ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರಜೆಗೆ ಹೋದ ಕವಿತೆ ಮತ್ತೆ
ಮರಳಿ ಬಂದು ಪೆನ್ನಿಗಿಳಿವ
ಕರುಣೆ ತೋರಿಲ್ಲ
ಸಜೆಯೊ ಹೇಗೆ ಕೇಳಿ ನಾನು
ಹೊರಳಿ ತರಲು ಮೌನ ಭಾಷೆ
ಧರಣಿ ಮಾಡಿಲ್ಲ

ಕಾಡ ಸೊಬಗು ನಾಡ ಬೆಡಗು
ಕಾವ್ಯದೊಳಗೆ ತೂರಿ ಬರೆವ
ಬಂಧ ನನಗಿಲ್ಲ
ಬೇಡಗೊಡವೆ ಒಡವೆ ಕೊಡುವೆ
ನುಡಿಯ ಮಾಲೆ ಮಾಡಿ ಮುಡಿವೆ ಎಂದು ಹೇಳಿಲ್ಲ

ವೇದ ಶಾಸ್ತ್ರ ಸಾರ ಬಸಿದು
ಮಹಾ ಕಾವ್ಯ ಓದಿ ತಿಳಿದು
ನಾನು ಬರೆದಿಲ್ಲ
ಗಾದೆ ಮಾತು ಹದನಗೊಳಿಸಿ
ನಾದ ತಾಳ ಸ್ವರವ ಬೆರೆಸಿ
ಮೋದಗೊಂಡಿಲ್ಲ

ಬಾಲ್ಯ ಹರೆಯ ಮುಪ್ಪನಪ್ಪಿ
ಬಾಲತನದ ನೆನಪ ಅಪ್ಪಿ
ಬರೆದು ಬೀಗಿಲ್ಲ
ಬಾನು ತಾರೆ ಮುಗಿಲು ಮೋಡ
ಮಳೆಗೆ ಇಳೆಗೆ ಬಾಹು ಬಂಧ
ಮನವ ಸೆಳೆದಿಲ್ಲ

ಹೂವು ಹೆಣ್ಣ ಚೆಲುವ ಗುಣಿಸಿ
ನೋವು ನಲಿವು ಎಲ್ಲ ಸೂಸಿ
ಕಾವ್ಯ ಬರೆದಿಲ್ಲ
ಬೇವು ಬೆಲ್ಲ ಬಾಳೊಳಿರಿಸಿ
ಕಾವದೇವನೆಂದು ಎಣಿಸಿ
ಬರಹ ಮೂಡಿಲ್ಲ

ಭಾಷೆ ಭಾವ ಮಿಶ್ರ ತಳಿಸಿ
ದೇಶ ಪ್ರೇಮ ವೇಷ ಧರಿಸಿ
ಕವಿತೆ ಹುಟ್ಟಿಲ್ಲ
ನಾಶ ದ್ವೇಷ ರೋಷದಲ್ಲಿ
ಪಾಶ ಹಾಕಿ ಪದವ ಹುಡುಕಿ
ಭವಿತ ಹುಡುಕಿಲ್ಲ

ಆತ್ಮ ಧ್ಯಾನ ಅಂತರಂಗ
ಪ್ರೇಮ ಕರುಣೆ ಕಾವ್ಯ ಶೃಂಗ
ಭಾವ ಬಿತ್ತಿಲ್ಲ
ತತ್ವ ಜ್ಞಾನ ತಮದ ಸಂಗ
ತಂತ್ರ ಜ್ಞಾನ ಮೌಢ್ಯ ಭಂಗ
ಏನು ತಿಳಿದಿಲ್ಲ..


About The Author

Leave a Reply

You cannot copy content of this page

Scroll to Top