ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಹನಿಗಳು

  1. ಬದುಕು..!

ನಾಲ್ಕು ಜನರ ಹೆಗಲಿಗೆ
ಹೊರೆಯಾಗುವ ಮೊದಲು
ನಾಲ್ಕಾರು ಜೀವನಗಳಿಗಾದರು
ಹಗಲೀವ ಮುಗಿಲಾಗಬೇಕು.!


  1. ಅಂತರ..!

ಕಣ್ಣು ಕರುಳಿಲ್ಲದ ಕತ್ತರಿಗೆ
ಕತ್ತರಿಸುವುದೇ ಸಂತಸದಾಯಕ
ಕರುಣೆಯ ಕಣ್ಣುಳ್ಳ ಸೂಜಿಗೆ
ಕೂಡಿಸುವುದೇ ನಿತ್ಯ ಕಾಯಕ.!


  1. ಅಸಾಧ್ಯ.!

ಅಮಾವಾಸ್ಯೆಯಿರುಳ ಬಾನಂಗಳದಿ
ಶಶಿಯ ಕಾಣಲು ಹಠತೊಟ್ಟವರ
ಭಗವಂತ ಕೂಡಾ ಬದಲಿಸಲಾರ
ಭ್ರಮೆಗಳಲಿ ಸ್ವಯಂಬಂಧಿಯಾದವರ
ಕತ್ತಲಿಂದ ಕೊಂಚವು ಕದಲಿಸಲಾರ !


  1. ಅನರ್ಥ.!

ಕರಗದ ಕಟುಕರೆದುರು
ಕೊರಗುವುದರಲ್ಲಿಲ್ಲ ಅರ್ಥ.!
ಕರುಳೇ ಇಲ್ಲದವರೆದುರು
ಎಷ್ಟೇ ಕಂಬನಿಗೆರೆದರೂ ವ್ಯರ್ಥ.!


  1. ಪರಿಹಾಸ..!

ಹೊಟ್ಟೆ ತುಂಬಿದವರಿಂದ
ಹಸಿವಿನ ಬಗೆಗೆ ಭಾಷಣ
ಪುಗಸಟ್ಟೆ ತಿನ್ನುವವರಿಂದ
ಸ್ವಾಭಿಮಾನದ ಘೋಷಣ.!


  1. ಸ್ವಭಾವ..!

ಹೆಸರಿಗೆ ಹಪಹಪಿಸುವವರಿಗೆ
ಪ್ರಚಾರ ಆತ್ಮರತಿಯೇ ಉಸಿರು
ಸದಾ ಸ್ವಪ್ರಶಂಸೆಗಳ ಬಸಿರು
ಪರರ ಹೊಗಳಿದರೆ ಅವರೆದುರಿಗೆ
ಎರಚೇ ಬಿಡುವರು ಕೆಸರು.!


ಎ.ಎನ್.ರಮೇಶ್. ಗುಬ್ಬಿ.

About The Author

Leave a Reply

You cannot copy content of this page

Scroll to Top