ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮೊದಲ ಮಳೆ

ಅನ್ನಪೂರ್ಣ ಸಕ್ರೋಜಿ

ತವರ್ಮನಿ ಅಂದ್ರ ನನಗೆಷ್ಟು ಖುಷಿನೋ
ಅಷ್ಟಽ ಖುಷಿ ನಮ್ಮ ಮಳೆರಾಯಗ

ಧಾರವಾಡಾ ಅಂದ್ರ ಸಾಕು
ಕುಣ್ಕೊಂತ ನಕ್ಕೊಂತ ಬರ್ತಾನ

ಕೆಂಪ ಮಣ್ಣಾಗ ಹಸಽರ ಎಮ್ಮಿ ಹೋಗುದ ನೋಡಿ
ಬಣ್ಣಕ್ಕ ಮಳ್ಳ ಆಗಿ ಜೋರಾಗ್ತಾನ

ಕೆಂಪ ರಾಡಿ ನೀರಾಗ ಮಕ್ಳಾಟ ನೋಡಿ
ತಾನೂ ಕುಣಿದಾಡತಾನ

ಕರೇ ಎರಿ ಹೊಲ್ದಾಗ ಬಿಳೇ
ಎತ್ತುಗೋಳ ಊಳೂದ ನೋಡ್ತಾನ

ನಕ್ಕೊಂತ ಹಾಡ್ಕೊಂತ ಬಿತ್ತೋ
ರೈತಗ ತಾನೂ ಕೈ ಜೋಡಸ್ತಾನ

ಬಿಸಿ ಬಿಸಿ ಥಾಲಿಪಟ್ಟ ಮಾಡೂದ್ನ
ಹಂಚಿನೊಳಗಿಂದ ಹಣಿಕಿ ಹಾಕ್ತಾನ

ತವಿ ಮ್ಯಾಲ ಬಿದ್ದು ಚುರ್ ಅಂದಾಗ
ಗಂಗವ್ವ ಮ್ಯಾಲ ನೋಡ್ದಾಗ ಅಡಕ್ಕೊಂತಾನ

ಅಭ್ಯಾಸ ಮಾಡವರನ ನೋಡಿ
ಗೊತ್ತಾಗದ್ಹಂಗ ಲೈಟ ತಗೀತಾನ

ಗಿರ್ಮಿಟ್ ಮಿರ್ಚಿಭಜಿ ತಿನ್ನುದ್ನೋಡಿ
ಕೆಟ್ಟೆನಿಸಿ ಕಣ್ಣೀರ ಸುರಸ್ತಾನ

ಸಂಗೀತಗಾರರ ಊರಂತ ಗೊತ್ತು
ಶೃತಿ ತಾಳ ಲಯದೊಂದಿಗೆ
ಬರ್ತಾನ

ಪೇಢಾದ್ಹಂಗ ಜನರ ಮನಸೂ ಸಿಹಿ ಮೆತ್ತಗ
ಇರೂದಕ್ಕ ಪ್ರೀತಿ ಮಾಡತಾನ

ಸಾಹಿತಿ ಕವಿಗಳ್ನ ಹೊರಗ
ಬರ್ಯೋ ಅಂತ ಕರೀತಾನ

ಕಾಳಿದಾಸಾ ಮೋಡದ ಮ್ಯಾಲ
ಬರದ್ಹಾಂಗ ನನ ಮ್ಯಾಲನೂ ಬರೀರಿ ಅಂತಾನ

ಬರ್ದ ಕವಿತಾ ಓದಿ ಹೇಳಾಕ
ಪೂಣಾಕ ಬರ್ರಿ ಅಂತಾನ


About The Author

Leave a Reply

You cannot copy content of this page

Scroll to Top