ಪುಸ್ತಕ ಸಂಗಾತಿ
ಡಾ.ಮಂಜುನಾಥ್ ಬಮ್ಮನಕಟ್ಟಿಯವರ
ಶಾಯರಿ ಸಂಕಲನ
“ಕತ್ತಲು ಬೆಳಕು”
ಅವಲೋಕನ
ಡಾ.ವೈ ಎಂ ಯಾಕೊಳ್ಳಿ


ಪ್ರೀತಿಪ್ರೇಮದಾಚೆ ಲಂಘನ ಮಾಡುವ ಶಾಯಿರಿ
ಲೋಕ
ಪ್ರೀತಿಪ್ರೇಮದಾಚೆ ಲಂಘನ ಮಾಡುವ ಶಾಯಿರಿ
ಲೋಕ
ಡಾ.ಮಂಜುನಾಥ .ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳು
ಕನ್ನಡಕ್ಕೆ ಶಾಹಿರಿ ಪ್ರಕಾರವನ್ನು ಪರಿಚಯಿಸಿದವರು ಇಟಗಿಈರಣ್ಣನವರು.ಗಜಲ ನ ಹಾಗೆ ಉರ್ದು ಸಾಹಿತ್ಯದಿಂದ ಕನ್ನಡಕ್ಕೆ ಬಂದ ಈ ಕಾವ್ಯ ಪ್ರಕಾರವನ್ನು , ಪ್ರೊ ಭಿಕ್ಷಾವರ್ತಿಮಠ , ಶ್ರೀ ಅಸಾದುಲ್ ಬೇಗ್ ಮೊದಲಾದವರು ಬೆಳೆಸಿದರು .೧೯೭೬ರಲ್ಲಿ ಇಟಗಿ ಈರಣ್ಣನವರ ಕನ್ನಡ ಶಾಹಿರಿ ಸಂಕಲನ ಪ್ರಕಟವಾಯಿತು. ತದನಂತರದಲ್ಲಿ ಅವರ ಸ್ನೇಹಿತರೇ ಆದ ಪ್ರೊ. ಎಚ್.ಎ.ಭಿಕ್ಷಾವರ್ತಿಮಠ ಅವರು ೧೯೮೧ ರಲ್ಲಿ ತಮ್ಮ ಕನ್ನಡ ಶಾಯಿರಿಲೋಕ ಎಂಬ ಸಂಕಲನ ಪ್ರಕಟಿಸುವ ಮೂಲಕ ಈತನ ಕಾವ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದರು.
ಈಗ ಹಲವರು ಶಾಯಿರಿ ಗಳನ್ನು ಬರೆಯುತ್ತಿದ್ದಾರೆ. ಗದಗ,ಮತ್ತುಕೊಪ್ಪಳ ಭಾಗದಲಿ ಇದು ವಿಶೇಷವಾಗಿ ರಚನೆಯಾಗುತ್ತಿದ್ದು ಪರಮೇಶ್ವರಪ್ಪ ಕುದರಿ, ಮರುಳಸಿದ್ದಪ್ಪ ದೊಡಮನಿ.ಯಲ್ಲಪ್ಪ ಹರ್ನಾಳಗಿ, ಕೊಟ್ರೇಶ ಜವಳಿ ,ಕಸ್ತೂರಿ ಡಿ.ಪತ್ತಾರ, ಡಾ ಸಿದ್ರಾಮ ಹೊನ್ಕಲ್ ಮೊದಲಾದವರು ಶಾಹಿರಿಗಳನ್ನು ಬರೆಯುತ್ತಿದ್ದಾರೆ.ಎಲ್ಲರಿಗೂ ಇಟಗಿ ಈರಣ್ಣನವರ , ಪ್ರೊ. ಭಿಕ್ಷಾವರ್ತಿಮಠ ಅವರ ಶಾಹಿರಿಗಳೇ ಪ್ರೇರಣೆ ಎಂಬ ಮಾತನ್ನು ಮರೆಯಲಾಗದು.
ಪತ್ರಕರ್ತರೂ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾಗಿ ಚಿಕ್ಕ ಮಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಯವರು ಪ್ರವೃತ್ತಿ ಯಿಂದ ಕವಿಗಳೂ ಪ್ರಬಂಧಕಾರರೂ, ಸಾಮಾಜಿಕ ಕ್ಷೇತ್ರ ದ ಸಂಶೋಧಕರೂ ಆಗಿ ತುಂಬ ಚಟುವಟಿಕೆಯಿಂದ ಕೂಡಿರುವ ಬರಹಗಾರರು ಈವರೆಗೆ ಹನಿಗವನ, ಕವಿತೆ, ಜೀವನ ಚರಿತ್ರೆ, ಪ್ರಬಂಧ ಸಂಕಲನ, ಮತ್ತು ಸಂಶೋಧನ ಕೃತಿಗಳು ಸೇರಿದಙತೆ ೧೮ ಕೃತಿಗಳನ್ನು
ರಚಿಸಿದ್ದಾರೆ. ಬಹಳ ವಿಶೇಷವಾದದ್ದು ಕರ್ನಾಟಕ ದ ಮಹಿಳಾ ಪೋಲಿಸ್ ಇಲಾಖೆಯ ಮೇಲೆ ಸಂಶೋಧನೆ ಮಾಡಿ ಅವರು ಬರೆದ ಕೃತಿ. ಹಾಗೆಯೆ ಬಹಳ ವಿಶಿಷ್ಟವಾದ ” ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ದಿ” ಎಂಬ ಅಧ್ಯನ ಕೈಕೊಂಡು ಪಿಎಚ್. ಡಿ ಪದವಿ ಪಡೆದ ಪ್ರತಿಭಾವಂತರು ಅವರು.
ಈಗ “ಕತ್ತಲು ಬೆಳಕು” ಎಂಬ ನೂರಾರು ಶಾಯಿರಿಗಳ ಚಂದದ ಸಂಕಲನವನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಇದಕ್ಕೆ ಹಿರಿಯರಾದ ಪ್ರೊಭಿಕ್ಷಾವರ್ತಿಮಠ ಅವರ ಮುನ್ನುಡಿ ,ಇನ್ನೋರ್ವ ಖ್ಯಾತ, ಕವಿ , ಕಾದಂಬರಿಕಾರ , ಪತ್ರಕರ್ತರಾದ ಡಾ . ಸರಜೂ ಕಾಟ್ಕರ್ ಅವರ ನಲ್ನುಡಿ ಇವೆ.
ಶಾಯಿರಿ ಕ್ಷಣವೊಂದರ ಸ್ಮಾರಕ.ಹನಿಗವನ, ಚುಟುಕು, ತನಗ, ಹಾಯಕು ಇವುಗಳ ಹಾಗೆ ಓದಿದೊಡನೆ ಮನಸ್ಸು ಪ್ರಪುಲ್ಲಿತವಾಗಿ ವಾವ್ ಎಂಬ ಬೆರಗು ಹೊರಡಿಸಿವ ಚತುರತೆ ಅದರ ಗುಣ.ಈ ಕಾವ್ಯದ ಲಕ್ಷಣಗಳನ್ನು ನಲ್ನುಡಿಯಲ್ಲಿ ಹಿರಿಯರಾದ ಡಾ ಕಾಟ್ಕರ್ ಅವರು ವಿವರಿಸುತ್ತ ” ಶಾಯಿರಿಯ ಮುಖ್ಯ ಲಕ್ಷಣ ಕೆಲವೇ ಕೆಲವು ಸಾಲುಗಳಲ್ಲಿ ಬ್ರಹ್ಮಾಂಡವನ್ನು ಹೇಳುವದು.ನೋಡಿದ, ಕೇಳಿದ ಅನುಭವಿಸಿದ ಪ್ರಸಂಗಗಳಿಗೆ ಕವಿಯಾದವನು ಕಾವ್ಯದ ಅಮರತ್ವವನ್ನು ನೀಡಬೇಕಾಗುತ್ತದೆ.ಆ ಶಬ್ದಗಳ ಜಾಲವು ಓದುಗನನ್ನು ಕೊನೆಯಲ್ಲಿ ಥಕ್ಕಾಗಿಸುವಂತೆ ಮಾಡಿದರೆ ಆ ಕಾವ್ಯವು ಸಾರ್ಥಕತೆಯನ್ನು ಪಡೆಯುತ್ತದೆ” ಎನ್ನುತ್ತಾರೆ. ಅದು ಸಾಮಾನ್ಯವಾಗಿ ಪ್ರೇಮದ ಮುಗುಳು ಚಿಗುರಿಸುವ ಹೂವಿನ ತೋಟ. ಶಾಯಿರಿ ರಚಿಸುವಾಗ ಪ್ರೇಮ ,ವಿರಹದಾಚೆಗೆ ಬಹಳ ಜನ ಕವಿಗಳು ದಾಟುವುದೆ ಇಲ್ಲ.ಆದರೆ ಡಾ ಬೊಮ್ಮನಕಟ್ಟಿಯವರ. ಓದಿನ ಮತ್ತು ಸೇವೆಯ ಹರಿವು ವಿಸ್ತಾರವಾದ್ದರಿಂದ ಬದುಕಿನ ಬೇರ ಬೇರೆ ಸಂಗತಿಗಳು ಇಲ್ಲಿ ಶಾಯಿರಿಗಳಾಗಿವೆ. ಡಾ ಸರಜೂ ಕಾಟ್ಕರ್ ಸರ್ ಹೇಳಿದಂತೆ ಇಲ್ಲಿನ ಶಾಯಿರಿಗಳಿಗೆ ಅಮರತ್ವದ ಗುಣ ಪ್ರಾಪ್ತವಾಗಿದೆ. ಶಾಯಿರಿಗಳೂ ಕೂಡ ತನಗ ಹೈಕು ಗಜಲ್ ಗಳ ಹಾಗೆ ಶೀರ್ಷಿಕೆಯಿಲ್ಲದ ಹೆಸರೊಲ್ಲದ ಚಿತ್ರಗಳೇ ಆಗಿವೆ
ಇಲ್ಲಿನ ನೂರಾರು (೧೦೬) ಶಾಯಿರಿಗಳಲ್ಲಿ ಬದುಕಿನ ತಾತ್ವಿಕ ಚಿಂತನೆ ಪ್ರೀತಿ ಪ್ರೇಮಗಳ ಅನಂತ ನೋಟ ಎಲ್ಲವೂ ಇವೆ.
ಮೊದಲ ಶಾಯಿರಿಯಲ್ಲಿಯೆ ಅದು ಕಾಣುತ್ತದೆ. ಮನುಷ್ಯ ಇರುವದರೊಳಗೆ ನಾಲ್ಕು ಮಂದಿಗೆ ಬೇಕಾಗುವಂಗ ಬದುಕಬೇಕು ಎನ್ನುವದನ್ನು ಸಂಖ್ಯೆಗಳ ಚಮತ್ಕಾರದಲ್ಲಿ ಹಿಡಿದಿಡುವ ರೀತಿ ವಿಶಿಷ್ಟವಾಗಿದೆ .
ಒಂದು ಎರಡು ಬಂದ ಬರತೈತಿ
ಮೂರು ಆರು
ನಾಕ ಜನಕ್ಕ ಬೇಕ ಬೇಕು.
ಅಷ್ಟರೋಳಗ ಈ ಬದುಕ
ಬೆಳಗಬೇಕು ಬೆಳಗಸಬೇಕು
ಹತ್ತರ ಕೂಟ ಹನ್ನೊಂದು ಯಾಕ ಆಗಬೇಕು
ಮನುಷ್ಯರಾಗಿ ಸುಮ್ಮನೆ ಬಂದವರಲ್ಲ, ಸಾಯುವದರೊಳಗೇ ಏನಾದರೂ ಸಾಧಿಸದೆ ಇದ್ರೆ ಬದುಕಿ ಏನು ಲಾಭ ? ಇದು ಕವಿಯ ಪ್ರಶ್ನೆ! ‘ಮೂರು ಆರು’ ಅಡಿ ಜಾಗ ಅಂತಿಮವಾಗಿ ಎಲ್ಲರಿಗೂ ಬೇಕೇ ಬೇಕು.ಮತ್ತು ಕೊನೆಯಲ್ಲಿ ಹೊತ್ತ ಒಯ್ಯಲು ನಾಲ್ಕು ಜನರ ಅಗತ್ಯನೂ ಇದೆ. ಇದಂತೂ ಪರಮ ಸತ್ಯ.ಅಷ್ಟರೊಳಗೆ ನಮ್ಮ ಬದುಕು ಬೆಳಗಬೇಕು ,ಇತರರ ಬದುಕನ್ನು ಬೆಳಗಿಸಬೇಕು ಎನ್ನುವದನ್ನು ಶಾಯಿರಿ ಸಾರುತ್ತದೆ.
ಜೀವನದ ತಾತ್ವಿಕತೆಯನ್ನು ಚಿಂತಿಸು ವ ಶಾಯಿರಿಗಳು ಗಮನ ಸೆಳೆಯುತ್ತವೆ. ಬದುಕನ್ನುಬೇರೆ ಬೇರೆ ಮಾತುಗಳಲ್ಲಿ ವತ್ಣಿಸುವದಕ್ಕಿಂತ , ಬದುಕಿನ ನಿಜವಾದ ಅರ್ಥ ಎಂದರೆ ಅದನ್ನು ಸರಿಯಾಗಿ ಬದುಕಿ ತೋರಿಸುವುದೆ ಆಗಿದೆ. ಅದನ್ನೇ ಬೊಮ್ಮನಕಟ್ಟಿಯವರ ಶಾಯಿರಿ
ಬದುಕಂದ್ರ
ಹಂಗಲ್ಲ, ಹಿಂಗಲ್ಲ
ಬದುಕೊದಂದರ ಸಾಮಾನ್ಯ ಅಲ್ಲ
ಬದುಕು ಬಳ ದೊಡ್ಡದು
ಅದಕ$ ನೀ ಬದುಕು
ಈ ಬದುಕು
ಬದುಕು ಎನ್ನುವ ಪದ ಮತ್ತೆ ಮತ್ತೆ ಬಂದು ಕೊಡುವ ಅರ್ಥ ವಿಶೇಷವಾದದ್ದು.ಈ ಬದುಕಿನಲ್ಲಿ ಕಪ್ಪೂ ಇದೆ . ಬಿಳಿಯೂ ಇದೆ.ಅಂದರೆ ಪಾಸಿಟಿವ್ ,ನೆಗೆಟಿವ್ ಎರಡೂ ಇವೆ. ಛಾಯಾಚಿತ್ರದ ರೂಪಕವನ್ನು ಬಳಸುವ ಕವಿ “ಪೊಸಿಟಿವ್, ನೆಗೆಟಿವ್ ಎರಡೂ ಸೇರಿದ್ರನ ಪೋಟೊ ಆಗತೈತಿ” ಎನ್ಜುವದು ಸರಿಯಾಗಿಯೆ ಇದೆ.ಅದನ್ನೆ ಒಂದು ಶಾಯಿರಿಯ ಭಾಗ ವಿವರಿಸುತ್ತಾ
ಬೆಳಕು ಕತ್ತಲು ಹಗಲ ರಾತ್ರಿ ಇದ್ದಂಗ
ಜೀವನದಾಗ ಸುಖ ದುಃಖ ಬಂದಾಂಗ
ಇವು ಬ್ಯಾರೆ ಬ್ಯಾರೆ ಅಲ್ಲ
ಒಂದಕ್ಕೊಂದು ಬಿಟ್ಟ ಇರೊದು ಹೆಂಗ
ಎನ್ನುತ್ತಾರೆ. ಕತ್ತಲು ಬೆಳಕು ಎರಡೂ ಸೇರಿಯೇ ಬದುಕಾಗುತ್ತದೆ ಎನ್ನುವದನ್ನು ಅವರ ಶಾಯಿರಿ ಸಾರುತ್ತವೆ.ಈ ಮನಸ್ಸು ಬೇಲಿ ಹಾಕದಿದ್ದರೆ ಅದುವೆತ್ತ ಬೇಕು ಅತ್ತ ಓಡುತ್ತದೆ.ಅದಕ್ಕೆ ಬೇಲಿಹಾಕಬೇಕು ಎನ್ನುವ ಕವಿ ಕಾವಲು ಇರದೆ ಮನಸ್ಸು ಓಡಾಡಿದರೆ ಕಷ್ಟ ಎನ್ನುತ್ತಾರೆ.
ಮನುಷ್ಯನ ಎದೆಎನ್ನುವದು ಬೆಳಗುವ ದೀಪವೂ ಹೌದು.ನಿಗಿ ನಿಗಿ ಉರಿವ ಕುಲಮೆಯೂ ಹೌದು. ಅದರಿಂದ ದೀಪವನ್ನು ಹಚ್ಚಬಹುದು.ಎದೆಯನ್ನು ಸುಡಬಹುದು . ಎರಡೂ ನಮ್ಮ ಕೈಯಲ್ಲಿವೆ.ವಿವೇಚನೆ ಅಗತ್ಯ ಎಂದು ಒಂದು ಶಾಯಿರಿ ಸಾರುತ್ತದೆ.
ಈ ಜಗತ್ತಿನಲ್ಲಿ ಎಲ್ಲವೂ ನನ್ನದೆ ಎಂದು ಸಾರಿದವರಾರೂ ಉಳಿದೆ ಇಲ್ಲ. ಭೂಮಿಯನ್ನು ಗೆದ್ದು ಭೂಮಿಪ ಎನಿಸಿಕೊಂಡ ಅರಸರೆಲ್ಲ ಸತ್ತಿದ್ದಾರೆ.ಭೂಮಿ ಮಾತ್ರ ಶಾಸ್ವತ ಎನ್ನುತ್ತಾನೆ ಕವಿ ಕುಮಾರವ್ಯಾಸ.ಕವಿಪಂಪನಲ್ಲಿ ಜಗತ್ತು ಗೆದ್ದೆನೆಂದು ಮೆರೆವ ಭರತ ಚಕ್ರಿಯ ಅಹಂಕಾರ ರಸ ಕೊಳೆಗೊಂಡು ಸೋರುತ್ತದೆ ಎಂಬ ಮಾತು ಬರುತ್ತದೆ.ಯಾವಬಕಾಲದ ಕಾವ್ಯ ವಾಗಲಿ ಸಾರುವದು ಇದನ್ನೇ .ಶಾಯಿರಿಯಂಥ ಸದ್ಯಕಾಲದಲ್ಲಿ ಬದುಕುವ ವರ್ತಮಾನದ ಕವಿತೆ ಕೂಡ ಸಾರ್ವತ್ರಿಕ ವಾದುದನ್ನು ಸಾರುತ್ತದೆ ಎನ್ನುವದಕ್ಕೆ ಸಾಕ್ಷಿ ಈ ಮೂರೇ ಸಾಲಿನ ಶಾಯಿರಿ.ಕವಿ
ನಂದು ನಂದೂ
ನಾನು ನಾನೂ
ಅಂದವರು ಯಾರೂ ಉಳದೇ ಇಲ್ಲ
ಎನ್ನುತ್ತಾನೆ.ಇಷ್ಟೇ ಕವಿತೆ .ಹೆಚ್ಚಿಗೆ ಹೇಳುವದಿಲ್ಲ. ಅದರಲ್ಲಿಯೆ ನೂರು ಸಾಲಿನ ಅರ್ಥ ಅಡಗಿದೆ. ಇಂಥ ಪದ್ಯಗಳೇ ಈ ಕವಿಯ ಸಂಕಲನವನ್ನು ಬಹುಕಾಲ ನಿಲ್ಲಿಸುತ್ತವೆ.
ಜಾತಿ ಇಲ್ಲವಾಗಿದೆ ಎಂಬ ಮಾತನ್ನು ಕೆಲವರು ವೇದಿಕೆಯ ಮೇಲಿಂದ ಮುತ್ತಿನಂತೆ ಉದುರಿಸುತ್ತಾರೆ.ಆದರೆ ನಿಜವಾಗಿಯೂ ಜಾತಿ ವ್ಯವಸ್ತೆ ಹೋಗಿದೆಯೇ? ಎಂದು ಪ್ರಶ್ನಿಸುವ ಕವಿ ನಿಜಕ್ಕೂ ಜಾತಿ ವ್ಯವಸ್ಥೆ ಇಲ್ಲವಾಗಿದೆ ಎಂಬುದನ್ನು ಒಪ್ಪುವದಿಲ್ಲ. ಏಕೆಂದರೆ ಇಂದು ಬದುಕಿನ ರೀತಿ ಅದಕ್ಕೆ ಪೂರಕವಾಗಿಲ್ಲ.ನಾವು ಜಾತಿ ಎಂಬ ಪಿಡುಗನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡೇ ಬಂದಿದ್ದೇವೆ ಈ ಸತ್ಯವನ್ನು ಅವರ ಶಾಯಿರಿ ಸಾರುತ್ತದೆ.
ಜಾತಿ ಇಲ್ಲದಂಗಾತು ಅಂತ ಕೇಳಿ
ಎದಿಯಾಗಿನ ಬೆಂಕಿ ದೀಪ ಆತು
ದೀಪ ಬೆಳ ಚಲ್ಲುದರೊಳಗ
ಹುಟ್ಟಿದ ಈ ಜಾತಿ ಸಾಯೊವಲ್ಕದು
ಅಂತ ಮೈಯೆಲ್ಲ ಧಗಧಗ ಹೊತ್ತಿ ಉರಿತು
ಕಡೆಯ ಸಾಲೇ ಸತ್ಯವಾಗಿ ಪ್ರಾಮಾಣಿಕ ಪ್ರಜ್ಞಾವಂತರ ಎದೆ ಹೊತ್ತಿ ಉರಿಯುವ ಸ್ಥಿತಿ ಬಂದಿರುವದನ್ನು ಕವಿತೆ ಸಾರುತ್ತದೆ.
ಇಡೀ ಸಂಕಲನವೇ ಬೆಳಕು ಕತ್ತಲೆಯ ನಡುವಿನ ಜಿಜ್ಞಾಸೆ ನಡೆಸುತ್ತದೆ.ಇಲ್ಲಿ ಬೆಳಕು ಮತ್ತು ಕತ್ತಲೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ..ಆದರೆ ಕವಿ ಯಾವುದೆ ಒಂದರ ಪರ ನಿಲ್ಲುವದಿಲ್ಲ ಕತ್ತಲೆ ಮತ್ತು ಬೆಳಕಿನ ಹಿತವಾದ ಹೊಂದಿಕೊಳ್ಳುವದರಲ್ಲಿಯೆ ನಿಜವಾದ ಬದುಕಿದೆ ಎಂಬುದು ಕವಿಗೆ ಗೊತ್ತಿದೆ.
ಕತ್ತಲೆ ಬೆಳಕು ಇಲ್ಲಾಂದ್ರೆ
ಬದುಕು ಇರಾಂಗಿಲ್ಲ
ಎಂದು ಒಂದು ಶಾಯಿರಿ ಹೇಳಿದರೆ ಇನ್ನೊಂದು ಶಾಯಿರಿ
ಬೆಳಕಿಗೆ ಅದರ ಕೂಡ
ಹಿಟ್ಟಿದ ಕತ್ತಲು
ಶಡ್ಡು ಹೊಡದೈತಿ
ನನ್ನ ಜನಕ ನೀನ ..ನೀನ ಅಂತ
ಎನ್ನುತ್ತದೆ .ಆದರೆ ಇಲ್ಲಿ ಬೆಳಕು ಮತ್ತು ಕತ್ತಲೆ ಒಂದರ ಕೂಡ ಒಂದು ಹುಟ್ಟಿದರೂ ಅವುಗಳ ನಡುವೆ ಸ್ಪರ್ದೆ ಇರುವದನ್ನು ಹೇಳುವ ಕವಿ ಅವು ತಂದೆ ಮಗನ ಸಂಬಂಧ ಹೊಂದಿದವು ಎನ್ನುವಂತೆ ಚಿತ್ರಿಸುತ್ತಾನೆ.ಅಂದರೆ ಬೆಳಕಿನಲ್ಲಿ ಕತ್ತಲೆ ಹುಟ್ಟಿದೆ ಎನ್ನುವಲ್ಲಿ ಹೊಂದಾಣಿಕೆ ಇರಬೇಕಾಗಿತ್ತು .ಆದರೆ ಶಡ್ಡು ಹೊಡೆದಿದೆ ಎನ್ನುವ ನುಡಿಗಟ್ಟು ಯಾಕೊ ಅಷ್ಟು ಸರಿಯಲ್ಲವೇನೋ ಎಂದು ಅನಿಸುತ್ತದೆ. ಇದು ಜಿಜ್ಞಾಸೆಯ ವಿಷಯ.
ಕವಿ ಲೌಕಿಕದಲ್ಲಿ ಚಿಂತಿಸುತ್ತಲೇ ಅಲೌಕಿಕದತ್ತ ,ಅನುಭವ ದಿಂದ ಅನುಭಾವದತ್ತ ಸಾಗುವ ಪರಿ ಅನನ್ಯವಾದುದು.
ಉದಾಹರಣೆಗೆ
ಆಕಿ ಎರಡಕ್ಕ ಕರಿತಾಳ
ಬಲದಿಂದ ಆವರಿಸಿಕೊಳ್ಳಾಕ
ಆಕಿ ಕರದಾಗೆಲ್ಲ
ಈ ಬಲಾ ಎಡಕಾಡತಾವು
ಇವುಗಳದ್ದೂ ಬಿಡದ ಹಟ
ಸಾಮಾನ್ಯರಿಗೆ ತಿಳಿಯದ ಗಂಟು
ಇಲ್ಲಿ ಬಳಸಿದ ನುಡಿಗಟ್ಟುಗಳು ಸಾಮಾನ್ಯ ಬದುಕಿನವೇ ಆದರೆ ಕಡೆಯಲ್ಲಿ ಧ್ವನಿಸುವ ಅರ್ಥ ಮಾತ್ರ ಕೈ ಗೆಟುಕದ್ದು. ಹೀಗೆ ಲೌಕಿಕದ ಈ ಕಾವ್ಯ ಅಲೌಕಿಕದ ಚಿಂತನೆ ಮಾಡುವದು ವಿಶೇಷವಾಗಿದೆ.
ಕವಿ ಸಂಕಲನಕ್ಕೆ “ಕತ್ತಲು ಬೆಳಕು” ಎಂಬ ಹೆಸರಿರಿಸಿದ್ದಾರೆ. ಜೀವನವೇ ಕತ್ತಲು ಬೆಳಕಿನ ಸಂಗಮ ಒಂದಾದ ಮೇಲೊಂದು ,ಒಂದರೊಳಗೊಂದು ಸೇರಿಕೊಂಡು ಬದುಕಿಗೆ ಅರ್ಥ ಕಲ್ಪಿಸುವ ಕಾರ್ಯಮಾಡುತ್ತವೆ. ಅವರಿಗೆ ಅವಳ ಪ್ರೀತಿ ಅಂದರೇನೆ ಬೆಳಕು,ಅವರಡೂ ನೇರೆ ಬೇರೆ ಅಲ್ಲವೇ ಅಲ್ಲ ಅದನ್ನೇ ಶಾಯಿರಿ ೯೬ ರಲ್ಲಿ
ಕತ್ತಲ ಬೆಳಕಿನ ಒಡಕ ಬ್ಯಾಡ
ಈ ಒಂದ ಬದುಕಿಗೆ ಎರಡೂ ಬೇಕ
ಎಂದರೆ
೯೫ ರಲ್ಲಿ
ಬೆಳಕಿನೊಳಗ ಕತ್ತಲು
ಕತ್ತಲಿನೊಳಗ ಬೆಳಕು
ತಮ್ಮ ತಮ್ಮ ಹೊಳಪು ತೋರಸ್ತಾವ
ಎನ್ನುವ ಸಾಲಿವೆ . ಶಾಹಿರಿ ೮೮ ರಲ್ಲಿ
ಬೆಳಕು ಬರಿಬೆಳಕಲ್ಲ
ಕತ್ತಲು ಹೊತ್ತು ತರೋ ವ್ಯಾಪಾರಿ
ಕತ್ತಲು ಬರಿಕತ್ತಲಲ್ಲ
ಬೆಳಕಿಗೆ ಬೆಲೆ ತರೋ ಸರಕು
ಎನ್ನುತ್ತಾರೆ. ಇಂಥ ಸಾಲುಗಳು ಇಲ್ಲಿ ಮತ್ತೆ ಮತ್ತೆ ಎದುರಾಗುತ್ತವೆ.ಕವಿಗೆ ಅವರ ಪ್ರೀತಿ ಕೂಡ ಕತ್ತಲ ಬೆಳಕಿನ ಆಟವೇ..ಬೆಳಕು ಕತ್ತಲಿನೊಡನೆ ತಮ್ಮ ಪ್ರೇಮ ಸಮೀಕರಣ ಮಾಡುವ ಕವಿ
ಬೆಳಕ ನೋಡಿ
ಕತ್ತಲು ಯಾವತ್ತೂ ಸಿಟ್ಟಾಗಿಲ್ಲ
ಕತ್ತಲ ನೋಡಿ
ಬೆಳಕು ಯಾವತ್ತೂ ಸಿಟ್ಟ ಮಾಡಿಕೊಂಡಿಲ್ಲ
ನಾನು-ನೀನು ಹೀಂಗ ಇದ್ದರ
ನಮ್ಮ ಪ್ರೀತಿ ಹಾಲು ಬೆಲ್ಲ
ಎಂದು ಎರಡಕ್ಕೂ ಹೊಂದಾಣಿಕೆ ಇರುವದನ್ನು ಸಾರುತ್ತಾರೆ.ಈ ಸಾಲು ಬರೆದ ಕವಿಯೆ ಇನ್ನೊಂದು ಕಡೆ ಕತ್ತಲೆ ಬೆಳಕಿನ ನಡುವೆ ಸವತಿ ಮಾತ್ಸರ್ಯ ಇದೆ ಎನ್ನುವದು ಅಷ್ಟೇನೂ ಹಿತಕರವಾಗಿ ಕಾಣಿಸುವದಿಲ್ಲ (ಶಾಯಿರಿ ೮೯) ಎನ್ನಿಸದೆ ಇರದು.
ಇಲ್ಲಿನ ಒಂದೆರಡು ಶಾಯಿರಿ ಗಳು ಬಹಳ ವಿಶೇಷ ವಸ್ತುವನ್ನು ಒಳಗೊಂಡಿವೆ ಎನಿಸುತ್ತದೆ.ಅವೆಂದರೆ ಕನ್ನಡದ ಸ್ವಾಮಿಜಿಗಳೆಂದೇ ಹೆಸರಾದ ಲಿಂ.ತೋಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕುರಿತಾದ ಶಾಯಿರಿಗಳು. ಒಂದು ಶಾಯಿರಿ ಅವರು “ನಡೆದದ್ದೆಲ್ಲಾ ಬೆಳಕು” ಎಂದು ಅವರನ್ನು ಬಹಳ ಸುಂದರವಾಗಿ ಬಣ್ಣಿಸಿದೆ.ಶಾಯಿರಿ ಎಂದರೆ ಬಹುತೇಕ ಗಂಡು ಹೆಣ್ಣಿನ ನಡುವಿನ ಪ್ರೇಮದ ಮಧುರ ಭಾವಗಳನ್ನೊ ,ಅವರು ಅಗಲಿದ ವಿರಹದ ನೋವನ್ನೋ ವ್ಯಕ್ತ ಮಾಡುವ ಕಾವ್ಯ ಎಂಬುದು ಸಾಮಾನ್ಯ ಸಂಗತಿ ಯಾಗಿತ್ತು. ಆದರೆ ಡಾ. ಬಮ್ಮನಕಟ್ಟಿಯವರ ಶಾಯಿರಿ ಕತ್ತಲೆ ಬೆಳಕಿನ ಸಂದರ್ಭವನ್ನು ಪೂಜ್ಯರ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿರುವದು ವಿಶೇಷವಾಗಿದೆ.
ದೀಪದ ಬುಡಕ ಕತ್ತಲು
ದೀಪದ ಬುಡದಾಗ ಕತ್ತಲು ಅನ್ನೋದು
ಅಜ್ಜಾ ನಿನ್ನ ನೋಡಿದಾಗs
ಮರೆತುs ಹೋಗಿತ್ತು
ಆದರ ಅಜ್ಜಾ ನೀ ಹೋದ ಮ್ಯಾಲೆ
ಈ ಕತ್ತಲು ಮತ್ ಮತ್ ಕಾಡೇತಿ
ಬೆಳಕೇ ತಾವಾಗಿದ್ದ ಪೂಜ್ಯರು ಹೋದ ಮೇಲೆ ಇಲ್ಲೀಗ ಕತ್ತಲು ಮತ್ತೆ ಮತ್ತೆ ಕಾಡುವದು ಕವಿಯನ್ನು ಬಾಧಿಸಿದೆ.
ಒಟ್ಟಾರೆ ಡಾ. ಮಂಜುನಾಥ ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳು ಲೌಕಿಕದ ಜೊತೆಜೊತೆಗೆ ಅಲೌಕಿದತ್ತಲೂ ಲಂಘನ ಮಾಡುತ್ತವೆ. ಇಲ್ಲಿನ ಶಾಯಿರಿಗಳಲ್ಲಿ ಬದುಕಿನಲ್ಲಿ ಕತ್ತಲು ಬೆಳಕು ಹೇಗೆ ಪ್ರಧಾನ ಪಾತ್ರ ವಹಿಸುತ್ತವೆ ಎನ್ನುವದನ್ನು ಕವಿ ಕಂಡುಕೊಂಡಿದ್ದಾನೆ
” ಕತ್ತಲು ಬೆಳಕು ಈ ಎರಡೇ ಪ್ರತಿಮೆಗಳ ಮೂಲಕ ಬದುಕಿನ ಸೃಷ್ಟಿ ಮತ್ತು ಸಮಷ್ಟಿಯ ವಿವಿಧ ಅನುಭವಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಿರುವದನ್ನು” ಬೆನ್ನುಡಿಯಲ್ಲಿ ಹಿರಿಯ ಶಾಯರಿ ಕವಿ ಪ್ರೊ ಭಿಕ್ಷಾವರ್ತಿಮಠ ಅವರು ಗುರುತಿಸಿರುವದನ್ನು ಕಾಣುತ್ತೇವೆ.
ಒಂದು ಅತ್ಯುತ್ತಮ ಶಾಯಿರಿ ಸಂಕಲನ ನೀಡಿದ ಕವಿ ಡಾ.ಮಂಜುನಾಥ ಎಂ.ಬಮ್ಮನಕಟ್ಟಿಯವರನ್ನು ಅಭಿನಂದಿಸುತ್ತೇನೆ.
ಡಾ.ವೈ.ಎಂ.ಯಾಕೊಳ್ಳಿ




