ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಗಳು

ಲಕ್ಷ್ಮಿಕಾಂತ್ ಮಿರಜಕರ

ಮಗಳು ಹುಟ್ಟಿದ್ದಾಳೆ
ತಂದಿದ್ದಾಳೆ ಜೊತೆಯಲ್ಲಿಯೇ
ಹೆಡೆಮುರುಗಿ ಕಟ್ಟಿ ವಸಂತನನ್ನು
ಮನೆಯಲ್ಲೀಗ ನಿತ್ಯ ದೀಪಾವಳಿ
ಮನ ತುಂಬಾ ಬೆಳದಿಂಗಳ ಓಕುಳಿ

ಮಗಳು ಮುಗುಳ್ನಗುತ್ತಿದ್ದಾಳೆ
ಮಾಯವಾಗುತ್ತಿವೆ
ಜಗದ ಜಂಜಡಗಳು ಒಂದೇ ಗುಕ್ಕಿಗೆ
ಕರಗಿ
ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ

ಬಂದು ಬೀಳುತ್ತಿವೆ
ಗಗನದ ನಕ್ಷತ್ರಗಳೆಲ್ಲಾ
ಅವಳ ಸುಕೋಮಲ
ಮೃದು ಪಾದದ ಅಡಿಯಲ್ಲಿ

ಮಗಳು ಅಂಬೆಗಾಲಿಡುತ್ತಿದ್ದಾಳೆ
ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ
ಅರ್ಥ ಕಳೆದುಕೊಳ್ಳುತ್ತಿವೆ
ದೊಡ್ಡವರ ಸಿನಿಕತನದ ಮಾತುಗಳು

ಮಗಳು ಮಾತನಾಡುತ್ತಿದ್ದಾಳೆ
ಕಪಟವರಿಯದ ಮಗಳ
ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ
ರಾಮಾಯಣ ,ಕುರಾನ್,ಬೈಬಲ್
ಭಗವದ್ಗೀತೆಯ ಸಾರ
ನಿಜ,ಮಗಳು ಇಲ್ಲದೇ ಹೋದರೆ
ಬದುಕು ನಿಸ್ಸಾರ!

ಮಗಳು ನಡೆಯುತ್ತಿದ್ದಾಳೆ
ಒಂದೊಂದೇ ತಪ್ಪುಹೆಜ್ಜೆಗಳ ಸರಿಪಡಿಸಿಕೊಳ್ಳುತ
ನಡೆಯುತ್ತಿದೆ ಸರಿದಾರಿಯಲ್ಲಿ
ಹಳಿ ತಪ್ಪಿದ್ದ ಜೀವನಯಾನ
ಮಗಳೆಂಬ ತಾಯಿಯ ಆಗಮನದಿಂದ
ಜೀವಂತಿಕೆಯ ಸಾನಿಧ್ಯದಿಂದ

ಮಗಳು ಓಡುತ್ತಿದ್ದಾಳೆ
ಸಮಯವೂ ಈಗ ಅವಳ
ಹಿಂದೆ ಹಿಂದೆ ಓಡುವ ಬಾಲಂಗೋಚಿ
ಸರಿದದ್ದೇ ಗೊತ್ತಾಗುವುದಿಲ್ಲ
ಮಗಳೆಂಬ ಚೈತನ್ಯದ ಸನ್ನಿಧಿಯಲ್ಲಿ
ಬದುಕೀಗ ರಸನಿಮಿಷಗಳ ಆಗರ
ಮನೋಲ್ಲಾಸದ ಸಾಗರ.

*********************

ಪರಿಚಯ:

ಲಕ್ಷ್ಮಿಕಾಂತ ಮಿರಜಕರ ..ಊರು ಹಾವೇರಿ ಜಿಲ್ಲೆ ಶಿಗ್ಗಾಂವ.ಸದ್ಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ.ಕವನ ಕತೆ ಓದು ಮತ್ತು ಬರೆಯುವುದರಲ್ಲಿ ಆಸಕ್ತಿ..ಶಾಲೆಯ ಮಕ್ಕಳ ಬರಹಗಳನ್ನು ಸಂಪಾದಿಸಿ “ಚಿಲುಮೆ” ಎನ್ನುವ ಪುಸ್ತಕವನ್ನು ಪ್ರಕಟಿದ್ದೇನೆ.ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ..

About The Author

Leave a Reply

You cannot copy content of this page

Scroll to Top