ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ನನಗೆ ವಯಸ್ಸಾಗಿರಬಹುದು ಆದರೆ ನನ್ನ ಧ್ವನಿ ಉಡುಗಿಲ್ಲ…. ಎಂದು ಆಕೆ ಹೇಳಿದಾಗ ಆಕೆಯ ದುರ್ಬಲವಾದ ಕೈಗಳು ನಡುಗುತ್ತಿದ್ದರೂ ಧ್ವನಿಯಲ್ಲಿ ಹರಿತವಾದ ಪ್ರಖರತೆ ಇತ್ತು ಕಾರಣ… ಆಕೆಯ ಉದ್ದೇಶ ಅತ್ಯಂತ ಸ್ಥಿರವಾಗಿತ್ತು. ಇಂದೋರ್ ನ ಆ ಹೆಣ್ಣು ಮಗಳ ವಯಸ್ಸು 62 ವರ್ಷವಾಗಿದ್ದು ತನ್ನ ಬದುಕಿನ ಬಹು ಭಾಗವನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಆಕೆ ಕಳೆದಿದ್ದಳು. ಮದುವೆಯಾಗಿ ಹಲವಾರು ದಶಕಗಳ ನಂತರ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದಲ್ಲದೆ ಆಕೆಗೆ ಯಾವುದೇ ರೀತಿಯ ಸಹಾಯವನ್ನು ನೀಡಲು ನಿರಾಕರಿಸಿದನು. ಆಕೆಯ ಮನದ ಮೂಲೆಯಲ್ಲಿನ ಅಗೋಚರ ಭಾವವೊಂದು ಮಿಸುಕಿತ್ತು. ದಾಂಪತ್ಯದ ಹಲವಾರು ದಶಕಗಳನ್ನು ಕಳೆದ ಆಕೆ ಅತಿಯಾದ ತಿರಸ್ಕಾರದ ಭಾವದಿಂದ ನೊಂದು ತನ್ನ ಕಾಲ ಕೆಳಗಿನ ನೆಲವೇ ಕುಸಿದು ಹೋದಂತೆ ಭಾಸವಾಗಿ ಒದ್ದಾಡಿದಳು.  ತನ್ನ ಬದುಕಿನಲ್ಲಿ ಒಂದು ದಿನ ತಾನು ನ್ಯಾಯಾಲಯದ ಕಟ-ಕಟೆಯಲ್ಲಿ ನಿಲ್ಲಬಹುದು, ನ್ಯಾಯಾಧೀಶರ ಮುಂದೆ ಮೈಕ್ರೋಫೋನ್ ಗಳ ಮುಂದೆ ತನ್ನ ಅಹವಾಲನ್ನು ಮಂಡಿಸುತ್ತೇನೆ  ಎಂಬ ಯೋಚನೆಯನ್ನೇ ಆಕೆ ಮಾಡಿರಲಿಲ್ಲ.ತನ್ನ ಹೆಸರು ಮನೆಯ ನಾಲ್ಕು ಗೋಡೆಗಳ, ತಾನಿರುವ ಪರಿಸರದ ಆಚೆಗೆ ದೇಶದ ಮೂಲೆ ಮೂಲೆಯನ್ನು ತಲುಪಬಹುದು ಎಂದು ಆಕೆ ಖಂಡಿತವಾಗಿಯೂ ಭಾವಿಸಿರಲಿಲ್ಲ. ಆದರೆ ಹಸಿವಿಗೆ ಎಲ್ಲರನ್ನೂ, ಎಲ್ಲವನ್ನು ನಡುಗಿಸುವ ಶಕ್ತಿ ಇದೆ. ಬಡತನಕ್ಕೆ ಅದರದ್ದೇ ಆದ ಅಂತಃಶಕ್ತಿ ಇದೆ.ಆಕೆಯ ಬಳಿ ಹಣವಿರಲಿಲ್ಲ, ಭದ್ರತೆ ಇರಲಿಲ್ಲ ಹಾಗೂ ಒಬ್ಬಳೇ ದುಡಿದುಕೊಂಡು ತಿಂದು ಬದುಕಬಲ್ಲೆ ಎಂದು ಹೇಳಲು ಸಾಧ್ಯವಾಗುವ ದೈಹಿಕ ಶಕ್ತಿಯಂತೂ ಮೊದಲೇ ಇರಲಿಲ್ಲ.ಆದ್ದರಿಂದಲೇ ಆಕೆ ತನ್ನ ತಲೆಮಾರಿನ ಜನರು ಯೋಚಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯಿಸಿದಳು… ಆಕೆ ತನ್ನ ಹಕ್ಕಿಗಾಗಿ ಹೋರಾಡಿದಳು. ತನ್ನ ಕುಟುಂಬದ ನಿರ್ವಹಣೆಗಾಗಿ ಅದರಲ್ಲೂ ಮುಖ್ಯವಾಗಿ ತನ್ನ ಔಷಧಿಯ ಖರ್ಚಿಗಾಗಿ ಪ್ರತಿ ತಿಂಗಳು ತನಗೆ ಇಂತಿಷ್ಟು ಹಣವನ್ನು ದೊರಕಿಸಿಕೊಡಿ ಎಂದು ಆಕೆ ನ್ಯಾಯಾಲಯದ ಮೊರೆ ಹೋದಳು. ತನ್ನ ವೃದ್ದಾಪ್ಯದ ವಯಸ್ಸಿನಲ್ಲಿ ದುಡಿಯಲು ಸಾಧ್ಯವಿಲ್ಲದ ಕಾರಣ ಗೌರವಯುತವಾಗಿ ಬದುಕಲು ಅತ್ಯವಶ್ಯಕವಾದ ಆರ್ಥಿಕ ಅನುಕೂಲವನ್ನು ಮಾತ್ರ ಆಕೆ ಬಯಸಿದ್ದಳು.. ಆದರೆ ಆಕೆಯ ಈ ಬಯಕೆ ಇಡೀ ದೇಶದ ಸಮಾಜದ ಹೆಣ್ಣು ಮಕ್ಕಳ ಅಸ್ತಿತ್ವದ ಪ್ರಶ್ನೆಯಾಗಿ ಬದಲಾಯಿತು. ಆಕೆಯ ಕೌಟುಂಬಿಕ ನಿರ್ವಹಣೆಯ ಪ್ರಶ್ನೆ ಇಡೀ ಭಾರತ ದೇಶದ ರಾಷ್ಟ್ರೀಯ ವಿಷಯವಾಗಿ ಬದಲಾಯಿತು. ಆಕೆಯ ಕೇಸ್ ಸುಪ್ರೀಂ ಕೋರ್ಟ್ ನ ಮೆಟ್ಟಿಲನ್ನು ಏರಿತು. ಪ್ರತಿಯೊಂದು ಪತ್ರಿಕೆಯಲ್ಲಿಯೂ ಆಕೆಯ ಹೆಸರು ಹಾಗೂ ಕೇಸಿನ ವಿವರಗಳು ಪ್ರಕಟವಾದವು. ರಾಜಕೀಯ ನೇತಾರರು ಆಕೆಯ ಬದುಕು ತಮಗೆ ಸಂಬಂಧಿಸಿದ ವಿಷಯ ಎಂಬಂತೆ ಆಕೆಯ ಕುರಿತು ಮಾತನಾಡಿದರು. ಮಾಧ್ಯಮಗಳಲ್ಲಿ ಚರ್ಚೆಗಳು, ವಾಗ್ವಾದಗಳು ಕಾಳ್ಗಿಚ್ಚಿನಂತೆ ಹರಡಿದವು. ಇದೆಲ್ಲದರ ಹಿಂದೆ ಇದ್ದ ವ್ಯಕ್ತಿ ಕೇವಲ ತನಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಕೇಳಿಕೊಂಡಿದ್ದಳುಶಾ ಭಾನು ಎಂಬ ಆಕೆ ಅತ್ಯಂತ ಸ್ಥಿತಪ್ರಜ್ಞತೆಯಿಂದ ತನ್ನ ಸುತ್ತ ಹರಡುತ್ತಿದ್ದ ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದಳು… ದಿಗ್ಬ್ರಮೆಗೊಂಡ, ದಣಿದ ಮನಸ್ಥಿತಿಯಲ್ಲೂ ಕೂಡ ಆಕೆ ಹಿಂದೇಟು ಹಾಕಲಿಲ್ಲ. ಆಕೆ ತನ್ನ ಮನೆಯ ಕಿಟಕಿಯಲ್ಲಿ ಕುಳಿತುಕೊಂಡು ಪಕ್ಕದಲ್ಲಿಯೇ ಹರಡಿರುವ ನ್ಯಾಯಾಲಯದ ಕಾಗದ ಪತ್ರಗಳನ್ನು ಆಗಾಗ ನಿರುಕಿಸುತ್ತಿದ್ದ ಆಕೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದುದು ಕೇವಲ ಒಂದೇ ಒಂದು ಮಾತು ಈಗ ನಾನು ಮಾತನಾಡದಿದ್ದರೆ, ನನ್ನಂತಹ ಹೆಣ್ಣು ಮಕ್ಕಳ ಪರವಾಗಿ ಮತ್ತಿನ್ನಾರು ಮಾತನಾಡಲು ಸಾಧ್ಯ ಎಂದು.  ಹಲವಾರು ವರ್ಷಗಳ ಕಾಲ ವಾದ ವಿವಾದಗಳು ನಡೆದು ಅಂತಿಮವಾಗಿ ಆಕೆಯ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬಂತು. ವಿಚ್ಛೇದನದ ನಂತರವೂ ಕೂಡ ಆಕೆಯ ಪೋಷಣೆಯ ಜವಾಬ್ದಾರಿಯನ್ನು ಆಕೆಯ ಪತಿ ತೆಗೆದುಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ನ ನಿರ್ಣಯವನ್ನು ಅತ್ಯಂತ ಸ್ತಬ್ದವಾಗಿ ಇಡೀ ದೇಶದ ಜನರು ಆಲಿಸಿದರು. ಓರ್ವ ವೃದ್ಧ, ಅಸಹಾಯಕ ಮುಸ್ಲಿಂ ಹೆಣ್ಣು ಮಗಳು  ಹೆಣ್ಣು ಮಕ್ಕಳ ಸಂಭಾಷಣೆಯ, ಮಾತುಕತೆಯ ದಿಕ್ಕನ್ನೇ ಬದಲಾಯಿಸಿ ಹೆಣ್ಣು ಮಕ್ಕಳ ಹಕ್ಕುಗಳ ಹೋರಾಟದ ರಕ್ಷಕಿಯಾಗಿ ನಿಂದಳು. ತನ್ನ ವೈಯುಕ್ತಿಕ ಆರ್ಥಿಕ ನಿರ್ವಹಣೆಯ ಕುರಿತಾಗಿ ಆಕೆ ಹಚ್ಚಿದ ಪುಟ್ಟದೊಂದು ಕಿಡಿ ಬೆಂಕಿಯಾಗಿ ಪ್ರಜ್ವಲಿಸಿತ್ತು. ಬಹಳಷ್ಟು ಜನ ಇದನ್ನು ವಿರೋಧಿಸಿದರು. ಧಾರ್ಮಿಕ ಮುಖಂಡರು ಒಂದೆಡೆ ಸೇರಿ ಭಾಷಣಗಳನ್ನು ಮಾಡಿದರು. ಸರ್ಕಾರವು ಕೂಡ ಒತ್ತಡದಲ್ಲಿ ಸಿಲುಕಿತು ಆದರೆ ಇನ್ನೇನು ಗೆಲುವು ಆಕೆಯ ಕೈಗೆ ದೊರಕಿತು ಎಂಬಷ್ಟರಲ್ಲಿ ಅದು ಆಕೆಯ ಕೈಯಿಂದ ನುಣುಚಿಕೊಳ್ಳಲಾರಂಭಿಸಿತು  ತನ್ನ ಮನೆಯ ಪುಟ್ಟ ಕೋಣೆಯಲ್ಲಿ ಶಾ ಬಾನು ಅತ್ಯಂತ ಮೌನವಾಗಿ ಕುಳಿತಿದ್ದ ಸಮಯದಲ್ಲಿ ಇಡೀ ಜಗತ್ತು ಆಕೆಯ ಬದುಕಿನ ಕುರಿತು ಚರ್ಚೆಯಲ್ಲಿ ತೊಡಗಿತು. ಯಾರೊಬ್ಬರೂ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ನೋವು ಏನಿರಬಹುದು ಎಂಬುದನ್ನು ಅರಿಯುವ ಪ್ರಯತ್ನ ಮಾಡಲಿಲ್ಲ. ತಾನು ಒಬ್ಬಂಟಿ ಮೋಸ ಹೋದ ಹಾಗೂ ಭಯ ಪಟ್ಟ ಏಕೈಕ ಹೆಣ್ಣುಮಗಳು ಎಂಬ ಭಾವ ಮಾತ್ರ ಆಕೆಯನ್ನು ಸತಾಯಿಸುತ್ತಿತ್ತು…. ಇದೇ ಸಮಯದಲ್ಲಿ ಚಮತ್ಕಾರದ ರೀತಿಯಲ್ಲಿ ಇಡೀ ಭಾರತ ದೇಶದಾದ್ಯಂತ ಹಿಂದೂ ಮಹಿಳೆಯರ ಗುಂಪುಗಳು ಆಕೆಯನ್ನು ಬೆಂಬಲಿಸಲು ಆರಂಭಿಸಿದವು.  ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಕಾಲೇಜ್ ವಿದ್ಯಾರ್ಥಿನಿಯರು ಹೀಗೆ ಆಕೆ ಎಂದೂ ಭೇಟಿಯಾಗದ ನೂರಾರು ಸಾವಿರಾರು ಸಂಖ್ಯೆಯ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತರು. ಬೇರೊಂದು ಧರ್ಮದ, ಬೇರೊಂದು ಜಗತ್ತಿನ ಹೆಣ್ಣು ಮಕ್ಕಳು ಆಕೆಯ ಚಿತ್ರವನ್ನು ಅಂಟಿಸಿದ ಭಿತ್ತಿ ಪತ್ರಗಳನ್ನು ಹಿಡಿದು ಆಕೆಯ ಪರವಾಗಿ ಘೋಷಣೆ ಕೂಗಿದರು. ಕೋರ್ಟ್ ನಲ್ಲಿ ಪಿಟಿಷನ್ ಕರೆಯಲಾಯಿತು ಹಾಗೂ ಸಾಮೂಹಿಕ ನಡಿಗೆಯ ಮೂಲಕ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಆಕೆಯ ಪರವಾಗಿ ನ್ಯಾಯ ದಾನ ಮಾಡಲು ಕೇಳಿಕೊಳ್ಳಲಾಯಿತು. ಆಕೆಯ ಹೆಸರಿನಲ್ಲಿ ಜಾತಾಗಳನ್ನು ಹಮ್ಮಿಕೊಳ್ಳಲಾಯಿತು. ಆಕೆಯ ಪರವಾಗಿ ನ್ಯಾಯದ ಹೋರಾಟ ನಡೆಯಿತು. ಮೊಟ್ಟ ಮೊದಲ ಬಾರಿ ತಿಂಗಳುಗಟ್ಟಲೆ ಏಕಾಂತ ವಾಸದ ನಂತರ ಕೂಡ ಶಾ ಬಾನು ತಾನು ಒಬ್ಬಂಟಿ ಎಂಬ ಭಾವವನ್ನು ತೊರೆದು ಹಾಕಲು ಜನರ ಈ ಸಂಘಟಿತ ಪ್ರಯತ್ನ ಕಾರಣವಾಯಿತು.  ಅದೊಮ್ಮೆ ತನ್ನನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಆಕೆ ಹೇಳಿದ್ದು ಹೀಗೆ ನಾನು ನನ್ನ ವೈಯುಕ್ತಿಕ ನ್ಯಾಯಕ್ಕಾಗಿ ಹೋರಾಡಲು ಕಾರಣ ನನಗೆ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ… ಯಾವೊಬ್ಬ ವ್ಯಕ್ತಿಯು ಕೂಡ ಹೋರಾಟದಲ್ಲಿ ಹಿಂದೆ ಉಳಿಯಬಾರದು ಎಂಬ ಕಾರಣಕ್ಕಾಗಿ ಅವರೆಲ್ಲರೂ ಮಹಿಳೆಯಾದರೂ ಕೂಡ ನನ್ನನ್ನು ಬೆಂಬಲಿಸಿದರು…. ಉಳಿಯುವಿಕೆಗಾಗಿನ ನನ್ನ ಹೋರಾಟಕ್ಕಿಂತ, ನನ್ನ ಉಳಿಯುವಿಕೆಗಾಗಿ ಅವರು ಮಾಡಿದ ಹೋರಾಟ ದೊಡ್ಡದು ಎಂದು ಆಕೆ ಹೇಳಿದಳು.  ಧರ್ಮ, ಜಾತಿ, ರಾಜಕೀಯಗಳಿಂದ ವಿಭಾಗಿಸಲ್ಪಟ್ಟ ಭಾರತ ದೇಶದಲ್ಲಿ ಆಕೆಗೆ ಪರಿಚಯವೇ ಇಲ್ಲದ ಅಪರಿಚಿತ ಜನರ ಗುಂಪು ಮಾನವೀಯ ಪ್ರಜ್ಞೆಯಿಂದಆಕೆಯ ರಕ್ಷಣೆಗಾಗಿ ಮಂಚೂಣಿಯಲ್ಲಿ ನಿಂತದ್ದು ಆಕೆಗೆ ಹೆಮ್ಮೆಯ ವಿಷಯವಾಗಿ ತೋರಿತು. ಅವರಾರೂ ಆಕೆಯ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದವರಲ್ಲ, ಆಕೆಯ ಭಾಷೆಯನ್ನು ಅರಿಯದವರು ಆಕೆಯ ಸಂಸ್ಕೃತಿಯ ಗಂಧ ದಾಳಿ ತಿಳಿಯದವರು ಹಾಗೂ ಆಕೆಯ ಪ್ರಾರ್ಥನೆಯ ಅರಿವನ್ನು ಹೊಂದಿರದ ಆದರೆ ಆಕೆಯ ಮೂಕವೇದನೆಯನ್ನು ಅತ್ಯಂತ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲ ಶಕ್ತಿ, ಸಾಮರ್ಥ್ಯಗಳು ಅವರಲ್ಲಿತ್ತು. ಕೆಲವೊಮ್ಮೆ ಯಾವುದೇ ಕಾನೂನಿಗೆ ಸಾಧ್ಯವಾಗದ ಅತ್ಯಂತ ಬಲವಾದ ಬಂಧವನ್ನು ಮಾನವೀಯ ಬಂಧನ ಉಂಟುಮಾಡುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ತಾನಂದುಕೊಂಡ ರೀತಿಯಲ್ಲಿ ಶಾ ಬಾನು ಗೆಲ್ಲಲಿಲ್ಲ ನಿಜ ಕಠಿಣ ಕಾನೂನುಗಳು ಬದಲಾಗುವುದಿಲ್ಲ. ಆಕೆಯ ಸಾಮಾಜಿಕ ಗೆಲುವು ಮುಂದಿನ ದಿನಗಳಲ್ಲಿ ಮತ್ತೆ ಹಿಂತೆಗೆದುಕೊಳ್ಳಲಾಯಿತು… ಆದರೆ ಶಾಶ್ವತವಾಗಿ ಉಳಿದದ್ದು ಆಕೆ ಸೋಲದಂತೆ ಆಕೆಯ ವಾದವನ್ನು ಎತ್ತಿ ಹಿಡಿಯಲಾಗಿದ್ದು. ಇಂದೋರ್ ನಂತಹ ಪುಟ್ಟ ಶಹರದಲ್ಲಿ ವಾಸಿಸುತ್ತಿರುವ  ಓರ್ವ ವೃದ್ಧ ಹೆಣ್ಣು ಮಗಳು ತನ್ನ ಅಚಲ ವಿಶ್ವಾಸದಿಂದ ಇಡೀ ದೇಶದ ಕಾನೂನನ್ನು ಪ್ರಶ್ನಿಸಬಲ್ಲಳು ಎಂಬ ಸಂದೇಶ ಇಡೀ ಜಗತ್ತಿಗೆ ಸಾರಲ್ಪಟ್ಟಿತು. ಅದಷ್ಟೇ ಏಕೆ ? ಹುಟ್ಟಿ ಬೆಳೆದ ಆಕೆಯದ್ದೇ ಧರ್ಮದ ಸಮಾಜವು ಆಕೆಯನ್ನು ಮೌನವಾಗಿರಿಸಲು ಪ್ರಯತ್ನಿಸಿ ಆಕೆಯ ಮೇಲೆ ಒತ್ತಡವನ್ನು ಹೇರಿದರೂ ಕೂಡ ಇಡೀ ಜಗತ್ತಿನ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತದ್ದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಕಾರಣವಾಯಿತು.  ಹಲವಾರು ವರ್ಷಗಳ ನಂತರ ಇಂದಿಗೂ ಕೂಡ ಆಕೆಯ ಕುರಿತು ತರಗತಿಯ ಕೋಣೆಗಳಲ್ಲಿ ನ್ಯಾಯಾಲಯದ ಚರ್ಚೆಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾದ ಸಭೆಗಳಲ್ಲಿ ಮಾತನಾಡಲಾಗುತ್ತದೆ.. ಇದಕ್ಕೆ ಕಾರಣ ಆಕೆ ಮಹಿಳೆಯರ ಹಕ್ಕುಗಳ ಕುರಿತಾಗಿ ಮಾತನಾಡಿದ್ದಲ್ಲ ಅದೆಷ್ಟೇ ತೊಂದರೆಯಾದರೂ ಕೂಡ ಒಬ್ಬಂಟಿಯಾಗಿ ನಿಂತು ಆಕೆ ಈ ಸಮಾಜವನ್ನು ಎದುರಿಸಿದ್ದು.  ರಾಜಕೀಯದ ಗಂಧ ಕೂಡ ಸೋಕದ ಇಂದೋರ್ ನ ಪುಟ್ಟ ಮನೆಯಲ್ಲಿ ಕುಳಿತಿದ್ದ ಆ ವೃದ್ಧ ಹೆಣ್ಣು ಮಗಳು ತನ್ನ ಎರಡು ಕೈಗಳನ್ನು ಜೋಡಿಸಿ ಅತ್ಯಂತ ಸೌಮ್ಯವಾಗಿ ಹೇಳಿದ್ದಳು “ನ್ಯಾಯಾಲಯದಲ್ಲಿ ನಾನು ಸಂಪೂರ್ಣವಾಗಿ ಗೆಲುವನ್ನು ಸಾಧಿಸಿಲ್ಲ ನಿಜ ಆದರೆ ನಾನು ಸೋತಿಲ್ಲ ಕೂಡ ” ಎಂದು. ನೋಡಿದಿರಾ ಸ್ನೇಹಿತರೆ, ಪ್ರತಿಯೊಂದು ನದಿಯು ತನ್ನ ಉಗಮದಲ್ಲಿ ಪುಟ್ಟ ಝರಿಯಾಗಿ ಇರುತ್ತದೆ. ಅಂತೆಯೇ ಪ್ರತಿ ಸೂರ್ಯೋದಯವೂ ಕೂಡ ಚಿಕ್ಕದೊಂದು ಕಿರಣದ ಹರಡುವಿಕೆಯಿಂದ ಆರಂಭವಾಗುತ್ತದೆ ಅಂತೆಯೇ ಪ್ರತಿಯೊಂದು ದೊಡ್ಡ ಹೋರಾಟಕ್ಕೆ ಚಿಕ್ಕದೊಂದು ನೋವಿನ, ಅಸಮಾನತೆಯ ಕುರಿತಾದ ಅಸಹಾಯಕ ಅತೃಪ್ತಿಯ ಕಿಡಿ ಕಾರಣವಾಗುತ್ತದೆ. ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಶಾ ಬಾನುವಿನಂತಹ ನೂರಾರು ಸಾವಿರಾರು ಜನರನ್ನು ನಾವು ಕಾಣುತ್ತಿದ್ದೇವೆ. ಒಂದಷ್ಟು ಪರಿಹಾರದ ಹಣವನ್ನು ನೀಡಿ ಕೈ ತೊಳೆಯುವ ಇಲ್ಲವೇ ಕೇಸನ್ನು ಮುಚ್ಚಿ ಹಾಕುವ ಮುನ್ನ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ, ಸಾಮಾಜಿಕ ನ್ಯಾಯಗಳು ದೊರೆಯಲೇಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

“ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌ ಐಗೂರು ಮೋಹನ್ ದಾಸ್ ಜಿ

ವ್ಯಕ್ತಿ ಸಂಗಾತಿ ಐಗೂರು ಮೋಹನ್ ದಾಸ್ ಜಿ “ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌           ಒಂದನೊಂದು ಕಾಲದಲ್ಲಿ ಪಿ.ಯು.ಸಿ.ಶಿಕ್ಷಣಕ್ಕೆ ಮಂಗಳ ಹಾಡಿ, ಜೀವನಕ್ಕೆ ಭದ್ರವಾದ ಬುನಾದಿ ಹಾಕಲು ಹಲವು ‘ಉದ್ಯೋಗ ‘ ಎಂದು ಎಲ್ಲಾಡೆ ಓಡಾಡಿದ್ದರೂ ಹೆಚ್ಚಿನ ಫಲ ಮಾತ್ರ ದೊರೆಯಲಿಲ್ಲ….! ದುಡಿದು ಸಂಪಾದಿಸುತ್ತಿದ್ದ ಕಾಸು ಹೊಟ್ಟೆ – ಬಟ್ಟೆ – ಇನ್ನಿತರ ಖಚು೯ಗಳಿಗೆ ಖಾಲಿಯಾಗಿಬಿಡುತ್ತಿತ್ತು…!ಒಂದು ಮಧುರವಾದ ಕನಸು ಕಾಣುತ್ತಾ ‘ನಿದ್ರೆ’ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ….! ಆದರೆ ಜೀವನದಲ್ಲಿ ಏನಾದ್ದರೂ ಒಂದು ‘ಸಾಧನೆ’ ಮಾಡುವಂತಹ ಗುರಿ ಮಾತ್ರ ಇತ್ತು…!    ಕಾಲಚಕ್ರ ತಿರುಗ ತೊಡಗಿತ್ತು…. ನಂತರ ಒಂದು ವಿದೇಶ ಪ್ರಯಾಣ…. ಮದುವೆ…. ಮಕ್ಕಳು ಎಂದು ಹೇಳುತ್ತಾ, 40ರವಯಸ್ಸಿನ ಗಡಿ ತಲುಪಿದೇ ತಿಳಿಯಲಿಲ್ಲ…! ಬದುಕು ಸಾಗಿಸಲು ಒಂದು ಮಾರುತಿ ವ್ಯಾನ್ ನಲ್ಲಿ, ಬ್ರೆಡ್ – ಬನ್-ಕೇಕ್ – ಮಸಾಲೆ ಕಡಲೆಯಂತಹ ‘ ಬೇಕರಿ ‘ತಿಂಡಿ – ತಿನಿಸುಗಳನ್ನು ತುಂಬಿಸಿಕೊಂಡು, ವಿವಿಧ ಗ್ರಾಮಗಳ ಹೋಟೆಲ್ – ಅಂಗಡಿಗಳಿಗೆ ಈ ತಿಂಡಿ-ತಿನಿಸುಗಳನ್ನು ತಲುಪಿಸಿ, ಒರ್ವ ‘ ವ್ಯಾಪಾರಿ’ ಎಂಬ ಹಣೆಪಟ್ಟಿ ದೊರೆಯಿತ್ತು…! ಜೊತೆಗೆ ವ್ಯಾಪಾರವು ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾರಣ, ಈ ಹಿಂದೆ ಕಂಡ ಕನಸುಗಳು ಮೆಲ್ಲನೆನನಸಾಗ ತೊಡಗಿತ್ತು….!!       ಈ ಕನಸುಗಾರ…. ಸಾಧನೆಗಾರ….. ಕೊಡಗು ಜಿಲ್ಲೆಯಕುಶಾಲನಗರದ ನ್ಯೂ ಹೌಸಿಂಗ್ ಬೋಡ್೯ ನಿವಾಸಿ   ಪರಮೇಶ್..!ಹೀಗೆ ಈ ವ್ಯಾಪಾರವು ಯಾವುದೇ ವಿಘ್ನ ಇಲ್ಲಾದೇ ಸಾಗುತ್ತಿದ್ದಾಗ, ಪ್ರಪಂಚವನ್ನು ನಡುಗಿಸಿದ ‘ಕೊರೋನಾ’ ಮಾರಿಯಿಂದ ಇವರ ವ್ಯಾಪಾರಕ್ಕೆ ತುಸು ಇಳಿಕೆ ಕಂಡು ಬಂತು.. ಯಾವುದೇ ಕಡೆ ಓಡಾಡುವಂತೆ ಇಲ್ಲ….! ನಾಲ್ಕು ಗೋಡೆಗಳ ನಡುವೆ ‘ಹಗ್ಗ ‘ಇಲ್ಲಾದೇ ಎಲ್ಲಾರ ರೀತಿ ಇವರನ್ನು ಸಹ ಕೊರೋನಾ ಮಾರಿ ಕಟ್ಟಿಹಾಕಿತ್ತು…!       ಆ ಸಮಯದಲ್ಲಿ ಈ ಹಿಂದೆ ಇವರು ಕನಸು ಕಂಡಿದ್ದ ‘ ಪದವಿ’ ಯ ಕನಸು ಪುನಃ ಮನಸ್ಸಿನಲ್ಲಿ ಮೊಳಕೆ ಹೊಡೆಯಿತ್ತು…! ಈಗ ಪುನಃ ಓದು ಮುಂದುವರಿಸಿ ಹೆಸರು ನೊಂದಿಗೆ ಕೇವಲ ‘ಪದವಿ’ ಸೇರಿಸಿ ಪ್ರಯೋಜನ ಇಲ್ಲ…. ಈ ಪದವಿಯಿಂದ ಸಮಾಜದಲ್ಲಿ ಹತ್ತು ಮಂದಿಗೆ ಪ್ರಯೋಜನವಾಗ ಬೇಕೆಂದು, ಅವರ ಮನ ನುಡಿಯಿತ್ತು…! ಆಗ ಅವರನ್ನು ಕೈ ಬೀಸಿ ಕರೆದದ್ದು ಲಾ…. ಎಲ್.. ಎಲ್.ಬಿ.ಶಿಕ್ಷಣ…!ಇದು ಇವರಿಗೆ ಸುಲುಭದ ಮಾತುವಾಗಿರಲಿಲ್ಲ !       ಈ ಹಿಂದೆ ಪಿ.ಯು.ಸಿ.ಶಿಕ್ಷಣವನ್ನು ಮುಗಿಸಿ ಸುಮಾರು 24 ವಷ೯ಗಳೇ ಕಳೆದು ಹೋಗಿದ್ದ ಕಾರಣ, ಓದು -ಬರಹ ಸುಲುಭದ ವಿಚಾರವಾಗಿರಲಿಲ್ಲ…! ಆದರೂ ಧೈರ್ಯ ಮಾಡಿ ಮೈಸೂರಿನ ‘ಕನಾ೯ಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ, ಕಾನೂನು ಕಲಿಕೆ ವಿದ್ಯಾಥಿ೯ಯಾಗಿ ದಾಖಲುಯಾಗಿಬಿಟ್ಟರು….!ಐದು ವಷ೯ಗಳ ಓದು…! ಜೊತೆಗೆ ವ್ಯಾಪಾರವು ಎಂದಿನಂತೆ ಸಾಗಬೇಕು,..! ಮನದಲ್ಲಿ ಒಂದು ಧೃಡವಾದ ಗುರಿ ಮತ್ತು ಕನಸು ಇದ್ದ ಕಾರಣ, ನಿತ್ಯ ಕುಶಾಲನಗರದಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತಾ, ಪುನಃ ಅವರ ಬಾಳಿನಲ್ಲಿ ಮತ್ತೊಂದು ‘ಕಾಲೇಜ್ ಲೈಫ್’ಶುರುವಾಯಿತ್ತು…!        ನಿತ್ಯ ಬೆಳಿಗ್ಗೆ ಐದು ಗಂಟೆಗೆ ಕುಶಾಲನಗರದಿಂದ ಬಸ್ ಏರಿ, ಮೈಸೂರುಗೆ ತಲುಪಿ, ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಬನ್ನೂರು ರಸ್ತೆಯಲ್ಲಿರುವ ಕಾಲೇಜ್ ಗೆಹೋಗಿ ಜಾಣ ವಿದ್ಯಾಥಿ೯ಯಾಗಿ ಓದು ಪ್ರಾರಂಭಿಸಿಯೇ ಬಿಟ್ಟರು…! ಕೈಯಲ್ಲಿರುವ ದೊಡ್ಡ-ದೊಡ್ಡ ಗಾತ್ರದ ಪುಸ್ತಕಗಳನ್ನು ನೋಡುವಾಗ ಮನಸ್ಸಿನ ಒಂದು ಮೂಲೆಯಲ್ಲಿ ಭಯವಾಗುತ್ತಿತ್ತು…! ಆದರೂ ಮನಸ್ಸು ಗಟ್ಟಿಯಾಗಿದ್ದ ಕಾರಣ, ಓದು ಸುಗಮವಾಗಿ ಸಾಗುತ್ತಿತ್ತು…!ಕಾಲೇಜ್ ಓದು ಮುಗಿಸಿ, ಮನೆಗೆ ತಲುಪಿ ನಂತರ ಎಂದಿನಂತೆ ‘ವ್ಯಾಪಾರ’ದ ಚಟುವಟಿಕೆಗಳು ಪ್ರಾರಂಭವಾಗುತ್ತಿತ್ತು!ಈ ಕೆಲಸ ಮುಗಿಯುವ ವೇಳೆಗೆ ರಾತ್ರಿಹನ್ನೊಂದು -ಹನ್ನೇರಡು ಗಂಟೆಯಾಗುತ್ತಿತ್ತು….! ನಂತರ ಒಂದು ಸಣ್ಣ. ‘ಕೋಳಿ ನಿದ್ರೆ’..! ಮರುದಿನ ಎಂದಿನಂತೆ ಕಾಲೇಜ್ – ವ್ಯಾಪಾರ ಎಂದು ಬದುಕಿನ ಬಂಡಿ ಸಾಗುತ್ತಿತ್ತು.!!    ಮನಸ್ಸಿನಿಂದ ಸೋಮಾರಿತನವನ್ನು ಓಡಿಸಿ, ಮನಸ್ಸುನಲ್ಲಿಗುರಿ ಮತ್ತು ಕನಸುಗೆ ಭದ್ರವಾದ ಸ್ಥಾನ ನೀಡಿದ್ದ ಫಲವಾಗಿ ,ಐದು ವಷ೯ದ ಕಾನೂನು ಪದವಿ ಪರೀಕ್ಷೆ ಬರೆದು ಮುಗಿಸಿ ಫಲಿತಾಂಶ ಹೊರಬಂದಾಗ, ಈ ವ್ಯಾಪಾರಿ ಉತ್ತಮ ಅಂಕದೊಂದಿಗೆ ವಕೀಲರು ಯಾಗಿ, ಅರಳಿ ಬಿಟ್ಟರು…! ಕನಸು ನನಸಾಯಿತ್ತು….! ಪರಿಶ್ರಮಕ್ಕೆ ದೇವರು ತಕ್ಕ ಪ್ರತಿಫಲವನ್ನು ನೀಡಿತ್ತು..!ಈಗ ವ್ಯಾಪಾರಿ ಪರಮೇಶ್,ವಕೀಲ.. ಲಾಯರ್ ಪರಮೇಶ್….!ಹೆಸರು ಜೊತೆ ಪದವಿ..!      ಈಗ ಪರಮೇಶ್ ನವರ ಕೈಯಲ್ಲಿ ಎರಡು ‘ತಕ್ಕಡಿ’ಗಳು ಇದೆ..!ಒಂದು ವ್ಯಾಪಾರದ ಲಾಭ-ನಷ್ಟಗಳ ಲೆಕ್ಕಚಾರದ ತಕ್ಕಡಿ…! ಮತ್ತೊಂದು ಅನ್ಯಾಯ-ನ್ಯಾಯಗಳನ್ನು ತೂಕ ಮಾಡಿ, ನೊಂದ ಮನಸ್ಸುಗಳಿಗೆ ನ್ಯಾಯ ಒದಗಿಸುವ ನ್ಯಾಯದ ತಕ್ಕಡಿ…!      ಈ ಶುಭ ವೇಳೆಯಲ್ಲಿ ಎರಡು ತಕ್ಕಡಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಪರಮೇಶ್ ನವರಿಗೆ ಹೇಳಿದ್ದರೇ, ಅವರಿಗೆ ಬಲು ಕಷ್ಟವಾಗುತ್ತದೆ…! ಏಕೆಂದರೆ ವ್ಯಾಪಾರದ ತಕ್ಕಡಿ ಅವರನ್ನು ಕಷ್ಟ ಕಾಲದ ದಿನಗಳಲ್ಲಿ ಕೈ ಹಿಡಿದು ಮೇಲೆ ಕ್ಕೆ ಎತ್ತಿ, ಈ ಸಮಾಜದಲ್ಲಿ ಒಂದು ಬೆಲೆ – ಗೌರವದಿಂದ ಬಾಳುವಂತಹ ರೀತಿಯಲ್ಲಿ ಕೆತ್ತನೆ ಮಾಡಿದ್ದು…!ಈಗ ಕೈಯಲ್ಲಿ ಇರುವ ನ್ಯಾಯದ ತಕ್ಕಡಿ ಸುಮ್ಮನೆ ‘ ಟೈಂ ಪಾಸ್’ ಅಥವಾ ಅದೃಷ್ಟ ಬಲದಿಂದ ದೊರೆತದ್ದು ಅಲ್ಲ…..!ಇದಕ್ಕಾಗಿ ಐದು ವಷ೯ಗಳ ಕಾಲ ಸರ್ವ ಮೋಜು- ನಿದ್ರೆ ಹಾಳು ಮಾಡಿಕೊಂಡು, ಓಡಾಡಿ ಓದಿದ ಫಲವಾಗಿ ಮಾತ್ರ ಈ‘ಕರಿಕೋಟು’ ಧರಿಸುವಂತಹ ಸೌಭಾಗ್ಯ ಸಿಕ್ಕಿದ್ದು….!    ಈಗ ಪರಮೇಶ್ ನವರು ಪತ್ನಿ ಸುಮಿ ಮತ್ತು ಮಕ್ಕಳಾದ ಅಭಯ್ -ಜಿನಿಯೊಂದಿಗೆ ಕುಶಾಲನಗರದಲ್ಲಿ ಬದುಕನ ಬಂಡಿ ಸಾಗಿಸುತ್ತಿದ್ದಾರೆ….!ಕರಿಕೋಟು ಧರಿಸಿ ಕೋರ್ಟ್ ಗೆಹೋಗುವ ವೇಳೆ, ಪ್ರೀತಿಯಿಂದ ಪತ್ನಿಯಿಂದ ಒಂದು ನೋಟ ನೋಡಿ ಮುಂದಕ್ಕೆ ಸಾಗುತ್ತಾರೆ..!ಏಕೆಂದರೆ ಇವರ ಈ ಗೆಲುವಿನ ಹಿಂದೆ ಪತ್ನಿಯ ಪರಿಶ್ರಮವು ಬಹಳ ಇದೆ ಎಂದು ಹೇಳಲು ಪರಮೇಶ್ ಮರೆಯುವುದಿಲ್ಲ…!   ಪರಮೇಶ್ ನವರ ಈ ಸಾಧನೆಯ ಕಥೆ ಕೇಳಿದಾಗ, ನಿಮ್ಮ ಯಾವುದಾದರೂ ಬಾಡಿ ಹೋಗಿರುವ ಕನಸುಗಳಿಗೆ ಜೀವ ತುಂಬಲು ಮತ್ತು ಪರಮೇಶ್ ನವರಿಗೆ ಒಂದು ಅಭಿನಂದನೆ ತಿಳಿಸಲು 8296521805 ನಂಬರಿಗೆ ಒಂದು ಕರೆ ಮಾಡಿ..! ಐಗೂರು ಮೋಹನ್ ದಾಸ್ ಜಿ

“ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌ ಐಗೂರು ಮೋಹನ್ ದಾಸ್ ಜಿ Read Post »

ಇತರೆ

“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ ನನ್ನೊಳಗಿನ ನಿಶ್ಶಬ್ದವೇನನಗೆ ಅರ್ಥವಾಗದೆ ಸಾಯುತ್ತಿದೆ;ಇನ್ನು ಎದುರಿಗಿರುವವರ ಮೌನವನುನಾನೇಗೆ ತಾನೇ ಅರಿಯಲಿ? ಹೇಗಾದರೂ ಮಾಡಿ ಈ ಮೌನಕ್ಕೆಒಂದು ಪರಿಹಾರ ಕಂಡುಕೊಳ್ಳಬೇಕು;ಜಗದ ಮಾತುಗಳೆಲ್ಲವೂಬತ್ತಿ ಹೋಗುವ ಮುನ್ನವೇಒಂದು ‘ನಿಶ್ಶಬ್ದರತ್ನಾಕರ’ವ ರೂಪಿಸಿಕೊಳ್ಳಬೇಕು.ನಿಶ್ಶಬ್ದದ ಮರ್ಮಕ್ಕೆ ಸಾವಕಾಶವಾಗಿ ಟೀಕು-ಟಿಪ್ಪಣಿಗಳನ್ನು ಬರೆದಿಡಬೇಕು; ಎದುರಿಗಿರುವವರ ಮೌನವನ್ನಅವರ ಪಾಡಿಗೆ ಬಿಟ್ಟರೆ-ಕನಿಷ್ಠ ಪಕ್ಷ, ಆಗಲಾದರೂನನ್ನ ನಿಶ್ಶಬ್ದ ನನಗೆ ಅರ್ಥವಾಗಬಹುದೇನೋ! ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್

“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಅವ್ವನ ಮಡಿಲು” ​ಅವ್ವ, ನೀನೆಷ್ಟು ನೆನಪಾಗುತ್ತಿ ಗೊತ್ತಾ?ಜಗತ್ತಿನ ಭಾರವೆಲ್ಲ ಹೆಗಲ ಮೇಲಿರುವಾಗ,ಬಾಲ್ಯದ ಆ ನಿಶ್ಚಿಂತೆಯ ದಿನಗಳು ಕಾಡುತ್ತಿವೆನಿನ್ನ ಸೆರಗಿನ ನೆರಳಲ್ಲಿ ಹಾಯಾಗಿ ಮಲಗುವ ಆಸೆ ಹೆಚ್ಚುತ್ತಿದೆ. ​ಮನಸಿಗೆ ಬೇಜಾರಾದಾಗಲೆಲ್ಲ,ಸಂತೈಸಲು ಸಾವಿರ ಜನರಿದ್ದರೂಅವರ ಮಾತುಗಳಲ್ಲಿ ಸಿಗದ ಆ ನೆಮ್ಮದಿ,ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿದಾಗ ಸಿಗುತ್ತಿತ್ತು. ​ಕಣ್ಣೀರು ಸುರಿಸಿದರೆ ಪದೇ ಪದೇ ಕೇಳದೆ,ತಲೆ ಸವರಿ ಸಮಾಧಾನ ಪಡಿಸುತ್ತಿದ್ದ ಆ ನಿನ್ನ ಕೈಗಳು..ಮತ್ತೆ ಬೇಕೆನಿಸುತ್ತಿದೆ ಅವ್ವ,ನಿನ್ನ ಮಡಿಲಲ್ಲಿ ಮಗುವಾಗಿ ಕರಗುವ ಹಂಬಲವಾಗುತ್ತಿದೆ. ​ಯಾರೇ ಏನೇ ಅಂದರೂ, ಎಷ್ಟೇ ಬೆಳೆದರೂ,ನನಗೆ ನೀನೇ ಸಾಟಿಯಿಲ್ಲದ ದೇವತೆ..ನಿನ್ನ ಮಡಿಲ ಆ ಬೆಚ್ಚಗಿನ ಅಪ್ಪುಗೆಯೇ,ನನ್ನ ಬದುಕಿನ ಅತಿ ದೊಡ್ಡ ಆಸ್ತಿ. ಡಾ ವಿಜಯಲಕ್ಷ್ಮಿ ಪುಟ್ಟಿ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ”

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” ಊರ ಮುಂದಿನ ತ್ವಾಟ ಐತಿ ಬಾಳ ಮಾಟಬರ್ತೀ ಏನ ನೀ ಊಟಕ್ಕ//ಪ// ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿಹುಳಿಬಾಣ ಮಾದೇಲಿ ಮಾಡಿಬುತ್ತಿ ಕಟ್ಟಿಕೊಂಡ ಬರ್ತೀನಿತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡಗಾಡಿ ನತ್ತ ಇಟ್ಕೊಂಡ ಬರ್ತೀನಿ// ಎತ್ತಿಗೆ ಸಿಂಗಾರ ಮಾಡ್ಕೊಂಡಕೊರಳಿಗೆ ಹುರಿಗೆಜ್ಜೆ ಕಟ್ಟಿಬಂಡಿಗೆ ಕೊಲಾರಿ ಕಟ್ಟಿಕೊಂಡಸಜ್ಜ ಮಾಡಿಕೊಂಡ ಬಿಡಹೊತ್ತಾರೆ ಎದ್ದ ಹೋಗೋಣಉಂಡ  ತಿಂದ ಸುತ್ತಾಡಿ ಬರೋಣ // ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ  ಕೇಳ್ತಿ ಏನ ನೀ ಕಿವಿಗೊಟ್ಟಎಳೆನೀರ ಬೇಕಾದ ಹಣ್ಣ ಹಂಪಲಗೋದಿ ಕಡ್ಲಿ ಹುಣಸಿ ಮಾವುಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ// ಬಾಜು ಜುಳು ಜುಳು ಹರಿಯೋ ಹಳ್ಳಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾನಮ್ಮೂರಾಗ ಏನ ಕೊಂಡ್ರು ಸಸ್ತಾಎಲ್ಲಾ ಮಸ್ತ್ ಮಸ್ತ್ ಹಂಗಂತಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ// ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬಹಳಬರ ಹೊಲ್ದಾಗ ಪ್ಯಾರಲ ಹಣ್ಣಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿಸಾವಕಾರ ಹೊಲ್ದಾಗ ನೋರೊಂದ ದಿನಸಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” Read Post »

You cannot copy content of this page

Scroll to Top