ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

ಸೋಮಲಿಂಗ ಬೇಡರ ಆಳೂರ

ಸುಗ್ಗಿಯ ಹಿಗ್ಗನು ತುಂಬಲು ಬಂದಿದೆ
ಸಡಗರದಿಂದಲಿ ಸಂಕ್ರಾಂತಿ
ಧರೆಯಲಿ ಸಗ್ಗದ ಸಿರಿಯನು ಹೊಮ್ಮಿ
ಸಂಭ್ರಮ ಸೂಸಿದೆ ಸಂಕ್ರಾಂತಿ

ಜೋಳದ ತೆನೆಗಳ ತೂಗಲು ಹಚ್ಚಿ
ಕಳೆಯನು ತುಂಬಿದೆ ಸಂಕ್ರಾಂತಿ
ಕಬ್ಬು ಕಡಲೆ ಅವರೆಯ ಹೊಲದೊಳು
ಫಸಲನು ಹೆಚ್ಚಿದೆ ಸಂಕ್ರಾಂತಿ

ರಾಗಿ ನವಣೆ ತೊಗರೀ ಹುರಳೀ
ಫಳಫಳ ಹೊಳೆಸಿದೆ ಸಂಕ್ರಾಂತಿ
ವರ್ಷದುದ್ದಕೂ ದುಡಿದಾ ರೈತಗೆ
ಹುರುಪನು ಕೊಟ್ಟಿದೆ ಸಂಕ್ರಾಂತಿ

ರೈತರು ಸಾಕಿದ ದನಕರುಗಳಿಗೆ
ಮೇವನು ಒದಗಿದೆ ಸಂಕ್ರಾಂತಿ
ಚಳಿಯನು ತೊಲಗಿಸಿ ಬೆಚ್ಚಗೆ ಮಾಡಿ
ಚೇತನಗೊಳಿಸಿದೆ ಸಂಕ್ರಾಂತಿ

ಉತ್ತರಾಯಣ ಪುಣ್ಯ ಕಾಲದಿ
ಬಂದಿದೆ ಮತ್ತೆ ಸಂಕ್ರಾಂತಿ
ಸಂಗಮ ಸ್ಥಳದಲಿ ಪವಿತ್ರ ಸ್ನಾನ
ಮಾಡಲು ಹಚ್ಚಿದೆ ಸಂಕ್ರಾಂತಿ

ಪಾವನ ಹೊಂದಿದ ಜನರಿಗೆ ದೇವರ
ದರುಶನ ಒದಗಿದೆ ಸಂಕ್ರಾಂತಿ
ಇಷ್ಟದ ಹಾಗೆ ಹಬ್ಬವ ಮಾಡಲು
ಶುಭವನು ಕೋರಿದೆ ಸಂಕ್ರಾಂತಿ

ಎಳ್ಳು ಬೆಲ್ಲವ ಸವಿದು ಒಳ್ಳೆಯ
ಮಾತುಗಳಾಡಿರಿ ಎನ್ನುತಲಿ
ಸಕ್ಕರೆ ಅಚ್ಚು ಕಬ್ಬು ಕೊಬ್ಬರಿ
ಹಂಚಿರಿ ಎಂದಿದೆ ಸಂಕ್ರಾಂತಿ.
—————————-

About The Author

Leave a Reply

You cannot copy content of this page

Scroll to Top