ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಹೂವಿನ ಹಾಡು

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆಯಾದ “Song of Flower”ನ ಭಾವಾನುವಾದ. ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು  ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ  ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ  ಸಮಾಗಮದಿಂದ   ಮಾಗಿಯು ಗರ್ಭಧರಿಸಿ,  ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ  ಚಿರನಿದ್ರೆಗೆ ಜಾರುವ ಮಗಳು ನಾನು  ಅರುಣೋದಯದಿ ತಂಗಾಳಿಯೊಂದಿಗೆ  ಸಂಘಟಿಸಿ ಬೆಳಕಿನಾಗಮನವ ಸಾರುವೆನು . ಸಂಧ್ಯಾಕಾಲದಿ  ಹಕ್ಕಿಗಳೊಡಗೂಡಿ,  ನಿರ್ಗಮಿಸುವ ಬೆಳಕ ಬೀಳ್ಕೊಡುವೆನು . ಬಯಲುಗಳು ನನ್ನ ಸುಂದರ ಬಣ್ಣಗಳಿಂದ  ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ , ಗಾಳಿ ನನ್ನ ನಸುಗಂಪಿನಿಂದ ಸುವಾಸಿತ. ನಿಶೆಯ ಕಂಗಳು ನಾನು ಸುಖನಿದ್ರೆಗೆ  ಜಾರುತ್ತಿದಂತೆ ನನ್ನ ಕಾವಲು ಕಾಯುವವು. ಬೆಳಕ ಏಕೈಕ ಕಣ್ಣಾದ  ದಿನಮಣಿಯ ಏಳುತಲಿ ದಿಟ್ಟಿಸುವೆನು . ಮದಿರೆಗೆ ಇಬ್ಬನಿಯ ಸೇವಿಸುವೆ, ಹಕ್ಕಿಗಳ ಚಿಲಿಪಿಲಿಯ ಆಲಿಸಿ, ಲಯಬದ್ಧವಾಗಿ ತೊನೆದಾಡುವ ಹುಲ್ಲಿನ  ತಾಳಕೆ ನಾ ಕುಣಿಯುವೆ. ಪ್ರೇಮಿಯ ಪ್ರೇಮ ಕಾಣಿಕೆ ನಾ,  ಮದುವೆಗೆ ಹೂಮಾಲೆ ನಾ, ಸಂತಸದ ಕ್ಷಣಗಳ ಸವಿನೆನಪು ನಾ,  ಮಡಿದ ಜೀವಕೆ ಕೊನೆಯ ಕಾಣಿಕೆ ನಾ, ಸುಖ-ದುಃಖಗಳ ಅವಿಭಾಜ್ಯ ಅಂಗ ನಾ. ಮನುಜ ಅರಿಯಬೇಕಾದ್ದು ಇದು ಕೇಳು  ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ. ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು, **********

ಹೂವಿನ ಹಾಡು Read Post »

ಕಾವ್ಯಯಾನ

ಗಝಲ್

ಮಾಲತಿ ಹೆಗಡೆ ಚಿಕ ಚಿಂವ್, ಕುಹೂ ಕುಹೂ,ಪೆಕ್ ಪೆಕ್ ನಿತ್ಯವೂ ಕೂಗುತ್ತವೆ ಹಕ್ಕಿಗಳು ಪೆಕ್ ಪೆಕ್, ಟುವ್ವಿಟುವ್ವಿ ಕಂಠ ಸೋಲುವವರೆಗೂ ಹಾಡುತ್ತವೆ ಹಕ್ಕಿಗಳು ಹುಳ-ಹುಪ್ಪಡಿ ಹುಡುಕುತ್ತಲೇ ವಿಹಾರವನ್ನೂ ಮಾಡಿಬಿಡುತ್ತವೆ! ಆಗಸದೆತ್ತರಕ್ಕೆ ಹಾರುತ್ತ, ತೇಲುತ್ತ ಬೆರಗ ಮೂಡಿಸುತ್ತವೆ ಹಕ್ಕಿಗಳು ಈ ಅಲ್ಪಾಯುಷಿ ಅನಂತಸುಖಿಗಳಿಗೆ ರಂಗುರಂಗಿನ ಬೆಡಗು ಕಸ ಕಡ್ಡಿ ಸೇರಿಸಿ ಕೌಶಲವ ಬೆರೆಸಿ ಗೂಡು ಕಟ್ಟುತ್ತವೆ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲಿ ಕ್ರಮಿಸುವುದೂ ಉಂಟು! ಕಾಳ ಹೆಕ್ಕಿ, ತುತ್ತನಿಕ್ಕಿ ಮರಿಗಳ ಜೋಪಾನವಾಗಿ ಬೆಳೆಸುತ್ತವೆ ಹಕ್ಕಿಗಳು ಹೂವು ಹಣ್ಣುಗಳನು ಕುಕ್ಕಿ, ಬೀಜವಗಳನು ಕಕ್ಕಿ ಕಾಡನ್ನುಳಿಸುತ್ತವೆ ಪ್ರಕೃತಿಯಲ್ಲಿ ಎಲ್ಲವೂ ಮುಖ್ಯವೆಂಬ ಸಂದೇಶ ಸಾರುತ್ತವೆ ಹಕ್ಕಿಗಳು ********* **********

ಗಝಲ್ Read Post »

ಕಾವ್ಯಯಾನ

ಅವನಿ

ನಾಗಲಕ್ಷ್ಮೀ ಕಡೂರು ರಾಸಾಯನಿಕ ಗೊಬ್ಬರಗಳಿಂದ ಬೆಂದು ಬಸವಳಿದ ವೃದ್ಧೆಯಂತಾಗುತ್ತಿದ್ದಾಳೆ… ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಭೂರಮೆಯ ಹಸಿರುಡುಗೆ ಹರಿದಂತೆ ಆ ವಸತಿಗಳಿಗೆ ನೀರುಪೂರೈಸುವಲ್ಲಿ ಭೂತಾಯಿಯೊಡಲಿಗೇ ಕನ್ನಹಾಕಿದಂತೆ 🙁 ಮನುಜರ ದಾಹಕ್ಕೆ ಕೊನೆಮೊದದಿಲ್ಲ ಅಂತರ್ಜಲ ಅಭಿವೃದ್ಧಿ ಮರೆತಿಹೆವಲ್ಲ ವೃಕ್ಷಗಳನ್ನು ಧರಾಶಾಯಿಯನ್ನಾಗಿಸುವುದೇ ನಿತ್ಯದ ಕಾಯಕ ಕಿತ್ತುಹೋಗಿರುವ ರಸ್ತೆಗಳ ಅಗಲಮಾಡೋದಕ್ಕ… ಕಾಡುಗಳೆಲ್ಲ ನಾಡಾಗುತ್ತಿದೆ ನೋಡ ಅದಕಂಡು ಓಟಕಿತ್ತಿದೆ ಕಾರ್ಮೋಡ ನಡೆದರೆ ತಾಯಿಗೆ ನೋವಾದೀತೆಂದು ಕ್ಷಮೆಯಾಚಿಸುತ್ತಿದ್ದರು ಹಿರಿಯರು ಐಷಾರಾಮಿ ಬದುಕಿನಲ್ಲಿ ಅವಳನ್ನು ಮರೆತೇಬಿಟ್ಟಿದ್ದಾರೆ ಈಗಿನವರು! ಬೆಟ್ಟಕಡಿದು ಇಲಿಹಿಡಿದಂತೆ ನಮ್ಮ ಪ್ರಯತ್ನ ಪ್ರಕೃತಿಯ ಮುಂದೆ ಎಂದಿಗೂ ಸಾಗದು ಮಾನುಷಯತ್ನ ಕೆರೆಕಟ್ಟೆ ಮುಚ್ಚಿ ಜಾನುವಾರುಗಳಿಗೂ ಪಡಬಾರದ ಪಾಡು ಹಕ್ಕಿಪಕ್ಷಿಗಳಿಗೆ ತಾವಿಲ್ಲ ಕಟ್ಟಲು ಗೂಡು! ಮಾಲಿನ್ಯಗಳ ಸುರಿಮಳೆಯಲ್ಲಿ ಮಾಯವಾಗುತ್ತಿದೆ ಮಳೆ ಕಾದು ಕನಲಿ ಕೆಂಪಾಗಿ ಬಾಯ್ದೆರೆದು ಹಪಹಪಿಸುತ್ತಿದ್ದಾಳೆ ಇಳೆ ಬತ್ತಿ ಬರಡಾಗುತ್ತಿರುವ ಕಾನನದಿಂದ ಸಾಧ್ಯವೇ ಹಸಿರು ಬೆಳೆ ಮಳೆಯಿಲ್ಲದ ಇಳೆಯಲ್ಲಿ ಬೇಕೆಂದರೂ ಕಾಣದಾಗಿದೆ ಸಮೃದ್ಧವಾದ ಕಳೆ… ಈಗಲಾದರೂ ಎಚ್ಚೆತ್ತುಕೊಂಡರೆ ನಾವು ಪಾರು ಕೊಂಚ ಮೈಮರೆತರೂ ಕಾಪಾಡುವವರಿಲ್ಲ ಯಾರೂ ಈಗಲೇ ಸಹಿಸಲಸಾಧ್ಯ ಧಗೆ, ನೀರಿಗಾಗಿ ಹಾಹಾಕಾರ ಮುಂದಿನ ಪೀಳಿಗೆಗೆ ಬಹುಶಃ ಪ್ರಾಕೃತಿಕ ಸಂಪತ್ತನ್ನು ರಚಿಸಿಡಬೇಕು ಚಿತ್ರಕಾರ!

ಅವನಿ Read Post »

ಕಾವ್ಯಯಾನ

ಗಝಲ್

ರತ್ನರಾಯ ಮಲ್ಲ ನಿನ್ನ ಆಶೀರ್ವಾದದಿಂದಲೇ ಸಂಪತ್ತನ್ನು ಗಳಿಸಿದೆ ಮಾ ಆ ದುಡ್ಡು ನನ್ನೆಲ್ಲ ಮನದ ಶಾಂತಿಯನ್ನು ಕಳೆದಿದೆ ಮಾ ಹಣದ ಮುಂದೆ ಪ್ರೀತಿ-ಪ್ರೇಮಗಳು ಗೌಣವಾಗಿದ್ದವು ಅಂದು ಜೇಬು ಭಾರವಾಗಿದ್ದರೂ ಇಂದು ನೆಮ್ಮದಿ ಗತಿಸಿ ಹೋಗಿದೆ ಮಾ ಸಾವಿನ ಸುದ್ದಿಯು ನನ್ನನ್ನು ಮತಿಭ್ರಮಣೆಗೆ ನೂಕುತ್ತಿದೆ ಕಣ್ಮುಂದಿನ ಅಂತರದಿಂದ ಹೃದಯಬಡಿತ ನಿಂತಿದೆ ಮಾ ಕರೆಗಳ ಕರತಾಡನ ನನ್ನ ಕರುಳನ್ನು ಕಿತ್ತು ತಿನ್ನುತಿದೆ ದೃಶ್ಯ ಕರೆಯಲ್ಲಿ ದರುಶನವ ಪಡೆದ ಪಾಪಿ ನಾನು ಹುಚ್ಚಾದೆ ಮಾ ವಾಹನಗಳ ಸಂಖ್ಯೆಗೆ ಮಿತಿಯಿಲ್ಲ ಮನೆಯ ಆವರಣದಲ್ಲಿ ಸಂಚಾರದ ದಟ್ಟಣೆಯು ನಿನ್ನಿಂದ ದೂರ ಮಾಡಿದೆ ಮಾ ಕಂಬನಿಯು ಮಳೆಯನ್ನು ನಾಚಿಸುತಿದ್ದರೂ ಅವನಿ ಒದ್ದೆಯಾಗಲಿಲ್ಲ ಹತ್ತಿರ ಬರಲಾಗದೆ ನಿಂತಲ್ಲಿಯೆ ಉಸಿರು ನಿಲ್ಲುತಿದೆ ಮಾ ಹಸಿ ಮಾಂಸದ ಮುದ್ದೆಯನ್ನು ಕಂಡು ಖುಷಿ ಪಟ್ಟವಳು ನೀನು ನಿನ್ನ ಋಣ ತೀರಿಸಲಾಗದೆ ‘ಮಲ್ಲಿ’ಯ ಮನವು ಗೋರಿಯನ್ನು ಅಗೆಯುತಿದೆ ಮಾ **********

ಗಝಲ್ Read Post »

ಕಾವ್ಯಯಾನ

ಗಝಲ್

ಎ.ಹೇಮಗಂಗಾ ಸ್ವಾರ್ಥದ ಭದ್ರಕೋಟೆಯಿಂದ ಎಂದೂ ಹೊರಗೆ ಬರಲಿಲ್ಲ ನೀನು ಅನರ್ಥಕೆ ಎಡೆ ಮಾಡಿದ ನಡೆಗೆ ಎಂದೂ ಪರಿತಪಿಸಲಿಲ್ಲ ನೀನು ಒಂಟಿ ಪಥಿಕಳ ಪಯಣಕೆ ಕೊನೆತನಕ ಜೊತೆ ನೀನೆಂದೆಣಿಸಿದ್ದೆ ಜನ್ಮ ಕೊಟ್ಟ ಜೀವಕೆ ಬೊಗಸೆಯಷ್ಟೂ ಪ್ರೀತಿ ನೀಡಲಿಲ್ಲ ನೀನು ಹಮ್ಮು ಬಿಮ್ಮಿನ ನಿನ್ನ ಅಧೀನದಿ ನೋವ ಸಹಿಸಿದ್ದು ಅದೆಷ್ಟು ಬಾರಿ ಕಟುವರ್ತನೆಗೆ ಕರುಳು ಕೊರಗಿದುದನು ಅರಿಯಲಿಲ್ಲ ನೀನು ತಾಯ್ತನದ ಬಳ್ಳಿಯಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚಾದವೇಕೆ ಸಾಂಗತ್ಯ ಬೇಡಿ ಹರಿಸಿದ ಕಂಬನಿಧಾರೆಗೂ ಕರಗಲಿಲ್ಲ ನೀನು ಮಾತಿನ ಕೂರಂಬುಗಳ ಕ್ರೂರ ಇರಿತಕೆ ಹೃದಯ ನೆತ್ತರು ಸುರಿಸಿತು ಮಾಯದ ಗಾಯಕೆ ಮಮತೆಯ ಮದ್ದನು ಲೇಪಿಸಲಿಲ್ಲ ನೀನು ತುತ್ತಿಟ್ಟವಳ ತೊರೆದು ಮುತ್ತಿಟ್ಟವಳ ಸಂಗವೇ ಸಗ್ಗವೆಂದುಕೊಂಡೆ ಹೆತ್ತೊಡಲಿಗೆ ಹಚ್ಚಿದ ಕಿಚ್ಚನು ಕೊಂಚವೂ ತಣಿಸಲಿಲ್ಲ ನೀನು ಬೇಡದ ಹೊರೆಯಾದ ಹೇಮ ಳ ಬಾಳಯಾತ್ರೆಯೀಗ ಮುಗಿದಿದೆ ಚಿರಶಾಂತಿ ಕಂಡವಳಿಗೆ ಅಂತಿಮ ವಿದಾಯವನೂ ಹೇಳಲಿಲ್ಲ ನೀನು *************

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಮುಂಗಾರು ಆಲಿಂಗನ… ಬಾಲಕೃಷ್ಣ ದೇವನಮನೆ ಮುಂಗಾರು ಸುರಿದಂತೆ ಸಣ್ಣಗೆಕೊರೆಯುತಿದೆ ಚಳಿ ಹೊರಗೂ ಒಳಗೂ…ಬಾಚಿ ತಬ್ಬಿದ ಮಳೆಯ ತೋಳುಇಳೆಯ ತೆಕ್ಕೆಯಲಿಕವಿದ ಮೋಡದ ನಡುವೆ ಚಂದ್ರ ತಾರೆಯ ಬೆಳಕಅರಸುತಿವೆ ಇರುಳ ಆಲಿಂಗನದಲ್ಲಿ… ಕಪ್ಪಾನೆಕಪ್ಪು ಮೋಡಗಳು ಸುರಿಯುತಿವೆಗವ್ವನೆಯ ಇರುಳ ಮೌನ ಸೀಳಿಮಾತಿಗಿಳಿದಿವೆ ಹನಿಯ ಜೊತೆ ಜೀರುಂಡೆ ಕ್ರಿಮಿ ಕೀಟಇಳೆಯ ಬಿಸಿ ಉಸಿರ ಸದ್ದನು ಮೀರಿ… ನಾಚಿ ಪುಳಕಿತಗೊಂಡ ನವ ವಧುವಿನಂತ ಇಳೆಮೊರೆಯುತಿದೆ ಹುಣ್ಣಿಮೆ ಕಡಲಂತೆಹನಿಯ ಬೆರಳು ಇಟ್ಟಂತೆ ಕಚಗುಳಿಇಳೆಯ ಮೈಯ ತುಂಬಾಮೊಳೆಯುತಿದೆ ಗರ್ಭದೊಡಲಲಿ ಹಸಿರು ಸಂತೆ… ರಮಿಸುತಿದೆ ಮಳೆಯ ತೋಳು ಇಳೆಯ ತೆಕ್ಕೆಯಲಿ ತಬ್ಬಿಹೊಸ ಹುಟ್ಟು ಒಳಗಿಂದ ಚಿಗುರಿ ಬರುವಂತೆ… ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಹೊರಟು ನಿಂತವಳು ತಿರುಗೊಮ್ಮೆ ನೋಡಿಬಿಡು ಕಟ್ಟಿದ ಗಂಟಲಲ್ಲಿ ಒಮ್ಮೆ ದನಿಯೆತ್ತಿ ಹಾಡಿಬಿಡು ಸಂಜೆ ಕವಿಯುತ್ತಿದೆ ಉಳಿದಿಲ್ಲ ಬಹಳ ವೇಳೆ ವಿದಾಯದ ಈ ಹೊತ್ತು ಅಲೆಯೊಂದ ಹಾಯಬಿಡು ಬೆನ್ನಿಗೇಕೆ ಬೇಕು ಹೇಳು ಈ ಬೇಗುದಿ ಭಾರ ಮಂಕಾದ ಮುಖದಲ್ಲು ಒಮ್ಮೆ ನಕ್ಕು ನಡೆದುಬಿಡು ಮಾಯುತ್ತಿರುವ ಎದೆಗಾಯ ಮತ್ತೆ ಕೆಂಪಾಗಿದೆ ಸಾಧ್ಯವಾದರೆ ಒಮ್ಮೆ ಬೆರಳಿಂದ ಸವರಿಬಿಡು ನನ್ನ ಕನಸೊಂದು ಬಿಡದೆ ನಿನ್ನ ಹಿಂಬಾಲಿಸಿದೆ ಈಸು ಬೀಳುವ ಮುನ್ನ ಒಮ್ಮೆ ಮುದ್ದಿಸಿಬಿಡು ಮರುಳಿನಲಿ ಅಲೆವ ‘ಜಂಗಮ’ಗೆ ಏನು ಬೇಕಿದೆ ಮತ್ತೊಮ್ಮೆ ಮಡಿಲು ನೀಡಿ ಮಗುವಾಗಿಸಿಬಿಡು *********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬರ್ಫದ ಬೆಂಕಿ ಬರ್ಫದ ಬೆಂಕಿ ಕವನ ಸಂಕಲನ ಲೇಖಕರು- ನಾಗರೇಖಾ ಗಾಂವ್ಕರ್ ಸಾಧನ ಪಬ್ಲಿಕೇಷನ್ ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ನಾಗರೇಖಾ ಗಾಂವ್ಕರ್ ಅವರ ಮೂರನೇ ಕವನ ಸಂಕಲನವಿದು. ಏಣಿ ಎಂಬ ಪ್ರಥಮ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ದೊರೆತಿದೆ. ಇನ್ನೊಂದು ಪದಗಳೊಂದಿಗೆ ನಾನು ಎಂಬ ಕವನ ಸಂಕಲನ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧ ಮತ್ತು ಆಂಗ್ಲ ಸಾಹಿತ್ಯ ಲೋಕ ಭಾಗ -೨ ಎಂಬ ಎರಡು ವಿಮರ್ಶಾತ್ಮಕ ಕೃತಿಗಳನ್ನು ಇವರು ರಚಿಸಿದ್ದಾರೆ. ಈ ಕವನ ಸಂಕಲನದಲ್ಲಿ ಒಟ್ಟು ನಲವತ್ಮೂರು ಕವಿತೆಗಳಿವೆ. ಅ) ಮಾಗುವುದೆಂದರೆ – ಅಡಿಯಲ್ಲಿ ಹನ್ನೆರಡು ಬ)ಅವಳ ಕವಿತೆಗಳು- ಇದರಲ್ಲಿ ಹದಿಮೂರು ಕ) ಕಾಲಾತೀತ ಕವಿತೆಗಳು- ಎಂಟು ಡ)ಬಾನ್ಸುರಿಯ ನಾದ- ಹತ್ತು ಕವಿತೆಗಳಿವೆ. ಮೊದಲು ಕವಿತೆ ಆಳವೆಂಬ ಅರಿವು ನೋಡಿ… ಎದೆಗಿಳಿದ ಅಕ್ಷರಗಳು ಶೋಕೇಸಿನ ಕಪಾಟಿನಲ್ಲಿ ಗಾಜಿನ ಕೋಣೆಯಲ್ಲಿ ತಳತಳಿಸುವ ಪದಕವಾಗಲ್ಲ.. ನೆಲಕ್ಕಿಳಿಯಬೇಕು, ಕೆಸರ ಕೊಳದ ನೈದಿಲೆಯಾಗಬೇಕು. ಬೆಳಕಿನ ಹಾಡ ಹೊಮ್ಮಿಸಬೇಕು. ಅವಳು ನಡೆಯುತ್ತಿದ್ದಾಳೆ… ಕವಿತೆಯಲ್ಲಿ ಅಕ್ಷರದ ಅರಮನೆಗೆ ಪರಿಮಳವ ಮಾರಿ ಬರಬೇಕು. ಎಂತಹ ಸೊಗಸಾದ ಸಾಲುಗಳು.! ಶೀರ್ಷಿಕೆ ಕವಿತೆಯಾದ ಬರ್ಫದ ಬೆಂಕಿಯಲ್ಲಿ… ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ರಾತ್ರಿಯಲ್ಲಿ ಹಗಲಿನ ಪಾಳಿ…ಸ್ವಗತದ ಸಾಲುಗಳಿರಬಹುದು. ತೆಕ್ಕೆಯೊಳಗಿಳಿದ ಪದಗಳ ಉಸಿರೊಳಗೆ ಬಚ್ಚಿಟ್ಟುಕೊಂಡೇ ಕಾಯ್ದುಕೊಂಡೇ ಹಾಡು ಹೆಣೆಯುವುದೆಂದರೆ ರಾತ್ರಿಯಲ್ಲೂ ಹಗಲಿನ ಪಾಳಿ. ಮಾತ್ರಿಯೋಷ್ಕಿ ಕವಿತೆಯ ಗೊಂಬೆಯೊಳಗಿನ ಗೊಂಬೆಯ ಸೃಷ್ಟಿ ಚೆನ್ನಾಗಿದೆ. ಗೂಸಬಮ್ಸ ನಿರೀಕ್ಷೆಯಲ್ಲಿ ಕವಿತೆ ಗಮನಿಸಿ… ಗಗನ ಚುಂಬಿ ಕಟ್ಟಡದ ಏರುವ ಇಳಿಯುವ ಎಸ್ಕಲೇಟರಗಳ ಮೇಲೆ ಕಿರುಸೊಂಟದ ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ ಜೀವ ಹೊತ್ತ ಗಜಗಾಮಿನಿಯರನ್ನು ಕಂಡು ಅರೆರೆ.. ಎಂದುಕೊಳ್ಳುತ್ತ ಮೈ ರೋಮ ನಿಮಿರಿತೆ? ಕಾಣದೇ ವ್ಯಗ್ರಗೊಂಡೆ. ‌….. ಮಿಂಚು ಕಂಗಳ ಸುಂದರಾಂಗರ ಕಣ್ಣಿನ ಸಂಚಲನೆಗೆ ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು ಕೈ ನೋಡಿದರೆ ರೋಮಾಂಚನ ವ್ಯಾಕ್ಸಾಯನ. ನಾಗರೇಖಾರ ವೈವಿಧ್ಯತೆಯ ಝಲಕ್ ಇಲ್ಲಿದೆ. ಮುನ್ನುಡಿಯಲ್ಲಿ ಹಿರಿಯರಾದ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಹೇಳಿರುವಂತೆ- ವಸ್ತು ವೈವಿಧ್ಯ, ಭಾವವಿಲಾಸ, ಹೊಸ ರೂಪಕಗಳ ಸೃಷ್ಟಿ, ಸೂಕ್ಷ್ಮಜ್ಞತೆ, ಭಾಷೆಯ ಪರಿಣಾಮಕಾರಿ ಬಳಕೆ, ಪಕ್ವ ಚಿಂತನೆಗಳ ಕಾರಣಗಳಿಗಾಗಿ ನಾಗರೇಖಾ ಅವರು ಕಾವ್ಯಾಸಕ್ತರು ಗಮನಿಸಲೇಬೇಕಾದ ಕವಯತ್ರಿಯಾಗಿದ್ದಾರೆ. ಒಮ್ಮೆ ಓದಲೇಬೇಕಾದ ಕೃತಿ ‘ ಬರ್ಫದ ಬೆಂಕಿ’. ********** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಈಜಿಪ್ಟಿನ ಮಹಾರಾಜ ಮೂಲ: Ozymandias of Egypt: By P.B.Shelly ಕನ್ನಡಕ್ಕೆ:ವಿ.ಗಣೇಶ್ ವಿ.ಗಣೇಶ್ ಅನತಿಕಾಲದಿಂದಲೂ ಪಾಳುಬಿದ್ದಾ ಭೂಮಿಯಲಿನಾನೊಬ್ಬ ಪಯಣಿಗನ ಭೇಟಿಯಾದೆನು ಅಂದುಮುರಿದೆರಡು ಕಾಲುಗಳ ಬರಿ ಪ್ರತಿಮೆಯದಾಗಿತ್ತುಆರ್ಧ ದೇಹವು ಕಂತಿತ್ತು ಆ ಮರಳಿನ ರಾಶಿಯಲಿ ಸುಕ್ಕಾದ ಹೊರ ತೊಗಲು, ಗಂಟು ಮೋರೆಯ ನೋಟಕೆತ್ತಿದಾ ಶಿಲ್ಪಿಯ ಕೈಚಳಕವ  ತೋರುತಲಿತ್ತುಊಟ ವಸತಿಯ ಕೊಟ್ಟು ಸಾಕಿಸಲಹಿದ ರಾಜನದುಷ್ಟತನದ ಕಳೆಯ ತುಂಬಿದ್ದನಾ ವದನದಲಿ. ಪ್ರತಿಮೆಯಾ ಪೀಠವದು ಮರಳಲ್ಲಿ ಮುಳುಗಿದರುರಾಜನ ಕಡು ದರ್ಪವ ಎತ್ತಿ ತೋರಿಸುತಲಿತ್ತು“ನನ್ನ ಹೆಸರು ಓಜಿಮಾಂಡಿಯಾಸ್, ರಾಜರ ಮಹಾರಾಜನನ್ನ ಸಾಧನೆಯ ನೋಡಿ! ಅದೆಷ್ಟು ಭಯಂಕರ” ಆ ಸುಡುಗಾಡಿನಲಿ ಸರ್ವನಾಶದ ಹೊರತಾಗಿರಾಜನ ಸಾಧನೆಗಳ ಅವಶೇಷವಿನಿತಿರಲಿಲ್ಲಮುರಿದು ನಿಂತಿಹ ಕಾಲುಗಳ ಇಕ್ಕೆಡೆಗಳಲ್ಲಿಯೂಹಬ್ಬಿತ್ತು ಮರಳಿನ ರಾಶಿ, ದೃಷ್ಟಿ ಹರಿಯುವತನಕ. **********

ಅನುವಾದ ಸಂಗಾತಿ Read Post »

ಇತರೆ

ಪ್ರಸ್ತುತ

ದುಬಾರಿಯಾಗಲಿರುವ ದಿನಗಳು ಅರುಣ್ ಕೊಪ್ಪ *ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ* ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ  ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ? ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ. ನಾವಿಷ್ಟು ದಿನ ಮಾಡಿದ ವ್ರತ ಕೆಡಲೂಬಹುದು. (ಸಾಮಾಜಿಕ ಅಂತರ ಕಾಪಾಡುವ ಹಾಗೂ ಆರೋಗ್ಯ ಕೋವಿಡ್ ಕ್ರಮಗಳು) ಕ್ಷಣಕ್ಕೂ ಮುಟ್ಟಿದ್ದೆಲ್ಲಾ ವಿಷವೆಂಬಂತೆ ಇಂದು ಬರಬರುತ್ತಾ ಕಾಳಜಿ ಕ್ಷೀಣಿಸುತ್ತಿದೆ. ಇದು ಯಾರ ಕಾಳಜಿ ಅಂತೀರಾ ನಮ್ಮದೇ.. ಮತ್ತೆ ಯಥಾ ಸ್ಥಿತಿಗೆ ಬರುವಾಗ ನಮ್ಮ ಸಾಮಾಜಿಕ ಅಂತರದ ಬದುಕು, ಕೆಲವಷ್ಟು ತ್ಯಾಗಗಳಿಗೆ, ಪಾಲನೆಗೆ ಬದ್ದವಾಗಿಯೇ ಇರಬೇಕು ಎನ್ನೋದನ್ನ ನಾವು ಮರೆಯುವಂತಿಲ್ಲ. ಮುಂದೇನು ಜನಸಾಮಾನ್ಯರ ಸ್ಥಿತಿ ——————————————— ಇದೊಂದು ದೊಡ್ಡ ಸಮೂಹ ಇಲ್ಲಿ ದೊಡ್ದವರಿಂದ ಹಿಡಿದು ಕಾರ್ಮಿಕ ಕುಳಿಗಾರರೊರೆಗೆ ಎಲ್ಲರೂ ಜನ ಸಾಮಾನ್ಯರೇ… ಅಂದ ಮೇಲೆ ಇವರ ಅವಲಂಬನೆಯ ಕ್ಷೇತ್ರಗಳ ,ಕಾರ್ಯಗಳ ಪಾಡಿನ ಮೇಲೆ ಎಲ್ಲವೂ ನಿರ್ಧರಿತ. ಕುಟುಂಭ, ಬೇಡಿಕೆಗಳು, ಸಾಲಗಳು,ಸವಲತ್ತುಗಳಿಗೆ ಹುಟ್ಟಿನಿಂದಲೇ ಒಗ್ಗಿ ಕೊಂಡ ಜನಸಾಮಾನ್ಯರ ಜೀವನ ಶೈಲಿಗೆ ಇನ್ನೂ ಕೂಡ ಯಾವಾಗಲೂ ಈ ರೀತಿಯ ಅನುಭವಗಳು ಆಗಲೇ ಇಲ್ಲ. ಇದೊಂದು ಹೊಸ ದುರ್ ಬೆಳವಣಿಗೆ. ಅನಿರೀಕ್ಷಿತ ವಿಪತ್ತು ಬಂದೊದಗಿದೆ. ಬಹುಪಾಲು ಜನಜೀವನ ದೂರದರ್ಶಿತ್ವದ ವಿಮರ್ಶೆಯೊಂದಿಗೆ ನಡೆಯುತ್ತಿದ್ದ ಈ ಆಧುನಿಕ ಜನ ಜೀವನ ಇಂದು ಸೋತು ಸುಣ್ಣಗಿದೆ. ವನ್ಯಮೃಗಗಳ ಹಾಗೆ ನಡೆದದ್ದೇ ದಾರಿಯಾಗಿ ಗೋಚರಿಸುತ್ತಿದೆ. ——————————————————- ಹೌದು ಅನೇಕ ಅಸಂಘಟಿತ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಎಷ್ಟೋ ದಿನಗಳ ಹಿಂದೆ ಮನೆ, ಮಠ ಬಿಟ್ಟು ಪದವಿ ಹಾಗೂ ಹೆಚ್ಚಿನ ಓದಿಲ್ಲದೆ ಬೇಕಾದದ್ದನ್ನು ಸಾಧಿಸಿ ಸ್ವಾವಲಂಬಿಗಳಾದವರು ಊರತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಮುಂದೇನು…? ಎಸ್, ಎಸ್, ಎಲ್, ಸಿ, ಮೊದಲೇ ಮುಂದೇನು? ನಂತರ ಮುಂದೇನು ಅನ್ನೋ ಲೇಖನಗಳನ್ನು ಈ ಮೊದಲೆಲ ಓದುತ್ತಾ ಇದ್ವಿ… ಈಗದೇ ವಿರುದ್ಧವಾಗಿದೆ. ಭವಿಶ್ಯದ ಕನಸುಗಳು ಕಮರಿಹೋಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಮುಂದೇನು? ——————- ಸರ್ಕಾರದ ಚಿಂತನೆಗಳಾದ ಅಂತರ್ಜಾಲ ಕಲಿಕಾ ವ್ಯವಸ್ಥೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಿ ,ಪರೀಕ್ಷೆಗೆ ಪೂರಕ ಅಭ್ಯಾಸದ ಮರು ಅವಲೋಕನ ಒಂದೆಡೆಯಾದರೆ ಮುಂದಿನ ಶೈಕ್ಷಣಿಕ ವರ್ಷ ಅಂದರೆ ಇದೇ ಜೂನ್ ಒಂದರ ಆರಂಭದ ಪ್ರಾಥಮಿಕ ,ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಹಂತಗಳ ಆರಂಭ ಅಥವಾ ಮುಂದುಡಿಕೆಯ ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆದರೂ ಈ ಎಲ್ಲ ಮೇಲಿನ ಸನಸ್ಯಗಳಿಗೆ, ಅಂತ್ಯ ಹಾಗೂ ಸ್ಪಷ್ಟ ಉತ್ತರ ಸಿಗೋದು ಕಷ್ಟವೇ ಆಗಿದೆ. ತೀರ ಕಳವಳ ಕಕ್ಕಾ -ಬಿಕ್ಕಿಯಲ್ಲಿ ಸಾಗಿತ್ತಿರುವ ಈ ಪ್ರಮುಖ ಸಾಮಾಜಿಕ ಹಂತಗಳಾದ, ವ್ಯಾಪಾರ, ವಹಿವಾಟು, ಶಿಕ್ಷಣ ,ಉದ್ಯೋಗಗಳ ಪುನಶ್ಚೇತನ ಹಾಗೂ ಮರು ಹುಟ್ಟು ಆಗಬೇಕಿದೆ. ದೇಶದಲ್ಲಿ ಜಿ ಡಿ ಪಿ ಯ ಕುಸಿತ ಹಾಗೂ ನಿರುದ್ಯೋಗದ ಮಟ್ಟ ಹಾಕುವ ಪ್ರಕ್ರೀಯೆ ಈಗ ಹೇಗೆ ಕೋವಿಡ್ ವಿರುದ್ಧ ನಡೆಯುವ ಸರ್ಕಾರದ ವೇಗದ ಕ್ರಮಗಳ ಮಾಧರಿಯಲ್ಲೇ ಆಗಬೇಕಿದೆ. ಕೃಷಿ ಚಟುವಟಿಕೆಯೊಂದಿಗೆ ಕರೊನಾ ಕಾಲದ ರೈತನ ಬದುಕು ಹೌದು ದೇಶದ ಬೆನ್ನೆಲುಬು ಅನ್ನ ನೀಡುವ ಅನ್ನದಾತ ರೈತ ಈ ಮುಂಗಾರಲ್ಲಿ ತನ್ನ ಕೆಲಸದ ಕೈ ಚುರುಕುತನ ಪ್ರಾರಂಭಿಸುತ್ತಾನೆ. ಹದ ಮಳೆ, ಸಮರ್ಪಕ ಬೆಳೆಯ ಇಳುವರಿಗಾಗಿ ಗೊಬ್ಬರ ಹತ್ತಲವು ಕೀಟನಾಶಕ, ಬೀಜ ನಾಶಕಗಳನ್ನೊಳಗೊಂಡಂತೆ ತೀರ ಬಂಡವಾಳ ಹಾಕುವ ಸಕಾಲವಿದು. ಸರ್ಕಾರ ಈ  ಬಗ್ಗೆ ಗಮನ ಹರಿಸುವದು ಸೂಕ್ತ. ವಿಶೇಷವಾಗಿ ಬತ್ತದ ಬೆಳೆಯ ತಯಾರಿ ,ಅಂದರೆ ಕೆಲ ಭಾಗದಲ್ಲಿ ಈ ಮೊದಲು ಬಿತ್ತುವ ಕಾರ್ಯ ಹೆಚ್ಚಿನದ್ದಾಗಿತ್ತು ಈಗ ಅದು ವಿರಳವಾಗಿ ಹೆಚ್ಚಿನ ರೈತರು ನಾಟಿಯನ್ನೆ ಅವಲಂಭಿಸಿದ್ದಾರೆ. ಇದಕ್ಕೆ ಪೂರಕ ಮಳೆ ಹಾಗೂ ಕೆಲಸಗಾರರ ಲಭ್ಯತೆ ಕೂಡ ಒಂದು ಮುಖ್ಯ ವಿಚಾರ. ಹೀಗೆ ಹತ್ತು ಹಲವು ಸಾಮಾಜಿಕ ವ್ಯವಸ್ಥೆಯ ಕ್ಷೇತ್ರಗಳು ಅಸಮತೋಲನದ ಹಂತ ತಲುಪಿರುವದು ಕರೋನವೇ ಪ್ರಮುಖ ಕಾರಣವಾಗಿದೆ ಎಂದು ಪ್ರತ್ಯಕ್ಷವಾಗಿ ಕಾಣುವ ವಸ್ತು ಸ್ಥಿತಿ. ಭೂತಕಾಲ, ಭವಿಷ್ಯತಕಾಲ ಹಾಗೂ ವರ್ತಮಾನದ ತುಲನೆಗೆ ಹೋದಾಗ ನೇರವಾಗಿ ದುಬಾರಿ ಕಾಲ ಅನುಭವವಾಗುತ್ತದೆ. ಕಾದು ನೋಡೋಣ ಕರೊನಾ ಬದುಕಿನ ಸಂಕ್ಷಿಪ್ತ ಕಲ್ಪನೆಯೊಂದಿಗೆ ಬರೆದ ಈ ಲೇಖನ ಹೋಲುವ ದಿನಗಳು ಹೌದೋ ಅಲ್ಲವೋ ಎಂದು… *****

ಪ್ರಸ್ತುತ Read Post »

You cannot copy content of this page

Scroll to Top