ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬದುಕುವೆ ರಾಜಹಕ್ಕಿಯಾಗಿ

ಕವಿತೆ ಬದುಕುವೆ ರಾಜಹಕ್ಕಿಯಾಗಿ ರಾಘವೇಂದ್ರ ದೇಶಪಾಂಡೆ ಈಡೇರುವವು ಆಸೆಗಳು ಸಾವಿರಾರುಈ ಭವದಲಿ…ಗಟ್ಟಿತನದ ಅಪೇಕ್ಷೆಯ ಆಶಯದಲಿನನ್ನೀ ಭಾವಪರವಶದಲಿ… ಹೊರಹೊಮ್ಮಿದವು ನಿರೀಕ್ಷೆಗಳುಕಮ್ಮಿಯೆನಿಸಿತಾದರೂ…ಪ್ರೀತಿಯ ಹುಟ್ಟು ಮತ್ತು ಸಾವಿನಲಿಕಾಣಸಿಗದಿಲ್ಲಿ ವ್ಯತ್ಯಾಸ… ಜೀವಿಸುತಿರುವೆ ಅಸದೃಶವಾಗಿಕತ್ತಲ ಗರ್ಭದಲಿ…ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆತೂರಿಬರುವ ಪ್ರೇಮಗಾಳಿಯಲಿ… ಇದೆ ಎನಗೆ ತಾಳ್ಮೆ ಕಾಯುವಲಿಅದೇ ತೃಪ್ತಭಾವದಲಿ…ಬದುಕುವೆ ಖಂಡಿತ ಆಸೆಗೂಡಿನಲಿಸ್ವಚ್ಛಂದದ ರಾಜಹಕ್ಕಿಯಾಗಿ… **************************************

ಬದುಕುವೆ ರಾಜಹಕ್ಕಿಯಾಗಿ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಹಾಡು ಹಳೆಯದಾದರೇನು ಹಳೆಯ ಹಾಡುಗಳನ್ನು ಕೇಳುವಾಗಲೆಲ್ಲಾ ಎಂಥದೋ ಭಾವುಕತೆಗೆ ಒಳಗಾಗುವುದು, ಏನೋ ಒಂದು ರೀತಿ ಹೊಟ್ಟೆ ಚುಳ್ ಎನ್ನುವುದು, ಆ ಹಳೇ ದಿನಗಳ ನೆನಪುಗಳೆಲ್ಲಾ ಹಿಂದಿನ ಜನ್ಮದ ನೆನಪುಗಳೇನೋ ಎನ್ನುವಂತೆ ಕಾಡುವುದು… ಹೀಗೆಲ್ಲಾ ನನಗೆ ಮಾತ್ರ ಅನಿಸುತ್ತದಾ? ಬೇರೆಯವರಿಗೂ ಹೀಗೆಲ್ಲಾ ಆಗುತ್ತದಾ? ಗೊತ್ತಿಲ್ಲ. ಆದರೆ ನನಗೆ ಇದರ ಜೊತೆಗೆ ಇನ್ನೂ ವಿಚ್ ವಿಚಿತ್ರವಾಗೆಲ್ಲ ಏನೇನೋ ಅನ್ನಿಸುವುದಿದೆ. ಹಳೇ ಫೋಟೋಗಳನ್ನು ನೋಡುವಾಗ ಅದರಲ್ಲಿನ ಅಪರಿಚಿತರ ಬಗ್ಗೆ ಏನೇನೋ ಅನಿಸುತ್ತದೆ. ಅವರನ್ನು ನಾನೆಲ್ಲೋ ಭೇಟಿ ಮಾಡಿರುವೆ, ಮಾತಾಡಿಸಿರುವೆ, ಅಥವಾ ಇವರೆಲ್ಲಾ ಎಲ್ಲಿಯವರು, ಇವರೂ ನಮ್ಮಂತೆಯೇ ಬದುಕುತ್ತಿರುವರಾ… ಇನ್ನೂ ಏನೇನೋ ಅನಿಸಿ ಕಾಡತೊಡಗುತ್ತದೆ. ತಲೆ ಕೊಡವಿ ಎದ್ದು ಹೋಗದಿದ್ದರೆ ತಲೆಯೇ ಉದುರಿಹೋಗುತ್ತದೇನೋ ಅನಿಸಿಬಿಡುವಷ್ಟು. ಆದರೂ ಹಳೆಯ ಮಧುರ ಹಾಡುಗಳೆಂದರೆ ನನಗೆ ವಿಪರೀತ ಇಷ್ಟ. ಎಂದೋ ಪ್ರೀತಿಯಿಂದ ಹಾಡಿಕೊಳ್ಳುತ್ತಿದ್ದ ಹಾಡುಗಳು, ಎಂದೂ ಶ್ರುತಿ ತಾಳಗಳ ಲೆಕ್ಕಾಚಾರದ ಮಾತನ್ನು ನನ್ನೊಂದಿಗೆ ಆಡಿಲ್ಲ. ಭಾವದ ಅಗತ್ಯಕ್ಕೆ ತಕ್ಕಂತೆ ಒಂದಾಗಿವೆ. ಮನಸನ್ನು ಮುದಗೊಳಿಸಿವೆ. ನಾನು ಐದನೇ ತರಗತಿಯಲ್ಲಿದ್ದಾಗ ಸರ್ವಶಕ್ತ ಎನ್ನುವ ಪದ್ಯವೊಂದು ನಮ್ಮ ಪಠ್ಯಪುಸ್ತಕದಲ್ಲಿತ್ತು. “ದೇವ ನಿನ್ನ ಇರವ ನಂಬಿ ಜೀವಕೋಟಿ ಸಾಗಿದೆ, ಕಾವನೆಂಬ ಅರಿವಿನಲ್ಲಿ ನಿನ್ನ ಚರಣಕೆರಗಿದೆ” ಎಂದು ಅದರ ಪಲ್ಲವಿ. ಬರೆದ ಕವಿ ಹೆಸರನ್ನು ಮರೆತಿರುವುದಕ್ಕೆ ಕ್ಷಮೆ ಇರಲಿ. ಅದೆಷ್ಟು ಚಂದದ ರಾಗದಲ್ಲಿ ನಮಗದನ್ನು ನಮ್ಮ ಬಸವಣ್ಯೆಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರಂದರೆ ಆ ಪ್ರಾರ್ಥನೆಯನ್ನು ಹಾಡುತ್ತಾ ಹೋದಂತೆ ಕಣ್ತುಂಬುತ್ತಿತ್ತು. ಅಳು ಅಳುತ್ತಲೇ ಅದನ್ನು ಹಾಡಿ ಮುಗಿಸುವಾಗ ಎಂಥದೋ ಸಮಾಧಾನ, ಧನ್ಯತಾ ಭಾವ ಮನಸಿಗೆ. ನಿರಾಳ ಎನಿಸಿಬಿಡುತ್ತಿತ್ತು. ಇಂತಹ ಅದೆಷ್ಟೋ ಹಾಡುಗಳನ್ನು ನಮ್ಮ ಬಸವಣ್ಯಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರು. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು(ಬಿ.ಎಂ.ಶ್ರೀ.)”, ಆ ಹಾ ಹಾ ಮಲ್ಲಿಗೆ, ಬರುವೆನೇ ನಿನ್ನಲ್ಲಿಗೆ(ಬೇಂದ್ರೆ)”, ” ಈ ನಾಡಿನಲಿ ನಾನು ಮೂಡಿಬಂದುದೆ ಸೊಗಸು, ಭಾರತವ ಪ್ರೀತಿಸುವ ಭಾಗ್ಯವೆನದಾಯ್ತು”….. ಹೀಗೆ ಅದೆಷ್ಟೋ ಭಾವಪೂರ್ಣ ಹಾಡುಗಳನ್ನು ಮಕ್ಕಳಿಂದ ಹಾಡಿಸಿದ ಶ್ರೇಯ ಅವರದು. ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಅದರ ಪರಿಣಾಮ. ನಾವಿವತ್ತು ಏನಾಗಿ ಬೆಳೆದಿದ್ದೇವೋ ಅದರ ಹಿಂದಿನ ಮೌಲ್ಯಗಳನ್ನು ನಾವು ಪಡೆದದ್ದು ಇಂತಹ ಅದೆಷ್ಟೋ ಹಾಡುಗಳಿಂದ ಎಂದರೆ ಸುಳ್ಳಲ್ಲ. ಅವು ಕಾಲದ ಜೊತೆ ಮರೆಯಾಗತೊಡಗಿದಾಗ ಒಂಥರಾ ಸಂಕಟವಾಗುತ್ತಿತ್ತು. ಮೆದುಳಿನ ಸಾಮರ್ಥ್ಯದ ಬಗ್ಗೆ ಅನುಮಾನವಾಗುತ್ತಿತ್ತು. ಆಗ ಹೊಳೆದದ್ದು, ಡೈರಿಯೆನ್ನುವ ಗಂಧದ ಡಬ್ಬಿಯಲ್ಲಿ ನನ್ನ ಪ್ರೀತಿಯ ನವಿರಾದ ನವಿಲುಗರಿಯಂಥ ಹಾಡುಗಳನ್ನು ಬರೆದಿಡಬೇಕು ಎನ್ನುವುದು. ಬರೆದೆ. ಬರೆದ ಹಾಡುಗಳಲ್ಲಿ ನನ್ನಿಷ್ಟದ “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿಹೋಗುವ ಮುನ್ನ ಕೀಳುವರಾರೆಂದು” ಎನ್ನುವ ಕವಿತೆಯೂ ಇತ್ತು. ಆದರೆ ಚಿಕ್ಕಂದಿನಲ್ಲಿ ನನಗೆ ಅದನ್ನು ಬರೆದವರು ಯಾರು ಎನ್ನುವುದು ಗೊತ್ತಿರಲಿಲ್ಲ. ಇತ್ತೀಚೆಗೆ ಅದನ್ನಯ ಬರೆದವರು ವ್ಯಾಸರಾಯ ಬಲ್ಲಾಳರು ಎಂದು ತಿಳಿದದ್ದು. ಡೈರಿಯಲ್ಲೇನೋ ಬರೆದಿಟ್ಟಿದ್ದೆ. ಆದರೆ ಒಂದಿನ ಯಾರೋ ಆ ಡೈರಿಯನ್ನೇ ಅಪಹರಿಸಿಬಿಟ್ಟರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಳುವೇ ಬಂತು. ನೆನಪಿದ್ದಷ್ಟೂ ಹಾಡುಗಳನ್ನು ಮತ್ತೆ ಬರೆದಿಟ್ಟುಕೊಂಡೆ. ಆದರೆ ಒಂದಷ್ಟು ಇಷ್ಟದ ಹಾಡುಗಳು ನೆನಪಿನಿಂದಲೂ ಹಾರಿದ್ದವು. ಅತ್ತೆ ಅಷ್ಟೇ. ಆಗಲೇ “ಕಾಡು ಮಲ್ಲಿಗೆಯೊಂದು…” ಕವಿತೆಯೂ, ಕಳೆದು ಹೋದದ್ದು. ಆದರೆ ಮೊನ್ನೆ ವಿಜಯ ಪ್ರಕಾಶರ ಧ್ವನಿಯಲ್ಲಿ ಆ ಹಾಡನ್ನು, ಅದೇ ಧಾಟಿಯಲ್ಲಿ ಮತ್ತೂ ವಿಸ್ತೃತ ಸ್ವರ ಪ್ರಸ್ತರ, ಆಲಾಪ ಮತ್ತು ಚಂದದ ಪ್ರಸ್ತುತಿಯೊಂದಿಗೆ ಕೇಳಿದಾಗ ಕಿವಿಗಳಿಗೆ ಅಪೂರ್ವ ಆನಂದವಾಅಯಿತು. ಅದರ ಸಾಹಿತ್ಯವೂ ಸಿಕ್ಕಿದ್ದು ಮತ್ತೊಂದೇ ಎತ್ತರದ ಖುಷಿ. ಆದರೆ ಕೆಲವರು ಯಾಕೆ ಹಾಗೆ ಮತ್ತೊಬ್ಬರ ಸಂಗ್ರಹವನ್ನು ಕದಿಯುತ್ತಾರೋ ಗೊತ್ತಿಲ್ಲ. ನನಗೆ ಹೀಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಶುರುವಾದದ್ದು ಬಹಳ ಚಿಕ್ಕಂದಿನಲ್ಲಿಯೇ. ಈಗ ನನ್ನ ತರಗತಿಯ ಪ್ರತಿಯೊಬ್ಬ ಮಗುವಿನಿಂದಲೂ ಈ ಕೆಲಸವನ್ನು ಮಾಡಿಸುತ್ತಿರುತ್ತೇನೆ. ಆಸಕ್ತಿ ಮತ್ತು ಪ್ರೀತಿಯಿಂದ ಮಾಡುವವರನ್ನು ಕಂಡಾಗ ಮಾಡಿಸಿದ ಕೆಲಸ ಸಾರ್ಥಕವಾಯಿತು ಎನಿಸುತ್ತದೆ. ಈ “ಕಾಡುಮಲ್ಲಿಗೆಯೊಂದು” ಕವಿತೆ ಒಂದೊಂದು ಬಾರಿ ಒಂದೊಂದು ಅರ್ಥವನ್ನು ಹೊಳೆಯಿಸುತ್ತದೆ. ನಿರ್ಲಕ್ಷಿತ ಸಮುದಾಯವೊಂದರ ದನಿಯಾಗಿ ಹಾಡುತ್ತದೆ. ಮೀರಾ ಎನ್ನುವ ಕವಯಿತ್ರಿಯ ಕವಿತೆಯೊಂದು ಕವಿತೆ ಇದ್ದಕ್ಕೆ ಸಮವರ್ತಿಯೆನ್ನುವಂತೆ ಇದೆ. “ಬಿಳಿ ಮಲ್ಲಿಗೆ ಮುಡಿ ಏರುತ ನಗುತಿರೆ, ಕಾಕಡ ಗಿಡದಲಿ ಬಾಡುತಿದೆ…” ಎಂದು ಆ ಹಾಡು ಶುರುವಾಗುತ್ತದೆ. “ಕಾಡುಮಲ್ಲಿಗೆ”ಯ ನೆನಪಲ್ಲಿ, ಅನುಪಸ್ಥಿತಿಯಲ್ಲಿ ಈ ಕವಿತೆ ನನಗೆ ಸಾಂತ್ವನ ಹೇಳಿತ್ತು. ಆದರೆ ” ಕಾಡು ಮಲ್ಲಿಗೆಯ” ಮುಂದೆ ಇದು ಸಪ್ಪೆಯೇ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಇವುಗಳ ಯಾದಿಯಲ್ಲಿ ಬರುವ ಮತ್ತೊಂದು ಗೀತೆಯೆಂದರೆ “ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು, ಸಂಗಾತಿ ನಿನ್ನ ನೆನಪು, ನನ್ನೆದೆಗೆ ತಂಪು ತಂತು..” ಕವಿತೆ. ಹರೆಯದ ಕನಸುಗಳಿಗೆ ಕಸುವು ತುಂಬಿದ ಕವಿತೆ ಇದು ಎಂದರೆ ತಪ್ಪಾಗಲಾರದು. ಅಷ್ಟು ಮುದ್ದಾದ ಭಾವಗೀತೆ ಇದು. “ಆ ಶುಕ್ರ ತಾರೆ ನಕ್ಷತ್ರ ಧಾರೆ ಧರಗೇರಿ ಏರಿ ಏರಿ, ನನ್ನೆದೆಯ ವೀಣೆ ನಿನ್ನೆದೆಯ ಮೀಟಿ ಇದು ರಾಗ ರಾಸ ವೀಣೆ” ಎಂದು ತಾರಕವನ್ನು ಮುಟ್ಟುವ ಜಾಗವಂತೂ ಭಾವ ತೀವ್ರತೆ ತೀವ್ರ ಗತಿ ಪಡೆದುಕೊಂಡು ಶಿಖರ ಮುಟ್ಟುತ್ತದೆ. ಹಾಗೇ ನಾವೆಲ್ಲರೂ ಹಾಡಿನೊಳಗೆ ಲೀನವಾಗುತ್ತೇವೆ. ಚಿಕ್ಕಂದಿನಲ್ಲಿ ಹಾಡಿಕೊಳ್ಳುತ್ತಿದ್ದ ಮತ್ತೊಂದು ದೇಶಭಕ್ತಿ ಗೀತೆಯೆಂದರೆ, “ಮೊಳಗಲಿ ಮೊಳಗಲಿ ನಾಡಗೀತವು, ಮೂಡಲಿ ಮೂಡಲಿ ಸುಪ್ರಭಾತವು” ಎನ್ನುವ ಈ ಗೀತೆ. ಬಹಳ ವರ್ಷಗಳ ವರೆಗೂ ನನಗೆ ಈ ಗೀತೆಯನ್ನು ಬರೆದವರು ಎಚ್.ಎಸ್.ವೆಂಕಟೇಶಮೂರ್ತಿಯವರು ಎನ್ನುವ ವಿಚಾರವೇ ತಿಳಿದಿರಲಿಲ್ಲ. ಆದರೆ ಆ ಗೀತೆಗಿದ್ದ ಪ್ರಸಿದ್ಧಿಯ ಬಗ್ಗೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದ್ದ ಗೀತೆ ಅದು. ಈಗಲೂ ನಾ ನನ್ನ ಮಕ್ಕಳಿಗೆ ಅದನ್ನು ಹೇಳಿಕೊಡುತ್ತಿರುತ್ತೇನೆ. ಇಂತಹುದೇ ಮತ್ತೊಂದು ದೇಶಭಕ್ತಿ ಗೀತೆಯೆಂದರೆ “ಕುಹೂ ಕುಹೂ ನೀ ಕೋಗಿಲೆಯೆ ನಾ ಹಾಡುವ ಹಾಡೊಂದ ಹಾಡುವೆಯಾ ನಾ ಹೇಳುವ ಮಾತೊಂದ ಕೇಳುವೆಯಾ…” ಗೀತೆ. ಈಗಲೂ ಇದನ್ನು ಬರೆದ ಕವಿಯ ಬಗ್ಗೆ ನನಗೆ ಅಸ್ಪಷ್ಟ ತಿಳಿವಳಿಕೆ. ಆದರೆ ಅದು ಕೇಳುವ ಹಾಡುವ ಹೃದಯಗಳಲ್ಲಿ ನೆಲೆಸಿರುವ ರೀತಿಯ ಬಗ್ಗೆ ಸ್ವತಃ ಕವಿಗೇ ಎಂತಹ ಹೆಮ್ಮೆ ಮತ್ತು ಪರಮಾನಂದವಿರಬಹುದು… ಬಹುದೊಡ್ಡ ಅಚ್ಚರಿ… ಇಂತಹ ಅದೆಷ್ಟೋ ಮುಗಿಯದ ಹಾಡುಗಳು… ನಾನು ದೂರ ಶಿಕ್ಷಣದ ಮೂಲಕ ಬಿಎಡ್ ಮಾಡುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹೇಳುವೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ನಮ್ಮ ಇಗ್ನೂ ಸೆಂಟರ್ ಇದ್ದದ್ದು. ಕಾಂಟ್ಯಾಕ್ಟ್ ಪ್ರೋಗ್ರಾಮಿಗಾಗಿ ಅಲ್ಲಿ ಉಳಿಯಬೇಕಾಗಿ ಬಂದಿತ್ತು. ಅಲ್ಲಿ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರತ್ಯೇಕ ಡಾರ್ಮೆಟ್ರಿಗಳಿದ್ದವು, ಒಂದರ ಎದುರು ಇನ್ನೊಂದು. ಒಂದು ದಿನ ಸ್ನಾನಕ್ಕೆ ಹೋದಾಗ ನಾನು ಯಾವ ಪರಿವೆಯಿಲ್ಲದೆ “ಏನೆ ಕೇಳು ಕೊಡುವೆ ನಿನಗೆ ನಾನೀಗ…” ಎನ್ನುವ ಗೀತ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಾ ಮಜವಾಗಿ ಸ್ನಾನ ಮಾಡಿ ಬಂದಿದ್ದೆ. ಅವತ್ತು ಮಧ್ಯಾಹ್ನ ಯಾರೋ ಪಕ್ಕದ ಪುರುಷರ ರೂಮಿನವರೊಬ್ಬರು ಗೆಳತಿಯರಲ್ಲಿ “ಯಾರದು ಆ ಹಾಡನ್ನು ಹಾಡುತ್ತಿದ್ದವರು? ಏ ಚನ್ನಾಗಿ ಹಾಡುತ್ತಿದ್ದರು…” ಎಂದು ಒಂಥರಾ ನಗಾಡುತ್ತಾ ಕೇಳಿದರಂತೆ. ನನಗೆ ಹೀಗಾಗಬಹುದೆಂಬುದರ ಅರಿವೇ ಇರಲಿಲ್ಲ. ಜೀವ ಬಾಯಿಗೆ ಬಂದಂತಾಗಿತ್ತು. “ದಯವಿಟ್ಟು ಅದು ನಾನು ಎಂದು ತೋರಿಸಬೇಡಿ ಕಣ್ರೇ ಅವರಿಗೆ… ಪ್ಲೀಸ್..” ಎಂದು ಗೋಗರೆದಿದ್ದೆ. ಈಗಲೂ ಆ ಘಟನೆಯನ್ನು ನೆನೆದಾಗಲೆಲ್ಲಾ ನಗು ಬರುತ್ತದೆ… ಇಂತಹ ಅದೆಷ್ಟೋ ಬೆಚ್ಚನೆ ನೆನಪುಗಳನ್ನು ಕೊಟ್ಟ ಆ ಹಳೆಯ ಹಾಡುಗಳಿಗೆ ಶರಣು ಶರಣಾರ್ತಿ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ-೧೩. ಸಿದ್ಧಾಂತದ ಚೌಕಟ್ಟಿನಲ್ಲೇ ಉಳಿದೂ ಬೆಳಕಿಗೆ ತಡಕುವ ವಸಂತ ಬನ್ನಾಡಿ ಕವಿತೆಗಳು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪಾಠ ಕಲಿಸುತ್ತಿದ್ದ ಶ್ರೀ ವಸಂತ ಬನ್ನಾಡಿ ಅಲ್ಲಿನ ರಂಗ ಅಧ್ಯಯನ ಕೇಂದ್ರದ ಸಂಚಾಲಕರಾಗಿಯೂ ಪ್ರಸಿದ್ಧರು. ಶಬ್ದಗುಣ ಹೆಸರಿನ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ ಶ್ರೀಮಂತವಾಗಿ ಸಂಪಾದಿಸುತ್ತಿದ್ದವರು ಅವರು. ಶಬ್ದಗುಣ ಕೂಡ ಉಳಿದೆಲ್ಲ ಹಲವು ಸಾಹಿತ್ಯ ಪತ್ರಿಕೆಗಳ ಹಾಗೇ ಪ್ರಾರಂಭದಲ್ಲಿ ಅತಿ ಉತ್ಸಾಹ ತೋರುತ್ತಲೇ ಮೂರು ಸಂಚಿಕೆಗಳನ್ನು ಸಂಪಾದಿಸುವಷ್ಟರಲ್ಲೇ ಅಕಾಲಿಕ ಮರಣಕ್ಕೆ ತುತ್ತಾಯಿತು. ಸಾಹಿತ್ಯ ಪತ್ರಿಕೆಗಳ ಬಗ್ಗೆ ಪ್ರೀತಿಯ ಮಾತು ಆಡುತ್ತಲೇ ಅದರ ಪೋಷಣೆಗೆ ಅತಿ ಅವಶ್ಯವಾದ ಚಂದಾ ಕೊಡದೆ ಆದರೆ ಪತ್ರಿಕೆ ಪಾಪ ಪ್ರಕಟಣೆ ನಿಲ್ಲಿಸಿತೆಂದು ಚಿರ ಸ್ಮರಣೆಯ ಲೇಖನ ಬರೆಯುವ ಲೇಖಕರೇ ಹೆಚ್ಚಿರುವಾಗ ಸಾಹಿತ್ಯ ಪತ್ರಿಕೆಗಳ ಪ್ರಕಟಣೆಯ ಬಗ್ಗೆಯೇ ವಿಸ್ತೃತ ಲೇಖನ ಬರೆಯಬಹುದು. ಇರಲಿ,ಆದರೆ ತಂದದ್ದು ಮೂರೇ ಮೂರು ಸಂಚಿಕೆಗಳೇ ಆದರೂ ಆ ಸಂಚಿಕೆಗಳನ್ನು ರೂಪಿಸುವುದಕ್ಕೆ ಫಣಿರಾಜ್ ಮತ್ತು ರಾಜಶೇಖರರಂಥ ಅಪ್ಪಟ ಸಮಾಜ ವಾದೀ ಚಿಂತನೆಯ ಲೇಖಕರ ಸಹಕಾರ ಇವರಿಗೆ ಇತ್ತೆಂದರೆ ನಿಸ್ಸಂಶಯವಾಗಿ ಬನ್ನಾಡಿಯವರ ಚಿಂತನೆಯ ಹಾದಿಯನ್ನು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೇ ಇಲ್ಲ. ತಮ್ಮೆಲ್ಲ ಸಮಯ ಮತ್ತು (ಆರ್ಥಿಕ) ಶಕ್ತಿಯನ್ನು ಕೂಡ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಮತ್ತು ಪ್ರಕಾಶನದ ಕೆಲಸಕ್ಕೂ ಬಳಸಿಯೇ (ಪ್ರ)ಸಿದ್ಧರಾದ ಶ್ರೀ ಬನ್ನಾಡಿ ರಂಗ ಕರ್ಮಿಯಾಗಿ ಕೂಡ ಸಮಾಜವಾದೀ ಸಿದ್ಧಾಂತದ ಪ್ರತಿ ಪಾದಕರಾಗಿ ನಿರಂತರವಾಗಿ ಫ್ಯೂಡಲ್ ತತ್ವಗಳ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಗರ್ಜಿಸುತ್ತಲೇ ಇರುವವರು‌. ಈವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದರೂ ಫೇಸ್ಬುಕ್ಕಿನಲ್ಲಿ ಅತ್ಯಂತ ಚಟುವಟಿಕೆಯಿಂದ ಸಮಾಜ ಮುಖೀ ಬರಹಗಾರರ ಪರವಾಗಿ ಮಾತನಾಡುತ್ತಲೇ ಪ್ರಭುತ್ವದ ವಿರುದ್ಧದ ತಮ್ಮ ನಿಲುವುಗಳನ್ನು ಅತ್ಯಂತ ಸ್ಪಷ್ಟವಾಗಿಯೇ ಪ್ರಕಟಿಸುವ ಬನ್ನಾಡಿಯವರ ಕವಿತೆಗಳು ಫೇಸ್ಬುಕ್ಕಿನಲ್ಲಿ ಪ್ರಕಟಿಸುವ ರೀತಿಯೇ ಭಿನ್ನವಾದುದು. ಬಹುತೇಕರು ಫೇಸ್ಬುಕ್ಕಿನಲ್ಲಿ ಕವಿತೆ ಎಂದು ತಾವು ಭಾವಿಸಿದುದನ್ನು ಪ್ರಕಟಿಸುವಾಗ ಅದಕ್ಕೊಂದು ಶೀರ್ಷಿಕೆಯ ಅಗತ್ಯತೆ ಇದೆ ಎಂದೇ ಭಾವಿಸದೇ ಇರುವ ಹೊತ್ತಲ್ಲಿ ಇವರು ಪ್ರಕಟಿಸುವ ಪ್ರತಿ ಕವಿತೆಯೂ  ಅತ್ಯಂತ ಸಮರ್ಥ ಶೀರ್ಷಿಕೆ ಮತ್ತು ಅಗತ್ಯವಿದ್ದಲ್ಲಿ ಅತ್ಯಗತ್ಯವಾದ ಚಿತ್ರಗಳ ಜೊತೆಗೇ ಪ್ರಕಟವಾಗುವುದನ್ನು ನೀವು ಗಮನಿಸಿಯೇ ಇರುತ್ತೀರಿ‌. ಜೊತೆಗೇ ಸಹ ಬರಹಗಾರರ ಸಣ್ಣದೊಂದು ಬರಹಕ್ಕೂ ಚಂದದ ಪ್ರತಿಕ್ರಿಯೆ ಕೊಡುವ ಅವರ ಗುಣ ಕೂಡ ನೀವು ಬಲ್ಲಿರಿ. ಮೂಲತಃ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಯಾವುದೇ ಲೇಖಕ ಕವಿಯಾಗಿ ಪ್ರಕಟವಾಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈಗಾಗಲೇ ಆ ಸಿದ್ಧಾಂತದ ಚೌಕಟ್ಟಿಗೆ ತನ್ನೆಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ವ್ಯಯಿಸಿ ತನ್ನ ಚೌಕಟ್ಟಿನ ಆಚೆಗೆ ಹೊರಬರಲಾರದೇ ತಳಮಳಿಸುವುದು ಮತ್ತು ಏನೇ ಹೇಳ ಹೊರಟರೂ ಕಡೆಗೆ ಆ ಮೂಲಕ್ಕೇ ಮತ್ತೆ ಮತ್ತೆ ಮರಳುವ ಕಾರಣದಿಂದಾಗಿ ಕವಿಯಾಗಿ ಕಾಣುವುದಕ್ಕಿಂತ ಲೇಖಕನಾಗಿಯೇ ಉಳಿದುಬಿಡುವುದೂ ಮತ್ತು ಆ ಅಂಥ ಚಿಂತನೆಯ ಲೇಖಕ ಬರೆಯ ಹೊರಟ ಕವಿತೆಯು ಕೂಡ ಆ ಸಿದ್ಧಾಂತದ ಘೋಷ ವಾಕ್ಯವೇ ಆಗಿ ಪರಿಸಮಾಪ್ತಿ ಆಗುವುದನ್ನು ನಾವು ಬಲ್ಲೆವು. ಬನ್ನಾಡಿಯವರ ಕಾವ್ಯ ಕೃಷಿ ಈ ಆರೋಪಗಳನ್ನು ಅಥವ ಮಿತಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದನ್ನು ಅವರ ಕವಿತೆಗಳ ಓದಿನ ಮೂಲಕ ಗುರ್ತಿಸಬಹುದು ಕಡಲ ಧ್ಯಾನ ಸಂಕಲನಕ್ಕೆ ಬಾಲೂರಾವ್ ದತ್ತಿನಿಧಿಯ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಮತ್ತು ನೀಲಿ ಹೂ ಸಂಕಲನಕ್ಕೆ ಪುತಿನ ಕಾವ್ಯ ಪುರಸ್ಕಾರ ಪಡೆದ ಬನ್ನಾಡಿ ಕವಿತೆಗಳು ಬಿಎಂಶ್ರೀ ಅವರ ಹಾಗೆಯೇ ಸಮರ್ಥ ಅನುವಾದ ಸಾಮರ್ಥ್ಯವನ್ನೂ ಪುತಿನ ಥರದ ಸರ್ವರ ಸಮಾನತೆಯನ್ನೂ ಪಡೆದುದರ ಕಾರಣವಾಗಿದೆ. ಕಾವ್ಯ ವಿಮರ್ಶೆಯ ಸವೆದ ಜಾಡುಗಳು ಈ ಕವಿಯು ಎತ್ತಿಹಿಡಿದ ಭಾವನಾತ್ಮಕ ನೆಲೆಯಾಚೆಗಿನ ಬೌದ್ಧಿಕ ತಹತಹಿಕೆಗಳನ್ನು ಬೇಕೆಂತಲೇ ಬದಿಗೆ ಸರಿಸುವ ಕಾರಣದಿಂದಾಗಿ ಜನಪ್ರಿಯ ಆವೃತ್ತಿಯ ಬಹು ಪ್ರಸರಣದ ಪತ್ರಿಕೆಗಳಲ್ಲಿ ಇಂಥವರ ಕಾವ್ಯ ಪ್ರಕಟವಾಗುವುದು ಅಪರೂಪ. ಹಾಗೆಂದೇ ಏನೋ ತಮ್ಮ ಚಿಂತನೆಗಳನ್ನು ಕವಿತೆಗಳನ್ನಾಗಿ ಪೋಣಿಸುವ ವಸಂತರು ತಮ್ಮ ಹೆಸರಿನಂತೆಯೇ ಎಂಥ ಗ್ರೀಷ್ಮದಲ್ಲೂ ವಸಂತದ ಚಿಗುರನ್ನು ಕಾಣಿಸಬಲ್ಲ ಕನಸುಳ್ಳವರು. ಅವರ ಬಿಡಿ ಬಿಡಿ ಕವಿತೆಗಳ ಡಿಸೆಕ್ಷನ್ನಿಗಿಂತಲೂ ಒಟ್ಟೂ ಕಾವ್ಯದ ಅನುಸರಣದ ಅಭ್ಯಾಸಕ್ಕಾಗಿ ಈ ಟಿಪ್ಪಣಿಯಲ್ಲಿ ಎಂದಿನಂತೆ ಪ್ರತ್ಯೇಕವಾಗಿ ವಿಭಾಗಿಸದೇ ಅವರ ಕಾವ್ಯದ ನಿಲುವಿನ ಬದ್ಧತೆಯ ಸೂಕ್ಷ್ಮವನ್ನು ಒಟ್ಟಂದದಲ್ಲಿ ಸವಿಯಲು ಅವರ ನಾಲ್ಕು ಕವಿತೆಗಳನ್ನು ಇಲ್ಲಿ ಕಾಣಿಸುತ್ತಿದ್ದೇನೆ. “ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?” ಎನ್ನುವ ಸಂಕಟದಲ್ಲೇ ಒಟ್ಟೂ ವರ್ತಮಾನದ ದಾಂಗುಡಿಗಳನ್ನು ವಿಮರ್ಶಿಸುತ್ತಲೇ ಸುಳ್ಳು ಸುಳ್ಳೇ ಒಳಾರ್ಥಗಳಿವೆ ಎಂದು ಬಿಂಬಿಸುವವರ ಪ್ಯೂರಿಟಿಯನ್ನು ಈ ಇಂಪ್ಯೂರ್ ಕವಿತೆ ಹೇ(ಕೇ)ಳುತ್ತಿದೆ. ೧.ಯಾರಿಗಾಗಿ ಬರೆಯಬೇಕಾಗಿದೆ ಕಾವ್ಯ.. …………………………………………………………. ಈ ಜಗತ್ತು ಯಾವತ್ತೂ ನನಗೆ ಬೇಸರ ಬರಿಸಿರಲಿಲ್ಲ ನನ್ನ ಅಜ್ಜಿಯ ನಡುಗುವ ಕೈಗಳು ಮುಖದ ಸುಕ್ಕುಗಳು ನನ್ನ ಜೀವನ ಪ್ರೀತಿಯನ್ನು ಹೆಚ್ಚಿಸಿದವು ನನ್ನ ಸಂಪರ್ಕಕ್ಕೆ ಬಂದವರು ಒಳ್ಳೆಯವರೂ ಆಗಿರಲಿಲ್ಲ ಕೆಟ್ಟವರೂ ಆಗಿರಲಿಲ್ಲ ಅಥವಾ ಎರಡೂ ಆಗಿದ್ದರು ಎರಡೂ ಆಗಿರಲಿಲ್ಲ ಹೀಗೆ ಹಾರಿಹೋದವು ನನ್ನ ಯೌವ್ವನದ ದಿನಗಳು ಯಾವ ಪೂರ್ವನಿರ್ಧರಿತ ಯೋಚನೆಗಳೂ ಇಲ್ಲದೆ ಎಲ್ಲರಿಗೂ ಕಷ್ಟಗಳು ಇದ್ದವು ಸಾಗರದಂತೆ ಮೈ ಚಾಚಿಕೊಂಡ ಕಷ್ಟಗಳು ನಡುವೆ ಉಕ್ಕುವ ನಗು ಬದುಕಿನ ಭರವಸೆ ಹುಟ್ಟಿಸುವ ನಗು ಸುಟ್ಟು ಹಾಕಿಬಿಡಬಲ್ಲ ಬೆಂಕಿ ಹೂವಾಗಿ ಅರಳಿದ ಗಳಿಗೆಗಳೂ ಇದ್ದವು ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಒಂದೋ ನಾನು ಓದುತ್ತಿರುವ ಪುಸ್ತಕಗಳಿಂದ ಎದ್ದು ಬಂದವರ ಹಾಗೆಯೂ ಅಥವಾ ಅವರೇ ಪುಸ್ತಕಗಳ ಒಳಗೆ ಸೇರಿಕೊಂಡವರ ಹಾಗೆಯೂ ಇರುತ್ತಿದ್ದುದರಿಂದ ನನಗೆ ಎಲ್ಲವೂ ಆಸಕ್ತಿದಾಯಕವೂ ನಿಗೂಢವೂ ಅಚ್ಚರಿದಾಯಕವೂ ಸಂತೋಷ ಕೊಡುವಂತದ್ದೂ ಖಿನ್ನನಾಗಿಸುವಂಥದ್ದೂ ಆಗಿ ಹೊಸ ವರ್ಷವೆನಿಸುತ್ತಿರಲಿಲ್ಲ ಯಾವ ವರ್ಷವೂ ಸಣ್ಣಪುಟ್ಟ ಆಸೆಗಳು ಹತ್ತಿಕ್ಕಿಕೊಂಡ ಸ್ವಾರ್ಥ ಹೆಡೆಬಿಚ್ಚುವ ಈಷ್ಯೆ೯ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ಸಂಕಟಗಳು ಹೇಳದೇ ಉಳಿದ ಮಾತುಗಳು ಎಲ್ಲವೂ ನದಿಯೊಂದು ಹರಿಯುವ ಹಾಗೆ ಹರಿಯುತ್ತಲೇ ಇರುವಾಗ ಬೆಚ್ಚಿ ಬೀಳಿಸಿದ್ದು ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಬರುತ್ತಿದ್ದ ಕೊಲೆಯ ಸದ್ದುಗಳು ಮನುಷ್ಯ ದೇಹವನ್ನು ಕತ್ತರಿಸಿ ಮೂಟೆಯಲಿ ಕಟ್ಟಿ ಬಿಸಾಕುತ್ತಿದ್ದ ಭೀಭತ್ಸಗಳು ಹಣಕ್ಕಾಗಿಯೋ ಪೂರ್ವದ್ವೇಷದಿಂದಲೋ ನಡೆಯುತ್ತಿದ್ದರಬಹುದಾದ ಕೃತ್ಯಗಳು ಅವೇ ಕೃತ್ಯಗಳು ಸಾಮೂಹಿಕವಾಗಿ ಬಿಟ್ಟರೆ? ಸಾಮೂಹಿಕವಾಗಿ ಒಬ್ಬನನ್ನು ಬೆನ್ನಟ್ಟಿದರೆ? ಗುಡಿಸಲುಗಳ ಮೇಲಿನ ಸಾಮೂಹಿಕ ದಾಳಿಯಾಗಿ ಬಿಟ್ಟರೆ? ಮುಗಿಸಿಬಿಡಲೆಂದೇ ಒಂದೇ ದಿಕ್ಕಿನಲ್ಲಿ ಯೋಚಿಸುವ ಇಬ್ಬರು ಮೂವರು ಹತ್ತಾರು ನೂರಾರು ಕೈಗಳು ಒಟ್ಟಾಗಿ ವಧಿಸತೊಡಗಿದರೆ? ಕಮರಿ ಹೋಯಿತು ನನ್ನ ಕಲ್ಪನೆ ಕಮರಿ ಹೋಗಿತ್ತು ನನ್ನ ಜಗತ್ತಿನ ಕಲ್ಪನೆಯೂ ನಡು ವಯಸ್ಸಿಗೆ ಕವಿದುಕೊಂಡಿತು ಕಣ್ಣಿಗೆ ಕತ್ತಲ ಪೊರೆ ಎಲ್ಲ ಅಸಡ್ಡಾಳಗಳ ನಡುವೆಯೂ ಸಹ್ಯವೆನಿಸಿದ್ದ ಜಗತ್ತು ಮೊದಲ ಬಾರಿಗೆ ಒಡೆದುಹೋಯಿತು ಕನ್ನಡಿಯೊಂದು ಠಳ್ಳನೇ ಒಡೆದು ಚೂರಾಗುವಂತೆ ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು? ಸಿದ್ಧಾಂತದ ಅಂಟಲ್ಲಿ ಸಿಲುಕಿದವರು ಅದರಿಂದ ಹೊರ ಬಂದರೂ ಬಿಟ್ಟೂ ಬಿಡದೇ ಕಾಡುವ ಆ ಅದೇ ದಾರಿಗಳು ಅವರು ನಂಬಿದ ಅಧ್ಯಾತ್ಮದ ದಾರಿಯೇ ಆಗಿ ಬದಲಾಗುವುದನ್ನು ಈ ಪದ್ಯ ಸಮರ್ಥಿಸುತ್ತಿದೆ. ಈ ಕವಿತೆಯಲ್ಲಿ ಕವಿ ಯಾರೊಂದಿಗೆ ಸಂಕಟದ ಸಾಗರವನ್ನು ದಾಟಿದ್ದು ಪ್ರೇಮಿಯೊಂದಿಗೋ, ಗೆಳೆಯನೊಂದಿಗೋ ಅಥವ ತನ್ನದೇ ಸಿದ್ಧಾಂತದೊಂದಿಗೋ ಎನ್ನುವುದು ಆಯಾ ಓದುಗರ ಮರ್ಜಿಗೆ ಬಿಟ್ಟ ಸಂಗತಿ. ೨. ದಾಟಿದೆವು ನಾವು ಸಂಕಟದ ಸಾಗರವನು ……………………………………………………. ಸಂಕಟದ ಮಹಾಸಾಗರಗಳೇ ತುಂಬಿವೆ ನಮ್ಮ ಗತಕಾಲದ ದಿನಚರಿಯ ಪುಟಗಳಲಿ ಎಂತಹ ದಾರುಣ ಕಾಲವನು ದಾಟಿ ಬಂದೆವು ನಾವು ನಿನ್ನನು ತಲುಪಲು ನನ್ನ ಬಳಿ ಅಂದು ಒಂದು ಮುರುಕು ದೋಣಿಯೂ ಇರಲಿಲ್ಲ ಆಚೆ ದಡದಲ್ಲಿ ಕೈಬೀಸಿ ಹಾಗೆಯೇ ಮರೆಯಾಗಿ ಬಿಡುತ್ತಿದ್ದೆ ನೀನು ನಕ್ಷತ್ರಗಳ ಗೊಂಚಲನು ಮನೆಯಂಗಳದಲಿ ನೆಡುವ ಕಣಸ ಕಂಡಿದ್ದೆವು ನಾವು ಕಾಲೂರಲೊಂದು ಅಂಗುಲ ನೆಲ ಬಿಸಿಲ ತಾಪ ಮರೆಸಲು ನಾಕು ಹಿಡಿ ಸೋಗೆ ಇಷ್ಟಿದ್ದರೆ ಸಾಕು,ಗೆದ್ದೆವು ಅಂದುಕೊಂಡಿದ್ದೆವು ಇಕ್ಕಟ್ಟಾಗುತ್ತಾ ಹೋಗುವ ಊರ ಓಣಿಯ ದಾರಿ ಬೆನ್ನಿಗಂಟಿ ಈಟಿ ಇರಿವ ಮಂದಿಯ ಕಿಡಿ ಕಣ್ಣು ಸಾಗುತ್ತಲೇ ಇರಬೇಕೆಂಬ ಹಂಸ ನಡೆಯನು                 ಗಟ್ಟಿಗೊಳಿಸಿದವು ನಮ್ಮಲಿ ನಮ್ಮ ಜೊತೆಗಿದ್ದುದು ಗಾಳಿಯ ಮರ್ಮರ ಬಿಡದೆ ಹಿಂಬಾಲಿಸುವ ಕೋಗಿಲೆಯ ಕುಹೂ ಕುಹೂ ಗಾನ ಶೃತಿ ಹಿಡಿವ ಏಕತಾರಿ ಜೀರುಂಡೆ ಜೀಕು ಕವುಚಿ ಬಿದ್ದ ಬೋಗುಣಿಯೆಂಬ ಆಕಾಶದ ಸೊಗಸು ಪ್ರತೀ ಸಲ ಸಾಗರದ ಮುಂದೆ ನಿಂತಾಗಲೂ ಯೋಚಿಸುವುದಿದೆ ನಾವು ನಿರಾಳತೆಯ ಹೊದಿಕೆ ಹೊದ್ದಿರುವ ಸಾಗರವೆಂಬ ಸಾಗರವೇ ಹಾಗೆ ಕೂಗಿ ಕೊಳ್ಳುತ್ತಿದೆಯೇಕೆ ಲೋಕಕೆ ಮುಖ ಮಾಡಿ? ಕೊತ ಕೊತ ಕುದ್ದು ಅಲೆಯಲೆಯಾಗಿ ಹೊರಳಿ ದನಿಯೆತ್ತಿ ದಡಕ್ಕನೆ ಅಪ್ಪಳಿಸುತ್ತಿದೆಯೇಕೆ? ಅಂತಹ ಸಂಕಟ ಅದೇನು ಹುದುಗಿದೆ ನಿನ್ನ  ಒಡಲಲಿ? ನಮ್ಮ ಉಸಿರ ಬಿಸಿಯನು ಉಳಿಸಿದ್ದು ಧನ ಕನಕ ಬಣ್ಣ ಬಡಿವಾರಗಳಲ್ಲ ದಿನವೂ ಇಷ್ಟಿಷ್ಟೇ ಹಂಚಿಕೊಂಡ ಒಲವೆಂಬ ಮಾಯಕದ ಗುಟುಕುಗಳು ಮಿಂದುಟ್ಟು ನಲಿಯ ಬಯಸಿದ್ದು ನಾನು ನಿನ್ನ ಅಂಗ ಭಂಗಿಗಳ ನಿರಾಭರಣ ಝರಿಯಲಿ ಮುಗಿಲ ನಕ್ಷತ್ರಕೆ ಆಸೆಪಡದ ನಾನು ಮುಖವೂರಲು ಬಯಸಿದ್ದು ನಿನ್ನ ನಿಬಿಡ ಹೆರಳಿನ‌ ಸಿಕ್ಕುಗಳಲಿ ———————————- “ಕಡಲು ಮತ್ತು ನೀನು” ಪದ್ಯದ ವಿನಯವಂತಿಕೆ ಎಂದಿನ ಇವರ ರೂಕ್ಷ ರೀತಿಯಿಂದ ಬಿಡಿಸಿಕೊಂಡ ಆದರೆ ಸಂಬಂಧಕ್ಕೂ ಸಿದ್ಧಾಂತದ ಹೊರೆಯನ್ನು ದಾಟಿಸುವ ಯತ್ನ ೩.ಕಡಲು ಮತ್ತು ನೀನು ………………….‌….. ಮಳೆಗಾಲದ ಕಡಲು ಎಂದಿನ ಕಡಲಿನಂತಲ್ಲ ನೋಡಿದ್ದೀಯ ನೀನು ಮಳೆಗಾಲದ ಕಡಲನು? ಅದು ಅಲ್ಲೋಲ ಕಲ್ಲೋಲ ಮಗುಚುವುದನು? ಜಗತ್ತಿನ ಕೊಳೆ ಕೆಸರನು ಮರುಮಾತನಾಡದೆ ಹೊದ್ದು ಕೆಸರಾಗುವುದನು ತಾನೂ ನೀಲಾಕಾಶ ತಾನಾಗಬೇಕೆಂದು ವರುಷವಿಡೀ ಕನಸುವ ಕಡಲು ಈಗ ಕಪ್ಪಾಗುವುದು ಅದೂ ಎಂಥಾ ಕಪ್ಪು ಕಾಡಿಗೆ ಕಪ್ಪು ಕಡಲು! ತಾಳಲಾರದೆ ತಳಮಳ ಅಗ್ನಿಕುಂಡವಾಗುವುದು ಕೊತ ಕೊತ ಕುದಿಯುವುದು ನೋಡಿದ್ದೀಯಾ ನೀನು ನೋಡಿದ್ದೀಯಾ ನೋಡಿದ್ದೇನೆ ನಾನು ಕಡಲನು ನಿನ್ನ ಕಣ್ಣುಗಳಲಿ ಕಡಲು ಅಲ್ಲಿ ತುಳುಕಾಡುವುದನು ಯಾರ ಊಹೆಗೂ ನಿಲುಕದ ಭಾವ ಕಡಲು ಒಂದು ವ್ಯತ್ಯಾಸವಿದೆ ಮಳೆಗಾಲದ ಕಡಲಿಗೂ ನಿನ್ನ ಕಾಡಿಗೆ ಕಣ್ಣಿಗೂ ಭೋರ್ಗರೆವ ನೀನು ರೆಪ್ಪೆಗಳ ಒಳಗೇ ಕೂಗು ಹಾಕುವುದಿಲ್ಲ ಕಡಲಂತೆ ಕತ್ತರಿಸುತ್ತಾ ಹರಿಯುವುದೂ ಇಲ್ಲ ಯಾರನೂ ನೋಯಿಸುವ ಇರಾದೆ ಇರದ ನೀನು ಎಲ್ಲವನು ಬಲ್ಲ ಮೌನ ಕಡಲು ಬೇಸರ ಮುತ್ತಿಕೊಂಡಾ ನಿನ್ನನು ಮರಳುವೆ ನೀನು ನಿನ್ನ ಅಲೆಹಾಡಿನರಮನೆಗೆ ಅನುಗಾಲದ ಕಡಲಂತೆ ಶಾಂತ,ಗಂಭೀರ ಅಲೆ ಅಲೆಗಳಲಿ ಫಳಫಳ ಬೆಳ್ಳಿ ಬೆಳಕ ಚಿಮ್ಮಿಸುವ ರುದ್ರ ನೀಲ ಮನೋಹರ ಮಡಿಲು ಇಂಗಿ ಹೋಗುವುದು ನಿನ್ನೊಳಗೆ ಯಾರ ಗಮನಕೂ ಬಾರದೆ ಬೆಂಕಿಯ ನದಿಯೊಂದು ದೂರದಲೆ ನಿಂತು ನಿನ್ನ ನೋಡುವೆ ನಾನು ಕಡಲ ಅನತಿ ದೂರದಲಿ ಕೈ ಕಟ್ಟಿ ನಿಂತಿರುವ ಅನಾದಿ ಬಂಡೆಯೊಂದಿರುವುದಲ್ಲ ಹಾಗೆ ಪ್ರೀತಿಯ ಸಿಂಚನದಲಿ ದಿನವೂ ತೋಯಬಯಸುವವನು ಸ್ಪರ್ಶದ ದಿಗಿಲಿಗೆ ಹಾತೊರೆಯುವವನು ಬಿರುಮಳೆ ಹೆಂಡದ ನಶೆ ಏರಿಸಿಕೊಂಡ ಕಡಲು ಬಾನೆತ್ತರ ಚಿಮ್ಮಿ ಬಂದೆರಗುವುದಲ್ಲ ಬಯಸುವೆ ಅದನೇ ನಾನೂ ಉಪ್ಪು ತೋಳಾಗಿ ಬಂದು ನೀನು ಅಪ್ಪುವುದನು ———————————————— ಮಾಧ್ವ ಸಂಪ್ರದಾಯವನ್ನು ಬಿಡದೆಯೂ ಮಾರ್ಕ್ಸ್ ವಾದದ ಅಪ್ರತಿಮ ಪ್ರತಿ ಪಾದಕರಾಗಿದ್ದ ಕವಿ ಸು.ರಂ.ಎಕ್ಕುಂಡಿ ಯಾಕೋ ಈಗ ನೆನಪಾಗುತ್ತಾರೆ. ತಾವು ನಂಬಿದ ಸಿದ್ಧಾಂತ ಮತ್ತು ತತ್ವಕ್ಕೆ  ನಿಷ್ಠೆ ಇಟ್ಟುಕೊಂಡೂ ಬದುಕಿನ ರೀತಿಯಲ್ಲಿ ರಾಜಿಯಾಗದೆ ಆದರ್ಶವಾಗುವುದು ಕಡು ಕಷ್ಟದ ಕೆಲಸ. ವಸಂತ ಬನ್ನಾಡಿಯವರೂ ಎಕ್ಕುಂಡಿಯವರ ಮಾರ್ಗವನ್ನು ಅನುಲಕ್ಷಿಸಿದ್ದೇ ಆದರೆ ಅವರೊಳಗಿನ ಕವಿಗೆ ಮತ್ತಷ್ಟು ಕಸುವು ಮತ್ತು ಕಸುಬು ಸಿದ್ಧಿಸೀತೆಂಬ ಆಶಯದೊಂದಿಗೆ “ಮಳೆಗಾಲದ ಹಾಡು ಪಾಡು” ಕವಿತೆಯ ಸಾಲುಗಳಾದ

Read Post »

ಕಾವ್ಯಯಾನ

ಸೋಜಿಗವಲ್ಲ ಈ ಜಗವು

ಕವಿತೆ ಸೋಜಿಗವಲ್ಲ ಈ ಜಗವು ರೇಷ್ಮಾ ಕಂದಕೂರ. ಸೋಜಿಗವಲ್ಲ ಈ ಜಗವುಪೇಚಿಗೆ ಸಿಲುಕದಿರಿ ನಿರ್ಲಕ್ಷ್ಯ ತನದಿಉನ್ನತ ವಿಚಾರ ಧಾರೆ ಅನುಕರಿಸಿ ಭಾಜನಾರಾಗುವೆವು ಸುಕೃತಿಗಳ ಔತಣಕೆಶೂದ್ರತನವು ಏಕೆ ತೃಣಮಾತ್ರಕೆಭದ್ರವಾಗಿರಿಸಿ ಕಾಮನೆಗಳ ಕೀಲಿಕೈ ತದ್ರೂಪ ಮೋಹಕೆ ಬಲಿಯಾಗದೇಬದ್ಧತೆಯಲಿರಲಿ ಜೀವಯಾನದ ನೌಕೆಅರಳಲು ಬಿಡಿ ಸುಕೋಮಲ ಮನ ಪುಷ್ಪವ ವ್ಯವಹಾರದಲಿ ವ್ಯವಧಾನದ ನಂಟಿರಲಿಬಿದ್ದವನು ಮರುಘಳಿಗೆ ಏಳಲೇಬೇಕುಕದ್ದ ಮನೋಭಾವ ನರಳುವುದು ಶುದ್ಧ ಸರಳತನಕೆ ಬೆಲೆ ಕೊಡಿಅರಿಯಿರಿ ವಿರಳವಾದುದು ಮಾನವ ಜನ್ಮಕಲಹ ಕೋಲಾಹಲದಲಿ ಬೇಡ ಕಾಲಹರಣದ ಕುರೂಪತೆ ನಡೆಬಡಿವಾರದ ಕೂಗು ಬೇಕೆಹಗೆತನದ ಮತ್ತಿನ ಸುತ್ತ ಚರ್ಮದ ಹೊದಿಕೆಯ ಮಾಂಸಕೆಕರ್ಮದ ಫಲಿತಾಂಶವೇ ದೃಢಬುರುಡೆಯ ಮಾತೆಗೇಕೆ ಮಣೆ ಗೇಣುದ್ದ ಜಾಗವೇ ಕೊನೆಮಾರುದ್ಧ ಭಾಷಣ ಮಾಡುತಕಿಡಿ ಕಾರುವ ಬಡಿದಾಡುವ ಕಥನ ಬಿಡಿ ಕ್ಷಣಕಾಲದ ಸುಖಕೆ ಗಮನಅಂತರಾಳದ ಮಾತೊಮ್ಮೆ ಕೇಳುತಸುಪ್ತಸ್ಥಿತಿಯ ಭಿತ್ತಿಯಲಿ ಬೇಡ ಕೂರ್ಮಾವತಾರ ಅನುಬಂಧಧ ಅಲೆಯಲಿ ತೇಲುವ ಬಾನಗೆ ಮಲ್ಲಿಗೆಯ ಅನುಭಾವದಿಸಂಬಂಧಕೆ ಬೆಲೆ ನೀಡಿಬರೆಯಿರಿ ಸತ್ಯಾಸತ್ಯದ ಗೋಡೆ ಬರಹ. ***********************************

ಸೋಜಿಗವಲ್ಲ ಈ ಜಗವು Read Post »

ಕಾವ್ಯಯಾನ, ಗಝಲ್

ಗಝಲ್

ಮಕ್ಕಳಿಗಾಗಿ ಗಝಲ್ ಲಕ್ಷ್ಮೀದೇವಿ ಪತ್ತಾರ ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ ಹಸಿರಾಡದ ಮರುಭೂಮಿಯಂತಾದ ನಿಮ್ಮ ಬದುಕಿಗೆ ಉದಕ ನಾನಾಗಿ ಹಚ್ಚಹಸಿರು ಸಸ್ಯರಾಶಿ ಚಿಗುರಿಸುವೆಚಿಂತೆಯ ಕಸ ಬೆಳೆಸಿಕೊಂಡು ಮತ್ತೆ ಬರಡು ಭೂಮಿಯಾಗಬೇಡಿಇದು ಲಕುಮಿ ಶಿಕ್ಷಕಿಯ ಕಳಕಳಿ ಬೇಡಿಕೆ ಮಕ್ಕಳೆ ***************************

ಗಝಲ್ Read Post »

ಇತರೆ

ನಮ್ಮೂರ ಕೆರೆಯ ವೃತ್ತಾಂತ

ಪದ್ಯ/ಗದ್ಯ ನಮ್ಮೂರ ಕೆರೆಯ ವೃತ್ತಾಂತ ಡಾ. ಅರಕಲಗೂಡು ನೀಲಕಂಠ ಮೂರ್ತಿ ನಮ್ಮೂರ ವಿಶಾಲ ತಬ್ಬಿಅಲೆಯಲೆಯಾಗಿ ಹಬ್ಬಿಹರಿದಿದ್ದ ಸಾಗರದಂಥ ಕೆರೆಈಗ ಬಸ್ ನಿಲ್ದಾಣ! ಹೇಮಾವತಿಯ ಚಿತ್ತಹರಿಯುವ ಮುನ್ನನಮ್ಮೂರಿನತ್ತಆ ‘ದೊಡ್ಡ ಕೆರೆ’ಯೇಕೋಟೆ ಪೇಟೆಯಬಂಗಾರ ಜೀವಜಲ!ಅದೀಗ ನಮ್ಮೂರ ‘ಹೆಮ್ಮ’ಯಬಸ್ ಸ್ಟ್ಯಾಂಡ್! ಒಂದೊಮ್ಮೆ ಮೊಗೆಮೊಗೆದಷ್ಟೂಉಗ್ಗಿದ್ದ ನೀರು…ಎಂದೆಂದೂ ಬತ್ತಿ ಬರಡಾಗದೆನಿತ್ಯ ಹರಿದಿದ್ದ ತೇರು!ಶತಮಾನಗಳ ತಲೆಮಾರುಗಳಮೈ-ಮನ ತೊಳೆದಿದ್ದನೀರಡಿಕೆ ನಿರಂತರ ನೀಗಿದ್ದವರುಷ ವರುಷ ಗಜಗಾತ್ರಗಣೇಶ ಮೂರ್ತಿಗಳನೆಆಪೋಶಿಸಿದ್ದಆ ನೀರ ಮಹಾರಾಶಿಈಗಸೆಲೆಯೂ ಇಲ್ಲದ ಅಪರಂಜಿ –ಬರಡು!ಯಾರ ಚಿಂತನೆಯಅದೆಂಥ ಬೆರಗು!ಆ ನೀರ ಜೊತೆಜೊತೆಗೆಪ್ರತಿಫಲಿಸಿದ್ದಇನ್ನುಳಿದ ಕೆರೆಗಳೂ ಕೂಡಈಗ ನೆಲಸಮ…ಬರೀ ನೆನಪು! ಅಂದಿನ ಆ ನೀರ ಅನಂತತೆಇಂದು ನಿಶಾರಾತ್ರಿಗಳಲಿಕೇಕೆ ಹಾಕಿ ಊಳಿಡುವಹೊಚ್ಚ ಹೊಸ ಬಸ್ ಸ್ಟ್ಯಾಂಡ್..! ನೀರು…ನೀರು…ನೀರು! ನೀರಿನಬಗ್ಗೆ  ಎಚ್ಚರಿಕೆಯ ಘಂಟೆ ಮೊಳಗುತ್ತಿದೆ ಜಗತ್ತಿನಾದ್ಯಂತ. ಜೊತೆಗೆ ಹಿಮಗೆಡ್ಡೆಗಳು ಕರಗುತ್ತಿರುವಂಥ, ಮತ್ತದರಿಂದ ಏರುಗತಿಯಲ್ಲಿರುವ ಸಮುದ್ರಮಟ್ಟ. ದಿಗ್ಭ್ರಮೆಗೊಳಿಸುವ  ಚಂಡಮಾರುತಗಳು ಮತ್ತು ನಗರಗಳಲ್ಲೂ ಈಜು ಹೊಡೆಸುತ್ತಿರುವ ರಾಕ್ಷಸೀ ಮಳೆ! ಇಂಥ ಆಘಾತದ ವೈಜ್ಞಾನಿಕ ವರ್ತಮಾನಗಳು. ಕಾರಣವೂ ವಿಜ್ಞಾನದಲ್ಲಿ ಇಲ್ಲದಿಲ್ಲ. ಈ ವಿಷಯ ಒತ್ತಟ್ಟಿಗಿರಲಿ. ಈ ಲೇಖನಕ್ಕೂ  ಮೇಲಿನ ವಿಷಯಕ್ಕೂ ಸದ್ಯದಲ್ಲಿ  ಸಂಬಂಧವಿಲ್ಲ. ನೀರು ಮತ್ತು ನೀರನ್ನು ಹೊತ್ತು ತುಂಬಿತುಳುಕುವ ಕೆರೆಗಳ ಬಗ್ಗೆ…(ನಮ್ಮೂರ “ವಾಟರ್ ಬಾಡೀಸ್ ಬಗ್ಗೆ)… ನಮ್ಮೂರು ನಿಮಗೆಲ್ಲ ಈಗಾಗಲೇ  ತಿಳಿದಿರುವಹಾಗೆ ಅರಕಲಗೂಡು. ಅ.ನ.ಕೃ.ಕುಟುಂಬದ ಮೂಲವಾದ ಊರು. ನಮ್ಮೂರು ಎರಡು ಭಾಗವಾಗಿದೆ  — ಪೇಟೆ ಹಾಗೂ ಕೋಟೆ ಎಂದು. ಮಧ್ಯದಲ್ಲಿ ಪೇಟೆ ಯಿಂದ ಕೋಟೆಯಕಡೆ ಹೋಗುವಾಗ ಎಡಭಾಗದಲ್ಲಿ ಒಂದು ದೊಡ್ಡ ಕೆರೆ. ಪಕ್ಕದಲ್ಲೇ ಪೇಟೆ-ಕೋಟೆಯ ನಡುವೆ ಡಾಂಬರು ರಸ್ತೆ. ಇನ್ನೊಂದು ಪಕ್ಕ ಹಳ್ಳದ ತೋಟ. ಇದಲ್ಲದೆ ಪೇಟೆಯ ಸುತ್ತಮುತ್ತ ಇನ್ನೊಂದು ಮೂರು ಸಣ್ಣ ಕೆರೆಗಳಿದ್ದವು. ಇದಿಷ್ಟು ನಾವು ಚಿಕ್ಕಂದಿನಿಂದ ನೋಡುತ್ತಾ ಬೆಳೆದ ಚಿತ್ರಣ… ಆದರೀಗ ಅದು ಹಾಗಿಲ್ಲ! ಅದಕ್ಕೆ ಮೊದಲು, ಆ ಕೆರೆಯ ಬಗ್ಗೆ ಒಂದೆರಡು ಮಾತು… ನನ್ನ ಕಣ್ಣಲ್ಲಿ ಈಗಲೂ ಅದು ಹಾಗೇ ಅಂದಿನ ಹಾಗೆಯೇ ಸಾಗರ! ಬಹಳವೇ ವಿಶಾಲವಾಗಿತ್ತು. ಅದರ ನಿಜ ವಿಸ್ತೀರ್ಣ ನನಗೆ ಅರಿವಿಲ್ಲದಿದ್ದರೂ, (ಅದು ಇಲ್ಲಿ ಅಪ್ರಸ್ತುತ ಕೂಡ), ವಿಶಾಲವಾಗಿದ್ದುದು ನಿಜ. ಸುಮಾರು ಜಮಾನುಗಳಿಗೆ ಜೀವಜಲದಂತೆ ಉಣಬಡಿಸಿತ್ತು. ಕೋಟೆ ಪೇಟೆ ಎರಡೂ ಸೇರಿದಂತೆ ಅನೇಕಾನೇಕ ತುಂಬು ಮನೆಗಳ ಮೈಮನದ ಕೊಳೆ ಅಳಿಸಿ, ಶುಭ್ರ ಬಟ್ಟೆಗಳಿಗೆ ಕಾರಣವಾಗಿದ್ದ ಕೆರೆ. ಮತ್ತು ಹೇಮಾವತಿ (ಗೊರೂರಿನಿಂದ – ಸುಮಾರು ಐದು ಕಿಲೋಮೀಟರಿನಷ್ಟು ದೂರ -ನಮ್ಮೂರ ವರೆಗೆ) ನದಿಯ ನೀರು ನಮ್ಮ ತೃಷೆಯನ್ನು ನೀಗಿಸಲು ಹರಿದುಬರುವ ತನಕ, ಆ ದೊಡ್ಡ ಕೆರೆ ಯೇ  ನಮ್ಮ ಬಾಯಾರಿಕೆಯನ್ನು ನಿರಂತರ ತಣಿಸಿದ್ದಲ್ಲದೆ, ನಮ್ಮೆಲ್ಲ ಕುಟುಂಬಗಳ ಅಡುಗೆ ಮನೆಯ ಒಲೆಗಳ ಮೇಲೆ ತದೇಕ ಕುದಿಯುತ್ತಿದ್ದ ಎಲ್ಲ ಥರದ ದ್ರವಾಹಾರದ ಮೂಲವೂ ಆಗಿದ್ದು,  ಶೇಖರಣೆಗೆ ಕೊಳದಪ್ಪಲೆಗಳಲ್ಲಿ ತುಳುಕಿದ್ದಲ್ಲದೆ, ದೇವರ ವಿಗ್ರಹಗಳ ಶುಭ್ರತೆಗೂ, ತೀರ್ಥಕ್ಕೂ ಗಂಗಾಮಾತೆಯಾಗಿದ್ದ ಮೂಲಾಧಾರ! ಪ್ರತಿ ವರ್ಷ ನಮ್ಮೂರಲ್ಲಿ ಗಣೇಶನ ಹಬ್ಬಕ್ಕೆ ತುಂಬ ದೊಡ್ಡ ವಿಗ್ರಹವನ್ನು ಪ್ರತಿಸ್ಠಾಪಿಸುತ್ತಿದ್ದರು. ಆ ಅಷ್ಟು ದೊಡ್ಡ ಗಣಪತಿ ಮೂರ್ತಿಯನ್ನು ಕೂಡ ಇದೇ ನಮ್ಮ ಹೆಮ್ಮೆಯ ಕೆರೆಯಲ್ಲಿಯೇ ವಿಸರ್ಜನೆ ಮಾಡುತ್ತಿದ್ದುದು. ನಾನು ಸುಮಾರು ವರ್ಷ ಆಫ್ರಿಕ ಖಂಡದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ — ನನ್ನ ಮೈಸೂರಿನ ಕ್ಲಿನಿಕ್ ಆರಂಭಿಸುವ ಮುನ್ನ. ವರ್ಷಕ್ಕೊಮ್ಮೆ ರಜೆಗೆ ಕುಟುಂಬದ ಒಡನೆ ಭಾರತಕ್ಕೆ ಬಂದು ಹೋಗುತ್ತಿದ್ದೆ. ಆಗೆಲ್ಲ, ಹೇಗಾದರೂ ಬಿಡುವು ಮಾಡಿಕೊಂಡು ಊರಿಗೆ ಹೋಗುವುದು, ಆ ಕೆರೆಯನ್ನು ಹತ್ತಿರದಿಂದ ಕಣ್ತುಂಬಿಸಿಕೊಂಡು ಬರುವುದು ಅಭ್ಯಾಸವಾಗಿತ್ತು. ಇಂಥ ಕೆರೆ ಈಗಿಲ್ಲ! ಅನೇಕಾನೇಕ ಊರುಗಳ ದುರಂತ ಗಳ ಹಾಗೆ, ಅದು ಈಗಿಲ್ಲ…ಹಾಗಿದ್ದರೆ ಅದು ಈಗೆಲ್ಲಿ? ಹೌದು, ಈಗೆಲ್ಲಿ. ನಮ್ಮೂರಲ್ಲಿ ನಾನು ಚಿಕ್ಕವನಿದ್ದಾಗಿಂದ ಕಂಡಹಾಗೆ ಕೋಟೆ ಪೇಟೆಯ ನಡುವೆ ನಮ್ಮ ಬಸ್ ನಿಲ್ದಾಣವಿತ್ತು – ಚಿಕ್ಕದಾದರೂ ನಮ್ಮೂರಿಗೆ ಸಾಕಾಗಿತ್ತು. ಇತ್ತೀಚಿನವರೆಗೂ ಅದೇ ಇತ್ತು. ಯಾವ ತಲೆಯ ಅದೆಂಥ ಕೋಡೋ ಏನೋ ಎದ್ದಂತೆ, ಈಗಿರುವ ನಿಲ್ದಾಣದ ಅನತಿ ದೂರದಲ್ಲೇ ಇನ್ನೊಂದು, ಕಾಂಪೌಂಡ್ ಸಹಿತ, ನಿಲ್ದಾಣ ನಿರ್ಮಿಸಲಾಯಿತು. ನಿರ್ಮಿಸಿದ್ದಷ್ಟೇ ಲೆಕ್ಕ, ನಂತರ ಪಾಳು  – ಎಲ್ಲ ಥರದ  ಚಟುವಟಿಕೆಗಳ ತವರಾಯಿತು! ಇದಿಷ್ಟು ನಾನು ಕಣ್ಣಾರೆ ಕಂಡದ್ದು. ನಾನು ಆಫ್ರಿಕಾದಿಂದ ಭಾರತಕ್ಕೆ ಮರಳಿ, ನನ್ನ ಕ್ಲಿನಿಕ್ ಆರಂಭಿಸಿ, ನಮ್ಮ ಬದುಕಿನ ಚಟುವಟಿಕೆಯತ್ತ ತೊಡಗಿಸಿಕೊಳ್ಳುತ್ತಿದ್ದ ಹಾಗೇ, ಊರಿಗೆ ಮೊದಲ ರೀತಿ ಹೋಗಿಬರಲು ಕೂಡ ದುಸ್ತರವಾಗುತ್ತಿತ್ತು. ಹಬ್ಬ, ಹುಣ್ಣಿಮೆ,  ಹಿರಿಯರ ತಿಥಿ ಮುಂತಾಗಿ ಹೋದಾಗ ಕೂಡ ಕೆರೆಯತ್ತ ತಿರುಗಲೂ ಆಗದಷ್ಟು ಧಾವಂತ! ಬೆಳಿಗ್ಗೆ ಹೋದರೆ, ಮಧ್ಯಾಹ್ನದ ಊಟದ ತಕ್ಷಣ  ವಾಪಸ್ಸಾಗುವುದನ್ನೇ ನೋಡುವಷ್ಟು! ಹೀಗಾಗಿ  ಕೆರೆಯ ಕಡೆ ಗಮನವೇ ಇರದಷ್ಟು ಅಥವಾ ಅಷ್ಟು ವ್ಯವಧಾನವಿರಲಿಲ್ಲ ಎನಿಸುವಷ್ಟು! ಆ ಒಂದು ದಿನ, ನನ್ನ ಕ್ಲಿನಿಕ್ಕಿಗೆ ನಮ್ಮೂರವರು ಒಬ್ಬರು ಬಂದರು. ಅವರಿಂದ ತಿಳಿಯಿತು  – ಅತೀ ದುಃಖದ ಸಮಾಚಾರ… ನಮ್ಮೂರ ಕೆರೆ ಇನ್ನಿಲ್ಲ! ಹೌದು, ಕೆರೆ ಇಲ್ಲ. ಹಾಗಾದರೆ ಏನಾಯಿತು ಅಥವಾ ಎಲ್ಲಿಗೆ ಸಾಗಿಸಲಾಯಿತು–ಹೊಸದೇನಾದರೂ ತಾಂತ್ರಿಕತೆಯಿಂದ ಬೇರೆಡೆಗೇನಾದರೂ…?! ಉಹುಂ…ಇಲ್ಲ! ಮುಚ್ಚಲಾಗಿದೆ. ಮುಚ್ಚಿ ಮತ್ತೊಂದು, ಮೂರನೆಯ, ಬಸ್ ನಿಲ್ದಾಣ ನಿರ್ಮಿಸಲಾಗಿದೆ! ಆಹಾ…ಅದ್ಭುತ! ಎಂಥ  ತಲೆ ಇರಬಹುದು, ಎಂಥ ಸಾಧನೆ! ಒಮ್ಮೆ ಊರಿನತ್ತ ಹೋದೆ…ವಿಶಾಲ ಕೆರೆಯಲೀಗ ಆ ವೈಶಾಲ್ಯವೇ ಇಲ್ಲ! ಕೆರೆಯ ಬದಲು  ಅಲ್ಲಿ ಬಸ್ ಸ್ಟ್ಯಾಂಡ್!  ಮತ್ತು ಅದರ ಅತ್ತಿತ್ತ  ಮಕ್ಕಳ ಆಟಕ್ಕಾಗಿ ಒಂದು ಉದ್ಯಾನವನದ ರೀತಿ! ಅಷ್ಟೇ ಅಲ್ಲ. ಪೇಟೆಯ ಸುತ್ತ ಇದ್ದ ಯಾವ ಕೆರೆಯೂ ಈಗಿಲ್ಲ. ಎಲ್ಲ ಬರಡು. ಭಣ ಭಣ! ಯಾರು ಕಾರಣರೋ, ಅಥವಾ ಅದೆಂಥ ಕಾರಣವೋ (ಯಾರ ಪಾಪವೋ) ನಾನರಿಯೆ…ಆದರೆ ನನಗನಿಸಿದ್ದು…ಊರೂರಲ್ಲೂ ಇಂಥ ಒಬ್ಬೊಬ್ಬ ಪ್ರಭೃತಿಯಿದ್ದರೆ, ಜಗತ್ತು ಉದ್ಧಾರ! ಕಾವೇರಿ  ಗಂಗೆಯರನ್ನು ಭೂಮಿಗಿಳಿಸಿದ ಅಗಸ್ತ್ಯ ಭಗೀರಥರೀಗ ಈ ಇಂಥವರಿಂದ ಧನ್ಯ…! ***********************************

ನಮ್ಮೂರ ಕೆರೆಯ ವೃತ್ತಾಂತ Read Post »

ಇತರೆ

ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ

ಲೇಖನ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ ಡಾ. ಎಸ್.ಬಿ. ಬಸೆಟ್ಟಿ ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಕಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪಾನಿಶ್ ಪ್ಲೂ ಇತ್ಯಾದಿ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್ ಪ್ಲೂ ಮಾತ್ರ ೧೯೧೮-೧೯ ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ ೨೯ನೇ ಮೇ ೧೯೧೮ ರಂದು ಬಂದಾಗ. ಆಗ ಪೋಲಿಸರು, ಮಿಲ್‌ಗಳಲ್ಲಿ ಕೆಲಸ ಮಾಡುವವರು ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ,ಜ್ವರ, ಮೈಕೈನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆ ದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. ೨% ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ ೧ ಕೋಟಿಗೂ, ಜಗತ್ತಿನಲ್ಲಿ ೫ ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.             ಪ್ರಥಮ ವಿಶ್ವ ಯುದ್ಧದ ತರುವಾಯ ಭಾರತದ ಜನತೆ ೧೯೧೮-೧೯ರ ಸ್ಪ್ತಾನಿಶ್ ಪ್ಲೂ ಎಂಬ ವಿಶ್ವವ್ಯಾಪಿ ಮಹಾಮಾರಿಯಿಂದ ತತ್ತರಿಸಿ ಹೇಗೋ ಚೇತರಿಕೊಳ್ಳುತ್ತಿರುವಂತೆಯೇ ೧೯೧೯ ರ ಕರಾಳವಾದ ರೌಲೆಟ್ ಕಾಯ್ದೆಯು ಜನತೆಯ ಸ್ವಾತಂತ್ರ್ಯ ವನ್ನು ಮತ್ತಷ್ಟು ಮೊಟಕುಗೊಳಿಸಿತ್ತು. ಆ ವೇಳೆಗೆ ಗಾಂಧೀಜಿ ರೌಲೆಟ್ ಕಾಯ್ದೆಯ ವಿರುದ್ಧವಾಗಿ ೬ನೇ ಎಪ್ರಿಲ್ ೧೯೧೯ ರಂದು ದೇಶವ್ಯಾಪಿ ಸತ್ಯಾಗ್ರಹವನ್ನು ನಡೆಸಿದರು. ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿನ ದಬ್ಬಾಳಿಕೆಯ ಪರಮಾವಧಿ ಎಂಬಂತೆ ೧೩ನೇ ಎಪ್ರಿಲ್ ೧೯೧೯ ರಂದು ಜನರಲ್ ಡೈಯರನು ಎಸಗಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಮಾನವತೆಯ ಸಾಕ್ಷೀಪ್ರಜ್ಞೆಯನ್ನೇ ಅಲುಗಾಡಿಸಿ ಹಾಕಿತ್ತು. ಈ ಘಟನೆಯಿಂದ ಭಾರತದ ಮೂಲೆ ಮೂಲೆಗಳಲ್ಲಿ ಜನರು ಶೋಕ ತಪ್ತರಾದರು. ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಚಳುವಳಿಯನ್ನು ನಡೆಸಲು ದೃಢವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಪಾಶವೀಕೃತ್ಯಗಳನ್ನು ಹಾಗೂ ಅನಾಚರಗಳನ್ನೂ ಮಾಡಬಲ್ಲದು ಎಂದು ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಅವರ ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು.             ಈ ಚಳುವಳಿಯು ೧ನೇ ಅಗಸ್ಟ್ ೧೯೨೦ ರಂದು ಆರಂಭವಾಗುವ ಹೊತ್ತಿನಲ್ಲಿ ಲೋಕಮಾನ್ಯ ತಿಲಕರು ಕಾಲವಾದರು. ದೇಶವು ಶೋಕದಲ್ಲಿ ಮುಳುಗಿದ್ದರೂ, ಲೋಕಮಾನ್ಯರ ಸ್ಮರಣೆಯೊಂದಿಗೆ ಗಾಂಧೀಜಿಯ ನಾಯಕತ್ವದಿಂದ ಜನತೆಯಲ್ಲಿ ಮಹಾಜಾಗೃತಿಯು ಉಂಟಾಯಿತು. ಹಿಂದೂಗಳು ಹಾಗೂ ಮುಸಲ್ಮಾನರು ಅಲ್ಲದೇ ಎಲ್ಲಾ ಮತಧರ್ಮದವರೂ ಒಂದಾಗಿ ಅಸಹಕಾರ ಚಳುವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಅಸಹಕಾರದ ಮೊದಲ ಹೆಜ್ಜೆಯಾಗಿ ಗಾಂಧೀಜಿ ತಮಗೆ ಸರಕಾರ ಕೊಟ್ಟಿದ್ದ ಕೈಸರ್-ಎ-ಹಿಂದ್ ಮತ್ತಿತರ ಪದಕಗಳನ್ನು ಹಿಂತಿರುಗಿಸಿದರು. ಅಖಿಲ ಭಾರತ ಮಟ್ಟದಲ್ಲಿ ಯಾವುದೇ ಭೇದ ಬಂಧವಿಲ್ಲದೇ ಮಹಿಳೆಯರು ಮಕ್ಕಳೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಈ ಚಳುವಳಿಯಲ್ಲಿ ಸಹಜವಾಗಿ ಭಾಗವಹಿಸಲು ಅವಕಾಶ ಇದ್ದಿತು. ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು. ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು. ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಉತ್ತರ ಕರ್ನಾಟಕ ಜನರು ಭಾರತದ ಸ್ವಾತಂತ್ರ್ಯ  ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟವರು. ಸ್ವಾತಂತ್ರ್ಯ  ಆಂದೋಲನ ಸಂಪೂರ್ಣ ಜಯದಲ್ಲಿ ಉತ್ತರ ಕರ್ನಾಟಕ ಜನರು ಪಾಲು ಇದೆ. ಅಂತೆಯೇ ಗಾಂಧೀಜಿ ಯುಗದ ಪ್ರಥಮ ಮಹಾ ಆಂದೋಲನವಾದ ಅಸಹಕಾರ ಚಳುವಳಿಯ ಉತ್ತರ ಕರ್ನಾಟಕದಲ್ಲಿ ಶತಮಾನದ ನೆನಪನ್ನು ಕೂಡಾ ಈ ವರ್ಷ (೨೦೨೦) ಮಾಡಿಕೊಳ್ಳುತ್ತಿದ್ದೇವೆ. ಆ ನೆನಪಿನಲ್ಲಿ ಗಾಂಧೀ ಹೆಜ್ಜೆಯನ್ನು, ಚಿಂತನೆಯನ್ನೂ ಸ್ಮರಿಸೋಣ.  ಗಾಂಧೀಜಿ  ಕರ್ನಾಟಕಕ್ಕೆ ಐದನೇ ಭೇಟಿ (೮, ೯, ೧೦, ೧೧ನೇ ನವ್ಹಂಬರ್ ೧೯೨೦ರಲ್ಲಿ) :             ಕರ್ನಾಟಕದ ಮೊದಲನೆ ಮುಕ್ಕಾಂ ನಿಪ್ಪಾಣಿ ಎಂದು ಗೊತ್ತಾಗಿತ್ತು. ನಿಪ್ಪಾಣಿ ಅಲ್ಲಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ಬಂದರು. ಈ ಬೆಳಗಾವಿ ಭೇಟಿ ಮುಂದಿನ ೧೯೨೪ ಅಧಿವೇಶಕ್ಕೆ ಪೀಠಿಕೆಯಾಯಿತು.  ನಿಪ್ಪಾಣಿ ಭೇಟಿ(೮ನೇ ನವೆಂಬರ್ ೧೯೨೦ರಲ್ಲಿ) :             ಬೆಂಗಳೂರು ಪ್ರವಾಸದ ಎರಡೂವರೆ ತಿಂಗಳ ನಂತರ ಅಂದರೆ ೮ನೇ ನವೆಂಬರ್ ೧೯೨೦ ರಂದು ನಿಪ್ಪಾಣಿಗೆ ಬಂದ ಗಾಂಧೀಜಿ ಚಿಕ್ಕೋಡಿ, ಹುಕ್ಕೇರಿ ಹಾಗೂ ಸಂಕೇಶ್ವರದ ಮೂಲಕ ಬೆಳಗಾವಿ ತಲುಪಿದರು.  ಆಗ್ಗೆ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ಭಾವನೆ ಬೆಳೆದು ಅಲ್ಲಲ್ಲಿ ವಾತಾವರಣ ಕದಡಿತ್ತು. ನಿಪ್ಪಾಣಿಯ ಸಾರ್ವಜನಿಕ ಸಭೆಯಲ್ಲಿ ಮಾರುತಿರಾಯ ಎಂಬುವರು ಈ ವಿಷಯವನ್ನು ಎತ್ತಿದರು. ಗಾಂಧೀಜಿ ಈ ಬಗ್ಗೆ ಮಾತನಾಡುತ್ತಾ ಹೇಳಿದ ಅರ್ಥ ಹೀಗಿದೆ: ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ ಅವರಿಂದ ದೂರ ಇರುವುದು ಆತ್ಮಘಾತಕತನ. ನಮ್ಮಲ್ಲಿರುವ ಯಜ್ಞ, ತ್ಯಾಗ, ತಪಸ್ಸು ಮುಂತಾದ ಅಭಿಪ್ರಾಯಗಳೆಲ್ಲ ನಮಗೆ ಬಂದ್ದು ಬ್ರಾಹ್ಮಣರಿಂದಲೇ. ಪ್ರಪಂಚದಲ್ಲಿ ಬ್ರಾಹ್ಮಣರಷ್ಟು ತ್ಯಾಗ ಮಾಡಿದರು ಬೇರೆ ಯಾರೂ ಇಲ್ಲ.  ಈ ಮಾತು ಈ ಕಲಿಯುಗದಲ್ಲಿಯೂ ಅನ್ವಯಿಸುವಂತಿದೆ. ಕುಡಿಯುವ ಹಾಲಿನಲ್ಲಿ ಏನಾದರೂ ಕೊಳೆ ಇದ್ದರೆ ಕೂಡಲೇ ಕಾಣುತ್ತದೆ. ಅದೇ ಕೊಳಕು ಪದಾರ್ಥದಲ್ಲಿ ಎಷ್ಟಿದ್ದರೂ ತಿಳಿಯುವುದಿಲ್ಲ. ಆದ್ದರಿಂದ ಅವರಲ್ಲಿ ಏನೇ ಲೋಪದೋಷ ಇದ್ದರೂ ಕೂಡಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಬ್ರಾಹ್ಮಣರ ಅಲ್ಪ ದೋಷಗಳನ್ನು ದೊಡ್ಡದು ಮಾಡಿ ಹೇಳುವುದೇ ಅವರ ಯೋಗ್ಯತೆಗೆ ಸಾಕ್ಷಿ ಎಂದು ನನ್ನ ಭಾವನೆ. ಬ್ರಾಹ್ಮಣರಷ್ಟು ತಪಸ್ಸು ಮಾಡಿದವರು ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ಬ್ರಾಹ್ಮಣರ ತಪ್ಪು ಎಣಿಸುವಾಗ ವಿವೇಕ ಇರಬೇಕು. ಅವರೊಂದಿಗೆ ಅಸಹಕಾರ ಎಂದರೆ ಆತ್ಮನಾಶವೇ. ಜಗತ್ತಿಗೆ ಅವರು ಮಾಡಿದ ಸೇವೆಯನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವುದೇ ಸರಿಯಾದ ದಾರಿ ಇತ್ಯಾದಿಯಾಗಿ ಹೇಳಿದರು ಎಂದು  ಶ್ರೀ ಮಹಾದೇವ ದೇಸಾಯಿ ವರದಿ ಮಾಡಿದ್ದಾರೆ. ಬೆಳಗಾವಿ ಭೇಟಿ(೯ನೇ ನವೆಂಬರ್ ೧೯೨೦ರಲ್ಲಿ) : ಗಾಂಧೀಜಿ ನಿಪ್ಪಾಣಿಯಿಂದ ಬೆಳಗಾವಿಗೆ ಬಂದರು. ಮರುದಿವಸ (೦೯-೧೧-೧೯೨೦) ಅಂದಿನ ಸಭೆಯ ವ್ಯವಸ್ಥೆ ವಹಿಸಿಕೊಂಡಿದ್ದವರು ಮಳಗಿ ಗೋವಿಂದರಾಯರು. ೧೫ ಸಾವಿರಕ್ಕೂ ಮೇಲ್ಪಟ್ಟು ಜನ ಆ ಸಭೆಗೆ ಆಗಮಿಸಿದ್ದರು. ಅಷ್ಟು ದೊಡ್ಡ ಸಭೆ ಆವರೆಗೆ ಅಲ್ಲಿ ನಡೆದಿರಲಿಲ್ಲ. ಮೌಲಾನ ಶೌಕತ್ ಅಲಿಯವರಿಗೂ ಮತ್ತು ಗಾಂಧೀಯವರಿಗೂ ಬೆಳ್ಳಿಯ ಕರಂಡಕದಲ್ಲಿ ಮಾನ ಪತ್ರ ಅರ್ಪಿಸಲಾಯಿತು.  ಸಭೆಯಲ್ಲಿ ಒಂದು ಸಾವಿರ ರೂಪಾಯಿ ನಿಧಿ ಕೂಡಿತು. ನಂತರ ಅಲ್ಲಿನ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಯಿತು. ಬೆಳಗಾವಿಯಲ್ಲಿ  ಮಹಿಳೆಯರ ಸಭೆ (೯ನೇ ನವ್ಹಂಬರ್ ೧೯೨೦)  :             ಮಹಿಳೆಯರ ಸಭೆ ಮಾರುತಿ ಗುಡಿಯಲ್ಲಿ ನಡೆಯಿತು. ಸಭೆಯಲ್ಲಿ ಗಾಂಧೀಜಿ ಹೀಗೆ ಹೇಳಿದರು : ಈ ಗುಡಿಯಲ್ಲಿ ನಿಮ್ಮೆಲ್ಲರ ದರ್ಶನದಿಂದ ನಾನು ಪುನೀತನಾದೆ. ಎಲ್ಲಕ್ಕಿಂತ ನನಗೆ ಹೆಚ್ಚು ಸಂತೋಷ ನನ್ನ ಗೆಳೆಯ ಶೌಕತ್ ಅಲಿಯನ್ನು ನೀವು ನೋಡಬಯಸಿದ್ದು. ಅವರು ದಣಿದು ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನೀವು ನೋಡಬಯಸಿದ ಕಾರಣ ಆತನಿಗೆ ಹೇಳಿಕಳುಹಿಸಿ ಕರೆದುಕೊಂಡು ಬಂದೆ. ಈ  ನಿಮ್ಮ ಸದ್ಭಾವನೆಯಲ್ಲಿ ಭಾರತದ ಗೆಲುವು ಅಡಗಿದೆ. ನಮ್ಮ ಹಿಂದೂ ಹೆಂಗಸರೂ ಮುಸ್ಲಿಂರನ್ನು ಅಣ್ಣ-ತಮ್ಮಂದಿರೆಂದು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದುರದೃಷ್ಟ  ನೀಗದು. ಈ ದೇವಸ್ಥಾನದಲ್ಲಿ ಕುಳಿತು ನಿಮ್ಮ ಮನಸ್ಸನ್ನೂ ನೋಯಿಸಲು ನನಗೆ ಇಷ್ಟವಿಲ್ಲ. ನಾನು ಒಬ್ಬ ಸನಾತನಿ ಹಿಂದೂ. ಬೇರೆ ಯಾವ ಧರ್ಮವನ್ನೂ ತಿರಸ್ಕರಿಸಬಾರದೆಂದು ಅಗೌರವದಿಂದ ಕಾಣಬಾರದೆಂದು ನನ್ನ ಹಿಂದೂಧರ್ಮ ನನಗೆ ಹೇಳಿಕೊಟ್ಟಿದೆ. ಎಲ್ಲಿಯವರೆಗೆ ನಾವು ಇತರ ಮತದವರನ್ನು ಪ್ರೀತಿಸುವುದಿಲ್ಲವೋ ನಮ್ಮ ನೆರೆಹೊರೆಯವರನ್ನೂ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಕ್ಷೇಮ ಸಾಧ್ಯವಾಗದು ಎಂದು ನನಗೆ ಗೊತ್ತಾಗಿದೆ. ನಮ್ಮ ರೂಢಿಗಳನ್ನು ಬದಲಾಯಿಸಿ, ಮುಸಲ್ಕಾನರ ಜೊತೆಗೆಯಲ್ಲಿ ಊಟಮಾಡಿ ಅವರನ್ನು ಮದುವೆ ಮಾಡಿಕೊಳ್ಳಿ ಎಂದು ಹೇಳಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನನ್ನೂ ಪ್ರೀತಿಸಬೇಕು ಎಂದು ಹೇಳಲು ಬಂದಿದ್ದೇನೆ. ಇತರ ಮತಗಳ ಜನರನ್ನು ಪ್ರೀತಿಸಬೇಕೆಂದು ನಿಮ್ಮ ಮಕ್ಕಳಿಗೆ ಹೇಳಿಕೊಡಲು ಬೇಡುತ್ತೇವೆ.             ದೇಶಧ ಆಗುಹೋಗುಗಳನ್ನು ರಾಷ್ಟ್ರೀಯ ವಿದ್ಯಮಾನಗಳನ್ನು ಅರಿತುಕೊಳ್ಳಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಉನ್ನತ ವಿದ್ಯಾ ವ್ಯಾಸಂಗ ಮಾಡಬೇಕಾದ್ದಿಲ್ಲ. ದೊಡ್ಡ ಗ್ರಂಥಗಳನ್ನು ಓದಬೇಕಾಗಿದ್ದಿಲ್ಲ. ನಮ್ಮ ಸರಕಾರ ರಾಕ್ಷಸಿ ಸರಕಾರ ಎಂದು ಹೇಳುತ್ತೇನೆ. ಸರಕಾರ ನಮ್ಮ ಮುಸ್ಲಿಂ ಸೋದರರ ಭಾವನೆಯನ್ನು ತುಂಬಾ ಗಾಸಿಗೊಳಿಸಿದೆ.             ಪಂಜಾಬಿನಲ್ಲಿ ಸ್ತ್ರೀ-ಪುರುಷರ ಮೇಲೆ, ಮಕ್ಕಳ ಮೇಲೆ ಮಾಡಿದ ಭಯಂಕರ ಅತ್ಯಾಚಾರಗಳನ್ನು ಹೇಳಲು ಸಾಧ್ಯ ಇಲ್ಲ. ಈ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದು. ಪರಿತಾಪ ಪಡೆದು ನಮ್ಮನ್ನೇ ತಿರುಗಿ ಕೇಳುತ್ತದೆ. ಈ ಕ್ರೌರ್ಯವನ್ನೆಲ್ಲ ಮರೆತು ಬಿಡಿ ಎಂದು ಆದ್ದರಿಂದಲೇ ಇದನ್ನು ರಾಕ್ಷಸಿ ಸರಕಾರ ಎನ್ನುತ್ತೇನೆ. ಈಗ ನಮ್ಮ ಜನರು ಎಲ್ಲರೂ ಅಸಹಕಾರ ಮಾಡಬೇಕು. ರಾವಣನೊಂದಿಗೆ ಸೀತೆ ಅಸಹಕರಿಸಲಿಲ್ಲವೇ ? ರಾಮಚಂದ್ರ ಅಸಹಕರಿಸಲಿಲ್ಲವೇ ? ರಾವಣ ಎಷ್ಟು ಪ್ರಲೋಭನಗೊಳಿಸಿದ ಸೀತೆಯನ್ನು ಮತ್ತು ರತ್ನಗಳನ್ನು ಕಳಿಸಿದ ಸೀತೆ ಅದು ಯಾವುದನ್ನೂ ಕಣ್ಣೆತ್ತಿ ಕೂಡ ನೋಡದೆ, ರಾವಣನ ಹಿಡಿತದಿಂದ ತಪಿಸಿಕೊಳ್ಳಲು ಕಟ್ಟು ನಿಟ್ಟಾದ ತಪಶ್ಚರ್ಯೆ ಮಾಡಿದಳು. ಮುಕ್ತಳಾಗುವವರೆಗೆ ಒಳ್ಳೆಯ ಬಟ್ಟೆ ಉಡಲಿಲ್ಲ. ಒಡವೆ ತೊಡಲಿಲ್ಲ. ರಾಮ-ಲಕ್ಷ್ಮಣರಿಬ್ಬರೂ ಎಷ್ಟು ತಪಸ್ಸು ಮಾಡಿದರು. ಅವರ ಇಂದ್ರಿಯ ಸಂಯಮ ಎಷ್ಟು ? ಬರೀ ಹಣ್ಣು ಹಂಪಲು ತಿನ್ನುವ ಬ್ರಹ್ಮಚರ್ಯ ವ್ರತನಿಷ್ಠರಾಗಿ ಕಾಲ ಕಳೆದರಲ್ಲ. ಈ ದಬ್ಬಾಳಿಕೆಯ ಸರಕಾರ ನಮ್ಮ ಬೆನ್ನಿನಮೇಲೆ ಸವಾರಿ ಮಾಡುತ್ತಿರುವವರೆಗೆ ಗಂಡಸಿಗಾಗಲಿ, ಹೆಂಗಸಿಗಾಗಲಿ ಒಳ್ಳೆಯ ಬಟ್ಟೆ ಬರೆ ಉಡಲು ಒಳ್ಳೆಯ ಒಡವೆ  ತೊಡಲು ಅಧಿಕಾರವೇ ಇಲ್ಲ. ಭಾರತ ಸ್ವಾತಂತ್ರ್ಯ  ಆಗುವವರೆಗೆ, ಮುಸಲ್ಮಾನರ ಗಾಯಗಳು ಮಾಯುವವರೆಗೆ ನಾವೆಲ್ಲರೂ ಫಕೀರರ ಹಾಗೆ ಇರಬೇಕು. ಕಷ್ಟ-ಸಹನೆಯ  ಬೇಗೆಯಲ್ಲಿ ನಮ್ಮ ಶ್ರೀಮಂತಿಕೆ ನಮ್ಮ ವಿಲಾಸ ಭೋಗಗಳನ್ನು ಸುಡಬೇಕು. ನಿಮ್ಮ ಸುಖಭೋಗಗಳನ್ನು ಬಿಟ್ಟು ಕಠಿಣ ತಪಶ್ಚರ್ಯೆಯನ್ನು ಅವಲಂಬಿಸಿ ನಿಮ್ಮ ಚಿತ್ತವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ವಿನಯದಿಂದ ಪ್ರಾರ್ಥಿಸುತ್ತೇನೆ.             ೫೦ ವರ್ಷಗಳ ಹಿಂದೆ ನಮ್ಮ ಎಲ್ಲರೂ ರಾಟಿ ತಿರುಗಿಸುತ್ತಿದ್ದರು. ಕೈನೂಲಿನ ಬಟ್ಟೆ ಉಡುತ್ತಿದ್ದರು. ಹೆಂಗಸರಿಗೆ ನಿಮಗೆ ಹೇಳುತ್ತೇನೆ ಎಂದು ನಾವು ಸ್ವದೇಶಿ ಧರ್ಮವನ್ನು ಕೈಬಿಟ್ಟೆವೋ ಅಂದೇ ನಮ್ಮ ಪತನ ಪ್ರಾರಂಭವಾಯಿತು. ನಾವು ಗುಲಾಮರಾದೆವು. ದೇಶದಲ್ಲಿ ಎಲ್ಲ ಕಡೆಯಲ್ಲಿಯೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಉಡಲು ಬಟ್ಟೆ ಇಲ್ಲದೆ ಬೆತ್ತಲೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿದೆ. ನೀವು ಪ್ರತಿಯೊಬ್ಬರೂ ದಿನವೂ ಒಂದು ಗಂಟೆ ಹೊತ್ತು ನೂತು ಆ ನೂಲನ್ನು ದೇಶಕ್ಕೆ ದಾನ ಕೊಡಬೇಕು ಎಂದು ಬೇಡುತೇನೆ. ಕೆಲವು ಕಾಲ ನಿಮಗೆ ಸೊಗಸಾದ ಬಟ್ಟೆ ಸಿಗಲಿಕ್ಕಿಲ್ಲ. ಆದರೆ ಸೊಗಸಾದ ನೂಲನ್ನು ನೂಲಲು ಕಲಿತರೆ ಆಗ ಅದು ಸಿಕ್ಕೇ ಸಿಗುತ್ತದೆ. ಆದರೆ ದೇಶ ಗುಲಾಮಗಿರಿಯಲ್ಲಿರುವ ತನಕ ಒಳ್ಳೆ ಬಟ್ಟೆಯನ್ನು ಉಡುವ ಯೋಚನೆಯನ್ನೇ ಮಾಡಬಾರದು. ಒಳ್ಳೆಯ ನೂಲನ್ನು ನೂಲಲು ಸಮಯ

ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ Read Post »

ಕಾವ್ಯಯಾನ

ಕನ್ನಡದ ದಿವ್ಯೋತ್ಸವ

ಕವಿತೆ ಕನ್ನಡದ ದಿವ್ಯೋತ್ಸವ ವೀಣಾ. ಎನ್. ರಾವ್ ಕನ್ನಡದಾ ಮನಗಳೆ ಎದ್ದು ನಿಲ್ಲಿಹರಿಸೋಣ ಅಮೃತದ ಸುಧೆಯನ್ನಿಲ್ಲಿಸಿರಿಗನ್ನಡದ ಶರಧಿಯೊಳಗಿನ ಮಾಧುರ್ಯಸವಿದು ನೋಡಲು ಬೇಕು ಔದಾರ್ಯ ! ಬೆನ್ನೀರ್ ಮುನ್ನೀರ್ ಪನ್ನೀರ ಸಿಂಚನಕೆಧ್ಯಾನಸ್ಥ ತುಷಾರ ಗಿರಿಯ ಸಿಂಚನಕೆಕನ್ನಡದಾ ಮಣ್ಣಲಿ ಚಿಗುರೊಡೆದಾ ಹಸಿರೇಶತಮಾನದ ಸಂಸ್ಕೃತಿಗೆ ನೀನಿದ್ದರೆ ಊಸಿರೇ ! ಮೈಲಿ ಮೈಲಿಗೂ ಕನ್ನಡದಾ ಶೈಲಿಯುಮೂಡಿದೆ, ಕೂಡಿದೆ ಪೃಥ್ವಿಯ ಕೈಯಲ್ಲಿಯುಮುಕುಟ ಮಣಿಯು ಎಂದೂ ನರ್ತಿಸುತ್ತಿರುವುದಲ್ಲಿಹೊನ್ನುಡಿಯ ಪಾಂಚಜನ್ಯ ಮೊಳಗುತಿಹುದಲ್ಲಿ ! ಮರೆಮಾಡದಿರು ಪರಕೀಯರೆದುರು ನಿನ್ನ ಕನ್ನಡಸರಳ ವಿರಳವಾಗಲು ಬಿಡದಿರು ನಿನ್ನ ಕನ್ನಡಕಾವ್ಯದ ಕಲೆಗಳಿಗೆ ರಸಸೃಷ್ಟಿ ಈ ಕನ್ನಡಭಾರತಾಂಬೆಯ ಹೆಗ್ಗಳಿಕೆಗೆ ಹೊಸ ಉಕ್ತಿ ಈ ಕನ್ನಡ ! ಕನ್ನಡವೆಂಬ ದಿವ್ಯೋತ್ಸವಆಗಲಿ ನಿತ್ಯೋತ್ಸವಕನ್ನಡವೆಂಬ ದಿವ್ಯೋತ್ಸವ ಆಗಲಿ ನಿತ್ಯೋತ್ಸವ !! ***************************

ಕನ್ನಡದ ದಿವ್ಯೋತ್ಸವ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ವತ್ಸಲಾ ಶ್ರೀಶ ಹೃದಯ ಶ್ರೀಮಂತನಲ್ಲ ಪ್ರೀತಿಯ ಮರಳಿಸದ ಸಾಲಗಾರನಾಗಿದ್ದೆ ನೀನುಕಾರಣಗಳ ಓರಣದಿ ಜೋಡಿಸುತ್ತಲೇ ದಾರಿ ಬದಲಿಸಿದ್ದೆ ನೀನು ತಾರೆಗಳನೇ ತಂದಿರಿಸಿದೆಯೆಂಬ ಭ್ರಮೆಯ ಬಾನಲಿ ವಿಹರಿಸುತಲಿದ್ದೆಕಲ್ಲು ಮುಳ್ಳಿನ ಬಯಲಲಿ ನಿಂತ ಸತ್ಯವನು ಕೊನೆಗೂ ತೋರಿಸಿದ್ದೆ ನೀನು ಕಲ್ಪನೆಯ ಕಣ್ಣಲ್ಲಿನ ಸುಂದರ ಚಿತ್ರಗಳು ಬದುಕ ರಂಗೋಲಿಯಾಗಲಿಲ್ಲರಂಗು ರಂಗಿನ ಕನಸುಗಳಿಗೆ ಕಪ್ಪುರಂಗನು ಎರಚಿ ಕೆಡಿಸಿದ್ದೆ ನೀನು ಪ್ರೇಮದ ಪರಿಚಯವಿರದ ಹೃದಯ ಮಧುರ ಭಾವಕ್ಕೆ ಸಿಲುಕಿ ಮಗುವಂತಾಗಿತ್ತಂದುಮುಗ್ಧ ಮನಕೆ ಪ್ರೀತಿಯನು ಬಣ್ಣದಾಟಿಕೆ ಮಾಡಿ ಮರುಳುಗೊಳಿಸಿದ್ದೆ ನೀನು ಮೋಸವ ಅಸಹಾಯಕತೆಯೆಂಬ ನೆಪದಿ ಶೃಂಗರಿಸಿ ತಪಸ್ಯಾ ಳ ತೊರೆದಿದ್ದೆಅಮರ ಪ್ರೇಮಕತೆಗಳೂ ಮುಲಾಮಿನೊಳಗಿನ ಹಸಿ ಗಾಯಗಳೆಂಬ ಸತ್ಯ ತಿಳಿಸಿದ್ದೆ ನೀನು *****************************

ಗಝಲ್ Read Post »

ಪುಸ್ತಕ ಸಂಗಾತಿ

ಕನಸುಗಳು ಖಾಸಗಿ

ಪುಸ್ತಕ ಪರಿಚಯ ಕನಸುಗಳು ಖಾಸಗಿ ಕತ್ತಲದಾರಿಯ ಸಂದಿಗೊಂದಿಗಳಲ್ಲಿ ಕರೆದೊಯ್ಯುವ  ‘ಕನಸುಗಳು ಖಾಸಗಿ’          ಆಧುನಿಕ ಜಗತ್ತಿನ ಕರಾಳ ಮುಖಗಳನ್ನು ‘ಕನಸುಗಳು ಖಾಸಗಿ’ ಎಂಬ ತಮ್ಮ ಒಂಬತ್ತು ಕಥೆಗಳ ಸಂಕಲನದ ಮೂಲಕ   ನರೇಂದ್ರ ಪೈಯವರು  ಕಾಣಿಸಿಕೊಟ್ಟಿದ್ದಾರೆ.. ಇಲ್ಲಿರುವುದು ಕನಸುಗಳು ಅನ್ನುವುದಕ್ಕಿಂತ   ಕಥೆಗಳನ್ನು ಓದುತ್ತಿರುವಾಗ ಕಣ್ಣ ಮುಂದೆ ರುದ್ರ ನರ್ತನ ಮಾಡುವ ದುಸ್ವಪ್ನಗಳು ಅನ್ನುವುದು ಹೆಚ್ಚು ಸೂಕ್ತ .  ವೇಗದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳು ತ್ತಿರುವ ಇಂದಿನ ಜಗತ್ತಿನಲ್ಲಿ  ಸಂಬಂಧಗಳು  ಛಿದ್ರಗೊಂಡಿವೆ, ಸ್ವಾರ್ಥ ಮೇರೆ ಮೀರಿದೆ, ಹಿಂಸೆ ಹದ್ದು ಮೀರಿದೆ, ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ. ಹಣ ಸಂಪಾದನೆ ಮತ್ತು ಭೌತಿಕ ಸುಖಾಪೇಕ್ಷೆಗಳಷ್ಟೇ ಜೀವನದ ಗುರಿಯಾಗಿ ಜನರು ಕತ್ತಲದಾರಿಗಳ ಸಂದಿಗೊಂದಿಗಳಲ್ಲಿ  ಕುರುಡರಂತೆ ನಡೆಯುತ್ತಿರುವ ಒಂದು ಸಂವೇದನಾಶೂನ್ಯ ಜಗತ್ತನ್ನು ನಮ್ಮ ಮುಂದಿಡುವ ಈ ಕಥಾಸಂಕಲನವು ಸದ್ದಿಲ್ಲದೆ   ಒಂದು ಹಾರರ್ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ..   ಖಾಸಗಿ ಕನಸುಗಳು ಯಾವುದೋ ಕ್ಷಣದಲ್ಲಿ ನಿಯಂತ್ರಣ ತಪ್ಪಿ ಸಾರ್ವಜನಿಕವಾದಾಗ ಆಗುವ ಅನಾಹುತಗಳ ಚಿತ್ರಣವು   ‘ಕನಸುಗಳು  ಖಾಸಗಿ ‘ ಎಂಬ  ಮೊದಲ ಕಥೆಯಲ್ಲಿದೆ. ಹಳೆಯ ಕಾಲೇಜು ಸಹಪಾಠಿ ಕಳುಹಿಸಿದ ಇ- ಮೆಯಿಲ್ ನಲ್ಲಿ ಹಂಚಿಕೊಂಡ ನೆನಪಿನ ಮೆಲುಕುಗಳಲ್ಲಿ ಬಂದ ಚೆಲುವೆ ರಜನಿ..ಅಂದಿನ ಹುಡುಗಾಟದ ದಿನಗಳಲ್ಲಿ ಅವಳನ್ನು ಪ್ರೀತಿಸಿದ ಸಂದರ್ಭವು ಮರುಕಳಿಸುವಂತೆ ಮಾಡಿದ ಹುಕಿಯಲ್ಲಿ ಸುರೇಶ ಆ ಮೆಯಿಲ್ ನ್ನು ಯಾರು ಯಾರಿಗೋ ಫಾರ್ವರ್ಡ್ ಮಾಡುತ್ತ ಹೋಗುವಾಗ ಅದರ ಪರಿಣಾಮದ ಕಲ್ಪನೆ ಅವನಿಗಿರುವುದಿಲ್ಲ. ರಜನಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡಿ ತನ್ನ ಕನಸುಗಳನ್ನು ತನ್ನೊಳಗೇ ಇಟ್ಟುಕೊಂಡು ಕನಸು ಕಂಡ ಗಂಗು ಒಂದೆಡೆಯಾದರೆ ಅವನ ಪ್ರೀತಿಯ ಗುಂಗಿನಲ್ಲಿ ಗಂಡನನ್ನು ಪ್ರೀತಿಸುವಲ್ಲಿ ವಿಫಲಳಾದ ರಜನಿ ಇನ್ನೊಂದೆಡೆ. ಮೆಯಿಲ್ ಓದಿದ ಗಂಡ ಅವಳ ಕೊಲೆ ಮಾಡುವುದಂತೂ ಭೀಕರ ದುರಂತ. ಈ ಕ್ರೂರ ಕೃತ್ಯಕ್ಕೆ ಕಾರಣ ಗುಂಗನೇ, ಸುರೇಶನೇ  ಗಂಡನೇ ಅಥವಾ ಕೇವಲ ಬೆರಳೊತ್ತುವ ಮೂಲಕ ಖಾಸಗಿ ವಿಚಾರಗಳನ್ನು ಜಗಜ್ಜಾಹೀರು ಮಾಡುವಂಥ ಯಂತ್ರಯುಗವು ಕರುಣಿಸಿದ ಈ ಮೆಯಿಲ್ ಎಂಬ ಮಾಯಾಜಾಲವೇ? ಕಥೆಯು ಪ್ರಶ್ನೆಯನ್ನು ಹಾಗೆಯೇ ಉಳಿಸುತ್ತದೆ.      ಪ್ರಾಮಾಣಿಕವಾಗಿ ದುಡಿದು ಕಷ್ಟಪಟ್ಟು ಒದ್ದಾಡಿ ತನ್ನ ಮಗಳು ರುಕ್ಕುವನ್ನು ಒಂದು ಒಳ್ಳೆಯ ಸ್ಥಿತಿಗೆ ತಂದ ಅಪ್ಪಿಯಮ್ಮ (    ಕಥೆ : ರುಕ್ಕಮಣಿ) ಮಗಳು ಪಥಭ್ರಷ್ಟಳಾಗಿ ನಡೆದು ಬದುಕು ಒಡ್ಡಿದ ಚಕ್ರವ್ಯೂಹದಲ್ಲಿ ಸಿಲುಕಿ ದಿಕ್ಕುಗಾಣದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಯಾರು? ಹಿರಿಯರ ಮಾತುಗಳಿಗೆ ಕಿಲುಬು ಕಾಸಿನ ಬೆಲೆಯನ್ನೂ ಕೊಡದೆ ತಾವು ಕಂಡ ದಾರಿಯಲ್ಲಿ ನಡೆದು ಅನಾಹುತಗಳಿಗೆ ಆಹ್ವಾನ ನೀಡುವ ಹಾದಿ ತಪ್ಪಿದ ಯುವ ಜನಾಂಗವೆ? ಅಥವಾ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರೆ? ಅಥವಾ ವಿಜ್ಞಾನದ ಮುನ್ನಡೆಯಿಂದಾಗಿ ಸುಲಭ ಲಭ್ಯವಾಗಿರುವ ಸುಖ ಸಾಧನೆಗಳೆ?      ‘ಕೆಂಪು ಹಾಲು ‘ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸುವ ಕಥೆ. ಲೋಕದ ರೀತಿ ನೀತಿಗಳು ಅರ್ಥವಾಗದ ಪುಟ್ಟ ಹುಡುಗನ ದೃಷ್ಟಿಯಿಂದ ಈ ಕಥೆ ನಿರೂಪಿತವಾಗುತ್ತದೆ. ಹುಡುಗನಿಗೆ ‘ ‘ಪಾಪದವನಂತೆ ‘ ಕಾಣಿಸುವ ಉನ್ನಿಕೃಷ್ಣನ ಭೂತ ಬಂಗಲೆಗೆ ದಿನಾ ಹಾಲು ತರಲು ಹೋಗುವ ಪುಟ್ಟ ಹುಡುಗನ ಅನುಭವಗಳು ಇಲ್ಲಿವೆ. ಪಕ್ಕದಲ್ಲೇ ಇರುವ ಪಾಳು ಬಿದ್ದ ಶಾಲೆಯಲ್ಲಿ ಉನ್ನಿಕೃಷ್ಣ ಮತ್ತು ಸದಾ ಬೀಡಿ ಸೇದುವ ಚೀಂಕ್ರ ಏನು ಮಾಡುತ್ತಾರೆಂದು ಅವನಿಗೆ ಅರ್ಥವಾಗುವುದಿಲ್ಲ.  ಒಂದೆಡೆ       ಅವನು ಉನ್ನಿಕೃಷ್ಣನ ಮಗಳು ಮುನ್ನಿಯೊಂದಿಗೆ ಸೇರಿ   ಅಮ್ಮನ ಹಾಲು ಕುಡಿದು ಸೊಕ್ಕಿನಿಂದ ಕುಣಿದಾಡುವ ಬೆಕ್ಕಿನ ಮರಿಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಚಿತ್ರಣವಿದ್ದರೆ ಇನ್ನೊಂದೆಡೆ  ಅವನ ಕುಡುಕ ತಂದೆ ಮಾಡುವ ಅವಾಂತರಗಳಿಂದ ಆಗುವ ಅಪಮಾನದಿಂದ ಅವನು ಕುದಿಯುವ‌ ಚಿತ್ರಣವಿದೆ. ಮುಂದೆ ಉನ್ನಿಕೃಷ್ಣ ಮತ್ತು ಚೀಂಕ್ರರನ್ನು ಪೋಲೀಸರು ಅರೆಸ್ಟ್ ಮಾಡಿ ಕೊಂಡೊಯ್ಯುವ ಚಿತ್ರಣವಿದೆ.      ಕೆಲವು ದಿನಗಳ ನಂತರ ಚೀಂಕ್ರನ ಮಗ ಕೈಯಲ್ಲಿ ಕೋವಿಯೊಂದಿಗೆ ಪೋಲೀಸರ ಕೈಗೆ ಸಿಕ್ಕು ಅವರಿಂದ ಕೊಲ್ಲಲ್ಪಡುತ್ತಾನೆ. ಹೀಗೆ ಅಮಾಯಕರಂತೆ ಪೋಸು ಕೊಡುವವರು ಕಾನೂನು ಬಾಹಿರ ಸಮಾಜ ಘಾತಕ  ಹಿಂಸಾ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದರಿಂದ   ದೆವ್ವದ ಕಥೆಗಳಲ್ಲಗುವಂತೆ ಹಾಲು ಕೆಂಪಾಗಿದೆ. ದುಗ್ಗಪ್ಪನೆಂಬ ಬಡ ವೃದ್ಧನ ಕರುಣಕಥೆಯನ್ನು ನಿರೂಪಿಸುವ ಕಥೆ ‘ರಿಕವರಿ’. ಕೋಮಲ ಹೃದಯದ ದುಗ್ಗಪ್ಪ ತನ್ನ ನಿವೃತ್ತಿಯ ದಿನ ಸಿಕ್ಕಿದ ನಾಲ್ಕು ಸಾವಿರ ರೂಪಾಯಿಯಲ್ಲಿ  ಅರ್ಧದಷ್ಟನ್ನು ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಕಿರಿಯ ಸಹೋದ್ಯೋಗಿಗೆ ಕೊಟ್ಟವನು. ಬಾಡಿಗೆ ಮನೆಯ ಮಾಲೀಕ ದುರಾಸೆಯಿಂದ ತನಗೆ ಹೆಚ್ಚು ಬಾಡಿಗೆ ಸಿಗುವ ಅವಕಾಶ ಬಂದಾಗ ಬಡ ದುಗ್ಗಪ್ಪನ ಕುಟುಂಬವನ್ನು ಅಲ್ಲಿಂದ ಎಬ್ಬಿಸುತ್ತಾನೆ.  ದುಗ್ಗಪ್ಪ ಹಿಂದೆ ಕೊಟ್ಟಿದ್ದ ಮುಂಗಡ ಹಣ ಮೂವತ್ತು ಸಾವಿರವನ್ನು ಹಿಂಪಡೆಯಲು  ಪಡುವ ಕಷ್ಟ, ಮನೆಯಲ್ಲಿ ಹೆಂಡತಿ ಮತ್ತು ಸೊಸೆ ಆ ಹಣಕ್ಕಾಗಿ ಬಾಯಿ ಬಿಡುವುದು- ಎಲ್ಲವೂ ಓದುಗನಿಗೆ ಕ್ರೂರವಾಗಿ ಕಾಣುತ್ತದೆ.       ತನ್ನ ಅಕ್ಕನ ಋಣದಲ್ಲಿರುವ ತಮ್ಮ,  ತಾನು ಸಂಸಾರಸ್ಥನಾದ ನಂತರ ಅಕ್ಕ ಮಾಡುತ್ತಿದ್ದ ಅಡ್ಡದಾರಿಯ ಕೆಲಸಗಳನ್ನು ಬೆಂಬಲಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾಗ ಹೆಂಡತಿಯ ಬೇಡಿಕೆಗಳನ್ನು ಪೂರೈಸಲಾರದೆ ತೊಳಲಾಡುತ್ತಾನೆ.ಡ್ರಗ್ಸ್ ಜಾಲದೊಳಗೆ ಸಿಕ್ಕಿಬಿದ್ದಿರುವ ಸುನಂದಕ್ಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು  ಸುಳ್ಳು    ದೂರು ಕೊಟ್ಟಾಗ ಕೋರ್ಟಿಗೆ ಹೋಗುವ ಕೇಸಿಗೆ ಸಾಕ್ಷಿ ನೀಡಲು ತಮ್ಮ ಹೋಗಬೇಕಾಗುತ್ತದೆ. ಆದರೆ ಕೋರ್ಟಿನಲ್ಲಿ ಹಿಯರಿಂಗ್ ಗಾಗಿ ಕಾಯುತ್ತಿದ್ದಾಗ ಅಕ್ಕ ನಾಟಕ ಮಾಡುತ್ತಿರುವುದು ಗೊತ್ತಾಗಿ ಸಹಿಸಲಾರದೆ ಆತ ಪ್ರತಿಕೂಲವಾದ ಸಾಕ್ಷಿ ಹೇಳಿ ಬರುತ್ತಾನೆ.(ಕಥೆ : ಸಾಕ್ಷಿ).   ‘ ಹಿಂಸಾರೂಪೇಣ ‘ ಅನ್ನುವ      ಕಥೆ    ಸೃಷ್ಟಿಸುವ ವಾತಾವರಣ ಮನಸ್ಸಿಗೆ ಅಸಹನೀಯ ಹಿಂಸೆಯನ್ನುಂಟು ಮಾಡುತ್ತದೆ. ತಾನು  ವಾಸವಾಗಿದ್ದ ಅಪಾರ್ಟ್ ಮೆಂಟಿನ ಹೊರಗೆ ಅತಿ ಸಮೀಪವೇ ಇದ್ದ ದೇವಸ್ಥಾನದ ಧಾರ್ಮಿಕ ಆವರಣದೊಳಗೆ ನಡೆದ ಕುಡುಕನ ಕೊಲೆಯ ಬರ್ಬರ ಕೃತ್ಯದ  ಬಗ್ಗೆ ತಿಳಿದು, ಶವವನ್ನು ನೋಡಿದ ನಂತರ ಕಥಾನಾಯಕನಿಗೆ  ರಾತ್ರಿ ಯಾರೋ ಕಿವಿಯಲ್ಲಿ ಒಂದೇ ಸಮನೆ ಪಿಸುಗುಟ್ಟಿದಂತಾಗುತ್ತದೆ. ಹಲವು ದಿನಗಳಿಂದ ಹೀಗೇ ಪಿಸುಗುಟ್ಟಿದ ಅನುಭವ. ಹೊರಗೆ ನಿತ್ಯ ಗಲಾಟೆ. ತಾನಿರುವ ರೂಮಿನ ಗೊಡೆಯಾಚೆ ಈ ಕೊಲೆ ಸಂಭವಿಸಿತೇ ಎಂಬುದನ್ನೆಣಿಸುವಾಗ ಅವನು ಭಯದಿಂದ ಕಂಪಿಸುತ್ತಾನೆ. ಒಂದೆಡೆ    ದೇವಸ್ಥಾನದ ಪವಿತ್ರ ವಾತಾವರಣ, ಯೋಗ,  ಭಜನೆ,  ಶಾಂತಿಮಂತ್ರ  ಧ್ಯಾನಗಳು ಸೃಷ್ಟಿಸುವ ವಾಯಾವರಣವಾದರೆ ಇನ್ನೊಂದೆಡೆ ಕೊಲೆ, ಹಿಂಸೆ, ಡ್ರಗ್ಸ್ ವ್ಯವಹಾರ, ಸಾಲ ವಸೂಲಿ, ಫೈಟಿಂಗನ್ನೇ ವೃತ್ತಿಯಾಗಿ ಮಾಡಿಕೊಂಡವರ ಗುಂಪು, ಬ್ಯಾಂಕಿನಲ್ಲಿನ ಬಡ್ಡಿ ವ್ಯವಹಾರ– ಹೀಗೆ ನೂರಾರು ಗೊಂದಲಗಳು ಅವನೊಳಗೆ ತುಂಬಿ  ಅಪರಿಚಿತ ಧ್ವನಿಗಳು ಪಿಸುಗುಟ್ಟುತ್ತವೆ.       ನೋಟುಬ್ಯಾನ್ ಘೋಷಣೆಯಾದ ಸಮಯದಲ್ಲಿ ಕಥಾನಾಯಕನ ಅಜ್ಜಮ್ಮ ಜತನದಿಂದ ಸೇರಿಸಿಟ್ಟಿದ್ದ ದುಡ್ಡಿನ ಗಂಟಿನೊಳಗಣ ಐನೂರರ ನೋಟುಗಳ ಬಗ್ಗೆ ಕಾಳಜಿ ತೋರಿಸುವ ನೆಪದಲ್ಲಿ ಅದರ ಮೇಲೆ ಕಣ್ಣಿಟ್ಟವರು ಹಲವಾರು ಮಂದಿ. ಪಾಪ, ಆಕೆಗೆ ಅದರ ಲೆಕ್ಕ ತಿಳಿಯದು.  ನಿರೂಪಕ ಮೊದಲು ನೋಡಿದಾಗ ಅದರಲ್ಲಿ ೩೬ ಸಾವಿರ ರೂಪಾಯಿ ಇರುತ್ತದೆ.   ಅದೇ ಸಮಯ ಮನೆಯಲ್ಲಿ ಟಿ.ವಿ.ರಿಪೇರಿಗೆ ೬೦೦೦ ರೂಪಾಯಿ ಕೊಡಬೇಕಾಗಿದೆ.‌ ಟಿ.ವಿ.ನೋಡುವವರು ಮುಖ್ಯವಾಗಿ ಅಜ್ಜಮ್ಮ.  ಆದ್ದರಿಂದ ಆ ದುಡ್ಡನ್ನು ಟಿ.ವಿ.ಗಾಗಿ ಖರ್ಚು ಮಾಡುವುದೆಂದು ನಿರ್ಧರಿಸಿದ   ನಿರೂಪಕ ಅಜ್ಜಮ್ಮನ ಗಂಟಿನಲ್ಲಿದ್ದುದನ್ನು  ಕೊನೆಗೆ ಎಣಿಸಿ ನೋಡಿದರೆ ಅಲ್ಲಿ ಇದ್ದದ್ದೂ ಅಷ್ಟೇ ಹಣ. ಉಳಿದ ಹಣ ಎಲ್ಲಿ  ಹೋಯಿತು, ಅಜ್ಜಮ್ಮನನ್ನು ಕಾಣಲು ಬಂದವರು ತೆಗೆದಿರಬಹುದೇ ಎಂದು ಆತ ಅನುಮಾನಿಸುತ್ತಾನೆ.‌ ಆ ಮೊತ್ತವು ತನ್ನ ಹೆಂಡತಿಯ ಕೈಸೇರಿದ ಬಗ್ಗೆ ಅವನಿಗೆ ಗೊತ್ತಾಗುವುದು ಕೊನೆಗೆ. ಮಾನವೀಯ ಸಂಬಂಧಗಳಿಗಿಂತ ಹಣದ ಮಹತ್ವ ಹೆಚ್ಚಾಗಿ ಮೌಲ್ಯಗಳು ಕುಸಿದ ಚಿತ್ರಣ ಈ ಕಥೆಯಲ್ಲಿದೆ.   ‘ಭೇಟಿ’ ಇತರೆಲ್ಲ ಕಥೆಗಳಿಗಿಂತ ಭಿನ್ನವಾಗಿದೆ. ನಿಸರ್ಗದ ಗರ್ಭದಲ್ಲಿ ಅಡಗಿರುವ ನಿಗೂಢ ರಹಸ್ಯಗಳತ್ತ ಇದು ಬೊಟ್ಟು ಮಾಡಿ ತೋರಿಸುತ್ತದೆ. ಕಥಾನಾಯಕ ತನ್ನ ಅಮ್ಮ, ಅಕ್ಕ, ಮತ್ತು ಮಗಳನ್ನು ಯಾವುದೋ ಆಕಸ್ಮಿಕದಲ್ಲಿ ಕಳೆದುಕೊಂಡಿದ್ದಾನೆ. ಅವರ ಅಪರಕ್ರಿಯೆಗಳನ್ನು ಮಾಡಲು ಅವನ ದೊಡ್ಡಪ್ಪ ಕಾಡು ಪ್ರದೇಶದಲ್ಲಿ ಗದ್ದೆಯ ಮಧ್ಯೆ‌ಎತ್ತರದಲ್ಲಿದ್ದ ಗುಡಿಯೊಂದಕ್ಕೆ ಕಳುಹಿಸುತ್ತಾನೆ. ಭಟ್ಟರೊಂದಿಗೆ ಅಲ್ಲಿಗೆ ಹೋಗಿ ಎಲ್ಲ ಕ್ರಿಯೆಗಳನ್ನು ಮುಗಿಸಿ ಹೊರಗೆ ಬಂದ ನಂತರ ಸಂಪ್ರದಾಯದಂತೆ ‘ಯಾರಾದರೂ ಕರೆದಂತೆ ಅನ್ನಿಸಿದರೆ ತಿರುಗಿ ನೋಡಬೇಡ ಅಂದಿದ್ದರಿಂದ ಅವನಿಗೆ ಯಾರೋ ಹಿಂದಿನಿಂದ ಪಿಸುಗುಟ್ಟಿ ಕರೆದಂತೆ ಅನ್ನಿಸಿದರೂ, ಮುಂದಿನ ಜೀವನವನ್ನೆಣಿಸಿ ತಿರುಗಿ ನೋಡದೆ ಮನೆಗೆ ಬರುತ್ತಾನೆ.‌ಅವನ ಜತೆಗೆ ಬಂದ ಅಕ್ಕ ಆ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಅವನನ್ನು ಅಪರಾಧ ಪ್ರಜ್ಞೆ ಕಾಡುತ್ತದೆ. ಅವನ ಕಿವಿಗೆ ಕೇಳಿಸಿದ್ದು ಭ್ರಮೆಯೋ ನಿಜವೋ ಎಂಬುದರ ಬಗೆಗಿನ ಜಿಜ್ಞಾಸೆಯನ್ನು ಕಥೆಗಾರರು ಓದುಗರಿಗೆ ಬಿಡುತ್ತಾರೆ. ಆರ್.ಕೆ.ನಾರಾಯಣ್ ಅವರ ಕೆಲವು ಕಥೆಗಳಿಗೆ ಈ ಗುಣವಿದೆ.     ‘ಕಥನ ಕುತೂಹಲ’ ವಸ್ತುವಿನ ದೃಷ್ಟಿಯಿಂದ ಹೊಸತಲ್ಲದಿದ್ದರೂ ತಂತ್ರ, ರಚನೆ, ವಿನ್ಯಾಸಗಳು ವಿಶಿಷ್ಟವಾಗಿವೆ. ವ್ಯೂಹದೊಳಗೆ ವ್ಯೂಹಗಳು ಸುತ್ತಿಕೊಂಡಿರುವ ಒಂದು ಚಕ್ರವ್ಯೂಹವೇ ಇಲ್ಲಿದೆ. ತಮ್ಮ ಸತ್ತ ನಂತರ ತಮ್ಮನ ಆಸ್ತಿಯನ್ನು ದೋಚಿಕೊಂಡ ಧರ್ಮಪ್ಪ ತಮ್ಮನ ಮಗಳು ಸತ್ಯಭಾಮಾಳನ್ನು ಗೌತಮ್ ರಾಜ್ ಎಂಬ ‘ ಏನೂ ಗೊತ್ತಿಲ್ಲ’ದವನಿಗೆ ಮೂರು ಲಕ್ಷ ವರದಕ್ಷಿಣೆಯ ‘ವಾಗ್ದಾನ’ ನೀಡಿ ಕಟ್ಟಿದರೆ ತನ್ನ ಮಗನಿಗೆ ಬಂದ ವರದಕ್ಷಿಣೆಯಲ್ಲಿ ಕೊನೆಯ ಮಗಳ ಮದುವೆ ಮಾಡುವ ಹವಣಿಕೆ ಗೌತಮನ ತಾಯಿಯದ್ದು. ಗಂಡ ತನ್ನ ಬಗ್ಗೆ ಆಸಕ್ತಿ ತೋರಿಸಲಿಲ್ಲವೆಂದು ಅವನನ್ನು ಬಿಟ್ಟು ಬಂದು ಬೇರೊಬ್ಬನೊಂದಿಗೆ ತಿರುಗಾಡುವ ಗೌತಮನ ಅಕ್ಕ ಊರ್ವಶಿ  ಇದ್ದಾಳೆ.‌ಬೊಂಬಾಯಿಯಲ್ಲಿ ‘ವ್ಯವಹಾರ’ನಡೆಸುತ್ತಿರುವ ಅವಳ ಅಕ್ಕನ ಬಳಿಗೆ ಕಳುಹಿಸಲೆಂದು ಅಣ್ಣ ದೇವಣ್ಣನಿಗೆ ಪತ್ರ ಬರೆದು ತಮ್ಮನ ಪತ್ನಿ ಚೆಲುವೆ ಸತ್ಯಭಾಮಾಳನ್ನು ಉಪಾಯ ಮಾಡಿ ಕರೆದೊಯ್ಯಲು ಅವಳೇ ಯೋಜನೆ ಹಾಕುತ್ತಾಳೆ. ಅದಕ್ಕಾಗಿ ತಮ್ಮನ ಹೆಸರಿನಲ್ಲಿ ‘ಹೆಂಡತಿ ಕಾಣೆಯಾಗಿದ್ದಾಳೆಂಬ ಕಂಪ್ಲೈಂಟೂ ಹೋಗುತ್ತದೆ. ಇತ್ತ ಧರ್ಮಪ್ಪನೂ ವರದಕ್ಷಿಣೆ ಕೇಸ್ ಎಂದು ಗೌತಮನ ತಾಯಿಯ ಕಡೆಯಿಂದ ದುಡ್ಡು ವಸೂಲಿ ಮಾಡುವ ಯೋಜನೆಯ ಮಧ್ಯೆ ಗೌತಮನ ಕೊಲೆ ಮಾಡಿಸುತ್ತಾನೆ. ಅಬ್ಬಾ!!ಈ ಸುಳಿಯಲ್ಲಿ ಸಿಕ್ಕು ಸತ್ಯಭಾಮಾ ಎಷ್ಟು ನರಳಬೇಕೋ ಗೊತ್ತಿಲ್ಲ..      ನರೇಂದ್ರ ಅವರ ಕಥೆಗಳ ವಸ್ತುಗಳಿಗಿಂತಲೂ ಅವರ ಕಥನ ಶೈಲಿ ಇಲ್ಲಿ ಮುಖ್ಯವಾದದ್ದು. ‘ಕಥೆಗಳಲ್ಲಿ ಹೇಳುವುದಕ್ಕಿಂತಲೂ ಕಾಣಿಸುವುದು ಮುಖ್ಯ’ ಎಂದು ಅವರ ಮೊದಲ ಕಥೆಗಳ ಸಂದರ್ಭದಲ್ಲಿ   ಉಪದೇಶ ನೀಡಿದ್ದ ಕಥೆಗಾರ ವಿವೇಕ ಶಾನುಭಾಗರನ್ನು ಅವರು ತಮ್ಮ ದೀರ್ಘ ಮುನ್ನುಡಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಅದನ್ನನುಸರಿಸಿಯೇ ಇರಬೇಕು ಇಲ್ಲಿ ಅವರ ಕಥೆಗಳ ಚಿತ್ರಕಶಕ್ತಿಯು ಅದ್ಭುತ ಆಳವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೇ ಎಲ್ಲ ಕಥೆಗಳೂ ಒಂದು ರೀತಿಯಲ್ಲಿ   ಕಾಫ್ಕಾನ ಕಥೆಗಳಂತೆ    ಮಬ್ಬುಗತ್ತಲಿನ ವಾತಾವರಣವನ್ನು ಸೃಷ್ಟಿಸಿ ಕಥೆಗಾರರು ಹೇಳಬಯಸುವ ಆಧುನಿಕ ಜಗತ್ತಿನ ಒಂದು ನಿರಾಶಾದಾಯಕ  ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗುತ್ತವೆ. ಕೆಲವು ಕಥೆಗಳಲ್ಲಿ ಒಂದೇ ಓದಿಗೆ ಅರ್ಥವಾಗದ ಅಸ್ಪಷ್ಟತೆ ಇದೆ. ಇದಕ್ಕೆ ಕಾರಣ ಸಾಲುಗಳ ನಡುವೆ ಅರ್ಥವನ್ನು ಅಡಗಿಸಿಡುವ ಕಾವ್ಯಾತ್ಮಕ ಗುಣ.  ಓದಿ ಅರ್ಥವಾದ ನಂತರ ಬಹಳಷ್ಟು ಕಾಡುವ ಕಥೆಗಳಿವು. ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ಆದ ದೃಢ ಹೆಜ್ಜೆಗಳನ್ನೂರುವ ಕಥೆಗಾರರ ಲಕ್ಷಣವಿದು.     ಖಾಸಗಿ ಕನಸುಗಳನ್ನು ಸಾರ್ವತ್ರಿಕವಾಗಿಸಿದಂತೆಯೇ ಮಂ  ಗಳೂರು ಕನ್ನಡ, ಕುಂದಾಪುರ ಕನ್ನಡಗಳಂತಹ ಪ್ರಾದೇಶಿಕ ಭಾಷೆಗಳ ಸವಿಯನ್ನು ಎಲ್ಲರಿಗೂ ಉಣಬಡಿಸುವ ಪ್ರಯತ್ನವನ್ನು ನರೇಂದ್ರ ಪೈಯವರು ಇಲ್ಲಿ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿ ಬರುವ ತಿಳಿಹಾಸ್ಯದ ತುಣುಕುಗಳು ಮತ್ತು ಬಾಲ್ಯದ ನೆನಪುಗಳು ಕಥೆಗಳನ್ನು ಆಪ್ತವಾಗಿಸುತ್ತವೆ. ********************************************************** –ಪಾರ್ವತಿ ಜಿ.ಐತಾಳ್.

ಕನಸುಗಳು ಖಾಸಗಿ Read Post »

You cannot copy content of this page

Scroll to Top