ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಡವರೆ ಒಂದಾಗಿರಿ

ನರಸಿಂಗರಾವ ಹೇಮನೂರ

ಬನ್ನಿ ಬನ್ನಿರಿ ಕನ್ನಡಮ್ಮನ
ಮುಡಿಗೆ ಹೂವನು ತನ್ನಿರಿ
ನಾಡ ಕೆಣಕುವ ನುಡಿಯನೆದುರಿಸಿ
ತಾಯ ನೋವನು ಕಳೆಯಿರಿ

ಹೆಸರಾಯಿತು ಕರ್ನಾಟಕ
ಉಸಿರಾಯಿತು ಕನ್ನಡ

ಎಂದು ಬೀಗುವ ನಮಗೆ ಬಂದಿವೆ
ಇಲ್ಲ ಸಲ್ಲದ ಸಂಕಟ
ನಮ್ಮ ಗಡಿಯನು ನಮ್ಮ ನುಡಿಯನು
ಉಳಿಸ ಬೇಕಿದೆ ಸಂತತ

ಎಂದೊ ಕೊಟ್ಟಿಹ ವರದಿ ತೀರ್ಪನು
ಅಡಿಗಡಿಗೆ ಧಿಕ್ಕರಿಸುತ
ಗಡಿಯ ನೆರೆಹೊರೆಯವರು ನಮ್ಮನು
ಕಾಡುತಿರುವರು ಕೆಣಕುತ

ನಮ್ಮ ನೆಲಜಲಕಾಗಿ ಹೊಂಚಿಹ
ಭಂಡರನು ಇನ್ನಾದರು
ನಮ್ಮ ತಂಟೆಗೆ ಬಾರದಿರಲ್ಹೆಡೆಯೆತ್ತಿ
ತಡೆಯುವ ತಡವಾದರೂ

ಅಚ್ಚ ಕನ್ನಡ ಭಾಷೆ ಕೆಡಿಸುವ
ನುಸುಳುಕೋರರ ನುಗಿಯುತ
ಕಟ್ಟ ಬೇಕಿದೆ ನಾಡ ನುಡಿಯನು
ನಾಡವರೆ ಒಂದಾಗುತ

ಕನ್ನಡವನೆ ಕಲಿತು ಕಲಿಸುತ
ಕನ್ನಡದಿ ಮಾತಾಡುತ
ಕನ್ನಡಾಂಬೆಯ ಹಾಡಿ ಹೊಗಳುತ
ಕನ್ನಡಕೆ ಕೈ ಎತ್ತುತ!


ನರಸಿಂಗರಾವ ಹೇಮನೂರ

About The Author

Leave a Reply

You cannot copy content of this page

Scroll to Top