ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅವನು

ಕವಿಚಂದ್ರಚಾಂದ್ ಪಾಷಾ

Art - White / Black | Facebook

ಅವನು,
ಚರಿತ್ರೆಯ ಚರಮ ಗೀತೆಯ ಹೊಕ್ಕಳ ಬಳ್ಳಿ
ಮಾದಿಗರ ಮನೆಯ ಕತ್ತಲೆಗೆ ಅಂಟಿದ ಕಪ್ಪು ಮಸಿ
ಅಂಬಿಗನ ಹುಟ್ಟಲಿ, ಹುಟ್ಟಿ ಬಂದ ತೊಟ್ಟಿಕ್ಕುವ ಹನಿ.
ಅವನು ‘ಸೂಳೆ’ ಅನಿಸಿಕೊಂಡವಳ ಬಾಗಿಲಿನ ಚಿಲಕ
ಅಕ್ಕನ ಬೆತ್ತಲೆಗೆ ಬೆಳಕ ಮುಡಿಸಿದ ಮಿಂಚು ಹುಳು.

ಅವನು,
ಅಂಗದೊಳಗೆ ಲಿಂಗವ ಹೆತ್ತ ಮೌನದ ಮರ್ಮಾಂಗ!
ಹೆತ್ತ ಕೂಸಿಗೆ ಹಾಲುಣಿಸಲಾಗದ ಬತ್ತಿದ ಕೆಚ್ಚಲು.
ಅವನು ಲಿಂಗ ಕಟ್ಟಿಕೊಂಡವರಿಗೆ, ಕೋಟಿ ದೇವತೆಗಳ ಕಟ್ಟುವ ಕೊಟ್ಟಿಗೆ,
ಹಸಿದು ಕೂತವರಿಗೆ ಬೇಯಲಿಟ್ಟ ಮಾಂಸದ ಮುದ್ದೆ!

ಅವನು,
ಮೈನೆರೆತ ಮಡಿಲೊಳಗಿನ ಮಗುವಿನ ಮಾತು
ಮುದಿತನದ ಬಿಜ್ಜಳನ ಮುರಿದು ಹೋದ ಯೌವ್ವನ.
ಅವನು ಅಲ್ಲಮನ ನಾರುವ ನಾಲಿಗೆಯೊಳಗಿನ ಜ್ಯೋತಿರ್ಲಿಂಗ
ಅವನು, ಬಿದ್ದು ಹೋದ ಮಹಾಮನೆಯ ಹೊಸ ಚಿಗುರು..!!

ಅವನು,
ಜಾತಿ ಬಿಟ್ಟು, ಜಂಗಮನಾಗಲು ಹೊರಟ ಒಂಟಿ ಹೆಜ್ಜೆ!
ಜಾತಿವಂತರಿಂದಲೇ ಮೊಳೆ ಜಡಿಸಿಕೊಂಡ ಮೂಖ ಮೂರ್ತಿ!!
ಅವನು ಧರ್ಮದೇಟಿನ ಗಾಯಗಳಿಗೆ ಮುಲಾಮು ಹುಡುಕುವ ದವಾಖಾನೆ,
ಆದರೆ, ಈಗ ಅವನು
ಲಿಂಗದ ರೋಗಣು ತಗಲಿಸಿಕೊಂಡವರ ನಿತ್ಯದ ಕಾಯಿಲೆ..

ಅವನು, ಜಗತ್ತಿನ ಮಹಾನ್ ಮಾನತವಾದಿ
ಬೆಂಕಿ ಬರಹದ ಕ್ರಾಂತಿಕಾರಿ..
ಆದರೆ, ಈಗ
ಅವನು ಜಾತಿಯೊಂದರ ಜಾಹೀರಾತು,
ಮತ್ತು, ಹೆಚ್ಚು ಮಾರಾಟವಾಗುವ ದೇವರ ಫೋಟೋ…!!


About The Author

2 thoughts on “ಕವಿಚಂದ್ರಚಾಂದ್ ಪಾಷಾ.ಎನ್.ಎಸ್.ಕವಿತೆ ಅವನು”

  1. ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ. ಗೆಳೆಯ all the best

  2. ಪ್ರಬಯ್ಯ

    “ಅವನು ಹೆತ್ತ ಕೂಸಿಗೆ ಹಾಲುಣಿಸಲಾಗದ ಬತ್ತಿದ ಕೆಚ್ಚಲು”
    ಎಂತಹ ಸಾಲುಗಳು ಸಾರ್ ಇವು!! ದಿಟಕ್ಕೂ ಸೊಗಸಾಗಿವೆ. ನಿಮ್ಮೀ ಕಬ್ಬಗೆಲಸ ಹೀಗೆ ಮುಂದುವರೆಯಲಿ.

Leave a Reply

You cannot copy content of this page

Scroll to Top