ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆಯ ದಿನಕೊಂದು ಕವಿತೆ

ಸುಧಾಮನ ಮನೆಗೆ ಕೃಷ್ಣ ಬಂದಾಗ

ವಾಸುದೇವ ನಾಡಿಗ್

Kuchela, Lord Krishna's friend - Star of Mysore

ಇನ್ನೇನು

ಸುಧಾಮ
ಹೊರಡಬೇಕು ಮಣ್ಣ ಗಮಲಿನ
ಶಲ್ಯದಲಿ ಅವಲಕ್ಕಿಯ ಒತ್ತಿ ಸುತ್ತಿಕೊಂಡು
ಬಿರು ಬಿಸಿಲಿನ ಬೆವರು ನೆನೆಯದರಿಲಿ ಗಂಟು
ಹಿಮ್ಮಡಿಯ ಸೀಳು ನೆಲಕೆ ತಾಕಬೇಕು
ರಥ ಇಳಿದ ಮಾಧವ
ಹಣೆಯ ಬೆವರು ಸಿಡಿದು ಅಂಗಳವ
ತಂಪಾಗಿಸಿ
ಧಾವಿಸಿ ಬಂದ ರಥ ಗುಡಿಸಲಿಗೆ ತಂಗಾಳಿ
ತಾಕಿಸಿ
ಇಳಿದೇ ಬಿಟ್ಟ ನೋಡೀ ಮುರಳಿ ಮೋಹನ
ಕಾಡಿನಲಿ ಮೇಯುತ್ತಿದ್ದ ಗೋವುಗಳ
ಇತ್ತ  ತಿರುಗಿದಂತೆ ಕೊರಳ ಗಂಟೆ ಸದ್ದು
ಯಾರು ಬಂದರೋ ಬಾಗಿಲಲ್ಲಿ?

ತಬ್ಬಿಬ್ಬು ಮಕ್ಕಳು ಮಡದಿ ಗುಡಿಸಲು ಗರಿ
ಮುಟ್ಟಿ ನೋಡಿಕೊಂಡ ಸುಧಾಮ ಗಂಟನು
ನಕ್ಕಳು ಮಡದಿ‌ ಮಹಾಮಹಿಮನ ಕಂಡು
ಮಕ್ಕಳೆಲ್ಲ ಮುಟ್ಟಿ ಮುಟ್ಟಿ ನೋಡಿ
ಕೃಷ್ಣನ ಕಾಲು ತೋಳು ಕಿರೀಟ ಗರಿ
ಕೊಳಲು ಕೊರಳ ಹಾರ ಎದೆಕವಚ
ಸವರಿದವು ಕೊಳಲ ಮೈಯ.
ಯಾರಿವನು ತಂದೆ?
ಯಾರ ತಂದೆ?
ಏನ ತಂದೆ?
ರಥದ ತುಂಬಾ ಏನಿದೆ? ತಿನಿಸು ಉಡುಪು
ಆಟಿಕೆ ಕೊಡುಗೆ ನಾಳಿನ ಕನಸ ಕಂಪು
ಸುಧಾಮನ ಕಣ್ಣಲಿ ಕೊಳ
ಕಕ್ಕಾಬಿಕ್ಕಿ ಬೆಳಕ ಹಂಸ ಮಂಜು
ರಥವ ತುಂಬಿದ ಸಿರಿವಂತಿಕೆ
ಸೆರಗ ಗಂಟಿನ ಬಡತನ ಮಾತಿಗೆ ಇಳಿದವು

ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ

*********************************************

About The Author

2 thoughts on “ವಾಸುದೇವ ನಾಡಿಗ್ ವಿಶೇಷ ಕವಿತೆ”

  1. Mamathashankar

    ಕವಿತೆಯನ್ನೇ ತುಂಬಿಕೊಂಡ ಕೊನೆಯ ಎರಡು ಸಾಲುಗಳು….ಬಹಳ ವಿಶೇಷ ಧನ್ಯವಾದಗಳು ಸರ್

  2. ವೀಣಾ ನಿರಂಜನ

    ವಿಶೇಷ ಕವಿತೆ ನಿಜಕ್ಕೂ ವಿಶೇಷವಾಗಿದೆ ಸರ್. ಅಭಿನಂದನೆಗಳು

Leave a Reply

You cannot copy content of this page

Scroll to Top