ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಗಾರುಡಿಗ

ಆದಪ್ಪ ಹೆಂಬಾ ಮಸ್ಕಿ

ನಾನು ಯುವಕ ಪ್ರಖರ ವಾಗ್ಮಿ
ಓದಿಕೊಂಡೂ ಇರುವೆ
ಶಾಸ್ತ್ರ ಆಗಮಗಳೂ ಗೊತ್ತೆನಗೆ
ಕಲ್ಲು ದೇವರ ಪೂಜಿಸಿ
ನಿಮ್ಮನ್ನು ಮೌನವಾಗಿಸಬಲ್ಲೆ
ಪಾಣಿವಾಟದ ಘಮಿಸುವ ನೀರನ್ನು ಪ್ರೋಕ್ಷಿಸಿ ಅವನ್ನೇ
ನಿಮಗೆ ಕುಡಿಸಲೂ ಬಲ್ಲೆ
ಇರಲಿ ಬಿಡಿ ನನಗೊಂದು ಪೀಠ
ಯಾಕೆಂದರೆ
ಕೆಲಸವಿಲ್ಲದ ನಾನು ಖಾಲಿ ಇದ್ದೇನೆ! ||

ನಿಮ್ಮಗಳ ಆಸೆಯಂತೆ
ನಾನೀಗ ಪೀಠದಾರಿ
ನೀವೀಗ ಹಿರಿ-ಕಿರಿ ಯರೆನ್ನದೇ
ಗಂಡು-ಹೆಣ್ಣೆಂದು ಬೇಧಿಸದೇ
ನನ್ನ ಪಾದಕ್ಕೆ ನಮಿಸಬೇಕಿದೆ
ಶೆಟ್ಟರಂಗಡಿಯಿಂದ ಒಂದು ರೂಪಾಯಿಯನ್ನೂ ಕೊಡದೇ ನಾ ತಂದ
ಕಲ್ಲುಸಕ್ಕರೆಯನ್ನೇ ಪ್ರಸಾದವೆನ್ನತ್ತ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ತಿನ್ನಬೇಕಿದೆ
ಯಾಕೆಂದರೆ
ನಾನೀಗ ಕಾವಿ ಧರಿಸಿದ್ದೇನೆ! ||

ನಾಡದೊರೆಗಳು ಅವರನ್ನೇ
ಟೀಕಿಸುವ ನಾಳಿನ ದೊರೆಗಳು
ನನ್ನ ಪಾದಕೆರಗುವುದು ಕಾಣುತಿಲ್ಲವೆ ನಿಮಗೆ ?
ಆಶ್ರಮದಲ್ಲಿರುವ ಅನಾಥಮಕ್ಕಳು
ಹಾಲು ಕೊಡುವುದ ಮರೆತ ಹಸುಗಳು ಕಾಣುತ್ತಿಲ್ಲವೆ ? ಮೂಲವನು
ಕೆದಕುವಿರೇಕೆ ?
ಎಷ್ಟು ಲಾಭ ಎಂದೆಣಿಸಬೇಡಿ.
ಕಷ್ಟ ಎಷ್ಟು ಲೆಕ್ಕಿಸಿ.
ಕಾವಿಯ ಹಿಂದೆ ನನಗೂ ಸಂಸಾರ ಇದೆ ಸ್ವಾಮೀ
ಕೊಡಿ ಕಾಣಿಕೆ ಕಪ್ಪ ಕಾಣಿಕೆ
ಕೊಡುತ್ತೀರಿ ಬಿಡಿ ನೀವು
ನೋಡಿ ಸುಮ್ಮನಿರುವವರಲ್ಲ
ಯಾಕೆಂದರೆ
ಬದುಕಿನ ತತ್ವಗಳನು ಮಾತಲ್ಲೇ ಮಾರುವ ವಾಚಾಳಿ ನಾನು
ಪದ ಗಾರುಡಿಗ ಅಂದುಕೊಳ್ಳುವವರು ನೀವು! ||


ಆದಪ್ಪ ಹೆಂಬಾ ಮಸ್ಕಿ

About The Author

4 thoughts on “”

  1. ಶರಣಗೌಡ

    ಸರ ಚೆನ್ನಾಗಿದೆ. ಮುರಘಾ ಗುರಿಗಳ ಕುರಿತಾಗಿದೆ.

  2. ಶರಣಗೌಡ

    ಸರ ಚೆನ್ನಾಗಿದೆ. ಮುರಘಾ ಗುರುಗಳ ಕುರಿತಾಗಿದೆ.

Leave a Reply

You cannot copy content of this page

Scroll to Top