ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರಕೃತಿ

ಕವಿತೆ ಪ್ರಕೃತಿ ಭಾಗ್ಯ ಸಿ ಮನುಜ ಜೀವನದ ಅವಿಭಾಜ್ಯ ಅಂಗ ಪ್ರಕೃತಿಜತನದಲಿ ಕಾಪಾಡಿಕೊಳ್ಳುವುದಾಗಬೇಕು ನಮ್ಮ ಪ್ರವೃತ್ತಿಗಾಳಿ,ಬೆಳಕು,ನೀರು ಎಲ್ಲಾ ಪ್ರಕೃತಿಯ ಒಡಲಲಿ ನಗುತಿರೆಮನುಜನ ಜೀವನವು ವಜ್ರದಂತೆ ಹೊಳೆಯುತ್ತಿರೆ ವಿಪರೀತ ಬಯಕೆಗೆ ಪರಿಸರ ಬಲಿಪ್ರಾಣಿ ಪಕ್ಷಿಗಳ ಆಸರೆಗಿಟ್ಟ ಕೊಡಲಿಸಣ್ಣ ಮಳೆಗೂ ಕುಸಿಯುತ್ತಿದೆ ಬೆಟ್ಟ ಗುಡ್ಡಜಲಪ್ರಳಯ, ಚಂಡಮಾರುತ ಸೀಳಿದೆ ಅಡ್ಡಡ್ಡ ಬಳಲಿಕೆ ನಿವಾರಣೆಗೆ ಬೇಕು ನೀರುಪಂಚಭೂತಗಳ ನಿರ್ವಹಣೆ ಹೊತ್ತವರಾರುಪ್ರಕೃತಿಯ ಒಡಲ ಸೀಳಿ ತಲೆಯೆತ್ತಿವೆ ಕಟ್ಟಡಗಳುಅವೈಜ್ಞಾನದ ಫಲವಾಗಿ ಉರುಳುತ್ತಿವೆ ತಲೆಗಳು ಅಪ್ಪಿಕೋ ಚಳುವಳಿಯ ರೂವಾರಿ ತಾಯಿಹದಿನೇಳನೆ ಶತಮಾನದ ಅಮೃತಾದೇವಿ ಬಿಷ್ಣೋಯಿಅಧಿಕಾರವಲ್ಲ ಅಸ್ತಿತ್ವವಿದೆ ನಮಗೆ ಪ್ರಕೃತಿಯೊಂದಿಗೆಸಂದೇಶ ಬಿಟ್ಟಿದ್ದಾರೆ ಪ್ರಾಣ ತ್ಯಾಗದೊಂದಿಗೆ ಅರಿಯಬೇಕಿದೆ ಜೋಧಪುರದ ಹೆಣ್ಣು ಮಗಳ ಕಾಳಜಿಯನ್ನುವ್ಯರ್ಥವಾಗಲು ಬಿಡಬಾರದು ಬಿಷ್ಣೋಯಿ ಜನರ ತ್ಯಾಗವನ್ನುಓ ವಿಶ್ವ ಮಾನವರೆ ಸಿದ್ದರಾಗಿ ಪೋಷಿಸಲು ನೀವಿನ್ನುಸೃಷ್ಠಿಯ ವಿಶೇಷವಾದ ಚರಾಚರ ಚೈತನ್ಯವನ್ನು **********************************************************

ಪ್ರಕೃತಿ Read Post »

ಕಾವ್ಯಯಾನ

ನಕ್ಷತ್ರ ನೆಲಹಾಸು

ಕವಿತೆ ನಕ್ಷತ್ರ ನೆಲಹಾಸು ಸ್ವಭಾವ ಕೋಳಗುಂದ ನಕ್ಷತ್ರಗಳ ಹಾದಿಗುಂಟ ಹಾಸಿಸಿಂಗರಿಸಿ ನಿನ್ನ ಕೊಳಲ ಪಾದನೆನಪಿನೆದೆಯ ತುಳಿಯಲಾಶಿಸಿದೆ ಅರ್ಧ ಕತ್ತಲಲಿ ಎದ್ದು ಹೊರಟುನಿನ್ನ ತಬ್ಬಲಿ ಮಾಡಿನಾ ಬುದ್ಧನಾಗಲಾರೆ ಈ ಹಾದಿಗಳೆಲ್ಲಾಎಷ್ಟೊಂದು ಆಮಿಷ ಒಡ್ಡುತ್ತಿವೆಹೃದಯ ಬಂಧಿಯ ಮುಕ್ತಿಗಾಗಿ ನನ್ನೊಳಗಿನ ಸೀತಾಮೀನ ಮೊಟ್ಟೆಯ ಕಾವಲಲಿಸಾವಿರ ಸಂತತಿಯ ಬೆಳಕು ನನ್ನ ಅಸ್ತಿತ್ವದ ಬಿಂದುವಿಗೆನಿನ್ನೊಲವಿನ ಮೊಲೆಹಾಲ ಸ್ಪುರಣಭರವಸೆಯ ಮುತ್ತ ಮಣಿಹಾರ ಹಿಮ ಮಣಿಯ ಮರಳಿನಮರೀಚಿಕೆಯ ಸಾಗರಪಾರಿಜಾತದ ಪರಿಮಳದ ಸಂದೇಶ ಹನಿ ಬೀಜಕ್ಕೆ ಸಾವಿರ ಸಂತಾನನೆಲದ ನಾಲಗೆಯಲಿಸಾವಿನ ಸಂಚಾರಿ ಹಸಿ ಮಣ್ಣ ಮೈಯೊಳಗೆಕನಸ ಕಲ್ಪನೆಯ ಕೂಸುಬಿತ್ತಿ ನಡೆದು ಬಿಡು ನಕ್ಷತ್ರದ ನೆಲಹಾಸು *********************

ನಕ್ಷತ್ರ ನೆಲಹಾಸು Read Post »

ಇತರೆ, ಜೀವನ

ಹೀಗೇಕೆ ನನ್ನವ್ವ ?

ಲೇಖನ ಹೀಗೇಕೆ ನನ್ನವ್ವ ? ಸುಮಾ ಆನಂದರಾವ್       ಇಂದೇಕೆ ನನ್ನವ್ವ ಪದೇ ಪದೇ ನೆನಪಾಗುತ್ತಿದ್ದಾಳೆ? ಅವಳೇಕೆ ಹಾಗಿದ್ದಳು?                  ಜೆರ್ಮನಿಯಲ್ಲಿ  ಒಬ್ಬ  ವಯೋ ವೃದ್ಧೆಯ ಪರಿಚಯವಾದಂದಿನಿಂದ ಗಮನಿಸುತ್ತಿದ್ದೇನೆ.  ಅವಳ ದಿಟ್ಟತನ ಅಚ್ಚರಿ ಉಂಟುಮಾಡುತ್ತಿದೆ. ಅವಳು ತನ್ನೆಲ್ಲಾ  ಕರ್ತವ್ಯ ಮುಗಿಸಿದ್ದಳು, ಮಕ್ಕಳನ್ನು ಓದಿಸಿ ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡಿದ್ದಾಳೆ. ಆಗಾಗ ಮಕ್ಕಳು ಬಂದು ಹೋಗುತ್ತಿರುತ್ತಾರೆ. ತೊಂಬತ್ತು ವರ್ಷಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾಳೆ, ಕೈಯಲ್ಲಿ ಕೋಲು  ಹಿಡಿದು ಸಣ್ಣ ನೂಕುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ತರುತ್ತಾಳೆ, ಇಲ್ಲಿ ಬಹಳಷ್ಟು ವಯಸ್ಸಾದವರು ನಡೆದೇ ಹೋಗುತ್ತಿರುತ್ತಾರೆ. ಅವರೆಲ್ಲರೂ ಬೈಸಿಕಲ್ ತುಳಿಯುವ ಪರಿ ನೋಡಿದರೆ ಗೊತ್ತಾಗುತ್ತದೆ ,  ಇದೆಲ್ಲ ಅವರಿಗೆ ಚಿಕ್ಕಂದಿನ ಅಭ್ಯಾಸ ಎಂದು. ಮೊಮ್ಮಕ್ಕಳನ್ನು ಅಜ್ಜ ಅಜ್ಜಿಯರು ಸುತ್ತಾಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ವಿಷಯಗಳನ್ನು ತಿಳಿಸುವ ಪರಿ ಬೆರಗು ಮೂಡಿಸುತ್ತದೆ. ಇಲ್ಲಿಯ ಸರಕಾರ ನಿವೃತ್ತಿ ವೇತನ ಕೈತುಂಬ ಕೊಡುತ್ತಾರೆ, ಅಂತೇಲೆವಯಸ್ಸಾದವರು  ಕಣ್ಣಗೆ ಕಂಡ ಬಟ್ಟೆ ತೊಟ್ಟು ಸಂತಸದಿಂದ ಉತ್ಸಾಹವಾದ ಜೀವನ ನಡೆಸುತ್ತಾರೆ. ಅವರಲ್ಲೂ ಮಮಕಾರಗಳು, ಅನುಬಂಧಗಳಿವೆ. ಮಕ್ಕಳು ಮೊಮ್ಮಕ್ಕಳು, ಅಕ್ಕ ತಂಗಿ ಹೀಗೆ ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದು ತಿಳಿದದ್ದು ಆ ಜರ್ಮನ್ ಮಹಿಳೆಯಿಂದ. ಆಕೆಗೆ ಬದುಕನ್ನು ಎದುರಿಸುವ ರೀತಿಯನ್ನು ಅವರಮ್ಮ ” ಕ್ರಿಸ್ಟಿನಾ”  ಹೇಳಿಕೊಟ್ಟಳಂತೆ.               ” ಕ್ರಿಸ್ಟಿನಾ” ಆಕೆಯ ಫೋಟೋ ನೋಡಿದಾಗ ತಟ್ಟನೆ ನನಗೆ ನನ್ನವ್ವ ನೆನಪಾದಳು. ಈಗ್ಗೆ ಆಕೆ ಇದ್ದರೆ ೧೩೦ ವರ್ಷ. ಬಹುಶಃ ನನ್ನವ್ವನ ಆಸುಪಾಸಿನವಳೇ. ಕ್ರಿಸ್ಟಿನಾ ಎಷ್ಟು ಚೆಂದ ಇದ್ದಾಳೆ! ಆಧುನಿಕ ಮಹಿಳೆಯಂತೆ ಅಲಂಕಾರ! ವಿದ್ಯಾವಂತಳು, ವಿಜ್ಜ್ನಾನಿ,  ಸಬಲೆ. ಇಲ್ಲಿ ಹೆಣ್ಣುಮಕ್ಕಳಿಗೆ ಶತ ಶತಮಾನಗಳಿಂದಲೂ ಸಮಾನತೆ, ಸ್ವತಂತ್ರತೆಯ ಹಕ್ಕು ಇತ್ತು. ಆದರೆ ನನ್ನವ್ವ ಏಕೆ ಹಾಗಿದ್ದಳು?               ಅವ್ವ ಎಂದರೆ ನಮ್ಮ ತಂದೆಯ ತಾಯಿ ಹನುಮಕ್ಕ. ಅವಳದು ನಾಗಸಮುದ್ರ ತವರು ಮನೆ, ಗಂಡನ ಮನೆ ಸಂಡೂರು ತಾಲೂಕಿನ ಬಂಡ್ರಿ . ಆಕೆಗೆ ಐದು ಗಂಡುಮಕ್ಕಳು ಎರೆಡು ಹೆಣ್ಣು ಮಕ್ಕಳು. ತುಂಬು ಕುಟುಂಬ, ಗಂಡ ಶಾನುಭೋಗರು ರಾಘಪ್ಪ ದತ್ತು ಪುತ್ರ. ಆತನ ಅಜ್ಜಿಪುಟ್ಟಮ್ಮ ಮಗಳ ಮಗ ಅಂದರೆ  ಮೊಮ್ಮಗನನ್ನು ತನ್ನ ಸಮಸ್ತ ಆಸ್ತಿಗೂ ವಾರಸುದಾರನನ್ನಾಗಿ ಮಾಡಿದ್ದಳು.               ನನ್ನವ್ವ ಹನುಮಕ್ಕನಿಗೆ  ಕೊನೆಯ ಮಗ ನಮ್ಮಪ್ಪ.  ಹಾಗಾಗಿ ಅವ್ವನಿಗೆ ವಯಸ್ಸಾಗಿತ್ತು. ನಾನು ಹನ್ನೆರೆಡು ವಯಸ್ಸಿಗೆ ಬರುವವರೆಗೂ ಮಾತ್ರ ಇದ್ದಳು. ತಂಗಿ ತಮ್ಮಂದಿರು ಹುಟ್ಟುವವರೆಗೂ ಅವ್ವನೇ ಗೆಳತಿ. ನನ್ನಮ್ಮ , ಅವ್ವನಿಗೆ ತಮ್ಮನ ಮಗಳು ಸೋದರ ಸೊಸೆಯನ್ನೇ ಮಗನಿಗೆ ತಂದುಕೊಂಡಿದ್ದಳು. ಅವ್ವ  ಒಳ್ಳೆಯ ಬಣ್ಣ. ಉದ್ದನೆಯ ಮೂಗು, ಪುಟ್ಟ ಬಾಯಿ  ನಿಜಕ್ಕೂ ಸುಂದರಿ. ಆದರೆ ಮಡಿ ಹೆಂಗಸು. ಅಂತಹವರು ಉಡುವ ಸೀರೆಗಳು ಬೇರೆ ರೀತಿಯೇ ಇರುತ್ತಿದ್ದವು . ಯಾವಾಗಲು ಸೆರಗು ಹೊದ್ದು ತಲೆ ಮುಚ್ಚಿಕೊಂಡಿರುತ್ತಿದ್ದಳು .  ನಾನು ಅವ್ವನ ಪಕ್ಕ ಮಲಗುತ್ತಿದ್ದೆ ರಾತ್ರಿ ಹೊತ್ತು ಅವಳನ್ನು ಹತ್ತಿರದಿಂದ ನೋಡಿ ನನ್ನ ಮುಗ್ದ ಮನಸ್ಸಿಗೆ ನೂರಾರು ಯೋಚನೆ ಬರುತ್ತಿತ್ತು. ಅವ್ವನೇಕೆ ಎಲ್ಲರಹಾಗಿಲ್ಲ?               ಅವಳ ಆ ವಿರೂಪವು ಪ್ರಶ್ನಾರ್ಥಕ ಚಿನ್ಹೆ ಯಾಗಿರುತ್ತಿತ್ತು. ಒಂದೊಮ್ಮೆ ನಾನು ”ಅವ್ವ ನೀ ಹೀಗೇಕೆ? ಎಲ್ಲರಂತೇಕಿಲ್ಲ? ಎಂದಾಗ ಏನು ಹೇಳದೆ ಕಣ್ಣ ತುಂಬ ನೀರು ತುಂಬಿದಳು. ಅದೆಷ್ಟು ನೋವನುಂಗಿದ್ದಳೋ ಕಣ್ಣೀರನ್ನು ಹೊರಗೆ ಬಿಡದೆ ತಡೆಯುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅವ್ವನ ಮೇಲೆ ಅಪಾರ ಪ್ರೀತಿ. ಪ್ರತಿದಿನ ರಾತ್ರಿ ನನ್ನ  ತಲೆಸವರುತ್ತಾ ಬಂಡ್ರಿ  ಕತೆಯನ್ನೆಲ್ಲ ಹೇಳುತ್ತಿದ್ದಳು.               ಬಂಡ್ರಿಯ ಜಮೀನ್ದಾರ  ಸಾಹುಕಾರ ರಾಗಪ್ಪನಿಗೆ ತನ್ನಪ್ಪ ತನ್ನನ್ನು ಮದುವೆ  ಮಾಡಿ ಕೊಟ್ಟಿದ್ದು, ಅಜ್ಜಿ ಮೊಮ್ಮಗ ಇಬ್ಬರೇ ಇದ್ದ ಆ ಮನೆಗೆ ತಾನು ಕಾಲಿಟ್ಟಿದ್ದು, ಆ ಸಿರಿವಂತಿಕೆ, ಮರ್ಯಾದೆ ಎಲ್ಲವನ್ನು ಕಂಡು ಕೊನೆ ಕಾಲಕ್ಕೆ  ಊರಿನ ವ್ಯಾಜ್ಯದಲ್ಲಿ ಮುಗ್ದ ರಾಗಪ್ಪನ ಕರಗಿದ ಆಸ್ತಿ  ಎಲ್ಲವನ್ನು ಸಹಿಸಿ  ಗಟ್ಟಿಯಾದ ಬಂಡೆಯಂತಾಗಿದ್ದಳು ನನ್ನವ್ವ.               ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಐದು ಗಂಡುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ ಚತುರೆ ಅವ್ವ. ಊರಲ್ಲಿ ನಡೆಯುವ ಯಾವ ಕಲುಷಿತ ಗಾಳಿ ತನ್ನ ಮಕ್ಕಳ ಮೇಲೆ ಬೀಳದಂತೆ ತಡೆದು ಅವರನ್ನೆಲ್ಲ ಉಚ್ಛ ಹುದ್ದೆಗೆ ಸೇರಿಸಿದ ಧೈರ್ಯ ಮೆಚ್ಚಲೇಬೇಕು.               ತಾತ ತುಂಬಾ ಮೆದುಸ್ವಭಾವದವರಂತೆ ನಾನು ನೋಡಿರಲಿಲ್ಲ. ನನ್ನಪ್ಪನಿಗೆ ಕೆಲಸ ಸಿಕ್ಕ ಸಂತಸವನ್ನು ಊರೆಲ್ಲ ಹಂಚಿ  ಅಂದೇ ಇಹಲೋಕ ತ್ಯೆಜಿಸಿದರಂತೆ.  ಮಕ್ಕಳಿಗೆ ಹಾಸಿಗೆ ಇದ್ದುದರಲ್ಲಿ ಕಾಲು ಚಾಚು ರೀತಿ ಹೇಳಿಕೊಟ್ಟಿದ್ದು ಅವ್ವ. ಐದು ಜನರು ಒಳ್ಳೆಯ ಹುದ್ದೆಯಲ್ಲಿದ್ದರು. ಅವರ ವಿದ್ಯೆಯೇ ಅವರಿಗೆ ದಾರಿದೀಪವಾಗಿತ್ತು. ಅವ್ವ ಒಂದು ಮಾತು ಹೇಳುತ್ತಾ ಇದ್ದಳು “ಆಸ್ತಿ ಯಾವತ್ತೂ ಶಾಶ್ವತ  ಅಲ್ಲ ವಿದ್ಯೆ ಯಾವತ್ತೂ ಯಾರು ಕಸಿದುಕೊಳ್ಳದ ಆಸ್ತಿ”. ಅವ್ವನಿಗೆ ಆ ಊರು ಅಲ್ಲಿಯ ವ್ಯಾಜ್ಯಗಳು ಎಷ್ಟೊಂದು ಹೈರಾಣಗೊಳಿಸಿತ್ತೆಂದರೆ ತನ್ನ ಮಕ್ಕಳು ಯಾರು ಅಲ್ಲಿ ನೆಲೆಸಿಲ್ಲ ಎಂದು ಯಾವತ್ತೂ  ಕೊರಗುತ್ತಿರಲಿಲ್ಲ. ಬದಲಿಗೆ ಐದು ಜನರು ತಮ್ಮ ಕಾಲ ಮೇಲೆತಾವು ನಿಂತು ಅಚ್ಚುಕಟ್ಟಾಗಿ ಸಂಸಾರ ನಡೆಸುವುದ ಕಂಡು ಹೆಮ್ಮೆಪಟ್ಟುಕೊಳ್ಳುತ್ತಿದ್ದಳು.               ನಾಗಸಮುದ್ರದಿಂದ ನನ್ನವ್ವನ ತಮ್ಮ , ನನ್ನ ಅಮ್ಮನ ತಂದೆ  ತಾತ ಬಂದರೆ ಅಕ್ಕ ತಮ್ಮನ ಮಾತಿನ ಧಾಟಿ, ಉಭಯಕುಶಲೋಪರೀ, ಮಕ್ಕಳ ಬಳಿ ಹೇಳಲಾಗದ್ದನ್ನು ತಮ್ಮನ ಬಳಿ ಹೇಳುವುದು, ತಾತನೋ ಮಗಳು ಮೊಮ್ಮಕ್ಕಳ ಜೊತೆ ಅಕ್ಕನಿಗೂ ತವರು ಮನೆಗೆ ಕರೆದೊಯ್ಯುವುದು ಎಷ್ಟು ಚೆಂದ ಇತ್ತು! ತಾತನ ಪ್ರಭಾವ ಎಷ್ಟಿತ್ತೆಂದರೆ ಅಪ್ಪ ದೊಡ್ಡಪ್ಪಂದಿರೆಲ್ಲ ಅವ್ರಮ್ಮನನ್ನು ತಾತ ಕರೆದಂತೆ ತಾವು ಅಕ್ಕ ಅಂತೇಲೇ ಕರೆಯುತ್ತಿದ್ದರು.               ” ನನ್ನಕ್ಕ ತೆಳ್ಳಗೆ ಬೆಳ್ಳಗೆ ಹಣೆತುಂಬಾ ಕುಂಕುಮ ಇಟ್ಟು, ಜಡೆಹೆಣೆದ ಕೂದಲನ್ನು ತುರುಬು ಕಟ್ಟಿ, ಸಿಹಿ ನೀರ ಬಾವಿಯಿಂದ ತಲೆ ಮೇಲೊಂದು ಕೊಡ ಕೈಯ್ಯಲ್ಲೊಂದು ಕೊಡ ಹಿಡಿದು ಬರುತ್ತಿದ್ದಳು, ಆಗ ಎಷ್ಟು ಗಟ್ಟಿಮುಟ್ಟಾಗಿದ್ದಳು ಬಹಳ ಸುಂದರಿ ” ಎಂದು ತಮ್ಮ ಹೇಳುತ್ತಿದ್ದರೆ ನನ್ನವ್ವ ವಿಷಾದದ ನಗೆ ಬೀರುತ್ತಿದ್ದಳು. ಆ ನಗೆಯ ಹಿಂದೆ ಅದೆಷ್ಟು ನೋವಿತ್ತೋ               ಅವ್ವನಿಗೆ ಯಾರು ಹಾಗಿರಲು ಒತ್ತಾಯಮಾಡಿರಲಿಲ್ಲ, ಅಂದಿನ ಸಮಾಜಕ್ಕೆ ಹೆದರಿಯೋ ತನ್ನ ಗೆಳತಿಯರು ಅಕ್ಕತಂಗಿಯರಂತೆ  ತಾನಿರಬೇಕೆಂಬ ಭ್ರಮೆಯೋ ಒಟ್ಟಿನಲ್ಲಿ ವಿರೂಪಿಯಾಗಿದ್ದಳು.               ಇಂದು ಕ್ರಿಸ್ಟಿನಾಳ ಫೋಟೋ ನೋಡಿದಾಗಿಂದ ಮನದಲ್ಲೇನೋ ಹೊಯ್ದಾಟ. ನನ್ನವ್ವನಲ್ಲೂ ಅವಳಷ್ಟೇ ದಿಟ್ಟತನ, ಮಕ್ಕಳನ್ನು  ಸನ್ಮಾರ್ಗದಿ ಬೆಳೆಸುವ ಅಗಾಧ ಶಕ್ತಿ,ಕಷ್ಟಗಳನ್ನು ಸಹಿಸಿ ಕುಟುಂಬವನ್ನು ಮೇರು ಮಟ್ಟಕ್ಕೆ ತರುವಛಲ ಇವೆಲ್ಲ ಗಮನಿಸಿದಾಗ  ಅವಳೊಬ್ಬ ಕೌಟುಂಬಿಕ ವಿಜ್ಜ್ಞಾನಿಯಾಗಿದ್ದಳಲ್ಲವೇ ? ಮತ್ತೇಕೆ ಅವಳಿಗೆ ಆ ವಿರೂಪ?  ಅದು ಅವಳಿಗೆ ಹಿಡಿದ ಗ್ರಹಣವೇ?  ಗ್ರಹಣವಾಗಿದ್ದರೆ ಬಿಡಬೇಕಿತ್ತಲ್ಲವೇ? ಇಲ್ಲ ಅದು ಶಾಪ ಹೌದು ನನ್ನವ್ವ ಶಾಪಗ್ರಸ್ತೆ. ******************************************

ಹೀಗೇಕೆ ನನ್ನವ್ವ ? Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಅಲೆಯ ಮೊರೆತ ಅಲೆಯ ಮೊರೆತ( ಕಾದಂಬರಿ)ತಮಿಳು ಮೂಲ : ಕಲ್ಕಿಅನುವಾದ : ಶಶಿಕಲಾ ರಾಜಪ್ರ : ಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೪೨೦ಪುಟಗಳು : ೬೯೨ ವಾಸ್ತವವಾದಿ ಶೈಲಿಯಲ್ಲಿರುವ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯನ್ನು ವಸ್ತುವಾಗಿ ಹೊಂದಿದ್ದರೂ  ಭಾರತಕ್ಕೆ ಸ್ವಾತಂತ್ರ್ಯ   ಸಿಗುವ ಮೊದಲು ನಡೆದ ಎಲ್ಲ ಸಂಗತಿಗಳನ್ನೂ ಐತಿಹಾಸಿಕ ಸತ್ಯಗಳೊಂದಿಗೆ ಯಥಾವತ್ತಾಗಿ ನಿರೂಪಿಸುತ್ತದೆ.         ಪಟ್ಟಾಮಣಿಯಮ್ ಕಿಟ್ಟಾವಯ್ಯರ್, ಸರಸ್ವತಿ ಅಮ್ಮಾಳ್, ಪದ್ಮಾಚಲ ಶಾಸ್ತಿç ಅಯ್ಯರ್, ಕಾಮಾಕ್ಷಿ ಅಮ್ಮಾಳ್, ದೊರೆಸ್ವಾಮಿ ಅಯ್ಯರ್, ರಾಜಮ್ಮ, ಲಲಿತಾ, ಸೀತಾ, ಸೌಂದರ್ ರಾಜನ್, ಸೂರ್ಯ, ಪಟ್ಟಾಭಿರಾಮನ್, ಧಾರಿಣಿ, ಅಮರನಾಥ, ಚಿತ್ರಾ ಮೊದಲಾದವು ಇಲ್ಲಿ ಎದ್ದು ಕಾಣುವ ಪಾತ್ರಗಳು. ಇವರೆಲ್ಲರ ವೈಯಕ್ತಿಕ ಹಾಗೂ  ಕೌಟುಂಬಿಕ ಬದುಕಿನ ವಿವರಗಳು , ಗ್ರಾಮೀಣ ಹಾಗೂ ನಗರ ಬದುಕಿನ  ಚಿತ್ರಗಳು, ಸ್ವಾತಂತ್ರ್ಯ  ಹೋರಾಟ, ಬಿಳಿಯರ ಸರಕಾರದ ಆಡಳಿತ ವೃತ್ತಾಂತಗಳು, ಕಾಂಗ್ರೆಸ್ ಮತ್ತು ಸೋಷಲಿಸ್ಟ್  ಸಂಘಟನೆಗಳು ನಡೆಸಿದ ಹೋರಾಟದ ಚಿತ್ರಗಳು ಇಲ್ಲಿವೆ.  ಸರಕಾರದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಕ್ರಾಂತಿವೀರ ಯುವಕರು ರಹಸ್ಯವಾಗಿ ನಡೆಸುವ ಸಿದ್ಧತೆಗಳು, ಅವರನ್ನು ಬಂಧಿಸಲು ಪೋಲಿಸರು ನಡೆಸುವ ಪ್ರಯತ್ನಗಳು,  ಬಂಧನ, ಜೈಲುವಾಸ, ಕೈದಿಗಳು ತಪ್ಪಿಸಿಕೊಳ್ಳಲು ಮಾಡುವ ಒದ್ದಾಟಗಳ ಚಿತ್ರಣಗಳಿವೆ.  ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಾನೀಯ ರಾಜರುಗಳು ತಮ್ಮ ತಮ್ಮೊಳಗೆ ಕಾದಾಡಿ ಹೊರಗಿನಿಂದ ಮುಸಲ್ಮಾನರೂ ಆಂಗ್ಲರೂ ಬಂದು ಇಲ್ಲಿ ನೆಲೆಯೂರಲು ಕಾರಣರಾದದ್ದು ಹೇಗೆ ಎಂಬ ಬಗ್ಗೆ ಚರ್ಚೆಗಳಿವೆ.  ಮುಸಲ್ಮಾನರ ಆಕ್ರಮಣ, ಆಡಳಿತ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಿ ಅವರು ಮಸೀದಿಗಳನ್ನು ಸ್ಥಾಪಿಸಿದ್ದು, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ತಮ್ಮ ಜನಾನಾದಲ್ಲಿರಿಸಿಕೊಂಡದ್ದು, ಬಲಾತ್ಕಾರವಾಗಿ ಮತಾಂತರಗೊಳಿಸಿದ ವಿವರಗಳಿವೆ.  ಇವೆಲ್ಲದರ ಜತೆಗೆ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಬಂಧಮುಕ್ತಗೊಳಿಸಲು ಉಪವಾಸ ಸತ್ಯಾಗ್ರಹ-ಅಹಿಂಸಾ ವ್ರತಗಳ ಮೂಲಕ ಹೋರಾಟ ನಡೆಸಿದ ಗಾಂಧೀಜಿಯವರ ಬಗ್ಗೆ ಇಲ್ಲಿ ಕೆಲವು ಪಾತ್ರಗಳಿಗೆ ಅಪಾರವಾದ ಭಕ್ತ-ಗೌರವಗಳಿದ್ದರೆ ಇನ್ನು ಕೆಲವು ಪಾತ್ರಗಳಿಗೆ ಅವರಿಂದಾಗಿಯೇ ಭಾರತವು ಎರಡು ಹೋಳಾಗಿ ಬಿಟ್ಟಿತು ಎಂಬ ಅಸಮಾಧಾನ ವ್ಯಕ್ತವಾಗಿದೆ.  ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ  ಮುಸಲ್ಮಾನರು ಪ್ರತ್ಯೇಕ ರಾಜ್ಯ ಬೇಕೆಂದು ಕೂಗಿದಾಗ  ಗಾಂಧೀಜಿಯವರು ಅವರನ್ನು ತಡೆಯಲಿಲ್ಲ, ಮತ್ತು ಪಾಕಿಸ್ತಾನದಲ್ಲಿ  ಹಿಂದೂಗಳ ಮೇಲೆ ದೌರ್ಜನ್ಯ ನಡೆದು ಲಕ್ಷ ಲಕ್ಷ ಮಂದಿ ಸಾವಿಗೀಡಾದಾಗ  ಗಾಂಧೀಜಿಯವರು ದೆಹಲಿಯಲ್ಲಿ ಪ್ರೇಮ ಬೋಧನೆ ಮಾಡುತ್ತಿದ್ದರು, ದೆಹಲಿಯಲ್ಲಿದ್ದ ಎಲ್ಲ ಹಿಂದೂ ದೇವಾಲಯಗಳನ್ನು ಮುಸಲ್ಮಾನರು ನಾಶಪಡಿಸಿ ಮಸೀದಿ ಕಟ್ಟಿಸಿದ್ದು ನಿಜವೆಂದು ಗೊತ್ತಿದ್ದರೂ ಹಿಂದೂ ನಿರಾಶ್ರಿತರು ದೆಹಲಿಯ ಮಸೀದಿಗಳಲ್ಲಿ ತಾತ್ಕಾಲಿಕ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದಾಗ  ಅವರು ಅದನ್ನು ತಡೆದರು- ಇತ್ಯಾದಿ ಆರೋಪಗಳಿವೆ.     ೬೯೦ ಪುಟಗಳಿರುವ ಈ ಬೃಹತ್ ಕಾದಂಬರಿಯ ಕನ್ನಡ ಅನುವಾದ ಬಹಳ ಸೊಗಸಾಗಿ ಬಂದಿದೆ. ತಮಿಳು ಭಾಷೆಯ ಕೆಲವು ಪದಗಳನ್ನು ಹಾಗೆಯೇ ಉಳಿಸಿಕೊಂಡು ಅವಕ್ಕೆ ಅಡಿ ಟಿಪ್ಪಣಿ ಕೊಟ್ಟದ್ದು ಕನ್ನಡದ ಓದುಗರಿಗೆ ತಮಿಳು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವಲ್ಲಿ  ಉಪಯುಕ್ತವಾಗಿದೆ.  ತಮಿಳಿನ ಕೆಲವು ಗಾದೆ ಮಾತು- ನುಡಿಕಟ್ಟುಗಳಿಗೆ ಸಮಾನಾರ್ಥಕವಾದ ಅಭಿವ್ಯಕ್ತಿಗಳು ಕನ್ನಡದಲ್ಲಿ ಇಲ್ಲದಿದ್ದರೂ ಅವುಗಳನ್ನು ಅಷ್ಟೇ ಪ್ರಾಸಬದ್ಧವಾಗಿ ರಚಿಸಿ ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದು ಸ್ವಾಗತಾರ್ಹ. ಒಟ್ಟಿನಲ್ಲಿ ಇದು ಬಹಳ ಸೃಜನಶೀಲ ಅನುವಾದ. ********************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ-14 `ಸಣ್ಣ’ಸಂಗತಿ ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ. `ನಿದ್ದೆ ಎಚ್ಚರಗಳಲಿ ಪೊರೆವ ಕೈ’ಯನ್ನು ತನ್ನ ಕಂದನಿಗಾಗಿ ದುಡಿಯಲು ಬಿಟ್ಟಿರುವ ಈ ತಾಯ್‍ದುಡಿತದ ಪ್ರೇರಣೆ ಯಾವುದು? ಲೋಕದ ಸಮಸ್ತ ತಾಯಂದಿರಲ್ಲೂ ಯುಗಾಂತರಗಳಿಂದ ಸಂತಾನ ಕಾಪಿಡಲು ನಿರತವಾಗಿರುವ ಸುಪ್ತ ಕಾಳಜಿಯೇ? ಲೋಕದಲ್ಲಿ ಸಂಭವಿಸುವ ಯುದ್ಧ, ಪ್ರವಾಹ, ಭೂಕಂಪ, ವಿಮಾನಾಪಘಾತ, ರಾಜಕೀಯ ಬದಲಾವಣೆ, ಸುನಾಮಿ ಮುಂತಾದ ನಿಸರ್ಗಕೃತ ಹಾಗೂ ಮಾನವ ನಿರ್ಮಿತ ವಿದ್ಯಮಾನಗಳನ್ನೆಲ್ಲ `ಬೃಹತ್’ ಎನ್ನುವುದಾದರೆ, ಅವುಗಳ ಮುಂದೆ ಈ ಸಂಗತಿ `ಸಣ್ಣ’ದು. ಆದರೆ ನಿಜವಾಗಿ ಸಣ್ಣದೇ? ಇದು ಕವಿತೆ ಹುಟ್ಟಿಸುತ್ತಿರುವ ಬೆರಗು ಮತ್ತು ಪ್ರಶ್ನೆ. ಇಂತಹ `ಸಣ್ಣ’ಸಂಗತಿಗಳನ್ನು ಗಮನಿಸಲಾಗದೆ ಹುಟ್ಟಿರುವ ದೊಡ್ಡ ಬರೆಹಗಳು ಲೋಕದಲ್ಲಿ ಬಹುಶಃ ಇಲ್ಲ. ಟಾಲ್‍ಸ್ಟಾಯ್, ಕುವೆಂಪು, ವೈಕಂ, ಪ್ರೇಮಚಂದ್, ದೇವನೂರ ಇವರ ಬರೆಹ ಶ್ರೇಷ್ಠ ಮತ್ತು ಮಾನವೀಯ ಆಗಿರುವುದು ಇಂತಹ `ಕಿರು’ ಸಂಗತಿಗಳನ್ನು ಒಳಗೊಳ್ಳುವುದರಿಂದ; ಓದುಗರ ಸಂವೇದನೆಯನ್ನು ಸೂಕ್ಷ್ಮವಾಗಿಸುವ ಪರಿಯಿಂದ.`ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ಬರುವ ಪ್ರಸ್ತಾವನ ರೂಪದ ಹೇಳಿಕೆ ನೆನಪಾಗುತ್ತಿದೆ: `ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ; ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ’. ಇದು ಲೋಕದ ಸಮಸ್ತವನ್ನು ಹಿರಿದು ಕಿರಿದೆನ್ನದೆ ಸಮಾನ ಮಹತ್ವದಿಂದ ನೋಡುವ ತತ್ವ; ಇನ್ನೊಂದು ಬಗೆಯಲ್ಲಿ ಸಮಾಜವಾದಿ ದರ್ಶನ ಕೂಡ. ಅಂತಸ್ತು ಅಧಿಕಾರ ಜಾತಿ ಸಂಪತ್ತು ಇತ್ಯಾದಿ ಕಾರಣಗಳಿಂದ ಕೆಲವರನ್ನು ಗಣ್ಯರೆಂದೂ ಕೆಲವರನ್ನು ಸಣ್ಣವರೆಂದೂ ತಾರತಮ್ಯ ಮಾಡುವ ಮನೋಭಾವ ಸಮಾಜದಲ್ಲಿದೆ. ಈ ಮನೋಭಾವಕ್ಕೆ ಕೆಲವು ಸಂಗತಿ `ದೊಡ್ಡ’ `ಮಹತ್ವ’ ಅನಿಸಿದರೆ, ಕೆಲವು `ಸಣ್ಣ’ `ಕ್ಷುದ್ರ’ ಎನಿಸುತ್ತವೆ. ಈ ತಾರತಮ್ಯವನ್ನು ಮೀರಿ ಲೋಕವನ್ನು ಗ್ರಹಿಸಲು ಸಾಧ್ಯವಾದರೆ, ಹೊಸನೋಟಗಳು ಕಾಣಬಹುದು. ಲೋಕವು ತನ್ನ ಪ್ರತಿಷ್ಠಿತ ಧೋರಣೆಯಿಂದ ನೋಡಲು ನಿರಾಕರಿಸಿದ, ನೂರಾರು ಜೀವಂತ ಸನ್ನಿವೇಶಗಳು ಗೋಚರಿಸಬಹುದು. ಆಗ ಅವನ್ನು ಪ್ರೀತಿ ಅಚ್ಚರಿ ಕುತೂಹಲಗಳಿಂದ ನೋಡುತ್ತ ಅಲ್ಲಿರುವ ಚೈತನ್ಯ ಗುರುತಿಸಲು ಸಾಧ್ಯವಾಗುತ್ತದೆ. ಅವು ನಮ್ಮ ಅರಿವು ಮತ್ತು ಸಂವೇದನೆಗಳನ್ನು ನಮಗೆ ಅರಿವಿಲ್ಲದೆಯೇ ಬದಲಿಸಬಲ್ಲವು. ಕುವೆಂಪು ದೊರೆ ರಾಮನ ಮೇಲೆ `ಮಹಾಕಾವ್ಯ’ ಬರೆದರು. ಈ ಬಗ್ಗೆ ಅವರಿಗೆ ಸ್ವಯಂ ಅಭಿಮಾನವಿತ್ತು. ಆದರೆ ವಾಸ್ತವವಾಗಿ ಅವರು ನಮ್ಮ ಮಹತ್ವದ ಲೇಖಕರಾಗಿರುವುದು `ಸಾಮಾನ್ಯ’ರೆಂದು ಕರೆಯುವ, ಚರಿತ್ರೆಯಿಲ್ಲದ ಮನುಷ್ಯರನ್ನು ಕುರಿತು ಬರೆದ ಪರ್ಯಾಯ ಚರಿತ್ರೆಯಿಂದ; ಗೊಬ್ಬರ ಪುಟ್ಟಹಕ್ಕಿ ಹೀರೇಹೂವು ಇತ್ಯಾದಿ ವಸ್ತುಗಳ ಮೇಲೆ ಬರೆದ ಕವಿತೆಗಳಿಂದ. ಮಲತಾಯಿಯ ಕಾಟಕ್ಕೆ ಸಿಲುಕಿದ ಪುಟ್ಟ ಹುಡುಗಿ, ಮನೆಗೆ ಬಾರದ ದನ ಹುಡುಕುತ್ತ ಕತ್ತಲಲ್ಲಿ ಹೋಗಿ ಸಂಕಟಪಡುವ `ನಾಗಿ’ ಕವನವನ್ನು ಓದುವಾಗ, ಈಗಲೂ ನನ್ನ ಕಣ್ಣಂಚಿಗೆ ನೀರು ಬಂದು ನಿಲ್ಲುತ್ತವೆ. ನಾಯಿ ಕೋಳಿ ಮಕ್ಕಳು ಹೆಂಗಸರು ದಲಿತರು ಅವರ ಗದ್ಯಕಥನದ ಪ್ರಮುಖ ಪಾತ್ರಗಳು; ಹೆಚ್ಚಿನವರು `ಯಾರೂ ಅರಿಯದ ವೀರ’ರು. ಇದು ಅವರ ಕತೆಯೊಂದರ ಹೆಸರು ಕೂಡ. `ಇಂದಿರಾಬಾಯಿ’ `ಮರಳಿಮಣ್ಣಿಗೆ’ `ಒಡಲಾಳ’ ಇವೆಲ್ಲ ಯಾರೂ ಅರಿಯದ ವೀರರ ಮೇಲೆ ಹುಟ್ಟಿದ ಕಥನಗಳೇ. ಕೆಎಸ್‍ನ ಅವರ ಕವನದ ತಾಯಿ ಕೂಡ ಇಂತಹ ಒಬ್ಬ ವೀರಳೇ. ಲೋಕದೃಷ್ಟಿಯಲ್ಲಿ ಬೃಹತ್ ಮಹತ್ ಎನ್ನಲಾಗುವ ಸಂಗತಿಗಳನ್ನು ಗಮನಿಸುವುದು ದೋಷವಲ್ಲ. ಆದರೆ ಅದೊಂದೇ ನೋಡುಗರ ಚಿಂತನೆಯನ್ನೊ ಸೃಷ್ಟಿಯಾದ ಕಲೆಯನ್ನೊ ಮಹತ್ವಗೊಳಿಸುವುದಿಲ್ಲ; `ಸಾಮಾನ್ಯ’ ಎನಿಸಿಕೊಂಡಿದ್ದನ್ನು ನೋಡುವುದರ, ಅದರ ಬಗ್ಗೆ ಚಿಂತಿಸುವುದರ ಅನುಭವವೇ ಬೇರೆ. `ಭವ್ಯತೆ’ ಪರಿಕಲ್ಪನೆಯ ಮೇಲೆ ಚರ್ಚಿಸುತ್ತ ಚಿಂತಕ ಬ್ರಾಡ್ಲೆ, ಆಗಸಕ್ಕೆ ಚಾಚಿದ ಚರ್ಚಿನ ಶಿಖರ ಮಾತ್ರವಲ್ಲ, ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ತಾಯಿಹಕ್ಕಿ ನಾಯಿಯೊಂದಿಗೆ ಮಾಡುವ ಹೋರಾಟವೂ ಭವ್ಯವೆಂದು ಕರೆಯುತ್ತಾನೆ. ಕನ್ನಡದ ಎಲ್ಲ ಸಂವೇದನಶೀಲ ಲೇಖಕರಿಗೆ ಈ ಸಂಗತಿ ತಿಳಿದಿತ್ತು. ಈ ಸಂಗತಿಯು ಬರೆಹಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ದಾರ್ಶನಿಕರಿಗೂ ರಾಜಕೀಯ ನಾಯಕರಿಗೂ ಸಂಬಂಧಪಟ್ಟಿದ್ದು. ಬುದ್ಧ ಲೋಕಗುರು ಆಗಿದ್ದು, ಸಾಮ್ರಾಟರ ಜತೆ ಮಾಡಿದ ಸಂವಾದದಿಂದಲ್ಲ. ಮಗುಸತ್ತ ತಾಯೊಬ್ಬಳ ದುಗುಡವನ್ನು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಹೇಳುವ ಮೂಲಕ; ಚಾಂಡಾಲಕನ್ಯೆಯ ಕೈನೀರನ್ನು ಕುಡಿದೊ ವೇಶ್ಯೆಯೊಬ್ಬಳ ಆತಿಥ್ಯ ಸ್ವೀಕರಿಸಿ ಅವರಲ್ಲಿ ಹೊಸಬಾಳಿನ ಭರವಸೆ ಮೂಡಿಸುವ ಮೂಲಕ. ಅವನು ರೋಗಿ, ಶವ, ಭಿಕ್ಷುಕರನ್ನು ಕಂಡು ಲೋಕದ ದುಃಖಕ್ಕೆ ಪರಿಹಾರ ಕಾಣಲು ಮನೆಬಿಟ್ಟು ಹೋಗಿದ್ದು, ಕಟ್ಟುಕತೆ ಇರಬಹುದು; ಆದರೆ ಇದು ಪರೋಕ್ಷವಾಗಿ ಬುದ್ಧನ ನೋಟದ ವಿಶಿಷ್ಟತೆ ಮತ್ತು ಹೃದಯವಂತಿಕೆಯನ್ನು ಕುರಿತು ಜನರ ಕಲ್ಪನೆಯನ್ನು ಸಹ ಸೂಚಿಸುತ್ತಿದೆ. ಮಹತ್ತೆನ್ನುವುದು ಕಿರಿದುಗಳಿಂದಲೇ ರೂಪುಗೊಳ್ಳುತ್ತದೆ ಎಂಬ ಅರಿವು ಇಲ್ಲಿನದು. ಕೀಳಿಂಗೆ ಹಯನು ಕರೆಯುತ್ತದೆ ಎಂದು ಶರಣರು ರೂಪಕಾತ್ಮಕವಾಗಿ ಇದೇ ತಥ್ಯವನ್ನು ಹೇಳಿದರು. ಗಾಂಧಿಯವರ ನೋಟ ಮತ್ತು ಕ್ರಿಯೆಗಳಲ್ಲೂ ಈ ತಥ್ಯವಿತ್ತು. ಉಪ್ಪು ಚರಕಗಳು ಲೋಕದ ಕಣ್ಣಲ್ಲಿ `ಸಣ್ಣ’ ವಸ್ತುಗಳು. ಆದರೆ ಅವುಗಳ ಮೂಲಕ ದೇಶದಲ್ಲಿ ಹೊಸ ರಾಜಕೀಯ-ಸಾಮಾಜಿಕ ಪ್ರಜ್ಞೆಯನ್ನು ಅವರು ಕಟ್ಟಿದರು; ರಾಜಕಾರಣವನ್ನು ಆಧ್ಯಾತ್ಮೀಕರಿಸಿ ಸಂಚಲನ ಮೂಡಿಸಿದರು. `ಸಣ್ಣ’ ವಿಷಯಗಳಿಗೂ ಗಮನಕೊಡುವ ಅವರ ಗುಣ ಅಟೆನ್‍ಬರೊ ಸಿನಿಮಾದಲ್ಲಿಯೂ ಇದೆ. ಅದು ನೆಹರೂ ಹಾಗೂ ಪಟೇಲರು ರಾಜಕೀಯ ಮಹತ್ವದ ಸಮಸ್ಯೆಯನ್ನು ಚರ್ಚಿಸಲು ಆಶ್ರಮಕ್ಕೆ ಬಂದಿರುವ ಸನ್ನಿವೇಶ. ಗಾಂಧೀಜಿ ಅವರಿಬ್ಬರ ಜತೆ ಮಾಡುತ್ತಿದ್ದ ಚರ್ಚೆಯನ್ನು ತಟ್ಟನೆ ನಿಲ್ಲಿಸಿ, ಮುರಿದ ಕಾಲಿನ ಮೇಕೆಯೊಂದರ ಶುಶ್ರೂಶೆಗೆ ತೊಡಗಿಬಿಡುತ್ತಾರೆ. ಈ ಘಟನೆ ನಾಟಕೀಯವಾಗಿದೆ ಮತ್ತು ಮಾರ್ಮಿಕವಾಗಿದೆ. ನರಸಿಂಹಸ್ವಾಮಿ ಕವನದಲ್ಲಿ ಹಾಲೂಡಿಸುವ ತಾಯಿ ಕೂಸಿನ ಕಾಳಜಿ ಮಾಡಿದರೆ, ಇಲ್ಲಿ ಗಾಂಧಿ ತನಗೆ ಹಾಲೂಡುವ ಪ್ರಾಣಿಯ ಕಾಳಜಿ ಮಾಡುವರು. ದೇಶ ನಡೆಸುವ ಹೊಣೆ ಹೊರಲು ಸಿದ್ಧವಾಗುತ್ತಿರುವ ಇಬ್ಬರು ನಾಯಕರಿಗೆ ದೇಶಕಟ್ಟುವ ಪರಿಯನ್ನು ಈ ಮೂಲಕ ಸೂಚಿಸುವರು. `ಚಿಕ್ಕ’ ಸಂಗತಿಗಳಿಗೆ ಗಮನ ಹರಿಸುವುದು ಡೆಮಾಕ್ರಸಿಯ ತಳತತ್ವವೂ ಹೌದು. ಸ್ಮಾಲ್ `ಬೂಟಿಫುಲ್’ ಮಾತ್ರವಲ್ಲ, ಗ್ರೇಟ್ ಕೂಡ. `ಸಣ್ಣ’ ಶಬ್ದವು ಸಣ್ಣತನದಲ್ಲಿ ನೇತ್ಯಾತ್ಮಕವಾಗಿರಬಹುದು. ಆದರದು ವಿರಾಟ್ ತತ್ವದರ್ಶನದ ಜೀವಾಳ. ನರಸಿಂಹಸ್ವಾಮಿ ಕವನದ ತಾಯ ಚಿತ್ರವು ನನ್ನನ್ನು ಕಾಡುತ್ತಿರಲು ಬಾಲ್ಯದ ನೆನಪುಗಳೂ ಕಾರಣವಿರಬೇಕು. ರಾತ್ರಿ ಊಟದ ಹೊತ್ತಲ್ಲಿ ಅಮ್ಮ ನಮ್ಮನ್ನು ಎದುರು ಕೂರಿಸಿಕೊಂಡು, ಸಂಗೀತಗೋಷ್ಠಿಯಲ್ಲಿ ಕಲಾವಿದನು ಹಲವು ವಾದ್ಯಗಳ ನಡುವೆ ಕೂತಂತೆ ಅಡುಗೆಯ ಪಾತ್ರೆಗಳನ್ನು ಸುತ್ತ ಇಟ್ಟುಕೊಂಡು, ಎಲ್ಲರ ತಟ್ಟೆಗಳ ಮೇಲೆ ಹಕ್ಕಿಗಣ್ಣನ್ನಿಟ್ಟು, ನಮ್ಮ ಹಸಿವು ಇಷ್ಟಾನಿಷ್ಟಗಳನ್ನು ಗಮನಿಸಿ ಬಡಿಸುತ್ತ, ತಾನೂ ಬಡಿಸಿಕೊಂಡು ಉಣ್ಣುತ್ತಿದ್ದಳು. ನಾವೆಲ್ಲ ಮಲಗಿದ ಬಳಿಕವೂ ಎಚ್ಚರವಾಗಿದ್ದು ಹೊದಿಕೆ ಸರಿಪಡಿಸುತ್ತ, ಸರಿದ ದಿಂಬನ್ನು ತಲೆಗೆ ಕೊಡುತ್ತ, ಹೋಗಿಬರುವ ತಿಗಣೆಗಳನ್ನು ಹೊಸಕಿ ಹಾಕುತ್ತ, ನಿಶಾಚರಿಯಂತೆ ವರ್ತಿಸುತ್ತಿದ್ದಳು. ನಿತ್ಯವೂ ಸಂಭವಿಸುತ್ತಿದ್ದ ಈ ಬಡಿಸುವ ಮತ್ತು ಮಲಗಿಸುತ್ತಿದ್ದ ಪರಿ ಎಷ್ಟು ಜೀವಪರವಾಗಿತ್ತು ಎಂದು ಈಗ ಹೊಳೆಯುತ್ತಿದೆ. ಲೋಕದ ಅದೆಷ್ಟು ಮನೆಗಳಲ್ಲಿ ಇಂತಹ ತಾಯ್‍ಜೀವಗಳು ಉಳಿದವರ ಹದುಳಕ್ಕೆ ದುಡಿಯುತ್ತಿವೆಯೊ? ತಾಯ್ತನದ ಈ ಕಾಳಜಿ ತಂದೆ, ಮಡದಿ, ಗಂಡ, ಸ್ನೇಹಿತರು ಕೂಡ ಮಾಡಬಲ್ಲರು. ಲೋಕಚಿಂತಕರ ಇಂತಹದೇ ಕಾಳಜಿ, ಚಿಂತನೆ ಮತ್ತು ಕ್ರಿಯೆಗಳು ಸಮಾಜವನ್ನು ಕಟ್ಟಿವೆ. ಕುದ್ಮಲ್ ರಂಗರಾವ್, ಗೋದಾವರಿ ಪುರುಳೇಕರ್, ಜ್ಯೋತಿಬಾ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಇವರು ಸಮಾಜಕ್ಕೆ ನೆಮ್ಮದಿಯ ಬದುಕನ್ನು ರೂಪಿಸಲು ಹೆಣಗಿದವರು. ಅದಕ್ಕಾಗಿ ಲೋಕದಿಂದ ಕಷ್ಟ ಅಪಮಾನ ಎದುರಿಸಿದವರು. ಅವರ ತಾಯ್ತನ ಹೆತ್ತಮ್ಮನಿಗಿಂತ ಹಿರಿದು. ತನ್ನ ಮಕ್ಕಳಿಗೆ ತಾಯಿಯಾಗುವುದಕ್ಕಿಂತ ಲೋಕದ ಮಕ್ಕಳಿಗೆ ತಾಯಿಯಾಗುವುದು `ದೊಡ್ಡ’ ಸಂಗತಿ. ಗಾತ್ರಸೂಚಕವಾದ `ಸಣ್ಣ’ `ದೊಡ್ಡ’ ಎಂಬ ಈ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ ದೊಡ್ಡದು ಸಣ್ಣದಾಗುವ, ಎರಡೂ ಸೇರಿ ಮತ್ತೊಂದಾಗುವ ಪ್ರಕ್ರಿಯೆ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಸಮತೆಯ ದರ್ಶನವುಳ್ಳ ಎಲ್ಲರೂ ತಮ್ಮ ಆಲೋಚನೆ ಮತ್ತು ಕಾರ್ಯದ ಮುಖೇನ ಇದನ್ನು ಕಾಣಿಸುತ್ತ ಬಂದಿದ್ದಾರೆ. ಇಂತಹ ಗಹನ ದರ್ಶನವನ್ನು ನರಸಿಂಹಸ್ವಾಮಿ ಕವನದ ತಾಯಿ ತನ್ನ ಸಹಜ ದೈನಿಕ ಚಟುವಟಿಕೆಯ ಮೂಲಕ ಪ್ರಕಟಿಸುತ್ತಿರುವಳು. ಹೀಗಾಗಿಯೇ ಅವಳ ಹೊದಿಕೆ ಸರಿಪಡಿಸುವಿಕೆ, ಲೌಕಿಕವಾಗಿದ್ದರೂ ಲೋಕೋತ್ತರ ಕಾಯಕವೂ ಆಗಿದೆ. ಈ ಕ್ರಿಯೆ ತನ್ನ ಪ್ರಮಾಣದಲ್ಲಿ ಸಾಮಾನ್ಯ ಎನಿಸುತ್ತಿದ್ದರೂ ಪರಿಣಾಮದಲ್ಲಿ ಅಸಾಮಾನ್ಯ. ಆಗಸದಲ್ಲಿ ರೂಪುಗೊಂಡ ಕಾರ್ಮುಗಿಲು ಮಳೆಸುರಿಸಿ, ಆ ನೀರನ್ನು ನೆಲವು ಕುಡಿದು, ಅದು ಬಿಸಿಲಿಗೆ ಆವಿಯಾಗಿ ಗಾಳಿಯಲ್ಲಿ ಸೇರಿ, ತಂಪುಕ್ಷಣದಲ್ಲಿ ಜಲಬಿಂದುವಾಗಿ ನೆಲಕ್ಕಿಳಿಯುತ್ತದೆ. ನೀರು ಮಾಡುವ ದ್ಯಾವಾಪೃಥಿವಿಯ ಈ ವಿರಾಟ್ ಸಂಚಾರಕಥನವನ್ನು, ಹುಲ್ಲಿನೆಸಳ ತುದಿಯಲ್ಲಿ ವಜ್ರದ ಹರಳಿನಂತೆ ಕೂತಿರುವ ಇಬ್ಬನಿಯ ಪುಟ್ಟಹನಿ ಹೇಳುತ್ತಿರುತ್ತದೆ. ಇದೇನು ಸಣ್ಣ ಸಂಗತಿಯೇ? ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************

ಗಝಲ್ Read Post »

ಕಾವ್ಯಯಾನ

ಬಾಲ್ಯ

ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ? ***********************

ಬಾಲ್ಯ Read Post »

ಇತರೆ, ಲಹರಿ

ಪ್ರತಿಮೆಯೂ ಕನ್ನಡಿಯೂ..

ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ. ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ. “ಬಿಡು ಬಾಹ್ಯದೊಳು ಡಂಭವಮಾನಸದೊಳು ಎಡೆ ಬಿಡದಿರು ಶಂಭುವ/ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯಪಡೆದರೆ ಶಿವ ನಿನಗೊಲಿಯನು ಮರುಳೇ// ಜನಕಂಜಿ ನಡಕೊಂಡರೇನುಂಟು ಲೋಕದಿಮನಕಂಜಿ ನಡಕೊಂಬುದೇ ಚಂದ/ಜನರೇನು ಬಲ್ಲರು ಒಳಗಾಗೊ ಕೃತ್ಯವಮನವರಿಯದ ಕಳ್ಳತನವಿಲ್ಲವಲ್ಲ// ಮನದಲಿ ಶಿವ ತಾ ಮನೆ ಮಾಡಿಕೊಂಡಿಹಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/ಮನಕಂಜಿ ನಡೆಯದೆ ಜನಕಂಜಿ ನಡೆದರೆಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ// ‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!? ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು. ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ! ************************************

ಪ್ರತಿಮೆಯೂ ಕನ್ನಡಿಯೂ.. Read Post »

ಕಾವ್ಯಯಾನ

ಆಹುತಿ

ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************

ಆಹುತಿ Read Post »

ಇತರೆ, ಜೀವನ

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ ನಿರ್ವಹಿಸಬಹುದಾದ ಶಿಕ್ಷಕ ವೃತ್ತಿಯನ್ನೇ ನಾನೂ ಪಡೆಯಲಿ ಅಂತ ಅಮ್ಮ ಹಂಬಲಿಸಿದ್ದು ಅದರಂತೆಯೇ ಆದದ್ದು ಈಗ ಭೂತಕಾಲ. ಇಬ್ಬರಿಗೂ ದೊಡ್ಡ ದೊಡ್ಡ ಆಸೆ ಹಂಬಲಗಳಿಲ್ಲ. ಆದರೆ ನನ್ನ ಆಲೋಚನೆ ಸರಳವಾಗಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ನನಗೆ ಯಾರೂ ಮಾರ್ಗದರ್ಶಕರಿಲ್ಲದ್ದು, ಮುಂದಿನ ಹಂತದ ವಿದ್ಯೆ, ಉದ್ಯೋಗಗಳ ಪರಿಚಯವಿಲ್ಲದ್ದು ಹಿನ್ನಡೆ. ಸಣ್ಣಪುಟ್ಟ ಅವಕಾಶದಲ್ಲಿಯೇ ತುಂಬಾ ಪುಸ್ತಕಗಳನ್ನು ಓದುತ್ತಿದ್ದ ನನಗೆ ಪ್ರಾಥಮಿಕ ಪ್ರೌಢ ಹಂತ ಮುಗಿಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ಬೇಡವೆನಿಸತೊಡಗಿ ಬೇರೆ ಬೇರೆ ಸಾಧ್ಯತೆಗಳ ಕ್ಷೀಣ ಪರಿಚಯವಾಗತೊಡಗಿತ್ತು. ಶತಾಯ ನಿರಾಕರಿಸಿದರೂ ಮನೆಯ ಬಲವಂತಕ್ಕೆ ಕಡೆಗೂ ತರಬೇತಿಗೆ ಸೇರಿದ ಎರಡು ವರ್ಷಗಳು ಪಟ್ಟ ಹಿಂಸೆ ಮತ್ತು ಅಲ್ಲಿನ ಪರಿಸರ, ಸ್ನೇಹಿತರ ಒಲವಿನ ದಿನಗಳು ನನ್ನ ಮೇಲೆ ಅಧ್ಯಾಪಕರ ಕರುಣೆ, ಮೆಚ್ಚುಗೆ ಪ್ರೋತ್ಸಾಹ ಎಲ್ಲವೂ ನೆನಪಿನಲ್ಲಿವೆ. ಸದಾ ಚಡಪಡಿಸುತ್ತಿದ್ದ ನನ್ನ ಅಳಲಾಟವನ್ನು ಮನೆಯವರು ಕೇಳಿಸಿಕೊಳ್ಳದಿದ್ದರೂ ನನ್ನ ಅಧ್ಯಾಪಕರೂ ಸಹಿಸಿದ್ದು ಈಗಲೂ ಸೋಜಿಗ ನನಗೆ. ಶಿಕ್ಷಕ ವೃತ್ತಿ ಬೇಡವೆನಿಸದಿರಲೂ ಕಾರಣವಿತ್ತು. ಶೈಕ್ಷಣಿಕ ಸಾಮಾನ್ಯಜ್ಞಾನವನ್ನ  ಗಳಿಸಲು ತುಂಬಾ ಪ್ರಯತ್ನ ಪಡುತ್ತಿದ್ದ ನನಗೆ ಯಾವುದೇ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಯಾವತ್ತೂ ಪ್ರಥಮ ಸ್ಥಾನ. ಸ್ಥಳೀಯ, ಜಿಲ್ಲೆ, ರಾಜ್ಯ ಮಟ್ಟದ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನ ಗಿಟ್ಟಿಸಿದ್ದರಿಂದಲೂ ತುಂಬಾ ಓದುತ್ತಿದ್ದುದರಿಂದಲೂ ಕೆ.ಎ.ಎಸ್‌ ಅಥವಾಐ.ಎ.ಎಸ್. ಮಾಡಬೇಕೆಂಬ ಹುಚ್ಚು ಹತ್ತಿತ್ತು. ಅದಾವುದೂ ಸಾಧ್ಯವಾಗದೇ ಖಿನ್ನತೆಗೆ ಬಿದ್ದೆ.ಖಿನ್ನತೆಯ ಪರ್ವ ಆರಂಭವಾದದ್ದು ಅಲ್ಲಿಂದಲೇ.ಕೆಲಸ ಸಿಕ್ಕ ಮೇಲೆ ಒಂದೆರಡು ಸಲ ಕೆ.ಎ.ಎಸ್. ಪರೀಕ್ಷೆ ಬರೆದು ಒಮ್ಮೆ ಮಾತ್ರ ಪ್ರಿಲಿಮಿನರಿಯಲ್ಲಿ ಯಶಸ್ವಿಯಾಗಿ ನಂತರ ಸಾಧ್ಯವಾಗದೇ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. ಉದ್ಯೋಗವದಕ್ಕಿದ ಆಲಸ್ಯ ಜೊತೆಗೆತಿ ರುಗಾಟ, ಸಂಘಟನೆಯ ರುಚಿಯೂ ಕಾರಣ. ಇಷ್ಟವಿಲ್ಲದೇ ಬಹಳವೆಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ಉದ್ಯೋಗ ಹಿಡಿದು ನಂತರ ಓದುವುದು ಮುಂದುವರೆಸಿ ಬಿ.ಎ.  ಬಿ.ಎಡ್. ಎಂ.ಎ. ಮಾಡುವ ವೇಳೆಗೆ ಓದುವುದು ಸಾಕೆನಿಸಿತ್ತು.ರಂಗಭೂಮಿ, ಸಾಹಿತ್ಯ, ವಿಜ್ಞಾನ ಪರಿಷತ್ ಗೀಳು ಹಿಡಿದಿತ್ತು. ಒಂದಂತೂ ನಿಜ ನನ್ನ ಬೇರೆ ಬೇರೆ ಚಟುವಟಿಕೆಗೆ ನನ್ನ ಉದ್ಯೋಗ ಆತ್ಮವಿಶ್ವಾಸದ ದೀವಿಗೆ ಹಿಡಿದಿತ್ತು.ಸ್ವಾವಲಂಬನೆ ಬದುಕಿಗೆ ದಾರಿಯಾಗಿಯೂ, ಮನೆಯ ಆರ್ಥಿಕತೆಗೆ ಸಹಕಾರಿಯಾಗಿಯೂ ಒದಗಿಬಂತು. ಸತತ ೧೫ ಕ್ಕೂ ಹೆಚ್ಚು ವರ್ಷ ನನ್ನ ಓಡಾಟ, ರಂಗಭೂಮಿ ಚಟುವಟಿಕೆ, ಮೊದಲ ಬಾರಿಗೆ ಒಂದು ತಿಂಗಳು ರಜೆ ಪಡೆದು ನಾಟಕದಲ್ಲಿ ಅಭಿನಯಿಸಿದ್ದು, ಆ ಮೂಲಕ  ಶಿಕ್ಷಣದಲ್ಲಿ ರಂಗಕಲೆಯೆಂಬ ಎನ್.ಎಸ್.ಡಿ.ಯ ಮೂರು ತಿಂಗಳ ತರಬೇತಿ, ನಾಟಕ ನಿರ್ಮಾಣ, ಅಭಿನಯ, ಕಾಲೇಜುಗಳಲ್ಲಿ ಸತತವಾಗಿ ಸೆಮಿನಾರ್‌ಗಳು, ವಿಜ್ಞಾನ ಜಾಥಾಗಳು ಮೊದಲಾದ ಕ್ರಿಯಾತ್ಮಕತೆಗೆ ರಹದಾರಿಯೂ ಆಯಿತು.ಸುಮಾರು ಮೂರು ನಾಲ್ಕು ಬಾರಿ ಕರ್ನಾಟಕ ಸುತ್ತಿದ ಓಡಾಟದ ಹುಚ್ಚನ್ನ ಬೆಂಬಲಿಸಿದ್ದು ಇದೇ ಉದ್ಯೋಗ.ಯಾವುದೇ ಕೆಲಸಕ್ಕೂ ದಿಟ್ಟತನದಿಂದ ಮುನ್ನುಗ್ಗುವ ಪ್ರಕ್ರಿಯೆಯಿಂದ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳಿಗೆ ಅದೆಷ್ಟು ಮುಖ್ಯವೆಂಬುದನ್ನೂ ತಿಳಿಸಿಕೊಟ್ಟಿತ್ತು. ಇನ್ನು ನನ್ನ ನೌಕರಿಯ ಸ್ವರೂಪ ಸಹಜವಾಗಿ ವಯಸ್ಸಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಒಡನಾಡುವುದು.ಅಷ್ಟೊತ್ತಿಗಾಗಲೇ ಈ ಹುದ್ದೆಗೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಜಿಲ್ಲೆಗೆ ಆರನೇ ಸ್ಥಾನ ಪಡೆದು ಶಾಲೆಯೊಂದನ್ನು ಆರಿಸಿಕೊಂಡು ತಾಲೂಕು ಕೇಂದ್ರದಿಂದ ೫ ಕಿ.ಮೀ. ಇದ್ದ ನಾಗತೀಹಳ್ಳಿ ಎಂಬ ಆ ಗ್ರಾಮವನ್ನು ತಲುಪಿದಾಗ ನಿಜಕ್ಕೂ ಖುಷಿಯಾಗಿತ್ತು.ಒಂದಿಷ್ಟು ಒಳ ಪ್ರದೇಶ, ಸುತ್ತ ತೋಟ, ಹಸಿರಿನ ನಡುವಿನ ಹೆಂಚಿನದಾದರೂ ಸುಸಜ್ಜಿತ ಕಟ್ಟಡ.ಸೊಗಸೋ ಸೊಗಸು. ಮತ್ತು ಆ ಕಾಲಕ್ಕೆ ಆಧುನಿಕವೇ ಆಗಿದ್ದಂತಹ ಶಾಲೆಯದು ಸ್ಥಾಪನೆಯಾಗಿ ಸರಿಯಾಗಿ ೫೦ ವರ್ಷವಾಗಿತ್ತು.ಆಶ್ಚರ್ಯವೆಂದರೆ ಆ ಶಾಲೆಯಲ್ಲಿ ಎಲ್ಲಾ ಬಗೆಯ ಸೌಲಭ್ಯಗಳಿದ್ದವು. ಮೂರು ಕೊಠಡಿಗಳು, ಅಡುಗೆಮನೆ, ಶೌಚಾಲಯ, ಆಟದ ಮೈದಾನ, ಪೀಠೋಪಕರಣ, ನೀರಿನ ವ್ಯವಸ್ಥೆ, ಕಲಿಕೋಪಕರಣಗಳು, ಸಂಗೀತೋಪಕರಣಗಳು, ಆಟದ ಸಾಮಗ್ರಿಗಳು, ಮತ್ತೂ ವಿಸ್ಮಯವೆಂದರೆ ವಿಜ್ಞಾನದ ಉಪಕರಣಗಳು ಇದ್ದವು..ಉದಾ. ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಪ್ರಯೋಗಾಲಯದಲ್ಲಿ ಉಪಯೋಗಿಸುವ ಸಾಮಗ್ರಿಗಳು, ಎಲ್ಲವೂ..ಏನುಂಟು ಏನಿಲ್ಲ.. ಅದು ಗ್ರಾಮವಾದರೂ ಇಡೀ ಗ್ರಾಮ ಒಂದೇ ಜನಾಂಗದವರು ಮತ್ತು ಎಲ್ಲರೂ ವಿದ್ಯಾವಂತರು, ಆರ್ಥಿಕವಾಗಿ ಸಬಲರು.ಅಷ್ಟರಲ್ಲಾಗಲೇ ಅಲ್ಲಿಗೂ “ಕಾನ್ವೆಂಟ್ ಶಿಕ್ಷಣದ ಬಿಸಿಗಾಳಿ ಸೋಕಿತ್ತು. ಕೆಲವರು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಆಟೋಗಳಲ್ಲಿ ಓಡಾಡುತ್ತಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೂ ಬರುತ್ತಿದ್ದರು.ಸ್ವಚ್ಛವಾಗಿ, ಮುದ್ದಾಗಿ ಕಾಣುತ್ತಿದ್ದ ಬುದ್ದಿವಂತ ಮಕ್ಕಳವರು.ವೈವಿಧ್ಯ ಆಚರಣೆಗಳೂ ಆ ಗ್ರಾಮದಲ್ಲಿದ್ದವು. ವರ್ಷಕ್ಕೊಮ್ಮೆಕೆಂಡ ತುಳಿಯುವ ಅದ್ದೂರಿ ಜಾತ್ರೆ, ಹುಣ್ಣಿಮೆ ಅಮಾವಾಸ್ಯೆಗೆ ಕಟ್ಲೆಗಳು, ಮಾದೇಶ್ವರ ಮೊದಲಾದವು.ಶ್ರಾವಣದಲ್ಲಿ ಪ್ರತಿ ಸೋಮವಾರ ಮನೆಮನೆಗೆ ಹೋಗಿ ಕಂತೆಭಿಕ್ಷೆ ಎತ್ತಿ ಒಟ್ಟಿಗೆ ಊಟ ಮಾಡುವುದು ಮತ್ತು ಆ ಸಮಯದಲ್ಲಿ ಯಾವುದೇ ಅನ್ಯಜಾತಿಯವರಿಗೆ ಊರಿನೊಳಗೆ ಪ್ರವೇಶವಿಲ್ಲ. ಮರುಳಸಿದ್ದೇಶ್ವರ ಗ್ರಾಮದೇವರಾದ್ದರಿಂದ ಅನ್ಯರ ಪ್ರವೇಶ ನಿಷಿದ್ಧ.ಊರಿನೊಳಗೆ ಮಾಂಸ, ಮದ್ಯ ಕೂಡ ತರುವಂತಿರಲಿಲ್ಲ ಮಾತ್ರವಲ್ಲ ಸೇವಿಸಿಯೂ ಬರುವಂತಿರಲಿಲ್ಲ.ನಮ್ಮಲ್ಲಿದ್ದ ಒಬ್ಬ ಮುಸ್ಲಿಂ ಮೇಷ್ಟಿಗೆ ಆ ದಿನ ಅಲಿಖಿತ ರಜೆ. ಮಾದೇಶ್ವರ ಹಾಗೂ ಕಟ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೀಗೆ ಸಣ್ಣಪುಟ್ಟ ನಿರ್ಬಂಧಗಳಿದ್ದ ಊರದು.ಮುಖ್ಯವಾಗಿ ಆ ಊರಿನ ಮಂದಿ ವೀರಗಾಸೆಯಲ್ಲಿ ಪರಿಣತರು. ಕಾರ್ಯಕ್ರಮಗಳಿಗಾಗಿ ದೇಶ ವಿದೇಶ ಸುತ್ತಿದ್ದರು.ಈ ಎಲ್ಲವನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಕಲಿಯಲು ಸಾಧ್ಯವಾಯಿತು. ಒಂದಿಷ್ಟು ಮುನಿಸಿನಲ್ಲಿಯೇ ನವಂಬರ್ ೧ ರಂದು ಹುದ್ದೆ ಸ್ವೀಕರಿಸಲು ತೆರಳಿದೆ.ಅಲ್ಲಿನ ವಾತಾವರಣಕಂಡು ಮನಸ್ಸಾಗಲೇ ಅರಳಿತ್ತು.ಅಮ್ಮನ ಶ್ರಮದ ಫಲ ಈ ನೌಕರಿ.ಅವರಿಗಂತೂ ಹಿಗ್ಗು. ಆ ದಿನ ಅವರೂ ಜೊತೆಗಿದ್ದರು.ಅಕ್ಟೋಬರ್ ೨೫ ರಂದು ಆದೇಶ ಸ್ವೀಕರಿಸಿದರೂ ೫ ದಿನಗಳ ತರಬೇತಿ ಮುಗಿಸಿ ಶಾಲೆಗೆ ಪಾದವಿಟ್ಟದ್ದು ನವಂಬರ್ ೧ ನೇ ತಾರೀಕು.ಏಳನೇ ತರಗತಿಯವರೆಗೆ, ನಾಲ್ಕು ಮಂದಿ ಶಿಕ್ಷಕರಿದ್ದ ಶಾಲೆ. ವಿದ್ಯಾರ್ಥಿಗಳ ಸಂಖ್ಯೆಯೂ ಪರವಾಗಿಲ್ಲ ಎನ್ನುವಷ್ಟು.ಏಳನೇ ತರಗತಿಯವರಂತೂ ನನ್ನ ಎತ್ತರವೇ ಇದ್ದರು.ನಂತರ ಗೆಳೆಯರಾದರು.ಸಹೋದ್ಯೋಗಿಗಳ ಸಹಕಾರವಂತೂ ಬಹಳ ಸ್ಮರಣೀಯ.ಪರಸ್ಪರ ಸಹಕಾರ.ಪ್ರಬುದ್ಧ ನಡೆ, ಏನೇ ಕೆಲಸ ಮಾಡಬೇಕಿದ್ದರೂ ಮಾತನಾಡಿಕೊಂಡು ಆಚರಣೆಗೆ ತರುವುದು, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾದ ಸ್ನೇಹ ಸೌಹಾರ್ದತೆಯಿತ್ತು.ಊರಿನ ಮಂದಿಯೂ ಅಷ್ಟೆ,  ಆ ಊರಲ್ಲಿದ್ದಷ್ಟೂ ದಿನ ಸಂಪರ್ಕ-ಸಹಕಾರಕ್ಕೇನೂ ಕೊರತೆಯಿರಲಿಲ್ಲ. ಬರೋಬ್ಬರಿ ೧೯ ವರ್ಷಗಳು ಒಂದೇ ಶಾಲೆಯಲ್ಲಿ ಸೇವೆ ನಿರ್ವಹಿಸಿದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದೆ. ಇವತ್ತಿಗೂ ಅಲ್ಲಿನ ಮನೆಮಗಳು ನಾನು.೧೫೦ ಮನೆಗಳಿರುವ ಗ್ರಾಮದಲ್ಲಿ ಯಾರ ಮನೆಗೆ ಕಾಲಿಟ್ಟರೂ ಆತಿಥ್ಯಕ್ಕೇನೂ ಬರವಿಲ್ಲ. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಇಬ್ಬರು ಶಿಕ್ಷಕರಾಗಿ ತರಗತಿಗಳೂ ಕಡಿಮೆಯಾದವು.ಊರೊಳಗೆ ನಾಲ್ಕೈದು “ಕಾನ್ವೆಂಟ್” ಬಸ್ಸುಗಳು ಕಾಲಿಟ್ಟವು. ನಾವು ಏನೇ ಆಶ್ವಾಸನೆಕೊಟ್ಟರೂ ಪೋಷಕರ ಅಕ್ಕ ಪಕ್ಕದ ಮನೆಗಳ ಮಕ್ಕಳೊಡನೆ  ಹೋಲಿಕೆ ಪ್ರಾರಂಭವಾಗಿ ನಮ್ಮ ಮಕ್ಕಳೆಲ್ಲರೂ ಆಂಗ್ಲಮಾಧ್ಯಮ ಆರಿಸಿಕೊಂಡು ಸರ್ಕಾರಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಸಿಯಾಯಿತು. ಅದಕ್ಕೂ ಮೊದಲು ಅಲ್ಲಿನ ಕರ್ತವ್ಯದ ಅವಧಿ ನಿಜಕಕೂ ಮರೆಯಲಾರದಂತದ್ದು.ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡಿದೆ.ಪಠ್ಯಕ್ರಮವಲ್ಲದೇ ಬೇರೆ ಬೇರೆ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದೇ ಹೆಚ್ಚು.ನನ್ನ ವಿಜ್ಞಾನ,ರಂಗಭೂಮಿಯ ಸಂಪರ್ಕ ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದೆ.ಪಠ್ಯಗಳನ್ನೆಲ್ಲ ರಂಗಕಲೆಯ ಮೂಲಕವೇ ಬೋಧನೆ ಮಾಡುತ್ತಿದ್ದುದು.ವಿಜ್ಞಾನ ಯೋಜನೆಗಳನ್ನು ತಯಾರಿಸಿಕೊಂಡು ಮಕ್ಕಳು ಬೇರೆ ಬೇರೆ ಕಡೆ ಪ್ರದರ್ಶನ ಕೊಟ್ಟವು. ವಿಜ್ಞಾನ ನಾಟಕಗಳನ್ನು ಮಾಡಿಸಿದೆ. ಪಠ್ಯೇತರ ಪರೀಕ್ಷೆಗಳನ್ನು ಕಟ್ಟಿಸಿದೆ.ಶಾಲೆಯಲ್ಲಿದ್ದ ವಿಜ್ಞಾನದ ಸಾಮಗ್ರಿಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಂಡೆವು.ಆಟದ ವಸ್ತುಗಳು, ಸಂಗೀತೋಪಕರಣಗಳು, ಗಣಿತ ಕಿಟ್‌ಗಳನ್ನು ಸಮರ್ಥವಾಗಿ ಬಳಸಿದೆವು.ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ೫-೬ ವರ್ಷ ಬಹುಮಾನ ಗಳಿಸಿದರು.ಪ್ರತಿಭಾಕಾರಂಜಿಯಲ್ಲಿ ಪ್ರಶಂಸೆ ಗಿಟ್ಟಿಸಿದರು.ವಾರಕ್ಕೊಮ್ಮೆ ಪರಿಸರದೆಡೆಗೆ ಯಾತ್ರೆ ಸಾಗುತ್ತಿತ್ತು.ಅನೇಕ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳೇ ಬೆಳೆಸಿದರು. ವಿಜ್ಞಾನ ಪರಿಷತ್ ಸಹಯೋಗದಲ್ಲಿ ಶಾಲೆಯ ಪಕ್ಕದಲ್ಲಿದ್ದ ಬಯಲಿನಲ್ಲಿ ನೂರಾರುಗಿಡ ನೆಟ್ಟೆವು. ಕೈತೋಟ ಮಾಡಿದೆವು.ಜನಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆವು.ಮಕ್ಕಳೊಂದಿಗೆ ಸಿನೆಮಾ ನೋಡಿದೆವು.ಪಿಕ್‌ನಿಕ್ ಹೋದೆವು.ಪಠ್ಯ ಹಾಗೂ ಪಠ್ಯೇತರ ವಿಷಯಗಳೆರಡೂ ಯಶಸ್ವಿಯಾಗಿ ಜತೆಜತೆಗೇ ಸಾಗಿತ್ತು.ಅಕ್ಷರದಾಸೋಹ ಆರಂಭವಾದಾಗ ಶುಚಿ ರುಚಿ ಆಹಾರ ಪೂರೈಸಿದೆವು.ಮಕ್ಕಳ ಆರೋಗ್ಯತಪಾಸಣೆ ಮಾಡಿಸಿದೆವು.ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದೆವು. ಎರಡು ಬಾರಿ ಬೇಸಿಗೆಯಲ್ಲಿ ಶಿಬಿರವನ್ನೂ ಏರ್ಪಡಿಸಿ ಊರಿನ ಮಕ್ಕಳನ್ನು ಸೇರಿಸಿ ರಂಗತರಬೇತಿಯನ್ನೂ ಕೊಡಿಸಿದ್ದಾಗಿತ್ತು.ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೇ ತೀರಾ ಇತ್ತೀಚೆಗೆ ಶಾಲೆಯನ್ನು ಮುಚ್ಚುವ ಮುನ್ನ ಹೊರಗಿನ ರಂಗ ತಂಡಗಳನ್ನು ಕರೆಸಿ ನಾಟಕೋತ್ಸವವನ್ನೂ ಆಯೋಜಿಸಿದ್ದೆವು.  ಈ ಎಲ್ಲಾ  ಚಟುವಟಿಕೆಗಳಿಗೂ ನಮ್ಮ ಮೇಷ್ಟುಗಳ  ಸಹಕಾರವಿತ್ತು. ಮಹತ್ವದ ವಿಷಯವೆಂದರೆ ಬಹಳಷ್ಟು ಮಂದಿ ಖ್ಯಾತನಾಮರು ಶಾಲೆಗೆ ಕಾಲಿಟ್ಟದ್ದು.ಅರಸೀಕೆರೆ ಮೂಲಕ ಹಾದು ಹೋಗುವ ಗೆಳೆಯರು, ಹಿರಿಯ ಲೇಖಕರು.ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಕರೆ ಮಾಡಿ ಶಾಲೆಗೆ ಭೇಟಿಕೊಟ್ಟು ಹೋಗುತ್ತಿದ್ದದು ಸ್ಮರಣೀಯ ಸಂಗತಿ. ಹೆಸರು ಪಟ್ಟಿ ಮಾಡಿದರೆ ಅನೇಕವಾದೀತು. ಅವರಿಗೆಲ್ಲಾ ಶಾಲೆಯ ಆತಿಥ್ಯದಕ್ಕುತ್ತಿತ್ತು.ಸರಳ ಸಾಮಾನ್ಯರಂತೆ ಅವರೂ ಮಕ್ಕಳೊಂದಿಗೆ ಬೆರೆಯುತ್ತಿದ್ದaರು. ಧನಾತ್ಮಕ ಅಂಶಗಳನ್ನಷ್ಟೇ ದಾಖಲಿಸಿದೆನೇನೋ. ಋಣಾತ್ಮಕವಾಗಿ ವಿಷಯಗಳು ಸಾಕಷ್ಟು ಕಾಡಿದರೂ ಸಂತೋಷದ ಸಂಗತಿಗಳೆದುರು ಅವು ಕಾಲಕ್ರಮೆಣ ಮಾಸಿಹೋಗುವಂತವು.ಕೆಲವು ಕಿರಿಕಿರಿಗಳಾದವು. ನಾನೂ ಸಹ ಈ ಕೆಲಸದ ವಿಷಯಕ್ಕೆ ಕೆಲವೊಮ್ಮೆ ಉದಾಸೀನ ಮಾಡಿದ್ದಿದೆ.ಚಿಕ್ಕ ಪ್ರಾಯದಲ್ಲಿ ಕೆಲವು ತಪ್ಪು ಮಾಡಿದ್ದಿದೆ. ನೂರಕ್ಕೆ ನೂರಷ್ಟೇನೂ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಯಾವುದೇ ತಾರತಮ್ಯಅಥವಾ ಅಸಡ್ಡೆ ಮಾಡಿದ್ದಿಲ್ಲ. ನನ್ನ ಕನಸುಗಳನ್ನು ಕೊಂದು ಹಾಕಿದ ಉದ್ಯೋಗವಿದೆಂದು ಅನೇಕ ಬಾರಿ ತೀರಾ ಖಿನ್ನತೆಗೆ ಬಿದ್ದು ಕೆಲಸ ಬಿಟ್ಟುಬಿಡುತ್ತೇನೆಂದಿದ್ದು ಅದೆಷ್ಟು ಸಲವೋ.ಅಸಾಧ್ಯ ನೆನಪಿನ ಶಕ್ತಿ ಕುಂದಿತೆಂದು ಪರಿತಾಪ ಪಟ್ಟಿದದೆಷ್ಟೋ.ಉದ್ವೇಗಕ್ಕೊಳಗಾಗಿ ಸಂಘಟನೆಯೆಡೆ ತೀವ್ರ ತೊಡಗಿಸಿಕೊಂಡು ತಾತ್ಕಾಲಿಕವಾಗಿ ಮರೆತದ್ದಿದೆ.ಸ್ವಾಭಿಮಾನಿತನವನ್ನು ದಕ್ಕಿಸಿದ ಉದ್ಯೋಗವೆಂದು ಸಮಾಧಾನ ಪಟ್ಟಿದ್ದಿದೆ.ಈಗಂತೂ ನಿರ್ಲಿಪ್ತ. ಶಾಲೆ ಮುಚ್ಚಿದ್ದು ನನ್ನ ಪಾಲಿಗೆ ಹಿನ್ನಡೆ.ಕನ್ನಡ ಮಾಧ್ಯಮದಲ್ಲಿ ಭವಿಷ್ಯವಿಲ್ಲವೆಂದು ಆಂಗ್ಲ ಮಾಧ್ಯಮ ಅರಸಿ ಹೋದ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರೂ ನನ್ನ ಮನೆ ಮಕ್ಕಳು ಅದೇ ಆಂಗ್ಲ ಮಾಧ್ಯಮದಲ್ಲಿ ಭವಿಷ್ಯ ಅರಸುವಾಗ, ಪೋಷಕರು ಆ ಕುರಿತು ಪ್ರಶ್ನಿಸುವಾಗ ಉತ್ತರ ತೋಚದೇ ಸುಮ್ಮನಾಗಿದ್ದೇನೆ. ಇಂಗ್ಲೀಷ್‌ನ ಪ್ರಭಾವಕ್ಕೆ ಸಿಲುಕಿದ ಮತ್ತು ಅಲ್ಲಿಯೇ ಮಕ್ಕಳ ಉಜ್ವಲ ಬೆಳಗನ್ನು ನಿರೀಕ್ಷಿಸುವ ತಂದೆತಾಯಿಗಳ ಮಹತ್ವಾಕಾಂಕ್ಷೆಯೂ ತಪ್ಪೆಂದು ಹೇಳಲಾಗದು. ಸತತ ಇಪ್ಪತ್ತು ವರ್ಷಗಳ ಶಿಕ್ಷಣ ಇಲಾಖೆ ನೀಡಿದ ಅಪಾರ ಅನುಭವದ ಅನೇಕ ದಿನಾಂಕ ಹಾಗೂ ದಿನಗಳು ಇಲ್ಲಿ ಸಂಕ್ಷಿಪ್ತವಾಗಿ ದಿನಚರಿಯಂತೆ ಮಾಹಿತಿ ದಾಖಲಿಸಿವೆ. ಸದ್ಯಕ್ಕೆ ಸಿ.ಆರ್.ಪಿ.ಯಾಗಿ ನನ್ನ ವಲಯಕ್ಕೆ ಸೇರಿರುವ  ಸರ್ಕಾರಿ ಶಾಲೆಗಳಲ್ಲಿ  ಬಹಳಷ್ಟು ಕೆಲಸ ಮಾಡಬೇಕೆಂಬ ಆಶಯವಿದೆ.ಇಲ್ಲೀವರೆಗಿನ ಸಹಾಯ ಸಹಕಾರಕ್ಕಾಗಿ ಗ್ರಾಮಸ್ಥರಿಗೂ, ಇಲಾಖೆಯ ಸಹದ್ಯೋಗಿಗಳಿಗೂ, ಸಹೃದಯ ಅಧಿಕಾರಿಗಳಿಗೂ, ಶಿಕ್ಞಣ ಇಲಾಖೆಗೂ ಆಭಾರಿ. **************************************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ Read Post »

You cannot copy content of this page

Scroll to Top