ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚಂದ್ರ ಮತ್ತು ನಾನು…

ಮೊದಲ ಕವಿತೆಯ ರೋಮಾಂಚನ ಫಾಲ್ಗುಣ ಗೌಡ ಅಚವೆ. ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವ‌ನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು ಚಂದಿರನ ಇರುವಿಕೆ ನನ್ನ ಸುತ್ತಲೇ ಇದೆಯೇನೋ ಎನ್ನುವಂತೆ ಅವನ ಪ್ರಭಾವಲಯ ನನ್ನೊಳಗೂ ಹೊರಗೂ ಹರಡಿಕೊಂಡಿತು.ಜೇನವರ್ಣದ ಬೆಳದಿಂಗಳು ಸುಧೆಯಂತೆ ಇಳಿಯುವಾಗ ನನ್ನ ಹೃದಯದ ಬಾಗಿಲಿನಿಂದ ಒಳಸೇರಿ ಸ್ವಾತಿ ಹನಿ ಚಿಪ್ಪು ಸೇರಿದಂತೆ ಭಾಸವಾಯಿತು.ಆ ಬಿಳ್ಳಿ ಮಿಂಚು ಬಂದದ್ದೇ ತಡ ಅಂಗಳದ ಹಾಲು ಬೆಳಕು, ಅರಳಿಯೇ ಇರುವ ಅಬ್ಬಲಿ ಹೂಗಳು, ನಾಳೆ ಅರಳುವ ಖುಷಿಯಿಂದ ನಿದ್ದೆಗೆ ಜಾರದ ದಾಸಾಳದ ಹೂಗಳು,ಚಂದಿರನ ಮರೆಮಾಡಿದ ತೆಂಗು ಗರಿಗಳು, ಅಸಂಖ್ಯ ನಕ್ಷತ್ರಗಳು ಮಾಯ.. ನನಗೆ ಚಂದ್ರ ಮಾತ್ರ ಕಾಣುತ್ತಿದ್ದುದು ಅಚ್ಚರಿಯೆನಿಸಿತು.ನನ್ನ ಎದೆ ಬಯಲಿಗೆ ಬಂದ ಚಂದ್ರ ನನ್ನೊಳಗನ್ನು ಸೇರಿಯಾಗಿತ್ತು.ದೂರದ ಬಯಲಲ್ಲಿ ಇಡೀ ಬೆಟ್ಟ ಕಾಡು ಪ್ರದೇಶಗಳ ಒಂದು ಮಾಡುವಂತೆ ಟಿಟ್ಟಿಭ ಟಿsssಟೀsssಟಿರ್ಯಾsssss ಕೂಗಿದರೂ ನನ್ನ ಕಿವಿಗೆ ಪೂರ್ತಿಯಾಗಿ ತಲುಪಲಿಲ್ಲ..                   ಇದು ಆಗಷ್ಟೇ ಪಿಯುಸಿ ಮುಗಿಸಿ ಡಿಗ್ರಿಗೆ ಕಾಲಿಟ್ಟ ಹೊತ್ತು.ಹರೆಯ ಗರಿಗೆದರಿ ಮುಗಿಲಿಗೆ ಹಾರುವ ಕಾಲ.. ಏನನ್ನು, ಯಾರನ್ನು ನೋಡಿದರೂ ಚಂದವಾಗಿ ಕಾಣುವ ವಯಸ್ಸು. ನನ್ನೂರಿನಿಂದ ನಮ್ಮದೇ ಕ್ಲಾಸಿಗೆ ಬರುವ ಹುಡುಗಿಯಲ್ಲಿ ಕ್ರಷ್ ಆಗಿತ್ತು. ಚಂದಿರನಂತೆ ನಗುವ ಅವಳ ಕಣ್ಣುಗಳು ನನ್ನಲ್ಲಿ ಕಾವ್ಯ ಭಾವನೆಯನ್ನು ಸ್ಪುರಿಸುತ್ತಿದ್ದವು.ಅವಳನ್ನು ಚಂದಿರನಿಗೆ ಹೋಲಿಸಿ ತಕ್ಷಣ ಪಟ್ಟಿ ತಗೆದುಕೊಂಡು ಬಂದು ‘ ಚಂದ್ರ ಮತ್ತು ನಾನು’ ಪದ್ಯ ಬರೆದೆ.    “ನನ್ನ ಭಾವನೆಯ ಚಂದ್ರನಿಗೆ ಮೋಡ ಮುಸುಕಿದರೆ ನನಗೆ ಖಗ್ರಾಸ! ಯಾಕೆಂದರೆ, ಆತ ಬೆಳಗುವವ ನಾನು ಬೆಳಗಲ್ಪಡುವವ ತಾರೆಗಳನ್ನು ನಾನು ಲಕ್ಷಿಸುವುದಿಲ್ಲ ಅವುಗಳಲ್ಲಿ ಹೊಳಪಿದ್ದರೂ ಬೆಳಗುವ ಶಕ್ತಿಯಿಲ್ಲ. ನನ್ನ ಚಂದಿರ ನಕ್ಕರೆ ನನಗೆ ಬೆಳದಿಂಗಳು ಇಲ್ಲದಿರೆ ಬರೀ ತಂಗಳು! ಅವನಿದ್ದರೆ ಅವ‌ನಿಂದಲೇ ಪ್ರೀತಿ ಕಡಲ ಮೊರೆತ ಕೆದಕುತ್ತದೆ ಕಾವ್ಯ ಭಾವನೆಯ ಅವನ ಹಾಲು ಬಣ್ಣವ ಬೆಳಗುಗೆನ್ನೆಯ ನೋಡಿ ಹಾರುತ್ತದೆ ಮನಸ್ಸು ಅವನೆತ್ತರಕ್ಕೆ! ಆತ ಅಮವಾಸ್ಯೆಯತ್ತ ಸಾಗಿದರೆ ಆ ಮಂದ ಬೆಳಕಲಿ ಮೆಲು ಗಾಳಿಗೆ ಅಲುಗುವ ಆಶಾಲತೆಗಳ ಹಸಿರು ಮಾಯ ಬೀಸುವ ತಂಗಾಳಿಯಲಿ ನಾ ತೂರುತ್ತೇನೆ ನೋವ. ಒಮ್ಮೊಮ್ಮೆ ಯೋಚಿಸುತ್ತೇನೆ, ಅವನಿದ್ದರೆ ನನ್ನ ಕಾವ್ಯ ಹಾಡೆಷ್ಟು ರಮ್ಯ ಅವನಿಲ್ಲದಿರೆ ಬರೀ ಶೂನ್ಯ! ಈ ಮೊದಲ ಕವಿತೆ ‘ಕರ್ಮವೀರ’ ಪತ್ರಿಕೆಯಲ್ಲಿ ‘ಖಗ್ರಾಸ’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ನಂತರ ತಾಲ್ಲೂಕಿನ, ಜಿಲ್ಲೆಯ ಬಹುತೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸುವಂತಾಯಿತು.ಆಗ ನಾನು ‘ಕರ್ಮವೀರ’ದ ಓದುಗನಾಗಿದ್ದೆ.ನಂತರದ ದಿನಗಳಲ್ಲಿ ಕೆ.ಎಸ್.ನ, ಜಿ.ಎಸ್.ಎಸ್,ಲಂಕೇಶ್, ಅಡಿಗ,ಜಯಂತ ಕಾಯ್ಕಿಣಿ, ಕೆ.ವಿ.ತಿರುಮಲೇಶ,ಎಸ್.ಮಂಜುನಾಥ ಅಂತವರ ಪದ್ಯಗಳು ನನ್ನನ್ನು ಪ್ರಭಾವಿಸಿದವು.ಸದ್ಯ ಜಯಂತ ಕಾಯ್ಕಿಣಿ ನನ್ನ ಕಾವ್ಯ ಗುರು.. ಕ್ರೈಸ್ಟ್ ಕಾಲೇಜು, ಸಂಚಯ ಬಹುಮಾನಗಳ ಜೊತೆ ಇತ್ತೀಚೆಗೆ ಒಂದು ಸಿನಿಮಾಕ್ಕೆ ಹಾಡು ಬರೆದಿರುವುದು ಮೊದಲು ಬರೆದ ‘ಚಂದ್ರ ಮತ್ತು ನಾನು’ ಪದ್ಯ ನಡೆಸಿಕೊಂಡು ಬಂದ ರೀತಿಯೇ ಅಗಿದೆ.ನನ್ನ ಕಾವ್ಯದ ಪಯಣವನ್ನು ನೆನಪಿಸಿದ ‘ಸಂಗಾತಿ’ಗೆ ಧನ್ಯವಾದಗಳು. ********************************************

ಚಂದ್ರ ಮತ್ತು ನಾನು… Read Post »

ಇತರೆ

ಪುಟ್ಟಿ ಅನ್ನೊ ಮೊದಲ ಪದ್ಯ

ಮೊದಲ ಕವಿತೆಯ ರೋಮಾಂಚನ ಚೈತ್ರಾ ಶಿವಯೋಗಿಮಠ ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ ಸಣ್ಣ ಪದ್ಯಗಳು ಹಾಗೂ ಪುಸ್ತಕಗಳಲ್ಲಿ ಓದುತ್ತಿದ್ದ ಮಕ್ಕಳ ಪದ್ಯಗಳನ್ನ ನೋಡಿ ನಾನೂ ಯಾಕೆ ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡಬಾರದು ಅನ್ನಿಸಿತು. ಒಂದಷ್ಟು ಸಣ್ಣ ಸಣ್ಣ ಪದ್ಯಗಳನ್ನ ಒಂದು ನೋಟ್ಬುಕ್ ನಲ್ಲಿ ಬರೆದೆ. ಅಜ್ಜಿ, ಪುಟ್ಟಿ, ನಾಯಿ ಬೆಕ್ಕು ಅಂತೆಲ್ಲ ಕಣ್ಣಿಗೆ ಕಂಡದ್ದು, ಮನಸ್ಸಿಗೆ ಅನ್ನಿಸಿದ್ದನ್ನ ಅಕ್ಷರ ರೂಪಕ್ಕಿಳಿಸಿದೆ. ಬರೆದದ್ದನ್ನ ನನ್ನ ಹಿರಿಯ ಅಣ್ಣನಿಗೆ ತೋರಿಸಿ ಹೇಗಿದೆ ಓದಿ ಹೇಳು ಅಂದೆ. ಸಣ್ಣವಳು ಬರೆದಿದ್ದಾಳೆ ಅಂತ ಹುರಿದುಂಬಿಸಲು, ಅಣ್ಣ ನನ್ನ ಒಂದೆರಡು ಪದ್ಯಗಳನ್ನ ಆಯ್ದು ಇವು ಚೆನ್ನಾಗಿವೆ ಹೀಗೆ ಬರಿತಿರು ಅಂತ ಪ್ರೋತ್ಸಾಹಿಸಿದ. ಜೊತೆಗೆ ಇವನ್ನ ತರಂಗಕ್ಕೆ ಯಾಕೆ ಕಳುಹಿಸಬಾರದು ಅನ್ನೋ ಯೋಚನೆಯನ್ನೂ ಹುಟ್ಟು ಹಾಕಿದ. ತಡ ಮಾಡದೆ ಪದ್ಯಗಳನ್ನ ಒಂದು ಬಿಳಿಹಾಳೆಯಲ್ಲಿ ದುಂಡಗಿನ ಅಕ್ಷರಗಳಲ್ಲಿ ಬರೆದು ಲಕೋಟೆ ಒಳಗೆ ಹಾಕಿ, ವಿಳಾಸ ಬರೆದು ಅಂಚೆ ಕಳುಹಿಸಿಯೇ ಬಿಟ್ಟೆ. ನಂತರ ಅದರ ಬಗ್ಗೆ ಮರೆತೂ ಹೋಯಿತು. ಒಂದಿನ ತರಂಗದಿಂದ ಒಂದು ಮನಿ ಆರ್ಡರ್ ಬಂತು ೧೨೫ ರೂಪಾಯಿಯದು, ನಿಮ್ಮ ಪದ್ಯ ಪ್ರಕಟವಾಗಿದೆ ಇಂತಹ ವಾರದ ತರಂಗವನ್ನ ಗಮನಿಸಿ ಅಂತ ಮೆಸೇಜ್ ಇತ್ತು. ನನಗೆ ಆದ ಸಂಭ್ರಮ ಅಷ್ಟಿಷ್ಟಲ್ಲ. “ಪುಟ್ಟಿ” ಅನ್ನೋ ಪದ್ಯ ಪ್ರಕಟವಾಗಿತ್ತು, ಜೊತೆಗೆ ಸಂಭಾವನೆ ಬೇರೆ. ಕೊನೆಯ ಸಾಲನ್ನ ಕೊಂಚ ಬದಲಾಯಿಸಿ ಪ್ರಕಟಿಸಿದ್ದರೂ ಬೇಸರವೆನಿಸಲಿಲ್ಲ. ಮುಂದೆ ಬರೆಯೋದನ್ನ ಬಹುತೇಕ ಕಡಿಮೆ ಮಾಡಿದೆ‌. ವಿದ್ಯಾಭ್ಯಾಸದ ಒತ್ತಡದಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಮುಂದೆ ಪಿ.ಯುಸಿ ಓದೋವಾಗ ಮತ್ತೊಮ್ಮೆ ಹೊಸದಾಗಿ ಪದ್ಯವನ್ನ ಬರೆದೆ. ಯಾರಿಗಾದರೂ ತೋರಿಸಿ ಹೇಗಿದೆ ಅಂತ ಕೇಳಲೇ ಬೇಕೆನಿಸಿತು‌. ನಾನು ಓದುತ್ತಿದ್ದದು ಶೇಷಾದ್ರಿಪುರಂ ಕಾಲೇಜಿನಲ್ಲಿ. ಆಗ ಸ್ನಾತಕೋತ್ತರ/ಪಿ.ಎಚ್.ಡಿ ವಿಭಾಗದಲ್ಲಿ ಡಾ. ದೊಡ್ಡರಂಗೇಗೌಡರು ವಿಭಾಗದ ಮುಖ್ಯಸ್ಥರಾಗಿದ್ದರು. ಒಂದಿನ ಗೆಳತಿಯನ್ನ ಕರೆದುಕೊಂಡು ಅವರ ಚೇಂಬರ್ ಗೆ ಹೋದೆ. ಅಲ್ಲಲ್ಲಿ ಬಿಳಿಯ ಕೂದಲು, ಕನ್ನಡಕ, ಜುಬ್ಬಾ ಪೈಜಾಮಾ ಮೇಲೊಂದು ಖಾದಿ ವೇಸ್ಟ್ ಕೋಟ್ ಧರಿಸಿ ಬಗಲಿಗೆ ಬಟ್ಟೆಯ ಕೈಚೀಲವನ್ನ ಹಾಕಿಕೊಂಡ ಅವರನ್ನ ನೋಡಿದ ಕೂಡಲೆ ಆಗೆಲ್ಲಾ ಕವಿಗಳ ಬಗ್ಗೆ ಕೇಳಿದ ವಿವರಣೆ ಸಾಕ್ಷಾತ್ಕರಿಸಿದಂತಾಯ್ತು. ಇನ್ನೇನು ಹೊರಡೋಕೆ ಅಣಿಯಾಗಿದ್ದರು. ನಮ್ಮನ್ನ ನೋಡಿ, ಅವರನ್ನೇ ಭೇಟಿಯಾಗೋಕೆ ಬಂದಿದ್ದು ಅಂತ ತಿಳಿದು ಬಹಳ ಸೌಜನ್ಯದಿಂದಲೇ ಬರಮಾಡಿಕೊಂಡು ಕುಳಿತುಕೊಳ್ಳೋಕೆ ಹೇಳಿದರು. ಅವರನ್ನ ನೋಡಿ ನನಗೆ ಪದ್ಯಗಳನ್ನ ಹೇಗೆ ತೋರಿಸಲಿ ಅನ್ನೋ ಕಸಿವಿಸಿಯ ಜೊತೆ ಭಯವೂ ಆಗಿ ನಾಲಿಗೆ ಒಣಗಿತು. ಏನೇನೋ ಮಾತಾಡಿ ಕೊನೆಗೆ ವಿಷಯಕ್ಕೆ ಬಂದೆ. “ಸರ್ ನಾನು ನಿಮ್ಮ ಬಳಿ ನನ್ನ ಪದ್ಯಗಳನ್ನ…..‌” ಅಂತ ರಾಗ ಎಳೆದೆ. ಅವರು ನಸುನಕ್ಕು “ಅದಕ್ಯಾಕೆ ಹೆದರ್ತೀರಿ. ತೋರಿಸಿ ನೋಡೋಣ” ಅಂದ್ರು. ನಾನು ಬಹಳಷ್ಟು ಅಳುಕಿನಿಂದಲೇ ಪುಸ್ತಕವನ್ನ ಅವರ ಕೈಗಿಟ್ಟೆ. ಸ್ವಲ್ಪ ಹೊತ್ತು ಅವರು ಓದಿ. “ಒಳ್ಳೆಯ ಪ್ರಯತ್ನ ರೀ. ಆದರೆ ನೀವು ಬಹಳಷ್ಟು ಇವನ್ನ ಟಚ್ ಅಪ್ ಮಾಡಬೇಕು. ಕೊಂಚ ಅರೆ ಬರೆ ಬೆಂದ ಹಾಗೆ ಅನ್ನಿಸ್ತವೆ.” ಅಂತ ಹೇಳಿ ಪದ್ಯವನ್ನ ಹೇಗೆ ಬರಿಬೇಕು, ಪ್ರಾಸಗಳನ್ನ ಹೇಗೆ ಸರಾಗವಾಗಿ ಬಳಸಬೇಕು ಅನ್ನೋದನ್ನ ಬಹಳಷ್ಟು ಹೊತ್ತು ಹೇಳಿದರು. ಮುಖ್ಯವಾಗಿ ಕವಿ ಒಳಗಣ್ಣ ತೆರೆದಿರಬೇಕು, ಸುತ್ತಲೂ ನಡೆಯುವುದನ್ನ ಸೂಕ್ಷ್ಮವಾಗಿ ಅವಲೋಕಿಸಬೇಕು, ಎಂದು ಹೇಳಿ ಒಂದು ಸಣ್ಣ ಪ್ರಾಸವನ್ನ ಬರೆದು ತೋರಿಸಿದರು: ಬಂದೆ ನೀನು ಕಂಡೆ ನಾನು ನಮ್ಮ ಬಾಳು ಹಾಲು ಜೇನು ಇಷ್ಟೇ! ಸರಾಗವಾಗಿ ಸುರಿಯಬೇಕು ಪದಗಳನ್ನ ಅಂತ ಹೇಳಿ ನನಗೆ ಏನೂ ತಿಳಿಯದ ವಿಷಯಗಳನ್ನ ಮಗುವಿಗೆ ಕಲಿಸುವ ಹಾಗೆ ತಿಳಿಸಿಕೊಟ್ಟರು. ಒಂದು ರೀತಿಯ ಹೊಸ ಪ್ರಪಂಚ ಕಂಡಂತಹ ಅನುಭವದ ಜೊತೆಗೆ ನನ್ನಷ್ಟಕ್ಕೆ ನಾನು, “ಚೇ ನಾನು ಬರೆದರೆ ಚೆನ್ನಾಗಿ ಬರಿಯಬೇಕು‌. ಭಾವನೆಗಳನ್ನ ಪದಗಳ ರೂಪದಲ್ಲಿ ಸರಿಯಾಗಿ ವ್ಯಕ್ತ ಪಡಿಸೋಕೆ ಪ್ರಯತ್ನ ಮಾಡಬೇಕು” ಎಂದು ಮನಸಲ್ಲೇ ಅಂದ್ಕೊಂಡೆ. ಈ ಘಟನೆ ನನ್ನ ಮನದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ***************************

ಪುಟ್ಟಿ ಅನ್ನೊ ಮೊದಲ ಪದ್ಯ Read Post »

ಇತರೆ

ಮೊದಲ ಕವಿತೆಯ ಹುಟ್ಟು

ಮೊದಲ ಕವಿತೆಯ ರೋಮಾಂಚನ ಅರ್ಪಣಾ ಮೂರ್ತಿ ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ ಬಿಂದುವಿನಂತಿದ್ದರೂ, ಅವರುಗಳು ಕವಿತೆ ಕಟ್ಟುವ ಪರಿ ನನಗಂತೂ ಅತೀ ಸೋಜಿಗ, ಕವಿತೆಯೆಡೆಗಿನ ಕುತೂಹಲ ತಣಿಸಿಕೊಳ್ಳಲಾದರೂ ಅವರುಗಳನ್ನ ಮಾತನಾಡಿಸಿಬಿಡಲೇ ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಅವರ ಹಮ್ಮು ಬಿಮ್ಮುಗಳ ನಡುವೆ ನನ್ನ ಸಂಕೋಚ ದುಪ್ಪಟ್ಟಾಗಿತ್ತು. ಈ ನಡುವೆ ಅತೀ ಹೆಚ್ಚು ಪ್ರೇಮಕವಿತೆಗಳ ನವಿರಾಗಿ ಹೆಣೆಯುತ್ತಿದ್ದ ಕವಿಮಿತ್ರರೊಬ್ಬರನ್ನು ಕೇಳಿಯೇ ಬಿಟ್ಟಿದ್ದೆ, ಇಷ್ಟು ಚೆಂದದ ಪದಗಳ ಹೆಣಿಕೆ ಹೇಗೆ ಸಾಧ್ಯ ಸರ್ ಅಂತ, ಆ ಕವಿಮಿತ್ರರಂತೂ ಅವರ ಕವಿತೆಯಷ್ಟೇ ಸರಳ ವ್ಯಕ್ತಿ, ಎಷ್ಟು ಮುಕ್ತವಾಗಿ ಮಾತಿಗಿಳಿದರೆಂದರೆ ಒಂದು ಆತ್ಮೀಯತೆಯ ಪರಿಧಿಯೊಳಗೆ ಸೇರಿದ ಅನುಭವವಾಯ್ತು. ಅವರು ಹೇಳಿದ್ದಿಷ್ಟು, ನೋಡು ಹುಡುಗಿ ಕವಿತೆ ಕಟ್ಟುವುದು ಕಷ್ಟವಲ್ಲ, ನೀ ಕೂಡ ಚೆಂದವಾಗಿ ಪದ ಕಟ್ಟಬಹುದು, ಸುತ್ತಲಿನ ಲೋಕ ಅವಲೋಕಿಸು, ನಂತರ ಅದನ್ನೆಲ್ಲ ಕಣ್ಮುಚ್ಚಿ ಧ್ಯಾನಿಸು, ಮನದೊಳಗೆ ಮೂಡಿದ ಪದಗಳ ಒಂದಕ್ಕೊಂದು ನಾಜೂಕಾಗಿ ಸೇರಿಸು ಇದಿಷ್ಟೇ ಕವಿಯ ಗುಟ್ಟು ಅಂದಿದ್ರು. ನಾ ನಕ್ಕು ಸುಮ್ಮನಾಗಿದ್ದೆ. ನಾನೋ ಕಾಲೇಜು ದಿನಗಳಲ್ಲಿ ಓದಿದ ಪದ್ಯಗಳ ಹೊರತಾಗಿ ಕವಿತೆಯ ಗಂಧಗಾಳಿಯೇ ಅರಿಯದವಳು ಇನ್ನು ಕವಿತೆ ಕಟ್ಟುವುದಂತೂ ಅಸಾಧ್ಯ ಎನ್ನುತ್ತಲೇ ಸುಮ್ಮನಾಗಿದ್ದೆ. ಅಪರೂಪಕ್ಕೊಮ್ಮೆ ಮಾತಿಗಿಳಿಯುತ್ತಿದ್ದ ಕವಿಮಿತ್ರರ ಮೊದಲ ಪ್ರಶ್ನೆ, ಏನಾದರೂ ಬರೆಯಲು ಪ್ರಯತ್ನಿಸಿದಿರಾ ಎನ್ನುವುದೇ ಆಗಿತ್ತು. ಇಲ್ಲ ಗುರುಗಳೇ ನನ್ನಿಂದ ಆಗದ ಕೆಲಸ ಎಂದು ನಾ ಕೂಡ ಸುಮ್ಮನಾಗುತ್ತಿದ್ದೆ. ಈ ನಡುವೆ ಪದವಿ ಕಾಲೇಜಿನ ಪರೀಕ್ಷೆಗಳು ಶುರುವಾಗಿತ್ತು, ಇನ್ನೂ ನೆನಪು ಹಸಿಯಿದೆ, ಡಿಸೆಂಬರ್ ಎರಡನೇ ತಾರೀಖು ಮಧ್ಯಾಹ್ನದ ಪರೀಕ್ಷಾ ಕರ್ತವ್ಯ ನನ್ನದಿತ್ತು. ಪರೀಕ್ಷೆ ಶುರುವಾಗಿ ವಿದ್ಯಾರ್ಥಿಗಳು ಬರೆಯಲು ತೊಡಗಿದ ಅರ್ಧ ಗಂಟೆಗೆಲ್ಲಾ ಧೋ ಎಂದು ಮಳೆ ಶುರುವಾಗಿತ್ತು. ಮಳೆಯೆಂದರೆ ಯಾವಾಗಲೂ ಹೀಗೆ ಮನದೊಳಗೆ ಸಣ್ಣ ಪುಳಕ ಹುಟ್ಟಿಸದೇ ಇರಲಾರದೇನೋ, ಕೊಠಡಿಯಲ್ಲಿ ಅಡ್ಡಾಡುತ್ತಾ ಕಿಟಕಿ ಎದುರು ಬಂದು ನಿಂತಿದ್ದೆ. ಗುಬ್ಬಿ ಗಾತ್ರಕ್ಕಿಂದ ಸ್ವಲ್ಪವೇ ದೊಡ್ಡದಿದ್ದ ಒಂದು ಚೆಂದದ ಹಕ್ಕಿ, ವಿದ್ಯುತ್ ತಂತಿಯ ಮೇಲೆ ವೈರಾಗ್ಯ ತಳೆದಂತೆ ಮಳೆಯಲ್ಲಿ ತೊಯ್ದು ಮುದ್ದೆಯಂತೆ ಕೂತಿತ್ತು. ಅರೇ ಇದೇನಾಯ್ತು ಈ ಹಕ್ಕಿಗೆ ಎಂದು ಕೌತುಕದಲ್ಲೇ ಅದರತ್ತ ದೃಷ್ಟಿ ನೆಟ್ಟು ನಿಂತಿದ್ದೆ, ಸುಮಾರು ಎರಡು ಗಂಟೆಗಳ ಕಾಲ ಕುಂಭದ್ರೋಣ ಮಳೆಯಂತೆ ಸುರಿದ ಮಳೆಯಲ್ಲಿ ಅಲುಗದೇ ಕುಳಿತ ಆ ಹಕ್ಕಿ ನನ್ನ ಮನಸ್ಸನ್ನು ಅಲುಗಿಸಿದ್ದು ಸುಳ್ಳಲ್ಲ. ಮಳೆ ನಿಂತಂತೇ ಆ ಹಕ್ಕಿ ಅದೆತ್ತಲೋ ಹಾರಿತ್ತು. ಆಗಲೇ ಕವಿಮಿತ್ರರ ಮಾತು ನೆನಪಾಗಿತ್ತು, ಸುತ್ತ ಕಂಡದ್ದು ಅವಲೋಕಿಸು, ಧ್ಯಾನಿಸು, ಪದ ಪೋಣಿಸು… ಹೌದು, ಆಗ ಹುಟ್ಟಿದ ನನ್ನ ಮೊದಲ ಕವಿತೆಯ ಮೊದಲ ಸಾಲು “ಅದಾವ ಮುನಿಸೋ ಇಲ್ಲ ಕಲ್ಲಾದ ಮನಸೋ, ಗೌತಮನ ಹಾದಿ ಕಾದ ಅಹಲ್ಯೆಯ ಕಂಗಳ ಕಾಯುವಿಕೆಯೋ, ಇಲ್ಲ ಕಲ್ಲೊಳಗಿನ ಮನದ ವೇದನೆಯೋ” ಬಾಲಿಶವೋ, ಅಪಕ್ವವೋ ಒಟ್ಟಿನಲ್ಲಿ ಮೊದಮೊದಲು ಮನದೊಳಗೆ ನಾ ಕಟ್ಟಿದ ಪದಗಳ ಸಾಲು ಈಗಲೂ ನವಿರು ನೆನಪುಗಳ ಸಾಲಿನಲ್ಲಿ ಸೇರಿ ಹೋಗಿದೆ. ಕೊನೆಗೂ ಪೂರ್ಣಗೊಳಿಸಿದ ಈ ಕವಿತೆಯನ್ನು ಅತಿ ಹಿಂಜರಿಕೆಯಿಂದಲೇ ಮುಖಪುಸ್ತಕದ ಗೋಟೆಗಂಟಿಸಿದ್ದೆ. ಎಲ್ಲರ ಪ್ರತಿಕ್ರಿಯೆ ಹೇಗಿರಬಹುದೆಂದು ನೆನೆದು, ನೆನೆದು ಮುದ್ದೆಯಾದ ಹಕ್ಕಿಗಿಂತಲೂ ಹೆಚ್ಚಿಗೆ ಸಂಕೋಚದಿಂದಲೇ ಮುದ್ದೆಯಾಗಿದ್ದೆ. ನನ್ನ ನಿರೀಕ್ಷೆ ಹುಸಿಗೊಳಿಸುವಂತೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಮೊದಲ ಕವಿತೆ ನನ್ನ ಉಳಿದ ಕವಿತೆಗಳಿಗೆ ಅಡಿಪಾಯವಾಯ್ತು, ಬರೆಯುವ ಉತ್ಸಾಹ ಹೆಚ್ಚಿದಂತೆಲ್ಲಾ ಈಗೀಗ ಮತ್ತಷ್ಟು ಪಕ್ವವಾಗಿ ಪದಗಳನ್ನು ಜೋಡಿಸಲು ಕಲಿಯುತ್ತಿದ್ದೇನೆ. ಅದೆಷ್ಟೇ ಕವಿತೆಗಳನ್ನು ಬರೆದರೂ, ಧೋ ಎಂದು ಸುರಿವ ಮಳೆ ನನ್ನ ಮೊದಲ ಕವಿತೆಯ ರೋಮಾಂಚನ ಇಮ್ಮಡಿಗೊಳಿಸುತ್ತದೆ ಈಗಲೂ. ************************************************************

ಮೊದಲ ಕವಿತೆಯ ಹುಟ್ಟು Read Post »

ಕಾವ್ಯಯಾನ

ಸ್ನೇಹದ ಫಸಲು

ಗೆಳೆತನದ ದಿನಕ್ಕೊಂದು ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಳೆತನವಿದು ಪ್ರೀತಿ ,ಸ್ನೇಹದಆಗರವಿದು ಗೆಳೆತನವಿದು ನಂಬಿಕೆ ,ವಿಶ್ವಾಸಗಳಚಿನ್ನದ ಗಣಿಯಿದು ಗೆಳೆತನವಿದು ನೋವು,ನಲಿವಿಗೆಭಾಗಿಯಾಗಿ ಜೊತೆ ನಡೆವುದು ಗೆಳೆತನವಿದು ತಪ್ಪುಗಳ ತಿದ್ದಿತೀಡಿ ಬದುಕಿಗೆ ಸರಿದಾರಿ ತೋರುವದು ಗೆಳೆತನವಿದು ಹೆಣ್ಣು-ಗಂಡು ಎಂಬಭೇದವಿಲ್ಲದೆ ಸ್ನೇಹದ ಕೊಂಡಿಯಾಗುವದು ಗೆಳೆತನವಿದು ಜಾತಿ-ವಿಜಾತಿ ಎನದೆಗಡಿಗಡಿಗಳಾಚೆ ನಮಗಾಗಿ ಮಿಡಿಯುವದು ಗೆಳೆತನವಿದು ಸಂಬಂಧದ ಹಂಗಿಲ್ಲದೆಸಿರಿತನದ ಬೇರುಇಲ್ಲದೆ ಚಿಗುರುವದು ಗೆಳತೆನವಿದು ಹಿರಿಯರು ಕಿರಿಯರುಎನದೆ ಕೈಹಿಡಿದು ಮುನ್ನಡೆಸುವದು ಗೆಳೆತನವಿದು ಬಾಳಿನ ಹೊಸ ಮಗ್ಗಿಲಿಗೆಆರದ ದೀವಿಗೆಯಾಗುವದು ಗೆಳೆತನವಿದು ಪ್ರತಿಫಲ ಬಯಸದೆಫಸಲು ನೀಡುವದು ಎಂದಿಗೋ ನಿಜವಾದ ಸ್ನೇಹವಿದು *********************

ಸ್ನೇಹದ ಫಸಲು Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಉಗಾದಿ ಚಿತ್ರಗಳು ಕೆರೆಕೋಡಿ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ತಾರುಣ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ಎಲ್ಲರೂ ಬಸವಣ್ಣನವರ ವಚನದಲ್ಲಿ ಬರುವಂತೆ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ- ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಹಬ್ಬವಾಗುತ್ತಿತ್ತು. ರಂಜಾನ್ ದಿನ ಶೀರ್‍ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಲೋಕಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆ ಸಾರು, ಚಿತ್ರಾನ್ನ, ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆಗಳಿಂದ ಅಲಂಕೃತವಾದ ದೊಡ್ಡ ತಾಟನ್ನು ಬಾಗಿಲಲ್ಲಿ ಖುದ್ದು ನಿಂತು ಸ್ವಾಗತಿಸುವ ಕೆಲಸವನ್ನು ಮುತುವರ್ಜಿಯಿಂದ ನಾವು ಮಾಡುತ್ತಿದ್ದೆವು. ಮಕ್ಕಳು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಹೋಳಿಗೆ ಮಾಡುತ್ತಿದ್ದಳು. ಆದರೆ ನೆರೆಮನೆಯ ಹೋಳಿಗೆಯ ಸ್ವಾದವೇ ಬೇರೆ. ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಪುರಿಭಟ್ಟಿಯ ಅಕ್ಕಿ ಒಣಗಲು ಮಾಡಿದ್ದ ಕಣದಲ್ಲಿ ಜಮಾಯಿಸುತ್ತಿತ್ತು. ಕೆರೆ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಬಣ್ಣಬಣ್ಣದ ಮೋಡಗಳು ವಿವಿಧ ಆಕೃತಿಗಳಲ್ಲಿ ಲಾಸ್ಯವಾಡುವ ಪಡುವಣದಾಗಸದಲ್ಲಿ, ಬೆಳ್ಳಿ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕಾರ್ಯ ನಡೆಸುತ್ತಿತ್ತು. ನಾವು ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ಕೈಯಿಟ್ಟು, ಅವರ ಕಿವಿಯ ಪಕ್ಕ ನಮ್ಮ ಕೆನ್ನೆ ತಂದು, ತೋರುಬೆರಳನ್ನು ನಿಮಿರಿಸಿ ಚಂದ್ರನಿಗೆ ಅವರ ದಿಟ್ಟಿಯನೊಯ್ದು ಮುಟ್ಟಿಸಲು ಯತ್ನಿಸುತ್ತಿದ್ದೆವು. “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ, ಅದರ ಬಲಗಡೀಕ್ ನೋಡು, ಸಣ್ಣಗೆ ಬೆಳ್ಳಗೆ ಗೆರೆ ಥರ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಂಜಾನ್ ತಿಂಗಳಲ್ಲೂ ಚಂದ್ರನನ್ನು ಹೀಗೇ ಹುಡುಕುತ್ತಿದ್ದವು. ಅವನು ಕಂಡನೆಂದರೆ ನಾಳೆ ನಮಾಜು ಗ್ಯಾರಂಟಿ. ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ಅಜ್ಜಿಗೆ ಕಾಣದಿದ್ದರೂ ಚದುರಿದ ಮೋಡದ ಚೂರನ್ನು ಕಂಡು `ಹ್ಞೂಕಣಪ್ಪಾ, ಕಾಣ್ತುಕಾಣ್ತು. ಸ್ವಾಮೀ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ” ಎಂದು ಮುಗಿಲಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಾಗಿ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಜಗದ್ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಚಂದ್ರ ಕಾಣ್ತು, ಆಶೀರ್ವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು. ಯುಗಾದಿ ಹಬ್ಬದ ದಿನ ಭದ್ರಾವತಿ ಆಕಾಶವಾಣಿಯವರು ಬೆಳಗಿನ ವಾರ್ತೆಗಳ ಬಳಿಕ 7.45ಕ್ಕೆ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡನ್ನು ಕಡ್ಡಾಯವೆಂಬಂತೆ ಹಾಕುತ್ತಿದ್ದರು. ಜಾನಕಿಯವರ ದನಿಯಲ್ಲಿ ಮೂಡಿಬಂದಿರುವ ಬೇಂದ್ರೆ ವಿರಚಿತ ಈ ಹಾಡು, ನನ್ನ ಸ್ಮತಿಯಲ್ಲಿ ಭದ್ರವಾಗಿ ಕೂತಿದೆ. ಕೋಡಿಹಳ್ಳದ ದಂಡೆಗೆ ಹೊಂಗೆಗಿಡಗಳಿದ್ದ ಕಾರಣ “ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ” ಎಂಬ ಸಾಲು ನಮಗೆ ಅನುಭವವೇದ್ಯವಾಗಿತ್ತು. ಈ ಸಾಲನ್ನು ಮೈಸೂರಿನಲ್ಲಿ ಕುಕ್ಕರಹಳ್ಳಿ ಪಕ್ಕದ ಹಾಸ್ಟೆಲಿನಲ್ಲಿರುವಾಗ, ಕೆರೆದಂಡೆಯ ಮೇಲೆ ಅಡ್ಡಾಡುತ್ತ ಮತ್ತೂ ದಿವಿನಾಗಿ ಅನುಭವಿಸಿದೆ. ಸಾಹಿತ್ಯದ ವಿದ್ಯಾರ್ಥಿಯಾಗಿ `ಯುಗಾದಿ’ ಕವನ ಓದುವಾಗ ಗೊತ್ತಾಯಿತು- ಇದು ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಎಂದು. “ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?”ಎಂಬ ಪ್ರಶ್ನೆ ನನ್ನೊಳಗೆ ಕಂಪನದಾಯಕ ಅಸಹಾಯಕತೆ ಹುಟ್ಟಿಸಿತು. ಯಾಕೀ ಅನ್ಯಾಯ ಎಂದು ಆಕ್ರೋಶ ಬರಿಸಿತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಲ್ಲಣವನ್ನು ನನ್ನೊಳಗೆ ಖಾಯಂ ಸ್ಥಾಪಿಸಿಬಿಟ್ಟಿತು. ಇದನ್ನೆಲ್ಲ ಧೇನಿಸುತ್ತ್ತ ಮನೆಯ ಮುಂದೆ ನಾವೇ ಬೆಳೆಸಿರುವ ಹೊಂಗೆಗಿಡಗಳನ್ನು ನೋಡುತ್ತೇನೆ. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ವಾರದಿಂದ ನೀರುಣಿಸುವುದಕ್ಕೂ ಆಗಿರಲಿಲ್ಲ. ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ತಿಕ್ಕಾಡಿದ್ದರಿಂದ ಲಾಠಿಜಾರ್ಜಿಗೆ ಒಳಗಾದ ಭಿಕ್ಷರಂತಾಗಿದ್ದವು ಅವು. ಆದರೀಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರು ಮೂಡಿವೆ-ಯಾರ ಹಂಗೂ ಇಲ್ಲದೆ ದೇಹದೊಳಗಿನ ಜವ್ವನವು ಉಕ್ಕಿ ಮುಖದಲ್ಲಿ ಕಾಂತಿ ಹೊಮ್ಮಿಸುವಂತೆ.ಕಳೆದೆರಡು ವಾರಗಳಿಂದ ನಮ್ಮ ಹಿತ್ತಲ ಮರಗಿಡಗಳು ಎಲೆಯುದುರಿಸುತ್ತಿವೆ. ನನ್ನ ಹೆಂಡತಿ ಗೊಣಗಿಕೊಂಡು ಅವನ್ನು ಗುಡಿಸುತ್ತ ಮರದ ಬುಡಕ್ಕೇ ಸುರಿಯುತ್ತಿದ್ದಾಳೆ. ಎಲೆಯುದುರುವ ಸದ್ದು ಸಾಮಾನ್ಯವಾಗಿ ಕೇಳುವುದಿಲ್ಲ. ಆದರೆ ದಿವಿಹಲಸಿನ ಗಿಡದ ದಪ್ಪನೆಯ ಎಲೆ ಕಳಚಿ ಬೀಳುವ ಖಟ್ ಸದ್ದು ಮಾತ್ರ ಶ್ರವಣೀಯ. ತನ್ನ ಮೈಯ ತೊಗಲೊಡೆದು ಹುಟ್ಟಿದ ಎಲೆಯನ್ನು ವರ್ಷವಿಡೀ ಇರಿಸಿಕೊಂಡಿದ್ದ ಮರ, ಹಣ್ಣಾದ ಬಳಿಕ ಎಷ್ಟು ನಿರಾಳವಾಗಿ ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ಸ್ವರ್ಗದಲ್ಲಿ ಒಂದು ಮರವಿದೆಯಂತೆ. ಅದರಲ್ಲಿ ನಮ್ಮ ಹೆಸರಿನ ಎಲೆಗಳಿವೆಯಂತೆ. ಅದು ಉದುರಿದ ದಿನ ಇಲ್ಲಿ ನಮ್ಮ ಪ್ರಾಣ ಹೋಗುತ್ತದಂತೆ. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ. ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿ ತನಕ ಅಭಯಕೊಡುವಂತೆ ಚಿಗುರುತ್ತಿವೆ. ಮನೆಯೆದುರಿನ ಬೇವು ಮುತ್ತಿನ ಮೂಗುಬೊಟ್ಟಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಇಂತಹ ಋತುಚಕ್ರದ ಯಾವ ಕರಾರಿಗೂ ಸಹಿಹಾಕದ ಬಾಳೆಗೆ ಎಲೆಬದಲಿಸುವ ಗರಜಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಮನೆಗೆಲಸಕ್ಕೆ ಹೋಗಿಬರುವ ಬಡ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. `ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂದು ಸಾರ್ವಜನಿಕ ಒತ್ತಾಯವಿದ್ದರೂ, ನನ್ನ ವೀಟೊ ಕಾರಣದಿಂದ ನಿಂತಿರುವ ಕಾಡುನೆಲ್ಲಿ, ರೆಂಬೆಗಳಲ್ಲಿ ಗಿಣಿಹಸುರಿನ ಸಣ್ಣಚಿಗುರು ತಳೆದು ಇನ್ನೊಂದು ಅವಕಾಶ ಕೊಡಿ ಎಂದು ಅರ್ಜಿ ಹಾಕುತ್ತಿದೆ. ನುಗ್ಗೆ, ಜೋಗಮ್ಮನ ಜಡೆಗಳಂತೆ ಕಾಯಿಗಳನ್ನು ಇಳಿಬಿಟ್ಟು ತೃಪ್ತಿಯಿಂದ ನಿಂತಿದೆ. ಅಂಜೂರ ಮಾತ್ರ ಎಮ್ಮೆಕಿವಿಯಂತಹ ಎಲೆಗಳ ಮೇಲೆ ಧೂಳನ್ನು ಹೊತ್ತು ತಾಪ ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ, ವಿದೇಶಗಳಿಗೆ ಕಳಿಸಿ ರೊಕ್ಕ ಬಾಚುತ್ತಿರುವ ಧಣಿಗಳು ಎಲ್ಲಿದ್ದಾರೊ ಏನೊ, ಅವರು ಹಬ್ಬಿಸಿದ ಧೂಳು ನಮ್ಮ ಮರದೆಲೆಗಳ ಮೇಲೆ ತಬ್ಬಲಿಯಂತೆ ಪವಡಿಸಿದೆ. ಗಣಿಯೂರಲ್ಲಿ ನೆಲೆಸಿರ್ದ ಬಳಿಕ ಕೆಂಧೂಳಿಗೆ ಅಂಜಿದೊಡೆ ಹೇಗೆ ಎಂದುಕೊಂಡು, ವಾಸ್ತವವಾದಿ ಅಂಜೂರ ಗಿಡ ನೀಳತೊಟ್ಟಿನ ಚಪ್ಪಟೆಮುಖದ ಹಸಿರುಕಾಯನ್ನು ಮೈತುಂಬ ಕಚ್ಚಿಕೊಂಡಿದೆ. ಆದರೆ ಇಷ್ಟಪಟ್ಟು ನೆಟ್ಟ ಬದಾಮಿ ಮಾವು ಮಾತ್ರ ಚಿಗುರಿ ನಿರಾಶೆ ತಂದಿದೆ. ಅದರ ಕೆಂದಳಿರು ಮೋಹಕವಾಗಿದೆ. ಅದು ಈ ಸಲ ಫಲವಿಲ್ಲ ಎಂದು ಕೊಟ್ಟಿರುವ ನೋಟಿಸಾಗಿದ್ದು ಅದರ ಸೌಂದರ್ಯ ಅಹಿತವಾಗಿ ಕಾಣುತ್ತಿದೆ. ವಸಂತಮಾಸದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂಬುದು ಕವಿಸಮಯ. ನಮ್ಮ ಮಾವಿನ ಮರ ಕಂಡಂತೆ ಸದಾ ಮೆರೂನ್ ಬಣ್ಣದ ಕೆಂಬೂತಗಳು ಬಂದು ಕುಳಿತು, ಗಂಟಲನ್ನು ಕ್ಯಾಕರಿಸಿ ಸರಿಪಡಿಸಿಕೊಳ್ಳುವವರಂತೆ ಖ್‍ಖ್‍ಖ್ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತವೆ. ಇಷ್ಟಾಗಿಯೂ ಮೂರು ಕೊಂಬೆಗಳು ಚಿಗರದೆ ಕಪ್ಪುಹಸಿರಿನ ಹಳೇಎಲೆಗಳನ್ನು ಇಟ್ಟುಕೊಂಡು, ಹೂತು ಮಾವು ಬಿಡುವ ಭರವಸೆ ನೀಡುತ್ತಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿ ಮಣ್ಣಲ್ಲಿ ಆಡಿಬಂದ ಮಗುವಿನಂತಹ ಅಂಜೂರ ಗಿಡವನ್ನೂ ನೋಡುತ್ತಿರುವಂತೆ, ಉಗಾದಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ. ಬಾಲ್ಯದ ಮಧುರ ನೆನಪುಗಳೂ, ಬೇಂದ್ರೆ ಕವನ ಹುಟ್ಟಿಸಿದ ಕಂಪನಗಳೂ ಕೆಂಧೂಳಿನ ವಾಸ್ತವತೆಗಳೂ ಮಿಶ್ರಗೊಂಡು ನುಗ್ಗುತ್ತಿವೆ. ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ತ್ರಾಣ ಜನರಲ್ಲಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯ ತುಂಬಲು. ಬೀದಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳನ್ನು ಕಾಯಲೆಂದು ಊರುಬಿಟ್ಟು ಬಂದಿರುವ ವಾಚ್‍ಮನ್ ಶೆಡ್ಡುಗಳತ್ತ ನೋಡಿದೆ. ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ ಮಕ್ಕಳಿಂದ ಹೊಮ್ಮಿ ಬರುತ್ತಿದೆ. ಕವನದ ಕೊನೆಯ ಭಾಗವನ್ನೇ ಧೇನಿಸುತ್ತ ವಿಷಾದಮುಖಿಯಾಗಿರುವ ನನ್ನನ್ನು ಅಣಕಿಸುತ್ತಿದೆ. ಯುಗಕ್ಕೆ ಆದಿ ಯಾವುದೊ ಏನೊ? ಅದರ ಅಂತ್ಯವನ್ನೇ ಕುರಿತು ಯಾಕೆ ಚಿಂತಿಸಬೇಕು. ಮನುಷ್ಯರಿಗೆ ಅಂತ್ಯವಿರುವುದು ನಿಜ. ಆದರೆ ಪಯಣದ ಹಾದಿಯಲ್ಲಿ ದೊರಕುವ ನೋಟಗಳು ಅನಂತವಾಗಿವೆ. ಇದು ಬೇಂದ್ರೆಯವರಿಗೂ ಅರಿವಿತ್ತು. ಎಂತಲೇ ತಾವೇ ಬರೆದ `ಯುಗಾದಿ’ ಕವನಕ್ಕೆ ಡಿಕ್ಕಿಹೊಡೆಯುವಂತೆ `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಬೇಕು’ ಎಂಬ ಸಾಲನ್ನೂ ಬರೆದರು. ಉಮರ್ ಖಯಾಮನನ್ನು ಕನ್ನಡಿಸುತ್ತ ಹುಟ್ಟಿದ ಸಾಲುಗಳಿವು. ಸಾವು ಹತಾಶೆಯನ್ನು ಮಾತ್ರವಲ್ಲ, ತೀವ್ರವಾಗಿ ಬದುಕುವ ಉತ್ಕಟತೆಯನ್ನೂ ಹುಟ್ಟಿಸಬಲ್ಲದು. (ಪಂಡಿತ್ ಬಿಜಾಪುರೆ ಲೇಖನಕ್ಕೆ ಸಿಕ್ಕ ಮೆಚ್ಚುಗೆ ಕಂಡಬಳಿಕ, ಈ ಹಿಂದೆ ಬರೆದ ಆದರೆ ಪುಸ್ತಕರೂಪದಲ್ಲಿನ್ನೂ ಬಂದಿರದ ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಅನಿಸಿ ಈ ಈ ಬರಹ.) *********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಕೆಂಪು ಐರಾವತ

ಕವಿತೆ ಡಾ.ಪ್ರೇಮಲತ ಬಿ.  ರೆಕ್ಕೆಬಿಚ್ಚಿ ಉಡ್ಡಯನಗೈಯ್ಯುವ ಮುನ್ನವೇ ಹಿಡಿಯಬೇಕೆಂದು ಓಡಿದೆ ಒರೆಸುತ್ತ ಹಣೆಯ ಮೇಲಿನ ಬೆವರು ಒಡಲ ತುಂಬುತ್ತ, ಹರಟೆಯೊಡೆಯುತ್ತ ಪುಕ್ಕವರಡಿ ವಿರಮಿಸಿ ನಿಂತಿತ್ತು ದೇದೀಪ್ಯಮಾನವಾದ  ಕೆಂಪು ಐರಾವತ ಏನೋ ಸಂಕಟ, ಬಿಟ್ಟು ಹೊರಟ ತವಕ ನನ್ನದಲ್ಲದ ಊರ, ಮೂರ್ತವಲ್ಲದ ಭಾವ ದಿನಕೊಂದು ಕೊನೆಕಟ್ಟಿ ಗಟ್ಟಿಯಾಗಿರದ ಅಳ್ಳಕ   ಒಂದೇ ಗಂಟೆ ಊರ ತಲುಪಲು ಒಂದೆರಡೇ ದಿನದ ಗಡುವು ಮತ್ತೆ ಮರಳಲು ನಿಟ್ಟುಸಿರಿಟ್ಟೆ ನಕ್ಕು..” ಎಲ್ಲ ಮರುಳು” ಯಾರೋ ಬಂದರು, ಯಾರೋ ಇಳಿದರು ಕಣ್ಣ ಮುಚ್ಚಿ ಕಿಟಗಿಗೊರಗಿ ಗುನುಗಿ ಹಾಡು ವಿದಾಯಗಳ ಮಾತು,ಬೈ ಬೈ ಟಾ..ಟಾ ಪ್ಲಾಸ್ಟಿಕ್ಕಿನ ಸರಬರ ನನ್ನದೇ ಸನಿಹ ಕಣ್ಬಿಟ್ಟರೆ ಸೇಬು ,ಕಿತ್ತಳೆ ,ಬಾಳೆ ಹಿಡಿದು  ಬಂದಿದ್ದೆ ಏನಚ್ಚರಿ ನಿನ್ನ ಆ ಕಕ್ಕುಲಾತಿ.. ಮಾತು ಹೊರಡದ ನಿನ್ನ ಅಮಾಯಕತೆ ಮಾಗಿದ ಪ್ರೀತಿ ಹಣ್ಣಾಗಿ ಹೊಳೆದು ಕಣ್ಣಲ್ಲಿ ಕೂತಿದ್ದವು ನನ್ನ ಉಡಿಯ ತುಂಬಿ…. ************************************************************************ .

ಕೆಂಪು ಐರಾವತ Read Post »

ಕಾವ್ಯಯಾನ

ಮಾತು – ಮಳೆ ಹಾಡು

ಕವಿತೆ ಬಾಲಕೃಷ್ಣ ದೇವನಮನೆ ಚಿತ್ರ ಕಟ್ಟಿದ ಚೌಕಟ್ಟು      ಮಾತು ಮಳೆಯಂತೆ      ಧೋ… ಎಂದು ಸುರಿಯುತ್ತಿರುತ್ತದೆ ನಿಲ್ಲುವುದಿಲ್ಲ      ಒಮ್ಮೊಮ್ಮೆ ಮಳೆ ನಿಂತರೂ      ಮಾತು ನಿಲ್ಲುವುದಿಲ್ಲ…      ಮೌನವೂ ಮಾತಾದಂತೆ      ಮಳೆ ನಿಂತ ಮೇಲಿನ ಮರದ ಹನಿಯಂತೆ…      ಚೌಕಟ್ಟಿನೊಳಗೆ ಮಾತು ಮಳೆ ಹಾಡು. ದೃಶ್ಯ ಒಂದು      ಆಕಸ್ಮಿಕದ ಭೇಟಿ      ಎಷ್ಟೋ ಕಾಲದ ಮೇಲೆ      ಮರು ಮಿಳಿತವಾದ ಗೆಳೆತನ      ಮುಗಿಯುತ್ತಿಲ್ಲ ಕ್ಷೇಮ ಕುಶಲೋಪರಿ      ಕೂಡಿ ಆಡಿದ ಹಳೆ ನೆನಪು      ಹೊಸ ಕೆಲಸ, ನೆಲೆ ನಿಂತ ಬದುಕು      ಒಳಗೊಳಗೆ ತಳಮಳದ ಕನಸು      ಎಲ್ಲವೂ… ಮೊಗೆದರೂ ಮುಗಿಯದ ಮಾತು      ಸೇರಿಸಿ ಕೊಟ್ಟಿದೆ ಈ ಮಳೆ      ಒಂದೇ ಕೊಡೆಯ ಕೆಳಗೆ ದೃಶ್ಯ ಎರಡು      ಎಷ್ಟು ಬೆಚ್ಚಗೆ ಬೆಸೆದಿದೆ      ಹಲ ದಿನದ ಸಲ್ಲಾಪಕೆ ಅನಿರೀಕ್ಷಿತವಾಗಿ      ಎದೆಯ ದನಿಯಾಗಿ      ಪಿಸು ನುಡಿಗಳು ಬಿಸಿ ಮಿಡಿತಗಳು      ಜಗವೇ ನಾಚಿ ಕಣ್ಮುಚ್ಚುವಂತೆ      ಯಾರ ಹಂಗೂ ಇರದ ತಮ್ಮದೇ ಪ್ರಪಂಚದಲ್ಲಿ      ಮೈಮರೆವಂತೆ ಸೇರಿಸಿ      ಸುರಿಯುತ್ತಲೇ ಇದೆ ಮಳೆ      ಒಂದೇ ಕೊಡೆಯ ಮರೆಗೆ ದೃಶ್ಯ ಮೂರು      ಸುರಿ ಮಳೆ ನೀ ಸುರಿಯುತ್ತಿರು      ನಾ ನೆನೆವೆ ನಿನ್ನೊಳಗೆ      ನನ್ನ ಸುತ್ತಲ ಜಗವು ಅಣಕಿಸಿ ನಗುತಿರಲು      ನನ್ನೊಳಗಿನ ನೋವು ಹರಿಯಲಿ      ಕಂಬನಿಯಾಗಿ ನಿನ್ನ ಜೊತೆಗೆ      ಬೆನ್ನಲಿ ಕಟ್ಟಿಕೊಂಡ ಉರಿ-      -ಯುವ ಹತಾಶೆಯ ಮೂಟೆ      ತಂಪಾಗಲಿ, ಮೊಳೆಯಲಿ ಒಳಗೊಂದು      ಚೈತನ್ಯದ ಓಟೆ      ಚಿಗುರಿ ಹಸುರಾಗಿ      ಮೋಡ ಮುಸುಕಿದ ಬಾಳ ಕ್ಷಿತಿಜದಲ್ಲಿ      ಕತ್ತಲು ಕರಗಿ ಭರವಸೆಯ ಬೆಳಕಾಗಿ      ಸುರಿ ಮಳೆಯೇ ಮೌನಕ್ಕೆ ಮಾತಾಗುವಂತೆ      ಕೊಡೆಯಿಲ್ಲದೇ ನೆನೆವೆ ನಾ ನಿನ್ನೊಳಗೆ      ಮಳೆಯೇ ಹಾಡಾಗುವಂತೆ…!! *************************

ಮಾತು – ಮಳೆ ಹಾಡು Read Post »

You cannot copy content of this page

Scroll to Top