ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರ್ಧ ಸತ್ಯ

ಮಂಜುನಾಥ ನಾಯ್ಕ

ಕಾಳ ರಾತ್ರಿಯಲ್ಲಿ ಕಿರುಬೆರಳನ್ನು ಹಿಡಿದು ನುಣ್ಣಗೆ
ನಡೆಯಬಾರದಿಲ್ಲಿ ಕತ್ತಲೆ ನೆತ್ತಿಗೇರುವ ಸರಿಹೊತ್ತಿನಲ್ಲಿ
ಅಂಗೈಯೇ ಕತ್ತಲೆಗೆ ನೆರಳಾಗುವ ತಿಳಿಹೊತ್ತಲ್ಲಿ

ಹಚ್ಚಿಟ್ಟ ದೀಪದ ದೇದೀಪ್ಯಮಾನ ಬೆಳಕಲ್ಲಿ
ತುಂಡು ರಾತ್ರಿಯೊಂದು ಬೆಳಕಿನ 
ಕನ್ನಡಿಯಲ್ಲಿ  ಮುಖ ಸಿಂಡರಿಸಿಕೊಂಡು
ಮತ್ತೆ ಮತ್ತೆ ಹಾದ ಬಿರುಗಾಳಿಗೆ ಮೈಯೊಡ್ಡಿ
ದೀಪದೆದೆಯಲ್ಲಿ ಅಗ್ನಿ ಗೂಡುಕಟ್ಟಿ
ದೀಪದ ಮುಖ ಕರ್ರಗಾಗಿ ಕತ್ತಲು ನೆರೆಯುತ್ತದೆ
ಅನಂತ ಆಕಾಶವೂ ಮೌನ ತಬ್ಬುತ್ತದೆ

ಎದೆ ಎದೆಯಲಿ ಚಿಗುರಿದ ಪ್ರೀತಿ
ಪೃಣತೆಯ ಕವಲು ದಾರಿಯಲಿ
ಒಬ್ಬಂಟಿ ಬಿಟ್ಟುಹೋಗಬಾರದಿಲ್ಲಿ
ಕಾದು ಕುಳಿತ ಕಾಳ್ಗಿಚ್ಚಿನ ಕಾಡ ಸಂಚಿನಲ್ಲಿ

ಕರಾಳತೆಯ ಮುಖವಾಡದ ಕತ್ತಲಿನಲ್ಲಿ
ಬೆಳಕಿನ ಹಾದಿ ಸುಗಮವಲ್ಲ
ಅದಕ್ಕೆ ರಾತ್ರಿ ಸೂರ್ಯನಿಲ್ಲ

ಇರುಳು ನಕ್ಕಂತೆ ಕಂಡರೂ
ನಂಬಬಾರದು
ಹಸೀ ರಾತ್ರಿಯಲ್ಲಿ ಕಂಡದ್ದೆಲ್ಲವೂ
ಸತ್ಯವಲ್ಲ

ಕಗ್ಗತ್ತಲ ಕ್ರೂರತೆಗೆ ಬೆಚ್ಚಿಬಿದ್ದ ಆರ್ದ್ರತೆಯ ತುಟಿಗಳು
ಅಮರ ಗೀತೆಯ ಗುನುಗುವುದಿಲ್ಲ
ಕಪ್ಪಿಟ್ಟಿರುವ ಅನಂತ ಆಕಾಶಕ್ಕೆ
ನಕ್ಷತ್ರದ ಹಾದಿ ಕಾಣುವುದಿಲ್ಲ

ನಿಂತಂತೆ ಭ್ರಮಿಸಿರುವ ಮಲಗಿರುವ ಮರ
ನೆರಳು ಬೀಳದೆ ಮೈಯೊರಗಿದ ಕತ್ತಲೆಯ ಗರ್ಭದಲ್ಲಿ ಬೀಜಾಂಕುರ
ಬೆಳಕಿನ ಮುಖ ಅದಿನ್ನೂ ದೂರ

ಮರಣದ ತೊಟ್ಟಿಲಲ್ಲಿ ಮಿಸುಕಾಡುವ ಸಂಜೆ
ಬೈಗು ನುಂಗಿದ ಇರುಳ ರಾತ್ರಿಯಲ್ಲಿ
ಅರ್ಧ ಚಂದ್ರನ  ದರ್ಶನ

ಸತ್ತಂತೆ ನಟಿಸುವ ಬೆಳಕು ಹಾಯುವವರೆಗೂ
ನಿಶಾಚರ ರಾತ್ರಿಯ ಕಾರುಬಾರು
ಅರ್ಧ ಸತ್ಯ ಮಾತ್ರ


About The Author

1 thought on “ಮಂಜುನಾಥ ನಾಯ್ಕ ಕವಿತೆ-ಅರ್ಧ ಸತ್ಯ”

Leave a Reply

You cannot copy content of this page

Scroll to Top