ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನಗೆಂದು ಹಿಡಿದು ತಂದಿದ್ದ ಪಾತರಗಿತ್ತಿಯು
ಕಿಟಕಿಯಾಚೆಗಿನ ಬೇಲಿ ನೋಡುತಿದೆ
ಅದನ್ನಾದರು ಬಿಟ್ಟು ಬರುತ್ತಿದ್ದೆ
ಕೊಂಚ ತಡವಾಗುತ್ತಿತ್ತು ಅಷ್ಟೆ

ನಿನ್ನ ನೆನಪಿನಲಿ ನಿದ್ದೆಗೆಟ್ಟು ಬರೆದ
ಕಣ್ಣ ಕವಿತೆಯ ಪುಟವು
ಗಾಳಿಗೆ ಸದ್ದು ಮಾಡುತ್ತಿದೆ
ಹರಿದು ಸುಟ್ಟಾದರು ಬರುತ್ತಿದ್ದೆ

ನೀ ಕೆಲ ಹೊತ್ತು ಜೋಕಾಲಿಯಲಿ ಕೂತು
ತೂಗಾಡಬಹುದಿತ್ತು
ಎಂದೋ ಕಂಡ ಕನಸಾದರು
ಕೊಲ್ಲುವ ಮೊದಲು ಈಡೇರಿಸಬಹುದಿತ್ತು

ಹಿಂದಿರುಗಿ ಹೋಗಲು ಹೊತ್ತಾಗುತ್ತಿರಲಿಲ್ಲ
ಕೂತು ಜೊತೆ ಮಾತಾಡಿದ್ದರೆ ಆಗಿತ್ತು
ಕೊಲ್ಲಲು ಬಂದ ಕಾರಣವೇನೆಂದು ನಾ ಕೇಳುತ್ತಿರಲಿಲ್ಲ

ಎದೆಗಾದರು ಇರಿಯಬೇಕಲ್ಲವೆ
ಇದ್ದ ಪ್ರೀತಿಯನ್ನು ನನ್ನೊಂದಿಗೆ
ಕೊಲ್ಲಬಹುದಿತ್ತು
ನಾನೇನು ಬೇಡವೆನ್ನುತ್ತಿರಲಿಲ್ಲ

ಇರಿತದ ರಭಸಕ್ಕೆ ನಿನ್ನ ಉಡುಗೆ ನೆತ್ತರಾಗಿದೆ
ಹಾಗೆ ಹೋಗಬೇಡ
ನಿನಗೆ ಕೊಡಲೆಂದು
ನಿನ್ನ ನೆಚ್ಚಿನ ಬಣ್ಣದ ಸೀರೆ ತಂದಿದ್ದೆ
ಅದು ಅಲ್ಲೆ ಎಲ್ಲೊ ಇದೆ
ಮೈಗೊದ್ದಿಕೊಂಡು ಹೋಗು

ಅಂಗಳದಲ್ಲಿ ನಾವಿಬ್ಬರು ನೆಟ್ಟ
ಗುಲಾಬಿ ಗಿಡದಲ್ಲಿ ಹೂ ಬಿಟ್ಟಿರಬಹುದು
ಇದ್ದರೆ ಕಿತ್ತು ಮುಡಿಗಿಟ್ಟುಕೊ
ನೆತ್ತರು ಅಂಟುವುದೆಂದು ಯೋಚಿಸಬೇಡ
ಅದು ಕೂಡ ಕೆಂಪಗೆ ಇದೆ

ಹೂವಿಲ್ಲವೆಂದರೆ ಗಿಡವನ್ನೆ ಕಿತ್ತು ಹೋಗು
ಚುಚ್ಚುವ ಮುಳ್ಳುಗಳ ಮೇಲೆ
ಕೋಪಗೊಳ್ಳಬೇಡ


About The Author

4 thoughts on “ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….”

Leave a Reply

You cannot copy content of this page

Scroll to Top