ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, ದಿನಗಟ್ಟಲೇ ಸೋಬಾನೆ ಪದ, ಬೀಸುವಕಲ್ಲು ಪದಹಾಡುವ ಮಹಿಳೆಯರು ಇರ್ತಿದ್ರು. ಪ್ರತಿಭಾಶಾಲಿಗಳಾದ ಅಂಥವರನ್ನು ಸ್ಥಳೀಯ ಶಾಲಾ ಮಾಸ್ತರನೋ, ಮಠದ ಅಯ್ಯನವರೋ ಬೆಂಗಳೂರಿನ ಸರಕಾರದ ಗಮನಕ್ಕೆ ತಂದು ಅಂಥವರನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಂಥವರಿಗೆ ಮಾಸಾಶನ ಕೊಡಿಸುವ ಸತ್ಕಾರ್ಯಗಳು ಮುಗ್ದತೆಯಿಂದ ಜರುಗುತ್ತಿದ್ದವು. ಎಲ್ಲಿ ಹೋದವೋ ಜವಾರಿತನದ ಮತ್ತು ಯತಾರ್ಥ ಪ್ರೀತಿಯ ಆ ದಿನಗಳು ಎಂದು ವರ್ತಮಾನದಲ್ಲಿ ಹಳಹಳಿಸುವಂತಾಗಿದೆ. ಅಷ್ಟೇ ಯಾಕೆ ಅದಕ್ಕಾಗಿ ಅಂದು ಅಧಿಕಾರಿ ಮತ್ತು ರಾಜಕೀಯ ವಲಯಗಳಲ್ಲಿ ಸುಮಧುರ ಸಂಸ್ಕೃತಿ ಬೆಸೆಯುವ, ನಿಸ್ವಾರ್ಥದ ಶುದ್ಧಜವಾರಿ ಕಾಲಮಾನ ಅದಾಗಿತ್ತು. ಸಂಸ್ಕೃತಿ ಕುರಿತು ಮಾತನಾಡುವುದೆಂದರೆ ಪಾವಿತ್ರ್ಯತೆಯ ಸಂಬಂಧಗಳ ಕುರಿತು ಮಾತನಾಡುವ ಗೌರವಭಾವ ತುಂಬಿ ತುಳುಕುತ್ತಿತ್ತು. ಹಾಗೇನೇ ಸಾಹಿತಿ, ಕಲಾವಿದರೆಂದರೆ ಆಗ ನಮಗೆಲ್ಲ ಲೈವ್ ಕ್ಯಾರಕ್ಟರುಗಳು. ಎಂಥವರಲ್ಲೂ ಅನನ್ಯತೆ ಉಕ್ಕಿಸುವ, ಸಾತ್ವಿಕತೆ ಸೂಸುವ ಆದರದ ಭಾವ ತುಂಬಿ ತುಳುಕುತ್ತಿದ್ದವು. ಬರಬರುತ್ತಾ ಅದೆಲ್ಲ ಕ್ಷೀಣಿಸಿ ಅದರ ಸಾಧ್ಯತೆಯ ಕ್ಷಿತಿಜಗಳು ಯದ್ವಾತದ್ವಾ ಹರಡಿಕೊಳ್ಳುತ್ತಾ ಅದರ ಹಿಡಿತಗಳು ಸಾಂಸ್ಕೃತಿಕ ಲೋಕವನ್ನೂ ಬಿಡದೇ ಅಕ್ಟೋಫಸ್ ತರಹ ಆವರಿಸಿಕೊಂಡು ಬಿಟ್ಟಿವೆ. ನೋವಿನ ಸಂಗತಿಯೆಂದರೆ ಅದೊಂದು ರಿಯಲ್ ಎಸ್ಟೇಟ್ ಬಿಜಿನೆಸ್ಸಿನಂತೆ ಹೆಸರು ಮತ್ತು ಆಮದಾನಿ ತರುವಂತಾಗಿದೆ. ನೇರವಾಗಿ ರಿಯಲ್ ಎಸ್ಟೇಟ್ ಎಂದು ಕರೆದು ಬಿಟ್ಟರೆ ಸಹಜವಾಗಿ “ದಲ್ಲಾಳಿಗಳೆಂದೇ” ಅರ್ಥೈಸಿ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಮೂಡುವುದಿಲ್ಲ. ಅಂತೆಯೇ ಲಾಬಿಕೋರರು ಅದರ ಬದಲು ಸಾಂಸ್ಕೃತಿಕ ಲೋಕದಸೇವೆ ಎಂದು ಕರೆದುಕೊಂಡಿದ್ದು. ಅವರದು ಕಲ್ಚರಲ್ ಎಸ್ಟೇಟ್ ದಂಧೆ ಎಂಬ ಬನಾವಟಿ ಯಾರಿಗೂ ತಿಳಿಯಲ್ಲ. ಎಷ್ಟಾದರೂ ಸಾಹಿತ್ಯ, ಸಂಗೀತ, ಕಲೆ, ಪರಂಪರೆ, ಜಾನಪದ, ನಾಡು, ನುಡಿ, ಇವುಗಳನ್ನೊಳಗೊಂಡ ಸಂಸ್ಕೃತಿ ದಿಗ್ಗಜರ ಒಡನಾಟದ ಲೋಕವದು. ಅದರಿಂದಾಗಿ ಯಾರಿಗಾದರೂ ಎಳ್ಳರ್ಧ ಕಾಳಿನಷ್ಟೂ ಅಪಾರ್ಥ ಮಾಡಿಕೊಳ್ಳದ ಒಂದು ಗೌರವಯುತವಾದ ಸ್ಟೇಟಸ್. ಲೋಕದ ಕಣ್ಣಲ್ಲಿ ಕನ್ನಡ ಸಂಸ್ಕೃತಿಯ ಪರಿಚಾರಿಕೆ. ಯಾವುದೇ ರಿಸ್ಕ್ ಇಲ್ಲದೇ ಹಣ, ಹೆಸರು, ಕೀರ್ತಿ ವಗೈರೆಗಳು ಸಲೀಸಾಗಿ ಸಿಗುವ ಬಂಡವಾಳರಹಿತ ಹೈಟೆಕ್ ಬಿಜಿನೆಸ್. ಇದು ಕೆಲವರ ಪಾಲಿಗೆ ಪ್ರತಿಷ್ಠಿತ ಉದ್ದಿಮೆಯೇ ಆಗಿದೆ. ಆದರೆ ಮೇಲ್ನೋಟದಲ್ಲಿ ಇದೊಂದು ಲಾಬಿ ಮತ್ತು ಲಾಭಕೋರತೆಯ ಕಲ್ಚರಲ್ ಟ್ರೇಡಿಂಗ್ ಟ್ರೆಂಡ್ ಅಂತ ಅನ್ನಿಸೋದೇ ಇಲ್ಲ. ಅದೊಂಥರ ಕಾರ್ಪೊರೇಟ್ ವ್ಯವಹಾರ. ಅದರ ನೇಪಥ್ಯ ಹುನ್ನಾರ ಯಾರಿಗೂ ತಿಳಿಯುವುದೇ ಇಲ್ಲ. ಹಾಂಗಂತ ಸಾಂಸ್ಕೃತಿಕ ಲೋಕಿಗರಿಗೆ ರಾಜಕೀಯಪ್ರಜ್ಞೆ ಬೇಡವೆಂಬುದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಸಂಸ್ಕೃತಿ ಚಿಂತಕರಿಗೆ ಪರಿಪೂರ್ಣವಾದ ರಾಜಕೀಯ ಮತ್ತು ಸಾಮಾಜಿಕಪ್ರಜ್ಞೆ, ಪರಿಜ್ಞಾನ ಇರಬೇಕು. ಆದರೆ ಚಾಲ್ತಿಯಲ್ಲಿರುವ ಭಟ್ಟಂಗಿಗಳ ಒಳಹೇತು, ಕೊಳಕು ಹುನ್ನಾರದ ದ್ರಾಬೆ ರಾಜಕಾರಣದಿಂದ ಸಂಸ್ಕೃತಿ ಚಿಂತಕರು ದೂರವಿರಬೇಕಿದೆ. ದುರಂತದ ಸಂಗತಿ ಎಂದರೆ ಇಲ್ಲಿ ಯಾವುದಕ್ಕೆ ದೂರ, ಯಾವುದಕ್ಕೆ ಹತ್ತಿರ ಇರಬೇಕಾಗಿದೆ ಎಂಬುದರ ತದ್ವಿರುದ್ಧದ ವೈರುಧ್ಯಗಳದ್ದೇ ಅಟ್ಟಹಾಸ. ಸರಕಾರ ಯಾವುದೇ ಪಕ್ಷದ್ದಿರಲಿ, ಅವಕಾಶವಾದಿ ದಲ್ಲಾಳಿಗಳದ್ದೇ… ಕ್ಷಮಿಸಿ, ಕ್ಷಮಿಸಿ ಲಾಬೀಕೋರರದ್ದೇ ಯಾವಾಗಲೂ ಮೇಲುಗೈ. ವಿಧಾನಸೌಧದ ಮೂರನೇ ಮಹಡಿಯಲ್ಲಿ ‘ಅಂಥವರು’ ಎಲ್ಲಪಕ್ಷಗಳ ಸರಕಾರಗಳಲ್ಲೂ ಸಲ್ಲುತ್ತಲೇ ಇರ್ತಾರೆ. ಯಾಕಂದರೆ ಅವರು ಎಲ್ಲ ಕಾಲಕ್ಕೂ ಸಲ್ಲುವಂತಹ ಚಾಲಾಕಿತನದ ರಕ್ಷಾಕವಚ ಧರಿಸಿರುತ್ತಾರೆ. ಇಂಥವರ ನೆರವಿಗೆ ಜಾತಿ, ಮತ, ಮಠ, ಐಭೋಗ ಎಲ್ಲವೂ ಮೇಳೈಸಿರುತ್ತವೆ. ಜತೆಗೆ ಸಾಂಸ್ಕೃತಿಕ ಲೋಕಜ್ಞಾನವು ರವಷ್ಟಿದ್ದರೆ ಸಾಕು. ರಾಜಕೀಯ ಪಕ್ಷಗಳ ಪಾಲಿಗೆ ಇಂತಹ ಲಾಬಿಕೋರರು ಇವನಾರವ, ಇವನಾರವ ಎಂದೆನಿಸದೇ ಎಂದಿಗೂ ಇವ ನಮ್ಮವನೆಂದೆನಿಸಯ್ಯ ಎಂಬ ಅನುಕೂಲಸಿಂಧು ಪ್ರಮಾಣಪತ್ರ ಪಡಕೊಂಡಿರುತ್ತಾರೆ. ಹೀಗೆ ಇವರು ವಿಧಾನಸೌಧದ ಮೂರನೇ ಮಹಡಿಯ ಬೃಹಸ್ಪತಿಗಳನ್ನು ತಲೆದೂಗಿಸುತ್ತಾರೆಂದರೆ ಅರೆ ಸರಕಾರಿ, ಸರಕಾರಿ ಇಲಾಖೆಗಳ ಮಹಡಿ, ಬಹುಮಹಡಿ ಕಟ್ಟಡಗಳವರದ್ದು ಇನ್ಯಾವಲೆಕ್ಕ.? ಅಷ್ಟಕ್ಕೂ ಇವರು ಅದೆಂಥ ಚಾಲಾಕಿಗಳೆಂದರೆ ಆಯಕಟ್ಟಿನ ಇಲಾಖೆಗಳಲ್ಲಿ ಅಂತಸ್ತಿಗನುಗುಣವಾಗಿ ಸಾಹೇಬ್ರೇ, ಧಣಿ, ಅಕ್ಕಾ, ಅಣ್ಣಾ ಅನ್ನುತ್ತಲೇ ಕೈ ಬಿಸಿ ಮಾಡುತ್ತಾ ಕೆಲಸ ಮಾಡಿಸಿಕೊಳ್ಳುವ ಮಹಾ ಬೆರಕಿಗಳು. ಇವರ ಚಾಲಾಕಿತನಕ್ಕೆ ಸರ್ಕಾರದ ಅನುದಾನಗಳು ಮಾತ್ರ ಗುರಿಯಲ್ಲ. ಸಾಂಸ್ಕೃತಿಕ ಲೋಕದ ಉತ್ಸವ, ವಿಶ್ವಮೇಳ, ಪರಿಷೆ, ಪ್ರಾಧಿಕಾರ, ಪ್ರತಿಷ್ಠಾನ, ಅಕಾಡೆಮಿಗಳ ನೇಮಕಾತಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಳ್ಳುವ ಇಲ್ಲವೇ ಹೊಡಕೊಳ್ಳುವಲ್ಲಿ ಇವರದು ಎತ್ತಿದ ಕೈ. ಸರಕಾರದ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಿಸುವಲ್ಲೂ, ಪಡೆಯುವಲ್ಲೂ ಇವರದು ಮುಂಚೂಣಿ ನಾಯಕತ್ವ. ಒಮ್ಮೊಮ್ಮೆ ವಂದಿಮಾಗಧರಾಗಿ, ಮತ್ತೊಮ್ಮೆ ಪ್ರತಿಭಟನೆಯ ಪೋಷಾಕು ಧರಿಸುವ ಇವರು ಯಾವುದೇ ಸಾಂಸ್ಕೃತಿಕ ಬದ್ಧತೆ ಹೊಂದಿರಲಾರರು. ಸಮಯಕ್ಕೆ ತಕ್ಕವೇಷ, ಸಭೆಗೆ ತಕ್ಕರಾಗ ಹಾಡುವ ನಿಪುಣಕಲೆ ರೂಢಿಸಿ ಕೊಂಡಿರುತ್ತಾರೆ. ಎಡಚ, ಎಬಡನಂತಹ ಮಂತ್ರಿಯೇನಾದರು ಸಿಕ್ಕರೆ ಸಾಕು ಅವನನ್ನು ಆಟ ಆಡಿಸುವಲ್ಲಿ ಇವರನ್ನು ಮೀರಿಸುವವರೇ ಇರಲ್ಲ. ಅಷ್ಟಕ್ಕೂ ಈ ಹೊಲಬುಗೇಡಿಗಳು ಅಡ್ಡಕಸುಬಿಗಳೇನಲ್ಲ. ಎಲ್ಲ ಕಲೆಗಳ ತಟಕು ತಟಕು ಪರಿಚಯವುಳ್ಳ ಸಕಲಕಲಾ ಪರಾಕ್ರಮಿ ಗೋಸುಂಬೆಗಳು. ಆದಾಗ್ಯೂ ಎಮರ್ಜೆನ್ಸಿಗೆ ಇರಲೆಂದು ಕಲೆಯ ಯಾವುದಾದರೊಂದು ಪ್ರಕಾರದಲ್ಲಿ ಸಣ್ಣದೊಂದು ಸಾಧನೆಯ ಸರ್ಟಿಫಿಕೆಟ್, ಆಧಾರ್ ಕಾರ್ಡಿನಂತೆ ಇಟ್ಟುಕೊಂಡಿರುತ್ತಾರೆ. ಒಂದೆರಡು ಸಂಘ ಸಂಸ್ಥೆ, ಟ್ರಸ್ಟ್, ಪ್ರತಿಷ್ಠಾನಗಳ ಅಧಿಕೃತ ನೊಂದಣಿ ಮಾಡಿಟ್ಟುಕೊಂಡು ತಪ್ಪದೇ ಅವುಗಳ ಹೆಸರಲ್ಲಿ ಇಲ್ಲಿಯ ಮತ್ತು ದಿಲ್ಲಿಯ ಸರಕಾರದ ಖಜಾನೆಗಳಿಂದ ಬಳಬಳ ಅಂತ ಅನುದಾನ ಉದುರಿಸಿ ಕೊಳ್ಳುತ್ತಾರೆ. ಅದಕ್ಕೆಲ್ಲ ಜಿಎಸ್ಟಿ ಸಮೇತವಾದ ಬಿಲ್ಲು ಬಾಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಯಾರಿಸಿ ಕೊಡುವಲ್ಲಿ ಇವರು ಸಿಕ್ಕಾಪಟ್ಟೆ ಶ್ಯಾಣೇರು. ಈ ಕಠಿಣ ಪರಿಶ್ರಮವನ್ನು ಸಾಂಸ್ಕೃತಿಕ ಸಂಘಟನೆ ತಮಗೆ ದಶಕಗಳಿಂದ ಕಲಿಸಿ ಕೊಟ್ಟಿದೆಯೆಂದು ವಿಧಾನಸೌಧದ ಕಾರಿಡಾರುಗಳಲ್ಲೂ ಪುಂಗಿ ಊದುತ್ತಾರೆ. ಮೊದ ಮೊದಲು ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ರೋಗ ಬೆಂಗಳೂರಿಗಷ್ಟೇ ಸೀಮಿತಗೊಳ್ಳಲಿಲ್ಲ. ಇದು ಕೊರೊನಾ ವೈರಾಣು ತರಹ ಎಲ್ಲ ಕಡೆಗೂ ಸಾಂಕ್ರಾಮಿಕ ರೋಗವಾಗಿ ಹಬ್ಬಿದೆ. ಕೆಲವರು ತಮ್ಮ ಸಾರಿಗೆ ಸಂವಹನದ ಅನುಕೂಲ ಸರಳಗೊಳ್ಳಲೆಂದು ಅಂಥವರು ಬೆಂಗಳೂರಿಗರಾಗಿದ್ದು, ಮತ್ತೆ ಕೆಲವರು ಅನಿವಾಸಿ ಬೆಂಗಳೂರಿಗರು. ರಾಜಧಾನಿಯ ಈ ಲಾಬಿಕೋರರು ಜಿಲ್ಲೆ, ತಾಲೂಕುಗಳಲ್ಲೂ ಶಾಖಾಮಠಗಳಂತೆ (ಗೆಳೆಯರೊಬ್ಬರ ಪ್ರಕಾರ ಅಲಿಬಾಬಾ ಮತ್ತು ೪೦…) ತಮ್ಮ ಶಿಷ್ಯಬಳಗ ಸಾಕಿ ಕೊಂಡಿರುತ್ತಾರೆ. ಆ ಮೂಲಕ ಅವರ ಬಿಜಿನೆಸ್ ನಾಡಿನ ತುಂಬೆಲ್ಲ ಹರಡಲು ಅನುಕೂಲ. ಸಿರಿಗನ್ನಡದ ಪ್ರಾಂಜಲ ಕಲೆ, ಸಂಸ್ಕೃತಿಗೆ, ಬೋಳೆತನದ ಕಲಾವಿದರಿಗೆ ಇಂಥವರಿಂದ ಬಿಡುಗಡೆಯೇ ಇಲ್ಲ ಎನ್ನುವಷ್ಟು ಇವರ ಕಬಂಧ ಬಾಹುಗಳು ಬಲಾಢ್ಯಗೊಂಡಿವೆ. ಕೆಲವು ಮಠಾಧೀಶರು, ಪತ್ರಕರ್ತರು ಇಂತಹ ಲಾಬಿಕೋರರ ಪರನಿಂತು ಲಾಬಿಮಾಡುವುದು, ಆಶೀರ್ವದಿಸುವುದು ಅಷ್ಟೇನು ನಿಗೂಢವಲ್ಲದ ಸಾಂಸ್ಕೃತಿಕ ದುರಂತ. ಅನರ್ಹರಿದ್ದೂ ತಮ್ಮ ಪಾಲಿನ ಸಂಘ, ಸಂಸ್ಥೆಗಳ ಅನುದಾನ, ಪ್ರಶಸ್ತಿ ಹೊಡಕೊಂಡಿದ್ರೆ ಮುಂಡಾ ಮೋಚಲೆನ್ನಬಹುದಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ಸಹಾಯಧನ, ಆಪದ್ಧನ, ಪ್ರಶಸ್ತಿಗಳನ್ನು ಇತರೆ ಅನರ್ಹರಿಗೇ ಕೊಡಿಸುವ ದಲ್ಲಾಳಿತನದಲ್ಲಿ ಇವರದು ಹೆಸರಾಂತ ಹೆಸರು. ಕೆಲವರ ಪಾಲಿಗದು ಕಾಯಕವೇ ಆಗಿಬಿಟ್ಟಿದೆ. ಸರಕಾರದ ಎಲ್ಲ ಮಜಲುಗಳ ಒಳಕೀಲು, ಕೀಲಿಕೈಗಳ ದಟ್ಟಪರಿಚಯ ಇವರಿಗೆ ಕರತಲಾಮಲಕ. ಏನೊಂದು ಅನುಮಾನಕ್ಕೆಡೆ ಇಲ್ಲದಂತೆ, “ಪುಣ್ಯಾತ್ಮರಿವರು” ಎಂಬ ತಮ್ಮ ಇಮೇಜಿಗೆ ಧಕ್ಕೆ ಬಾರದಂತೆ ಹವಾ ಮೇನ್ಟೇನ್ ಮಾಡುವಲ್ಲಿ ಇವರನ್ನು ಮೀರಿಸುವವರೇ ಇಲ್ಲ. ಸಂಸ್ಕೃತಿಯ ಗಂಧಗಾಳಿಯಿಲ್ಲದ ಭ್ರಷ್ಟ ಅಧಿಕಾರಿಗಳು, ಕೀರ್ತಿಕಾಮುಕ ರಾಜಕಾರಣಿಗಳಿಗೆ ಸಹಜವಾಗಿ ಇಂತಹ ಕಲರ್ಫುಲ್ ಪುಂಗೀದಾಸರೇ ಬೇಕು. ಇಂಥವರ ಪುಂಗಿದಾಸನಿಷ್ಠೆ ಮೆಚ್ಚಿ ಯಾವನಾದರು ಹುಚಪ್ಯಾಲಿ ಮಂತ್ರಿ ಮಹಾಶಯ ಇವರನ್ನು ವಿಧಾನ ಪರಿಷತ್ತಿಗೋ, ರಾಜ್ಯಸಭೆಗೋ ನೇಮಕ ಮಾಡುವ ಸಾದೃಶ್ಯ ಪವಾಡಗಳು ಜರುಗಿದರೇನು ಅಚ್ಚರಿ ಪಡಬೇಕಿಲ್ಲ.! ಆಗ ಜೈ ಹೋ ಲಾಬಿ, ಜೈಹೋ..! ಎನ್ನವುದೊಂದೇ ಬಾಕಿ. ಜೋಕಲ್ಲ ಇವರನ್ನು ದಲ್ಲಾಳಿಗಳು ಅನ್ನುವಂಗಿಲ್ಲ ಜೋಕೆ…!! *******

ಪ್ರಸ್ತುತ Read Post »

ಕಥಾಗುಚ್ಛ

ಕಥಾಯಾನ

ಕಿರಿ ದೇವರಿಗೆ ಮರದ ಜಾಗಟೆ. ಕೆ.ಎನ್.ಮಹಾಬಲ ಹನ್ನೊಂದು  ಗಂಟೆಗೆ ಬಾಸ್ ನ ಕೋಣೆ ಒಳಗೆ ಹೋಗಿ ಬಂದ ಅಟೆಂಡರ್ ಸಿದ್ದಲಿಂಗು “ಬಾಸ್ ಸಿಟ್ಟಾಗಿದ್ದಾರೆ.’ಏನಯ್ಯ ನನಗೆ ಹುಷಾರಿಲ್ಲ .ನೆಗಡಿ,ತಲೆಭಾರ ಸ್ವಲ್ಪ ಜ್ವರನೂ ಬಂದಂತಿದೆ.ನೀನು ನೋಡಿದ್ರೆ ಇಷ್ಟೊಂದು ಫೈಲ್ ತಂದು ಕುಕ್ಕುತ್ತಿದ್ದೀಯಾ’ಎಂದು ರೇಗಿದರು  ಎನ್ನುತ್ತಾ ಹೊರಗೆ ಬಂದ ಸಿದ್ದಲಿಂಗು “ಈ ಸಾಹೇಬರಿಗೆ ಹುಷಾರಿಲ್ಲ  ಅಂತ ಯಾರಿಗಾದ್ರೂ ಕನಸು  ಬಿದ್ದಿರತ್ತಾ?’ ಎಂದು ಗೊಣಗಿಕೊಂಡ. ಆ ಬಾಸ್ ಗೆ ಹುಷಾರಿಲ್ವ? ಏನಂತೆ ?ಯಾವಾಗಿಂದ?ಡಿಪಾರ್ಟಮೆಂಟಿನಲ್ಲಿದ್ದ ಎಲ್ಲ ಉದ್ಯೋಗಿಗಳು ಒಟ್ಟಿಗೇ ಪ್ರತಿಕ್ರಿಯಿಸಿದರು. “ಬೆಳಿಗ್ಗೆ   ನಾನು ಅವರು ಬರೋ ಹೊತ್ತಲ್ಲಿ ಬೇರೆ ಡಿಪಾರ್ಟ್ ಮೆಂಟಿಗೆ ಹೋಗಿದ್ದೆ.ಅವರು  ಬಂದ ಮೇಲೂ ಅವರ ಕ್ಯಾಬಿನ್ಗೆ ಒಂದುಸಾರಿನೂಹೋಗಿಲ್ಲ .ಅದಕ್ಕೇನನಗೆವಿಷಯ  ಗೊತ್ತಾಗಿಲ್ಲ.”ಎಂದು ಹಲುಬಿದ  ಸೀನ.ಕೆಲಸವಿರಲಿ ಬಿಡಲಿ ಬಾಸ್ ನ ಕೋಣೆಗೆ ದಿನಕ್ಕೆ ಕೊನೇಪಕ್ಷ ನಾಲ್ಕೈದು ಸಾರಿ ಲಾಳಿ ಹೊಡೆಯುತ್ತಿದ್ದ ಅವನಿಗಂತೂ ಇದು ಆಘಾತಕಾರಿ ಸುದ್ಧಿ. ತಡಮಾಡಲೇ ಇಲ್ಲ .ದಢಾರನೆ ಬಾಸ್ ಕೋಣೆಗೆ ನುಗ್ಗಿ “ಏನ್ ಸಾರ್ ಹುಷಾರಿಲ್ವಂತೆ” ಎಂದು ಆರೋಗ್ಯ ವಿಚಾರಿಸಿದ. “ಹೌದ್ರೀ,ಬೆಳಗಿನಿಂದ ಸ್ವಲ್ಪ ನೆಗಡಿ,ಕೆಮ್ಮು ಜ್ವರವೂ ಇದೆಯೇನೋ?.ಕೆಲಸಕ್ಕೇನೂ ತೊಂದರೆಯಿಲ್ಲ” ಎಂದರು . “ಸಾರ್,ಡಾಕ್ಟರು ಏನಾದ್ರೂ ಬೇಕಾದ್ರೆ ಹೇಳಿ ಹಾಗೆಲ್ಲ ಅಲಕ್ಷ ಮಾಡಬಾರದು.””ಎನ್ನುತ್ತ ಹೊರಬಂದ. “ಇರಲಿ ನೋಡೋಣ “ ತಣ್ಣಗೆ ನುಡಿದರು ಬಾಸ್. ಬಾಸ್ ತನ್ನ ಮಾತಿಗೆ ಅವನು ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆ ನೀಡದಿದ್ದುದು ಅವನಿಗೆ ನಿರಾಸೆ ತಂದಿತ್ತು. ಸಹೋದ್ಯೋಗಿಗಳಿಗೆ “ಯಾರೂ ಸಧ್ಯಕ್ಕೆ ಒಳಗೆ ಹೋಗಬೇಡಿ ಬಾಸ್ ಸಿಟ್ಟಾಗಿದ್ದಾರೆ”ಎಂದು ಎಚ್ಚರಿಕೆ ನೀಡಿ ಮನಸ್ಸಿನ ದುಗುಡವನ್ನು ಹೊರಹಾಕಿದ. ಉಳಿದವರಿಗೆ ಈಗ ಸಂದಿಗ್ಧ. ಸೀನನ ಮಾತು ಕೇಳಿ ಸುಮ್ಮನಿರೋಣವೇ?ಅಥವಾ ಧೈರ್ಯ ತೊಗೊಂಡು ಒಂದು ಸಾರಿ ಒಳಕ್ಕೆ ಹೋಗೋಣವೇ ?ತಿಳಿಯದಾಯಿತು. ಬಾಸ್ ಎಂಬ ಹುಲಿ ಬೋನಿಗೆ ದಿನಾ ಸಲೀಸಾಗಿ ನುಗ್ಗುತ್ತಿದ್ದ ಸೀನನಿಗೇ ಈ ದುರ್ಗತಿಯಾದರೆ ಇನ್ನು ನಮ್ಮ ಪಾಡೇನು?ಎನ್ನುವುದು ಅವರ ಚಿಂತೆ ಕಛೇರಿಯಲ್ಲಿ ಈಗ ನೀರವ ಮೌನ.ಬಾಸ್ ಹುಷಾರಿಲ್ಲ ಅಂತ ಬೇಗ ಮನೆ ಹೋದರೆ ಹೆಂಡತಿ ಮಕ್ಕಳೊಡನೆ ವಂಡರ್ ಲಾ ಗೆ ಹೋಗಬಹುದೇ? ಸದಾನಂದನ ಚಿಂತೆ.ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಾರ್ಯಕ್ರಮದ ಸ್ಕೆಚ್ .ಅವರು ಹೋದದ್ದನ್ನು ನೋಡಿಕೊಂಡು  ಮನೆಗೆ ಹೋಗಿ ಸರ್ ಪ್ರೈಸ್ ಕೊಡೋಣ ಎಂದುಕೊಂಡವರು ಮತ್ತೆ  ಹಲವರು. ”ಸಿದ್ಲಿಂಗು ಮುಂದಿನ ಸಾರಿ ಒಳಗೆ ಯಾವುದಾದ್ರೂ ಫೈಲೋ ಫೋಲ್ಡರೋ ತೊಗೊಂಡು ಹೋಗೊದಿದ್ರೆ ನನ್ನ ಹತ್ರ ಕೊಡು .ನೀನು ಹೋಗಬೇಡ “ಎಂದು ಒಳಗೆ ಹೋಗುವುದನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ ಮೂರ್ತಿ. “ಬಾಸ್ ಗಳಿಗೆ ಹುಷಾರಿಲ್ಲದಾಗ ಆರೋಗ್ಯ ವಿಚಾರಿಸುವ ಸದವಕಾಶ ತಪ್ಪಿಸಿಕೊಳ್ಳಲು ಯಾರಿಗೂ ಇಷ್ಟವಿರಲ್ಲ “ಅಂತ ಗೊಣಗಿಕೊಂಡ ಸದಾಶಿವ.”ಮೂರ್ತಿ ನೀನು ಹೋದಾಗ ಎಲ್ಲ ನೀನೇ ಮಾತನಾಡಿಬಿಡಬೇಡ.ನನಗೂ ಒಂದೆರಡು ಪಾಯಿಂಟ್ ಉಳಿಸು “ ಎಂದ ಕೋರಿದ. ಹೀಗೇ ಮುಂದುವರೆಯಿತು.”ಎದರುಗಡೆ ಇರುವ ಕ್ಲಿನಿಕ್ ನಿಂದ ಎಲ್ ಎಮ್ ಪಿ ಡಾಕ್ಟರ್ ಕರೆದುಕೊಂಡು  ಬರಲೆ ಎಂದೊಬ್ಬ,ಗೃಹವೈದ್ಯ,ಆಯುರ್ವೇದ,ಯುನಾನಿ,ರೇಖಿ, ಎಲ್ಲ ಪದ್ಧತಿಗಳೂ ಸಲಹೆಯಾದವು . ಜತೆಗೆ ರೋಗದ ಕಾರಣವೂ ಚರ್ಚೆಯಾಯಿತು.”ಸಾರ್ ನೀವು ಮೊನ್ನೆ ಹೆಡ್ ಆಫೀಸ್ ಏ ಸಿ ರೂಮ್ ನಲ್ಲಿ ಬೆಳಗಿನಿಂದ ಸಾಯಂಕಾಲದವರೆಗೆ ನಡೆದ ಮೀಟಿಂಗ್ ನಲ್ಲಿ ಇದ್ದ ಪರಿಣಾಮ ದು ” ಅಂತ ಒಬ್ಬ.”ಆ ಧೂಳಲ್ಲಿ ಅಷ್ಟೊಂದು ಹೊತ್ತು ಹೋಗಬಾರದಿತ್ತು ಇನ್ಸ್ಪೆಕ್ಷನ್  ಸಾರ್ .ಅಲರ್ಜಿಯಾಗಿಬಿಟ್ಟಿದೆ “ಅಂತ ಮತ್ತೊಬ್ಬ.ಅಂತೂ ಕಛೇರಿಯ ಪ್ರತಿಯೊಬ್ಬರೂ ಕಾಳಜಿಯ ಅಕ್ಷಯಪಾತ್ರೆಯನ್ನೇ ಸುರಿಸತೊಡಗಿದರು. ಅತಿಯಾದ ಸಲಹೆಗಳ ಪರಿಣಾಮವೋ ,ಮತ್ತೇನು ಕಾರಣವೋ ಏನೋ ಮಧ್ಯಾಹ್ನದ ಹೊತ್ತಿಗೆ ಬಾಸ್ ಅಸೌಖ್ಯ ಹೆಚ್ಚಾಯಿತು. ಡ್ರೈವರ್ ಶಿವಯ್ಯನನ್ನು ಕರೆತರಲು ಹೊರಟ ಸಿದ್ದಲಿಂಗನಿಂದ ಅವರು ಮನೆಗೆ ಹೋಗುವ ಸೂಚನೆ ಸಿಕ್ಕಿತು. ಲಗುಬಗೆಯಿಂದ ಎಲ್ಲರೂ  ತಂತಮ್ಮ ಯೋಜನೆಗಳ ಬಗ್ಗೆ ಚಿಂತಿಸಿದರು. ಮನೆಗೆ ಹೊರಟ ಬಾಸ್ ಗೆ “ಸಾರ್,ಹುಷಾರು”ಈಗಲೇ ಡಾಕ್ಟರರ ಹತ್ತಿರ ಹೋಗಿ””ರೆಸ್ಟ್ ತೊಗೊಳ್ಳಿ” ಮುಂತಾದ ಮಾತುಗಳ ಪುನರುಕ್ತಿಯಾಯಿತು. “‘ಮನೆ ತನಕ ಬರೋಣವೇ ಸಾರ್ “ ಎಂದು ಸೀನ ಕೇಳಿದಾಗ . “ಬೇಢ ನಿಮ್ಮ ಕೆಲಸ ಗಮನಿಸಿಕೊಳ್ಳಿ,ಸಾಧ್ಯವಾದರೆ ನಾಳೆ ವಾಪಸು ಬರ್ತೇನೇ” ಎನ್ನುತ್ತಾ  ಹೊರಟರು . “ಅರ್ಜೆಂಟ್ ಬೇಡ ಎರಡು  ದಿನ ರೆಸ್ಟ್ ತೊಗೊಂಡೇ ಬನ್ನಿ”ಸೀನ ತೀರ್ಪು ನೀಡುವಂತೆ ಹೇಳಿದ. ಬ್ರಹ್ಮಚಾರಿ ರಾಘವೇಶನಿಗೆ ತಾವೆಲ್ಲ ಹೋದಮೇಲೂ ಸ್ವಲ್ಪ ಹೊತ್ತು ಇರುವಂತೆ ಉಳಿದವರು ಕೇಳಿಕೊಂಡರು.ಪಾಪ!ಮದುವೆಯಾಗದೆ ಇದ್ದವರಿಗೆ ಇದೇ ಹಣೇಬರಹ. ಎಲ್ಲರೂ ತಾವು ಬೇಗ ಮನೆಗೆ ಬರುವ ವಿಷಯವನ್ನು ತಿಳಿಸಲು ಉತ್ಸುಕರಾದರು. —- ಬಾಸ್ ಹೋದದ್ದನ್ನು ನೋಡಿಕೊಂಡು ಪಕ್ಕದ ವಿಭಾಗದ ಅಟೆಂಡರ್  ಕೃಷ್ಣಪ್ಪ ಬಂದು ಸಿದ್ದಲಿಂಗುವಿನೊಡನೆ ಲೋಕಾಭಿರಾಮವಾಗಿ  ಮಾತಿಗೆ ನಿಂತ. “ಇವತ್ತು ನಿನಗೆ ಆರಾಮ ಬಿಡು ಸಿದ್ದಲಿಂಗು ಬೆಲ್ ಹೊಡೆದ್ರೆ ಹೋಗೋ ತೊಂದರೆಯಿಲ್ಲ” ಎಂದ. “ಹೌದು ಬಿಡಪ್ಪ ,ಹೋದ ವಾರ ನನಗೂ ಹುಷಾರಿರಲಿಲ್ಲ.ಜ್ವರ ,ಶೀತ ನಿದ್ದೆಯಿಲ್ದೆ ಕಣ್ಣು ಕೆಂಪಗಾಗಿತ್ತು.ಯಾರೂ ಕನಿಕರ  ತೋರ್ಸೋರು ಇಲ್ಲಿರಲಿಲ್ಲ.ಕಣ್ಣು ನೋಡಿ ಯಾಕೋ ನಿನ್ನೆ ಎಣ್ಣೆ ಪಾರ್ಟಿ ಜೋರಾ ?ಅಂತ ಲೇವಡಿ ಮಾತು ಬೇರೆ”. ಸಿದ್ದಲಿಂಗು ಬೇಸರದ ದನಿಯಲ್ಲಿ ಹೇಳಿದ. ಕೃಷ್ಣಪ್ಪ “ನಿಜ,ನಿಜ ಗಾದೆ ಕೇಳಿಲ್ವಾ ‘ಕಿರಿ ದೇವರಿಗೆ ಮರದ ಜಾಗಟೆ  ಅಂತ ;ಕಂಚಿನ ಜಾಗಟೆ ಬಾರಿಸೋದಕ್ಕೆ ನಾವೇನು ಹಿರೇದೇವ್ರು ಕೆಟ್ಟೋದ್ವಾ ?” ಎನ್ನುತ್ತ ಅಲ್ಲಿಂದ ಹೊರಟ. *********************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮನಸು ಮಂಜುಗಡ್ಡೆಯಲ್ಲ. ಜ್ಯೋತಿ ಗಾಂವಕರ್ “ಈಗೀಗ ಏನೂ ನಿರೀಕ್ಷೆಗಳೇ ಇಲ್ಲ ನೋಡು ಭಾವನಾತ್ಮಕ ಅವಲಂಬನೆಯೂ ಇಲ್ಲ ಆಪ್ತವಾಗಿ  ಏನೋ ಹೇಳ್ಕೊಬೇಕು ಅನ್ಸೋದೇ ಇಲ್ಲ ಎದೆ ಬಂಡೆಯಾಗ್ತಿದೆ ಅನ್ನಿಸ್ತಿದೆ “ ಅಂತ ಗೆಳತಿಯೊಬ್ಬಳು ನಿರ್ಭಾವುಕವಾಗಿ ಹೇಳಿಕೊಳ್ಳುತ್ತಿದ್ದರೆ ….. ” ಹಾಗಾದರೆ ಬಂಡೆಯ ಮೇಲಿಂದ ಇಳಿಯುವ ಜಲಪಾತದಂತಹ ಭೋರ್ಗರೆತವೇನು ? ಭಾವುಕತೆಗೆ ಹುಟ್ಟಿದ ಕಣ್ಣೀರಲ್ಲವಾ” ಅಂತ  ಹೇಳಿ ಅವಳನ್ನು ಆ ನಿರ್ಲಿಪ್ತ ಭಾವದಿಂದ ಹೊರತರುವದಕ್ಕೆ ಪ್ರಯತ್ನಿಸುತ್ತಿದ್ದೆ… “ನಿಜ ಬಿಡು ಎಷ್ಟೇ ಕಲ್ಲಾಗಿದ್ದೇವೆಂದರೂ ಈ ಹೆಣ್ಣುಮಕ್ಕಳಿಗೆ ಕರಗೋದು ಅಭ್ಯಾಸ ….ಅತಿ ಭಾವುಕತೆ ಅನ್ನೋದು ಶಾಪ ನೋಡು” …ಅನ್ನುತ್ತ  ಕಣ್ಣಂಚಲಿ ಜಿನುಗುತ್ತಿರುವ ನೀರನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತಿದ್ದಳು … “ಇತ್ತೀಚೆಗೆ ತುಂಬಾ ಬದಲಾಗಿಬಿಟ್ಟೆ ನೀನು. ಭಾವನೆಗಳೇ ಇಲ್ಲ. ಎಲ್ಲಾ  ಯಾಂತ್ರಿಕ ಅನ್ನಿಸ್ತಿದೆ ನಂಗೆ ಸರಿಯಾಗಿ ಮಾತೇ ಆಡಲ್ಲ ಎಲ್ಲದಕ್ಕೂ ಸಣ್ಣ ಉತ್ತರ ಕೊಡ್ತಿ. ಊಟ ಮಾಡಿದ್ಯಾ ಅಂತನೂ ಕೇಳಲ್ಲ , ಬೇಜಾರಲ್ಲಿದ್ರೆ ಏನಾಯ್ತು ಅಂತನೂ ಕೇಳಲ್ಲ ಹೊಗ್ಲಿ ನೀನೂ ಏನೂ ಹೇಳ್ಕೊಳಲ್ಲ ನನ್ನತ್ರ. ನಾನೇ ಕೇಳ್ಕೊಂಡು ಬಂದಾಗ್ಲೂ ಅವಾಯ್ಡ್ ಮಾಡ್ತಿ ಎಲ್ಲಾ ಹೇಳ್ತಾ ಕೂರೋಕೆ ಟೈಮ್ ಇಲ್ಲ ಅಂತೀಯ  “ ಎನ್ನುತ್ತ ಅಳು ಮೋರೆ ಹಾಕಿಕೊಂಡು ಆಗಾಗ  ತಕರಾರು ತೆಗೆಯುತ್ತಿದ್ದ  ಅವಳಿಗೆ …”ಈ ಹೆಂಗಸರದ್ದು ಇದೇ ಆಯ್ತು ಕಿರಿಕಿರಿ  ..ಮಾಡೋಕೆ ಬೇರೆ ಕೆಲಸ ಇಲ್ವಾ?  ಮೂರೊತ್ತೂ ಇಂತದ್ದೇ ಆಯ್ತು  ಕೆಲಸಕ್ಕೆ ಬಾರದ ಭಾವನೆಗಳಂತೆ, ಅದಂತೆ ಇದಂತೆ ..ಹೇಳ್ಬೇಕಂತೆ ಕೇಳ್ಬೇಕಂತೆ , ಇವಳದ್ದೊಂದೇ ಪ್ರೀತಿ ಅಂತೆ ನಮಗಿಲ್ಲಿ ಸಾವ್ರ ಟೆನ್ಷನ್ನು. ಹುಷಾರಿಲ್ದಿದ್ರೆ ಟ್ಯಾಬ್ಲೆಟ್ ತಗೊಬೇಕು ಹಸಿವೆ ಆದ್ರೆ ಊಟ ಮಾಡ್ಬೇಕು ಏನು ಕಡಿಮೆ ಆಗಿದೆ  ನಿಂಗೆ ?  ಸರಿ ..ನನಗ್ಯಾವ ಭಾವನೆಯೂ ಇಲ್ಲ. ಒಪ್ಕೊತೀನಿ  ನಿನಗಿದೆಯಲ್ಲ ಏನು ಮಾಡ್ದೆ ? ಏನು ಸಾಧಿಸಿದೆ ಇಷ್ಟು ದಿನ ..? ಬೇಜಾರು ಮಾಡ್ಕೊಂಡು ಕೂತೆ , ಗಂಡ ಸತ್ತವರಂಗೆ ಮುಖ ಮಾಡ್ಕೊಂಡೆ. ನನಗೊಂದಿಷ್ಟು ಕಿರಿಕಿರಿ ಮಾಡ್ದೆ ಇಷ್ಟೇ ತಾನೇ …ಇನ್ನೇನಾದ್ರೂ ಆಯ್ತಾ .? ಹೋಗ್ಲಿ ಅಷ್ಟೊಂದು ಭಾವನೆ ಇರೊ ನೀನಾದ್ರೂ ಖುಷಿಯಿಂದ ಇದ್ಯಾ ? “ ಅಂತ ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಅವನನ್ನು ನಿರ್ಭಾವುಕವಾಗಿ ಸಹಿಸದೇ ಅವಳಿಗೆ ಬೇರೆ ದಾರಿಯಿರಲಿಲ್ಲ ಮತ್ತದೇ ವಾಸ್ತವವೂ ಕೂಡಾ  ಆಗಿರುತ್ತದಲ್ಲ …!! “ಅರೇ ಹೌದಲ್ವಾ ..? ಅವನಂದಿದ್ದೇ ಸರಿ ಏನುಪಯೋಗವಿದೆ ಅದರಿಂದ ? ನನಗೇನು ಕಮ್ಮಿ ಆಗಿದೆ? ನಾನೇ ಸರಿ ಇಲ್ಲ ನನ್ ಮನಸ್ಸೇ ಸರಿ ಇಲ್ಲ ಸಣ್ಣಪುಟ್ಟದಕ್ಕೂ ಕೊರಗ್ತೀನಿ. ಅತಿಯಾಗಿ ನಿರೀಕ್ಷೆ ಮಾಡ್ತೀನಿ ನಾಳೆಯಿಂದ ಬದಲಾಗ್ಬೇಕು ನಾನೂ” ಎಂದುಕೊಳ್ಳುತ್ತ ಕಣ್ಣೊರೆಸಿಕೊಂಡು , ಮುಖ ತೊಳೆದು ಮತ್ತೆ ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ ಅವಳು .. ಹೌದು  ಭಾವುಕತೆ ಅನ್ನೋದು ಹೆಣ್ಣಿಗೆ ಶಾಪ..ಭಾವುಕ ಮನಸ್ಸಿಗೆ ತನ್ನ ಸುತ್ತಲಿನ ಸಂಭಂದಗಳಲ್ಲಿ  ವಿನಾಕಾರಣ ನಿರೀಕ್ಷೆಗಳು, ಪುಟ್ಟ ಪುಟ್ಟ ಆಸೆಗಳು .. ಪ್ರೀತಿಸಿದ ಜೀವಗಳ ಅನುನಯಿಸಿ ಅನುಸರಿಸಿ, ಕೇಳಿ, ಹೇಳಿ, ಕಾಳಜಿ ಮಾಡಿ, ಸಮಯ ಕೊಡುತ್ತಾಳೆ. ಎಲ್ಲರ ನೋವಿಗೂ ಮಡಿಲಾಗುತ್ತಾಳೆ, ಹೆಗಲಾಗುತ್ತಾಳೆ, ಸುಮ್ಮನೇ ಕಿವಿಯಾಗುತ್ತಾಳೆ. ಭರವಸೆಯಾಗುತ್ತಾಳೆ .  ಆಮೇಲೆ ತನಗೂ ಒಂದಿಷ್ಟು ಅದೆಲ್ಲವೂ ಅನಾಯಾಸವಾಗಿ ಸಿಕ್ಕಲಿ ಅನ್ನೋ ಸಣ್ಣ ನಿರುಪದ್ರವಿ ಸ್ವಾರ್ಥ ಅವಳದ್ದು ..ನಿಸ್ವಾರ್ಥಿಯಾಗಿರೋಕೆ ಅವಳೇನೂ ದೇವರಲ್ವಲ್ಲ..!ಸಾಮಾನ್ಯ ಮನುಷ್ಯಳೇ ತಾನೆ ..? ಯಾವುದೂ ಪ್ರತಿಯಾಗಿ ಸಿಗುತ್ತಿಲ್ಲ ಕೊಟ್ಟಿದ್ದಷ್ಟೇ ಬಂತು ಅಂದಾಗ ಸಣ್ಣಗೆ ಅಡರಿಕೊಳ್ಳುವ ನಿರಾಸೆ… ಬದುಕು ಇಷ್ಟೇ ಬಿಡು ಅನ್ನೊ ನಿರ್ಲಿಪ್ತತೆ.  “ಸರಿ ನಾಳೆಯಿಂದ ಪಕ್ಕಾ ಪ್ರಾಕ್ಟಿಕಲ್ ಆಗೋಣ. ಇವೆಲ್ಲ ಕೆಲಸಕ್ಕೆ ಬಾರದ ಭಾವಗಳು ನಿರೀಕ್ಷೆಗಳನ್ನು ಮೀರಬೇಕು. ಇಲ್ದಿದ್ರೆ ಖುಷಿಯಿಂದ ಇರೋಕೆ  ಆಗಲ್ಲ ನನ್ನಿಂದ ಎಲ್ರಿಗೂ ಬೇಜಾರು ”  ಅಂದುಕೊಳ್ಳುತ್ತ  ಒಳಗೊಳಗೇ ನಿರ್ಧರಿಸಿ ಮತ್ತೊಂದು ಹೊಸ ಮುಂಜಾವಿಗೆ ತರೆದುಕೊಳ್ಳುವ ಹೊತ್ತಿಗೆ ನಿರೀಕ್ಷಿಸದೇ, ಕೇಳದೇ, ಒಂದು ಪ್ರೀತಿಯ ಭಾವನಾತ್ಮಕ ಸ್ಪಂದನೆ ,ಮಾತು,  ಸಿಕ್ಕಿಬಿಟ್ಟಿರುತ್ತದೆ .. ಆವತ್ತಿನ ಮಟ್ಟಿಗೆ ಅವಳು ಆಕಾಶದಲ್ಲಿನ ಹಕ್ಕಿ ‌…. ಮತ್ತೆ ಕರಗಿಬಿಡುತ್ತಾಳೆ .. ಖುಷಿ ಪಡದೇ ಇರೋಕೆ ಅವಳಿನ್ನೂ ಕಲ್ಲಾಗಿರುವದೇ ಇಲ್ಲವಲ್ಲ …! ಎಲ್ಲವೂ ಅಂದುಕೊಂಡಿರುತ್ತಾಳೆ ಅಷ್ಟೇ ಅವತ್ತೇ ಹೊಸದಾಗಿ ಬದುಕುತ್ತಿದ್ದೇನೆ ಅನ್ನೊ ಭಾವ . ನಿನ್ನೆ ಅಂದುಕೊಂಡಿದ್ದೆಲ್ಲ ಸುಳ್ಳು ಇವತ್ತಿನದೇ ಖುಷಿ ಅವಳ ಪಾಲಿಗೆ .. ನಿಜ..ಅಪ್ಪಟ ಭಾವುಕ ಮನಸ್ಸು ಅದು ಮನಸ್ಸು ಕಲ್ಲಾಗುವದೆಂದರೆ ಕರಗಿದಷ್ಟು ಸಲೀಸಲ್ಲ ನಿರ್ಭಾವವೆನ್ನುವದು ಸುಖಾಸುಮ್ಮನೇ ಮೆತ್ತಿಕೊಳ್ಳುವದಿಲ್ಲ. ಸ್ಮಶಾನದಂತಹ ಮೌನವು ವಿನಾಕಾರಣ ಅಡರಿಕೊಳ್ಳುವದೂ ಇಲ್ಲ ಆದರೂ ಅವಳು ಆಗಾಗ  ಮನಸ್ಸು  ಕಲ್ಲಾಗಿಸಿ ಏನನ್ನೂ ನಿರೀಕ್ಷಿಸದೇ ನಮ್ಮವರಿಗೆ , ಪ್ರೀತಿಪಾತ್ರರಿಗೆ  ನಗುವನ್ನಷ್ಟೇ ಹಂಚುವ ಸಾಹಸಕ್ಕೆ ಇಳಿಯುತ್ತಾಳೆ . ಆದರೆ … ಅವಳ ನಿರ್ಧಾರದ  ಹಿಂದೆ ಎಷ್ಟೊಂದು  ನಿರಾಸೆಗಳ ಪಟ್ಟಿಯಿರುತ್ತದೆ. ಗೊತ್ತಾ? ಪುಟ್ಟ ಪುಟ್ಟ ಭಾವಗಳ ಒರತೆಯೆಲ್ಲ ದಿವ್ಯ ನಿರ್ಲಕ್ಷ್ಯದಲಿ ಇಂಗಿ ಹೋದದ್ದಿರುತ್ತೆ . ಸಣ್ಣ ವಂಚನೆಯಿಂದ ಬೀಸಿ ಬಡಿದದ್ದಿರುತ್ತೆ ಉಡಾಫೆಯ ಉತ್ತರದಲ್ಲಿ ಮಾತೆಲ್ಲ  ಅರ್ಧಕ್ಕೇ ಮುಗಿಸಿದ ಅಸಹನೀಯ ಮೌನವಿರುತ್ತೆ ಅನಾದರವೆಂಬ ಅಗ್ಗಿಷ್ಟಿಕೆಯ ಬಿಸಿ ಇರುತ್ತೆ. ಪ್ರತೀ ಕೊಡುವಿಕೆಯಲ್ಲೂ ..ಬರೀ ಪಡೆದುಕೊಂಡಷ್ಟೇ ಸುಮ್ಮನಾಗಿಬಿಡುವ  ಸುತ್ತಲಿನ ಅದೆಷ್ಟೋ ಮನಸುಗಳ  ನಿರಾಕರಣೆ ಇರುತ್ತೆ. “ಭಾವುಕತೆಗಳೆಲ್ಲ ಬಂಡೆಯಂತಾಗುವದು ಹೀಗೇ ನೋಡು  ಗೆಳತೀ  ಎಲ್ಲ ಭಾವಗಳ ಭೋರ್ಗರೆತವನ್ನೂ   ಮೀರಿ ಅರ್ಥಮಾಡಿಸಿ, ನಾವೂ ಅರ್ಥೈಸಿಕೊಂಡು,  ಬದಲಾಗುವ ಹೊತ್ತಿಗೆ  ನಮಗೇ ಯಾವುದೂ ಬೇಡವನ್ನುವ ಪ್ರಭುದ್ದತೆ ಬಂದುಬಿಡುತ್ತದೆ. ಎಲ್ಲಾ ಮೀರಿ ತುಂಬಾ ಮುಂದೆ ಬಂದಿರ್ತೀವಿ  ನೊಡು” ಎಂದು  ನಿಟ್ಟುಸಿರುಬಿಟ್ಟ ಅವಳಿಗೆ ಉತ್ತರ ಕೊಡಲಾಗದೇ ಸೋತೆ… ಅವಳಿಗೊಂದಿಷ್ಟು ವಿನಾಕಾರಣ ಪ್ರೀತಿ ಬೇಕು, ಸುಮ್ಮನೆ ಕಾಳಜಿ ಬೇಕು,  ಸಣ್ಣಪುಟ್ಟ ಭಾವನಾತ್ಮಕ ಸಂಭಂದಗಳೇ ಅವಳನ್ನು ದಿನನಿತ್ಯ ಜೀವಂತವಾಗಿಡುವುದು. ಯಾವುದೇ ಸಂಭಂದವಿರಲೀ ಹಣ, ಆಸ್ತಿ ಏನನ್ನೂ  ಖರ್ಚು ಮಾಡದೆಯೇ ,  ಎಲ್ಲಿಯೋ  ದೂರ ಹೋಗಿ  ಕರೀದಿಸದೆಯೇ , ಯಾರಲ್ಲಿಯೂ ಕೈ ಚಾಚದೆಯೇ, ತುಂಬಾ ಸಮಯ ವ್ಯರ್ಥ ಮಾಡದೆಯೇ  ನಮ್ಮೊಳಗೇ ಸಿಗುವ ಇಂತಹ ಸಣ್ಣಪುಟ್ಟ ಪ್ರೀತಿಯನ್ನು ಪ್ರೀತಿಸಿದ ಜೀವಗಳಿಗೆ  ನಿರ್ಲಕ್ಷ್ಯ ಮಾಡದೇ  ಪ್ರಾಂಜಲವಾಗಿ ಕೊಟ್ಟುಬಿಟ್ಟರೆ , ಅವಳೂ ಖುಷಿಯಾಗಿ ನಿಮಗೂ ಖುಷಿಯನ್ನೇ ಹಂಚುತ್ತಾಳೆ . “ಏಕೆಂದರೆ  ಒಂದು ಭಾವುಕ ಮನಸ್ಸಿಗೆ ಪಡೆದದ್ದಕ್ಕೆ ದುಪ್ಪಟ್ಟು ಕೊಡುವದು ಕರಗತ” ..

ಕಥಾಯಾನ Read Post »

You cannot copy content of this page

Scroll to Top