ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಎ ಎಸ್. ಮಕಾನದಾರ 80ರ ದಶಕದ ಕೊನೆ ಅಂಚಿನಲಿ ನಿರಂತರ ಸಾಹಿತ್ಯ ವೇದಿಕೆ ಗಜೇಂದ್ರಗಡ ದಲ್ಲಿ ಹುಟ್ಟಿಕೊಂಡಿತು. ಹುಬ್ಬಳ್ಳಿ ಗುಂಡಪ್ಪ ಪುಂಡಲೀಕ ಕಲ್ಲಿಗನೂರ್  ಇಬ್ಬರೂ ಹಿರಿಯರು ಕವನ ಕುಂಜ ಸಂಪಾದಿತ ಕವನ ಸಂಕಲನ ಪ್ರಕಟಿಸಿದರು. ಹುಬ್ಬಳ್ಳಿ ಗುಂಡಪ್ಪ ಗುಂಡಿನ ಗಿರಾಕಿ. ನಾನಾಗ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಡಿ ಬಾಗಿಲು ತೆರೆದೊಡನೆ ಮೊದಲ ಗಿರಾಕಿ ಗುಂಡಪ್ಪ. ಬಗಲಲ್ಲಿ ಹತ್ತಾರು ಪತ್ರಿಕೆ ತರುತ್ತಿದ್ದರು. ಗುಂಡಿನ ಮತ್ತು ಏರಿದಂತೆ ಕಾವ್ಯಝರಿ ಸರಾಗವಾಗಿ ಬರುತ್ತಿತ್ತು. ಬೆಳಿಗ್ಗೆ ಗಿರಾಕಿಗಳು ಇಲ್ಲದಿದ್ದಾಗ ಸ್ನ್ಯಾಕ್ಸ್ ಜೊತೆಗೆ ಪತ್ರಿಕೆ ಓದಲು ಕೊಡುತ್ತಿದ್ದರು. ಸೇಂಗಾ ಕಾಳು ಒಂದೊಂದೇ ಮೆಲ್ಲುತ್ತ ಪೇಪರ್ ವಾರಪತ್ರಿಕೆ ತಿರುವಿ ಹಾಕುತ್ತ ಟೇಪ್ ರೆಕಾರ್ಡ್ ನಲ್ಲಿ ಸಣ್ಣಗೆ ಹಿಂದಿ ಹಾಡು ಬೇಷಾಕ್ ಮಂದಿರಮೆ ಬೈಠಕೆ ನ ರೂನಾ ಹಾಡು ಕೇಳುವುದೇ ಒಂದು ಸಂಭ್ರಮ ವಾಗಿತ್ತು. ನಾನಾಗ 8ನೆ ತರಗತಿ ಪಾಸ್ ಆಗಿದ್ದೆ. ಮುಂದೆ ಶಾಲೆಗೆ ಓದಲು ಹೋಗಲು ಮನೆಯಲ್ಲಿ ಬಡತನವೆಂಬ ಬೇತಾಳ ನನ್ನ ಪಾಟಿ ಚೀಲ ಕಸೆದು ಕೊಂಡು ಮೂಲೆಗೆ ಎಸೆದಿತ್ತು. ನನ್ನ ಎಳೆ ಹೆಗಲ ಮೇಲೆ ಬೇತಾಳನ ಸವಾರಿ ಭಾರ ವಾಗಿದ್ದರೂ ತೆವಳುತ್ತ ತೆವಳುತ್ತ ಸಾಗ ಬೇಕಿತ್ತು. ಮಕಾನದಾರ ನೀವೂ ಕವಿತ ಬರೀರಿ. ನಾ ಬರೆದ ಈ ಕವಿತೆ ಹೆಂಗೆ ಅದೆ ನೋಡ್ರಿ ಈ ಕವಿತಾ ಓದಿ ಅಂತಾ ತಾವು ಬರೆದ ಕವಿತೆ ಗಳ ಡೈರಿ ಕೊಡುತ್ತಿದ್ದರು. ನಮ್ಮೂರಲ್ಲಿ ಕುಡಿಯುವ ನೀರಿನ ಬವಣಿ ಹೇಳತೀರದ್ದು. ಆ ಸಂದರ್ಭದಲ್ಲಿ ಉಪಮೆ ನಮ್ಮೂರ ನಲ್ಲಿಯನೀರು ನಲ್ಲೆಯ ಕಣ್ಣೀರಿನ ಹನಿ ಯಂತೆ ಹನಿ ಹನಿ ಜಿನುಗಿತು ಈ ಚುಟುಕು ಬರೆದು ತೋರಿಸಿದೆ ಗುಂಡಪ್ಪ ಲಂಕೇಶ್ ಪತ್ರಿಕೆ ಅಂಕಣ ಕಾರ ಪುಂಡಲೀಕಶೇಟ್ ಅವರ ಪುಂಡಲೀಕ್ ವಾರ ಪತ್ರಿಕೆ ಗಾಗಿ ನನಗೆ ಗೊತ್ತಿಲ್ಲ ದಂತೆ ಪೋಸ್ಟ್ ಮಾಡಿದ್ದರು. ಮರು ವಾರ ಪತ್ರಿಕೆ ಯಲ್ಲಿ ಪ್ರಕಟಣೆ ಯಾಯ್ತು. ನನಗೆ ಮುಗಿಲು ಮೂರೇ ಗೇಣು ಅಷ್ಟು ಖುಷಿ ಯಲಿ ಸಂತಸ ಪಟ್ಟಿದ್ದೆ. ಮತ್ತೆ ಬರೆಯಿರಿ ಅಂತಾ ಒತ್ತಾಯ ಮಾಡಿದರು ಮುತ್ತು ಮುಖದ ಮೇಲೆ ಮುತ್ತಿನಂತೆ ಮೂಡಿದ್ದ ಬೆವರಹನಿಗಳು ನಾ ಮುತ್ತಿಟ್ಟಾಗ ಅಲ್ಲವೇ ಗೆಳತಿ ಮೂಡಿದ್ದು #### ಮುಖವಾಡ ಯತಿ ಆಶ್ರಮದಲ್ಲಿ ಸನ್ಯಾಸಿ ವೇಷದಲಿ ಸಂಸಾರಿ ! ರತಿ ಆಶ್ರಮದಲಿ ಸಂಸಾರಿ ವೇಷದಲಿ ಸನ್ಯಾಸಿ ! ವಿಮರ್ಶೆ ನಿಮ್ಮ ಸಾಹಿತ್ಯ ಪಕ್ವವಾಗಿ ಬೆಂದಿಲ್ಲವೆಂದ ವಿಮರ್ಶಕ ! ಸಾಹಿತ್ಯಕ್ಕೆ ಸೀಮೆ ಎಣ್ಣಿ ಸುರುವಿ ಬೆಂಕಿ ಹಚ್ಚಿ ಬೇಯಿಸಿದ ಸಾಹಿತಿ ಮುಂತಾದ ಚುಟುಕು ಕಾವ್ಯ ಬರೆಯಲು ತೊಡಗಿದೆ. ನನ್ನ ಬಾಲ್ಯದ ಗೆಳೆಯ ರಾಘವೇಂದ್ರ ಕೊಡಗಾನೂರ ಅವರು ಗಜೇಂದ್ರ ಪ್ರಭಾ ವಾರ ಪತ್ರಿಕೆ ಆರಂಭಿಸಿದರು ದ್ರೋಣಪುರ ವಾರ್ತೆ. ನೂತನ ರಾಜಕೀಯ ಚಕ್ರವರ್ತಿ. ಸ್ಫೂರ್ತಿ. ನವೋದಯ ಮುಂತಾದ ಪತ್ರಿಕೆ ಗಳಲ್ಲಿ ಕವಿತೆ ಗಳು ಪ್ರಕಟಣೆ ಯಾಗ ತೊಡಗಿದವು. 1987ರಲ್ಲಿ ಬೆಂಗಳೂರು ಈ ಸಿ ಸಿ ಸೆಂಟರ್ ನಲ್ಲಿ ಹಿರಿಯ ಸಾಹಿತಿ ಗಳಾದ ದುಂಡಿರಾಜ್ ಅವರ ನೇತೃತ್ವದಲ್ಲಿ ಕಾವ್ಯ ಕಮ್ಮಟ ದಲ್ಲಿ ಪಾಲ್ಗೊಂಡಿದ್ದೆ. ಜೊತೆಗೆ ನಿರಂತರ ವೇದಿಕೆ ಸಂಘಟನೆ ಗಳ ಕವಿಗೋಷ್ಠಿ ನನಗೆ ಸಾಹಿತ್ಯ ದಲ್ಲಿ ಕ್ರಿಯಾಶೀಲವಾಗಿ ತೊಡಗಿ ಕೊಳ್ಳಲು ಹೆಗಲೇಣಿ ಯಾದವು ಕಳೆದ 33 ವರುಷಗಳಿಂದಲೂ ಸಾಹಿತ್ಯದ ಚೈತ್ರ ಯಾತ್ರೆ ನಿರಂತರ ವಾಗಿ ನಡೆದು ಕೊಂಡು ಬಂದಿದೆ. 90ರ ದಶಕ ದಲ್ಲಿ ಕಿರಣ ವೈನ್ ಶಾಪ್ ಮಾಲೀಕರಿಗೆ ಅಂಗಡಿ  ಹಾನಿ ಯಾಗಿ ಸೀಜ್ ಮಾಡಿದಾಗ ಹುಬ್ಬಳ್ಳಿ ಇಂದಿರಾ ಗಾಜಿನ ಅರಮನೆಗೆ ಆತ್ಮ ಹತ್ಯೆ ಮಾಡಿ ಕೊಳ್ಳಲು ಟಿಕ್ 20 ಬಾಟಲ್ ಒಯ್ದಿದ್ದೆ.. ಆಗ ನನ್ನ ನಡುವಳಿಕೆ ಆತಂಕ ಗುರುತಿಸಿದ ಪತ್ರಕರ್ತ ಪುಂಡಲೀಕ್ ಶೇಟ್ ತರಾಟೆಗೆ ತೆಗೆದುಕೊಂಡು ಬುದ್ಧಿ ವಾದ ಹೇಳಿ ಟೀ ಕುಡಿಸಿ ಸಿನೆಮಾ ತೋರಿಸಿ ಊರಿಗೆ ಬಸ್ ಹತ್ತಿಸಿ ಕಳಿಸಿದ್ದು ಇನ್ನೂ ನನ್ನ ಸ್ಮತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮಿಬ್ಬರ ಗೆಳೆತನ ಇನ್ನಷ್ಟು ಗಾಢ ವಾಗಲು ಕಾರಣವಾಯ್ತು ಜೊತೆಗೆ ನನ್ನ ಸಾಹಿತ್ಯ ಬರವಣಿಗೆ ಗೆ ಮಾರ್ಗದರ್ಶನ ಕೂಡ ಅವರಿಂದ ದೊರೆಯಿತು ನನ್ನ ಅಂತರಂಗದ ಸಖಿ ಕಾವ್ಯ ನನ್ನ ಪ್ಯಾರಿ ಕಾವ್ಯ. ನನ್ನ ಸಾಂಸ್ ಕೂಡ ಕಾವ್ಯವಾಗಿದೆ. ನನ್ನ ಮನದ ನೋವಿಗೆ ಮುಲಾಮು ಕೂಡ ಕಾವ್ಯವೇ ಎಂಬುದರಲ್ಲಿ ಎರಡು ಮಾತಿಲ್ಲ ,

ಮೊದಲ ಕವನ Read Post »

ಇತರೆ

ಕಟ್ಟುವ ಮುಕ್ತತೆ

ಲೇಖನ ನೂತನ ದೋಶೆಟ್ಟಿ ೧೯೮೫ ಮಿಖೈಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿ ಗ್ಲಾಸ್‌ನೊಸ್ಟ್ (ಮುಕ್ತತೆ) ಹಾಗೂ ಪೆರೆಸ್ಟ್ರೋಯಿಕ ಅಂದರೆ ಅದುವರೆಗೂ ಇದ್ದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಎರಡು ನೀತಿಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ೧೯೨೨ರ ಡಿಸೆಂಬರಿ ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸೋವಿಯತ್ ರಷ್ಯಾ ಒಕ್ಕೂಟ ಶಿಥಿಲವಾಗಿ ಛಿದ್ರ ಛಿದ್ರವಾಯಿತು.೬೩ ವರ್ಷಗಳವರೆಗೆ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತಿದ್ದ ‘ಸೂಪರ್ ಪವರ್’ ರಾಷ್ಟ್ರ ಹೇಳ ಹೆಸರಿಲ್ಲದಂತಾಯಿತು. ರಷ್ಯಾ ಕ್ರಾಂತಿಯ ಹರಿಕಾರನಾಗಿದ್ದ ಲೆನಿನ್ನನ ಪ್ರತಿಮೆಯ ನ್ನು ಉತ್ಸಾಹದಿಂದ ಅಡ್ಡ ಮಲಗಿಸಿದ ಅಲ್ಲಿಯ ಜನ ಸಂಭ್ರಮಿಸಿದ್ದನ್ನು ಕಂಡು ವೈರಿ ರಾಷ್ಟ್ರವೆಂದೇ ಬಿಂಬಿತ ವಾಗಿದ್ದ ಅಮೇರಿಕ ತನ್ನ ಯೋಜನೆ ಫಲಿತವಾಗಿದ್ದಕ್ಕೆ ಹಾಗೂ ವಿಶ್ವದಲ್ಲಿ ತನ್ನ ಏಕಮೇವಾಧಿಪತ್ಯದ ಪ್ರತಿಷ್ಠಾಪ ನೆಗೆ ಇನ್ನಿಲ್ಲದಂತೆ ಬೀಗಿತು. ಆದರೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರ ಗಳು ಮರುಗಿದವು. ಇದಕ್ಕೆ ಕಾರಣ ಪ್ರಜಾಪ್ರಭುತ್ವ ವಿರೋಧಿ ರಾಷ್ಟ್ರದ ಅಧಃಪತನ, ಒಟ್ಟಾರೆ ಸ್ವಾತಂತ್ರ್ಯದ ಸೋಲು ಎಂಬ ಸತ್ಯದ ಅರಿವು. ಈ ಘಟನೆ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಹಿಗ್ಗಿಸಿದಷ್ಟೇ ಅಲ್ಲ ಅದರ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ ಮೂರು ದಶಕಗಳ ನಂತರ ಇಂದು ಸ್ವಾತಂತ್ರ್ಯದ ಮರು ವ್ಯಾಖ್ಯಾನ ಹಾಗೂ ಅದರ ಮಹತ್ವದ ಮರು ಚಿಂತನೆ ಅಗತ್ಯವೆನ್ನಿಸುತ್ತದೆ. ರಾಜ್ಯಶಾಸ್ತ್ರದಲ್ಲಿ ಸ್ವಾತಂತ್ರ್ಯದ ಬಗ್ಗೆ ಬಹಳ ಆಸಕ್ತಿಕರ ವ್ಯಾಖ್ಯೆಯೊಂದಿದೆ. ಅದೆಂದರೆ, ‘ ಯೂ ಹ್ಯಾವ್ ದ ಲಿಬರ್ಟಿ ಟು ಸ್ಟ್ರೆ ಚ್ ಯುವರ್ ಹ್ಯಾಂಡ್ ಅಂಟಿಲ್ ಯೂ ರೀಚ್ ಅನದರ್ ಮ್ಯಾನ್ಸ್ ನೋಸ್ ‘ ಎಂದು. ಎದುರಿನವನ/ಳ ಮೂಗಿನವರೆಗೆ ನೀನು ನಿನ್ನ ಕೈಯನ್ನು ಬೀಸುವಷ್ಟು ಸ್ವಾತಂತ್ರ್ಯ ನಿನಗಿದೆ. ಒಂದೊಮ್ಮೆ ನಿನ್ನ ಕೈ ಮೂಗಿಗೆ ಸೋಕಿತೋ ಆಗ ಅದು ಎದುರಿನವನ/ಳ ಸ್ವಾತಂತ್ರ್ಯ ಹರಣ ಹಾಗೂ ನಿನ್ನ ಸ್ವೇಚ್ಛಾಚಾರ ಎಂದು ಬಹಳ ಮಾರ್ಮಿಕವಾಗಿ ಈ ಮಾತು ಹೇಳುತ್ತದೆ. ಇಂದಿನ ಡಿಜಿಟಲ್ ಮಾಧ್ಯಮಗಳ, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇಂತಹ ಮಾರ್ಮಿಕ ಅರ್ಥ ಸ್ವಾತಂತ್ರ್ಯಕ್ಕೆ ಇದೆಯೇ ಎಂಬುದು ಗೊಂದಲವಾಗಿಯೂ, ಪ್ರಶ್ನೆಯಾಗಿಯೂ, ಅಪ್ರಸ್ತುತವಾಗಿಯೂ ನಿಲ್ಲುತ್ತದೆ. ಇದು ಇನ್ನೊಬ್ಬರ ಮೂಗಿಗೆ ಗುದ್ದಿ ಅವರ ಸ್ವಾತಂತ್ರ್ಯವನ್ನು, ಸ್ವಾಭಿಮಾನವನ್ನು ಕೆಣಕುವ, ಅಣಕಿಸುವ ಕಾಲ.ಇದಕ್ಕೆ ಹುಟ್ಟು-ಸಾವು, ನೋವು-ನಲಿವು, ಜಾತಿ-ಮತ, ಆರ್ಥಿಕ ಮೇಲು-ಕೀಳಾಟವಾಗಲೀ,ಲಿಂಗಭೇದಗಳೇ ಆಗಲೀ ಇಲ್ಲ ! ಸಾವು-ನೋವನ್ನು ಸಂಭ್ರಮಿಸುವ ಮನೋಭಾವ ವಂತೂ ಅಮಾನವೀಯವಷ್ಟೇ ಅಲ್ಲ. ಅತ್ಯಂತ ಹೀನ ಮನಸ್ಥಿತಿ. ೨೧ನೇ ಶತಮಾನದ ಆದಿಯಲ್ಲಿ ವಿಶ್ವವೇ ಹೊಸತನಕ್ಕೆ  ಅಣಿಯಾಯಿತು. ಆಧುನಿಕತೆಯ ನಿಚ್ಚಳತೆಗೆ ಸಾಮಾಜಿಕ ಮಾಧ್ಯಮಗಳು ಹಾಗೂ ತಾಂತ್ರಿಕತೆ ಬಹಳ ಇಂಬು ಕೊಟ್ಟು ಪೋಷಿಸಿದ ಕಾಲಘಟ್ಟವಿದು. ಆದರೆ ಕೆಲವೇ ವರ್ಷಗಳಲ್ಲಿ ಈ ಆಧುನಿಕ ಮಾಧ್ಯಮಗಳು ಅಶಾಂತಿ, ದ್ವೇಷ, ಅಸೂಯೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತದಂತಹ ದೂರ್ತತೆಗಳನ್ನು ಪೊರೆವ ತಾಣಗಳೂ, ವಾಹಕಗಳೂ ಆಗಿ ಬದಲಾದದ್ದು ಈ ಶತಮಾನದ ದುರಂತ. ಭಯೋತ್ಪಾದಕರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರ ಗಳು ಎಷ್ಟು ಮಾರಕವಾಗಿ ಈ ಕಾಲಘಟ್ಟದಲ್ಲಿ ಪರಿಣ ಮಿಸಿದವೋ ಅದಕ್ಕಿಂತ ಘೋರ ಪರಿಣಾಮವನ್ನು ಈ ಮಾಧ್ಯಮಗಳು ಉಂಟು ಮಾಡಿವೆ. ಲೆನಿನ್ ಪ್ರತಿಮೆಯನ್ನು ಅಡ್ಡ ಮಲಗಿಸಿ ಸಂಭ್ರಮಿಸಿದಂಥ ವರ ಸಂಖ್ಯೆ ಇಂದು ಹೆಚ್ಚಿದೆ. ಸಾವಂಥ ಸಾವನ್ನು ಬಾಯಿ ಚಪ್ಪರಿಸಿ ಸವಿಯಬಲ್ಲ ಹೀನರು ಅಗಣಿತರಾಗಿದ್ದಾರೆ. ಲಂಕೇಶರ ಸಾವಿಗೆ ಕರ್ನಾಟಕದಾದ್ಯಂತ ಶೋಕ ವ್ಯಕ್ತವಾ ದಂತೆಯೇ ಅವರ ನಿರ್ಗಮನಕ್ಕೆ ಆಂತರಿಕವಾಗಿ ಸಂತಸ ಪಟ್ಟ ಮನಸ್ಸುಗಳು ಇದ್ದವು. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ, ಸಂಭ್ರಮಿಸುವ ದೂರ್ತತೆ ಆಗ ಇರಲಿಲ್ಲ. ಆದರೆ ಯೂ ಆರ್ ಅನಂತಮೂರ್ತಿಯವರ ಸಾವಿನ ಹೊತ್ತಿಗೆ ಅದಕ್ಕೆ ರೂಪ ಬಂದಿತ್ತು. ಆ ನಂತರದಲ್ಲಿ ದೇಶ ದಾದ್ಯಂತ ನಡೆದ ಅನೇಕ ಹತ್ಯೆಗಳಿಗೆ ಬಹಿರಂಗವಾಗಿ, ಘಂಟಾಘೋಷವಾಗಿ ಸಂತಸ ವ್ಯಕ್ತಪಡಿಸಿದ, ಚಪ್ಪಾಳೆ ತಟ್ಟಿ ನಕ್ಕ ಜನತೆ ಲಕ್ಷಾಂತರ. ಇದು ಮೂಲತಃ ಆದದ್ದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್,ಟ್ಚಿಟರ್, ವಾಟ್ಸಾಪ್‌ಗಳ ಮೂಲಕ. ಈಗಂತೂ ಸಾವು ಮನಸ್ಸನ್ನು ಕದಡುವ, ಕಂಗೆಡಿಸುವ ವಸ್ತುವೇ ಅಲ್ಲ. ಬದಲಾಗಿ ಸಂಭ್ರಮವನ್ನು ಒಳಗೊಳ್ಳುವ ವಿಕೃತಿ.ಇದಕ್ಕೆ ಆಧುನಿಕತೆಗೆ ತೆರೆದುಕೊಂಡ, ಆಧುನಿಕ ಶಿಕ್ಷಣ ಪಡೆದ, ಆಧುನಿಕ ಚಿಂತ ನೆಯ ಪ್ರತಿಪಾದಕರೆಂದು ಬಿಂಬಿಸಿಕೊಳ್ಳುವವರೂ ಒಲಿಯುತ್ತಿರುವುದನ್ನು ಏನೆಂದು ಅರ್ಥೈಸಬೇಕು ? ಒಂದು ದಶಕದ ಹಿಂದೆ ಸಾಮಾಜಿಕ ಜೀವನದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಳವಳ, ಆತಂಕವಿದ್ದರೆ ಈಗ ಸಂವೇದನಾರಹಿತ ಸಮಾಜದತ್ತ ಧಾಪುಗಾಲಿಕ್ಕುತ್ತಿ ರುವ ಕಾಲಕ್ಕೆ ಎಲ್ಲರೂ ಸಾಕ್ಷಿಯಾಗಬೇಕಾಗಿದೆ. ಇತರರ ನೋವಿಗೆ ನಲಿಯುವ, ನಲಿವಿಗೆ ಬೇಯುವ ಈ ಆಧುನಿಕ ಸಂಸ್ಕೃತಿಯ ಹುಟ್ಟು ಹಾಗೂ ಬೆಳವಣಿಗೆಗಳನ್ನು ೨೧ನೇ ಶತಮಾನದ ಆರಂಭದಲ್ಲಿ ಆದ ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ನೋಡ ಬೇಕಾಗುತ್ತದೆ. ಹಣದ ಹಪಹಪಿ ಹಾಗೂ ವರ್ಗ-ವರ್ಣ ತಿಕ್ಕಾಟಗಳು ಸಮಾಜವನ್ನು ವಿಕೃತಿಯತ್ತ ನೂಕುತ್ತಿವೆ. ಇದನ್ನು ವಿರೋಧಿಸಿ ಏಕರೂಪಿ ಸ್ವಾಸ್ಥ್ಯ ಸಮಾಜದ ಕಲ್ಪನೆಯನ್ನು ಬಿತ್ತಿದ ಶಂಕರಾಚಾರ್ಯ, ಏಸು,ಪೈಗಂಬರ್ ಬುದ್ಧ,ಬಸವರಾದಿಯಾಗಿ ಗಾಂಧಿ, ಅಂಬೇಡ್ಕರ್ ಅವರ ವರೆಗೂ ಹರಿದು ಬಂದ ಈ ಪರಂಪರೆಯ ಇಂದಿನ ತಿರುವು ಅನಿರೀಕ್ಷಿತ ಹಾಗೂ ಆಘಾತಕರ. ಏಕರೂಪತೆಯನ್ನು ಸಾರುತ್ತ, ಬಹುರೂಪತೆಯನ್ನು ಅಪ್ಪಿಕೊಂಡು,ಒಪ್ಪಿಕೊಂ ಡು ಇಂದು ಮತ್ತೆ ಛಿದ್ರ ವಿಚ್ಛಿದ್ರ ಹಾದಿಯತ್ತ ಸಾಗಿರುವ ನಮ್ಮ ಈ ಪರಂಪರೆಯ ಬಗ್ಗೆ ಅತ್ಯಂತ ಜಾಗರೂಕರಾಗ ಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ. ವರ್ಗ-ವರ್ಣಗಳನ್ನು ರಾಜಕೀಯವಾಗಿ ದುಡಿಸಿಕೊಳ್ಳುವ, ಊರು-ಕೇರಿ, ಕಛೇರಿಗಳಲ್ಲಿ, ಕೆಲಸದ ಜಾಗಗಳಲ್ಲಿ ಬಳಸಿಕೊಳ್ಳುವ ಜಾಯಮಾನ ಇಂದು ಸಾಮಾನ್ಯವಾಗಿದೆ. ಇದರಿಂದ ಗುಂಪುಗಾರಿಕೆ ಅತಿಯಾಗುತ್ತಿದೆ. ಈ ಪಿಡುಗು ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರಗಳನ್ನೂ ಬಿಟ್ಟಿಲ್ಲ.ಆದ್ದರಿಂದಲೇ ತಮ್ಮ ತಮ್ಮ ಗುಂಪುಗಳನ್ನು ಪೊರೆಯಲು, ಪ್ರಶಸ್ತಿ ಪುರ ಸ್ಕಾರಗಳನ್ನು ನೀಡಲು ಹತ್ತಾರು ಸಂಘ ಸಂಸ್ಥೆಗಳು ಹುಟ್ಟುತ್ತಿವೆ. ಇಂಥ ಪ್ರವೃತ್ತಿಯನ್ನು ಪ್ರತಿಭಟಿಸಿದವರ ಪ್ರಾಣಾರ್ಪಣೆಯೂ ನಿರಂತರವಾಗಿದೆ.ಬಸವಣ್ಣನನ್ನು ನಿಂದಸಿದರೆ ವಚನ ಚಳುವಳಿಯ ಹಿರಿಮೆಯೇನು ಕಡಿಮೆಯಾಗುವುದೇ? ಗಾಂಧೀಜಿಗೆ ಗುಂಡಿಕ್ಕಿದರೆ ಅವರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಜಗತ್ತು ಮರೆಯುವುದೇ? ಲೇಖಕರ ಸಾವನ್ನು ಸಂಭ್ರಮಿಸಿದರೆ ಅವರ ಕೃತಿಗಳ ಮಹತ್ವವೇನು ಕಡಿಮೆಯಾಗುವುದೆ? ಈ ಪ್ರಶ್ನೆಗಳು ಹಾಗೂ ಇವಕ್ಕೆ ಉತ್ತರಗಳು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೂ ಇವು ಇನ್ನು ಮುಂದೆ ಮತ್ತೆ ಮತ್ತೆ ಮುಖಾಮುಖಿಯಾಗುವ ಸಂದರ್ಭಗಳೇ ಹೆಚ್ಚು ಎಂಬುದನ್ನು ಪ್ರತಿ ಸಾವೂ ನಿಚ್ಚಳವಾಗಿಸುತ್ತಿದೆ. ಆರಂಭದಲ್ಲಿ ಹೇಳಿದ ಗ್ಲಾಸ್‌ನಾಸ್ಟ್  ಹಾಗೂ ಪೆರೆಸ್ತೊಯಿಕಾ ವನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕಟ್ಟುವ ಮುಕ್ತತೆ ಬೇಕೇ ಹೊರತು ಕೆಡವುವ ಮುಕ್ತತೆ ಅಲ್ಲ. ಕೆಡವುವ ಮುಕ್ತತೆಗೆ ಇಂಬು ಕೊಟ್ಟರೆ ದೇಶವೇ ನಾಶವಾಗುವ ಉದಾಹರಣೆಗಳು ನಮ್ಮ ಮುಂದಿವೆ. ಅವುಗಳನ್ನು ಗಮನಿಸಿ ನಮ್ಮ ಮುಂದಿನ ನಡೆಯನ್ನು ನಾವೇ ನಿರ್ಧರಿಸಿಕೊಳ್ಳೋಣ.                           *******************************

ಕಟ್ಟುವ ಮುಕ್ತತೆ Read Post »

ಇತರೆ, ಲಹರಿ

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ

ಲಹರಿ ಡಾ. ಅಜಿತ್ ಹರೀಶಿ ವಾತಾವರಣ ಥಂಡಿಯಿಂದ ಕೂಡಿದೆ. ಮನಸ್ಸು ದುಪ್ಪಡಿ ಹೊದ್ದು ಮಲಗಿದೆ. ನಿನ್ನೆ ಒಂದೇ ದಿನಕ್ಕೆ ವಾಟ್ಸಾಪ್ ಗುಂಪೊಂದರಿಂದ ನಾಲ್ಕು ಜನ ಲೆಫ್ಟ್ ಆದರು. ಹೋದ ವರ್ಷ ಜುಲೈ ತಿಂಗಳಲ್ಲೇ ನಾನು ಎಲ್ಲ ಗ್ರೂಪ್ ಗಳಿಂದ ಹೊರಹೋಗಿದ್ದೆ. ಮತ್ತೆ ಕೆಲವು ಗ್ರೂಪ್ ಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮರಳಿದ್ದೆ. ಅವರೂ ಮರಳಬಹುದು. ವಾತಾವರಣ, ವಾಟ್ಸಾಪು ಮತ್ತು ಮಾನಸಿಕತೆಯ ಜೊತೆಗೆ ಈ ಬಾರಿ ಕೊರೋನ ಯಾಡೆಡ್ ಫ್ಲೇವರ್ರು. ಫೇಸ್ಬುಕ್ ನಮ್ಮನೆ ದೇವರು! ಬೆಳಿಗ್ಗೆ ಫೇಸ್ಬುಕ್ ಮುಂದೆ ಕುಳಿತು ಭಜನೆ ಮಾಡುವಾಗ ಕಹಳೆಯ ವಿನಯ ಸಜ್ಜನರ ( 29 ) ಸಾವಿಗೆ ಸ್ಯಾಡ್ ಇಮೋಜಿ ಕೊಡುತ್ತೇನೆ. ಫೇಸ್ಬುಕ್ ತೋರಿಸುವ ಹುಟ್ಟುಹಬ್ಬದ ನೋಟಿಫಿಕೇಶನ್ ಗೆಳೆಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಹಾಗೆ ಕೋರುವಾಗ ಅವರು ಅಲ್ಲಿ ಆಕ್ಟೀವ್ ಇದ್ದಾರೋ ಇಲ್ಲವೋ ನೋಡಿ, ಇಲ್ಲದಿದ್ದರೆ ಅನ್ ಫ್ರೆಂಡ್ ಮಾಡಿ ಮತ್ಯಾರದೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತೇನೆ. ಅಲ್ಲೊಂದು ಆಯಾ ದಿನದ ಮೆಮೊರಿ ತೋರಿಸುವ ವಿಭಾಗವೊಂದಿರುವುದು ನಿಮಗೆ ಗೊತ್ತಿಲ್ಲದ್ದೇನಲ್ಲ. ಅಲ್ಲಿ ನಾನು 2009 ರಿಂದ, ಇದೇ ದಿನ ಹಾಕಿದ ಪೋಸ್ಟ್ ಗಳನ್ನು ತೋರಿಸುತ್ತದೆ. ನೋಡಯ್ಯ ನಿನ್ನ ಅವತ್ತಿನ ಟೇಸ್ಟು, ಪಾಪ, ಪುಣ್ಯ ಎಂದು ಚಿತ್ರಗುಪ್ತನ ಪೋಸ್ ನೀಡುತ್ತದೆ. ನಾಲ್ಕೈದು ಪೋಸ್ಟ್ ಗಳಲ್ಲಿ ಮೂರನ್ನು ಅಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ಆಗ ಕಡಿಮೆ ಜನ ಓದುತ್ತಿದ್ದರೆಂಬ ಸಮಾಧಾನ ಒಳಗೊಳಗೇ! ಮತ್ತೆ ಹೋಂ ಗೆ ಬರುವಷ್ಟರಲ್ಲಿ ಒಂದಿಷ್ಟು ಪೋಸ್ಟ್ ಗಳಿರುತ್ತವೆ. ಅಭಿನಂದನೆಗಳನ್ನು ಕೋರುವುದು. ಆಹ್, ಓಹ್, ಚೆನ್ನಾಗಿದೆ, ಸೂಪರ್ ಇತ್ಯಾದಿ ಕಾಮೆಂಟಿಸಿ – ನಾನು ಒಂದು ಜಬರ್ದಸ್ತ್ ಸ್ಟೇಟಸ್ ಹಾಕುತ್ತೇನೆ. ಆಮೇಲೆ ಬಿಡುವಾದಾಗಲೆಲ್ಲ ಲೈಕ್, ಕಾಮೆಂಟ್ ನೋಡಿ ಒಳಗೊಳಗೇ ಖುಷಿ ಪಡುತ್ತೇನೆ. ಮುಂದಿನ ವರ್ಷ ಇದೇ ದಿನ ಅದೊಂದು ಲಟಾರಿ ಪೋಸ್ಟ್ ಅನಿಸಿ ಅಳಿಸಬಹುದು. ಒಂದಿಷ್ಟು ಪರ ನಿಂದೆ, ಆತ್ಮಸ್ತುತಿ ಮತ್ತು ಪರ ಸ್ತುತಿ, ಆತ್ಮನಿಂದನೆಯ ಪೋಸ್ಟ್ ಗಳನ್ನು ಸ್ರ್ಕೋಲ್ ಮಾಡುತ್ತ ಮುಂದುವರೆಯುತ್ತೇನೆ. ಓಹ್! ಕಳೆದೆರಡು ದಿನಗಳಿಂದ ಇನ್ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಟೆಲಿಗ್ರಾಂ ಓಪನ್ ಮಾಡಿಲ್ಲ. ಸಮಯವಾಯಿತು, ವೆರಿ ಹೆಕ್ಟಿಕ್ ಡೇ ಡಿಯರ್ ಫ್ರೆಂಡ್ಸ್. ನಾಳೆ ಮತ್ತೆ ಸಿಗೋಣ ಬೈ ನೌ.*****************************

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ Read Post »

ಇತರೆ

ಕವಿತೆಯೆಂಬ ಪುಳಕದ ಧ್ಯಾನ

ಮೊದಲ ಕವಿತೆಯ ರೋಮಾಂಚನ ಸ್ಮಿತಾ ಅಮೃತರಾಜ್ ನಿಜ  ಹೇಳಬೇಕೆಂದರೆ  ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ.  ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ ನಾನೇ ತರ್ಕಿಸಿಕೊಂಡು ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ಎಷ್ಟು ಬೇಡವೆಂದರೂ ಒಳಗೊಳಗೆ ಒಂದು ತುಡಿತ, ಗುರುತಿಸಿಕೊಳ್ಳಬೇಕೆಂಬ ಚಪಲ ನರ ಮನುಷ್ಯರಿಗೆ ಇದ್ದದ್ದೇ ತಾನೇ?. ಅದಕ್ಕೆ ನಾನೂ ಅಪವಾದವಲ್ಲ. ಹಾಗಾಗಿ ಕವಿತೆಯಂತ ನಿರಾಪಯಕಾರಿ ಅಥವಾ ನಿರುಪ್ರದವಿಯ ಪಟ್ಟ ಗಿಟ್ಟಿಸಿಕೊಂಡರೆ ಅದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ಧೋರಣೆ. ಅದರಲ್ಲೂ ಕವಿತೆಯ ಸಖ್ಯವನ್ನು ಬೆಳೆಸಿಕೊಂಡರೆ ಸುತ್ತಮುತ್ತಲಿನ ಜಗತ್ತೆಲ್ಲಾ ಸುಖಮಯ ಮತ್ತು ಸುಂದರ ಅಂತ ಬಲ್ಲವರೇ ಹೇಳಿದ ಮೇಲೆ ನನಗೂ ಕವಿತೆಯ ಒಡನಾಟ ಒಳ್ಳೆಯದೇ ಅನ್ನಿಸಿತು. ಅದಿರಲಿ, ನಾನೀಗ ಹೇಳ ಹೊರಟಿರುವ ವಿಷಯ ಅದಲ್ಲ. ಅದರ ಮೊದಲನೆಯ ಪೀಠಿಕಾ ಭಾಗ. ನನಗೂ ಕವಿತೆಗೂ ಅಂಟಿದ ನಂಟಿನ ಕುರಿತು. ಅದಕ್ಕೆ ಕಾರಣವಾದ ನನ್ನ ಚೊಚ್ಚಲ ಕವಿತೆಯ ಪ್ರಸವದ ಕುರಿತು, ಅದು ಕಟ್ಟಿಕೊಟ್ಟ ಪುಳಕ ಮತ್ತು ರೋಮಾಂಚನದ ಜಗತ್ತಿನ ಕುರಿತು.   ಸರಿ ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ಪದವಿ ತರಗತಿಗೆ ಕಾಲಿಟ್ಟ ಹೊತ್ತದು. ಎಲ್ಲಾ ಮಕ್ಕಳು ರಂಗು ರಂಗಿನ ಉತ್ಸಾಹದ ಬುಗ್ಗೆಗಳೇ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸ, ಆಸಕ್ತಿ ಇತ್ತು. ಕಾಲೇಜಿನ ಕಾರ್ಯಕ್ರಮ ಬಂತೆಂದರೆ ಎಲ್ಲರೂ ಪಾದರಸಗಳೇ. ಅಪವಾದಕ್ಕೆಂಬಂತೆ ನಾನೊಬ್ಬಳು ಯಾವುದಕ್ಕೂ ಸೇರದೇ ಮೂಲೆಯಲ್ಲಿ ಮುದುಡಿಕೊಳ್ಳುತ್ತಿದ್ದೆ. ನನಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ಬಲು ಪ್ರಿಯವೇ. ಆದರೆ ಈ ಹಾಳೂ ಹಿಂಜರಿಕೆ ಎಲ್ಲಿಂದ ಬಂದು ತಗುಲಿಹಾಕಿಕೊಂಡಿತೋ?, ಹರವಿ ಬಿಡಿಸ ಹೊರಟರೆ ಅದೋ ಇದೋ..?ಗೊಂದಲವಾಗುವಷ್ಟು.  ಮತ್ತೆಂತ  ಮಾಡಲು ಸಾಧ್ಯ?. ಆದರೂ ಒಳಗೊಂದು ಅಭೀಪ್ಸೆ. ನಾನು ಸೈ ಎನ್ನಿಸಿಕೊಳ್ಳಬೇಕು ಅನ್ನುವುದು. ಹೀಗಿರುವಾಗ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಕವನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕವಿತೆಯ ಎಬಿಸಿಡಿ ಗೊತ್ತಿರದ ನಾನು, ಅಲ್ಲೊಂದು ಇಲ್ಲೊಂದು ಬಾಲಮಂಗಳದ ಕವಿತೆಯನ್ನು ಓದಿದ್ದು ಬಿಟ್ಟರೆ, ಶಾಲೆಯ ಪಠ್ಯ ಪುಸ್ತಕದ ಕವಿತೆಗಳನ್ನು ಪರೀಕ್ಷೆಯ ದೃಷ್ಟಿಯಿಂದ ಕಣ್ಣಾಡಿಸಿದ್ದು  ಬಿಟ್ಟರೆ,  ಕವಿತೆ ಅಂದರೆ ಬುದ್ದಿವಂತರ ಬಂಡವಾಳ ಅನ್ನುವುದಷ್ಟೇ ಗೊತ್ತಿದ್ದರೂ ಸಣ್ಣ ತರಗತಿಯಲ್ಲಿ ದಡ್ಡಿ ಹುಡುಗಿಯೊಬ್ಬಳು ನೋಟ್ ಪುಸ್ತಕದ ಹಾಳೆಯ ನಡುವೆ ಕವಿತೆ ಗೀಚುತ್ತಿದ್ದದ್ದು ನಿಜಕ್ಕೂ ನನಗೆ ವಿಸ್ಮಯದಂತೆ ತೋರಿತ್ತು. ಅಲ್ಲಿಂದನೇ ಕವಿತೆಯ ಕುರಿತು ಒಂದು ರೀತಿಯ ಹೇಳಲಾಗದ ಅನೂಹ್ಯ ಆಕರ್ಷಣೆ ಇತ್ತೆಂಬುದು ಈಗ ಅನ್ನಿಸುತ್ತಿದೆ. ಆದರೆ ರಮ್ಯ ಕತೆಗಳನ್ನು, ಸಾಮಾಜಿಕ ಕಾದಂಬರಿಗಳನ್ನು ಸಿಕ್ಕಾಪಟ್ಟೆ ಓದುವ ಅಭ್ಯಾಸ ಇತ್ತು. ನಮ್ಮ ಕಾಲೇಜಿನಲ್ಲಿ ನಮಗೆ ಸಾಹಿತ್ಯ ಓದಲು ಬರೆಯಲು ಪ್ರೇರೇಪಿಸುವ ಅರ್ಥಶಾಸ್ತ್ರದ ಉಪನ್ಯಾಸಕರಿದ್ದರು. ಅವರು  ಆ ದಿನ ಪಾಠ ಮುಗಿಸಿ ಹೋಗುವ ಮುನ್ನ ಈ ಸಲ ನೀವು  ಈ ಸ್ಪರ್ಧೆಯಲ್ಲಿ ಭಾಗವಹಿಸಿ , ಈ ಕಾಲೇಜಿನಿಂದ  ಹೊರ ಹೋಗುವ ಮುನ್ನ  ಕವಿ ಪಟ್ಟ ಕಟ್ಟಿಕೊಂಡು ಹೋಗಿ ನೋಡುವಾ ಅಂತ ಸವಾಲೆಸೆಯುವಂತೆ, ತಮಾಷೆಗೋ, ಗಂಭೀರಕ್ಕೋ ಒಂದೂ ಗೊತ್ತಾಗದಂತೆ ಹೇಳಿ ಹೋದರೂ ನನ್ನ ತಲೆಯೊಳಗೆ ಹೌದಲ್ವಾ! ನಾನೂ ಯಾಕೆ ಪ್ರಯತ್ನಿಸಬಾರದು ?, ನಾನೂ ಯಾವುದಕ್ಕೂ ಬಾರದವಳು ಅಂತ ಅನ್ನಿಸಿಕೊಳ್ಳಬಾರದು ಅನ್ನುವ ಬಹುಕಾಲದ ಹಪಾಹಪಿಗೆ ತೀವ್ರವಾಗಿ ಕವಿತೆ ಬರೆಯಬೇಕು ಅಂತ ಅನ್ನಿಸತೊಡಗಿತು. ನನ್ನ ಹಾಸ್ಟೆಲ್ ಮೇಟ್  ಗೆಳತಿಯನ್ನು ಪುಸಲಾಯಿಸಿ, ಅವಳು ನನ್ನ ಜೊತೆ ಧೈರ್ಯಕ್ಕಿದ್ದಾಳೆಂಬುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ನಾನೂ ಕವಿತೆ ಬರೆಯುವ ಸಾಹಸಕ್ಕೆ ಮುಂದಾಗಿದ್ದೆ. ನಾಳೆ ಕವಿತೆ ಸ್ಪರ್ಧೆ, ಎಂತ ಬರಿಯೋದು ಅಂತ ಮಂಡೆಗೆ ಹೊಳಿತಾನೇ ಇಲ್ಲ. ಕವಿತೆ ಎದೆಯೊಳಗಿನಿಂದ ಮೊಳೆಯಬೇಕೆಂಬುದು ಗೊತ್ತೇ ಇರಲಿಲ್ಲ. ಆದರೆ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರು ಮಾಡಿತ್ತು.  ಸ್ಥಳದಲ್ಲಿ ಕುಳಿತೇ ಬರೆಯಬೇಕು ಅಂತ ಮೊದಲೇ ಹೇಳಿದ್ದರು. ಯಾಕೆ ಬೇಕಿತ್ತು ಈ ಬೇಡದ ಉಸಾಬರಿ ಅಂತ ಸಾವಿರದ ಒಂದು ಬಾರಿ ನನಗೆ ನಾನೇ ಹೇಳಿಕೊಂಡಿರ ಬಹುದು. ಹಾಗೇ ಹೀಗೇ ಹೇಗೋ ಪಾಠ ಓದಿಕೊಂಡು, ನಡು ನಡುವೆ, ಸಾಯಿಸುತೆ,ತ್ರಿವೇಣಿ ಓದಿಕೊಂಡು ತೆಪ್ಪಗಿರಬಹುದ್ದಿತ್ತಲ್ಲ?. ಇನ್ನು ನಾನು ಕವಿತೆ ಬರೆದು ,ಅದನ್ನು ಓದಿ ಲೆಕ್ಚರ್ ನಗುವುದು.. ಇದೆಲ್ಲಾ ಬೇಕಾ?.ಇವನ್ನೆಲ್ಲಾ ತಲೆಯೊಳಗೆ ಹುಳದಂತೆ ಬಿಟ್ಟುಕೊಂಡು ಲೈಬ್ರರಿಗೆ ಹೋಗಿ ಅಲ್ಲಿ ಪುಸ್ತಕದೊಳಗಿದ್ದ ಕವಿತೆಯನ್ನೆಲ್ಲಾ ಜಾಲಾಡಿದ್ದೇ ಜಾಲಾಡಿದ್ದು. .ಇದನ್ನೆಲ್ಲಾ ನೆನಪಿಸಿಕೊಳ್ಳುವ ಈ ಹೊತ್ತಿನಲ್ಲಿ ನಗು ತಡೆಯಲಾರದಷ್ಟು ಬರುತ್ತಿದೆ. ಕವಿತೆ ಯಾಕೆ ಬರಿಯಬೇಕು? ಕವಿತೆ ಅಂದರೆ ಏನು ಅಂತನೂ ತಲೆ ಬುಡ ಗೊತ್ತಿಲ್ಲದ ಸಂಧಿಗ್ಧತೆಯಲ್ಲಿ ಕವಿತೆ ಬರೆಯಲು ಹೊರಟಿದ್ದೆ. ಆದರೆ ನನ್ನ ಜೊತೆಗ ಹೆಸರು ನೋಂದಾಯಿಸಿದ ಗೆಳತಿ ಈ ಕವಿತೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಓಡಾಡಿಕೊಂಡಿರುವುದನ್ನು ನೋಡಿದಾಗ ನಿಜಕ್ಕೂ ಗಾಬರಿಯೂ ನಗುವೂ ಒಟ್ಟೊಟ್ಟಿಗೆ ಬರುತ್ತಿತ್ತು. ನನಗೊಬ್ಬಳಿಗೆ ಯಾಕೆ ಹೀಗೆ ಆಗುತ್ತಿದೆಯೆಂದು ತಲೆ ಕೆರೆದುಕೊಂಡರೂ ಉತ್ತರ ಸಿಗುತ್ತಿರಲಿಲ್ಲ. ಇನ್ನು ಅಲ್ಲಿ ಕೂತು ಎಂತ ಕವಿತೆ ಬರೆಯೋದಪ್ಪಾ ಅಂತ ಒಂದು ವಾರದಿಂದ ಕೂತು ಯೋಚಿಸಿದರೂ  ಜಪ್ಪಯ್ಯ ಅಂದರೂ ಒಂದು ಸಾಲೂ ಹೊಳೆದಿರಲಿಲ್ಲ. ನನ್ನ ಸಂಕಟವನ್ನು ಕಡಿಮೆ ಮಾಡಲೋ ಎಂಬಂತೆ ಆ ದಿನ ಎಲ್ಲರಿಗೂ   ’ ಕಾಲ ಕಾಯುವುದಿಲ್ಲ ’ ಅನ್ನೋ  ಒಂದೇ ಶೀರ್ಷಿಕೆಯನ್ನು ಕೊಟ್ಟು ಈ ಕುರಿತು ಕವಿತೆ ಮನೆಯಲ್ಲಿ ಯೋಚಿಸಿ ಬರೆದುಕೊಂಡು ಬನ್ನಿ . ಮತ್ತೆ ಅದು ನಿಮ್ಮ ಸ್ವಂತದ್ದೇ ಆಗಿರಲಿ ಅಂತ ಎಚ್ವರಿಕೆ ಬೇರೆ ಕೊಟ್ಟಿದ್ದರು. ಬಹುಷ; ಅವರಿಗೆ ನಮ್ಮ ಮೇಲೆ ಸಣ್ಣ ಗುಮಾನಿ ಇದ್ದಂತೆ ತೋರುತ್ತದೆ.     ನಮ್ಮ ಕಾಲೇಜಿನಲ್ಲಿ ಅದಾಗಲೇ ಕವಿಗಳು ಅಂತ ಪೇಟ ಧಾರಣೆ ಮಾಡಿಕೊಂಡವರ ಒಂದು ಬಳಗ ಇತ್ತು. ಅವರನ್ನೆಲ್ಲ ನೋಡುವಾಗ ಇವರ ಮಂಡೆಲಿ ಭಯಂಕರ ಬೊಂಡು ಇದೆ ಅಂತ ನಮಗೆ ನಾವೇ ಗ್ರಹಿಸಿಕೊಂಡಿದ್ದೆವು. ಅವರನ್ನು ಕಾಲೇಜಿನಲ್ಲಿ ನೋಡುವಾಗ ಇವರೇ  ಕುವೆಂಪು, ಬೇಂದ್ರೆಯವರ ನಂತರದ ವಾರಸುದಾರರು ಅಂತ  ಭಾಸವಾಗಿ ಭಯ ಭಕ್ತಿ ಹುಟ್ಟುತ್ತಿತ್ತು. ಇವರೆಲ್ಲರ ನಡುವೆ ನಾನು ಕವಿತೆ ಬರೆಯೋದುಂಟೇ?.ಇರಲಿ ಬಿಡು ಆದದ್ದು ಆಗಲಿ, ಒಂದು ಕವಿತೆ ಬರೆದು ಲಕೋಟೆಯೊಳಗೆ ಹಾಕಿ ಗೋಂದು ಅಂಟಿಸಿ ಕೊಟ್ಟರೆ ಯಾರಪ್ಪನ ಗಂಟು ಹೋಗುವುದಿಲ್ಲ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡು ’ಕಾಲ ಕಾಯುವುದಿಲ್ಲ’ ಕವಿತೆಯ ಕುರಿತ ಯೋಚನೆಯಲ್ಲೇ ರಾತ್ರೆಯಿಡೀ ಕಾಲ ಕಳೆಯುತ್ತಾ  ಯೋಚಿಸಿ ಯೋಚಿಸಿ ಇನ್ನೇನು ತಲೆ ಹನ್ನೆರಡಾಣೆ ಆಗುತ್ತೆ ಅನ್ನುವಾಗ ಪಕ್ಕನೆ ಹೊಳೆದೇ ಬಿಟ್ಟಿತು ನೋಡಿ ಎರಡು ಸಾಲು. ಆರ್ಕಿಮಿಡಿಸಿಗೆ ಆದ ಸಂತೋಷ ಏನು ಎಂಬುದನ್ನು ಈಗ ನಾನು ಅನುಭವಿಸಲು ಶಕ್ಯಳಾಗಿದ್ದೆ. ದಡಕ್ಕನೆ ಎದ್ದು ಎಲ್ಲಿ ಆ ಸಾಲು ಕೈ ತಪ್ಪಿ ಹೋಗುತ್ತೋ ಅಂತ ದಿಗಿಲಿನಿಂದ ಪೆನ್ನು ಪೇಪರು ಹಿಡಿದು ಕುಳಿತೇ ಬಿಟ್ಟೆ.    ’ ಕಾಲ ಕಾಯುವುದಿಲ್ಲ ಗೆಳತೀ.. ಆಗಲೇ ಬೇಕಾದುದಕೆ  ಮರುಕವನೇಕೆ ಪಡುತೀ..’ ಪ್ರೇಮ ಪ್ರಣಯದ ನವಿರು ಸಾಲುಗಳು ಹುಟ್ಟ ಬೇಕಾದ  ಆ ಪ್ರಾಯದಲ್ಲಿ ವೇದಾಂತಿಯಂತೆ ಯಾಕೆ  ಈ ಸಾಲು ಹುಟ್ಟಿಕೊಂಡಿತೋ ಅಂತ ಹಲವು ಭಾರಿ ಯೋಚಿಸಿದ್ದಿದೆ. ಈ ವರೆಗೂ ಉತ್ತರ ದಕ್ಕಲಿಲ್ಲ. ಕವಿತೆಯೆಂದರೆ ಅದೇ ತಾನೇ ಉತ್ತರಕ್ಕೆ ನಿಲುಕದ್ದು. ಸಿಕ್ಕ ಎರಡೇ ಎರಡು ಸಾಲು ಹಿಡಿದುಕೊಂಡು , ಪ್ರಾಸ ಜೋಡಿಸಲು ತ್ರಾಸ ಪಡುತ್ತಾ ಒಂದೊಂದೇ ಸಾಲು ಜೋಡಿಸುತ್ತಾ ಅದೆಂಗೆ ಇಪ್ಪತ್ತು ಸಾಲು ಕವಿತೆ ಬರೆದೆನೋ ಆ  ಪರಮಾತ್ಮನಿಗೇ ಗೊತ್ತು.  ಮೊದಲ ಪದ್ಯ ಅದು. ಬರೆದಾದ ಮೇಲೆ ಅದೆಂಥಾ ನಿರಾಳ ಅಂತೀರಾ?. ನಿಜಕ್ಕೂ ಅಂತಹ ಒಂದು ಭಾವ ನನಗೆ ಈವರೆಗೂ ದಕ್ಕಲಿಲ್ಲ.  ಬರೆದ ಒಂದು ಪುಟವನ್ನು ಅದೆಷ್ಟು ಬಾರಿ ಶ್ಲೋಕ ಪಠಿಸುವಂತೆ ಪಠಿಸಿದೆನೋ..?. ಭಗವಂತನ ನಾಮ ಸ್ಮರಣೆ ಮಾಡಿದ್ದರೆ ಬಹುಷ; ದೇವರು ಪ್ರತ್ಯಕ್ಷ ಆಗಿ ಬಿಡುತ್ತಿದ್ದನೆನೋ. ಬಹುಮಾನ ಸಿಗುತ್ತದೆ ಅಂತ ನನಗೆ ಖಾತ್ರಿಯಿರಲಿಲ್ಲ. ಆದರೆ ತುಂಡರಿಸಿದ ಗದ್ಯದ ಸಾಲುಗಳನ್ನೇ ಕವಿತೆ ಅಂತ  ಭ್ರಮಿಸಿ ಖುಷಿ ಪಟ್ಟದ್ದಕ್ಕೆ ಎಣೆಯಿಲ್ಲ. ಮಾರನೇ ದಿನ ಏನೋ ಲವ ಲವಿಕೆ. ಕವಿತೆಗೆ ಇಷ್ಟೊಂದು ದೈವಿಕವಾದ ಶಕ್ತಿ ಇದೆಯಾ?. ಅದಕ್ಕೆ ಎಲ್ಲರಿಗೂ ಕವಿತೆ ಅಂದರೆ ಅದೇನೋ ಆಕರ್ಷಣೆ , ಅದಕ್ಕೆ ಅದರ ಹಿಂದೆ ದುಂಬಾಲು ಬಿದ್ದುಕೊಂಡು ಹೋಗುವುದು ಅಂತ ಹೊಸ ಸತ್ಯವೊಂದು ಗೋಚರವಾಯಿತು.  ನಾನು ಕಾಲೇಜಿಗೆ ಹೋಗಿ ಡೆಸ್ಕಿನ ಮೇಲೆ ಬಿಳಿ ಹಾಳೆ ಇಟ್ಟು, ರಾತ್ರೆ ಬರೆದು ಉರು ಹೊಡೆದ ಪದ್ಯವನ್ನು ಮತ್ತೊಮ್ಮೆ ಬರೆದೆ. ಪಕ್ಕದಲ್ಲಿದ್ದ  ಗೆಳತಿಗೆ ದಿಗ್ಭ್ರಮೆ ಆಗಿರಬೇಕು. ನೀನು ಅದು ಹೇಗೆ ತಟ್ಟನೆ ಕೂತಲ್ಲೇ ಕವಿತೆ ಬರಿತೀಯಾ? ಅಂತ ಪ್ರಶ್ನೆ ಹಾಕಿಬಿಟ್ಟಳು. ನಾನು ರಾತ್ರೆಯಿಡೀ ಪಾರಾಯಣ ಮಾಡಿ, ಪಠಿಸಿ, ಕಂಠ ಪಾಠ ಮಾಡಿದ್ದು ಅವಳಿಗೆ ಹೇಗೆ ತಾನೇ ಗೊತ್ತಾಗಬೇಕು?.  ನಾನೋ ನಿರ್ಲಿಪ್ತತೆಯಿಂದ ಹ್ಮೂಂ, ಹೌದು! ಏನೋ ಮನಸಿಗೆ ಬರುತ್ತಿರುವುದನ್ನು ಗೀಚುತ್ತಿದ್ದೇನೆ ಅಂತ ಅವಳಲ್ಲಿ ಕುತೂಹಲ ಮೂಡಿಸಿ ಒಳಗೊಳಗೆ ನಗುತ್ತಾ ಕವಿತೆ ಬರೆದು ಮುಗಿಸಿ,ಲಕೋಟೆಯೊಳಗಿಟ್ಟು ತಲುಪಿಸ ಬೇಕಾದವರಿಗೆ ಹರ್ರಿಬಿರ್ರಿಯಲ್ಲಿ ತಲುಪಿಸಿ ಬಂದಿದ್ದೆ. ಎರಡು ದಿನ ಬಿಟ್ಟು ಕವಿತೆ ಸ್ಪರ್ಧೆಯ ಫಲಿತಾಂಶ, ಕನ್ನಡ ಉಪನ್ಯಾಸಕರೇ ತೀರ್ಪುಗಾರರು. ನಾನು ಹಿಂದಿ ತರಗತಿಯ ವಿದ್ಯಾರ್ಥಿಯಾದರೂ ಕಾರಿಡಾರಿನಲ್ಲಿ ಕನ್ನಡ ಮೇಷ್ಟ್ರ ಕಣ್ಣು ತಪ್ಪಿಸಿ ಓಡುವುದೇ ಆಯಿತು. ಅದೆನೋ ಅಳುಕು. ಒಂದು ಕವಿತೆ ಬರೆದು ಕಣ್ಣು ತಪ್ಪಿಸಿ ಓಡಾಡುವಂತಾಯಿತಲ್ಲ!,  ದೇವರೇ, ನನ್ನೊಳಗಿನ ತಳಮಳ ಹೇಗೆ ಪದಗಳಲ್ಲಿ ಹಿಡಿದಿಡುವುದು?. ಆದರೆ ಪರಮಾಶ್ಚರ್ಯವೆಂಬಂತೆ ನಮ್ಮ ಕಾಲೇಜಿನ ಕವಿವರ್ಯರನ್ನೆಲ್ಲಾ ಮೀರಿಸಿ ನನ್ನ ಗೆಳತಿ ಮೊದಲ ಬಹುಮಾನ ಪಡೆದುಕೊಂಡರೆ, ನನಗೆ ದ್ವಿತೀಯ ಬಹುಮಾನ.  ಅಬ್ಭಾ! ಆ ದಿನ ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಬಹುಷ: ನಾನು ಗಾಳಿಯಲ್ಲಿ ತೇಲಿದಂತೆ ನಡೆಯುತ್ತಿದ್ದೆನೇನೋ. ಎಲ್ಲರಿಗೂ ಹೇಳಿದ್ದೇ ಹೇಳಿದ್ದು. ನನ್ನ ಬಾಯಿ ನೋಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಕಿವಿ ನೋವಾಗಿರ ಬಹುದು.  ನನಗೆ ನಾನೇ ದೊಡ್ಡ ಜನ ಆದಂತೆ ಭ್ರಮಿಸಿಕೊಂಡೆ. ಕವಿತೆ ಬರೆಯುವುದು ಎಷ್ಟು ಸುಲಭ ಅಲ್ಲವಾ ಅಂತ ಅನ್ನಿಸಲಿಕ್ಕೆ ಶುರುವಾಗ ತೊಡಗಿತು. ಅಭ್ಭಾ ಕವಿತೆಯೇ.. ! ಮತ್ತೆ ಪ್ರಾಸ ಪ್ರಾಸ ಸೇರಿಸಿ ಕವಿತೆ ಕಟ್ಟುವುದೇ ಆಯಿತು. ಅದೇ ಹೊತ್ತಿನಲ್ಲಿ ಪ್ರತಿಷ್ಟಿತ ಪತ್ರಿಕೆಯೊಂದು ಯುವ ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಾ ಅವರಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ , ಬಹುಮಾನ ಕೊಡುತ್ತಿದ್ದರು. ವಿಜೇತರ ಫೊಟೋ ವನ್ನು ಪತ್ರಿಕೆಯಲ್ಲಿ ಹಾಕುತ್ತಿದ್ದರು. ಅಲ್ಲೂ ಅವರು ’ಗಾಂಧೀಜಿ” ಬಗ್ಗೆ ಕವಿತೆ ಬರೆಯಿರಿ ಅಂತ ಪ್ರಕಟಣೆ ಕೊಟ್ಟಿದ್ದರು. ಮೊದಲ ಬಹುಮಾನದ ಉತ್ಸಾಹ ಇನ್ನೂ ಕಡಿಮೆ ಆಗಿರಲಿಲ್ಲ. ನಾನೂ ಬರೆದು ಹಾಕಿದೆ. ಕೆಲವೇ ದಿನಗಳಲ್ಲಿ ಅಲ್ಲಿಂದ ಪ್ರತಿಕ್ರಿಯೇ. ನಿಮ್ಮ ಕವಿತೆ ಆಯ್ಕೆ ಆಗಿದೆ ಅಂತ. ನನ್ನ ಖುಷಿ ಯಾರಿಗೆ ಹೇಳಲಿ?. ಈ ಸಾರಿ ನಾನೂ ದೊಡ್ದ ಕವಿಯಾದೆನೇನೋ ಅಂತ ಬೀಗಿ ಬಿಟ್ಟೆ. ಮರುವಾರ ಆಯ್ಕೆಯಾದ ಕವಿಗಳ ಪೊಟೋ ಹಾಕಿದ್ದರು. ರಾಶಿ ರಾಶಿ ಪೊಟೊಗಳ ಮದ್ಯೆ ನನ್ನದು ಕೊನೇಗೂ ಸಿಕ್ಕಿ ಬಿಡ್ತು. ಬಹುಷ; ಬರೆದ ಎಲ್ಲಾ ಕವಿಗಳ ಪೊಟೋ ಹಾಕಿದ್ದಿರಬಹುದೆಂದು ಆಗ ಹೊಳೆದೇ ಇರಲಿಲ್ಲ. ಅಂತೂ ಇಂತೂ ಆ ಸಾರಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ವಿಭಾಗದ ಕವಿಗೋಷ್ಟಿಗೆ ನಾನು

ಕವಿತೆಯೆಂಬ ಪುಳಕದ ಧ್ಯಾನ Read Post »

ಕಾವ್ಯಯಾನ

ಬೇರುಗಳು

ಕವಿತೆ ಪೂರ್ಣಿಮಾ ಸುರೇಶ್ ನಸುಕಿನ ಮೌನಹಳೆಯ ಹಾದಿಗೆಹೆಜ್ಜೆ ಜೋಡಿಸಿದೆ ಅದೇಆಚೆ ಬದಿ ಅಶ್ವತ್ಥ ಈ ಬದಿ ಆಲ ಆಲದ ಜಟಿಲ ಬಿಳಲುಗಳುನೇತಾಡಿದ್ದುಮಣ್ಣ ಪಾದಗಳು ತೇಲಿ ಅಗಸವಸ್ಪರ್ಶಿಸಿಮುದಗೊಂಡಿದ್ದುಎಲೆ ಮರೆಯ ಗೂಡಿನ ಹಕ್ಕಿಗಳಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂಗುಲಾಬಿ ಅಂಗೈ ದೊರಗು ಸೆಳೆತಕೆಕೆಂಪಾಗಿದ್ದುಪುಟ್ಟ ಉರಿ ಸುಡುತ್ತಿದ್ದರೂ ಆಕರ್ಷಣೆ ! ಮತ್ತೆಮತ್ತೆತೂಗಿ ಬಿದ್ದದ್ದುತರಚಿದ್ದು.. ಈ ಅಶ್ವತ್ಥ!ಪುಟ್ಟ ಮನಸಿಗೆ ನಿಲುಕದದೊರಗು ದೇಹಆಗಸದ ಅಖಂಡ ಮೌನಕೆತನ್ನ ಧ್ಯಾನ ತುಣುಕುಗಳ ಸಿಲುಕಿಸಿಅನುಸಂಧಾನಗೈವಎಲೆಗಳು ಸುತ್ತು ಸುತ್ತಿದ್ದುಹತ್ತಿರದ ಪುಟ್ಟಗಿಡದ ಹಸಿರಪರಪರ ಎಳೆದುಹರಿದುಮನೆಯಾಟಕೆ ಅಡುಗೆತಯಾರಾಗಿದ್ದು.. ಕೈಗೆ ಹಸಿರು ರಸಕಾಲಲ್ಲಿ ಮಣ್ಣು ತೇವ ಆಲ-ಅಶ್ವತ್ಥಆಳಕ್ಕಿಳಿಸುತ್ತವೆಬೇರುಒಳಕೂಗುಅಕ್ಷರವಾಗಲು ತುಡಿಯುತ್ತವೆ.ಬೆಳಕಾಗಿ ಪೊರೆಯುತ್ತದೆಜೀವಂತಿಕೆಯ ಜಗದಗಲ ತೆರೆಯುತ್ತದೆ. ************************************

ಬೇರುಗಳು Read Post »

ಇತರೆ

ನಾ ಬರೆದ ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ ಬರೆಯಲು ಪ್ರಾರಂಭಿಸಿದಾಗ ಮೊದಲು ಬರೆದದ್ದು ಕವನವೇ. ಅದಕ್ಕೊಂದು ಸ್ವಾರಸ್ಯಕರ ಘಟನೆಯಿದೆ. ನಾನೊಂದು ಮಹಿಳಾಮಂಡಳದ ಸದಸ್ಯೆ. ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯೆಯರು ಒಂದು ನಾಟಕ ಆಡಬೇಕೆಂದು ನಿರ್ಧರಿಸಲಾಗಿತ್ತು. ಒಬ್ಬ ಸದಸ್ಯೆ ನಾಟಕ ಬರೆದಿದ್ದರೆ, ಉಳಿದವರು ಪಾತ್ರಧಾರಿಗಳು. ನನಗೂ ಒಂದು ಪಾತ್ರವಿತ್ತು ಅದರಲ್ಲಿ. ಸಾಮಾಜಿಕ ನಾಟಕದ ಹೆಸರು ‘ಆಯುಷ್ಯಕ್ಕೆ ಒಂದಿಷ್ಟು ರೇಶನ್’. ನಾಟಕದ ರಿಹರ್ಸಲ್ ಸುರುವಾದಮೇಲೆ ಡೈರೆಕ್ಟರ್ ಹೇಳಿದರು – ಇದಕ್ಕೆ ಒಂದು ಟೈಟಲ್ ಸಾಂಗ್ ಇದ್ದರೆ ಚೆನ್ನಾಗಿತ್ತು ಅಂತ. ಒಂದೆರಡು ದಿವಸ ಅದಕ್ಕೆ ವ್ಯವಸ್ಥೆ ಆಗಲಿಲ್ಲ. ನಾನೇ ಯಾಕೆ ಬರೆಯಬಾರದು? ಅನ್ನಿಸಿತು. ಸರಿ ಮುಂದೆ ಎರಡು ದಿನದಲ್ಲಿ ಒಂದು ಕವನ ತಯಾರಾಯಿತು, ಆಯುಷ್ಯ ಬೇಕೇ ಆಯುಷ್ಯ ಶೀರ್ಷಿಕೆ ಇಟ್ಟುಕೊಂಡು. ಪ್ರಾಸಬದ್ಧವಾಗಿಯೇ ಬರೆದಿದ್ದೆ.  ಗೆಳತಿ (ಡೈರೆಕ್ಟರ್) ಗೆ ಒಯ್ದು ತೋರಿಸಿದೆ. ಆದರೆ ನಾನು ಬರೆದದ್ದು ಅಂತ ಮಾತ್ರ ಹೇಳಲಿಲ್ಲ. ನನ್ನ ಬಗ್ಗೆ ನನಗೇ ವಿಶ್ವಾಸವಿರಲಿಲ್ಲ. ನನ್ನ ಪತಿ ಮಹಾಶಯರಿಗೆ ನಾಟಕದ ಹುಚ್ಚಿತ್ತು. ಅಲ್ಲದೆ ಅಲ್ಪ ಸ್ವಲ್ಪ ಬರೆಯುವ ಅಭ್ಯಾಸವಿತ್ತು. ಹೀಗಾಗಿ, ನಾನು ಬರೆದ ಕವನವನ್ನು ಅವರು ಬರೆದು ಕೊಟ್ಟಿರುವರು ಎಂದು ಹೇಳಿಬಿಟ್ಟೆ. ಗೆಳತಿಗೆ ಒಪ್ಪಿಗೆಯಾಯಿತು. ಧಾಟಿ ಹಚ್ಚಿ ಹಾಡಿ, ನೋಡಿ, ಪಾಸ ಮಾಡಿಬಿಟ್ಟರು. ವಾರ್ಷಿಕೋತ್ಸವ ಆಚರಣೆಯಲ್ಲಿ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದಾದಮೇಲೆ ಯಾರಿಗಾದರೂ ಇದನ್ನು ತಿಳಿಸಿ ನನ್ನ ಸಂತೋಷ ಹಂಚಿಕೊಳ್ಳಬೇಕೆಂದು ತುಡಿಯುತ್ತಿದ್ದೆ. ನನ್ನ ಗಂಡನಿಗೆ ಬಿಟ್ಟರೆ ಯಾರಿಗೂ ವಿಷಯ ತಿಳಿದಿರಲಿಲ್ಲ. ನನಗೆ ಬರೆಯುವ ಹುಮ್ಮಸ್ಸು, ವಿಶ್ವಾಸ ಉಕ್ಕೇರತೊಡಗಿತು. ತಲೆಯಲ್ಲಿರುವ ಕೆಲವು ವಿಚಾರಗಳಿಗೆ ಮನಸ್ಸಿನ ಭಾವನೆಗಳ ಪ್ರನಾಳಿಯಲ್ಲಿ ಹಾಕಿ ಮತ್ತೆರಡು ಕವನ ಬರೆದೆ. ನನ್ನಮ್ಮನಿಗೆ ನುಡಿನಮನ ಮತ್ತು ಮಹಿಳೆಯ ಶೋಷಣೆಯ ಬಗೆಗೆ. ನಾನೂ ಬರೆಯಬಹುದೆನ್ನಿಸಿತು. ಅಲ್ಲಿಂದ ಪ್ರಾರಂಭವಾದ ಕವನ ಯಾನ, ಐದು ವರ್ಷಗಳಲ್ಲಿ ೩೫೦ ಕವನ ಗಳನ್ನೊಳಗೊಂಡ ಐದು ಕೃತಿಗಳು ಹೊರಬಂದವು. ಮೊದಲ ಸಂಕಲನಕ್ಕೆ ಪ್ರಶಸ್ತಿ ಲಭಿಸಿತು. ಮತ್ತೆ ಹಲವಾರು ಕವನಗಳು ಬಹುಮಾನಕ್ಕೆ ಪಾತ್ರವಾದವು. ಮೊದಲು ಬರೆದ ಕವನ ಬಹಳ ಕಚ್ಚಾ ಇದೆ. ಈಗ ನನಗೆ ಗೊತ್ತಾಗುತ್ತದೆ. ಆದರೆ ಅದು ನನ್ನ ಮೊದಲ ಮಗು ಇದ್ದಂತೆ. ಅಪಾರ ಪ್ರೀತಿಗೆ ಪಾತ್ರವಾಗಿದೆ. **********************

ನಾ ಬರೆದ ಮೊದಲ ಕವನ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

ಅಂಕಣಬರಹ ಪುಸ್ತಕ- ಬಾನಸಮುದ್ರಕೆ ಗಾಳನೋಟ ಲೇಖಕರು- ಪ್ರವೀಣ ಬೆಲೆ ೮೦/- ಪ್ರಕಾಶನ-ಸಲೀಲ ಪುಸ್ತಕ ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್‌ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು ಓದಿದಾಗ ನನಗೆ ಈ ಘಟನೆ ನೆನಪಾಗಿ ಮತ್ತೊಮ್ಮೆ ಕಣ್ಣಲ್ಲಿ ನೀರೂರಿತು. ತಾಯಂದಿರ ಸೀರೆಯ ಬಗ್ಗೆ ಎಲ್ಲ ಮಕ್ಕಳಿಗೂ ಒಂದು ರೀತಿಯಾದ ಭಾವನಾತ್ಮಕವಾದ ಅನುಬಂಧವಿರುತ್ತದೆ. ಊಟವಾದ ನಂತರ ತಾಯಿಯ ಸೆರಗಿಗೆ ಕೈ ಒರೆಸದ ನನ್ನ ತಲೆಮಾರಿನವರು ಸಿಗಲು ಸಾಧ್ಯವೇ ಇಲ್ಲ. ಕೊನೆಯಪಕ್ಷ ಹಳ್ಳಿಯಲ್ಲಿ ಬೆಳೆದವರಾದರೂ ಅಮ್ಮನ ಸೆರಗಿಗೆ ಕೈ ಒರೆಸಿಯೇ ಒಳೆದವರು ಎಂದು ಖಡಾಖಂಡಿತವಾಗಿ ಹೇಳಬಲ್ಲೆ. ನನ್ನ ನಂತರದ ತಲೆಮಾರಿಗೆ ಸೆರಗು ಸಿಕ್ಕಿರಲಿಕ್ಕಿಲ್ಲ. ಆದರೆ ಅಮ್ಮ ಬೆನ್ನು ತಬ್ಬಿ ಅಮ್ಮನ ಚೂಡಿದಾರಕ್ಕೆ ಮುಖ, ಕೈ ಒರೆಸಿಯೇ ಒರೆಸುತ್ತಾರೆ. ಆ ಸುಖವೇ ಬೇರೆ. ಇನ್ನು ನನ್ನ ಅಮ್ಮನ ತಲೆಮಾರಿನವರಿಗೆ ಹಾಗೂ ಅದಕ್ಕಿಂತ ಹಿಂದಿನವರಿಗೆ ಸೆರಗು ಬಹು ಉಪಯೋಗಿ ಸಾಧನವಾಗಿತ್ತು. ಕೆಂಡದ ಒಲೆಯಿಂದ ಬಿಸಿ ಪಾತ್ರೆಗಳನ್ನಿಳಿಸಲು, ಕೆಲವೊಮ್ಮೆ ಮಸಿ ಅರಿವೆಯಾಗಿ, ಮತ್ತೂ ಕೆಲವೊಮ್ಮೆ ತಕ್ಷಣದ ಸ್ವಚ್ಛಗೊಳಿಸುವ ಸಾಧನವಾಗಿಯೂ ಬಳಸಲ್ಪಡುತ್ತಿತ್ತು. ಸೆರಗಿನ ಬಳಕೆಯ ಮಹತ್ವ ಕಡಿಮೆಯದ್ದೇನಲ್ಲ. ಶ್ರೀಕೃಷ್ಣನ ಕೈಗೆ ಗಾಯವಾಗಿ ರಕ್ತ ಸೋರುತ್ತಿರುವಾಗ ದ್ರೌಪದಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಪಟ್ಟಿ ಕಟ್ಟಿದ್ದಳಂತೆ. ಆ ಸೆರಗಿನ ಅಂಚು ನಂತರ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಅಕ್ಷಯ ಸೆರಗಾಗಿ ಅವಳನ್ನು ಆವರಿಸಿಕೊಂಡಿದ್ದು ಎನ್ನುವ ನಂಬಿಕೆಯಿದೆ. ಹೀಗಿರುವಾಗ ಅಮ್ಮನ ಸೆರಗನ್ನು ಚಾಣಿಗಿಯಾಗಿ ಬಳಸುವ ರೂಪಕವನ್ನು ತನ್ನ ಮೊದಲ ಕವಿತೆಯಲ್ಲಿ ತಂದು ಇಡೀ ಸಂಕಲನದ ಘನತೆಯನ್ನು ಹೆಚ್ಚಿಸಿ, ಸಂಕಲನದ ಉಳಿದ ಕವಿತೆಯ ಕಡೆಗೊಂದು ಕುತೂಹಲವನ್ನು ಹುಟ್ಟಿಸಿದ್ದಾರೆ ಪ್ರವೀಣ.    ಇಂದಿಗೂ ಪ್ರವೀಣ ಎಂದಾಗಲೆಲ್ಲ ಹತ್ತಾರು ಪ್ರವೀಣರನ್ನು ನೆನಪಿಸಿಕೊಳ್ಳುವ ನಾನು ೨೦೧೯ರಪ್ರಜಾವಾಣಿ ಕಾವ್ಯದ ವಿಜೇತರು ಎಂದಾಗ ಮಾತ್ರ ಅರ್ಥಮಾಡಿಕೊಳ್ಳುತ್ತೇನೆ. ಹೀಗಿರುವಾಗಲೇ ಈ ಸಂಕಲನ ನನ್ನ ಕೈ ಸೇರಿದ್ದು. ಅದ್ಭುತ ರೂಪಕಗಳ ಸುರಿಮಳೆಯನ್ನು ಓದಿ ದಿಗ್ಭ್ರಮೆಗೊಳಗಾಗಿದ್ದು. ಅಮ್ಮನ ಮೊದಲ ಸೀರೆಗೆಕನಸು ಬರೆದ ಚಿತ್ತಾರದ ಅಂಚಿತ್ತುವಸಂತ ಋತುವಿನ ಚಿಗುರಿನ ಉತ್ಸಾಹಗಳ ಚಿನ್ನದ ಸೆರಗಿತ್ತುನನ್ನ ಹುಟ್ಟಿದ ದಿನ ಬಂಗಾರದಸೆರಗು ಕುಂಚಿಗೆಯಾಗಿ ಅಂಚುಕಟ್ಟುವ ಕಸಿಯಾಗಿ ಚೂಪಾದತುತ್ತತುದಿಗೆ ಸಾಗರದಾಳದಹೊಚ್ಚಹೊಸ ಮುತ್ತು ಮೆರೆದುನನ್ನ ತಲೆಗೆ ಕಿರೀಟವಾಯಿತು.  ಎಂದು ಹೇಳುತ್ತಾರೆ. ಇಲ್ಲಿ ಬರುವ ಸಾಲುಗಳನ್ನು ಗಮನಿಸಿ. ಮಗುವಿನ ತಲೆಗೆ ಕಟ್ಟಲು ಅಮ್ಮ ಹೊಲಿಯುವ ಕುಂಚಿಗೆಗೆ ತನ್ನ ಮೆತ್ತನೆಯ ಸೀರೆಯನ್ನು ಬಳಸಿ ಹೊಲೆಯುವ ಸಹಜ ಪ್ರಕ್ರಿಯೆ ಇಲ್ಲಿ ಕವಿತೆಯಾಗಿ ಮನಮುಟ್ಟುವ ಪರಿಯೇ ವಿಶಿಷ್ಟವಾದದ್ದು. ಈ ಕವನದಲ್ಲಿ ಬರುವ ಸಾಲುಗಳನ್ನು ಓದುತ್ತ ಹೋದಂತೆ ಹೊಸತೇ ಆದ ಒಂದು ಕಾವ್ಯಲೋಕ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.   ಜಗತ್ತಿನ ಮೊತ್ತಮೊದಲ ಮುತ್ತಿನಸಂಭ್ರಮದಲ್ಲಿ ನನ್ನ ರಾಜ್ಯಾಭಿಷೇಕವಾಯಿತು.ಈ ಸಾಲುಗಳಲ್ಲಿ ಮೂಡಿರುವ ಆಪ್ತತೆಯನ್ನು ಗಮನಿಸಿ. ಈ ಎರಡು ಸಾಲುಗಳು ಓದುಗನಲ್ಲಿ ಸಾವಿರ ಭಾವವನ್ನು ತುಂಬುತ್ತವೆ.      ಹತ್ತನೇ ತರಗತಿಯ ಹಿಂದಿನ ಸಿಲೆಬಸ್‌ನಲ್ಲಿ ಎ. ಕೆ. ರಾಮಾನುಜನ್‌ರವರು ಇಂಗ್ಲೀಷ್‌ಗೆ ಅನುವಾದಿಸಿದ್ದ ಲಂಕೇಶರ ಅವ್ವ ಕವನವಿತ್ತು. ಅವ್ವನನ್ನು ಹೊಗಳುತ್ತಲೇ ಬನದ ಕರಡಿಯಂತೆ ಪರಚುವ ಅವ್ವ, ಕಾಸು ಕೂಡಿಡುವ ಅವ್ವ, ಸರಿಕರೆದುರು ತಲೆ ತಗ್ಗಿಸಬಾರದೆಂದು ಛಲದಿಂದ ದುಡಿವ ಅವ್ವನನ್ನು ಹೇಳುವಾಗಲೆಲ್ಲ ನನ್ನ ಮಾತು ಆರ್ದೃವಾಗುತ್ತಿತ್ತು. ಅವ್ವನನ್ನು ಕುರಿತ ಕನ್ನಡದ ಅಥವಾ ನಿಮ್ಮ ಮಾತೃಭಾಷೆಯಲ್ಲಿರುವ ಕವನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಎಂದು ನಾನು ಮಕ್ಕಳಿಗೆ ಹೇಳುತ್ತಿದ್ದೆ.  ಈಗ ಈ ಕವನವನ್ನು ಓದಿದ ನಂತರ ತಕ್ಷಣಕ್ಕೆ ಅನ್ನಿಸಿದ್ದು, ಆಗ ಹಿಂದಿನ ಸಿಲೆಬಸ್ ಇರುವಾಗಲೇ ಪ್ರವೀಣ ಈ ಕವನ ಬರೆದಿದ್ದರೆ ನನ್ನ ಮಕ್ಕಳಿಗೆ ಇನ್ನೊಂದಿಷ್ಟು ಚಂದವಾಗಿ ಅಮ್ಮನನ್ನು ಕಟ್ಟಿಕೊಡಬಹುದಿತ್ತು, ಆಸಕ್ತ ವಿದ್ಯಾರ್ಥಿಗಳಿಗೆ ನಾಲ್ಕಾರು ಸಾಲುಗಳನ್ನು ನೀಡಿ ಇಂಗ್ಲೀಷ್ ಅನುವಾದ ಮಾಡಿ ಎನ್ನಬಹುದಿತ್ತು ಎಂದೇ. ಅಮ್ಮನನ್ನು ಇಷ್ಟೊಂದು ಆಪ್ತವಾಗಿ ಕಟ್ಟಿಕೊಡುವ ಇನ್ನೊಂದು ಕವನವನ್ನು ಸಧ್ಯದಲ್ಲಿ ನಾನು ಓದಿರಲಿಲ್ಲ. ಬರೆದಷ್ಟೂ ಬರೆಯಿಸಿಕೊಳ್ಳುವ ಕವನವಿದು. ಇದೊಂದೇ ಕವನದ ಕುರಿತುಪುಟಗಟ್ಟಲೆ ಬರೆಯಬಹುದೇನೋ. ಭಗಭಗನೆ ಉರಿವ ಹಾಸಿಗೆಯ ಮೇಲೆಸೀರೆ ಹಾಸಿ ನಿದ್ದೆ ಮಾಡುತ್ತಾಳೆ ಎವೆಮುಚ್ಚದೆಸೀರೆಯ ಗಂಟಿನಲ್ಲಿ ಮಡಚಿಟ್ಟುಕೊಂಡಬೈಗುಳ ಅವಮಾನದಣಿವು ಸುಸ್ತುಗಳ ಒದರಿನಡಕ್ಕೆ ಸೆರಗು ಕಟ್ಟಿಕೊಂಡು ಹೊಟ್ಟೆಗೆಹತ್ತಿದ ಬೆಂಕಿ ಆರಿಸಲುಸ್ಟೋವು ಹೊತ್ತಿಸುತ್ತಾಳೆ. ಹೌದು, ಹೆಣ್ಣಿನ ಸೀರೆಯ ಸೆರಗಿನಂಚಿನಲ್ಲಿ ಎಂತೆಂಥವು ಗಂಟುಹಾಕಿಕೊಂಡಿರುತ್ತವೋ ಬಲ್ಲವರಾರು? ಯಾರೋ ಕೊಟ್ಟ ಹಣ, ಇನ್ನಾರೋ ಮಾಡಿದ ಅವಮಾನ, ನಡೆವ ಬೀದಿಯೇ ಮೈಮೇಲೆ ಬಿದ್ದು ಎಸುಗಲೆತ್ನಿಸಿದ ಬಲಾತ್ಕಾರ, ಸ್ವಂತ ಗಂಡನೇ ತಿರಸ್ಕರಿಸಿ ಬೇರೆಯವಳೊಟ್ಟಿಗೆ ನಡೆದ ನೋವು, ಹಡೆದ ಮಗನೇ ದೂರೀಕರಿಸಿದ ಅಸಹಾಯಕತೆ ಎಲ್ಲವೂ ಆ ಸೆರಗಿನ ಮೂಲೆಯಲ್ಲಿರುತ್ತದೆ. ಸೆರಗು ಕೊಡವಿ ಎದ್ದು ನಿಂತರೆ ಬಾಳು, ಇಲ್ಲವೆಂದಾದಲ್ಲಿ ಅದೇ ಸೆರಗನ್ನು ಮನೆಯ ಜಂತಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬದುಕುವ ಛಲವಿರುವ ಯಾವ ಅಮ್ಮನೂ ಹಾಗೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಮಕ್ಕಳಲ್ಲಿಯೂ ಬದುಕುವ ಹುಮ್ಮಸ್ಸನ್ನೇ ತುಂಬುತ್ತಾಳೆ.ಜೀವನ ಕಟ್ಟುವ ಎಳೆದಾಟದಲ್ಲಿಪಿಸುಕಿದ ಅಮ್ಮನ ಸೀರೆಗಳನ್ನು ಒಟ್ಟಿಗೆ ಹೊಲಿದರೆ ನೆಪ್ಪದಿ ನೀಡುವ ದುಪಟಿಹರಿದರೆ ಕಲ್ಮಶ ತೊಳೆಯುವ ಅರಿವೆಇನ್ನಷ್ಟು ಹರಿದರೆ ಕಣ್ಣೀರು ಒರೆಸುವ ಕೈವಸ್ತ್ರಹರಿದು ಚಿಂದಿ ಚಿಂದಿ ಮಾಡಿದರೂಲಕ್ಷಾಂತರ ದೀಪಗಳಿಗೆಬತ್ತಿ ನಿಜ, ಇಂತಹ ಸಶಕ್ತ ಸಾಲುಗಳಿಗಲ್ಲದೇ ಬೇರಾವುದಕ್ಕೆ ಪ್ರಜಾವಾಣಿಯ ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಸಾಧ್ಯ? ಹಾಗೆ ನೋಡಿದರೆ ಈ ಕವಿತೆಗೆ ಪ್ರಥಮ ಬಹುಮಾನ ನೀಡಿ ಪ್ರಜಾವಾಣಿಯ ಬಹುಮಾನಿತ ಕವನಗಳು ಯಾವತ್ತೂ ಅತ್ಯುತ್ತಮವಾಗಿರುತ್ತವೆ ಎಂಬ ಮಾತಿಗೆ ಗಟ್ಟಿ ಸಾಕ್ಷ್ಯ ದೊರೆತಂತಾಗಿದೆ. ಹುಡುಕುತಿವೆ ಕಾಳುಗಳು ಕೋಳಿಗಳನ್ನುಗೋರಿಗಳು ಸತ್ತ ದೇಹಗಳನ್ನುನಿದ್ರೆಗಳು ಮುಚ್ಚುವ ಕಣ್ಣೆವೆಗಳನ್ನುಬಟ್ಟೆಗಳು ಮುಚ್ಚಬಹುದಾದ ಮಾನಗಳನ್ನು   ಈ ಸಾಲುಗಳಲ್ಲಿರುವ ವ್ಯಂಗ್ಯವನ್ನು ಗುರುತಿಸಿ. ಲೋಕದ ನಿಯಮಗಳನ್ನೆಲ್ಲ ಬದಲಾಯಿಸಿದ ವಿಷಾದವನ್ನು ನೋಡಿ. ಹೇಳಬೇಕಾದುದನ್ನೂ ಮೀರಿ ಈ ಸಾಲುಗಳು ಮಾತನಾಡುತ್ತಿವೆ. ಹಾಗೆ ನೋಡಿದರೆ ಒಮ್ಮೆಲೆ ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮಯ ದೇವರು….’ ಎನ್ನುವ ಸಾಲು ನೆನಪಿಗೆ ಬಂದೇ ಬರುತ್ತದೆ. ಇಡೀ ಕವನವನ್ನು ಓದಿದಮೇಲೆ ಅರಿವಾಗದ ವಿಶಣ್ಣಭಾವವೊಮದು ಎದೆಯೊಳಗೆ ಹಾಗೇ ಉಳಿಯದಿದ್ದರೆ ಹೇಳಿ. ಖಂಡಿತವಾಗಿ ಈ ಕವನವನ್ನು ಓದಿ ಮುಗಿಸಿದ ನಂತರ ಮಾಮೂಲಿಯಾಗಿ ಮುಂದಿನ ಕವನವನ್ನು ಓದಲಾಗುವುದೇ ಇಲ್ಲ. ಮತ್ತೊಮ್ಮೆ, ಮಗದೊಮ್ಮೆ ಈ ಕವನದ ಸಾಲುಗಳನ್ನು ತಿರುವುತ್ತೀರಿ. ಪ್ರಜಾಪ್ರಭುತ್ವದ ಮೇಲೆ ಒಂದಿಷ್ಟಾದರೂ ನಂಬಿಕೆಯಿದ್ದವರಾದರೆ ನಿಮಗೆ ಈ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಜೀವಪರ ನಿಲುವುಗಳು ನಿಮ್ಮಲ್ಲಿದ್ದರೆ ಖಂಡಿತಾ ಈ ಸಾಲುಗಳು ನಿಮ್ಮನ್ನು ಅಲುಗಾಡಿಸದೇ ಬಿಡುವುದಿಲ್ಲ. ಚೂರಿ ದೈವವೇ ಬಹುಪರಾಕಗಡಿಯ ನಶೆಯೇ ಬಹುಪರಾಕತಲೆಯ ಚಪ್ಪಲಿಯೇ ಬಹುಪರಾಕಬಣ್ಣದ ಪೊರಕೆಯೇ ಬಹುಪರಾಕನಿಜ, ಈ ಪರಾಕುಗಳೇ ನಾವು ಸಾಗುತ್ತಿರುವ ದಾರಿಯನ್ನು ತೋರಿಸುತ್ತಿದೆ. ಬಗಲಲ್ಲಿ ಚಾಕು ಸಿಕ್ಕಿಸಿಕೊಂಡೇ ನಾವೀಗ ಬೆಣ್ಣೆ ಸವರಿದ ಮಾತನಾಡುತ್ತೇವೆ. ದೇಶಪ್ರೇಮದ ಹೆಸರಿನಲ್ಲಿ ಸೈನಿಕರ ಕುರಿತಾದ ಭಾವನಾತ್ಮಕ ಕಥೆಗಳನ್ನು ಹರಿಯಬಿಟ್ಟು ಎಂದೂ ಇಳಿಯದ ನಶೆಯನ್ನು ಸಾಮಾನ್ಯ ಜನರಲ್ಲಿ ತುಂಬಿ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುತ್ತೇವೆ, ಇದೇ ನಶೆಯಲ್ಲಿ ಮಾಡಿದ ತಪ್ಪುಗಳನ್ನೆಲ್ಲ ಮರೆಮಾಚಿಕೊಂಡು ತಲೆಯ ಮೇಲೆ ಪಾದುಕೆಗಳನ್ನಿಟ್ಟುಕೊಂಡು ಪೂಜಿಸುತ್ತಿದ್ದೇವೆ,‘ಇಕೋ ತಕೋ ಸಂಭ್ರಮಿಸು’ ಕವಿತೆಯಂತೂ ಇಡೀ ಸಂಕಲನದ ಕಿರೀಟವೆಂಬಂತೆ ಭಾಸವಾಗುತ್ತದೆ. ರಾವಣ ತನ್ನ ದೈವ ಶಂಕರನನ್ನು ಪ್ರಶ್ನಿಸುತ್ತಲೇ ದೇವಾನುದೇವತೆಗಳನ್ನು ಬೆತ್ತಲು ಮಾಡಿ ನಿಲ್ಲಿಸುತ್ತಾನೆ. ‘ಲಂಕೆಯ ಶರಧಿಯಲಿ ಬೀಳುವ ನನ್ನ ನಾಡ ಪ್ರತಿಬಿಂಬದಷ್ಟೂ ಚೆಂದವಿರದ ಸ್ವರ್ಗವನ್ನು ಬಿಟ್ಟು ಬಾ’ ಎಂದು ಶಿವನನ್ನೇ ಆಹ್ವಾನಿಸುವ ಪರಿ ಕುತೂಹಲ ಮೂಡಿಸುತ್ತದೆ. ಲಕ್ಷ್ಮಣನ್ನು , ಜರೆಯುತ್ತ, ಶಿವಧನಸ್ಸನ್ನು ಮುರಿದವನ ಮೇಲೆ ಸೇಡು ತೀರಿಸಿಕೊಳ್ಳುವ ತನ್ನ ಹಠವನ್ನು ತಪ್ಪೆಂದು ಒಪ್ಪಿಕೊಳ್ಳುತ್ತ ಇಕೊ ತಕೊ ನನ್ನ ಪ್ರಾಣ ಎನ್ನುವ ರಾವಣ ಇಲ್ಲಿ ಪ್ರತಿನಾಯಕನ ವಿಜೃಂಭಣೆಯಿಂದ ಮೆರೆಯುವುದಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ಮನುಷ್ಯನಾಗಿಯೇ ಹೆಗ್ಗಳಿಕೆ ಗಳಿಸಿಕೊಳ್ಳುತ್ತಾನೆ.‘ತನ್ನ ಡಬ್ಬಿಯ ಅನ್ನ’ ಕವಿತೆ ಹಸಿವಿನ ಕುರಿತಾಗಿ ಮಾತನಾಡುತ್ತದೆ. ಹಸಿವೆಯೆಂದು ತಿಂದು ಬಿಡುವಂತಿಲ್ಲ, ಹೊಟ್ಟೆ ತುಂಬಿಸಿಕೊಳ್ಳುವಂತಿಲ್ಲ. ಅದಕ್ಕೂ ರೀತಿ ನೀತಿ ನಿಯಮಗಳಿವೆ. ಆದರೆ ಇಲ್ಲಿ ಮಗು ತನ್ನೆದುರು ಕುಳಿತ ಬಡ, ಬತ್ತಲ ಮಗುವಿಗೆ ಆಹಾರ ನೀಡಿ ಸಂತೃತ ಕಣ್ಣುಗಳಿಂದ ನೋಡುವ ಬಗೆಯಿದೆಯಲ್ಲ, ಅದು ಯಾವ ಸ್ಥಿರ ಚಿತ್ರಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಮ್ಮಿಸುತ್ತದೆ. ಇದೇ ಚಮದದ ಮನಸೆಳೆಯುವ ಚಿತ್ರಣ ‘ವಿಶ್ವವೇ ಆಟಿಗೆಯ ಬುಟ್ಟಿ’ಯಲ್ಲಿದೆ. ಕೊಚ್ಚೆಯಲೂ ನೆಗೆದು ಹಕ್ಕಿಗೂಡ ಮಾತಾಡಿನದಿಯೊಡನೆ ಓಟ ರವಿಯೊಡನೆ ಆಟಚಂದಾಮಾಮನ ಜೊತೆಯೂಟವಿಶ್ವವೇ ಅವಗೆ ಆಟಿಗೆಯ ಬುಟ್ಟಿ ಎನ್ನುವಲ್ಲಿ ಮಕ್ಕಳ ಮನಸ್ಸಿನ ನಿರ್ಮಲತೆಯನ್ನು ಬಣ್ಣಿಸಲಾಗಿದೆ. ಎರಡೂ ಕವನಗಳಲ್ಲಿ ಇದ್ದಷ್ಟು ಮುಗ್ಧವಾದ ಮಕ್ಕಳ ಪ್ರಪಂಚ ಈ ಜಗತ್ತಿನಲ್ಲಿದ್ದರೆ ಈ ಜಗತ್ತು ಅಳುವಾಗ ಅತ್ತು ಉಳಿದದ್ದಕ್ಕೆಲ್ಲ ನಗುವ ಸುಂದರ ಸ್ವರ್ಗವಾಗುತ್ತಿತ್ತು. ಆದರೆ ನಾವೆಲ್ಲ ಹಾಗೆ ಸ್ವರ್ಗದಲ್ಲಿ ಬದುಕುವ ಮನಸ್ಸು ಮಾಡುತ್ತಿಲ್ಲ. ಸದ್ದಿಲ್ಲದೇ ನರಕವನ್ನು ಕೈಹಿಡಿದು ಕರೆತಂದು ಎದುರಿಗೆ ಕುಳ್ಳಿರಿಸಿಕೊಳ್ಳುತ್ತೇವೆ. ನಾಜೂಕಾಗಿ ಒಂದೊಂದೇ ಹೆಜ್ಜೆಯನ್ನು ನರಕದೊಳಗೆ ಇಡುತ್ತ, ಅದರ ನೋವುಗಳನ್ನೇ ಸುಖ ಎಂದು ಭ್ರಮಿಸುತ್ತಿದ್ದೇವೆ. ನಾನು ಕತ್ತಲೆಯೊಡನೆ ರಾಜಿ ಮಾಡಿಕೊಂಡಿದ್ದೇನೆಮಿಂಚುಹುಳುಗಳ ಬೆಳಕಲ್ಲಿ ನಕ್ಷತ್ರಗಳ ಬಿಡಿಸುತ್ತಿದ್ದೇನೆಹೃದಯಕ್ಕೆ ಬೆಂಕಿ ಹಚ್ಚಿ ಬೆಚ್ಚಗಾಗುತ್ತಿದ್ದೇನೆ ಎಂಬುದು ನಮ್ಮೆಲ್ಲರ ಸಾಲುಗಳೂ ಹೌದು. ಬಯಸಿ ಬಯಸಿ ಎದೆಯಗೂಡಿನಲ್ಲಿರುವ ನಂದಾದೀಪವನ್ನು ತೆಗೆದು ಪೆಟ್ರೋಮ್ಯಾಕ್ಸ್ ಉರಿಸಿ ಸ್ಪೋಟಿಸುತ್ತೇವೆ. ‘ಇನ್ನು ಪ್ರೀತಿ ಹುಟ್ಟುವುದಿಲ್ಲ’ ಕವನದ ಬೆಂಕಿಕಡ್ಡಿ, ‘ಸುಡುತ್ತಿದ್ದುದು’ ಕವನದಲ್ಲಿ ಬರುವ ‘ಬರಿ ಚಡ್ಡಿಯಲ್ಲಿರುವವರು ಎಲ್ಲವನೂ ಸಹಿಸಿಕೊಳ್ಳಬೇಕಾಗುತ್ತೆ,’ ಎನ್ನುವ ಮಾತು, ‘ಹೂವು ಅರಳಿಲ್ಲ’ ಕವಿತೆಯಲ್ಲಿ ಹೇಳುವ ಪಾಚಿಗಟ್ಟಿದ ಗವಿಯ ಹೊರಗಿರುವ ಕಲ್ಲನ್ನು ತಿಕ್ಕಿ ತಿಕ್ಕಿ ಫಳಫಳನೆ ಹೊಳೆಯುವಂತೆ ಮಾಡುವ ಗವಿಯಾಚೆಗಿನ ಬೆಳಕು, ‘ಮುಗಿದು ಹೋದ ಕಥೆ’ಯಲ್ಲಿ ಬರುವ ಕಥೆಯಲ್ಲದ ಕಥೆಯ ವರ್ಣನೆ, ‘ಬದಲಿಸಲಾಗದ ಮೊದಲು’ ಕವಿತೆಯ ಹುಳು, ಎಲ್ಲವೂ ನಮ್ಮನ್ನು ಹೊಸತೇ ಆದ ಲೋಕವೊಂದನ್ನು ಪರಿಚಯಿಸಿಕೊಳ್ಳಲು ಒತ್ತಾಯಿಸುತ್ತಿರುವಂತೆ ಭಾಸವಾಗುತ್ತದೆ. ಇನ್ನೇನು ಮುಗಿದೇ ಹೋಯಿತೆನ್ನುವಾಗ ಧಿಗ್ಗನೆ ಹೊತ್ತಿ ಉರಿಯುವ ಪ್ರೇಮದಂತೆ ಇಲ್ಲಿನ ಕವಿತೆಗಳು ಏನು ಹೇಳಲಿಲ್ಲ ಎನ್ನುವಾಗಲೇ ಎರಡೇ ನಲ್ಲಿ ಎಲ್ಲವನ್ನೂ ಹೇಳಿ ದಿಗ್ಭ್ರಮೆಗೊಳ್ಳುವಂತೆ ಮಾಡಿಬಿಡುತ್ತವೆ. ನನ್ನಲ್ಲೂ ಮಳೆ ಬಂದುನಿನ್ನಲ್ಲೂ ಮಳೆ ಬಂದದ್ದೂತಿಳಿಯುವುದು ಮಳೆ ನಿಂತ ಮೇಲೆ ಇದು ಕೇವಲ ಪ್ರವೀಣರವರ ಸಾಲುಗಳಲ್ಲ. ಅವರ ಸಾಲುಗಳನ್ನು ಓದಿದ ನಂತರ ನಮ್ಮಲ್ಲೂ ಹೀಗೊಂದು ಭಾವ ಹೊಮ್ಮುತ್ತದೆ. ಏನೂ ಆಗಿಲ್ಲವಲ್ಲ ಎನ್ನುವಾಗಲೇ ಕವಿತೆ ನಮ್ಮನ್ನು ನಿಬ್ಬೆರಗಾಗುವ ಒಂದು ತಿರುವಿನಲ್ಲಿ ಕಣ್ಣುಕಟ್ಟಿ ನಿಲ್ಲಿಸಿ ನಾಜೂಕಾಗಿ ತಾನು ಜಾರಿಕೊಳ್ಳುತ್ತದೆ. ಮುಂದಿನ ದಾರಿ ತಿಳಿಯದೇ ಮತ್ತದೇ ಕವನದೊಳಗೆ ಹುದುಗಲೇಬೇಕಾದ ಅನಿವಾರ್‍ಯತೆ ಸೃಷ್ಟಿಯಾಗುವ ವೈಚಿತ್ರ್ಯವನ್ನು ನಾನು ಇಡೀ ಪುಸ್ತಕದ ತುಂಬ ಹಲವಾರು ಸಲ ಎದುರುಗೊಂಡಿದ್ದೇನೆ. ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ ಒಂದು ಕವಿತೆಯ ರೂಪಕಗಳು ಸಾಕೆಂದು ಮತ್ತೊಮದು ಕವಿತೆಗೆ ನಡೆದರೆ ಅಲ್ಲೂ ಎದುರಾಗುವುದು ಒಳಸುಳಿಗೆ ಸಿಕ್ಕಿಸುವ ನುಡಿಚಿತ್ರಗಳೇ ಹೊರತೂ ಮತ್ತೇನೂ ಅಲ್ಲ. ಬದುಕು ಇಷ್ಟೇ. ನಿಜ, ಆಜೆಗೇನೂ ಇಲ್ಲ ಎಂಬ ಸುಂದರ ಕಲ್ಪನೆಯಲ್ಲಿಯೇ ನಾವು ಈಚೆಗಿನ ಸೌದರ್‍ಯವನ್ನು ಕಣ್ತುಂಬಿಕೊಂಡು, ವಾಸ್ತವದ ನಿಜಾಯಿತಿಯಲ್ಲಿ ಬದುಕಬೇಕಿದೆ.                                  ***************************** ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ Read Post »

ಕಾವ್ಯಯಾನ

ಧ್ಯಾನ

ಕವಿತೆ ಸುನೀತ ಕುಶಾಲನಗರ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. ******************

ಧ್ಯಾನ Read Post »

ಕಾವ್ಯಯಾನ

ಕೊನೆಯಲ್ಲಿ

ಕವಿತೆ ನಂದಿನಿ ಹೆದ್ದುರ್ಗ ಕಳಚಿಕ್ಕೊಳ್ಳುತ್ತಲೆ ಹೋಗುತ್ತದೆಹೀಗೇಒಂದೊಂದೇ ಒಂದೊಂದೇ ಬಂಧ. ಬಿಡಿಸಲಾಗದ್ದು ಎನ್ನುವಾಗಲೇಹೊರಡುತ್ತದೆ ಬಿಟ್ಟು ಕಣ್ಮರೆಯಾಗುವುದೋಕಣ್ಣಳತೆಯಲ್ಲೇ ಇದ್ದೂಬೇಕೆನಿಸದೆ ಹೋಗುವುದೊಕಣ್ಣು ಕೈಯಿಗೆ ನಿಲುಕಿದರೂಎದೆಗೆ ಇಳಿಯದೇ ಹೋಗುವುದೊಬೇಕೆನಿಸಿದರೂ ಝಾಡಿಸಿಹೊರಡುವುದೊ.. ಕಳಚುತ್ತಲೇ ಹೋಗುತ್ತದೆ…ಇದ್ದಿತೆಂಬುದರ ಕುರುಹುಕ್ರಮೇಣ ಇಲ್ಲವಾಗಿ.. ಒಂಟಿ ಕೊಂಡಿಯೊಂದುಕೊರಳೆತ್ತಿ‌ ನೋಡುತ್ತಿದೆಈಗಸುತ್ತೆಲ್ಲಾ ಕ್ಷೀಣವಾಗಿ *************************

ಕೊನೆಯಲ್ಲಿ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಕರ್ಟನ್ನಿನ ಮೇಲೊಂದು ಕೇತಕಿ ಹೂವು

ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ನನಗೆ ಕರ್ಟನ್ನುಗಳು ನೆನಪಾಗುತ್ತವೆ; ಬದುಕಿನ ಪ್ರತಿಯೊಂದು ಅಧ್ಯಾಯವೂ ಬೇರೆಬೇರೆ ಬಣ್ಣ-ವಿನ್ಯಾಸಗಳನ್ನು ಹೊತ್ತ ಸುಂದರವಾದ ಕರ್ಟನ್ನಿನಂತೆ ಭಾಸವಾಗುತ್ತದೆ. ಕಿಟಕಿಗಳೇ ಇಲ್ಲದ ಮನೆಯಲ್ಲಿ ಬೆಳಕಿಗೊಂದು ಅವಕಾಶವನ್ನು ಒದಗಿಸುವುದಾದರೂ ಹೇಗೆ; ಹಾಗೆ ಕಿಟಕಿಯೊಂದು ಒದಗಿಸಿದ ಅವಕಾಶವನ್ನು ಸ್ವಂತದ್ದಾಗಿಸಿಕೊಳ್ಳಲಿಕ್ಕೆ ಕರ್ಟನ್ನುಗಳ ಸೃಷ್ಟಿಯೂ ಆಗಿರಬೇಕು! ಬೆಳಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಿಟಕಿ, ಕಿಟಕಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವ ಕರ್ಟನ್ನು ಎಲ್ಲವೂ ಸೇರಿ ಬದುಕಿಗೊಂದು ಸ್ವಂತಿಕೆ, ಜೊತೆಗಿಷ್ಟು ಬಣ್ಣಗಳು ಲಭ್ಯವಾಗಿದ್ದಿರಬೇಕು. ದುಃಸ್ವಪ್ನಗಳನ್ನೆಲ್ಲ ದೂರವಾಗಿಸುವ ಬೆಳಕು ಕಿಟಕಿಯನ್ನು ಸ್ಪರ್ಶಿಸುವ ಸಮಯಕ್ಕೆ ಸರಿಯಾಗಿ ಕಣ್ತೆರೆವ ಕರ್ಟನ್ನಿನ ಎಲೆ, ಹೂವು, ಹಣ್ಣು, ಹಕ್ಕಿಗಳೆಲ್ಲವೂ ಮುಂಜಾವಿಗೊಂದು ಹೊಸ ಬಗೆಯ ಸೊಬಗನ್ನು ಒದಗಿಸುತ್ತವೆ. ಎಳೆಬಿಸಿಲಿಗೆ ತಿಳಿಹಸಿರು ಬಣ್ಣವನ್ನು ಮೈಗೆ ಮೆತ್ತಿಕೊಳ್ಳುವ ಎಲೆಯೊಂದು ಮುಸ್ಸಂಜೆಗೆ ಅಚ್ಚಹಸಿರಾಗಿ, ಬೀದಿದೀಪದ ಬೆಳಕಿಗೆ ಹಳದಿಯೂ ಆಗಿ ಬಣ್ಣಗಳ ಹೊಸ ಜಗತ್ತನ್ನೇ ನಮ್ಮೆದುರು ತೆರೆದಿಡುತ್ತದೆ; ಎಲೆಗಳ ಸಂದಿಯಲ್ಲಡಗಿರುವ ಪುಟ್ಟ ಹಕ್ಕಿಯೊಂದು ಬಣ್ಣದ ರೆಕ್ಕೆಗಳನ್ನು ತೊಟ್ಟು ಸದ್ದಿಲ್ಲದೇ ಮನೆತುಂಬ ಹಾರಾಡುವ ಸಂಭ್ರಮವನ್ನು ಕಟ್ಟಿಕೊಡುವ ಕರ್ಟನ್ನು ಪ್ರತಿದಿನದ ಬೆಳಗಿಗೊಂದು ಹೊಸತನದ ಅನುಭವವನ್ನು ಒದಗಿಸುತ್ತದೆ.  ಬದುಕು ತನ್ನದಾಗಿಸಿಕೊಳ್ಳುವ ಅನುಭವಗಳ ಪಟ್ಟಿಯಲ್ಲಿ ಬಾಲ್ಯವೆನ್ನುವುದೊಂದು ಸುಂದರ ಅನುಭವ. ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ ಪಾಟಿಚೀಲದಿಂದ ಹಿಡಿದು ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯವರೆಗೆ ಘಟಿಸಿದ ಎಲ್ಲ ಚಿಕ್ಕಪುಟ್ಟ ಸಂಗತಿಗಳೂ ಅದ್ಯಾವುದೋ ಕ್ಷಣದಲ್ಲಿ ಅಚ್ಚರಿಗಳಾಗಿ ರೂಪಾಂತರಗೊಂಡು ಬದುಕಿಗೊಂದು ಹೊಸತನವನ್ನು ದೊರಕಿಸಿಕೊಡುತ್ತವೆ. ಪಾಟಿಚೀಲದ ಜಿಪ್ ನೊಂದಿಗೆ ನೇತಾಡುತ್ತಿದ್ದ ಕೀಚೈನ್ ಮೇಲಿದ್ದ ಪುಟ್ಟ ನಾಯಿಮರಿಯೊಂದಿಗಿನ ಗೆಳೆತನ ಪ್ರೈಮರಿ, ಹೈಸ್ಕೂಲು ಎಲ್ಲ ಮುಗಿದಮೇಲೂ ಬಾಲ್ಯದ ನೆನಪುಗಳೊಂದಿಗೆ ನಂಟು ಬೆಳೆಸಿಕೊಳ್ಳುತ್ತದೆ. ಒಮ್ಮೆಯೂ ಸ್ನಾನಮಾಡಿಸಿ ಕೋಲ್ಡ್ ಕ್ರೀಮ್ ಹಚ್ಚದಿದ್ದರೂ ಚಳಿಗಾಲದಲ್ಲಿಯೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಾಯಿಮರಿ, ಸನ್ ಸ್ಕ್ರೀನ್ ಲೋಷನ್ ಇಲ್ಲದೇ ಬಣ್ಣವನ್ನೂ ಕಾಪಾಡಿಕೊಂಡು, ಮಳೆಗಾಲದಲ್ಲಿ ಪಾಟಿಚೀಲದೊಂದಿಗೆ ತಾನೂ ಮಳೆಯಲ್ಲಿ ನೆನೆಯುತ್ತ ಕೊಳೆಯನ್ನೆಲ್ಲ ತೊಳೆದುಕೊಳ್ಳುತ್ತಿತ್ತು. ಪಾರ್ಲರ್ ಶಾಂಪೂವಿನಿಂದ ತಲೆಗೂದಲನ್ನು ತೊಳೆದುಕೊಳ್ಳುವಾಗಲೆಲ್ಲ, ಅರ್ಥವಾಗದ ಗಣಿತದ ಲೆಕ್ಕಾಚಾರವನ್ನು ಸಹನೆಯಿಂದ ಸಹಿಸಿಕೊಂಡು ಪರೀಕ್ಷೆಯ ಭಯವನ್ನು ಕಡಿಮೆ ಮಾಡಿದ ನಾಯಿಮರಿಯ ಪ್ರೇಮವನ್ನು ನೆನೆದು ಅಚ್ಚರಿಗೊಳ್ಳುತ್ತಲೇ ಇರುತ್ತೇನೆ.  ಅಂತಹ ಸೋಜಿಗಗಳಲ್ಲಿ ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯೂ ಸೇರಿಕೊಂಡಿದೆ. ಹಬ್ಬಗಳಲ್ಲೋ, ದೇವರಕಾರ್ಯಗಳಲ್ಲೋ ದೊಡ್ಡಪ್ಪ ತನ್ನ ರಂಗೋಲಿ ತಟ್ಟೆಯೊಂದಿಗೆ ಅಂಗಳಕ್ಕೆ ಹಾಜರಾದರೆ ಕೇರಿಯ ಮಕ್ಕಳೆಲ್ಲ ಅವನ ಸುತ್ತ ನೆರೆಯುತ್ತಿದ್ದೆವು. ಯಾವ ಪೂರ್ವತಯಾರಿ-ಯೋಜನೆಗಳೂ ಇಲ್ಲದೇ ಮನಸ್ಸಿಗೆ ತೋಚಿದ ರಂಗೋಲಿಯನ್ನು ಬಿಡಿಸುತ್ತಿದ್ದ ದೊಡ್ಡಪ್ಪ ಅಂಗಳದಲ್ಲೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದ. ಬೆಟ್ಟದ ತುದಿಯಲ್ಲಿ ತನ್ನಪಾಡಿಗೆ ತಾನು ಗರಿಬಿಚ್ಚಿ ನಿಂತಿರುತ್ತಿದ್ದ ನವಿಲು, ಅದರ ಪಕ್ಕದಲ್ಲೇ ಹುಲ್ಲು ತಿನ್ನುತ್ತಾ ಆಚೀಚೆ ಓಡುತ್ತಿದ್ದ ಮೊಲ, ಕೊಟ್ಟಿಗೆಯಿಂದ ತಪ್ಪಿಸಿಕೊಂಡು ಬಂದು ಅಂಗಳದ ತುಂಬಾ ಹೆಜ್ಜೆಗುರುತು ಮೂಡಿಸುತ್ತಿದ್ದ ಆಕಳಕರು, ಆಗಷ್ಟೇ ಅರಳಿದ ಕೆಂಪು ದಾಸವಾಳ, ಹೂವಿನ ಮೊಗದ ಮುದ್ದು ಬಾಲಕೃಷ್ಣ ಹೀಗೆ ಪ್ರಕೃತಿಯೇ ರಂಗೋಲಿಯಾಗಿ ಹೊಸಹೊಸ ರೂಪ-ಬಣ್ಣಗಳನ್ನು ಧರಿಸುತ್ತಿತ್ತು. ರಂಗೋಲಿಯ ಒಂದೊಂದು ಎಳೆಯೂ ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಗಿಯುತ್ತ ನವಿಲುಗರಿಯಾಗಿ, ಮೊಲದ ಕಿವಿಯಾಗಿ, ಕರುವಿನ ಕುತ್ತಿಗೆಯ ಗಂಟೆಯಾಗಿ, ಕೊಳಲಾಗಿ ಅಂಗಳಕ್ಕಿಳಿಯುವುದೊಂದು ಸೋಜಿಗದ ಸಂಗತಿಯಾಗಿತ್ತು. ದೊಡ್ಡಪ್ಪನಿಗೆ ರಂಗೋಲಿ ಬಿಡಿಸುವುದನ್ನು ಕಲಿಸಿಕೊಟ್ಟವರಿರಲಿಲ್ಲ; ಇಷ್ಟೇ ಜಾಗವನ್ನು ರಂಗೋಲಿಗೆ ಮೀಸಲಾಗಿಡಬೇಕು ಎನ್ನುವ ಯಾವ ಇತಿಮಿತಿಗಳೂ ಅವನ ತಲೆಯಲ್ಲಿ ಇರುತ್ತಿರಲಿಲ್ಲ. ಸಿಕ್ಕಿದ ಅವಕಾಶವನ್ನೆಲ್ಲ ಮುಕ್ತ ಮನಸ್ಸಿನಿಂದ ಬಳಸಿಕೊಳ್ಳುತ್ತ, ಪ್ರಕೃತಿಯಿಂದಲೇ ಪಾಠ ಕಲಿತು ಜೀವನಪ್ರೀತಿಯನ್ನು ಚಿತ್ರಿಸುತ್ತ ಮಕ್ಕಳ ಬದುಕಿಗೊಂದಿಷ್ಟು ಬೆರಗು ಬೆರೆಸಿದ ದೊಡ್ಡಪ್ಪ ಪ್ರಕೃತಿ ಕರುಣಿಸಿದ ಅಚ್ಚರಿಗಳಲ್ಲಿ ಒಂದಾಗಿ ಉಳಿದುಕೊಂಡಿದ್ದಾನೆ.  ಪ್ರಕೃತಿ ತನ್ನ ಮಡಿಲಿನಲ್ಲಿ ಸಲಹುವ ವಿಸ್ಮಯಗಳನ್ನು, ಕ್ಲಾಸ್ ರೂಮು-ಫೀಸುಗಳಿಲ್ಲದೇ ಕಲಿಸಿಕೊಡುವ ಪಾಠಗಳನ್ನು ಥಿಯರಿಗಳನ್ನಾಗಿಸಿ ಪುಸ್ತಕಗಳಲ್ಲಿ ಹಿಡಿದಿಡಲಾಗದು. ಬೇಸಿಗೆಯ ದಿನಗಳಲ್ಲಿ ಎಲ್ಲೋ ನೆಲಕ್ಕೆ ಬಿದ್ದ ಬೀಜವೊಂದು ಗಾಳಿಯೊಂದಿಗೆ ಹಾರುತ್ತಾ ಇನ್ನೆಲ್ಲೋ ತಲುಪಿ, ಮೊದಲಮಳೆಗೆ ಮೊಳಕೆಯೊಡೆಯುವ ಸೃಷ್ಟಿಯ ವಿಸ್ಮಯ ಅನುಭವಕ್ಕೆ ಮಾತ್ರವೇ ದಕ್ಕುವಂಥದ್ದು. ಇಂತಹ ಅನನ್ಯ ಅನುಭವಗಳ ಸಾಲಿನಲ್ಲಿ ಕೇಸರಿಬಣ್ಣದ ಕೇತಕಿಯ ಕಣವೂ ಸೇರಿಕೊಂಡಿದೆ. ಚಳಿಗಾಲದ ಹೂವಿನ ಸೀಸನ್ ಮುಗಿದು ಬೀಜಗಳೆಲ್ಲ ನೆಲಕ್ಕೆ ಉದುರಿ ಗಿಡವೂ ಒಣಗಿಹೋದಮೇಲೆ ಮಲ್ಲಿಗೆಯನ್ನೋ, ಜಾಜಿಯನ್ನೋ ಅರಸುತ್ತ ಪ್ರಕೃತಿಸಹಜವೆಂಬ ಮನಸ್ಥಿತಿಯಲ್ಲಿ ನಾವೆಲ್ಲ ಕೇತಕಿಯನ್ನು  ಮರೆತುಹೋಗುತ್ತಿದ್ದೆವು. ಅಂಗಳದಲ್ಲೋ, ಭತ್ತದ ಕಣಗಳಲ್ಲೋ ಬಿದ್ದಿರುತ್ತಿದ್ದ ಬೀಜಗಳೂ ಬಿಸಿಲಿಗೆ ಒಣಗುತ್ತ, ಗಾಳಿಯಲ್ಲಿ ಹಾರುತ್ತಾ ಮಾಯವಾಗಿಬಿಡುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಷ್ಟೂ ದಿನ ಮಾಯವಾಗಿದ್ದ ಬೀಜಗಳೆಲ್ಲ ಮೊಳಕೆಯೊಡೆದು, ಹತ್ತಿಪ್ಪತ್ತು ದಿನಗಳಲ್ಲಿ ಮೈತುಂಬ ಎಲೆಗಳನ್ನು ಹೊತ್ತು ಚಿಗುರಿಬಿಡುತ್ತಿದ್ದವು. ಜಾಸ್ತಿ ಮಳೆಯಾದ ವರ್ಷಗಳಲ್ಲಿ ಕೊಳೆತುಹೋಗದೇ, ಕಡಿಮೆ ಮಳೆಗೆ ಬಾಡಿಹೋಗದೇ ಜೀವ ಕಾಪಾಡಿಕೊಳ್ಳುತ್ತಿದ್ದ ಕೇತಕಿಯ ಗಿಡಗಳು ಜೀವನಪ್ರೀತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕ್ರಿಯೆಯೊಂದರ ಕಣ್ಣೆದುರಿಗಿನ ಉದಾಹರಣೆಗಳಂತಿದ್ದವು. ಗುಂಪುಗುಂಪಾಗಿ ಹುಟ್ಟಿ, ಜೊತೆಯಾಗಿ ಬೆಳೆದು, ಕಿತ್ತೆಸೆದರೂ ಬೇಸರಿಸದೇ ಬೇರುಬಿಟ್ಟು, ಮೈತುಂಬ ಹೂವರಳಿಸಿ ಕೇಸರಿ-ಹಳದಿ ಬಣ್ಣಗಳ ಕಣವೊಂದನ್ನು ಸೃಷ್ಟಿಮಾಡಿಬಿಡುತ್ತಿದ್ದವು. ನಾಜೂಕು ಎಸಳುಗಳ ಕೇತಕಿ ಹೂವನ್ನು ಸ್ಪರ್ಶಿಸಿದಾಗಲೆಲ್ಲ, ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡ ವಿಸ್ಮಯವೊಂದು ಅಂಗೈಯೊಳಗೆ ದೊರಕಿದ ರೋಮಾಂಚನ ನನ್ನದಾಗುತ್ತಿತ್ತು. ವರ್ಷದಲ್ಲಿ ಒಂದೇ ತಿಂಗಳು ಕೈಗೆ ಸಿಗುತ್ತಿದ್ದ ಕೇತಕಿಯ ಹೂಗಳು ಕರ್ಟನ್ನಿನ ಮೇಲೂ ಇರಬಾರದಿತ್ತೇ ಎಂದುಕೊಳ್ಳುತ್ತಿದ್ದೆ.  ಆಗೆಲ್ಲ ಕರ್ಟನ್ನುಗಳೆಂದರೆ ಅಮ್ಮನ ಹಳೆಯ ಸೀರೆಗಳು. ಹಳತಾದ ಸೀರೆಗಳಲ್ಲಿ ಇರುವುದರಲ್ಲೇ ಒಳ್ಳೆಯ ಸೀರೆಯೊಂದು ಕರ್ಟನ್ನಿನ ಅವತಾರ ತೊಟ್ಟು ಬಾಗಿಲುಗಳನ್ನೂ, ಕಿಟಕಿಗಳನ್ನೂ ಆವರಿಸಿಕೊಳ್ಳುತ್ತಿತ್ತು. ಬಾಳೆಹಣ್ಣನ್ನೋ, ಬಿಸ್ಕಿಟನ್ನೋ ತಿಂದಾದ ಮೇಲೆ ಅರ್ಜಂಟಿಗೆ ಕೈ ಒರೆಸಿಕೊಳ್ಳುವ ಟವೆಲ್ ಆಗಿಯೂ ಆಗಾಗ ಕರ್ಟನ್ನು ಬಳಕೆಯಾಗುತ್ತಿತ್ತು. ಸೀರೆಯೊಂದು ಕರ್ಟನ್ನಾಗಿ ರೂಪಾಂತರ ಹೊಂದಿದ ಸ್ವಲ್ಪ ದಿನಗಳಲ್ಲಿಯೇ ಅದರ ಮೇಲಿದ್ದ ಹೂವು, ಮಾವಿನಕಾಯಿ, ವೀಣೆ, ನವಿಲಿನ ಚಿತ್ರಗಳೆಲ್ಲ ಮಾಸಿಹೋಗುತ್ತಿದ್ದವು. ಆದರೂ ಈ ಸೀರೆಯ ಇದೇ ಜಾಗದಲ್ಲಿ ಇಂಥದ್ದೇ ಚಿತ್ರವಿತ್ತು ಎನ್ನುವ ವಿವರ ಮಾತ್ರ ಕರಾರುವಕ್ಕಾಗಿ ಎಲ್ಲರ ಜ್ಞಾಪಕದಲ್ಲೂ ಇರುತ್ತಿತ್ತು. ಹೀಗೆ ಬದುಕಿನ ಒಂದು ಬಹುಮುಖ್ಯ ಭಾಗವೇ ಆಗಿಹೋಗುತ್ತಿದ್ದ ಕರ್ಟನ್ನಿನ ಮೇಲಿನ ಮೋಹ ಎಷ್ಟಿತ್ತೆಂದರೆ, ಅಮ್ಮ ಹೊಸ ಸೀರೆ ಖರೀದಿಸಿದಾಗಲೆಲ್ಲ ಇದು ಕರ್ಟನ್ನಾಗಿ ಬದಲಾಗಲು ಸೂಕ್ತವೋ ಅಲ್ಲವೋ ಎನ್ನುವ ಚರ್ಚೆಗಳೂ ನಡೆಯುತ್ತಿದ್ದವು. ಸೀರೆಯ ಜಾಗವನ್ನು ಬ್ರ್ಯಾಂಡೆಡ್ ಕರ್ಟನ್ನುಗಳು ತಮ್ಮದಾಗಿಸಿಕೊಂಡಮೇಲೂ, ಅವುಗಳೆಡೆಗಿನ ಸೆಳೆತ ಮಾತ್ರ ಹಾಗೆಯೇ ಉಳಿದುಕೊಂಡಿದೆ. ದಿನ ಬೆಳಗಾದರೆ ಕರ್ಟನ್ನಿನ ಮೇಲೆ ಅರಳುವ ಬಣ್ಣಬಣ್ಣದ ಹೂಗಳ ನಡುವೆ ಕೇತಕಿಯ ಬೀಜವೂ ಮೊಳಕೆಯೊಡೆಯುತ್ತಿರಬಹುದೆನ್ನುವ ನಿರೀಕ್ಷೆಯೊಂದು ಪ್ರತೀ ಬೆಳಗನ್ನೂ ಸುಂದರವಾಗಿಸುತ್ತದೆ. *************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಕರ್ಟನ್ನಿನ ಮೇಲೊಂದು ಕೇತಕಿ ಹೂವು Read Post »

You cannot copy content of this page

Scroll to Top