ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ನೀನು ಹುಟ್ಟಿದ ದಿನ ಮಾತ್ರ
ನೆನೆಯುತ್ತೇವೆ ಮಹಾತ್ಮ
ನಿನ್ನ ಭಾವಚಿತ್ರಕೆ ಹಾರ ತುರಾಯಿಗಳ ಹಾಕಿ
ಪೂಜಿಸಿ ಪುನೀತರಾಗುತ್ತೇವೆ

ಪರಕೀಯರ ಸಂಕೋಲೆ ಕಳಚಿ
ಸ್ವಚ್ಛಂದ ಬದುಕು ಕೊಟ್ಟೆಯೆಂಬ
ಕಾರಣಕ್ಕೆ ಅಂದು ಮಾತ್ರ
ನೆನೆಯುತ್ತೇವೆ ನಿನ್ನ

ಮಂದಮತಿಗಳಾದ ನಮಗೆ
ನಿನ್ನ ಬದುಕಿನಾದರ್ಶ
ತತ್ವಾದರ್ಶನಗಳ ಅರಿವಿಲ್ಲ
ನಾವಿಂದು ನಿನ್ನ ವಿಚಾರಗಳ
ವಿರುದ್ಧ ಪಥದಲ್ಲಿದ್ದೇವೆ

ಒಂದೆರಡಲ್ಲ ನೀನುಸುರಿದ
ದೇಶದ ಪ್ರಗತಿಪಥದ ವಿಚಾರಗಳು
ಸತ್ಯ,ಅಹಿಂಸೆ,ಸತ್ಯಾಗ್ರಹಗಳು
ಕೇವಲ ಪುಸ್ತಕದೊಳಗಿನ ಪದಗಳು
ನಿನ್ನ ನೆನೆವ ದಿನದ ಘೋಷಣೆಗಳು

ಅಂತ್ಯಜರ ಉದಯಕೆ
ಗ್ರಾಮದೇಳ್ಗೆಯೆ ದೇಶದೇಳ್ಗೆ
ಎಂಬ ಘೋಷಕೆ
ದಮನಿತರ ನೋವಿಗೆ
ದನಿಯಾಗಬಯಸಿದ ನಿನ್ನ ಕರೆಗೆ
ನಾವು ಓಗೊಡಲಿಲ್ಲ
ಕನಿಷ್ಟ ಕಿವಿಯೂ ಕೊಡಲಿಲ್ಲ

ಪ್ರಿಯಗಾಂಧಿ!
ನೀನು ಹುಟ್ಟಿದ ದಿನ ಮಾತ್ರ
ನೆನೆಯುತ್ತೇವೆ ನಿನ್ನ
ತತ್ವಸಾರವನು
ಪತ್ರಿಕೆಯ ಲೇಖನಗಳಲಿ
ವೇದಿಕೆಯ ಭಾಷಣಗಳಲಿ
ರೂಪಕ, ನಾಟಕಗಳಲಿ…

ಬಡಿಗೇರ ಮೌನೇಶ್

About The Author

4 thoughts on “ಬಡಿಗೇರ ಮೌನೇಶ್ ಅವರ ಕವಿತೆ-ಪ್ರಿಯಗಾಂಧಿ”

    1. ಕಾವ್ಯದ ಮೂಲಕ ಹೊರಹೊಮ್ಮಿದ ತಮ್ಮ ಈ ಅದ್ಭುತ ಚಿಂತನೆಗೆ ಶರಣು ಶರಣು

  1. ಗಾಂಧೀಜಿ ಮತ್ತು ವಾಸ್ತವತೆ….
    ತುಂಬಾ ಚಿಂತನಾರ್ಹ ಕವಿತೆ ಬ್ರದರ್

  2. ಕವಿತೆ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಧನ್ಯವಾದಗಳು ಗೆಳೆಯರೇ

Leave a Reply

You cannot copy content of this page

Scroll to Top