ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಭಾವ ಲಹರಿ” ಸರಸ್ವತಿ ಕೆ.ನಾಗರಾಜ್‌ ಅವರ ಕವಿತೆ

ಕಾವ್ಯ ಸಂಗಾತಿ ಸರಸ್ವತಿ ಕೆ.ನಾಗರಾಜ್‌ “ಭಾವ ಲಹರಿ” ​ಗೀಚಿದ್ದೆಲ್ಲವೂ ಕವಿತೆಯಲ್ಲ,ಕೆಲವೊಮ್ಮೆ ಅದು ಆತ್ಮದ ಬಿಕ್ಕಳಿಕೆ;ಮಾತಿಗೆ ಮಣಿಯದ ಮೌನದ ಭಾರ,ಅಕ್ಷರಕ್ಕಿಳಿದಾಗ ಸಿಗುವ ಸಮಾಧಾನದ ತಣಿಕೆ. ​ಹೃದಯದ ಗೂಡಲಿ ಬಂಧಿಯಾದ ಭಾವ,ಶಬ್ದಗಳ ನೆಪದಲ್ಲಿ ರೆಕ್ಕೆ ಬಿಚ್ಚುತ್ತವೆ;ಹೇಳಲಾಗದ ಸಾವಿರ ನೋವು,ನಲಿವು,ಸಾಲಿನ ಮಧ್ಯದ ಖಾಲಿ ಜಾಗದಲ್ಲಿ ಅಡಗುತ್ತವೆ. ​ಕವಿತೆಯೆಂದರೆ ಬರಿ ಪದಗಳ ಜೋಡಣೆಯಲ್ಲ,ಅದು ಅಂತರಾತ್ಮದ ಅವ್ಯಕ್ತ ರೋದನೆ;ಹೇಳಲಾಗದ  ಭಾವನೆಗಳು ಲೇಖನಿಯ ತುದಿಗಿಳಿದಾಗ,ಅದಕ್ಕೇ ಹೆಸರಿಡುವುದು ಈ ಜಗತ್ತು ‘ಕವನ’ವೆಂದು. ​ಅರ್ಥವಾಗದ ಮೌನವೆ ಇಲ್ಲಿ ಹೆಚ್ಚು, ಆ ಮೌನಕ್ಕೆ ಭಾಷೆಯ ಹಂಗಿಲ್ಲ;ಮೌನವಾಗಿ ಬರೆಯುವವನ ಎದೆಯ ಭಾರ ಇಳಿದಾಗ ಮಾತ್ರ,ಅಲ್ಲಿ ಕವಿತೆಯಾಗುತ್ತದೆ, ಸರಸ್ವತಿ ಕೆ ನಾಗರಾಜ್.

“ಭಾವ ಲಹರಿ” ಸರಸ್ವತಿ ಕೆ.ನಾಗರಾಜ್‌ ಅವರ ಕವಿತೆ Read Post »

ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ”

ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಹೊಸ ವರ್ಷದ ಹೊಸ್ತಿಲು ದಾಟುವಾಗ” ಒಂದೊಂದು ಹೊಸ ವರ್ಷದಹೊಸ್ತಿಲು ದಾಟುವಾಗ ಮುಂದೇನುಎಂದು ಹೇಳಲಾಗದಿದ್ದರೂ…… ಅದೇ ಗಾಳಿ; ಮತ್ತದರ ಪಾಳಿದಿಕ್ಕು ಬದಲಿಸಿಕಚಗುಳಿ ಇಡುವ ಚಾಳಿ ಅದೇ ನೀರು;ಮಳೆ ಬಂದಾಗ ಹರಿಯುವುದು  ಜೋರುಇಲ್ಲದಿರೆ ಬರದ ಕಾರು-ಬಾರು ಅದೇ ಬೆಳಕು; ಜ್ಞಾನದ ಸೆಳಕು ಮಡಿ-ಮೈಲಿಗೆಯಿಂದಾಗಿದೆಭಯಂಕರ ಕೊಳಕು ಅದೇ ಭಾನು;ಮೋಡಗಳ ಹಾಜರಿಗೈರು ಹಾಜರಿಯ ನಡುವೆ ಕಮಾನು ಕಟ್ಟಿದ ಬಾನು ಅದೇ ಹಗಲು;ಸಕಲ ಜೀವ ಸಂಕುಲದ ಹೆಗಲುಹೆಜ್ಜೆಯ ಗೆಜ್ಜೆಯ ತುಂಬಾ ದಿಗಿಲು ಅದೇ ಇರುಳು;ಒಡಲು ತುಂಬುವ ಕರುಳುಕನಸಿನ ಕಿಟಕಿಯಿಂದ ಕಾಣುವನನಸು ಮಾಡುವ ಮನದಮಾತುಗಳ ತಿರುಳು ಅದೇ ನೆಲ;ಬಿತ್ತಿದಂತೆ ಬೆಳೆಯುವ ಹೊಲದೇಕರಿಕೆಗೆ ತಕ್ಕಂತೆ ಸಿಕ್ಕುವುದು ಫಲ ಅದೇ ಗೋಡೆಗೆ ನೇತು ಹಾಕುವಹೊಸ ವರ್ಷದ ಕ್ಯಾಲೆಂಡರ್ಸಾರಿ ಹೇಳುತ್ತದೆ; ಬದಲಾವಣೆ ಜಗದ ನಿಯಮ ಇಂತಿರಲು……..ಕುಡಿದು, ತಿಂದು, ಕೇಕೆ ಹಾಕಿಚರಂಡಿಗೆ ಬಿದ್ದು, ಹೊರಳಾಡಿ ಎದ್ದುಮನೆಗೆ ತಲುಪಿದಾಗ ಚಂದ್ರನೂರಿನಲ್ಲಿ ನಕ್ಷತ್ರಗಳ ಚಪ್ಪಾಳೆ ಸದ್ದು  ಭೂಮಿಗೆ ಮುಟ್ಟಿತ್ತುಯಥಾ ಪ್ರಕಾರ ಮುಂಜಾವಿಗೆಕೋಳಿ ಕೂಗಿತ್ತು ಹೊಸ ವರ್ಷದ ಹೊಸ್ತಿಲು ದಾಟುವಾಗವಿನಾಕಾರಣ ಎಡವಿ ಬೀಳದಿರಲಿ,ಜಗತ್ತಿಗೆ ಕೇಡುಗಳು ಬಾರದಿರಲಿ,ಎಲ್ಲರಿಗೂ ಶುಭವಾಗಲಿ…  ಮಹಾಂತೇಶ್.ಬಿ.ನಿಟ್ಟೂರು         

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ” Read Post »

ಇತರೆ, ಜೀವನ

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್

ಲೇಖನ ಸಂಗಾತಿ ಶಿವಲೀಲಾ ಶಂಕರ್ “ವಿದಾಯ ಹೇಳಬೇಕಿದೆ ಅಂತರಾಳದಿಂದ….” ಇದು ಹೀಗೆ ಆಗುತ್ತದೆಂಬ ಭ್ರಮೆ ಒಮ್ಮೆ ಹಾದು ಹೋದರು, ನಾವುಗಳು ಮತ್ತೊಂದು ವಿಚಾರದತ್ತ ನಮ್ಮನ್ನು  ಸಕ್ರಿಯವಾಗಿಸಿಕೊಂಡಿರುತ್ತೆವೆ.ಮನುಷ್ಯನ ಜನ್ಮ ಬರಿ ನಿರೀಕ್ಷೆಯಲ್ಲೇ ಕಳೆದು ಹೋಗಿದ್ದು ಗೊತ್ತೆಯಾಗಲ್ಲ.ನೂರೆಂಟು ಕನಸುಗಳು ನನಸಾಗುವ ಹೊಸ್ತಿಲಿನಲ್ಲಿ ಮುಗ್ಗರಿಸಿ ಬಿಕರಿಯಾದ ಕನಸುಗಳು ಒಡೆದ ಗಾಜಿನ ಚೂರಿನಂತೆ.ಹೌದುಈ ವರುಷ ಇದನ್ನು ಸಾಧಿಸಬೇಕೆಂಬ ಆಸೆ ಹೊತ್ತರು,ಆಸೆಗೆ ಮಿತಿಬೇಕಲ್ಲ.ಹೊಂಟದಾರಿ ಒಂದಾದರೆ,ಎದುರಾಗುವ ಸಂಕಷ್ಟಗಳು ನೂರಾರು!ಯಾವುದನ್ನು ಮೊದಲು ಪರಿಹರಿಸಬೇಕು? ಎಂಬ ನಿಖರತೆ ಮನಸ್ಸು ನೀಡದಿರುವುದು ಮತ್ತು ಹೃದಯ ಮೌನವಾಗಿರುವುದು ಒಂದು ನಿದರ್ಶನ. ಕಳೆದು ಹೋದ ಘಟನೆಗಳು ಮತ್ತೆ ಮರುಳಿಸುವ ಸಂಭವ ಸಾಧ್ಯತೆ ಕಡಿಮೆ.ಆದರೆ ಅವು ನೀಡಿದ ನೋವುಗಳು  ಶಾಶ್ವತ. ಪ್ರತಿಯೊಬ್ಬರ ಬದುಕಲ್ಲಿ ಕಹಿ-ಸಿಹಿ ಅಂಶಗಳು ತಮ್ಮದೇ ಆದ ಛಾಪನ್ನು ಮೂಡಿಸಿರುತ್ತವೆ.”ವಿದಾಯ” ಯಾವುದಕ್ಕೆ ಹೇಳಬೇಕು? ವರುಷಕ್ಕಾ? ಅಥವಾ ನಾವು ಬಳಸುವ ಕ್ಯಾಲೆಂಡರ್ ಗಾ? ಮನಸ್ಸನ್ನು ನುಚ್ಚು ನೂರು ಮಾಡಿದ ಕನಸುಗಳಿಗಾ? ನಂಬಿಕೆಯ ಅಡಿಪಾಯ ಕಳಚಿದ್ದಕ್ಕಾ? ಯಾವುದಕ್ಕೆ ಎಂಬ ಪ್ರಶ್ನೆ? ಸತ್ಯ ಅಲ್ಲವಾ? “ವಿದಾಯ”ಎಂಬ ಸರಳ ಪದ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಯಾರು ಉಹಿಸಲು ಸಾಧ್ಯವಿಲ್ಲ!. ಕಳೆದುಕೊಳ್ಳುವುದು ಅತ್ಯಂತ ಸುಲಭದ ಸರಕಾಗಿ ನಿಂತಿದೆ.ವಸ್ತುವಾದರೂ ಸರಿ,ವ್ಯಕ್ತಿಯಾದರು ಸರಿ..ಅವಕಾಶ ಕೊನೆಯಾದಾಗ ಇಲ್ಲವೇ ವಾಸ್ತವ ನಿಲುಗಡೆಯ ಹಾದಿ ಹಿಡಿದಾಗ…ಎಲ್ಲೊ ಒಂದುಕಡೆ ಬಿರುಕಾದ ಸಂಬಂಧ ಬಿರುಸಾಗಿ ಗಾಳಿಗುಂಟ ಹಾರಿ ಹೋದಾಗ ‘ವಿದಾಯ’ ಅನಿವಾರ್ಯ. 2025 ಅಂತಹ ಸುಂದರ ಕನಸುಗಳನ್ನು ಹೆಣೆದಂತೆ ಭಾಸವಾದರೂ,ನೋವನ್ನು ಇಂಚಿಂಚಾಗಿ ಅನುಭವಿಸುವ ಭಾಗ್ಯ ನೀಡಿದ್ದು ವಿಶೇಷ. ನೋವು ತಡೆದುಕೊಳ್ಳಬಹುದು…ಆದರೆ ಬದುಕನ್ನೇ ನುಂಗಿ ಬಿಟ್ಟರೆ ಸಂಭ್ರಮಿಸುವ ಹೊಣೆ ಹೊರಲಾದಿತೆ? ಆದರೂ ಜೀವನ ನಿಂತ ನೀರಲ್ಲ!. ಉಸಿರಿರುವ ತನಕವೂ ಹೋರಾಡಲೇ ಬೇಕು ನಮ್ಮೊಳಗಿನ ಚೈತನ್ಯ ಕೈಚೆಲ್ಲುವ ತನಕ!. ಪ್ರತಿವರ್ಷವೂ ಹೊಸ ಚಿಂತನೆಗಳನ್ನು ಹಮ್ಮಿಕೊಳ್ಳುವ ನಾವು,ಯಾವ ಯೋಚನೆಗೆ ಚಾಲನೆ ನೀಡಿದ್ದಿವಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದನ್ನೇ ಮರೆತು ಬಿಡುತ್ತವೆ. ಮರೆವು ಮನುಷ್ಯನ ಸಹಜ ಗುಣ.ಅದಿಲ್ಲದಿದ್ದರೆ, ಮೆದುಳೆಂಬ ಮೆಮರಿಕಾರ್ಡ ಬ್ಲಾಸ್ಟ್ ಆಗುವುದರಲ್ಲಿ ಸಂಶಯವಿಲ್ಲ. ಪುಟ್ಟ ಮೆದುಳು ಏನೆಲ್ಲಾ ಅಂಶಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳಬೇಕು? ಯಾವ ನರಕ್ಕೆ ಯಾವ ಸಂದೇಶ ರವಾನಿಸಬೇಕು ಎಂಬ ಚಿಂತೆ ಕಾಡದಿರದು!. ಅದಕ್ಕೆ ಒಮ್ಮೊಮ್ಮೆ ಕಣ್ಣಿಗೆ ಕತ್ತಲು ಆವರಿಸಿ ಎಚ್ಚರ ತಪ್ಪುವುದು ಇದೆ. ಇದೊಂದು ನೋವಿನ ಸಂಗತಿಯಾದರೂ,ಜೀವನ್ಮರಣದ ನಡುವೆ ಒದ್ದಾಡುವ ಜೀವಗಳು ಬಯಸುವುದು ಶೂನ್ಯವೆಂಬುದನ್ನು ಮರೆಯುವಂತಿಲ್ಲ. ವರ್ಷದ ಅಂತ್ಯಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಸಹಜವೆನ್ನಿಸಿದರು,ಮಾಡಿಕೊಳ್ಳುವವರು ಯಾರು ಅನ್ನುವ ಪ್ರಶ್ನೆ?.ಪ್ರೀತಿ ಪ್ರೇಮ,ಮೋಸ,ವಂಚನೆ,ಅಕ್ರಮ,ಆತ್ಮಹತ್ಯೆ, ಅತ್ಯಾಚಾರ, ಅಪಘಾತ,ಕೊಲೆಗಳಿಗೆ ಬಲಿಯಾದ ಅದೆಷ್ಟೋ ಮುಗ್ದರ ವೃತ್ತಾಂತವು ಹೃದಯ ಕಲುಕದೆ ಇರದು.ಕಣ್ಣಂಚಲಿ ನೋವಿನ ಕಣ್ಣೀರು ಜಿನುಗದೆ ಇರದು…ಇಂತಹ ಘಟನೆಗಳು  ನಮಗೆ ಹತ್ತಿರವಾದವರಾಗಿದ್ದರಂತೂ ಕರುಳು ಮಿಡಿಯದೆ ಇರದು….ಮೊನ್ನೆ ಮೊನ್ನೆಯಷ್ಟೇ…ಗೆಳತಿಯ ಸಾವು ಇಡೀ ಕುಟುಂಬಕ್ಕೆ ಆಘಾತ ನೀಡಿದ್ದು…ನಂಬಲು ಅಸಾಧ್ಯ!. ಮೆದುಳು ಕೇಳುವಷ್ಟು,ಹೇಳುವಷ್ಟು, ಕೇಳಿದ್ದಕ್ಕೆ ಉತ್ತರಿಸುವಷ್ಡು ಇದ್ದರೆ ಮಾತ್ರ ಸುರಕ್ಷಿತ!. ಆದರೆ ಮಿತಿಮೀರಿ ಚಿಂತಿಸುವ ಕೆಲಸಕ್ಕೆ ಸೇರಿದ ಮೇಲಂತೂ, ನಿದ್ರೆಯೆಂಬ ಅಸ್ತಿತ್ವ ಮರಿಚೀಕೆ!. ನಾವೆಲ್ಲ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿದ್ದೆವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಕೂಲ್ ಆಗಿರಬೇಕು, ಅನ್ನೊರಿಗೆ cool ನ ಅರ್ಥ ಕೇಳಬೇಕು.ವಿದಾಯ ಹೇಳಿ ಹೋದವರಿಗೆಪುನಃ ಬರಲಾಗದೆ ತಮ್ಮೊಳಗೆ ಒದ್ದಾಟ ನಡೆಸಿರುವರು… ನಿಜ ಕಣ್ರಿ,ಮರಳಿ ಬಾರದ ಊರಿಗೆ ಪಯಣ ಬೆಳೆಸಿದ ಅದೆಷ್ಟೋ ಜೀವಗಳು ಎಷ್ಟು ನಲುಗಿರಬಹುದು? ಅವರು ಕಂಡ ಕನಸುಗಳು ಅರೆಬೆಂದಾವಸ್ಥೆಯಲ್ಲಿ ಇನ್ನೂ ಇಲ್ಲೆ ಇರುವುದನ್ನು ಅಲ್ಲಗಳೆಯುವಂತಿಲ್ಲನಾವೆಲ್ಲ ಒಂದಲ್ಲ ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೆವೆ. ಸಂಬಂಧಗಳ ಸಂಕೋಲೆಯಲ್ಲಿ ಬಿಕ್ಕುವ ಗಳಿಗೆ ಹೆಜ್ಜೆ ಹೆಜ್ಜೆಗೂಬಂಧಿಸಿದೆ.ಯಾರೆಲ್ಲ ಈ ಪ್ರಪಂಚದಲ್ಲಿ ಉಸಿರಾಡುತ್ತಿದ್ದಾರೋ ಎಲ್ಲರಿಗೂ ವಿದಾಯದ ಕಿರುಕಾಣಿಕೆ.ಕೇವಲ ಸಾಂಕೇತಿಕವಾಗಿ ಕ್ಯಾಲೆಂಡರ್ ಬದಲಾಗಿದೆ…ಅದು ಕ್ಯಾಲೆಂಡರ್ ಅಷ್ಟೇ ಅಲ್ಲ ಜೀವನದ ಮಹತ್ವದ ದಿನಗಳು.ವಿದಾಯ ಸಾರಿದ್ದು ನಮಗೆ ಗೊತ್ತೆಯಾಗಿಲ್ಲ. ಒಟ್ಟಾರೆ ಹೇಳುವುದಾದರೆ ವಿದಾಯದ ಕಹಿ ಸಿಹಿ ನೆನಪು ತುಂಬಾನೆ ದುಃಖ ಮತ್ತು ಖಿನ್ನತೆ ನೀಡುವ ಮೂಲ ಸಾಧನಗಳು.ಹೀಗಿರುವಾಗ ನಾವುಗಳು ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಸುಲಭವಾದರೂ,ಆಚರಣೆಗೆ ತರುವುದು ಕಷ್ಟವೆಂಬುವುದು ನಮಗೆಲ್ಲ ತಿಳಿದಿದೆ.ಕಳೆದುಕೊಂಡ ವಸ್ತು ಪುನಃ ಸಿಗಬಹುದೇನೋ,ಆದರೆ ನಂಬಿಕೆ,ವಿಶ್ವಾಸ, ಪ್ರೀತಿ ಹಾಗೂ ಪ್ರೀತಿಪಾತ್ರರಾದವರು…ಪುನಃ ಸಿಗಲಾರದು…!ಜೀವನದ ಮಜಲುಗಳನ್ನು ಮೆಲುಕು ಹಾಕುವುದು,ಹೊಸ ಕ್ಯಾಲೆಂಡರ್ ತಂದು ಹಾಕುವುದು ಒಂದೇ ಆದಿತೆ?… ನೆನಪು ಜೀವನ್ಮರಣದ ಬೆಸುಗೆ…ವಿದಾಯ ಕಣ್ಣೀರಿಗೆ ಮಾತ್ರ ಅಲ್ಲ ಹೃದಯಕ್ಕೂ ಸಂಬಂಧಿಸಿದ್ದು…..ಅರ್ಥೈಸಿಕೊಳ್ಳಲು ಸಮಯ ಬೇಕು ಅಷ್ಟೇ!… ಶಿವಲೀಲಾ ಶಂಕರ್

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್ Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ”

ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಾ ಕಂಡ ಐರಲ್ಯಾಂಡ” ಐರಲ್ಯಾಂಡದಲ್ಲಿ ಕಾಲಿಟ್ಟಾಗ ನಾವುಫ್ರಿಡ್ಜನಲ್ಲಿ ಹೋಗುತ್ತಿದ್ದಂತೆ ಭಾಸವುಮೋಡ ಕವಿದ ವಾತಾವರಣವುಜಿಟಿಜಿಟಿ ಮಳೆ ಗಾಳಿಯ ಅನುಭವವು ಹೊರಗಡೆ ಹೊರಟರೆ ನೋ ಡೌಟ್ಎರಡು ಪ್ಯಾಂಟ್ ಎರಡು ಶರ್ಟ್ಶೂಸ್ ಮತ್ತು ಸಾಕ್ಸ್ ಒಂದು ಜಾಕೆಟ್ನಮ್ಮ ಧಿರಿಸಿನಿಂದ ನಾವು ಸ್ಮಾರ್ಟ್ ತೆಗ್ಗುದಿನ್ನಿ ಇಲ್ಲದ ಸರಳ ದಾರಿಗಳುಮನುಷ್ಯರಿಗಿಂತ ಹೆಚ್ಚು ಕಾರುಗಳುದೊಡ್ಡ ಪ್ರಮಾಣದ ಮಾಲ್ ಕಟ್ಟಡಗಳುಒಂದೇ ತರಹದ ಮನೆಯ ವಿನ್ಯಾಸಗಳು ಚೆಂದ ಚೆಂದ ಉದ್ಯಾನವನಗಳುಹಚ್ಚಹಸಿರು ಹುಲ್ಲಿನ ಹಾಸಿಗೆಗಳುಅಲ್ಲಲ್ಲಿ ಕೂಡಲು ಕಲ್ಲಿನ ಆಸನಗಳುಹಸಿಯಿರಲು ನಿಂತು ಸೋತವು ಕಾಲುಗಳು ಶಿಸ್ತು ಸ್ವಚ್ಛತೆಗೆ ಪ್ರಾಮುಖ್ಯತೆ ಇದೆತಾಳ್ಮೆ ಪ್ರೀತಿ ಪರಸ್ಪರ ಸಹಕಾರವಿದೆನೀತಿ ನಿಯಮಗಳ ಪಾಲನೆಯಿದೆಪ್ರಾಣಿ ಪಕ್ಷಿಗಳಿಗೆ ಬಲು ಕಾಳಜಿಯಿದೆ ಪ್ರಕೃತಿಯ ಸೌಂದರ್ಯ ಅತಿ ಸುಂದರಧೂಳಿಲ್ಲದ ಸ್ವಚ್ಛ ಶುದ್ಧ ಪರಿಸರವಿವಿಧ ಬಣ್ಣದಲಿ ಕೆರೆ ನದಿ ಸಾಗರದಾರಿಯುದ್ದ ಚೆಂದದ ಕ್ರಿಸ್ಮಸ್ ಮರ ಜನರ ಮಾತಿನಲ್ಲಿ ಇಲ್ಲ ಧ್ವನಿ ಏರುಮಕ್ಕಳ ಮೇಲೆ ಮಾಡೋಹಾಗಿಲ್ಲ ಜೋರುತಮ್ಮ ಕೆಲಸ ತಾವೇ ಮಾಡುವ ಜಾಣರುನಿಯಮಪಾಲನೆಯಿಂದ ಚೆಂದ ಈ ಊರು ಜಯಶ್ರೀ ಎಸ್ ಪಾಟೀಲ,ಧಾರವಾಡ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ” Read Post »

ಕಾವ್ಯಯಾನ

ಶ್ರೀನಿವಾಸ ಖರೀದಿ ಕವಿತೆ, ” ಕ್ಯಾಲೆಂಡರ್ ದಿನ”

ಕಾವ್ಯ ಸಂಗಾತಿ ಶ್ರೀನಿವಾಸ ಖರೀದಿ ” ಕ್ಯಾಲೆಂಡರ್ ದಿನ” ನಿನ್ನೆಯ ಕ್ಯಾಲೆಂಡರ್‌ನ ದಿನಗಳು,ಮುದುಡಿ ಇತಿಹಾಸದ ಪುಟವ ಸೇರಿವೆ..ಹೊಸ ವರುಷವು, ಹೊಸ ನಿರೀಕ್ಷೆಗಳೊಂದಿಗೆ,ರೆಕ್ಕೆ ಬಿಚ್ಚಿ ಅರಳಿವೆ॥ ಉದಯರವಿಯ ಮೊದಲ ಕಿರಣದಂತೆ,ಬೆಳಗಲಿ ನಮ್ಮೆಲ್ಲರ ಬದುಕು..ಮೂಡಣ ಸೂರ್ಯನಂತೆ, ಪ್ರತಿಯೊಬ್ಬರ ಜೀವನದಲ್ಲಿಶಾಂತಿ-ನೆಮ್ಮದಿ ಮನೆಮಾಡಲಿ॥ ನಿನ್ನೆಗಳ ತಪ್ಪುಗಳು,ಇಂದು ಪಾಠಗಳಾಗಲಿ..ನಾಳೆಯ ಕನಸುಗಳು,ಭರವಸೆಯೊಂದಿಗೆ ಮೂಡಲಿ॥ ಬದುಕು ಸದಾ ಹಾಡಲಿ,ಸಾರ್ಥಕತೆಯ ಗೀತೆ..ಮನ–ಮನೆಗಳಲ್ಲಿ ಬೆಸೆಯಲಿ,ಬದುಕಿನ ಮಧುರ ಸಂಗೀತೆ॥ ಬಂದಿದೆ ಸಂಭ್ರಮದಿಹೊಸ ವರುಷ..ಹೊತ್ತು ತರಲಿ ಸಡಗರದಿ,ನವ ಹರುಷ॥ ಶ್ರೀನಿವಾಸಖರೀದಿ

ಶ್ರೀನಿವಾಸ ಖರೀದಿ ಕವಿತೆ, ” ಕ್ಯಾಲೆಂಡರ್ ದಿನ” Read Post »

ಕಾವ್ಯಯಾನ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ”

ಕಾವ್ಯ ಸಂಗಾತಿ ಮೀನಾಕ್ಷಿ ಪಾಟೀಲ “ಅವಳಿಲ್ಲದ ಊರಲ್ಲಿ” ಅವಳಿಲ್ಲದ ಊರಲ್ಲಿತಂಗಾಳಿ ಬಿಸಿಯಾಗಿಬೆಂದು ಹೋಗಿದೆ ಜೀವ ಅವಳಿಲ್ಲದ ಊರಲ್ಲಿಬೆಳದಿಂಗಳು ಬಿಸಿಲಾಗಿಚಂದ್ರನೇ ಬೆವರಿದ ಅವಳಿಲ್ಲದ ಊರಲ್ಲಿನೆನಪು ಮರುಕಳಿಸಿಊರಲಾರದೆ ಹೆಜ್ಜೆ ಭಾರವಾಗಿದೆ ಅವಳಿಲ್ಲದ ಊರಲ್ಲಿಸುತ್ತಲೂ ಕಡೆಗಣ್ಣುಹುಡುಕಾಡಿದೆ ಮನ ಅವಳ ನೆರಳನ್ನು ಅವಳಿಲ್ಲದ ಊರಲ್ಲಿನಿದ್ದೆ ಕಾಣದು ಜೀವಕನಸಿನಲ್ಲಿ ಅವಳದೇ ಚೆಲುವು ಅವಳಿಲ್ಲದ ಊರಲ್ಲಿಗೂಡು ಕಟ್ಟಿವೆ ಕನಸುಗಳುಹೇಳಲು ಬಾರದೆ ನಡುಗಿವೆ ತುಟಿಯಂಚುಗಳು ಅವಳಿಲ್ಲದ ಊರಲ್ಲಿನೋವಿನ ಬಿರುಗಾಳಿಗೆನಲುಗಿದೆ ಅವಳು ನೆಟ್ಟ ಗುಲಾಬಿ ಅವಳಿಲ್ಲದ ಊರಲ್ಲಿನಿಟ್ಟುಸಿರೊಂದು ಹಾಡಾಗಿಮಗುವಿನ ಕಿರುನಗೆಯೊಂದು ಸುಳಿದಿದೆ ಮೊಗದಿ ಮೀನಾಕ್ಷಿ ಪಾಟೀಲ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ” Read Post »

You cannot copy content of this page

Scroll to Top