ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಐದನೇ ಅದ್ಯಾಯ ಮನಸೂರೆಗೊಳ್ಳುವ ಗಜಲ್ ಗಜಲ್ ಗದ್ಯ ಮಿಶ್ರಿತ ಪದ್ಯವೇ ಗಜಲ್ ಗದ್ಯವೇ, ಪದ್ಯವೇ ಅಥವಾ ಗದ್ಯ ಮಿಶ್ರಿತ ಪದ್ಯವೇ ಎಂಬುದು ಇತ್ತೀಚಿನ ಕನ್ನಡ ಗಜಲಗಳನ್ನು ನೋಡಿದಾಗ ಸಾಕಷ್ಟು ಗೊಂದಲವಾಗುತ್ತದೆ. ಯಾಕೆಂದರೆ ಹೆಚ್ಚಿನ ಗಜಲಗಳು ಗದ್ಯ ಮಿಶ್ರಿತ ಪದ್ಯಗಳಾಗಿ ಕಂಡು ಬರುತ್ತವೆ. ಆದರೆ ಮೂಲತಃ ಗಜಲ್ ಎನ್ನುವುದು ಲಯಬದ್ಧವಾಗಿದ್ದೂ ಗೇಯತೆಯನ್ನು ಹೊಂದಿರಬೇಕು… ಪ್ರತಿಮೆ, ರೂಪಕ, ಉಪಮಾನ, ಉಪಮೇಯ, ಅಲಂಕಾರ ಮೊದಲಾದ ಕಾವ್ಯಾತ್ಮಕ ಅಂಶಗಳನ್ನು ಅತ್ಯಂತ ಕಲಾತ್ಮಕವಾಗಿ ದುಡಿಸಿಕೊಂಡು ಸುಮಧುರ ಪದಗಳೊಂದಿಗೆ ಛಂದೋಬದ್ದವಾಗಿ ಕಟ್ಟಿ ಕೊಟ್ಟು ಸುಲಭವಾಗಿ ಹಾಡಲು ಬರುವಂತಿರಬೇಕು. ಆದರೆ ಮುಖ್ಯವಾದ ಗಜಲನ ಈ ಲಕ್ಷಣವನ್ನೇ ಮರೆತಿರುವ ಕನ್ನಡದ ಖ್ಯಾತ ಗಜಲಕಾರರು ಹೆಸರು ಬಂದಂತೆ ತಾವು ರಚಿಸಿದ್ದೆಲ್ಲಾ ಗಜಲ್ ಎನ್ನತೊಡಗುತ್ತಾರೆ. ಅವರನ್ನು ಅನುಸರಿಸುವ ಉದಯೋನ್ಮುಖ ಗಜಲಕಾರರು ಇನ್ನೂ ಕೆಳ ಹಂತಕ್ಕೆ ಹೋಗಿ ಅತ್ಯಂತ ಕಳಾಹೀನ ಬರಹಗಳನ್ನು ಕೊಟ್ಟು ಬಿಡುತ್ತಾರೆ.. ಅದರಲ್ಲಿ ಸಾರವೂ ಇರುವುದಿಲ್ಲ ಮತ್ತು ಸತ್ವವೂ ಇರುವುದಿಲ್ಲ. ಇದರಿಂದ ಕಳೆಗುಂದುವ ಗಜಲ್ ಹಂತಹಂತವಾಗಿ ಸೊರಗಿ ಮೂಲ ಲಕ್ಷಣಗಳನ್ನು ಮತ್ತು ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ಗಜಲ್ ಗಾಯನ ಹಾಗಿದ್ದರೆ ಗಜಲ್ ಹಾಡಲು ಮಾತ್ರವೇ ಎಂದೆನಿಸಿದರೆ ಖಂಡಿತ ಸರಿ ಹೋಗುವಂತಿಲ್ಲ. ಬರೆದಿದ್ದೂ ಎಲ್ಲಾ ಗಜಲ್ ಆಗಲ್ಲ, ಅಂತೆಯೇ ಗಜಲ್ ಆದವು ಎಲ್ಲಾ ಹಾಡುವಂತೆ ಇರುವುದಿಲ್ಲ. ನಾವು ಹಾಡುವಂತೆ ಬರೆದರೆ ಅದನ್ನು ಆಗ ಕನಿಷ್ಠ ಪಕ್ಷ ಮನಸೂರೆಗೊಳ್ಳುವಂತೆ ವಾಚಿಸುವ ಮೂಲಕ ವಿಶಾಲ ಅವಕಾಶಗಳನ್ನು ತೆರೆದಿಡಬಹುದಾಗಿದೆ. ರಾಗ ತಾಳ ಭಾವಗಳನ್ನು ಹೊಂದುವುದು ಆ ಗಜಲನ ನಿಜವಾದ ಸಾಮರ್ಥ್ಯವಾಗಿರುತ್ತದೆ. ಅದರಿಂದಲೇ ಉರ್ದು ಮತ್ತು ಹಿಂದಿ ಗಜಲಗಳು ಯಶಸ್ಸು ಕಂಡಿದವು. ಗಜಲ್ ಹಾಡಿನ ರೂಪ ಪಡೆಯದಿದ್ದರೆ ಇಂದು ಗಜಲ್ ಕಂಡ ಗೆಲುವು, ಜನಪ್ರಿಯತೆ ಅದಕ್ಕೆ ನಿಜವಾಗಿಯೂ ದಕ್ಕುತ್ತಿರಲಿಲ್ಲ. ಗೀತೆಯ ಮಹೋನ್ನತ ಧಾಟಿಯನ್ನು ಹೊಂದಿದ್ದರಿಂದಲೇ ಬಹುತೇಕ ಹಿಂದಿ ಮತ್ತು ಉರ್ದು ಗಜಲಗಳು ಗೀತೆಗಳಾಗಿ ಜನಮಾನಸದಲ್ಲಿ ಅಚ್ಚಳಿಯದಂತೆ ನೆಲೆ ನಿಂತವು. ಅದು ಎಂತಹ ಮೋಡಿ ಆಹಾ!! ಎಂತಹ ಅದ್ಬುತ ಗೀತೆ ಎಂದು ಮೈ ದಡವಿ ಮೆಲ್ಲಗೆ ಮನ ಸ್ಪರ್ಶಿಸುವ ಹಳೆಯ ಹೆಚ್ಚಿನ ಹಿಂದಿ ಗೀತೆಗಳು ಗಜಲಗಳೇ ಎಂದರೆ ಗಜಲನ ರಸಸ್ವಾದ ಸರಳವಾಗಿ ಅರ್ಥವಾದೀತು. ಆ ಭಾಷೆ ಬಲ್ಲದವನು ಸಹ ತಲೆ ತೂಗಿ ಆಸ್ವಾದಿಸುವಂತೆ ಮಾಡುವ ತಾಕತ್ತು ಗಜಲನ ಗೇಯತೆಗೆ ಇರಬೇಕು. ಭಾವಗೀತೆಯ ಗುಣಗಳನ್ನು ಹೊಂದಿರುವ ಗಜಲಗಳು ಅದಕ್ಕಿಂತ ಗಾಢವಾದ ಭಾವ ತೀವ್ರತೆ ಮತ್ತು ಅಗಾಧವಾದ ಗಾಂಭೀರ್ಯದ ಮೂಲಕ ಹಿಡಿದಿಡುವ ಕೌಶಲ್ಯವೇ ಗಜಲಗಳ ಮೆರುಗಾಗಿ ಬೆರಗು ಹುಟ್ಟಿಸುತ್ತದೆ. ಸನಿಹ ವಿರಹಗಳ ವಿಕಾಸ ಮತ್ತು ತಲ್ಲಣಗಳು ಹೀಗೆ ಇನ್ನೂ ಯಾವುದೇ ವಿಷಯ ವಸ್ತುವಾದರೂ ಸಹ ಜೀವ ಪಡೆದಂತೆ ಭಾಸವಾಗಿ ನಮ್ಮನ್ನೇ ಆವರಿಸಿಕೊಳ್ಳುವ ಗಜಲ್ ಎಂಬ ಪ್ರೇಮ ಕಾವ್ಯ ಆ ಮೂಲಕ ಮತ್ತೆ ಮತ್ತೆ ತನ್ನ ಲಕ್ಷಣಗಳನ್ನು ಪ್ರಖರವಾಗಿ ಸಾಬೀತು ಮಾಡುತ್ತಲೇ ಬಂದಿದೆ. ಗಜಲ್ ಮಾಂತ್ರಿಕರು ಈ ಸಮಯದಲ್ಲಿ ಗಜಲ್ ಗಾಯನದ ಮೂಲಕ ಎಲ್ಲರ ಮನ ತಟ್ಟಿ ಗಜಲ್ ಮಾಂತ್ರಿಕರೆಂದೆ ಇತಿಹಾಸದಲ್ಲಿ ಉಲ್ಲೇಖಿಸಲ್ಪಡುವ ಕೆಲವು ಮಹಾನ್ ವ್ಯಕ್ತಿಗಳ ಕುರಿತು ಹೇಳಲೇಬೇಕಾಗುತ್ತದೆ. ಅಂತಹವರಲ್ಲಿ ಮೊದಲಿಗರೆಂದರೆ ಅದು ವಿಶ್ವವಿಖ್ಯಾತ ಗಜಲ್ ಚಕ್ರವರ್ತಿ ಎಂದೇ ಹೆಸರಾದ ಜಗಜೀತ್ ಸಿಂಗ್. ಅವರದೇ ಆದ ಶೈಲಿಯಲ್ಲಿ ಗಜಲ್ ಗೀತೆಗಳನ್ನು ಪ್ರಸ್ತುತಪಡಿಸಿ ದೇಶ ವಿದೇಶಗಳ ಕೋಟಿ ಕೋಟಿ ಜನರ ಹೃದಯ ತಟ್ಟಿ ಒಂದು ತಲೆಮಾರಿನ ಅಭಿಮಾನವನ್ನೇ ಪಡೆದ ಜಗಜೀತ್ ಸಿಂಗ್ ಅವರು ಗಜಲ್ ಗಾಯನಕ್ಕೆ ಕೀರ್ತಿ ಶಿಖರವಾಗಿದ್ದಾರೆ. ಪದೇ ಪದೇ ಮೆಲುಕು ಹಾಕುವಂತೆ ಹಾಡಿ ವಿಭಿನ್ನ ವಿನೂತನವಾಗಿ ಗಜಲ್ ಸವಿ ಸ್ವಾದ ಉಣಬಡಿಸಿ ಒಂದು ಅತ್ಯುತ್ತಮ ಸಂಗೀತ ಪರಂಪರೆಯನ್ನೇ ಪ್ರತಿಪಾದಿಸಿದ ಇವರ ಗಜಲ್ ಗಾಯನಕ್ಕೆ ಮರುಳು ಆಗದವರೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. “ದಿ ಅನ್ಪರ್ಗೆಟಬಲ್ಸ”, “ಸಮ್ ವನ್ ಸಮ್ ವೇರ್” “ವಕ್ರತುಂಡ ಮಹಾಕಾಯ” ಮೊದಲಾದ ಗಜಲ್ ಆಲ್ಬಮಗಳ ಮೂಲಕ ಜಗದ ಮನ್ನಣೆ ಗಳಿಸಿದ ಅವರು ಹಿಂದಿ ಚಿತ್ರರಂಗದ ಬಹು ಮುಖ್ಯ ಗಾಯಕರಾಗಿದ್ದರು. ಮೋಹಕ ರೂಪದ ಸುಂದರಿ ಸುರಯ್ಯಾ ನಟಿಯಾಗಿ ಮಾತ್ರವಲ್ಲದೆ ಗಜಲ್ ಗಾಯನಗಳ ಮೂಲಕ ಮಾಧುರ್ಯದ ರಾಣಿ ಎಂದೇ ಖ್ಯಾತರಾದರು. ಎಲ್ಲ ತರಹದ ಗೀತೆಗಳನ್ನು ಹಾಡಿದ ಮಹಮ್ಮದ್ ರಫೀ ಅವರು ಗಜಲಗಳಿಗೆ ಮತ್ತು ಖವ್ವಾಲಿಗಳಿಗೂ ಹೊಸ ರೂಪ ನೀಡಿದರು. ಭಾರತೀಯ ಗಜಲ್ ಪರಂಪರೆಯ ಮತ್ತೋರ್ವ ಬಹು ದೊಡ್ಡ ಗಾಯಕಿಯಾದ ಬೇಗಂ ಅಕ್ತರ್ ತಮ್ಮ ಸುಮಧುರ ಕಂಠದಿಂದ ಅಕ್ಷರಶಃ ರಾಣಿಯ ಹಾಗೆ ಮೆರೆದರು. ಈ ಯಾದಿಯಲ್ಲಿ ಇನ್ನೂ ಹೇಳಲೇಬೇಕಾದ ಗಜಲ್ ಮಾಂತ್ರಿಕ ಗಾಯಕರೆಂದರೆ ಅದು ಗಜಲ್ ಕಿಂಗ್ ಮೆಹದಿ ಹಸನ್, ಗಜಲ್ ಉಸ್ತಾದ ಗುಲಾಂ ಅಲಿ, ಆಶಾ ಭೋಸ್ಲೆ, ಹರಿಹರನ್ ಇತರರು.. ಇಂದಿಗೂ ಸಹ ಗಜಲ್ ಗೀತೆಗಳು ಹಿಂದಿ ಚಿತ್ರರಂಗವನ್ನು ಆಳುತ್ತಲ್ಲಿವೆ ಕನ್ನಡದಲ್ಲಿ ಗಜಲ್ ಗೀತೆಗಳು ಕನ್ನಡದಲ್ಲಿ ಗಜಲ್ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ ಮೊದಲಿಗರೆಂದರೆ ಅದು ಗವಾಯಿಗಳು. ಅವರ ನಂತರ ರವಿ ಹಂದಿಗನೂರ ಅವರು ಗಜಲ್ ಗಾಯನದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಜಲ್ ಗಾಯನದ ಛಾಪನ್ನು ಕನ್ನಡದಲ್ಲಿ ಮೂಡಿಸಿದರು. ಆದರೂ ಸಹ ಕನ್ನಡದಲ್ಲಿ ಗಜಲ್ ಗಾಯನ ಪ್ರಭಾವಿಸುವಷ್ಟು ಮಟ್ಟಿಗೆ ಇದುವರೆಗೂ ಬೆಳೆದೇ ಇಲ್ಲ. ಇನ್ನೂ ಕನ್ನಡ ಚಿತ್ರರಂಗವಂತೂ ಇದನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿಲ್ಲ. ಅಪರೂಪಕ್ಕೆ ಎಂಬಂತೆ ಉದಾಹರಣೆಗೆ ಒಂದೋ ಎರಡೋ ಅಷ್ಟೇ ಗಜಲಗಳು ಕನ್ನಡ ಚಿತ್ರರಂಗದಲ್ಲಿ ಗೀತೆಗಳಾಗಿ ಮೂಡಿ ಬಂದಿವೆ. ಅಂತಹ ಒಂದು ಅತ್ಯಂತ ಜನಪ್ರಿಯ ಗೀತೆ ಎಂದರೆ ವಿ. ಲಕ್ಷ್ಮಣರಾವ್ ರಚಿತ ರಮೇಶ ಅರವಿಂದ ಅವರ ಆಕ್ಸಿಡೆಂಟ್ ಚಿತ್ರದ ಗೀತೆ “ಬಾ ಮಳೆಯೇ ಬಾ”. ಇನ್ನೂ ಮೇಲಾದರೂ ಹೆಚ್ಚಿನ ಗಜಲಗಳು ಗೀತೆಗಳಾಗಿ ಚಾಲ್ತಿಗೆ ಬಂದು ಆ ಮೂಲಕ ಕಮರ್ಷಿಯಲ್ ಯಶಸ್ಸನ್ನು ಸಹ ಸಾಧಿಸಬೇಕಿದೆ, ಅಂತೆಯೇ ಗಜಲಕಾರರು ತಮ್ಮ ಗಜಲಗಳಿಗೆ ಗುಣಮಟ್ಟದ ಲಯ ಗೇಯತೆಗಳನ್ನು ಒದಗಿಸಬೇಕಿದೆ ****** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ನಿಲ್ಲದ ಆಳಲು ಕವಿತಾ ಮಳಗಿ ಎನು ಮಾಡುವುದು.. ನಮ್ಮ್ದು ಬಾಳೆ ಹೀಗೇ ಹೇಗೆ ಸಾಧ್ಯ ನಿಮ್ಮಂತೆ ಇರಲೂ… ಬಿಸಿಲಿರಲಿ ಮಳೆಯಿರಲಿ ಅನುದಿನವು ಹೋರಾಟ ಬಾಳಿಗೆ ಅದುವೇ ಅಭ್ಯಾಸವು.. ಸುಖ ಇಲ್ಲ ಎನ್ನುವ ಮಾತು ನೋವಿನ ಸಂಗತಿ ಇದು ಸತ್ಯ ಎನು ಮಾಡಲು ಸಾಧ್ಯವಿಲ್ಲ…. ನೆಮ್ಮದಿ ಇಲ್ಲ ಕಟಿಬಿಟಿ ಜೀವನ ಕೊನೆ ಇಲ್ಲದ ಭವಣೆಗಳು ಹೇಳಲಿಲ್ಲ ಯಾರಿಗೂ….. ಧನಿಕ ನೀವೆಲ್ಲರೂ ಬದುಕಲ್ಲಿ ಶ್ರೀಮಂತ ನನ್ನ ರಾಜ್ಯದಲ್ಲಿ ನಾನು ನಾವಿಲ್ಲದೆ ಏನೂ ಇಲ್ಲ… ನಮ್ಮಿಂದ ಗುಡಿಗೋಪುರ ನಮ್ಮಿಂದ ಮನೆಮಠ.. ಆದ್ರೂ ನಾವಲ್ಲ ಶ್ರೀಮಂತ…. ಕಷ್ಟದ ಕೆಲಸ ಮಾಡಲು ನಾವೆಲ್ಲರೂ ನೆಮ್ಮದಿ ಬದುಕೂ ನಿಮ್ಮದು ಬೇಸರ ಕಳೆಯಲು ಹಣ ಖರ್ಚು…. ಹೊಟ್ಟೆಗೆ ಹಿಟ್ಟು ಇಲ್ಲದ ಕಾರಣ ಅನುದಿನವು ತೊಳಲಾಟ ಅನುದಿನವು ಮರುಗು… ******

ಕಾವ್ಯಯಾನ Read Post »

ಕಾವ್ಯಯಾನ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಅನ್ನದಾತಾ ಸುಖಿಭವ.. ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚಿಟ್ಟರೂ ಅಡುಗೆ ಮನೆಯಲ್ಲಿ ತುಂಬಿಟ್ಟ ಡಬ್ಬಿಗಳು ಖಾಲಿಯಾದಾಗ ಬಾಗಿಲು ತೆಗೆದು ಕಿರಾಣಿ ಅಂಗಡಿಗೆ ಧಾವಿಸುತ್ತೇವೆ. ಸೊಪ್ಪು ತರಕಾರಿ ಎಂಬ ವ್ಯಾಪಾರಿಗಳ ಕೂಗು ಕೇಳುದಾಗ ಕಿಟಕಿ ಬಾಗಿಲನ್ನು ಕೊಂಚ ತೆಗೆದು ಅವರು ತಂದಿರುವ ತರಕಾರಿಯಲ್ಲಿ ನಮಗೆ ಬೇಕಾದದ್ದೇನಾದರೂ ಇದೆಯೇ ನೋಡುತ್ತೇವೆ. ಬೇಕಾದ್ದನ್ನೆಲ್ಲ ಖರೀದಿಸಿ ರುಚಿಕಟ್ಟಾಗಿ ಅಡುಗೆ ಮಾಡಿ ಉಣ್ಣುವಾಗ ನಾವು ಇವುಗಳನ್ನೆಲ್ಲ ಬೆಳೆದ ರೈತರ ಬಾಳು ತಣ್ಣಗಿರಲೆಂದು ಹಾರೈಸುತ್ತೇವೆ…ಬದುಕಿನ ಹಿಂದಿನ ಪುಟಗಳನ್ನು ತಿರುವಿದೆ.. ನಾಲ್ಕು ದಶಕಗಳ ಹಿಂದೆ ಸರಿ ಸುಮಾರು ಎಲ್ಲರೂ ಸಾವಯವ ಕೃಷಿಕರಾಗಿದ್ದರು. ಬೀಜ ಗೊಬ್ಬರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರು. ರೈತರು ಕೂಲಿಕಾರರೊಂದಿಗೆ ಬೆರೆತು ದುಡಿಯುತ್ತಿದ್ದರು. ಕೈಕೆಸರಾದರೆ ಬಾಯಿಗೆ ಮೊಸರು ಎಂಬುದನ್ನು ಅರಿತಿದ್ದರು. ಇರುವ ತೋಟ ಗದ್ದೆಗಳಲ್ಲಿ ವೈವಿಧ್ಯದ ಬೆಳೆ ಬೆಳೆಯುತ್ತಿದ್ದರು. ಆಹಾರ ಭದ್ರತೆಗೆ ಆದ್ಯತೆ ಇತ್ತು. ಜೇನುಕೃಷಿ, ಪಶುಸಂಗೋಪನೆ, ಕುರಿ ಸಾಕಣೆ…ಹೀಗೆ ಉಪಕಸುಬುಗಳಿಗೂ ಆದ್ಯತೆ ನೀಡುತ್ತಿದ್ದರು. ಬೆಳೆದ ಬೆಳೆ ನಿರ್ವಿಷವಾಗಿರುತ್ತಿತ್ತು. ಉಣ್ಣುವವರಿಗೆ ಸತ್ವಯುತ ಆಹಾರವಾಗಿತ್ತು. ಕ್ರಮೇಣ ಹಸಿರು ಕ್ರಾಂತಿಯ ಪರಿಣಾಮ ರಸಗೊಬ್ಬರಗಳ ಬಳಕೆ, ಹೈಬ್ರೀಡ್ ತಳಿ ಬೀಜಗಳ ಬಳಕೆಯಿಂದ ಹೇರಳ ಬೆಳೆ ಬೆಳೆಯಲಾರಂಭಿಸಿದರು. ಉಪಕಸುಬುಗಳು ಸೊರಗಿದವು. ಬೆಳೆದ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಣೆ ಅನಿವಾರ್ಯ ಎಂಬಂತಾಯಿತು. ರೈತರು ಲಾಭದಾಯಕ ಕೃಷಿಯತ್ತ ಒಲವು ತೋರುವುದು ಹೆಚ್ಚಾದಂತೆ ವಾಣಿಜ್ಯ ಬೆಳೆಗಳು ಜನಪ್ರಿಯವಾದವು ಕಡಿಮೆ ಶ್ರಮ ಅಧಿಕ ಲಾಭ ಎನ್ನುವ ಸೂತ್ರಕ್ಕೆ ಜೋತು ಬಿದ್ದರು. ಅತೀ ಹೆಚ್ಚು ನೀರಿನ ಬಳಕೆಯ ಕಬ್ಬು ಭತ್ತ ಬೆಳೆದು ಅದೆಷ್ಟೋ ಹೆಕ್ಟೆರ್ ಭೂಮಿ ಜವುಳಾಗಿದೆ. ಶುಂಠಿ ಬೆಳೆದ ಭೂಮಿ ಬರಡಾಗಿದೆ. ಪರಂಪರೆಯಿಂದ ಬಂದ ಜ್ಞಾನ ಮೂಲೆಗುಂಪಾಗಿದೆ. ಅಕ್ಕಡಿ ಬೆಳೆ. ಬಹು ವೈವಿಧ್ಯದ ಬೆಳೆ ಎಂಬುದನ್ನೆಲ್ಲ ಒಪ್ಪದ ರೈತರನೇಕರು ಬೇಗ ಬೇಗ ಬಿತ್ತಿ ಬೆಳೆದು ಲಾಭ ಗಳಿಸುವ ಮನಸ್ಥಿತಿಗೆ ಬಂದಿದ್ದಾರೆ. ಹೆಚ್ಚು ಗೊಬ್ಬರ ಹೆಚ್ಚು ನೀರು,ಲೆಕ್ಕಕ್ಕಿಲ್ಲದಷ್ಟು ಕೀಟನಾಶಕ, ಇನ್ವೆಸ್ಟ ಮಾಡಿದ ಹಣ ಆದಷ್ಟು ಹತ್ತಾರು ಪಟ್ಟಾಗಿ ತಿರುಗಿ ಬಂದು ಬಿಡುತ್ತದೆ ಎಂಬ ಲೆಕ್ಕಾಚಾರ. ಬರಲೇ ಬೇಕು ಎಂಬ ಹಠದಲ್ಲಿ ಸಾಲ ತೆಗೆದು, ಬೆಳೆ ಬೆಳೆದು ಯಶಸ್ಸು ಕಂಡರೆ ಸರಿ ಇಲ್ಲವಾದರೆ ಸಾಲ ತೀರಿಸಲಾರದೇ ನೇಣಿಗೆ ಶರಣು!. . ಒಬ್ಬ ರೈತ ಒಂದು ಬೆಳೆಯಲ್ಲಿ ಲಾಭ ಗಳಿಸಿದ ಸುದ್ದಿ ಸಿಕ್ಕರೆ ಸಾಕು ಸಾವಿರಾರು ರೈತರು ಅದೇ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟವಾಗದೇ ವ್ಯವಸ್ಥೆಗೆ ಬೈದು ಬೆಳೆದ ಬೆಳೆಯನ್ನು ನಡು ರಸ್ತೆಯಲ್ಲಿ ಸುರಿದು ಪ್ರತಿಭಟಿಸುವುದು ಮಾಮೂಲು.. ಈಗೀಗ ತಿನ್ನುವ ಧವಸ ಧಾನ್ಯಗಳಲ್ಲಿ, ಹಣ್ಣು ತರಕಾರಿಗಳಲ್ಲಿ ಬೆರೆತ ವಿಷವನ್ನು ಬೇರ್ಪಡಿಸಿ ಉಣಲಾರದ ಅಸಹಾಯಕತೆ ಬಳಕೆದಾರರದ್ದು. ಆಗ ಅನ್ನದಾತ ಸುಖಿ ಭವ!? ( ಹಾರೈಸಲು ವಿಚಾರ ಮಾಡುವಂತಾಗುತ್ತದೆ), ಅಂಗಡಿಗೆ ಹೋದರೆ ದುಬಾರಿ ಬೆಲೆ ತೆತ್ತು ಕೊಳ್ಳಲಾಗದ ಅಸಹಾಯಕತೆ ಅನೇಕರದ್ದು. ‌ಈಗ ಹೇಗಿದ್ದಾರೆ ಹಾಗಾದರೆ ರೈತರು? ಉಳಿದ ಕ್ಷೇತ್ರದಲ್ಲಿ ಕಂಡ ಬಿಕ್ಕಟ್ಟು ರೈತರನ್ನೆಂತು ಕಾಡುತ್ತಿದೆ? ಬೆಳೆದ ಬೆಳೆ ಭಾಗ್ಯದ ಬಾಗಿಲನ್ನು ತೆರೆದಿದೆಯೇ? ಮುಂದುವರಿಯುವುದು.. ******** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ನಡುರಾತ್ರಿ ಎದ್ದು ಹೋಗುವ ಮುನ್ನ ಒಮ್ಮೆ ಹಿಂತಿರುಗಿ ನೋಡಬೇಕಿತ್ತು ಯಶೋಧರೆಯ ಅಳಲ ಕೊನೆಯ ಬಾರಿಗಾದರೂ ಕೇಳಬೇಕಿತ್ತು ನೀನೇನೋ ಕಷ್ಟ, ಕೋಟಲೆಯ ಸಂಕಟ ಕಳೆಯಲು ಹೊರಟವನು ಸಂಗಾತಿಯಿರದ ಒಂಟಿ ಜೀವದ ನೋವಿಗೆ ಮಿಡಿಯಬೇಕಿತ್ತು ಸಿರಿ ಸಂಕೋಲೆ ಕಳಚಿ ಯಾರ ಗೊಡವೆಯಿರದೇ ನಡೆದುಹೋದೆ ನೀನೇ ಎಲ್ಲವೂ ಎಂದುಕೊಂಡವಳ ಬಾಳು ಬರಡು ಮಾಡಬಾರದಿತ್ತು ಧ್ಯಾನ,. ಚಿಂತನೆಗಳಲ್ಲಿ ತೊಡಗಿದವನಿಗೆ ಸಂಸಾರದ ಬಂಧವೆಲ್ಲಿ ? ನಿನ್ನನೇ ನಂಬಿದ ಜೀವವ ಧಿಕ್ಕರಿಸಿದ ಯಾತನೆ ಅರಿವಾಗಬೇಕಿತ್ತು ಗೌತಮ ಬುದ್ಧನಾಗಿ ಅರಿವಿನ ಗುರುವಾಗಿ ನಂಬಿದವರ ಉದ್ಧರಿಸಿದೆ ಲೌಕಿಕ ಯುದ್ಧದಿ ಬಲಿಯಾದವಳ ಪತಿಯಾಗಿ ಕಾಪಿಡಬೇಕಿತ್ತು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಷ್ಟೇ ಸಾಕು! ಮಮತ ಕೆಂಕೆರೆ ಮನೆಯಲ್ಲಿ ಇಲ್ಲದಿದ್ದರೂ ಮನಸಲ್ಲಿ ಇದ್ದರೆ ಸಾಕು ನನಸಲ್ಲಿ ಸಿಗದಿದ್ದರೂ ಕನಸಲ್ಲಿ ಬಂದರೆ ಸಾಕು ಹೆಸರಲ್ಲಿ ಸೇರದಿದ್ದರೂ ಉಸಿರು ಮಿಡಿದರೆ ಸಾಕು ಗಳಿಸಿ ಗೌರವ ತರದಿದ್ದರೂ ಗೆಳೆಯನಾಗಿದ್ದರೆ ಸಾಕು ಇಷ್ಟವೆ ಇಲ್ಲವೆಂದಾದರೂ ಕಷ್ಟ ಕೊಡದಿದ್ದರೆ ಸಾಕು ಅಪ್ಪಿ ಮುದ್ದಾಡದಿದ್ದರೂ ಬೆಪ್ಪಳನ್ನಾಗಿಸದಿದ್ದರೆ ಸಾಕು ಜೊತೆಜೊತೆ ಸಾಗದಿದ್ದರೂ ಹಿತವ ಬಯಸಿದರೆ ಸಾಕು ಹೂನಗೆಯ ತುಳುಕಿಸದಿದ್ದರೂ ಹಗೆಯಾಗದಿದ್ದರೆ ಸಾಕು ದೇಹ-ಮೋಹ ಬೆಸೆಯದಿದ್ದರೂ ಜೀವ-ಭಾವ ಬೆಸೆದರೆ ಸಾಕು ದೂರದಲ್ಲಿ ಎಲ್ಲೋ ನೆಲೆಸಿದರೂ ಎದುರಾದಾಗ ವಾರೆನೋಟ ಸಾಕು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ.ಹೆಚ್.ಡಿ ಗರ್ಭದ ಕೊರಳ ಹಿಂಡಿ ಬಸಿದ ದ್ರವದಲ್ಲಿ ತೇಲುತ್ತಾ ಬಂದೆಯಲ್ಲ ನವಮಾಸದ ನೋವ ಒಂದೇ ಅಳುವಲ್ಲಿ ಮಾಯ ಮಾಡಿದೆಯಲ್ಲ ತಾಯ್ತನದ ಸುಖವ ಕ್ಷಣಕ್ಷಣವೂ ಸವಿದು ಪುಳಕಿತಗೊಂಡಿದ್ದೆ ಬಯಸಿದವಳು ಬಗಲಿಗೆ ಬಂದೊಡನೆ ಅಮ್ಮನ ಮಡಿಲು ಮರೆತೆಯಲ್ಲ ವೃದ್ಧಾಪ್ಯದಲಿ ನೆರಳಾಗುವೆಯೆಂದು ನೂರಾರು ಭವಿಷ್ಯದಕನಸು ಕಂಡಿದ್ದೆ ರೆಕ್ಕೆ ಬಲಿತೊಡನೆ ಗುಟುಕುಕೊಟ್ಟ ಗೂಡುತೊರೆದು ಹಾರಿಹೋದೆಯಲ್ಲ ತಾಯ ಹಾಲುಂಡ ಕೂಸಿದು ವಾತ್ಸಲ್ಯದ ಪರ್ವತವೆಂದುಕೊಂಡಿದ್ದೆ ಕರುಳಬಳ್ಳಿ ಹರಿದು ಕಿಂಚಿತ್ತು ಕರುಣೆಯೂ ಇಲ್ಲದಾಯಿತಲ್ಲ ನಿನ್ನ ಪಡೆದ ಈ ಜೀವ ಏಳೇಳು ಜನ್ಮದ ಪುಣ್ಯವೆಂದುಕೊಂಡಿದ್ದೆ ನಿತ್ಯವೂ ಮಾತೃಹೃದಯ ತಾ ಮಾಡಿದ ಪಾಪವೇನೆಂದು ಕೊರಗುತ್ತಿದೆಯಲ್ಲ *******

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಈಗೊಂದು ಉತ್ತರ ಸಿಗದಾ ಪ್ರಶ್ನೆ ಸುಮಂತ್ ಎಸ್ ಅದೊಂದು ಸಂಜೆ, ನನ್ನ ಕೈಯಲ್ಲಿ ಆಕೆಯ ಕೈ ಇತ್ತು. ಕಣ್ ಮಿಟುಕಿಸದೆ, ಚಂದ್ರ ನಕ್ಷತ್ರಗಳನು ಎಣಿಸುವ ಹಾಗೆ ಆಕೆ ನನ್ನನ್ನೇ ನೋಡುತ್ತಿದ್ದಳು, ನಾನು ಆಕೆಯನ್ನು.ಸೂರ್ಯಾಸ್ತಮಾನದ  ಮೋಡಗಳಂತಾಗಿದ್ದ ಕಣ್ಣುಗಳು ನನಗೆ ಏನನ್ನೊ ಹೆಳಬೇಕೆಂದು ಚಟಪಡಿಸುತಿದ್ದನ್ನು ಕಂಡೆ. ಇದೇನು ಮೊದಲಬಾರಿಯಲ್ಲ, ಅದೆಷ್ಟೋ ಬಾರಿ ಹೀಗೆ ಏನನ್ನೊ ಹೇಳಬೇಕೆಂದು ಪ್ರಯತ್ನಿಸಿ ಸೂತಿದ್ದು ಗೂತ್ತಿದೆ ನನಗೆ,  ಅದೇ, ಅನಿಶ್ಚಿತತೆ, ನಾಚಿಕೆ,ಭಯ,ಗೂಂದಲ ಇಂದಿಗೂ ಅವಳ ಕಣ್ಣಾ ಪರದೆ ಹಿಂದಿನಿಂದ ಇಣುಕುತ್ತಲೇಯಿತ್ತು. ಎಲ್ಲಾ ನದಿಗಳು ಸೇರಿದರೂ ಒಂದೇತರನಾಗಿರುವ ಸಮುದ್ರ, ಅಲೆಗಳದೆಷ್ಟೇ ಅಬ್ಬರಿಸಿದರೂ ನಂತರ ಪ್ರಶಾಂತವಾಗಿ ಗೂಚರಿಸುವ ಹಾಗೆ ಅವಳ‌ ನಗು. ನನಗೂ ಅದನ್ನು ಕೇಳಬೇಕಂಬ ಹುಚ್ಚು ಕುತೂಹಲವಿದ್ದರೂ ಎಂದಿಗೂ ಒತ್ತಾಯ ಮಾಡಿರಲಿಲ್ಲ. ಬೆವರುತ್ತಿದ್ದ ಕೈಯಿ, ನಡುಗುತ್ತಿದ್ದರೂ ನನ್ನ ಕೈಯನ್ನು ಗಟ್ಟಿ ಹಿಡಿದು ಹೇಳಲೇಬೇಕೆಂದು  ಮೆಲ್ಲನೇ ಒಣಗಿದ ತುಟಿ ಬಿಡಿಸುತ್ತಿದ್ದರೇ ನನಗೆ ಎಲ್ಲಿಲ್ಲದ ಆತಂಕದ ಅನುಭವವಾಗುತ್ತಿತ್ತು..ನನ್ನ ಕಿವಿಗಳಿಗೆ, ನನ್ನ ಎದೆಬಡಿತ ಕೇಳುತ್ತಿತ್ತು.  ಅವಳಿಗೇನು ನನ್ನ ಪ್ರತಿಕ್ರಿಯೆ ಕಾಯಬೇಕೆಂದೆನೂ ಇರುಲಿಲ್ಲಾ, ಬರಿ ಹೇಳಿ  ನಿರುಂಬಳ ಆಗುವ ಹಂಬಲ ಅವಳನ್ನು ಕಾಡಿದಂತೆ ಇತ್ತು…  ಹಾಗಾಗಿ ಮೆಲ್ಲನೆ ಪಿಸುದ್ವನಿಯಲ್ಲಿ ಹೇಳಿಯೇಬಿಟ್ಟಳು. ಆಕಸ್ಮಿಕವೂ  ಏನೋ ಆಗಸದಲ್ಲಿ ಮೋಡ ಅಬ್ಬರಿಸ ತೊಡಗಿತು.. ಆಕೆಯ ಕಣ್ಣಿಂದ ಜಾರಿದ ಮಳೆ ಆಕೆಯ ಕೆನ್ನೆಯ ಮೇಲಿತ್ತು. ಒರೆಸುವ ಮುನ್ನ ಮಳೆ ಹೊತ್ತು ತಂದಿದ್ದ ಆ ಗಾಳಿ ಆಕೆಯ ಶ್ವಾಸಕೋಶವನ್ನು ಕೂನೆಯ ಬಾರಿ ಸ್ಪರ್ಶಿಸಿತು… ಅವಳ ವಾಲಿದ ಕತ್ತು  ನನ್ನ ಕೈಯಲ್ಲಿ ಇತ್ತು…. ತೇಲುತ್ತಿದ್ದಾ ಕಣ್ಣುಗಳು ಮುರಿದ ದೋಣಿಯಂತೆ ಸ್ಥಬ್ದ ಸ್ಥಿತಿ ಅವರಿಸಿತು, ಬಾಗಿಲಿನಲ್ಲಿ ನಿಂತಿದ್ದ, ನನ್ನ ಮಲತಂದೆ ಬಿಕ್ಕಳಿಸುತ್ತಾ ಆಳುತಿದ್ದಾ ನನ್ನಂತೆ…    ಆಕೆಯ ಮೇಲೆ ನನಗೆ ಅಗಾಧ ಪ್ರೀತಿಯಿತ್ತು ಎಂದೇನಲ್ಲ,ಸತ್ಯ ತರ್ಕಿಸಿದರೆ ನಾ ಆಕೆಯನ್ನು ದ್ವೇಷಿಸಿದ್ದೂ ಹೌದು.  ಆದರೂ ಅನುಮತಿ ಕೇಳದೆ ಕಣ್ಣೀರು ಹರಿದ್ದಿತ್ತು. ಚಿಕ್ಕಪ್ಪ ಒಳ್ಳೆಯ ಮನುಷ್ಯ,ನನಗೆ ವೀರ್ಯ ಕೂಟ್ಟ ತಂದೆಯಾಗಿಲ್ಲದೆ ಇದ್ದರು, ನನ್ನನ್ನು ಒಪ್ಪಿಕೂಂಡು , ಅರ್ಜಿಗಳಲ್ಲಿ ಖಾಲಿಯಿದ್ದ ಅಪ್ಪನ ಸ್ಥಾನವನ್ನು ತುಂಬಿ, ನನ್ನ ಹೆಸರಿಗೆ ಆತನ  ಸರ್ ನೇಮ್  ಸೇರಿಸಿದ್ದು ಒಂದಾದರೆ,ನನ್ನ ಅಮ್ಮನನ್ನು ಒಪ್ಪಿಕೊಂಡು ಪ್ಯಾರೀಸ್ ನಲ್ಲಿ ಮದುವೆಯಾಗಿದ್ದು ಇನ್ನೂಂದು, ಆಕೆ ಒಳ್ಳೆಯ ನೃತ್ಯಗಾರ್ತಿ ಎಂದು ಹೇಳುವ ಚಿಕ್ಕಪ್ಪನ ಕಂಗಳಲ್ಲಿ ಇನ್ನೂ ಅದೇ ಮೊದಲ ಬಾರಿಗೆ ಕಂಡ ಹೂಳಪು.  ಆಕೆಯನ್ನು  ಮೊದಲ ಬಾರಿಗೆ ಕಂಡಿದ್ದನ್ನು ವರ್ಣಿಸುವ ಆತ ಮಾವಿನ ಚಿಗುರು ಕಂಡ ಕೂಗಿಲೆಯಂತೆ ಕಾಣುತ್ತಾನೆ. ಓಡಿಬಂದು ಆಕೆಯನ್ನು ಮಡಿಲಿಗೆ ಎಳೆದುಕೊಂಡು ಒದ್ದೆಯಾದ ಕಣ್ಣುಗಳಿಂದ ಆಕೆಯನ್ನು ನೋಡುತ್ತಾ ಹಣೆಗೆ ಮುತ್ತಿಟ್ಟ.      ಹಾಹ್ ಅಷ್ಟೇ ಸಾಕು ಅವಳೆಡೆಗಿನ ಅವನ ಪ್ರೀತಿ ಎಂಥವುದು ಎಂದು ತಿಳಿಯಲು..      ನಿಜ ಸ್ಥಬ್ದವಾಗಿದ್ದು ಅವಳ ದೇಹವಷ್ಟೆ      ಕೊನೇಯಪಕ್ಷ ನನ್ನಿಂದ ಮುಚ್ಚಿಟ್ಟಿದ್ದ ನನ್ನ ತಂದೆಯ ಹೆಸರನ್ನು ಸಹ ಅವಳೂಂದಿಗೆ ಕೊಡ್ಯೊಲಲಿಲ್ಲಾ, ಕೊನೆಗೆ ಹೇಳಿದ್ದು ಆತನದೇ ಹೆಸರು… ನಮ್ಮ ಊರಿಗೆ ಜರ್ಮನ್ ಸೈನಿಕರು ಬರುತ್ತಿದ್ದದ್ದು ಸಾಧಾರಣ ವಿಷಯವೇ…ಹಾಗೆ ಬಂದಿದ್ದ ಆತ,ನನ್ನ ಅಮ್ಮ ಕೆಲಸ ಮಾಡುತ್ತಿದ್ದ ಜಮೀನಿನ ಬದಿಯಲ್ಲಿ ತನ್ನ ಪುಸ್ತಕದಲ್ಲಿ ಏನ್ನನ್ನೋ ಚಿತ್ರಿಸುತ್ತಾ ಅಪ್ಪಟ ಕಲಾವಿದನಂತೆ ನಿಂತಿದ್ದರೆ, ಪಾರಿಜಾತ ಪುಷ್ಪ ಗಮನ ಸೆಳೆದಂತೆ ಎಲ್ಲರ ಗಮನ ಸೆಳೆಯುತ್ತಿದ್ದಾ, ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ಹೆಂಗಸರೆಲ್ಲಾ ಮಳೆ ಮುಂಚಿನ ಮೋಡ ಕಂಡ ನವಿಲ ಹಾಗೆ ಅವನೆಡೆಗೆ ನೋಡುತ್ತಿದ್ದರೆ ನನ್ನ ಅಮ್ಮ ಮಾತ್ರ ಮೊದಲ  ಮಳೆ ಸ್ವೀಕರಿಸಲು ಕಾಯುತ್ತಿದ್ದ ಮಣ್ಣಿನ ಹಾಗೆ ಆಗಿದ್ದಳು.. ನನ್ನ ಚಿಕ್ಕಪ್ಪ ಯಾವಾಗಲೂ ಹೇಳುವ ಹಾಗೆ ನನ್ನ ಅಮ್ಮ ಬಹಳ ಅಂದದ ಹೆಂಗಸು.ನಿರ್ಲಕ್ಷಿಸಲು ಅಸಾಧ್ಯವಾದ ರೂಪ ಅವಳದು, ಆತನೂ,  ಅವಳನ್ನು ಮೋಹಿಸಿದರೂ ತನ್ನ ಕಾಮನೆಗಳನ್ನು ಮೋಟು ಮೀಸೆಯ ಅಡಿಯಲ್ಲಿ ಬಚ್ಚಿಟ್ಟುಕೊಂಡು ಅವಳನ್ನು ನೋಡಲು ದಿನಾ ಬರುತ್ತಿದ್ದ, ಅವಳು ಕೂಡ ಆತ ಬರುವುದನ್ನು ತಿಳಿದು ದಿನಾ ಚಂದಚಂದದ ಬಟ್ಟೆ ತೊಟ್ಟು  ಕೆಲಸಕ್ಕೆ ಹೋಗುತ್ತಿದ್ದಳು. ಒಬ್ಬರಲ್ಲಿ ಇದ್ದ ಮತ್ತೊಬ್ಬರ ಮೇಲಿನ ಪ್ರೀತಿ ತಿಳಿಸಲು ಎಷ್ಟೇ ಪ್ರಯತ್ನಿಸಿದರೂ ಭಯ ಮತ್ತು ಭಾಷೆ ಎರಡೂ ತಡೆಯುತ್ತಿತ್ತು.ನಂತರ ಕಣ್ಣು ಬೆರೆಯಿತು, ಮುಗುಳುನಗೆ ವಿನಿಮಯ ಆಯಿತು, ಕ್ರಮೇಣ ಸ್ನೇಹ ಮತ್ತು ಪ್ರೀತಿ,ಊರು ಬದಿಯ ಮೈಲಿಗಲ್ಲುಗಳಿಗೆ  ಕಾವು ಕೊಡುವುದರಿಂದ ಶುರುವಾಗಿ ಸಾಯಂಕಾಲ ಒಟ್ಟಿಗೆ ಮದ್ಯಪಾನ ಮಾಡುವವರೆಗೂ ಭೂಮಿ ನೀರನ್ನು ಒಪ್ಪಿಕೊಳ್ಳುವ ಹಾಗೆ ಮಾತಿನಲ್ಲಿ  ಹೇಳಿಕೊಳ್ಳದೆ ಬೆಳೆದಿತ್ತು….. ಎಷ್ಟೇ ಆದರೂ ಆತ ಸೈನಿಕ, ಊರನ್ನು ಬಿಟ್ಟು ಹೋಗಬೇಕಾಗಿ ಬಂತು, ಆತ ಅವರಿಬ್ಬರ ನಡುವೆ ಏನೂ ಆಗೇ ಇಲ್ಲವೇನೋ ಎಂಬಂತೆ ಹೊರಟೆ‌ ಬಿಟ್ಟ…ಅಷ್ಟರಲ್ಲಿ ಅಮ್ಮ ಗರ್ಭಿಣಿಯಾಗಿದ್ದು ನಾನು ಈ ಪ್ರಪಂಚಕ್ಕೆ ಬರಲು ಸಿದ್ಧನಾಗುತ್ತಿದ್ದೆ.ಆಕೆ ದಿನೇ ದಿನೇ ಕೊರಗತೊಡಗಿದಳು, ಒಬ್ಬಳೆ ಕೂತು ಗಂಟೆಗಟ್ಟಲೆ ಅತ್ತಳು‌, ಈಕೆಯನ್ನು ನಡುರಾತ್ರಿಯಲ್ಲಿ ಬಿಟ್ಟು ಹೋದವನಿಗೆ ಮೈಥುನವಷ್ಟೇ ಬೇಕಾಗಿದೆಯೇನೋ  ಎಂಬ ಆಲೋಚನೆ  ಆಕೆಯಲ್ಲಿದ್ದರೂ ಎಂದೂ ಅವನನ್ನು ಬೈದದ್ದಿಲ್ಲ, ಪ್ರೀತಿ ಏನೋ ಹಾಗೆ ಇತ್ತು. ಜರ್ಮನ್ ಸೈನಿಕರು ನಮ್ಮ ಊರಿಗೆ ಬರುತ್ತಿದ್ದದ್ದು ಎಷ್ಟು ಸತ್ಯವೋ ನಮ್ಮ ಊರಿನ ಎಷ್ಟೋ ಮಕ್ಕಳಿಗೆ ಅಘೋಷಿತ ತಂದೆಗಳಿರುವರು ಎಂಬುದು ಅಷ್ಟೇ ಸತ್ಯ.ಆದರೂ ಮರ್ಯಾದೆಗೆ ಅಂಜಿದ ಅಮ್ಮ ನಾನು ಹುಟ್ಟಿದ ಮೇಲೆ, ಅಜ್ಜಿಯ ಬಳಿ ನನ್ನ ಬಿಟ್ಟು ಪ್ಯಾರಿಸ್ ಗೆ ಹೋದವಳು ಅವರ ಸಾವಿನ ನಂತರವೇ ನಾನು ಕಂಡಿದ್ದು, ಅಷ್ಟರಲ್ಲಿ ಆಕೆಗೆ ಮತ್ತೊಂದು ಮದುವೆ ಆಗಿತ್ತು.ಆಕೆ ತನ್ನ ಕನಸಿನ ಜೀವನ ಬದುಕುತ್ತಿದ್ದಳು, ಆದರೆ ನಾನು ಗೋಮುಖ ವ್ಯಾಘ್ರದಂತಹ ತಾತ ಅಜ್ಜಿಯ ಬಳಿ ನರಳುತ್ತಿದ್ದೆ; ಎಷ್ಟರ ಮಟ್ಟಿಗೆ ಎಂದರೆ ನಾನು ಅವರ ಸಾವನ್ನು ಬೇಡದ ದಿನವಿರಲ್ಲಿಲ್ಲ.ಮತ್ತೆ ಕೆಲ ದಿನದ ಮಟ್ಟಿಗೆ  ನನ್ನನ್ನು ಅಮ್ಮನ ತಂಗಿ,ಅವಳ ಗಂಡ ಸಾಕಿದರು… ಕಷ್ಟ ಪಟ್ಟು ಓದಿದೆ, ನಾನು ಪ್ರೀತಿಸಿದವಳನ್ನೇ  ಜೀವನ ಸಂಗಾತಿಯಾಗಿ ಪಡೆದೆ, ಒಂದರ ನಂತರ ಮತ್ತೊಂದೆಂಬಂತೆ ಒಂಬತ್ತು ಮಕ್ಕಳಾಯ್ತು , ಒಳ್ಳೆಯ ವಿದ್ಯಾಭ್ಯಾಸ ಪಡೆದರೂ ಮನಸಿನಲ್ಲಿ ತಂದೆ ಹೆಸರಿನಲ್ಲಿ ಇದ್ದ ನಕಲಿ ಹೆಸರು, ಅಮ್ಮನೆಡೆಗಿನ ಕೋಪ,ಸಮಾಜದೆಡೆಗಿನ ಆಕ್ರೋಶ, ಅಂಜಿಕೆ ನನ್ನನ್ನು ಸದಾ ಕೆಳಗೆ ಎಳೆಯುತ್ತಿತ್ತು. ಅದೆಷ್ಟೋ ಕಡೆ ಕೆಲಸ ಮಾಡಿದೆ.ನನ್ನದೆಯಾದ ಬಿಸ್ನೆಸ್ ಆರಂಭಿಸಿದೆ, ಆದರೂ ನಷ್ಟ ಬೇತಾಳನಂತೆ ಹಿಂಬಾಲಿಸುತ್ತಿತ್ತು, ಏನೂ ತೋಚದೆ ಕೈಚೆಲ್ಲಿ ಕುಳಿತಾಗ ಸೇನೆಗೆ ಸೇರಿದೆ, ಅದು World war ನ ಸಮಯ… ಒಂದೆಡೆ ಇಡೀ ವಿಶ್ವವೇ ಜೀವ ಭಯದಲ್ಲಿ ತತ್ತರಿಸುತ್ತಿದ್ದರೆ ಇನ್ನೊಂದೆಡೆ ನಾನು, ನನ್ನದೇ ತಂದೆಯ ಹೆಸರನ್ನು ಕೇಳಿ ಹಿಡಿ ಮುಷ್ಟಿ  ಉಪ್ಪು ತಿಂದಂತೆ ಆಗಿತ್ತು. ವಿಶ್ವಯುದ್ಧದಲ್ಲಾದರೆ ಸಾವು ಬದುಕಿನ ಹಪಾಹಪಿ ಆದರೆ ಬದುಕಿದ್ದಾಗಲೇ ಸಾಯುವುದು ಇನ್ನೆಷ್ಟು ಭೀಕರ? ನಾನು ಮತ್ತು ನಮ್ಮ ಜನಾಂಗದವರು ಆರಾಧಿಸುತ್ತಿದ್ದ ಆ ಪರಮ ದೇಶಭಕ್ತ, ಎಂಜಲು ಹಾರಿಸುತ್ತಾ ಮಾತಲ್ಲೇ ಮೋಡಿ ಮಾಡುವ ಸಾಮರ್ಥ್ಯವಿದ್ದ ಆ ಮೋಟು ಮೀಸೆಯವ,ನಮ್ಮ ಜನಾಂಗ ಅತೀ ಶುಭ್ರ ಜನಾಂಗವೆಂದು ನಂಬಿ ನಮಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ ಒಂಟಿ ಸಲಗ, ಆತನೇ ನನ್ನ ತಂದೆ…!!! ಆತನನ್ನು ದೇವರನ್ನಾಗಿ ಒಪ್ಪಿಕೊಳ್ಳಬಹುದಿತ್ತು, ಆದರೆ ತಂದೆಯಾಗಿ?! ತಾಯಿಗೆ ಮೋಸ ಮಾಡಿದವನನ್ನು , ಒಮ್ಮೆಯೂ ನನ್ನ ಕಾಣದಿರುವವನನ್ನು,ಬೆರಳ ಹಿಡಿದು ನಡೆಸದವನನ್ನು, ಹೆಂಡತಿ ಮಕ್ಕಳನ್ನು ದೂರ ಮಾಡಿದವನನ್ನು ಹೇಗೆ ಒಪ್ಪಿಕೊಳ್ಳಲಿ ತಂದೆಯೆಂದು? ಹೇಗೆ ಒಪ್ಪಿಕೊಳ್ಳಲಿ?? ಅವನನ್ನು ಬಿಡಿ ಬರೀ ಆತನ ಹೆಸರೇ ಸಾಕಿತ್ತು ನನ್ನಿಂದ ಎಲ್ಲವನ್ನೂ ಕಬಳಿಸಲು. ತಾಯಿಯಿದ್ದರೂ ಅನಾಥನಾದೆ, ಸಂಸಾರ,ಸ್ನೇಹಿತರಿದ್ದರೂ ಏಕಾಂಗಿಯಾದೆ. ಕೆಲಸವಿದ್ದರೂ ಬಡವನಾದೆ,ಸಮಾಜದ ಕ್ರೂರತ್ವಕ್ಕೆ ಬಲಿ ಪಶುವಾದೆ, ಒಟ್ಟಿನಲ್ಲಿ ಜೀವಂತ ಶವವಾದೆ!! ಹೌದು, ಒಪ್ಪುತ್ತೇನೆ ಆತನಿಗೂ ತಂದೆ ಪ್ರೀತಿಯ ಅರಿವೇ ಇರಲಿಲ್ಲಾ, ತಂದೆ ಏನೋ ಇದ್ದ ಆತನಿಗೆ, ಆದರೆ ತಂದೆ ವಾತ್ಸಲ್ಯ ಎಂದಿಗೂ ಸಿಗಲಿಲ್ಲ ಅವನಿಗೆ.. ಜೀವನದುದ್ದಕ್ಕೂ ಈತನ ಇಚ್ಛೆಯ ವಿರುದ್ಧವೇ ನಡೆಸಿದ ಆತ, ಬಣ್ಣಗಳಿಗೆ ಜೀವ ತುಂಬುವ ಕೈಗಳಿಗೆ ಜೀವ ತೆಗೆಯುವ ಪಿಸ್ತೂಲನಿತ್ತು, ಕಲಾವಿದನ ಕೊಂದು ಕೊಲೆಗಾರನನ್ನಾಗಿಸಿದ… ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದವನ್ನನ್ನು ಪದೇ ಪದೇ ಶೂನ್ಯಕ್ಕೆ ಉರುಳಿಸಿದ,  ಆತನೂ ನನ್ನ ಹಾಗೆ ಅವರ ಸಾವಿಗೆ ಕಾದ್ದಿದ್ದಿರಬಹುದು? ತಂದೆಯ ಮೇಲಿನ ಆಕ್ರೋಶ,ಇಡಿ ಒಂದು ಜನಾಂಗವನ್ನೇ ನಿರ್ನಾಮ ಮಾಡುವೆಡೆ ತಿರುಗಿತು, ಇಡೀ ವಿಶ್ವವನ್ನೇ ರಣರಂಗ ಮಾಡಿಸಿತು!!  ಆದೆಷ್ಟೋ ಜೀವಗಳನ್ನು  ಇರುವೆಗಳ ಹೊಸಕಿ ಹಾಕಿದಂತೆ  ಹಾಕಿದ ರಕ್ತಾ ಸಾಗರವೇ ಹರಿಯಿತು…. ಆದರೂ ಆತನನ್ನು ಸಮರ್ಥಿಸಿಕೊಳ್ಳುತ್ತೇನೆ!!! ಏಕೆಂದರೆ  ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಮ್ಮೆಲ್ಲರ  ಒಳಗೆ ಅಡಾಲ್ಫ್ ಹಿಟ್ಲರ್ ಇದ್ದಾನೆ. ಕೆಲವರಲ್ಲಿ ಸ್ವಲ್ಪ, ಇನ್ನೂ ಹಲವರಲ್ಲಿ ಕೊಂಚ ಜಾಸ್ತಿ, ಅಷ್ಟೇ ವ್ಯತ್ಯಾಸ… ಇಡೀ ಜಗತ್ತು ಅವನನ್ನು ಮಾನವ ರೂಪದ ರಾಕ್ಷಸವೆನ್ನಬಹುದು!! ನರಹಂತಕ ಎನ್ನಬಹುದು,ನೀಚ ಎನ್ನಬಹುದು,ರಕ್ತಭಕ್ಷಕ, ಭಕ್ಷಾಸುರ ಎಂದೆಲ್ಲಾ ಎನ್ನಬಹುದು; ಆದರೆ ಅದಕ್ಕೆಲ್ಲಾ ಕಾರಣ!??

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀರಿಗೇತಕೆ ಬಣ್ಣವಿಲ್ಲ? ಮಹಾಂತೇಶ ಮಾಗನೂರ ಅರೆ ಯಾರು ಹೇಳಿದರು ನೀರಿಗೆ ಬಣ್ಣವಿಲ್ಲವೆಂದು… ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ ನೀರಿಗೂ ತರತರದ ಬಣ್ಣಗಳುಂಟು ಎಂದು ನೀರಿಗೇತಕೆ ಬಣ್ಣವಿಲ್ಲ? ಧುಮ್ಮಿಕ್ಕುವ ಜಲಪಾತದಿ ಹಾಲಿನಂತಹ ಬಿಳುಪು ಸೂರ್ಯಾಸ್ತದ ಸಮಯದಲ್ಲಿ ಸಾಗರದಿ ನಸುಗೆಂಪು ನೀರಿಗೇತಕೆ ಬಣ್ಣವಿಲ್ಲ? ಆಗಸದಿಂದ ನೋಡಿದೊಡೆ ನೀರೆಲ್ಲ ತಿಳಿನೀಲಿ ಕಾನನದಿ ಹರಿಯುವ ಜುಳು ಜುಳು ನೀರು ಪ್ರಕೃತಿಯ ಬಣ್ಣದಲಿ ನೀರಿಗೇತಕೆ ಬಣ್ಣವಿಲ್ಲ? ಬೆಟ್ಟಗಳಲಿ ಸುಳಿ ಸುಳಿದಾಡಿ ಹರಿಯುವುದು ಝರಿಯಾಗಿ,ಗಿಡ ಮರಗಳಿಗೆ ನೀಡುತ ಉಸಿರು ಕಾಣುವದು ಹಸಿರು ಹಸಿರು! ನೀರಿಗೇತಕೆ ಬಣ್ಣವಿಲ್ಲ? ಆಕಾಶದಿಂದ ಧರೆಗಿಳಿಯುತ ಸೂರ್ಯರಶ್ಮಿಯ ಚುಂಬಿಸಿ ಕಾಣುವುದಿಲ್ಲವೇ ಬಣ್ಣ ಬಣ್ಣದ ಮೋಹಕ ಕಾಮನಬಿಲ್ಲು ನೀರಿಗೇತಕೆ ಬಣ್ಣವಿಲ್ಲ? ರೈತನೊಂದಿಗೆ ಬೆರೆತು ಗದ್ದೆಯಲ್ಲಿ ಹರಿದಾಡಿ, ಪೈರಿನೊಂದಿಗೆ ಸೇರಿ ಹಚ್ಚ ಹಸಿರಾಗಿ ಹೊಮ್ಮುವುದು ನೀರಿಗೇತಕೆ ಬಣ್ಣವಿಲ್ಲ? ಆಧುನಿಕತೆಯ ಭರದಲ್ಲಿ ಕಾರ್ಖಾನೆಗಳು ಉಗುಳುವ ವಿಷ ಗಾಳಿಗೆ ಬಿಗಿದಪ್ಪಿ ಸುಟ್ಟು ಕಪ್ಪಾದ ನೀರು ನೀರಿಗೇತಕೆ ಬಣ್ಣವಿಲ್ಲ? ನಗರೀಕರಣದ ಕೊಳಕಿನೊಂದಿಗೆ ಮೋರೆಯ ಸೇರಿ, ಹಳಸಿ ಪಡೆಯುವದಿಲ್ಲವೆ ಬೇಡದ ಬಣ್ಣ ನಿಜ, ನೀರು ವರ್ಣರಹಿತ ಕಾಪಾಡಿದರೆ ಪರಿಸರ, ಸಾಧ್ಯ ಸುಂದರ ಬಣ್ಣವೂ ಸಹಿತ; ತಪ್ಪಿದರೆ, ಬಯಲಾಗುವದು ಶುದ್ಧ ನೀರಿನ ಅಭಾವದ ಬಣ್ಣ! ******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-9 ಸೇವಾನಿರತರ ಕೈ ಬಲಪಡಿಸಿ ‘ಧಿಡೀರ್ ಲಾಕ್ ಡೌನ್ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿತು’ ಎಂದು ಕೆಲವರು ಹಳಿಯುತ್ತಾ, ಮರುಗುತ್ತಾ ಕುಳಿತಿದ್ದಾರೆ. ಸರಕಾರ ಅವರಿಗೆ ಇದ್ದಲ್ಲಿಯೇ ಅನ್ನಾಹಾರ ನೀಡಲು ಹಲವು ಕ್ರಮ ಕೈಗೊಂಡಿದೆ. ಇಸ್ಕಾನ್, ಅದಮ್ಯಚೇತನ, ಇಂಪೋಸಿಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ( ನನ್ನ ಅರಿವಿಗೆ ಬಂದಷ್ಟನ್ನೇ ಉಲ್ಲೇಖಿಸಿದ್ದೇನೆ)… ಅನೇಕ ಸಹೃದಯಿಗಳು ಸರಕಾರದ ಕೆಲಸಕ್ಕೆ ಪೂರಕವಾಗಿ ಕಾರ್ಮಿಕರ, ನಿರ್ಗತಿಕರ ನೆರವಿಗೆ ಶ್ರಮಿಸುತ್ತಿವೆ. ಇಂತಹ ಸೇವಾಕಾರ್ಯದಲ್ಲಿ ತೊಡಗಿರುವ ಮೈಸೂರಿನ ಯೋಗ ಶಿಕ್ಷಕರಾದ ಶ್ರೀಹರಿಯವರನ್ನು ಮಾತನಾಡಿಸಿದೆ..ಲಾಕ್ ಡೌನ್ ಶುರುವಾದಾಗ ಮನೆ ಇದ್ದವರು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳಬಹದು. ಮನೆ ಇಲ್ಲದವರು ಏನು ಮಾಡಬೇಕು ಎಂದು ನಾನು ನನ್ನಂತಹ ಎರಡು ಸಾವಿರ ಸಮಾನ ಮನಸ್ಕರು ಚಿಂತಿಸಿದೆವು. ಸರಕಾರದಿಂದ ಪರ್ಮಿಶನ್ ತೆಗೆದುಕೊಂಡು, ಮಾಸ್ಕ ಧರಿಸಿ ಇಡೀ ಮೈಸೂರು ನಗರ ಸರ್ವೆ ಮಾಡಿದೆವು. ಎಲ್ಲೆಲ್ಲಿ ಕಟ್ಟಡ ಕಾರ್ಮಿಕರು, ನಿರ್ಗ ತಿಕರು, ವೃದ್ಧರು ಇದ್ದಾರೆಯೋ,ಅಂಥವರನ್ನು ಹುಡುಕಿದೆವು. ನಮ್ಮ ತಂಡದಲ್ಲಿ ಎಲ್ಲ ವೃತ್ತಿಯವರಿದ್ದಾರೆ. ಕೇಟರರ್ಸ ಅಡುಗೆ ಮಾಡುತ್ತಾರೆ. ಅವುಗಳನ್ನು ದಿನದಲ್ಲಿ ಮೂರು ಸಲ ಅಗತ್ಯವಿದ್ದವರಿಗೆ ಉಳಿದವರು ವಿತರಿಸುತ್ತಿದ್ದೇವೆ. ನಮ್ಮ ತಂಡದಲ್ಲಿರುವ ಹದಿನೈದು ಆಯುರ್ವೇದ ವೈದ್ಯರು ಪೋನ್ ಮೂಲಕ ಕೌನ್ಸಲಿಂಗ್ ಮಾಡುತ್ತಿದ್ದಾರೆ. ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಹದಿನೈದು ಯುವ ಜನರು ಸರಕಾರದಿಂದ ಬರುವ ನಿಖರವಾದ ಮಾಹಿತಿಗಳನ್ನು ಫೇಸ್ ಬುಕ್ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ…ಎಲ್ಲ ಚಟುವಟಿಕೆಗಳು ದಾನಿಗಳ ನೆರವಿನಿಂದ ನಡೆಯುತ್ತವೆ. ಇಡೀ ದೇಶ ನಮ್ಮ ಮನೆಯಿದ್ದಂತೆ. ಎಲ್ಲರನ್ನೂ ಜೋಡಿಸಿಕೊಂಡು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಾ ಕೊರೋನಾ ಬಿಕ್ಕಟ್ಟನ್ನು ಗೆಲ್ಲಲೆತ್ನಿಸುತ್ತಿದ್ದೇವೆ. ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವ ಮನೋಭಾವ ಬೇಡ. ಸಾರ್ವಜನಿಕರ ಸಹಕಾರವೂ ಇರಲಿ… ಎನ್ನುವ ಇಂತಹ ಸದ್ದಿಲ್ಲದೇ ಸೇವಾಕಾರ್ಯ ಮಾಡುತ್ತಿರುವ ಎಲ್ಲರೂ ಸ್ಯುತ್ಯಾರ್ಹರು. ಕೊರೋನಾ ಸೋಂಕು ತಗಲುವ ಭೀತಿ ನಿಮಗಿಲ್ಲವೇ? ಎಂದು ಶ್ರೀಹರಿಯವರನ್ನು ಕೇಳಿದ್ದೆ. . ‘ಸೋಂಕಿತರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತಿರುವ ವೈದ್ಯರೇ ನಮಗೆ ಮಾದರಿ. ಅವರು ಈಗ ತೆಗೆದುಕೊಳ್ಳುತ್ತಿರುವ ರಿಸ್ಕಿನ ಪ್ರಮಾಣಕ್ಕೆ ಹೋಲಿಸಿದರೆ ನಾವು ತೆಗೆದುಕೊಳ್ಳುವ ರಿಸ್ಕ ತುಂಬಾ ಕಡಿಮೆ ಪ್ರಮಾಣದ್ದು. ಮಾಸ್ಕ, ಗ್ಲೌಸ್ ಹಾಕಿಕೊಂಡು ಶುಚಿತ್ವ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೇವೆ.. ಇಂತಹ ಸೇವಾಕಾರ್ಯದಲ್ಲಿ ದೊರಕುವ ಆತ್ಮತೃಪ್ತಿಗೆ ಬೆಲೆಕಟ್ಟಲಾಗದು’. ಎಂದರು ಶ್ರೀಹರಿಯವರು. ಮಾನವೀಯತೆಯ ಹೆಬ್ಬಾಗಿಲು ತೆರೆಯುವುದು ಇಂತಹ ಕಷ್ಟಕಾಲದಲ್ಲಿಯೇ … ತೆರೆದಿದೆ ಮನೆ ಓ ಬಾ ಅತಿಥಿ ಎಂದು ಯಾರೂ ಈಗ ಹಾಡುವಂತಿಲ್ಲ .ಕೊರೊನಾ ಎಂಬ ಬೇಡದ ಅತಿಥಿ ಬಂದರೇನು ಮಾಡುವುದು ಎಂಬ ಭಯ ಎಲ್ಲರ ಮನದೊಳಗೆ. ಈ ಬೇಸಿಗೆಯಲ್ಲಿ ಯಾರ ಮನೆಗೂ ಯಾವ ಅತಿಥಿಗಳು ಬರಲಾರರು. ಆದ್ದರಿಂದ ಅತಿಥ್ಯಕ್ಕೆ ಮೀಸಲಿಟ್ಟ ಒಂದಿಷ್ಟು ಹಣ ದವಸ ಧಾನ್ಯಗಳನ್ನು ಅನುಕೂಲ ಇದ್ದವರು ಪ್ರತಿ ಊರು, ನಗರಗಳಲ್ಲಿ ನಡೆಯುವ ಇಂತಹ ಸೇವಾಕಾರ್ಯಗಳಿಗೆ ನೀಡಿದರೆ ಕಷ್ಟದಲ್ಲಿರುವವರು ನೆಮ್ಮದಿಯ ನಿಟ್ಟುಸಿರಿಟ್ಟಾರು ಅಲ್ವೇ? ********* ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ ಬಂದೇನಿ ಬಂಧುರದ/ ಬಳಗದಾಗೆಲ್ಲರ ಬಾಯಾಗ ಬೆಣ್ಣಿಯಾಗೇನಿ/ ಬಂದೇನಿ ಮುತ್ತಾಗಿ ಮಾಲೆಯ ಕಟ್ಟಲು// ಹ್ಯಾಂಗರ ತೀರಿಸಲಿ ತವರಿನ ಋಣವ ಅವ್ವ ಅಪ್ಪನ ಮಮತೆಯ ಬೆಳಕನ ಅಣ್ಣ ತಮ್ಮರ ಒಲವಿನ ಹೊಳೆಯನು ಸಾವಿರ ಜನುಮಕು ಋಣವ ತೀರಿಸಲಾರೆ// *******

ಕಾವ್ಯಯಾನ Read Post »

You cannot copy content of this page

Scroll to Top