ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಿಗಿನ್ನೇನು ಬೇಕು?

ಕವಿತೆ ಕವಿಗಿನ್ನೇನು ಬೇಕು? ಮಾಲತಿ ಶಶಿಧರ್ ಕವಿತೆಯೊಳಗೊಂದು ಭಾವಬೆರೆತು ಹಾಲಿನಲ್ಲಿ ಲೀನವಾದಜೇನಿನಂತೆ ಸವಿಯಾಗಿರಲುಕವಿಗಿನ್ನೇನು ಬೇಕು? ಭಾವ ಭಾಷೆಗಳ ಮಿಲನಪ್ರಸವವಾಗಲು ಕವಿತೆಮಡಿಲಲ್ಲಿ ಕಣ್ದೆರೆಡುನಗುವ ಹಾಲುಗಲ್ಲದಕೂಸಿನಂತೆಕವಿಗಿನ್ನೇನು ಬೇಕು? ಮನ ಭಾವಗಳ ಬಂಧವದುಅರಿವಿನೊಳಗಿಟ್ಟ ಗಂಧದ ಕೊರಡುಸುಗಂಧ ಎಲ್ಲೆಡೆ ಹಬ್ಬಿಮುದವ ಹಂಚುತಿರಲುಕವಿಗಿನ್ನೇನು ಬೇಕು? ಎದೆಯೊಳಗಿನ ತದ್ಭವಗಳೆಲ್ಲಾಹೆಣೆದುಕೊಂಡು ತತ್ಸಮಗಳಪಂಕ್ತಿಗಳಾಗಿ ಅರಳಿದರೆಮೊಗ್ಗೊಂದು ಬಿರಿದು ಮುಗುಳುನಗುವಂತೆಕವಿಗಿನ್ನೇನು ಬೇಕು?? ಕವಿತೆ ಲೋಕದ ಕನ್ನಡಿಎಡಬಲಗಳಾಚೆ ಚಂದ ತೋರುವಪದ ಲಾಸ್ಯ ಮೃದು ಹಾಸ್ಯಜೀವ ಭಾವಗಳ ಜಲದೋಟನಿಲದೆ ಓಡುತ ಲೋಕವ ಶುದ್ಧಿಮಾಡಲುಕವಿಗಿನ್ನೇನು ಬೇಕು??ಕವಿತೆ ಇದ್ದರೆ ಸಾಕು… ***********************

ಕವಿಗಿನ್ನೇನು ಬೇಕು? Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹೆಣ್ಣೊಡಲಾಳದ ನೋವಿನ ದನಿಗಳು ಅಂಕಣ ಬರಹ ಊರ ಒಳಗಣ ಬಯಲುಲೇಖಕಿ-ವಿನಯಾಪ್ರಕಾಶಕರು- ಛಂದ ಪುಸ್ತಕಬೆಲೆ-೪೦/-              ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ ಇದೆ. ಕೆಲವೊಮ್ಮೆ ಅಲ್ಲಿಂದ ಒಂದೆರಡು ಕಿ.ಮಿ ದೂರ ಇರುವ ಗೋಕರ್ಣಕ್ಕೂ ಹೋಗಿ ಬರುವುದಿದೆ. ಮೊದಲ ಕಥೆಯನ್ನು ಓದುತ್ತಲೇ ಮತ್ತೆ ಇದೆಲ್ಲವನ್ನೂ ನೆನಪಿಸಿ, ಒಮ್ಮೆ ಮಾಸ್ಕೇರಿಗೆ ಹೋಗಬೇಕು ಎನ್ನುವ ಭಾವ ಹುಟ್ಟಿಸಿದ ಪುಸ್ತಕ ವಿನಯಾ ಒಕ್ಕುಂದರವರ ಊರೊಳಗಣ ಬಯಲು ಎನ್ನುವ ಕಥಾ ಸಂಕಲನ. ಮೊದಲ ಕಥೆ ಒಬ್ಬ ಹುಡುಗಿ ತನ್ನದೇನೂ ತಪ್ಪಿಲ್ಲದೇ ಹುಡುಗನ ಬರೀ ಬಾಯಿ ಮಾತಿನ ತೆವಲಿಗೆ ಬಲಿಯಾಗಿ ಇಡೀ ಹದಿಹರೆಯ ಹಾಗು ಯೌವ್ವನದ ದಿನಗಳನ್ನು ಅಂಜುತ್ತ, ಉಳಿದವರ ಅನುಮಾನದ ದೃಷ್ಟಿಗೆ ಪಕ್ಕಾಗಿ ನೋಯುತ್ತ ನವೆದ ಕಥೆಯಿದೆ. ಹದಿಮೂರು ವರ್ಷದ ಹುಡುಗಿಯನ್ನು ಅದಾವ ಕಾರಣಕ್ಕಾಗಿ ತನ್ನ ಪ್ರಿಯತಮೆ ಎಂದು ಸುದ್ದಿ ಹಬ್ಬಿಸಿದ ಎಂಬುದು ಕೊನೆಗೂ ಅರ್ಥವಾಗುವುದಿಲ್ಲ. ಅದೆಷ್ಟೋ ವರ್ಷಗಳ ನಂತರ ಪುನಃ ದೋಣಿ ದಾಟಲು ಬಂದವಳು ಅಕಸ್ಮಾತಾಗಿ ಅವನನ್ನು ಕಂಡು ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ಬರೆಯುವ ಪತ್ರ ಈ ಕಥೆ. ಇಲ್ಲಿ ಬರುವ ಹಲವಾರು ಮನೆಗಳ ಹೆಸರುಗಳು ಅದೆಷ್ಟು ಆಪ್ತವೆಂದರೆ ನಾನೇ ಆ ಜಾಗದಲ್ಲಿ ಇದ್ದೆನೇನೋ ಎಂಬ ಭಾವ. ಗಾಂವಕರ ಮನೆಯ ಯಾರು ಹೀಗೆ ಮಾಡಿದ್ದು ಎಂಬ ಊಹೆ, ಒಟ್ಟಿನಲ್ಲಿ ಕಥೆ ಎಂಬುದು ಕಥೆಯಾಗಷ್ಟೇ ಉಳಿಯದೇ ಇದು ನನ್ನದೇ ಬದುಕಿನ ಒಂದುಚಭಾಗ ಎನ್ನಿಸುವಂತಾಗಿದ್ದಕ್ಕೆ ಕಾರಣವೂ ಇದೆ. ಮಾಸ್ಕೇರಿಯ ಗಾಂವಕರ ಮನೆತನ ಒಂದು ಪ್ರತಿಷ್ಟೆಯ ಮನೆತನವಷ್ಟೇ ಅಲ್ಲ ಅದು ನನ್ನ ಅಪ್ಪನ ಅಜ್ಜಿ ಮನೆಯೂ ಹೌದು. ನನ್ನ ಅಜ್ಜಿಯನ್ನು ಮದುವೆಯ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಕರೆತಂದಿದ್ದರಂತೆ ಎಂದು ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲ ನನಗೆ ಹತ್ತಿರದ್ದು ಎಂದು ಅನ್ನಿಸಲು ಪ್ರಾರಂಭವಾಗಿದ್ದು. ಅಷ್ಟೇ ಅಲ್ಲ, ನನ್ನ ಚಿಕ್ಕಪ್ಪನ ಮಗಳು ಭಾರತಿಗೂ ಇದು ಅಜ್ಜಿ ಮನೆಯಾದ್ದರಿಂದ ನಮ್ಮಿಬ್ಬರ ಅಡೆತಡೆಯಿಲ್ಲದ ಅದೆಷ್ಟೋ ಮಾತುಗಳಲ್ಲಿ ಮಾಸ್ಕೇರಿಯ ವಿಷಯ ಆಗಾಗ ಬಂದು ಹೋಗುತ್ತಿರುತ್ತದೆ. ಆ ಕಾಲದಲ್ಲೇ ಕಾಶಿ ವಿದ್ಯಾಪೀಠದಲ್ಲಿ ಓದಿ ಶಾಸ್ತ್ರಿ ಪದವಿ ಪಡೆದ ಅಪರೂಪದ ಮಹಾನುಭಾವರಲ್ಲಿ ಆಕೆಯ ಅಜ್ಜ ಕೂಡ ಒಬ್ಬರು. ಇದೆಲ್ಲವೂ ಈ ಕಥೆಯನ್ನು ಓದಿದ ನಂತರ ನೆನಪು ಮರುಕಳಿಸಿ ಕಥೆ ಓದುತ್ತಿದ್ದೇನೆಯೋ ಅಥವಾ ಸಿನೇಮಾ ನೋಡುತ್ತಿದ್ದೇನೆಯೋ ಎಂಬ ಭಾವ ಹುಟ್ಟಿಸಿದ್ದು ಸುಳ್ಳಲ್ಲ.     ಅಮ್ಮನ ಕವನ ಸಂಕಲನ ಬಿಡುಗಡೆಗೆ ಬಾ ಎಂದ ವಿನಯರವರು ನನಗೆ ಈಗಲೂ ನೆನಪಾಗುತ್ತಾರೆ. ನಮ್ಮೂರ ಕಡೆಗಳಲ್ಲಿ ಗೌರಮ್ಮ ಅಕ್ಕೋರೆಂದರೆ ಕರಕುಶಲವಸ್ತುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಎಂದೇ ಪರಿಚಿತ. ಅವರ ಮನೆಗೆ ಹೋದವಳು ಹುಲ್ಲಿನಲ್ಲಿ ಮಾಡಿದ ಬೀಸಣಿಗೆಯನ್ನು ನನಗೆ ಬೇಕು ಎನ್ನುತ್ತ ತೆಗೆದುಕೊಂಡು ಬಂದಿದ್ದೆ. ಈಗಲೂ ಮನೆಯ ಬಾಗಿಲಿನಲ್ಲಿರುವ ಆ ಬೀಸಣಿಕೆ ನೋಡಿದಾಗಲೆಲ್ಲ ಗೌರಮ್ಮಕ್ಕನ ನೆನಪು ಮತ್ತು ಅದರ ಜೊತೆಜೊತೆಯಾಗಿಯೇ ಬರುವ ವಿನಯಾ ನೆನಪು.          ಹದಿಮೂರು ವರ್ಷದ ಹುಡುಗಿಯನ್ನು ತನ್ನ ಪ್ರಿಯತಮೆ ಎಂದು ಬಿಂಬಿಸಲು ಹೊರಟವನು ತನ್ನ ಅದೇ ವಯಸ್ಸಿನ ತಮ್ಮನನ್ನು ಪುಟ್ಟ ಮಗುವಂತೆ ನೋಡಿಕೊಳ್ಳುತ್ತ, ಬಸ್ ಹತ್ತಿಸಿ ಶಾಲೆಗೆ ಬಿಡುತ್ತಾನೆ. ಹೆಣ್ಣಾದರೆ ಆಕೆ ಹದಿಮೂರಕ್ಕೇ ದೊಡ್ಡವಳಾದ ಲೆಕ್ಕವೇ ಎಂದು ಕೇಳುವ ಪ್ರಶ್ನೆ ಇಂದಿನ ಜಗತ್ತಿಗೆ ಹಿಡಿದ ಕೈಗನ್ನಡಿಯಂತಿದೆ. ಹತ್ತು ಹನ್ನೆರಡು ವಯಸ್ಸಿಗೆ ಮೈನೆರೆದು ಬಿಡುವ ಇಂದಿನ ಹುಡುಗಿಯರು ಸಹಜವಾಗಿಯೇ ತಮ್ಮ ಬಾಲ್ಯವನ್ನು ಕಳೆದುಕೊಂಡು ಬಿಡುವ ಕ್ರೂರ ನೆನಪುಗಳ ಮಾಲೆಯೂ ಇಲ್ಲಿದೆ. ಯಾಕೆಂದರೆ ತನಗೆ ಗೊತ್ತಿಲ್ಲದ ಪ್ರೇಮಿಯೊಬ್ಬ ತನ್ನ ಮನೆಯೆದುರು ಸುಳಿದಾಡುವಾಗ ಚಿಕ್ಕಪ್ಪ ಎನ್ನಿಸಿಕೊಂಡವನೂ ಕೂಡ ಏನಿರಬಹುದು ಎಂಬುದನ್ನು ಇವಳ ಬಳಿಯೂ ಕೇಳದೆ, ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಾರಾಸಗಟಾಗಿ ‘ತೀಟೆಯಿದ್ದರೆ ನನ್ನ ಸಂಗಡ ಬಾರೆ’ ಎಂದು ಬಿಡುವುದು ಅದೆಷ್ಟು ಅಸಹ್ಯದ ಪರಮಾವಧಿ, ಆಡಾಡುತ್ತಲೇ ಹೇಳಿದ ಮಾತಿರಬಹುದು ಎಂದು ಸಮಾಧಾನ ಹೇಳಿಕೊಳ್ಳಬಹುದಾಗಿದ್ದರೂ ವರಸೆಯಲ್ಲಿ ಮಗಳೇ ಆಗಬೇಕಿದ್ದವಳಿಗೆ ಆಡುವ ಮಾತೇ ಇದು ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಗಂಡಸರ ಕಾಮವಾಂಛೆಗೆ ಯಾರಾದರೇನು ಎಂಬ ಮಾತಿಗೆ ಪುರಾವೆ ನೀಡುವಂತಿದೆ.   ಎರಡನೆಯ ಕಥೆ ಊರ ಒಳಗಣ ಬಯಲು ಕೂಡ ಮಾಸ್ಕೇರಿಯ ಆವರಣದ್ದೇ. ಊರು ಬಿಟ್ಟು ಹೋಗಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಕಥಾನಾಯಕ ತನ್ನ ತಂದೆ ಪಾಂಡುರಂಗ ಗಾಂವಕರರ ಹೆದರಿಕೆಯಿಂದಾಗಿ ಊರಿಗೆ ಬಂದರೂ ಮನೆಗೆ ಹೋಗಲಾಗದೇ ಹಿಂದಿರುಗುವ ಕಥೆಯಿದ್ದರೂ ಅದು ಒಂದು ಊರು ನಿಧಾನವಾಗಿ ತನ್ನ ಹಳೆಯ ಬಾಂಧವ್ಯವನ್ನು ಮರೆಯುವ ಕಥೆಯನ್ನು ಹೇಳುತ್ತಲೇ, ಅಂದು ಜಾತಿ ಕಾರಣಕ್ಕಾಗಿ ಮಾಪಿಳ್ಳೆಯರ ಹುಡುಗಿಯನ್ನು ಬೆನ್ನಟ್ಟಿ ಹೋಗಿದ್ದನ್ನು ವಿರೋಧಿಸಿ ಜಗಳವಾಡಿದ್ದ ಊರಿನ ಹಿಂದಿನ ಗುನಗನ ಮಗನಾಗಿದ್ದವ, ಪ್ರಸ್ತುತ ಶಾಂತಿಕಾ ಪರಮೇಶ್ವರಿಯ ಗುನಗ ‘ಹಿರೀ ಸೊಸೆಯನ್ನು ಮನೆ ತುಂಬಿಸಿಕೊಳ್ಳದೇ ಕಿರಿ ಸೊಸೆಯನ್ನು ತುಂಬಿಸಲಾಗದು ಎಂದು ದೇವಿಯ ಅಪ್ಪಣೆ’ ಕೊಡಿಸುವುದಾಗಿ ಹೇಳುವುದು, ದೋಣಿ ದಾಟಿಸುವವನೂ ಕೂಡ ಪಾಂಡೊಡೆದಿರು ಮಗನನ್ನು ಒಪ್ಪಿ ಕೊಂಡರೇನೋ, ಹಂಗಾದ್ರೆ ಸಾಕು ಎಂದು ಹಾರೈಸುವುದು ಇನ್ನೂ ಉಳಿದಿರುವ ಮಾನವೀಯತೆಯ ಪ್ರೀತಿಯನ್ನು ನೆನಪಿಸುತ್ತದೆ. ಮನೆ ಎಂದರೆ ಅದು ಕೇವಲ ತನ್ನೊಬ್ಬನ ಮನೆಯಲ್ಲ, ಇಡೀ ಊರನ್ನೂ ಒಳಗೊಂಡಿದ್ದು ಎನ್ನುವ ಮಾತು ಒಮ್ಮೆ ಎದೆಯನ್ನು ಹಸಿಯಾಗಿಸುತ್ತದೆ.    ಮೂರನೆಯ ಕಥೆ ಕಡಿತನಕ ಕಾಯುವ ಅಭಿಮಾನದಲ್ಲಿ ಹೆಣ್ಣು ಅನುಭವಿಸುವ ಅಸ್ಥಿರತೆಯನ್ನು ತೀರಾ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅತ್ತೆ, ಸೊಸೆ ಗಂಗಮ್ಮ, ಹಾಗೂ ಅವಳ ಮಗಳು ಕರಿಶ್ಮಾ ಆದ ಕರಿಯಮ್ಮ ಹೀಗೆ ಮೂರು ತಲೆಮಾರಿನ ಹೆಣ್ಣುಗಳು ಅನುಭವಿಸುವ ಯಾತನೆಯನ್ನು ಕಾಣಬಹುದು. ಮಾವ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನೆಲ್ಲ ಗದ್ದೆಯನ್ನೂ ಮಾರಿ, ಅತ್ತೆಯ  ಬಂಗಾರವನ್ನೂ ಊರಿನ ವೇಶ್ಯೆಗೆ ಸುರಿದವನು. ಅವನೆಲ್ಲ ಆಟಾಟೋಪವನ್ನು ಸೋದರ ಸೊಸೆಯಾಗಿ ಕಣ್ಣಾರೆ ಕಂಡವಳು, ನಂತರ ಅವನ ಮಗನನ್ನು ಮದುವೆಯಾಗಿ ತಾನೂ ಜವಾಬ್ಧಾರಿ ಇಲ್ಲದ ಗಂಡನನ್ನು ನಿಭಾಯಿಸಿದವಳು. ಬೆಳದಿಂಗಳಿಂದ ಕಡ ತಂದಂತಹ ದಂತದ ಗೊಂಬೆ ಮಗಳನ್ನು ಓದಿಸಿ ಮದುವೆ ಮಾಡಿ ನಿಶ್ಚಿಂತಳಾಗಿರುವ ಗಂಗಕ್ಕ, ಮಗಳು ಅಲ್ಲಿಯೂ ಮನೆಯೊಳಗಿನ ಕೈದಿ. ಹುಟ್ಟಿದ ಮಗನನ್ನು ಓದಿಸಿ, ಈಗಿನ ಟ್ರೆಂಡ್‌ಗೆ ತಯಾರು ಮಾಡಲೆಂದು ದೂರದ ಡೆಹರಾಡೂನ್ ಸ್ಕೂಲ್‌ಗೆ ಹಾಕಿ ಅಮ್ಮ ಮಗನ ಬಾಂಧವ್ಯವನ್ನೇ ಕಸಿದು ಬಿಡುವ ಅಪ್ಪ, ನಂತರ ಟ್ಯೂಷನ್‌ಗೆಂದು ಬರುವು ಹುಡುಗರ ಮೇಲೂ ಅನುಮಾನ ಪಟ್ಟು, ಆಕೆ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತಾನೆ.    ನಾಲ್ಕನೆಯ ಕಥೆಯಂತೂ ತೀರಾ ತಿಳಿಯದ ಆಳಕ್ಕೆ ನನ್ನನ್ನು ನೂಕಿದ ಕಥೆ ಎಲ್ಲ ಆರಾಮ. ಹೇಳಲಾಗದ ಅದೆಂತಹುದ್ದೋ ಬಾಲ್ಯದ ನೆನಪುಗಳನ್ನೆಲ್ಲ ಗಬರಾಡಿ ಎದುರಿಗಿಟ್ಟ ಕಥೆಯಿದು. ಸಾವಿತ್ರಿ ಟೀಚರ್ ಯಾಕೆ ತಮ್ಮ ಸಹೋದ್ಯೋಗಿ ಪ ನಾ ಮಾಗೋಡರಿಗೆ ಎಲ್ ಐ ಸಿ ನಾಮಿನೇಟ್ ಮಾಡಿದರು? ಆಯಿ ಎಂದು ಕರೆಯುತ್ತಿದ್ದ ಹುಡುಗ ಯಾರು? ಮೇದಾರ ಸರ್ ಯಾರು ಎಂಬೆಲ್ಲ ಪ್ರಶ್ನೆಗಳು ಬಗೆಹರಿಯುವುದೇ ಇಲ್ಲ. ನಮ್ಮ ಬಾಲ್ಯದಲ್ಲೂ ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟಿ ಈಗಲೂ ಕಾಡುತ್ತಿರುವ ವಿಷಯಗಳು ಹಾಗೆಯೇ ಇದ್ದಿರಬಹುದು, ಅದು ಶಿಕ್ಷಕರಾಗಿರಬಹುದು, ಸುತ್ತ ಮುತ್ತಲಿನ ಯಾರೋ ಸಂಬಂಧಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ದೂರದಲ್ಲಿ ಕೇಳಿದ ಯಾರದ್ದೋ ಕತೆಯೇ ಆಗಿರಬಹುದು,  ಇಂತಹ ಹಲವಾರು ಪ್ರಶ್ನೆಗಳು ನಮ್ಮೆದೆಯ ಒಂದು ಮೂಲೆಯಲ್ಲಿ ಹಾಗಿಯೇ ಬೆಚ್ಚಗೆ ಮಲಗಿರುತ್ತದೆ. ಅಂತಹ ಪ್ರಶ್ನೆಗಳೆಲ್ಲ ನನ್ನೆದುರಿಗೂ ಧುತ್ತನೆ ಎದುರು ನಿಂತಂತಾಗಿ ತಲ್ಲಣಿಸುವಂತಾಗಿದ್ದು ಸುಳ್ಳಲ್ಲ. ನೋಯದವರೆತ್ತ ಬಲ್ಲರೋ ಎನ್ನುವ ಕಥೆಯ ತವರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಅಂಜನಿ ಆಸ್ತಿಯನ್ನೆಲ್ಲ ಕೊಡುತ್ತೇನೆಂದರೆ ನಿರಾಕರಿಸಿ ಸಾವನ್ನಪ್ಪುವ ಬಗೆ ಒಂದು ಕ್ಷಣ ಕೊರಳು ಹಿಡಿದಂತಾಗುತ್ತದೆ. ಅಂಜನಿಯನ್ನು ಮದುವೆಯಾಗಬೇಕಾಗಿದ್ದ ಅನಿಲ, ‘ಮೋಸ ಮಾಡುಕೆ ನಾ ಏನ ಅದರ ಮೈ ಮುಟ್ಟಿನೆ’ ಎಂದು ಒಂದಿಷ್ಟೂ ಅಳುಕಿಲ್ಲದೇ ಹೇಳಿ, ಮೈ ಮುಟ್ಟಿದರೆ ಮಾತ್ರ ತಪ್ಪು ಎಂಬಂತೆ ನಡೆದುಕೊಳ್ಳುವ ಭಾವ ಮತ್ತೊಮ್ಮೆ ಈ ಸಮಾಜz, ಇಲ್ಲಿನ ಗಂಡಸರ ರೀತಿನೀತಿಯ ಬಗ್ಗೆ, ಅವರು ಯೋಚಿಸುವ ಬಗೆಯ ಕುರಿತು ತಿರಸ್ಕಾರ ಹುಟ್ಟುವಂತೆ ಮಾಡಿ ಬಿಡುತ್ತದೆ. ದಣಿವು ಕಾಡುವ ಹೊತ್ತು ಕಥೆಯಲ್ಲಿ ಒಂದಿಷ್ಟು ಗೊಂದಲ ಕಾಣಿಸುತ್ತದೆ. ಕಥೆಯ ಮೊದಮೊದಲು ಯಾರಿಗೆ ಏನಾಗಿದ್ದು ಎಂಬುದು ತಿಳಿಯದೇ ಕೊನೆಗೆ ಹೆಡ್ಮಾಸ್ತರರ ಹೆಂಡತಿ ತೀರಿ ಹೋಗಿದ್ದು, ಇತ್ತ ಗಂಡ ಯಾರು ಸತ್ತರೇನು ಉಳಿದವು ಆತನನ್ನು ಬದುಕಿಸುತ್ತವೆ ಎಂಬಂತೆ ಮಾತನಾಡಿದ್ದು ಎಲ್ಲವೂ ಬದುಕು ಇಷ್ಟೇನೇ ಎಂಬಂತೆ ಮಾಡಿಬಿಡುತ್ತದೆ. ಸ್ವಯ ಕಥೆಯಲ್ಲಿ ಯಾವುದೋ ಗರ್ಜಿಗೆ ದೂರಾದ ಗಂಡ ಹೆಂಡಿರ ಮನದ ಮಾತುಗಳಿವೆ. ಊರೆಲ್ಲ ಸುತ್ತುವ ಗಂಡಸಿಗೆ ಮನೆಯ ಹೆಂಡತಿ ನೆನಪಾಗುವುದು ತಾನು ಹಾಸಿಗೆ ಹಿಡಿದಾUಲೇ. ಆದೇ ಹೆಣ್ಣು ತಿರಸ್ಕಾರವ ನುಂಗಿ, ಗಂಡ ಹಾರಿದ ಬೇಲಿ ಎದುರಿಗೇ ಇದ್ದರೂ ಮಾತನಾಡದವಳು. ಎಲ್ಲಿಯೂ ಉಳಿದ ಹೆಂಗಸರಂತೆ ನಮ್ಮವರು ಎನ್ನದೇ, ನಿಮ್ಮನ್ನೋರು ಎನ್ನುತ್ತ ಕೊನೆಗೆ ತನ್ನ ಗಂಡ ಹೋಗುತ್ತಿದ್ದ ಮನೆಯವಳಿಗೂ ನಿಮ್ಮಣ್ಣೋರು ಎಂದು ಹೇಳಿ ನಕ್ಕುಬಿಡುವ ಪರಿ  ಸಾಧಾರಣಕ್ಕೆ ದಕ್ಕುವಂತಹುದ್ದಲ್ಲ. ಇಬ್ಬರ ಮನದ ಮಾತು ನಮ್ಮೊಳಗಿನ ಆಳವನ್ನು ಕೆದರಿ ಗಾಯವಾಗಿಸುತ್ತದೆ. ಕ್ಷಮೆಯಿರಲಿ ಕಂದಾ ಕಥೆಯಲ್ಲಿ ಶಿಕ್ಷಕಿಯೊಬ್ಬಳು ಎದುರಿಸಿದ ಸಾಮಾಜಿಕ ಬಂಧದ ಕಥೆಯಿದೆ. ಮಕ್ಕಳಂತೆ ಕಾಣುವ ವಿದ್ಯಾರ್ಥಿಗಳಲ್ಲಿ ಈ ಸಮಾಜ ಜಾತಿ ವಿಷಬೀಜವನ್ನು ಬಿತ್ತುವಾಗ,  ಆ ಮಕ್ಕಳ ಕುರಿತು ಶಿಕ್ಷಕಿಯ ಮೇಲೇ ಇಲ್ಲ ಸಲ್ಲದ ಸಂಬಂಧದ ಆರೋಪ ಹೊರಿಸುವಾಗ ಶಿಕ್ಷಕಿ ಅಸಹಾಯಕಳಾದ ಕಥೆ ಇಲ್ಲಿದೆ. ಜಾಣೆಯಾಗಿರು ಮಲ್ಲಿಗೆ ಕಥೆಯಲ್ಲಿ ದೊಡ್ಡವಳಾಗುವ ಮಗಳ ವೇದನೆಯಿದೆ. ಅಲ್ಲಿ ಬರುವ ಕಥೆ ಕೂಡ ತೀರಾ ರೂಪಕದಲ್ಲಿದ್ದು ಕಪ್ಪು ಬಣ್ಣದ ಕಾಲುವೆ ಹರಿದು ಬಾವಿಯಾಗುವಂತೆ ಹೇಳುತ್ತದೆ. ಕೊನೆಯ ಕಥೆ ಹತ್ತು ವರ್ಷದ ಹಿಂದೆ ಮತ್ತೂರ ತೇರಿನಲಿ ಕಥೆಯಲ್ಲಿ ‘ನೋಡಿದರೆ ತನ್ನಂತೆ ಕಾಣುವ ಮೊಬೈಲ್ ಸೆಟ್ ಎಂದು ತಂದೆ’ ಎಂದಿದ್ದು ನಂತರ ಅದು ಬೇಸರವಾಗಿದೆ ಬದಲಾಯಿಸುವೆ ಎಂದಾಗ ತನ್ನನ್ನೇ ಬದಲಾಯಿಸುವೆ ಎಂದಂತಾಗಿ ಅವಳು ನಡುಗುವುದು, ಮತ್ತು ಆತ ಹೇಳಿದ ಮಾತಿಗೆ ಅರ್ಥ ಹಚ್ಚುತ್ತ ಸಮಾಧಾನ ಮಾಡಿಕೊಳ್ಳುವ ಕೆಲಸದಲ್ಲಿ ಅವಳು ತಲ್ಲೀನಳಾಗುವುದು ಎಲ್ಲರ ಮನೆಯ ಕಥೆಯನ್ನೇ ನೆನಪಿಸುತ್ತದೆ.    ಇಲ್ಲಿರುವ ಹೆಚ್ಚಿನ ಕಥೆಗಳು ನನಗೆ ತೀರಾ ಆಪ್ತವಾಗುವುದಕ್ಕೆ ಕಾರಣ ಅದು ನಮ್ಮೂರಿನ ಸುತ್ತ ಮುತ್ತಲ ಹಳ್ಳಿಗಳ ಹೆಸರನ್ನು ಒಳಗೊಂಡಿದ್ದು. ಮಾಸ್ಕೇರಿ, ಹೊನ್ನೆಬೈಲು, ಅಗಸೂರು, ದೇವರಭಾವಿ, ಸಗಡಗೇರಿ, ತೊರ್ಕೆಗಳು ನನ್ನದೇ ಅವಿಭಾಜ್ಯ ಅಂಗಗಳಾಗಿರುವ ಊರುಗಳು. ಇನ್ನು ಹೆಚ್ಚಿನ ಕಥೆಗಳ ಭಾಷೆಗಳಂತೂ ನನ್ನದೇ ಆಡುಭಾಷೆ. ಹೀಗಾಗಿ ಈ ಕಥೆಗಳಲ್ಲೆಲ್ಲ ನಾನೇ ಭಾಗವಾಗಿದ್ದೇನೆ ಎಂದುಕೊಳ್ಳುತ್ತಲೇ ಓದಿದ್ದೇನೆ.    ಅಂದಹಾಗೆ ಇಡೀ ಕಥೆ ಹೆಣ್ಣಿನ ಸುತ್ತ ಸುತ್ತುತ್ತದೆ. ಹೆಣ್ಣಿನ ಜೀವನದ ಆಗುಹೋಗುಗಳು ಇಲ್ಲಿನ ಪ್ರಧಾನ ವಿಷಯಗಳು. ಹೆಣ್ಣಿನ ಕಷ್ಟಗಳ ಅರಿವು ಅವಳಿಗಷ್ಟೇ ಇರಲು ಸಾಧ್ಯ. ಇಡೀ ಸಂಕಲನ ಹೆಣ್ತನದ ಮೂಸೆಯಲ್ಲಿ ಅದ್ದಿ ತೆಗೆದಂತಿದೆ. ಜೀವನದ ಹತ್ತಾರು ಅನುಭವಗಳು, ನೋವು ನಲಿವುಗಳನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡುವುದನ್ನು ಇಲ್ಲಿನ ಕಥೆಗಳು ನಮಗೆ ಕಲಿಸಿಕೊಡುತ್ತವೆ. ಹತ್ತಿರದವರು ಎಂದುಕೊಂಡವರೇ ಹೆಣ್ಣನ್ನು ಬಳಸಿಕೊಳ್ಳುವ ಪರಿ ಮೈ ನಡುಗಿಸುತ್ತದೆ. ಮೊದಲ ಕಥೆಯ ಸುಧಾಕರನಂತೆ ಇದೇ ಎಂದು ನಿಖರವಾಗಿ ತೋರಿಸಲಾಗದ ಆದರೆ ಜೀವಮಾನವಿಡೀ ನೋವನುಭವಿಸುವ ಹಾನಿಯನ್ನು ಮಾಡಿ

Read Post »

ಸಂಪ್ರೋಕ್ಷಣ

ಅಂಕಣ ಬರಹ ಹೂವು ಹೊರಳುವ ಹಾದಿ ಬಾಲ್ಕನಿ ಎಂದಾಗಲೆಲ್ಲ ನನಗೆ ಹೂವಿನ ಕುಂಡಗಳು ನೆನಪಾಗುತ್ತವೆ. ಪುಟ್ಟಪುಟ್ಟ ಕುಂಡಗಳ ಕೆಂಪು ಗುಲಾಬಿ, ಗುಲಾಬಿ ಬಣ್ಣದ ನುಣುಪಾದ ಕುಂಡಗಳಲ್ಲರಳಿದ ದುಂಡು ಮಲ್ಲಿಗೆ, ದುಂಡನೆಯ ಕುಂಡದಲ್ಲೊಂದು ಹಸುಗೂಸಿನಂಥ ಮೊಳಕೆ, ಮೊಳಕೆಯೊಂದು ಮೊಗ್ಗಾಗುವ ಪ್ರಕ್ರಿಯೆ ಹೀಗೆ ಹೂಗಳ ದೊಡ್ಡದೊಂದು ಪ್ರಪಂಚವೇ ಪುಟ್ಟ ಬಾಲ್ಕನಿಯಲ್ಲಿ ಎದುರಾಗುತ್ತದೆ. ಅರಳಿಯೂ ಅರಳದಂತಿರುವ ಕೆಂಪು ದಾಸವಾಳ ಬೆಳಗನ್ನು ಸ್ವಾಗತಿಸಿದರೆ, ಮುಳುಗುವ ಸೂರ್ಯನನ್ನು ಮಲ್ಲಿಗೆಯ ಪರಿಮಳ ಬೀಳ್ಕೊಡುತ್ತದೆ; ಮಧ್ಯರಾತ್ರಿಯಲ್ಲಿ ಅರಳಿದ ಬ್ರಹ್ಮಕಮಲಗಳೆಲ್ಲ ಚಂದಿರನಿಗೆ ಜೊತೆಯಾಗುತ್ತವೆ. ಸಮಯ ಸಿಕ್ಕಾಗ ಹೂಬಿಡುವ ನಾಗದಾಳಿ, ಡೇರೆಗಳೆಲ್ಲ ನಿತ್ಯವೂ ಅರಳುವ ನಿತ್ಯಪುಷ್ಪದೊಂದಿಗೆ ಸ್ನೇಹ ಬೆಳೆಸುತ್ತವೆ. ಹೀಗೆ ಎಲ್ಲೆಗಳನ್ನೆಲ್ಲ ಮೀರಿದ ಬಣ್ಣಬಣ್ಣದ ಸ್ನೇಹಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತದೆ.           ಸ್ನೇಹ ಎನ್ನುವುದೊಂದು ಸುಂದರ ಸಂಜೆಯಂಥ ಅನುಭವ. ಹಸಿರು ಹುಲ್ಲಿನ ಬೆಟ್ಟಗಳ ಅಂಚಿನಲ್ಲಿ, ಉದ್ದಗಲಕ್ಕೂ ಹರಡಿಕೊಂಡ ಸಮುದ್ರದ ಮಧ್ಯದಲ್ಲಿ, ಆಗಸಕ್ಕೆ ಅಂಟಿಕೊಂಡಂತಿರುವ ಅಪಾರ್ಟ್ಮೆಂಟಿನ ಹೆಲಿಪ್ಯಾಡ್ ಪಕ್ಕದಲ್ಲಿ, ಕಾಫಿಯ ಘಮಕ್ಕೆ ಜೊತೆಯಾಗುವ ಕಾದಂಬರಿಯ ಸಂಜೆಯ ವರ್ಣನೆಯಲ್ಲಿ, ಮೊಬೈಲಿನ ಗ್ಯಾಲರಿಯ ಸನ್ ಸೆಟ್ ವಿಡಿಯೋಗಳಲ್ಲಿ ಇಂಚಿಂಚೇ ಮರೆಯಾಗುವ ಸೂರ್ಯನ ಸೌಂದರ್ಯವೇ ಸ್ನೇಹಕ್ಕೂ ಲಭ್ಯವಾಗಿದೆ. ಸೂರ್ಯ ಹುಟ್ಟುವ, ಮುಳುಗುವ ಪ್ರಕ್ರಿಯೆಗಳೆಲ್ಲ ಕಲ್ಪನೆಗಳಲ್ಲಿ ಬಗೆಬಗೆಯ ರೂಪ ಪಡೆಯುವಂತೆ ಸ್ನೇಹದ ಭಾವನೆಯೂ ಅವರವರ ಕಲ್ಪನೆಗಳಿಗನುಸಾರವಾಗಿ ವಿಸ್ತರವಾಗುತ್ತ ಹೋಗುತ್ತದೆ. ಇಂಗುಗುಂಡಿಗಳ ನಿಂತ ನೀರಿನೊಂದಿಗೆ ಕಪ್ಪೆಯ ಸಂಸಾರ ಸ್ನೇಹ ಬೆಳಸಿಕೊಂಡರೆ, ಏಲಕ್ಕಿಯ ಸುಳಿಗಳ ನಡುವಿನಲ್ಲೊಂದು ಹಸಿರುಹಾವು ಸದ್ದುಮಾಡದೆ ಸರಿದಾಡುತ್ತದೆ; ನಂದಾದೀಪದ ಬತ್ತಿಯೊಂದು ಎಣ್ಣೆಯೊಂದಿಗೆ ಸ್ನೇಹವನ್ನು ಬೆಳಸಿದರೆ, ತೀರ್ಥದ ತಟ್ಟೆಯಲ್ಲೊಂದು ತುಳಸಿದಳ ತಣ್ಣಗೆ ತೇಲುತ್ತಿರುತ್ತದೆ; ಸ್ನೇಹದಿನದ ಮೆಸೇಜೊಂದು ಮೊಬೈಲ್ ತಲುಪುವ ವೇಳೆ, ನೆನಪಿನ್ನಲ್ಲಷ್ಟೇ ಉಳಿದುಹೋದ ಸ್ನೇಹವೊಂದು ಮುಗುಳ್ನಗೆಯನ್ನು ಅರಳಿಸುತ್ತದೆ; ಎರೆಹುಳುವಿನೊಂದಿಗಿನ ಹೂವಿನ ಸ್ನೇಹ ನೀರಿನ ಸಖ್ಯದಲ್ಲಿ ಜೀವಂತವಾಗಿರುತ್ತದೆ.           ಈ ಜೀವಂತಿಕೆಯ ಪರಿಕಲ್ಪನೆಯಲ್ಲಿ ಹೂವಿಗೊಂದು ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ದೇವರ ತಲೆಯಿಂದುದುರಿ ಪ್ರಸಾದದ ರೂಪ ಪಡೆದುಕೊಳ್ಳುವ ಹೂವಿನಿಂದ ಹಿಡಿದು ಪಬ್ಬಿನ ರಿಸೆಪ್ಷನ್ನಿನ ಹೂದಾನಿಗಳವರೆಗೂ ಬಗೆಬಗೆಯಾಗಿ ಹರಡಿಕೊಳ್ಳುವ ಹೂವುಗಳು ಸ್ನೇಹ ಪ್ರೇಮ ಸೌಂದರ್ಯಗಳ ಜೀವಂತಿಕೆಯಲ್ಲಿ, ಧಾರ್ಮಿಕತೆಯ ಭಾವನೆಗಳಲ್ಲಿ, ಆಧುನಿಕತೆಯ ಮನಸ್ಥಿತಿಯಲ್ಲಿ ತಮ್ಮದೇ ಮಹತ್ವವನ್ನು ಉಳಿಸಿಕೊಂಡಿವೆ. ಸ್ನೇಹಿತೆಯೊಬ್ಬಳು ತನ್ನ ಮನೆಯಂಗಳದಲ್ಲಿ ಅರಳಿದ ಹೂವಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸುವ ಹೊತ್ತು, ಪ್ರೇಮಿಯ ಹೃದಯದಲ್ಲೊಂದು ಕೆಂಪು ಗುಲಾಬಿ ಅರಳುತ್ತದೆ; ಹೆಣ್ಣನ್ನು ವರ್ಣಿಸಲು ಪದಗಳೇ ಸಿಗದ ಕವಿಯೊಬ್ಬ ಹೂವಿನೊಂದಿಗೆ ಹೋಲಿಸಿ, ಅವರವರ ಭಾವಕ್ಕೆ ತಕ್ಕ ಸೌಂದರ್ಯದ ಪರಿಕಲ್ಪನೆಗಳನ್ನು ಹುಟ್ಟುಹಾಕುತ್ತಾನೆ; ಕೆಸರಿನಲ್ಲಿ ಅರಳಿದ ಕಮಲವೊಂದು ಸಾರ್ಥಕತೆಯ ಭಾವದಲ್ಲಿ ದೇವರ ಮುಡಿಗೇರುತ್ತದೆ; ಬರ್ಥ್ ಡೇ ಪಾರ್ಟಿಗಳ ಉಡುಗೊರೆಗಳೊಂದಿಗೆ ಹೂಗುಚ್ಛಗಳು ನಳನಳಿಸುತ್ತವೆ. ಹೀಗೆ ಹೂವು ಎನ್ನುವ ಸುಂದರ ಸೃಷ್ಟಿ ಎಲ್ಲರ ಭಾವ-ಭಕ್ತಿಗಳಿಗೆ ನಿಲುಕುತ್ತ, ಸಂಬಂಧಗಳಿಗೆ ಹೊಸ ಆಯಾಮವನ್ನು ಒದಗಿಸುತ್ತ, ಸುಂದರವಾದ ನೆನಪುಗಳನ್ನು ಹುಟ್ಟುಹಾಕುತ್ತದೆ.           ಆ ನೆನಪುಗಳಲ್ಲಿ ಕನ್ನಡ ಶಾಲೆಯ ಉದ್ದ ಜಡೆಯ ಅಕ್ಕೋರಿನ ನೆನಪೂ ಸೇರಿಕೊಂಡಿದೆ. ಪ್ರೈಮರಿ ಸ್ಕೂಲಿನ ಟೀಚರನ್ನು ಮಕ್ಕಳಷ್ಟೇ ಅಲ್ಲದೇ ಊರಿನವರೆಲ್ಲ ಅಕ್ಕೋರು ಎಂದೇ ಕರೆಯುತ್ತಿದ್ದರು. ಟೀಚರುಗಳ ಹೆಸರಿನ ಮುಂದೆ ಅಕ್ಕೋರು ಎಂದು ಸೇರಿಸಿದರೆ ಅವರು ಆ ಭಾಗದ ಪ್ರೈಮರಿ ಟೀಚರೆನ್ನುವುದು ಎಲ್ಲರಿಗೂ ಅರ್ಥವಾಗುತ್ತಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಮ್ಮ ಉದ್ದ ಜಡೆಯ ಅಕ್ಕೋರು ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಿದ್ದರು. ಅವರು ಬರುವ ಸಮಯಕ್ಕೆ ಸರಿಯಾಗಿ ಅವರನ್ನು ಸೇರಿಕೊಳ್ಳುತ್ತಿದ್ದ ನಾವೆಲ್ಲ ಜಡೆಯನ್ನು ನೋಡಲೆಂದೇ ಅವರಿಂದ ನಾಲ್ಕು ಹೆಜ್ಜೆ ಹಿಂದೆಯೇ ಉಳಿಯುತ್ತಿದ್ದೆವು. ಸೀರೆಯ ಬಣ್ಣಕ್ಕೆ ಹೊಂದುವಂತಹ ರಬ್ಬರ್ ಬ್ಯಾಂಡನ್ನೋ, ಲವ್ ಇನ್ ಟೋಕಿಯೋ ಹೇರ್ ಬ್ಯಾಂಡನ್ನೋ ಧರಿಸುತ್ತಿದ್ದ ಅವರ ಜಡೆಯ ಸೌಂದರ್ಯದ ಚರ್ಚೆ ಊರಿನ ಮನೆಮನೆಗಳಲ್ಲಿಯೂ ಆಗುತ್ತಿತ್ತು.           ಪ್ರತಿದಿನ ಬೆಳಿಗ್ಗೆ ಅಮ್ಮ ತೆಂಗಿನೆಣ್ಣೆಯನ್ನು ಹಚ್ಚಿ ತಲೆ ಬಾಚಿ ಎರಡೂ ಜಡೆಗಳನ್ನು ರಿಬ್ಬನ್ನಿನಿಂದ ಮಡಚಿ ಕಟ್ಟಿ, ಆಯಾ ಸೀಸನ್ನಿನಲ್ಲಿ ಅರಳುತ್ತಿದ್ದ ಹೂವನ್ನು ಮುಡಿಸುತ್ತಿದ್ದಳು. ಹಾಗೆ ಅಮ್ಮ ನನಗಾಗಿ ಹೂ ಕೊಯ್ಯುವಾಗಲೆಲ್ಲ ನಾನು ಅಕ್ಕೋರ ಸಲುವಾಗಿಯೂ ಹೂವೊಂದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಮಳೆಗಾಲದ ಡೇರೆ-ನಾಗದಾಳಿಗಳು, ಮಳೆಗಾಲ ಮುಗಿಯುತ್ತಿದ್ದಂತೆ ಅರಳಲು ಆರಂಭವಾಗುತ್ತಿದ್ದ ಗುಲಾಬಿ-ಸೇವಂತಿಗೆಗಳು ಹೀಗೆ ಎಲ್ಲ ಹೂವಿನ ಗಿಡಗಳ ಮೇಲೂ ಅಕ್ಕೋರ ಹೆಸರು ಕೂಡಾ ಬರೆದಿರುತ್ತಿತ್ತು. ಹಾಗೆ ಅಕ್ಕೋರ ಹೆಸರು ಹೊತ್ತ ಹೂವನ್ನು ಗಾಳಿ-ಮಳೆಗಳಿಂದ ಜೋಪಾನ ಮಾಡಿ, ಪ್ರೀತಿಯಿಂದ ಶಾಲೆಗೆ ಒಯ್ದು ಅವರ ಕೈಗೆ ಕೊಡುತ್ತಿದ್ದೆ. ನಗುನಗುತ್ತಾ ಅವರು ಅದನ್ನು ಸ್ವೀಕರಿಸುವ ಹೊತ್ತು ಒಂದು ರೀತಿಯ ವಿಚಿತ್ರವಾದ ಧನ್ಯತೆಯ ಭಾವ ಮನಸ್ಸನ್ನು ಆವರಿಸುತ್ತಿತ್ತು. ನನ್ನಂತೆಯೇ ದಿನಕ್ಕೆ ನಾಲ್ಕೈದು ಮಕ್ಕಳಾದರೂ ತಂದುಕೊಡುತ್ತಿದ್ದ ಹೂವುಗಳು ಅಕ್ಕೋರಿನ ಗುಂಗುರು ಕೂದಲ ಜಡೆಯನ್ನು ಅಲಂಕರಿಸುತ್ತಿದ್ದವು. ಮಳೆಗಾಲದಲ್ಲಂತೂ ಅವರ ಮೇಜಿನ ಮೇಲೆ ಬಣ್ಣಬಣ್ಣದ ಡೇರೆ ಹೂವುಗಳು ತುಂಬಿಹೋಗಿರುತ್ತಿದ್ದವು. ಸಂಜೆ ಶಾಲೆ ಮುಗಿದಮೇಲೆ ಅವರು ತಪ್ಪದೇ ಅವುಗಳನ್ನೆಲ್ಲ ನೀಟಾಗಿ ಜೋಡಿಸಿಕೊಂಡು ಪ್ರೀತಿಯಿಂದ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗಲೂ ಬಾಲ್ಕನಿಯಲ್ಲಿ ಗುಲಾಬಿಯೊಂದು ಅರಳಿದರೆ ಅಕ್ಕೋರಿನ ನಗು, ಆ ನಗು ನನ್ನಲ್ಲಿ ಮೂಡಿಸುತ್ತಿದ್ದ ಧನ್ಯತೆಯ ಭಾವ, ಅವರು ಹೂಗಳನ್ನು ಕೈಯಲ್ಲಿ ಹಿಡಿದು ಮನೆಗೆ ಹೋಗುವಾಗ ಸೆರಗಿನೊಂದಿಗೆ ಸ್ಪರ್ಧೆಗಿಳಿದಂತೆ ತೂಗಾಡುತ್ತಿದ್ದ ಉದ್ದನೆಯ ಜಡೆ ಎಲ್ಲವೂ ನೆನಪಾಗುತ್ತವೆ. ಚಿಕ್ಕಪುಟ್ಟ ಸಂಗತಿಗಳಲ್ಲೂ ಸಂಭ್ರಮ-ಸಾರ್ಥಕತೆಗಳನ್ನು ಕಾಣುತ್ತಿದ್ದ ಬಾಲ್ಯದ ನೆನಪುಗಳನ್ನು ಬಾಲ್ಕನಿಯ ಹೂಗಿಡಗಳೊಂದಿಗೆ ಜೋಪಾನ ಮಾಡಿ ನೀರೆರೆಯುತ್ತೇನೆ.           ಹಾಗೆ ನೀರೆರೆದು ಪೋಷಿಸುವ ನೆನಪುಗಳಲ್ಲಿ ದಿನಕ್ಕೊಂದು ಹೊಸ ಬಗೆಯ ಹೂವುಗಳು ಅರಳುತ್ತಲೇ ಇರುತ್ತವೆ. ತಾನು ಪ್ರೀತಿಯಿಂದ ಬೆಳಸಿದ ಗುಲಾಬಿ ಗಿಡಗಳಲ್ಲಿ ಅರಳುತ್ತಿದ್ದ ಹೂವುಗಳನ್ನು ಕಿತ್ತು ನನ್ನ ಮುಡಿಗೆ ಮುಡಿಸುತ್ತಿದ್ದ ಪಕ್ಕದ ಮನೆಯ ಅಕ್ಕ, ತೋಟದಲ್ಲಿ ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಸುತ್ತ ನೆರೆಯುತ್ತಿದ್ದ ಹೆಣ್ಣುಮಕ್ಕಳ ದೊಡ್ಡ ಗುಂಪು, ದೇವರ ಕಾರ್ಯದ ದಿನ ಬೆಳಿಗ್ಗೆ ಬೇಗ ಎದ್ದು ಹೂಮಾಲೆ ಕಟ್ಟುತ್ತ ಸುಪ್ರಭಾತ ಹಾಡುತ್ತಿದ್ದ ಅತ್ತೆ, ಕೇರಿಯ ಮಕ್ಕಳು-ಗಂಡಸರೆಲ್ಲ ಸೇರಿ ಬೆಟ್ಟ-ಗುಡ್ಡಗಳನ್ನು ಅಲೆದು ಗೌರಿ ಹೂವನ್ನು ತಂದು ಮಂಟಪ ಕಟ್ಟುತ್ತಿದ್ದ ಚೌತಿಹಬ್ಬದ ಸಂಭ್ರಮ ಹೀಗೆ ಹೂವಿನೊಂದಿಗೆ ಪರಿಮಳದಂತೆ ಬೆರೆತುಹೋದ ನೆನಪುಗಳು ಯಾವತ್ತಿಗೂ ಬಾಡುವುದಿಲ್ಲ. ಕಾಲೇಜಿನ ಹುಡುಗ ಕೊಟ್ಟಿದ್ದ ಕೆಂಪು ಗುಲಾಬಿಯ ಒಣಗಿದ ಎಸಳುಗಳು ಕೀರ್ತನೆಯ ಪುಸ್ತಕದೊಳಗೋ, ರಂಗೋಲಿ ಪಟ್ಟಿಯೊಳಗೋ ಈಗಲೂ ಇರಬಹುದು; ಮಲ್ಲಿಗೆಯ ಮಾಲೆ ಮುಡಿದಿದ್ದ ಉದ್ದ ಜಡೆಯ ಫೋಟೋಗಳು ಹಳೆಯ ಆಲ್ಬಮ್ ಗಳಲ್ಲಿ ಬೆಚ್ಚಗೆ ಕುಳಿತಿರಬಹುದು; ಮೈತುಂಬ ಹೂವಿರುವ ಸೀರೆ ಉಟ್ಟ ಹೂವಿನಂಥ ನಾಯಕಿಯ ಹಾಡೊಂದು ಹೈವೇ ಪಕ್ಕದ ಡಾಬಾದಲ್ಲಿ ಪ್ಲೇ ಆಗುತ್ತಿರಬಹುದು; ರಸ್ತೆಯಂಚಿನ ಸಂಪಿಗೆ ಮರದಲ್ಲಿ ಅರಳಿದ ಹೂಗಳ ಪರಿಮಳ ಮುಚ್ಚಿದ ಬಾಗಿಲುಗಳು ತೆರೆಯುವುದನ್ನೇ ಕಾಯುತ್ತಿರಬಹುದು. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಇತರೆ

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.

ಲೇಖನ ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. ಸುನೀತಾ ಕುಶಾಲನಗರ ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು  ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ. ವಿದ್ಯಾರ್ಥಿಗಳಾಗಿದ್ದಾಗ  ದೇಶಭಕ್ತಿ ಮೈಗೂಡಿಸುವ ಭಾಷಣದ  ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು  ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ  ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ.  ಸ್ವತಃ  ಶಿಕ್ಷಕಿಯಾಗಿರುವುದರಿಂದ ಪ್ರತಿವರ್ಷ ವಿದ್ಯಾರ್ಥಿಗಳ ತಯಾರಿ ಮಾಡುವಾಗ ಹೊಸತನ ಇದ್ದೇ ಇರುತ್ತದೆ. ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಹೊಸ ಸಾಧ್ಯತೆಗಳತ್ತ ಹೊರಳುವ ಯೋಜನೆ ಹಿಂದಿನ  ವರ್ಷದಿಂದಲೇ ಯೋಜಿಸಲಾಗಿರುತ್ತದೆ. ಆಗಸ್ಟ್ ಪ್ರಾರಂಭದ  ದಿನಗಳಿಂದಲೇ  ವಿದ್ಯಾರ್ಥಿಗಳಿಗೆ ಸಾಕಷ್ಟು ತಾಲೀಮು ನಡೆಸಿ ಆ ದಿನವನ್ನು ರಂಗು ರಂಗಾಗಿಸುವ ಕನಸು. ಧ್ವಜಕಟ್ಟೆ ತೊಳೆದು ರಂಗೋಲೆ ,ಹೂಗಳಿಂದ ಅಲಂಕರಿಸುವ ಕೇಸರಿ,ಬಿಳಿ,ಹಸಿರು ಬಣ್ಣಗಳ ಬ್ಯಾಂಡಗಳೂ,ಒಪ್ಪವಾಗಿ ಜೋಡಿಸಿ ತೊಟ್ಟ ಗಾಜಿನ ಬಳೆಗಳ  ಪುಟ್ಟ ಕೈಗಳ ಉತ್ಸಾಹದ ನಿನಾದಕ್ಕೆ ಶಾಲಾ ಗೇಟಿಗೆ ತೋರಣ ಕೊಡುವ ಕಲರವ ಹೀಗೆ ಸಾಲು ಸಾಲು ಸಂಭ್ರಮ. ಧ್ವಜಾರೋಹಣದ ತಕ್ಷಣ ಆಗಸದೆತ್ತರಕೆ ಏರಿ  ಹಾರಿದಂತೆ ಕಾಣುವ  ತ್ರಿವರ್ಣ ಪತಾಕೆಗೆ ನಮಿಸುತ್ತಲೇ ರಾಷ್ಟ್ರಗೀತೆ ಹಾಡುವಾಗ ಪ್ರತಿಯೊಬ್ಬ   ಭಾರತೀಯನ ನರನಾಡಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯಗಳು ಮೊಳಗಿ  ನಮ್ಮೊಳಗೆ  ದೇಶಭಕ್ತಿಯ   ಸಂಚಲನದ  ವೇಗ ಹೆಚ್ಚುತ್ತಲೇ ವಿದ್ಯಾರ್ಥಿಗಳಲ್ಲೂ ಎಳವೆಯಿಂದಲೇ ರಾಷ್ಟ್ರ ಭಕ್ತಿ ಹಾಗೂ ಭಾವಾಕ್ಯತೆಯನ್ನು ಮೈಗೂಡಿಸಿ ಬಿಡುತ್ತದೆ. ಆದರೆ ಇದೀಗ  ಬೀಗಗಳೊಳಗೆ ಮೌನವಾದ   ಶಾಲಾ ಕೊಠಡಿಗಳೂ,ಬಿಕೋ ಎನ್ನುವ  ವಠಾರವೂ, ಮೌನವಾಗಿ ನಿಂತಿರುವ ಧ್ವಜ ಕಂಬವೂ ಈ ಎಲ್ಲವುಗಳ ಜೊತೆ ಶಿಕ್ಷಕರಷ್ಟೇ ಧ್ಜಜ ಹಾರಿಸುವಂತಹ ವಿಪರ್ಯಾಸವನ್ನು ಕಾಲವೇ ತಂದೊಡ್ಡಿದೆ. ಲಾಕ್ಡೌನ್,ಸೀಲ್ಡೌನ್,ಕ್ವಾರೈಂಟೈನ್,ಕಂಟೈನಮೆಂಟ್ ಜೋನ್, ಸೋಷಿಯಲ್ ಡಿಸ್ಟನ್ಸ್ ಎಂಬ ಕಂಡೂ ಕೇಳರಿಯದ ಪದಗಳೊಳಗನಿಂದ ಇಣುಕುತಿರುವ ವೈರಾಣು  ಅಂತರವೆಂಬ ಭಯದೊಳಗೆ ಧ್ಜಜದ ನಿರಾಳ ಉಸಿರನ್ನೂ ಕಸಿದುಕೊಂಡ ಈ ದಿನಗಳಲ್ಲಿ   ಸ್ವಾತಂತ್ರ್ಯ ಎಂಬ ಪದ ಕಾಡಿ  ಯೋಚನೆಗೆ ತಳ್ಳುತ್ತಿದೆ. ಸ್ವಾತಂತ್ರ್ಯ ಮತ್ತು ಬದುಕು: ಸ್ವಾತಂತ್ರ್ಯ ಎಂದರೇನು ?ನಿರಂತರ ಕಾಡುವ ಪ್ರಶ್ನೆಯಿದು.ದೇಶ ಸ್ವತಂತ್ರಗೊಂಡ ದಿನವನ್ನು ವರ್ಷಂಪ್ರತಿ ಸಂಭ್ರಮಿಸುತ್ತೇವೆ ನಿಜ.ಆದರೆ ಸ್ವಾತಂತ್ರ್ಯ ಮತ್ತು ಬದುಕನ್ನು ಸಮೀಕರಿಸಿದಾಗ  ಬಹುತೇಕರಿಗೆ ಬದುಕಿನಲ್ಲಿ ಸ್ವಾತಂತ್ರ್ಯ ಎಂಬ ಪದವೇ ಹತ್ತಿರ ಸುಳಿದಿರಲಾರದು. ಮನದಿಚ್ಛೆಯಂತೆ ಬದುಕುವ ಆಸೆಯಿದ್ದರೂ ಜವಾಬ್ದಾರಿ,ಕರ್ತವ್ಯ,ಭಯ ಹುಟ್ಚಿಸುವ ಸನ್ನಿವೇಶಗಳಿಂದ ಹೊರಬರಲಾಗದೆ ಸದಾ ಯಾವುದೋ ಹಂಗಿನಲ್ಲಿ ಜೀವನ ಸವೆಸುವ ಅಥವಾ ಬೇರೆಯವರ ಹಿತಕ್ಕಾಗಿಯಷ್ಟೇ ಬದುಕನ್ನು ಮೀಸಲಿಟ್ಟು  ಸ್ವಾತಂತ್ರ್ಯವೆಂಬ  ಪದದ  ಅರ್ಥ ತಿಳಿಯುವ ಗೋಜಿಗೆ ಹೋಗದ ಜೀವಗಳು  ನಮ್ಮ ನಿಮ್ಮೊಳಗೆಷ್ಟೋ ಇದ್ದಾರೆಂಬುದು ಕಟು ವಾಸ್ತವ. ಸ್ವಾತಂತ್ರ್ಯ ಮತ್ತು ಹೆಣ್ಣು: ಇಂದಿನ ದಿನಗಳಲ್ಲಿ  ಎಲ್ಲಾ ಕ್ಷೇತ್ರಗಳಲ್ಲೂ ದಿಟ್ಟ ಹೆಜ್ಜೆ ಇಡುತಿರುವವರಲ್ಲಿ ಧೀರ ನಾರಿಯರದ್ದೇ ಮೇಲುಗೈ ಎಂಬುದು ಹೆಮ್ಮೆಯ ವಿಚಾರ. ಎರಡೂ ಕಡೆ ನಿಭಾಯಿಸಬಲ್ಲಷ್ಟು  ಗಟ್ಟಿಗಿತ್ತಿಯರಾಗಿ  ಉದ್ಯೋಗದ ಜೊತೆಗೆ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಲೇ   ಅಧಿಕಾರದ ಚೌಕಟ್ಟಿನೊಳಗೆ ಸಿಲುಕಿ ತನ್ನ ತನವನ್ನು ತೆರೆದುಕೊಳ್ಳಲಾರದೆ ಬದುಕಿನಲ್ಲಿ ಸ್ವಾತಂತ್ರ್ಯ ವೂ ಇಲ್ಲದೆ  ಕಳೆದು ಹೋಗುವ ಜೀವಗಳು ಬದುಕಿನ ವ್ಯೆವಸ್ಥೆಯ ಹುದುಲಿಗೆ ಸದ್ದಿಲ್ಲದೆ ಹೊಂದಿಕೊಂಡಿದ್ದಾರೆ. ಭಾರತೀಯ ಸಂವಿಧಾನ ನೀಡಿದ  ಸಮಾನತೆಯ ಹಕ್ಕು ಪದೇ ಪದೇ ತಲೆಯ ಮೇಲೆ ಗಿರಕಿ ಹೊಡೆದು ವ್ಯಂಗ್ಯ ನಗುವೊಂದು ಕ್ಷಣ ಕ್ಷಣವೂ ಮೂಡಿ ಮರೆಯಾಗುವಾಗ ನಿಟ್ಟುರಿಸಿಡುತ್ತಲೇ ಅದೇನಾದರೂ ಆಗಲಿ’ ವ್ಯಕ್ತಿಗಿಂತ ನಾಡು ದೊಡ್ಡದು’ ಎಂದು ಮೈಗೊಡವಿ ನಿಲ್ಲುವಷ್ಟರಲ್ಲಿ ಕಾಲದೊಡನೆ ಪ್ರಕೃತಿಯೂ ಮುನಿಸಿಕೊಂಡು ಇನ್ನಿಲ್ಲದ ದುರಂತಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಭರವಸೆಯ ನಿರೀಕ್ಷೆ ಮುಂಬರುವ ವರ್ಷವಾದರೂ ಯಾವ ಕಾರಣಗಳೂ  ಬಾಧಿಸಿದೆ ಸ್ವಾತಂತ್ರ್ಯೋತ್ಸವಕ್ಕೆ ಸಂಭ್ರಮದ ಆಚರಣೆ ಯ  ಸೌಭಾಗ್ಯ ದಕ್ಕಲಿ.ಎತ್ತರೆತ್ತರಕೆ ಹಾರುವ ತ್ರಿವರ್ಣ ಧ್ವಜವನ್ನು ಯಾವುದೇ ಭಯ ಆಕ್ರಮಿಸದಿರಲಿ. ಜಾತಿ,ಧರ್ಮ, ಭಾಷೆ ,ಲಿಂಗ ಬೇಧವಿಲ್ಲದ ನಾವು ಭಾರತೀಯರು ಎಂಬ ಒಗ್ಗಟ್ಟಿನ ಹಾಗು ಸಮಾನತೆಯ ಆಶಾಕಿರಣ ನಮ್ಮೆಲ್ಲರನ್ನೂ ಆವರಿಸಿ ಆ ಮೂಲಕ ಭಾರತಾಂಬೆ ನೆಮ್ಮದಿಯ, ನಿರಾಳತೆಯ ಉಸಿರಾಡುವಂತಾಗಲಿ.ಪರಿಸ್ಥಿತಿಯ  ನಿರ್ಬಂಧಗಳಿಂದ ಸ್ವತಂತ್ರವಾಗಿ ,ಸ್ವಚ್ಛಂದವಾಗಿ ಹಾರಾಡುವ ರಾಷ್ಟ್ರಧ್ವಜವನ್ನು ಕಣ್ತುಂಬಿಕೊಳ್ಳಬಹುದೆಂಬ ಭರವಸೆಯಲ್ಲಿರೋಣ. *************************** : **********************

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. Read Post »

ಇತರೆ

ಸ್ವಾತಂತ್ರೋತ್ಸವದ ವಿಶೇಷ

ಸಂವಿಧಾನ ಮತ್ತು ಮಹಿಳೆ. ನೂತನ ದೋಶೆಟ್ಟಿ  1)  ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ  ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ.  ಅವಳ ನೋವು ನೋಡಲಾಗದೆ,  ” ತೂರಾಡುವವನಿಂದ ಹೊಡೆಸಿಕೊಳ್ಳುತ್ತೀಯಲ್ಲ. ಒಂದು ದಿನ ತಿರುಗಿ ಒಂದು ಬಾರಿಸಿಬಿಡು”, ಎಂದರೆ. ಅವಳದು .        ” ಗಂಡನಿಗೆ ಹೇಗೆ ಹೊಡೆಯೋದು” ಎಂಬ  ಮರುಪ್ರಶ್ನೆ. 2) ಅವಳು ವಿದ್ಯಾವಂತೆ. ಒಳ್ಳೆಯ ಸರ್ಕಾರಿ ನೌಕರಿಯಲ್ಲಿದ್ದಾಳೆ. ಅವಳ ವಿದ್ಯಾವಂತ, ಸರ್ಕಾರಿ ನೌಕರಿಯ ಪತಿ ಆಕೆಯ ಹಿಂಬಾಲಕ. ಎಲ್ಲಿಗೂ ಆಕೆಯನ್ನು ಒಬ್ಬಳೇ ಕಳಿಸುವುದಿಲ್ಲ. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಕೊನೆಗೆ ತಾನು ದುಡಿಯುವ ಹಣಕ್ಕೂ ಅವಳಿಗೆ ಹಕ್ಕಿಲ್ಲ. ಅವಳು ಅವನಿಗೆ ಹಣದ ಥೈಲಿ. ಅವನು  ಕೈಯಲ್ಲಿಟ್ಟಷ್ಟು ಹಣವನ್ನು ಮಾತ್ರ  ಅವಳು ಖರ್ಚು ಮಾಡಬೇಕು. ಹಾಗೆಂದು ಅವಳಿಗೆ ತನ್ನ ಹಕ್ಕಿನ ಬಗ್ಗೆ ಜಾಗೃತಿ ಇಲ್ಲವೆಂದಲ್ಲ. ಆದರೆ ಗಂಡನೆದುರು ಅದು ಕೆಲಸ ಮಾಡುವುದಿಲ್ಲ. 3) ಅವಳಿಗೆ ತಾನು ಉದ್ಯೋಗ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದರೆ ಉದ್ಯೋಗ ಮಾಡುವ ಹೆಣ್ಣುಗಳ ಮನೆಯ ಪರಿಸ್ಥಿತಿ ಚೆನ್ನಾಗಿ ಇರದಿದ್ದರಿಂದಲೇ ಅವರು ಉದ್ಯೋಗ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ. ಇವು ಮೂರು  ತೀರ  ಸಾಮಾನ್ಯ ಉದಾಹರಣೆಗಳು. ನಮ್ಮ ಸುತ್ತಮುತ್ತ  ದಿನನಿತ್ಯ ಕಾಣುವಂಥವುಗಳೇ. ಇಂಥ  ನೂರಾರು ಉದಾಹರಣೆಗಳನ್ನು ಕೊಡಬಹುದು. ಈ ಮೇಲಿನ ಮೂರನ್ನು ಈಗ ಗಮನಿಸೋಣ.  ನಮ್ಮ ಸಂವಿಧಾನ   ಸಾರ್ವತ್ರಿಕವಾಗಿ  ಆತ್ಮರಕ್ಷಣೆಯ ಹಕ್ಕನ್ನು ನೀಡಿದೆ. ಆರ್ಥಿಕ ಹಕ್ಕನ್ನು ನೀಡಿದೆ. ಉದ್ಯೋಗದ ಹಕ್ಕನ್ನು ನೀಡಿದೆ. ವಿದ್ಯಾಭ್ಯಾಸದ ಹಕ್ಕನ್ನು ನೀಡಿದೆ. ಇದರಲ್ಲಿ ಲಿಂಗಬೇಧವಿಲ್ಲ. ಹಾಗಿದ್ದರೆ ಈ ಮೂರು ಪ್ರಸಂಗಗಳು ನಮ್ಮೆದುರು ಬಂದುದಾದರೂ ಹೇಗೆ? ನಮ್ಮ ದೇಶದಲ್ಲಿ ಅನೇಕ ಸಾಮಾಜಿಕ ಕಟ್ಟುಪಾಡುಗಳನ್ನು, ಅಡೆ-ತಡೆಗಳನ್ನು ಅನಗತ್ಯವಾಗಿ ನಿರ್ಮಿಸಲಾಗಿದೆ. ಗಂಡನೆಂದರೆ ದೇವರಿಗೆ ಸಮಾನ. ಪತಿಯೇ ಪರದೈವ. ಅವನ ಅಡಿಯಾಳಾಗಿ ಇರುವುದರಲ್ಲಿಯೇ ಸತಿಯ ಸುಖವಿದೆ. ಅವನು ಬೈದರೆ ಬೈಸಿಕೊಳ್ಳುವುದು, ಹೊಡೆದರೆ ಹೊಡೆಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬ ಸಾಮಾಜಿಕ ಬಿಂಬಿಸುವಿಕೆಯಲ್ಲಿ ಬಹುತೇಕ ಹೆಣ್ಣುಗಳು ಬೆಳೆಯುತ್ತಾರೆ. ವಿದ್ಯಾವಂತರೂ ಇದಕ್ಕೆ ಹೊರತೇನಲ್ಲ.  ಹಣೆಯ ಕುಂಕುಮವೆಂದರೆ ಗಂಡನ ಪ್ರತಿರೂಪವೆಂದು ನಂಬಿರುವ ಮಹಿಳೆಯರು ಇದ್ದಾರೆ. ಬೆಳಿಗ್ಗೆ ಏಳುವಾಗ ಅವರು ತಾಳಿಯನ್ನು ಕಣ್ಣಿಗೊತ್ತಿಕೊಂಡು ಏಳುತ್ತಾರೆ. ಕುಂಕುಮದ ಡಬ್ಬಿಯನ್ನು ಶುಕ್ರವಾರ ಬೇರೆಯವರ ಮನೆಯಲ್ಲಿ ಬಿಟ್ಟು ಬಂದೆ ಎಂದು ಗೋಳಾಡುವ ವಿಜ್ಞಾನ. ಪದವೀಧರರು ಕಾಣಸಿಗುತ್ತಾರೆ. ಇಂಥ ಸಾಮಾಜಿಕ ವಾತಾವರಣಕ್ಕೂ ವಿದ್ಯೆಗೂ ಯಾವುದೇ ಸಂಬಂಧವಿಲ್ಲ. ಅಂದು ಮೇಲೆ ಹಕ್ಕಿನ ಪ್ರಶ್ನೆಯೂ ಉದ್ಭವಿಸುವುದಿಲ್ಲ. ವಿದ್ಯಾವಂತರಲ್ಲೇ ಪರಿಸ್ಥಿತಿ ಹೀಗಿರುವಾಗ  ಮೊದಲ ಉದಾಹರಣೆಯಲ್ಲಿ ಬರುವ  ಅವಿದ್ಯಾವಂತ ಹುಡುಗಿಯ ಬಗ್ಗೆ ಏನು ಹೇಳುವುದು? ಹೆಣ್ಣೆಂದರೆ ಸಹನೆಗೆ ಇನ್ನೊಂದು ಹೆಸರು ಎಂದು ನಂಬಿಸಿರುವ ನಮ್ಮ ಪುರುಷ ಪ್ರಧಾನ ಸಮಾಜ ಅವಳು ತಗ್ಗಿ ಬಗ್ಗಿ ನಡೆಯುವಂತೆ ನೋಡಿಕೊಳ್ಳಲು ಅದಕ್ಕೆ ಧಾರ್ಮಿಕ ಬಣ್ಣವನ್ನೂ ನೀಡಿದೆ. ಕೌಟುಂಬಿಕ ಒತ್ತಡಗಳೂ ಇಲ್ಲಿ ಹೆಚ್ಚಿರುತ್ತವೆ. ಇದರಿಂದ ಇಂಥ ಪ್ರಕರಣಗಳು ಮನೆಯ ನಾಲ್ಕು ಗೋಡೆಗಳ ನಡುವೆ ಇತ್ಯರ್ಥವಾಗುತ್ತವೆ ಅಥವಾ ಬಂಧಿಯಾಗುತ್ತವೆ. ಸಂವಿಧಾನ ಕೊಡುವ ಜೀವಿಸುವ ಹಕ್ಕು, ಸಮಾನತೆಯ ಹಕ್ಕು ಮೊದಲಾದವು ಹಾಳೆಯ ಮೇಲೆ ಉಳಿದು ಬಿಡುತ್ತವೆ. ಎರಡನೇ ಉದಾಹರಣೆಯಲ್ಲಿ ದುಡಿಮೆಯ ಹಕ್ಕು, ಆರ್ಥಿಕ ಹಕ್ಕುಗಳು ಪ್ರಶ್ನೆಗೊಳಪಡುತ್ತವೆ. ವಿದ್ಯಾವಂತ ಪತಿಯಿಂದಲೇ ತಿಳಿದೂ ಶೋಷಣೆಗೊಳಗಾಗುವ ವಿದ್ಯಾವಂತ ಪತ್ನಿಗೆ ತಾನು ಶೋಷಿಸಲ್ಪಡುತ್ತಿದ್ದೇನೆ ಎಂದು ಅನ್ನಿಸುವುದೇ ಇಲ್ಲ. ಇದು ಸ್ವಂತ ಹಕ್ಕಿನ ಚ್ಯುತಿಯಾಗಿಯೂ ಕಾಣುವುದಿಲ್ಲ. ಮೂರನೇ ಉದಾಹರಣೆಯಲ್ಲಿ ಉದ್ಯೋಗದ ಹಕ್ಕಿನ ಪ್ರಶ್ನೆ ಇದೆ. ಉದ್ಯೋಗದ ಬಗ್ಗೆ ಇಂಥ ಮನೋಭಾವವಿರುವ ಹೆಣ್ಣುಗಳಂತೆ, ಅವಳು ಮನೆಯಲ್ಲಿದ್ದರೆ ಪುರುಷನೊಬ್ಬನಿಗೆ‌ ಉದ್ಯೋಗ ದೊರೆಯುವುದಲ್ಲವೇ ಎಂದು ಮಾತಾಡುವವರನ್ನೂ ನಾವು ನೋಡಿದ್ದೇವೆ. ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿನ ಪ್ರಯೋಗದ ಸಂದರ್ಭವೇನಿತ್ತೋ ತಿಳಿಯದು. ಆದರೆ ನಮ್ಮ ಸಮಾಜದಲ್ಲಿ ಇದರ ಬಳಕೆ ಸೀಮಿತ ಅರ್ಥದಲ್ಲೇ ಇದೆ. ಉದ್ಯೋಗ ನೀಡಬಹುದಾದ ಸಾಮಾಜಿಕ, ಆರ್ಥಿಕ, ನೈತಿಕ ಸ್ಥೈರ್ಯದ ಅರಿವು ತೀರ ಇತ್ತೀಚಿನವರೆಗೂ ಬಹಳ ಕಡಿಮೆ ಇತ್ತು. ಕಳೆದ ಕೆಲ ದಶಕಗಳಿಂದ  ಮಹಿಳೆ ಉದ್ಯೋಗ ಮಾಡುವುದು  ಅನಿವಾರ್ಯತೆಯಿಂದ ಸಹಜತೆಯತ್ತ ಹೊರಳಿದೆ ಎಂಬುದೇ ಸಮಾಧಾನ. ಅದರಂತೆ ದುಡಿಯುವ ಹೆಣ್ಣುಗಳನ್ನು ಹೀನವಾಗಿ ನೋಡುವ ಮನಸ್ಥಿತಿಯಿಂದ , ಗೌರವದ ಹಂತವನ್ನು ದಾಟಿ ಇಂದು ಸಹಜತೆಗೆ ತಿರುಗಿದ್ದುದರಲ್ಲಿ ಸಾಮಾಜಿಕ ಜಾಗೃತಿಯ ಪಾಲೇ ಹೆಚ್ಚಿದೆ. ಕೇವಲ ಮೂರು ಉದಾಹರಣೆಗಳ ಸೀಮಿತ ಪರಿಶೀಲನೆ ಇದು.   ಮಹಿಳಾ ಲೋಕವೆಂಬುದು ಅಗಾಧ. ಅದರಲ್ಲಿ ನೋವು, ಸಂಘರ್ಷ, ಹೋರಾಟ, ದೌರ್ಜನ್ಯ, ಹೇಳಿ ತೀರದ್ದು. ಕಾನೂನಿನ ಎಲ್ಲ ರಕ್ಷಣೆ ಇದ್ದರೂ ಸಾಮಾಜಿಕವಾಗಿ ಆಗಬೇಕಾಗಿರುವುದು ಬಹಳಷ್ಟಿದೆ. ನಮ್ಮ ಸಂವಿಧಾನದ ಬಗೆಗೆ ನನಗೆ ಅಪಾರ ಗೌರವವಿದೆ. ಸಂವಿಧಾನ ನೀಡಿರುವ ನಮ್ಮ ಹಕ್ಕುಗಳನ್ನು ಅರಿತು ಅವುಗಳ ಸರಿಯಾದ ಅನುಷ್ಠಾನವನ್ನು ಮಾಡಬೇಕಾಗಿರುವ ಗುರುತರವಾದ ಹೊಣೆ ನಮ್ಮೆಲ್ಲರ ಮೇಲಿದೆ.  ******

ಸ್ವಾತಂತ್ರೋತ್ಸವದ ವಿಶೇಷ Read Post »

ಕಾವ್ಯಯಾನ

ಗಾಳಿ ಪಟ

ಕವಿತೆ ಗಾಳಿ ಪಟ ರೇಷ್ಮಾ ಕಂದಕೂರ. ಕೆಲವೊಮ್ಮೆ ಏರುಇನ್ನೊಮ್ಮೆ ಇಳಿತಹರಿಯ ಬಿಡದಿರುಸಮತೋಲನದ ಬಾಲಂಗೋಚಿ ಗಾಳಿ ಬಂದ ಕಡೆ ಮುಖ ಮಾಡಿಘಾಸಿಗೊಳಿಸುವೆ ಮನವಅತ್ತಿಂದಿತ್ತ ಸುಳಿಯುತಬಾನ ಚಿತ್ತಾರದಿ ತೇಲುತಿದೆ ಬಾನಂಚಿಗೆ ಸಾಗುವ ಕನಸಿಗೆಬಣ್ಣ ಹಚ್ಚುತ ಸಾಗಿದೆಮಕ್ಕಳ ಮನ ತಣಿಸುತಕುಣಿದಿದೆ ಎಲ್ಲ ಮರೆತು ತಾಗದಿರಲಿ ಕುಗ್ಗುವ ಮಾತುಸಿಗದಿರಲಿ ಆಡಿಕೊಳ್ಳುವವರಿಗೆಮೇಲೇರುವ ಧಾವಂತಕೆನೂರೆಂಟು ವಿಘ್ನಸಾವರಿಸಿ ಮೇಲೇರುತಲಿರು ಬೇಕಾ ಬಿಟ್ಟಿತನ ಬೇಡಸಾಕೆಂದು ಕುರದೇಗುರಿಯ ಸಾಕಾರಕೇಗುರುತರ ಜವಾಬ್ದಾರಿಯಲಿ ಏರಿದವ ಕೆಳಗಿಳಿಯಲೇ ಬೇಕುಸೂರೆ ಮಾಡಿದವ ಸೆರೆಯಾಗುವಎಲ್ಲವನು ಸುಸ್ಥಿತಿಯಲಿ ನೋಡುಬಾಳ ಬೆಳಗುವೆ ನಿರಾತಂಕದಿ. **************************************

ಗಾಳಿ ಪಟ Read Post »

ಇತರೆ, ಶಿಕ್ಷಣ

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************

ಹೊಸ ಶಿಕ್ಷಣ ನೀತಿ Read Post »

ಕಾವ್ಯಯಾನ

ರಾಹತ್ ಇಂದೋರಿ

ಅನುವಾದಿತ ಕವಿತೆ ಮೂಲ: ರಾಹತ್ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ಕಂಗಳಲ್ಲಿ ನೀರು ತುಟಿಗಳಲ್ಲಿ ಕಿಡಿಯನ್ನು ಇರಿಸಿಬದುಕ ಮಾಡಬೇಕೆಂದರೆ ಯೋಜನೆಗಳು ಹಲವು ಇರಿಸಿ ಕಲ್ಲುಮುಳ್ಳುಗಳದೇ ದಾರಿಯಲಿ ಗುರಿ ಏನೂ ದೊಡ್ಡದಲ್ಲಕೂಗಿ ಕರೆಯುತಿದೆ ದಾರಿ ಪಯಣ ಜಾರಿ ಇರಿಸಿ ಒಂದೇ ನದಿಗೆ ಎರಡು ದಡಗಳು ಸ್ನೇಹಿತರೆಬದುಕಿನೊಂದಿಗೆ ಸ್ನೇಹ ಸಾವಿನೊಂದಿಗೆ ಸಖ್ಯ ಇರಿಸಿ ಬಂದು ಹೋಗುವ ಕ್ಷಣಗಳು ಉಸುರುತಿವೆ ಕಿವಿಯಲ್ಲಿಏನೋ ಘಟಿಸುವುದಿದೆ ಎಲ್ಲ ತಯಾರಿ ಇರಿಸಿ ಜರೂರಿ ಇದೆ ಕಣ್ಣುಗಳಲಿ ಕಲ್ಪನೆ ಇರಿಸುವುದುನಿದ್ದೆ ಇರಿಸದಿದ್ದರೂ ಕನಸೊಂದಿಗೆ ಗೆಳೆತನ ಇರಿಸಿ ಬೀಸುವ ಗಾಳಿ ಹೊತ್ತಯ್ಯದಿರಲಿ ಹಗೂರ ದೇಹವನುಸ್ನೇಹಿತರೇ ಮೇಲೆ ಒಂದಿನಿತು ಭಾರದ ಕಲ್ಲು ಇರಿಸಿ ಹೊತ್ತು ತಂದಿರುವಿ ಶಾಯರಿ ಬಾಜಾರಿನಲಿ ‘ರಾಹತ್’ ಮಿಯಾಅವಶ್ಯಕತೆ ಏನಿತ್ತು ಭಾವಗಳನು ಬಾಜಾರಿನಲಿ ಬಿಕರಿಗೆ ಇರಿಸಿ *****************

ರಾಹತ್ ಇಂದೋರಿ Read Post »

ಇತರೆ

ಮನಸ್ಸು ಎಂಬ ಮನುಷ್ಯನ ತಲ್ಲಣ

ಲೇಖನ ಮನಸ್ಸು ಎಂಬ ಮನುಷ್ಯನ ತಲ್ಲಣ ವಿ ಎಸ್ ಶಾನ್ ಭಾಗ್ ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹುಟ್ಟಿದವರಿಗೆ ಇದು ಹೊಸತೊಂದು ಅನುಭವದ ಪ್ರಪಂಚ ತೆರೆದುಕೊಟ್ಟಿದೆ. ಕೊರೋನ ಎಂಬ ಮಹಾರೋಗಕ್ಕೆ ಔಷದ ಇಲ್ಲದ ಕಾರಣ ಭೀತಿ ಜನರನ್ನು ಕಾಡುತ್ತದೆ,  ಹಲವು ಉತ್ಪೀಡಿತ ಅನುಭವಗಳನ್ನೆಲ್ಲ ಪುಸ್ತಕರೂಪದಲ್ಲಿ ತರಲು ಲೇಖಕರು ಬರೆಯುತ್ತಿದ್ದಾರೆ.. ರೋಗದ ಬಗ್ಗೆ ಹಾಗೂ,ಅದನ್ನು ಎದುರಿಸುವ ಬಗ್ಗೆ,ತೆಗೆದುಕೋಳ್ಳಬೇಕಾದ  ಔಷದಗಳ ಬಗ್ಗೆ ಮಾಹಿತಿಕೊಡುವ ಲೇಖಕರಲ್ಲಿ ಹೆಚ್ಚಾಗಿ ಡಾಕ್ಟರರು .ಸಮಯದ ವಿರುದ್ದ ಹೋರಾಡುವವರು ಆದರೆ ಈಗ ರೋಗದ ನಂತರ  ಗುಣಮುಖರಾದವರಲ್ಲಿ ಹಲವರು ಬದುಕಿನಲ್ಲಿ  ಮಾನಸಿಕ ರೋಗಕ್ಕೆ ತುತ್ತಾದವರು.ಇವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ  . ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ದಿನಾ ಭೇಟಿಯಾಗುತ್ತಿದ್ದವರು. ಸಾವಿಗೆ ತುತ್ತಾದನ್ನು ನೋಡಿ ತನ್ನ ಜೀವನದ ಬಗ್ಗೆ ಕಳೆದುಕೊಳ್ಳುವ ಭರವಸೆ,, ,ಭವಿಷ್ಯದ ಬಗ್ಗೆ ಚಿಂತೆ,, ಬಾಸ್ನ ಅನುಚಿತ ವರ್ತನೆ, ಆಫೀಸಿನ ರಾಜಕೀಯ,ಗುಂಪುಗಾರಿಕೆ  ಇವೆಲ್ಲದರ ಮೂಲಕ ಅನುಭವಿಸುವ  ಮಾನಸಿಕ ಒತ್ತಡ, ಅನಿಶ್ಚಿತತೆ  ನಿರಾಸೆಗಳಿಂದ ಜಗ್ಗಿಹೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಗಮನಕ್ಕೆ ಬಂದಿವೆ. ಕರೋನ ಶಾರೀರಿಕವಾಗಿಯೂ,ಮಾನಸಿಕವಾಗಿಯೂ ಹಲವು ಯುವಕರನ್ನು ಮತ್ತು ಹಿರಿಯ ನಾಗರಿಕರನ್ನು ಬಲಿ ತೆಗೆದುಕೊಂಡಿದೆ.  ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರು ಹಳೆಯ ಮನೆಯೊಂದರಿಂದ ಹೊಸಮನೆಗೆ ಬಂದರು.ಆದು ೧೫ನೆಯ ಮಾಳಿಗೆಯಲ್ಲಿತ್ತು ಅವರಿಗೆ ಚಾಳಿನಲ್ಲಿರುವ ಮಗಳ ಮನೆಗೆ ಕಳಿಸೆಂದು ತಂದೆ ಒತ್ತಾಯ ಮಾಡಿದಾಗ ಮಗ ಕೇಳಲಿಲ್ಲ೧೫ನೇ ಮಾಳಿಗೆ ಮನೆ ಅಪ್ಪನಿಗೆ ಬಂಧೀಖಾನೆಯಾಯಿತು.ಆದರೆ ಅಪ್ಪನ ಈ ಬಾವನೆಯನ್ನು ಅರಿಯದೇ ಅಪ್ಪನನ್ನು ಕಳೆದುಕೊಂಡ ಬಗ್ಗೆ ಅವನ ಕಥೆ ಪ್ರಮುಖ ಚಾನೆಲ್ಗಳಲ್ಲಿ ಬಿತ್ತರವಾಯಿತು .ಹೀಗೆ ಸಾಮಾಜಿಕವಾಗಿ  ಮನುಷ್ಯನ ಸಂವೇದನೆ, ಇತರರೊಂದಿಗೆ ಹೊಂದಿರುವ ಸಂಬಂಧ ಇವು ಇನ್ನೊಮ್ಮೆ ಸಾವಿನ ಬಗ್ಗೆ ಚಿಂತಿಸುವಂತೆ ಮಾಡಿವೆ ಮಾನಸಿಕ ರೋಗಕ್ಕೆ ತುತ್ತಾಗಿದ್ದ ಉದ್ಯೋಗದಲ್ಲಿರುವ ೨೬ ವರ‍್ಷದ ಯುವಕನೊಬ್ಬ ಕರೋನದ ಸಂಧರ‍್ಭದಲ್ಲಿ ತೀರಿಕೊಂಡ ತಂದೆಯ.. ಹೆಣದ  ಅಂತ್ಯಸಂಸ್ಕಾರ ದ  ಕೊನೆಯ ವಿಧಿವಿಧಾನವನ್ನು ರೋಡಿನಲ್ಲಿ ಮುಗಿಸಿ ದೇಹಕ್ಕೆ  ಅಗ್ನಿಕೊಟ್ಟ. ನಂತರ ಮನೆಯಿಂದ  ಹೊರಗೆ ಹೋಗಲಿಲ್ಲ ಕಾರಣ ಅಕ್ಕ ಪಕ್ಕದವರ ನಡತೆ…ಮನಸ್ಸನ್ನು ಘಾಸಿಗೊಳಿಸಿತ್ತು ಇವು ಹೊಸತೇನು ಅಲ್ಲ. .ಆದರೆ ಕರೋನ ಬರಿಯ ದೇಹಕ್ಕೆ ರೋಗವಾಗಿ ಬರದೆ ನಮ್ಮ ಯೋಚನೆ,,ಸಂಬಂಧ, ಆಚಾರ ವಿಚಾರಗಳನ್ನು ಪ್ರಶ್ನಿಸಿದಂತೆ ಮತ್ತು ನಮ್ಮ ನಡುವಳಿಕೆಗಳಲ್ಲಿ ಆದ ಸ್ತಿತ್ಯಂತರವು ಮಾನಸಿಕ ರೋಗಕ್ಕೆ ಬಲಿಯಾಗುವಂತೆ ಕಾಡಿದೆ..ಕರೋನ ಆರುತಿಂಗಳಿಂದ ಬಂದಿದ್ದು ಅದು ನಮ್ಮೊಂದಿಗೆ ಸ್ವಲ್ಪಕಾಲ ಉಳಿಯುವುದು ಖಂಡಿತ ಕರೋನ ಬರುವ  ಮೊದಲೇ ಶೇಖಡ ೧೦(೧೦%) ಮನೋರೋಗಿಗಳು ನಮ್ಮ ದೇಶದಲ್ಲಿದ್ದಾರೆ.ಜೀವಮಾನದಲಿ ಒಮ್ಮೆಯಾದರೂ ಮಾನಸಿಕ ರೋಗಕ್ಕೆ ತುತ್ತಾಗದೇ ಇರಲು ಸಾದ್ಯವಿಲ್ಲ.ಕರೋನ ಕೇವಲ ದುರ‍್ಬಲರನ್ನ ವಿಶೇಷವಾಗಿ ಕಾಡುತ್ತದೆ  ಮನಸ್ಸು ತಲ್ಲಣ ಗೊಳಿಸುವ ಕೆಲವು ಸಂಗತಿಗಳನ್ನ ನೋಡೋಣ: ಬ್ಯ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಕರ್ಮಚಾರಿಯನ್ನು ಯಾವುದೇ ಸೂಚನೆ ಕೊಡದೇ ಒಂದು ವಿಭಾಗದಿಂದ ಅಷ್ಟೆನೂ ಕ್ಷಮತೆ ಬೇಡದ ಹೊಸ ನೌಕರರಿಗೆ ಕೊಡುವ ಟಪಾಲು ವಿಭಾಗಕ್ಕೆ ವರ್ಗಾಯಿಸಿದಾಗ ಅವರು ಮಾನಸಿಕ ಖಿನ್ನತೆಗೆ ಒಳಗಾದರು. ಇದನ್ನೇ ಒಂದು ದೊಡ್ಡ ದು ಮಾಡಿ ಅವನಿಗೆ ಯಾವ ಕೆಲಸ ಕೊಡದೇ ಒಂದು ಬದಿಯಲ್ಲಿ ಕೂರಿಸಲಾಯಿತು. ಇನ್ನೊಂದು ಚಿತ್ರ ನೋಡಿ. ಸ್ಕೂಲಿಗೆ ನಿಯಮಿತವಾಗಿ ಹೋಗುವ ಹುಡುಗಿಯೊಬ್ಬಳು ಅಚಾನಕ್ ಸ್ಕೂಲಿಗೆ ಹೋಗುವುದನ್ನೇ ಬಿಟ್ಟಳು. ತಂದೆ ತಾಯಿಯರು ಅವಳನ್ನು ಡಾಕ್ಟರಿಗೆ ತೋರಿಸಿದಾಗ ಅವಳಿಗೆ ಮಾನಸಿಕ ಒತ್ತಡ ಉಂಟಾಗಿದೆ ಎಂದೂ, ಅವಳ ದಷ್ಟಪುಷ್ಟ ದೇಹ ಹುಡುಗರ ಹಾಸ್ಯಕ್ಕೆ ಒಳಪಟ್ಟಿದ್ದು ಅವಳನ್ನು ಶಾಲೆಯ ಅನುಮತಿ ಪಡೆದು ಮನೆಯಲ್ಲೇ ಟ್ಯೂಷನ್ ಪಡೆದು ಹತ್ತನೆ ತರಗತಿ ಉತ್ತೀರ್ಣಳಾದಳು.         ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧ ವಿರದ ಉದಾಹರಣೆಗಳು ಎಂದೆನಿಸಬಹುದುʼಮುಂಬಯಿಯ ದೊಡ್ಡ ಪಟ್ಟಣದಲ್ಲಿ ಮಾತ್ರ ಸೀಮಿತವಲ್ಲ. ಇದು ಚಿಕ್ಕ ಚಿಕ್ಕ ಶಹರಗಳಲ್ಲಿಯೂ ಕಾಣುವಂತಹವು. ಮೇಲಿನ ಎರಡೂ ಉದಾಹರಣೆಗಳು ರೋಗಿಯನ್ನು ನೋಡಿಕೊಳ್ಳುವ ರೀತಿಯಲ್ಲಿ ಇರುವ ವ್ಯತ್ಯಾಸ ನಮ್ಮೆದುರು ಬಂದು ನಿಲ್ಲುತ್ತದೆ. ಪ್ರಖ್ಯಾತ ಬಾಲಿವುಡ್ ನಟಿ ಮಾನಸಿಕ ಕುಸಿತದ ಲಕ್ಷಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಕಂಡಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು. ಮಾನಸಿಕ ಖಿನ್ನತೆ ತಮ್ಮ ವ್ಯಕ್ತಿತ್ವದಲ್ಲಿ ಪರಿಣಾಮ ಬೀರುವುದಲ್ಲದೇ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ರೋಗ ಈಗಲೂ ಸಾಮಾಜಿಕ ವಾಗಿ ಅಬಿ಼ಶಾಪ, ಮತ್ತು ವ್ಯಕ್ತಿತ್ವದ ಮೇಲಿನ ಕಲೆ ಎಂದು ೨೦ ೨೦ರಲ್ಲಿಯೂ ಚಾಲ್ತಿಯಲ್ಲಿಇರುವುದು ದುರಂತ .ಮಾನವ ಸಂಪನ್ಮೂಲ ವಿಭಾಗ ಇರುವುದು ಇದೇ ಕಾರಣಕ್ಕಾಗಿ ಅಲ್ಲವೇ? ಇತ್ತೀಚೆಗೆ ಮುಂಬಯಿಯಲ್ಲಿ ನೆಲೆಸಿರುವ ಪಂಜಾಬಿನ ಯುವಕನೊಬ್ಬ ಬೆಳಿಗ್ಗೆ ಎದ್ದಾಗ ಉಸಿರಾಡಲು) ಕಷ್ಟವಾಗುತ್ತಿದ್ದು ಕೆಲಸಕ್ಕೆ ಹೋಗದೇ ತನಗೆ ಏನೋ ಆಗಿದೆಯೆಂದು ಸಂಶಯ ಬಂದು ಡಾಕ್ಟರರ ಹತ್ತಿರ ಹೋಗಿ  ತೋರಿಸಿದ. ಇದನ್ನು ತನ್ನ ಬಾಸ್‌ಗೆ (ಮೇಲಧಿಕಾರಿಗೆ) ತಿಳಿಸಲಿಲ್ಲ. ತನ್ನ ಸಹೋದ್ಯೋಗಿಗಳಿಗೆ ಹೇಳಿ ವಿಷಯವನ್ನು ಮುಚ್ಚಿಡಲಾಯಿತು. ಡಾಕ್ಟರು ಹೇಳಿದಂತೆ ಅವನ ಸ್ನೇಹಿತರು ಅವನ ಮೇಲಧಿಕಾರಿಗೆ ತಿಳಿಸಿ ಅವನನ್ನು ಒಂದೆರಡು ತಿಂಗಳ ಮಟ್ಟಿಗೆ ರಜೆನೀಡಿ ಸಲಹಬೇಕೆಂದು ವಿನಂತಿಸಿಕೊಂಡರು. ಅವನು ಕೆಲಸದಲ್ಲಿ ನಿಪುಣತೆ ಪಡೆದು ಒಬ್ಬ ಒಳ್ಳೆಯ ಅಧಿಕಾರಿ ಎಂದು ಕರೆಸಿಕೊಂಡಿದ್ದರಿಂದ ಅವನ ಮೇಲಧಿಕಾರಿಯನ್ನು ಒಪ್ಪುವಂತೆ ಮಾಡಿ ಎರಡು ತಿಂಗಳು ರಜೆ ಸಿಕ್ಕು ಆರೋಗ್ಯ ಸುಧಾರಣೆ ಕಂಡಿತು. ಐಸಿಎಂಆರ್(ಇಂಡಿಯನ ಕೌನ್ಸಿಲ್ ಆಫ್ ಮೆಡಿಕಲ್ ರೀಸರ‍್ಚ) ಪ್ರಕಾರ ಆ ಪಂಜಾಬಿ ಯುವಕ ವ್ಯಾಕುಲತೆ, ಚಿತ್ತಕ್ಷೋಭೆ ಯ ಜೊತೆಗೆ ಮನಸ್ಸಿನ ಅಲ್ಲೋಲ ಕಲ್ಲೋಲತೆ ಚಿಂತೆ, ಯೋಚನೆಗೆ ಒಳಗಾಗಿದ್ದ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣದಿಂದಾಗಿ ಹೊಸ ಸಾಧ್ಯತೆಗಳು ತೆರೆದುಕೊಂಡಂತೆ ಹೊಸ ಸವಾಲುಗಳು ಮತ್ತು ಆ ಸವಾಲುಗಳನ್ನು ಎದುರಿಸುವ ಮಾನಸಿಕತೆ (ಮಾನಸಿಕ ಸ್ಥಿತಿ)ಅಗತ್ಯವಿದೆ. ಆದ್ದರಿಂದ ಯುವಕರು, ಮಧ್ಯ ವಯಸ್ಕರು ಮತ್ತು ವಿದ್ಯಾರ್ಥಿಗಳು ಮನೋಚಿಕಿತ್ಸಕರ ಹತ್ತಿರ ಮಾನಸಿಕ ಸ್ವಾಸ್ಥ್ಯಕ್ಕೆ ಚಿಕಿತ್ಸೆ ಪಡೆಯುವುದು ಸಂಖ್ಯೆಯ ದೃಷ್ಟಿಯಿಂದ ಬಹಳ ಹೆಚ್ಚುವರಿ ಕಂಡಿದೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಶಿಕ್ಷಿತನಾಗಿ ಇದ್ದರೆ, ಭೂತ ಪ್ರೇತಗಳ ಮೊರೆಹೋಗುವ ತಂದೆ ತಾಯಿಗಳ ಯೋಚನೆಯನ್ನು ಬದಲಿಸುವುದರ ಸಾಧ್ಯತೆ ಜೊತೆಗೆ ಮನೋ ಚಿಕಿತ್ಸೆಗಾಗಿ ಸರಿಯಾದ ಡಾಕ್ಟರು ಸಿಗುತ್ತಾರೆ ಎನ್ನುವ ಮೂಲ ಮಾಹಿತಿ ಈಗ ಲಭ್ಯವಾಗ್ತಿದೆ. ಮುಂಬಯಿಯಂತಹ ಶಹರಗಳಲ್ಲಿಯೂ ಹಲವು ಸಂಘ ಸಂಸ್ಥೆಗಳು, ಆರ್ಥಿಕವಾಗಿ ಮನೋರೋಗಕ್ಕೆ ತುತ್ತಾದ ವ್ಯಕ್ತಿಯ ಶುಶ್ರೂಷೆಯ ಅಗತ್ಯವನ್ನು ಕಾಣುತ್ತಾರೆ. ಮನೋರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಈ ಆರ್ಥಿಕ, ಕೈಗಾರಿಕ ಸಂಸ್ಥೆಗಳು ನೋಡಿಕೊಳ್ಳುವ ರೀತಿಯ ಮೇಲೆ ಆ ರೋಗಿಯ ಮನೋಬಲ ಅಡಗಿದೆ.ಪಡೆದುಕೊಂಡ ಸಾಲ ತೀರಿಸಲಾಗದೆ ಹತಾಶನಾದ ವ್ಯಕ್ತಿಯ ಬಗ್ಗೆ ಈ ಸಂಸ್ಥೆಗಳು ಮಾನಸಿಕವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ ಅತ್ಯಂತ ಒಳ್ಳೆಯ ನೌಕರ ಅಥವ ಅಧಿಕಾರಿ ತನ್ನ ೧೦-೧೨ ವರ್ಷದ ಸೇವೆಯಲ್ಲಿ ಮನೋರೋಗಕ್ಕೆ ಅಂದರೆ ಮಾನಸಿಕ ತಳಮಳ, ತಗ್ಗುವಿಕೆ, ಇತರರೊಂದಿಗೆ ಬೆರೆಯುವಿಕೆ ಮುಂತಾದ ಸಂದರ್ಭದಲ್ಲಿ ಕಾಣುವ ಬದಲಾವಣೆಯನ್ನು ಮಾನವೀಯತೆಯಿಂದ ನೋಡಿದರೆ ರೋಗ ಉಲ್ಬಣಿಸದೇ ಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ. ಈ ಲೇಖನದ ಮೊದಲು ಕೊಟ್ಟ ಉದಾಹರಣೆಯಲ್ಲಿ ಹಿರಿಯ ಕರ್ಮಚಾರಿಯನ್ನು ಟಪ್ಪಾಲು ವಿಭಾಗಕ್ಕೆ ಹಾಕಿದ ಆ ನಿರ್ಣಯವೇ ಅಘಾತಕಾರಿಯಾಗಿ ಪರಿಣಮಿಸಿ ಅವನು ಹೃದಯಾಘಾತಕ್ಕೆ ಒಳಗಾಗಿದ್ದು ನಂತರ ಚೇತರಿಸಲಿಲ್ಲ. ಹಲವು ನೌಕರರು, ಅಧಿಕಾರಿ ವರ್ಗದವರು ತಮ್ಮ ಮನಸ್ಸಿನ ಸ್ವಾಸ್ಥ್ಯದ ಬಗ್ಗೆ  ತಮ್ಮ ಮುಂದಿನ ಅಧಿಕಾರಿಗಳೊಂದಿಗೆ ಏನೂ ಹೇಳಿಕೊಳ್ಳುವುದಿಲ್ಲ. ಕಾರಣ ಈಗಲೂ ಉನ್ನತ ಶಿಕ್ಷಣ ಪಡೆದ ಕಂಪೆನಿಯ ನಿರ್ದೇಶಕರುಗಳಿಗೂ ಸಹ ಚಿತ್ತ ಕ್ಲೇಷ, ಚಿತ್ತ ಗ್ಲಾನಿಯನ್ನು ಸರಿಯಾದ ಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಗೊತ್ತಿದ್ದರೂ ಮಾನವೀಯತೆಯ ಕೊರತೆಯಿಂದ ಆ ಮನೋರೋಗಿಗೆ ಭವಿಷ್ಯವೇ ಇಲ್ಲದ ಹಾಗೆ ಕರಾಳ ಸತ್ಯಕ್ಕೆ ತೆರೆದುಕೊಳ್ಳುತ್ತದೆ. ಕೆಲಕಾಲವಷ್ಟೇ ಇರುವ ಈ ಮಾನಸಿಕ ತಳಮಳದ ಈ ಜೀವನವನ್ನು ಇಡೀ ಜೀವಮಾನದ ಕೊರತೆ ಎಂದು ಕಾಣುವುದು ವಿಪರ‍್ಯಾಸ., ಹೆಚ್ಚಾಗಿ ನೌಕರ ವರ್ಗಕ್ಕೆ ಒಂದು ದೊಡ್ಡ ಆತಂಕ.             ಮನೋವಿಜ್ಞಾನದಲ್ಲಿ ಚಿತ್ತಕ್ಷೋಭೆ/ಕ್ಲೇಷ ಮತ್ತು ವ್ಯಾಕುಲತೆ (anxiety) ವಿಜ್ಞಾನದ ಬೇರೆ ಬೇರೆ ಭಾಗಗಳಾಗಿ ಡಾಕ್ಟರರು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಎರಡೂ ಸ್ಥಿತಿಗಳು ತೋರಿಕೆಗೆ ಒಂದೇ ಆದರೂ ಮನೋರೋಗದ ಲಕ್ಷಣಗಳು.ಬೇರೆಬೇರೆ ಚಿತ್ತ ಕ್ಲೇಶ, ಚಿತ್ತ ಅಸ್ವಾಸ್ಥ್ಯ ಎರಡೂ ಒಂದಾದರೊಂದಂತೆ ಮರುಕಳಿಸಬಹುದು. ಚಿತ್ತ ಕ್ಲೇಶದಲ್ಲಿ ಸದಾ ಯೋಚಿಸುವುದು, ತಳಮಳ, ಮನಸ್ಸಿನ ಚಂಚಲತೆ, ನೆನಪಿನ ಕೊರಗು, ನಿದ್ದೆಯ ಕೊರತೆ ಇವೆಲ್ಲ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಕಾಣಬಹುದು. ಇದು ಮಾನಸಿಕ ರೋಗ ಬಹು ಸಮಯ ತೆಗೆದುಕೊಳ್ಳುವ ಮನಸ್ಸಿನ ಸ್ಥಿತಿಯದು. ಆದರೆ ಚಿತ್ತ ಅಸ್ವಸ್ಥತೆ ಅಥವಾ ಗ್ಲಾನಿ  ಒಂದು ಸಂಧರ್ಭ ಅಥವಾ ಘಟನೆಗಳಿಂದ ಆಗುವಂತಹುದು.  ಎನ್ನುವ ಪದವನ್ನು ಬಹುಬಾರಿ ಬಳಸುತ್ತೇವೆ. ಯಾವುದಾದರೂ ಘಟನೆ ಎದುರಾದಾಗ ಉಂಟಾದ ಹೆದರಿಕೆ ಅಥವಾ ಇಂಟರ್ ವ್ಯೂನಲ್ಲಿ ಆಗುತ್ತಿರುವ ನಡುಕ ಇವೆಲ್ಲ ಚಿತ್ತ ಅಸ್ವಸ್ಥತೆ (anxiety) ಗೆ   ಸಂಬಂಧ ಪಟ್ಟವು             ಇತ್ತೀಚಿನ ವರದಿ ಪ್ರಕಾರ ಚಿತ್ತಕ್ಲೇಶ ಮತ್ತು ಚಿತ್ತ ಅಸ್ವಾಸ್ಟ್ಯ  ಸಂಯುಕ್ತ ಗ್ರೇಟ್ ಬ್ರಿಟನ್ನಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಚಿತ್ತಕ್ಲೇಶ  ಹಲವು ಜನರಿಗೆ ಹಲವು ರೀತಿಯಲ್ಲಿ ,ಹಲವಾರು ರೋಗ ಲಕ್ಷಣಗಳು ಕಂಡರೆ ಚಿತ್ತ ಅಸ್ವಸ್ಥತೆಯಲ್ಲಿ  ಯಾವುದಾದರೂ ಒಂದು ರೋಗದ ಲಕ್ಷಣ ಕಾಣಬಹುದು. ಚಿತ್ತ ಅಸ್ವಸ್ಥತೆ ಹೆಚ್ಚಾಗಿ ಹೆದರಿಕೆ, ಸಂದೇಹ, ಹೊಸ ಜನರೊಂದಿಗೆ ಬೆರೆಯುವ ಚಿಂತೆ, ಏಕತಾನತೆಯ ಲಕ್ಷಣಗಳು ಕಾಣಬಹುದು. ಇದು ಭಾರತೀಯರು ಅನುಭವಿಸುತ್ತಿರುವ ಸಾಮಾನ್ಯ ಲಕ್ಷಣಗಳು. ಇತ್ತೀಚಿನ ವರದಿ ಪ್ರಕಾರ ಯೋ ಯೋ ಹನಿಸಿಂಗ್ (ಗಾಯಕ) ಅನುಷ್ಕಾ ಶರ್ಮ (ನಟಿ), ಕ್ಯಾಥರಿನ್ ಚೇಟಾ, ರ‍್ಯಾನ್ ರೊನಾಲ್ಟಸ್, ಲೇಡಿ ಗಾಗಾ(ಹಾಲಿವುಡ್ ನಟರು) ಮುಂತಾದವರು ಚಿತ್ತಕ್ಲೇಶ ಅಥವಾ ಚಿತ್ತ ಅಸ್ವಸ್ಥತೆಯ ರೋಗಿಗಳು. ಮಧ್ಯಮ ವರ್ಗದ ಹೆಚ್ಚು ಹೆಚ್ಚು ಜನರು ಉದ್ಯೋಗದಲ್ಲಿದ್ದು, ಜೀವನವನ್ನು ಸುಖಿಯಾಗಿಡುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಣ ಒಂದು ಆಕರ್ಷಣೆಯಾದರೆ, ತನ್ನ ಕರ್ತೃತ್ವ ಶಕ್ತಿಯ ಮೂಲಕ ಯಾರೂ ಗಳಿಸದ ಸ್ಥಾನವನ್ನು ಪಡೆಯುವ ಹಂಬಲವೂ ಕಾರಣವಾಗಿದೆ.. ಅಂದರೆ ಒಂದು ರೀತಿಯ ಸ್ಪರ್ಧಾತ್ಮಕತೆ, ಮಾನಸಿಕ ಆರೋಗ್ಯವನ್ನು ಕೆಡಿಸುವ ಬಹುಮುಖ್ಯ ಕಾರಣವಾಗಿದೆ. ಐಸಿಎಂಆರ್  ಪ್ರಕಾರ ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಮನೋರೋಗದ ಶಿಕಾರಿಯಾಗುತ್ತಿದ್ದಾನೆ. ಮಹಾರಾಷ್ಟ ರಾಜ್ಯದಲ್ಲಿ ಪ್ರತಿ ಲಕ್ಷ ಜನರಲ್ಲಿ ಸುಮಾರು ಹತ್ತು ಸಾವಿರ ಜನ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ೪೦೦೦, ಚಿತ್ತ ಕ್ಲೇಷದಿಂದ ೪೦೦೦, ಕೆಲಸ ಅರ್ಥ ಮಾಡಿಕೊಳ್ಳಲಾಗದ ವiನಸ್ಸಿನ ಕುಗ್ಗುವಿಕೆ ೩,೫೦೦ ಮತ್ತು ವರ್ತನೆಯಲ್ಲಿ ಉಂಟಾಗುವ ಲಕ್ಷಣಗಳು ೮೦೦. ಹೀಗೆ ಜನರು ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಚಿತ್ತಕ್ಲೇಷದಂತಹ ಮನೋರೋಗಗಳು ಹೆಚ್ಚುತ್ತಿದ್ದು ಅದರ ಅರಿವು ಹಲವು ಜನರಿಗೆ ಅರಿವಿಲ್ಲದೇ, ಭೂತದ ಆರಾಧನೆ, ಕುರಿಬಲಿ, ಪೂಜೆ ಪುನಸ್ಕಾರಗಳ ಹಾದಿಯಲ್ಲಿ ಈಗಲೂ ನಡೆಯುತ್ತಿದೆ.. ಆದ್ದರಿಂದ ಮನೋರೋಗದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ಈ ಅನಾರೋಗ್ಯದ ವಿವರಗಳನ್ನು ಆಡಳಿತ ಮಂಡಳಿಯವರಿಗೆ ಕೊಡುವುದಿಲ್ಲ.  ಒಬ್ಬ ಎಂಜಿನಿಯರ್‌ಗೆ ತನ್ನ ವೈವಾಹಿಕ ಜೀವನದಲ್ಲಿ ಆದ ಕ್ಲೇಷಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲಸದಲ್ಲಿ ಮತ್ತು ಜನರೊಂದಿಗೆ ಮಾತನಾಡುವಾಗ ತಕ್ಷಣ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಿದ್ದ. ಒಬ್ಬ ಕಂಪನಿಯ ನಿರ್ದೇಶಕರು ಅವನನ್ನು ಕರೆದು

ಮನಸ್ಸು ಎಂಬ ಮನುಷ್ಯನ ತಲ್ಲಣ Read Post »

ಕಾವ್ಯಯಾನ

ನ್ಯಾಯಕ್ಕಾಗಿ ಕೂಗು

ಕವಿತೆ ನ್ಯಾಯಕ್ಕಾಗಿ ಕೂಗು ನೂತನ ದೋಶೆಟ್ಟಿ ಕೈ ಎತ್ತಿ ಜೈಕಾರ ಹಾಕಿದಾಗಎಲ್ಲರೂ ಒಂದೆಂಬ ಅನುಭವಬಾಯಿಸೋತ ಬಿಡುವಿನಲ್ಲಿಸಣ್ಣ ಗುಸುಗುಸು ಪತ್ರಿಕೆಯವರೆದುರುಪೋಸು ಕೊಟ್ಟವರುಬಾರದ ಭಾಷೆಯಲ್ಲಿ ತೊದಲಿದವರುಮತ್ತೆ ಚುರುಕು ಕ್ಯಾಮರಾಕ್ಕಾಗಿಕಾಲರ್ ಎಳೆದುಕೊಂಡರುನೆರಿಗೆ ಸರಿ ಮಾಡಿಕೊಂಡರುಮಿಂಚಿನ ಸಂಚಾರ ಬೇಡಿಕೆಗಳು ಉರುಹೊಡೆಯಲುಅಲ್ಲಲ್ಲಿ ಚದುರಿದವರುಹಣುಕಿದರುಒಂದಾದರು ದಂಡು, ಮೆರವಣಿಗೆಗಳೆಲ್ಲಮುಗಿದಾಗಜಾತಿ- ಮಾತು, ಊರು- ಕೇರಿಗಳಗುಂಪು ಒಡೆದು ಒಂದಾಗಿ ಬಾಳಿದಇತಿಹಾಸದ ಪುಟಗಳಲಿಪುನರಾವರ್ತನೆಯ ಮಂತ್ರಅನಿವಾರ್ಯ ವರ್ಷಗಳ ಹೊಸ್ತಿಲಲ್ಲಿಮೊರೆಯಿಡುತ್ತಿರುವ ನ್ಯಾಯ. ( 2009ರಲ್ಲಿ ಬರೆದದ್ದು. 73 ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಕಾಲ ಅಲ್ಲಿಯೇ ನಿಂತಿದೆಯೇ ಎಂಬ ಅನುಮಾನ.) ***********************************

ನ್ಯಾಯಕ್ಕಾಗಿ ಕೂಗು Read Post »

You cannot copy content of this page

Scroll to Top