ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಲ್ಲಿ ಇದ್ದ ಮೇಲೆ ಏನೂ
ತೊರೆಯಲಾಗದು
ಬೆನ್ನತ್ತಿ ಬಂದಿರುವದನು
ನಮ್ಮದೆ ಎಂಬುದ
ಮರೆಯಬಾರದು

ಬಿಡಲೆನು ಮೂರು ದಿನದ
ಸಂತೆಯಲ್ಲ ಜೀವನದಾಟ
ಬಡಿದಾಡಿ ಮುಗಿಸಲು
ಅಪರಿಚಿತರೊಡನೆ ಜಗಳವಲ್ಲ
ಸಂಸಾರ ಕೂಟ

ಒಡನೆ ಇದ್ದವರು ಬಿಡದೆ
ಕಾಡುವರು ನಿಜದ ಮಾತು
ಅನಿವಾರ್ಯ ಹೊಂದಿಕೆಯೆ
ಇಲ್ಲಿ‌ ಮುಖ್ಯ ಧಾತು

ಯಾರನೆ ದೂಷಿಸುತ ಏನನೋ
ನಿಂದಿಸುತ ಅತ್ತರೇನು ಬಂತು
ಹೊತ್ತು ತಂದ ತಟ್ಟೆಯ
ಅನ್ನವ ನಾವೇ ಉಣ್ಣಬೇಕು

ಎನಿತು ಬಡಿದಾಡಿದರೂ.
ಎಷ್ಟು ಕಾದಾಡಿದರೂ
ಅಂತಿಮ ನಿರ್ಣಯವಾಗದ ಯುದ್ದ
ಯಾವ ನ್ಯಾಯಾಲಯದಲೂ
ದಾವೆ ಹೂಡಿದರೂ ಉತ್ತರ
ಸಿಗದ ವ್ಯಾಜ್ಯ

ಹೃದಯದ‌ ಪ್ರಶ್ನೆಗಳಿಗುತ್ತರವ
ಹೃದಯವೆ ಕೊಡಬೇಕು
ದೊರಕದು‌ ಬೇರೆಡೆಗೆ
ಎನಿತು ಹುಡುಕಿದರೂ

ತಾಜಮಹಲಿ ಮುಂದೆ ನಗುತ
ರಾಜರಾಣಿಯಂತೆ ನಿಂತು
ತಗೆಸಿಕೊಂಡ ಪೋಟೊ
ಬಂದು ಕಾಡುತ್ತವೆ ಆಗಾಗ
ಎಲ್ಲರಿಗೂ ಕನಸಿನಲ್ಲಿ
ಅದನೆ ನಿಜವೆಂದು‌ ನಂಬಿ
ಹೊರಡಲಾಗದು
ಮರುದಿನದ ನನಸಿನಲ್ಲಿ

ಹಾಗೆಂದು
ಮಧ್ಯ ರಾತ್ರಿಯಲಿ
ಎದ್ದು ಹೋಗಲಸಾಧ್ಯ
ಅದು ಕವಿತೆ
ಕಥೆಯಲಷ್ಟೇ ಬರೆದದ್ದು

ತೂತಿರುವ ದೋಸೆಯನೆ
 ಕತ್ತರಿಸಿ ತಿನ್ನುತ್ತ
ಸುಖವ ಅನುಭವಿಸಬೇಕು
ಹರಿದ ಹಾಸಿಗೆಯನೆ
ಹೊಲಿದು ಹೊದ್ದುಕೊಂಡು
ಮತ್ತೆ ಕನಸುಗಳ ಕಾಣಬೇಕು

—–
ವೈ. ಎಂ.ಯಾಕೊಳ್ಳಿ

About The Author

1 thought on ““ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ”

  1. *ರವಿ ಕಾಣದ್ದನ್ನು ಕೂಡ ಕವಿ ಕಾಣುವನು* ಎಂಬ ವಾಣಿ ಯಂತೆ ತಮ್ಮ ವಿಚಾರ ಮತ್ತು ಬರವಣಿಗೆಗಳು ಓದುಗರ ಮನ ಮುಟ್ಟುತಿವೆ . ಹೀಗೆ ಮುಂದುವರೆಯಲಿ ನಿಮ್ಮ ಸಾಹಿತ್ಯದ ಪ್ರಯಾಣ ಸುಖಕರ.

    ಸಂಗೀತಾ ಪ್ರಕಾಶ ಗುಂಡಾಳಿ

Leave a Reply

You cannot copy content of this page

Scroll to Top