ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಯುತ್ತಿದ್ದೇನೆ
ನನ್ನ ವ್ಯಾಲೆಂಟೈನ್ ಗೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ರೈತ ಹುಬ್ಬಿಗೆ ಕೈ ಹಚ್ಚಿ
ಮುಗಿಲ ಮೋಡದ
ಮಳೆಯ ಹನಿಗಾಗಿ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ಕಳೆದು ಹೋದ ಕರು
ತನ್ನ ತಾಯಿಯರಸುವಂತೆ
ಮುಗ್ಧ ಪ್ರೀತಿಯ ಅಪ್ಪುಗೆಗೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ಕರಾಳ ದಿನಗಳ
ಜೈಲಿನಲ್ಲಿ ಕೊಳೆಯುವ
ಅಮಾಯಕರು ಜಾಮೀನಿಗಾಗಿ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ಕಾಯುತ್ತಿದ್ದೇನೆ
ದಲಿತ ಬಡವರ ದಮನಿತರ
ಶೋಷಣೆಯ ಸಂಕೋಲೆ
ಕಳಚಿ ಬೀಳುವ ದಿನಕೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು

ನನಗೀಗ ಅರ್ಥವಾಗುತ್ತಿದೆ
ಪ್ರೀತಿ ಪ್ರೇಮ ಪದಗಳು
ಭಯ ಭೀತಿಯಲ್ಲಿ ಮುದುಡಿವೆ
ಸಮರಸ ಸಮಾಧಿಯಾಗಿ
ದ್ವೇಷದ ಮಾರುಕಟ್ಟೆಯಲ್ಲಿ
ಹೂವು ಕೊಳ್ಳುವವರಿಲ್ಲ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಜಗದ ಹಗೆಯಳಿಸಿ
ಸ್ನೇಹ ಪ್ರೀತಿಯ ಉಸಿರಾಗಿ
ನೊಂದ ಮನಕೆ ನೆಮ್ಮದಿಯ
ತಿಳಿ ಕಾವೇರಿಯಾಗಿ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
 ಸುಡುವ ಕೆಂಡದ ಮಧ್ಯೆ
ಶಾಂತಿಯ ಮೊಂಬತ್ತಿ ಬೆಳಕಾಗಿ
ಹೊಸ ಬದುಕಿನ ನಿರ್ಮಲ
ನಿಶ್ಚಿತ ಶಾಶ್ವತ ಪ್ರೀತಿಯಾಗಿ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಬುದ್ಧ ಬಸವರ ಬೆಳಕಾಗಿ
ಅನಾಥ ಮಕ್ಕಳ ತಾಯಿಯಾಗಿ
ಅಂಗ ಲಿಂಗದ ಹಂಗು ತೊರೆದು
ಭೋರ್ಗರೆವ ಪ್ರೇಮ ಪ್ರವಾಹವಾಗಿ

ಮತ್ತೆ ಕಾಯಿಸ ಬೇಡ
ದಶಕದ ಶಾಪ ಅಳಿದು
ಒಲವು ಚಿಗುರಿ ಅರಳಲಿ
ಕೋಪ ತಾಪ ಅಳಿದು
ತನು ಮನಕೆ ತಂಪು ನೆರಳಾಗಿ
ನನ್ನ ನಿನ್ನೊಳಗಿನ ನಗೆ ಸಂಭ್ರಮಕೆ

ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಬವಣೆ ಭ್ರಾಂತಿ ಕಳೆದು
ಹೊಸ ಬದುಕಿನ ಕ್ರಾಂತಿಯಾಗಿ
ಸತ್ಯ ಸಮತೆ ಮೆರವಣಿಗೆಗೆ
ನನ್ನ ಒಂಟಿ ಪಯಣದಲ್ಲಿ

ಬಾ ಪ್ರೇಮವೇ ಒಮ್ಮೆ
ನಮ್ಮ ಬರಿದಾದ ಬಾಳಿನಲ್ಲಿ
ತಿಳಿ ಬೆಳಕಾಗಿ ತಂಗಾಳಿ ಸೂಸಿ
ನೆಮ್ಮದಿ ನಿದ್ರೆಗೆ ಜಾರುವ ಮುನ್ನ
ನಿನ್ನ ಕೈ ಕುಲುಕಿ ಅಪ್ಪಿ ಮುದ್ದಾಡುವೇ
ಬಂದು ಬಿಡು ಕಾಯುತ್ತಿದ್ದೇನೆ


About The Author

3 thoughts on ““ಕಾಯುತ್ತಿದ್ದೇನೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ”

  1. ಎಲ್ಲರೊಳಗಣ ಮಾನವೀಯತೆಯನ್ನು
    ಪ್ರೀತಿಸೋಣ. ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲಲು ಸಾಧ್ಯ….ಪ್ರೀತಿಯ ಹರವು ಎಲ್ಲೆಲ್ಲೂ ಪ್ರವಹಿಸಲಿ .ಎನ್ನುವ ಕವನದ ತಿರುಳು ಆಪ್ತವೆನಿಸುತ್ತದೆ.

    ಸುಧಾ ಪಾಟೀಲ
    ಬೆಳಗಾವಿ

  2. ಜಗತ್ತಿನ ಎಲ್ಲದರಲ್ಲಿ ರೈತರು, ಬಡವ, ಬಲ್ಲಿದ , ಅನಾಥ ಮಕ್ಕಳು ಹಾಗೂ ತಾಯಿ,ಗೆಳತಿ ಎಲ್ಲಕ್ಕೂ ಪ್ರೀತಿ,ಪ್ರೇಮ ಮುಖ್ಯ ಎಂಬುದನ್ನು ಕವನದ ಮೂಲಕ ಸಾಬೀತು ಪಡಿಸಿದ್ದೀರಿ. ಅನನ್ಯವಾದುದು ಅಭಿನಂದನೆಗಳು ಸರ್.
    ವಿಜಯಲಕ್ಷ್ಮಿ ಹಂಗರಗಿ.

  3. ಭಾವಪೂರ್ಣ,ಅರ್ಥಪೂರ್ಣ ಸೊಗಸಾಗಿ ಹೆಣೆದ ಸುಂದರ ಕವಿತೆ

Leave a Reply

You cannot copy content of this page

Scroll to Top