ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ಅಡ್ಡಾಡಬೇಡ ಒಬ್ಬಳೇ! ಅಡ್ಡಾಡಬೇಡ ಒಬ್ಬಳೇ! ಅದರಲ್ಲೂ ಮಳೆಗಾಲ! ಇರುಳಿಡೀ ಸುರಿದ ಜಡಿಮಳೆಗೆ ತೊಯ್ದು ತೊಪ್ಪೆಯಾದವಳು ಜಗುಲಿಯೊಳಗೆ ಕಾದು ಕೂತಳು ಹಗಲ ಸೂರ್ಯನ! ನೆಂದದ್ದೆಲ್ಲ ಒಣಗಬೇಕು ಇಲ್ಲ ಫಲವತ್ತಾದ ನೆಲದೊಳಗೆ ಮೊಳಕೆಯೊಡೆಯಲು ಬೇಕು ಒಂದಿಷ್ಟು ಶಾಖ ಬೆಳಕು ಎಷ್ಟು ಹೊತ್ತಾದರು ಬಾರದ ಸೂರ್ಯನೊ ಬಿದ್ದ ಮಳೆಗೆ ಕಾರಣ ತಾನಲ್ಲ ಮೊಳಕೆಯೊಡೆವ ಬೀಜವೂ ತನ್ನದಲ್ಲವೆಂಬಂತೆ ಬರಲೇ ಇಲ್ಲ ಕಾದು ಕುಂತವಳ ಕಾಲುಗಳು ಬೇರುಬಿಟ್ಟು ಮನುಜರ ಕಾಡಿನಲಿ ತನ್ನದೇ ಗೂಡು ಕಟ್ಟಿದಳು ಒಂಟಿಯಾಗಿ ಈಗವಳು ಮಗಳ ಕೂರಿಸಿಕೊಂಡು ಕತೆ ಹೇಳುತ್ತಾಳೆ ಜೊತೆಗಷ್ಟು ಬುದ್ದಿ ಮಾತನು ಇರುಳಲ್ಲಿ ಅಡ್ಡಾಡಬೇಡ ಒಬ್ಬಳೇ! ಕು.ಸ.ಮಧುಸೂದನ ರಂಗೇನಹಳ್ಳಿ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯ ಯಾನ

ಆ ಕರಾಳ ಇರುಳು ಮಧು ವಸ್ತ್ರದ್ ನಾವು ಮುಂಬಯಿ ಮಾಯಾ ನಗರದ ದಿಟ್ಟನಿವಾಸಿಗಳು.. ಮರೆಯೆವು ಎಂದೂ 26-11ರ ಆ ಕರಾಳ ಇರುಳು.. ಉತ್ಸಾಹದ ಕೆಲಸದೊತ್ತಡದ ಗಜಿಬಿಜಿಯ ದಿನಗಳು.. ಅರಿವಿಲ್ಲದೆ ಬಲಿಯಾದರು ತಪ್ಪನೆಸಗದ ಮುಗ್ಧಜನಗಳು.. ಶತ್ರುಗಳು ನುಗ್ಗಿದರು ಮೋಸದಿ ಸಮುದ್ರಮಾರ್ಗದೊಳು.. ಯಾರಿಗೂ ಕಾಣಲಿಲ್ಲ ಆ ನೀಚ ಕಪಟಿಗಳ ನೆರಳು.. ಅಕಸ್ಮಾತ್ತಾಗಿಎರಗಿದ ಭೀಕರ ಗುಂಡು ಸಿಡಿಮದ್ದುಗಳು.. ಜೀವತೆತ್ತರನೇಕ ಕಾರ್ಯನಿರತ ಪೋಲಿಸ್ ಕರ್ಮಚಾರಿಗಳು.. ಸೋತುಬಳಲಿದವುಮುಂಬೈನ ಎತ್ತರದ ಕಟ್ಟಡಗಳು.. ಮೌನವಾದವು ಫುಟ್ ಪಾತ್ ಗಳು..ಖಾವುಗಲ್ಲಿಗಳು.. ಹೋಟೆಲ್ ತಾಜ್ಒಳಾಂಗಣದಿ ಪೋಲಿಸರ ಕಸರತ್ತು ಗಳು ಮೂರುದಿನಗಳವರೆಗೆ ಪಿಸ್ತೂಲ್ ಟ್ರಿಗರ್ ನಲ್ಲೆ ಬೆರಳು.. ಪ್ರವಾಸಿಗರನು ಸುರಕ್ಷಿತವಾಗಿ ಹೊರಗೆ ಕಳಿಸುವಗೀಳು.. ಗುಂಡಿನ ಚಕಮಕಿಯಲ್ಲಿ ಬಿದ್ದವು ನೂರಾರು ಶವಗಳು.. ಬೆಳ್ಳಗಾಗ ತೊಡಗಿದವು ತುಕಾರಾಂರ ಕಣ್ಣುಗಳು.. ಆದರೂ ಸೋಲದೆಹಿಡಿದರು ಕಸಾಬನ ಕೊರಳು.. ಮುಂಬಯಿ ಜನರಿಗೆ ತಮ್ಮ ಪೋಲೀಸರೆ ಹೀರೊಗಳು.. ನೀಡುವೆನು ಈ ಪೋಲಿಸರಿಗೆ ನನ್ನ ಶತಃಶತ ನಮನಗಳು ಕಿರುಪರಿಚಯ: ಗೃಹಿಣಿ..ಪತಿ-ಅಸಿಸ್ಟೆಂಟ್ ಪೋಲೀಸ್ ಕಮಿಷನರ್. ಕಳೆದ ೩೨ ವರ್ಷಗಳಿಂದ ಮುಂಬಯಿನಲ್ಲಿ ವಾಸ ಸಂಗೀತ.. ಸಾಹಿತ್ಯ.. ಅಡುಗೆ..ಗಳಲ್ಲಿ ತುಂಬಾ ಆಸಕ್ತಿ ಇದೆ..ಸಮಾಜ ಸೇವೆ ಮಾಡೋದರಲ್ಲೂ ಆಸಕ್ತಿ ಇದೆ.. ಓದುವುದು ಬರೆಯುವುದು ಹವ್ಯಾಸ,

ಕಾವ್ಯ ಯಾನ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ  ಬಗ್ಗೆ ವಿಶ್ಲೇಷಣೆ….        ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ ಇರ್ಬಹ್ದು ಅಂತ ಸುಮ್ನಾದೆ. ನಂಗೆ ಒಂದು ಹುಚ್ಚು ಕುತೂಹಲ, ಮಕ್ಳನ್ನ ಅವರ ಗುಣಗಳ್ನ ಅನ್ವೇಷಿಸೋದು ಸೈಲೆಂಟಾಗಿ ವೀಕ್ಷಿಸುತ್ತಾ ಹೋದ್ರೆ ಅವರ ಮನಸನ್ನ ಕೂಡ ಶೋಧಿಸ್ಬಹ್ದು ಅಂತ ಗೊತ್ತಿತ್ತು, ಕಲ್ತಿದ್ದೆ. ಸಮಯ ಸಿಕ್ಕಾಗ್ಲೆಲ್ಲಾ ಹುಡುಗನ ಚಟುವಟಿಕೆಗಳನ್ನು ದೂರದಿಂದಲೇ ವೀಕ್ಷಿಸುತ್ತಿದ್ದೆ ಸೋಜಿಗ ಎಂದರೆ ಎಲ್ಲಿದ್ದರೂ ಅಲ್ಲಿ ನಗೆಯ ಹೊನಲಿತ್ತು, ಅನ್ಯೋನ್ಯತೆ ಕಾಣುತ್ತಿತ್ತು. ಆದರೆ ನಾನು ಎದುರಿಗೆ ಹೋಗುವಾಗ ಮೌನ ಮುಗುಳ್ನಗು, ಗೌರವದ ಒಂದು ಸೂಚನೆ, ವಾಹ್! ಅಪರೂಪದ ರತ್ನ, 21ನೇ ಶತಮಾನದಲ್ಲೂ ಇಂಥ ಮಕ್ಕಳು..ಎಂದು ಮನಸ್ಸಲ್ಲೆ ಯೋಚಿಸಿ ಒಳ್ಳೇದಾಗಲಿ ಎಂದು ಆಶೀರ್ವಾದ ಮಾಡಿ ಬಿಡುತ್ತಿದ್ದೆ. ಕಾಲೇಜಿನ ವಾರ್ಷಿಕೋತ್ಸವ ಹೊಸತನದ ಹುಚ್ಚು.. ನನ್ನಲ್ಲಿ, ಮಕ್ಳಲ್ಲಿರುವ ಎಲ್ಲಾ ಗುಣಗಳ್ನ ಹೊರತೆಗಿಬೇಕಂತ ಆಸೆ. ಆ ಕಲೆಗಳ್ಗೆ ಗುರುತು ಕೊಡೋದೇ ನನ್ನ ಹುಚ್ಚು ಹಠ.. ಈ ನಿಟ್ನಲ್ಲಿ ಈ ಬಾರಿ ಕಾವ್ಯ ಕುಂಚ ಗಾನ ಎಂಬ 3 ಕಲೆಗಳ ಸಂಯೋಜನೆ ಮಾಡ್ದೆ-ಒಂದೇ ಸ್ಟೇಜಲ್ಲಿ. ಹಾಡುವವರು, ಹಾಡಿಗೆ ಚಿತ್ರ ಬರೆಯುವವರು, ಅದೇ ಹಾಡಿಗೆ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡ್ಸೋರು…. ಗೊತ್ತಿರ್ಲಿಲ್ಲ ಇವನು ಮ್ಯಾಂಡೊಲಿನ್ ನುಡಿಸ್ತಾನೆ ಅಂತ….. ಅಭ್ಯಾಸ ಶುರುವಾಯ್ತು, ಅಭ್ಯಾಸದೊಂದಿಗೆ ಸರಿ-ತಪ್ಗಳ ವಿಶ್ಲೇಷಣೆ, ರಾಗತಾಳಗಳ ಬಗ್ಗೆ ಸಂಯೋಜನೆ, ಹೆಚ್ ತಿಳ್ದೋರು-ಸ್ವಲ್ಪ ತಿಳ್ದೋರ ಮಧ್ಯದಲ್ಲಿ ಒಂದು ಬ್ಯಾಲೆನ್ಸ್ ತರೋ ಪ್ರಯತ್ನ…. ಸ್ವಲ್ಪ ಹೆಣ್ಣುಮಕ್ಕಳು, ಸ್ವಲ್ಪ ಗಂಡುಮಕ್ಕಳು, ತಬಲ, ಹಾರ್ಮೋನಿಯಂ, ಕೀಬೋರ್ಡ್, ಚಿತ್ರಗಾರರು, ರಾಗತಾಳಗಳು,ಹಿಮ್ಮೇಳಗಳು,ಅವಶ್ಯಕತೆಗಳು, ಕಲ್ಪನೆಗಳು, ಆಲೋಚನೆಗಳು, ಧೋರಣೆಗಳು, ಒಂದರಮೇಲೊಂದು ಸಮಾಗಮಗಳು… ಆ ದಿನ ಕೆಲಸದ ಒತ್ತಡ ಹೆಚ್ಚಾಗಿ, ಬೇರೆ ಸಮಸ್ಯೆಗಳೂ ಸೇರಿ, ಒಂತರಾ ಅಸಹನೆ ಕೂಡಿತ್ತು ನನ್ನಲ್ಲಿ. ರೋಸಿಹೋದ ದೇಹವನ್ನು ಹೊತ್ತು,ಮನಸಲ್ಲಿ ಸಾವಿರ ಪ್ರಶ್ನೆಗಳ ಉತ್ರಾ ಹುಡುಕ್ತಾ ಲ್ಯಾಬ್ನ ಕಡೆ ನಡ್ದೆ.. ಯಾವುದೋ ಸಿಟ್ನಲ್ಲಿ, ವ್ಯವಧಾನ ಕಳ್ಕೊಂಡು ಹೇಳಿದೆ  “ಪ್ರಾಕ್ಟೀಸ್ ಮಾಡಕ್ಕೆ ಏನ್ರೋಗ ನಿಮ್ಗೆ? ದಿನಾ ನಾನೇ ಬಂದು ಹೇಳ್ಬೇಕು! ಇಷ್ಟು ದೊಡ್ಡೋರಾಗಿದೀರ! ಜವಾಬ್ದಾರಿ ಬೇಡ್ವಾ. ಎಲ್ಲಾದುಕ್ಕೂ ನಾನೇ ತಲೆ ಚಚ್ಕೋಬೇಕಾ?” ಆ ಕಡೆಯಿಂದ ಮ್ಯಾಂಡೋಲಿನ್ ನಲ್ಲಿ “ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು” ನುಡಿಯಲಾರಂಭವಾಯಿತು. ನನ್ನ ಅತಿಪ್ರಿಯ ಹಾಡುಗಳಲ್ಲಿ ಒಂದು ಅದು. ನನ್ನ ಮುಖದಲ್ಲಿ ಮುಗುಳ್ನಗೆ ಅರಳಿದ್ದು ನಂಗೇ ಗೊತ್ತಾಗಲಿಲ್ಲ.. ನಕ್ಬಿಟ್ಟೆ..ಆಶ್ಚರ್ಯದಿಂದ ಅವನನ್ನ ಹತ್ರ ಕರ್ದು ಕೇಳ್ದೆ “ಹೇಗೆ ಗೊತ್ತು ಈ ಹಾಡು ನಿಂಗೆ, ಇದನ್ನೇ ಯಾಕ್ ನುಡುಸ್ದೆ ನೀನು?”        ಅದಕ್ಕೆ ಅವನು ಆಡಿದ ಮಾತು ಕೇಳಿ ದಂಗಾದೆ,” ಮಿಸ್,ಅವತ್ತು ಲ್ಯಾಬ್ ರೆಕಾರ್ಡ್ ಇಡಲಿಕ್ಕೆ ಬಂದಾಗ ನೀವು ಕಿಟಕಿಯ ಕಡೆ ನೋಡ್ಕೊಂಡು ಇದೇ ಹಾಡನ್ನು  ಗುನುಗ್ತಾ ಇದ್ರಿ, ಬಹಳ ಹಾಡುಗಳನ್ನು ನೀವುಗುಣ ಗಿದ್ದೀರಿ ಆದರೆ ಈ ಹಾಡಲ್ಲಿ ನಿಮ್ಮ ಮುಗುಳ್ನಗೆ ನಿಜವಾಗಿರುತ್ತೆ ಮಿಸ್”  “ನಿಮಗೆ ಸಂತೋಷವಾಗಲಿ ಎಂದೇ ಇದನ್ನು ನುಡಿಸಿದೆ”……ಇದಾದ್ನಂತ್ರ ದಿನಾ ಲ್ಯಾಬ್ಗೆ ನಾನು ಬಂದು ಕೂರ್ತಿದ್ಹಂಗೆ, ಒಂದು ನಿಮಿಷ ಈ ಹಾಡು.. ನನ್ನ ಮುಗುಳ್ನಗೆ.. ನಂತರ ರೆಗ್ಯುಲರ್ ಪ್ರಾಕ್ಟೀಸ್. ವಾರ್ಷಿಕೋತ್ಸವ ಆಯ್ತು, ಇಷ್ಟ್ರಲ್ಲೇ ನಾನು ಇವ್ನಲ್ಲಿ ಬಹಳ ವಿಶೇಷ ಗುಣಗಳ್ನ ಗುರುತಿಸಿದ್ದೆ..      ಆಟ ಆಡ್ತಾ ನಗ್ ನಗ್ತಾ ಇನ್ನೊಬ್ರ ಬೇಸ್ರಾನ ಗುರ್ತಿಸ್ತಿದ್ದ, ಅದ್ನ ಕಡ್ಮೆ ಮಾಡಕ್ಕೆ ತನಗಾದ ಪ್ರಯತ್ನ ಮಾಡ್ತಿದ್ದ.. ಎಲ್ಲಾ ಸಂಬಂಧಗಳಿಗೂ ಒಂದು ಬೆಲೆ ಇದೆ ಎಂಬ ಔಚಿತ್ಯ ಅರಿತುಕೊಂಡಿದ್ದ. ಬೇರೆಯವರು ಅವರವರ ಸಂಬಂಧಗಳನ್ನು ಹೇಗೆ ಬೆಳೆಸಬೇಕು ಎಂಬ ಸೂಕ್ಷ್ಮವನ್ನು ಹೇಳಿಕೊಡುತ್ತಿದ್ದ…ಸಂಬಂಧಗಳಿಗೆ ಗೌರವ ಪ್ರೀತಿ ವಿಶ್ವಾಸ ತುಂಬಿ ಸಂತೋಷದ ಹೊನಲು ಹಂಚುವ ಗುಣ ಬಹಳ ವಿರಳ… ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ನಿಸ್ವಾರ್ಥ ನಿಷ್ಕಾಮ ಪ್ರಬುದ್ಧ ತೆ ಇದೇ ಮೊದಲ ಬಾರಿ ನೋಡಿದ್ದು..ವಿಪರ್ಯಾಸ ಅಂದ್ರೆ, ಈ ವಿದ್ಯೆ ಯಾವ ಪುಸ್ತಕದಲ್ಲೂ ಹೇಳ್ಕೊಡೊದಿಲ್ಲ, ಅಂಕಪಟ್ಟಿಯ ಸಾಲಿನಲ್ಲಿ ಸೇರೊದಿಲ್ಲ, ಮೆಡಲ್ ಗಳು ಖಂಡಿತಾ ಇಲ್ಲ, ಇದಕ್ಕೆ ಯಾವ Rank ಕೂಡ ಕೊಡೋದಿಲ್ಲ…           ಈ ಸ್ವಾರ್ಥ ಲೋಕದಲ್ಲಿ ನಿಸ್ವಾರ್ಥ ಹಕ್ಕಿಯಾಗಿದ್ದು ಇವನು ಹಾರುವ ಮುನ್ನವೆ ಮುದುಡಿ ಹೋಗಿದ್ದು ತುಂಬಲಾರದ ನಷ್ಟವೇ ಸರಿ…ಸ್ವಾರ್ಥಿಗಳ ಸ್ವಾರ್ಥವೋ? ನಿಸ್ವಾರ್ಥದ ವರ ಶಾಪವೋ? ನಾನರಿಯೆ! ನನ್ನ ಮನಸ್ಸಲ್ಲಿ ಎಂದೂ ಆರದ ದೀಪವಾಗಿ ಆ ಗುಣಗಳನ್ನು ಅಳವಡಿಸಿಕೊಂಡು ಅವನನ್ನು ನನ್ನಲ್ಲಿ ಉಳಿಸಿಕೊಂಡೆ…..ಇರೋದ್ ಮೂರು ದಿನದಲ್ಲಿ ಹಂಚು ಪ್ರೀತಿಯ, ಈ ಉಡುಗೊರೆಗೆ ಸರಿಸಮ ಇನ್ನೇನಿಲ್ಲ

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಮಕ್ಕಳ ಪದ್ಯ

ಪಟ್ ಪಟೆಕಾಯಿ ಚಟ್ ಪಟ ಎಂದು! ವಿಜಯಶ್ರೀ ಹಾಲಾಡಿ ಪಟ್ ಪಟೆಕಾಯಿ ಚಟ್ ಪಟ ಎಂದು ಹಾಡು ಕಟ್ತಿತ್ತು ಮೆತ್ತನೆ ಹೆಜ್ಜೆಯ ಬೆಳ್ಳಿ ಬೆಕ್ಕು ಕದ್ದು ಕೇಳ್ತಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ನಕ್ಕು ಉರುಳಿತ್ತು ಮುಳ್ಳಿನ ಮರೆಯ ಓತಿಕ್ಯಾತವು ಫೋಟೋ ಹಿಡಿದಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಅಳುತಾ ಕೂತಿತ್ತು ಓಡುತ ಬಂದ ಇರುವೆಯಣ್ಣ ಗಲ್ಲ ಸವರಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಗೊರಕೆ ಹೊಡೆದಿತ್ತು ನಿದ್ದೆ ಬಾರದೆ ಬಾಲವ ಸುತ್ತಿ ನರಿಯು ಊಳಿತ್ತು ನರಿಯು ಊಳಿತ್ತು..!

ಮಕ್ಕಳ ಪದ್ಯ Read Post »

ಇತರೆ

ಸ್ಮರಣೆ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಸ್ಮರಣೆ Read Post »

ಇತರೆ

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ ಪದ್ಯ ನಾವು ಕೇಳಿದ್ದೀವಲ್ಲವೆ. ಚಳಿಗಾಲದ ಹಿಮ ಸೂಯೋ೯ದಯವನ್ನು ಕೊಂಚ ಹೊತ್ತು ಕಾಡಿದರೂ ನಂತರ ರವಿಯ ಕಿರಣಗಳು ಎಷ್ಟೊಂದು ಬೆಚ್ಚಗಿನ ಅನುಭವ ಕೊಡುತ್ತವೆ.ನಮ್ಮ ಮನೆಯ ಮುಖ್ಯ ದ್ವಾರದಿಂದ ಬರುವ ಸೂಯೋ೯ದಯದ ಕಿರಣಗಳಿಗೆ ಮೈಯೊಡ್ಡಿ, ಕನ್ನಡ ಪತ್ರಿಕೆಯನ್ನು ಓದುತ್ತಾ..ಅಧಾ೯ಂಗಿ ಕೊಟ್ಟ ಚಹಾವನ್ನು ಹೀರುವ ಕ್ಷಣವನ್ನು ವಣಿ೯ಸಲಸಾಧ್ಯವಾದುದು.ಗೈರುಹಾಜ ರಾಗದಂತೆ ಪ್ರತಿನಿತ್ಯ ಸವಿಯಬೇಕೆನಿಸಿತು.ಕವಿ ಬೇಂದ್ರೆಯವರು “ಬೆಳಗು ಜಾವ”ಕವನದಲ್ಲಿ “ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ ಕಣ್ಣ….. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿ ನಿದ್ದೆಗಿದ್ದೆ ಸಾಕು, ಈ ತುಂಬಿ ಬಾಳು ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.. ಹೀಗೆ ಬೆಳಗಿನ ಸೌಂದರ್ಯವನ್ನು ವಣಿ೯ಸುತ್ತಾ ಸೂಯೋ೯ದಯ ಸುಂದರ ಸೊಬಗನ್ನು ಸವಿದು ಬದುಕನ್ನು ಸಾಥ೯ಕ ಪಡಿಸಿಕೊಳ್ಳಿ ಎಂದು ಕರೆ ಕೊಡುವರು. ಈ ಸೊಬಗಿನ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಸೌಂದರ್ಯವನ್ನು ಕೊಂಚ ಹೊತ್ತು ಬದಿಗಿಟ್ಟು ಚಳಿಗಾಲದ ಬಾಲ್ಯದ ನೆನಪುಗಳ ಹಿಂತಿರುಗಿದರೆ ಸರಿಯಾದ ಬೆಚ್ಚಗಿನ ಹೊದಿಕೆಗಳಿಲ್ಲದೆ ನಿದ್ರೆ ಬರದೆ ಅಬ್ಬಬ್ಬಾ…ಚಳಿ ಎಂದು ನಡುಗಿ “ನಿ”ಆಕಾರದಲ್ಲಿ ಮೈ ಮುದುರಿಕೊಂಡು ಮಲಗಿದ್ದು ಇನ್ನೂ ಅಚ್ಚ ಹಸಿರು.ತೀವ್ರ ಚಳಿಗೆ ಅಪ್ಪ ತಾಳಲಾರದೆ ಬೀಡಿಯನ್ನು ಚೂರು ಬಿಡದಂತೆ ಅಂಚಿನವರೆಗೂ ಸೇದಿ ಸೇದಿ ಬಿಸಾಡಿದ್ದು, ಅಮ್ಮ ಹಚ್ಚಿದ ಒಲೆ ಮುಂದೆ ಕೈಗಳನ್ನು ಬಿಸಿ ಮಾಡಿ ಕೆನ್ನೆಗಳನ್ನು ಬೆಚ್ಚಗೆ ಸವರಿಕೊಂಡಿದ್ದ ನೆನಪುಗಳು ಈಗಲೂ ಬೆಚ್ಚಗೆ ಕಾಡುತ್ತಲೇ ಇವೆ. ಕೆ, ಎಸ್, ನ ರವರ “ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು, ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು….. ಹೀಗೆ ಜೀವನಪೂತಿ೯ ನಮ್ಮ ಗೊಣಗಾಟ ವಿದ್ದದ್ದೆ ಅಲ್ಲವೇ! ಏನೇ ಇರಲಿ ಪ್ರಕೃತಿಯ ಎಲ್ಲಾ ಕಾಲಮಾನಗಳ ಜತೆ ಹೊಂದಿಕೊಂಡು ಅದರ ಅನುಭವವನ್ನು ಸವಿದು ಬದುಕಿದಾಗಲೇ ಜೀವನಕ್ಕೆ ಒಂದು ಅಥ೯ವಿರುವುದು. (ಭಾನುವಾರ ನಮಗೆ ಬಿಡುವಾದರೂ “ಭಾನು”ರಜೆ ಪಡೆಯುವಂತಿಲ್ಲ.ಪೂತಿ೯ ರಜೆ ಹಾಕಿದರೆ ಅದರ ಪರಿಣಾಮವೇ ಬೇರೆ) ರಜೆ ಇದ್ದುದರಿಂದ ಬೆಳಗಿನ ಸೂಯೋ೯ದಯವನ್ನು ಸವಿಯುತ್ತಾ ಚಹಾ ಹೀರುತ್ತಾ ಒಂದಷ್ಟು ನೆನಪಿನ ಸಾಲುಗಳು.

ಅನುಭವ Read Post »

ಕಾವ್ಯಯಾನ

ಕಾವ್ಯಯಾನ

ಮನದಾಳದ ಬಯಕೆ ರತ್ನಾ ಬಡವನಹಳ್ಳಿ ಸದ್ದಿಲ್ಲದೆ ಸರಿದ ಸುಂದರ ದಿನಗಳು ಸುದ್ದಿ ಮಾಡಿದ್ದರಿಯದಿಹ ವಾರಗಳು ತಂಗಳೆನಿಸದ ತಿಳಿನೀರಂತಹ ತಿಂಗಳುಗಳು ಹರುಷದ ಸವಿ ಸಿಂಚನಗೈದ ವರುಷಗಳು ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ ಕಿಚ್ಚಾವರಿಸದ ಹಚ್ಚ ಹಸಿರು ಕಾನನ ಸ್ವಚ್ಛ ಮನಗಳ ನಡುವೆ ಹೂವಾದ ಜೀವನ ಧಾವಂತಗಳಲಿ ನಲುಗದೆ ನಲಿದ ಮೌನ ಧ್ಯಾನ ನವನೀತದಲಿ ಜಾರುವ ಕೇಶದಂತಹ ಯಾನ ಕಲ್ಪನೆಯ ಬದುಕು ಸಾಕಾರವಾಗಬಹುದೇ ಮುಂದೊಂದು ದಿನ ಬರಡು ಬಯಲೊಳಗೆ ಭರವಸೆಯ ಬೆಳಕು ತೊರೆದು ತೆರಳಿರೆ ಜಗದಿ ತುಂಬಿಹ ಕೊಳಕು ಹಳಿಯದೆ ಹರಸುತ ಹುಡುಕದೆ ಹುಳುಕು ಒಳಿತನೇ ಬಯಸುತ ಎಲ್ಲರಲಿ ಸರ್ವಕಾಲಕು ಉರುಳಿತಿರೆ ಕಾಲಚಕ್ರ ಕಾಣದೇನು ಸತ್ಯಯುಗ ಮುಂದೊಂದು ದಿನ ಕಿರುಪರಿಚಯ: ಕವನ,ಕವಿತೆ,ಗಜ಼ಲ್,ಚುಟುಕು ಲೇಖನ ಬರೆಯುವ ಹವ್ಯಾಸ.ಪ್ರಜಾಪ್ರಗತಿ,ಮಾನಸಾ,ಕಸ್ತೂರಿ ಇನ್ನಿತರ ಪತ್ರಿಕೆಗಳಲಿ ಪ್ರಕಟಗೊಂಡಿವೆ.ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿಹೆಕನ್ನಡ ಸಾಹಿತ್ಯಪರಿಷತ್ ನಿಂದ ಪ್ರಶಸ್ತಿ ಬಂದಿದೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಖಿ ಸತ್ಯಮಂಗಲ ಮಹಾದೇವ ಈ ಬೆಳಗಿನ ಏಕಾಂತ ಅದೇಕೊ ಮುದ ನೀಡಲಿಲ್ಲ ಸಖಿ ನಟ್ಟನಡುರಾತ್ರಿಯ ಕಡುಕತ್ತಲಲ್ಲಿ ನಿನ್ನ ಮೊಗವೊಂದೆ ಸಾಕು ಬೆಳದಿಂಗಳಂತೆ ಯಮುನಾ ತೀರದಲಲೆಯುತ ಒಂಟಿ ನಡಿಗೆಯ ಪ್ರಯಾಣ ಅದೆಷ್ಟು ನೀರಸ ಸಖಿ ಮಧುರ ಮಂಜುಳ ನಾದವೂ ಸಪ್ಪೆ ತೆರೆಯೇರಿ ಬೀಸುವ ತಂಗಾಳಿಯೂ ರುಚಿಯಿಲ್ಲ ಮೈಗೆ ನಿನ್ನ ಹೆಸರೊಂದೇ ಸಾಕು ಅದೆಷ್ಟೋ ದೂರದ ನಿನ್ನ ಸನಿಹದಂತಿರಿಸುವುದು ಪದವನರಿತ ಮನಸ್ಸಿಗೆ ಪರಿಚಯ ಬೇಕೆ ಬಣ್ಣವಾಗುವ ಕನಸುಗಳಿಗೆ ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ ನಿನ್ನ ಉಸಿರ ಜಾಡು ಕಣ್ಣಳತೆಯಲಿ ಹಾದು ಹೋಗುವಾಗ ನನ್ನ ಆವರಿಸಿದ ಆ ಮಹಾನಂದವನು ಬಣ್ಣಿಸಲು ಅಕ್ಷರಗಳು ಸೋಲುತ್ತಿವೆ ಏಕಾಂತದ ಆ ಮೌನಕೆ ಹೊಸಚೈತ್ರಗಳಾ ಆಮೋದಕೆ ಕಾಲ್ಬೆರಳು ಗೀಚುವ ಲಜ್ಜೆಯ ಯಾತ್ರೆಗೆ ಆ ನಗುವು ಭಾಷ್ಯ ಬರೆಯಿತು ಮುತ್ತಿಡಲು ಹೊರಟ ವಸಂತ ನಾನು ಅವನನ್ನು ಮೀರಿಸಿ ಹೊರಟೆ… ಒಳಗೊಳ್ಳುವ ಸಂವಿಧಾನಕ್ಕೆ ದುಃಖ ನೀರದಾರಿ ಅರ್ಥವಿರದ ಈ ಆಸೆಗಳ ಭ್ರೂಣಕ್ಕೆ ನೀನು ತಂದೆ ನಾನು ತಾಯಿ.

ಕಾವ್ಯಯಾನ Read Post »

ಇತರೆ

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. ನಂತರ ಶಾಲೆಗೆ ಹೋದ ಮೇಲೆ ಮಕ್ಕಳು ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ಕಲಿತು ಹಾಡುತ್ತಾ ಕವಿತೆಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಆ ಪದ್ಯಗಳ ಮೂಲಕ,ಕಥೆಗಳ ಮೂಲಕ ಮಕ್ಕಳಿಗೆ ಸಾಹಿತ್ಯದ ಸವಿ ಹತ್ತಿರುತ್ತದೆ. ಪುಟ್ಟ ಪುಟ್ಟ ಹಾಡು,ಕವಿತೆ ಹೇಳಿ ಕೊಡುವುದರ ಈ ಮೂಲಕವೂ ಮಕ್ಕಳಿಗೆ ಸಾಹಿತ್ಯದ ಪರಿಚಯವನ್ನು ,ಆಸಕ್ತಿಯನ್ನು ಪ್ರತ್ಯಕ್ಷವಾಗಿ ಮೂಡಿಸಬಹುದು.ಮಕ್ಕಳು ತಾವೇ ಪುಟ್ಟ ಪುಟ್ಟ ಪದ್ಯಗಳನ್ನು ಬರೆಯಲು ,ಅದನ್ನು ಹಾಡಲು ಪ್ರೇರೇಪಿಸುವ ಮೂಲಕ ಸಾಹಿತ್ಯಾಸಕ್ತಿ ಮೂಡಿಸಿದರೆ ಕವಿತೆ ಬರೆಯಲು ಬುನಾದಿ ಹಾಕಿದಂತಾಗುತ್ತದೆ.ಶಾಲೆಯಲ್ಲಿ ಕಲಿತ “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು” ಈ ಕವಿತೆ ಮಕ್ಕಳಿಗೆ ಇಷ್ಟವಾಗುವ ತುತ್ತೂರಿ ಬಗ್ಗೆ ಇರುವ ಮನಸೆಳೆಯುವ ಪದ್ಯವಾಗಿದ್ದು, ಹಾಡಿನ ಪರಿಚಯ ಮಾಡಿಸಿ ಕೊಡುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಮುದ್ದಿನ ಪ್ರಾಣಿಯಾದ ನಾಯಿಮರಿ ಬಗ್ಗೆ ಇರುವ ಪದ್ಯ ಯಾರಿಗೆ ಗೊತ್ತಿಲ್ಲ. “ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು” ಈ ಪದ್ಯವಂತೂ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟವಾಗಿರುವ ಪದ್ಯ. ಬೆಕ್ಕಿನ ಬಗ್ಗೆ ಇರುವ ಈ ಪದ್ಯ ಹೇಳಿಯೇ,ಕೇಳಿಯೇ ಮಕ್ಕಳೆಲ್ಲ ಬೆಳೆದವರು. “ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಕರೆದರೂ ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ” ಮಕ್ಕಳು ಮುದ್ದು ಮಾಡುವ ಪ್ರಾಣಿಗಳು ಇವು.ಮೇಲಿನ ಪದ್ಯಗಳ ಕಲಿತಿರುವ,ಅದನ್ನು ಹಾಡುವ ಮಕ್ಕಳಿಗೆ ಕವಿತೆ ಬರೆಯಲು ಇವು ಪ್ರೇರಣೆ ನೀಡುವಂತೆ ಮಾಡಿದರೆ ಮಕ್ಕಳಿಂದ ಸಾಹಿತ್ಯ ರಚನೆ ಸಾಧ್ಯವಾಗಬಹುದು.ಮೊದಲು ಕವಿತೆಗಳನ್ನು ಕೇಳಿಸಿಕೊಳ್ಳಲು ಅನುವಾಗ ಬೇಕು.ನಂತರ ಪುಟ್ಟ ಪುಟ್ಟ ಕವನವಿರುವ ಪುಸ್ತಕಗಳನ್ನು ಓದಲು ಪ್ರಯತ್ನ ನಡೆಸ ಬೇಕು.ಓದುತ್ತಾ ಓದುತ್ತಾ ಹಾಡಿಕೊಳ್ಳುತ್ತಾ ಹೋದರೆ ಕಾವ್ಯದ ರುಚಿ ಹತ್ತುತ್ತದೆ. ಆಗ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬಹುದು. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆನ್ನಬಹುದು. ಮಕ್ಕಳ ಸಾಹಿತ್ಯ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಮೊದಲಿಟ್ಟಿರಬಹುದು. ಅನಂತರ ಕಥೆಗಳಿಂದ ಬೆಳೆದಿರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಿರಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಇದರ ಮೂಲ ಜಾನಪದವಾಗಿರಬಹುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ. ಮಕ್ಕಳು ಕವಿತೆ ರಚನೆ ಮಾಡಲು ಅನುಕೂಲವಾದ ವಾತಾವರಣ ಕಲ್ಪಿಸಿದರೆ ಮಕ್ಕಳಿಂದ ಕವಿತೆ ಸೃಷ್ಟಿ ಸಾಧ್ಯವಾಗುತ್ತದೆ. ತಮ್ಮ ಸುತ್ತಲಿನ ವಸ್ತುಗಳ ಮೇಲೆ ಸರಳ ಪದಗಳನ್ನು ಬಳಸಿ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯಲು ಪ್ರಯತ್ನಿಸಬೇಕು.ಚಿಟ್ಟೆ, ಶಾಲೆ,ಮರ,ಅಪ್ಪ ,ಅಮ್ಮ ,ತಮ್ಮ , ತಂಗಿ ,ಗೊಂಬೆ, ನಾಯಿ,ಬೆಕ್ಕು,ಗಿಣಿ ,ಹಸು,ಕರು ಹೀಗೆ ತಮಗೆ ಪ್ರಿಯವಾದ,ತನಗೆ ಗೊತ್ತಿರುವ ,ತಿಳಿದಿರುವ ವಸ್ತುಗಳ ಮೇಲೆ ,ಪ್ರಾಸ ಹಾಕಿ ಆಕರ್ಷಣೆಯವಾಗಿ ಬರೆಯುವ ಪ್ರಯತ್ನ ನಡೆಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟುತ್ತಾ ಹೋಗುತ್ತದೆ. ಸಾಹಿತ್ಯವು ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು . ಮಕ್ಕಳು ಸಾಹಿತ್ಯ ರಚನೆ ಮಾಡುವಾಗ, ಹಿರಿಯರ,ತಂದೆ ,ತಾಯಿಯರ,ಶಿಕ್ಷಕರ, ಸಾಹಿತಿಗಳ ಮಾರ್ಗದರ್ಶನ, ಸಲಹೆ ,ಸೂಚನೆಗಳಿರುತ್ತವೆ. ಮಕ್ಕಳು ಕಥೆ, ಕವನ, ಲೇಖನಗಳು, ನಗೆ ಹನಿಗಳನ್ನು ಬರೆಯಬಹುದು. ಮಕ್ಕಳು ಕವಿಗಳ ಹಾಗೂ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿದ್ದು, ಮಕ್ಕಳ ವಿಚಾರ ಮತ್ತು ಕಲ್ಪನಾ ಲೋಕದ ಸಾಹಿತ್ಯಕ್ಕೆ ಪ್ರೋತ್ಸಾಹ ಬೆಂಬಲ ನೀಡಬೇಕು . ಮಕ್ಕಳು ಬರೆದ ಕಾವ್ಯ ಸಾಹಿತ್ಯಕ್ಕೆ ಸೂಕ್ತ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆದ ಮನಸ್ಸುಗಳಿಂದ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯವಿದೆ. ಮಕ್ಕಳ ಸಾಹಿತ್ಯವನ್ನು ಟೀಕಾತ್ಮಕವಾಗಿ ನೋಡುವ, ಮಕ್ಕಳ ಸಾಹಿತ್ಯವನ್ನು ವಿಮರ್ಶಾ ದಷ್ಠಿಯಿಂದ ನೋಡುವ ಬದಲು ಮಕ್ಕಳ ಸಾಹಿತ್ಯದಲ್ಲಿ ಹೊಸತನ್ನು ಕಾಣುವ ಕಾವ್ಯ ಗುಣಬೇಕು. ಅವರು ಏನೇ ಬರೆದರೂ ಉತ್ತೇಜಿಸಿ ಮತ್ತಷ್ಟು ಬರೆಯಲು ಪ್ರೇರೇಪಣೆ ನೀಡಿದ್ದಲ್ಲಿ ಅವರಿಂದ ಉತ್ತಮವಾದ ರಚನೆಯನ್ನು ನಿರೀಕ್ಷಿಸಬಹುದು. ಮಕ್ಕಳು ಪಠ್ಯಪುಸ್ತಕವಲ್ಲದೆ ಸಾಹಿತ್ಯ ಕೃತಿಗಳನ್ನು ಓದಬೇಕು.ಕೊಂಡು ಓದುವ ಹವ್ಯಾಸ ಮಕ್ಕಳಿಗೆ ಬೆಳಸಬೇಕು.ಹಬ್ಬಗಳಲ್ಲಿ, ಹುಟ್ಟು ಹಬ್ಬದ ಕಾಣಿಕೆಯಾಗಿ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳಸಬೇಕು.ಆಗ ಮಕ್ಕಳಿಗೆ ಓದುವ ಅಭಿರುಚಿ ಬೆಳೆಯುವುದರ ಜೊತೆಗೆ ,ಪುಸ್ತಕಗಳ ಸಂಗ್ರಹಿಸುವ ಹವ್ಯಾಸ ಕೂಡ ಮಕ್ಕಳಲ್ಲಿ ಉಂಟಾಗುತ್ತದೆ. ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಹಿರಿಯರ ಪುಸ್ತಕ ಓದಬಾರದು ಎಂಬ ನಿಯಮವೇನು ಇಲ್ಲಾ ಕೆಲವೊಮ್ಮೆ ದೊಡ್ಡವರ ಪುಸ್ತಕಗಳು ಮಕ್ಕಳಿಗೆ ಬೇಕಾಗುವ ಸಾಧ್ಯತೆಗಳಿವೆ ಹೀಗಾಗಿ ಇವು ಜ್ಞಾನ ಬಿತ್ತರಿಸುವ ವಿಸ್ತರಿಸುವ ಘಟ್ಟಗಳಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಒಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯ ಓದುವ ಮತ್ತು ಬರೆಯುವ ಸಾಮಾರ್ಥ,ಆಸಕ್ತಿ ,ಅಭಿರುಚಿ ಬೆಳೆಸಿ ಆ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿಲು ಪ್ರಯತ್ನ ಮಾಡಬಹುದು ಕಿರು ಪರಿಚಯ: ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ,ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ. ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಕ್ಕಳು ಮತ್ತು ಸಾಹಿತ್ಯ Read Post »

You cannot copy content of this page

Scroll to Top