ಪರಿಸರ ಸಂಗಾತಿ
“ಬರದೆಡೆಗೆ ಹಸಿರಿಡುವ”
ಡಾ.ಸುಮತಿ ಪಿ.


‘ಬರದೆಡೆಗೆ ಹಸಿರಿಡುವ’ ಎನ್ನುವ ಪರಿಕಲ್ಪನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಆಲೋಚನೆ ಮಾಡಿದಾಗ, ಬೇರೆ ಬೇರೆ ವಿಚಾರಗಳು ಹೊಳೆಯುತ್ತವೆ. ಬರ ಎಂದರೆ ಬೇಕಾದದ್ದು ಸಿಗದೇ ಇರುವುದು, ಕೊರತೆ ಕಾಣಿಸುವುದು ಎಂದರ್ಥ. ಮಳೆ ಬಾರದೆ, ಬೆಳೆ ಬೆಳೆಯದೆ, ಹಸಿರು ಕಾಣದೆ ಭುವಿಯಲ್ಲಿ ಜೀವಿಗಳು ಬದುಕಲು ಬೇಕಾದ ಎಲ್ಲದರ ಕೊರತೆ ಉಂಟಾಗುವುದೇ ಬರ. ಆ ಬರ ಬರುವಂತಹ ಭುವಿಯಲ್ಲಿ ಹಸಿರಿಟ್ಟರೆ,ಆ ಹಸಿರಿನಿಂದ ಜೀವಸಂಕುಲ ಉಸಿರಾಡುತ್ತಲೇ, ಭುವಿಯಲ್ಲಿ ಆರೋಗ್ಯಯುತವಾಗಿ ಕಾಲ ಕಳೆಯಬಹುದು ಎಂಬುದು ಒಂದು ಆಯಾಮ.
ಇನ್ನೊಂದು ರೀತಿಯಲ್ಲಿ ಬರವನ್ನು ಪ್ರೀತಿಯ ಬರ ಎಂದು ಕೂಡ ತೆಗೆದುಕೊಳ್ಳಬಹುದು ಅಥವಾ ಸಂಸ್ಕಾರದ ಪರ ಎಂದು ಕೂಡ ಊಹಿಸಬಹುದು.
ಮೊದಲನೆಯದು ಅಂದರೆ ಬರಡು ನೆಲದಲ್ಲಿ ಹಸಿರಿಡುವ, ಮರಗಳ ಗಿಡಗಳನ್ನು ನೆಡುವ, ಜೀವಸಂಕುಲವನ್ನು ಪೋಷಿಸುವ ಕೆಲಸವು ಅಗತ್ಯವಾಗಿಯೇ ಆಗಬೇಕಾಗಿದೆ.
ಮನುಷ್ಯನಿಗೆ ಅಥವಾ ಜೀವಿಗಳಿಗೆ ಉಸಿರಾಡಲು ಬೇಕಾದ ಶುದ್ಧ ಗಾಳಿಯ ಬರ ಇವತ್ತು ಭುವಿಯಲ್ಲಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿದರೆ ಮಳೆಯು ಚೆನ್ನಾಗಿ ಸುರಿದು, ಭುವಿಯು ಮತ್ತಷ್ಟು ಹಸಿರಾಗಿ, ಪ್ರಾಣಿಗಳು,ಮನುಷ್ಯರು ಮತ್ತು ಸಸ್ಯಗಳು ಚೆನ್ನಾಗಿ ಬದುಕುವಂತಹ ವಾತಾವರಣವನ್ನು ಕಲ್ಪಿಸಬಹುದು. ಹಾಗಾಗಿ ಪ್ರಸ್ತುತ ಮಲಿನಗೊಂಡ ಪರಿಸರದಲ್ಲಿ,ನಾವು ಪರಿಸರವನ್ನು ಸ್ವಚ್ಛ ಮಾಡಿ ಹಸಿರನ್ನು ಬೆಳೆಸಿದರೆ ಅದು ವಾಸಿಸಲು ಯೋಗ್ಯವಾದ ಪರಿಸರವಾಗುವುದಲ್ಲದೆ, ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸಿದರೆ, ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮನಸು ಅಹ್ಲಾದಕರವಾಗಿರುತ್ತದೆ.ಸ್ವಚ್ಛ ಪರಿಸರದಿಂದ ಸತ್ವಯುತವಾದ ಬೆಳೆಗಳು ಬೆಳೆದರೆ,ಅದು ಮನುಷ್ಯನ ಆಹಾರವಾಗಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ .
ಶುದ್ಧ ಗಾಳಿಯ ಬರದ ಕಡೆಗೆ ಹಸಿರಿಡಿಸುವ ಕೆಲಸ ಮುಗಿದ ಮೇಲೆ, ಮನುಷ್ಯನ ಮನಸ್ಸಲ್ಲಿ ಹಸಿರಿಡುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ನಾವು ಕಂಡುಕೊಂಡಂತೆ ಮನುಷ್ಯನಲ್ಲಿ ಮಾನವೀಯತೆಗೆ ಬರ ಬಂದಿದೆ.”ಮಾನವೀಯತೆ ಇಲ್ಲದ ಮನುಷ್ಯ ಪಶುವಿಗೆ ಸಮಾನ”ನಮ್ಮ ಮನಸ್ಸು ಬೇರೆಯವರ ಕಷ್ಟಕ್ಕೆ ಬೇರೆಯವರ ದುಃಖಕ್ಕೆ ಮಿಡಿಯಬೇಕು.ಅವರ ಕಷ್ಟದಲ್ಲಿ ಸಮಭಾಗಿಗಳಾಗಿ ಎದುರಿಸುವ ಎದೆಗಾರಿಕೆ ನಮ್ಮಲ್ಲಿರಬೇಕು. ಮನೆಯವರೊಂದಿಗೆ ನೆರೆಕೆರೆಯವರೊಂದಿಗೆ ಹಾಗೂ ಇತರರೊಂದಿಗೆ ದ್ವೇಷ- ರೋಷವನ್ನು ಬೆಳೆಸದೆ, ಒಂದಾಗಿ ಬೆರೆತು, ಕೋಪ ತಾಪವನ್ನು ಮರೆತು, ಪ್ರೀತಿ ಪ್ರೇಮವು ಬಲಿತು,ಹಸಿರಿಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಲೇಬೇಕಾಗಿದೆ .
ಇನ್ನೂ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತಿನಂತೆ ನಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದಲೇ ಕಾಣಬೇಕು.ಈಗ “ಮಕ್ಕಳಿಗೆ ಹೊಟ್ಟೆಯ ಹಸಿವೆ ಗಿಂತ ಪ್ರೀತಿಯ ಹಸಿವೆಯೇ ಜಾಸ್ತಿ” ಆದಂತೆ ಕಂಡುಬರುತ್ತದೆ. ಪ್ರೀತಿಗೆ ಬರ ಎಲ್ಲೆಲ್ಲಿದೆಯೋ ಗಮನಿಸಬೇಕಾದ ಅನಿವಾರ್ಯತೆ ಇದೆ. ಪ್ರೀತಿಗೆ ಬರ ಇದ್ದಲ್ಲೆಲ್ಲ ಪ್ರೀತಿಯನ್ನು ಕೊಡುವ ಮೂಲಕ, ಮಕ್ಕಳನ್ನು ಸಮಾಜದ ಯೋಗ್ಯ ಪ್ರಜೆಗಳನ್ನಾಗಿಸುವ ಜವಾಬ್ದಾರಿ ನಮ್ಮದಲ್ಲವೇ? ಹಾಗಾಗಿ ಪ್ರೀತಿಯ ಬರವಿದ್ದಲ್ಲೆಲ್ಲ ಹಸಿರಿಡುವ ಕೆಲಸ ಬಹಳ ಪ್ರಮುಖವಾಗಿ ಆಗಬೇಕಾದ ಅನಿವಾರ್ಯತೆ ಇದೆ .
ಮಕ್ಕಳಿಗೆ ತಂದೆ ತಾಯಿ ಹಾಗೂ ಮನೆಯವರು ತೋರಿಸುವ ಪ್ರೀತಿಗೆ ಬರ ಉಂಟಾದರೆ, ಮುಂದೆ ಖಂಡಿತವಾಗಿಯೂ ವಯೋವೃದ್ಧ ಹೆತ್ತವರು ಮತ್ತು ಪೋಷಕರಲ್ಲಿ ಮಕ್ಕಳು ತೋರಿಸುವ ಪ್ರೀತಿಗೆ ಬರ ಬಂದೇ ಬರುತ್ತದೆ. “ಮಾಡಿದ್ದುಣ್ಣೋ ಮಾರಾಯ” ಎಂಬಂತೆ ನಾವು ಮಕ್ಕಳಿಗೆ ಅಗತ್ಯವಾಗಿ ತೋರಬೇಕಾದ ಪ್ರೀತಿಯನ್ನು ನೀಡಿದರೆ ನಮ್ಮನ್ನು ಕೂಡ ನಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ಪ್ರೀತಿಯಿಂದಲೇ ಕಾಣುತ್ತಾರೆ. ನಮಗೆ ಪ್ರೀತಿ ಬೇಕಾದರೆ ನಾವು ಕೂಡ ಅವರನ್ನು ಪ್ರೀತಿಸಬೇಕಾಗುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಒತ್ತಡದ ಬದುಕಿನಲ್ಲಿ ಮಕ್ಕಳನ್ನು ಪ್ರೀತಿಸಲು ಸಮಯ ವೆಲ್ಲಿಯದು,? ಅವರ ಆಗು ಹೋಗುಗಳ ಬಗ್ಗೆ ಅರಿತು,ಆಸೆ ಆಕಾಂಕ್ಷೆಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಅರಿತು ತಿಳಿಸುವ ವರಾರು? ಎಲ್ಲಾ ಮನೆಗಳಲ್ಲೂ ಪ್ರೀತಿಗೆ ಬರ ಬಂದಿದೆ ಎಂದು ಹೇಳಿದರೆ ತಪ್ಪಾಗದು ಎಂಬುದು ನನ್ನ ಭಾವನೆ. ಅಂತಹ ಪ್ರೀತಿಯ ಬರದಿಂದ ಪರದಾಡುವ ಮಕ್ಕಳಿಗೆ ಹಸಿರಿಡುವಂತೆ ಪ್ರೀತಿಯನ್ನು ತೋರಿಸಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ .
ಇನ್ನು ಇಂದಿನ ಮಕ್ಕಳಲ್ಲಿ ಸಂಸ್ಕಾರದ ಬರ ಇದೆ. ಹೆಚ್ಚಿನ ಮಕ್ಕಳಲ್ಲಿ ಪ್ರೀತಿ, ಕರುಣೆ, ಮಮತೆ ,ಸಹಾಯ ಮಾಡುವ ಗುಣ,ಹಂಚಿ ತಿನ್ನುವ ಮನಸ್ಸು, ಹಿರಿಯರಿಗೆ ಗೌರವ ಕೊಡುವಂತಹ ಗುಣ ಇದಕ್ಕೆಲ್ಲಾ ಕೊರತೆ ಕಂಡು ಬರುತ್ತಿದೆ.ಅಂದರೆ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ .ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ತೋರಿಸುವ ಪ್ರೀತಿ ಕಾಳಜಿ ಬಗ್ಗೆ
ಒಂದಿಷ್ಟನ್ನು ನಾವು ಹೇಳಿಕೊಡಲೇಬೇಕಾಗುತ್ತದೆ .
ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ ಎಂದು ಹೇಳಿದರೆ ಸಾಕಾಗಲಾರದು ಅದನ್ನು ಬೆಳೆಸುವಂತಹ ಅಂದರೆ ಸಂಸ್ಕಾರದ ಬರ ಇರುವಲ್ಲಿ ಹಸಿರಿಡುವ ಕೆಲಸವನ್ನು ನಾವು ಮಾಡಬೇಕಾಗಿದೆ ‘ಮಕ್ಕಳು ಹೇಳಿದ್ದನ್ನು ಮಾಡುವುದಕ್ಕಿಂತ ಮಾಡಿದ್ದನ್ನು ನೋಡಿ ಕಲಿತುಕೊಳ್ಳುವ ಕುತೂಹಲದ ಮನಸ್ಸಿನವರು’ಹಾಗಾಗಿ ನಾವು ಮಕ್ಕಳ ಮುಂದೆ ಒಳ್ಳೆಯ ಸಂಸ್ಕಾರವಂತರಾಗಿ ಬದುಕಿದರೆ ಸಂಸ್ಕಾರದ ಬರವಿರುವ ಮಕ್ಕಳ ಮನಸ್ಸಿನಲ್ಲಿ ಹಸಿರಿಡುವಂತಹ ಕೆಲಸ ನಮ್ಮಿಂದ ಆಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಬರದೆಡೆಗೆ ಹಸಿರಿಡುವ ಎಂದರೆ ಮನುಷ್ಯ ಜೀವನದಲ್ಲಿ ಯೋಗ್ಯ ವ್ಯಕ್ತಿಯಾಗಿ ಬಾಳಬೇಕಾದರೆ ಯಾವುದೆಲ್ಲ ಬೇಕೋ ಅದರಲ್ಲಿ ಕೊರತೆ ಉಂಟಾದರೆ, ಮನುಷ್ಯ ಯೋಗ್ಯತೆಯಿಂದ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಬರವನ್ನು ತೊರೆಸಲು ಹಸಿರಿಡುವ ಅಂದರೆ ಕೊರತೆಯನ್ನು ನೀಗಿಸುವ ಕೆಲಸ ನಮ್ಮಿಂದಾಗಬೇಕು. ಹಾಗಿದ್ದರೆ ಮಾತ್ರ ಈ ಜಗದಲ್ಲಿ ಜನಜೀವನ ಸುಖಮಯವಾಗಲು ಸಾಧ್ಯವಿದೆ. ಸಂಸ್ಕಾರವಂತ ಮಕ್ಕಳು ಬೆಳೆದು ದೇಶದ ಪ್ರಗತಿಯಾಗಲು ಅನುವಾಗುತ್ತದೆ.
ಡಾ.ಸುಮತಿ ಪಿ




