ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನದಿಯ ನೀರು ಹರಿದು ಹೋಗಿ
ಒಂದಾಗಿದೆ ಶರಧಿಯಲಿ
ತನ್ನತನವ ಬಿಟ್ಟು ಹೊರಟು
ಮಾಯವಾಗಿದೆ ಸಾಗರದಲಿ//

ದಡದ ತಿರುವು ಮುರುವಿನಲ್ಲಿ
ಸಿಕ್ಕು ನದಿಯ ಕಷ್ಟವು
ಹಸಿರು ಹುಲ್ಲು ಬದಿಗೆ ಇರಲು
ಇವಳಿಗೇನು ಲಾಭವು//

ಜುಳು ಜುಳನೆ ನಾದದಲ್ಲಿ
ಕರ್ಣಗಳಿಗೆ ಇಂಪಿದೆ
ಅದುವೆ ಇವಳು ನೋವಿನಲ್ಲಿ
ಕೂಗುವಂತೆ ಕಂಡಿದೆ//

ಸುತ್ತ ನೆರೆದ ಜನರಿಗೆಲ್ಲ
ನದಿಯೆ ಜೀವ ಜಾಲವು
ಇದರ ನೋವ ಪರಿವೆಯಿರದೆ
ಹಾಳು ಮಾಡೋ ವ್ಯೂಹವು//

ಮನುಜ ನಿನ್ನ ತನವ ನೀನು
ಕಳೆದು ಕೊಂಡರೇನಿದೆ
ಸಾಗರದ ಗರ್ಭವನ್ನು ಹೊಕ್ಕ
ನದಿಯ ಸತ್ವ ವೇನಿದೆ//

ಓಡಿ ಓಡಿ ಶರಧಿ ಸೇರೋ
ಭರದಿ ಮರೆತ ಅಸ್ಮಿತೆ
ದಿನವು ಹರಿದು ಹರಿದು ಹೋಗಿ
ಮಾಯವಾದ ಸ್ಪಷ್ಟತೆ//

ಬೇಡ ಬೇಡ ಮರೆಯಬೇಡ
ಜಗದಿ ನಿನ್ನ ಇರವನು
ಸರ್ವರೊಳಗೆ ಒಂದಾಗುತ
ತೋರು ನಿನ್ನ ಹರವನು//


About The Author

2 thoughts on “ಶುಭಲಕ್ಷ್ಮಿ ನಾಯಕ ಅವರ ಕವಿತೆ-‘ಮರೆಯ ಬೇಡ ಅಸ್ಮಿತೆ’”

  1. ಧಾವಂತದ ಬದುಕು ಹಿಂಬರಹವಿಲ್ಲದೆ ಮರೆಯಾಗದಿರಲೆಂಬ ಆಶಯ,ನದಿಯ ಆಶಯ ಸಾಗರ ಸೇರುವ ತವಕ,ಆದರೆ,ನದಿಪಾತ್ರದ ಒಳಹರಿವನ್ನು ಬಲ್ಲವರೇ ಬಲ್ಲರು..ಮನುಷ್ಯನ ಆಮಿಷಗಳಿಗೆ ಕೊನೆಯೆಂಬುದಿಲ್ಲ.ಕೊನೆಗೊಂದು ದಿನ ಎಲ್ಲ ಶೂನ್ಯ! ತುಂಬ ಸುಂದರ ಕವಿತೆ ಮೇಡಂ..

  2. ಎಲ್ಲರೊಳಗೊಂದಾಗಿಯೂ ನಮ್ಮತನವನ್ನು ಕಳೆದುಕೊಳ್ಳದೆ ಹಿಡಿದಿಟ್ಟುಕೊಳ್ಳಬೇಕೆಂಬ ಕವಿತೆಯ ಧೋರಣೆ ಚೆನ್ನಾಗಿದೆ

    ನಾಗರಾಜ ಬಾಡ

Leave a Reply

You cannot copy content of this page

Scroll to Top