ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರಬಂಧ

ಎಲೆಗಳ ಬಲೆಯಲ್ಲಿ…

ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ…                                                             ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್‌, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್‌, ಫ್ರೀಸೆಲ್‌ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್‌ ಬಾಹರ್‌ ಅಂದರ್‌ ಬಾಹರ್‌ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು ಸುಳ್ಳಲ್ಲ. ಅದೇನೋ ಚಲನಚಿತ್ರ… ಅವನು ಗೆದ್ದರೂ, ಸೋತರೂ ಅವನ ಮಡಿಲಲ್ಲಿ ಲಕ್ಷ್ಮಿ ಬಂದು ಕೂರುತ್ತಾಳೆ; ಆದರೆ ಅವನಂತೆ ಆಡಹೊರಟ ಜನಸಾಮಾನ್ಯರ ಬಳಿ ಅವಳು ಸಿಕ್ಕಂತೆ ಮಾಡಿ ತಪ್ಪಿಸಿಕೊಳ್ಳುವುದೇ ಹೆಚ್ಚು. ಅವಳು ಸಿಕ್ಕಿಕೊಳ್ಳುತ್ತಾಳೋ ಇಲ್ಲವೋ ತಿಳಿಯದು, ಆಡುವವರಂತೂ ಈ ಎಕ್ಕ, ರಾಜ, ರಾಣಿ, ಜೋಕರ್‌ ಎಂಬ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಬಲೆಯಲ್ಲಿ ಬಿದ್ದು ತಮ್ಮನ್ನೇ ಸಂತೋಷದಿಂದ, ಸ್ವಾನುರಾಗದಿಂದ ಅರ್ಪಣೆ ಮಾಡಿಕೊಂಡಿರುತ್ತಾರೆ. ಇಸ್ಪೀಟಾಟಕ್ಕೆ ಕಾರಣಗಳು ಹಲವಾರು. ಹೊತ್ತು ಕಳೆಯುವುದಕ್ಕಾಗಿ ಎಂದು ಶುರುವಾಗುವ ನರ್ತನ ಹಲವು ಭಾವಭಂಗಿಗಳನ್ನು ತೋರುತ್ತಾ ಆಡುಗರನ್ನು ತನ್ನೆಡೆಗೆ ಸೆಳೆಯುತ್ತದೆ. ಬೇಸರ ನೀಗಲು… ಗೆದ್ದ ಖುಷಿಯ ಅಮಲು… ಸೋತು ಕಳೆದದ್ದನ್ನು ಕಳೆದಲ್ಲೇ ಛಲದಿಂದ ಮರಳಿ ಹುಡುಕಲು… ಗೆಳೆಯರು ಸಿಕ್ಕ ಖುಷಿಯಲ್ಲಿ… ಆಟದ ಆಕರ್ಷಣೆಯಲ್ಲಿ… ಹೀಗೆ ಹಲವು ವಿನ್ಯಾಸಗಳಲ್ಲಿ ಇಸ್ಪೀಟಿನ ರಾಣಿ ತನ್ನ ರಸಿಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ತವಕಿಸುತ್ತಿರುತ್ತಾಳೆ. ಒಮ್ಮೆ ಇವಳ ಮೋಹದಲ್ಲಿ ಸಿಲುಕಿಕೊಂಡವರಿಗೆ ಬುದ್ದಿಯ ಅಂಕುಶವಿಲ್ಲದಿದ್ದರೆ ಅದರಿಂದ ಮುಕ್ತಿಯಿಲ್ಲ. ಅದೆಷ್ಟೋ ಮಂದಿ ಮನೆ, ಮಠ, ಹೆಂಡತಿ-ಮಕ್ಕಳು, ಬಂಧು-ಬಾಂದವರನ್ನು ಕಳೆದುಕೊಂಡು ಬೀದಿ ಪಾಲಾಗಿರುವವರನ್ನು ನಮ್ಮ ಹತ್ತಿರದ ಸ್ನೇಹ ವಲಯದಲ್ಲೇ, ನೆಂಟರಿಷ್ಟರಲ್ಲೇ ಕಂಡಿದ್ದೇನೆ. ʻಊರಿಗೊಂದು ಹೊಲಗೇರಿʼ ಎನ್ನುವ ಗಾದೆಗಿಂತ ʻಊರಿಗೊಂದಾದರೂ ಇಸ್ಪೀಟಿನ ಅಡ್ಡಾʼ ಎನ್ನುವ ಮಾತೇ ಹೆಚ್ಚು ಸಮಂಜಸವೆನಿಸುತ್ತದೆ. ದೊಡ್ಡ ಪಟ್ಟಣಗಳಲ್ಲಾದರೆ ಇಸ್ಪೀಟು ಕ್ಲಬ್ಬು. ಇದರ ಪರಾಕಾಷ್ಠೆಯನ್ನು ನಾನು ನೋಡಿದ್ದು ಅಮೇರಿಕಾದ ಲಾಸ್‌ ವೇಗಾಸ್‌ನ ಕ್ಯಾಸಿನೋಗಳಲ್ಲಿ. ಅಲ್ಲಿನ ಜೂಜಿನ ಅಡ್ಡಾಗಳಲ್ಲಿ ಬೈಗು ಬೆಳಗೆನ್ನದೆ ಮಂದಿ ತಮ್ಮ ಮುಂದಿನ ಪರದೆಯಲ್ಲಿ ಮುಳುಗಿಹೋಗಿರುತ್ತಾರೆ, ಕಳೆದು ಹೋಗಿರುತ್ತಾರೆ!! ನನ್ನ ಈ ಲೇಖನದ ಉದ್ದೇಶ ಮನೆಮಠ ಕಳೆದುಕೊಂಡವರ ಕರುಣಾಜನಕ ಕತೆಗಳನ್ನು ಹೇಳುವುದಂತೂ ಖಂಡಿತವಾಗಿಯೂ ಅಲ್ಲ. ಒಂದು ಕಾಲದಲ್ಲಿ ಇದು ಬಂಧುಬಳಗದ ನಡುವಿನ ಸೇತುವಾಗಿ ಜನಗಳನ್ನು ಹಿಡಿದಿಡುತ್ತಿದ್ದ ಆಕರ್ಷಣೆಯ ಸಾಧನವಾಗಿದ್ದುದರ ಬಗ್ಗೆ ಕೆಲವು ಪ್ರಸಂಗಗಳನ್ನು ಹೇಳಬೇಕೆಂದಷ್ಟೆ. ಒಂದು ಕಾಲ ಎಂದರೆ ಎಲ್ಲೋ ಹೋಗಿಬಿಡಬೇಡಿ. ನಾನು ಹುಟ್ಟುವುದಕ್ಕೂ ಮುಂಚೆಯೇ ಇತ್ತೋ…? ನನಗೆ ತಿಳಿಯದು. ಅಂತೂ ಒಂದೈವತ್ತು, ಅರವತ್ತು ವರ್ಷಗಳ ಹಿಂದೆ ಎಂದುಕೊಂಡರೆ ಸಾಕು. ಮದುವೆಮನೆಯಲ್ಲಿ ಸೇರುತ್ತಿದ್ದ ನೆಂಟರಿಷ್ಟರು, ಬಂಧು ಬಳಗ ಸೇರಿರುವ ಖುಷಿಗೆ, ದಿಬ್ಬಣ ಮದುವೆ ಮನೆಗೆ ಕಾಲಿಟ್ಟ ಅನತಿಕಾಲದಲ್ಲೇ ತಮಗೊಂದು ಸೂಕ್ತವಾದ ಹೆಚ್ಚಾಗಿ ಯಾರ ಗಮನಕ್ಕೂ ಬಾರದಂತ (ಕಾಫಿ, ಕುರುಕಲು ತಿಂಡಿಗಳ ಪೂರೈಕೆಗೆ ಅನುವಾಗಿರುವಂತ) ಕೋಣೆಯನ್ನು ಆಕ್ರಮಿಸಿಕೊಂಡು ಜಮಖಾನೆ ಹಾಸಿಕೊಂಡು ಇಸ್ಪೀಟಿನ ಕಟ್ಟನ್ನು ಬಿಚ್ಚಿದರೆಂದರೆ, ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಎಂಬ ಭೇದಭಾವವಿಲ್ಲದೆ ಆಟ ಅವಿಶ್ರಾಂತವಾಗಿ ಮುಂದುವರೆದಿರುತ್ತಿತ್ತು. ಅವರ ಭಕ್ತಿ ಪರವಶತೆಯನ್ನು ಕೆಡಿಸಲು ನಿದ್ರಾದೇವಿಯಿಂದಲೂ ಸಾಧ್ಯವಿರಲಿಲ್ಲ ಬಿಡಿ! ಇಂತಲ್ಲಿ ದುಡ್ಡಿನ ಮೊತ್ತ ಹೆಚ್ಚಲ್ಲ. ಆಟವನ್ನು ರಂಗೇರಿಸಲು ಬೇಕಾದಷ್ಟು ಮಾತ್ರ… ಗೆದ್ದರೆ ಹತ್ತು… ಸೋತರೆ ಹತ್ತು… ಎನ್ನುವ ಹಾಗೆ…  ಒಡವೆ, ವಸ್ತು, ಮನೆ ಮಠಗಳನ್ನು ಒತ್ತೆ ಇಡುವಂತ ಅಮಲಲ್ಲ. ಖುಷಿಗಾಗಿ ಖುಷಿ.. ಮೋಜಿಗಾಗಿ ಮೋಜು. ಇಸ್ಪೀಟೊಂದು ಖಯಾಲಿಯಷ್ಟೇ. ನನ್ನೊಬ್ಬ ದೊಡ್ಡಮ್ಮನ ಮಗನ ಮದುವೆಯಲ್ಲಿ ಹಿರಿಯಾಕೆಯೊಬ್ಬರು ಮದುವೆ ಹುಡುಗನ ಅಕ್ಕನನ್ನು “ಏನೇ ವಿಜ್ಜಮ್ಮ ನಿನ್ನ ಯಜಮಾನರು ಕಾಣುತ್ತಿಲ್ಲ, ತೀರ ಮೈದುನನ ಮದುವೆಗೂ ಬರಲಿಲ್ಲವೇ?” ಎಂದಿದ್ದರು. “ಅಯ್ಯೋ ಬಂದಿದ್ದಾರೆ ಚಿಕ್ಕಮ್ಮ, ಭಜನೆಯಲ್ಲಿ ಮುಳುಗಿಹೋಗಿದಾರೆ ಅಷ್ಟೇ” ಎಂದಳು ವಿಜಯ. ಮಹಾ ಭಕ್ತಳಾದ ಆಕೆ “ಅಯ್ಯೋ ಯಾವಾಗಿಂದ ನಡೀತಿದ್ಯೆ. ಎಲ್ಲಿ? ನಂಗೊತ್ತಾಗ್ಲಿಲ್ವೆ… ಅದೆಲ್ಲಿ ತೋರ‍್ಸು ಬಾರೆ ಸ್ವಲ್ಪ” ಎನ್ನುತ್ತಾ ಅವಳ ದುಂಬಾಲು ಬಿದ್ದರು. “ಅದು ನೀವು ಮಾಡೋ ಭಜನೆ ಅಲ್ಲ ಬಿಡಿ” ಎನ್ನುತ್ತಾ ಯಾರೋ ಕರೆದರೆಂದು ಅಲ್ಲಿಂದ ಜಾರಿಕೊಂಡಿದ್ದಳು. ಆಕೆ ಬಿಟ್ಟಾರೆಯೇ ಕಂಡಕಂಡವರನ್ನೆಲ್ಲಾ “ಭಜನೆ ನಡೀರಿರೋದು ಎಲ್ಲಿ?” ಎಂದು ತಲೆ ತಿಂದಾಗ ಯಾರೋ ಪುಣ್ಯಾತ್ಮರು ನಡೆಯುತ್ತಿದ್ದ ಕೋಣೆಯ ಬಾಗಿಲಿಗೆ ಕರೆದೊಯ್ದು ತೋರಿಸಿದರು. “ಅಯ್ಯೋ.. ಈ ಅನಿಷ್ಟಾನ ವಿಜ್ಜು ಭಜನೆ ಅಂದಳಲ್ಲಾ” ಎಂದು ಮಮ್ಮಲ ಮರುಗಿದರು. ನನ್ನ ಮದುವೆಯ ನಿಷ್ಕರ್ಷೆಯಾಗುವಾಗ ನಮ್ಮ ಮಾವನವರು “ನಮ್ಮದು ಒಂದು ಬೇಡಿಕೆ ಇದೆ” ಎಂದಿದ್ದರು. ʻಇದುವರೆಗೂ ಏನನ್ನೂ ಕೇಳದವರು ಈಗ ಏನೋ ಬೇಡಿಕೆ ಇಡುತ್ತಿದ್ದಾರಲ್ಲʼ ಎನ್ನುವ ಪ್ರಶ್ನೆಯನ್ನು ನಮ್ಮ ತಾಯಿ, ತಂದೆಯರ ಮುಖದಲ್ಲಿ ನೋಡಿದವರೇ “ಇನ್ನೇನಿಲ್ಲ; ನಮ್ಮ ಕಡೆ ಬರುವ ನೆಂಟರಿಷ್ಟರಲ್ಲಿ ಕೆಲವರಿಗೆ ಇಸ್ಪೀಟಿನ ಖಯಾಲಿ. ರಾತ್ರಿ ಹಗಲು ಅನ್ನದೆ ಮದುವೆ ಮನೆಯಲ್ಲಿ ಇದ್ದಷ್ಟು ಹೊತ್ತೂ ಆಡುತ್ತಿರುತ್ತಾರೆ. ಆಗಾಗ ಅವರಿಗೆ ಕಾಫಿಯೊಂದನ್ನು ಕೊಟ್ಟರೆ ಸಾಕು. ಅವರು ಊಟ, ತಿಂಡೀನೂ ಕೇಳಲ್ಲ” ಎಂದು ದುಗುಡಗೊಂಡಿದ್ದವರ ಮುಖಗಳಲ್ಲಿ ನಗೆಯರಳಿಸಿದ್ದರು. ಅವರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ ಬಿಡಿ; ಹುಷಾರು ತಪ್ಪಿದ್ದ ಎಂಟು ತಿಂಗಳ ಮಗುವನ್ನು ಡಾಕ್ಟರ ಬಳಿಗೆ ಕರೆದೊಯ್ಯಲು ನನ್ನ ವಾರಗಿತ್ತಿ, ಆಟದಲ್ಲೇ ಮುಳುಗಿಹೋಗಿದ್ದ ಭಾವನನ್ನು ಆಡುತ್ತಿರುವಲ್ಲಿಗೇ ಹೋಗಿ ಎಬ್ಬಿಸಿ ಕರೆದುಕೊಂಡು (ಎಳೆದುಕೊಂಡು?) ಬರಬೇಕಾಯಿತು! ಮದುವೆ ಮುಗಿಸಿಕೊಂಡು ಹಿಂತಿರುಗುವ ಮುನ್ನ (ಯಾವ ಹೊತ್ತಿಗೆ ಯಾವ ಭಕ್ಷ್ಯ ಬಡಿಸಿದ್ದರೆಂದು ಅವರು ಗಮನಿಸಿದ್ದರೋ ಇಲ್ಲವೋ) ಅವರ ಆಟವು ಸಾಂಗವಾಗಿ ನಡೆಯಲು ಸಹಕರಿಸಿ ನಿಯತವಾಗಿ ಕಾಫಿತಿಂಡಿಗಳನ್ನು ಪೂರೈಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ತೃಪ್ತರಾಗಿ ಹೊರಟರು. ಇನ್ನು ನನ್ನ ನಾದಿನಿಯ ಮದುವೆಯಲ್ಲಿ ಬೀಗರೌತಣವಾದ ತಕ್ಷಣ ನಾವು ಛತ್ರವನ್ನು ಬಿಟ್ಟುಕೊಡಬೇಕಿತ್ತು. ಸಂಜೆ ಅಲ್ಲಿ ಇನ್ನೊಂದು ಕಡೆಯವರ ಆರತಕ್ಷತೆ ನಡೆಯುವುದಿತ್ತು. ಹಾಗಾಗಿ ನಾವು ಬೆಳಗಿನಿಂದಲೇ ಸಾಧ್ಯವಾದಷ್ಟು ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಾ ನಾವು ಹೊರಡುವಾಗ ತೆಗೆದುಕೊಂಡು ಹೋಗಬಹುದಾದಷ್ಟನ್ನು ಮಾತ್ರ ಉಳಿಸಿಕೊಂಡಿದ್ದೆವು. ಊಟವಾದ ತಕ್ಷಣ ಪರಸ್ಪರ ಬೀಳ್ಕೊಂಡು ಅಲ್ಲಿಂದ ಗಂಡು ಹೆಣ್ಣು ಇಬ್ಬರ ಕಡೆಯವರೂ ಹೊರಟರೂ ಇನ್ನೂ ಇಸ್ಪೀಟಿನಾಟ ಮುಗಿದಿರಲಿಲ್ಲ. ಛತ್ರದವರು ಜಮಖಾನೆಯನ್ನೂ ವಶಕ್ಕೆ ತೆಗೆದುಕೊಂಡ ಮೇಲೂ ನೆಲದ ಮೇಲೇ ಇನ್ನೊಂದಿಷ್ಟು ಕಾಲ ಆಟವನ್ನು ಮುಂದುವರೆಸುತ್ತಿದ್ದವರು ಸಂಜೆಯ ಕಾರ್ಯಕ್ರಮದವರು ತಮ್ಮ ಸರಕುಗಳನ್ನೆಲ್ಲಾ ತೆಗೆದುಕೊಂಡು ಬಂದು ಎಬ್ಬಿಸಿದಾಗ, ನಮ್ಮ ಕಡೆಯವರೆಲ್ಲರೂ ಛತ್ರ ಬಿಟ್ಟು ಬಹಳ ಸಮಯವಾಗಿದೆಯೆನ್ನುವುದನ್ನು ಮನಗಂಡು ಮನಸ್ಸಿಲ್ಲದ ಮನಸ್ಸಿನಿಂದ ಎದ್ದರಂತೆ! ಹಾಗೆ ಎಬ್ಬಿಸದೇ ʻಏನೋ ಪಾಪ ಆಡಿಕೊಂಡಿರಲಿʼ ಎಂದು ಬಿಟ್ಟಿದ್ದರೆ, ಆ ಮದುವೆ ಮುಗಿದದ್ದೂ ಗೊತ್ತಾಗುತ್ತಿರಲಿಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ! ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ|| ಡಿ. ಶಂಕರನಾರಾಯಣ್‌ ಅವರು ನನ್ನ ಅತ್ತೆಯ ಸ್ವಂತ ತಮ್ಮ, ನನ್ನ ಪತಿಗೆ ಸೋದರಮಾವ. ಅವರ ಓದುವ ಕಾಲದಲ್ಲಿ ನಮ್ಮ ಮಾವನವರು ಅವರಿಗೆ ತುಂಬಾ ಸಹಾಯ ಮಾಡಿದ್ದರಂತೆ. ದೆಹಲಿಯ ಯು.ಜಿ.ಸಿ.ಯಲ್ಲಿ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ಅವರು ಬೆಂಗಳೂರಿಗೆ ಬಂದಾಗೆಲ್ಲಾ ಅವರ ಕಛೇರಿಯ ಕೆಲಸವು ಮುಗಿದ ನಂತರ ಒಂದಷ್ಟಾದರೂ ಸಮಯವನ್ನು ಇಲ್ಲಿದ್ದ ಬಂಧುಬಾಂಧವರೊಡನೆ ಇಸ್ಪೀಟಾಟದಲ್ಲಿ ಕಳೆದು ತೆರಳುತ್ತಿದ್ದರು. ಅವರ ವೇಳಾಪಟ್ಟಿ ಸಕ್ಕರೆಯ ಜಾಡು ಹಿಡಿಯುವ ಇರುವೆಯಂತೆ ಪ್ರಿಯ ಬಂಧುಗಳೆಲ್ಲರಿಗೂ ತಿಳಿದು ಒಟ್ಟಾಗಿ ಸೇರಿ ಇಸ್ಪೀಟಿನ ಕಟ್ಟಿಗೆ ಬಂಧ ವಿಮೋಚನೆ ಮಾಡಿ ಆನಂದ ಮಹೋತ್ಸವವನ್ನು ಆಚರಿಸುತ್ತಿದ್ದರು. ಅಂತೆಯೇ ಆ ಕಾಲದಲ್ಲಿ ನಮ್ಮ ಬಂಧು, ಬಳಗದಲ್ಲಿ ಯಾರು ದೆಹಲಿಗೆ ಹೋದರೂ ಅವರ ಮನೆಯಲ್ಲೇ ವಾರ(ತಿಂಗಳು)ಗಟ್ಟಲೆ ಉಳಿದುಕೊಂಡು ದೆಹಲಿಯ ಸುತ್ತಮುತ್ತಲನ್ನು ನೋಡಿಕೊಂಡು ಬರುತ್ತಿದ್ದರು. ಬೆಳಗ್ಗೆಯೆಲ್ಲಾ ಪ್ರೇಕ್ಷಣೀಯ ಸ್ಥಳಗಳ ದರ್ಶನ; ಸಂಜೆಯಾಯಿತೆಂದರೆ ಇಸ್ಪೀಟ್‌ ರಾಣಿಯ ನರ್ತನ! ನನ್ನ ಮಾವನವರು ತೀರಿಕೊಂಡಾಗ ಈ ಸೋದರಮಾವ ದೆಹಲಿಯಿಂದ ಗುಬ್ಬಿಗೆ ಬಂದಿದ್ದವರು, “ವಾಸಣ್ಣ ಸತ್ತ ಜಾಗದಲ್ಲಿ ನಾವು ನಿದ್ದೆ ಮಾಡಿದರೆ ಅವನ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಹಾಗಾಗಿ ನಾವೆಲ್ಲರೂ ಕ್ರಿಯಾ ಕಲಾಪಗಳು ಮುಗಿದು ಈ ಕೋಣೆಗೆ ಬಾಗಿಲು ಹಾಕುವ ತನಕ (ಮಾವನವರು ಸತ್ತ ಘಳಿಗೆ ಕೆಟ್ಟ ನಕ್ಷತ್ರವಾದ್ದರಿಂದ ಐದು ತಿಂಗಳು ಬಾಗಿಲು ಹಾಕಬೇಕಿತ್ತು) ದುಃಖವನ್ನು ಮರೆತು, ದಣಿವರಿಯದೆ ಇಸ್ಪೀಟಾಡಿ, ತನ್ಮೂಲಕ ಗತಿಸಿದ ಹಿರಿಯರಿಗೆ ಗೌರವವನ್ನು ಕೊಡೋಣ” ಎನ್ನುವ ಠರಾವನ್ನು ಹೊರಡಿಸಿದರು. ಅಷ್ಟು ಹಿರಿಯರ ಬಾಯಿಂದ ಬಂದ ಅಂತಹ ಮುತ್ತಿನಂತ ಅದ್ಭುತ ಮಾತಿಗೆ ಎಂತಾದರೂ ಅಗೌರವವನ್ನು ಸೂಚಿಸಲಾದೀತೇ…?! ಸುಮಾರು ಮೂರ್ನಾಲ್ಕು ಚದುರಡಿಯಿರುವ ಆ ಕೋಣೆಯಲ್ಲಿ ಪಠಪಠಪಠಣ ಆರಂಭವಾಯಿತು. ನೆಂಟರು ಬಂದ ಹಾಗೆಲ್ಲಾ ವೃತ್ತ ದೊಡ್ಡದಾಗುತ್ತಾ ಹೋಯಿತು. ಆಟದ ಖಯಾಲಿಯಿರುವ ಒಬ್ಬಿಬ್ಬರು ಹೆಂಗಸರೂ ಹಿಂದೆ ಬೀಳದೆ ಸೇರಿಕೊಂಡರು. ಊರಿನ ಹಿರಿಯರು, ವಾಸಣ್ಣನ ಆತ್ಮೀಯರೂ ಕೈ ಹಾಕದಿದ್ದರೆ ಅಪಚಾರವಲ್ಲವೇ! ಅವರೂ ತಮ್ಮ ಸೇವೆ ಸಲ್ಲಿಸಲು ಎಲೆಗಳನ್ನು ಹಿಡಿದರು. ಹಿರಿಯರ ಜೊತೆಗೆ ಎಲೆಗಳನ್ನು ಹಿಡಿಯುವಷ್ಟು ದಾಷ್ಟ್ಯವಿಲ್ಲದಿದ್ದರೂ ಕಿರಿಯರೂ ತಮ್ಮ ಕೈಲಾದಷ್ಟು ಆಡಿ ಸತ್ತ ಹಿರಿಯ ಚೇತನಕ್ಕೆ ಶಾಂತಿ ಕೋರಬೇಡವೇ. ಅಲ್ಲೇ ಇನ್ನೊಂದು ಗುಂಪು ಹುಟ್ಟಿಕೊಂಡಿತು. ಹಾಗೆಯೇ ಮತ್ತೊಂದು ಗುಂಪಾಯಿತು. ಜಾಗ ಸಾಲದೆ ವಾಸಣ್ಣನ ಪ್ರತೀಕವಾಗಿ ಉರಿಯುತ್ತಿದ್ದ ದೀಪ ಜನ ಬಂದ ಬಂದ ಹಾಗೆ ನಿಧಾನವಾಗಿ ಸರಿ ಸರಿಯುತ್ತಾ ಅಂತೂ ಆ ದೊಡ್ಡ ಕೋಣೆಯ ಮೂಲೆಯಲ್ಲಿ ಜಾಗ ಮಾಡಿಕೊಂಡಿತು. ಅಂತೂ ಕಡೆಗೊಂದು ದಿನ ಕಿಟಕಿಯ ಕಟ್ಟೆಯನ್ನೇರಿ ಕುಳಿತು ಕೋಣೆಯ ತುಂಬಾ ಕೇಳುವ ಎಲೆಗಳ ಇನಿದಾದ ಶಬ್ದದ ಆನಂದಕ್ಕೆ ತಲೆತೂಗುತ್ತಾ ಸಾಕ್ಷಿಯಾಗತೊಡಗಿತು. ಹೀಗೆ ತನ್ನ ಪ್ರತಿಷ್ಠಿತ ತಮ್ಮನ ಸೂಚನೆಯ ಮೇರೆಗೆ ಬಂದವರೆಲ್ಲಾ ಗಂಡನ ಆತ್ಮಕ್ಕೆ ಎಷ್ಟೊಂದು ಹಿತವಾಗಿ, ಅವಿರತವಾಗಿ ಶಾಂತಿ ಕೋರುತ್ತಿರುವಾಗ ಪಾಪ ನಮ್ಮತ್ತೆ…, ಇದು ತನ್ನ ಗಂಡನ ಸಾವೆಂಬುದನ್ನೂ ಮರೆತು ಆಗಾಗ ಆ ಗುಂಪಿಗೆ ಕಾಫಿ ಬೆರಸಿಕೊಡುವುದಕ್ಕೆ ನಿಲ್ಲಬೇಕಾಯಿತು… ನಿಂತರು! ಎನ್ನುವುದು ನಮ್ಮ ಗುಬ್ಬಿಯ ಮನೆಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದೆ! ಅಂತೂ ನನ್ನ ಮಾವನವರ ಆತ್ಮಕ್ಕೆ ತೃಪ್ತಿಯಾಯಿತೇ? ಆಗಿರಬಹುದು…. ಏಕೆಂದರೆ ಇಸ್ಪೀಟಾಟದಿಂದ ಆಯಿತೋ ಇಲ್ಲವೋ, ಸದಾ ಮನೆತುಂಬ ಜನರಿರಬೇಕು ಎನ್ನುವುದು ಅವರ ಒಂದು ಸ್ಥಿರವಾದ ಆಸೆ. ಊಟ, ತಿಂಡಿಯ ಹೊತ್ತಿನಲ್ಲಿ ಅದೆಷ್ಟು ಊಟದೆಲೆ ಬೀಳುತ್ತಿತ್ತೋ ಅಷ್ಟು ಖುಷಿ ಅವರಿಗೆ. ಹಳೆಯ ತಲೆಮಾರಿನ ಅನಿರ್ಬಂಧಿತ, ಅಮಾಯಕ ಮುಗ್ಧ ಪ್ರೀತಿ, ವಿಶ್ವಾಸದ ಪ್ರತೀಕದಂತಿದ್ದವರಿಗೆ ಮನೆಯೆಲ್ಲಾ ಸದಾ ಗಿಲಿಗಿಲಿಗುಟ್ಟುತ್ತಿರಬೇಕು; ನಗುವಿಂದ ತುಂಬಿರಬೇಕು ಎನ್ನುವ ಮಹದಾಸೆ. ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ʻಕಾಫಿ ಬೇಕೆʼ ಎಂದು ಕೇಳಿ ಕೊಟ್ಟವರಲ್ಲ; ʻಈಗ ತಾನೆ ಕುಡಿದು ಬಂದೆ, ಬೇಡʼ ಎಂದರೂ ಅದು ನಿಮ್ಮನೆಯ ಕಾಫಿ, ನಮ್ಮನೆಯದು ಆಗಿಲ್ಲʼ ಎನ್ನುತ್ತಾ ʻಹೆಂಗಸರಿಗೆ ಅರಿಶಿನ ಕುಂಕುಮ ಕೊಡುವುದು ಎಷ್ಟು ಮುಖ್ಯವೋ, ಮನೆಗೆ ಬಂದವರಿಗೆ ಕಾಫಿ ಕೊಡುವುದೂ ಅಂತದೇ ಸತ್ಸಂಪ್ರದಾಯʼ ಎಂದು ಬಲವಾಗಿ ನಂಬಿ ಅಂತೆಯೇ ನಡೆದುಕೊಂಡಿದ್ದವರು. ಅವರು ಸತ್ತ ದಿನ ಐವತ್ತು ಲೀಟರ್‌ ಹಾಲು, ನಂತರ ದಿನವೂ ಮೂವತ್ತು ಲೀಟರ್ ಹಾಲು ಬರಿಯ ಕಾಫಿಗೇ ಖರ್ಚಾಯಿತು ಎಂದರೆ ಅವರಿಗೆ ಖಂಡಿತವಾಗಿಯೂ ತೃಪ್ತಿಯಾಗಿರಲೇ ಬೇಕು! ಕಾಫಿಯ ಕತೆಯೇ ಇಷ್ಟಾದರೆ, ಇನ್ನು ಊಟ, ತಿಂಡಿಯ ವಿವರಣೆ ಬೇಕಿಲ್ಲ ಅಂದುಕೊಳ್ಳುತ್ತೇನೆ. ಅಷ್ಟು ದಿನಗಳೂ ಭಾವಮೈದುನನ ವರಸೆಯವರಾದ ವೆಂಕಟರಾಮು ಆ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿ, ಅಡುಗೆಯ ಕೆಲಸವಾದ ನಂತರ ತಾವೂ ಮುಂದಿನ ಕೋಣೆಯ ಪವಿತ್ರ ಪತ್ರಗಳಿಗೊಂದು ಕೈಹಾಕಿ ತಮ್ಮ ಶ್ರದ್ಧಾಂಜಲಿಯನ್ನೂ ಅರ್ಪಿಸಿ ಕೃತಾರ್ಥರಾದರು!! “ಪಾಪ, ಅವನೂ ಸ್ವಲ್ಪ ಹೊತ್ತು ಆಡಲಿ” ಎನ್ನುವ ಸದುದ್ದೇಶದಿಂದ ಮರುದಿನಕ್ಕೆ ಬೇಕಾಗುವ ತರಕಾರಿಯನ್ನು ಮನೆಯ ಹೆಂಗಸರು ಹೆಚ್ಚಿ ಅಣಿಮಾಡಿ ಆತನ ಈ ಪವಿತ್ರ ಕೈಂಕರ್ಯಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ನಮ್ಮ ಅತ್ತೆಯ

ಎಲೆಗಳ ಬಲೆಯಲ್ಲಿ… Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ ಕಷ್ಟವೇ… ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಮತ್ತೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ. ನಾವು ಹಸುಗಳನ್ನ ಸಾಕ್ತೇವೆ, ಹೊತ್ತು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಿಸ್ತೇವೆ, ಅದು ಅಲ್ಲಿ ಹೋಗಬಾರದು, ಇಲ್ಲಿ ಮೇಯಬಾರದು ಹೀಗೆ ನಮಗೆ ಬೇಕಾದಂತೆ ಒಂದು ಚೌಕಟ್ಟಿನೊಳಗಿಟ್ಟು ಬೆಳೆಸ್ತೇವೆ. ನಮ್ಮ ಪ್ರಕಾರ ಅದು ಒಂದೂ ತಪ್ಪೇ ಮಾಡಿಲ್ಲ! ಆದರೆ ಬೀದಿಯ ದನ ಹಾಗಲ್ಲ, ಮನಸಿಗೆ ಬಂದ ಕಡೆ ಹೋಗ್ತದೆ, ಮನಸಿಗೆ ಬಂದದ್ದು ಮಾಡ್ತದೆ, ಮನಸಿಗೆ ಬಂದದ್ದನ್ನ ತಿನ್ತದೆ…. ಅದಕ್ಕೆ ಯಾವ ನಿರ್ಬಂಧಗಳಿಲ್ಲ. ಅದು ಗೋ ಮಾತೆ ಎಂದು ಪೂಜೆಗೆ ಸಲ್ಲುವ ಹೊತ್ತಲ್ಲೇ ಹೀನಾಮಾನವಾಗಿ ಒದೆ ಮತ್ತು ಬೈಗುಳಗಳನ್ನೂ ತಿಂದಿರುತ್ತದೆ. ಆದರೆ ಅದರ ಅನುಭವಗಳು ಎಷ್ಟು ಸಂಪದ್ಭರಿತ! ಅದರ ಬದುಕು ಅದೆಷ್ಟು ಸಂಪನ್ನ! ನಿಮಗೆ ಈ ಎರೆಡು ದನಗಳಲ್ಲಿ ಯಾವ ದನದ ಬದುಕು ಇಷ್ಟ ಎಂದು ಯಾರಾದರೂ ಒಂದು ವೇಳೆ ನಮ್ಮನ್ನು ಕೇಳಿದರೆ ನಮಗೆ ಬೀದಿ ದನದ ಬದುಕೇ ಇಷ್ಟ, ಆದರೆ ನಮ್ಮ ಆಯ್ಕೆ ಮಾತ್ರ ಸಾಕಿದ ದನ ಎಂದಾಗಿರುತ್ತದೆ. ಕಾರಣ ನಮಗೆ ಸಮಾಜವನ್ನು ಎದುರಿಸುದಾಗಲೀ, ಧಿಕ್ಕರಿಸುವುದಾಗಲೀ ಬೇಕಾಗೂ ಇಲ್ಲ, ಸಾಧ್ಯವೂ ಇಲ್ಲ ಹಾಗಾಗಿ. ಹಾಗಾಗಿಯೇ ನಾವು ಸಮಾಜದ ನಿರೀಕ್ಷೆಯ ಚಾಳೀಸು ತೊಟ್ಟು ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ  ಅದು ನಿರ್ಮಿಸಿಕೊಟ್ಟ ಚೌಟ್ಟಿನ ಒಳಗೇ ನೋಡಲು ಬಯಸುತ್ತೇವೆ. ಒಂದು ವೇಳೆ ಯಾರಾದರೂ ಅದನ್ನು ಮೀರಲು ಪ್ರಯತ್ನಿಸಿದರೆ ನಾವೇ ಮೊದಲಾಗಿ ಅವರ ಕಾಲು ಹಿಡಿದು ಹಿಂಜಗ್ಗುತ್ತೇವೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಅಷ್ಟೂ ಮಾತನ್ನು ಒಂದೂ ಬಿಡದಂತೆ ಆಡುತ್ತೇವೆ. ನಮ್ಮ ಮನಃಸಾಕ್ಷಿಗೆ ನಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬಿದ್ದ ತೋಳಕ್ಕೆ ಕಲ್ಲು ಬೀಸುವುದರಲ್ಲಿ ಸಿಗುವ ಸುಖ, ಒಣ ಆತ್ಮಸಾಕ್ಷಿಯ ಗೊಡ್ಡು ಉಪದೇಶಕ್ಕೆ ಕಿವಿಯಾಗುವುದರಲ್ಲಿ ನಮಗೆ ಖಂಡಿತಾ ಸಿಗಲಾರದು . ನನಗೆ ಸ್ವಾತಂತ್ರ್ಯ ಎಂದರೆ ಯಾವುದು ಮನುಷ್ಯತ್ವವನ್ನ ಮೀರುವುದಿಲ್ಲವೋ, ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೋ, ದುಷ್ಟ ಮತ್ತು ಕ್ರೂರ ಅಲ್ಲವೋ ಅದೆಲ್ಲವನ್ನೂ ನಾವು ಮಾಡಬಹುದು ಎಂದು. ಆದರೆ ಒಬ್ಬರ ರೆಕ್ಕೆಗಳನ್ನು ಕತ್ತರಿಸಿ ಹಾಕಿ ಅವರ ಹಾರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕಿಂತ ದೊಡ್ಡ ಕ್ರೂರತೆ ಮತ್ತೊಂದಿರಲಾರದು. ಆದಾಗ್ಯೂ ತಪ್ಪುಗಳು ಒಂದು ಹಂತದವರೆಗೆ ಮನುಷ್ಯನನ್ನು ಮಾಗಿಸುತ್ತವೆ. ತಪ್ಪು ಮಾಡಿದವನು ಒಳಗೊಳಗೆ ಗಟ್ಟಿಯಾಗುತ್ತಾ ಹೋಗುತ್ತಾನೆ. ಅವನ ಬದುಕಿನ ಪಾಠ ಅವನನ್ನು ವಜ್ರಕಠೋರವಾ ಗಿಸುತ್ತದೆ. ಅವನು ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಸದಾ ತಯಾರಿರುತ್ತಾನೆ. ತಪ್ಪುಗಳು ನಮಗೆ ಬದುಕನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು ತೋರಿಸಿಕೊಡುತ್ತವೆ, ನಮ್ಮ ಸರಿಗಳು ಬದುಕನ್ನು ಹೀಗೇ ನೋಡಬೇಕೆನ್ನುವ ದಾರಿಯ ನಿರ್ದಿಷ್ಟತೆಯನ್ನು ಮನಗಾಣಿಸುತ್ತವೆ. ನಮ್ಮ ತಪ್ಪುಗಳು ನಮಗಷ್ಟೇ ಅಲ್ಲದೆ ಇತರರಿಗೂ ಪಾಠವಾಗಬಲ್ಲವು. ಮತ್ತು ಇತರರ ತಪ್ಪುಗಳು ನಮ್ಮ ಪುಸ್ತಕದ ಪಾಠವೂ ಆಗಬೇಕು. ಆದರೆ ಕೆಲವೊಮ್ಮೆ ಅಮೂಲ್ಯ ಕ್ಷಣಗಳನ್ನು, ಅಮೂಲ್ಯ ವ್ಯಕ್ತಿಗಳನ್ನು ಸುಮಧುರ ಬಾಂಧವ್ಯವನ್ನು ನಮ್ಮ ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಡುತ್ತೇವಲ್ಲ ಅದು ಪರಮ ಯಾತನಾಮಯ… ಅದು ಯಾರಲ್ಲೂ ಹಂಚಿಕೊಂಡು ಹಗುರಾಗುವಂಥದ್ದಲ್ಲ. ನಮ್ಮಿಂದ ಅಪಾರವಾದದ್ದನ್ನು ನೀರೀಕ್ಷಿಸುವ, ನಮ್ಮನ್ನು ತಮ್ಮ ಬದುಕಿನ ಪರಮಾರ್ಥ ಎಂದು ತಿಳಿದವರನ್ನು ಧಿಕ್ಕರಿಸಿ ಹೊರಡುತ್ತೇವಲ್ಲ… ಆ ಕ್ಷಣದ ಬಗ್ಗೆ ನಿಜಕ್ಕೂ ಧಿಕ್ಕಾರವಿದೆ ನನಗೆ. ಒಂದು ಪ್ರೀತಿ, ಅಸಖ್ಖಲಿತ ಪ್ರೇಮ, ಪವಿತ್ರ ಸ್ನೇಹ, ಮಮತೆ ಅಂತಃಕರಣವೆಲ್ಲವನ್ನು ತಿರಸ್ಕರಿಸಿಬಿಡುತ್ತೇವಲ್ಲ… ಬಹುಶಃ ಆ ಒಂದು ಕ್ಷಣ ನಾವು ನಮ್ಮ ಹೃದಯದ ಮಾತುಗಳಿಗೆ ಕಿವುಡರಾಗಿಬಿಟ್ಟಿರುತ್ತೇವೆ. ಅದರಲ್ಲೂ ಆಯ್ಕೆಗಳಿದ್ದು ಒಂದನ್ನು ಮಾತ್ರ ಆರಿಸಬೇಕಾದ ಶರತ್ತಿದ್ದಾಗಲಂತೂ ಆರಿಸಿಕೊಂಡದ್ದರ ಸುಖವೇ ಅನುಭವಕ್ಕೆ ನಿಲುಕದಷ್ಟು ಕಳೆದುಕೊಂಡದ್ದರ ದುಃಖ ಆವರಿಸಿಬಿಟ್ಟಿರುತ್ತದೆ. ಆದರೆ ಬದುಕಿನ ನಿಯಮವೇ ಹಾಗಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಲೇಬೇಕು! ಆದರೆ ನಂಬಿಕೆಯನ್ನು ಕಳೆದುಕೊಳ್ಳುವುದಿದೆಯಲ್ಲ… ಅದು ನಮ್ಮ ಬದುಕಿನ ಬೇರನ್ನೇ ಅಲುಗಾಡಿಸಿಬಿಡುತ್ತದೆ. ಸರಿ ನಮ್ಮವರನ್ನು ಬಿಟ್ಟು ಹೊರಟಾದ ಮೇಲೆ ಏನಾದೆವು ಎಂದೊಮ್ಮೆ ಹಿಂತಿರುಗಿ ನೋಡಿದರೆ ನಮ್ಮ ಹೆಜ್ಜೆಗಳಷ್ಟೂ ಅವರೇ ಕಲಿಸಿದ ಸಂಸ್ಕಾರದಚ್ಚಿನಲ್ಲಿ… ಇವತ್ತು ನಾವೇನಾಗಿರುತ್ತೇವೋ ಅದಷ್ಟೂ ಅವರು ನೀಡಿದ ಶಿಕ್ಷಣ. ನಮ್ಮ ಬದುಕು ಮುನ್ನಡೆದದ್ದೇ ಅದರ ಸೂಚಕ. ಬಿಟ್ಟುಬಂದೆವೆಂದುಕೊಂಡದ್ದು ಸದಾ ಹಿಂಬಾಲಿಸುತ್ತಲೇ ಬಂದಿರುವುದು ಅರಿವಾಗಿಲ್ಲದ ಸತ್ಯ. ನಮ್ಮ ಪ್ರತಿ ಕೆಲಸದಲ್ಲೂ ಅವರು ನೆನಪಾಗುತ್ತಾರೆ. ನಮ್ಮ ಪ್ರತಿ ನಡೆ ನುಡಿಯಲ್ಲೂ ಅವರೇ ಅವರು ಕಾಣಿಸಿಕೊಂಡು ಹನಿ ನೀರಾಗಿ ಉರುಳುತ್ತಾರೆ. ಅವರೊಂದಿಗಿನ ಒಂದೊಂದು ಕ್ಷಣವೂ ಮುತ್ತುಗಳಾಗುತ್ತವೆ. ಹೊಳೆಯುತ್ತವೆ. ಕರೆಯುತ್ತವೆ. ನೆನಪಾಗಿ ತಬ್ಬುತ್ತವೆ. ಸಂತೈಸಿ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಡುವರಿಲ್ಲದೆ ಖಾಲಿ ಎದೆಯ ಮೀಂಟುವ ನೋವನ್ನು ಸಹಿಸಲಾಗದೆ ನರಳುವಾಗ ತಾವೂ ಮರುಗುತ್ತವೆ. ಅರಿತವರ ಮರೆತು ಸಾಗುವುದೆಂದರೆ ಸಳುಕು ಹಿಡಿದ ಎದೆಯನ್ನು  ಅಬ್ಬೊತ್ತಿಕೊಂಡು, ಬಾಯಿಗೆ ಬಟ್ಟೆ ತುರುಕಿ, ನಿಶ್ಯಬ್ಧವಾಗಿ ಬಿಕ್ಕುವುದು… ಇದರಿಂದ ಯಾರಿಗೆ ತಾನೆ ಮುಕ್ತಿ ಇದೆ… ನಾವೆಲ್ಲ ಪಕ್ಕಾ ವ್ಯಾಪಾರಿಗಳು. ಲೇವಾದೇವಿ ನಮಗೆ ಬಹಳ ಚನ್ನಾಗಿ ಗೊತ್ತು. ನಮಗೆ ಪ್ರೀತಿಗಿಂತಲೂ ಭೌತಿಕ ವಸ್ತುಗಳೇ ಬದುಕಿನ ಅನಿವಾರ್ಯ ಎನಿಸುತ್ತವೆ.  ಅತ್ಯಂತ ಹೆಚ್ಚು ಪ್ರೀತಿಸುವ ಜೀವ ಪಕ್ಕದಲ್ಲಿ ಇರುವಾಗಲೂ ಹಣ ಐಶ್ವರ್ಯ ಆಸ್ತಿ ಅಂತಸ್ತು ದೊಡ್ಡದು ಎನಿಸುತ್ತದೆ ನಮಗೆ. ಮತ್ತೀ ಸಮಾಜವಾದರೂ ಅದನ್ನೇ ಅನಿವಾರ್ಯವೆನ್ನಿಸಿಬಿಡುವಂತೆ ಮಾಡಿಬಿಡುತ್ತದೆ. ನಾವು ನಮ್ಮ ಆಂತರ್ಯಕ್ಕೆ ಪ್ರಿಯವಾಗುವ ಬದಲು, ದುಡ್ಡಿನ ಬಾಲ ಹಿಡಿಯಲು ಹೊರಟುಬಿಡುತ್ತೇವೆ. ಈಗ ನಮ್ಮಲ್ಲಿ ಬಹಳ ಒಳ್ಳೆಯ ಗಾದೆ ಮಾತುಗಳು ಹುಟ್ಟಿಕೊಳ್ಳುತ್ತವೆ, penny saved is a penny gained, ನಾವು ಉಳಿಸಿಟ್ಟ ಹಣವೇ ನಮ್ಮ ನಿಜವಾದ ಮಿತ್ರ, ತಾಮ್ರದ ಕಾಸು ಅಣ್ಣ ತಮ್ಮಂದಿರನ್ನೇ ಅಗಲಿಸಿತಂತೆ (ಅದಕ್ಕೆ, ಮೊದಲೇ ಅಣ್ಣ ತಮ್ಮಂದಿರು ದೂರ ದೂರ ಇದ್ದು ಬಿಡಬೇಕು!), ದುಡ್ಡಿದ್ದವನೇ ದೊಡ್ಡಪ್ಪ… ಇವೆಲ್ಲ ನಮ್ಮ ಬದುಕಿನ ಮೊಟ್ಟೋಗಳಾಗುವ ಹೊತ್ತಿನಲ್ಲಿ ದುಡ್ಡನ್ನು ಮೀರಿದ ಅನುಭೂತಿಯೊಂದು ಇದೆ ಮತ್ತು ಅದು ನಮ್ಮ ಬದುಕಿನ ಕೇಂದ್ರವಾಗಬೇಕಿದೆ ಎನ್ನುವ ದನಿ ಕೀರಲಾಗಿ ಭೌತಿಕದ ಧ್ವನಿವರ್ಧಕದ ಅಬ್ಬರದ ನಡುವೆ ಇಲ್ಲವೇ ಆಗಿಬಿಡುತ್ತಿರುವುದು ಸಂಕಟ ಉಂಟು ಮಾಡುತ್ತದೆ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅನುವಾದ

ಬೆಳೆಸಲಾಗದ ಮಕ್ಕಳು

ಅನುವಾದಿತ ಕಥೆ ಬೆಳೆಸಲಾಗದ ಮಕ್ಕಳು ತೆಲುಗು ಮೂಲ: ಸಿ.ಹೆಚ್.ವಿ. ಬೃಂದಾವನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ. ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. ಹಾಗೇ ಯೋಚಿಸಿ ತಾನಂತೂ ಒಂದು ನಿರ್ಣಯಕ್ಕೆ ಬಂದಾಗಿತ್ತು. ತನ್ನ ಗಂಡನ ಒಪ್ಪಿಗೆ ಮತ್ತು  ಪ್ರೋತ್ಸಾಹ ಇಲ್ಲದೆ ಬರೀ ತನ್ನ ನಿರ್ಣಯ ದಿಂದ ಏನು ನಡೆಯುತ್ತೆ ? ಈಗಿನ ತನ್ನ ಈ ಪರಿಸ್ಥಿತಿಗೆ ತಾನು ಹೇಗೆ ಬಂದೆ ಎಂಬುದು ಒಮ್ಮೆ ಪಾರ್ವತಿಯ ಮುಂದಕ್ಕೆ ಬಂದಿತು.            *     *     *      *     *     * ತಾನು ಕ್ರಿಸ್ಟಫರ್ ಮದುವೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದರು. ಆದರೇ ತಮ್ಮ ತಂದೆ ತಾಯಿಯರನ್ನು ಹೇಗೆ ಒಪ್ಪಿಸುವುದೋ ಗೊತ್ತಾಗಲಿಲ್ಲ. ಪಾರ್ವತಿ ಅವರದು ಒಂದು ಸಾಧಾರಣ ಕೆಳಮಟ್ಟದ ಕುಟುಂಬ. ತಂದೆ ಟೈಲರು. ತಾಯಿ ಒಂದು ಹಾಸ್ಟೆಲಿನಲ್ಲಿ ಆಯಾ ಆಗಿದ್ದಳು. ಅವರಿಬ್ಬರ ಸಂಪಾದನೆ ಸೇರಿಸಿದರೂ ಸಂಸಾರ ನಡೆಸಲು ಅಲ್ಲಿಂದಲ್ಲಿಗೆ ಸರಿ ಹೋಗುತ್ತಿತ್ತು. ಪಾರ್ವತಿ ಮನೆಗೆ ದೊಡ್ಡ ಮಗಳು. ಅವಳ ನಂತರ ಒಬ್ಬ ತಂಗಿ, ತಮ್ಮ. ಪಾರ್ವತಿ ಎಸ್ಸೆಸ್ಸಿ ಓದುವಾಗ ಕ್ರಿಸ್ಟಫರ್ ನ ಪರಿಚಯ ವಾಯಿತು. ಪಿಯುಸಿ ಮೊದಲನೆ ವರ್ಷ ಆ ಪರಿಚಯ ಹಾಗೇ ಮುಂದುವರೆದು ಪ್ರೀತಿಯಾಯಿತು. ಎರಡನೇ ವರ್ಷಕ್ಕೆ ಬಂದ ಮೇಲೆ ಮದುವೆಯಾಗ ಬೇಕೆಂಬ ಅಭಿಪ್ರಾಯ ಬೇರೂರಿ ಒಂದು ನಿರ್ಣಯಕ್ಕೆ ಬಂದರು ಇಬ್ಬರೂ. ಕ್ರಿಸ್ಟಫರ್ ಒಬ್ಬ ಮೆಕಾನಿಕ್. ಕರೆಂಟಿನ ಕೆಲಸ ದಿಂದ ಹಿಡಿದು, ಮೋಟಾರ್ ಗಳು, ಮೊಬೈಲ್ ಗಳು ಹೀಗೆ ಅವನು ಮಾಡದ ರಿಪೇರಿ ಕೆಲಸವೇ ಇರಲಿಲ್ಲ. ಕೈಯಲ್ಲಿ ಯಾವಾಗಲೂ ಕೆಲಸ ಇರುತ್ತಿತ್ತು. ಆತನ ವರಮಾನದಿಂದ ಮನೆ ನಡೆಯುವುದಕ್ಕೆ ಏನೂ ತೊಂದರೆಯಿರಲಿಲ್ಲ. ಹಾಗೇ ತಾನು ಸಹ ತಂದೆ ಹತ್ತಿರ ಟೈಲರ್ ಕೆಲಸ ಕಲೆತಿದ್ದಳು. ಒಂದು ಹೊಲಿಗೆ ಮಶೀನ ತಂದು ಮನೆಯಲ್ಲಿಟ್ಟುಕೊಂಡರೇ ತಾನು ಸುತ್ತ ಮುತ್ತ ಹೆಂಗಸರ ಮತ್ತು ಮಕ್ಕಳ ಬಟ್ಟೆ ಹೊಲೆಯಬಹುದು. ತನಗೇನೂ ಅಂಥಾ ದೊಡ್ಡ ಆಶೆಗಳಿರಲಿಲ್ಲ. ತನ್ನ ಮೆಚ್ಚಿದ ಕ್ರಿಸ್ಟೊಫರ್ ಜೊತೆ ಜೀವನ ಸಜಾವಾಗಿ ನಡೆದು ಹೋದರೇ ಸಾಕು ಎಂದುಕೊಂಡಿದ್ದಳು. ಆ ತರ ನಂಬಿಕೇನೂ ಪಾರ್ವತಿಗಿತ್ತು. ಆದರೇ ಇಬ್ಬರ ಕಡೆಯ ತಂದೆ ತಾಯಿ ಒಪ್ಪಲಿಲ್ಲ. ಆದರೂ ಇವರಿಬ್ಬರು ಮುಂದುವರೆದು ಮದುವೆ ಮಾಡಿಕೊಂಡು ಸಂಸಾರ ಹೂಡಿದರು. ಕ್ರಮೇಣ ದೊಡ್ಡವರು ಹಾದಿಗೆ ಬರುತ್ತಾರೆಂದು ಅವರ ನಂಬಿಕೆ ಯಾಗಿತ್ತು. ಅದೃಷ್ಟ ವಶಾತ್ ಅವರಿಗೆ ದೊಡ್ಡವರಿಂದ ಕಿರುಕುಳವಾಗಲೀ, ಬೆದರಿಕೆಯಾಗಲೀ ಏನೂ ಬರಲಿಲ್ಲ. ಬೇರೇ ಬೇರೇ ಧರ್ಮಕ್ಕೆ ಸೇರಿದವರಾದರೂ ಅವರ ಪ್ರೀತಿಯ ಮುಂದೆ ಅವು ಯಾವುದೂ ಅಡ್ಡಿ ಬರಲಿಲ್ಲ. ಹಾಗೆ ಅವರ ಸಂಸಾರಕ್ಕೆ ಆರು ವರ್ಷ ವಾಗಿತ್ತು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಹುಟ್ಟಿದರು. ಆದರೇ ಅವತ್ತು ನಡೆದ ಘಟನೆ ಅವರ ಜೀವನ ವನ್ನೇ ಬುಡಮೇಲು ಮಾಡಿತ್ತು. ಮಗ ಸ್ಕೂಲಿಗೆ ಹೋಗಿದ್ದ. ಮೂರು ವರ್ಷದ ಮಗಳೊಂದಿಗೆ ಪಾರ್ವತಿ ಮುಂದಿನ ಕೋಣೆಯಲ್ಲಿ ಕೂತಿದ್ದಳು. ಒಳಗೆ ಕ್ರಿಸ್ಟಫರ್ ಗ್ಯಾಸ್ ಒಲೆಗೆ ಏನೋ ರಿಪೇರಿ ಮಾಡ್ತಿದ್ದ. ಇದ್ದಕ್ಕಿದ್ದಹಾಗೇ ಗ್ಯಾಸ್ ಸಿಲಿಂಡರ್ ಸಿಡಿದು, ಕ್ರಿಸ್ಟಫರ್ ಗೆ ಮೈಯೆಲ್ಲಾ ಸುಟ್ಟು ಅವನು ಚೀರಿದ ಶಬ್ದಕ್ಕೆ ತಾನು ಒಳಗೆ ಹೋದಳು. ತಕ್ಷಣ ಕ್ರಿಸ್ಟಫರನ್ನು ಆಸ್ಪತ್ರೆ ಗೆ ಸೇರಿಸಿದರು. ಪ್ರಾಣಾಪಾಯ ವಿಲ್ಲದಿದ್ದರೂ ಅವನ ಮುಖ, ಎದೆ, ಕೈ ಎಲ್ಲಾ ಸುಟ್ಟಿದ್ದು ಅವುಗಳೆಲ್ಲಾ ಮಾಯಲು ಕೆಲ ಸಮಯವೇ ಹಿಡಿಯಿತು. ಆ ಆರೆಂಟು ತಿಂಗಳು ಪಾರ್ವತಿ ನರಕ ಬಾಧೆ ಅನುಭವಿಸಿದಳು. ಮಕ್ಕಳನ್ನು ನೋಡಿಕೊಳ್ಳುವುದು, ಆಸ್ಪತ್ರೆಗೆ ಹೋಗುವುದು, ಗಂಡನ ಆರೈಕೆ, ಮನೆ ಖರ್ಚು, ಆಸ್ಪತ್ರಿಯ ಖರ್ಚು- ಇವೆಲ್ಲವುಗಳಿಂದ  ಪಾರ್ವತಿ ಭಯಂಕರವಾದ ನೋವು ಅನುಭವಿಸಿದಳು. ಹೇಗೋ ಪ್ರಾಣದೊಂದಿಗೆ ಹೊರಬಿದ್ದ ಕ್ರಿಸ್ಟೊಫರ್. ಕೆಲಸ ಮುಂದುವರೆಸಲು ಕೈಗಳು ಸಹಕರಿಸುತ್ತಿರಲಿಲ್ಲ. ತುಂಬಾ ಸಾಲ ಮಾಡಿಯಾಗಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಒಬ್ಬ ಲೇಡೀ ಡಾಕ್ಟರ್ ತನ್ನ ನರ್ಸಿಂಗ್ ಹೋಮಿನಲ್ಲಿ ಆಯಾ ಕೆಲಸ ಕೊಟ್ಟರು. ದಿನ ಕಳೆಯುತ್ತಿದ್ದವು. ಇಪ್ಪತ್ತೈದು ವರ್ಷ ತುಂಬುವ ಮುನ್ನವೇ ಪಾರ್ವತಿ ಕಹಿ ಅನುಭವಗಳ ಮೂಟೆ ಹೊತ್ತಿದ್ದಳು. ಎದೆಗಾರಿಕೆಯಿಂದ ಪರಿಸ್ಥಿತಿಗಳನ್ನು ಎದುರಿಸಿದಳು. ಕ್ರಿಸ್ಟೊಫರ್ ಗೆ ಕೂಡ ಅವಳಮೇಲೇ ಅತೀವ ಪ್ರೀತಿ, ಗೌರವ ಉಂಟಾಗಿತ್ತು. ಮನೆ ನಡೆಸಲು, ಮಕ್ಕಳನ್ನು ಓದಿಸಲು, ಕ್ರಿಸ್ಟೋಫರ್ ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಎಲ್ಲದಕ್ಕೂ ಹಣ ಬೇಕು. ಹಣ!  ಹಣ! ಹಣ! ಅದು ತಮ್ಮ ಶಕ್ತಿಗೆ ಮೀರಿತ್ತೆಂದು ಅವರಿಬ್ಬರಿಗೂ ಗೊತ್ತಿತ್ತು. ಅಂಥಾ ಸಮಯದಲ್ಲಿ ಪಾರ್ವತಿ ಕೆಲಸ ಮಾಡುವ ಆಸ್ಪತ್ರಿಯ ಡಾಕ್ಟರ್ ಅವಳ ಮುಂದೆ ಒಂದು ಪ್ರಸ್ತಾವ ವಿಟ್ಟಳು. ಅದು ಕೇಳಿದ ಪಾರ್ವತಿ ಬೆರಗಾದಳು. “ನಿನ್ನ ಊಹೆಗೂ ನಿಲುಕದಷ್ಟು ಹಣ ಬರುತ್ತದೆ. ಯೋಚಿಸು! ನಿನಗೆ ಈಗ ತುಂಬಾ ಹಣದ ಆವಶ್ಯಕತೆ ಇದೆ” ಅಂದಳು ಡಾಕ್ಟರ್. “ಇದು ತಪ್ಪಲ್ವಾ ಡಾಕ್ಟ್ರೇ? ಎಷ್ಟು ಹಣದ ಅಡಚಣೆ ಇದ್ರೂ …. ಇಂಥಾ ಕೆಲಸ ಮಾಡೋದು ನ್ಯಾಯವೇನಾ?” ಅಂದಳು ಪಾರ್ವತಿ. ” ಇದರಲ್ಲಿ ತಪ್ಪಾಗಲೀ, ನೀತಿಬಾಹಿರತನವೇನೂ ಇಲ್ಲ ಪಾರ್ವತೀ ! ಹೆಂಗಸರಿಗೆ ಮುವ್ವತ್ತೈದು ವರ್ಷದ ವರೆಗೂ ಗರ್ಭ ಧರಿಸುವ ಶಕ್ತಿ ಇರುತ್ತದೆ. ನಿನಗಿನ್ನೂ ಇಪ್ಪತ್ತೇಳು. ಕಷ್ಟ ಜೀವಿಯಾದ ಕಾರಣ ಮೈಕೈ ಗಟ್ಟಿಯಾಗಿದೆ. ಯಾವ ತರದ ಪ್ರಮಾದವೂ ಇರುವುದಿಲ್ಲ. ಎರಡು ಲಕ್ಷ ಕೊಡ್ತೇವೆ ಅಂತಿದಾರೆ. ನಿನ್ನ ಕಷ್ಟ ಎಲ್ಲಾ ಕಳೆದುಹೋಗತ್ತೆ. ಒಪ್ಪಿಕೋ ” ಅಂದರು ಡಾಕ್ಟರ್. ಪಾರ್ವತಿ ಇನ್ನೂ ಸಂಶಯ ಪಡ್ತಾನೇ ಇದ್ರೆ ” ನಿನಗೇನಾದ್ರೂ ಮಾಡಬಾರದ ಕೆಲಸ ಮಾಡು ಅಂತ ಹೇಳ್ತಾ ಇದೀನಾ ಪಾರ್ವತೀ ? ಗಂಡನಿಗೆ ಗೊತ್ತಿಲ್ಲದ ಹಾಗೆ ಹಾದರ ಮಾಡ್ಲಿಕ್ಕೆ ಹೇಳ್ತಿದೀನಿ ಅಂತ ತಿಳಿದಿದ್ದೀ ಏನೋ ? ಇದಕ್ಕೆ ನಿನ್ನ ಗಂಡನ ಒಪ್ಪಿಗೆ ಬೇಕೇ ಬೇಕು. ಆತನ್ನ ಕರ್ಕೊಂಡು ಬಾ. ನಾನು ಮಾತಾಡ್ತೀನಿ. ” ಅಂದರು ಡಾಕ್ಟರ್. “ನನ್ನ ಗಂಡನ ಜೊತೆ ಮಾತಾಡ್ತೀನಿ ” ಅಂದಳು ಪಾರ್ವತಿ. ಈಗ ಅದೇ ವಿಷಯ ಗಂಡನ ಹತ್ತಿರ ಹೇಳಿ ಆತನ ಮುಖ ನೋಡಸಾಗಿದಳು ಪಾರ್ವತಿ. ಅವನಿಗೆ ಹೇಳುವ ಮುಂಚೆ ಎರಡು ದಿನ ತನ್ನಲ್ಲೇ ತೀವ್ರ ವಾಗಿ ಆಲೋಚನೆ ಮಾಡಿದ್ದಳು ಪಾರ್ವತಿ. ಮೊದಲಿನ ಅಚ್ಚರಿಯ ಕ್ಷಣಗಳ ನಂತರ ಕ್ರಿಸ್ಟಫರ್ ಸಹ ಯೋಚಿಸಿ “ಡಾಕ್ಟರಮ್ಮ ಏನೂ ನಮ್ಮನ್ನು ಮಾಡಬಾರದ ಕೆಲಸ ಮಾಡಲು ಹೇಳುವುದಿಲ್ಲ ಅಲ್ಲಾ ? ಯಾವುದಕ್ಕೂ ಅವರ ಜೊತೆ ಮಾತಾಡೋಣ… ಅವರು ಏನು ಹೇಳ್ತಾರೋ ಕೇಳೋಣ. ಇವತ್ತು ಸಂಜೆ ಹೋಗೋಣ. ” ಅಂದ. ಡಾಕ್ಟರರ್ ಎದುರಿನಲ್ಲಿ ಪಾರ್ವತಿ ಮತ್ತು ಕ್ರಿಸ್ಟಫರ್ ಕೂತಿದ್ದಾರೆ. ಮುಖ ವೆಲ್ಲಾ ಸುಟ್ಟುಹೋಗಿ, ವಿಕಾರವಾಗಿದ್ದ ಕ್ರಿಸ್ಟಫರ್ ತಲೆ ಅಡಿ ಹಾಕಿ ತುಂಬಾ ಆತ್ಮ ನ್ಯೂನತಾ ಭಾವದಿಂದ ಕೂತಿದ್ದಾನೆ. “ನೀನ್ಯಾಕೆ ತಲೆ ತಗ್ಗಿಸಿ ಕೂತಿದ್ದೀಯಾ ಕ್ರಿಸ್ಟಫರ್ ? ನೀನೊಬ್ಬ ಶ್ರಮಜೀವಿ. ಅಕಸ್ಮಾತ್ತಾಗಿ ಅಪಘಾತವಾಗಿದೆ. ಅಪಘಾತ ಯಾರ ಜೀವನದಲ್ಲಾದ್ರೂ ಆಗಬಹುದು. ಹಾಗಂತ ನೀವಿಬ್ಬರೂ ಕುಂದದೇ ಪರಿಸ್ಥಿತಿಗಳನ್ನ ಎದುರಿಸಿದ್ದೀರಿ. ಇಬ್ಬರಿಗೂ ಮತ್ತೊಬ್ಬರ ಮೇಲೆ  ಅನುರಾಗ, ಆಪೇಕ್ಷೆ ಇದೆ. ನಿಮ್ಮ ಸಂಸಾರ ನೋಡಿದರೇ ನನಗೇ ಮೆಚ್ಚುಗೆಯಾಗತ್ತೆ. ನಿಮಗೆ ಹೇಗಾದರು ಸಹಾಯ ಮಾಡಬೇಕು ಅಂತ ಅಂದುಕೊಂಡು ಈ ವಿಷಯ ಪಾರ್ವತಿಗೆ ಹೇಳಿದೆ. ನಿಮಗೂ ಹೇಳ್ತೀನಿ ಕೇಳಿ. ಐರ್ಲಂಡಿನ ಇಬ್ಬರು ದಂಪತಿಗಳು ನನ್ನ ಹತ್ತಿರ ಬಂದಿದ್ದಾರೆ. ಅವರಿಗೆ ಮದುವೆಯಾಗಿ ಒಂಬತ್ತು ವರ್ಷವಾದ್ರೂ ಮಕ್ಕಳಾಗಿಲ್ಲ. ಶಾಸ್ತ್ರೀಯವಾದ ಕೃತ್ರಿಮ ಪದ್ಧತಿಯ ಮೂಲಕ ಸಂತಾನ ಪಡೆಯಲು ನನ್ನ ಹತ್ತಿರ  ಬಂದಿದ್ದಾರೆ. ತುಂಬಾ ಶ್ರೀಮಂತರು. ಆ ಹೆಂಗಸಿಗೆ ಗರ್ಭಧಾರಣವಾಗುವ ಅವಕಾಶವಿಲ್ಲ. ಆದಕಾರಣ ಇತರೆ ಹೆಂಗಸಿನ ಗರ್ಭದಿಂದ ಸಂತಾನ ಹೊಂದಲು ನಿಶ್ಚಯಿಸಿದ್ದಾರೆ. ಈ ಪದ್ಧತಿಯಲ್ಲಿ ಗರ್ಭ ಧರಿಸುವ ಹೆಣ್ಣಾಗಲೀ, ಗಂಡಾಗಲೀ ಒಬ್ಬರನ್ನೊಬ್ಬರು ಹತ್ತಿರವಾಗುವ ಆವಶ್ಯಕತೆ ಇರುವುದಿಲ್ಲ.  ಆತನ ಜನ್ಯು ಕಣಗಳನ್ನ ಟೆಸ್ಟ್ ಟ್ಯೂಬಿನಲ್ಲಿ ಶೇಕರಣೆ ಮಾಡಿ ಪಾರ್ವತಿಯ ಗರ್ಭದಲ್ಲಿ ಫಲದೀಕರಣದ ಸಲುವಾಗಿ ಇಡಲಾಗುತ್ತೆ. ನಂತರ ಪಾರ್ವತಿ ಒಂಬತ್ತು ತಿಂಗಳು ಆ ಮಗುವನ್ನ ಹೊತ್ತು, ಹೆತ್ತು ಅವರಿಗೆ ಕೊಡಬೇಕಾಗುತ್ತೆ. ಈ ಕೆಲಸಕ್ಕೆ ನಾನು ಹೇಳಿದ್ರೇ ತುಂಬಾ ಜನ ಮುಂದೆ ಬರ್ತಾರೆ. ನೀವು ಬಡತನದಲ್ಲಿದೀರಿ ಮತ್ತು ಪಾರ್ವತಿ ಗಟ್ಟಿ ಮುಟ್ಟು ಹೆಂಗಸು ಮತ್ತೆ ಇದರಲ್ಲಿ ಯಾವ ತರದ ಅಪಾಯ ಏನೂ ಇಲ್ಲಾದ್ದರಿಂದ ನಾನು ನಿಮಗೆ ಹೇಳಿದೀನಿ. ಇನ್ನು ನಿಮ್ಮಿಷ್ಟ. ಇದರಲ್ಲಿ ಸೆಂಟಿಮೆಂಟಾಗಲೀ, ನೀತಿ ಬಾಹಿರತನವಾಗಲೀ, ಗುಟ್ಟಾಗಲೀ ಏನೂ ಇಲ್ಲ. ಆಲೋಚನೆ ಮಾಡಿ.” ಎಂದರು ಡಾಕ್ಟರ್ ಉಮ. “ನಾವು ಸಹ ಆಲೊಚನೆ ಮಾಡಿಯೇ ಬಂದಿದ್ದೇವೆ. ನಮಗೆ ಒಪ್ಪಿಗೆ ಇದೆ ” ಎಂದರು ಪಾರ್ವತಿ ಕ್ರಿಸ್ಟಫರ್. “ಗುಡ್. ಅವರು ನಿಮಗೆ ಇಪ್ಪತ್ತೈದು ಸಾವಿರ ಮುಂಗಡವಾಗಿ ಕೊಡುತ್ತಾರೆ. ಗರ್ಭ ಕಟ್ಟಿದೆ ಅಂತಾದ ಮೇಲೆ ಐವತ್ತು ಸಾವಿರ ಕೊಡ್ತಾರೆ. ಮಗುವನ್ನು ಅವರಿಗೆ ಒಪ್ಪಿಸಿದ ಮೇಲೆ ಉಳಿದದ್ದು ಕೊಡ್ತಾರೆ. ಇದರ ಮಧ್ಯದಲ್ಲಿ ಪಾರ್ವತಿಯ ಆಹಾರ ಮತ್ತು ವೈದ್ಯಕೀಯ ಖರ್ಚೆಲ್ಲಾ ಅವರೇ ನೋಡಿಕೊಳ್ತಾರೆ. ನೀವಿನ್ನು ನಿಶ್ಚಿಂತಾರಾಗಿರಿ.” ಎಂದರು ಡಾಕ್ಟರ್ ಉಮ.                                    *   *   *   *   * ಎಲ್ಲಾ ಅಂದುಕೊಂಡ ಹಾಗೇ ಆಯಿತು. ಒಂಬತ್ತು ತಿಂಗಳೂ ಒಳ್ಳೆ ಆಹಾರ, ವೈದ್ಯಕೀಯ ನೆರವು ಮನಸಾರೆ ಕೊಡಿಸಿದರು ಆ ಐರಿಷ್ ದಂಪತಿಗಳು. ಡಾಕ್ಟರ್ ಉಮ ಸಹ ತುಂಬಾ ಮುತುವರ್ಜಿಯಿಂದ ಪ್ರಸವವನ್ನು ಮಾಡಿಸಿದರು. ಮಗುವನ್ನು ಪಾರ್ವತಿ ಕೈಯಿಂದಲೇ ಆ ದಂಪತಿಗಳಿಗೆ ಕೊಡಿಸಿದರು. ಅವರು ಮಾತು ಕೊಟ್ಟ ಹಾಗೇ ಅವರಿಂದ ಹಣ ಕೊಡಿಸಿದರು. ಪಾರ್ವತಿ ಮಾತ್ರ ಹಣವನ್ನು ಕ್ರಿಸ್ಟಫರ್ ಗೆ ಕೊಟ್ಟು, ಒಂಬತ್ತು ತಿಂಗಳು ತನ್ನ ಶರೀರದ ಭಾಗವಾಗಿದ್ದು, ತನ್ನ ರಕ್ತದಲ್ಲಿ ರಕ್ತವಾಗಿದ್ದು, ತನ್ನ ಕರುಳಿನ ಬಳ್ಳಿಯಗಿ ಹೊರಗೆ ಬಂದ ಆ ಮಗುವನ್ನ ತದೇಕವಾಗಿ ನೋಡುತ್ತಾ, ಕಣ್ಣೀರಿನೊಂದಿಗೆ ಆ ದಂಪತಿಗಳಿಗೆ ಒಪ್ಪಿಸುತ್ತಾ ಅವರ ಕಡೆಗೆ ನೋಡಿದಳು. ಅವರಿಬ್ಬರೂ ಮಗುವನ್ನ ಪಡೆದ ಆನಂದದಲ್ಲಿ, ಅತ್ತ ಡಾಕ್ಟರರನ್ನಾಗಲೀ, ಇತ್ತ ತನ್ನನ್ನಾಗಲೀ ನೋಡದೇ, ಮಗುವಿನ ಕಡೆಗೇ ನೋಡ್ತಾ ಮಗುವನ್ನ ತೆಗೆದುಕೊಂಡರು. ಕಥೆ ಸುಖಾಂತವಾಯಿತು.                          * * * * * * * * * * * * * * * ಒಂದು ವರ್ಷ ಕಳೆದ ನಂತರ ಡಾಕ್ಟರ್ ಉಮ ಪಾರ್ವತಿ ಯನ್ನ ಕೇಳಿದರು. “ಮತ್ತೊಂದು ಇಂಥ ಕೇಸು ಬಂದಿದೆ. ಒಪ್ಕೊತಿಯಾ ಪಾರ್ವತಿ ” ಅಂತ. ಪಾರ್ವತಿ ಚಿಕ್ಕ ಮುಖ ಮಾಡಿಕೊಂಡು ” ನಮ್ಮವರನ್ನು ಕೇಳಿ ಹೇಳ್ತೀನಿ ” ಅಂದಳು. ಈಗ ಪಾರ್ವತಿಗೆ ಹಣದ ಅಡಚಣೆ ಇಲ್ಲ. ಬಂದ ಹಣದಲ್ಲಿ ಸಾಲವೆಲ್ಲಾ ತೀರಿಸಿದರು. ಕ್ರಿಸ್ಟಫರ್ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದ್ದು, ಅವನು ತನ್ನ ಮಾಮೂಲಿನ ಕೆಲಸ ಮಾಡಿಕೊಳ್ಳುತ್ತಾ ಚೆನ್ನಾಗೇ ಹಣ ಗಳಿಸ್ತಿದ್ದ. ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಪಾರ್ವತಿ ಆಸ್ಪತ್ರಿಯಲ್ಲಿ ತನ್ನ ಕೆಲಸ ಮುಂದುವರೆಸಿದ್ದಳು. “ಯಾಕೆ ? ನಿನ್ನ ಆರೋಗ್ಯ ಚೆನ್ನಾಗಿದೆ. ಇನ್ನೊಂದು ಹೆರಿಗೆ ತಡೆದುಕೊಳ್ಳುವ ಶಕ್ತೀನೂ ಇದೆ. ಒಪ್ಪಿಕೋ” ಅಂದರು ಡಾಕ್ಟರ್. “ನಮ್ಮವರನ್ನ ಕೇಳ್ಬೇಕು” ಪಾರ್ವತಿ ಇನ್ನೂ ಅನುಮಾನಿಸುತ್ತಲೇ ಇದ್ದಳು. “ಚೆನ್ನಾಗಿ ಹಣ ಬರುತ್ತೆ. ಒಳ್ಳೆ ಲಾಭಾನೇ

ಬೆಳೆಸಲಾಗದ ಮಕ್ಕಳು Read Post »

ಕಾವ್ಯಯಾನ

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************

ಗುಪ್ತಗಾಮಿನಿ Read Post »

ಕಾವ್ಯಯಾನ

ಮಾಗಿಯ ಪದ್ಯಗಳು

ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************

ಮಾಗಿಯ ಪದ್ಯಗಳು Read Post »

You cannot copy content of this page

Scroll to Top