ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು

Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು  ಅಳುತ್ತಾಳೆ.    ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ!    ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು.                                                                                         *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು.    ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು.    ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು.    ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Read Post »

ಅಂಕಣ ಸಂಗಾತಿ, ನೆಲಸಂಪಿಗೆ

ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ ನನಗೆ ಕಂಡಿತು. ಮೊದಲೆಲ್ಲ, ‘ಅಂಗಡಿ ಪಕ್ಕಿ’ ಎಂಬ ಹೆಸರಿಗೆ ಅನ್ವರ್ಥವಾಗಿ ಸಾಲು ಅಂಗಡಿಗಳ ಮುಂದೆ ಗಲಾಟೆ ಎಬ್ಬಿಸುತ್ತ ಚೆಲ್ಲಿದ ಕಾಳು ಆರಿಸುತ್ತಿದ್ದ ಗುಬ್ಬಚ್ಚಿಗಳ ಹಿಂಡು ನೆನಪಾಗಿ ಈ ಒಂಟಿಗುಬ್ಬಿ ಸದ್ಯದ ಪರಿಸ್ಥಿತಿಗೆ ರೂಪಕವಾಗಿ ಕಂಡು ಎದೆಯೊಳಗೆ ನೋವಾಯಿತು. ಬಟ್ಟೆಖರೀದಿಸುವ ಆಸಕ್ತಿ ಉಳಿಯದೆ “ನನಗೀಗ ಏನೂ ಬೇಡ” ಎಂದು ತಿಳಿಸಿ ಮನೆಮಂದಿಯನ್ನು ಅಂಗಡಿಯೊಳಗೆ ಕಳಿಸಿ ಸುಮ್ಮನೆ ಯೋಚಿಸುತ್ತ ನಿಂತುಬಿಟ್ಟೆ… ** ನಮ್ಮ ಆ ಬಾಡಿಗೆ ಮನೆಗೆ ಸಕಾರಣವಾಗಿ ‘ಹಕ್ಕಿ ಮನೆ’ ಎಂದು ಹೆಸರಿಟ್ಟಿದ್ದೆವು. ವಿಶಾಲವಾಗಿದ್ದ ಮನೆಯ ಸುತ್ತ ಒಂದಷ್ಟು ಜಾಗವಿತ್ತು; ಮರಗಿಡಗಳಿದ್ದವು. ತೆಂಗು, ನುಗ್ಗೆ ಮರಗಳು, ಪಪ್ಪಾಯಿ, ಬಾಳೆ, ಕ್ರೋಟನ್ ಗಿಡಗಳು ಅಂದ ಹೆಚ್ಚಿಸಿದ್ದವು. ಅಷ್ಟು ಒಳ್ಳೆಯ ಬಾಡಿಗೆಮನೆ ಸಿಕ್ಕಿದ್ದು ನಮ್ಮಅದೃಷ್ಟವೆಂದೇ ಹೇಳಬೇಕು. ಹಗಲಿನ ವೇಳೆ ಹಕ್ಕಿ ಹಾಡು, ಕೋಳಿಗಳ ಕೂಗು, ಮುಂಗುಸಿ, ಅಳಿಲು, ನಾಯಿ, ಬೆಕ್ಕುಗಳ ಸುಂದರ ಪ್ರಪಂಚವಾದರೆ; ರಾತ್ರಿ ತಾರಸಿಯ ಮೇಲಿನ ಬೆಳದಿಂಗಳ ಲೋಕ, ಇರುಳಹಕ್ಕಿಗಳ ಸವಿಮಾತು!ಇಂತಹ ಮನೆಗೆ ಹೋದ ಸ್ವಲ್ಪ ಸಮಯದಲ್ಲಿ ಮಗ ಮತ್ತು ನಾನು ರಜೆಯ ದಿನ ಒಂದು ಕಿಲಾಡಿತನ ಮಾಡಿದೆವು. ಎರಡುರಟ್ಟಿನ ಪೆಟ್ಟಿಗೆಯನ್ನುತೆಗೆದುಕೊಂಡು, ರಂಧ್ರಕೊರೆದು, ದಾರಕಟ್ಟಿ ಸಿಟೌಟಿನ ಕಂಬಕ್ಕೆ ಬಿಗಿಯಾಗಿ ಬಿಗಿದೆವು. “ಯಾವುದಾದರೊಂದು ಹಕ್ಕಿ ಬಂದು ಅದನ್ನು ತನ್ನ ಗೂಡಾಗಿ ಸ್ವೀಕರಿಸಬಾರದೇ’ ಎಂಬ ಅಸಾಧ್ಯ ಹಂಬಲ, ಕಲ್ಪನೆ ಮಾತ್ರ ನಮ್ಮದಾಗಿತ್ತು. ಆದರೆ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮಡಿವಾಳ ಹಕ್ಕಿ(ಮ್ಯಾಗಿಫೈ ರಾಬಿನ್)ಯೊಂದು ನಮ್ಮಕಲ್ಪನೆಯನ್ನು ವಾಸ್ತವಕ್ಕಿಳಿಸಿ ಔದಾರ‍್ಯ ಮೆರೆಯಿತು! ಆ ಬೆಳಗು ರಟ್ಟಿನ ಪೆಟ್ಟಿಗೆಗೆ ನಾರು ತಂದು ಹಾಕುತ್ತಿದ್ದ ಮಡಿವಾಳವನ್ನು ಕಂಡು ಕನಸೊಂದನ್ನು ಎಡವಿ ಬಿದ್ದಂತೆ ನನಗೆ ಭಾಸವಾಯಿತು! ಮಗನಂತೂ ಹಕ್ಕಿಗಳಿಗೆ ತೊಂದರೆಯಾದೀತೆಂದು ಮೌನವಾಗಿಯೇ ಕುಣಿದು ಖುಷಿಪಟ್ಟ!  ಬದುಕಿನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಅನುಭವಕ್ಕೆ ತೆರೆದುಕೊಂಡ ಸಂಭ್ರಮ ನನ್ನದಾಗಿತ್ತು. ಹುಲುಮಾನವರಾದ ನಾವು  ಕೊಟ್ಟ ‘ಗೂಡನ್ನುʼಆಕಾಶಲೋಕದ ಕಿನ್ನರರಾದ ಹಕ್ಕಿಗಳು ಸ್ವೀಕರಿಸುವುದೆಂದರೆ ಏನು  ಕಮ್ಮಿಯಮಾತೇ ? ಈ ಪುಳಕವೇ ನನ್ನ ಮುಂದಿನ ದಿನಗಳಿಗೆ ಉತ್ಸಾಹದ ಅಮೃತವೆರೆಯಿತು. ಸಿಟೌಟ್‌ನಲ್ಲಿದ್ದ ಹಕ್ಕಿಗಳಿಗೆ ತೊಂದರೆಯಾಗದಂತೆ ಚೂರೂ ಶಬ್ದ ಮಾಡದೆ ಇಡೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದಿನಚರಿಯ ಭಾಗವಾಯಿತು. ಹಕ್ಕಿಜೋಡಿ ಬೇಕೆಂಬಷ್ಟು ನಾರನ್ನುತಂದು ಗೂಡಿನೊಳಗೊಂದು ಗೂಡು ಮಾಡಿದವು. ನಂತರ ಮೊಟ್ಟೆಯಿಟ್ಟದ್ದು, ಕಾವು ಕೊಟ್ಟದ್ದುಎಲ್ಲವನ್ನೂ ಅವುಗಳ ನಿಶ್ಯಬ್ದ ಚಲನವಲನದಿಂದ ತಿಳಿದುಕೊಂಡೆವು. ಕೆಲವೇ ದಿನದಲ್ಲಿ ಮರಿಯೊಡೆದು ‘ಚೀಂಚೀಂ’ ಎಂಬ ಕಂದಮ್ಮಗಳ ಸದ್ದು ಕೇಳಿಬಂದಾಗ ವ್ಯಕ್ತಪಡಿಸಲಾದ ಸಂತಸ, ಎನರ್ಜಿ ಮನೆಯನ್ನೆಲ್ಲ ತುಂಬಿಕೊಂಡಿತು. ದಿನದ ಕೆಲಸಗಳನ್ನು ಮುಗಿಸಿ ಕತ್ತಲ ನೀರವತೆಯಲ್ಲಿ ಸ್ವಲ್ಪ ಹೊತ್ತು ಕುಳಿತು ನಿಸರ್ಗದ ಸದ್ದುಗಳನ್ನು ಆಲಿಸುವುದು ನನ್ನ ನಿತ್ಯದ ಅಭ್ಯಾಸ. ಇಂಥಾ ಹೊತ್ತಿನಲ್ಲಿ ತಲೆ ಮೇಲೆಯೇ ಇರುತ್ತಿದ್ದ ಹಕ್ಕಿ ಸಂಸಾರದ ಮೆಲುಮಾತು, ಜೀವಂತಿಕೆ ನನ್ನನ್ನು ಹೊಸದೊಂದು ಬೆಚ್ಚನೆಯ ಲೋಕಕ್ಕೆ ಕರೆದೊಯ್ಯುತ್ತಿತ್ತು. ತುಸು ದಿನಗಳಲ್ಲಿ ಮರಿಗಳು ದೊಡ್ಡವಾಗಿ ಕೊನೆಗೊಮ್ಮೆ ಹಾರಿ ಹೋದದ್ದು ತಿಳಿದಾಗ ಸದ್ಯ;  ಎಲ್ಲವೂ ಸರಿಯಾಯಿತಲ್ಲ! ನಮ್ಮರಟ್ಟಿನ ಪೆಟ್ಟಿಗೆಯಿಂದ ಇಷ್ಟಾದರೂ ಸಹಾಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟೆವು. ಆದರೆ ಆ ರಟ್ಟಿನ ಪೆಟ್ಟಿಗೆಗೆ ಇನ್ನೂ ಹಲವು ಕರ್ತವ್ಯಗಳಿರಬಹುದೆಂದು ತಕ್ಷಣಕ್ಕೆ ನನಗೆ ಹೊಳೆದಿರಲಿಲ್ಲ. .      ಒಂದಷ್ಟು ದಿನ ಕಳೆದ ಅನಂತರ ಒಂದು ದಿನ ಮಡಿವಾಳ ಹಕ್ಕಿಯೊಂದು ಮತ್ತೆ ನಮ್ಮಗೂಡಿಗೆ ನಾರು-ಬೇರು ತಂದು ಹಾಕುತ್ತಿದ್ದುದ್ದನ್ನು ನೋಡಿದೆ! ಅರೇ, ಇದ್ಯಾವ ಹಕ್ಕಿ; ಒಮ್ಮೆಉಪಯೋಗವಾದ ಹಕ್ಕಿಗೂಡು ಮತ್ತೆ ವಾಸಯೋಗ್ಯವಲ್ಲ ಎಂಬುದು ಬಾಲ್ಯದಿಂದಲೂ ಕಂಡ ಹಾಗೆ, ಓದಿದ ಹಾಗೆ ನನ್ನ ತಿಳುವಳಿಕೆ! ಆದರಿಲ್ಲಿ ಆ ‘ಜ್ಞಾನ’ ಉಲ್ಟಾ ಹೊಡೆದಿತ್ತು!  ಹೌದು, ಪುನಃ ಇನ್ನೊಂದು ಹಕ್ಕಿ ನಮ್ಮರಟ್ಟಿನ ಪೆಟ್ಟಿಗೆಯನ್ನುತನ್ನ ಮನೆಯಾಗಿ ಸ್ವೀಕರಿಸಿತ್ತು. ಇದಂತೂ ಬಹಳ ಖುಷಿಯ, ಕುತೂಹಲದ ವಿಷಯ. ಎರಡು, ಮೂರು ದಿನ ತಿರುತಿರುಗಿ ಈ ವಿಷಯವನ್ನೇ ಮಾತಾಡಿದ್ದಾಯಿತು. ಆದರೆ ಅಷ್ಟರಲ್ಲಿ ನಮ್ಮ ಮನೆಯ ಓನರ್‌ ಅವರ ಒತ್ತಡ ಮಿತಿಮೀರಿ ‘ಮನೆ ಬಿಟ್ಟು ಹೊರಡಿ’ ಎಂಬ ಕೊನೆಯ ‘ವಾರ್ನಿಂಗ್’ ಹೊರಬಿದ್ದಿತು! ತಾವೇ ಬಂದು ಅಲ್ಲಿ ನೆಲೆಸುತ್ತೇವೆಂಬ ಅವರ ಮಾತಿಗೆ ನಮ್ಮಲ್ಲಿ ಬದಲಿರಲಿಲ್ಲ. ಆದರೆ ನನಗೆ ಇನ್ನೊಂದು ಮನೆ ಹುಡುಕುವ, ಸಾಮಾನು ಸರಂಜಾಮು ಸಾಗಿಸುವ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಎಲ್ಲ ಚಿಂತೆಗಳ ಮಧ್ಯೆ ಹಕ್ಕಿಗಳ ವ್ಯಥೆ ಎಡೆಬಿಡದೆ ಕಾಡುತ್ತಿತ್ತು. ವಿಧಿಯಿಲ್ಲದೆ ಮತ್ತೊಂದು ವಾರದಲ್ಲಿ ನಾವು ಮನೆ ಖಾಲಿ ಮಾಡಿದೆವು. ಕನಸಿನ ಗೂಡುಕಟ್ಟುತ್ತಿರುವ ಹಕ್ಕಿಗಳಿಗೇನು ಹೇಳುವುದು… ಹೊರಟ ಗಳಿಗೆ ಮನ ಭಾರವಾಗಿತ್ತು. ಆದರೆ ಗಟ್ಟಿಮನಸ್ಸು ಮಾಡಿ ನಾನೊಂದು ನಿರ್ಧಾರ ತೆಗೆದುಕೊಂಡೆ. ಮುಂದೆ ಆ ಮನೆಗೆ ಬರುವ ಯಾರೇ ಆದರೂ ಬಾಗಿಲಲ್ಲೇ ಇರುವ ರಟ್ಟಿನ ಪೆಟ್ಟಿಗೆಯನ್ನು ‘ಕಸ’ವೆಂದು ತಿಳಿದು ಆಚೆ ಎಸೆಯುವುದು ಖಾತ್ರಿಯಿತ್ತು. ಹಾಗಾಗಿ, ಐದಾರು ದಿನ ನಾರು ತಂದಿಟ್ಟ ಹಕ್ಕಿಗಳಲ್ಲಿ ಕ್ಷಮೆ ಬೇಡಿ, ನಡುಗುವ ಕೈಗಳಿಂದ ಗೂಡನ್ನು ಬಿಚ್ಚಿ ಜೋಪಾನವಾಗಿ ಹೊಸ ಮನೆಗೆ ಒಯ್ದೆ. ಮುಂದೆ ಕೇಳಿಸಬಹುದಾದ ಮೊಟ್ಟೆ ಮರಿಗಳ ಆಕ್ರಂದನಕ್ಕಿಂತ ಇದು ಉತ್ತಮವೆಂದು ನಾನು ಭಾವಿಸಿದೆ.      ನಮ್ಮʼಹೊಸʼ ಬಾಡಿಗೆಮನೆ ಹಳೆಯ ಮನೆಯೇ ಆದರೂ ನಿಸರ್ಗದ ಮಡಿಲಲ್ಲಿತ್ತು. ಇಲ್ಲಿಯೂ ಮನೆ ಮುಂದೆ ಕಂಬವೊಂದಿತ್ತು. ರಟ್ಟಿನ ಪೆಟ್ಟಿಗೆಯ ಹಕ್ಕಿಗೂಡನ್ನು ಬರೀ ನೆನಪಿಗೆಂದೇ ಬಿಚ್ಚಿಕೊಂಡು ಬಂದದ್ದು ಹೌದಾದರೂ ನೋಡೋಣವೆಂದು ಕಂಬಕ್ಕೆ ಕಟ್ಟಿ, ಮನೆ ಸಾಮಾನು ಜೋಡಿಸುವಲ್ಲಿ, ಶಾಲೆಯ ಕೆಲಸದಲ್ಲಿ ನಿರತಳಾದೆ. ಸುಮಾರು ತಿಂಗಳೊಂದು ಕಳೆದಿತ್ತು. ಒಂದು ದಿನ ವಿನ್ಯಾಸ್‌ ಕರೆದು ತೋರಿಸಿದ; ಇನ್ನೊಂದು ಮಡಿವಾಳ ಹಕ್ಕಿ ಜೋಡಿ ಅದೇ ಪ್ರೀತಿಯ ಗೂಡಿಗೆ ಮತ್ತೆ ನಾರು ತಂದು ಹಾಕುತ್ತಿತ್ತು. ಈ ಸಲವಂತೂ ನಾನು ಭಾವುಕಳಾದೆ. ಕಣ್ಣೀರು ಉಕ್ಕಿ ಮಣ್ಣಿಗೆ ಸೇರಿತು. ಹಕ್ಕಿಗಳು ಮರಿಗಳಿಗೆ ಬೆಚ್ಚನೆಯ ಹಾಸಿಗೆ ಮಾಡಿದವು; ಮೊಟ್ಟೆಯಿಟ್ಟವು, ಮರಿಗಳೂ ಒಡೆದವು. ಆ ಹೊತ್ತಿಗೆ ಬಿರುಬೇಸಗೆ ಕಳೆದು ಮಳೆಗಾಲ ಆರಂಭವಾಗಿತ್ತು. ಜೋರು ಗಾಳಿ ಮಳೆಗೆ ಸಿಬ್ರ್(ಎರಚಲು) ಬಡಿದು ಗೂಡು ಹಾಳಾಗುತ್ತದೇನೋ ಎಂಬ ಭಯ ಕಾಡಿತು. ಈಗಾಗಲೇ ಆ ಪೆಟ್ಟಿಗೆ ಚೂರು ಶಿಥಿಲವಾಗಿತ್ತು. ಆದರೆ ಒಳಗಡೆ ನಾರಿನ ಆಶ್ರಯವಿತ್ತು. ಹಕ್ಕಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದಿನಚರಿಯಲ್ಲಿ ಮೈಮರೆತಿದ್ದವು. ಈ ಸಂದರ್ಭದಲ್ಲೇ ಒಂದು ದಿನದ ಮಟ್ಟಿಗೆ ನಾವು ಹಾಲಾಡಿಗೆ ಹೋಗಬೇಕಾಯಿತು. ಆದರೆ ಹಾಗೆ ಹೋಗಿ ಬರುವುದರೊಳಗೆ ಇಲ್ಲಿ ನಮ್ಮ ಮೂಡಬಿದ್ರೆಯ ನಿಸರ್ಗದ ಮನೆಯಲ್ಲಿ ದೊಡ್ಡ ಅವಘಡವೇ ನಡೆದಿತ್ತು. ಏನಾಯಿತೋ ಗೊತ್ತಾಗಲಿಲ್ಲ ದೊಡ್ಡ ಹಕ್ಕಿಯ ದಾಳಿಯೋ, ಹಾವಿನ ಕಿತಾಪತಿಯೋ… ಮರಿಗಳು ಮಾಯವಾಗಿದ್ದವು! ಅಪ್ಪ-ಅಮ್ಮ ಹಕ್ಕಿಗಳು ಬಹುಶಃ ಹಾರಿಹೋಗಿದ್ದವು. ಇಂತಹ ನೋವುಗಳಿಗೆ ಪದಗಳಿಲ್ಲ. ಅಂತೂ ಹೇಗೋ ಎಲ್ಲವನ್ನೂ ಮರೆತು ಬದುಕಬೇಕೆಂಬ ಸೂತ್ರ ಅನುಸರಿಸಿ ಕುಂಟುವ ಮನಸ್ಸಿನೊಂದಿಗೆ ದಿನಕಳೆದ್ದಾಯಿತು.     ಎರಡು ಮೂರು ತಿಂಗಳ ನಂತರ ಒಂದು ದಿನ ಹಕ್ಕಿಗೂಡಿನೊಳಗೆ ದೊಡ್ಡದೊಡ್ಡ ಹುಲ್ಲಿನೆಳೆಗಳು ಕಂಡುಬಂದವು. ಇದನ್ಯಾರು ತಂದಿಟ್ಟರೆಂದು ತಿಳಿಯಲಿಲ್ಲ! ಆ ಸಂಜೆ ಹೊತ್ತು ಮನೆಯೆದುರು ಹುಲ್ಲು ಬೆಳೆದ ಜಾಗದಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನವರಲ್ಲಿ ಕೇಳಿದೆ; “ನೀವೇನಾದರೂ… ಹುಲ್ಲನ್ನು ಹಕ್ಕಿ ಗೂಡೊಳಗೆ ಹಾಕಿದ್ದೀರಾ?” ಎಂದು! ಏಕೆಂದರೆ ಯಾರೋ ಮನುಷ್ಯರೇ ತುಂಬಿಟ್ಟಂತೆ ಅಸಡಾ ಬಸಡಾ ಇತ್ತದು. ಇವರು ನಗಾಡಿದರು. “ನನಗೇನು  ಬೇರೆ ಕೆಲಸ ಇಲ್ವಾ?” ಎನ್ನುತ್ತಾ! ಹಾಗಾದರೆ ಇದ್ಯಾವುದೋ ಹೊಸ ಹಕ್ಕಿಯ ಕಾರುಬಾರೇ ಇರಬೇಕೆಂದು ಜ್ಞಾನೋದಯ ಹೊಂದಿ ಕಳ್ಳನನ್ನು ಕಂಡುಹಿಡಿಯಲು ಕಾದುಕೂತೆವು. ಅಂತೂ ಕಳ್ಳ ಬೇಗನೆ ಸಿಕ್ಕಿಹಾಕಿಕೊಂಡ; ಅದೊಂದು ‘ಮುನಿಯ’. ಭರದಿಂದ ಹುಲ್ಲನ್ನು ತಂದು ರಟ್ಟಿನ ಪೆಟ್ಟಿಗೆಯೊಳಗೆ  ಒಟ್ಟುತ್ತಿತ್ತು. ಇದಂತೂ ಭಯಂಕರ ಚಟುವಟಿಕೆಯ ಹಕ್ಕಿ. ಎಂಥಾ ಚುರುಕು, ಏನು ಕತೆ!  ನಿಜವಾಗಿಯೂ ಅದೃಷ್ಟಶಾಲಿ ರಟ್ಟಿನಪೆಟ್ಟಿಗೆ ಮತ್ತು ನಾವು. ಈ ಹಕ್ಕಿ ಜೋಡಿಯೂ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಿಗೆ ತುತ್ತುಣಿಸಿ, ದೊಡ್ಡ ಮಾಡಿ ಒಂದು ದಿನ ತೆರಳಿದವು. ಆದರೆ ಖಾಲಿಯಾದ ಗೂಡು ಹಾಗೇ ಉಳಿಯಲಿಲ್ಲ. ಮತ್ತೆ ಎರಡು ಮುನಿಯ ಹಕ್ಕಿಯ ಸಂಸಾರಗಳು ಬಂದವು. ಯಾವ ಅವಘಡಗಳಿಗೂ ತುತ್ತಾಗದೆ ನೆಮ್ಮದಿಯಿಂದ ಬದುಕಿ ಗೂಡನ್ನು ಖಾಲಿ ಮಾಡಿ ಹೊರಟುಹೋದವು. ಇಷ್ಟೆಲ್ಲಾ ಆಗುವಾಗ ಬಿರುಸಾದ ಮಳೆ ಮತ್ತು ಬಿಸಿಲಿಗೆ ಸ್ವಲ್ಪ ಭಾಗವನ್ನು ಒಡ್ಡಿಕೊಂಡಿದ್ದ ಗೂಡು ಮತ್ತಷ್ಟು ಶಿಥಿಲವಾಗಿತ್ತು. ಕೊನೆಯ ಸಲವಂತೂ ಇನ್ನೇನು ಕಳಚಿ ಬೀಳುತ್ತದೋ ಎಂಬಂತಾಯಿತು. ಆದರೆ ಒಳಗಡೆ ನಾರು, ಬೇರು, ಹುಲ್ಲಿನ ಬಲವಾದ ಮನೆಯೇ ಇದ್ದುದರಿಂದಲೋ ಏನೋ ಮುನಿಯಗಳು ಧೈರ‍್ಯವಾಗಿ ವಾಸಿಸಿದವು. ಲೆಕ್ಕ ಹಾಕಿದರೆ; ಕಾಲಾನುಕಾಲಕ್ಕೆ ಒಟ್ಟು ಆರು ಹಕ್ಕಿ ಸಂಸಾರಗಳು ನಮ್ಮ ಈ ಒಂದೇ ರಟ್ಟಿನ ಪೆಟ್ಟಿಗೆಯನ್ನು ತಮ್ಮಗೂಡಾಗಿ ಸ್ವೀಕರಿಸಿದ್ದವು! ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಇದೂ ಒಂದು. ಮುಗ್ಧ ಹಕ್ಕಿಗಳು ಮನುಷ್ಯರಾದ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸದ ಕುರುಹು ಇದೆಂದು ಭಾವಿಸಿ ಸದಾ ಕೃತಜ್ಞಳಾಗಿರುತ್ತೇನೆ. ಶಿಥಿಲವಾದ ಗೂಡನ್ನು ಬಿಚ್ಚಿ ನೆನಪಿಗೆಂದು ಇಟ್ಟುಕೊಂಡೆವು. ***     ಮುಂದೆ ಅನಿವಾರ‍್ಯ  ಪರಿಸ್ಥಿತಿಯಲ್ಲಿ ಪ್ಲಾಟೊಂದರಲ್ಲಿ ವಾಸಿಸಲು ಹೊರಟಾಗ ಅಲ್ಲಿಯೂ ಹಕ್ಕಿಗಳು ನಮ್ಮನ್ನು ಹಿಂಬಾಲಿಸಿ ಸಂಧಿಸುತ್ತವೆಂದು ನಾನು ಊಹಿಸಿರಲಿಲ್ಲ! ಆದರೆ ಮಣ್ಣಿನ ಸ್ಪರ್ಶ, ಮರಗಳ ಸೊಗಡು ಇಲ್ಲದ ಫ್ಲಾಟಿನ  ಮನೆಯಲ್ಲಿ ಸೂರಕ್ಕಿಗಳು ಬಂದು ದಿನಗಳನ್ನು ಹಗುರಗೊಳಿಸಿಬಿಟ್ಟವು! ಬಾಲ್ಕನಿಯಲ್ಲಿದ್ದ ಬಟ್ಟೆಯೊಣಗಿಸುವ ದಾರಕ್ಕೆ ಗೂಡು ಕಟ್ಟಿ ಮರಿಗಳನ್ನು ಪೊರೆದವು. ವಿಚಿತ್ರವೆಂದರೆ ಇಲ್ಲಿಯೂ ಕೂಡಾ ಖಾಲಿಯಾದ ಗೂಡು ತಿರಸ್ಕೃತಗೊಳ್ಳದೆ ಮತ್ತೆ ಮತ್ತೆ ಸೂರಕ್ಕಿಗಳು ಬಂದು ಅದರೊಳಗೆ ಹಾಸಿಗೆ ಮಾಡಿ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸಿಕೊಂಡು ಹೋದವು. ಹೀಗೆ ಒಂದು ವರ್ಷದಲ್ಲಿ ನಾಲ್ಕೈದು ಆವರ್ತನವಾದ ನಂತರ ಗೂಡು ಹರಿದು ಹೋಗಿ ಕಾಲು ಭಾಗ ಮಾತ್ರ ಉಳಿದುಕೊಂಡಿತು. ಆದರೂ ಬಿಡದೆ ಮತ್ತೊಂದು ಸೂರಕ್ಕಿ ಬಂದು ಅದೇ ಗೂಡನ್ನು ಪೂರ್ಣಗೊಳಿಸಿ ತನ್ನ ಜೊತೆಗಾತಿಯೊಂದಿಗೆ ಮರಿಗಳನ್ನು ಬೆಳೆಸಿ ಬಾನಿಗೆ ಹಾರಿಸಿತು! ಅಚ್ಚರಿಯೆಂದರೆ ನವೀಕರಣಗೊಂಡ ಈ ಹೊಸ ಗೂಡಿಗೆ ಮತ್ತೆ ಮತ್ತೆ ಹೊಸ ಜೋಡಿ ಬಂದು ಕುಟುಂಬ ಪೊರೆದವು. ನೀರವ ರಾತ್ರಿಗಳಲ್ಲಿ ಕಾವು ಕೊಡಲು ಗೂಡಿನಿಂದ ತಲೆ ಹೊರ ಹಾಕಿ ಕುಳಿತ ಹಕ್ಕಿ ಒಮ್ಮೆ ನನ್ನ ಮಗು ಎನಿಸಿದರೆ, ಇನ್ನೊಮ್ಮೆ ನಮ್ಮನ್ನು ಕಾಯುವ ನಿಸರ್ಗದ ಕಣ್ಣು ಅನ್ನಿಸುವುದು. ಇದಂತೂ  ನಾನು ಬರೆಯುವ ಕುರ್ಚಿಯಿಂದ, ನಿದ್ದೆ ಹೋಗುವ  ಮಂಚದಿಂದ ಬರೀ ಒಂದು  ಮಾರು ದೂರದಲ್ಲಿರುವ  ಗೂಡು. ಅಂದರೆ ಸೂರಕ್ಕಿ ಸಂಗಾತಿಗಳು ಸದಾ ನನ್ನ ಹತ್ತಿರ…..ತೀರಾ ಹತ್ತಿರ!     ಈ ನಡುವೆ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ನಮ್ಮ ‘ಹಕ್ಕಿಮನೆ’ಯಲ್ಲಿ ಪಿಕಳಾರ (ಬುಲ್ ಬುಲ್)ಗಳು ಅಂಗಳದ ಕ್ರೋಟನ್ ಗಿಡದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವಾದರೂ;  ಬೆಕ್ಕೋ, ಹಾವೋ ತಿಂದು ಹಾಕಿದ್ದರಿಂದ ವ್ಯರ್ಥವಾಗಿತ್ತು. ಬಹುಶಃ ರಟ್ಟಿನ ಪೆಟ್ಟಿಗೆಯನ್ನು ನಾವು ಕಂಬಕ್ಕೆ ಎತ್ತರದಲ್ಲಿ ಕಟ್ಟಿದ್ದು ಈ ದೃಷ್ಟಿಯಿಂದ ಬಹಳ ಸಹಾಯವಾಯಿತು ಮತ್ತು ಹಕ್ಕಿಗಳಿಗೂ ಮೆಚ್ಚುಗೆಯಾಯಿತೆಂದು ಕಾಣುತ್ತದೆ! ಇನ್ನು, ನಮ್ಮ ಫ್ಲಾಟಿನ ಗೋಡೆಗಳ ಸಂದುಗೊಂದುಗಳಲ್ಲಿ ಪಾರಿವಾಳದ ನೆಲೆ, ಅವುಗಳ ಗುಟರ್‌ಗುಟರ್ ಸಂಗೀತ ಸದಾ ಸೆಳೆಯುತ್ತದೆ. ಬಾಲ್ಕನಿಯಲ್ಲಿ ನೀರು, ಕಾಳು, ಬಾಳೆಹಣ್ಣು ಇಡುವ ವ್ಯವಸ್ಥೆ ಮಾಡಿದ್ದೇವೆ.

Read Post »

You cannot copy content of this page

Scroll to Top