ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ನೂರ್ ಇನಾಯತ್ ಖಾನ್ ಚಂದ್ರಶೇಖರ್ ಮಂಡೆಕೋಲು ಮೂರು ದಿನಗಳ ಕಾಲ ನನ್ನನು ಈ ಕೊರೋನಾ ರಜೆ ‘ನೂರ್ ಇನಾಯತ್ ಖಾನ್’ ನಾಝಿ ಹೋರಾಟದ ಆರ್ದ್ರ ಕಾವ್ಯವನ್ನು ಓದಲು ಹಚ್ಚಿತು. ನನ್ನ ಓದಿನ ಮಿತಿಯಲ್ಲಿ ನಾನು ಗ್ರಹಿಸಿದ ಕಿರು ಬರಹವಿದು.      ಧರ್ಮ ಹಾಗೂ ಜನಾಂಗ ಶ್ರೇಷ್ಠತೆಯ ಭ್ರಷ್ಠ ಸಿಂಡ್ರೋಮ್ ಇಂದು ನಿನ್ನೆಯದಲ್ಲ.ನಾಳೆ ಹೋಗುತ್ತದೆಂಬ ಖಾತ್ರಿಯೂ ಇಲ್ಲ;ಆ ಮಾತು ಬೇರೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಝಿಗಳ ನಡೆಸಿದ  ಮಾರಣ ಹೋಮಕ್ಕೆ ಯಾವತ್ತೂ ಕ್ಷಮೆ ಇಲ್ಲ.ಅತ್ಯಾಚಾರಕ್ಕೊಳಪಡಿಸಿ ಸಜೀವ ದಹಿಸುವ ಅವರ ಕ್ರೌರ್ಯವೊಂದು ಹಿಂಸೆಯೆಂಬ ಸಣ್ಣ ಪದದಲ್ಲಿ ನೋಡಲಾಗದಷ್ಟು ಭಯಂಕರ.ಇವುಗಳನ್ನೆಲ್ಲ ತಲಸ್ಪರ್ಶಿ ಅಧ್ಯಯನಗಳೊಡನೆ ಕೃತಿಕಾರ ನಮ್ಮ ಮುಂದಿಡುತ್ತಾರೆ ನೂರ್ ಳ ಬಾಲ್ಯದಲ್ಲಿ ಆಕೆಯ ತಂದೆತಾಯಿಯರು ಪ್ರಭಾವಿಸಿದ್ದನ್ನು ನಾನು ವಿಶೇಷವಾಗಿ ಗ್ರಹಿಸಿರುವೆ.ಭಾರತೀಯನಾದ ತಂದೆಯಿಂದ ಬಳುವಳಿಯಾಗಿ ಬಂದ ಸಂಗೀತ,ಕಲೆ,ಸಾಹಿತ್ಯ,ಓದು,ಬರಹಗಳು,ಸೂಫಿ ತತ್ವ ಮತ್ತು ಪ್ರವಚನಗಳು ಆಕೆಯ ಅಂತರಂಗಿಕ ವ್ಯಕ್ತಿತ್ವವನ್ನು ವಿಕಸಿಸಿದ್ದರೆ ತಾಯಿಯ ಪ್ರಭಾವದಿಂದ ಬಂದ ಪ್ರತಿರೋಧದ ಮಧ್ಯೆಯೂ ಕೆಚ್ಚಿನಿಂದ ಬದುಕುವ ಛಲ,ಕಷ್ಟಗಳನ್ನು ಎದುರಿಸುವ ಧೈರ್ಯ ಇವೆಲ್ಲವನ್ನು ತಾಯಿಯಿಂದ ಬಂದದ್ದೆಂದು ಗುರುತಿಸಬಹುದು.ಆ ಕಾರಣಕ್ಕಾಗಿಯೇ ಮುನ್ನುಡಿಯಲ್ಲಿ ಡಾ.ರಹಮತ್ ತರೀಕೆರೆ ಯವರು ತಾಯಿ ನೋರಾ ಬೇಕರ್ ಅವರನ್ನು ‘ಅದೃಶ್ಯ ನಾಯಕಿ’ ಎಂದೇ ಕರೆದಿದ್ದಾರೆ.ಅತ್ಯಂತ ಪ್ರಜ್ಞಾವಂತ ನಾಗರಿಕರೆಂದು ಕರೆಯಲ್ಪಡುವ ಫ್ರೆಂಚ್ ಜನರ ಒಡನಾಟ,ಅಲ್ಲಿಯ ಶಿಕ್ಷಣ,ಬ್ರಿಟನ್ ಕಲಿಸಿಕೊಟ್ಟ ಅನೇಕ ಅನುಭವಗಳು,ಸೂಕ್ಷ್ಮ ಹಾಗೂ ಸಂವೇದನಪೂರ್ಣವೂ ಅತ್ಯಂತ ಪ್ರ್ಯಾಕ್ಟಿಕಲ್ ಆಗಿ ಬದುಕುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾದದ್ದು ಅವಳಿಗೆ ದೊರೆತ ಶಿಕ್ಷಣದಿಂದ ಎಂದು ಗ್ರಹಿಸಬಹುದು.ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡಿದರೆ ಈಕೆ ಟಿಪ್ಪು ವಂಶಸ್ಥಳಾಗಿರುವುದರಿಂದ ನಮ್ಮ ನೆಲದವಳೆಂಬ ಹೆಮ್ಮೆ ಸಹಜ.ಆದರೆ ಆ ವಂಶಸ್ಥರ ಗುಣವೊಂದೇ ಈಕೆಯನ್ನು ಹೋರಾಟಗಾರ್ತಿಯನ್ನಾಗಿ ರೂಪಿಸಿತೆ?ಆ ಹಿನ್ನೆಲೆಯಲ್ಲಿ ಈ ಕೃತಿಯನ್ನೋದುವಾಗ ಆಕೆಯ ವಿದೇಶಿ ಶಿಕ್ಷಣ, ತಾಯಿಯ ಪ್ರಭಾವ,ವಿದೇಶಿ ಪರಿಸರ ಸಾಕಷ್ಟು ಪ್ರಭಾವಿಸಿ ಅವಳನ್ನು ಒಬ್ಬ ಧೀರೆಯನ್ನಾಗಿ ರೂಪಿಸಿದ್ದವೆನ್ನುವುದನ್ನು ಕೃತಿಕಾರರು ಇನ್ನಷ್ಟು ವಿವರಗಳನ್ನು ದಾಖಲಿಸಬಹುದಿತ್ತೇನೊ ಅನಿಸಿತು. ನಾಝಿಗಳ ಕ್ರೌರ್ಯ,ಯುದ್ಧ ಷಡ್ಯಂತ್ರಗಳು,ಯುದ್ಧಕಾಲದ ಭೀಬತ್ಸ ಇವನ್ನೆಲ್ಲ ಯುದ್ಧಭೂಮಿಕೆಯಲಿರುವಂತೆಯೇ ಬರೆದ ಮಂಡೆಕೋಲು ಅವರು  ಮನುಷ್ಯರನ್ನು ಕೊಲ್ಲಲೆಂದೇ ಕಟ್ಟಿದ ಕಾರ್ಖಾನೆಗಳ ನಾಡು ಎಂದು ಕರೆದಿರುವುದು ಸರಿ ಎನಿಸುತ್ತದೆ.   ಕೃತಿಯು ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಚಾರಿತ್ರಿಕ ಪಠ್ಯವು ಆಗಿರುವುದು ಕೃತಿಕಾರನ ಜಾಣ್ಮೆಯನ್ನು ತೋರಿಸುತ್ತದೆ. ಮಂಡೆಕೋಲ ಅವರು ೨೩ ತಲೆಬರಹಗಳನ್ನು ಕೊಟ್ಟು ಪ್ರತಿಯೊಂದೂ ನಮ್ಮೊಳಗೊಂದು ಚಂದದ ಒಳನೋಟಗಳನ್ನು ಗ್ರಹಿಸುವ ಮನೋಭೂಮಿಯನ್ನು ಸಿದ್ಧಗೊಳಿಸುತ್ತವೆ.ಚರಿತ್ರೆಯ ಅಧ್ಯಯನವಾದರೂ ಭಾಷಾ ಪ್ರಯೋಗ ಸೃಜನಶೀಲ ಲೇಖಕನಂತಿದೆ.ಕೆಲವು ಸಾಲುಗಳನ್ನು ಹೈಲೈಟರ್ ನಿಂದ ಮಾರ್ಕಿಸುತ್ತ ಓದಬೇಕೆನಿಸುತ್ತದೆ. ಈ ತವರು ನೆಲದ ನೂರ್ ಟಿಪ್ಪುವಿನ ವಂಶಜಳೆಂದು ಗುರುತಿಸುವಷ್ಟೇ ಪ್ರಬಲವಾಗಿ ನೂರ್ ಳ ಅಜ್ಜ ಟಿಪ್ಪು ಎಂದು ಹೇಳಲೇಬೇಕಾದಷ್ಟು ಧೀರ ನೀರೆ ನೂರ್.ಯುದ್ಧಗಳೆಂದರೆ ಸಾಮ್ರಾಜ್ಯ ವಿಸ್ತರಣೆ ಮಾತ್ರವಲ್ಲ,ಧರ್ಮದ ಅಹಮ್ಮಿನ ಕೋಟೆಯನೆತ್ತರಿಸುವುದು ಮಾತ್ರವಲ್ಲ,ಅಸಾಧಾರಣ ಪ್ರತಿಭೆಗಳನ್ನು,ಅಸಾಮಾನ್ಯ ವ್ಯಕ್ತಿತ್ವಗಳನ್ನು,ಸಾಮಾನ್ಯರ ಬದುಕನ್ನು,ಒಂದರ್ಥದಲ್ಲಿ ಜನಾಂಗಗಳನ್ನೇ ಧ್ವಂಸಿಸಿ ಸಂಭ್ರಮಿಸುವ ಉನ್ಮಾದವೆಂದು ಅನಿಸುತ್ತದೆ. ನೂರ್ ಕುರಿತಾಗಿ ಓದಲು ಇದೊಂದು ಸುಸಂದರ್ಭ.ಜೀವಾಣುಯುದ್ಧಗಳು ನಡೆಯಬಹುದಾದ ಸಾಧ್ಯತೆಯ ಶಂಕೆಗಳನ್ನು ತಳ್ಳಿ ಹಾಕುವಂತಿಲ್ಲವೆಂಬುದನ್ನರಿಯುತ್ತ ಸ್ವಾತಂತ್ರ್ಯದ ಮಹತ್ವ ಮತ್ತು ಹೋರಾಟದ ಧೀಶಕ್ತಿಗೆ ನೂರ್ ನಮಗೆ ಬೆಳಕ ದೀಪ ಹಿಡಿದು ನಿಂತಿದ್ದಾಳೆ. ಡಾ.ರಹಮತ್ ತರೀಕೆರೆ ಅವರ ಅದ್ಭುತ ಮುನ್ನುಡಿಯಲ್ಲಿ ಹಲವು ಚಾರಿತ್ರಿಕ ವಿದ್ಯಮಾನಗಳನ್ನು ಜೋಡಿಸಿ ಕೊಟ್ಟಿದ್ದಾರೆ.ಬೆನ್ನುಡಿಯ ಕಿರು ಬರಹವಾಗಿ ಡಾ.ಪುರುಷೋತ್ತಮ ಬಿಳಿಮಲೆಯವರು ಚಂದದ ಬೆಳಕನ್ನು ರಾಷ್ಟ್ರೀಯ ಪ್ರಜ್ಞೆಯಲ್ಲಿ ಗ್ರಹಿಸಿಕೊಂಡು ಓದುವ ವರ್ತಮಾನದ ತಲ್ಲಣಗಳಿಗೆ ಎದೆಯೊಡ್ಡುವ ಬೆನ್ಬರಹವನ್ನು ಬರೆದಿದ್ದಾರೆ.ಒಟ್ಟಂದದಲಿ ಪ್ರತಿಯೊಬ್ಬರೂ ಓದವಂತಹ ಅಪರೂಪದ ಕೃತಿ.ಮಹಿಳೆಯರಂತೂ ಓದಲೇಬೇಕಾದ ಕೃತಿಯೆಂದರೆ ತಪ್ಪೆನಿಸದು.ಆದರೆ ಧೂಳು ಒರೆಸಿದ ಕನ್ನಡಕ ಧರಿಸಬೇಕಷ್ಟೆ. ಇನ್ನು ಕೃತಿಕಾರರ ಕುರಿತಾಗಿ ನಾಲ್ಕು ವಿಚಾರಗಳು.. ಒಬ್ಬ ಜೀವಪರ ಮಾತ್ರ ಮನುಷ್ಯಪ್ರೇಮದ ಒಳಹೊಕ್ಕು ಸಂವೇದನೆಗಳನ್ನು ಸಂಯೋಜಿಸಿ ಕೃತಿ ರಚಿಸಬಲ್ಲ.ಕೃತಿಕಾರ ಈ ವಿಚಾರದಲ್ಲಿ ಅಭಿನಂದನಾರ್ಹ. ಕೆಲವು ಸಾಲುಗಳಂತೂ ಕರುಳನ್ನು ತಟ್ಟುತ್ತವೆ.ಕಣ್ತೇವಗೊಳಿಸುತ್ತವೆ.ಗಂಟಲುಬ್ಬಿ ವಿಷಮಯಗೊಳಿಸಿ ಸಂಕಟಕ್ಕೆ ತಳ್ಳುತ್ತವೆ.ಇದು ನಾನು ಅನುಭವಿಸಿದ್ದು .. ಜಾಗತಿಕ ಇತಿಹಾಸದ ನಾಯಕಿ ನೂರಳಿಗೆ ಬದುಕುಳಿದಿದ್ದರೆ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವ ಅದಮ್ಯ ಬಯಕೆ ಇತ್ತು.  ನೂರ್ ಕುರಿತು ಮಹತ್ವದ ದಾಖಲೆಗಳೊಡನೆ,ಶೋಧದ ಹಾದಿಯಲ್ಲಿ ಹಲವನ್ನು ಹೆಕ್ಕಿ,ಮಾಹಿತಿ ಸಂಗ್ರಹಿಸಿ ನಮ್ಮ ಮನಸ್ಸಿನಾಳಕ್ಕಿಳಿಯುವಂತೆ  ನಿಲುಕಿಸಿರುವುದು ಮಂಡೆಕೋಲು ಸರ್ ಭಾಷೆಯೊಳಗೊಂದು ಜೀವಂತಿಕೆ ಇದೆ ಎಂಬುದನ್ನು ತೋರಿಸುತ್ತದೆ.ಓದು ಮುಗಿಯುತ್ತ ಬಂದಂತೆಲ್ಲ ಕಣ್ಹನಿಗಳೊಡನೆ ಹೆಚ್ಚು ವಿನೀತ ಹಾಗೂ ಹೆಚ್ಚು ಮನುಷ್ಯಳನ್ನಾಗಿ ಮಾಡುವ ಕೃತಿಯೆಂದು ನಾನು ಅಂದುಕೊಂಡಿರುವೆ. ಗೆಳೆಯ,ಗೆಳತಿಯರೆ ತುಂಬ ಚಂದದ ನಿರೂಪಣೆಯಿಂದ ಬಹಳಷ್ಟು ಸೂಕ್ಷ್ಮ ಅಧ್ಯಯನದೊಂದಿಗೆ ಹೆಣೆದುಕೊಂಡಿರುವ ಈ ಕೃತಿಯನ್ನು ನೀವೂ ಓದಬೇಕೆಂದು ಬಯಸುವೆ. ಕೃತಿಕಾರನಿಗೊಂದು ಸಲಾಮ್.. ********** ದಾಕ್ಷಾಯಿಣಿ ವಿ.ಹುಡೇದ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾ ಮೆಚ್ಚಿದ ಪುಸ್ತಕ

ಯಾದ್ ವಶೇಮ್ ನೇಮಿಚಂದ್ರ ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ ಸಾಹಿತ್ಯ ರಚನೆಗೆ ಬೇಕಾದ ಅವಶ್ಯಕ ಅಂಶಗಳು ಕೂಡ. ೧. ದೃಷ್ಯೀಕರಣ : ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಬರೆಯುವುದು. ಬೆಂಗಳೂರಿನ ಗೋರಿಪಾಳ್ಯದ ಸ್ಮಶಾನದಿಂದ ಹೊರಟು ಜರ್ಮನಿ, ಇಂಗ್ಲೆಂಡ್, ಅಮೇರಿಕಾ ಕೊನೆಗೆ ಇಸ್ರೇಲ್ ಮುಟ್ಟಿದ ನಿರಂತರ ಪ್ರವಾಸ, ಅಧ್ಯಯನ ಮತ್ತು ಆ ಕಾಲದ ಆಗುಹೋಗುಗಳ, ರಣಘಟನೆಗಳ ಸಂಶೋಧನೆಗಳನ್ನು ಎದುರಿಗೆ ತೋರಿಸುವಂತೆ ಬರೆದದ್ದು, ಚಿತ್ತದಲ್ಲಿ ಕೊರೆದು ಮನಸ್ಸಿನಲ್ಲಿ ಉಳಿಯುತ್ತದೆ. ನಾನೂ ಕೂಡ ಲೇಖಕಿಯ ಜೊತೆಗೆ ಪ್ರಯಾಣಿಸಿದ್ದೆನೇನೋ ಅನ್ನುವ ಭ್ರಾಂತಿ ಉಂಟಾಗುವಂತೆ ಬರೆದ ಅದ್ಭುತ ಶೈಲಿ. ೨. ಭಾವನೆಗಳನ್ನು ತಟ್ಟುವುದು : ಯಾದ್ ವಶೇಮ್ ಓದುವಾಗ, ಯಹೂದಿ ಬಾಲಿಕೆ ಮತ್ತವಳ ತಂದೆಯನ್ನು ಬೆನ್ನಟ್ಟಿದ ನಾಜಿಗಳ ದುಷ್ಕ್ರತ್ಯ, ಕ್ರೂರತೆ, ಹಿಂಸೆ ಹೃದಯವನ್ನು ಹಿಂಡಿಬಿಡುತ್ತದೆ. ಹೆದರಿಕೆ, ಸಂಕಟ ತಂತಾನೇ ಉಂಟಾಗಿ ಒಂದು ರೀತಿಯ ಆರ್ದ ಭಾವ ಮನದಲ್ಲಿ ಸ್ರವಿಸಿ ಕರುಣಾರಸ ಗೊತ್ತಾಗದೇ ಹರಿಯತೊಡಗುತ್ತದೆ. ಗುರಿ ತಲುಪಿ ತನ್ನವರನ್ನು ಹುಡುಕಿ ತೆಗೆದು ಶತಮಾನದಿಂದ ದೂರಾಗಿದ್ದ ಹೃದಯ ಒಂದಾದಾಗ ನಾಯಿಕೆಯ ಮತ್ತು ಲೇಖಕಿಯ ಕನಸು ನೆನಸಾಗುತ್ತದೆ. ಅವರಿಗಾದಷ್ಟೇ ಸಂತೋಷ, ಆತ್ಮತೃಪ್ತಿ ಓದುಗರೂ ಅನುಭವಿಸುತ್ತಾರೆ. ದುಃಖ ಕೊಡವಿ ಮೇಲೆದ್ದಂತೆ ಮನ ಹಗುರಾಗುತ್ತದೆ. ೩. ಭವಿಷ್ಯದ ಚಿಂತನೆ : ಯಾದ ವಶೇಮ್ ಗತಕಾಲವನ್ನು ಹೇಳುವದರೊಂದಿಗೆ ಭವಿಷ್ಯದ ಚಿಂತನೆ ಮಾಡುತ್ತದೆ. ಲೇಖಕಿಯೇ ಬರೆದಂತೆ “ಅಂದು ಹೊತ್ತಿ ಉರಿಯುತ್ತಿತ್ತು ಜರ್ಮನಿ. ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ಅಮೇರಿಕೆಯಲ್ಲಿ, ಇಸ್ರೇಲದಲ್ಲಿ, ಯುರೋಪದಲ್ಲಿ. ‘ಅಹಿಂಸೆಯೇ ಪರಮ ಧರ್ಮ’ ಎಂದು ಜಗತ್ತಿಗೆ ಸಾರಿದ ಭಾರತದಲ್ಲೂ ಕೂಡ. ನಮ್ಮ ನಡುವೆ ಎಲ್ಲಿ ಬೇಕಾದರೂ ಹುಟ್ಟಿ ಬಿಡಬಲ್ಲದು ಈ ಪೈಶಾಚಿಕ ಮನೋಭಾವದ ಉಗ್ರತಾಂಡವ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್ ನನ್ನು ತಡೆಹಿಡಿಯುವ ಹೊಣೆ ನಮ್ಮದು”. ಮನುಷ್ಯನ ಪಾಶವೀ ಕೃತ್ಯದ ಬಗೆಗೆ ಈ ಮಾತು ನೇಮಿಚಂದ್ರರ ಹೃದಯದಿಂದ ಬಂದದ್ದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಈ ಪುಸ್ತಕ ಕನ್ನಡಿಯಾಗಬಲ್ಲದು. ೪. ಸಮಾಜಕ್ಕೆ ಹಿಡಿದ ಕನ್ನಡಿ : ಸೋಲನ್ನು ಸವಾಲಾಗಿ ಸ್ವೀಕರಿಸಿ ಹೋರಾಡುವದರ ಬಗೆಗೆ, ಗುರಿಯನ್ನು ಮುಟ್ಟುವದರ ಬಗೆಗೆ ಈ ಕೃತಿ ಆದರ್ಶಪ್ರಾಯ. ಓದುಗರಿಗೆ ಅನುಸರಿಸುವ ಹಂಬಲ, ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುತ್ತದೆ. ಸಮಾಜದಲ್ಲ ನಡೆಯುವ ವಿದ್ಯಮಾನಗಳನ್ನು ಮುಲಾಜಿಲ್ಲದೆ ಚರ್ಚಿಸುವ ಧೈರ್ಯವನ್ನು ತೋರುತ್ತದೆ ಈ ಪುಸ್ತಕ. ೫. ಬರೆಯುವ ಶೈಲಿ ಮತ್ತು ಭಾಷೆ : ಉಪಯೋಗಿಸಿದ ಶಬ್ದಗಳು ಅತೀ ಸೂಕ್ತವಾದುವು. ಸಮಾನಾರ್ಥದ ಇಷ್ಟು ಸರಿಯಾದ ಇನ್ನೊಂದು ಪರ್ಯಾಯ ನುಡಿ ಇರಲಿಕ್ಕಿಲ್ಲ ಎನ್ನುವ ಭಾವನೆ ಬರುತ್ತದೆ. ಉದಾಹರಣೆಗೆ ಕೆಟ್ಟ ಸಂಬಂಧದ ಬಗೆಗೆ ಹೀಗೆ ಬರೆದಿದ್ದಾರೆ, ” ನನ್ನ ಅವನ ನಡುವೆ ಸಪ್ತಸಾಗರದ ಉಪ್ಪಿತ್ತು” ಅಂತ. ಎಷ್ಟೊಂದು ಆಳವಾದ ಅರ್ಥ. ಗಹನ ಅಧ್ಯಯನ, ಸಂಶೋಧನೆಗಳಿಂದ ಮಾತ್ರ ಇಂಥ ಕೃತಿ ರಚಿಸಲು ಸಾಧ್ಯ ಅಲ್ಲದೆ ಹೃದಯದ ಉಕ್ಕು ಭಾವನೆಗಳಲ್ಲಿ ಎದ್ದಿ ತೆಗೆದ ಭಾಷೆ ಉಪಯೋಗಿಸಿದಾಗ ಹೊರಬಂದ ಪುಸ್ತಕ ಯಾದ ವಶೇಮ್. ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಕಥಾನಾಯಕಿ ಕೊನೆಗೆ ಇಸ್ರೇಲದಲ್ಲಿ ತನ್ನ ಅಕ್ಕನನ್ನು ಹುಡುಕುವ ಪ್ರಯತ್ನದಲ್ಲಿ ಯಶ ಕಾಣುತ್ತಾಳೆ. ಆದರೆ ತಾಯಿ ಮತ್ತು ತಮ್ಮ ಹಿಟ್ಲರ್ ಸೃಷ್ಟಿಸಿದ ನರಕದಲ್ಲಿ ಅಂತ್ಯ ಕಂಡಿರುತ್ತಾರೆ. ಅವರು ಅನುಭವಿಸಿದ ನರಕಯಾತನೆಯಷ್ಟೇ ನಾಯಕಿಗೆ ಲಭ್ಯ. ಒಟ್ಟಿನಲ್ಲಿ ಕರುಳ ಕಲಕುವ ಇತಿಹಾಸ ಮಾನವ ನಿರ್ಮಿತ. ಅದು ಎಂದೂ ಭವಿಷ್ಯದಲ್ಲಿ ಪುನರಾವರ್ತನೆ ಆಗಬಾರದೆಂದು ಎಲ್ಲರ ಆಶಯ. ******* ವಿನುತಾ ಹಂಚಿನಮನಿ

ನಾ ಮೆಚ್ಚಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಮಲೆಗಳಲ್ಲಿ ಮದುಮಗಳು ಕುವೆಂಪು ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ “ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು ಮನೆತನಗಳು ನೂರಾರು ಕಥೆಗಳೇ ಒಳಗೊಳಗೇ ನೆಡೆದುಕೊಂಡಿರುವ ಕಾದಂಬರಿ ಇದು ಇನ್ನೂರು ವರ್ಷದ ಹಿಂದಿನ ಕಥೆಯಾದರು ಇಂದಿಗೂ ಕೂಡ ಪ್ರಸ್ತುತವೆನಿಸುವ ಘಟನೆಗಳು ಇಲ್ಲಿ ಬಂದು ಹೋಗುತ್ತದೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ಮೊದಲೇ ಬರೆದಿರುವ ಕುವೆಂಪುರವರು ಇಲ್ಲಿನ ವಿಷಯ, ಘಟನೆ, ಸ್ಥಳ, ವ್ಯಕ್ತಿ, ವಿಶೇಷ ಯಾವುದು ಕೂಡ ಮುಖ್ಯವಲ್ಲ ಹಾಗೇ ಯಾವುದು ಕೂಡ ಮುಖ್ಯವಲ್ಲ ಎನ್ನುವಂತೆ ಬರೆದಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ ಅಂದ್ರೆ ಹಣವಿರುವ ಯಜಮಾನರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯಾಗಲಿ, ಸಿಂಭಾವಿ ಭರಮೈಹೆಗ್ಗಡೆ, ಬೆಟ್ಟಳ್ಳಿ ಕಲ್ಲಯ್ಯ ಗೌಡರಾಗಲಿ, ಹೂವಳ್ಳಿ ವೆಂಕಣ್ಣನಾಗಲಿ, ಕೋಣೂರು ಗೌಡರಾಗಲಿ ಹೀಗೆ ಅನೇಕ ದಣಿಗಳು ಪಾದ್ರಿ ಜೀವರತ್ನಯ್ಯರಾಗಲಿ ಯಾರು ಮುಖ್ಯರಲ್ಲ. ಹಾಗೆಯೇ ಇಲ್ಲಿ ಯಾರೂ ಅಮುಖ್ಯರಲ್ಲ ಹೊಲೆಯ ಸಿಂಭಾವಿ ನಾಯಿ ಗುತ್ತಿಯಾಗಲಿ, ಕೋಣೂರು ಐತ-ಪೀಂಚಲು, ಆ ಪುಡಿಸಾಬೀಗಳು, ಸೆರೆಗಾರ ಚಿಂಕ್ರ, ಅಕ್ಕಣಿ-ಪಿಜಿಣ, ತಿಮ್ಮಪ್ಪ ಹೆಗ್ಗಡೆ ಹೀಗೆ ಇನ್ನು ಹತ್ತಿಪ್ಪತ್ತು ಪಾತ್ರಗಳು ಅಮುಖ್ಯರಲ್ಲ. ಹಾಗೇ ಇಲ್ಲಿ ಯಾವುದು ಯಃಕಶ್ಚಿತವಲ್ಲ! ಗುತ್ತಿಯ ನಾಯಿ ಹುಲಿಯ ಆಗಲಿ, ಕಾವೇರಿ ದುರಂತಕ್ಕೆ ಕಾರಣವಾದ ಹಾಗೂ ಕಥೆಗೆ ಹಲವು ತಿರುವು ಕೊಡ ಉಂಗುರವಾಗಲಿ, ಚಿಂಕ್ರ ಬಿಟ್ಟು ಹೋದ ಲ್ಯಾಟಿನ್ ಆಗಲಿ, ಜೀವರತ್ನಯ್ಯ ಪರಿಚಯಿಸಿದ ಬೀಸೆಕಲ್ಲು(ಬೈಸಿಕಲ್) ಆಗಲಿ, ಹುಲಿಕಲ್ ನೆತ್ತಿ ಆಗಲಿ, ಹಾಗೇ ಕಾದಂಬರಿ ಅಲ್ಲಿ ಬರುವ ಸಣ್ಣ ಮಕ್ಕಳ ಪಾತ್ರವಾಗಲಿ ಯಾವುದು ಯಃಕಶ್ಚಿತವಲ್ಲ ಇಲ್ಲಿ ಎಲ್ಲಕ್ಕೂ ಇದೇ ಅರ್ಥ, ಯಾವುದು ಅಲ್ಲ ವ್ಯರ್ಥ ಅನ್ನೋ ಹಾಗೇ ಪ್ರತೀ ಸನ್ನಿವೇಶಗಳು ತಿಳಿಸುತ್ತಾ ಹೋಗುತ್ತೇ ಈ ಕಾದಂಬರಿ ಅಲ್ಲಿ ಹೇಳೋ ವಿಷಯಗಳು ಸಾಕಷ್ಟಿವೆ ಕುವೆಂಪುರವರೇ ಸಾಕಷ್ಟು ವಿಷಯಗಳನ್ನ ಬರೆದು ಒಂದು ದೊಡ್ಡ ಕಾದಂಬರಿ ಬರೆದು ಬಿಟ್ಟಿದ್ದಾರೆ, ಅದರಲ್ಲಿ ಇರುವ ಅಂಶಗಳನ್ನ ನನಗೆ ತೋಚಿದ ಹಾಗೆ ತಿಳಿಸುವೆ! ಕಾದಂಬರಿ ಅಲ್ಲಿ ನಾವು ಕಾಣದಿದ್ದ ಅದೆಷ್ಟೋ ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳು, ಜಾತಿವ್ಯವಸ್ಥೆ, ಧರ್ಮ ಪ್ರಚಾರ ಹಾಗೂ ಆ ಧರ್ಮ ಪ್ರಚಾರಕ್ಕೋಡ್ಡುವ ಆಮಿಷ, ಉಳ್ಳವರ ದರ್ಪ, ಹೆಣ್ಣಿನ ದೇಹದ ಮೇಲಿನ ಮೋಹಕ್ಕೆ ಏನೆಲ್ಲಾ ಮಾಡುತ್ತಾರೆ ಕೊಲೆ,ಅತ್ಯಾಚಾರ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಚಿತ್ರಿತವಾಗುತ್ತ ಹೋಗುತ್ತೆ ಮಲೆನಾಡಿನಂತ ಆ ಕಾಡಿನ ಸುತ್ತಮುತ್ತಣದಲ್ಲಿ ಇದ್ದ ಗೌಡಿಕೆ ಯಜಮಾನಿಕೆ ಮೇಲೆ ಬೆಳಕು ಚೆಲ್ಲುತ್ತೆ, ತಮ್ಮ ಸ್ವಾರ್ಥಕ್ಕಾಗಿ ಹಾಗೂ ತಮ್ಮ ಮನೆತನದ ಗೌರವಕ್ಕಾಗಿ ಏನೂ ಬೇಕಾದರೂ ಮಾಡುವ ಅಂದಿನ ಕಾಲದ ದುಡ್ಡು ಇರುವರ ದರ್ಪ, ಗತ್ತು ಹಾಗೇ ಮೋಸದ ರೀತಿಯಲ್ಲಿ ಕಪಟವಾಗಿ ಆಸ್ತಿ ಸಂಪಾದನೆ ಮಾಡೋ ಮಂಜಯ್ಯ ಭಟ್ಟರಂತ ವ್ಯಕ್ತಿಗಳ ಪರಿಚಯ ಮಾಡುತ್ತೆ ಅಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಇದ್ದ ಬ್ರಾಹ್ಮಣ, ಹೆಗ್ಗಡೆ , ಗೌಡ, ಹೊಲೆಯ-ಬಿಲ್ಲ-ನಾಯಕ-ಬೆಸ್ತ ಹೀಗೆ ಇನ್ನೂ ಅನೇಕ ಜಾತಿವ್ಯವಸ್ಥೆ ಬಗ್ಗೆ ತಿಳಿಸಿದರೆ, ಮೇಲಿನ ವರ್ಗದವರು ಕೆಳಗಿನ ವರ್ಗದವರನ್ನ ಓದು ಬರದ ಜನರನ್ನ ಹೇಗೆಲ್ಲಾ ಅನ್ಯಾಯ, ಶೋಷಣೆ ಹಾಗೂ ತಾರತಮ್ಯ ಮಾಡ್ತಾ ಇದ್ರು ಅನ್ನೋದರ ಬಗ್ಗೆ ಆಗಲೇ ತಿಳಿಸಿದ್ದಾರೆ. ಉಳ್ಳವರು, ದುಡ್ಡಿರುವರು ಮಾಡಿದ್ದು ಏನೇ ಮಾಡಿದರೂ ಸರಿ ತಮ್ಮ ಜೀತದಾಳುಗಳು ಮಾಡೋದು ತಪ್ಪು ಅನ್ನೋ ಸಿದ್ಧಾಂತ ಎದ್ದು ಕಾಣುತ್ತೆ….. ಮಲೆಗಳಲ್ಲಿ ಮದುಮಗಳು ಹೆಚ್ಚು ಪ್ರೇಮಕಥೆಯನ್ನ ಹೊಂದಿರುವ ಒಂದು ಸುಂದರ ಕಾದಂಬರಿ ಓದುತ್ತಿದ್ದರೆ ಮಜಾ ಕೊಡೋ ಪ್ರೇಮ ಕಥನ ಅಂದ್ರೆ ಗುತ್ತಿ-ತಿಮ್ಮಿ, ಐತಾ-ಪೀಂಚಲು, ಹಾಗೆಯೇ ಮಲೆನಾಡಿನ ದೊಡ್ಡವರ ಪ್ರೇಮಕಥೆ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇದರಲ್ಲಿ ಸಾಹಸಮಯ ಪ್ರೇಮಕಥನ ಅಂದ್ರೆ ಗುತ್ತಿ ಮತ್ತು ತಿಮ್ಮಿಯರದ್ದು ಹೊಲೆಯರಾದ ಗುತ್ತಿ ತನ್ನ ಅತ್ತೆಯ ಮಗಳನ್ನ ಪ್ರೇಮಿಸಿ ಅವಳನ್ನ ಸಂಧಿಸಿ, ಅಪಹರಿಸಿ ಹೇಗೋ ಮದುವೆಯಾಗಿ ಮತ್ತೇ ತನ್ನ ಹೆಂಡತಿಯಿಂದ ದೂರ ಆಗಿ ಈ ಗೌಡರ, ಪೊಲೀಸರ ಹೆದರಿಕೆಯ ಮದ್ಯೆ ಊರನ್ನೇ ಬಿಟ್ಟು ದೇಶಾಂತರ ಹೋಗುವ ಇವನ ಜೀವನದ ಬದುಕು ಅಷ್ಟೇ ಸಾಹಸವು ಸ್ವಾರಸ್ಯಕರವು ಹೌದು ಇಲ್ಲಿ ಗುತ್ತಿಯ ಮನೋಬಲ ಹಾಗೇ ಅವರ ನಿಜವಾದ ಪ್ರೇಮ ಬದುಕನ್ನ ಎಲ್ಲೆಲ್ಲೋ ಕರೆದುಕ್ಕೊಂಡು ಹೋಗಿ ಎಲ್ಲ ಸವಾಲುಗಳನ್ನು ಎದುರಿಸುವ ಇವರ ಜೋಡಿ ಕೊನೆಗೆ ಒಂದಾಗಿ ತಮ್ಮ ಬದುಕಿಗಾಗಿ ಊರನ್ನೇ ಬಿಡುವ ಹಾಗೇ ಆಗುತ್ತೆ ಇನ್ನಾ ಐತಾ ಮತ್ತು ಪೀಂಚಲು ದಂಪತಿಯ ಪ್ರೇಮಕಥೆ ಗಂಡ-ಹೆಂಡತಿಯ ಇರಬೇಕಾದ ಮುಗ್ದತೆ, ಸರಸ-ವಿರಸ ಓದುಗುರನ್ನ ಸೆಳೆಯುತ್ತೆ, ಗಂಡನ ಅನುಮಾನ ಮುನಿದ ಗಂಡನನ್ನ ಸಮಾಜಯಿಸುವ ಹೆಂಡತಿಯ ಜಾಣತನ ಇವರಿಬ್ಬರ ಜೋಡಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಹಾಗೆಯೇ ಸ್ವಾಮಿ ಭಕ್ತಿ ಕೂಡ ಈ ದಂಪತಿ ಪಾತ್ರದಲ್ಲಿ ಕಂಡು ಬರುತ್ತೆ ಇನ್ನಾ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇಲ್ಲಿ ಹೆಣ್ಣಿನ ದಿಟ್ಟತನ ಹಾಗೂ ಗಂಡು ತನ್ನ ಪ್ರೇಮವನ್ನ ಉಳಿಸಿಕೊಳ್ಳಲು ಮಾಡಬೇಕಾದ ಸಾಹಸ ಎಲ್ಲಾ ಸಮ್ಮಿಳಿತವಾಗಿದೆ, ಚಿಕ್ಕಂದಿನಿಂದ ಇರೋ ಪ್ರೇಮಕಥೆ ಅದೂ ಇಲ್ಲದೆ ಹಿಂದಿನ ಜನುಮದ ನಂಟು ಇರೋ ಜೋಡಿ (ಏಳೇಳು ಜನ್ಮದ ನಂಟು) ಪ್ರೀತಿ ಅಜ್ಜಿಯನ್ನ ಮನೆಯವರನ್ನ ಬಿಟ್ಟು ಬರೋ ಚಿನ್ನಕ್ಕ ಕಾಡಿನ ದಾರಿಯಲ್ಲಿ ನಡೆದು ಹುಲಿಕಲ್ ನೆತ್ತಿ ಹತ್ತಿ ತನ್ನ ಭಾವನ ಕೈ ಹಿಡಿಯುವ ಆಸೆ ತನ್ನವರ ಬಿಟ್ಟು ಬಂದೇ ಅನ್ನೋ ಹೆಣ್ಣಿನ ಸಹಜ ನೋವು ಚೆನ್ನಮ್ಮನ ಪಾತ್ರದಲ್ಲಿ ಅನಾವರಣ ಆಗುತ್ತೆ, ತಾನು ಪ್ರೀತಿಸಿದ ಹುಡುಗಿಯ ಕೈ ಹಿಡಿಯಲು ಎದುರಾಗುವ ಸವಾಲುಗಳನ್ನು ಎದುರಿಸಲು ಏನೇನೋ ತಂತ್ರ, ಸಾಹಸ ಮಾಡಿ ಮುಕುಂದಯ್ಯ ಕೊನೆಗೆ ತಾನು ಬಯಸಿದ್ದನ್ನೇ ದಕ್ಕಿಸಿಕೊಳ್ಳುವ ಅವನ ದೃಢ ಸಂಕಲ್ಪ ಇಷ್ಟ ಆಗುತ್ತೆ ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಅಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧ, ಪ್ರೀತಿ ತ್ಯಾಗ ಗುತ್ತಿ ಮತ್ತು ಹುಲಿಯ(ನಾಯಿ) ಓದುಗರನ್ನ ಕಾಡುತ್ತೆ ಕಾಮದಿಂದ ಆಚೆಗೆ ಪ್ರೀತಿಯನ್ನ ಗೆಲ್ಲುವ ಸನ್ನಿವೇಶಗಳು ಒಂದು ಕಡೆ ಆಗರೆ ಆ ಕಾಮದಾಸೆಗೆ ಬಲಿ ಆಗೋ ಕಾವೇರಿಯ ದುರಂತ ಕಥೆ ಇನ್ನೊಂದು ಕಡೆ, ಕಾವೇರಿಯ ಮೇಲೆ ನಡೆಯುವ ಅತ್ಯಾಚಾರ ಇತ್ತೀಚಿನ ದೇಶದ ಪರಿಸ್ಥಿತಿ ಹಿಡಿದ ಕೈಗನ್ನಡಿ ಅನ್ನೋ ಹಾಗೇ ಇದೆ ಅಂದಿನ ಆ ಕಾವೇರಿಯ ಕಣ್ಣೀರಿನ ಕಥೆ…. ಈಗಲೂ ಕೂಡ ಅಂತಹ ದುಷ್ಟ ಚಿಂಕ್ರ-ಸಾಬೀಗಳ ಜನರು ನಮ್ಮ ನಡುವೆ ಇಬ್ಬರೇ ಅನ್ನೋದೇ ಶೋಚನೀಯ….! ಇನ್ನೂ ನಾಗಕ್ಕನ ಪಾತ್ರ ಸ್ವಲ್ಪ ಹತ್ತಿರ ಆಯ್ತು ಯಾಕಂದ್ರೆ ತನ್ನದು ಏನೇ ದುರಂತ ಕಥೆ ಇದ್ರೂ ತನ್ನ ಬದುಕೇ ಮುಳ್ಳಿನ ಮೇಲಿನ ನಡೆಯಾಗಿದ್ರು ಇನ್ನೊಬ್ಬರ ಅಂದ್ರೆ ಚಿನ್ನಮ್ಮನ ನಲಿವಿನಲ್ಲೇ ತನ್ನ ನೋವ ಮರೆತು ಅವಳಿಗಾಗಿ ಪಡಿಸೋ ಅವಳ ಮನಸುಇಷ್ಟ ಆಗುತ್ತೆ ಈ ಕಾದಂಬರಿ ಒಳಗೆ ನೋವು-ನಲಿವು, ಮದುವೆ-ಸಾವು, ಪ್ರೀತಿ-ಫಜೀತಿ, ಹಣ-ದರ್ಪ-ಅಧಿಕಾರ-ಮೋಹ, ಆಶ್ಚರ್ಯ-ಭವಿಷ್ಯ-ಶಿಕ್ಷಣ ಹೀಗೆ ಅನೇಕ ಮಜಲುಗಳಿಂದ ಕೂಡಿದೆ……. ಯಾವುದು ಮುಖ್ಯ ಅಲ್ಲ, ಅಮುಖ್ಯ ಅಲ್ಲ ಅನ್ನೋ ಹಾಗೆ ಎಷ್ಟೋ ವಿಷಯಗಳಿವೆ ಹೇಳಲು ಆದರೂ ನನಗೆ ಓದಿದ ಅನುಭವ ನನ್ನ ಗ್ರಹಿಕೆಯೇ ಬಂದ ಅಂಶಗಳು ಇದರಲ್ಲಿವೆ ಧನ್ಯವಾದಗಳು ಸಂಗಾತಿ ಪತ್ರಿಕೆಗೆ ಮತ್ತು ಸಂಪಾದಕರಿಗೆ ನಾನು ಓದಿದ್ದನ್ನ ನೆನೆದು ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ….. ******************** ಮದನ್ ಕುಮಾರ್

ನಾನು ಓದಿದ ಕಾದಂಬರಿ Read Post »

ಕಾವ್ಯಯಾನ

ಕಾವ್ಯಯಾನ

ಕನಸಿನೂರಿನ ಅಪ್ಪ ಐಶ್ವರ್ಯ ಎಲ್.. ಬೆಳಕ ಹೊತ್ತು ಬಂದ ಸೂರ್ಯನೂ ಹೋಗುವ ಹೊತ್ತಾಯಿತು ಹೊರಗೆ ಹೋದ ಅಪ್ಪನು ಬಂದಾನೂ, ಕೈ ತುಂಬ ಬೊಂಬೆ ತಿಂಡಿಗಳ ತಂದಾನೂ ಅವರಿವರ ಮನೆಯ ಅಪ್ಪಂದಿರಂತೆಯೇ ನನ್ನಪ್ಪನೆಂದು ಕಣ್ಣಳತೆಗೆ ಎಟುಕುವವರೆಗೂ ಮನೆಯ ಮುಂದಿನ ಕಂಬವನೇರಿ ಕಾದು ಕುಳಿತೆ, ಬೆಳೆದು ಬುದ್ದಿಬರುವವರೆಗೆ…… ಏರಿದ ಕಂಬಕ್ಕಾದರೂ ಅರಿವಾಗಿರಬಹುದು ಅಪ್ಪನೆಂಬ ಕನಸು ಬೇರೂರಿದ್ದು ನನ್ನೊಳಗೆ, ಅರಿವಾಗಲೇ ಇಲ್ಲ ದೇವರಿಗೆ, ಅಪ್ಪನ ಕರೆದೊಯ್ದೆಬಿಟ್ಟಿದ್ದನು ನಂಗೆ ಬುದ್ದಿಬರುವುದರೊಳಗೆ………. ಜಡಕು ಕೂದಲಿಗೆ ಜುಟ್ಟುಕಟ್ಟಿ, ಕಪ್ಪು ಕಾಡಿಗೆಯಲಿ ಕಾಸಗಲದ ಬೊಟ್ಟಿಟ್ಟು ನನ್ನಿಷ್ಟದ ಫ್ರಾಕನ್ನೆ ತೊಟ್ಟು, ಕುಣಿವಾಗ ಕೆನ್ನೆಯ ತುಂಬೆಲ್ಲಾ ಮುತ್ತಿಟ್ಟು ಅಮ್ಮನಿಗೂ ಕದ್ದು ಮುಚ್ಚಿ ಚಾಕಲೇಟ್ ಕೊಟ್ಟು, ಭುಜದ ಮೇಲೆ ನನ್ನ ಹೊತ್ತು ಎಲ್ಲರಂತೆ ನನ್ನನ್ನೂ ಶಾಲೆಗೆ ಹೊತ್ತೊಯ್ಯುವುದು ಬಾಕಿ ಇತ್ತು ಅಪ್ಪನಿಗೆ ಅದ್ಯಾವ ಕೆಲಸ ಬಾಕಿ ಇತ್ತೊ ನಾಕಾಣೆ ಅಪ್ಪನ ಕಾಯುವಿಕೆಯಲಿ ಏರಿದ ಕಂಬ, ಇಳಿದ ನನ್ನ ಕಣ್ಣೀರಿನಲಿ ಹಸಿರಾಯ್ತು ಇಂದಲ್ಲ ನಾಳೆ ಅಪ್ಪ ಬಂದೇ ಬರುವನೆಂಬ ನಂಬಿಕೆ ಮಾತ್ರ ಹುಸಿಯಾಯ್ತು…… ಪುಟ್ಟ ಹೆಜ್ಜೆ ಇಟ್ಟಾಗ ಅಂಗಾಲಿಗೆ ಮುತ್ತಿಕ್ಕಿ, ಬೊಗಸೆಯಲಿ ಪಾದ ಹಿಡಿದು, ಅಮ್ಮ ಗದರಿದಾಗ ಅಮ್ಮನಿಗೇನೆ ಗದರಿಸಿ ನಿನ್ನ ಎದೆಗಪ್ಪಿ ನಾ ಮಲಗಿದಾಗ ಸುರಿದ ಜೊಲ್ಲು ಒರೆಸಿ ಉಪ್ಪು ಮೂಟೆಯ ಮಾಡಿ, ಊರೆಲ್ಲ ತಿರುಗಿಸಿ, ಮುದ್ದಿಸಿ ಕೈಬೆರಳ ಹಿಡಿದು ನಡೆಸುವುದರಿಂದ ಹಿಡಿದು ಕಾಲಿಗೆ ಕಾಲುಂಗುರ ಹಾಕಿಸಿಕೊಳ್ಳುವವರೆಗೂ ನೀ ಜೊತೆಗಿರಬೇಕಿತ್ತೆಂಬ ಆಸೆ ಇಂದಿಗೂ ಬದುಕಿದೆ ಆದರೇನೂ ಮಾಡುವುದು ಬಯಕೆ ಇಡೆರಿಸಲು ನೀನೆ ಬದುಕಿಲ್ಲ ……… ನೀ ಪ್ರಪಂಚಕ್ಕೆ ತಂದ ಪುಟ್ಟ ಜೀವವೇ ನಿನಗೆ ಪ್ರಪಂಚವೆಂದು ಪ್ರತಿ ಹೆಜ್ಜೆಯಲು ಮಗಳ ಮುಂದಿನ ಭವಿಷ್ಯಕ್ಕೆಂದು ರಾಣಿಯಂತೆ ಬೆಳೆದ ಮಗಳಿಗೆ, ರಾಜಕುಮಾರನ ತಂದು ಮದುವೆ ಮಾಡುವ ಕನಸ ಕಂಡು, ಮಗಳು, ಅಳಿಯ ಮೊಮ್ಮಕ್ಕಳೆಂದು ಅಜ್ಜನಾಗುವವರೆಗೂ ನೀನಿರಬೇಕಿತ್ತು ಅಪ್ಪ…… ನಾನೂ ದೊಡ್ಡವಳಾಗಿದ್ದೇನೆ, ನಿನ್ನಷ್ಟೇ ಎತ್ತರಕ್ಕೆ ಬೆಳೆದು ನೀನಿರಬೇಕಿತ್ತೆಂಬ ಬಯಕೆಯು ನನ್ನಷ್ಟೆತ್ತರಕೆ ಬೆಳೆದಿದೆ ನನ್ನೊಟ್ಟಿಗೆ ಕಾದು ಆದರೂ….. ಅಪ್ಪ ನೀನಿರಬೇಕಿತ್ತು ನನ್ನೊಟ್ಟಿಗೆ…… ಅಜ್ಜನಾಗಿ ನನ್ನಂಥವಳನ್ನೆ ಹೆಗಲ ಮೇಲೆ ಹೊರುವವರೆಗೆ….. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜರೂರು ಬಂದೊದಗಿದೆ ಗೌರಿ.ಚಂದ್ರಕೇಸರಿ ದೇವ ಮಾನವರೆಲ್ಲ ಏನಾದರು? ತಪದಲ್ಲಿರುವರಾ ಇಲ್ಲಾ ಮೌನ ವ್ರತದಲ್ಲಿರುವರಾ? ಇಲ್ಲಾ ನಿದ್ರೆಯಲ್ಲಿ ಕಳೆದು ಹೋದರಾ? ಸೂರ್ಯ ಚಂದ್ರರುದಿಸುವುದು ತಮ್ಮಿಂದ ಎಂದವರು ಸ್ಪರ್ಷ ಮಾತ್ರದಿಂದಲೇ ಕಾಯಿಲೆಗಳ ಮಾಯ ಮಾಡುವೆ ಎಂದವರು ಅಂಗೈ ನೋಡಿ ತಾಳೆ ಹಾಕುವವರು ಪೂಜೆಗೈದು ಪಾಪವ ತೊಳೆಯುವವರು ಏನಾದರು? ಕೂಗು ಕೇಳುತ್ತಿಲ್ಲವೆ ಹಾಹಾಕಾರ ಕಾಣುತ್ತಿಲ್ಲವೆ? ಭೂ ಮಂಡಲವನ್ನೇ ಆವರಿಸಿದೆ ಅನಿಷ್ಠ ಎಲ್ಲೆಲ್ಲೂ ಹಿಡಿ ಅನ್ನಕ್ಕಾಗಿ ಚಾಚಿವೆ ಕೈಗಳು ಕುಣಿಕೆ ಹಿಡಿದು ಕಾದಿದೆ ಸಾವು ಬನ್ನಿ ನಿಮ್ಮ ಜರೂರು ಈಗ ಬಂದೊದಗಿದೆ ಹೊತ್ತಿರುವ ಬೆಂಕಿಗೆ ನಿಮ್ಮ ಪ್ರಭಾವಳಿಯ ತಂಪನೆರೆಯಿರಿ ವಿಶ್ವದ ವಿಷವನೆಲ್ಲ ಹೀರಿ ಬಿಡಲಿ ನಿಮ್ಮ ಮಂತ್ರ ದಂಡ ******

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ತುಂಗಭದ್ರ ಶ್ರೀಮತಿ ಎಂ.ಕೆ.ಇಂದಿರಾ ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ! ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ ಘಟನೆಗಳಿಗೆ ಮನಸ್ಸು ತೆರೆದುಕೊಂಡರೆ ಮತ್ತೆ ಜೀವನ ಹಸನಾಗಬಹುದು. ಕವಿದ ಕಾರ್ಮೋಡಗಳು ಸರಿದು ಶುಭ್ರ ನಿಲಾಗಸದಂತಾಗಬಹುದು ಜೀವನ. ಕಷ್ಟಕಾಲದಲ್ಲಿ ರವಷ್ಟು ಸಹನೆಯೇ ದೊಡ್ಡ ಕುತ್ತಿನಿಂದ ಪಾರುಮಾಡಬಹುದು. ಹಾಗೆಯೇ ಪ್ರೀತಿಸುವ ಸ್ನೇಹಿತರು – ಕುಟುಂಬವಿದ್ದರೆ ಎಂತಹುದೇ ಕಷ್ಟದ ಸಮಯದಲ್ಲೂ ಜೀವ ಉಳಿದು, ಅದು ಪುನರ್ಜನ್ಮವಾದೀತು! ಇದಷ್ಟು ಅನಿಸಿದ್ದು, ೧೯೬೩ರಲ್ಲೇ ಬರೆದ ಪುಸ್ತಕ “ತುಂಗಭದ್ರ”, ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ಎಂ.ಕೆ.ಇಂದಿರಾ ಅವರ ಮೊದಲ ಕಾದಂಬರಿಯನ್ನ ಓದಿದಾಗ! ಅಚನಕ್ಕಾಗಿ ಈ ಕಾದಂಬರಿ ಹಿಂದಿನ ಕಥೆಯನ್ನ ಯಾವುದೋ ಜಾಲತಾಣದಲ್ಲಿ ಓದಿದಾಗ ರೋಮಾಂಚನವೆನಿಸಿತು! ಪ್ರಕಾಶಕರು ಹಸ್ತಪ್ರತಿಯನ್ನು ಇಟ್ಪ ಬ್ಯಾಗು ಮುಂಬಯಿಯ ಮಾಯಾನಗರಿಯಲ್ಲಿ ಕಳೆದು ಬಹಳಷ್ಟು ಹಳಹಳಿಸುವಂತಾದಾಗ, ಬೇರೆ ಯಾವುದೇ ರೀತಿಯ ಪ್ರತಿಗಳು ಇಲ್ಲದೆ, ಪ್ರತಿ ಮಾಡಲೂ ಯಾವುದೇ ಅನುಕೂಲವಿಲ್ಲದಂತಹ ಕಾಲಘಟ್ಟದಲ್ಲಿ ಇಂದಿರಾರವರು ಎದೆಗುಂದದೆ ಕೇವಲ 15 ದಿನಗಳಲ್ಲಿ ಪುನಃ ಸಂಪೂರ್ಣ ಕಾದಂಬರಿಯನ್ನ ಬರೆದು ಕೊಡುತ್ತಾರೆ. ಪ್ರಕಟಣೆಯಾಗುತ್ತಿದ್ದಂತೆ ಅಪಾರ ಮೆಚ್ಚುಗೆ ಪಡೆಯುತ್ತೆ. ತಕ್ಷಣವೇ ತಡ ಮಾಡದೆ ಅಮೇಜಾನ್ ನಲ್ಲಿ ಖರೀದಿಸಿ ಒಂದೇ ಏಟಿಗೆ ಇಡೀ ರಾತ್ರಿ ಓದಿ ಮುಗಿಸಿದೆ! ಕೃಷ್ಣ ವೇಣಿ, ಮುದ್ದುರಾಮ, ರಾಘು, ತುಂಗಾ-ಭದ್ರ ರೆಂಬ ಹುಟ್ಟು ಕುರುಡು ಅವಳಿಗಳು, ಶಂಭು, ಭಾಗಮ್ಮ, ಮಂದಾ, ದುಗ್ಗಾಭಟ್ಟರು, ನಾಗಾಭಟ್ಟರು, ಮೂಕಮ್ಮ, ಮಧುರಾ, ಶೇಷಾಚಾರರು, ತುಳಸಿ, ರಾಘುವಿನ ಅತ್ತೆ.. ಹೀಗೇ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚಳಿಯದಂತಿವೆ!… ಸಂಬಂಧಗಳು, ಪ್ರೀತಿ ಇವೆಲ್ಲವೂ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲು! ನಾಗಾಲೋಟದಲ್ಲೋಡುವ ಕಾಲಘಟ್ಟದಲ್ಲಿರುವ ನಮಗೆ ಈ ಕಾದಂಬರಿ ಓದಿದಾಗ ಇವರಿಗೆಲ್ಲ ಜೀವನವನ್ನ ನಿಧಾನಗತಿಯಲ್ಲಿ ಅನುಭವಿಸೋ ತಾಳ್ಮೆ ಅದೆಷ್ಟಿದ್ದೀತು ಅನ್ನಿಸದಿರಲಾರದು! 60ರ ದಶಕದಲ್ಲಿ ಬರೆದ ಕಾದಂಬರಿ. ಓದಿಸಿಕೊಂಡು ಹೋಗುತ್ತೆಯೇ ಅನ್ನುವುದೇ ನನ್ನ ಅನುಮಾನವಾಗಿತ್ತು. ಅದರೆ ಆದು ಯಾವ ಕಾಲಘಟ್ಟದಲ್ಲಿಯಾದರೂ ಓದಿಸಿಕೊಳ್ಳುವಂತಹದು ಎಂದು ಓದಿ ಮುಗಿಸುವಾಗ ಕಣ್ಣಂಚಿನ ತೇವ ಸಾಬೀತು ಪಡಿಸಿತು! ಹೆಣ್ಣಿಗೆ ಶಿಕ್ಷಣದ ಅಗತ್ಯವೇ ಇಲ್ಲವೆಂದುಕೊಂಡಿದ್ದ ಕಾಲಮಾನದಲ್ಲಿ, ಮಲೆನಾಡಿನ ಹಳ್ಳಿಗಾಡಿನ ಜೀವನ, ಅಲ್ಲಿನ ಪರಿಸರ, ಹೆಣ್ಣು-ಗಂಡಿನ ತುಮುಲಗಳು, ಆಗಿನ ಮೂಢತೆ ಮತ್ತು ಪ್ರಕೃತಿಯ ಚೆಲುವು ಕಣ್ಣಿಗೆ ಕಟ್ಪುವಂತೆ ಬರೆದಿದ್ದಾರೆ ಶ್ರೀಮತಿ ಇಂದಿರಾರವರು. ಖಂಡಿತವಾಗಿಯೂ ಓದಲೇಬೇಕಾದಂತಹ ಕಾದಂಬರಿ! “ಓಲ್ಡ್ ಇಸ್ ಗೋಲ್ಡ್” ಅನ್ನುವಂತಹ ಕೃತಿಯಿದು! ***************************** ಚೈತ್ರಾ ಶಿವಯೋಗಿಮಠ

ನಾನು ಓದಿದ ಕಾದಂಬರಿ Read Post »

ಇತರೆ

ಭಯವೇ ಅಪಾಯಕಾರಿ

ಕೊರೋನಾ ಮತ್ತು ಭಯ ಗಣೇಶಭಟ್,ಶಿರಸಿ ಕೊರೊನಾಕ್ಕಿಂತ ಅದರ ಕುರಿತಾದ ಭಯವೇ ಅಪಾಯಕಾರಿ ಕೊರೊನಾ ವೈರಸ್ ಸೋಂಕಿನ ಅಪಾಯದಿಂದ ಪಾರಾಗುವ ಅತ್ಯುತ್ತಮ ವಿಧಾನವೆಂದರೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೋಂಕಿಗೆ ಬಹುಬೇಗ ಬಲಿಯಾಗುತ್ತಾರೆ. ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಒಂದಿಲ್ಲೊಂದು ವಿಧದ ಅನಾರೋಗ್ಯ ಇದ್ದುದು ಕಂಡು ಬಂದಿದೆ ಹಾಗೂ ಅವರಲ್ಲಿ ಹೆಚ್ಚಿನವರು ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾದವರು. ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಾಮ, ಕಾಲಕಾಲಕ್ಕೆ ನೀರು ಸೇವನೆ, ಒಳ್ಳೆಯ ನಿದ್ದೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡರಹಿತವಾಗಿರಬೇಕು. ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆಂದು ವೈದ್ಯ ವಿಜ್ಞಾನ ಹೇಳುತ್ತದೆ. ಭಯ, ಆತಂಕಗಳಿಂದ ಬಳಲುತ್ತಿರುವ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ವಿವಿಧ ಗ್ರಂಥಿರಸ ( ಹಾರ್ಮೋನ್) ಗಳ ಸ್ರವಿಸುವಿಕೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಉದ್ದಿಗ್ನತೆಯಿಂದಾಗಿ ಉಸಿರಾಟದ ವೇಗ ಹೆಚ್ಚಿ ಆಳವಾದ ಶ್ವಾಸೋಚ್ಛಾಸ ಕ್ರಿಯೆ ನಡೆಯದೇ ಪುಪ್ಪುಸದಲ್ಲಿ ತುಂಬಿಕೊಂಡ ಮಲಿನ ವಾಯು ಹೊರಹೋಗದೇ ಅಲ್ಲಿಯೇ ಉಳಿದು ವಿವಿಧ ಸೋಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ. ಆಹಾರಕ್ಕಾಗಿ ಕೊಲ್ಲಲ್ಪಡುವಾಗ ಪ್ರಾಣಿಗೆ ಆಗುವ ಆತಂಕ, ಭಯಗಳಿಂದ ಅದರ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯೇ ಮಾಂಸಾಹಾರಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಪ್ರಮುಖ ಕಾರಣಗಳಲ್ಲಿ ಒಂದು. ಅದರ ದೇಹದಲ್ಲಿ ಕೂಡಾ ವಿವಿಧ ಗ್ರಂಥಿರಸ ಹಾಗೂ ರಾಸಾಯನಿಕಗಳ ಸ್ರವಿಸುವಿಕೆಯಾಗಿ ಅವು ರಕ್ತ ಮತ್ತು ಮಾಂಸದಲ್ಲಿ ಸೇರಿಕೊಳ್ಳುತ್ತವೆ. ಮನುಷ್ಯ ಇಂತಹ ಮಾಂಸವನ್ನು ತಿಂದಾಗ ಈ ರಾಸಾಯನಿಕಗಳು ಅವನ ದೇಹವನ್ನು ಸೇರಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಹಲ್ಲಿನ ರಚನೆ, ಬಾಯಿಯ ಲಾಲಾರಸ, ಜಠರದಲ್ಲಿ ಸ್ರವಿಸುವ ಆಮ್ಲ, ಕರುಳಿನ ಉದ್ದ ಮುಂತಾಗಿ ಮಾನವನ ಇಡೀ ಜೀರ್ಣಾಂಗ ವ್ಯವಸ್ಥೆ ಸಸ್ಯಾಹಾರ ಅದರಲ್ಲೂ ವಿಶೇಷವಾಗಿ ಹಣ್ಣು- ಹಂಪಲು – ತರಕಾರಿಗಳ ಸೇವನೆ ಮತ್ತು ಜೀರ್ಣಿಸಿಕೊಳ್ಳುವ ಸಲುವಾಗಿ ರೂಪುಗೊಂಡಿವೆ. ಇವ್ಯಾವವೂ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಪೂರಕವಾಗಿಲ್ಲ. ಆದರೂ ನಾಲಿಗೆಯ ಚಪಲದಿಂದ ಮಾಂಸಾಹಾರ ಸೇವಿಸುವ ಮಾನವರ ನಿಸರ್ಗ ವಿರೋಧಿ ಕ್ರಮವು ರೋಗನಿರೋಧಕ ಶಕ್ತಿ ಕುಗ್ಗಲು ಇನ್ನೊಂದು ಪ್ರಮುಖ ಕಾರಣ. ಜನರ ನಡುವೆ ಅಂತರವಿದ್ದಾಗ ಕೊರೊನಾ ವೈರಸ್ ಹರಡುವಿಕೆಗೆ ತಡೆ ಉಂಟಾಗುತ್ತದೆಂಬ ಕಾರಣದಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದೊಂದು ಕ್ರಮದಿಂದಲೇ ಕೊರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುತ್ತಿದ್ದಾರೆ. ಆದರೂ ಪಾಶ್ವಾತ್ಯ ದೇಶಗಳಲ್ಲಿ ಈ ರೀತಿ ಮಾಡುತ್ತಿದ್ದಾರೆಂಬ ಕಾರಣಕ್ಕಾಗಿ ಭಾರತದಲ್ಲೂ ಸಾಮಾಜಿಕ ಅಂತರ ಕಾಪಾಡುವದಕ್ಕಾಗಿ ಸಾರ್ವಜನಿಕ ಬದುಕನ್ನು ಸ್ಥಬ್ಧಗೊಳಿಸುವ ಯತ್ನ ನಡೆದಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ವಿಮಾನ, ರೈಲು, ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವ್ಯಾಪಾರ- ವಹಿವಾಟು , ಉದ್ಯಮ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ. ಸಮೂಹ ಮತ್ತು ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವ ವಿಧಾನಗಳಿಂದಾಗಿ ಸಾಮಾಜಿಕ ಅಂತರವನ್ನು ಕಾದುಕೊಳ್ಳಲು ಕೈಗೊಂಡ ಕ್ರಮಗಳಿಂದ ಸಿಗಬಹುದಾದ ಅಲ್ಪಸ್ವಲ್ಪ ಪ್ರಯೋಜನವೂ ನಿರರ್ಥಕವಾಗುತ್ತಿದೆ. ಯಾಕೆಂದರೆ ಕನ್ನಡದ ಸುದ್ದಿ ವಾಹಿನಿಗಳು ಜನರಲ್ಲಿ ಭಯಭೀತಿ ಬಿತ್ತುವ ಕಾರ್ಯ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ಧನಾತ್ಮಕವಾದ ಸುದ್ದಿಗಳಿಗೆ ಮಹತ್ವ ನೀಡುವ ಬದಲು ನಕಾರಾತ್ಮಕ ಸುದ್ದಿಗಳಿಗೇ ಮಹತ್ವ ನೀಡಲಾಗುತ್ತಿದೆ. ಲಾಕ್‍ಡೌನ್ ಮಾಡುವುದರಿಂದಲೇ ಕೊರೊನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವೆಂಬುದಾಗಿ ಕನ್ನಡ ಸುದ್ದಿ ವಾಹಿನಿಗಳು ಎರಡು ದಿನಗಳಿಡೀ ಪ್ರಚಾರ ಮಾಡಿದವು. ಸರ್ಕಾರಕ್ಕೆ ಸಲಹೆ ನೀಡಲು ಪೈಪೋಟಿ ನಡೆಸಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಗಾಡಿ ಮುಖ್ಯಮಂತ್ರಿಯವರು ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸುವಂತೆ ಮಾಡಲಾಗಿದೆ. ಈ ಸುದ್ದಿವಾಹಿನಿಗಳು ನಡೆಸಿದ ಚರ್ಚೆಗಳಲ್ಲಿ ನಿರ್ವಹಣಾಕಾರರು ತಮ್ಮ ಅಭಿಪ್ರಾಯಗಳನ್ನು ಹೇರುತ್ತಿದ್ದ ರೀತಿ, ಅವರು ಕೂಗಾಡುತ್ತಿದ್ದ ಪರಿ ಅಸಹ್ಯ ಹುಟ್ಟಿಸುತ್ತಿದ್ದವು. ಇವರೆಲ್ಲರೂ ಹಿಂದಿ ವಾಹಿನಿಯ ನಿರ್ವಹಣಾಕಾರರೊಬ್ಬರಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ಗೋಚÀರಿಸುತ್ತಿತ್ತು. ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಹಲವು ಸಕಾರಾತ್ಮಕ ಸಂಗತಿಗಳನ್ನು ಇವರು ಉಪೇಕ್ಷಿಸಿದ್ದು ಎದ್ದು ಕಾಣುತ್ತಿತ್ತು. ಕನ್ನಡ ಸುದ್ದಿವಾಹಿನಿಗಳ ಅಧ್ವಾನದಿಂದಾಗಿ ತಾವು ಮನೆಯಲ್ಲೇ ಕೂಡಿ ಹಾಕಿಕೊಂಡಿರಬೇಕಾಗುತ್ತದೆ. ಅಗತ್ಯದ ವಸ್ತುಗಳು ಸಿಗುವಂತೆ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿ 23 ರ ಸಾಯಂಕಾಲ ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಅಂಗಡಿಗಳೆದುರು ಮುಗಿ ಬೀಳುವ ಪರಿಸ್ಥಿತಿ ಕರ್ನಾಟಕದ ತುಂಬ ಕಂಡು ಬಂದಿತು. ಅನಗತ್ಯವಾಗಿ ಸೃಷ್ಟಿಯಾದ, ತಪ್ಪಿಸಬಹುದಾಗಿದ್ದ ಇಂತಹ ಜನದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾದುಕೊಳ್ಳುವ ಉದ್ದೇಶವೇ ವಿಫಲಗೊಂಡಿತ್ತು. ಕೊರೊನಾ ಸೋಂಕಿತರೆಲ್ಲರೂ ಸತ್ತೇ ಹೋಗುತ್ತಾರೆಂಬ ರೀತಿಯಲ್ಲಿ ಕನ್ನಡ ಸುದ್ದಿವಾಹಿನಿಗಳು ಪ್ರಸ್ತುತಪಡಿಸುತ್ತಿದ್ದಾರೆ. ಅತಿ ಹೆಚ್ಚು ಸಾವು ಸಂಭವಿಸಿದ ಇಟಲಿ ಮತ್ತು ಚೀನಾಗಳಲ್ಲಿ ಕೂಡಾ ಮರಣ ಹೊಂದಿದ ಸೋಂಕಿತರ ಪ್ರಮಾಣ ಶೇಕಡಾ 4 ನ್ನು ಮೀರಿಲ್ಲ. ಭಾರತದಲ್ಲಿ ಕೊರೊನಾದಿಂದ ಸಂಭವಿಸಿದ ಮರಣಗಳ ಸಂಖ್ಯೆಯನ್ನು ಬಿತ್ತರಿಸುವುದರ ಜೊತೆಗೇ ಗುಣಮುಖರಾದವರ ಸಂಖ್ಯೆ ಎಷ್ಟೊ ಪಟ್ಟು ಹೆಚ್ಚಿಗೆ ಇದ್ದರೂ ಕೂಡಾ ಅದನ್ನು ಹೇಳುವುದಿಲ್ಲ. ಮರಣ ಹೊಂದಿದವರಿಗೆ ತೀವ್ರ ಸ್ವರೂಪದ ಬೇರೆ ಯಾವುದಾದರೂ ಕಾಯಿಲೆ ಇತ್ತೇ ಎಂಬ ಕುರಿತಾಗಿ ಕೂಡಾ ಇವರು ಮಾಹಿತಿ ನೀಡದೇ ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿದ್ದಾರೆ. ವೈರಸ್ ಸೋಂಕಿತ ದೇಶಗಳ ಮಾಹಿತಿ ನೀಡುವಾಗ ಈ ಪೀಡೆ ನಿಯಂತ್ರಿಸಿರುವ ರಷಿಯಾ, ಉತ್ತರಕೋರಿಯಾ ಮುಂತಾದ ದೇಶಗಳ ಸಕಾರಾತ್ಮಕ ವಿಷಯಗಳನ್ನು ಉಲ್ಲೇಖಿಸುವ ಬದ್ಧತೆ ಈ ವಾಹಿನಿಗಳಿಗೆ ಇಲ್ಲವಾಗಿದೆ. ಇಡೀ ರಾಜ್ಯದ ಲಾಕ್‍ಡೌನ್‍ಗಾಗಿ ಪ್ರತಿಪಾದಿಸುವ ಟಿವಿ ವಾಹಿನಿಗಳಿಗೆ, ದಿನನಿತ್ಯ ದುಡಿದು ಉಣ್ಣ ಬೇಕಾದವರ ಸಂಕಷ್ಟದ ಕುರಿತು ಯೋಚಿಸಲೂ ಪುರುಷೊತ್ತಿಲ್ಲ. ಬೆಳೆದ ತರಕಾರಿ, ಹಣ್ಣು- ಹಂಪಲು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾನಿ ಅನುಭವಿಸುತ್ತಿರುವ ರೈತರ ಭವಣೆ ಕಾಣುವುದಿಲ್ಲ. ಅನಿವಾರ್ಯವಾಗಿ ವ್ಯವಹಾರ– ವಹಿವಾಟುಗಳನ್ನು ಬಂದ್ ಮಾಡುವ ಚಿಕ್ಕಪುಟ್ಟ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಚಿಲ್ಲರೆ ಮಾರುಕಟ್ಟೆಯ ವರ್ತಕರು, ಸಣ್ಣ ಉದ್ದಿಮೆಗಳ ಮಾಲೀಕರ ಸಂಕಷ್ಟ ಇವರಿಗೆ ಅರ್ಥವಾಗುವುದಿಲ್ಲ. ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ನಿಶ್ಚಿತ ಆದಾಯವಿರುವ ವರ್ಗದವರನ್ನು ಮನೆಯಲ್ಲೇ ಕೂಡಿ ಹಾಕುವುದರಿಂದ ಅವರಿಗೆ ಆರ್ಥಿಕ ತಲೆಬಿಸಿ ಇರದು.. ಈ ಸೌಲಭ್ಯ ಭಾರತದ 80% ಗೂ ಹೆಚ್ಚಿನ ಜನರಿಗೆ ಇಲ್ಲ. ಆದರೆ ಸಾಲದ ಕಂತು ಕಟ್ಟಲೇಬೇಕಾದ ರಿಕ್ಷಾ, ಟ್ಯಾಕ್ಸಿ ಮಾಲಿಕರಿಗೆ ದುಡಿಮೆಯ ಅವಕಾಶವನ್ನೇ ರದ್ದುಪಡಿಸಿದರೆ ಅವರ ಸಂಕಷ್ಟಕ್ಕೆ ಯಾವ ರೀತಿಯ ಪರಿಹಾರ ಸಿಗುವಂತೆ ಮಾಡಬಹುದೆಂಬ ಕುರಿತು ಈ ಸುದ್ದಿವಾಹಿನಿಗಳು ಚಿಂತನೆ ನಡೆಸುವುದಿಲ್ಲ. ಮಾರ್ಚ್ 31 ರೊಳಗೆ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತೇವೆಂಬ ಸರ್ಕಾರದ ಘೋಷಣೆಯ ಲಾಭ ಕೃಷಿಕರಿಗೆ ದೊರಕಬೇಕೆಂದರೆ, ಅವರು ಬೆಳೆದ ಮಹಸೂಲು ಮಾರಾಟವಾಗಬೇಕು. ಇಡೀ ದೇಶದಲ್ಲಿ ಲಾಕ್‍ಡೌನ್ ಇರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕೃತ್ರಿಮವಾಗಿ ಇಳಿಕೆ ಕಾಣುತ್ತಿರುವಾಗ ಸಾಲ ಮರುಪಾವತಿಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯ. ಈ ಕುರಿತಾಗಿ ಈ ಸುದ್ದಿವಾಹಿನಿಗಳು ಅಭಿಯಾನವನ್ನೇಕೆ ನಡೆಸುತ್ತಿಲ್ಲ ? ಜನತಾ ಕಫ್ರ್ಯೂ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜ್ಯಗಳು ಅಧಿಕಾರದ ದುರ್ಬಳಕೆ ಮಾಡಿದ್ದನ್ನು ಎತ್ತಿ ಹೇಳುವ ಬದಲಿಗೆ ಪೋಲೀಸರ ಹೇಳಿಕೆಗೆ ಮಹತ್ವ ನೀಡಲಾಯಿತು. ಸ್ವಯಂ ಪ್ರೇರಿತರಾಗಿ ಬಂದ್‍ನಲ್ಲಿ ಪಾಲ್ಗೊಳ್ಳಿ, ಇಲ್ಲವಾದಲ್ಲಿ ನಿಮ್ಮ ಮೇಲೆ ಕೇಸ್ ಹಾಕಲಾಗುವುದು ಎಂಬ ರಾಜ್ಯ ಪೋಲೀಸ್ ಮುಖ್ಯಸ್ಥರು, ಜಿಲ್ಲಾಪೋಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳೇ ಮಹತ್ವ ಪಡೆದವು. ಇದೇ ರೀತಿಯ ಹೇಳಿಕೆಗಳನ್ನು ಕೆಲವೆಡೆ ಪೋಲೀಸರು ಮೈಕ್ ಮೂಲಕ ಪ್ರಚಾರ ನಡೆಸಿದರು. ಒಂದೆಡೆ ಸುದ್ದಿ ವಾಹಿನಿಗಳಿಂದ ಬಿತ್ತರವಾಗುವ, ಭಯ ಹುಟ್ಟಿಸುವ ಅರ್ಧಂಬದ್ಧ ಮಾಹಿತಿಗಳು, ಇನ್ನೊಂದೆಡೆ ಅಧಿಕಾರಿಗಳ ದಬಾವಣೆಯಿಂದಾಗಿ ಕಳೆದ ರವಿವಾರದ ಜನತಾ ಕಫ್ರ್ಯೂ ಯಶಸ್ವಿಯಾದಂತೆ ಕಂಡೀತೇ ಹೊರತೂ ನೈಜವಾದ ಸ್ವಪ್ರೇರಣೆಯಿಂದಲ್ಲ. ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೋಲೀಸರು, ಮಾಧ್ಯಮದವರು, ಸೈನಿಕರು, ಸ್ವಯಂ ಸೇವಕರು, ಮುಂತಾದವರಿಗಾಗಿ ಕೃತಜ್ಞತೆ ಸಲ್ಲಿಸಲು ರವಿವಾರ ಸಂಜೆ 5 ಗಂಟೆಗೆ ನಡೆಸಿದ ಚಪ್ಪಾಳೆ ಮತ್ತು ಘಂಟನಾದ ಅಭಿಯಾನದ ಭಾವುಕತೆಗೆ ಒಳಗಾದ ಜನತೆ ವಾಸ್ತವವನ್ನು ಗಮನಿಸಲೇ ಇಲ್ಲ. ಮದ್ಯಪ್ರದೇಶದ ಸರ್ಕಾರವನ್ನು ಪತನಗೊಳಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಅನೈತಿಕ ವಿಧಾನದಿಂದ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಲು ಶ್ರಮಿಸಿದ ಪ್ರಧಾನಿಯವರ ಸ್ವಾರ್ಥ ಜನರಿಗೆ ಕಾಣಲೇ ಇಲ್ಲ. ದೇಶೀಯ ಪರಿಸ್ಥಿತಿಗೆ ಅನುಗುಣವಾಗಿ ಕೊರೊನಾ ವಿರುದ್ಧದ ಹೋರಾಟ ಕೈಗೊಳ್ಳದೇ, ಪಾಶ್ಚಾತ್ಯ ದೇಶಗಳ ಪದ್ಧತಿಯನ್ನು ಇಲ್ಲಿಯೂ ಅಳವಡಿಸಿ ಅಂತರಾಷ್ಟ್ರೀಯ ಮನ್ನಣೆಗಾಗಿ ನಡೆಸುವ ಪ್ರಯತ್ನವನ್ನು ಜನರು ಗಮನಿಸಲೇ ಇಲ್ಲ. ಕೇಂದ್ರ ಸರ್ಕಾರದ ಆಪ್ತವಲಯದವರು ಸಾಲಮರುಪಾವತಿ, ಮಾಡದಿರುವ ಕಾರಣಕ್ಕಾಗಿ ಸಮಸ್ಯೆಗೊಳಗಾದ ಯಸ್ ಬ್ಯಾಂಕ್‍ನ ಪುನಶ್ಚೇತನಕ್ಕಾಗಿ ಸರ್ಕಾರಿ ಸ್ವಾಮ್ಯದ ಎಸ್ ಬಿಐನ ನಿಧಿಯನ್ನು ಬಳಸಿದ್ದು ಜನರಿಗೆ ಅರ್ಥವೇ ಆಗಲಿಲ್ಲ. ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ಒಂದೇ ವಾರದಲ್ಲಿ ಧಾವಿಸಿ ಬಂದ ಕೇಂದ್ರ ಸರ್ಕಾರಕ್ಕೆ ಆರು ತಿಂಗಳಿನಿಂದಲೂ ಪರಿತಪಿಸುತ್ತಿರುವ ಸಹಕಾರಿ ರಂಗದ ಪಿ.ಎಮ್.ಸಿ ಬ್ಯಾಂಕ್‍ನ ಗ್ರಾಹಕರು ಕಾಣುವುದೇ ಇಲ್ಲ. ಕುಸಿಯುತ್ತಿರುವ ಅರ್ಥವ್ಯವಸ್ಥೆಯಿಂದ ಸಂಕಷ್ಠಕ್ಕೊಳಗಾಗಿರುವ ಜನಸಾಮಾನ್ಯರ ಮನಸ್ಸನ್ನು ಬೇರೆಡೆ ತಿರುಗಿಸುವ ಕ್ರಮವಾಗಿ ನಡೆಸುವ ಚಪ್ಪಾಳೆ ಅಭಿಯಾನದಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಸುದ್ದಿ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಯಾಕೆಂದರೆ ಅದರ ಮಾಲೀಕರುಗಳು ಮೊದಲ ಗುಂಪಿಗೆ ಸೇರಿದವರು. ಜನರು ಗುಂಪುಗುಂಪಾಗಿ ಸೇರಿ ಚಪ್ಪಾಳೆ, ಜಾಗಟೆ ಬಡಿಯುತ್ತಾ ಮೆರವಣಿಗೆ ಹೋಗಲು ಮಾಧ್ಯಮಗಳ ಕ್ಯಾಮರಾಗಳು ಪ್ರೇರಣೆ ನೀಡಿ, ಸಾಮಾಜಿಕ ಅಂತರ ಕಾಪಾಡುವ ಮೂಲ ಉದ್ದೇಶವನ್ನೇ ಮರೆಸಿವೆ. ವ್ಯಕ್ತಿ ಪೂಜೆ ಮತ್ತು ನಾಯಕರ ಕುರಿತು ಅಂಧಾಭಿಮಾನ , ಚಮಾಚಾಗಿರಿ ಮತ್ತು ನಾಯಕರ ಕುರಿತು ಚಪ್ಪಾಳೆ, ಶಂಖ ಧ್ವನಿ ಮುಂತಾದವುಗಳಿಂದ ಕೊರೊನಾ ಭೂತವನ್ನು (?) ದೂರ ಓಡಿಸಲು ಸಾಧ್ಯ. ಅಂಥವರಿಗೆ ಮಾರ್ಚ್ 22 ಅಮವಾಸ್ಯೆಯಾಗಿ ಕಾಣುತ್ತದೆ. (ಇನ್ನೂ 2 ದಿನ ತಡವಿದ್ದರೂ ಸಹ) ಸೋಂಕು ತಡೆಗಾಗಿ ಮುಖಕ್ಕೆ ಗವಸು ಧರಿಸಲು ಮಾಧ್ಯಮಗಳ ಪ್ರೇರಣೆಯೂ ಕಾರಣ. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಸ್ ಗಾಳಿಯಲ್ಲಿ ಸೇರಬಾರದೆಂಬ ಕಾರಣಕ್ಕೆ ಮುಖಕ್ಕೆ ಗೌಸ್ ಧರಿಸಬೇಕು. ಆದರೆ, ಆರೋಗ್ಯವಂತರು ಮುಖದ ಗವಸು ಧರಿಸಿ ಓಡಾಡುತ್ತಾರೆ. ಇದು ಗೊಡ್ಡು ಕಂದಾಚಾರಿಗಳ ಮಡಿಧಾರಣೆಯಂತಿದೆ. ಪೂಜೆ ಮತ್ತು ಊಟದ ಸಮಯದಲ್ಲಿ ರೇಷ್ಮೆ ಬಟ್ಟೆ ಧಾರಣೆ ಒಳಿತೆಂಬ ಕಾರಣಕ್ಕೆ , ತಿಂಗಳುಗಟ್ಟಲೇ ತೊಳೆಯದೇ ಇದ್ದರೂ ಅದೇ ವಸ್ತ್ರವನ್ನು ಮಡಿ ಎಂದು ಭಾವಿಸಿ ಬಳಸುವ ರೀತಿಯಿದು. ಸೋಂಕು ತಡೆಯಲು ಮೂಗು, ಬಾಯಿ ಕಣ್ಣನ್ನು ಪದೇ ಪದೇ ಕೈ ತೊಳೆಯದೇ ಮುಟ್ಟಬಾರದು ಎಂಬುದು ಸರಿ. ಮುಖಕ್ಕೆ ಗವಸು ಧರಿಸಿದಾಗ ಆಗುವ ಅಲವರಿಕೆಯಿಂದ ಅಥವಾ ಅದನ್ನು ಸರಿಪಡಿಸಲು ಕೈ ಪದೇಪದೇ ಅಲ್ಲಿಗೇ ಹೋಗುತ್ತದೆ. ಮುಖಗೌಸನ್ನು ಪ್ರತಿಬಾರಿ ಧರಿಸುವಾಗಲೂ ಅದನ್ನು ಶುಚಿಗೊಳಿಸಲು ಸಾಧ್ಯವೇ? ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪಾಶ್ಚಾತ್ಯರಿಗೆ ಹೋಲಿಸಿದರೆ ತುಂಬಾ ಹೆಚ್ಚು. ನಮ್ಮ ಜೀವನದ ರೀತಿ, ನೀತಿಗಳು, ವಿಧಿ- ವಿಧಾನಗಳು ಆರೋಗ್ಯ ರಕ್ಷಣೆಗೆ ಪೂರಕ. ಉದಾಹರಣೆಗಾಗಿ ಕೈ ಕುಲುಕುವ ಬದಲಿಗೆ ನಮಸ್ಕಾರ. ಊಟಕ್ಕೂ ಮೊದಲು ಕೈಕಾಲು ತೊಳೆಯುವುದು, ಹೊರಗಿನಿಂದ ಬಂದು ಮನೆ ಸೇರಿದೊಡನೆ ಬಟ್ಟೆ ಬದಲಾಯಿಸುವುದು . ಪ್ರಾರ್ಥನೆ, ಪೂಜೆ ಇತ್ಯಾದಿ. ಕೊರೊನಾ ವೈರಾಣುವಿಗೆ ನೀಡುತ್ತಿರುವ ಪ್ರಚಾರದಷ್ಟು ಅದು ಪ್ರಬಲವಲ್ಲ. ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಸಾಮಾನ್ಯ ಭಾರತೀಯರ ದೇಹದಲ್ಲಿ, ಬದುಕಿನ ರೀತಿಯಲ್ಲಿ ಅಂತರ್ಗತವಾಗಿದೆ. ಸರ್ಕಾರ ಮತ್ತು ಮಾಧ್ಯಮಗಳು ಮಾಡಬೇಕಾದ ಮೊದಲ ಕ್ರಮವೆಂದರೆ ಜನರಲ್ಲಿ ಅನಗತ್ಯವಾದ ಭಯ ಮೂಡಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯ ಕ್ರಮಗಳು ಹಾಗೂ ಇವು ಮಾಧ್ಯಮಗಳಲ್ಲಿ ಅತಿಯಾಗಿ ವಿಜೃಂಭಿತವಾಗಿರುವುದರಿಂದ ಜನರು ಭಯಭೀತರಾಗಿದ್ದಾರೆ, ಆತಂಕಗೊಂಡಿದ್ದಾರೆ. ಆದ್ದರಿಂದಲೇ ಬೆಂಗಳೂರಿನಿಂದ

ಭಯವೇ ಅಪಾಯಕಾರಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಹರಿಚಿತ್ತ ಸತ್ಯ ವಸುಧೇಂದ್ರ ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ. ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ ಸನ್ನಿವೇಶದಿಂದ ಕತೆ ಆರಂಭವಾಗುತ್ತದೆ. ವಕೀಲ ಬಿಂಧುಮಾದವರು ವಿಧವೆ ರಂಗಮ್ಮನವರ ಕುಟುಂಬಕ್ಕೆ ಆಶ್ರಯವಾಗಲು ಕಾರಣವಾಗುವ ಸನ್ನಿವೇಶ ತಮಾಶೆಯಾಗಿದೆ. ಆಚಾರ್ಯನಾಗಿ ಸಾಧನೆ ಮಾಡುವ ಕರಿಹನುಮನ ಹಿನ್ನೆಲೆ, ರಂಗಮ್ಮನವರೊಂದಿಗೆ ಆತ್ಮೀಯತೆ, ಪದ್ದಿಯ ಜಾತಕ ತೋರಿಸಿದಾಗ ಅವರು ಹೇಳುವ ಭವಿಷ್ಯ ಕಾದಂಬರಿಯಲ್ಲಿ ಕೊನೆಯಲ್ಲಿ ನಿಜವಾಗುವುದು ಕುತೂಹಲಕಾರಿಯಾಗಿದೆ. ಎಲ್ಲೆಂದರಲ್ಲಿ ನಿದ್ದೆ ಮಾಡುವ ಶ್ರೀಪತಿ ಹನುಮಂತನ ಪ್ರತಿರೂಪವಾದ ಕೋತಿಗಳಿಗೆ ಕೈಮುಗಿಯುವ ಮನುಷ್ಯ. ಅವನ ಹೆಂಡತಿ ಸುಭದ್ರಮ್ಮನ ಗೋಟಾವಳಿ ನಗೆ ತರಿಸುತ್ತಿದೆ. ಪದ್ಮಾವತಿ ಮತ್ತು ಅವಳ ಗೆಳತಿ ಪಂಕಜಳ ಸ್ನೇಹ, ಅವರ ಸಾಹಸಗಳು ಕಚಗುಳಿಯಿಡುತ್ತವೆ. ಪಂಕಜಳ ದುಬಾಯಿ ಗಂಡ ವಿಮಾನ ಯಾನದಲ್ಲಿ ಭಸ್ಮವಾಗಿದ್ದು ಕಾಡುತ್ತದೆ . ಮೋಟಾರು ರಾಮರಾಯರು, ವನಮಾಲಾಬಾಯಿ ಮತ್ತು ರಾಘವೇಂದ್ರನ ಪಾತ್ರಗಳು ಸಶಕ್ತವಾಗಿ ಮೂಡಿಬಂದಿವೆ. ವಧು ಪರೀಕ್ಷೆ ಮಾಡುವ ಗುಡೇಕೋಟಿ ಗೋವಿಂದಾಚಾರ್ಯ ಮನಸೆಳೆಯುತ್ತಾರೆ. ರಾಘುವನ್ನು ಪದ್ದಿಯೇ ತಿರಸ್ಕರಿಸಲು ಇರುವ ಕಾರಣ ಪದ್ದಿಯ ಗುಣಧರ್ಮವನ್ನು ಸರಿಯಾಗಿ ಬಿಂಬಿಸುತ್ತದೆ. ಮುಂದೆ ರಾಘು ರಾಮಸಾಗರದ ಸುಧಾಳ ಜೊತೆ ಮದುವೆಯಾಗುತ್ತಾನೆ. ಪ್ರತಿಭಾ, ಪ್ರಮೀಳಾ ಮತ್ತು ಪ್ರಕಾಶನ ಜನನ ಮತ್ತು ಪ್ರಕಾಶನ ಅಂಧತ್ವ ಗೊತ್ತಾದಾಗ ನಮಗೂ ಸಂಕಟವಾಗುತ್ತದೆ. ಆದರೆ ಪ್ರಕಾಶನ ಚುರುಕುತನ ಅದನ್ನು ಮರೆಸುತ್ತದೆ. ಸಿರೇಕೊಳ್ಳದ ಆಚಾರ್ಯರು ಮತ್ತು ಅವರು ಸೂಚಿಸುವ ಡಾ. ಥಾಮಸ್ ರಿಂದ ಪದ್ದಿಯ ಮನೋರೋಗ ವಾಸಿಯಾಗುತ್ತದೆ.ಆನೆಗೊಂದಿ ದ್ವೀಪದ ನವವೃಂದಾವನದಲ್ಲಿ ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಮುಗಿಯುತ್ತದೆ. ಉಪಸಂಹಾರದಲ್ಲಿ ನಾವು ಊಹಿಸಿದ ತಿರುವಿನೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಹರಿಚಿತ್ತ ಸತ್ಯ, ಹಲವು ಕಥಾಸಂಕಲನಗಳನ್ನು ಓದಿ ಅನಂತರ ವಸುಧೇಂದ್ರರ ತೇಜೋ ತುಂಗಭದ್ರಾ ಕಾದಂಬರಿ ಓದಿದರೆ ಅವರ ಸಾಹಿತ್ಯದ ಹಾದಿಯ ಅರಿವು ನಮಗಾಗಬಹುದು. ಒಮ್ಮೆ ಓದಬೇಕಾದ ಕೃತಿಯಿದು. ** ಅಜಿತ್ ಹರೀಶಿ ಡಾ.ಅಜಿತ್ ಹರೀಶಿ

ನಾನು ಓದಿದ ಕಾದಂಬರಿ Read Post »

ಪುಸ್ತಕ ಸಂಗಾತಿ

ನಾನು ಓದಿದ ಕಾದಂಬರಿ

ಅಶ್ವತ್ಥಾಮನ್ ಜೋಗಿ ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ ಕಾದಂಬರಿ “ಅಶ್ವತ್ಥಾಮನ್”. ಕಾದಂಬರಿಯ ಹೆಸರೇ ಹೇಳುವಂತೆ ಮೇಲ್ನೋಟಕ್ಕೆ ಇದೊಂದು ವ್ಯಕ್ತೀಕೇಂದ್ರಿತ ಕೃತಿ. ಅಶ್ವತ್ಥಾಮ ಎಂಬ ಜಿಗಟು ವ್ಯಕ್ತಿತ್ವವೊಂದು ಅಶ್ವತ್ಥಾಮನ್ ಎಂಬ ಹೆಸರಿನ ಜನಪ್ರಿಯ ನಟನಾಗಿ, ನಟನೆಯನ್ನೂ ಜನಪ್ರಿಯತೆಯನ್ನೂ ಅಹಂಕಾರವನ್ನಾಗಿಸಿಕೊಂಡು, ಅಹಂಕಾರವನ್ನೇ ಶಕ್ತಿಯಾಗಿಸಿಕೊಂಡು ಬದುಕುವ ಪಾತ್ರ ನಮಗೇ ಅರಿವಿಲ್ಲದಂತೆ ನಮ್ಮದಾಗುತ್ತ ಹೋಗುವುದು ಈ ಕೃತಿಯ ಅಹಂಕಾರ. ಈ ಪಾತ್ರವನ್ನು ಪೋಷಿಸಲೂ ಆಗದೇ, ದ್ವೇಷಿಸಲೂ ಆಗದೇ, ಕೊನೆಗೆ ನಮ್ಮೊಳಗೆಲ್ಲೋ ಅಡಗಿ ಕುಳಿತಿರುವ ಅಶ್ವತ್ಥಾಮನನ್ನು ಕಾದಂಬರಿಯುದ್ದಕ್ಕೂ ಅನುಭವಿಸುತ್ತ ಹೋಗುತ್ತೇವೆ. ಪಾರ್ಶ್ವವಾಯುವಿಗೆ ಬಲಿಯಾದ ಅಶ್ವತ್ಥಾಮನ್ ತನ್ನ ಆತ್ಮಚರಿತ್ರೆ ಬರೆಸಬೇಕೆಂಬ ಆಶಯದಲ್ಲಿ ಕೊಂಚ ಸಿನಿಮೀಯವಾಗಿ ಆರಂಭವಾಗುವ ಈ ಕಾದಂಬರಿ, “ಎದುರಾಳಿ ಸೋತ ಮೇಲೆ ನಾನು ಯಾರ ಜೊತೆಗೆ ಆಡಲಿ, ನನ್ನ ಆಟ ಮುಗಿಯಿತು” ಎನ್ನುವ ಮಾತಿನಿಂದ ಅಲ್ಲೊಂದು ತಾತ್ವಿಕ ವಾತಾವರಣವನ್ನು ಸೃಷ್ಟಿ ಮಾಡಿ, ಓದುಗ ಅಶ್ವತ್ಥಾಮನೊಂದಿಗೆ ಮುಖಾಮುಖಿಯಾಗತೊಡಗುತ್ತಾನೆ. ಎದುರಾಗುವ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಅಶ್ವತ್ಥಾಮನಿದ್ದಾನೋ, ಅಶ್ವತ್ಥಾಮನ್ ಇರುತ್ತಾನೋ ಅಥವಾ ನಮ್ಮೊಳಗಿರುವ ನಾವು ಒಬ್ಬರಿಗೊಬ್ಬರು ಎದುರಾಗಿ ಕಣ್ಣು ತಪ್ಪಿಸುತ್ತೇವೋ ಎನ್ನುವುದು ನಮ್ಮ ಅನುಭವಕ್ಕೆ ಮಾತ್ರ ದಕ್ಕುವ ವಿಷಯ. “ಮಾತು” ಇಲ್ಲಿ ಕೇವಲ ಮಾತಾಗದೇ, ಕಳೆದುಹೋಗದೇ ಅನುಭಾವವಾಗಿ ಜೀವ ತಳೆದಿದೆ; ಸರಳವಾಗಿ, ಕೆಲವೊಮ್ಮೆ ಸಿನಿಮೀಯವಾಗಿ ತಾತ್ವಿಕವಾದ ನೆಲೆಗಟ್ಟಿನಲ್ಲಿ “ಕಾಲ”ವನ್ನು ಕಟ್ಟಿಕೊಟ್ಟಿದೆ. ಅಶ್ವತ್ಥಾಮನ ಪಾತ್ರ ಅನಾವರಣಗೊಳ್ಳುತ್ತ ಹೋಗುವುದು ಅವನ ಅಹಂಕಾರವನ್ನು ಜೀವಂತವಾಗಿರಿಸುವ ಹೆಣ್ಣುಪಾತ್ರಗಳ ಮೂಲಕ. ದೀಪಾವಳಿಯ ದಿನ ಎಣ್ಣೆ ಹಚ್ಚಲು ಬಂದ ಸುಲೋಚನಾ ತನ್ನನ್ನು ಸಾಯಿಸಲೇ ಬಂದವಳೆಂದು ಕಣ್ಣುಮುಚ್ಚಿ, ಹಸಿದ ಗಂಡಸಿನ ಪಾತ್ರವನ್ನು ಎಷ್ಟು ಚೆನ್ನಾಗಿ ನಟಿಸಿದೆ ಎನ್ನುವ ನಟ, ನಮ್ಮ ಕಣ್ಣೆದುರಿಗೊಂದು ಹೊಸ ಪ್ರಪಂಚವನ್ನು ತೆರೆದಿಡುವಲ್ಲಿ ಯಶಸ್ವಿಯಾಗುತ್ತಾನೆ. ಪ್ರತೀ ಕ್ಷಣದ ಬದುಕು ಒಂದಿಲ್ಲೊಂದು ಬಗೆಯ ನಟನೆಯೇ ಆದಾಗ, ಕಣ್ಣುಮುಚ್ಚಿ ನಾವು ನಾವಾಗಿ ನಟಿಸುವುದು ಸರಳವೆನ್ನುವಂಥ ವಿಲಕ್ಷಣ ಸತ್ಯಗಳೆಲ್ಲ ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸದೇ ಬಿಡುವುದಿಲ್ಲ. ಮೊದಲನೇ ಹೆಂಡತಿ ಶುಭಾಂಗಿನಿ ತನ್ನ ಪಾಲಿನ ದೇವತೆ ಎಂದು ಗೌರವಿಸುವ ಅಶ್ವತ್ಥಾಮ, ಎರಡನೇ ಹೆಂಡತಿ ಸರೋಜಿನಿ ತನ್ನನ್ನು ಪಳಗಿಸಲು ಯತ್ನಿಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ಬಿಡುಗಡೆ ಬಯಸಿ, ದಾಂಪತ್ಯದ ನೀತಿ ನಿಲುವುಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುಚ್ಚು ಮನಸ್ಥಿತಿಯಂತೆ ಭಾಸವಾಗಿಯೂ ಪರಿಹಾರವಿಲ್ಲದ ಗೊಂದಲದಂತೆ ಮನಸ್ಸಲ್ಲಿ ಉಳಿದುಬಿಡುತ್ತಾನೆ. “ನಿಜವಾದ ನೋವು ಕೊಡುವುದಕ್ಕೂ ಶಕ್ತಿ ಬೇಕು; ನನ್ನಲ್ಲಿ ನೋವಿಲ್ಲದೇ ಹೋದರೆ ನಾನು ಮತ್ತೊಬ್ಬರಿಗೆ ಎಲ್ಲಿಂದ ಕೊಡ್ಲೊ” ಎನ್ನುವಂತಹ ಅಸಹಜ ಮಾತುಗಳು ಸತ್ಯಾಸತ್ಯತೆಯ ವಿಮರ್ಶೆಗಳನ್ನೆಲ್ಲ ಮೀರಿ ನೆನಪಲ್ಲಿ ಉಳಿದುಕೊಳ್ಳುತ್ತವೆ. “ನಾನು ಅವಳಿಂದ ಬಿಡಿಸಿಕೊಳ್ಳಲು ಹವಣಿಸಲಿಲ್ಲ, ಅವಳಾಗಿಯೇ ನನ್ನಿಂದ ದೂರ ಹೋಗುವಂತೆ ಮಾಡುವ ಉಪಾಯಗಳನ್ನು ಹುಡುಕುತ್ತಿದ್ದೆ” ಎಂದು ಮೂರನೇ ಹೆಂಡತಿಯಿಂದಲೂ ಬಿಡುಗಡೆಗೆ ತವಕಿಸುವ ಅಶ್ವತ್ಥಾಮ ವಿಕೃತ ಮನಸ್ಸಿನ ಪ್ರತಿರೂಪವಾಗಿ ಹೊರನೋಟಕ್ಕೆ ಭಾಸವಾದರೂ , ನಟಿಸುತ್ತಲೇ ನೈಜವಾಗುವ ಅಸಹಾಯಕ ಅಲೆದಾಟದ ಮನುಷ್ಯನ ಸಹಜ ಮನಸ್ಥಿತಿಯ ತಲ್ಲಣಗಳಾಗಿ ನಮ್ಮೊಳಗೊಂದಾಗುತ್ತಾನೆ. “ದುರದೃಷ್ಟವಶಾತ್ ನನ್ನ ಸ್ಥಾಯೀಭಾವ ನಟನೆ” ಎನ್ನುವಂತಹ ಹೇಳಿಕೆಗಳು ಕೇವಲ ಹೇಳಿಕೆಗಳಾಗದೇ, ಓದುಗನೊಬ್ಬನ ಹಳವಳಿಕೆಗಳನ್ನು ಬರೆಯುವವ ಹೇಳುತ್ತಾ ಹೋದಂತೆ ಎದೆಗಿಳಿಯುತ್ತವೆ. ಪಾತ್ರಗಳ ಸೃಷ್ಟಿಯ ಜೊತೆಗೆ ಭಾಷಪ್ರಯೋಗ ಮತ್ತು ನಿರೂಪಣಾ ವಿಧಾನವೂ ಕೂಡಾ ಈ ಕೃತಿಯನ್ನು ಸುಂದರವಾಗಿಸಿರುವುದರಲ್ಲಿ ಸಂಶಯವಿಲ್ಲ. ಯಾವುದೇ ಆಡಂಬರವಿಲ್ಲದ, ಅನಗತ್ಯ ಅಲಂಕಾರಗಳಿಲ್ಲದ ಶಬ್ದಗಳ ಬಳಕೆ ಹಾಗೂ ಪಾತ್ರಕ್ಕೆ ತಕ್ಕ ಭಾಷಾಪ್ರಯೋಗ ಈ ಕೃತಿಯ ಆಕರ್ಷಣೆ. “ನನ್ನ ಅಹಂಕಾರವೇ ನನ್ನ ಶಕ್ತಿ” ಎನ್ನುವ ಮಾತು ಅದನ್ನು ಆಡಿದವನ ಸಂಪೂರ್ಣ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ. ಹಾಗೆಯೇ ನಿರೂಪಣೆಯಲ್ಲೂ ಲೇಖಕರೇ ಹೇಳುವಂತೆ ಸಿದ್ಧಪ್ರಕಾರಗಳಿಂದ ಆಚೆ ನಿಲ್ಲುವ ಈ ಕೃತಿ “ಮಾತುಕತೆ”ಯ ಮಾದರಿಯಲ್ಲಿದ್ದೂ ವಾಚಾಳಿಯಾಗದೇ ವಿಶಿಷ್ಟವಾಗುಳಿಯುತ್ತದೆ. “ಇದನ್ನು ಕಬೀರ ಬರೆದನೋ ನಾನೇ ಬರೆದೇನೋ ನೆನಪಿಲ್ಲ. ನಾನು ಕಬೀರನಾದಾಗ ಬರೆದಿರಬಹುದೇನೋ?” ಎನ್ನುವ ಮಾತಿನಲ್ಲಿ ಅಸ್ಪಷ್ಟತೆಯೇ ಪಾತ್ರಸೃಷ್ಟಿಯ ಸೂಕ್ಷ್ಮತೆಗೆ ಒದಗಿಬಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಉದಾಹರಿಸುತ್ತ ಹೋಗುವಂತಹ ಸಾಕಷ್ಟು ಭಾಷಪ್ರಯೋಗ ಹಾಗೂ ವಿಶಿಷ್ಟ ನಿರೂಪಣೆ ಕಾದಂಬರಿಯುದ್ದಕ್ಕೂ ಕಾಣಬಹುದು. ಕಾದಂಬರಿಯ ಅಂತ್ಯ ನಾಟಕೀಯವೆನಿಸಿದರೂ ಕೃತಿಯ ಆಶಯವನ್ನು ಹಾನಿ ಮಾಡಿಲ್ಲ. ಹೀಗೆ ತಾನೇ ಪಾತ್ರವಾಗುತ್ತ, ಪಾತ್ರದುದ್ದಕ್ಕೂ ನಟಿಸುತ್ತಾ, ಓದುಗನನ್ನು ನಟನಾಗಿಸುತ್ತ ತಳಮಳಕ್ಕೆ ತಳ್ಳುವ ಅಶ್ವತ್ಥಾಮ ನಟನಾಗಿ, ಪಾತ್ರವಾಗಿ, ನಟನೆಯಾಗಿ, ಓದುಗನ ನೆನಪಲ್ಲಿ ಉಳಿಯುವ ಚಿತ್ರವಾಗಿ ನಿಲ್ಲುತ್ತಾನೆ ****************************** ಅಂಜನಾ ಹೆಗಡೆ

ನಾನು ಓದಿದ ಕಾದಂಬರಿ Read Post »

You cannot copy content of this page

Scroll to Top