಬಂದಿರುವ ಪ್ರತಿಕ್ರಿಯೆಗಳು, ಅಗಾಗ್ಗ ಜೋರಾಗಿ ನಮ್ಮ ಕೂಗುಗಳು, ಆತಂಕದಿಂದ, ಕಂಪಿಸಿದಂತೆ, ಕಲ್ಲೋಲ ಶಬ್ದಗಳಿಂದ ಬೆಚ್ಚಿಬೀಳಿದಂತೆ ಶಬ್ದಗಳು. ಅಲ್ಲಲ್ಲಿ ಓತಿಕೇತಗಳೋ , ಅಳಿಲುಗಳೋ, ಮೊಲೆಗಳೋ, ‘ಸರ್ ಸರ್’ ಎಂದು ಓಡಾಡುತ್ತಿರುವ ಸದ್ದುಗಳು, ಹಾವುಗಳಂತಹ ಸರೀಸೃಪಗಳು ವೇಗವಾಗಿ ಹರಿದಾಡುವ ಶಬ್ದಗಳು, ಎಲ್ಲೋ ಮೇಲಿಂದ ಧುಮುಕುವ ಜಲಪಾತಗಳ ಸದ್ದುಗಳು .. ಕಾಡಿನಲ್ಲಿ ನಡೆದುಕೊಂಡು ಹೋಗುವ ಪ್ರಯಾಣ ಒಂದು ಅದ್ಭುತ.
ಹೀಗೆ ಒಂದು ಗಂಟೆ ಪ್ರಯಾಣಮಾಡಿ ಹಠಕೇಶ್ವರ ತಲುಪಿದೆವು. ಇದು ಅತ್ಯಂತ ಶಾಂತಿಯುತ ಸ್ಥಳವಾಗಿದೆ. ಮೂರು ತಿಂಗಳ ಹಿಂದೆ ಕಾರ್ತಿಕ ಮಾಸದಲ್ಲಿ ವನಭೋಜನಕ್ಕೆಂದು ಇಲ್ಲಿಗೆ ಬಂದಿದ್ದೆವು. ಕೆಲವು ಕುಟುಂಬಗಳು ಸೇರಿ ಬೆಳಗಿನಿಂದ ಸಂಜೆಯವರೆಗೆ ಒಂದು ಇಡೀ ದಿನವನ್ನು ಸಂತೋಷದಿಂದ ಕಳೆಯುವ ಅಪರೂಪದ ತಾಣವಿದು. ನಾವು ಮೇಲಿಂದ ಬಂದಿದ್ದರಿಂದ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಮಂಗಗಳೊಂದಿಗೆ ಮರಗಳ ಮೇಲೆ ಹಾರುತ್ತಾ , ಬಾಳೆತೋಟಗಳಲ್ಲಿ ಹಣ್ಣಾಗಿದ್ದ ಬಾಳೆ ಹಣ್ಣುಗಳನ್ನು ಹುಡುಕುತ್ತಾ, ಅಲ್ಲಿ ರಾಶಿಯಾಗಿರುವ ಅಂಜೂರು ಹಣ್ಣುಗಳನ್ನು ಹೊಟ್ಟೆ ಬಿಚ್ಚಿ ನೋಡಿ, ಹುಳಗಳು ಇಲ್ಲವೆಂದು ಖಚಿತಪಡಿಸಿಕೊಂಡೆವು. ಅನಂತರ ಬೇಕಾದಷ್ಟು ತಿಂದು, ನೀರು ಕುಡಿದು ಮತ್ತೆ ನಡೆಯ ತೊಡಗಿದೆವು. ಎದುರುಗೆ ‘ಪಾಲಧಾರ-ಪಂಚಧಾರ’ದಲ್ಲಿ ಮೆಟ್ಟಿಲು ಇಳಿಯುವ ಸ್ಪರ್ಧೆ ನಡೆದಿತ್ತು. ಧಾರಾಕಾರವಾಗಿ ಸುರಿಯುವ ನೀರಿನ ಕೆಳಗೆ ಕೈ ಸಾಚಿ ಆ ಶುದ್ಧವಾದ ನೀರನ್ನು ಕುಡಿದು, ಸ್ವಲ್ಪ ತಲೆಯ ಮೇಲೆ ಸುರಿದುಕೊಂಡು ಅಲ್ಲಿಂದ ಕಣಿವೆಯತ್ತ ನೋಡಿದರೆ ಉಂಟಾಗುವ ಭಯವನ್ನು ಕಲ್ಪಿಸಿಕೊಂಡು ಮತ್ತೆ ನೇರವಾಗಿ ಕಾಡಿನತ್ತ ಪ್ರಯಾಣಿಸಿದೆವು. ಈದಾರಿ ನನಗೆ ಹೊಸದಾದರೂ ಅನೇಕ ಗೆಳೆಯರಿಗೆ ಇದು ಚೆನ್ನಾಗಿ ಗೊತ್ತಿರುವ ದಾರಿ. ಈ ದಾರಿಯಲ್ಲಿ ಸಾಗುವಾಗ ಅನೇಕರು ತಮ್ಮ ಅನುಭವಗಳನ್ನು ಹೇಳತೊಡಗಿದರು. ಒಂದುಸಲ ಸೈಕಲ್ ಮೇಲೆ ಬರುತ್ತಿರುವಾಗ ಹತ್ತಿರದಲ್ಲೇ, ಈ ಪ್ರಾಂತದಲ್ಲೇ ಒಂದು ಕರಡಿ ಅವರ ಹಿಂದೆ ಬಂತೆಂದು , ಆ ಭಯದಲ್ಲಿ ವೇಗ ಹೆಚ್ಚಿಸಬೇಕೆಂದರೆ ಅದು ಏರುದಾರಿ ಆಗಿರುವುದರಿಂದ, ಸೈಕಲ್ ಗಿಂತಲೂ ಓಡುವುದೇ ಬೆಟರ್ ಎಂದು ಸೈಕಲ್ ಬಿಟ್ಟು ಓಡಿಹೋದೆನೆಂದು ಅಚ್ಚಯ್ಯ ಹೇಳಿದರಿಂದ, ಇನ್ನೂ ಸ್ವಲ್ಪ ಹತ್ತಿರದಲ್ಲಿನ ಮಗ್ಗುಲಲ್ಲಿ ತಾನೊಂದು ಹುಲಿಯನ್ನು ನೋಡಿದೆನೆಂದು ಪ್ರಸಾದ್ ಹೇಳಿದ. ಅಲ್ಲಿರುವ ಚಿಕ್ಕ ಹಳ್ಳದಲ್ಲಿ ದಿನವೂ ನೀರು ಕುಡಿಯಲು ಹುಲಿಗಳು ಬರುತ್ತವೆಯಂತೆ. ಆದರೆ ಈ ಸಮಯದಲ್ಲಿ ಬರುವುದಿಲ್ಲ, ಅದರಿಂದ ಏನೂ ಪರವಾಯಿಲ್ಲ ಎಂದು ಧೈರ್ಯ ಹೇಳಿದರು. ಅಲ್ಲಿಂದ ಸಾರ್ವಜನಿಕರ ಒತ್ತಡ ಹೆಚ್ಚಾಯಿತು. ಇವರೆಲ್ಲಾ ಎಲ್ಲಿಂದ ಬರುತಿದ್ದಾರೆಂದು ತಿಳಿಯಲಿಲ್ಲ . ಆಗ ಮಲ್ಲಿ ‘ಶ್ರೀಶೈಲಕ್ಕೆ ಸೇರಲು ವೆಂಕಟಾಪುರದಿಂದ ಭೀಮನ ಕೊಳದ ಮೂಲಕ ರಸ್ತೆಯಿರುವುದೆಂದು, ಪ್ರತಿ ವರ್ಷ್ ಆ ರಸ್ತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲವನ್ನು ಸೇರುತ್ತಾರೆ’ ಎಂದು ಹೇಳಿದ.
ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಸಾಕ್ಷಿ ಗಣಪತಿ ದೇವಸ್ಥಾನ ಕಾಣಿಸುತ್ತದೆ. ಶ್ರೀಶೈಲ ದರ್ಶನಕ್ಕೆ ತೆರಳುವ ಭಕ್ತರೆಲ್ಲರೂ ಇಲ್ಲಿಯೇ ನಿಂತು ಈ ಗಣಪತಿಗೆ ನಮಸ್ಕಾರ ಮಾಡಿ ಹೋಗುವುದು ರೂಢಿ. ನಾವು ಹೋಗಿದ್ದೇವೆ ಎಂದು ಅವರು ತಮ್ಮದಾಖಲೆಗಳಲ್ಲಿ ನಮೂದಿಸುತ್ತಾರೆ ಎಂದು ಪ್ರಸಿದ್ಧಿ. ಅದಕ್ಕೆ ಸಂಕೇತವಾಗಿ ಗಣಪತಿಮೂರ್ತಿಯ ಕೈಯಲ್ಲಿ ಘಂಟಾವೂ, ಮತ್ತು ತಾಳೆ ಪತ್ರ ಗ್ರಂಥವೂ ಇರುತ್ತದೆ. ನಾವೆಲ್ಲವೂ ಹೋಗಿ ಹಾಜರಾತಿ ಹಾಕಿಸಿಕೊಂಡೆವು. ಖುಷಿ ಯಿಂದ ತಮಾಷಾ ಮಾಡುತ್ತಾ ಶಾಲೆ ಯಲ್ಲಿ ಹಾಜರಿ ಹಾಕುವಗ ನಮ್ಮ ಸಾರ್ ಹೇಗೆ ಕರೇಯುತ್ತಾರೋ ಹಾಗೇ ಅನುಕರಣೆ ಮಾಡುತ್ತಾ ಸಂತೋಷದಿಂದ ನಲಿದವು./ಕುಣಿದಾಡಿದವು.
ಅಲ್ಲಿಂದ ಖುಷಿಯಿಂದ ಹೋಗುವು ಸಮಯಕ್ಕೆ ಶ್ರೀಶೈಲವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿದೆ. ಸಾಮಾನ್ಯವಾಗಿ ಶಾಂತಿಯುತ ಮತ್ತು ವಿಶಾಲವಾದ ಪಥಗಳೊಂದಿಗೆ, ಪ್ರಶ್ನವಾಗಿ, ಆಹ್ಲಾದಕರವಾಗಿ ಇರುವ ಶ್ರೀಶೈಲ ಜನರಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಜನರೇ. ರಸ್ತೆಗಳೆಲ್ಲಾ ಕಿರಿದಾಗಿ ಹೋಗಿವೆ. ಛತ್ರಗಳಿಗಾಗಿ ಕಾಯುವ ಜನ, ಛತ್ರ ಗಳು ಸಿಗದಿದ್ದಾಗ ರಸ್ತೆಬದಿಯಲ್ಲೇ ಸಂಸಾರ ಹೂಡುತ್ತಿದ್ದವರು, ಎಲ್ಲೆಲ್ಲಿಂದಲೋ ಬಂದು ಹೊಸದಾಗಿ ಅಟಿಕೆಗಳು, ತಿನಿಸುಗಳು ಮಾರುವವರು, ರಂಕರಾಟ್ಣ, ಬೊಂಬಾಯಿ ಮಿಠಾಯಿಗಳನ್ನು ಮಾರುವವರು, ಜಡೆ ಬಿಚ್ಚಿಕೊಂಡಿರುವ ಸಾಧುಗಳು, ಮಕ್ಕಳುಮರಿ ಮೂಟೆಗಳನ್ನು ತಲೆಮೇಲೆ ಹೊತ್ತುಕೊಂಡು, ಅವಸರದಿಂದ ನಡೆಯುವವರು, ವಿಚಿತ್ರ ಆಕಾರದೊಂದಿಗೆ, ವೇಷಗಳೊಂದಿಗೆ ವೀರಾವೇಶ ಮಾಡುವವರು, ಅಲ್ಲಲ್ಲಿ ಭಜನೆಮಾಡುವ ಕಲಾವಿದರು, ತತ್ವಪದಗಳನ್ನು ಹಾಡುವ ಸಾಧುಗಳು… ನಾವು ರಜಾ ದಿನಗಳಲ್ಲಿ ಕಾಣುವ ಶ್ರೀಶೈಲಕ್ಕೂ, ಇವತ್ತಿಗೂ ಎಷ್ಟೊಂದು ವ್ಯತ್ಯಾಸ!
ಗೆಳೆಯರೆಲ್ಲರನ್ನು ಬೀಳ್ಕೊಟ್ಟು ನಾನು ಬಸ್ ಸ್ಟಾಂಡ್ ಹಿಂಬದಿಯಿಂದ ಷಾರ್ಟ್ ಕಟ್ ನಲ್ಲಿ ನಾವೂ ಯಾವಾಗಲೂ ತಂಗುವ ಸದಾಶಿವ ಛತ್ರಕ್ಕೆ ಸೇರುಕೊಂಡೆ. ಅಲ್ಲಿಗೆ ಆಗಾಗಲೇ ನಮ್ಮ ಮನೆಯವರು, ಮಹದೇವಪ್ಪನವರ ಕುಟುಂಬ ಮತ್ತು ತಿಪ್ಪೇಸ್ವಾಮಿಯವರ ಕುಟುಂಬಗಳು ಈಗಾಗಲೇ ಬೀಡುಬಿಟ್ಟಿವೆ. ಎಲ್ಲರೂ ಊಟಕ್ಕೆ ಹೊರಡುತ್ತಿದ್ದಾರೆ. ನಾನು ಕೂಡಾ ನನ್ನ ಅನುಭವಗಳನ್ನು ನನ್ನ ತಂಗಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನಂತರ ಮಹದೇವಪ್ಪನವರ ಪುತ್ರ ಪ್ರಸಾದ್ ಭೇಟಿಮಾಡಿದ. ಅವನು ಒಂದು ವರ್ಷ ಚಿಕ್ಕವನು. ಇಂತಹ ಸಮಯದಲ್ಲಿ ಇಬ್ಬರೂ ಜೋಡಿಯಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು.
ಅಂದು ಸಂಜೆ ದೇವರ ದರ್ಶನ ಮಾಡಿ ಆ ರಾತ್ರಿ ವಿಶ್ರಮಿಸಿದೆವು.
ಮರುದಿನ ಶಿವರಾತ್ರಿ. ತಲೆ ಸ್ನಾನ ಮಾಡಿ ನಾವು ಕೂಡಾ ಉಪವಾಸವು ಇರುತ್ತೇವೆಂದು ಹೇಳಿ ಕೇವಲ ಬಾಳೆಹಣ್ಣು ತಿಂದು , ಪಾನಕ ಕುಡಿದು, ಆ ದಿನವೆಲ್ಲಾ ಕಳೆದವು. ಮಹಾದೇವಪ್ಪನವರ ಶಿಫಾರಾಸ್ ನಿಂದ ಇನ್ನೊಂದುಸಲ ಮಲ್ಲನ್ನನ ದರ್ಶನ ಮಾಡಿಕೊಂಡೆವು. ಸಾಯಂಕಾಲ, ಛತ್ರ ದವರು ಬಿಸಿಬಿಸಿ ಉಪ್ಪಿಟ್ಟು ಮಾಡಿದರು. ಕಡ್ಲೆ ಮತ್ತು ಉಪ್ಪಿಟ್ಟು ಹೊಟ್ಟೆ ತುಂಬಾ ತಿಂದು ಇಬ್ಬರೂ ಹೊರಗೆ ಹೋದೆವು. ನಮ್ಮನ್ನು ಆ ಎರಡು ದಿನ ಹಚ್ಚಿಕೊಂಡವರೇ ಇಲ್ಲ.
ರಾತ್ರಿ ಶ್ರೀಶೈಲವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿದರಿಂದ, ಆ ಪ್ರದೇಶ ದೇದೀಪ್ಯಮಾನವಾಗಿ ಬೆಳಗುತ್ತಾಯಿದೆ. ಎಲ್ಲಾ ಸತ್ರಗಳು/ಛತ್ರಗಳು/ಧರ್ಮಶಾಲೆಗಳು ಜನರಿಂದ ಕಿಕ್ಕಿರಿಸುತ್ತಿದ್ದವು. ಸುಣ್ಣ ಬಣ್ಣ ಹಾಕಿಸಿ, ತಮ್ಮ ಕೈಲಾದಷ್ಟು ಅಲಂಕರಿಸಿದ ಛತ್ರಗಳು /ಸತ್ರಗಳು ಹಬ್ಬಕ್ಕೆ ತಮ್ಮದೇ ಆದ ಸೊಬಗನ್ನು ನೀಡುತ್ತಿದ್ದವು. ಸ್ಪೀಕರ್ ಗಳಿಂದ ಮಂತ್ರೋಂಚ್ಛಾರಣೆಗಳು ನಿರಂತರವಾಗಿ ನಡೆಯುತ್ತಿವೆ. ದರ್ಶನಕ್ಕಾಗಿ ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿದ್ದರು. ಶ್ರೀಶೈಲ ಮಲ್ಲಣ್ಣ, ಶರಣು ಶರಣು ಎನ್ನುತ್ತಾ, ಓಂ ನಮಶ್ಶಿವಾಯ ಎಂದು ಶಿವನಾಮ ಸ್ಮರಣದಿಂದ ದೇವಸ್ಥಾನದ ಪ್ರಾಂಗಣವೆಲ್ಲಾ ಪ್ರತಿಧ್ವನಿಸುತ್ತದೆ. ಅಭಿಷೇಕ ಮತ್ತು ಅರ್ಚನೆಗಳಿಂದ ಆವರಣದೊಳಗಿನ ಎಲ್ಲಾ ಮಂಟಪಗಳು ಕಿಕ್ಕಿರಿಸಿದ್ದವು. ದೇವಾಲಯದ ಸುತ್ತಲೂ ಕೋಲಾಟ, ಭಜನೆ, ಭಾಗವತ, ವೀರರಸ ಪ್ರಧಾನವಾದ ಪ್ರದರ್ಶನೆಗಳು, ವಾದ್ಯಗಳು, ಗಜ್ಜೆಗಳ ಎಲ್ಲೂ ಸಂಭ್ರಮವಾಗಿ ಇವೆ.
ಶ್ರೀಶೈಲದಲ್ಲಿ ಶಿವರಾತ್ರಿಗೆ ಒಂದು ವಿಶೇಷತೆ ಇದೆ. ಅದೇ ಪಾಗಾ ಸುತ್ತುವುದು. ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಲಿಂಗೋದ್ಭವದ ಸಮಯದಲ್ಲಿ ದೇವಾಲಯದ ಸುತ್ತಲೂ ಕತ್ತಲೆಮಯವಾಗುತ್ತದೆ. ಲೈಟ್ಸ್ ಆಫ್ ಮಾಡಿಬಿಡುತ್ತಾರೆ. ಕಣ್ಣು ಬಿಟ್ಟಾರೂ ಕಾಣದ ಕತ್ತಲು. ಆಗ ಪ್ರಾರಂಭವಾಗುತ್ತದೆ ಆ ಘಟ್ಟ. ಅನೇಕ ತಲೆಮಾರುಗಳಿಂದ ಒಂದು ಕೈಮಗ್ಗದ ಕುಟುಂಬವು ಪ್ರತಿದಿನವೂ , ಒಂದೊಂದು ಮೊಳೆ ಬಿಳಿಬಟ್ಟೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರಿಗಾಗಿ ನೇಯುತ್ತಾರೆ. ವರ್ಷ ಮುಗಿದನಂತರ, ಆ ವಸ್ತ್ರವನ್ನು ತೆಗೆದುಕೊಂಡು ಆ ಕುಟುಂಬದಿಂದ ಯಾರದರೊಬ್ಬರು ಶ್ರೀಶೈಲವನ್ನು ತಲುಪುತ್ತಾರೆ. ಶಿವರಾತ್ರಿಯ ದಿನ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಬಟ್ಟೆಯನ್ನೆಲ್ಲ ಕಳಚಿ, ನಗ್ನವಾಗಿ, ತಾನು ಸ್ವಾಮಿಗಾಗಿ ತಂದಿರುವ ವಸ್ತ್ರವನ್ನು ಕಲಶಕ್ಕೆ ನಾಲ್ಕು ಮೂಲೆಗಳಲ್ಲಿ ಇರುವ ಬಸವನ್ನರಿಗೆ ಸೇರಿಸಿ ಸುತ್ತುತ್ತಾರೆ. ಈ ಘಟ್ಟವನ್ನು ಕೆಲವು ತಲೆಮಾರುಗಳಿಂದ ನಡೆಯುತ್ತಾ ಬಂದಿದೆ. ಇಡೀ ವಸ್ತ್ರಧಾರಣೆ ಮುಗಿದನಂತರ ತಿರುಗಿ ಬಟ್ಟೆ ಹಾಕಿಕೊಂಡು ಕೆಳಗೆ ಇಳಿಯುವ ವರೆಗೂ ಕರೆಂಟ್ ಬೆಳಕುಗಳು ಪಸರಿಸುವುದಲ್ಲ.
‘ಪಾಗಾ ಘಟ್ಟ ಮುಗಿದನಂತರ ಸರ್ವ ದರ್ಶನವಿರುತ್ತದೆ. ಆಗ ಮತ್ತೊಮ್ಮೆ ಸ್ವಾಮಿಯನ್ನು ಸ್ಪರ್ಶ ದರ್ಶನ ಮಾಡಿಕೊಂಡು ತಿರುಗಿ ಸತ್ರಕ್ಕೆ ಬಂದರೆ ರಾತ್ರಿ ನಿದ್ದೆ ಹೋಗದೆ ಇರಲಿಕ್ಕೆ ಜಾಗರಣೆಯ ವ್ಯವಸ್ಥೆ ಮಾಡಲಾಗಿತ್ತು. ಹಾಡುಗಳು, ಶ್ಲೋಕ ಮತ್ತು ಭಜನೆಗಳು. ಆಗಾಗ ನಡುವೆ ನಡುವೆ ಬೇಯಿಸಿದ ಗೆಣಸು ಗೆಡ್ಡೆಯೋ, ಬೇಯಿಸಿದ ಕಡ್ಲೆಯೋ ನೀಡುತ್ತಿದ್ದರು. ಹಾಗೆ ಅವರೊಂದಿಗೆ ಕುಳಿತು, ತೂಗುತ್ತಾ ತೂಗುತ್ತಾ ಎಂದೋ ನಿದ್ದೆ ಹತ್ತಿತು .
ಮರುದಿನ ಬೆಳಿಗ್ಗೆ ಸರಿಯಾಗಿ ಹನ್ನೊಂದುಗಂಟೆಗೆ ಸತ್ರದಲ್ಲಿ ಊಟ ಸಿದ್ಧವಾಯಿತು. ಎಲ್ಲರೂ ಜಬರ್ದಸ್ತಾಗಿ ಊಟ ಮಾಡಿ ಮತ್ತೆ ಮಧ್ಯಾಹ್ನಕ್ಕೆ ಸುನ್ನಿಪೆಂಟ ತಲುಪಿದೆವು. ಆನಂತರ ಎಷ್ಟು ಶಿವರಾತ್ರಿಗಳನ್ನು ಆಚರಿಸಿದರೂ ಅಂದಿನ ಶಿವರಾತ್ರಿಯೇ ಇಂದಿಗೂ ಸಂತೃಪ್ತಿಯಾಗಿ ತೋರುತ್ತದೆ.
ತೆಲುಗು ಮೂಲ –ಜಿ. ಉಮಾಮಹೇಶ್ವರ್
ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು*



