ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅಸಾಮಾನ್ಯದ ವ್ಯಕ್ತಿ ಚಿತ್ರ ಇವನು… ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ  ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ,  ದನಾಕ್ಕೆ, ತಿಪ್ಪೆ, ಬಾರುಕೋಲು, ಹಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ. ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ,ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ. ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ , ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆವಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಂದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ. ಒಮ್ಮೆ ದೊಡ್ಡಪ್ಪನ ಮಗನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪ ದೊಡ್ಡಮ್ಮನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದನೆಂಬ ನೆನಪು. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ… ಮತ್ತು ನಿಜವೆಂದು ಹೇಳಲಾರೆನೇನೋ… ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟಧಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದ. ಅದಕ್ಕೆ ಮೊಮ್ಮೊಕ್ಕಳ ಮದುವೆಗೆ ಎನ್ನುವ ಹೆಸರಿಟ್ಟು ಹೋಗಿದ್ದ. ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲಾ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಊರು ತುಂಬ ಇದ್ದ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದ ಅದು ಬೇರೆ ಮಾತು. ಚಿಕ್ಕವಳಿದ್ದಾಗ  ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು. ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ಆದರೆ ಅಜ್ಜಯ್ಯ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು. ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿತ್ತಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿರುತ್ತಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತಿತ್ತು. ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬುಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಸಿದ್ಧಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ. ಒಂಥರಾ ಸಂಕಟ…. ಅಜ್ಜಯ್ಯ ಒಂಥರಾ ಶಿಸ್ತಿನ ಸಿಪಾಯಿ.  ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೇಳಿ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಕಣದ ಕಡೆ ಹೊರಟು ಬಿಡುತ್ತಿದ್ದ. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ,  ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ. ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದನಂತೆ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಅದನ್ನವನು ತನ್ನ ಪ್ರಾಣಕ್ಕು ಮಿಗಿಲಾಗಿ ಜೋಪಾನ ಮಾಡಿಟ್ಟುಕೊಂಡಿದ್ದ. ಎಷ್ಟೊಂದು ಕುತೂಹಲ ಅದನ್ನು ತೆರೆದು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ. ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ-೧೨. ಚದುರಿದ ಚಿತ್ರಗಳಲ್ಲೇ ಅರಳುವ ಹೂವುಗಳಂಥ ನರಸಿಂಹ ವರ್ಮ ಕವಿತೆಗಳು ವಿಟ್ಲದ ನರಸಿಂಹ ವರ್ಮ “ಆಕಾಶದ ಚಿತ್ರಗಳು” ಹೆಸರಿನ ಕವನ ಸಂಕಲನವನ್ನು ೨೦೧೯ರಲ್ಲಿ ಪ್ರಕಟಿಸುವುದರ ಮೂಲಕ ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಕವಿತೆಗಳಲ್ಲಿ ಹುಡುಕಿದರೂ ವಾದ ವಿವಾದಗಳಾಗಲೀ, ವ್ಯವಸ್ಥೆಯ ಪರ ಅಥವ ವಿರೋಧದ ನಿಲುವಾಗಲೀ ಇಲ್ಲದೇ ಇರುವುದು ವಿಶೇಷ. ಜೊತೆಗೇ ವರ್ತಮಾನದ ಸಂಗತಿಗಳಿಗೆ ಥಟ್ಟನೆ ಪ್ರತಿಕ್ರಯಿಸಿ ಪದ್ಯವೊಂದನ್ನು ಹೊಸೆಯುವ ಅವಸರದ ಧಾವಂತ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರವೊಂದನ್ನು ಮೇಲೆತ್ತುವ ಅಥವ ಇನ್ನಿಲ್ಲದಂತೆ ಅದನ್ನು ಆಕ್ಷೇಪಿಸುವ ರೀತಿಯಿಂದಲೂ ಅವರು ಮುಕ್ತರು. ಮತ್ತು ಆ ಕಾರಣದಿಂದಲೇ ಅವರು ಪ್ರಕಟಿಸುವ ಕವಿತೆಗೆ ಚಿದ್ವಿಲಾಸದ ಬಗ್ಗೆ ಅನನ್ಯ ಕಕ್ಕುಲತೆ ಮತ್ತು ಇಬ್ಬಂದಿತನದ ಬಗ್ಗೆ ವಿಶೇಷ ಕಾಳಜಿ. ಪ್ರಾಯಶಃ ಈ ಕಾರಣಕ್ಕೇ ನರಸಿಂಹ ವರ್ಮರ ಕಾವ್ಯ ಕೃಷಿಗೆ ವರ್ತಮಾನದ ಸಂಗತಿಗಳಿಗಿಂತಲೂ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಸಾದೃಶ ಪ್ರತಿಮೆಗಳಾಗಿ ಅವರ ಕವಿತೆಗಳ ವಕ್ತಾರಿಕೆಯನ್ನೂ ನಿಭಾಯಿಸುತ್ತವೆ.‌ ಮತ್ತು ಈ ಇದೇ ಕಾರಣಕ್ಕಾಗಿ ಜನ್ಮತಃ ಇರುವ ರಾಜಮನೆತನದ ಪ್ರಭಾವಳಿಯನ್ನು ಕಳಚಿಟ್ಟು ಸಾಮಾನ್ಯನಾಗಿ ನಡೆದು ಹೋದ ತಥಾಗತ ಬುದ್ಧನ ಹಾದಿ ಇವರಿಗೆ ಪ್ರಿಯವಾದುದಾಗಿದೆ. ಅವರ ಕವಿತೆಗಳು ಒಂದು ಸಾಮಾಜಿಕ ಚೌಕಟ್ಟು ಅಥವ ಬಂಧಗಳಿಂದ ದೂರ ಇರುವ ಕಾರಣ ಅವರ ಕವಿತೆಗಳಲ್ಲಿ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕ ದರುಶನಗಳು ಪ್ರಕಟವಾಗುತ್ತವೆ. ಯಾವ ಕವಿ ಸತತ ಅಧ್ಯನಶೀಲನಾಗಿ ಇರುತ್ತಾನೆಯೋ ಅವನು ಯಾವತ್ತೂ ಯಾರನ್ನಾಗಲೀ ಅಥವ ಯಾವ ಒಂದು ನಿರ್ದಿಷ್ಟ ವಾದಕ್ಕಾಗಲೀ ಕಟ್ಟು ಬೀಳದೇ ಸ್ವತಃ ಸೃಜಿಸಿದ ಅನುಭವದ ಮೂಸೆಗಳಲ್ಲಿ ತನ್ನ ಅನಿಸಿಕೆಗಳನ್ನು ಬೆರೆಸಿ ಲೋಕದ ಕಣ್ಣಿಗೆ ಹಿಡಿಯುತ್ತಾನೆ. ಆ ಲೋಕವು ಹೀಗೇ ಇದೆ ಎಂದಾಗಲೀ ಹೀಗೇ ಇರಬೇಕು ಎಂಬ ವಾದವಾಗಲೀ ಆ ಅಂಥ ಜಿಜ್ಞಾಸುವಿಗೆ ಇರುವುದಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ, ಒಪ್ಪುವುದು ಬಿಡುವುದು ಲೋಕದ ಸಂಗತಿ ಎಂದು ಮುಂದುವರೆಯುತ್ತಾನೆ. ಲೋಕ ಒಪ್ಪಿದರೂ ಅಷ್ಟೆ, ಒಪ್ಪದೇ ಇದ್ದರೂ ಅಷ್ಟೆ. ಲೋಕಾಂತದ ಅಗ್ನಿದಿವ್ಯಗಳನ್ನು ಅನುಲಕ್ಷಿಸದೇ ತನ್ನ ಪಾಡಿಗೆ ತಾನಿರುವ ನರಸಿಂಹ ವರ್ಮರಂತೆಯೇ ಅವರ ಪದ್ಯಗಳಲ್ಲೂ ಅಂಥದೇ ವಿವೇಕ ಸದಾ ಸರ್ವದಾ ಜಾಗೃತವಾಗಿರುವುದನ್ನು ಓದುಗ ಗಮನಿಸಬಹುದು. ಈ ಮಾತಿಗೆ ಉದಾಹರಣೆಯಾಗಿ ಅವರ ಈ ಕವಿತೆಯನ್ನು ನೋಡಬಹುದು. ಬಾಣಲೆಗೆ ಸುರಿವಾಗ ಸಾಸಿವೆಯೊಂದು ಪುಟಿದು ಹಾರಿ ಹೋಯಿತು ಛಲವಿಟ್ಟು ಹುಡುಕಿದರೆ ಸಾಸಿವೆಯೂ ದೊರಕೀತು : ಸೂಕ್ಷ್ಮವನೂ ಶೋಧಿಸಿದೆನೆಂದು ಬೀಗಿದೆ ಬುದ್ಧ ನಕ್ಕ : ನೀನು ಹುಡುಕಿದ್ದು ಬರಿಯ ಸಾಸಿವೆ , ಸಾವಿಲ್ಲದ ಮನೆಯ ಸಾಸಿವೆಯಲ್ಲ ಬಾಣಲೆಮನದ  ನೆಲೆಯಿಲ್ಲೀಗ ಸಾಸಿವೆಯ ಚಟಪಟ ಮತ್ತು ಒಗ್ಗರಣೆಯ ಘಮ . ಪದ್ಯದ ನೇಯ್ಗೆಯಲ್ಲಿ ವಿಶೇಷ ಇರದಿದ್ದರೂ ಸಾಸುವೆಯ ಪ್ರತಿಮೆಯ ಮೂಲಕ ಸಾವನ್ನು ಧೇನಿಸುವ ಕವಿ, ಕಾದ ಬಾಣಲೆಯಾದ ಮನದಲ್ಲಿ ಚಟಪಟಿಸುತ್ತಲೇ ಒಗ್ಗರಣೆಯ ಘಮಕ್ಕೆ ಅಂದರೆ ಬದುಕಿನ ಸಾರವನ್ನೂ ಗ್ರಹಿಸುತ್ತಾನಲ್ಲ ಅದು ವಿಶೇಷವೇ. ಕವಿತೆಯ ಎರಡನೆಯ ಪ್ಯಾರ “ದೊರಕೀತು” ದೊರಕಿತು ಆದರೆ ಮಾತ್ರ ಪದ್ಯಕ್ಕೆ ಮತ್ತಷ್ಟು ಝಳ ಬಂದೀತು‌. ಸದ್ಯಕ್ಕಿಲ್ಲಿ ಯಾವುದೂ ಸರಾಗವಲ್ಲ : ಹಳೆಯ ರಾಗ ಬದಲಾಗಿಲ್ಲ , ಅಬ್ಬರಿಸಿ ಬೊಬ್ಬಿರಿಯುವುದನ್ನು ರಾಗವೆನ್ನಲಾಗುವುದಿಲ್ಲ. ಎಂದು ಕೊನೆಯಾಗುವ ಅವರ ಕವಿತೆಯೊಂದು ನಮ್ಮನ್ನು ಆಕರ್ಷಿಸುವ ವಿವಿಧ ಇಸಂಗಳನ್ನು ಕುರಿತು ಹೇಳುತ್ತಲೇ ಕಡೆಗೆ ಯಾವ ಸಿದ್ಧಾಂತವೂ ಸರಾಗ ಒಲಿಯದು ಮತ್ತು ಎಲ್ಲ ವಾದ ಮತ್ತು ಸಿದ್ಧಾಂತಗಳಲ್ಲೂ ಮತ್ತದೇ ಹಳೆಯದೇ  ರಾಗದ ಛಾಯೆ ಇರುವಾಗ ಅಬ್ಬರಿಸಿ ಕೂಗಿದ ಮಾತ್ರಕ್ಕೆ ಅದನ್ನು ಹೊಸ ರಾಗ ಎನ್ನಲಾಗುವುದಿಲ್ಲ ಎಂಬ ತೀರ್ಮಾನ ಕೂಡ ಎಲ್ಲ ಸಿದ್ಧಾಂತಗಳ ತಲಸ್ಪರ್ಶೀ ಅಧ್ಯಯನದಿಂದ ಪಡೆದ ಕಾಣ್ಕೆಯೇ ಆಗಿದೆ. ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. ಎನ್ನುವ ಸಶಕ್ತ ಅಂತ್ಯವಿರುವ ಕವಿತೆಯಲ್ಲಿ ಕರೋನಾದ ಭೀತಿಯನ್ನು ಪದ್ಯವಾಗಿಸಿರುವ ರೀತಿಗೆ ಕೂಡ ತಕ್ಷಕ ಮತ್ತು ಪರೀಕ್ಷಿತರು ಇಣುಕುವುದರಿಂದ ನಮ್ಮೊಳಗೇ ಇರುವ ಯಯಾತಿ ಕೂಡ ಭಯದಿಂದ ನಡುಗುತ್ತಾನೆ. ನೀವು ನನ್ನತ್ತ ಎಸೆದ  ಕಲ್ಲುಗಳನ್ನು ಆಯ್ದು ಜೋಪಾನವಾಗಿ  ಕಾಯ್ದಿರಿಸಿದ್ದೇನೆ ತುಕ್ಕು ಹಿಡಿಯುತ್ತಿದೆಯೇನೋ ಬದುಕಿಗೆ ಎಂದೆನಿಸಿದಾಗಲೆಲ್ಲ‌ಾ ಬಾಳುವ ಹೊನ್ನಛಲವೀಯುವ ಪರುಷಮಣಿಗಳವು ಕಲ್ಲೆಸವ ಕೈಗಳಿಗೂ ಒಂದು ಸಲಾಮ್ ಇದೊಂದು ಮುಂಗಾಣ್ಕೆಯ ಕವಿತೆ. ಕವಿತೆಗಳು ಕೂಡ ಬದುಕಿನ ಭಾಷ್ಯ ಎಂದು ಲಾಕ್ಷಣಿಕರು ಹೇಳಿದ ಮಾತು ಈ ಇಂಥ ಸಾಲುಗಳಲ್ಲಿ ಜೀವಂತವಾಗಿದೆ. ಯಾರು ಯಾರೋ ಯಾವುದೋ ಕಾರಣಕ್ಕೆ ಹೊಡೆದ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟು ಕೊಂಡ ಕವಿ ಬದುಕು ಉಧ್ವಸ್ತಗೊಂಡಾಗಲೆಲ್ಲ ಆ ಪರುಷಮಣಿಯಂಥ ಮುಟ್ಟಿಸಿದೊಡನೆಯೇ ಬಂಗಾರವಾಗಿ ಬದಲಾಗುವ ಸರಕಾಗಿಸುವುದು ಕೂಡ ಕೌತುಕವೇ ಹೌದು. ಹೀಗೆ ಕಣ್ಣು ಕೆಂಪಾಗಿಸಿ ‌ಅವಳು ಸುಳಿದಾಡುವುದು ಹೊಸತೇನಲ್ಲ ಕವಿಗೆ : ಆದರೂ ವಾಡಿಕೆಯಂತೆ ಕೇಳಿದ ‘ಏನಾಯಿತು’ ಎಂದು ‘ ಕಣ್ಣಿಗೆ ಯಾವುದೋ ಹುಳ ಬಿದ್ದಿರಬೇಕು ‘ ಅಂದಳು ನೋಡಿದರೆ ಏನೂ ಇಲ್ಲ ‘ನಿನ್ನ  ತಲೆಯೊಳಗಿರುವ ಹುಳ ಕಣ್ಣಿಗೆ ಹೊಕ್ಕಿರಬಹುದು’ ‌ಎಂದದ್ದು ಕವಿಯ ಕಾವ್ಯಾತ್ಮಕ ಪ್ರಯೋಗ ‘ನಿಮ್ಮ ಕವಿತೆಯ ಹಾಗೆ ‘ಅಂದಳು ನಿಟ್ಟುಸಿರ ನಂತರ ಮತ್ತೆ ಉಸುರಿದಳು : ‘ನಿನ್ನೆ ಇಡೀ ದಿನ ಇಡೀ ರಾತ್ರಿ ಕಾದೆ ನಮ್ಮ ಮದುವೆಯ ದಿವಸ ನಿಮಗೆ ನೆನಪಾಗುವುದೇ ಎಂದು , ನಿಮ್ಮ ತಲೆಯೊಳಗಿನ  ಕವಿತೆ ಹುಳದಂತೆ ಕಣ್ಣಿಗಿಳಿದಿದ್ದರೂ ಪರವಾಗಿರಲಿಲ್ಲ ಪೊರೆಯಂತೆ  ಕಣ್ಣನ್ನೇ ಕಾಡಿತು ‘ ಅಂದಳು ಕವಿತೆಯ ಪೊರೆ ಒಮ್ಮೆಲೇ ಕಳಚಿತು. ಪ್ರಾಯಶಃ ಈ ಕವಿತೆಯ ಯಾವುದೇ ಸಾಲನ್ನು ಕತ್ತರಿಸಿ ಇಲ್ಲಿ ಕೋಟ್ ಮಾಡಿದ್ದಿದ್ದರೆ ಇಡಿಯ ಪದ್ಯದ ಮೂಲಕ ಕವಿ ಹೇಳ ಹೊರಟದ್ದೇನು ಎನ್ನುವುದು ಶೃತಪಡಿಸಲಿಕ್ಕೆ ಆಗದ ಕಾರಣ ಇಡೀ ಪದ್ಯವನ್ನು ಇಲ್ಲಿ ಓದಿಸಿದ್ದೇನೆ. ಏಕೆಂದರೆ ಇದು ಈ ಕವಿಯೊಬ್ಬನ ತಪ್ಪಲ್ಲ, ಬಹಳಷ್ಟು ಜನ ನಾವು ನಮ್ಮದೇ ಜರೂರುಗಳಲ್ಲಿ ಕಳೆದು ಹೋಗುತ್ತ ನಿಜಕ್ಕೂ “ಶುಭಾಷಯ” ಹೇಳಲೇ ಬೇಕಾದ ಕನಿಷ್ಠ ಸಂತೈಸಬಹುದಾದ ಸಂಗತಿಗಳನ್ನ ಮರೆತು ಬಿಡುತ್ತೇವಲ್ಲ ಅದರ ಅಭಿವ್ಯಕ್ತಿ ಇಲ್ಲಿ ಸಲೀಸಾಗಿ ಬಂದಿದೆ‌. ಒಂದು ಸಣ್ಣಕತೆಯೇ ಆಗಿ ಬದಲಾಗಿದೆ. ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? ಎಂದು ಎಲ್ಲವೂ ವ್ಯಾಪಾರವೇ ಆಗಿ ಬದಲಾಗಿರುವ ವರ್ತಮಾನದ ಬದುಕನ್ನು ಪ್ರಶ್ನಿಸುವ ಕವಿಯ ಈ ಪ್ರಶ್ನೆ ನಮ್ಮೆಲ್ಲರದ್ದೂ ಆಗ ಬೇಕಾದ ತುರ್ತು ಸಮಯ ಇದಾಗಿದೆ. “ಆಕಾಶದ ಚಿತ್ರಗಳು” ಶೀರ್ಷಿಕೆಯ ಪದ್ಯದ ಈ ಸಾಲುಗಳು ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ ಗೊರಕೆ ಗಂಡನ ಪಕ್ಕದಲ್ಲಿ ಮಲಗಿ ನೂರು ನಿಟ್ಟುಸಿರುಗಳ ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ ಆಗಸಕ್ಕೇರುವ ಕನವರಿಕೆ, ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ ಗೌತಮನ ಶಾಪದ ಪಳೆಯುಳಿಕೆ ಎನ್ನುವ ಅದ್ಭುತ ರೂಪಕವಾಗಿದೆ. ಒಂದೇ ಒಂದು ಹೊಸ ರೂಪಕವೊಂದನ್ನು ಒಬ್ಬ ಹೊಸ ಕವಿ ಸೃಷ್ಟಿಸಿದರೆ ಆ ಕವಿ ಬಹಳ ಕಾಲ ಉಳಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಶ್ರೀ ನರಸಿಂಹ ವರ್ಮನೆಂಬ ಈ ಕವಿ ಬಹುಕಾಲ ಉಳಿಯುವರು ಎಂಬುದಕ್ಕೆ ಸಾಕ್ಷಿಯೂ ಆಗಿದೆ ಈ ಸಾಲುಗಳು. ತಮ್ಮದೇ ಓದಿನಿಂದ ಕಂಡುಕೊಂಡ ದಾರಿಯಲ್ಲೇ ಸಾಗುವ ಈ ಕವಿ ಅಪರೂಪಕ್ಕೆ ಎಂಬಂತೆ “ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ” ಎಂದೂ ಕಾಣಿಸಬಲ್ಲ ಛಾತಿ ಉಳ್ಳವರು. ದೂರದ ಬೆಟ್ಟವನ್ನು ಕಣ್ಣ ಮುಂದೆ ಹಿಡಿಯ ಬಲ್ಲಂತೆಯೇ ತಮ್ಮೊಳಗಿನ ದೇವರನ್ನೂ ಕಾಣಿಸ ಬಲ್ಲವರು‌‌. ಶ್ರೀ ನರಸಿಂಹ ವರ್ಮರು ಕಾನೂನು ಕಟ್ಟಳೆ ಅರಿತ ಕಾರಣ ಅವರಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಸೈದ್ಧಾಂತಿಕ ಕಾರಣಗಳಾಚೆಯ ಅವರವರ ಲೋಕದ ಅರಿವು ಸಿದ್ಧಿಸಿದೆ‌. ಪ್ರಾಯಶಃ ಆ ಅರಿವೇ ಅವರೆಲ್ಲ ಕವಿತೆಗಳಿಗೂ ಹೊದಿಸಿದ ಅರಿವೆಯೂ ಆಗಿದೆ. ಆದರೆ ನಾವು ಹೊದ್ದ ಅರಿವೆಗಳನ್ನು ಕಳಚದೇ ನಿಜದ ನಗ್ನತೆಗೆ ಇರುವ ಚೆಲುವು ಮತ್ತು ಗಟ್ಟಿತನ ಅಲಂಕಾರದಲ್ಲಿ ಮರೆವೆಯಾಗಿ ಬದಲಾಗಬಾರದು. ಅವರ ಮುಂದಿನ ಪದ್ಯಗಳ ಬಗ್ಗೆ ಭರವಸೆ ಮತ್ತು ಅಪರೂಪದ ತಿಳುವಳಿಕೆಯ ಗಂಧದ ಪರಿಮಳ ಸೂಸುತ್ತಲೇ ಆಳದಾಳದ ತಿಳಿವನ್ನು ಪುನರ್ಮನನ ಮಾಡಿಸುವ ಅವರ ಕಾವ್ಯ ಕೃಷಿಗೆ ಶುಭಾಷಯ ಹೇಳುತ್ತ ಅವರ ಆಯ್ದ ಕವಿತೆಗಳನ್ನು ನಿಮ್ಮ ಓದಿಗೆ ಶಿಫಾರಸು ಮಾಡುತ್ತ ಈ ಟಿಪ್ಪಣಿ ಮುಗಿಸುತ್ತೇನೆ. ನರಸಿಂಹ ವರ್ಮರ ಆಯ್ದ ಕವಿತೆಗಳು. 1. ಹೊರಗೆ ‌ಅಡ್ಡಾಡುವುದಿಲ್ಲ ಈಗ ಕವನ : ಹಾಳೆಯಲ್ಲೇ ತೆವಳುತ್ತದೆ ಕದಲದಂತೆ ಕದಲಿ ಕದಲಿಸುತ್ತಿದೆ ‍‌‍ಅವ್ಯಕ್ತ ‌‌ಹುಳದ ಧ್ಯಾನ ‌ಕವಿತೆಗೂ ಬೇಕು ಮಾರುಕಟ್ಟೆ ‍‌ಅಕ್ಷರಗಳಿಗೆ ಮೆರವಣಿಗೆ : ಈಗ ಮ‌ಾತ್ರ ಬೇಡವೇ ಬೇಡ ವಿಮರ್ಶೆ, ಹೊಗಳಿಕೆ ಕೋವಿದ ಎಂದು ಬಣ್ಣಿಸಿದರೆ ಕೋವಿಡ ಎಂದಂತೆ  ಭಾಸವಾಗಿ ಭಾಷೆ  ಭಯ ಹುಟ್ಟಿಸುತ್ತಿದೆ ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. 2. ಟ್ರಾಫಿಕ್ ಜಂಜಾಟದಲ್ಲಿ ಕಾರು ಚಲಾಯಿಸುತ್ತಾ ಅವನು ಧ್ಯಾನಕೇಂದ್ರದ ಬಗ್ಗೆ ಧ್ಯಾನಿಸುತ್ತಾನೆ : ಧ್ಯಾನ ಕೇಂದ್ರದೊಳಗೆ ಕಾಲಿಟ್ಟೊಡನೆ ಧ್ಯಾನ ಮಾಯವಾಗುತ್ತದೆ ಬಣ್ಣಬಣ್ಣದ ದಿರಿಸುಗಳ    ಸಾಲಿನಿಂದ ತೇಲಿ ಬಂದ ಲಘು ಅತ್ತರಿಗೆ ತತ್ತರಿಸಿ ಅವನು ಮಾಯೆಯ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ : ಧ್ಯಾನಕೇಂದ್ರದೊಳಗೆ ನಿಧಾನವಾಗಿ ಮಾಯೆ ಆವರಿಸತೊಡಗುತ್ತದೆ ಹೊರಗೆ ಕಾರಿನಲ್ಲಿ ಎಸಿಯಿಂದ ಬೇಸತ್ತ ಶ್ವಾನ ಅತಂತ್ರಗೊಂಡು ಹಣಕಲು ಹವಣಿಸುತ್ತಿದೆ  : ರಸ್ತೆಯ ‌ಆಚೆ ಬದಿಯಲ್ಲಿ ಹೆಣ್ಣುಸೊಣಗವೊಂದು ಸ್ವತಂತ್ರವಾಗಿ ಸಂಚರಿಸುತ್ತಿದೆ ಜಗದೊಳಗಿನ ಎಲ್ಲಾ ಮಾಯೆಗಳೂ ಉದರಂಭರಣಕ್ಕೆ ಪ್ರವಚನಗಳಾಗಿ ಗೋಡೆಗಳೊಳಗೆ ಪ್ರವಹಿಸುತ್ತಿವೆ “ಮನದ ಮುಂದಣ ಆಸೆಯೇ ಮಾಯೆ ಕಾಣಾ” ಎಂಬ ಸರಳ ಅಧ್ಯಾತ್ಮ ಅಲ್ಲೇ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಬಯಲಾಗಿ ಬಿದ್ದಿದೆ. 3. ಬಯಲೊಳಗಿದ್ದ ಯೋಗದ ಬಟ್ಟಲುಗಳೀಗ ‌ಅಂಗಡಿಯೊಳಗೆ ದೊರೆವುದೆಂದು ದಾಂಗುಡಿಯಿಡುವ ಜನರು ಎಲ್ಲೆಡೆಗೂ ಹುಯಿಲೋ ಹುಯಿಲು ಬಯಲೊಳಗಿದ್ದ ಬಟ್ಟಲುಗಳೊಳಗೆ ಬೆಟ್ಟದಷ್ಟು ಕುತೂಹಲಗಳು ಒಂದು ನಂಬಿಕೆಗೆ ಹಲವು ನಾಮರೂಪಗಳು ಬಸಿರುಸಿರ ಬಿಗಿ ಹಿಡಿದು ಜಗದುಸಿರೊಳಗೊಂದಾಗುವ ಕನಸ ಸಾಹಸಗಳು ತನುವಿನೊಳಗೊಂದು ಹಾವು ಹಾವಿನೊಳಗೆ ಹೂವುಗಳನಿಟ್ಟು ತಲೆ ದಾಟಬಲ್ಲ ನರ ಕಲ್ಪನಾ ವ್ಯೂಹಗಳು ಬದಲಾದ ಕಾಲದಲಿ ಅಂಗಡಿ ಮುಂಗಟ್ಟುಗಳಲಿ ಮೂಟೆ ಮೂಟೆ ಹಣ ಸುರಿದು ನಕಲಿ ಬಟ್ಟಲುಗಳನೂ ಕೊಳ್ಳಬಲ್ಲ  ಭೋಗಿಗಳು : ಕೊಳ್ಳೆ ಹೊಡೆವ ವ್ಯಾಪಾರಕ್ಕಿಳಿದ ನಕಲಿ ಯೋಗಿಗಳು ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? 4. ಕರೆ ಶೂನ್ಯದಲ್ಲೇ ದೃಷ್ಟಿ ನೆಟ್ಟು ಕಂಗೆಟ್ಟು ಕಣ್ಣ ಬೆಳಕನ್ನೇ ಕಳಕೊಂಡವರ ಕಡೆಗೆ ಕಡೆಗಣ್ಣನಾದರೂ ಹಾಯಿಸು; ಕಣ್ಣಿಂದ ಕಣ್ಣಿಗೆ ಸುಳಿಯಲಿ ಭರವಸೆಯ ಮಿಂಚು ಹರಿಸು ಭರವಸೆಯ ಬೆಳಕು! ಸಕಲ ಸ್ನಾಯುಗಳನ್ನೂ ಬಿಗಿಗೊಳಿಸಿ ಹುಬ್ಬುಗಂಟಿಕ್ಕಿ ಬೊಬ್ಬಿರಿಯುವ ಸದಾ ಉದ್ವಿಗ್ನ ಮಂದಿಯೂ ಬಿದ್ದು ಬಿದ್ದು ನಗುವಂತೆ ಖುದ್ದು ನಗು, ನಗಿಸು, ನಗುತ ಬಾಳು ಹಬ್ಬಿಸು ನಗೆಯ ಬೆಳಕು! ಜಡ್ಡುಗಳೂ ಗೊಡ್ಡುಗಳೂ ಬಡ್ಡಾದ ಹೆಡ್ಡುಗಳೂ ಸಿಡಿದು ಚೂರಾಗುವಂತೆ ಹೊಡೆದೊಡೆಯುವ ವಿವೇಚನೆಯ ಪಟಾಕಿಗಳ ಹಂಚು ಜನ ಮಾನಸಕೆ ಉಬ್ಬಿಸು ಸ್ವಾಭಿಮಾನದ ಬೆಳಕು! ತಮಸೋಮ‌ಾ ಜ್ಯೋತಿರ್ಗಮಯ ಎಂಬ ಚಿಂತನೆಯ ಬೆಳಕು ಜಾತಿ ಮತ ಕಾಲ ದೇಶಗಳ ಮೀರಿ ದಿಸೆದಿಸೆಗಳಿಗೂ ಹರಿದಾಗ ಜಗದ ತುಂಬೆಲ್ಲ ನಿತ್ಯ ದೀಪಾವಳಿ! ಅದಕ್ಕಾಗಿ ನೀನು ದಯವಿಟ್ಟು ಬೆಳಕು ಹಚ್ಚು ಕಿಚ್ಚು ಹಚ್ಚಬೇಡ! 5. ಆಕಾಶದ ಚಿತ್ರಗಳು  ಯಾವುದೋ

Read Post »

You cannot copy content of this page

Scroll to Top