ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ ಶತಮಾನದ ಭಾರತೀಯ ಬದುಕಿನ ವಿವರಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು, ನೋವು- ನಲಿವು, ಹತಾಶೆ, ಸಾವು, ಯಶಸ್ಸು… ಹೀಗೆ ಆಯಾ ಪ್ರದೇಶದ, ಭಾಷೆಯ ಆವರಣದಲ್ಲಿ ಮೈಪಡೆದ ಮನುಷ್ಯ ಜಗತ್ತಿನ ಚಿತ್ರಣ ಈ ಕೃತಿಯಲ್ಲಿದೆ. ಇಲ್ಲಿನ ಕತೆಗಳ ಆಯ್ಕೆಯ ಹಿಂದೆ ಶಾರದಾಪ್ರಸಾದರ ಸೂಕ್ಷ್ಮತೆ ಮತ್ತು ಭಾವುಕತೆ ಎದ್ದು ಕಾಣುತ್ತದೆ.ಯಾವ ಸಾಹಿತ್ಯ ಫ್ಯಾಷನ್ನುಗಳಿಂದ ಪ್ರಭಾವಿತರಾಗದ ಅವರ ಆಯ್ಕೆ, ತಮ್ಮ ಮನಸ್ಸಿಗೆ ತಟ್ಟಿದ ಕಥೆಗಳನ್ನು ಅವರು ಕನ್ನಡಿಗರ ಓದಿಗೆ ಬಡಿಸಿದ್ದಾರೆ. ಇವು ಅಂತಃಕರಣದ ಕತೆಗಳು. ವೈವಿಧ್ಯಮಯ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಕೃತಿಯಿದು. ******** ಡಾ.ಅಜಿತ ಹರೀಶಿ

ಒಂದು ಮರ ನೂರು ಸ್ವರ Read Post »

ಪುಸ್ತಕ ಸಂಗಾತಿ

ಅವ್ವ ಮತ್ತು ಅಬ್ಬಲಿಗೆ

ನನಗೆ  ಅವ್ವ ಮತ್ತು ಅಬ್ಬಲಿಗೆ  ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ ಆಧುನಿಕ, ನಗರವಾಸಿ ಅವ್ವನಾಗಿ  ಕಾಣುತ್ತಿದ್ದಾಳೆ.   ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ  ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ ,  ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ.  ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು  ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ ಮಹಿಳೆಯಲ್ಲಿ ಕಾಣುತ್ತಲೇ ಪ್ರಶ್ನೆ ಎಸೆಯುತ್ತಾಳೆ. ರಾಮಾಯಣದ ಶಬರಿಯನ್ನು ಎಳೆದು ತಂದು ಇವತ್ತಿನ ಸಮಾಜದೆದರು ನಿಲ್ಲಿಸಿ ತಕರಾರು ತೆಗೆಯುತ್ತಾಳೆ. ದನಗಳ ತಾಯ್ತನಕ್ಕೆ ಮತ್ತು ಅವಕ್ಕೆ  ವಯಸ್ಸಾದ ಮೇಲೆ ಮಾರುವವರ,ಕೊಳ್ಳುವವರ ಕಟುಕುತನವನ್ನು ಭಂಜಿಸುತ್ತಾಳೆ.ಹಾಗೂ ಬೀದಿ ನಾಯಿಯಲ್ಲಿನ ತಾಯ್ತನಕ್ಕೆ , ಅದು ತನ್ನ ಹೆತ್ತ ಮರಿಗಳನ್ನು ಅನಾಥವಾಗಿಸುವಲ್ಲಿ ತನ್ನ ಒಂಚೂರು ಪಾಲಿದೆ ಎಂದು ಕೊರಗುತ್ತಾಳೆ. ಹಾಗೂ ಬೀದಿ ನಾಯಿ ಪಾಡಿಗೆ ಕಾರಣವಾದ  ನಿರ್ಲಜ್ಜ ,ನಿರ್ಲಕ್ಷ ಗಂಡು ನಾಯಿಯ ಬಗ್ಗೆ ತಣ್ಣನೆಯ ಕೋಪವನ್ನು ದಾಖಲಿಸುತ್ತಾಳೆ ಕವಯಿತ್ರಿ ಶೋಭಾ. ಇನ್ನು ಅವ್ವ ಅಬ್ವಲಿಗೆಯಲ್ಲಿ ರಾಜಕೀಯ ಪ್ರಜ್ಞೆ ಪ್ರಖರವಾಗಿಯೇ ನಾಲ್ಕಾರು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಗುರ್ ಮೆಹರ್ ಅಂತರಂಗ, ಖುರ್ಚಿಗಾಗಿ ಯುದ್ಧ ಪ್ರಚೋದಕತೆಯ ಪ್ರಶ್ನಿಸಿದರೆ,  “ಸುಮ್ಮನಿರುವೆ  ಏಕೆ ಹೇಳು? ”  ಕವಿತೆ  ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ ನೀಡುತ್ತದೆ ಹಾಗೂ  ಶ್ರಮಿಕನೋರ್ವ , ಓಟು ಕೇಳಲುಬಂದವನಿಗೆ ಪ್ರಶ್ನಿಸುವುದು (ಓಟು ಬೇಡುವ ಸಮಯ) ಕವಿತೆ ಯಲ್ಲಿದೆ. ‘ಬಡವನಳಲು’  ಕವಿತೆ ಬೆವರಿಗಿಲ್ಲದ ಬೆಲೆಯು ನನ್ನ ಓಟಿಗೇತಕೆ ಒಡೆಯಾ ಎಂದು ಪ್ರಶ್ನಿಸಿದರೆ, ‘ದೇವನಳಲು’  ಕವಿತೆಯಲ್ಲಿ ದೇವರು ಭಕ್ತರಿಗೆ ಪ್ರಶ್ನಿಸುವ ಅಪರೂಪದ ನಡೆಯಿದೆ. ನಾನೇನು ಬಡವನೇ ನಿಮ್ಮಲ್ಲಿ ಬೇಡುವಷ್ಟು ಎನ್ನುವ ದೇವರು ; ನಾನು ತಿರುಕನಲ್ಲ, ಕಟುಕನಲ್ಲ, ದುರ್ಬಲನಲ್ಲ, ಹೆರುವಶಕ್ತಿಯಿಲ್ಲ,ಬಡವನಲ್ಲ ಎಂದು ದೇವರೇ ಭಕ್ತರಿಗೆ ಸ್ಪಷ್ಟೀಕರಣ ಕೊಡುವ ಬಗೆ ಕನ್ನಡಕ್ಕೆ ಹೊಸತು. ಇದು ಕವಯಿತ್ರಿ ಶೋಭಾ ನಾಯ್ಕರ ಕಾವ್ಯ ಕಟ್ಟುವ ವಿಶಿಷ್ಟ ನಡೆಯಾಗಿದೆ. ದೇವರು ಮತ್ತು ಧರ್ಮದ ಕುರಿತ ಕವಿತೆಗಳನ್ನು ಹೊಸೆದ ಕನ್ನಡ ಕೆಲವೇ ಕೆಲವು ಕವಯಿತ್ರಿಯರಲ್ಲಿ ಶೋಭಾ ಸಹ ಒಬ್ಬರು. ದೇವರು ಧರ್ಮದ ವಿಚಾರ ಬಂದಾಕ್ಷಣ ಮೌನತಾಳುವ ಮತ್ತು ಸಂಪ್ರದಾಯದ ಮುಸುಕು ಹಾಕಿ ಸೇಫರ್ ಝೋನ್ ನಲ್ಲಿ ನಿಲ್ಲುವ  ಸಾಹಿತಿಗಳಿಗಿಂತ ; ಭಿನ್ನವಾಗಿ ನಿಲ್ಲುವ ಶೋಭಾ ಹಿರೇಕೈ ; ಈ ಕಾರಣದಿಂದ ಅವರು ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿ ಎನಿಸುತ್ತಾರೆ. ಕುವೆಂಪು ಮತ್ತು ಲೋಹಿಯಾ ಪ್ರಭಾವ : ಮುಗ್ದತೆಯಿಂದ ಕವಿತೆಗಳನ್ನು ಶೋಭಾ ಕಟ್ಟಿದರೂ ಅವರ ವೈಚಾರಿಕ ಓದು ಸಹ ಅವರ ಕವಿತೆಗಳನ್ನು ಪ್ರಭಾವಿಸಿದೆ.  ವೈಚಾರಿಕ ಕ್ರಾಂತಿಗೆ ಯುವಕರಿಗೆ ಆಹ್ವಾನ ನೀಡಿದ ಕುವೆಂಪು ಅವರನ್ನು ಓದಿರುವ ಅವರು ದೇವರು ಮತ್ತು ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಇರುವವರು. ದೇವರು ಸದಾ ಹುಡುಕಾಡುವ, ಧರ್ಮ ಸದಾ ಕಾಡುವ ಸಂಗತಿ ಯೆಂದು ಕವಯಿತ್ರಿ ೨೦೨೦ ಮಾರ್ಚ ೨೬ ರಂದು ಕಡಲವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೋಧರ್ಮವನ್ನು ಗಮನಿಸಿ ಅವರ ಕವಿತೆಗಳನ್ನು ಓದಿದಾಗ ಹೊಸ ಆಯಾಮವೊಂದು ಸಹಜವಾಗಿ ಪ್ರಾಪ್ತವಾಗಿ ಬಿಡುತ್ತದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಮಹಿಳೆಯಾಗಿಯೂ, ಅವರನ್ನು ವೈಚಾರಿಕ ಓದು ಹೇಗೆ ರೂಪಿಸಿದೆ ಎಂಬುದು ಸಹ ಮುಖ್ಯ.  ಸಮುದಾಯ ಮತ್ತು ಕುಟುಂಬದ ನಿಯಂತ್ರಣಗಳ ನಡುವೆಯೂ ಮಾನವೀಯ ನಡೆಯೊಂದನ್ನು ಕಾಯ್ದುಕೊಳ್ಳುವ ಪರಿ ಅದ್ಭುತವಾದುದು. ಕವಿ ಹೆಚ್ಚು ಮಾತನಾಡದೆಯೂ , ತಣ್ಣಗೆ ಹೇಗೆ ಕ್ರಾಂತಿಕಾರಿಯಾಗಬಲ್ಲಳು  ಎಂಬುದನ್ನು ಗಮನಿಸಬೇಕು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟಳೆಗಳನ್ನು, ಬಂಧನಗಳನ್ನು ಸದ್ದಿಲ್ಲದೇ  ಮನೆಯ ಹಿತ್ತಲಿನಲ್ಲಿನ ಹಂಡೆಯ ಬಿಸಿನೀರು ಕಾಯಿಸುವ ಒಲೆಗೆ ಒಣಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿದಂತೆ, ಹಚ್ಚಿಬಿಡುತ್ತಾರೆ. ಬೆಂಕಿಯನ್ನು ಬೆಳಕಾಗಿಸಿ ಬಿಸಿನೀರು ಕಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದಂತೆ, ಕವಿತೆ ಕಟ್ಟುವ ಬಗೆ. ಇದನ್ನು ಶೋಭಾ ಅವರ ಕವಿತೆ ಗಳಲ್ಲಿ ಕಾಣಬಹುದು. ಅವ್ವ ಮತ್ತು ಅಬ್ಬಲಿಗೆ ಇಷ್ಟವಾಗಲು ನನಗೆ  ಹದಿನಾಲ್ಕು‌  ಕಾರಣಗಳಿವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಶೋಭಾ ಅವರ ಮೊದಲ ಸಂಕನಲದಲ್ಲಿ  ಕಾವ್ಯದ ತುಂಬಾ ತಾಯ್ತನ ತುಂಬಿರುವುದು. ದೇವರನ್ನು ಪ್ರಶ್ನಿಸಿರುವುದು. ಯುದ್ಧ ವಿರೋಧಿ ನಿಲುವುಗಳಿರುವುದು . ಗುರ್ ಮೆಹರ್ ಕವಿತೆಯಲ್ಲಿ ಸೈನಿಕನ ಮಗಳ ತಳಮಳ ಹಿಡಿದಿಟ್ಟು, ಆಕೆಯ ಪರಕಾಯ ಪ್ರವೇಶ ಮಾಡಿ ಕವಿತೆ ಕಟ್ಟಿರುವುದು. ಹೆಣ್ಣಿನ ತಳಮಳ ದಾಖಲಿಸಿರುವುದು. ಹಳ್ಳಿಯನ್ನು ಮರೆಯದಿರುವುದು. ಅಲ್ಲಿಯ ಮಣ್ಣು ತಂದು ನಗರದ  ಕುಂಡದಲ್ಲಿ ಹೂ ಬೆಳಸಿರುವುದು. ಹೆಣ್ಣಿನ ಮನದ ಸ್ವಾತಂತ್ರ‍್ಯದ ಬಯಕೆಯ ಮುಂದಿನ ತಲೆಮಾರಿಗೆ ದಾಟಿಸಿರುವುದು. ಪ್ರೇಮಧರ್ಮದ ಹುಟ್ಟಲಿ ಎಂಬ ಕನಸ ಕಟ್ಟಿಕೊಡುವುದು.ಜಾತಿ ಧರ್ಮ ಮೀರಿದ ಮನುಷ್ಯತ್ವ ಪ್ರತಿಪಾದಿಸುವುದು. ಪ್ರಕೃತಿಯೊಡನೆ ಮನದ ತಲ್ಲಣ ,ಬಯಕೆ ಹೇಳುತ್ತಾ ಕನಸು ಹೆಣೆಯುವುದು. ಪ್ರೇಮದ ನವಿರು ಭಾವಗಳನ್ನು ಕಟ್ಟಿಕೊಡುವುದು.ಬುದ್ಧನನ್ನು ನೆನೆಯುತ್ತಲೇ ಯಶೋಧರೆಯ ತಳಮಳವನ್ನು ಕಣ್ಣೆದುರಿನ ಮಗನಿಗೆ ನಿವೇದಿಸುವುದು. ತವರಿನ ತಾರಸಿಯಲ್ಲಿ ಅಟ್ಟ ಸೇರಿದ ಕನಸುಗಳ ಮೆಲುಕು ಹಾಕುವುದು. ಶ್ರಮಿಕರನ್ನು, ರೈತರನ್ನು ಕಾವ್ಯದಲ್ಲಿ ಶ್ರದ್ಧೆಯಿಂದ ಸ್ಮರಿಸುವುದು. ಅಸಮಾನತೆಯ ವಿರುದ್ಧ ಧ್ವನಿ: ಶೋಭಾ ಅವರ ಕವಿತೆಗಳಲ್ಲಿ ಜಾತಿ ವ್ಯವಸ್ಥೆ ಮತ್ತು ಸ್ಥಗಿತ ವ್ಯವಸ್ಥೆಯ ವಿರುದ್ಧ ತಣ್ಣನೆಯ ಬಂಡಾಯವಿದೆ. ಮಣ್ಣು ಮತ್ತು ಹೆಣ್ಣನ್ನು ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಬಳಸಿಕೊಂಡಿದೆ ಎಂಬುದನ್ನು ಅವರು ಮೆಲುದನಿಯಲ್ಲಿ ದಾಖಲಿಸುತ್ತಾರೆ. ದೇವರು ಮತ್ತು ದೇವಸ್ಥಾನ ವ್ಯವಸ್ಥೆ ವಿಡಂಬಿಸುವ ಕವಿತೆಗಳು, ರಾಜಕೀಯ ಪ್ರಜ್ಞೆಯ ಕವಿತೆಗಳು , ಶ್ರಮಿಕರು ಓಟಿನ ದಿನ ಮಹತ್ವ ಪಡೆಯುವ ವ್ಯಂಗ್ಯವೂ ಅವರ ಸಂಕಲನದ ಕೆಲ ಕವಿತೆಗಳಲ್ಲಿ ಇವೆ. “ಹೆಚ್ಚೆಂದರೇನು ಮಾಡಿಯೇನು”  ಎಂಬ ಕವಿತೆಯಲ್ಲಿ ದೇವರು ತಾಯಿಯ ಮಗ ಎಂದು ಹೇಳುತ್ತಾರೆ. ತಾಯಿಯೇ ಇಲ್ಲಿ ಪ್ರಧಾನ ಕೇಂದ್ರ. ಹೆಣ್ಣು ಮತ್ತು ಮಣ್ಣಿನ ಸುತ್ತ ಹೆಣೆದ ಕವಿತೆಗಳು ಕನ್ನಡದಲ್ಲಿ ಪ್ರಧಾನ ಧಾರೆಯೊಂದನ್ನು ನೆನಪಿಸುತ್ತವೆ. ಆಧುನಿಕ ಕನ್ನಡ ಮಹಿಳಾ ಕಾವ್ಯದ ವಸ್ತುಗಳನ್ನು ನೆನಪಿಸಿಕೊಂಡಾಗ ಶೋಭಾ ದಿಟ್ಟತನದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. `ಋಣಮುಕ್ತೆ’ಯಲ್ಲಿ ಮಳೆ ಮತ್ತು ಭೂಮಿಯ ಸಂಬಂಧವಿದೆ. `ಒಡಲ ಬಂಧ’ ಕವಿತೆಯಲ್ಲಿ ಮುಟ್ಟು ಮೂಢನಂಬಿಕೆ ಹಾಗೂ ಕನಸು ಕುಡಿಯೊಡೆವ, ಚಿಗುರೊಡೆವ ಹೊತ್ತಿನ , ಕಾಮನಬಿಲ್ಲು ಕಂಗಳಲ್ಲಿ ಅರಳುವ ಚಿತ್ರವಿದೆ. ಹೆಣ್ತನ ಹೂವಾಗಿ ಅರಳುವ ಸಮಯವನ್ನು ಬಣ್ಣಿಸುವ ಕವಯಿತ್ರಿ ಗರ್ಭಗುಡಿಯ ಪೂರ್ಣಕುಂಭದ ಕೆನ್ನೀರಿದು ಎನ್ನುತ್ತಾಳೆ. ಪೂರ್ಣಕುಂಭದ ಕೆನ್ನೀರು ಖಾಲಿಯಾಗಬಾರದು ಎನ್ನುವಾಗ ಭೂಮಿ ಬಂಜೆಯಾಗಬಾರದು ಎಂಬ ಧ್ವನಿಯೂ ಇದೆ. “ಉಯಿಲೊಂದ ಬರೆದಿಡುವೆ”  ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಕವಯಿತ್ರಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಗೆ ಈ ಕವಿತೆ ಸಾಕ್ಷಿ. “ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ” ಎಂಬ ಸಾಲುಗಳು ಕವಯಿತ್ರಿ ಯಾವತ್ತೂ ಸತ್ಯದ ಕಡೆಗೆ ಸಾಗುವವಳು ಮತ್ತು ಸಮಾಜದ ಒಳಿತಿಗೆ, ಮಾನವೀಯತೆಯ ಕಡೆಗೆ ನಿಲ್ಲುವವಳು ಎಂಬುದು ಸ್ಪಷ್ಟವಾಗಿದೆ. `ಕವನ ಹುಟ್ಟುವ ಹೊತ್ತು’ ಕವಿತೆಯಲ್ಲಿ ಅಸ್ತಿತ್ವದ ಹುಡುಕಾಟವೂ,ಸ್ವಾತಂತ್ರ್ಯದ ಹುಡುಕಾಟವೂ ಇದೆ. ಮಗ, ಅತ್ತೆ, ಅವ್ವ ಇವರ ನಡುವೆ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ !! ಎಂಬ ನೋವು ಇದೆ.  ಹಾಗೆ `ನನ್ನ ಕವಿತೆ’ಯಲ್ಲಿ ಕವಿತೆ ಅಪ್ಪ, ಅವ್ವ,ಅಣ್ಣ,ನನ್ನಕ್ಕ ತಂಗಿಯರಿಗಾಗಿ, ಮಣ್ಣಲ್ಲಿ ಹೊಸ ಟಿಸಿಲು ನನ್ನ ಕಾವ್ಯ, ಹುಡುಕಿ ಕೊಡುವ ಪತ್ರ ಫಲಕಗಳಿಗೂ ಅಲ್ಲ ಎನ್ನುತ್ತಾರೆ, ಸಾಹಿತ್ಯಲೋಕದ ರಾಜಕಾರಣದ ಬಗ್ಗೆ ಸಹ ಅವರ ನೈತಿಕ ಕೋಪ ಈ ಕವಿತೆಯಲ್ಲಿದೆ. `ನಲವತ್ತರಂಚಿವ ಸ್ವಗತ’ದಲ್ಲಿ ಸಹ ಅದೇ ಅಸ್ತಿತ್ವದ ಹುಡುಕಾಟ. ಕಾಲಕ್ಕೊಂದು ಕೀಲಿ ತೋಡಿಸಿ, ಕಾಲವನ್ನು ಕೂಡಿಹಾಕುವಂತಿದ್ದರೆ ಎಂಬ ಪ್ರಶ್ನೆಯನ್ನು ಮಹಿಳೆಯರ ಪ್ರತಿನಿಧಿಯಾಗಿ ತನಗೆ ತಾನೇ ಹಾಕಿಕೊಳ್ಳುತ್ತಾಳೆ. ಕಾಲದ ಹಕ್ಕಿ ಹಗಲು ಇರಳುಗಳ ರೆಕ್ಕೆಗಳನ್ನು ಹೊತ್ತು ಹಾರುವುದನ್ನು ಬೇಂದ್ರೆ ಹಿಡಿದಿಟ್ಟಂತೆ, ಚಲಿಸುವ ಕಾಲ ಕನ್ನಡ ಕವಿಗಳನ್ನು ಕಾಡಿರುವ ಬಗೆ ಅನನ್ಯವಾದುದು. “ನಲವತ್ತರಂಚಿನ ಸ್ವಗತ” ದ ಜೊತೆ “ಮುಸುಕಾಗುವ ಸಂಕಟ” ಕವಿತೆಯನ್ನು ಸಹ ಗಮನಿಸಿಬೇಕು. ಸೀರೆಯನ್ನು ಅವರ ಬಣ್ಣವನ್ನು ಅದ್ಭುತ ಪ್ರತಿಮೆಯಾಗಿಸಿದ್ದಾರೆ ಶೋಭಾ, ಒಂದೊಂದು ಬಣ್ಣ, ಒಂದೊಂದು ಸಮಯದ ಮಹತ್ವದ ಜೊತೆ ಕುಟುಂಬದಲ್ಲಿ ಒಬ್ಬಬ್ಬೊರಿಗೆ ಇಷ್ಟವಾಗುವ ಬಣ್ಣದ ಸೀರೆಯುಡುವುದು. “ಹಳದಿ ಮಕ್ಕಳಿಗೆ, ನೀಲಿ ನನಗೆ ದೊಡ್ಡ ಬಾರ್ಡರ್ ಸೀರೆ ಗಂಡನಿಗೆ ತಿಳಿ ಗುಲಾಬಿ ಅವ್ವನಿಗೆ ” ಹೀಗೆ ಬರೆಯುತ್ತಾ `ಎದೆಗಿಳಿದ ಸೀರೆಗಳು ಸುಕ್ಕಾಗಿರಬಹುದು, ಒಂದೊಂದು ಬಣ್ಣ, ಒಂದೊಂದು ಕನಸು, ಬಣ್ಣ ಮಾಸಿದ ಮೇಲೆ ?? ಹೆಣ್ಣಿನ ತಳಮಳವನ್ನು, ಭಿನ್ನ ಧ್ವನಿಯಲ್ಲಿ, ಸೀರೆ ಹೆಣ್ಣು ಮತ್ತು ಮುಪ್ಪನ್ನು ಧ್ವನಿಸುವ ಕ್ರಮ ಕಾವ್ಯದ ಶಕ್ತಿಯನ್ನು ಹೇಳುತ್ತದೆ. “ನಾವು ಮತ್ತು ಅವರು” ಎಂಬ ಕವಿತೆಯಲ್ಲಿ ಶ್ರಮಿಕರ ಬಗ್ಗೆ ಇರುವ ಕಾಳಜಿ ಹಾಗೂ ದುಡಿದುಣ್ಣುವ ವರ್ಗದ ಬಗ್ಗೆ ಕವಿಯ ಚಿತ್ತ ಹರಿದಿದೆ. ಈ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆ ವರ್ಗಗಳ ಆಲೋಚನ ಕ್ರಮವನ್ನು ಸಹ ವ್ಯಂಗ್ಯವಾಗಿ ಹೇಳಿದ್ದಾಳೆ ಕವಯಿತ್ರಿ. “ನಾವೋ ದಿಂಬಿನ ಜೊತೆಗೆ ನಿದ್ದೆಯನ್ನು ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಈ ಮಹಡಿಯ ಮನೆಯಲ್ಲಿ ” ಹೊಸ ಕಾರಿಗೆ ಗೀರು ಬಿದ್ದಾಗ ಆದ ಸಣ್ಣ ನೋವನ್ನೇ ಇಟ್ಟುಕೊಂಡು ಕವಿತೆಯಾಗಿಸುವ ಕವಯಿತ್ರಿ “ಎದೆಯ ಮೇಲೆ ನೀನೆಳೆದು ಬಿಟ್ಟ, ಆ ಬರೆಗೆಷ್ಟು ನೋವಾಗಿರಬೇಡ? ಹೀಗೆ ಪ್ರಶ್ನಿಸುವ ಎದೆಗಾರಿಕೆ ಸಹ ಇದೆ. ಸೂಕ್ಷ್ಮ ಮನಸ್ಸಿನವರಿಗೆ ಆದ ಅತೀ ಚಿಕ್ಕ, ಮರೆತುಹೋಗಬಹುದಾದ ಘಟನೆಯೂ ಕವಿತೆಯ ವಸ್ತುವಾಗುತ್ತದೆ ಎಂಬುದಕ್ಕೆ ಕಾರು-ಗೀರು ಕವಿತೆ ಸಾಕ್ಷಿ. ಹಳ್ಳಿ, ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ನಂತರ ಹಳ್ಳಿಯ ಮುಗ್ಧತೆ ಮತ್ತು ನಗು ಮಾಸಿರುವುದು “ನನ್ನೂರು” ಕವಿತೆಯಲ್ಲಿ ದಾಖಲಾಗಿದೆ. ಹೊಸ ಬದುಕಿನತ್ತ ಕವಿತೆಯಲ್ಲಿ ಬಹುದೊಡ್ಡ ಆಶಯಗಳನ್ನು ಮಹಿಳಾ ಸಮುದಾಯಕ್ಕೆ  ಕವಯಿತ್ರಿ ಬಿತ್ತಿದ್ದಾರೆ. ಕಿಡಿಕಿ, ಜೀತಗಳನ್ನು ಸಂಕೇತವಾಗಿ ಹೇಳುತ್ತಾ ಮಾನಾಪಮಾನ, ಅಡೆತಡೆ,ಎಳೆದ ಬರೆ, ಸ್ವರಸತ್ತ ಕೊರಳು, ನಂಜನಿತ್ತವರ ಮೀರೋಣ ಎನ್ನುತ್ತಾ….ಹೊಸ ಬೆಳಕಿನ ಹುಡುಕಾಟ ಮಾಡೋಣ. ಹೊಸಗೀತೆ, ಹೊಸಬಟ್ಟೆ, ಹೊಸ ಭಾಷ್ಯ ಬರೆಯೋಣ. ಹಸಿರಾಗಿ ಹುಟ್ಟೊಣ,ದನಿಯಾಗಿ ನಿಲ್ಲೋಣ ಎನ್ನುತ್ತಾಳೆ. “ಋಣದ ಪತ್ರ” ದಲ್ಲಿ ಹರಿದ ಚಂದ ಕೌದಿಯ ಹೊಲಿಯ ಬೇಕಿದೆ ಎಂದು ಸಮಾಜದ ಬಿರುಕುಗಳಿಗೆ, ಸಂಬಂಧಗಳಿಗೆ ಬೆಸುಗೆ ಹಾಕುವ ಕೆಲಸವನ್ನು ಕವಯಿತ್ರಿ ಮಾಡುತ್ತಾರೆ.  ‘ ‘ ‘ನಾನು’ ಎಂಬ ಕವಿತೆಯಲ್ಲಿ ನೋವಲ್ಲೂ ನಗುವ ಆಶಯಕ್ಕೆ, ಎದೆ ಬಾರವ ಹಗುರಾಗಿಸಿ ಉಸಿರಾಗುವ ಹಂಬಲಕ್ಕೆ ಕಸನು ಬಿತ್ತುವುದು ಎನ್ನುತ್ತಾ…ಪ್ರೀತಿಸಿಯೇ ತೀರುತ್ತೆನೆಂದಲ್ಲ, ಜನ್ಮಜನ್ಮಗಳ ಋಣಭಾರವೊಂದರ ಸಂದಾಯಕ್ಕೆ ನಾನು ಇದ್ದೇನೆ ಎಂಬ ಹಂಬಲವ ತೋಡಿಕೊಳ್ಳುತ್ತಾಳೆ ಕವಯಿತ್ರಿ. ” ನೀ ಬರುವುದು ಖಾತ್ರಿಯಾದಾಗಿನಿಂದ ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ” ಎಂಬುದು ಬದುಕಿನ ದೊಡ್ಡ ಆಶಾವಾದವಾಗಿದೆ. *********** ನಾಗರಾಜ ಹರಪನಹಳ್ಳಿ

ಅವ್ವ ಮತ್ತು ಅಬ್ಬಲಿಗೆ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಲದ ನೆರಳು ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ. ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು ಬೆಳ್ಯೋದೆ ಇಲ್ಲ. ಸ್ವಲ್ಪ ಬೆಳಕು, ಬಿಸಿಲು ಬರ್ಲಿ. ಅಂದ್ರ ಬ್ಯಾರೇ ಗಿಡಗೋಳು ಬೆಳಿತಾವ’.ಇದು ಇಡೀ ಕಥೆಯ ಧ್ವನಿ ಹಾಗೂ ಸತ್ವಯುತವಾದ ಭಾಗ. ಅನಾವರಣ – ಕೇದಾರನಾಥ ಯಾತ್ರೆಗೆ ಹೋದ ದಂಪತಿಗಳು ಪ್ರಕೃತಿ ಅವಘಡಕ್ಕೆ ಸಿಲುಕುವುದು. ಆಗ ಅವರ ಢೋಲಿ ಹೊತ್ತವನು, ಅವನ ಪುಟ್ಟ ಡೇರೆ ಮನೆಯಲ್ಲಿ ಉಳಿಸಿಕೊಂಡು ಉಪಚರಿಸುವುದು. ಬಡತನದ ಆ ಕುಟುಂಬ ಇವರನ್ನು ಆದರಿಸುವ ರೀತಿ. ಗಂಡ, ತಾವು ಉಳಿಯುವುದು ಕಷ್ಟ ಎಂದಾಗ ಮಾಡುವ ವರ್ತನೆ. ಬದುಕಿ ಮರಳಿ ಹೊರಟಾಗ ಬದಲಾಗುವ ಅವನ ಚರ್ಯೆ. ಎಲ್ಲಕ್ಕಿಂತ ಮುಖ್ಯವಾಗಿ ಕೊನೆಯಲ್ಲಿ ಲೇಖಕಿ ಕಥೆಯನ್ನು ನಿಭಾಯಿಸಿದ ರೀತಿ ಗಮನ ಸೆಳೆಯುತ್ತದೆ. ಅಕ್ಕಮ್ಮ – ಕತೆಯೊಳಗೊಂದು ಕತೆ, ಅದರಲ್ಲಿ ಉಪಕಥೆ ಅನ್ನುವಂತೆ ತಿರುವು ಪಡೆಯುವ ಕತೆಯಿದು. ಕತೆ ಹೇಳುವವನೇ ಇಲ್ಲಿ ದುರಂತ ನಾಯಕ. ಅವನೇ ಅವನಜ್ಜ ಅಮ್ಮನ ಮೇಲೆ ಬಲಾತ್ಕಾರ ಮಾಡಿ ಹುಟ್ಟಿದ ಮಗ. ನೈತಿಕತೆ ಮಾಯವಾಗಿ, ನಂಬಲಸಾಧ್ಯ ಅನ್ನಿಸುವ ಕಥೆಗೆ ಓದುಗರೂ ಸಾಕ್ಷಿಯಾಗುವುದರ ಜೊತೆಗೆ ಕಸಿವಿಸಿಗೂ ಒಳಗಾಗುವುದು ಖಚಿತ. ನೆಲದ ಅಂಚು – ಗ್ರಾಮ ಮತ್ತು ನಗರದ ಬದುಕನ್ನು ಒಟ್ಟುಗೂಡಿಸುತ್ತಲೇ ಮಧ್ಯಮ ವರ್ಗದ ಆಸೆ, ದುರಾಸೆ, ಕನಸನ್ನು ಹೊರಹಾಕುವ ಈ ಕಥೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸಂದೇಶವನ್ನು ನೀಡುತ್ತದೆ. ಪಲಾಯನ- ಬದಲಾದ ಕಾಲಘಟ್ಟದಲ್ಲಿ ಮತ್ತು ನಗರೀಕರಣದ ಪರಿಣಾಮವಾಗಿ ಎಲ್ಲವೂ ಕೃತಕ.ಹಳ್ಳಿಯ ಸೊಗಡಿನ ವಸ್ತು, ರೈತರ ಕಷ್ಟ, ಆರ್ಥಿಕ ಸ್ಥಿತಿಯನ್ನು, ಮಾನಸಿಕ ತೊಳಲಾಟವನ್ನು ಗ್ರಾಮೀಣ ಹಿನ್ನೆಲೆಯಲ್ಲಿ ಸಹಜವಾಗಿ ಮಧುರಾ ಅವರು ಕಟ್ಟಿಕೊಟ್ಟಿದ್ದಾರೆ. ಇವುಗಳ ಜೊತೆಗೆ ಇತರ ಕಥೆಗಳೂ ಸಹ ಮಹತ್ವದ ಕಥೆಗಳು. ಆದರೆ ಇಲ್ಲಿನ ಮಿತಿಯಲ್ಲಿ ಇಷ್ಟನ್ನು ಹೇಳಿದ್ದೇನೆ.ಆಲದ ನೆರಳು ಕೃತಿಯನ್ನು ಒಮ್ಮೆ ಓದಿ.**** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಲಿಕಡ್ಜಿಳ ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ ತಪ್ಪುತ್ತಿರುವುದನ್ನು ವಿಶ್ಲೇಷಿಸುತ್ತಾ, ಬದುಕಿನ ನೈಜ ಸಾರ ಏನು? ಎಂಬುದನ್ನು ಓದುಗನಿಗೆ  ತಿಳಿಸುವ ಪ್ರಯತ್ನ ಮಾಡುತ್ತವೆ. ಬಹುತೇಕ ದಕ್ಷಿಣಕನ್ನಡ,ಉಡುಪಿಯ ಸಾಂಸ್ಕೃತಿಕ ಹಿನ್ನೆಲೆ ಜನಜೀವನದ ಒಂದು ಚಿಕ್ಕ ಒಳನೋಟಕ್ಕೆ ಈ ಕಥೆಗಳು ಸೂಡಿ ಹಿಡಿಯುತ್ತವೆ. ನಮ್ಮ ಉಚ್ಚ ಪಾರಂಪರಿಕ ನೆಲೆಗಟ್ಟು, ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸಿನಲ್ಲಿ ತಳಪಾಯವನ್ನು ಗಟ್ಟಿ ಮಾಡದ ಮನೆಗಳಲ್ಲಿಯ ನೋವು ನಲಿವು, ಹಸಿವು ಸಂಕಟಗಳ ದರ್ಶಿಸುತ್ತವೆ . ಕಥೆಗಳು. ಹಣದ ಮದ ಅದರ ಅಟ್ಟಹಾಸದ ನಡುವೆಯೇ ಬಡವನಲ್ಲೂ ಇರಬೇಕಾದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸಭಾವದ ಪ್ರತಿಫಲನವನ್ನು ನಿರೂಪಿಸುತ್ತವೆ. ಕೆಲವು  ಕಥೆಗಳು ನಿಸರ್ಗದತ್ತ ಜೀವನ ವಿಧಾನದ ಅಗತ್ಯತೆಯನ್ನು ಮನಗಾಣಿಸುತ್ತವೆ. ಆಧುನಿಕತೆ ವರವೆಂದು ಬಗೆದು ಹೊಸ ಜಗತ್ತಿಗೆ ತೆರೆದುಕೊಳ್ಳುವ ಅನಿವಾರ್ಯತೆ ಇಂದಿನದು. ಆದರೆ ಅದು ನಿಸರ್ಗದ ನಿಯಮಕ್ಕೆ ತೀರಾ ವಿರುದ್ಧವಾಗಿ, ಮನೆಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡರೇ ಒಂದಲ್ಲ ಒಂದು ದಿನ ವಿಷಾನಿಲಗಳ ಪ್ರಭಾವ ಕಟ್ಟಿಟ್ಟಿದ್ದು ಎಂಬುದನ್ನು ಮನಗಾಣಿಸುತ್ತವೆ. ಸಂಕಲನದ ಮೊದಲ ಕಥೆ ಹುಲಿಕಡ್ಜಿಳ. ಜೇನು ಹುಳುವಿನಂತೆ ಗೂಡು ಕಟ್ಟುವ ಕಚ್ಚಿದರೆ ಭಯಂಕರ ಉರಿ ತರುವ ಕಡ್ಜಿಳ ಹುಳುಗಳು ಬಹುತೇಕ ಉತ್ತರ ಮತ್ತು ದಕ್ಷಿಣಕನ್ನಡದ ಸಣ್ಣಪುಟ್ಟ ಕಾನುಗಳಲ್ಲೂ ಕಾಣಸಿಗುತ್ತವೆ.ಅಂತಹ ಭಯಂಕರ ಹುಳುವನ್ನು ಹೊಸಕಿ ಹಾಕುವುದು ಸಾಮಾನ್ಯದ ಕೆಲಸವಲ್ಲ. ಆದರೆ ಮನೋಬಲ ಹಾಗೂ ಅದನ್ನು ಕೊನೆಗಾಣಿಸಬಲ್ಲ ಕೆಲವು ತಂತ್ರಗಳು ತಿಳಿದಿದ್ದರೆ ಅದನ್ನು ಬುಡಸಮೇತ ನಾಶ ಮಾಡುವುದು ಕಷ್ಟವೇನಲ್ಲ. ಬಡವ ನಾಗರಾಜಣ್ಣನ ಮಗಳು ಪುಷ್ಪ ಶಾಲೆಗೆ ಹೋಗುತ್ತಿದ್ದವಳು ಒಮ್ಮೆಲೇ ಶಾಲೆಗೆ ಹೋಗಲು ಹಿಂದೇಟು ಹಾಕತೊಡಗುವುದು, ಅದಕ್ಕೆ ಕಾರಣ ಶ್ರೀಮಂತ ಯುವಕನಾದ ತಾರಗೊಳ್ಳಿಯ ನಾಗೇಶ ಎಂಬಾತ ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸುತ್ತಿರುವುದು, ಅದನ್ನು ತಿಳಿದ ತಂದೆ ನಾಗರಾಜಣ್ಣ ಬಹಳ ಚಾತುರ್ಯದಿಂದ ಆ ಹುಳುವನ್ನು ಹೊಸಕಿ ಹಾಕುವುದು ಇದಿಷ್ಟೇ ಕಥೆ. ನಾಗರಾಜಣ್ಣ ಇಲ್ಲಿ ಬಡತನಕ್ಕೆ ಪ್ರತಿನಿಧಿಯಾಗದೇ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಸಮರ್ಥ ವ್ಯಕ್ತಿತ್ವಕ್ಕೆ ಪ್ರತಿನಿಧಿಯಾಗುತ್ತಾನೆ. ಪ್ರಾಣಿ ಜಗತ್ತಿನಲ್ಲೂ ಕಾಣುವುದು ಇದೇ ತತ್ವವೇ . ಹಾಗಾಗಿ ಸಾಮಾಜಿಕ ಹಿನ್ನೆಲೆಯಲ್ಲಿ ಕಟ್ಟಿದ ಪಾತ್ರವಾದರೂ ಅದು ನಿರೂಪಿಸುವುದು ಸ್ವರಕ್ಷಣೆಯ ಅಗತ್ಯತೆಯನ್ನು.ದುರಾಚಾರವನ್ನು ಸಹಿಸುವುದು ಅಪರಾಧವೇ. ಅಂತಹ ನೀಚನನ್ನು ಮಟ್ಟ ಹಾಕಲೇ ಬೇಕು.ಇಂದಿನ ಸಮಾಜದಲ್ಲೂ ಇರುವ ಇಂತಹ ಪಾತ್ರಗಳು ಅಸಹಾಯಕರ ಕಣ್ಣೀರಿನಲ್ಲೇ ಸುಖಿಸುತ್ತವೆ. ಹಾಗಾಗಿ ಕಥೆಗಾರರ ಈ ಸಂದೇಶ ಕಥೆಯ ಮಹತ್ವವನ್ನು ಹೆಚ್ಚಿಸಿದೆ. ‘ಬೇಗೆ’ ಕಥೆಯಲ್ಲಿ  ಸಾಂಸಾರಿಕ ಜೀವನದ ಅತೃಪ್ತಿಯಲ್ಲಿ ಬೆಂದು ನರಳುವ ಹೆಣ್ಣುಗಳು, ಹೊರಜಗತ್ತಿನಲ್ಲಿ ಸುಂದರ ಸಂಸಾರದ ಮೊಗವಾಡ ಹಾಕಿಕೊಂಡಿರುವುದು, ಹೆಣ್ಣುಗಳು ಜೀವನವೀಡಿ ಹೀಗೆ ಕೊರಗುತ್ತಾ ಬದುಕಬೇಕಾದ ಅನಿವಾರ್ಯತೆಯನ್ನು ಹೇಳುತ್ತಾರೆ. ಆ ಮೂಲಕ ಭಾರತೀಯ ಸಮಾಜದ ಸಾಂಸ್ಕೃತಿಕ ರೂಹುಗಳನ್ನು ಆಧುನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲಾಗದ ನಮ್ಮ ಯುವಜಗತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನು ಮುರಿಯುವ ಅಗತ್ಯವಿದ್ದರೂ ಅದು ಪರಂಪರೆಯನ್ನು ಕಳೆದುಕೊಳ್ಳದೇ ಇರುವುದೇ ಸಭ್ಯತೆ ಎಂಬುದು ಕಥೆಯಲ್ಲಿ ಧ್ವನಿತವಾಗಿದೆ. ಆಧುನೀಕರಣದ ಅವಾಂತರ, ಹೊಸ ಜೀವನ ಶೈಲಿಯ ಆಕಾಂಕ್ಷೆಗೆ ಹಣವಿದ್ದರಾಯ್ತು ಎಂದುಕೊಂಡ ಹೆಣ್ಣು ಜೀವಗಳು ಮನೆಯವರು ಒಪ್ಪಿದ ಸಂಬಂಧಕ್ಕೆ ಗೋಣು ಕೊಟ್ಟು, ಮದುವೆಯಾಗುತ್ತಾರೆ. ಆದರೆ ವಿವಾಹವಾದ ಮೇಲೆಯೇ ಆ ಗಂಡಿನ ನಿಜದ ರೂಪ ಗೊತ್ತಾಗುವುದು. ಹಾಗಾಗಿ ಕಥೆಯ ಮುಖ್ಯ ಪಾತ್ರ ಅನಿತಾ ತನ್ನೊಂದಿಗಿನ ಯಾವ ಬಂಧಗಳಿಗೂ ಬೆಲೆಕೊಡದ, ಆಕೆಯ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಪತಿಯನ್ನು ಬಿಡುವ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿ ಅವನೊಂದಿಗೆ ಏಗುವುದೇ ಇರುವ ಏಕೈಕ ಉಪಾಯ ಎನ್ನುತ್ತಾಳೆ. ಇದು ಭಾರತೀಯ ಸಮಾಜ ಹೇರಿದ ಅಲಿಖಿತ ಸಂವಿಧಾನಾತ್ಮಕ ಕಾನೂನು.ಮುಂದುವರೆದ ರಾಷ್ಟೃಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಬದುಕಿಗೆ ಮಹತ್ವವಿದೆ.ಅದೇ ನಮ್ಮಲ್ಲಿ ಬಂಧನಗಳಿಗೆ ಮಹತ್ವವಿದೆ. ಹಾಗಾಗಿ  ಲೇಖಕರು ಇಲ್ಲಿಯ ಹೆಣ್ಣು ಜೀವಗಳ ತಟ್ಟಿ ಮಾಡಾಡಿಸಿದರೂ, ಅಂತಹ ಸಂದೇಶವನ್ನೂ ನೀಡಲಾರರು. ‘ಕಟೆ’್ಟ  ಕಥೆ ಕೂಡಾ ಇನ್ನೊಂದು ಪ್ರಮುಖ ಸಂದೇಶವನ್ನೇ ನಿರೂಪಿಸುತ್ತದೆ. ಶ್ರೀಮಂತ ಗಬಡಿ ನಾಗ್ರಾಜರಾಯರ ಕುಟುಂಬ ಹೇಗೆ ತೋಟದ ಮನೆಯವರೆಂದು ಕರೆಸಿಕೊಂಡಿತ್ತೋ ಹಾಗೆ ಬೇರೆಯವರಲ್ಲಿ  ಕೆಲಸಕ್ಕೆ ಹೋಗುವ ಹಾಗಾಗುವ ಚಿತ್ರಣದೊಂದಿಗೆ   ಏಕತಳಿ ಬೇಸಾಯದಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮ, ಭೂಮಿಯ ಫಲವತ್ತತೆಯನ್ನು ಕಸಿದುಕೊಳ್ಳುವ ಇಂತಹ ಬೇಸಾಯ ಕೇವಲ ನಿಸರ್ಗ ವಿರೋಧಿ ಮಾತ್ರ ಆಗಿರದೇ ವಾಣಿಜ್ಯ ಜಗತ್ತಿನಲ್ಲೂ ಕೆಲವೊಮ್ಮೆ ವೈಪರಿತ್ಯಗಳನ್ನು ಹುಟ್ಟಿಸಿ, ಬೆಳೆದ ರೈತನ ಮೂಲಕ್ಕೆ ಕೊಡಲಿಪೆಟ್ಟು ಹಾಕುತ್ತದೆ ಎಂಬುದನ್ನು ವಿವರಿಸುತ್ತದೆ. ಇಂತಹ ಬೇಸಾಯ ಪದ್ಧತಿ ಆತನ ಬದುಕನ್ನೆ ನಾಶ ಮಾಡಿದ ಅನೇಕ ಉದಾಹರಣೆಗಳಿವೆ. ಆದಾಗ್ಯೂ ಕುರಿಗಳಂತೆ ರೈತರು ಈ ರೀತಿಯ ಬೇಸಾಯವನ್ನು ಹಿಂದೆಮುಂದೆ ನೋಡದೇ, ಕಾರ್ಪೊರೇಟ್ ಜಗತ್ತಿನ ಆಮೀಷಕ್ಕೆ ಒಳಗಾಗಿ ಅವಲಂಬಿಸಿಕೊಂಡು ಬರುತ್ತಿದ್ದಾರೆ.ಇದ್ದ ಸೊಗಸಾದ ಗದ್ದೆ ಹೊಲಗಳನ್ನು ಕೆಲವರು ತೋಟಗಳನ್ನಾಗಿ ಪರಿವರ್ತಿಸಿ ತೆಂಗು ಕಂಗು, ಬಾಳೆ, ಹತ್ತಿ ಅಂತೆಲ್ಲ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಕೆಲವೊಮ್ಮೆ  ವಾಣಿಜ್ಯ ಜಗತ್ತಿನಲ್ಲಿ ಏಕಾಏಕಿ ಬೆಲೆ ಕುಸಿತಗೊಂಡು ಸಾಲಗಾರರಾಗಿ, ದುರ್ಭರ ಬದುಕನ್ನು ನಡೆಸುವಂತಾಗುತ್ತದೆ. ಗೊಂಬೆ ಕಥೆಯ ಸುಂದರ ಹುಡುಗಿ ಶ್ರೀಲತಾ ತನ್ನ ನೀತಿಯಿಲ್ಲದ ನಡೆಯಿಂದ ಹೇಗೆ ಬದುಕಲ್ಲಿ ಹಾದಿ ತಪ್ಪಿ ದುರ್ದೆಶೆಗೆ  ಒಳಗಾದಳು ಎಂಬುದರಿಂದ ಓದಿಸಿಕೊಳ್ಳುತ್ತದೆ.ಆಧುನಿಕ ಬದುಕಿನ ಹೊಸ ಹೆಜ್ಜೆಗಳು, ಅವುಗಳ ವಿಫಲತೆ,ತಮ್ಮತನ ಇಟ್ಟುಕೊಳ್ಳಲಾಗದೇ ಆಧುನಿಕತೆಯ ಝಗಮಗಿಸುವಿಕೆಯಲ್ಲಿ  ಮೆರೆವ ಆಸೆಯಲ್ಲಿ ಆ ಬೆಂಕಿಗೆ ಬಲಿಯಾಗುವ ಶ್ರೀಲತಾ ದುರಂತ ಪಾತ್ರಕ್ಕೆ ಸಾಕ್ಷಿಯಾಗುತ್ತಾಳೆ. ‘ತವರು’ಕಥೆ ನಮ್ಮ ನಿಮ್ಮ ಮನೆಯ ಹಿರಿಯ ಜೀವಗಳ ನಡೆನುಡಿ,  ಬಂಧು ಬಾಂಧವರ ನಡುವಿನ ಬಾಂಧವ್ಯ, ಹೆಣ್ಣು ಮಕ್ಕಳ ತವರು ವ್ಯಾಮೋಹವನ್ನುತೆರೆದಿಟ್ಟಿದೆ. ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ.ಹೆಚ್ಚಿನ ಕತೆಗಳು ಸ್ತ್ರೀ ಪಾತ್ರವನ್ನೆ ಮುಖ್ಯ ನೆಲೆಯಲ್ಲಿ ಗ್ರಹಿಸುತ್ತಾ ವಿಸ್ತಾರಗೊಳ್ಳುತ್ತವೆ. ಹುಲಿಕಡ್ಜಿಳ ಕತೆಯ ಮುಗ್ಧ ಹುಡುಗಿ ಪುಷ್ಪಾ, ‘ಬೇಗೆ ‘ಕತೆಯ ದಾಂಪತ್ಯ ಜೀವನದ ಅತೃಪ್ತ ಪಾತ್ರಗಳಾದ ಅನಿತಾ ಮತ್ತು ವಾಣಿ, ತವರು ಕತೆಯ ತವರು ವ್ಯಾಮೋಹದ ಕತೆಗಾರರತಾಯಿ, ಸಾಕಲಾರದೆನ್ನ.. ಕಥೆಯ ಕರುಣಾಮಯಿ ಗೌರಿ, ಕುಡ್ಗೋಲು ಮುರ್ಗ ಕಥೆಯ ಸ್ವಾರ್ಥಮುಖಿ ಭಾವನಾ, ಗೊಂಬೆ ಕತೆಯ ಬಜಾರಿ ಶ್ರೀಲತಾ ಹೀಗೆ ಸ್ತ್ರೀ ಪಾತ್ರಗಳು ಸಂಕಲನದಲ್ಲಿ ಎದ್ದುಕಾಣುತ್ತವೆ. ಬಹಳ ನಿರರ್ಗಳ ಮಾತುಗಾರ  ಹಾಗೂ ಹಾಸ್ಯ ಮಿಶ್ರಿತ ಮಾತಿನ ಧಾಟಿಯ ಹರೀಶ ತಮ್ಮ ಬದುಕಿನ ಅನುಭವಗಳ ಮೂಲಕವೇ ಕತೆ ಹೆಣೆಯುತ್ತಾರೆ.  ಶೀರ್ಷಿಕೆ  ಕಥೆ ‘ಹುಲಿಕಡ್ಜಿಳ’ದ  ಹೊರತಾಗಿ ಉಳಿದ ಕತೆಗಳು ಜೀವಪರ ನಿಲುವನ್ನು, ತಾಳ್ಮೆ, ಸರಳತೆ, ಸಹಜತೆ, ಕರುಣೆ, ಪ್ರೀತಿ, ಬಾಂಧವ್ಯದ ಸುತ್ತಲೇ ಗಿರಕಿ ಹೊಡೆದು, ಸಹೃದಯರಿಗೆ ಇಷ್ಟವಾಗುತ್ತವೆ. ಬದುಕಿನೊಂದಿಗೆ ಬೆಸೆದುಕೊಂಡ ಜೀವಗಳನ್ನು ಅವರು ಪ್ರೀತಿಸುವ ಬಗೆ ಅದನ್ನು ಚಿತ್ರಶಾಲೆಯಂತೆ ಒಂದೊಂದು ಪಾತ್ರದೊಳಗಣ ಅನುಬಂಧವನ್ನು ಒಟ್ಟಂದದಲ್ಲಿ ಒಪ್ಪಂದದಂತೆ ಕಟ್ಟಿಕೊಟ್ಟರೀತಿ ಸೊಗಸಾಗಿದೆ. ******** ನಾಗರೇಖಾ ಗಾಂವಕರ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಮಕ್ಕಳಿಗಾಗಿ ನೂರಾರು ಕವಿತೆಗಳು ಕವಿ: ಸೋಮಲಿಂಗ ಬೇಡರಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿಪುಟಗಳು: 220ಬೆಲೆ: ರೂ. 175/-ಪ್ರಕಟಿತ ವರ್ಷ: 2019ಕವಿಯ ದೂರವಾಣಿ: 9741637606 ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು ಕಲೆ. ಪರಕಾಯ ಪ್ರವೇಶಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮುಖದಲ್ಲಿ ಹೊಮ್ಮುವ ಭಾವಗಳನ್ನು ಕವಿತೆಯಾಗಿಸುವಲ್ಲಿ ಬೀಳಗಿಯ ಶಿಕ್ಷಕ ಸಾಹಿತಿ ಶ್ರೀ. ಸೋಮಲಿಂಗ ಬೇಡರ್ ಅವರು ಸಿದ್ಧಹಸ್ತರು. 2019ರಲ್ಲಿ ಇವರು ಹೊರತಂದ “ಮಕ್ಕಳಿಗಾಗಿ ನೂರಾರು ಕವಿತೆಗಳು” ಎಂಬ ಚಿಣ್ಣರ ಕವನ ಸಂಗ್ರಹ ಬಾಲಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ. ನಿಸರ್ಗದ ರಮಣೀಯತೆ, ಬಿಸಿಲು-ಮಳೆ, ಆಪ್ಪ-ಅಮ್ಮ, ಹಬ್ಬ-ಹರಿದಿನಗಳು, ನಾಡು-ನುಡಿ, ಸಂಸ್ಕ್ರತಿ ಹೀಗೆ ಹತ್ತು-ಹಲವು ವಿಚಾರಗಳು ಅಂದದ ಪದಗಳಲ್ಲಿ ಚಂದದ ಕವಿತೆಗಳಾಗಿ ಇಲ್ಲಿ ಒಡಮೂಡಿವೆ. ಇಲ್ಲಿರುವ 106 ಕವಿತೆಗಳಿಗೆ ತಕ್ಕಂತೆ ಸುಂದರ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು ಅವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಹಿರಿಯ ಮಕ್ಕಳ ಸಾಹಿತಿ ದಿ.ಚಂದ್ರಕಾಂತ ಕರದಳ್ಳಿ ಅವರ ಸಹೃದಯತೆಯ ಮುನ್ನುಡಿ ಹಾಗೂ ಕವಿ ವೈ.ಜಿ.ಭಗವತಿ ಅವರ ಆಪ್ತತೆಯ ಬೆನ್ನುಡಿ ಕೃತಿಗೆ ಶೋಭಾಯಮಾನವಾಗಿದೆ. ನೀಲಾಗಸದಲ್ಲಿ ಸಾಗುವ ಹಕ್ಕಿಬಳಗ ಕಂಡು ಕವಿಹೃದಯವು ‘ಗಗನದ ಮಡಿಲಲಿ ತೇಲುತ ಹೊರಟಿವೆ ಹಕ್ಕಿಗಳಾ ಹಿಂಡು ಸೃಷ್ಠಿಗೆ ಚೆಲುವನು ಹೊಮ್ಮುತ ನಡೆದಿವೆ ರೆಕ್ಕೆಗಳಾ ಬಡಿದು’ ಎನ್ನುತ್ತಾ ಖುಷಿಪಡುತ್ತಾರೆ. ಕನ್ನಡ ನಾಡು-ನುಡಿಯ ಅಭಿಮಾನಿಯಾಗಿ ಕವಿಯು ‘ಕನ್ನಡ ನಾಡಿನ ಚಿಣ್ಣರು ನಾವು ಕನ್ನಡ ಗುಡಿಯನು ಬೆಳಗುವೆವು ಕನ್ನಡ ನುಡಿಯನು ಆಡುತ ನಾವು ಕನ್ನಡ ಕೀರ್ತಿಯ ಮೆರೆಸುವೆವು’ ಎಂದು ಕನ್ನಡಾಂಬೆಯ ಬಗೆಗೆ ಸೊಗಸಾದ ಗೀತೆ ರಚಿಸಿದ್ದಾರೆ. ಮಕ್ಕಳಿಗೆ ಹಬ್ಬಹರಿದಿನಗಳನ್ನು ಪರಿಚಯಿಸುವ ಕವಿಮನವು ‘ದೀಪ ದೀಪವ ಬೆಳಗಿವೆ ಒಲುಮೆಯಾರತಿ ಹಿಡಿದಿವೆ ಇಳೆಗೆ ಒಳಿತನು ಬಯಸಿವೆ ಇಂದ್ರ ಲೋಕವ ಸೃಷ್ಠಿಸಿವೆ’ ಎನ್ನುತ್ತಾ ಬೆಳಕಿನ ಹಬ್ಬ “ದೀಪಾವಳಿ”ಯ ವೈಭವವನ್ನು ಕಟ್ಟಿಕೊಡುತ್ತಾರೆ. ‘ಮಮ್ಮಿ ಅಂದ್ರೆ ಖುಷಿ ಅಮ್ಮ ಅಂದ್ರೆ ಕಸಿವಿಸಿ ಅನ್ಬೇಕಂತೆ ಮಮ್ಮಿ ಮಾಡೋದಿಲ್ಲ ಕಮ್ಮಿ ಯಾಕಿಂಗಾತು ನಂಪಾಡು ಬದಲಾಗಿದ್ದಾಳೆ ಅವ್ವ!!’ ಎನ್ನುವ ಕವಿತೆಯಲ್ಲಿ ಕವಿಯು ಹೊಸ ಜಗತ್ತಿನ ಬದಲಾವಣೆಗಳನ್ನು ಮಗುವಿನ ಮನದಲ್ಲಿ ಮೂಡುವ ಪ್ರಶ್ನೆಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಖಾಸಗಿ ಶಾಲೆಗಳ ವೈಭವಿಕರಣದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಮಹತ್ವವನ್ನು ಸಾರುವ ಈ ಸಾಲುಗಳು ‘ಚಿಣ್ಣರ ಕನಸಿಗೆ ಬಣ್ಣವ ತುಂಬುವ ಚಿನ್ನದ ಕುಲುಮೆಗಳು ಹಿಗ್ಗಿನ ಬುಗ್ಗೆಯ ಚಿಮ್ಮುತ ಕಲಿಸುವ ಬತ್ತದ ಒರತೆಗಳು’ ಎನ್ನುವಾಗ ನಾವು ಕಲಿತ ಪ್ರಾಥಮಿಕ ಶಾಲೆಯ ನೆನಪುಗಳನ್ನು ಮರುಕಳಿಸುತ್ತವೆ. ದೇವರಿಗಿಂತಲೂ ಮಿಗಿಲಾದ ‘ಅಪ್ಪ-ಅಮ್ಮ’ ಭೂಲೋಕದ ನಿಜದೈವಗಳು ಇಲ್ಲಿ ಕವಿಯು ‘ಅಮ್ಮನ ನುಡಿಯು ಅಪ್ಪನ ನಡೆಯು ಸತ್ಯಕ್ಕೂ ಮಿಗಿಲು ಅಮ್ಮನ ಪೂಜೆ ಅಪ್ಪನ ಸೇವೆ ದೈವಕ್ಕೂ ಮಿಗಿಲು’ ಎಂಬ ಹಾಡು ಹೃದಯಂಗಮವಾಗಿದೆ. ಋತುಮಾನಕ್ಕೆ ತಕ್ಕಂತೆ ಬದಲಾಗುವ ಕಾಲಮಾನದಲ್ಲಿ ಬೇಸಿಗೆಯ ‘ಬಿಸಿಲ ಧಗೆ’  ಕಂಡ ಮಗು ‘ನಡೆಯುತಿರಲಿ ಆಡುತಿರಲಿ ಏನು ದಾಹವು ಬಿಸಿಲ ಧಗೆಗೆ ಬೆವರುತಿಹುದು ನನ್ನ ದೇಹವು’ ಎಂದು ಪರಿತಪಿಸುತ್ತದೆ. ಹೀಗೆ ವಿಭಿನ್ನ ವಸ್ತು-ವೈವಿಧ್ಯದ ಮಕ್ಕಳಿಗಾಗಿ ಬರೆದ ನೂರಾರು ಕವಿತೆಗಳು ಚಿಣ್ಣರ ಮನಸೂರೆಗೊಳ್ಳುತ್ತವೆ. ಈಗಾಗಲೇ ಇಲ್ಲಿನ ಬಹುತೇಕ ಕವಿತೆಗಳು ನಾಡಿನ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಈಗಾಗಲೇ ‘ಮುತ್ತಿನ ಮಳೆ’, ‘ಮುದ್ದಿನ ಹಕ್ಕಿ’, ‘ಹಕ್ಕಿ ಗೂಡು’, ‘ಸುಡುತ್ತಿದ್ದಾನೆ ಸೂರ್ಯ’ ಹಾಗೂ ‘ಬಂಗಾರ ಬಣ್ಣದ ಹಕ್ಕಿ’ ಎಂಬ ಐದು ಕೃತಿಗಳನ್ನು ಪ್ರಕಟಿಸಿ ಓದುಗರ ಮೆಚ್ಚುಗೆ ಗಳಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಇವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂಬುದು ನಮ್ಮ ಸದಾಶಯ. ********** ಬಾಪು ಖಾಡೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದರ್ಪಣ ನನಗೆ ಸಾಮಾನ್ಯವಾಗಿ ಆತ್ಮಚರಿತ್ರೆ, ವೈಚಾರಿಕ ಲೇಖನ, ಚರ್ಚೆ ಇಂತಹವುಗಳನ್ನು ಓದುವುದೆಂದರೆನೇ ಬಲು ಇಷ್ಟ. ಕೆಲವೂಮ್ಮೆ ಕವಿತೆಗಳನ್ನು ಓದಿದರೂ ಅದನ್ನು ಒಂದೇ ಬಾರಿಗೆ ಓದಲಾರೆ. ಅಂದರೆ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವಿತೆಗಳನ್ನು ಒಂದೇ ಉಸಿರಿಗೆ ಓದಲಾರೆ. ಇವನ್ನೆಲ್ಲ ಬಿಟ್ಟು ಕತೆಗಳ ವಿಷಯಕ್ಕೆ ಬಂದರೆ ನನಗೆ ಕಾದಂಬರಿಗಳಿಗಿಂತ ಸಣ್ಣ, ಸಣ್ಣ ಕತೆಗಳನ್ನು ಓದುವುದೆಂದರೆ ಬಹಳ ಇಷ್ಟ.ಅದ್ದರಿಂದ ನನ್ನಲ್ಲಿ ಬಹಳಷ್ಟು ಕಥಾಸಂಕಲನಗಳ ಸಂಗ್ರಹವೇ ಇದೆ. ಹಾಗೆ ಕಥಾಸಂಕಲನಗಳು ಇಷ್ಟವಾಗಲು ಕಾರಣ ಒಂದೇ ಓದಿನಲ್ಲಿ ನಾವು ನಮ್ಮನ್ನು ಭಿನ್ನ, ಭಿನ್ನ ಪಾತ್ರದ ಒಳಗೆ ಹೊಕ್ಕು ಹೊರ ಬರಬಹುದು ಎಂಬ ಆಶಯವೇ ಇರಬಹುದೆನೊ?  ಇಂತಹ ಒಂದು ಕಥಾಸಂಕಲನವೇ ಎನ್. ಶೈಲಜಾ ಹಾಸನ್ ಅವರ ” ದರ್ಪಣ” . ಇದರಲ್ಲಿ ಒಟ್ಟು ಹದಿನೆಂಟು ಸಣ್ಣ, ಸಣ್ಣ ಕತೆಗಳಿದ್ದು ಎಲ್ಲವೂ‌ ನಮ್ಮ ಸುತ್ತ ಮುತ್ತ ನಡೆದ ಅಥವಾ ನಡೆಯ ಬಹುದಾದ ಘಟನೆಗಳಂತೆಯೆ ಭಾಸವಾಗುತ್ತದೆ. ಈ ಕಥಾಸಂಕಲನ ಇಷ್ಟವಾಗಲು ಇರುವ‌ ಪ್ರಮುಖ ಕಾರಣ ಬರಹ ಲೋಕದಲ್ಲಿ ಸ್ತ್ರೀಯರು  ಸ್ತ್ರೀ ಶೋಷಣೆಯ ಬಗ್ಗೆಯೆ ಬರೆಯುತ್ತಾರೆ, ಅವರಿಗೆ ಪುರುಷರ ವೇದನೆ , ಅವರ ಶೋಷಣೆ ಕಣ್ಣಿಗೆ ಕಾಣುವುದಿಲ್ಲ ಎಂಬ ಅಪಾವಾದವನ್ನು ಸುಳ್ಳಾಗಿಸುವಂತೆ ಕತೆ ನಿರೂಪಿಸಿದ್ದಾರೆ. ಇವರ ಎಲ್ಲಾ ಕತೆಗಳು ಮಾನವಿಯತೆಯಾ ನೆಲೆಗಟ್ಟಿನಲ್ಲಿಯೆ ಇದೆ. ಇವರ ಕತೆಯಾ ಇನ್ನೊಂದು ವಿಶೇಷವೆಂದರೆ ಪ್ರತಿ ಕತೆಯನ್ನು ಓದುಗರ ತೀರ್ಮಾನಕ್ಕೆ ಬಿಡುತ್ತಾರೆಯೇ ಹೊರತು, ಎಲ್ಲಿಯೂ ತಾವು ತಮ್ಮ ನಿರ್ಧಾರವನ್ನು ಓದುಗರ ಮೇಲೆ ಹೇರುವುದಿಲ್ಲ. ಅಥವಾ ಇದು ಸರಿ, ಇದು ತಪ್ಪು ಎಂದು ಬೆರಳು ಮಾಡಿ ತೋರಿಸುವುದಿಲ್ಲ. ಈಗೊಂದು ಘಟನೆ ನಮ್ಮ ಸುತ್ತಮುತ್ತಲಿನಲ್ಲಿಯೆ ನೆಡೆದಿರಬಹುದೇ ಎಂಬಂತೆ ಬರೆಯುತ್ತಾರೆ. ಹಾಗಂತ ಅದು ವರದಿಯಾ ರೂಪದಲ್ಲಿ ಇರುತ್ತದೆ ಎಂದು ಕೊಂಡರೆ ನಿಮ್ಮ ಗ್ರಹಿಕೆ ತಪ್ಪಾಗುತ್ತದೆ. ಈ ಕತೆಯನ್ನು ಓದುವ ಓದುಗ ,ಓದುವುದರ ಜೊತೆಗೆ ತನ್ನ ಭಾವನೆಗಳ ಹರವಿನಲ್ಲಿಯೇ ಸಾಗುವಂತೆ ಮಾಡುವುದರಿಂದ,ಕಥಾ ಪಾತ್ರಗಳನ್ನು ನಾವು ಸ್ವತಃ ಅನುಭವಿಸಿದಂತೆಯೆ ಇರುತ್ತದೆ. ಹಾಗಂತ ಯಾವುದೇ ಉತ್ಪ್ರೇಕ್ಷೆ, ಆಶ್ಲೀಲತೆಯಾ ಬಳಕೆ ಮಾಡುವುದಿಲ್ಲ. “ತಾಯಿಯ ಕರೆ” ಎಂಬ ಕತೆಯು ಹಣದ ಹಿಂದೆ ಓಡುತ್ತಿರುವ‌ ಇಂದಿನ ಯುವ ಪೀಳಿಗೆಯವರನ್ನು ಎದುರಿಗೆ ಕೂರಿಸಿಕೊಂಡು ಬುದ್ದಿಮಾತು ಹೇಳಿದಂತೆ ಇದ್ದರೆ, ” ಬದುಕ ಪಯಣದಲ್ಲೊಂದು ಆಕಸ್ಮಿಕ” ಕತೆಯು ಇಂದಿನ ದಿನಮಾನದಲ್ಲಿದಲ್ಲಿ ನೈತಿಕ ಅಧಃಪತನಕ್ಕೆ ಒಳಗಾಗುತ್ತಿರುವ ಯುವಕರ ಮನಸ್ಸಿನ ಕೈಗನ್ನಡಿಯಂತೆಯೂ, ಜೊತೆಗೆ ಸ್ವೇಚ್ಛಾಚಾರಕ್ಕೆ ತೆತ್ತಾ ಬೆಲೆಯಂತೆ ನಿರೂಪಿಸಲಾಗಿದೆ. ಆದರೆ ಇಲ್ಲಿ ಲೇಖಕಿ ತಾವು ಒಬ್ಬ ನ್ಯಾಯದೀಶೆಯಾ ಸ್ಥಾನದಲ್ಲಿ ನಿಲ್ಲದೇ, ಕೇವಲ ಕತೆಯಾ ನಿರುಪಕಿಯಾಗಿ ಓದುಗರ ಮನ ಸೆಳೆಯುತ್ತಾರೆ. ಅತ್ಯಾಚಾರಕ್ಕೊಳಗಾದ ಮನುಜ ಎಂಬ ಹೆಣ್ಣುಮಗಳಾ ಬಾಯಲ್ಲಿ ಸಮಾಜದ ಮುಂದೆನೆ‌ ಬದುಕಿ ತೋರಿಸುತ್ತೇನೆ ಎಂದು ಹೇಳಿಸುವ ಮಾತು ನಿಜ ಜೀವನದಲ್ಲಿ ಈ ರೀತಿಯ ಆಕಸ್ಮಿಕ ಘಟನೆಯಿಂದ ವಿಚಲಿತರಾದವರಿಗೆ ಹೇಳುವ ಮಾನಸಿಕ ಸ್ಥೈರ್ಯದ ಮಾತಿನಂತೆಯೂ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತಿನಂತೆಯೂ ಇದೇ. ಇದೆ ಕತೆಯಾ ಇನ್ನೊಂದು ರೂಪದಂತಿರುವ ” ನಿಗೂಢ” ಕತೆಯು ಸ್ವೇಚ್ಛಾಚಾರಕ್ಕೆ ತೆತ್ತ ಬೆಲೆಯಂತೆ ವಿವರಿಸಲಾಗಿದೆ.  ಅಸಾಮಾನ್ಯ ತಿರುವನ್ನು ನೀಡುವಾ ” ಪಸರಿಸಿದ ಗಂಧ” ಕತೆಯಲ್ಲಿ ಲೇಖಕಿ ಕೇಳುವ ಪ್ರಶ್ನೆ ಈ ಸಮಾಜ ಗಂಡು ತಪ್ಪು ಮಾಡಿದಾಗ ಹೆಣ್ಣು ಕ್ಷಮಿಸಿ ಅವನೊಂದಿಗೆ ಬಾಳಲಿ ಎಂದು ಹೇಳುತ್ತದೆ, ಅದೇ ಹೆಣ್ಣು ತಪ್ಪು ಮಾಡಿದ್ರೆ ಗಂಡು ಕ್ಷಮಿಸಲಿ ಅಂತ ಏಕೆ ಹೇಳೊಲ್ಲಾ? ಎಡವಿದ ಕಾಲನ್ನು ತುಂಡರಿಸಿ ಬದುಕೊದು ನ್ಯಾಯವೇ? ಎಂದು ಕೇಳುವ ಪ್ರಶ್ನೆ ಎಂತಹ ಪ್ರಜ್ಞಾವಂತಿಕೆಯ ಪ್ರಶ್ನೆಯ ಜೊತೆಗೆ ಸಮಾಜದ ಮಾನೊಭಾವದಲ್ಲಿ ಆಗಬೇಕಾದ ಬದಲಾವಣೆಯಾ ಧಿಕ್ಸೂಚಿಯಂತೆ ಇದೇ. ” ಅವನು ಅವಳುಮತ್ತು ಬದುಕು” ಎಂಬ ಕತೆಯಲ್ಲಿ ಪ್ರೇಮಿಗಳಾಗಿದ್ದವರು ಮದುವೆಯಾದ ಮೇಲೆ ಹೇಗೆ ಬದಲಾಗುತ್ತಾರೆ ಎಂಬುದರ ಬಹಳ ಸೂಕ್ಷ್ಮವಾದ ವಿಶ್ಲೇಷಣೆಯಂತೆ ಇದೆ. ” ದರ್ಪಣ” ಎಂಬ ಕತೆಯು ಇಂದು ನಮಗೆ ಹೆಚ್ಚಾಗಿ ಕಾಣಸಿಗುವ ಅತ್ತೆ ಸೊಸೆ ಕಲಹಕ್ಕೆ ಬಹಳ ಸುಲಭವಾಗಿ ಪರಿಹಾರವನ್ನು ಸೂಚಿಸಿದ್ದಾರೆ. ” ತಾಯಿಯ ಕರೆ” ಕತೆಯ ಮುಂದುವರಿದ ಭಾಗದಂತಿರುವಾ ” ನಿರಾಳ” ಎಂಬ ಕತೆಯು ಆಧುನಿಕತೆ ಎಂಬ ಹೆಸರಿನಲ್ಲಿ ಹೆತ್ತಾ ಮಕ್ಕಳನ್ನೆ ಸಣ್ಣ ವಯಸ್ಸಿನಲ್ಲೇ ದೂರ ಮಾಡಿದರೆ ಅದರ ಪರಿಣಾಮವೇ ನಾವು ನಮ್ಮ ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂಬ ಆಶಯವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಾರೆ. ಇದನ್ನು ಓದಿ ಒಂದಷ್ಟು ಜನ ಎಚ್ಚೆತ್ತು ಕೊಂಡರೆ ಅಷ್ಟು ವೃದ್ಧಾಶ್ರಮದಲ್ಲಿ ಇರುವವರ ಸಂಖ್ಯೆ ಕಡಿಮೆ ಆಗಬಹುದು. ” ಹೀಗೊಬ್ಬ ತಾಯಿ” ಎಂಬ ಕತೆಯಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುವ ಮಗನಾ ಆರೈಕೆಗೆ ಒಬ್ಬ ಒಂಟಿ ತಾಯಿ ಪಡುವ ಕಷ್ಟಗಳು ಮತ್ತು ಅಂತಹ ಮಗನನ್ನು ತಾನೆ ತನ್ನ ಕೈಯಾರೆ ಕೊಲ್ಲುವ ಪರಿಸ್ಥಿತಿಗೆ ಸಿಲುಕುವ ವಿಧಿಯಾಟದ ಚಿತ್ರಣ ಎಂತಹ ಕಲ್ಲು ಹೃದಯದವರ ಮನ ಕಲಕುವಂತೆ ಇದೇ. ಇನ್ನು ” ಚೈತ್ರ ಪಲ್ಲವಿ ಚಿಗುರಿತು” ಕತೆಯಲ್ಲಿ ಲೇಖಕಿ ‘ ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಗಾದೆ ಮಾತು ಸುಳ್ಳು ಎಂಬುದರ ಜೊತೆ ಜೊತೆಗೆ ಸಮಾಜದ ಗೊಡ್ಡು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಟ್ಟು ಜೀವನಲ್ಲಿ ನವ ಚೈತ್ರ ಪಲ್ಲವಿ ಚಿಗುರಿಸಿಕ್ಕೊಳ್ಳಲು ಬೇಕಾದ ನೈತಿಕ ಬೆಂಬಲ ಮತ್ತು ಅದಕ್ಕಾಗಿ ಮಾಡುವ ಸಹಾಯ ಎರಡೂ ಅನುಕರಣಿಯಾ ಎಂಬುದನ್ನು ಒಪ್ಪುವಂತಹ ಮಾತಾಗಿದೆ.  ಇವಿಷ್ಟೇ ಅಲ್ಲದೇ ಕಥಾ ಸಂಕಲನದಲ್ಲಿ ಇರುವ ಎಲ್ಲಾ ಕತೆಗಳು ಮನೋಜ್ಞವಾಗಿರುವುದಲ್ಲದೇ ಮಾನವಿಯಾ ಮೌಲ್ಯಗಳನ್ನು ಯಾವುದೇ ಹೇರಿಕೆಯಿಲ್ಲದಂತೆ ಓದುಗರರಿಗೆ ಮಾಡಿಕೊಡುತ್ತದೆ ” ದರ್ಪಣ” ಎಂಬ ಪದದ ಅರ್ಥವೇ ಕನ್ನಡಿ . ಅಂತೆಯೇ ಈ ಕಥಾಸಂಕಲನವೂ ನಮ್ಮನಿಮ್ಮಲ್ಲರ ಜೀವನವನ್ನು ಕನ್ನಡಿಯಲ್ಲಿ ಮತ್ತೊಮ್ಮೆ ನೋಡಿಕೊಂಡಂತೆ ಭಾಸವಾಗುತ್ತದೆ. ಇದನ್ನು ಓದುವ ಖುಷಿ ನಿಮ್ಮದಾಗಲಿ.. ************ ಸಂಗೀತ ಶ್ರೀಕಾಂತ್.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ ಆಗಬಲ್ಲಳು, ಯಾಕೆಂದರೆ ಬರಹಗಾರನಿಗೆ ಮೂಲತಃ ಇರಬೇಕಾದದ್ದು ತಾನು ಬರೆಯುವ ವಿಷಯದ ಅಧ್ಯಯನ ಮತ್ತು ಅರಿವು, ಮತ್ತು ಎಲ್ಲಾ ಪ್ರಕಾರಗಳಲ್ಲಿ ಬರೆಯೋದು, ಈಗಾಗಲೇ ಇವಳ ಕಥೆ, ಕವನ, ಪ್ರವಾಸಕಥನಗಳು ಸುಧಾ ತರಂಗ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಸಂಪದ ಸಾಲು ಪತ್ರಿಕೆಯ ವರ್ಷಗಳ ಅಂಕಣಕಾರ್ತಿ ಕೂಡಾ… ಅಭಿನಂದನೆಗಳು, ಶುಭಾಶಯಗಳು ಗೆಳತೀ…ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿರೋ ಗಾಯತ್ರಿ ನಂಗೆ ಫೇಸ್ಬುಕ್ ಪರಿಚಯ, ಓದಿನ ಬರಹದ ಸಮಾನ ಆಸಕ್ತಿ ನಮ್ಮನ್ನು ಹತ್ತಿರ ತಂದಿದ್ದಾದರೂ ಬಹಳಷ್ಟು ಆಸಕ್ತಿಯ ಸಾಮ್ಯತೆಗಳು ಗೆಳೆತನವನ್ನು ಗಾಢವಾಗಿ ಬೆಸೆದಿದೆ, ಸಂಗೀತ, ಸಾಹಿತ್ಯ, ಕೆಲವು ಕಲೆ ಹವ್ಯಾಸಗಳ ಆಗರ ಆಗಿರೋ ಗಾಯತ್ರಿ ಸದಾ ಕ್ರಿಯೇಟಿವ್, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಇರೋ ಇವಳಿಗೆ ತನ್ನ ಬಿಡುವಿಲ್ಲದ ಕೆಲಸಗಳಲ್ಲೂ ಬರಹವನ್ನು ಆಪ್ತವಾಗಿಸಿಕೊಂಡವಳು, ಅಕ್ಷರವನ್ನು ಪದಗಳಾಗಿಸಿ, ಅದನ್ನು ತನ್ನ ಹಿಡಿತದಲ್ಲಿ ಇಟ್ಟು ಓದುಗರ ಮನಸ್ಥಿತಿಗನುಗುಣವಾಗಿ ಬರೆಯುವ ಚತುರತೆ ಇವಳಿಗೆ ತಾನಾಗಿ ಒಲಿದು ಬಂದಿದೆ,ಆ ಕರಾಳ ರಾತ್ರಿ… ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಲವು ಮುಖಗಳನ್ನು ಕಂಡಿದ್ದೀವಿ ಹಾಗೂ ಕಾಣುತ್ತಲೇ ಇದ್ದೀವಿ, ಇದರ ಜೊತೆ, ಮಾನವೀಯ ಭಾವನಾತ್ಮಕ ಸಂಬಂಧಗಳ ತಳುಕು, ಅಜ್ಜಿ ಮೊಮ್ಮಗನ, ಮತ್ತು ತನ್ನ ಮೇಲೇ ಅವಲಂಬಿತವಾಗಿರುವ ಅಸಹಾಯಕ ವೃದ್ಧ ಜೀವವನ್ನು ರಕ್ಷಿಸಲು ರಾಜೇಶ್ ಪಡುವ ಪಾಡು, ಜೀವಕ್ಕೇ ಹತ್ತಿರವಾದ, ಪ್ರೇಮವನ್ನು ಮೀರಿ ಅಜ್ಜಿಯನ್ನು ಉಳಿಸಿಕೊಳ್ಳಲು ಹೋರಾಡಿಯೂ , ಪ್ರವಾಹದ ಸಂಕಷ್ಟದಲ್ಲಿ ಬಹುಪಾಲು ಜೊತೆಗಿದ್ದು ಇನ್ನೇನೂ ಗುರಿ ಸೇರಿದ್ದೀವಿ ಅನ್ನೋಲ್ಲಿ ಎದುರಾದ ನಿರಾಸೆ … ಇಲ್ಲಿ ಎರಡು ಸಂಭವಗಳನ್ನು ನಮ್ಮ ಮುಂದಿಟ್ಟು ಕಥೆ ಮುಗಿಸುವ ಲೇಖಕಿಯ ಜಾಣ್ಮೆ, ನಿರೂಪಣೆ, ಪ್ರಬುದ್ಧತೆ ಇಷ್ಟವಾಗತ್ತೆ, ಮೊಮ್ಮಗನ ಅಂತಃಶಕ್ತಿಯಾಗಿ ಜೊತೆಗಿರುವ ಅಜ್ಜಿಯೇ ಅಂತಾ ಪ್ರವಾಹವನ್ನು ದಾಟಿಸುವ ಶಕ್ತಿ ಎಂದರೆ ತಪ್ಪಿಲ್ಲ ….ಅನೈತಿಕನಾ??ಅನೈತಿಕ ಈ ಪದಕ್ಕೇ ಯಾವ ಅರ್ಥ ಕೊಡಬೇಕು ಅನ್ನೋದು ಇವತ್ತಿಗೂ ಒಗಟೇ… ನಿಜ ಯಾವುದು ಅನೈತಿಕ? ಪುರಾಣಗಳ ಪುಟ ತುಂಬಾ ಧರ್ಮಸೂಕ್ಷ್ಮಗಳಡಿಯಲ್ಲಿ ಬರುವ ವಿಷಯ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಚರ್ಚೆಗೆ, ನಿಂದನೆಗೆ ಗುರಿಯಾಗೋದು ವಿಡಂಬನೆಯಾ…. ವಿಪರ್ಯಾಸವಾ?? ಆದರೇ ನಮ್ಮಂತವರು ಸಮಾಜಕ್ಕೆ ಕುಹಕಕ್ಕೆ ಹೆದರಿ ಬರೆಯಲಾರದ ವಿಷಯವನ್ನು ತೆಗೆದುಕೊಂಡು ಲೀಲಾಜಾಲವಾಗಿ ಸುಂದರವಾಗಿ ನಿರೂಪಿಸಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೇ….ಬಡತನದ ಬಣ್ಣ ಕಡುಕೆಂಪು…..ಇನ್ನೊಬ್ಬರ ನೋವು, ಸಂಕಟ, ಹಸಿವು ನಿರಾಸೆಯನ್ನು ನಾವು ಅನುಭವಿಸಿದಂತೆ, ನಮ್ಮದೇ ಅನುಭವದಂತೆ ಓದುವವರಿಗೂ ತಮ್ಮದೇ ಅನುಭವ ಅನ್ನೋ ಹಾಗೇ ಅಕ್ಷರಗಳಲ್ಲಿ ನಿರೂಪಿಸುವುದರಲ್ಲಿ ಬರಹಗಾರರ ಚಾತುರ್ಯ ಜಾಣ್ಮೆ, ಓದುಗರ ಮನಗೆಲ್ಲುವ ಆಕರ್ಷಣೆ ಅಡಗಿರತ್ತೆ, ಈ ನಿಟ್ಟಿನಲ್ಲಿ ಲೇಖಕಿ ಈ ಕಥೆಯಲ್ಲಿ ಓದುವ ನಮ್ಮನ್ನೇ ಪಾತ್ರವಾಗಿಸಿ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ….. ಹಸಿವಿನ ನೋವು ಸಂಕಟ ಮಾತ್ರವಲ್ಲ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ,” ಮಾಮ್ ” ಅಮಾನವಿ ಕುತಂತ್ರ,ಆಧುನಿಕತೆ ಹೆಚ್ಚಿದಷ್ಟೂ ಮನುಷ್ಯನ ಲಾಲಸೆ ಯೂ ಹೆಚ್ಚುತ್ತಲೇ ಹೋಗತ್ತಾ , ಜೊತೆಗೆ ಎಷ್ಟು ಸೌಲಭ್ಯಗಳು ಸಿಕ್ಕರೂ ಇನ್ನೂ ಇನ್ನೂ ಬೇಕೆನ್ನುವ ಹಪಾಹಪಿ ಜಾಸ್ತಿಯಾಗತ್ತಾ, ಸೋಮಾರಿತನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚತ್ತಾ…. ಇದನ್ನು ಓದುತ್ತಿದ್ದರೆ ಭಯ ಅನ್ನಿಸತ್ತೆ… ಕಣ್ಮುಂದೆ ನೆಡೆದಂತೆ ಅನುಭವ ನೀಡುವ ಬರಹದ ಲೇಖಕಿಯ, ತಿಳುವಳಿಕೆ ಮತ್ತು ಅದನ್ನು ಓದುಗರ ಮನಕ್ಕಿಳಿಯುವಂತೆ ಬರಹಕ್ಕಿಳಿಸುವ ಜಾಣ್ಮೆ ಮೆಚ್ಚುವಂತಹದು,ನಿರ್ಧಾರ..ನಿಜ ದೈನಂದಿನ ಬದುಕಲ್ಲಿ ತುಂಬಾ ಗಹನ ಆಗಿದ್ದೂ ನಮ್ಮ ನಿರಾಸಕ್ತಿ ಬೇಜವಾಬ್ದಾರಿ ಇಂದಲೋ, ಮುಜುಗರ ಸೌಜನ್ಯ, ಅತ್ವಾ ಕರ್ತವ್ಯ ಜವಾಬ್ದಾರಿ ಎಂದೋ ಕೆಲವು ದುಡುಕಿನ ನಿರ್ಧಾರಗಳು ಬಾಳಪೂರ್ಣ ನಮ್ಮನ್ನು ಕಾಡಿ ಕಂಗೆಡಿಸುತ್ತವೆ, ಮನಸ್ಸು ಹೃದಯ ಎಂದು ಬದುಕಿಡೀ ನರಳುವ ಬದಲು ಬುದ್ದಿಗೆ ಸಾಣೆ ಹಿಡಿದು ಯೋಚಿಸಿ ನಿರ್ಧರಿಸಿದರೆ, ಬಹಳಷ್ಟು ಉತ್ತಮ ಜೀವನ ನೆಮ್ಮದಿಗೆ ಕಾರಣವಾಗುತ್ತದೆ, ಲೇಖಕಿಯ ಧನಾತ್ಮಕ ಯೋಚನೆ ಹಾಗೂ ಅದನ್ನು ಸಮಾಜಕ್ಕೂ ಧನಾತ್ಮಕತೆಯನ್ನು ಹರಡುವ ಉದ್ದೇಶ ಎರಡೂ ಸಫಲವಾಗಿದೆ,ಸುಂಟರಗಾಳಿ?ಏನೋ ಆಗಿದೆ ಅನ್ನೋ ಭಯ… ಅದು ತರುವ ಅಸಹನೆ…. ನಮ್ಮಲ್ಲಿನ ಕೀಳರಿಮೆ ತಪ್ಪಿತಸ್ಥ ಮನೋಭಾವನೆ ಎಷ್ಟು ಬೇಗ ನಮ್ಮನ್ನು ಪಾತಾಳಕ್ಕೆ ತಳ್ಳಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ, ಅನುಮಾನ ಮತ್ತು ಅಹಂಕಾರ ಸಂಬಂಧಗಳ ಸಮಾಧಿಗೆ ತಳಹದಿ, ನಿಜ ಇದನ್ನು ಸರಳವಾಗಿ ಸುಲಭವಾಗಿ ಮನಸ್ಸಿಗಿಳಿವಂತೆ ಬಿಂಬಿಸಿದ ಲೇಖಕಿಗೆ ವಂದನೆಗಳು,ರಾಜಿ..?ಯಾರಾದರೂ ಯೋಚಿಸಲು ಮಾತನಾಡಲು ಸಂಕೋಚ ಮುಜುಗರ ಪಡುವ ಸಲಿಂಗ ಸಾಂಗತ್ಯದ ವಿಷಯವನ್ನೆತ್ತಿಕೊಂಡು, ಸುಲಲಿತವಾಗಿ ಅದನ್ನು ಬರಹಕ್ಕಿಳಿಸಿ, ಓದುಗರಿಗೂ ಎಲ್ಲೂ ಮುಜುಗರ ಆಗದಂತೆ, ಬಾಲ್ಯದಿಂದಲೂ ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಂಪತ್ಯ ಸಾಂಗತ್ಯದ ಬಗ್ಗೆ ಹೆಣ್ಮಕ್ಕಳ ಮೇಲಾಗುವ ಪರಿಣಾಮ ಅದ್ಭುತವಾಗಿ ಬಿಂಬಿತವಾದ ಕಥೆ ಲೇಖಕಿಗೆ ಹ್ಯಾಟ್ಸಾಪ್ ಹೇಳದೇ ಬೇರೆ ಮಾತಿಲ್ಲ. “”ಬಾಳಲ್ಲಿ ನಿನ್ನಿಂದ ಸೂರ್ಯೋದಯ”, ದಲ್ಲಿ ಕರಾಳತೆ ಕವಿದ ಬದುಕೊಂದು ಸಾಮಾಜಿಕ ಸಂಪ್ರದಾಯಗಳ ಸಂಕೋಲೆ ಮೀರಿ ಬದುಕನ್ನು ಧನಾತ್ಮಕವಾಗಿ ಯೋಚಿಸುವ ನಿಟ್ಟಿನಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದರೇ….“ಪಿಂಕ್ ಶರ್ಟ್ ಮತ್ತು ಖಾಕಿ?” ನಾವು ಕಾಣದ ಸಮಾಜದ ವಿಭಿನ್ನ ವ್ಯಕ್ತಿ ಮತ್ತು ವ್ಯಕ್ತಿತ್ವ, ತನ್ನದಲ್ಲದ ತಪ್ಪಿಗೆ ತೃತೀಯ ಲಿಂಗಿ ಅನ್ನಿಸಿಕೊಂಡು ಬದುಕಿದ ಮನಸ್ಸಿನ ನೋವು ಕಳವಳ, ಪಾಡು ಪರದಾಟಗಳನ್ನ ಹೇಳುತ್ತಾ… ವ್ಯವಸ್ಥೆಯ ದೌರ್ಜನ್ಯ ಮತ್ತು ಕಾಯಬೇಕಾದವರೇ ಕೊಲ್ಲುವ ಮನಸ್ಥಿತಿಯ ಕ್ರೌರ್ಯ ಪರಿಸ್ಥಿತಿಯ ದುರ್ಬಳಕೆಯನ್ನು ಮಾಡಿಕೊಳ್ಳುವ ಅಧಿಕಾರಿ ವರ್ಗ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಲೇಖಕಿ, ಅಕ್ಷರಗಳನ್ನು ಪದಗಳನ್ನು ಸೇರಿಸಿ ಹನೆದ ಕಥೆ ಸಚಿತ್ರವಾಗಿ ಕಣ್ಮುಂದೆ ಬರತ್ತೆ,…” ಕಲ್ಲಾದಳೆ ಅಹಲ್ಯೆ…..?? ” ಈ ಕಥೆ ಓದುತ್ತಾ ಓದುತ್ತಾ ನಾನೇ ಅಹಲ್ಯೆ ಆಗ್ಬಿಟ್ಟಿದ್ದೆ, ಅಹಲ್ಯೆಯ ಮನದಾಳದ ಭಾವ ನೋವು ಆಕ್ರಂದನ ಆಕ್ರೋಶ ಹತಾಶೆ ಅಸಹಾಯಕತೆ, ಒಂದು ತಣ್ಣನೆ ಸೇಡು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ, ಪುರಾಣಗಳ ಪುಟಗಳನ್ನು ಮೂಲಕ್ಕೇ ಚ್ಯುತಿ ತರದೇ ಬಿಂಬಿಸೋದೇ ಒಂದು ದೊಡ್ಡ ಸಾಹಸ, ಈ ಕಥೆ ಓದಿದರೆ ಬಹುಶಃ ಲೇಖಕಿ ಪುರಾಣದ ಯಾವುದೇ ಒಂದು ಪಾತ್ರವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಅಳವಡಿಸಿ ಅದ್ಬುತ ಕಾದಂಬರಿ ಮಾಡಲು ಶಕ್ತಳು ಅನ್ನಿಸಿತು,“”ಅನಿರೀಕ್ಷಿತ ತಿರುವು “” ನಿಜಾ ಬಹಳ ಸಲ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ತೀರಾ ಎಲ್ಲೋ ಮುಂಚೆನೇ ನೆಡೆದಂತೆ ಕನಸಲ್ಲಿ ಕಂಡಂತೆ ಈ ಮೊದಲೇ ಅನುಭವಕ್ಕೆ ಬಂದಂತೆ ಅನ್ನಿಸಿ ಗಾಬರಿ ಹುಟ್ಟಿಸುವುದು, ಇದು ಬಹಳ ಜನಕ್ಕೆ ಏನೆಂದು ಅರಿವಾಗೋದು ಇಲ್ಲಾ, ನಾವೇ ಇದೇನೂ ಸಿಕ್ಸ್ತ್ ಸೆನ್ಸಾ ಅನ್ನಿಸಿ ಕಳವಳ ಆಗೋದುಂಟು, ಅಂತಹ ಒಂದು ಎಳೆ ಹಿಡಿದು ಕಥೆ ಹೆಣೆದು ಅಲ್ಲಿಯೂ ಅನೂಹ್ಯ ತಿರುವಿಟ್ಟಿದ್ದಾರೆ ಲೇಖಕಿ, ಅನುಬಂಧಗಳ ಪರಸ್ಪರ ಮಿಡಿಯುವಿಕೆಯ ಭಾವಗಳ ತಾಕಲಾಟ ನಿರೂಪಣೆ ಚಂದ ಚಂದ,“”ಹೀಗೊಂದು ಅಂತ್ಯ “” ತನ್ನ ಬದುಕಿನಲ್ಲಿ ನೆಡೆಯೋ ಅಪಘಾತ ಲೇಖಕನ ಮುಂದಿಟ್ಟು ಅವನು ಕೊಡೋ ಅಂತ್ಯವನ್ನು ತಾನು ಅಪಾದಿಸಿಕೊಳ್ಳುವ ಅದನ್ನರಿಯದ ಲೇಖಕ ಅಂತ್ಯವನ್ನು ಸೂಚಿಸಿ ತೊಳಲಾಡುವ ಉದ್ವೇಗ, ಪರಿತಾಪ ಚೆನ್ನಾಗಿ ವ್ಯಕ್ತವಾಗಿದೆ, ಲೇಖಕರಿಗೆ ಇರಬೇಕಾದ ಸಾಮಾಜಿಕ ಪ್ರಜ್ಞೆ ಸೂಚ್ಯವಾಗೀ ಮೂಡಿ ಬಂದಿದೆ,“ವಿಷಸರ್ಪ” ಕೆಲವು ಬಾರಿ ನಾವು ಮನುಷ್ಯರನ್ನು ಮೊದಲು ನೋಡಿದಾಗಲೇ ಏನೋ ಒಂದು ಭಾವ ಉದ್ಭವ ಆಗ್ಬಿಡತ್ತೆ, ಅದರಲ್ಲಿ ಅವರ ಹೊರ ರೂಪ ನಮ್ಮಲ್ಲಿ ಸಲ್ಲದ ಋಣಾತ್ಮಕ ಅಂಶಗಳೇ ಎದ್ದು ಕಾಣಿಸಿದಂತಾಗೀ ವಿನಾಕಾರಣ ದ್ವೇಷ ಅಸಹನೆ ಬೆಳೆಯುತ್ತ, ಕೊನೆಗೊಂದು ಸಲ ನಮ್ಮ ತಪ್ಪು ಅರಿವಾಗೋದ್ರೊಳಗೆ ಏನಾದರೂ ಘಟನೆ ಸಂಭವಿಸಿರತ್ತೆ, ಅದಕ್ಕೇ ಹಿರಿಯರು ಹೇಳೋದೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾ, ಹಾವೂ ಮುಂಗುಸಿ ಕಥೆ ನೆನಪಾಯಿತು,“” ಅವ್ಯಕ್ತ ” ನಮ್ಮೊಳಗಿನ ಮಾನಸಿಕ ತಾಕಲಾಟಗಳು ಸಂಸಾರದ ಇತರ ಸದಸ್ಯರುಗಳ ಮೇಲಾಗುವ ಸಾಮಾಜಿಕ ಸಾಂಸಾರಿಕ ಮಾನಸಿಕ ಪರಿಣಾಮಗಳನ್ನು ಹೇಳುವ ಕಥೆ, ಇಂತಹ ವಿಷಮ ಸನ್ನಿವೇಶದಲ್ಲಿ ಆತುರ ಪಡದೇ ಸಾವಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ಹಿಡಿಯತ್ತೆ,“”ತಪ್ಪಿದ ತಾಳ ” ಅತಿಯಾದಲ್ಲಿ ಅಮೃತವೂ ವಿಷವೇ, ಕಾಮವೂ ಅದಕ್ಕೇ ಹೊರತಲ್ಲ, ಮನೋ ನಿಗ್ರಹ, ಇಂದ್ರಿಯ ನಿಗ್ರಹ ಸ್ವಸ್ಥ ಬದುಕಿಗೇ, ಸಂಸಾರ ಸಮರಸಕ್ಕೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ, ಯಾವುದು ಎಲ್ಲೇ ದಾಟಿದರೂ, ಯಾರೇ ಮಿತಿ ಮೀರಿದರೂ, ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುವುದು,ಎಲ್ಲಾ ಹದಿನೈದು ಕಥೆಗಳು ವಿಭಿನ್ನ ಕೋನಗಳಲ್ಲಿ ಭಿನ್ನ ವಸ್ತುಗಳಲ್ಲಿ ಬರೆದ ಲೇಖಕಿ ಮೊದಲ ಹೆಜ್ಜೆಯಲ್ಲೇ ತಾನೇನೂ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೊಸ ಲೇಖಕಿ ಎಂದೋ ತಿಳಿಯದೆಯೋ, ಇಲ್ಲದ ಪೂರ್ವಗ್ರಹಕ್ಕೆ ಒಳಗಾಗಿ ಓದದಿದ್ದರೆ ನಷ್ಟ ಓದುಗರದೆ, ಸಾಹಿತ್ಯಾಭಿಮಾನಿಗಳು ಒಮ್ಮೆ ಓದಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿ ಹಾರೈಸಿ, ಸ್ನೇಹ ಬುಕ್ ಹೌಸ್, ಫೀನಿಕ್ಸ್ ಬುಕ್ ಹೌಸ್ ಅಲ್ಲಿ ಮತ್ತು ಲೇಖಕರ ಬಳಿಯೂ “ಬಣ್ಣದ ಜೋಳಿಗೆ ” ಲಭ್ಯವಿದೆ, ********* ಪದ್ಮಜಾ ಜೋಯ್ಸ್ ತೀರ್ಥಹಳ್ಳಿ ,

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದೃಷ್ಟಾಂತದ ಮೂಲಕ ನೀತಿಯ ಬೋಧನೆ. ಸೋಮೇಶ್ವರ ಶತಕ ಕೃತಿ : ಸೋಮೇಶ್ವರ ಶತಕಪುಲಿಗೆರೆ ಸೋಮನಾಥ.ಕನ್ನಡ ಸಾಹಿತ್ಯ ಪರಿಷತ್ತು.ಚಾಮರಾಜಪೇಟೆ.ಬೆಂ.ಮರು ಮುದ್ರಣ:೨೦೨೦.ಬೆಲೆ :೬೦. ಪುಸ್ತಕ ಪರಿಚಯ: ಕೃತಿ: *ಸೋಮೇಶ್ವರ ಶತಕಪುಲಿಗೆರೆಯಸೋಮನಾಥ ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ ಪದ್ಯಗಳು.ಬಿಡಿ ಬಿಡಿಯಾಗಿರುವ ಈ ಪದ್ಯಗಳು ನೀತಿಬೋಧಕವಾದವು. ದೃಷ್ಟಾಂತಗಳ ಮೂಲಕ ಸರಿ ತಪ್ಪುಗಳನ್ನು,ಸಾಮಾಜಿಕ ನಡವಳಿಕೆಯನ್ನು ತಿಳಿಸುವ ಅಲಿಖಿತವಾದ ಜನಮಾನಸದ ಶಾಸನಗಳಂತಿರುವ ಪದ್ಯಗಳು ಇವು. ಹಾಗೆ ನೋಡಿದರೆ ನಮ್ಮ ಹಲವು ಜನಪದ ತ್ರಿಪದಿಗಳು,ಗಾದೆಗಳೂ,ಶರಣರ ನುಡಿಗಳು,ಸರ್ವಜ್ಞನ ವಚನಗಳು,ಕೀರ್ತನೆಕಾರರ ನುಡಿಗಳು..ಇವೆಲ್ಲಾ ಬಹುಪಾಲು ಸಾಮಾಜಿಕ ಧಾರ್ಮಿಕ ನಡಾವಳಿಗಳನ್ನು ಕುರಿತು ಹೇಳುತ್ತಲೇ,ಮಾರ್ಗದರ್ಶಿಯೂ ಚಿಂತನೆಗೆ ಹಚ್ಚುವವೂ ಆಗಿವೆ. “ಸೋಮೇಶ್ವರ ಶತಕ ” ರಚನೆಕಾರ ಪುಲಿಗೆರೆ ಸೋಮೇಶ್ವರ ಅಥವಾ ಪಾಲ್ಕುರಿಕೆ ಸೋಮೇಶ್ವರನೇ ಎಂಬ ಗೊಂದಲವಿದೆ.ಹನ್ನೆರಡನೆ‌ ಶತಮಾನದ ಅಂತ್ಯದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ಸಂಸ್ಕೃತ, ತೆಲುಗು,ಕನ್ನಡ ಮೂರು ಭಾಷೆಗಳಲ್ಲೂ ಪಾಂಡಿತ್ಯ ಪಡೆದವನಾಗಿದ್ದ.ಆದರೆ,ಇವನು ಗೋದಾವರಿ ಪ್ರಾಂತ್ಯದಲ್ಲಿದ್ದನೆಂದು,ಇವನಿಂದ‌ ಇದು ರಚಿತವಾಗಿಲ್ಲವೆಂದು ಕವಿಚರಿತೆಕಾರರು ಹೇಳಿದ್ದಾರೆ.ಮತ್ತೊಬ್ಬರು, ಪುಲಿಗೆರೆ ಸೋಮನಾಥ. ಸುಮಾರು ಹದಿನಾರನೇ ಶತಮಾನ.ಧಾರವಾಡದ ಜಿಲ್ಲೆ,ವೀರಶೈವ ಕವಿಯಾಗಿದ್ದವನು.ಕೃತಿಯಲ್ಲಿ‌ಸೋಮ‌ ಎಂದಷ್ಟೇ ಕವಿ ಹೆಸರಿದೆ.ಈ ಧಾರವಾಡದ ಕವಿ ಪುಲಿಗೆರೆ ಸೋಮನಾಥನೇ‌ ಶತಕದ ಕವಿಯೆಂದು ವಿದ್ವಾಂಸರು ಊಹಿಸಿದ್ದಾರೆ. ಶತಕವೆಂದರೆ ನೂರು.ಆರಂಭದ ಸ್ತುತಿ ಮತ್ತು ಅಂತ್ಯದ ಶತಕದ ಉಪಯೋಗ ತಿಳಿಸುವ ಪದ್ಯಗಳನ್ನು ಸೇರಿಸಿ,ಒಟ್ಟು ನೂರ ಮೂರು ಪದ್ಯಗಳು ಇದರಲ್ಲಿವೆ.ಮೊದಲ ಮತ್ತು ಕೊನೆಯ ಪದ್ಯಗಳು ಸ್ರಗ್ಧರಾ ವೃತ್ತದಿಂದ ಕೂಡಿದ್ದು,ಉಳಿದವು ಮತ್ತೇಭವಿಕ್ರೀಡಿತವೆಂಬ ವೃತ್ತ ಪದ್ಯಗಳಲ್ಲಿ ರಚನೆಯಾಗಿವೆ. ” ಸೋಮೇಶ್ವರ ಶತಕ” ಕೃತಿಯ ಸಂಪಾದನೆ ಬಹಳ ಅರ್ಥಪೂರ್ಣವಾಗಿದೆ.ಪದ್ಯಗಳು, ಅವುಗಳಿಗೆ ಭಾವಾರ್ಥ,ಟಿಪ್ಪಣಿ,ಜೊತೆಗೆ ಆ ಪದ್ಯಗಳಲ್ಲಿ ಉಲ್ಲೇಖಿಸಿರುವ ಕಥಾ ಎಳೆಗಳು ತಿಳಿಯದವರಿಗೆ ಪೂರ್ಣ ವಾಗಿ ತಿಳಿಯಲಿ ಎಂಬ ಆಶಯದೊಂದಿಗೆ ನೀಡಿರುವ ಮುವತ್ತು ಮೂಲಕಥೆಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.ಹಾಗಾಗಿ,ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ, ಓದುಗರೆಲ್ಲರಿಗೂ ಯಾವುದೇ ಗೊಂದಲವಿಲ್ಲದೆ ಸರಳವಾಗಿ ಗ್ರಹಿಸಲು ಉಪಯುಕ್ತವಾಗಿ ರೂಪಿಸಿಕೊಡಲಾಗಿದೆ. ಸೋಮೇಶ್ವರ ಶತಕದ ಪದ್ಯಗಳು ಎಷ್ಟು ಜನಪ್ರಿಯವಾದವು ಎಂದರೆ; ಎಳೆಗರು ಎತ್ತಾಗದೆ,ಬಡವಂ ಬಲ್ಲಿದನಾಗನೆ,ಹಲವು ಹಳ್ಳ ಸೇರಿ ಸಮುದ್ರವಾಗದೆ,ಮಡಿಯೆ ನಿರ್ಮಲ‌ ಚಿತ್ತ…ಹೀಗೆ ಗಾದೆಗಳಂತೆ,ನಾಣ್ನುಡಿಗಳಂತೆ ರೂಢಿಗತವಾಗಿ ಬಳಸುವ ಮಾತುಗಳಾಗಿವೆ. ಈ ಶತಕದ ಪದ್ಯಗಳು ನಾಲ್ಕು ಸಾಲಿನಲ್ಲಿದ್ದು ಕೆಲವು ದೃಷ್ಟಾಂತಗಳ ಮೂಲಕ ನೀತಿ, ತಿಳುವಳಿಕೆ ‌ಹೇಳುತ್ತವೆ. ” ಉಣದಿರುವ ಧನಮಿರ್ದೊಡೇನು,ಸುತನಿರ್ದೇಂ‌ ಮುಪ್ಪಿನಲ್ಲಾಗದಾ,ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ‌ ಬಂದೇನದಾಪತ್ತಿನೊಳ್ ಮಣಿದುಂ‌ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದ ತೃಣವೇ ಪರ್ವತವಲ್ಲವೇ‌ ಹರಹರಾ ಶ್ರೀಚೆನ್ನ ಸೋಮೇಶ್ವರ.!”(೧೬) ಉಪಯೋಗಿಸದಿರುವ ಹಣವೂ,ಮುಪ್ಪಿನಲ್ಲಿರುವ ತಂದೆ ತಾಯಿಯನ್ನು ನೋಡದ ಮಗನೂ,ಪೈರು ಒಣಗುವಾಗ ಬಾರದ‌ ಮಳೆಯೂ,ಕಷ್ಟಕಾಲದಲ್ಲಿಯೂ ಬಂದು ವಿಚಾರಿಸಿಕೊಳ್ಳದ ನಂಟರೂ ಇದ್ದು ಪ್ರಯೋಜನವಿಲ್ಲ‌.ಉಪಯೋಗವಿಲ್ಲ.ಆದುದರಿಂದ ಸಮಯಕೆ ಸರಿಯಾಗಿ ಒದಗಿದ ಹುಲ್ಲುಕಡ್ಡಿಯೂ,ಅಂದರೆ‌ ಸಣ್ಣ‌ಸಹಾಯವೂ ಪರ್ವತಕ್ಕೆ ಸಮಾನವಾದುದು.ಹೀಗೆ ಸಾಮಾಜಿಕ ಜೀವನದ ವಿವರಗಳನ್ನೇ ಉದಾಹರಿಸುತ್ತಾ ಸರಿ ತಪ್ಪುಗಳ, ಒಳಿತು ಕೆಡಕುಗಳ ವಿಚಾರ ಮಾಡಿದ್ದಾನೆ‌ ಕವಿ. ” ಮದನಂ ದೇಹವ ನೀಗಿದಂ,ನೃಪವರಂ ಚಂಡಾಲಗಳಾದ,ಪೋದುದು ಬೊಮ್ಮಂಗೆ ಶಿರಸ್ಸು,ಭಾರ್ಗವನು ಕಣ್ಗಾಣಂ,ನಳಂ‌ ವಾಜಿಪಂ,ಸುಧೆಯಂ‌ ಕೊಟ್ಟು ಸುರೇಂದ್ರ ಸೋಲ್ತ,ಸತಿಯಂ ಪೋಗಾಡಿದಂ ರಾಘವಂ,ವಿಧಿಯಂ ಮೀರುವನಾವನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರ. “(೨೭) ಮನ್ಮಥನು ದೇಹವನ್ನೇ ಕಳೆದುಕೊಂಡನು,ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು,ಬ್ರಹ್ಮನಿಗೆ ಒಂದು ತಲೆಯೇ ಹೋಯಿತು.ಶುಕ್ರಾಚಾರ್ಯರಿಗೆ ಒಂದು ಕಣ್ಣು ಹೋಯಿತು.ನಳ‌ ಮಹಾರಾಜನು ಕುದುರೆಯ ನೋಡಿಕೊಂಡಿರಬೇಕಾಯಿತು,ಇಂದ್ರನು ಅಮೃತವನ್ನು ಕಳೆದುಕೊಂಡು ಯುದ್ದದಲ್ಲಿ ಸೋತು ಹೋದನು,ಶ್ರೀರಾಮನು ತನ್ನ ಹೆಂಡತಿಯನ್ನು ಕಳೆದುಕೊಂಡನು…ಹೀಗಿರುವಾಗ ಲೋಕದಲ್ಲಿ ದುರಾದೃಷ್ಟವನ್ನು ಮೀರಲು ಯಾರಿಗೆ ಸಾಧ್ಯ.ಎಲ್ಲರೂ ಬಂದುದನ್ನು ಅನುಭವಿಸಲೇಬೇಕು ಎಂದು ಕವಿ ಹೇಳುತ್ತಾನೆ.ಈ ಒಂದು ಪದ್ಯಭಾಗದಲ್ಲೇ ಏಳುಕಥೆಗಳ ಉಲ್ಲೇಖವಿದೆ.ಕಾಮ‌ ದಹನದ‌ ಕಥೆ,ಹರಿಶ್ಚಂದ್ರನ ಕಥೆ,ರಾಮಾಯಣದ ಕಥೆ,..ಹೀಗೆ ನಾಲ್ಕು ಪದ್ಯ ಗಳಲ್ಲೇ ಹಲವು ಕತೆಗಳ ನಿದರ್ಶನಗಳ ಮೂಲಕ ಅದೃಷ್ಟ ದುರಾದೃಷ್ಟ ನಮ್ಮ ಕೈಯಲಿಲ್ಲವೆಂದು ಕವಿ ಚಿತ್ರಿಸಿದ್ದಾನೆ. ಪಾಠ ಮಾಡುವಾಗ ಶಿಕ್ಷಕರು ಎಡವಬಾರದೆಂದು,ಮಕ್ಕಳೇ‌ ಓದುವಾಗ ಅವರಿಗೂ ತಿಳಿಯಲಿ ಎಂದು ಈ ಕೃತಿಯ ಸಂಪಾದಕರು ಈ ಎಲ್ಲಾ ಉಲ್ಲೇಖಿತ ಕಥಾ ಎಳೆಗಳನ್ನು ಹಿಡಿದು,ಅವುಗಳ ಮೂಲಕಥೆಗಳನ್ನು ಒದಗಿಸಿದ್ದಾರೆ.ಆ ಮೂಲಕ ಈ ಪುಸ್ತಕದ ಉಪಯುಕ್ತತೆ ಹೆಚ್ಚಾಗಿದೆ. ಈ ಶತಕದ ಪದ್ಯಗಳಲ್ಲಿರುವ ವಿಷಯವು ನೀತಿಬೋಧಕವೆಂದು ಆಗಲೇ‌ ಹೇಳಿದ್ದೇನೆ.ಆ ನೀತಿ,ಒಣ ಬೋಧನೆಯಂತಾಗಬಾರದೆಂದು ಕವಿ ಹೋಲಿಕೆ,ಉಪಮೆ,ದೃಷ್ಟಾಂತ ಗಳನ್ನು ನೀಡುತ್ತಾ ಅಂತಿಮವಾಗಿ ನೀತಿ ಹೇಳಿದ್ದಾನೆ.ಹೀಗಾಗಿ ಈ ಪದ್ಯಗಳು ಸೊಗಸಿನಿಂದ ಕೂಡಿದ್ದು,ಓದಿಸಿಕೊಳ್ಳುವ,ಸಂವಾದಿಸುವ ಸಾಮರ್ಥ್ಯ ಹೊಂದಿವೆ. ಮತ್ತೊಂದು ವಿಚಾರವೆಂದರೆ, ಈ ಪದ್ಯಗಳಲ್ಲಿರುವ ವಿಷಯಗಳೆಲ್ಲವೂ ಸಾರ್ವಕಾಲಿಕವಾದವೆ,ಪ್ರಗತಿಪರವೇ ಎಂದೇನಾದರೂ ಪ್ರಶ್ನೆ ಹಾಕಿಕೊಂಡರೆ,ಇಲ್ಲಿ,ಅನೇಕ ವಿಚಾರಗಳು ಎಲ್ಲ ಕಾಲಕ್ಕೂ ಬೇಕಾದತಂಹವು ಇವೆ.ಆದರೆ,ಕೆಲವು ವಿಚಾರಗಳು ಕವಿ ಬಾಳಿ ಬದುಕಿದ ಸಮಾಜದಲ್ಲಿ ಆಗ ಮಾನ್ಯತೆ ಪಡೆದಿದ್ದು,ಪ್ರಸ್ತುತದಲ್ಲಿ ಅವುಗಳು ಅರ್ಥ ಕಳೆದುಕೊಂಡಿವೆ.ಇವತ್ತಿನ ಸಮಾಜದಲ್ಲಿ ಅಂತಹ ವಿಷಯಗಳಿಗೆ ‌ಮೌಲ್ಯವಿಲ್ಲ.ನಿದರ್ಶನಕೆ ; ಹೀಗಾಗಲೇ ಉಲ್ಲೇಖಿಸಿರುವ ‘ಉಣದಿರ್ದ ಧನವಿದ್ದರೇನು ಪ್ರಯೋಜನ’ ಅಂತಹ ಪದ್ಯಗಳು ಎಲ್ಲಾ ಕಾಲ‌ಕ್ಕೂ ಸೂಕ್ತವಾದವು.ಆದರೆ,ವಿಧವೆ,ಒಂಟಿ ಬ್ರಾಹ್ಮಣ, ಜೈನ ಸಂನ್ಯಾಸಿ,ಅಂಗಹೀನನು…ಇವೆಲ್ಲವೂ ಅಪಶಕುನವಾದದ್ದು,ಇವುಗಳನ್ನು ಕಂಡಾಗ ನಿಪುಣರು ಹೊರಹೋಗುವುದಿಲ್ಲಾ ಎಂಬ ಮಾತು ಅವತ್ತಿನ ಸಾಮಾಜಿಕ ನಂಬಿಕೆ,ನಡವಳಿಕೆಯನ್ನು ಯಥಾ ಪ್ರಕಾರ ಬಿಂಬಿಸಿದಂತಿದೆ. ” ಧರೆ ಬೀಜಂಗಳ ನುಂಗೆ,ಬೇಲಿ ಹೊಲನೆಲ್ಲಂ‌ ಮೇದೊಡೆಂ,ಗಂಡ ಹೆಂಡಿರನತ್ಯುಗ್ರದಿ ಶಿಕ್ಷಿಸಲ್,ಪ್ರಜೆಗಳಂ ಭೂಪಾಲಕಂ ಭಾದಿಸಲ್,ತರುವೇ ಪಣ್ಗಳ ಮೆಲ್ಲೆ,ಮಾತೆ ವಿಷಮಂ ಪೆತ್ತರ್ಭಂಕಂಗೂಡಿಸಲ್,ಹರಂ‌ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀಚೆನ್ನ ಸೋಮೇಶ್ವರ! “(೨೯) ಎಂಬ ಪದ್ಯದಲ್ಲಿ ರಕ್ಷಿಸಬೇಕಾದವರೇ ಭಕ್ಷಕರಾದರೆ ಯಾರು ರಕ್ಷಿಸಲು ಸಾಧ್ಯ ಎಂದು ಕವಿ ಕೇಳುತ್ತಾರೆ.ಬಸವಣ್ಣನ‌ ” ಒಲೆ ಹತ್ತಿ ಉರಿದರೆ ನಿಲ್ಲಬಹುದಲ್ಲದೆ,ಧರೆ ಹತ್ತಿ ಉರಿದರೆ ನಿಲಲಾಗದು” ವಚನವೂ ಇದೇ ನುಡಿಗಳನ್ನು ಹೇಳುತ್ತಾ,ಕಾಯುವವರೆ ಕೊಲ್ಲಲು ನಿಂತರೆ ಇನ್ಯಾರಿಗೆ ದೂರುವುದು ಎಂದು ಪ್ರಶ್ನಿಸುತ್ತದೆ‌.ಇಂತಹ ಹಲವಾರು ‌ಪದ್ಯಗಳು,ಗುರು,ಜ್ಞಾನ, ವಿದ್ಯೆ,ಹಣ,ಅಧಿಕಾರ,ಬಂಧು ಮಿತ್ರರು,ರಾಜ,ಮಂತ್ರಿ,ಅಧಿಕಾರಿಗಳಿಗಿರಬೇಕಾದ ಸಾಮರ್ಥ್ಯ.. ಹೀಗೆ ಇವುಗಳೆಲ್ಲದರ ಗುಣ ಲಕ್ಷಣ ಕುರಿತು ಆಡಿರುವ ನುಡಿಗಳು ಇವತ್ತಿಗೂ ಅನ್ವಯಿಸುತ್ತವೆ.ಮತ್ತು ಉಪಯುಕ್ತತೆ ಪಡೆದಿವೆ.ನಿದರ್ಶನಗಳ ಮೂಲಕ ಹೇಳುವುದರಿಂದ ಓದುಗ,ಕೇಳುಗರ‌ ಮನದಲ್ಲಿ ಉಳಿದು,ತಿಳುವಳಿಕೆಗೆ,ಚಿಂತನೆಗೆ ದೂಡುವ ಪದ್ಯಗಳಾಗಿವೆ.ಹಾಗಾಗಿ ಸೋಮೇಶ್ವರ ಶತಕವು ಮರುಓದಿಗೆ,ಪರಾಮರ್ಶನಕೆ ಒಳಗಾಗುತ್ತಲೇ ಇರುತ್ತದೆ. ಕವಿ ಪರಿಚಯ,ಪದ್ಯಗಳು,ಭಾವಾರ್ಥ,ಟಿಪ್ಪಣಿ,ಮೂಲಕಥೆಗಳು ಅಂದರೆ ಕಾಮದಹನದ ಕಥೆ,ಹರಿಶ್ಚಂದ್ರನ‌ ಕಥೆ,ಬಲಿಚಕ್ರವರ್ತಿಯ ಕಥೆ,ಅಹಲ್ಯೆಯ ಕಥೆ..ಹೀಗೆ ವಿನ್ಯಾಸಗೊಳಿಸಿ,ಸಿದ್ದಪಡಿಸಿರುವ ಸಂಪಾದಕರ ಶ್ರಮ ಮತ್ತು ಪಾಂಡಿತ್ಯಕ್ಕೆ ನಮಿಸಲೇಬೇಕಾಗುತ್ತದೆ.ಇಂತಹ ಪುಸ್ತಕವನ್ನು ಪುನರ್ ಮುದ್ರಣ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ. ಆದರೆ,ಪುನರ್ ಮುದ್ರಣದಲ್ಲಿ ಸಂಪಾದಕರು ಯಾರು ಎಂದೇ‌ ತಿಳಿಯುತ್ತಿಲ್ಲಾ.ಅದನ್ನು ಇರುವುದು ಸಮಂಜಸವಲ್ಲ. ” ನೀತಿಯ ಕಟುತ್ವದ ಕಹಿ ಗುಳಿಗೆಗಳನ್ನು ಕಥೆಯ ಜೇನಿನಲಿ ಅದ್ದಿ ಉಣಿಸುವಆರೋಗ್ಯಕರ ನುಡಿಮುತ್ತುಗಳು ” ಈ ಶತಕದ ಪದ್ಯಗಳು. ********* ಡಾ.ಸುಜಾತಾ ಲಕ್ಷೀಪುರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಎದೆಯ ಕದ ತೆರೆದಾಗ. “ಎದೆಯ ಕದವ ತೆರೆಯುತಿರೆ| ಒಳಗೆ ಬೆಳಕು ಹರಿಯಿತು|ಹೂಗಳೆಸಳು ಬಿರಿಯುತಿರೆ |ತುಂಬಿ ಹಾಡು ಮೊರೆಯಿತು”——ಕವಿ ಕಯ್ಯಾರರ ‘ಯುಗಾದಿ’ ಕವನದ ಸಾಲುಗಳಿವು.ಯುಗಾದಿ ಸಮೃದ್ಧಿಯ ಸಂಕೇತ.ಪ್ರಕೃತಿ-ಮಾನವ ಅನುಸಂಧಾನದ ಪ್ರತೀಕ.ಕವಿಗಳು ಪರಿಸರ ಪ್ರೇಮಿಗಳು.ಮಣ್ಣಿನಲ್ಲಿ ಸ್ವರ್ಣವನ್ನು, ಶಿಲೆಯಲ್ಲಿ ಶಿಲ್ಪವನ್ನು ಕಾಣುವವರು.ಎದೆಯ ಕದ ತೆರೆದು ಆತ್ಮದ ಮಿಂಚನ್ನು ಹೊಳೆಯಿಸುವವರು.ಅಂತರಂಗದ ಬೆಳಕಲ್ಲಿ ಬಹಿರಂಗವನ್ನು ಬೆಳಗಿಸುವವರು.ಮೊಗ್ಗು ಹೂವಾಗಿ ದಳ ಬಿರಿದು ನಿಂತಾಗ ಒಂದು ರೀತಿಯ ನಿಸ್ವನ.ಹೂವಿನ ಮಕರಂದ ಹೀರುವ ದುಂಬಿಗಳು,ಝೇಂಕಾರದ ನಾದಮಯತೆ,ನವನವೋನ್ಮೇಷ, ಮಾಧುರ್ಯದ ಮೊರೆತಕ್ಕೆ ಮನವರಳುವುದು ಸಹಜ.ಹೀಗೆ ರವಿ ಕಾಣದ್ದನ್ನು ಕವಿ ಕಂಡೇ ಕಾಣುತ್ತಾನೆ ಎಂಬುದಂತೂ ಸತ್ಯ.“ಎದೆಎದೆಗೂ ವ್ಯತ್ಯಯ ಹಾಳಾಗಲಿ ಎದೆಎದೆ ಗೂಡಲಿ ಹಾಲಾಗಲಿ” ಎಂಬ ವಿ.ಗ ನಾಯಕರ ಸಾಲುಗಳು ಇಲ್ಲಿ ನೆನಪಾಗುತ್ತವೆ.ದ್ವೇಷಿಸುವ ಎದೆಗಳು ಬೇಡ, ಪ್ರೀತಿಸುವ ಎದೆಗಳು ಬೇಕು.ಎದೆಎದೆಗಳ ಮಿಳಿತ ಜೀವಜೀವದ ಸೆಳೆತ.ಎದೆಯ ಆಕಾರಕ್ಕೆ ಆಕರ್ಷಣೆಯಿದೆ.ಹೃದಯದ ತುಡಿತದಲ್ಲಿ ಪ್ರೀತಿಯ ಮಿಡಿತವಿದೆ.ಕವಯಿತ್ರಿ ಆಶಾ ದಿಲೀಪ್ ಸುಳ್ಯಮೆ ಅವರ ಚೊಚ್ಚಲ ಕವನ ಸಂಕಲನದ ಶೀರ್ಷಿಕೆ “ಎದೆಯ ಕದ”.ವಿಷಯ ವೈವಿಧ್ಯತೆಯ ನಲುವತ್ತೆರಡು ಕವನಗಳ ಈ ಸಂಕಲನ 2016 ರಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಇದರ ಪ್ರಕಾಶಕರು.ಬಿಡುಗಡೆಯಾದ ಸಂದರ್ಭದಲ್ಲಿ ಓದಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬ.ಈಗ ಮತ್ತೊಮ್ಮೆ ಕಣ್ಣು ಹಾಯಿಸುವ ಅವಕಾಶ ಲಭಿಸಿದೆ.ಕವನಗಳ ಬಗ್ಗೆ ಕೆಲವು ಮಾತುಗಳನ್ನು ಹೇಳ ಬೇಕು ಎನಿಸಿದೆ.ಇಲ್ಲಿ ಕಲೆಹಾಕಿದ ಕವನಗಳೆಲ್ಲವು ಭಾವ ಕೇಂದ್ರಿತ ರಚನೆಗಳು.ಆಶಾ ಅವರು ಭಾವನೆಯ ಬಲೆ ಹೆಣೆದು ಕಾವ್ಯ ಕಟ್ಟಿದ್ದಾರೆ.ಅನುಭವಕ್ಕೆ ದಕ್ಕಿದ್ದನ್ನು ಸಶಕ್ತ ಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ.ಎದೆ ಮುಟ್ಟುವ ರಚನೆಗಳಿಗೆ ಭಾವವೇ ಮೂಲದ್ರವ್ಯ ವಾದರೂ ಇಲ್ಲಿ ಎದೆಯ ಕದ ತೆರೆದಾಗ ಅನುಭವದ ಅಂತರ್ಧ್ವನಿ ಅನುರಣಿಸುವುದನ್ನು ಕಾಣಬಹುದು.ಮುನ್ನುಡಿಯಲ್ಲಿ ಸಾಹಿತಿ, ಮಾಧ್ಯಮ ತಜ್ಞ ಡಾ ವಸಂತಕುಮಾರ್ ಪೆರ್ಲ ಅವರು ಹೇಳುವಂತೆ ‘ಈ ಸಂಕಲನದಲ್ಲಿ ಮನೆ, ಮಕ್ಕಳು, ಸಂಸಾರ ಜೊತೆಗೆ ಕೆಲವು ಪ್ರಕೃತಿ ಚಿತ್ರ ಗಳು ಇವೆ.ಎಲ್ಲವುಗಳ ಕಡೆಗೆ ಒಂದು ಸಹೃದಯ ವೀಕ್ಷಣೆ ಕವಯಿತ್ರಿಯಲ್ಲಿ ಕಂಡುಬರುತ್ತದೆ.ಚಿತ್ರಕ ಸನ್ನಿವೇಶವೊಂದನ್ನು ಕೊಡುತ್ತಲೇ ಅದರಾಚೆಗಿನ ಅರ್ಥ ಭಾವಗಳನ್ನು ಭಾಷಿಕ ಸಂವಿಧಾನದ ಮೂಲಕ ಕಟ್ಟಿಕೊಡುವ ಪರಿ ಸಂತೋಷ ಕೊಡುತ್ತದೆ.ಈ ಮಾತಗಳು ಎದೆಯ ಕದ ತೆರೆದು ನೋಡುವ ಕುತೂಹಲ ವನ್ನು ಹೆಚ್ಚಿಸುತ್ತದೆ’.ಕಾವ್ಯ ಸಹಜವಾಗಿ ಹುಟ್ಟು ವ ಕ್ರಿಯೆ.ಅತಿಯಾದ ನೋವು ಮತ್ತು ಸಂತೋಷವಾದಾಗ ಜೀವ ಪಡೆಯುತ್ತದೆ.ಇದು ಆಶಾ ಅವರು ಕಂಡುಕೊಂಡ ಸತ್ಯ.ಮೌನರೋದನದಲ್ಲಿ ರೋಮಾಂಚನದ ಉತ್ತುಂಗದಲ್ಲಿ ಸುಖದುಃಖದ ಕಟ್ಟೆಯೊಡೆದು ಕಾವ್ಯಕನ್ನಿಕೆ ಹುಟ್ಟುತ್ತಾಳೆ ಎಂಬುದು ಅನುಭವ ಜನ್ಯ.ಆದರೆ ‘ಬರೆಯಲು ಹೊರಟರೆ ಸುಂದರ ಕವಿತೆ| ಪದಗಳ ಮರ್ಮವ ಅರಿಯದೆ ಹೋದೆ’ ಎಂಬ ಮರುಕ ‘ಒಂಟಿ ನಾನು’ ಕವನದಲ್ಲಿದೆ.ಕ ವಯಿತ್ರಿ ‘ಭಾವ ಜೀವ ರಸಿಕನೆದೆಗೆ ದಾಳಿಯಿಡುವ ಕವಿಯು ನಾನಾಗ ಬೇಕು| ನನ್ನ ಕವಿತೆಯ ಪ್ರಾಸ ನೀನಾಗ ಬೇಕು|ನಾ ಭಾವವಾದರೆ ಜೀವ ನೀನಾಗ ಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.ನಲ್ಲೆಯ ನಲ್ನುಡಿ ಯ ಕೇಳದೆ ವಿಚಲಿತನಾದ ನಲ್ಲ ಆಸೆ ಮುತ್ತುಗಳ ಪೋಣಿಸುತ ಎದೆ ಬಾಗಿಲಿಗೆ ತೋರಣ ಕಟ್ಟಿ ಕಾಯುತ್ತಾನೆ.ಏಕಾಂಗಿಯಾಗಿರುವ ಆತನ ಭಾವನೆಗಳು ಬಂಧನಕ್ಕೊಳಗಾಗಿದೆ. ‘ನನ್ನೆದೆಯ ಕದವನ್ನು’ ಸರಳತೆ ಮತ್ತು ಆರ್ದ್ರತೆಗಳಿಂದ ಗಮನ ಸೆಳೆಯುತ್ತದೆ.ಸಂಕಲನದ ಮೊದಲ ಕವಿತೆ ‘ಯಾವ ಮಾಯೆಯಮ್ಮಾ’ ಜೀವದನಿ ತುಂಬಿ ಕೊಂಡ ಭಾವ ಗೀತೆ.ಹೆಣ್ಣು ಮಾಯೆ ಆಕೆಯ ಮಹಿಮೆ ಅಪಾರ.ಸಕಲ ಜೀವದ ಭಾಗ್ಯ ದಾಯಿನಿ ಆಕೆ.’ಅಷ್ಟವೈರಿಗಳನ್ನು ದಮನಮಾಡಿಸಿ| ಸ್ವರ್ಗ ದಾರಿಯಲ್ಲಿ ನಮ್ಮನ್ನು ನಡೆಸು’ ಎಂಬ ಪ್ರಾರ್ಥನೆ (ಗೀತೆ)ಯಾಗಿಯೂ ಈ ರಚನೆ ಸಲ್ಲುತ್ತದೆ.ತಾಯಿಗೆ ಮಕ್ಕಳು ಅಂದರೆ ಮಮತೆ.ಹೊತ್ತು ಸಲಹಿದಾಗ ಕಂದನ ಮುಖವರಳುವುದು ಸಹಜ.ಆದು ಹೆತ್ತ ನೋವನ್ನು ಮರೆಸುತ್ತದೆ.’ಅಮ್ಮ ಎನ್ನುವ ಕಂದನ ಕೂಗಲಿ|ಬ್ರಹ್ಮಾಂಡದ ಭವ್ಯತೆ ಅಡಗಿತ್ತು’ (ಅಮ್ಮ) ಎಂಬೀ ಸಾಲುಗಳಲ್ಲಿ ದರ್ಶನದ ಕಲ್ಪನೆಯಿದೆ.ಮಹಿಳೆ ಎಂದರೆ ಮಹಾ ಇಳೆ.ಸಕಲ ಚರಾಚರಗಳಿಗೂ ಜೀವ ಚೈತನ್ಯ ನೀಡುವವಳು.ಮಹಿಳೆ ತಾಯಿಯೂ ಹೌದು.ಭೂದೇವಿಯೂ ಹೌದು.’ಭರತ ಭೂಮಿ ವಿಶ್ವ ವಂದ್ಯೆ ಜನ್ಮದಾತೆಯು’ಎಂದು ಆರಂಭವಾಗುವ ‘ಭರತಭೂಮಿ ವಿಶ್ವ ವಂದ್ಯೆ’ ಎನ್ನುವ ಕವನದಲ್ಲಿ ದೇಶಪ್ರೇಮವುಕ್ಕಿಸುವ ಭಾವನೆಗಳಿವೆ.’ವೇಷ ಬೇರೆ ಭಾಷೆ ಬೇರೆ ಒಲವು ಮೆರೆಯಲಿ |ಪ್ರೀತಿ ಉಳಿದು ದ್ವೇಷ ಅಳಿದು ನಗೆಯು ಚಿಮ್ಮಲಿ’ ಎಂಬ ಆಶಯವಿದೆ.ಬದುಕಿನ ಉನ್ಮಾದ’ ವಿಷಾದ,ಪ್ರೀತಿ ,ತೀವ್ರತೆಯನ್ನು ಆಪ್ತವಾಗಿ ಕಟ್ಟಿಕೊಡುವ ‘ತೂಗದ ತೊಟ್ಟಿಲು’ ಅಂತರಂಗದ ನಿಸ್ವನ.’ಒಲುಮೆ ತುಂಬಿದ ಮನೆಯಲ್ಲಿ| ತೂಗಲಿಲ್ಲ ತೊಟ್ಟಿಲು| ಕೊನೆಗೂ ಕಂದನ ಕನಸು ಕಾಡಿದೆ|ಬರಿದಾಗಿದೆ ಮಡಿಲು’.ಬದಲಾವಣೆಯ ಕಾಲಘಟ್ಟದಲ್ಲಿ ಪ್ರೀತಿ ಮಮಕಾರ ಯಾಂತ್ರಿಕವಾದಾಗ,ಸಹಜತೆಯ ಒರತೆ ಬತ್ತಿ ಹೋಗುವುದನ್ನು ಇಲ್ಲಿ ಕಾಣಬಹುದು.ದಾರ್ಶನಿಕ ಹೊಳಹು ಗಳನ್ನು ನೀಡುವ ‘ಆತ್ಮದೇಗುಲ’ದಲ್ಲಿ ‘ಬಾಳ ಹಾದಿ ಚಿಮ್ಮಿ ನಗಲಿ ಹೂವ ಹಾಸಿಗೆ| ಒಲವ ಧಾರೆ ಹರಿದು ಬರಲಿ ಬಾಳ ಹಣತೆಗೆ’ ಎಂಬ ಆಶಯವಿದೆ.’ಸಿಹಿಯುಂಟು ಕಹಿಯುಂಟು ಜೀವನ ಯಾತ್ರೆಲಿ| ಮರೆಯಲು ಕಲಿತೋನೆ ಜಾಣ ಈ ಜಗದಲಿ’ ಈ ವಾಸ್ತವ ಸತ್ಯ ‘ಹೋಗೋಣ ಬಾರೆ’ ಕವನದಲ್ಲಿದೆ.‘ವಂದನೆ-ಅಭಿನಂದನೆ’ಯಲ್ಲಿ ಸಾಮರಸ್ಯದ ಸಂದೇಶವಿದೆ.’ಹಿಂದೂ ಸಿಖ್ಖ ಕ್ರೈಸ್ತ ಮುಸಲ್ಮಾನರು| ಒಟ್ಟಿಗೆ ಬದುಕುವ ರೀತಿಯೆ ಅಭಿಮಾನವು’ ನಿಜವಾಗಿಯು ಇದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಸಂದರೂ ಅಳಿಯಲಿಲ್ಲ ಗುಲಾಮಗಿರಿ.’ಎಲ್ಲಿದೆ ಸಮಾನತೆ ಮೀಸಲಾತಿ| ಸ್ತ್ರೀ ಸ್ವಾತಂತ್ರ್ಯದ ಅನುಭೂತಿ’ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.ಹಳತಿಗೆ ವಿದಾಯ, ಹೊಸತಿಗೆ ಸ್ವಾಗತ ಹೇಳುವ ಸಂದರ್ಭವನ್ನು ನೆನಪಿಸುವ ‘ವಿದಾಯ’ ವರ್ತಮಾನದ ವೈಚಿತ್ರ್ಯ ವನ್ನು ಧ್ವನಿಸುವ ‘ನಲುಗುತ್ತಿದೆ ವರ್ತಮಾನ’ಕನಸು ಭ್ರಮೆಯಾಗಿ ಕಾಡುವ ಘಟನೆಗಳನ್ನು ಪಲ್ಲವಿಸುವ ‘ಭ್ರಮೆ’ ಅರ್ಥ ಸಂಚಲನ ಮೂಡಿಸುತ್ತದೆ.ವಿಕೃತ ಮನಸುಗಳ ಅಮಾನುಷ ವರ್ತನೆಗಳಿಗೆ ಮುಖಾಮುಖಿ ಯಾಗುವ ‘ಭಯಾನಕ ರಾತ್ರಿ’ಯಲ್ಲಿ ಸೂಚ್ಯಾರ್ಥವಿದೆ.ಇಂಟರ್ನೆಟ್ ಯುಗದಲ್ಲಿ ಭಾವನೆಗಳ ಒರತೆ ಬರಿದಾಗುವ ಸಂದಿಗ್ಧ ಪರಿಸ್ಥಿತಿ ‘ಒಂಟಿ ಹಕ್ಕಿಯ ಮರ್ಮರ’ದಲ್ಲಿದೆ. ಪರಿಸರವನ್ನು ಉಳಿಸಬೇಕಾದ ಅನಿವಾರ್ಯತೆ ‘ಕೆಡಿಸದಿರು ಪರಿಸರವ’ಕವನ ಸಾರಿ ಹೇಳುತ್ತದೆ.’ಗೆಳತಿ’,’ಕಳೆದು ಹೋದ ಬಾಲ್ಯ’,’ಅರಳುವ ಹೂಗಳು’ ‘ನೆನಪಿದೆಯಾ ಗೆಳತಿ’ ಭಾವನೆಗಳಿಗೆ ಶಬ್ದ ರೂಪ ಕೊಡುವ ಕ್ರಿಯೆಯಲ್ಲಿ ಯಶಸ್ವಿಯಾಗಿದೆ.ಪ್ರೀತಿ ವಾತ್ಸಲ್ಯಕ್ಕಾಗಿ ಕವಯಿತ್ರಿಯ ‘ಹಂಬಲ’ ಸಾರ್ವಕಾಲಿಕ ಮೌಲ್ಯ ಪಡೆದ ಕವನವಾಗಿ ಸಲ್ಲುತ್ತದೆ.ಸರಳವಾಗಿ ಹೇಳುತ್ತಲೇ ಸಂಕೀರ್ಣವಾಗುವ ರಚನೆಗಳೂ ಸಂಕಲನದಲ್ಲಿ ಇಲ್ಲದ್ದಿಲ್ಲ.ನವೋದಯದ ನಾದಮಯತೆ,ನವ್ಯದ ಧ್ವನಿ ಶಕ್ತಿ ಆಶಾ ದಿಲೀಪ್ ಅವರ ಕವನಗಳಲ್ಲಿ ಕಾಣಬಹುದು.ಹೆಚ್ಚಿನವುಗಳೂ ಗೇಯತೆಯ ರಚನೆಗಳು.ಸಂದರ್ಭೋಚಿತವಾಗಿ ಬರೆದವುಗಳು.ಅವರ ಭಾಷೆ,ಭಾವ, ಲಯ ಆಪ್ತವಾಗುತ್ತದೆ.ಪ್ರತಿಮೆ ಸಂಕೇತಗಳಿಂದ ತಾಜಾ ಅನಿಸುತ್ತದೆ.ಗೌರವಾನ್ವಿತ ಗುರು ಸಾವಿತ್ರಿ ಎಸ್ ರಾವ್ ‘ಎದೆಯ ಕದ’ಕ್ಕೆ ಬೆನ್ನುಡಿ ಬರೆದಿದ್ದಾರೆ.ಆಶಾ ಅವರ ಕ್ರಿಯಾಶಕ್ತಿ, ಧೀಶಕ್ತಿಗೆ ಕನ್ನಡಿ ಹಿಡಿದಿದ್ದಾರೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, ಚಿಂತನೆಗಳು ತ್ರಿಮುಖಿ ಲಹರಿಗಳಾಗಿ ಇದರಲ್ಲಿ ಹರಿದಿದೆ. ಅವರ ಅನುವಭವಕ್ಕೆ ದಕ್ಕಿದ ಆಕಾಶದ ಆಕಾರ, ವಿಕಾರ ಬೆಡಗಿನೊಳಗೆ ಬೆರಗು ಮೂಡಿಸುತ್ತದೆ. ನೆಲದ ಧ್ಯಾನದಲ್ಲಿ ಎಲ್ಲವನ್ನೂ ಧೇನಿಸಿದ್ದಾರೆ. ವ್ಯಕ್ತಿ- ಕೃತಿ- ಪ್ರೀತಿ ಅಕ್ಷರಗಳಲ್ಲಿ ದಾಖಲಾಗಿದೆ. ಒಟ್ಟು ೨೫ ಬರಹಗಳಿರುವ ಈ ಪುಟ್ಟ ಸಂಕಲನಕ್ಕೆ ಪ್ರೊ.ತಾಳ್ತಜೆ ವಸಂತಕುಮಾರ್  ಮುನ್ನುಡಿ ಬರೆದಿದ್ದಾರೆ. “ತಮ್ಮ ಬರಹಗಳಲ್ಲಿ ಏಕತಾನತೆಯ ಬದಲಾಗಿ ವೈವಿಧ್ಯವನ್ನು ಆರಿಸಿಕೊಳ್ಳುವ ಧನಂಜಯರ ಹುರುಪು ಮೆಚ್ಚುಗೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳೂ, ಸಾಹಿತ್ಯ ವಿಮರ್ಶೆಯೂ, ಸಮಕಾಲೀನ ವಿದ್ಯಮಾನಗಳೂ ಎಡೆಪಡೆಯುತ್ತವೆ.  ಇದರಿಂದಾಗಿ ಓದುಗರ ಆಸಕ್ತಿಯೂ ಕದಡದಂತೆ ಕಾಯ್ದುಕೊಳ್ಳುವುದರ ಜೊತೆಗೆ ಬರಹಗಳ ಬಂಧ ಗಟ್ಟಿಯಾಗಿರುವಂತೆ ಜಾಗ್ರತೆ ವಹಿಸುವ ವಸ್ತುವಿನ ಆಯ್ಕೆಯ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಆ ಮೂಲಕ ಆಪ್ತರಾಗುತ್ತಾರೆ” – ಇದು ತಾಳ್ತಜೆಯವರ ಮಾತು. ಆಕಾಶ ಸಾವಿರಾರು ನಕ್ಷತ್ರಗಳನ್ನು ಅರಳಿಸುತ್ತಿರುವಾಗ ಧನಂಜಯರು ಅವರೊಳಗಿನ ನಕ್ಷತ್ರ ಸದೃಶ ಸೃಜನಶೀಲತೆಯನ್ನು ಅರಳಿಸಿದ್ದಾರೆ. ಅವುಗಳು ಬರಹ ರೂಪದಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯದ ದಾರಿಗನಿಗೆ ದೀಪಗಳಾಗಿ ಕಾಣಿಸಿಕೊಳ್ಳುತ್ತವೆ.    ‘ನಾನು ಮತ್ತು ಆಕಾಶ’ದಲ್ಲಿ ಕಲೆ ಹಾಕಿರುವ ಬರಹಗಳಲ್ಲಿ ಹೆಚ್ಚಿನವುಗಳು ಅಂಕಣಸ್ವರೂಪದವುಗಳು. ವಿಷಯವನ್ನು ಹಿಗ್ಗಿಸುವ ಜಾಣ್ಮೆ ಲೇಖಕರಿಗಿದ್ದರೂ ಅಂಕಣಬರಹಗಳ ಇತಿ ಮಿತಿಗಳಿಗನುಗುಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಬರವಣಿಗೆ ಸರಳವಾಗಿದ್ದರೂ ಪ್ರಬುದ್ಧತೆ ಬಂದುಬಿಟ್ಟಿದೆ. ಸರಸ ನಿರೂಪಣೆ, ಬಿಚ್ಚು ಮನಸ್ಸಿನ ಅಭಿವ್ಯಕ್ತಿ. ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅಪಾರವಾದ ಓದಿನಿಂದ ಪಡೆದ ಜ್ಞಾನ ಪ್ರಜ್ವಲಿಸುತ್ತದೆ. ಮುನ್ನುಡಿಯಲ್ಲಿ ಬರಹಗಳ ಅಂತರ್ದರ್ಶನವಿದ್ದರೆ ನಲ್ನುಡಿಗಳ ಮೂಲಕ ಡಾ. ಶ್ರೀಧರ ಎಚ್. ಜಿ.ಯವರು ಕುಂಬ್ಳೆಯವರ ವ್ಯಕ್ತಿತ್ವವನ್ನು ಸ್ಪರ್ಶಿಸಿದ್ದಾರೆ.  ಒಟ್ಟು ಬರಹಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಮೊದಲ ಭಾಗ ‘ಭಾವ ಲಹರಿ’ಯಲ್ಲಿ ಏಳು, ಎರಡನೇಯ ಭಾಗ ‘ವಿಮರ್ಶಾ ಲಹರಿ’ಯಲ್ಲಿ ಹತ್ತು, ಕೊನೆಯ’ವ್ಯಕ್ತಿ ಲಹರಿ’ಯಲ್ಲಿ ಎಂಟು ಲೇಖನಗಳಿವೆ. ‘ಜೀವನ ವನದಲ್ಲಿ ಕವನ ಮಯೂರ’ ಶೀರ್ಷಿಕೆಯ ಲೇಖನದಲ್ಲಿ ಕಾವ್ಯ ಮಿಮಾಂಸೆಯಿದೆ. ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಬರೆದದ್ದೆಲ್ಲ ಕಾವ್ಯ ಎಂದುಕೊಂಡವರು ಇದನ್ನು ಓದಲೇಬೇಕು. ವಿದ್ಯಾರ್ಥಿಗಳಿಗಂತೂ ಉಪಯುಕ್ತವಾದ ಲೇಖನವಿದು. ‘ಕಾಲದ ಅನಿರ್ವಚನೀಯತೆ’ಯಲ್ಲಿ ಕಾಲದ ಕುರಿತಾದ ವ್ಯಾಖ್ಯಾನವಿದೆ. ಸೇಡಿಯಾಪು ಅವರ ಬರಹಗಳನ್ನು ಇದು ನೆನಪಿಸುತ್ತದೆ. ‘ಬುದ್ಧ ಮತ್ತು ಅಕ್ಕ’ ಒಂದು ಸಂಶೋಧನಾ ಪ್ರಬಂಧಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಶ್ರೀಮಂತಿಕೆಯನ್ನು ತ್ಯಜಿಸಿ ಸಾಂಸಾರಿಕತೆಯನ್ನು ಹರಿದು ಆಧ್ಯಾತ್ಮವನ್ನು ಬಾಳಿದ ಗೌತಮ ಬುದ್ಧ ಮತ್ತು ಅಕ್ಕ ಮಹಾದೇವಿ ಭಾರತದ ಬೆಳಕಾದವರು.  ‘ಮನಸು ಹರಿದಾಗ’ ಸಾಹಿತ್ಯದ ಸ್ವಾನುಭವವನ್ನು ನಿವೇದಿಸುತ್ತದೆ. ಎರಡು ಮೂರು ಉಪಕಥೆಗಳ ಮೂಲಕ ಬದುಕಿನ ‘ಭಾವ- ಅಭಾವ’ವನ್ನು ಚಿತ್ರಿಸಿದ ಕುಂಬ್ಳೆಯವರು ರಮಣ ಮಹರ್ಷಿಯ ಸಂದೇಶವನ್ನು ಉಲ್ಲೇಖಿಸುತ್ತಾರೆ. ಸಾಕ್ರಟೀಸ್, ಪ್ಲೇಟೊ, ಕ್ರೀಟೊ ಆಸ್ಕ್ಲಿಪಿಯಸ್ ಮೊದಲಾದವರ ಬಗ್ಗೆ ಕುತೂಹಲ ಮೂಡಿಸುತ್ತಾರೆ. ನಾಟ್ಯ ಚಪಲವಿರುವವರಲ್ಲಿ ಕಾಪಟ್ಯವೂ ಇದೆ ಎನ್ನುವ ಸತ್ಯದ ಕುರಿತಾದ ಚರ್ಚೆ ‘ನಾಟ್ಯ ಲಹರಿ’ಯಲ್ಲಿದೆ. ನಾಟ್ಯ ಎನ್ನುವುದು ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ರೂಢಿಸಿಕೊಂಡ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ಗಮನಿಸಬಹುದು. ‘ಬೆಳಕಿನ ಹಾದಿ’ ಒಂದು ಸುಂದರ ರೂಪಕ. ಧನಂಜಯ ಅವರು ಪ್ರಾಚೀನ ತುಳು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದವರು. ಈ ಸಂಕಲನದಲ್ಲಿ ಅದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಅವುಗಳಲ್ಲಿ ಒಂದು ‘ತುಳು ಸಾಹಿತ್ಯ- ಕೆಲವು ಟಿಪ್ಪಣಿಗಳು’. ಇನ್ನೊಂದು ‘ತುಳು ಕಾವ್ಯಕ್ಕೆ ಕಾಸರಗೋಡಿನ ಕೊಡುಗೆ’. ತುಳುವಿಗೆ ಪ್ರಾಚೀನ ಲಿಖಿತ ಸಾಹಿತ್ಯ ಪರಂಪರೆಯಿತ್ತು ಎಂಬುದನ್ನು ಸಾಬೀತು ಪಡಿಸುವ ಬರಹಗಳಿವು. ಕುಂಬ್ಳೆಯವರ ವಿಮರ್ಶಾ ಪ್ರಜ್ಞೆಗೆ ಸಾಕ್ಷಿಯಾಗ ಬಲ್ಲ ಲೇಖನಗಳು ವ್ಯಕ್ತಿಚಿತ್ರಗಳಾಗಿಯೂ, ಕೃತಿ -ಸ್ಮೃತಿಗಳಾಗಿಯೂ ಇಲ್ಲಿ ದಾಖಲಾಗಿವೆ. ಬೇಂದ್ರೆ, ಕಾರಂತ, ಸೇಡಿಯಾಪು,  ಕಯ್ಯಾರ, ಏರ್ಯ, ಅಮೃತ, ಚಿತ್ತಾಲ, ವೇಣುಗೋಪಾಲ ಕಾಸರಗೋಡು, ಜನಾರ್ದನ ಎರ್ಪಕಟ್ಟೆ ಮೊದಲಾದವರ ಕೃತಿಗಳ ಅನನ್ಯತೆಯನ್ನು ಅಧ್ಯಯನಾತ್ಮಕವಾಗಿ  ವಿಶ್ಲೇಷಿಸಿದ್ದಾರೆ.  ‘ಹೊಸ ಕಾವ್ಯದ ಹೆಜ್ಜೆ’ ಲೇಖನದಲ್ಲಿ ನವೋದಯ, ನವ್ಯ,  ನವ್ಯೋತ್ತರ ಕಾಲಘಟ್ಟದ ಆಶಯ ಮತ್ತು ಆಕೃತಿಗಳ ಬಗ್ಗೆ ಚರ್ಚಿಸಲಾಗಿದೆ. ಅಡಿಗ, ಎಕ್ಕುಂಡಿ, ರಾಮಾನುಜನ್, ತಿರುಮಲೇಶ್ ಮೊದಲಾದವರ ಸತ್ವವನ್ನು ಮೈಗೂಡಿಸಿಕೊಂಡು ತನ್ನದೇ ಆದ ಹೊಸ ಕಾವ್ಯ ಮಾರ್ಗವನ್ನು ರೂಪಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರ ‘ಅಗ್ನಿ ಜಿಹ್ವಾ’ ವನ್ನು ಪರಾಮರ್ಶಿಸಲಾಗಿದೆ. ಶಿವರಾಮ ಕಾರಂತರು ತಾವು ಪರಂಪರೆಯನ್ನು ಮುರಿಯುವುದರ ಮೂಲಕ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದವರು. ಈ ಮಾತಿಗೆ ಪೂರಕವಾಗುವಂತೆ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಹೊಸ ಪ್ರಯೋಗಗಳ ಬಗ್ಗೆ ‘ಯಕ್ಷಗಾನ ಮತ್ತು ಕಾರಂತ’ ಲೇಖನದಲ್ಲಿ ತಿಳಿಸಲಾಗಿದೆ.   ‘ಸೇಡಿಯಾಪು: ಒಂದು ನೆನಪು’ ಲೇಖನದಲ್ಲಿ ಸೇಡಿಯಾಪು ಅವರ ಬರವಣಿಗೆಯನ್ನು ಸೃಜನಶೀಲ, ಶಾಸ್ತ್ರೀಯ ಮತ್ತು ವೈಯುಕ್ತಿಕ ನೆಲೆಯಲ್ಲಿ ಸ್ಥೂಲವಾಗಿ ಗುರುತಿಲಾಗಿದೆ.  ಆ ಪ್ರಖಾಂಡ ಪಂಡಿತನ ನೆನಪಿನಲ್ಲಿ ಕುಂಬ್ಳೆ ಬರೆದ ಭಾವನಾತ್ಮಕ ಕವನವನ್ನು ಅಳವಡಿಸಲಾಗಿದೆ. ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಬಿತ್ತರಗೊಂಡ ವಿಚಾರ ಲಹರಿಯ ಟಿಪ್ಪಣಿ ‘ವೃತ್ತ್ತಿ-ಪ್ರವೃತ್ತಿ’. ಡಾ. ನಾ ಮೊಗಸಾಲೆ, ಈಶ್ವರಯ್ಯ, ಚೊಕ್ಕಾಡಿ, ವೈದೇಹಿ,  ಮಾವಿನಕುಳಿ ಹೀಗೆ ಸಾಹಿತ್ಯ ಕಲಾ ಪ್ರಕಾರದ  ಪಂಚರನ್ನು ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಚುಟುಕು ಪ್ರಕಾರದ ಸ್ಥಾನ-ಮಾನ ಬಗೆಗಿನ ‘ಚುಟುಕು ಕನ್ನಡದ ಸ್ಫಟಿಕ’  ಅಧ್ಯಯನ ಯೋಗ್ಯ. ಕನ್ನಡ ಕಾವ್ಯ ಪ್ರಪಂಚವನ್ನು ಸಹೃದಯ ಭಾವ ಪ್ರಪಂಚಕ್ಕೆ ಧಾರೆಯೆರೆದ ಗಮಕಿ ಶಕುಂತಲಾಬಾಯಿ ಕುರಿತಾದ ಬರಹವೂ ರಸಾರ್ದ್ರವಾಗಿದೆ.  ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಫ್ರೊ.ವೇಣುಗೋಪಾಲ ಕಾಸರಗೋಡು ಗಡಿನಾಡಿನ ಎರಡು ಕಣ್ಣುಗಳು. ಸಾಹಿತ್ಯ ರಚನೆ ಮತ್ತು ಸಂಘಟನೆ, ಕನ್ನಡ ಹೋರಾಟಗಳಲ್ಲೂ ಬದುಕನ್ನು ಕಳೆದವರು. ಮಹತ್ವದ ಸಾಹಿತ್ಯ ಕೃತಿಗಳನ್ನು ರಚಿಸಿ ಅಖಿಲ ಕರ್ನಾಟಕದ ಗಮನ ಸೆಳೆದವರು. ಕಯ್ಯಾರರ ಶಿಶುಗೀತೆಗಳ ಬಗ್ಗೆ ಕುಂಬ್ಳೆಯವರು ಪರಾಮರ್ಶಿಸಿದ್ದಾರೆ. ಅದೇ ರೀತಿ ವೇಣುಗೋಪಾಲರ ‘ದೃಷ್ಟಿ ಮತ್ತು ಸೃಷ್ಟಿ’ಗಳ ಕುರಿತಾಗಿ ಹೊಸ ಬೆಳಕು ನೀಡಿದ್ದಾರೆ. ಔಚಿತ್ಯ ಪೂರ್ಣ ಮೌಲಿಕ ಬರಹಗಳಿವು.      ‘ನಾನು ಮತ್ತು ಆಕಾಶ’ ಪ್ರಕಟವಾದಾಗ ಡಾ.ಧನಂಜಯ ಕುಂಬ್ಳೆಯವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿ ಅದೇ ವೃತ್ತಿಯಲ್ಲಿ ಮುಂದುವರಿದರು. ಈಗ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಪ್ರಕೃತ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು. ಬೋಧನೆ, ಶೋಧನೆ, ಸಂಘಟನೆ,  ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ನಿರಂತರ ಸಾಹಿತ್ಯ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಲ್ಕು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ಕ್ಕಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಅನುಭವದಿಂದ ಅವರ ಮನಸ್ಸು ಪಕ್ವವಾಗಿದೆ. ದೇಹ ಪುಷ್ಟವಾಗಿದೆ. ಸ್ನೇಹ (ವಲಯ) ವಿಸ್ತಾರವಾಗಿದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ನೀಡುವ ಶಕ್ತಿ ಅವರಿಗಿದೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ –

ಪುಸ್ತಕ ಸಂಗಾತಿ Read Post »

You cannot copy content of this page

Scroll to Top