ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನನ್ನೊಳಗೆ!

ಕನಸಿನೂರಿಂದ…. -ಕನಸಿನೂರಿನವ ಮತ್ತದೆ ದ್ವಂದ್ವ! ಚಿತ್ತಭಿತ್ತಿಯಲಿ ಸ್ಥಿರವಾಗಿ ಉಳಿದ ಅ ಮೊಗವನೆಲ್ಲಿ ಕಂಡೆ, ಪಡೆಯದೆಲೆ ಕಳೆದುಕೊಂಡೆ? ನೆನಪಿಸಿಕೊ ಹೃದಯ ಕವಾಟವೆ ಕಣ್ಣೊಳಗೆ ಬಿಂಬವಾಗಿ ಎದೆಯೊಳಗೆ ಕಂಬವಾಗಿ ನರನಾಡಿಗಳಲಿ ಜೀವ ಮಿಡಿತವಾಗಿ ನಿಂತಾ ಮೊಗವ ಎಲ್ಲಿ ಕಂಡೆ ಹೇಗೆ ಕಳೆದುಕೊಂಡೆ. ಮೊದಲ ನೋಟದಲೇನು ತುಂಬಿಕೊಂಡೆ ಆ ಮುದ್ದು ಮೊಗದ ನಕ್ಷತ್ರಗಳ ಕಣ್ಣುಗಳನೊ  ಅದರೊಳಗಿನ ಬೆಳಕನ್ನೊ? ಆ ಬಿರಿಯದೆ ಬಿಗಿದ ತುಟಿಗಳ ಹಿಂದಿನ ಮೌನವನೊ? ಬಹಳ ವರುಷಗಳ ಹಿಂದೆ ಆ ಮುಖವನ್ನು ಮೊದಲ ಬಾರಿಗೆ ನೋಡಿದೆ. ಅದೇಕೊ ಆ  ಮುಖ ನನ್ನ ಸೆಳೆದುಬಿಟ್ಟಿತ್ತು.ಎಷ್ಟರ ಮಟ್ಟಿಗೆ ಹೃದಯದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿತೆಂದರೆ ಇವತ್ತಿನವರೆಗು ಬೇರ್ಯಾವ ಮುಖವು ಅದರ ಸ್ಥಳ  ಆಕ್ರಮಿಸಲಾಗಲಿಲ್ಲ.ಬಹುಶ:ಅದರ ನೆನಪುಗಳಲ್ಲೆ ನೂರಾರು ಪುಟಗಳ ಬರೆಯುತ್ತ ಹೋದೆ. ತೀರಾ ಮೊನ್ನೆ ಮೊನ್ನೆಯವರೆಗು  ಮತ್ತೆಂದಾದರು ಆ ಮುಖ ನೋಡುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ….. ಆದರೆ ನಾವು ನಂಬಲಿ ಬಿಡಲಿ ಕಾಲ ನಮ್ಮ ಜೊತೆ  ವಿಧಿಯ ಹೆಸರಿನಲ್ಲಿ ಆಟ ಆಡುತ್ತದೆ. ಅಂತಹದೊಂದು ಆಟದ ಭಾಗವಾಗಿ ಮತ್ತೆ ನಾನಾ ಮುಖವನ್ನು ನೋಡಿದೆ. ಮತ್ತೆ ಮತ್ತೆ ಆ ಮುಖ ನೋಡುವಾಗ ಮನಸು ಮಿತಿಗಳನ್ನು ಮೀರುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.. ಆ ಮುಖವನ್ನು ಬೊಗಸೆಯೊಳಗೆ ಹಿಡಿದುಕೊಂಡು ನುಡಿಯಬೇಕು-ಎಲ್ಲಿದ್ದೆಇಲ್ಲಿಯವರೆಗು?ಮತ್ತೆಕೆ ಬಂದೆ ನನ್ನೆದುರಿಗೆ ಅಂತ ಕೇಳಬೇಕೆನಿಸುತ್ತೆ.ಆ ದೈರ್ಯ ಸಾಲುತ್ತಿಲ್ಲ…ಸಾದ್ಯವಾದಷ್ಟು ಆ ಮೊಗದಿಂದ ದೂರ ಸರಿದು ಹೋಗಬೇಕೆನಿಸಿದಾಗೆಲ್ಲ  ಸಾವು ನೆನಪಾಗುತ್ತದೆ.ಅದಿಲ್ಲದೆಯೂ ಇಷ್ಟು ವರ್ಷಗಳಕಾಲ ಬದುಕಿದ್ದು ವ್ಯರ್ಥವೆನಿಸಿ ಆ ಮುಖವ ಮರೆಯಬೇಕೆಂದು ಶಪಥಗೈದು  ಹಗಲು ಮುಗಿಸುತ್ತೇನೆ. ಮತ್ತೆ ಬಂದ ಇರುಳಿನ ಸ್ವಪ್ನದೊಳಗಾ  ಮುಖ ಬಂದು ಕೇಳುತ್ತದೆ….ಇಷ್ಟು ವರ್ಷ ನನಗಾಗಿ ಕನಸಿದ್ದು ಸುಳ್ಳೇ? ಹೇಳು ಮತ್ತೇಕೆ ಮರೆಯಲೆತ್ನಿಸುವ ನಾಟಕ? ಉತ್ತರಿಸಲಾಗದೆ ತಡವರಿಸುತ್ತೇನೆ….. ಕರಗಿದ ಕತ್ತಲಿಗೆ ಕುಡಿಯೊಡೆದು ಬಂದ ಬೆಳಗು ಮತ್ತದೆ ಮುಖವನ್ನು ಎದುರು ನಿಲ್ಲಿಸುತ್ತದೆ. ಇದನ್ನು ಬದುಕಿನಕಡೆಯ ದಿನವೆಂದೊ-ಕಡೆಯ ಕ್ಷಣವೆಂದೊ ಅಂದುಕೊಂಡು ಹೇಳಿ ಬಿಡು ಮುಖಕ್ಕೆ ಮುಖ ಕೊಟ್ಟು ಅದರ ಕಣ್ಣುಗಳಲ್ಲಿ ನಿನ್ನಕಣ್ಣ ನೆಟ್ಟುಪ್ರೀತಿಸುತ್ತೇನೆಂದು! ಮತ್ತದೆ ದ್ವಂದ್ವ! ===============================

ನನ್ನೊಳಗೆ! Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ ತಾಗಿಸಿ ನಕ್ಕರೆ ಏನರ್ಥ ಸಾಕಿ.. ಪ್ರೇಮರಾಗ ನುಡಿಸಲಾಗದವರು ಕನಸೊಳಗೂ ಲಗ್ಗೆ ಇಟ್ಟು ಒಳನುಗ್ಗಲು ಬರಬಾರದಿತ್ತು.. ಕಣ್ಣಕಪ್ಪು ತೀಡುವ ನೆಪ ತೋರಿ ದೃಷ್ಟಿಗೆ ದೃಷ್ಟಿ ಸೇರಿಸಿ ಮನದ ವೇದನೆ ಕಲಕಿದರೆ ಏನರ್ಥ ಸಾಕಿ.. ಕತ್ತಲೆಯ ಮೋಹಿದುವವರು ದೀಪದ ಬೆಳಕ ಹುಡುಕಲು ಬರಬಾರದಿತ್ತು‌.ಎದೆಯ ತುಂಬ ಅನುರಾಗದ ಅಲೆಗಳ ತುಂಬಿಕೊಂಡು ವಿರಹದುರಿಯಲಿ ಬೆಂದರೆ ಏನರ್ಥ ಸಾಕಿ.. =================================================

ಕಾವ್ಯಯಾನ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

 (ಶಿವಮೊಗ್ಗ ಜಿಲ್ಲೆ ಹಲವಾರು ಚಳವಳಿಗಳ ಉಗಮಸ್ಥಾನವಾಗಿದೆ. ಇವತ್ತಿಗೂ ಶಿವಮೊಗ್ಗ ಜಿಲ್ಲೆಯ ಜನರ ಮನಸ್ಸುಗಳು ಪ್ರಗತಿಪರವಾಗಿಯೇ ಆಲೋಚಿಸುತ್ತಿವೆ. ಈ ಪ್ರಗತಿಪರ ಮನಸ್ಸುಗಳ ಮೂಲ ಬೇರು ಜಿಲ್ಲೆಯಲ್ಲಿ ಹುಟ್ಟಿದ ಚಳವಳಿಗಳಲ್ಲಿ ಅಡಗಿದೆ. ಈ ಕುರಿತು “ ಶಿವಮೊಗ್ಗ ಜಿಲ್ಲೆಯ ಚಳವಳಿಗಳು” ಎಂಬ ಹೆಸರಿನಲ್ಲಿ ಡಾ.ಸಣ್ಣರಾಮರವರು ಸವಿಸ್ತಾರವಾಗಿ ಪತ್ರಿಕೆಗೆ ಬರೆಯಲಿದ್ದಾರೆ.) ಡಾ.ಸಣ್ಣರಾಮ ಭಾಗ-ಒಂದು.     ಮನುಷ್ಯ ವಿಕಾಸದ ಹಂತದಿಂದಲೇ ಒಬ್ಬ ಮತ್ತೊಬ್ಬನಂತಿಲ್ಲ, ಆಲೋಚನ ರೀತಿ, ಗ್ರಹಿಕೆ, ಪ್ರತಿಕ್ರಿಯೆ, ದೈಹಿಕ ಸ್ವರೂಪ, ಬಣ್ಣ ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಒಂದೇ ತಂದೆ-ತಾಯಿಯ ಮಕ್ಕಳು ಸಹ ಒಬ್ಬ ಮತ್ತೊಬ್ಬನಂತಿರುವುದಿಲ್ಲ. ಭಿನ್ನತೆಯೇ ಮನುಷ್ಯನ ವೈಶಿಷ್ಟವೂ ಹೌದು. ಮನುಷ್ಯನ ಭಿನ್ನ ಆಲೋಚನಾ ಕ್ರಮಗಳೇ ಭಿನ್ನ ಅಭಿಪ್ರಾಯ, ಭಿನ್ನ ಸಿದ್ದಾಂತಗಳ ಉಗಮಕ್ಕೆ ಕಾರಣ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ದಿನ ಒಂದಕ್ಕೆ ೬೦೦ ಸಿದ್ದಾಂತ ಹುಟ್ಟುತ್ತವೆ ಮತ್ತು ಸಾಯುತ್ತಿವೆಯಂತೆ. ಭಿನ್ನತೆಯೇ ವ್ಯಕ್ತಿ ವ್ಯಕ್ತಿಯ ನಡುವೆ ಪೈಪೋಟಿ ಘರ್ಷಣೆಗಳು ಏರ್ಪಡಲು ಕಾರಣವಾಗಿದೆ. ಮನುಷ್ಯನಲ್ಲಿರುವ ಭಿನ್ನ ಆಲೋಚನಾ ಕ್ರಮಗಳೇ ಜಗತ್ತಿನಾದ್ಯಂತ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.     ಮನುಷ್ಯ ಗುಹ ವಾಸಿಯಿಂದ ಗ್ರಾಮ ವಾಸಿ, ನಗರ ವಾಸಿಯಾಗುತ್ತಾ ಬಂದಂತೆ ಆತನ ಸಾಮಾಜಿಕ ರೂಪುರೇಷಗಳು ಬದಲಾಗುತ್ತಾ ಬಂದಿವೆ. ಜಗತ್ತಿನ ಯಾವ ಸಮಾಜವು ಒಂದು ಮತ್ತೊಂದರಂತಿಲ್ಲ. ಸಾಮಾಜಿಕ ರಚನಾ ವಿನ್ಯಾಸವೂ ಭಿನ್ನವೇ ಆಗಿರುತ್ತದೆ. ಅಂತೆಯೇ ಸಾಮಾಜಿಕ ವ್ಯವಸ್ಥೆಯೂ ಸಹ ಭಿನ್ನವೇ ಆಗಿರುತ್ತದೆ. ಯಾವುದೇ ಸಮಾಜ ರೂಪಿತ ವ್ಯವಸ್ಥೆಯನ್ನು  ಆ ಸಮಾಜದ ಸಮಸ್ತ ಜನರು ಒಪ್ಪಿಕೊಂಡಿರುತ್ತಾರೆಂದು ಹೇಳಲಾಗುವುದಿಲ್ಲ. ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ವ್ಯವಸ್ಥೆಯ ರೂಢಿಗತ ವಿಚಾರಧಾರೆಯನ್ನು ಒಪ್ಪದ ಜನರು ಒಟ್ಟಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ ಚಳವಳಿ ಸ್ಪೋಟಗೊಳ್ಳುತ್ತದೆ.    ಚಳವಳಿ ಎಂದರೇನು? ಎಂಬುದನ್ನು ವ್ಯಾಖ್ಯಾನಿಸುವುದು, ನಿರ್ಧಿಷ್ಟವಾಗಿ ಹೇಳುವುದು ಸುಲಭವಲ್ಲ, ಏಕೆಂದರೆ ಚಳವಳಿ ಎಂಬುದು ತುಂಬಾ ಸಂಕೀರ್ಣವಾದ ಅಷ್ಟೇ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪ್ರಕ್ರಿಯೆ. ‘ಸಾಮಾಜಿಕ ವ್ಯವಸ್ಥೆಯ ವೈರುಧ್ಯಗಳ ಘರ್ಷಣೆಯನ್ನು ವ್ಯವಸ್ಥೆಯ ಸಮಗ್ರ ಬದಲಾವಣೆಗಾಗಿ ಬಳಸಲು ನಡೆಸುವ ನಿರಂತರ ರಾಜಕೀಯ ಪ್ರಕ್ರಿಯೆಯೇ ಚಳವಳಿ’ (ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿ; ಸಂ;ರಂಗರಾಜ ವನದುರ್ಗ, ಲೇಖನ; ಬಿ.ಎಂ.ಪುಟ್ಟಯ್ಯ ಪು-೫) ಎಂದಿದ್ದಾರೆ. ಚಳವಳಿಯನ್ನು ಕುರಿತು ಆಧಾರ ಸಹಿತ ಚರ್ಚಿಸುವ ಲೇಖಕರು ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ಹೇಳುವುದಾದರೆ ಚಳವಳಿ ಎಂದರೆ ‘ವ್ಯವಸ್ಥೆಯೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಆಚರಣೆಗೆ ತಂದಾಗ ಅವು ಬಹು ಸಮುದಾಯಗಳ ಹಿತಕ್ಕೆ ದಕ್ಕೆಯನ್ನುಂಟು ಮಾಡುವಂತಿದ್ದರೆ ಆ ಸಮುದಾಯಗಳ ಆಂತರ್ಯದಲ್ಲಿ ನಿರಂತರವಾಗಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿರುವ ಶಕ್ತಿಯು ಒಮ್ಮೆಲೆ ಜ್ವಾಲಾಮುಖಿಯಂತೆ ಸ್ಪೋಟಗೊಂಡು ನಿರ್ದಿಷ್ಟ ಗುರಿಯತ್ತ ಚಲಿಸುವ ಪ್ರಕ್ರಿಯೆ’ ಎಂದು ಹೇಳಬಹುದು. ಚಳವಳಿಯಲ್ಲಿ ಬಹುಸಮುದಾಯಗಳು ಒಗ್ಗೂಡುವಿಕೆ ಮತ್ತು ಅವುಗಳ ಆಂತರ್ಯದಲ್ಲಿ ಮಡುಗಟ್ಟಿದ ಪ್ರಶ್ನಿಸುವ ನಿರಂತರ ಚಲನೆಯು ಮುಖ್ಯವಾಗುತ್ತದೆ. ಆದ್ದರಿಂದಲೇ ಚಳವಳಿ ಅಪಾರವಾದ ಶಕ್ತಿಯ ಸಂಚಯವೂ ಆಗಿರುತ್ತದೆ     ಚಳವವಳಿ ಸಮುದಾಯಗಳ ಆಂತರ್ಯದಲ್ಲಿ ನಿರಂತರ ಚಲನಶೀಲೆಯಾಗಿರುವುದರಿಂದ ಇಂದು ಹುಟ್ಟಿ ನಾಳೆ ಅಂತ್ಯಗೊಳ್ಳುವ ಕ್ರಿಯೆಯಲ್ಲ. ಭಾರತೀಯ ಸಮಾಜವನ್ನೇ ಅನುಲಕ್ಷಿಸಿ ಹೇಳುವುದಾದರೆ ಭಾರತದಲ್ಲಿ ಆದಿಮ ಕಾಲದಲ್ಲಿ ರೂಪಿತಗೊಂಡಿರುವ ವಿಚಾರಧಾರೆಯನ್ನೇ ಒಪ್ಪುವ ಸಮುದಾಯಗಳು ಒಂದೆಡೆ ಇದ್ದರೆ ಅವುಗಳನ್ನು ಪ್ರಶ್ನಿಸುವ ಮನಸ್ಸುಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಸನಾತನ ವಾದವನ್ನು ಪ್ರಶ್ನಿಸುತ್ತಿದ್ದ ಪಂಥವನ್ನು ಪ್ರಕೃತಿವಾದಿಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಮುಂದೆ ಚಾರ್ವಾಕ ಪಂಥವೆಂದು ಪ್ರಸಿದ್ದವಾಗಿತ್ತು. ಸನಾತನ ವಾದವನ್ನು ಧಿಕ್ಕರಿಸುವ ಮನಸ್ಸುಗಳೇ ಚಳವಳಿಗಳಿಗೆ ಮೂಲ ಪ್ರೇರಣೆ. ಮನುಷ್ಯ ಆಂತರ್ಯದಲ್ಲಿ ಅಂತರ್ಗತವಾಗಿರುವ ಪ್ರಶ್ನಿಸುವ ಗುಣ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಚಳವಳಿಯು ನಿರಂತರವಾಗಿರುತ್ತದೆ. ಆ ಗುಣ ಮಾನವನ ಉಗಮದಷ್ಟೆ ಪ್ರಾಚೀನ. ಆದ್ದರಿಂದಲೇ ಚಳವಳಿಗೆ ಆದಿ-ಅಂತ್ಯಗಳಿಲ್ಲ ಎಂದು ಹೇಳಲಾಗಿದೆ.     ಯಾವುದೇ ಚಳವಳಿ ಎಲ್ಲಾ ಕಾಲದಲ್ಲಿ ಏಕ ಪ್ರಕಾರವಾಗಿರುವುದಿಲ್ಲ. ಹಾಗೆಯೇ ಇರಲು ಸಾಧ್ಯವೂ ಇಲ್ಲ. ಚಳವಳಿ ಒಂದು ರೀತಿಯಲ್ಲಿ ಜ್ವಾಲಾಮುಖಿಯಂತೆ, ಜ್ವಾಲಾಮುಖಿ ಭೂಮಿಯ ಒಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಒಮ್ಮಿಂದೊಮ್ಮೆಲೆ ಸ್ಪೊÃಟಗೊಂಡು ಆಕಾಶಕ್ಕೆ ಲಾವಾರಸವನ್ನು ಚಿಮ್ಮಿ ತನ್ನ ತೆಕ್ಕೆಗೆ ಸಿಕ್ಕಿದಷ್ಟನ್ನು ನುಂಗಿ ನೊಣೆಯುವಂತೆ ಚಳವಳಿ ಸಮುದಾಯದ ಒಳಗೆ ಗುಪ್ತಗಾಮಿನಿಯಾಗಿದ್ದು ತಮ್ಮ ಮೇಲಿನ ದೌರ್ಜನ್ಯಗಳು ಉಗ್ರ ರೂಪ ತಳೆದಾಗ ಉಗ್ರ ರೂಪವನ್ನು ತಾಳುತ್ತದೆ. ಗುರಿ ಮುಟ್ಟಿದ ಮೇಲೆ ಮತ್ತೆ ತಟಸ್ಥವಾಗುತ್ತದೆ. ಚಳವಳಿಯ ಆದಿ ರೂಪ ಗ್ರಹಿಕೆ ಹೇಗೆ ಸಿಗುವುದಿಲ್ಲವೋ ಹಾಗೆಯೇ ಅದು ಸ್ಪೊÃಟಗೊಂಡಾಗ ತಳೆಯ ರೂಪಗಳನ್ನು ಹೇಳಲಾಗುವುದಿಲ್ಲ. ಸ್ವಾತಂತ್ರö್ಯ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಈ ಎಲ್ಲಾ ಚಳವಳಿಗಳ ಹಿನ್ನಲೆಯು ಹಾಗೆಯೇ. movement ಇಂಗ್ಲಿಷಿನ ಪದ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಚಳವಳಿ ಪದವನ್ನು ಬಳಸುತ್ತೇವೆ.. movement ಎಂದರೆ ಇಂಗ್ಲಿಷಿನಲ್ಲಿ an act the process of moving, a group of people who share same aims or ideas a trend or development ಇತ್ಯಾದಿ ಅರ್ಥಗಳಿವೆ. ಕನ್ನಡದಲ್ಲಿ movement ಪದಕ್ಕೆ ಚಲನೆ ಅಲುಗಾಟ ಚಲಿಸುವುದು, ಸ್ಥಳದಿಂದ ಸ್ಥಳಕೆ ಹೋಗುವುದು, ಮುಂದುವರಿಕೆ, ಸಾಗುವುದು ಇತ್ಯಾದಿ ಅರ್ಥಗಳಿವೆ. ‘ಚಳವಳಿ’ ಪದಕ್ಕೆ ಕನ್ನಡದಲ್ಲಿ ಆಂದೋಲನ ವಿಶೇಷ ಉ್ದೇಶಕ್ಕಾಗಿ ಒಟ್ಟುಗೂಡಿದ ಜನಗಳ ತಂಡ, ಆ ತಂಡ ಕೈಗೊಳ್ಳುವ ಕಾರ್ಯಗಳು ಹಾಗೂ ಚಟುವಟಿಕೆಗಳು ಇತ್ಯಾದಿ ಅರ್ಥಗಳಿವೆ. ಕನ್ನಡದ ಚಳುವಳಿ ಪದವು ಇಂಗೀಷ್ನ movement ಪದ ಅರ್ಥವ್ಯಾಪ್ತಿಯನ್ನು ಹೊಂದಿರುವುದರಿಂದ ಚಳವಳಿ ಪದದ ಬಳಕೆ ಸೂಕ್ತವಾಗಿದೆ. ಇಷ್ಟು ವ್ಯಾಪಕ ಅರ್ಥವ್ಯಾಪ್ತಿಯನು ಹೊಂದಿರುವ ಚಳವಳಿ ಪದವನು ಇಂದು ನಮ್ಮ ನಡುವೆ ತುಂಬಾ ಸಂಕೂಚಿತವಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಗೊತ್ತು ಗುರಿ ಇಲ್ಲದೆ ಯಾರದೊ ಹಿತಕಾಗಿ ನಡೆಯುವ ಪತಿಭಟನೆ, ಹೋರಾಟ, ಸಂಘರ್ಷ, ಆಕ್ರೊÃಶ, ಜಗಳ ಇವೆಲ್ಲವನ್ನು ಚಳವಳಿ ಎಂದು ಕರೆಯುವುದು ಸಾಮಾನ್ಯವಾಗಿದೆ. ಈ ಪದಗಳ ಅರ್ಥ ವ್ಯಾಪ್ತಿ ಕಡಿಮೆ. ಇಲ್ಲಿ ಸಾರ್ವಜನಿಕರ ಹಿತಾಶಕ್ತಿ ಇರುವುದಿಲ್ಲ. ನಿರ್ದಿಷ್ಟ ಗೊತ್ತು ಗುರಿ ಇರುವುದಿಲ್ಲ. ಯಾರೋ ಒಬ್ಬ ವ್ಯಕ್ತಿಯ ಪರೋಕ್ಷ ಅಥವಾ ಪ್ರತ್ಯಕ್ಷ ಸ್ವಾರ್ಥತೆ ಮುಖವಾಗಿರುತ್ತದೆ. ಕ್ಷÄಲ್ಲಕÀ ವಿಚಾರವನ್ನಿಟ್ಟುಕೊಂಡು ನಡೆಯುವ ಹೋರಾಟ, ಪ್ರತಿಭಟನೆಗಳು ಚಳವಳಿ ಹೇಗಾದೀತು. ಚಳುವಳಿ ಸ್ಪೊÃಟಗೊಂಡು ವಿಶ್ವವ್ಯಾಪಿಯಾಗಬಹುದು, ರಾಷ್ಟç-ರಾಜ್ಯ ಅಥವಾ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾಗಿರಬಹುದು. ಅದೇನೇ ಇದ್ದರು ಅವುಗಳ ಅಧ್ಯಯನ ನಡೆಯುವುದು ಸೂಕ್ತವಾದುದು. ಏಕೆಂದರೆ ಕಳೆದ ತಲೆಮಾರುಗಳ ವಿದ್ಯಮಾನಗಳು ಮುಂದಿನ ತಲೆಮಾರಿಗೆ ತಲುಪುವ ಅಗತ್ಯವಿರುತ್ತದೆ. ಆದರೆ ಚಳವಳಿಗಳ ಅಧ್ಯಯನ ಮಾಡುವುದು ತುಂಬಾ ಕಷ್ಟ. ಚಳವಳಿಯ ನಡೆ ತುಂಬಾ ಸಂಕೀರ್ಣವಾಗಿರುತ್ತದೆ. ಎಲ್ಲೆಲ್ಲಿ ಯಾರ ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು, ಆದರ ರೂಪ ರೇಷೆಗಳೇನು ಎಂಬುವುದನು ಕ್ಷೆÃತ್ರಕಾರ್ಯದ ಮೂಲಕವೇ ಸಂಗ್ರಹಿಸಿ ದಾಖಲಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಚಳವಳಿಗಳ ತವರೂರಾದ ಶಿವಮೊಗ್ಗ ಜಿಲೆಯನ್ನು ಕೇಂದ್ರಿಕರಿಸಿಕೊಂಡು ಇಲ್ಲಿ ಜನತಳೆದ ಚಳವಳಿಗಳನ್ನು ಕುರಿತ ಕೃತಿ ರಚನೆ ಮಾಡುತ್ತಿದೇನೆ. ಈ ಕೃತಿ ಕಾಲಿಕವಾಗಿದ್ದರಿಂದ ಇದರ ವ್ಯಾಪ್ತಿಯೂ ಸೀಮಿತವಾಗಿದೆ. (ಮುಂದುವರೆಯುತ್ತದೆ)    ============== ಪರಿಚಯ: ಡಾ.ಸಣ್ಣರಾಮ ಅವರು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾದ್ಯಾಪಕರು.ಇದೀಗ ಶಿವಮೊಗ್ಗೆಯ್ಲಿ ನೆಲೆಸಿದ್ದಾರೆ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಇತರೆ

ಲಹರಿ

ಮಳೆಯಲ್ಲಿ ನೆನೆದ ನೆನಪು ಪ್ರಮೀಳಾ ಎಸ್.ಪಿ. ” ಮಳೆ”… ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು ನಮ್ಮ ರೈತಾಪಿ ಜನಗಳು.ಈಗಿನ ಕಾಲದ ಚಿಂತನಾ ರೀತಿಯೇ ಬೇರೆ.ಮಕ್ಕಳಿಗಂತೂ ಮಳೆ ಬಂತೆಂದರೆ ದೋಣಿ ತೇಲಿ ಬಿಡುವ,ಮರಳಲ್ಲಿ ಮನೆಕಟ್ಟುವ ಆಸೆ.ಪ್ರೇಮಿಗಳಿಗ ಪಾಲಿಗೆ ಅದು ಯಾವ ಮಳೆಯಾದರು ಮುಂಗಾರು ಮಳೆಯೇ!!.ಮಳೆಯಲಿ ಜೊತೆಯಲಿ ಹಾಡುವ ಆಸೆ.ತೊಪ್ಪೆಯಾಗುತ್ತಾ ನಾಲ್ಕು ಹೆಜ್ಜೆ ಹಾಕುವಾಸೆ.ಮೈ ಮರೆತು ಜಗ ಮರೆತು ಮಳೆಯೊಳಗೆ ಒಂದಾಗುವಾಸೆ. ಹನಿ ಮಳೆಯೋ,ಜಡಿ ಮಳೆಯೋ,ಸುರಿ ಮಳೆಯೋ,ಧಾರಾಕಾರ ಮಳೆಯೋ,ಮುಸಲಧಾರೆಯೋ,ಪ್ರೀತಿಯ ಮಧುರ ಕ್ಷಣಗಳನ್ನು ಮತ್ತೆಮತ್ತೆ ಮನ ಮಿಡಿಸುತ್ತದೆ.ಕೆಲಸಕ್ಕೆ ಹೋಗುವ ಹೆಂಗಸರಿಗೆ ಹೊಸ ಛತ್ರಿ,ಜರ್ಕಿನ್ ಕೊಳ್ಳೋ ಯೋಚನೆ.ಅಮ್ಮಂದಿರಿಗೆ ಎಲ್ಲ ರೀತಿಯ ಹಿಟ್ಟು ,ಮೆಣಸಿನ ಪುಡಿ, ಸಂಬಾರ ಪುಡಿ ಡಬ್ಬಿಗೆ ಕೆಡದಂತೆ ತುಂಬೋ ತವಕ.ರೈತರಿಗೆ ಬಿತ್ತನೆ ಬೀಜ ಗೊಬ್ಬರಕ್ಕೆ ಕಾಸು ಹೊಂದಿಸೋ ಚಿಂತೆ.ರೈತ ಮಹಿಳೆಯರಿಗೆ ಯಾವ ಸಂಘದಲ್ಲಿ ಎಷ್ಟು ಸಾಲ ತೆಗೆದುಕೊಡಬಹುದು ಅನ್ನೋ ಯೋಚನೆ,ಗದ್ದೆ ಬಯಲಿನವರಿಗೆ ಈ ಭಾರಿ ಎರೆಡು ಬೆಳೆ ತೆಗೆಯುವ ಆಸೆ, ಸರ್ಕಾರಕ್ಕೆ ಜೋರು ಮಳೆ ಬಂದು ಕಾವೇರಿ ವಿವಾದ ಬಗೆಹರಿಯಲಿ ಅನ್ನೋ ಚಿಂತೆ. ಮುದುಕರಿಗೆ ಈ ಭಾರಿ ಪಿಂಚಣಿ ಹಣದಲ್ಲಿ ಉದ್ದ ಕೊಡೆ ,ಮಳೆಗಾಲದ ಬೂಟು ತರಿಸಿಕೊಳ್ಳೋ ಆಸೆ.ನಂಗೆ ಮಳೆ ಬರಲಿ, ಆದರೆ ರಸ್ತೆ ಬೇಗ ಒಣಗಲಿ ಗಾಡಿ ಓಡಿಸಲು ಸುಲಭವಾಗಲಿ,ಶಾಲೆಗೆ ಯಾವುದೆ ತೊಂದರೆ ಇಲ್ಲದೆ ಸೇರುವಂತಾಗಲಿ ಅನ್ನೋ ಭಾವನೆ,ಶಾಲಾ ಮಕ್ಕಳಿಗೆ ಮಳೆಗಾಲದ ರಜೆ ಸಿಗಬಹುದು…ಎಂಬ ನಂಬಿಕೆ. ಹೀಗೆ ಮಳೆಯೊಂದಿಗೆ ಭಾವನೆಗಳ ಬೆಸುಗೆ… ನೆನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ ಕೆಲಸಕ್ಕೆ ಬಂದ ಸರೋಜಮ್ಮಬಹಳ ಸಪ್ಪಗಿದ್ದರು.ಕಾರಣ ಕೇಳದ ನಾನು ಕೆಲಸಕ್ಕೆ ಹೊರಡುವ ಆತುರದಲ್ಲಿದ್ದೆ. ಅವರೇ ನಿಂತು ಮಾತು ಶುರುಮಾಡಿದರು…”ಅಮ್ಮಾ ರಾತ್ರಿಯ ಮಳೆಗೆ ಮನೆಯಲ್ಲಿ ನೀರು ತುಂಬಿ ಹಾಸಿಗೆ ನೆನೆದು ಹೋಯಿತು.ಸೊಸೈಟಿ ಇಂದ ತಂದ ಅಕ್ಕಿ ಪೂರ್ತಿ ನೀರೊಳಗೆ ಮುಳುಗಿತು.ಇನ್ನೊಮ್ಮೆ ಅಕ್ಕಿ ಕೊಡೋವರೆಗೆ ಏನು ಮಾಡೋದು ?ಅದು ಅನ್ನ ಮಾಡಲು ಬರಲ್ಲ ..ತಿಂಡಿಗೆ ಆಗುತ್ತೆ,ಎಂದರು.ಗಂಡನಿಲ್ಲದ ಅವರು ವಿಧವೆ ಮಗಳನ್ನು ಮತ್ತು ಮೊಮ್ಮೊಗುವನ್ನು ಸಾಕಿಕೊಂಡು ಬದುಕು ನಡೆಸುತ್ತಿರುವುದು ನನಗೆ ಗೊತ್ತಿದ್ದ ವಿಷಯವಾಗಿತ್ತು.ಬಾಡಿಗೆ ಮನೆ ,ಕೂಲಿ ಕೆಲಸ, ಮದುವೆಯಾದರು ಮಗುವಿನೊಂದಿಗೆ ಮನೆಗೆ ಬಂದ ಮಗಳು.ಬಿ ಪಿ ಎಲ್ ಕಾರ್ಡಿನ ಅಕ್ಕಿ.ನನ್ನ ಯೋಚನೆ ಮುಂದುವರೆಯಿತೇ ಹೊರತೂ ಅವರಿಗೆ ಸಮಾಧಾನ ಹೇಳದೆ ಚಪಾತಿ ಲಟ್ಟಿಸಲು ಮುಂದಾದೆ. ನನ್ನನ್ನು ಸರೋಜಮ್ಮನ ಸ್ಥಾನದಲ್ಲಿ ಕಲ್ಪಿಸಿಕೊಂಡೆ. ಕಣ್ಣುಗಳು ಒದ್ದೆಯಾದವು.ಕವಿಗಳ ಕಲ್ಪನೆಯ ಮಳೆಗೂ ,ಕೊಡಗಿನಲ್ಲಿ ಧಾರಾಕಾರ ಸುರಿದು ಮನೆ ಮನ ಬಯಲು ಬೆಟ್ಟಗಳನ್ನೆಲ್ಲ ಕೊಚ್ಚಿ ಹಾವಳಿ ತಂದ ಮಳೆಗೂ,ಉತ್ತರ ಕರ್ನಾಟಕದಲ್ಲಿ ಅಬ್ಬರಿಸಿ ಹಾಳುಗೆಡವಿದ ಮಳೆಗೂ, ಸರೋಜಮ್ಮನ ಮನೆಯ ಹಾಸಿಗೆ ಅಕ್ಕಿ ನೆನೆಸಿ ಉಣ್ಣಲು ಉಡಲು ಮಲಗಲು ಇಲ್ಲದಂತೆ ಬದುಕನ್ನು ಚೆಲ್ಲಾಪಿಲ್ಲಿಯಾಗಿಸಿದ ಮಳೆಗೂ…ಯಾವ ಭಾವ ಬೆಸೆಯಬಹುದೆಂದು ತಿಳಿಯದೆ ಶೂನ್ಯಮನಸ್ಕಳಾಗಿ ಕೊರಗುತ್ತಾ ಕುಳಿತೆ. ಮತ್ತೆ ಮತ್ತೆ ಹುಚ್ಚು ಮಳೆ ಹೊಯ್ದು ಬದುಕು ಮೂರಾಬಟ್ಟೆಯಾಗದಿರಲಿ.ಬಡಜನರ ಬದುಕು ಕೊಚ್ಚಿ ಹೋಗದಿರಲಿ ದೇವರೆ ಎಂದು ಮೊರೆಯಿಟ್ಟೆ . ಇಲ್ಲಿಗೆ ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಗೆಳತಿಯರು ಒಂದಿಬ್ಬರು ಪ್ರೀತಿಯ ಮಳೆಯಲ್ಲಿ ತೊಪ್ಪೆಯಾದರಲ್ಲ.ಅಪ್ಪ ಅಮ್ಮನ ವಿರೋಧವಿದ್ದರೂ ತಾವು ಒಪ್ಪಿದವನೊಡನೆ ಹೆಜ್ಜೆ ಹಾಕಿದರಲ್ಲ.ಸುತ್ತಲಿನ ಸಮಾಜಕ್ಕೆ ಸೊಪ್ಪುಹಾಕದೆ,ತಪ್ಪನ್ನೇ ತಬ್ಬಿ ನಡೆದರಲ್ಲ.ಆಗಿನ್ನೂ ಈ “ಮುಂಗಾರು ಮಳೆ” ಯ ಪ್ರಭಾವ ಇಷ್ಟು ದಟ್ಟವಾಗಿ ಇರಲಿಲ್ಲ.” ಚಳಿ ಚಳಿ ತಾಳೆನು” ಹಾಡಿಗೆ ನಮ್ಮಂಥ ಸಾವಿರಾರು ಯುವಜನರು ಮಾರುಹೋಗಿದ್ದ ಕಾಲವದು.ಪ್ರೀತಿಯ ಬಲೆಯಲ್ಲಿ ಬಿದ್ದರೂ ಬಲಿಷ್ಠ ಪರಿಸರವನ್ನು ಎದುರಿಸಲಾಗದೆ ಎದೆಯೊಳಗೆ ಮುಚ್ಚಿಟ್ಟು ,ದಿಂಬಿನಲ್ಲಿ ಮುಖವಿಟ್ಟು ಕೋಣೆಯೊಳಗೆ ಬಿಕ್ಕಳಿಸುತ್ತಿದ್ದ ದಿನಗಳು ನೆನಪಾಗ ಹತ್ತಿವೆ.ಬಿಟ್ಟೂ ಬಿಡದಂತೆ ಟಪಟಪನೆ ಸುರಿವ ಮಳೆ ಹನಿಗಳ ನಿನಾದ ನೆನಪ ಸಾಲುಗಳಿಗೆ ಶ್ರುತಿ ಹಿಡಿದಿದೆ.ಮಾಗಿದ ಮನವನ್ನು ನೆಲದಂತೆ ಮೆದುವಾಗಿಸಿದೆ.ಹೊರಗೆ ಕಾಲಿಟ್ಟರೆ ಜಿಡಿಮಳೆ ಬೇಸರ ತರುತ್ತದೆ.ಹಳೆಯ ಪ್ರೇಮದ ಬೆಸುಗೆ ನೆನೆಯದಂತೆ ಮುಸುಕೆಳೆದಿದೆ.ಹೆದರಿ ಒಳಗೆ ಕೂರುವಂತಿಲ್ಲ.ಬದುಕನ್ನು ಕಟ್ಟಿಕೊಳ್ಳಬೇಕು.ರಾಶಿ ರಾಶಿ ಕೆಲಸಗಳು ಕಾಯುತ್ತಿವೆ.ಹೌದು ನನ್ನವರಿಗೀಗ ಧುಮ್ಮಿಕ್ಕುವ ಧಳಧಳನೆ ಸುರಿವ ಆರ್ಭಟ ಕಡಿಮೆಯಾಗಿದೆ.ಉತ್ತರೆ ಮಳೆಯಂತೆ ತತ್ತರಿಸುತ್ತಿದ್ದ ರೀತಿ ಸೌಮ್ಯವಾಗಿದೆ.ಮಕ್ಕಳಾದ ಮೇಲಂತೂ ಪ್ರೀತಿಯಲ್ಲಿ ಏನೋ ಕೊರತೆ ಕಾಡತೊಡಗಿದೆ.ಒರತೆ ಹಂಚಿಕೆಯಾಗಿದೆ.ಎಲ್ಲರಿಗೂ ಹೀಗೇನಾ?.ಸೊಲ್ಲು ಸೊಲ್ಲಿಗೂ ನನ್ನ ಹೆಸರನ್ನೇ ಜಪಿಸುತ್ತಾ ಸುತ್ತಲೇ ಸುಳಿಯುತ್ತಿದ್ದ ನಲ್ಲನಿಗೇನಾಗಿದೇ ?.ಒಲ್ಲೆನೆಂದರೂ ಬಿಡದೆ ಮೊಲ್ಲೆ ಮೊಗ್ಗುಗಳ ರಾಶಿ ಪೇರಿಸುತ್ತಿದ್ದ ಇನಿಯನೆಲ್ಲಿ ಕಳೆದು ಹೋದ?!.ಛೇ ಈ ಪ್ರೀತಿಯೊಂದು ಹುಚ್ಚು.ಬದುಕಿನ ವಸಂತಗಳು ಮುಗಿದು ಹೇಮಂತ ಬಂದರೂ ಮಳೆ ಮಾತ್ರ ನಿಲ್ಲುತಿಲ್ಲ .ಸವಿಜೇನಿನ ಇನಿದನಿಯಲಿ ಕೂಗುತಿದ್ದ ಕೋಗಿಲೆ ಗಾನ ನಿಲ್ಲಿಸಿಬಿಟ್ಟಿತೆ ?ಮಳೆ ತಂದ ಶೀತಲ ಮಾರುತಗಳಿಗೆ ಗಂಟಲು ಬಿಗಿಯಿತೆ?.ನೆನೆದ ಪುಕ್ಕಗಳಲಿ ಚಳಿ ಧಾಳಿಯಿಟ್ಟಿತೆ?. ಹೌದು ನಾವು ಈಗ ಮೊದಲಿನಂತಿಲ್ಲ.ಎಷ್ಟೊಂದು ಸುಧೀರ್ಘಕಾಲ ಸುಳಿವು ನೀಡದೇ ಸರಿದೇ ಹೋಯಿತಲ್ಲ.ವೈಶಾಖನಾಗಲೇ ಅಡಿಯಿಟ್ಟಿದ್ದಾನೆ.ಗಿಡಮರಗಳು ಬೋಳಾಗಿವೆ.ಬಿಸಿಯುಸಿರು ಬುಸುಗುಡುತ್ತಿದೆ.ಮತ್ತೆ ಮಳೆ ಬೇಕೆನಿಸುತ್ತಿದೆ…

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

ಕಾವ್ಯಯಾನ Read Post »

ಇತರೆ

ರಾಜ್ಯೋತ್ಸವದ ನೆಪದಲ್ಲೆರಡು ಮಾತು.

ಬಲಾಢ್ಯವಾಗಬೇಕಿರುವ ಕನ್ನಡಭಾಷಿಕ ಸಮುದಾಯ! ನಿಮ್ಮೆಲ್ಲರಿಗು  ಕನ್ನಡ ರಾಜ್ಯೋತ್ಷವದ ಶುಭಾಶಯಗಳು…ಈ ಸಂದರ್ಭದಲ್ಲಿ ನಿಮ್ಮೊಂದಿಗೆಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ:  ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೆÃಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ.ಇಂತಹ ನಿರಾಶಾದಾಯಕ  ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.   ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೆ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ  ಕನ್ನಡ ಭಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಭಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು  ಕೇವಲ ಭಾಷಿಕ ಚಳುವಳಿಗಳಾಗಿ: ಆಡಳಿತ ಭಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಪಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ  ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ,ಜಲ,ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.    ಅದರಲ್ಲು ಇವತ್ತಿನ ಜಾಗತೀಕರಣ ನಮ್ಮ ಸ್ಥಳೀಯ ಸಂಪನ್ಮೂಲಗಳನ್ನು ರಾಕ್ಷಸ ರೀತಿಯಲ್ಲಿ ನುಂಗುತ್ತ, ನಮ್ಮೊಳಗೆ ಕೊಳ್ಳುಬಾಕತನವನ್ನು ಸೃಷ್ಠಿಸಿ, ನಮ್ಮ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಜನಪದ ಪರಂಪರೆಗಳನ್ನೆಲ್ಲ ನಾಶ ಮಾಡುತ್ತ ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡ ಚಳುವಳಿ ತನ್ನ ಮಿತಿಯನ್ನು ಮೀರಿ ಬೆಳೆಯಬೇಕಿದೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖಾಸಗಿ ಬಂಡವಾಳಶಾಹಿ ಶಕ್ತಿಗಳು ದೈತ್ಯಾಕಾರವಾಗಿ ಬೆಳೆಯುತ್ತ ನಮ್ಮ ಬಹುಮುಖಿ ಸಂಸ್ಕೃತಿಯನ್ನು ಏಕರೂಪಿ ಸಂಸ್ಕೃತಿಯಾಗಿ ಬದಲಾಯಿಸಹೊರಟಿರುವ ಸಂಕೀರ್ಣಸನ್ನಿವೇಶದಲ್ಲಿ,(ಇದೀಗ ನಮ್ಮಾಳುವವರು ಸಹ ಏಕರಾಷ್ಟ,ಏಕಧರ್ಮ, ಏಕಭಾಷೆಯ ಹೆಸರಲ್ಲಿ ಸ್ಥಳೀಯವಾದುದನ್ನೆಲ್ಲ ಹೊಸಕಿ ಹಾಕಲು ಹೊರಟಂತಿದೆ) ಕನ್ನಡ ಚಳುವಳಿ ಎನ್ನುವುದು ಏಕಾಂಗಿಯಾಗಿ ನಿಲ್ಲದೆ  ಉಳಿದೆಲ್ಲ  ಚಳುವಳಿಗಳ ಜೊತೆ ಬೆರೆತು ಹೋರಾಡಿದರೆ ಮಾತ್ರ  ಕನ್ನಡ ಚಳುವಳಿ  ಕನ್ನಡ ಭಾಷಿಕ ಸಮುದಾಯದ ಚಳುವಳಿಯಾಗಿ ಗುರುತಿಸಿ ಕೊಳ್ಳಬಹುದು. ಅದು ನಮ್ಮ ನೆಲಜಲಗಳನ್ನು ಸಂರಕ್ಷಿಸಿಕೊಳ್ಳುವ ವಿಚಾರವಿರಲಿ, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಿರಲಿ, ದಲಿತ ಮತ್ತಿತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಾಪಾಡುವುದಿರಲಿ, ಶಿಕ್ಷಣದಲ್ಲಿ ಕನ್ನಡವೇ ಪ್ರದಾನ ಭಾಷೆಯಾಗುವ ವಿಚಾರವಿರಲಿ, ಕನ್ನಡಿಗರಿಗೆ ಉದ್ಯೊಗದಲ್ಲಿ ಆದ್ಯತೆ ನೀಡುವ ವಿಚಾರವೇ ಆಗಿರಲಿ,  ಇವೆಲ್ಲವೂ ಕನ್ನಡದ ಚಳುವಳಿ ಎಂಬ ಬಾವನೆ ಮೂಡಿದಾಗ ಮಾತ್ರ ಅಂತಹ ಚಳುವಳಿಗೆ ನಿಜವಾದ ಬಲ ಬರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡವೆಂದರೆ ಕೇವಲ ಭಾಷೆ ಮಾತ್ರವಲ್ಲ ಎಂಬುದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ.     ಕರ್ನಾಟಕದ ಎಲ್ಲ ಸಮಸ್ಯೆಗಳು ಕನ್ನಡದ ಸಮಸ್ಯೆಗಳೇ ಎಂಬ ಆರೋಗ್ಯಕಾರಿ ಮನೋಬಾವ ರೂಪುಗೊಂಡಾಗ ಮಾತ್ರ ನಾವು ಒಳಗಿನ ಮತ್ತು ಹೊರಗಿನ ಅನ್ಯ ಸಂಸ್ಕೃತಿಗಳ ಎದುರು ಹೋರಾಡಬಲ್ಲಂತಹ ಕಸುವು ಪಡೆಯಬಹುದಾಗಿದೆ. ಇಂತಹದೊಂದು  ಚಳುವಳಿಯನ್ನು ರೂಪಿಸಲು ನಮಗೆ ಸಾದ್ಯವಾದಾಗ ಮಾತ್ರ ಕರ್ನಾಟಕ ತನ್ನ ಹಕ್ಕುಗಳಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಬರುವುದಿಲ್ಲ. ಇಂತಹ ಕನ್ನಡ ಚಳುವಳಿಯಿಂದ ಮಾತ್ರ ಕನ್ನಡ ಭಾಷಿಕ ಸಮುದಾಯ ಸಶಕ್ತವಾಗಬಹುದು. ಕನ್ನಡ ಭಾಷಿಕ ಸಮುದಾಯ ಸಶಕ್ತವಾಗುವುದು ಎಂದರೆ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಎಂದರ್ಥ!      ಹೌದು ಇವತ್ತು ಎರಡು ಕಡೆಯಿಂದ ನಾವು ದುರ್ಬಲರಾಗುತ್ತ ಹೋಗುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಏಳು ದಶಕಗಳಿಂದ ಸರದಿಯಂತೆ ನಮ್ಮನ್ನು ಆಳುತ್ತ ಬರುತ್ತಿರುವ ರಾಷ್ಟ್ರೀಯ ಪಕ್ಷಗಳು ಭಾಷೆ,ನೆಲ,ಜಲಗಳ ವಿಷಯಗಳಲ್ಲಿ ನಮ್ಮ ಹಿತಾಸಕ್ತಿಯನ್ನು ಕಡೆಗಣಿಸುತ್ತ ರಾಜಕೀಯವಾಗಿ ಬಲಿಷ್ಠವಾಗಿರುವ ಇತರೇ ರಾಜ್ಯಗಳ ಹಿತಾಸಕ್ತಿಯನ್ನು ಕಾಯುತ್ತ ಬರುತ್ತಿವೆ. ಇನ್ನು ಎರಡನೆಯದಾಗಿ,ತೊಂಭತ್ತರ ದಶಕದ ನಂತರ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿ ವಿಶ್ವದ ಎಲ್ಲ ಬಗೆಯ ಬಂಡವಾಳಶಾಹಿ ಕಂಪನಿಗಳನ್ನು ತಂದು ನಮ್ಮ ನೆಲದಲ್ಲಿ ಬೀಡುಬಿಡಿಸಿದೆ. ಆ ಬಂಡವಾಳಶಾಹಿ ಶಕ್ತಿಗಳಿಗೆ ಪ್ರಾದೇಶಿಕ ಭಾಷೆ ಸಂಸ್ಕೃತಿಯನ್ನು ಕಾಪಾಡಬೇಕೆನ್ನುವ ಯಾವ ಜರೂರತ್ತೂ ಇರುವುದಿಲ್ಲ. ಜೊತೆಗೆ  ಯಾವ ಹಿಂಜರಿಕೆಯೂ ಇಲ್ಲದೆ  ನಮ್ಮ ನೆಲ-ಜಲವನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತ ಹೋಗುತ್ತವೆ. ಇನ್ನು ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ, ಸ್ಥಳೀಯರಿಗೆ ಉದ್ಯೋಗವೆಂಬುದೆಲ್ಲ ಅವುಗಳ ಪದಕೋಶದಲ್ಲಿ ಇರದ ಶಬ್ದಗಳು. ಹೀಗೆ ಎರಡೂ ಕಡೆಯಿಂದಲೂ ನಾವು ಶೋಷಿತರಾಗುತ್ತ ಹೋಗುತ್ತೇವೆ.   ಇದನ್ನು ತಪ್ಪಿಸಲು ಮತ್ತು  ನಮ್ಮ ನೆಲಜಲಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗ. ಕನ್ನಡ ಚಳುವಳಿ ಮತ್ತು  ತನ್ಮೂಲಕ ಕನ್ನಡಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಿಷ್ಠವಾಗಿಸುತ್ತ ಹೋಗುವುದು.ನಮ್ಮದೇ ಬಲಾಢ್ಯ ಪ್ರಭುತ್ವ ಮಾತ್ರ ನಮ್ಮದನ್ನೆಲ್ಲ ಕಾಪಾಡಬಹುದಾಗಿದೆ. ಕನ್ನಡವನ್ನು ಒಂದು ಪ್ರಬಲ ರಾಜಕೀಯಶಕ್ತಿಯಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ಕನ್ನಡಚಳುವಳಿಯನ್ನು ಬಲಗೊಳಿಸುತ್ತ ಹೋಗುವುದು. ಈಗಿರುವ ಹಲವು ಚಳುವಳಿಗಳ( ರೈತ, ದಲಿತ, ಕಾರ್ಮಿಕ, ಇತ್ಯಾದಿ)ನ್ನು ಕನ್ನಡದ ಹೆಸರಲ್ಲಿ ಒಟ್ಟಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ನಮಗಿದೆ.    ಇನ್ನು ಕನ್ನಡ ಭಾಷಿಕ ಸಮುದಾಯವೊಂದು ಬಲಾಢ್ಯ ರಾಜಕೀಯ ಶಕ್ತಿಯಾಗಲು ಈ ಚಳುವಳಿಗಳ ಒಳಗಿಂದಲೇ ಒಡಮೂಡಿಬರುವ ಒಂದು ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಅಗತ್ಯವಿದೆ. ಇದು ನಂತರದಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಸದ್ಯಕ್ಕೆ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಾಢ್ಯಗೊಳಿಸುವವತ್ತ  ಮಾತ್ರ ನೋಡಬೇಕಾಗಿದೆ. ಈ ದಿಸೆಯಲ್ಲಿ  ನಮ್ಮ ಎಲ್ಲ ಚಳುವಳಿಗಳೂ ಕನ್ನಡ ಚಳುವಳಿಯ ವಿಶಾಲವೇದಿಕೆಯ ಅಡಿಯಲ್ಲಿ ಬರಬೇಕಿದೆ( ಇದು ಕಷ್ಟದ ಕೆಲಸವೆಂದು ಕನ್ನಡಿಗರಿಗೆ ಅನಿಸಿದರೆ ಅದು ನಮ್ಮ ದುರಂತವಷ್ಟೆ!) ================================================

ರಾಜ್ಯೋತ್ಸವದ ನೆಪದಲ್ಲೆರಡು ಮಾತು. Read Post »

ಇತರೆ

ಚರ್ಚೆ

ಟಿಪ್ಪು ಸುಲ್ತಾನನ ಇತಿಹಾಸ ಪಠ್ಯದಿಂದ ತೆಗೆಯುವುದು ಎಷ್ಟು ಸರಿ ? ಡಾ.ಮಹಾಲಿಂಗ ಪೋಳ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಲವು ರಾಜ ಸಂಸ್ಥಾನಗಳ ಬೀಡಾಗಿತ್ತು.ಅವು ತಮ್ಮದೇಯಾದ ಗಡಿಯನ್ನು ಹೊಂದಿದ್ದವು.ತಮ್ಮ ಸಂಸ್ಥಾನದ ಗಡಿಯನ್ನು ವಿಸ್ತರಿಸಲಿಕ್ಕೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತಿದ್ದವು.ಅಲ್ಲದೇ ತಮ್ಮದೇಯಾದ ಸಂಸ್ಕೃತಿಯ ಪ್ರಸಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದವು.ಇದು ರಾಜಪ್ರಭುತ್ವ ಚಾಲ್ತಿಯಾದಾಗಿನಿಂದ ಬಂದದ್ದು.ಟಿಪ್ಪು ಕೂಡ ಈ ನಾಡಿನಲ್ಲಿ ಒಂದು ಸಂಸ್ಥಾನದ ರಾಜನಾಗಿದ್ದವ.ಅವನ ಸಂಸ್ಥಾನದ ಪ್ರದೇಶ ವಿಸ್ತರಿಸಲು ಪಕ್ಕದ ರಾಜ ಸಂಸ್ಥಾನಗಳ ಮೇಲೆ ದಾಳಿ ಮಾಡಿದ ಸರಿ.ಹಲವು ವಿರೋಧಿಗಳನ್ನು ಕೊಂದ ಸರಿ.ಈ ಕೆಲಸ ಟಿಪ್ಪು ಒಬ್ಬನು ಮಾತ್ರ ಮಾಡಿದನೆ ? ಆಗಿನ ಕಾಲದಲ್ಲಿ ಒಂದು ಸಂಸ್ಥಾನ ಇನ್ನೊಂದು ಸಂಸ್ಥಾನದ ಮೇಲೆ ಹಗೆ ಸಾಧಿಸಿ ದಾಳಿ ಮಾಡುವುದು ಸಾಮಾನ್ಯವಾಗಿತ್ತು.ಟಿಪ್ಪು ಹಿಂದುಗಳನ್ನು ಕೊಂದ ಅವನು ದುಷ್ಟ ಎಂದು ಈ ಕಾಲಘಟ್ಟದಲ್ಲಿ ನಿಂತು ತೀರ್ಮಾಣಿಸುವುದು ಎಷ್ಟು ಸರಿ ? ಯಾವುದೇ ಐತಿಹಾಸಿಕ ಘಟನೆಗಳನ್ನು ಆಯಾ ಸಂದರ್ಭದ ರಾಜನೀತಿಗೆ ಅನುಗುಣವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಇಂದಿನ ರಾಜಕೀಯ ತೆವಲುಗಳಿಗಾಗಿ ವಿಶ್ಲೇಷಣೆ ಮಾಡುವುದಲ್ಲ. ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಕಾರಣಕೊಟ್ಟು ಪಠ್ಯದಿಂದ ಅವನ ಇತಿಹಾಸ ಕೈಬಿಡುವುದಾದರೆ,ಹಿಂದೂ ಸಾಮ್ರಾಜ್ಯ ವಿಜಯನಗರದ ಮೇಲೆ ದಾಳಿಮಾಡಿ ಅವನತಿಗೆ ಕಾರಣವಾದ ಶಾಹಿ ಸುಲ್ತಾನರ ಇತಿಹಾಸ ,ರಕ್ಕಸ ತಂಗಡಗಿ ಯುದ್ಧದ ಕುರಿತಾಗಿ ಪಠ್ಯದಿಂದ ತೆಗೆದು ಹಾಕಬಹುದೇ ? ಧರ್ಮದ ಆಧಾರದ ಮೇಲೆ ಇತಿಹಾಸ ನಿರ್ಧರಿಸುವುದು ಸರಿಯಲ್ಲ.ರಾಮಾನುಜಚಾರ್ಯರನ್ನು ದೇಶಬಿಟ್ಟು ಓಡಿಸಿದ ಶೈವ ಧರ್ಮಿಯ ಕುಲೋತ್ತುಂಗ ಚೋಳನ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದು ವೈಷ್ಣವರು ಒತ್ತಾಯ ಮಾಡಿದರೆ ಹೇಗೆ ? ಹಾಗೆಯೇ ಕಲಚೂರಿ ಅರಸನ ಸೈನಿಕರ ವಚನಕಾರರನ್ನು ಬೆನ್ನಟ್ಟಿಕೊಂಡು ಹೋಗಿ ಕೊಂದ ಇತಿಹಾಸ ಗೊತ್ತೆ ಇದೆ.ಲಿಂಗಾಯತ ಸಮುದಾಯದವರೆಲ್ಲ ಕಲಚೂರಿಗಳ ಇತಿಹಾಸ ಪಠ್ಯದಲ್ಲಿ ಬೇಡ ಎಂದರೆ ಹೇಗೆ ? ಅಂದಿನ ರಾಜನೀತಿಗಳನ್ನು ಇಂದಿನ ರಾಜನೀತಿಯ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಾರದು. ಶಿವಾಜಿಯು ತನ್ನ ತಂದೆಯ ಬಂದನಕ್ಕೆ ಕಾರಣರಾದರು ಎಂಬ ಉದ್ದೇಶದಿಂದ ಮುಧೋಳ,ಜಮಖಂಡಿ ಸಂಸ್ಥಾನಗಳ ಮೇಲೆ ದಾಳಿ ಮಾಡಿದ.ಮುಧೋಳ ಸಂಸ್ಥಾನದ ಭಾಗಗಳನ್ನು ನಾಶಮಾಡಿ ಸುಟ್ಟುಹೋದನಂತೆ.ಹಾಗಾದರೆ ಮುಧೋಳ,ಜಮಖಂಡಿ ಭಾಗದವರು ಶಿವಾಜಿಯ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದರೆ ಅದಕ್ಕೆ ಅರ್ಥ ಬರುತ್ತದೆಯೆ ? ಒಂದು ಕಾಲಘಟ್ಟದ ಇತಿಹಾಸದಲ್ಲಿ ಹಲವು ಬದಲಾವಣೆಗೆ ಕಾರಣವಾದ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಬದಿಗಿಟ್ಟು ಇತಿಹಾಸ ಓದುವುದೆಂದರೆ ಅದು ನೈಜ ಇತಿಹಾಸಕ್ಕೆ ಮಾಡಿದ ಮೋಸ. ಹಿಂದೂ ರಾಜರಾರು ಬೇರೆ ಸಂಸ್ಥಾನದ ಮೇಲೆ ದಾಳಿ ಮಾಡಿಲ್ಲವೆ ? ಜನರನ್ನು ಕೊಂದಿಲ್ಲವೇ ? ಕೇವಲ ದಾಳಿ ಮಾಡುವುದು ವೈರಿಗಳನ್ನು ಕೊಲ್ಲುವ ವಿಷಯಗಳು ಮಾತ್ರ ಇತಿಹಾಸವೇ ? ಅದರಾಚೆಯಿರುವ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ವಿಷಯಗಳು ಇತಿಹಾಸದ ವಿಷಯವಾಗಿ ಓದಬೇಕಲ್ಲವೇ ? ಒಂದು ಕಾಲಘಟ್ಟದ ಇತಿಹಾಸವೆಂದರೆ ಒಂದುದಿನ ನಡೆದ ಘಟನೆಗಳು ಮಾತ್ರವಲ್ಲ ,ಅದು ಎಲ್ಲ ರೀತಿಯ ಅಂಶಗಳನ್ನು ಸೇರಿ ಒಂದು ಕಾಲಘಟ್ಟದ ಇತಿಹಾಸ ನಿರ್ಮಿಸುತ್ತವೆ. ಟಿಪ್ಪು ಒಬ್ಬ ಇಸ್ಲಾಂ ಧರ್ಮದ ರಾಜ ಎಂದ ಮಾತ್ರಕ್ಕೆ ಇತಿಹಾಸ ಬದಲಾಯಿಸಲು ಬರುವುದಿಲ್ಲ.ಅದು ಒಳ್ಳೆಯದಿರಲಿ,ಕೆಟ್ಟದ್ದಿರಲಿ ಅದು ಇತಿಹಾಸದ ಭಾಗ ಅದನ್ನು ನಾವು ವಸ್ತುನಿಷ್ಠವಾಗಿ ಓದಬೇಕು,ವಿಶ್ಲೇಷಿಸಬೇಕು.ಅದನ್ನು ಬಿಟ್ಟು ಅವನು ಮುಸ್ಲಿಂ,ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಇತಿಹಾಸ ಪಠ್ಯದಿಂದ ಕೈಬಿಡುವುದು ಎಷ್ಟು ಸರಿ ? ಇತಿಹಾಸದ ಘಟನೆಗಳನ್ನು ದಾಖಲೆಗಳ ಆಧಾರದಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಯಾವುದೋ ಪಂಥಕ್ಕೆ ಜೋತುಬಿದ್ದು ಕುರುಡಾಗಿ,ನೈಜತೆಯನ್ನು ಮರೆಮಾಚಿ ಹುಸಿ ಸಂಕಥನಗಳನ್ನು ಸೃಷ್ಟಿಸುವುದಲ್ಲ. ಯಾಕೇ ಹೀಗಾಗುತ್ತಿದೆ ? ಇದಕ್ಕೇ ಕಾರಣ ಯಾರು ? ಈ ವಿಷಯ ರಾಜಕೀಯವಾಗುತ್ತಿರುವುದು ಯಾಕೆ? ಇದರ ಬಗ್ಗೆ ಮಾತನಾಡುವವರೆಲ್ಲ ನೈಜ ಇತಿಹಾಸ ಓದಿದ್ದಾರೆಯೆ ? ಪಠ್ಯದಿಂದ ಹೊರತೆಗೆಯುವ ತೀರ್ಮಾಣ ತೆಗೆದುಕೊಂಡವರು ಇತಿಹಾಸ ತಜ್ಞರೇ ? ಈ ಪ್ರಶ್ನೆಗಳು ನಮ್ಮನ್ನು ಕಾಡಿದರೆ ಉತ್ತರ ಸಿಕ್ಕಬಹುದೇನೋ .. ನಮ್ಮ ಅಜ್ಜನ ಇತಿಹಾಸವೇ ನಮಗೆ ಗೊತ್ತಿಲ್ಲ ..! ಹಿಂದಿನ ಘಟನೆಗಳನ್ನು ಹೆಕ್ಕಿ ತಿಪ್ಪೆ ಕೆದಕಿ ಜನರ ಮನಸ್ಸನ್ನು ಹಾಳು ಮಾಡುವುದು ಸರಿಯೇ ? ======================================================== ಪರಿಚಯ: ಜಮಖಂಡಿಯಲ್ಲಿಉಪಬ್ಯಾಸಕರು

ಚರ್ಚೆ Read Post »

ಕಥಾಗುಚ್ಛ

ಸಣ್ಣಕಥೆ

ಪ್ರೀತಿ ಆನಂದ್ ಕೊರಟಿ ಆಫೀಸಿಗೆÉ ತಡವಾಗುತ್ತಿದೆ, ಬೇಗ ಹೋಗಬೇಕು…’ ಅವನು ತನ್ನ ಕೋಟನ್ನು ಭುಜದ ಮೇಲೆ ಹಾಕಿಕೊಳ್ಳುತ್ತಾ ಜೋರಾಗಿ ಹೇಳಿದ. ಮೆಟ್ಟಿಲುಗಳನ್ನು ಇಳಿದು ಮನೆಯಿಂದ ಹೊರಗೆ ಓಡುತ್ತಾ ಹೊರಟ. ಅವನು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅವಳು ಓಡುತ್ತಾ ಮೆಟ್ಟಿಲಿಳಿದು ಬಂದಳು. ‘ತಡಿ, ತಡಿ….’ ಎಂದು ಕೂಗಿದಳು, ಆದರೆ ಅಷ್ಟರಲ್ಲಿ ಅವನು ಹೊರಟು ಹೋಗಿದ್ದ. ಅವಳ ಮುಖ ಮುದುರಿದ ಕಾಗದದಂತೆ ಆಯಿತು. ‘ಅವನು ಹೋಗುವಾಗ ನನಗೆ ಮುತ್ತಿಕ್ಕುವುದನ್ನು ಮರೆತ’ ತನಗೆ ಆದ ನೋವಿನಿಂದ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದಳು. ಅವಳು ಅವನಿಗೆ ಕರೆ ಮಾಡಿ, ‘ನೀನು ನನಗೆ ಮುತ್ತಿಡದೇ ಹೋದೆ’ ಆರೋಪ ಮಾಡುವವಳಂತೆ ಹೇಳಿದಳು. ‘ನನ್ನನ್ನು ಕ್ಷಮಿಸು, ನನ್ನ ಮುದ್ದಿನ ಮಗಳೆ’ ಅವನು ಪರಿತಪಿಸುವ ಧ್ವನಿಯಲ್ಲಿ ಹೇಳಿದ. ಅವಳು ದೊಡ್ಡ ಹೆಂಗಸಿನಂತೆ ‘ಸರಿ ಬಿಡು’ ಎಂದು ಕರೆಯನ್ನು ಕಡಿತಗೊಳಿಸುತ್ತಾ ಹೇಳಿದಳು. ನಂತರ ಸಿಡುಕಿನಿಂದ ತಿಂಡಿ ನುಂಗಿದಳು, ತನ್ನ ಶೂಗಳನ್ನು ಧರಿಸಿದಳು, ತನ್ನ ಶಾಲೆಯ ಬ್ಯಾಗ್ ತೆಗೆದುಕೊಂಡು ಬಾಗಿಲಿನಿಂದ ಹೊರಗೆ ನಡೆದಳು. ಮನಸ್ಸಿನ ಭಾರಕ್ಕೆ ಅವಳ ಭುಜಗಳು ಕುಸಿದವು. ಅವಳು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಾರು ಮನೆಯ ಹೊರಗಿನ ಪೆÇರ್ಟಿಕೋಗೆ ಬಂತು. ಅವನು ಕಾರ್‌ನಿಂದ ಹೊರಗೆ ಬಂದ. ಅವಳು ಅವನೆಡೆಗೆ ಓಡಿದಳು. ಅವಳ ಮುಖವು ಕ್ರಿಸಮಸ್ ಟ್ರೀಯಂತೆ ಬೆಳಗಿತು. ‘ನನ್ನನ್ನು ಕ್ಷಮಿಸು ಕಂದಾ, ನಾನು ಮರೆತೆ’ ಅವನು ಅವಳನ್ನು ಮೇಲಕ್ಕೆತ್ತುತ್ತಾ ಹೇಳಿದ. ಪ್ರೀತಿಯ ಮುತ್ತಿನ ಮಳೆಗೈದ. ಅವಳು ಏನೂ ಹೇಳಲಿಲ್ಲ. ಮಂದಹಾಸದ ಮುಗುಳ್ನಗೆ ಬೀರಿದಳು. ಹದಿನೈದು ವರ್ಷಗಳ ನಂತರ- ಆ ದಿನ ಆತ ಆಫೀಸಿಗೆ ತಡವಾಗಿ ಬಂದಿದ್ದ ಎಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಆದರೆ ಆ ಚಿಕ್ಕ ಬಾಲಕಿ ತನ್ನ ತಂದೆ ಕೇವಲ ತನಗೆ ಪ್ರೀತಿಯ ಮುತ್ತಿಡುವುದಕ್ಕಾಗಿಯೇ ಬಹಳ ದೂರದ ಆಫೀಸಿನಿಂದ ಮರಳಿ ಕಾರನ್ನು ಚಲಾಯಿಸಿಕೊಂಡು ಹಿಂತಿರುಗಿ ಬಂದಿದ್ದನೆಂದು ಇನ್ನೂ ಮರೆತಿಲ್ಲ. ==================================================== ಪರಿಚಯ: ವೃತ್ತಿಯಲ್ಲಿ ಪುಸ್ತಕ ಪ್ರಕಾಶಕ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ. ಆಗಾಗ್ಗೆ ತೋಚಿದ್ದು ಗೀಚುತ್ತೆÃನೆ. ಉಳಿದಂತೆ ಎಲ್ಲರೊಳಗೊಂದಾದ ಮಂಕುತಿಮ್ಮ.

ಸಣ್ಣಕಥೆ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ….

ಹನ್ನೆರಡು ರಾಶಿಯೊಳಗೊಂದು ರಾಶಿ ಚಂದ್ರಾವತಿ ಬಡ್ಡಡ್ಕ ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ – ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ ಕೆಟ್ಟೆ. ಯಾಕೆಂದರೆ ಒಂದೇ ಒಂದು ದಿನವೂ ನನ್ನ ಭವಿಷ್ಯ ಸರಿ ಇರುವುದಿಲ್ಲ. ಧನಲಾಭ ಅಂತ ಬರೆದಿದ್ದ ದಿನ, ಇರೋ ದುಡ್ಡೆಲ್ಲ ಖರ್ಚಾಗುತ್ತದೆ. (ಬಹುಶಃ ನಿನ್ನಿಂದಾಗಿ ಇತರರಿಗೆ ಧನಲಾಭ ಎಂದಾಗಬೇಕೋ…) ಮಿತ್ರರಿಂದ ಸಂತರ ಎಂದಿದ್ದರೆ ಗೆಳೆಯ – ಗೆಳತಿಯರೊಂದಿಗೆ ಶರಂಪರ ಜಗಳ. ಇಲ್ಲವಾದರೆ ಕನಿಷ್ಠಪಕ್ಷ ಮಾತಿನಲ್ಲಿ ಭಿನ್ನಾಭಿಪ್ರಾಯ ಹತ್ತಿ ಮೂಡು ಕೆಡುವಷ್ಟಾದರೂ ಆಗೇ ಆಗುತ್ತೆ. ಮೇಲಧಿಕಾರಿಗಳಾಗಿದ್ದವರಂತೂ ಚಂದಗೆ ಭವಿಷ್ಯ ಬರೆದಿದ್ದ ದಿನವನ್ನೇ ಆಯ್ದುಕೊಂಡವರಂತೆ ನಾನು ತಪ್ಪು ಮಾಡಿದ್ದರೂ, ಮಾಡದಿದ್ದರೂ ನಾಲ್ಕು ಜನರ ಮುಂದೆಯೇ ಮಂಗಳಾರತಿ ಮಾಡಿ ನನ್ನ ಉತ್ಸಾಹ, ಸ್ವಾಭಿಮಾನವನ್ನು ಚರಂಡಿಗೆಸೆಯುತ್ತಿದ್ದರು. ಹಾಗಾಗಿ ನಾನು ನನ್ನ ಅನುಭವದಿಂದ ಕಲಿತಿದ್ದೇನೆಂದರೆ ಯಾವದಿನ ಭವಿಷ್ಯ ಚೆನ್ನಾಗಿ ಬರೆಯಲ್ಪಟ್ಟಿದೆಯೇ ಆ ದಿನವಿಡೀ ಜಾಗರೂಕಳಾಗಿರಬೇಕು! ನಾವು ಎಮ್ಮೆ ಓದುವಾಗ, ನಮ್ಮ ಔದಾಸೀನ್ಯವನ್ನು ಮಾತ್ರ ಗಮನಿಸಿದ ನಮ್ಮ ಅಧ್ಯಾಪಕರುಗಳೆಲ್ಲ ನಾವು ಗುಡ್‌ ಫಾರ್ ನಥಿಂಗ್‌ಗಳೆಂದೂ, ನಮಗೆ ಭವಿಷ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ನುಡಿದಿದ್ದರು. ಅಲ್ಲಿಂದ ನನಗೆ ಭವಿಷ್ಯ (ದಿನ, ವಾರ, ವರ್ಷ)  ನೋಡುವ ಅಭ್ಯಾಸ. ಬಳಿಕ ಕ್ರಮೇಣ ಇದೊಂದು ಚಟವಾಯಿತು. ಅಂದ ಹಾಗೆ ನಿನ್ನ ರಾಶಿ ಯಾವುದು ಅಂತ ಕೇಳ್ತೀರಾ? ಸತ್ಯವನ್ನೇ ಹೇಳಬೇಕೆಂದರೆ ನನಗೇ ಗೊತ್ತಿಲ್ಲ. ಮತ್ತೆ ಏನಿದು ನಿನ್ನ ಗೋಳು, ಇಷ್ಟೆಲ್ಲ ಹೇಳಿದ್ದು ಸುಳ್ಳೇ ಎಂದು ತೀರ್ಮಾನಿಸಿ ಇವಳು ಬರೀ ಸುಳ್ಳು ಬುರ್ಕಿಯೆಂಬ ತೀರ್ಮಾನಕ್ಕೆ ಬರಬೇಡಿ. ಒಟ್ಟಾರೆ ಹನ್ನೆರಡು ರಾಶಿಯಲ್ಲಿ (ಹದಿಮೂರನೆಯ ರಾಶಿಯೊಂದು ಗೋಚರವಾಗಿದೆ ಎಂಬುದಾಗಿ ಆರೇಳು ವರ್ಷದ ಹಿಂದೆ ಸುದ್ದಿಯಾಗಿತ್ತು. ಒಂದು ವೇಳೆ ಅದೂ ಇದ್ದರೆ ಅದೂ ಸೇರಿದಂತೆ) ಒಂದು ನನ್ನದು ಆಗಿರಲೇ ಬೇಕಲ್ಲಾ? ಹಾಗಾಗಿ ನಾನು ಎಲ್ಲಾ ರಾಶಿಯನ್ನೂ ಓದುತ್ತೇನೆ. ಚೆನ್ನಾಗಿ ಭವಿಷ್ಯ ಬರೆದ ರಾಶಿ ನನ್ನದೆಂದು ಅಂದುಕೊಳ್ಳುತ್ತೇನೆ. ನಿಜವೆಂದರೆ, ನನ್ನ ಹುಟ್ಟಿದ ದಿನಾಂಕವೇ ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಹೆತ್ತವರು ಬರೆದಿಡಲಿಲ್ಲ ಎಂದು ನಾನವರನ್ನು ದೂಷಿಸುವಂತಿಲ್ಲ. ನಿರಕ್ಷರಿಗಳಾಗಿದ್ದ ಮತ್ತು ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪೇ. ನನ್ನ ದೊಡ್ಡಅಕ್ಕ ಎಲ್ಲೋ ಬರೆದಿಟ್ಟ ದಿನಾಂಕವನ್ನೇ ಗಟ್ಟಿಮಾಡಿಕೊಳ್ಳೋಣವೆಂದರೆ, ನನ್ನ ಅಮ್ಮನ ಹೇಳಿಕೆ ಅದಕ್ಕೆ ಅಡ್ಡ ಬರುತ್ತದೆ. ನಾನು ಹುಟ್ಟಿದ ದಿನ ಭಯಂಕರ ಕತ್ತಲಿತ್ತು, ಧಾರಾಕಾರ ಮಳೆ ಸುರಿಯುತ್ತಿತ್ತು ಎನ್ನುತ್ತಾ ನೆನಪಿಸಿಕೊಳ್ಳುತ್ತಿದ್ದರು. ಅವರು ಹೇಳುವ ತುಳು ತಿಂಗಳ ಲೆಕ್ಕಾಚಾರಕ್ಕೂ ಅಕ್ಕ ಬರೆದಿಟ್ಟಿರುವ ಇಂಗ್ಲೀಷು ತಿಂಗಳ ಲೆಕ್ಕಾಚಾರಕ್ಕೂ ತಾಳೆ ಆಗುವುದಿಲ್ಲ. ಕೂಡಿ, ಗುಣಿಸಿ, ಕಳೆದು, ಭಾಗಿಸಿ ಎಲ್ಲಾ ಮಾಡಿ ನನ್ನಕ್ಕ ಬರೆದಿಟ್ಟ ದಿನಾಂಕ ಯಾವ ವಾರ ಬರುತ್ತದೆ ಎಂದು ನೋಡಿದರೆ ಅದಕ್ಕೂ ಅಮ್ಮ ಹೇಳಿದ ವಾರಕ್ಕೂ ವ್ಯತ್ಯಾಸ. ಈ ಮಧ್ಯೆ, ನಿನ್ನ ಜನ್ಮ ನಕ್ಷತ್ರಕ್ಕನುಗುಣವಾಗೇ ನೆರೆಮನೆಯ ಕಲ್ಲೂರಾಯರು ಹೆಸರು ಸೂಚಿಸಿದ್ದು ಎಂಬ ಇನ್ನೊಂದು ಅಂಶವನ್ನು ನನ್ನ ಮುಂದಿಟ್ಟು ಮತ್ತೂ ಗೊಂದಲವಾಗುವಂತೆ ಮಾಡಲಾಗಿದೆ. ಹೆಸರು ಜನ್ಮ ನಕ್ಷತ್ರದ್ದೇ ಆಗಿದ್ದರೆ, ಆ ನಕ್ಷತ್ರಕ್ಕೂ, ಅಕ್ಕ ಬರೆದಿಟ್ಟ ಇಂಗ್ಲೀಷ್ ತಿಂಗಳ ದಿನಕ್ಕೂ, ಅಮ್ಮನ ತುಳು ತಿಂಗಳ ದಿನಕ್ಕೂ ತಾಳೆ ಇಲ್ಲ. (ಹಾಗಾದ್ರೆ ಶಾಲಾ ದಾಖಲಾತಿಯಲ್ಲಿ ಏನಿದೆ ಎಂಬುದು ನಿಮ್ಮ ಪ್ರಶ್ನೆಯೇ? ಅದನ್ನು ನೋಡಿದರೆ ಇನ್ನೂ ಗಮ್ಮತ್ತಿದೆ. ನಮ್ಮ ಐದೂ (ನಾನು ಮತ್ತು ನನ್ನ ಒಡ ಹುಟ್ಟಿದವರು) ಮಂದಿಯ ಜನ್ಮ ದಿನಾಂಕವೂ ಜೂನ್ ತಿಂಗಳೆಂದೇ ದಾಖಲಾಗಿದೆ. ಯಾಕೆಂದರೆ ಶಾಲೆಗೆ ಸೇರಿಸಲು ಕನಿಷ್ಠ ಎಷ್ಟು ವರ್ಷವಾಗಬೇಕೋ, ಅದಕ್ಕೆ ತಕ್ಕಂದೆ ದಾಖಲೆಗಳಲ್ಲಿ ಬರೆಯಲಾಗಿದೆ.) ಹಾಗಾಗಿ ಈ ಮೇಲಿನ ಆಧಾರದನ್ವಯ  ಯಾವ್ಯಾವ ದಿನಕ್ಕೆ ಯಾವ್ಯಾವ ರಾಶಿ ಬರುತ್ತೋ ಅವು ನನ್ನವೇ ಅಂದು ಕೊಂಡಿದ್ದೇನೆ. ಇದರ ಮಧ್ಯೆ ವೆಸ್ಟರ್ನೂ, ಈಸ್ಟರ್ನೂ ಅಂತ ಇನ್ನೂ ಒಂದೆರಡು ರಾಶಿಗಳೂ ಸಹ ನಂದಾಗಿರಬಹುದೋ ಎಂಬ ಸಂಶಯ. ಈ ಐದಾರು ರಾಶಿಗಳಲ್ಲಿ ಯಾವುದಕ್ಕೆ ಚೆನ್ನಾಗಿ ಬರೆದಿದೆಯೋ ಅದೇ ನನ್ನ ರಾಶಿ ಎಂಬುದು ಅಂತಿಮ ನಿರ್ಧಾರ. ಟಪ್ಪಂತ ಮುಖಕ್ಕೆ ರಾಚಿದಂತೆ ಮಾತಾಡುವ ನನ್ನ ಗುಣ ಕಂಡವರು ನನ್ನದು ಧನು ರಾಶಿ ಇರಬಹುದೆಂದೂ, ಮಾತಿನಲ್ಲಿ ಕೆಲವೊಮ್ಮೆ ಕಟಕುವುದನ್ನು ಕಂಡ ಕೆಲವರು ಕಟಕ ರಾಶಿಯೆಂದು ಇನ್ನು ಕೆಲವರು ವೃಶ್ಚಿಕ ರಾಶಿಯೆಂದೂ, ಸಿಟ್ಟು ಬಂದಾಗ ಸುನಾಮಿ ಬಡಿದಂತೆ ಘರ್ಜಿಸುವ ಪರಿ ಮತ್ತು ಅಗತ್ಯ ಮೀರಿದ ಔದಾರ್ಯವನ್ನು ಕಂಡ ಕೆಲವರು ಸಿಂಹ ರಾಶಿ ಇರಬಹುದು ಎಂಬುದಾಗಿ ಆರೋಪಿಸಿದ್ದಾರೆ. ಮದುವೆಯಾಗುವ ಹೊತ್ತಿನಲ್ಲಿ ನನಗೆ ಜಾತಕ – ಗೀತಕ ಎಲ್ಲಾ ಇಲ್ಲ ಎಂದು ಮಾತುಕತೆಗೆ ಮೊದಲೇ ಸ್ಪಷ್ಟವಾಗಿ ಹೇಳಿದ್ದೆ. ನನ್ನ ಗಂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೈಕಿಯಲ್ಲ. ಜಾತಿ, ವಿದ್ಯೆ, ಸಂಬಳ, ಮನೋಭಾವ ಎಲ್ಲವನ್ನೂ ಜಾತಕ ಮೀರಿಸಿದ್ದ ಕಾರಣ ಈ ಹಿಂದೆ ಹಲವು ಸಂಧಾನಗಳು ಅಂತಿಮ ಹಂತದ ತನಕ ಬಂದು ಬಳಿಕ ರದ್ದಾಗಿದ್ದವು. ನನ್ನ ಅತ್ತೆಮ್ಮನಿಗೆ ಜಾತಕದ ಗೀಳು. (ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿರುವ ಅವರಿಗೆ ಬಳಿಕ ಜಾತಕ ಅಧ್ಯಯನದ ಆಸಕ್ತಿ ಹುಟ್ಟಿತಂತೆ. (ಅರೆಬರೆ ತಿಳಿದುಕೊಂಡಿರುವ ಅವರು, ಸಪ್ತಮಾಧಿಪತಿ ಚಂದ್ರ…. ಅಂತ ಶುರುವಿಕ್ಕಿದರೆ, ನಾನಲ್ಲಿಂದ ಪರಾರಿ!) ಮದುವೆ ಆದ ಶುರವಿನಲ್ಲಿ ಅತ್ತೆಮ್ಮ “ಸರಿ ನಿನ್ನ ಅಂದಾಜಿನ ಹುಟ್ಟಿದ ದಿನವನ್ನೇ ಹೇಳು” ಅಂದಿದ್ದರು. ನಿನ್ನ ಅಕ್ಕನವರು ಸಾಯಂಕಾಲ ಶಾಲೆಯಿಂದ ಬರುವ ವೇಳೆಗೆ ನೀನು ಹುಟ್ಟಿದ್ದೆ ಅಂತ ಅಮ್ಮ ಹೇಳಿದ್ದನ್ನೇ ಅವರಿಗೆ ಹೇಳಿದ್ದೆ. ಅವರು ಹಳೆಯ ಪಂಚಾಂಗವನ್ನೆಲ್ಲ ತೆಗೆದು – ಬಗೆದು; ಯಾವುದಕ್ಕೋ ಯಾವುದನ್ನೋ ಥಳುಕು ಹಾಕಿ, ನಾನು ವರಮಹಾಲಕ್ಮ್ಮಿ ವೃತ ದಿವಸ ಹುಟ್ಟಿದೆಂದು ಶೋಧಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೆ, ಅವರ ಮಗನ ಜಾತಕಕ್ಕೆ ಅತ್ಯಂತ ಪ್ರಶಸ್ತವಾಗಿ ಹೊಂದುವ ಜಾತಕ ನನ್ನದಂತೆ! ಸ್ನೇಹಿತೆಯೊಬ್ಬಳ ಮೂಲಕ ಫೋನಲ್ಲೇ ಪರಿಚಿತರಾಗಿ ಮಾತಾಡಿಕೊಂಡಿದ್ದ ನಾವು ಪರಸ್ಪರ ಮುಖತ ಭೇಟಿಯಾಗುವ ಮುನ್ನ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. “ನನ್ನಮ್ಮ ಆರು ವರ್ಷದವರಾಗಿದ್ದಾಗ ಅವರ ಅಮ್ಮ ತೀರಿಕೊಂಡರು, ಮೂವತ್ತಾರು ವರ್ಷಕ್ಕೆ ಗಂಡ ತೀರಿದರು. ಅವರು ಬದುಕಿನಲ್ಲಿ ತುಂಬ ನೊಂದ ಜೀವ, ಅವರಿಗೆ ನೋವಾಗದಂತೆ ಇರಬೇಕೆಂಬುದು ಮಾತ್ರ ನನ್ನ ನಿರೀಕ್ಷೆ, ಮಿಕ್ಕಂತೆ ನೀನು ಹೇಗಿದ್ದರೂ ಪರ್ವಾಗಿಲ್ಲ” – ಇದೊಂದೇ ಅವರು ಕೇಳಿಕೊಂಡಿದ್ದು. (ನನ್ನ ಹೆತ್ತಮ್ಮ ತೀರಿಕೊಂಡಿದ್ದರಿಂದ ನನಗೂ ಒಂದು ಅಮ್ಮನ ಅವಶ್ಯಕತೆ ಇತ್ತು.) ಮಿಕ್ಕಂತೆ ಜಾತಿ, ವಯಸ್ಸು, ವಿದ್ಯೆ, ಚಿನ್ನ, ಜಾತಕ, ಅಂತಸ್ತು, ಸಂಬಳ, ಉಳಿತಾಯ ಯಾವುದನ್ನೂ ಕೇಳಿರಲೇ ಇಲ್ಲ. ನಮ್ಮದು ಹುಟ್ಟಿನಿಂದ ವಿಭಿನ್ನ ಜಾತಿ. ಸಹಜವಾಗೇ ಕೆಲವು ಸಂಪ್ರದಾಯ, ನಂಬಿಕೆ, ಸಂಸ್ಕೃತಿಗಳಲ್ಲಿ ಭಿನ್ನತೆ ಇದೆ. ನನ್ನ ಅತ್ತೆಮ್ಮನ ತಾಳಕ್ಕೆ ತಕ್ಕಂತೆ ನನ್ನ ಮೇಳ ಇರುವ ಕಾರಣ ನಂಗೆ ಯಾವುದೇ ಸಮಸ್ಯೆ ಇಲ್ಲ. ಅಯ್ಯೋ ಅವಳ ಜಾತಕ – ಸ್ವಭಾವ ನನ್ನಂತೆಯೇ ಎಂಬುದಾಗಿ ಅತ್ತೆಮ್ಮ ಹೇಳುವಾಗ ಮಾತ್ರ ಮನದಲ್ಲಿ ಮುಸಿ ನಗು! ಜನ್ಮ ದಿನಾಂಕ ಸರಿಯಾಗಿ ತಿಳಿಯದಿರುವುದು ನನಗೆ ಎಷ್ಟೋ ಅನುಕೂಲವಾಗಿದೆ. ಜಾತಕ ನೋಡಿಸಿ ಜಾತಕದಲ್ಲಿ ಕೆಟ್ಟದಿದೆ ಎಂಬುದಾಗಿ ಅಳುವವರನ್ನು, ಶಾಂತಿ ಮಾಡಿಸುವವರನ್ನು, ಪೂಜೆ-ಪುನಸ್ಕಾರ ಮಾಡಿಸುವ ಪುರೋಹಿತರ ಉದ್ಧಾರಕರನ್ನೂ ಕಂಡಿದ್ದೇನೆ. ಇಷ್ಟನೇ ವರ್ಷಕ್ಕೆ ಇಂತಾದ್ದು ಆಗುತ್ತದೆ ಎಂಬ ಲೈಫ್ ಲೀಸ್ಟ್ ಇಲ್ಲದ ಕಾರಣ ನಾನು ಎಷ್ಟೋ ಆರಾಮ ಮತ್ತು ನಿರಾತಂಕಳಾಗಿ ಇದ್ದೇನೆ. ಆ ಮಟ್ಟಿಗೆ ನಾನು ತುಂಬಾ ಅದೃಷ್ಟವಂತಳೇ.

ಶಾನಿಯ ಡೆಸ್ಕಿನಿಂದ…. Read Post »

You cannot copy content of this page

Scroll to Top