ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

1. ಗೊರೂರು:
ಗೊರೂರು ಹಾಸನ ಜಿಲ್ಲೆಯಲ್ಲಿ ಇರುವ ಒಂದು ಸಣ್ಣ ಗ್ರಾಮ.  ಈ ಗ್ರಾಮ ಅಥವಾ ಹಳ್ಳಿ ಕಳೆದ ಒಂದು ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ.  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗೊರೂರಿನ ಕೀರ್ತಿಯೂ ದೊಡ್ಡದೇ. ಈಚೆಗೆ ಇದರ ಕೀರ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದು ದೇಶ ವಿದೇಶಗಳಲ್ಲಿ ಹರಡಿದೆ. ಅದಕ್ಕೆ ಮುಂಚೆಯೂ ಗೊರೂರು ಇದೇ ಜಾಗದಲ್ಲಿಯೇ ಎಷ್ಟೋ ತಲೆಮಾರುಗಳಿಂದ ಇತ್ತು.  ಕರ್ನಾಟಕದಲ್ಲಿ ಇರುವ ಸಾವಿರಾರು ಹಳ್ಳಿಗಳಂತೆ ಇದೂ ಒಂದು ಹಳ್ಳಿ ಎನ್ನಿಸಿಕೊಂಡಿತ್ತು.  ಈಗ ಕಳೆದ ಒಂದು ಶತಮಾನದಲ್ಲಿ ಈ ಊರಿನ ಹೆಸರು  ಕೇಳದೇ ಇರುವ ಕನ್ನಡಿಗರೇ ಅಪರೂಪ ಎನ್ನುವಂತಾಗಿದೆ.  ಗೊರೂರು ಈರೀತಿ ಪ್ರಸಿದ್ಧವಾಗಲು ಅನೇಕ ಕಾರಣಗಳು ಇವೆ.  ಯಥೇಚ್ಛವಾದ ಪ್ರಕೃತಿ ಸೌಂದರ್ಯ, ಜನರಿಗೆ ದಿನನಿತ್ಯಕ್ಕೆ ಬೇಕಾಗುವ ಸ್ನಾನ, ಕುಡಿಯುವ ನೀರು, ರೈತರಿಗೆ ರಾಗಿ, ಭತ್ತ, ತೆಂಗು, ಅಡಿಕೆ, ಬಾಳೆ ತೋಟಗಳಿಗೆ ನೀರು ಸರಬರಾಜು ಮಾಡುವ ಹೇಮಾವತಿ ನದಿ,  ನೋಡಿದರೇ ಕಣ್ಣಿಗೆ ತಂಪು ಕೊಡುವ ನದಿಯ ದಡದಲ್ಲಿ ಭಕ್ತರ ಅಭೀಷ್ಟೆಗಳನ್ನು ನೆರವೇರಿಸಿಕೊಡುವ ಯೋಗಾನರಸಿಂಹ ಸ್ವಾಮಿ, ಪರವಾಸುದೇವ, ತ್ರಿಕೂಟೇಶ್ವರ, ಆಂಜನೇಯ, ಮಾರಿಯಮ್ಮ ಮುಂತಾದ ಅನೇಕ  ದೇವಸ್ಥಾನಗಳು.  ಹೀಗೆ ಗೊರೂರು ಕರ್ನಾಟಕದ ಅನೇಕ ಹಳ್ಳಿಗಳಂತೆ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಂಡಿತ್ತು.  ಮುಂಚಿನಿಂದಲೂ ಗೊರೂರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ಸ್ವಾಮಿಯ ರಥೋತ್ಸವ ಪ್ರಸಿದ್ಧವಾಗಿತ್ತು. ಸುತ್ತಲ ಅನೇಕ ಹಳ್ಳಿಯವರು ಬಂದು ರಥೋತ್ಸವದಲ್ಲಿ ಭಾಗಗೊಂಡು ದೇವಸ್ಥಾನಗಳಲ್ಲಿ ನಡೆಯುವ ಸಮಾರಾಧನೆಯಲ್ಲಿ ಊಟಮಾಡಿ ಸಂತುಷ್ಟರಾಗಿ ಸಂಜೆ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು.  ಸಾಧಾರಣವಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳವರು ಬಂದು ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಿ ಧನ್ಯತೆಯನ್ನುಪಡೆ ಯುತ್ತಿದ್ದರು.  ಆಗಿನಕಾಲದಲ್ಲಿ ಬಸ್ಸು , ಕಾರು ಮುಂತಾದ ಸಾರಿಗೆ ವ್ಯವಸ್ಥೆಗಳು ಇಲ್ಲವಾಗಿದ್ದರಿಂದ ದೂರದ ಬೆಂಗಳೂರು ಮೈಸೂರು ಮುಂತಾದ ಕಡೆಯಿಂದ ಹೆಚ್ಚು ಜನ ಬರುತ್ತಿರಲಿಲ್ಲ.  ಇಳಿದುಕೊಳ್ಳುವುದಕ್ಕೆ ನೆಂಟರ ಮನೆ ಇದ್ದವರು ಮಾತ್ರ ದೂರದ ಊರುಗಳಿಂದ ಬರುತ್ತಿದ್ದರು.  ಹೀಗಾಗಿ ಗೊರೂರು ಬಾಹ್ಯ ಜಗತ್ತಿನ ಪ್ರಭಾವಕ್ಕೆ ಹೆಚ್ಚಾಗಿ ಸಿಕ್ಕದೇ ತನ್ನತನವನ್ನು ಉಳಿಸಿಕೊಂಡಿತ್ತು.  ಇದು ಭಾರತ ದೇಶ ಸ್ವಾತಂತ್ರ ಪಡೆಯುವುದಕ್ಕೆ ಮುಂಚೆ ಇದ್ದ ಗೊರೂರು.  ಈ ಊರಿಗೆ ತನ್ನದೇ ಆದ ಒಂದು ವ್ಯಕ್ತಿತ್ವ ಇತ್ತು.  ಇಂತಹ ಗೊರೂರಿನಲ್ಲಿ 1904 ನೆಯ ಇಸವಿಯಲ್ಲಿ July 4 ನೆಯ ತಾರೀಕು ಒಂದು ಸಂಪ್ರದಾಯಸ್ಥ ಪುರೋಹಿತ ಬ್ರಾಹ್ಮಣ ವಂಶದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸಿದರು.

2.  ಹೇಮಾವತಿ:
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಬರವಣಿಗೆಯಲ್ಲಿ ‘ಹೇಮಾವತಿ ನಮ್ಮ ಊರಿನ ಉಸಿರು ಎಂದಿದ್ದಾರೆ.’  ಅವರು ಹೇಮಾವತಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.  ಹೆಚ್ಚು ಕಡಿಮೆ ಅವರ ಎಲ್ಲಾ ಕೃತಿಗಳೂ ಹೇಮಾವತಿಯ ದೃಷ್ಟಿಕೋನದಿಂದಲೆ ಸ್ಪೂರ್ತಿ ಪಡೆದಂತೆ ತೋರುತ್ತದೆ.  ಅದಲ್ಲದೇ ಹೇಮಾವತಿಯನ್ನೇ ಮುಖ್ಯ ಪಾತ್ರವನ್ನಾಗಿ ಇಟ್ಟುಕೊಂಡು ಅನೇಕ ಪ್ರಬಂಧಗಳನ್ನೂ ಬರೆದಿದ್ದಾರೆ.  ಹೇಮಾವತಿಯ ಸೊಗಸನ್ನು ಗೊರೂರರ ಬರವಣಿಗೆಯಲ್ಲಿ ಓದಿದವರು ನಾವೂ ಹೋಗಿ ಈ ನದಿಯನ್ನು ಈ ಊರನ್ನು ಒಂದು ಸಲ ನೋಡಬೇಕು ಎಂದು ಆಸೆ ಪಡುತ್ತಾರೆ.  ಈಚೆಗೆ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ರೈತರಿಗೆ ಸಮೃದ್ಧವಾಗಿ ನೀರು ದೊರಕಿ ಅವರು ಉತ್ತಮವಾದ ಪೈರು ಬೆಳೆಯಲು ಸಹಾಯಕವಾಗಿದೆ.  ಜನ ಸಂತುಷ್ಟರಾಗಿದ್ದಾರೆ.  ಈ ಅಣೆಕಟ್ಟಿನ ಒಂದು ಕಾಲುವೆಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕಾಲುವೆ ಎಂದು ಹೆಸರಿಡಲಾಗಿದೆ.

3.  ಗೊರೂರು ರಾಮಸ್ವಾಮಿ ಅಯ್ಯಂಗಾರ್: 
ಇದುವರೆಗೆ ನಾವು ಗೊರೂರು ಮತ್ತು ಹೇಮಾವತಿ ನದಿಯ ವಿಚಾರ ಓದಿದೆವು. ಎರಡೂ ಎಷ್ಟೋ ತಲೆಮಾರುಗಳಿಂದ ಇದ್ದರೂ ಈಚೆಗೆ ಅವುಗಳಿಗೆ ಒಂದು ಹೊಸ ಮೆರಗು ಕೊಟ್ಟಂತಾಗಿದೆ.  ಕಾರಣ ಗೊರೂರರ ಬರಹಗಳು.  ಅವರ ಎಲ್ಲ ಕಥೆಗಳು, ಕಾದಂಬರಿ ಹಾಗೂ ಪ್ರಬಂಧಗಳೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೇಮಾವತಿಯ ಅಸ್ತಿತ್ವದಿಂದ ತುಂಬಿದೆ. ನಾವು ಮಾಡುವ ಎಲ್ಲಾ ಕೆಲಸಗಳ ಹಿನ್ನೆಲೆಯಲ್ಲಿ ತಾಯಿ ಹೇಮಾವತಿ ಹರಿಯುತ್ತಿದ್ದಾಳೆ.  ನಮ್ಮನ್ನು ಆತುಕೊಂಡು ಕಾಪಾಡುತ್ತಾಳೆ ಎಂಬ ಭಾವನೆ ನಂಬಿಕೆಗಳು ಉಂಟಾಗುತ್ತವೆ.  ಗೊರೂರರು ತಮ್ಮ ಸಾಹಿತ್ಯಸೃಷ್ಟಿ ಅಲ್ಲದೇ ಇನ್ನೂ ಅನೇಕ ರೀತಿಯಲ್ಲಿ ದೇಶಸೇವೆ, ರಚನಾತ್ಮಕ ಕಾರ್ಯಗಳನ್ನು ಮಾಡಿದ್ದಾರೆ.  ಅದರಬಗ್ಗೆ ಇನ್ನೊಂದು ಲೇಖನದಲ್ಲಿ ನೋಡೋಣ

ನಾನು ಈ ಲೇಖನವನ್ನು ಬರೆಯಲು ತಯಾರಿ ಮಾಡಿಕೊಳ್ಳುತ್ತಿರುವಾಗ ಗೊರೂರು ಗ್ರಾಮದ ವಿಚಾರ ನೋಡೋಣವೆಂದು ಗೂಗಲ್ನಲ್ಲಿ ಹುಡುಕಿದೆ.  ನಾನು ಗೊರೂರು ಎಂದು ಟೈಪ್ ಮಾಡಿದಕೂಡಲೆ ಗೂಗಲ್ನಲ್ಲಿ ಬಂದ ಟೆಕ್ಟ್ ಈರೀತಿ ಇತ್ತು.

1. ಗೊರೂರು ಹಾಸನ ಜಿಲ್ಲೆಯ ಒಂದು ಪ್ರಸಿದ್ಧ ಗ್ರಾಮ.
2. ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿದ (ಗೊರೂರು ಅಣೆಕಟ್ಟು, ಹೇಮಾವತಿ ಅಣೆಕಟ್ಟು) ಎಂದು ಹೆಸರುವಾಸಿಯಾಗಿದೆ
.
3. ಇದು ಪ್ರಖ್ಯಾತ ಕನ್ನಡ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮಸ್ಥಳವಾಗಿದ್ದು ಹಾಸನ ನಗರದಿಂದ 24 ಕಿಲೋಮೀಟರ್ ದೂರದಲ್ಲಿ ಇದೆ.
ಇದನ್ನು ಓದಿ ನನಗೆ ಬಹಳ ಆಶ್ಚರ್ಯವುಂಟಾಯಿತು
.
ಕನ್ನಡದ AI goggle ತಾನಾಗಿಯೇ ಗೊರೂರು, ಹೇಮಾವತಿ ಮತ್ತು ರಾಮಸ್ವಾಮಿ ಅಯ್ಯಂಗಾರ್  ಸಂಬಂಧವನ್ನು  ಗುರುತಿಸಿದೆ.  ಗೂಗಲ್ ಅಲ್ಲಿಂದ ಮುಂದುವರೆದು ಗೊರೂರಿನ ಹಿನ್ನೆಲೆ, ಪರಿಸರ, ಹೇಮಾವತಿ ನದಿ ಮತ್ತು ಅಣೆಕಟ್ಟು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬಗ್ಗೆ ಮಾಹಿತಿ ನೀಡಿದೆ.  ಕನ್ನಡದ ಪ್ರಮುಖ ಹಾಸ್ಯ ಸಾಹಿತಿ, ಶೈಲಿ ಗ್ರಾಮೀಣ, ಉದಾಹರಣೆ ನಮ್ಮ ಊರಿನ ರಸಿಕರು, ಗರುಡಗಂಭದ ದಾಸಯ್ಯ…ಎಂದೆಲ್ಲ ವಿವರಿಸಿದೆ.  ಇದನ್ನು ನೋಡಿ ನನಗೆ ಆಶ್ಚರ್ಯದೊಂದಿಗೆ ಸಂತೋಷವೂ ಆಯಿತು.

ಹೀಗೆ ಗೊರೂರು, ಹೇಮಾವತಿ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವು ಒಂದಕ್ಕೊಂದು ಪೂರಕವಾಗಿವೆ.  ಇದು ಅಭೇಧ್ಯ ಸಂಬಂಧ ಎನ್ನಿಸಿದೆ.   ಈಗ ಕಳೆದ ನೂರು ವರ್ಷಗಳಲ್ಲಿ ಹೇಮಾವತಿಯ ಪ್ರಸಿದ್ಧಿ ಶಿಖರಕ್ಕೇರಿದೆ.  ಅದಕ್ಕೆಮುಂಚೆಯೂ ಅವಳು ಜೀವದಾಯಿನಿಯಾಗಿದ್ದಳು.  ಹೇಮಾವತಿ ಎಂಬುದು ಒಂದು ಹೊಸ ಕಲ್ಪನೆ ಅಲ್ಲ.  ಅವಳು ಗೊರೂರಿಗೆ ಮಾತ್ರ ಸೇರಿದವಳಲ್ಲ. ಅವಳು ತನ್ನ ಯಾತ್ರೆಯ ದಾರಿಯಲ್ಲಿ ನೂರಾರು ಹಳ್ಳಿಗಳನ್ನು ಮುಟ್ಟುತ್ತಾಳೆ.  ಆದರೆ ಗೊರೂರು ಎಂದ ಕೂಡಲೇ ಹೇಮಾವತಿ.ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಹೇಮಾವತಿ.  ಗೊರೂರು, ಹೇಮಾವತಿ ಒಂದಿಲ್ಲದೇ ಇನ್ನೊಂದಿಲ್ಲ.  ಅವಳ ಈ ಮಹಿಮೆಯನ್ನು ಜನತೆಯ ಮನಸ್ಸಿಗೆ ಮುಟ್ಟುವಂತೆ ತೋರಿಸಿದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು.  ಅದರಿಂದಲೇ ಅವರನ್ನು ಹೇಮಾವತಿಯ ಚೇತನ ಎಂಬ. ಅನ್ವರ್ಥನಾಮದಿಂದ ಗೌರವಿಸಲಾಗಿದೆ.


About The Author

Leave a Reply

You cannot copy content of this page

Scroll to Top