ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಮಾತು ಮೀಟಿ ಹೋಗುವ ಹೊತ್ತು

ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.

ಮಾತು ಮೀಟಿ ಹೋಗುವ ಹೊತ್ತು Read Post »

ಪುಸ್ತಕ ಸಂಗಾತಿ

ವೀರ ಸಿಂಧೂರ‌ಲಕ್ಷ್ಮಣ

ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.

ವೀರ ಸಿಂಧೂರ‌ಲಕ್ಷ್ಮಣ Read Post »

ಪುಸ್ತಕ ಸಂಗಾತಿ

ಯಮನ ಸೋಲು

ಪುಸ್ತಕ ಸಂಗಾತಿ ಯಮನ ಸೋಲು    ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ ಪತಿವ್ರತೆಯ ಕಥೆಯಿದು. ಮಾನವ ಧರ್ಮದ ಎದುರು ದೈವ ಧರ್ಮ ಸೋಲುತ್ತದೆ.ಮನುಷ್ಯ ಪ್ರೀತಿ‌ಗೆಲ್ಲುತ್ತದೆ.ಪ್ರೇಮ ಎಲ್ಲ ಧರ್ಮವನ್ನು‌ಮೀರಿದ್ದು ಎಂದು ಸಾರುವದೇ ಈ‌ ಕಥೆಯ ಉದ್ದೇಶ ” ಪ್ರೇಮಾನುರಾಗವು ಧರ್ಮವ‌ ಮೀರಿದುದೆಂಬುದನು ಸಾಧಿಸುವದೆ ಇಲ್ಲಿ ಮುಖ್ಯ. ಇದು ಎದೆಯೊಲ್ಮೆ ಗೆದ್ದ ಕಥೆ.ಅನುರಾಗವಿದ್ದಲ್ಲಿ ವೈಕುಂಠ ಪ್ರೇಮವಿದ್ದಲ್ಲಿ ಕೈಲಾಸ ಎದೆಯೊಲ್ಮೆಯಿದ್ದಲ್ಕಿ ಮುಕ್ತಿ‌ ಎಂದು ಸಾರುವ ಕಥೆ. ತು಼ಂಬ ಚಿಕ್ಕದಾಗಿರುವ ಈ ನಾಟಕ ೧೯೨೮ ರಲ್ಲಿ‌ ಮೊದಲ‌ ಮುದ್ರಣ ಕಂಡಿದ್ದು ೨೦೦೪ ರ ಅವಧಿಯೊಳಗೆ ೮ ಮರು ಮುದ್ರಣಗಳನ್ನು ಪಡೆದಿದೆ. ನಾಟಕದಲ್ಲಿ ೧೦ ಚಿಕ್ಕ ಚಿಕ್ಕ ದೃಶ್ಯಗಳಿವೆ.ಮೊದಲನೆಯದು ಪೀಠಿಕಾ ದೃಶ್ಯ ಮತ್ತು ಕಡೆಯದು ಉಪಸಂಹಾರ ದೃಶ್ಯ ಎಂದು ಹೆಸರಿಸಿದ್ದು ಮದ್ಯದಲ್ಲಿ ಇಡೀ‌ ಕಥೆ ೮ ದ್ರಶ್ಯದಲ್ಲಿ ಮೂಡಿದೆ.ನಾಟಕದ ಆರಂಭದ ಪೀಠಿಕಾ  ದೃಶ್ಯದಲ್ಲಿ ಯಕ್ಷ ಮತ್ತು ಯಮದೂತರ ಭೇಟಿಯಾಗುತ್ತದೆ.ಅವಸರದಿಂದ ಹೊರಟ ಯಮದೂತನನ್ನು ಯಕ್ಷ ತಡೆದಾಗ “ತಾನು ತುಂಬ ಅವಸರದಲ್ಲಿದ್ದೇನೆ.ಇಂದು ಸತ್ಯವಾನನನ್ನು ಎಳೆದು ಯಮನಲ್ಲಿಗೆ ಒಯ್ಯಬೇಕಾಗಿದೆ.ಇಂದವನ ಸಾವು ನಿಗದಿಯಾಗಿದೆ “ಎನ್ನುತ್ತಾನೆ.ಅದಕ್ಕೆ ಯಕ್ಷ “ಏಕೆ ಅವನೇನು ಮುದುಕನೇ? “ಎಂದು ಕೇಳಿದರೆ ಅದಕ್ಕೆ ದೂತ ಇಲ್ಲ ಅವನ‌ ಮದುವೆಯಾಗಿ ಹನ್ನೆರಡು ತಿಂಗಳೂ ತುಂಬಿಲ್ಲ ಎನ್ನುತ್ತಾನೆ. ಹಾಗಾದರೆ ಅಂಥವನನ್ನು ಏಕೆ ಸಾವಿತ್ರಿ ಆರಿಸಿದಳು ಎಂಬ ಪ್ರಶ್ನೆಗೆ “ಬೇಕೆಂದೇ ಅಂಥ ಅಲ್ಪಾಯುವನ್ನು ಆರಿಸಿದ್ದಾಳೆ ಯಾರೇನು ಮಾಡುವದು” ಎಂದುತ್ತರಿಸಿ ಆಕೆಯ ಸಾವಿತ್ರಿಯ ಕಥೆಯನ್ನು ಹೇ಼ಳುತ್ತಾನೆ. ಸಾವಿತ್ರಿ ಅಶ್ವಪತಿ ಯೆಂಬ ರಾಜನ ಕುವರಿ.ಆಕೆ ಜನಿಸಿದ್ದೇ ಶಿವನ ಆರಾಧನೆಯ ಫಲದಿಂದ.ಅತ್ಯಂತ ಸುಂದರಿ‌  ಅವಳನ್ನು ಪಾತಿವ್ರ್ಯತ್ಯದೊಳಗೂ ಮೀರಿಸುವರಾರಿಲ್ಲ. ಅವಳಿಗೆ ಅನುರೂಪನಾದ ವರ ಎಲ್ಲಿಯೂ ಸಿಗಲಾರದ್ದರಿಂದ ಅವಳ ತಂದೆ ತನಗೆ ಬೇಕಾದ ಗಂಡನನ್ನು ಹುಡುಕಿಕೊಂಡು ಬರುವಂತೆ  ಅವಳಿಗೆ ಅನುಮತಿಸಿದ.ದೇಶಗಳನ್ನು ಸುತ್ತಿದ ಸಾವಿತ್ರಿ ಅನುರೂಪ ನಾದ ವರ ಎಲ್ಲೂ ಸಿಕ್ಕದೆ ಒಂದು ಋಷ್ಯಾಶ್ರಮದಲ್ಲಿ ಶತ್ರುಗಳು ರಾಜ್ಯವನ್ನಪಹರಿಸೆ ,ಕುರುಡಾಗಿ ಕಾನನಕೆ ಬಂದು ಋಷಿಚರ್ಯೆಯಲ್ಲಿರುವ ಧ್ಯುಮತ್ಶೇನ ಅರಸನ ಸುತನೂ ಶುದ್ಧಾತ್ಮನೂ ಆದ ಸತ್ಯವಾನನನ್ನು ವರಿಸುತ್ತಾಳೆ.ಆಕೆ ಒಲಿಯಲು ಆತ‌ ಸುಂದರನೆಂಬುದಷ್ಟೇ ಕಾರಣವಿರಲಿಲ್ಲ. “ಆದರಾ ಸಾವಿತ್ರಿ ಸೌಂದರ್ಯಕೆ‌ ಮರುಳಾಗಲಿಲ್ಲ ಸೌಂದರ್ಯವನು ಮೀರಿ ಆತನೊಳು ಶುಚಿಶೀಲವಿತ್ತು” ಹೀಗೆ ಆಕೆಯ ಆಯ್ಕೆಯಲ್ಲಿ ಒಂದು ಘನತೆ ಇದ್ದಿತು.ಆಗ ಬಂದ ನಾರದರು ಆತ ಅಲ್ಪಾಯು ಎಂಬುದನ್ನು ಹೇಳಿದರೂ‌ ಕೂಡ ಆಕೆಯ‌ ಪ್ರೇಮ ಹಿಂಜರಿಯಲಿಲ್ಲ. ಪ್ರೇಮ ಮೃತ್ಯುವಿಗೆ ಬೆದರಿ ಓಡುವದೇ? ಪತಿಯ ಗತಿಯನು ಕೇಳಿ ಆಕೆಯೊಲುಮೆಯು ಚೈತ್ರಮಾಸದೊಳು ತಳತೆಸೆವ ವನದಂತೆ ಹಿಗ್ಗಿದುದು ಒಮ್ಮೆ ಒಬ್ಬರೊಲಿದ ಶುಚಿಯೊಲವು ನೋಡುವುದೇ ಕಣ್ಣೆತ್ತಿ ಎಂತಿರುವನೆಂದು ಕಡೆಗೆ? ಹೀಗೆ ಆರಂಭದಲ್ಲಿಯೇ ಆಕೆಯ ಪವಿತ್ರ ಪ್ರೇಮವನ್ನು‌ ನಾಟಕ ಘೋಷಿಸಿಯೇ ಮುಂದೆ ಹೋಗುತ್ತದೆ.ಪತಿಗೆ ಉತ್ತಮ‌ ಸತಿಯಾಗಿ ಮಾತ್ರವಲ್ಲ ,ಸಾವಿತ್ರಿ ಅತ್ತೆ‌ ಮಾವರಿಗೆ ಉತ್ತಮ‌  ಸೊಸೆಯಾಗಿ ಪತಿಯನ್ನು ಅನುಸರಿಸುತ್ತ ಕಾಡಿನೊಳಗೆ ಉಳಿಯುತ್ತಾಳೆ. ಆಕೆಗೆ ತನ್ನ ಪತಿಯ ಆಯುಷ್ಯದಲ್ಲಿ  ಕಡೆಯ‌ ಮೂರು ದಿನಗಳು ಮಾತ್ರ ಉಳಿದಿವೆ ಯಂದು ಗೊತ್ತಾಗಿದೆ‌ ಕೂಡ.ಅದಕ್ಕೆ ಆಕೆ ಪೂಜೆಯಲ್ಲಿ ತೊಡಗಿ ದ್ದಾಳೆ. ಸತ್ಯವಾನನನ್ನು ಯಮನಲ್ಲಿಗೆ‌ ಒಯ್ಯಲು ಬಂದ ದೂತನಿಗೂ ಕರುಣೆಯಿದೆ.ಇಂತಹ ನವ ಯೌವನದ ಜೋಡಿಯನ್ನು ಅಗಲಿಸುವದೆಂತು ಎಂಬ ನೋವಿದೆ.ಆದರೆ ಕರ್ತವ್ಯದ ಕರೆ ಯಾರು ಮೀರಬಲ್ಲರು,? ಆತ ಕರ್ತವ್ಯ ಬದ್ಧ.ಅದಕ್ಕಾಗಿ ಆತ ಯಕ್ಷನೊಂದಿಗೆ ಭೂಲೋಕಕ್ಕೆ ತೆರಳುತ್ತಾರೆ. ದೃಶ್ಯ ಒಂದರಲ್ಲಿ‌ ಸಾವಿತ್ರಿ ಋಷ್ಯಾಶ್ರಮದ ಎಲೆ‌ಮನೆಯ ಹತ್ತಿರದ ಶಿವನ ಗುಡಿಯಲ್ಲಿ ಪೂಜೆಗೆ ತೊಡಗಿದ್ದಾಳೆ .ಆ ಪತಿವ್ರತೆ,ಕಾಲಚಕ್ರಕ್ಕೆ ಅಂದು ಮುಂದುವರಿಯದಂತೆ , ಸೂರ್ಯನಿಗೆ ಉದಯವಾಗದಂತೆ ಪ್ರಾರ್ಥಿಸುತ್ತಿದ್ದಾ಼ಳೆ.ಒಂದು ವೇಳೆ ಸೂರ್ಯೊದಯವಾದರೆ ತಾನೆ? ಆಕೆಯ ಗಂಡನಿಗೆ ಸಾವು ಬರುವದು? ಸಾವಿನ‌ ನೋವು ಅವಳ ಮಾತಲ್ಲಿ ಮಡುಗಟ್ಟಿದೆ.ಗಾಳಿ ಬೀಸಿದರೆ,ಎಲ್ಲಿ ಸಪ್ಪಳವಾಗಿ ಅಂದೆ ಕಡೆಯ ದಿನವೆಂಬುದನು ಯಮನಿಗೆ ನೆನಪಿಸಿತೋ ? ಎಂದು ದಿಗ್ಭ್ರಮೆ ತಾಳುತ್ತಾಳೆ. ಆಕೆ ಆ ದುಃಖದಲ್ಲಿರುವಾಗಲೇ ಸತ್ಯವಾನನ ಪ್ರವೇಶವಾಗುತ್ತದೆ.ಆತ ಫಲ ಪುಷ್ಪಗಳಿಗಾಗಿ ವನಕೆ ಹೊರಟು ನಿಂತಿದ್ದಾನೆ. ಹೆಂಡತಿ‌ ಮೂರು ದಿನದಿಂದ ಏನು‌ಪೂಜೆ ನಡೆಸಿದ್ದಾಳೆ ಎಂಬ ಅಚ್ಚರಿ ಅವನಿಗೆ. ಆತನನ್ನು ಕಾಡಿಗೆ ಹೋಗದಂತೆ ತಡೆದ ಸಾವಿತ್ರಿ ಇಬ್ಬರೂ‌ ಕೂಡಿಯೇ ಪೂಜಿಸಬೇಕೆಂದು ಕೋರುತ್ತಾಳೆ. ಅವಳ ಒಲುಮೆಗೆ ಮಣಿದ ಸತ್ಯವಾನ ಕಾಡಿಗೆ ಹೋಗದೆ ಅಲ್ಲಿಯೇ ಉಳಿಯುತ್ತಾನೆ.ಗಂಡನಿಗೆ ಇಂದು‌ ಅವನ ಕಡೆಯ ದಿನವೆಂಬುದು ತಿಳಿದಿಲ್ಲವೆಂದು ಆಕೆಗೆ ನೋವು ತುಂಬಿದೆ.ಕಡೆಗೂ ಕಾಡಿಗೆ ಹೊರಟ ಅವನೊಡನೆ ಹೊರಟು ನಿಂತ ಅವಳು ಇಂದೇಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅಚ್ಚರಿಯವನಿಗೆ.ಏಕೆ? ಎಂದು ಕೇಳಿದರೆ ಕನಸಿನ‌ ನೆವದಿಂದ ಮರೆಸಿ ತಾನೂ ಹೂವನಾರಿಸಲು ಬರುವೆನೆಂದು ಗಂಡನೊಡನೆ ಹೊರಡುತ್ತಾಳೆ.ಇಡೀ ದೃಶ್ಯದಲ್ಲಿ ಮುಂದಾಗುವ ನೋವು ಅರಿತ ಸಾವಿತ್ರಿಯಲ್ಲಿ  ತಳಮಳ ಮಡುಗಟ್ಟಿದೆ.ಆಕೆ ಕಾಡಿಗೆ ಎನ್ನಿನಿಯನೊಡನಿಂದು ನರಕವಾದರೆ ನರಕ ! ಸಗ್ಗವಾದರೆ ಸಗ್ಗ! ನಾಶವಾದರೆ ನಾಶ! ಯಮರಾಯನೊಡ್ಡುತಿಹ‌ ಪಾಶವಾದರೆ ಪಾಶ! ಎಂದು ತೀರ್ಮಾನಿಸಿಯೇ ಹೊರಟಿದ್ದಾಳೆ.ಇಲ್ಲಿ‌ಮತ್ತೆ ಆಕೆಯ‌ಪಾತಿವೃತ್ಯದ ಪರಿಚಯ ನಮಗಾಗುತ್ತದೆ.ಗಂಡನಿಗೆ ಸಾವು ಬಂದರೆ ತನಗೂ‌ ಬರಲಿ ಎಂಬ ಗಟ್ಟಿ ನಿರ್ಧಾರ ಅವಳದು. ಮುಂದಿನ ದೃಶ್ಯ ಫಲ ಪುಷ್ಪಗಳನರಸುತ್ತ ಸತ್ಯವಾನ ಸಾವಿತ್ರಿ ಕಾಡಲ್ಲಿ ಅಲೆಯುತ್ತಿದ್ದಾರೆ.ಬಹಳ ಸಾಂಕೇತಿಕವಾದ ಮಾತಿನಿಂದಲೇ ಈ ದೃಶ್ಯ ಆರಂಭವಾಗುತ್ತದೆ ಸತ್ಯವಾನ ” ಬಾ,ನೋಡಿಲ್ಲಿ ಹರಿಣಿಯನ್ನು ಹುಲಿಯ ಬಾಯಿಂದ‌ ನಾನು ರಕ್ಷಿಸಿದ್ದು ಇಲ್ಕಿಯೇ ” ಎಂದರೆ , ಸಾವಿತ್ರಿ ” ಆ ಪುಣ್ಯ ನಿನ್ನನೀ ದಿನ ಬಂದು ರಕ್ಷಿಸಲಿ” ಎನ್ನುತ್ತಾಳೆ..ಆತ ಸರಸಕ್ಕೆಳಸಿದರೆ ಆಕೆಗೆ ಸಾವಿನ ಬಾಯಲ್ಲೂ ಸರಸವೇ ಎಂಬ ಹೆದರಿಕೆ ಕಾಡುತ್ತದೆ. ಆಕೆಯ ಮನದಲ್ಲಿ ಸಾವೇ ಪ್ರತಿದ್ವನಿಸುತ್ತಿದೆ ಪ್ರತಿ‌ ಮಾತಲ್ಲೂ ಅದು ಸೂಸುತ್ತಿದೆ ಸತ್ಯವಾನ ನೋಡಲ್ಲಿ ಮುತ್ತುಗದ ಹೂವು ಪೃಕೃತಿದೇವಿಯ ಬರವಿಗಾಗಿ ವನದೇವಿ ಹಿಡಿಯಿಸಿದ ಪಂಜುಗಳೋ ಎಂಬಂತೆ ರಂಜಿಸಿವೆ ಎಂದರೆ,ಅದಕ್ಕೆ ಸಾವಿತ್ರಿ ” ಬಹುದೂರ ಮಸಣದೊಳು ಉರಿವ ಸೂಡುಗಳೊ ಎಂಬಂತೆ ತೋರುತಿವೆ” ಎನ್ನುತ್ತಾಳೆ . ಸತ್ಯವಾನನಿಗೆ ಅಚ್ಚರಿ ! ಅಮಂಗಳದ ನುಡಿಯೇಕೆ,? ಎನ್ನುತ್ತಾನೆ.ಆಕೆ ಹೆಜ್ಜೆ ಹೆಜ್ಜೆಗೆ  ಭಯ ಎದುರಿಸುತ್ತ ಹೋಗುವ ಕಾಲ ಚಕ್ರಕ್ಕೆ “ಕರುಣೆಯಿಲ್ಲವೇ ನಿನಗೆ” ಎನ್ನುತ್ತ ಪರಮೇಶ್ವರನಲ್ಲಿ ಪತಿಭಿಕ್ಷೆ ಬೇಡುತ್ತ ಗಂಡನೊಂದಿಗೆ ತಿಳಿನೀರ ವಾಹಿನಿಯೆಡೆ ತೆರಳುತ್ತಾಳೆ.          ಮೂರನೆಯ ದೃಶ್ಯವೂ ಅದೇ ಕಾಡಲ್ಲಿ ನಡೆಯುತ್ತದೆ. ಅಷ್ಟೊತ್ತಿಗೆ ಸಂಜೆಯಾಗಿದೆ ಯಕ್ಷ ,ಯಮದೂತ ಅಲ್ಲಿಗೆ ಬರುತ್ತಾರೆ.ಯಮದೂತನಿಗೆ ಸಂಜೆಯಾಗುತ್ತಿದ್ದಂತೆ ತನ್ನ‌ ಕಾರ್ಯದ ನೆನಪಾಗುತ್ತದೆ. ಸತ್ಯವಾನ. ಸಾವಿತ್ರಿಯರನ್ನು ನೋಡಿದ ಯಕ್ಷನಿಗೆ‌ ಮುದ್ದಾ‌ದ ಪ್ರೇಮಿಗಳು ಎಂದು ಬೇಸರವಾಗುತ್ತದೆ.ಯಮದೂತನಿಗೂ ಬೇಸರವಿದೆ. ಆದರೇನು? “ಯಮನೂರು ದಯೆಯ ಬೀಡಲ್ಲ,ನಿಷ್ಪಕ್ಷ ಪಾತವಾಗಿಹ ಧರ್ಮದೂರು , ಯಮಪಾಶ ಕಂಬನಿಗೆ ಕರಗುವಂತಹುದಲ್ಲ ರೋದನಕೆ ಮರುಳಾಗದೆಂದಿಗೂ” ಅದು ಅಸಂಖ್ಯ ಹೆಂಗಳೆಯರನ್ನು ವಿಧವೆಯರನ್ನಾಗಿಸಿದ ಧೂರ್ತ,ಗಣನೆಯಿಲ್ಲದ ಮಾತೆಯರ ಕಲ್ಲಾಗಿಸಿದ ನಿಷ್ಕರುಣಿ.,ಕೋಟಿ ವೀರರ ರಕ್ತವ ಕುಡಿದು ಕೊಬ್ಬಿರುವ ಪಾಶ, ಯೋಗಿಗಳ,ಅವತಾರಪುರುಷರು,ಋಷಿವರರು ಯಾರನ್ನು ಬಿಟ್ಟಿಲ್ಲ.ಇಂತಿರುವ ಅದು ಈ‌‌ ನೀರ ನೀರೆಯರ ಗೋಳಿಗಂಜುವದೇ ? ಎನ್ನುತ್ತಾನೆ .ಅಷ್ಟೊತ್ತಿಗೆ ಸತ್ಯವಾನ ಸಾವಿತ್ರಿಯರೆ ಅತ್ತ ಬರುತ್ತಾರೆ.ಈ ಯಕ್ಷ ಮತ್ತು‌ ಯಮದೂತ  ಇಬ್ಬರೂ  ಅದೃಶ್ಯ ಜೀವಿಗಳಾಗಿ. ಅವರ  ನಡೆ ನೋಡುತ್ತ ನಿಲ್ಲುತ್ತಾರೆ. ಸತ್ಯವಾನನಿಗೆ ಸಾಕಾಗಿದೆ‌. ಮಡದಿಯ ತೊಡೆಯ ಮೇಲೆ ತಲೆಯಿಟ್ಟು‌ ಮಲಗುತ್ತಾನೆ.ಸಾವು ಸಮೀಪಿಸಿದ ಸಂಕೆತ ವದು. ಸತ್ಯ ತಿಳಿದ ಸಾವಿತ್ರಿ ತನ್ನ‌ ಪತಿವೃತಾ ಧರ್ಮಕ್ಕೆ ” ಬಂದೆನ್ನ‌ ಕಾಪಾಡು’ ಎಂದು ಬೇಡಿಕೊಳ್ಞುತ್ತಾಳೆ.ಇಲ್ಲಿಗೆ ತುಸು ದೀರ್ಘವಾದ ಮೂರನೆಯ ದೃಶ್ಯ ಮುಗಿಯುತ್ತದೆ. ನಾಲ್ಕನೆಯ ದೃಶ್ಯದ ಆರಂಭದಲ್ಲಿಯೇ ಯಮದೂತ ತಲ್ಲಣಗೊಂಡಿದ್ದಾನೆ.ಆತನ‌ ಮನದಲ್ಲಿ ತಳಮಳ ಆರಂಭವಾಗಿದೆ.ಏನೂ ತಪ್ಪು‌ಮಾಡದ ಸಾವಿತ್ರಿಯ ಗಂಡನ ಜೀವ ಅಪಹರಿಸುವದು ಅವನಿಂದ ಸಾದ್ಯವಾಗದಾಗಿದೆ. ಪತಿವ್ರತೆಯ ಜ್ವಾಲೆಯೊಳು ಸಿಕ್ಕಿದ್ದಾನೆ. ಮೂರು ಸಲ ಸತ್ಯವಾನನ ಪ್ರಾಣ ಎಳೆಯಲು ಯತ್ನಿಸಿದರೂ ಅವನಿಂದ ಸಾದ್ಯವಾಗಿಲ್ಕ.ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ಅದರಿಂದ ಪಾರಾಗುವ ದಾರಿ ಸಿಗದೆ ಯಮಧರ್ಮನಲ್ಲಿಗೇ ಓಡುತ್ತಾನೆ.ದೃಶ್ಯ ೫ ರಲ್ಲಿ ಸಾಕ್ಷಾತ್ ಯಮನೇ ಬ಼ಂದಿದ್ದಾನೆ.ತಾನು ಜಗದ ಧರ್ಮಾಧಿಕಾರಿ ತನ್ನ ಧರ್ಮದ ಮೇಲೆ ಒಪ್ಪಿಗೆಯಿಟ್ಟು ನಿನ್ನ‌ಗಂಡನನ್ನೊಪ್ಪಿಸು ಎನ್ನುತ್ರಾನ .ತನ್ನ  ಮೇಲಿನ ಕರುಣೆಯಿಂದಲಾದರೂ ತನ್ನ‌ ಇನಿಯನನ್ನು ಉ಼ಳುಹಲಾರೆಯಾ ಎಂದ ಅವಳ‌ ಮಾತಿಗೆ ” ಜಗದ ಧರ್ಮದ ನೀತಿಯನರಿತವ಼ಳು‌ ನೀನು ,ಬಿಡು ” ಋತದ ನಿಯಮ‌ ಒಪ್ಪು ಎನ್ನುತ್ತಾನೆ ಆದರೆ ಆಕೆ ಹದಿಬದೆಯ ಧರ್ಮ,ತನ್ನತನ,ನನ್ನಿ,ನಿಷ್ಕಾಮ ಪ್ರೇಮ , ಪರಮೇಶ ಭಕ್ತಿ  ಇವುಗಳಿಗಾಗಿ ಋತವು ಒಪ್ಪದೇ? ಎನ್ನುತ್ತಾಳೆ.ಆದರೆ ಯಮ ಧರ್ಮನದು ಒಂದೇ ಮಾತು.ರಾಮ‌, ಕೃಷ್ಣರಂಥವರೆ ಋತ ಧರ್ಮಕ್ಕೆ ಸಾವು ಅನುಭವಿಸಿದ್ದಾರೆ.” ಹುಟ್ಟಿದವರಿಗೆಲ್ಲರಿಗೂ ಸಾವು ಉಂಟೇ ಉಂಟು” ಎನ್ನುತ್ತಾನೆ. ಸರಿ ಹಾಗಾದರೆ,ಪತಿಯ‌ಕೂಡ ಎನ್ನನೂ ಒಯ್ಯು,ಪತಿಯಳಿದ ಮೇಲೆ ಸತಿಗೆ ಜೀವವೇ ಸಾವು! ಹರ್ಷದಿಂದೈತರುವೆ ಪತಿಯೊಡನೆ! ಇದು ಸಾವಿತ್ರಿಯ ಹಟ. ಆದರೆ ಯಮ‌ “ಯಾರ ಜೀವಿತ ಮುಗಿದಿಲ್ಲವೋ ಅವರ ಬಳಿ ಸುಳಿಯಲೆನಗೆ ಅಧಿಕಾರವಿಲ್ಲ”  ಎನ್ನುತ್ತಾನೆ.ಆದರೆ ಯಮನಿಗೆ  “ಧರ್ಮವೊಲವಿಗೆ ಶರಣು ಎಂದು ನೀನರಿತಾಗ ನನ್ನಿನಿಯನನ್ನೆನಗೆ ಹಿಂದಕೊಪ್ಪಿಸಬೇಕು “ ಎಂಬ ಮಾತನ್ನಿತ್ತು ದೂರ ನಿಲ್ಲುತ್ತಾಳೆ. ಯಮನೇನೋ ಸತ್ಯವಾನನ ಜೀವವನ್ನು ಸೆಳೆದೊಯ್ದ.  ಸಾವಿತ್ರಿ ಬಿಟ್ಟಳೇ! ಸತ್ಯವಾನನ ಜೀವವನ್ನು ತಗೆದುಕೊಂಡು ಹೊರಟ  ಯಮನನ್ನು  ಬೆನ್ನು ಹತ್ತುತ್ತಾಳೆ.ಪ್ರೇಮಾನುರಾಗ ವು  ಧರ್ಮವನು‌ ಮೀರಿರುವದೆಂಬುದನು ಸಾಧಿಸುವೆನೆಂದು ಹೊರಡುತ್ತಾಳೆ.    ದೃಶ್ಯ ೬ ರಲ್ಲಿ ಮುಂದೆ ಯಮ ಹಿಂದೆ ಸಾವಿತ್ರಿ ದೇವಲೋಕ ದತ್ತ ಹೊರಟಿದ್ದಾರೆ.ದಿಗಿಲಾದ ಯಮ ” ಏಕೆನಗನಳನ್ನುಸರಿಸಿ ಬರುತಿಹೆ ತಾಯೆ? ಎಂದು ಪ್ರಶ್ನಿಸಿದರೆ- ನಿನ್ನ ನಾನನುಸರಿಸಿ ಬರುತಿಲ್ಲ ಯಮದೇವ ಪತಿಯನನುನಸಿರಿಸಿ ಬರುತಿಹೆನು,ಹುಟ್ಟಿದವರೆಲ್ಲ ರೂ ಸಾಯುವದು ಧರ್ಮವೆಂದೊರೆದೆ, ಅಂತೆಯೆ ಸತ್ತ ಪತಿಯರ ಹಿಂದೆ ಹೋಗುವದು ಪತಿವ್ರತಾ ರಮಣಿಯರ ಧರ್ಮ ! ಒಲಿದೆದೆಗ ಳೆಂದಿಗೂ ಅಗಲಲಾರವು  ಎಂಬುದಿದು ವಿಶ್ವ ನಿಯಮ ಎನ್ನುವ ಸಾವಿತ್ರಿ ಯಮನಿಗೆ “ನಿನ್ನ ಧರ್ಮ‌ ನೀನು ಮಾಡು ,ನನ್ನ ಧರ್ಮ ನಾನು‌ ಮಾಡುತ್ತೇನೆ” ಎನ್ನುತ್ತಾಳೆ. ಆಕೆಯ ಧರ್ಮಕೆ ಮೆಚ್ಚಿದ ಯಮ ವರವನೀಯುತ್ತೇನೆ ಬೇಡು ಎಂದಾಗ ಬಹಳ ಚಾಣಾಕ್ಷತನದಿಂದ ತನ್ನ ಮಾವನಿಗೆ ಕಣ್ಣು ಬರುವಂತೆ ವರ ಬೇಡುತ್ತಾಳೆ.ಇಲ್ಲಿ ಆಕೆಯ ನಿಸ್ವಾರ್ಥತೆ ಎದ್ದು ಕಾಣುತ್ತದೆ.೭ ನೆಯ ದೃಶ್ಯದಲ್ಲಿ  ಯಮ ಮಾನವ ಲೋಕ ದ ಎಲ್ಲೆ ದಾಟಿ ತನ್ನ ಲೋಕದತ್ತ ಹೋಗುತ್ತಾನೆ.ಮರಳಿ ನೋಡಿದರೆ ಸಾವಿತ್ರಿ ಬೆನ್ನಹಿ಼ಂದೆಯೆ ಇದ್ದಾಳೆ. ಏಕೆ  ಎಂಬ ಅವನ‌ ಪ್ರಶ್ನೆ ” ದೇಹ ಮನವನರಸುವದು .ಮನದ ಧರ್ಮ‌ವ ಮನವು‌ ಮಾಡುತಲಿಹುದು …ಪತಿಯಾತ್ಮದರ್ಧ ಸತಿ ಎಂಬುದದು ಋತಸಿದ್ಧ  ಆತ್ಮವಿಹ ಕಡೆ ದೇಹ ಮನಸುಗಳು ಹೋಗುವದು ಧರ್ಮ ! ಎಂದು ಮತ್ತೆ ತನ್ನ ಧರ್ಮವನ್ನೇ ಸಾರುತ್ತಾಳೆ .ಆಕೆಯ ನಿರ್ಧಾರಕ್ಕೆ ಮೆಚ್ಚಿದ ಯಮ ಈಗಲಾದರೂ ಇನ್ನೊಂದು ವರ‌ ಕೊಟ್ಟು  ಅವಳನ್ನು ಸಾಗ ಹಾಕಬೇಕೆಂದುಕೊಂಡು ಇನ್ನೊಂದು‌ ವರ ಕೊಡುತ್ತಾನೆ .ಆಗಲೂ ತನ್ನ‌ಗಂಡನ ಜೀವ ಕೇಳದ ಸಾವಿತ್ರಿ ” ಮಾವನಿಗೆ ಕಳೆದ ಧರೆ ಆಳಿದ ಸಿರಿಗಳು ಬರಲಿ” ಎಂದು ಬೇಡಿಕೊಳ್ಳುತ್ತಾಳೆ. ಆಗಲೂ ಬೆನ್ನು ಹತ್ತಿದ ಅವಳಿಗೆ ಯಮ‌ ಇನ್ನು ಜೀವವುಳ್ಳ ಮಾನವರು ಬರಬಾರದು ಎಂದರೆ ಧರ್ಮದಿಂದ ಧರ್ಮವನ್ನು ಗೆಲ್ವೆನೆಂಬ ನಿರ್ಧಾರವನ್ನೇ ತೋರುತ್ತಾಳೆ. ೮ ನೆಯ ದೃಶ್ಯದ ಆರಂಭದಲ್ಲಿ‌ ಮತ್ತೆ ತನ್ನ ಹಿಂದೆ ಏನೋ ಸದ್ದು ಬರುವದ ಕೇಳಿದ ಯಮನಿಗೆ ದಿಗಿಲು .ಮತ್ತೆ ಸಾವಿತ್ರಿಯನ್ನು‌ ನೋಡಿದ ಯಮ‌ ಎರಡು ವರಗಳ‌ ಪಡೆದು‌ ಬೆನ್ನು ಹತ್ತುವದು ಧರ್ಮವೇ ?

ಯಮನ ಸೋಲು Read Post »

ಪುಸ್ತಕ ಸಂಗಾತಿ

ಬದರ್ ಪುಸ್ತಕದ ವಿಶ್ಲೇಷಣೆ

ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

ಬದರ್ ಪುಸ್ತಕದ ವಿಶ್ಲೇಷಣೆ Read Post »

ಪುಸ್ತಕ ಸಂಗಾತಿ

ಬಿಳಿಯ ಬಾವುಟ ಹಿಡಿದ ಕವಿತೆಗಳು

ಪುಸ್ತಕ ಸಂಗಾತಿ            ಶಾಂತಿ- ಪ್ರೀತಿಯ ಬಿಳಿಯ ಬಾವುಟ ಹಿಡಿದ ಕವಿತೆಗಳು ಕವಿತೆ ಅಂತರಂಗದ ಕನ್ನಡಿ ಆಗುವಷ್ಟರ ಮಟ್ಟಿಗೆ ಸಾಹಿತ್ಯದ ಇನ್ನ್ಯಾವ ಪ್ರಕಾರವೂ ಆಗುವುದಿಲ್ಲ ಎಂಬ ಮಾತು ಕವಿಯತ್ರಿ ಕವಿತಾ ಕುಸುಗಲ್ಲರ ’ಬೆಳಕಿನ ಬಿತ್ತನೆ’ ಕವನ ಸಂಕಲನ ಓದಿದಾಗ ತಟ್ಟಂತ ನೆನಪಾಯಿತು. ಡಾ.ಕವಿತಾ ಕುಸುಗಲ್ಲ ಅವರ ಮೂರನೆಯ, ಒಂದು ರೀತಿಯ ವಿಭಿನ್ನವಾದ ಸಂಕಲನವಿದು. ಈ ಸಂಕಲನದಲ್ಲಿ ಅವರು ನಾನು, ನೀನು, ಆನು, ತಾನು ಎಂದು ನಾಲ್ಕು ಭಾಗಗಳಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಮಹಿಳೆಯಾಗಿ ಮಗ, ಮಗಳು, ಗಂಡನನ್ನು ಸಂಬೋಧಿಸಿ, ಜೀವನಕ್ಕೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ, ಪರಿಸರ, ನಾಡು ನುಡಿ, ಸಂಸ್ಕೃತಿ ಕುರಿತಂತೆ ವೈಯಕ್ತಿಕ, ಕೌಟುಂಬಿಕ, ಆಧ್ಯಾತ್ಮ-ತಾತ್ವಿಕ, ಮತ್ತು ಸಾಮಾಜಿಕ ನೆಲೆಗಳು ಈ ನಿಟ್ಟಿನಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ದೈನಂದಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೆಣ್ಣಾಗಿ, ಹೆಂಡತಿಯಾಗಿ, ತಾಯಾಗಿ ನಾಗರೀಕಳಾಗಿ ತಮ್ಮ ಅನುಭವಗಳಿಗೆ ದಕ್ಕಿದ ಎಲ್ಲ ವಿಷಯ ವಸ್ತುಗಳನ್ನು ತಮಗೆ ಹೇಳಬೇಕೆನಿಸಿದ ಸರಳ ನೇರ ನುಡಿಗಳಿಂದ ಕವಿತೆಯಾಗಿಸಿದ್ದಾರೆ. ಸಾಕಷ್ಟು ಕವಿತೆಗಳು ತುಂಬಾ ಪುಟ್ಟದಾಗಿ ಹನಿಗವನಗಳಂತೆ ಅನಿಸಿದರೂ ಅರ್ಥವ್ಯಾಪ್ತಿಯಲ್ಲಿ ಅಗಾಧವಾದವುಗಳೂ ಆಗಿವೆ. ಆ ಕ್ಷಣಕ್ಕೆ ಅನಿಸಿದ್ದನ್ನುಯಾವ ಕವಿತಾ ಲಕ್ಷಣಗಳನ್ನೂ ಅಂಟಿಸದೆ, ಯಾವ ಕುಸುರಿ ಕೆಲಸ ಮಾಡದೆ ನಮ್ಮ ಮುಂದಿಡುತ್ತಾರೆ. ’ಇಸಂ’ ಗಳಿಗೆ ಒಳಗಾಗದೆ ಬರೆಯುವುದೂ ಅವರ ಐಡೆಂಟಿಟಿ ಆಗಿರಬಹುದು. ಅವರ ಅನಿಸಿಕೆಗಳು, ಭಾವನೆಗಳು ಪುಟ್ಟ ಪುಟ್ಟ ಕವಿತೆಗಳಾಗಿ ಮೈತಳೆದಿರುವಾಗ ನನಗನಿಸಿದ್ದಿಷ್ಟೇ…ಅಂದವಾದ ಹೂವಿಗೆ ರಂಗು ಬಳಿವುದೇತಕೆ  ಎಂದು… ಸದಾ ಹೆಣ್ಣು ಅನುಭವಿಸುವ ಆಡಲಾರದ ಅನುಭವಿಸಲಾರದ ಸಾವಿರ ಒಳತೋಟಿಗಳು, ತಲ್ಲಣಗಳು ಕವಿತೆಯಾಗಿ ಬರೆಸಿಕೊಂಡಿವೆ. ಇಲ್ಲಿ ಎಲ್ಲಾ ಧಾರಣಶಕ್ತಿಯ ತಾಯಿ, ತಾಯ್ತನದ ಅಭಿವ್ಯಕ್ತಿ ಉಂಟು. ಅಸಹಾಯಕತೆ , ಕುತೂಹಲ, ಸಂಭ್ರಮ, ನಿವೇದನೆ, ವಿಷಣ್ಣತೆ ಎಲ್ಲವೂ ಅಭಿವ್ಯಕ್ತಿಗೊಂಡಿದೆ.  ಹೆಣ್ಣಾಗಿ, ತಾಯಾಗಿ, ಹೆಂಡತಿಯಾಗಿ ಹೇಗೇ ಆದರೂ ಹೆಣ್ಣಿನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಕವನಗಳಾಗಿ ಹುಟ್ಟಿಕೊಂಡಿವೆ. ಮಗಳಾಗಿ ಬಾ, ಪುರುಷಾರ್ಥ  ಸಾಧನೆಗೆ, ಗಾಂಧಾರಿ, ಸೀತೆ, ಬೆಳಕು, ಬಿನ್ನಹ, ನಾನೀಗ ಬದಲಾಗಿದ್ದೇನೆ, ಕಳೆದುಕೊಂಡಿದ್ದೇನೆ ಮುಂತಾದ ಹಲವು ಕವಿತೆಗಳಲ್ಲಿ ಗಂಡಸಿನ ಅಹಂಗಳನ್ನು ನಯವಾಗಿ ದಾಖಲಿಸುತ್ತಾ ಅವನ ಅಹಂ ಕಳೆದು ಮನುಷ್ಯನನ್ನಾಗಿಸುವಲ್ಲಿ ಸಾರ್ಥಕತೆ ಕಾಣಬಯಸುವುದು ಗೋಚರಿಸುತ್ತದೆ. ಯಾವ ಸಾಲುಗಳಲ್ಲೂ ಕವಿಯತ್ರಿ ಆಕ್ರೋಶ ದಾಖಲಿಸುವುದಿಲ್ಲ. ಆದರೂ ಪುರುಷಾಕಾರವನ್ನು ನಯವಾಗಿ ಹೇಳುತ್ತಾರೆ. ಅದೇ ಈ ಕವಿತೆಗಳ ಸೊಬಗು ಹಾಗೂ ಆಶಯ ಕೂಡ… ಇನ್ನು ತಾಯಿ ಮಕ್ಕಳ ವಾತ್ಸಲ್ಯ ಕುರಿತು ಕವಿತಾ ಅವರು ಸಂಪೂರ್ಣ ವಾತ್ಸಲ್ಯಮಯಿ ಅಮ್ಮನೇ ಆಗಿ ಗೆದ್ದಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ಮಕ್ಕಳ ಕುರಿತು ಕೆಲವು ವಾತ್ಸಲ್ಯ ಗೀತೆಗಳ ಸಾಲುಗಳನ್ನು ಕವಿತಾ ಅವರ ರಚನೆಗಳು ಮತ್ತೆ ಮತ್ತೆ ನೆನಪಿಸುತ್ತವೆ. “ ಹಾಲಿನಂತೆ ಅವನ ಮನಸ್ಸು/ ದುಂಡು ಮುತ್ತಿನಂತೆ ನುಡಿ/ ಅವನ ಕೇಕೆ ನನ್ನ ಕನಸು/ದೇವರವನು ನಾನು ಗುಡಿ” ಎಂಬ ಕವಿಯ ಸಾಲುಗಳಲ್ಲಿ “ ಅಮ್ಮನ ಬಂಗಾರ/ ಅಪ್ಪನ ಮಂದಾರ/ ಮಾತಿನ ಮಲ್ಲಿಗೆ / ಕುಣಿವ ಕಾಮನ ಬಿಲ್ಲೇ ಬಾ  “ ಎಂಬ ಕವಯಿತ್ರಿಯ ಸಾಲುಗಳಿಗೆ ನೆನಪಾಗುತ್ತವೆ. ಮಕ್ಕಳ ಪ್ರೀತಿಯ ಒಡನಾಟವೇ ತಾಯ್ತಂದೆಯರ ಭಾಗ್ಯ, ಮಕ್ಕಳಿರುವ ಮನೆಯೇ ಸೌಭಾಗ್ಯದ ನಿಧಿ ಎಂಬ ಹಿರಿಯರ ಮಾತುಗಳನ್ನೂ ಸಾಬೀತು ಪಡಿಸುವಂತೆ ಕವಿಯತ್ರಿ ತಾಯಿ ಮಗಳು ವಾತ್ಸಲ್ಯಗೀತಗಳಲ್ಲಿ ಅಪ್ಪಟ ತಾಯ್ತನದ ಹೊಳೆಯನ್ನೇ ಹರಿಸಿದ್ದಾರೆ. ಎಷ್ಟು ಬರೆದರೂ ತೃಪ್ತಿ ಇಲ್ಲದಂತೆ ತಾಯಿಯಾಗಿ ದಕ್ಕಿದ ಅನುಭವಗಳ ಕಟ್ಟಿಕೊಡುತ್ತಾ ಅರಿವಿನ ದಾರಿ ಮಗುವಿನ ದಾರಿ ಎಂದು ಮನಗಾಣಿಸುತ್ತಾರೆ. ಪುಟ್ಟ ಕಂದಮ್ಮಗಳು ತೊಟ್ಟಿಲಲ್ಲಿ ಮೈಮುರಿದು ಬಟ್ಟಲುಗಣ್ಣು ತೆರೆದು ಬೆಳಗಾಯಿತು (ದೀಪದ ಮಲ್ಲಿ-ಕೆ.ಎಸ್.ನ.) ಎಂಬ ಕವಿಯ ಸಾಲಂತೆ ಬಾಳ ಬೆಳಕು ಯಾವುದು ಎಂಬುದನ್ನು  ಎಂಬುದನ್ನು ಎತ್ತಿ ಹಿಡಿದಿರುವುದು ಚಂದವೆನಿಸುತ್ತದೆ.. ಇನ್ನು “ಕತ್ತಲೆಯಲ್ಲಿ ಬೆಳಕಿನ ಬಿತ್ತನೆ” ಕವಿತೆಯಲ್ಲಿ ಮೊದಲ ಸಾಲುಗಳಲ್ಲೇ ಸಂಕಲನದ ಶೀರ್ಷಿಕೆಯ ಆಶಯಕ್ಕೆ ಸಂಪೂರ್ಣ ಒತ್ತು ಕೊಟ್ಟಂತೆ ತುಂಬಾ ಚಂದವಾಗಿ ರಚಿತವಾಗಿದೆ. “ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ” ಎಂದು ಆರಂಭವಾಗುವ ಈ ಸಾಲುಗಳೇ ಅದ್ಭುತ… ರಮ್ಯ ಕಲ್ಪನೆ… ಎಲ್ಲ ಹೆಣ್ಣುಗಳ ಅಸಹಾಯಕತೆ ಅಥವಾ ಪರಿಸ್ಥಿತಿಯ ವಕಾಲತ್ತು ವಹಿಸಿದಂತ ಕವಿತೆ ಇದು ಎನ್ನಬಹುದು. ಆಧುನಿಕತೆಯ ಈ ಸಂಕ್ರಮಣ ಕಾಲದಲ್ಲಿ ಹೆಣ್ಣು ಸಾಂಸಾರಿಕ ಹಾಗು ಸಾರ್ವಜನಿಕವಾಗಿ ಅಥವಾ ಸಾಮಾಜಿಕವಾಗಿ ಅಥವಾ ವೃತ್ತಿಪರಳಾಗಿ ಹೊಣೆ ಹೊತ್ತು ಎಷ್ಟು ನಿಸ್ಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ ಎಂದರೆ ಮನೆ ಮಕ್ಕಳು ಸಂಸಾರದ ಹೊಣೆಯನ್ನು ಅವಳಿಗೆ (ಹೊರಿಸಿದ್ದು) ಬಿಡಲಾಗುತ್ತಿಲ್ಲ, ತನ್ನ ಸ್ವಂತ ಬದುಕನ್ನೂ ರೂಪಿಸಿಕೊಳ್ಳಲು ಆಗುತ್ತಿಲ್ಲ. ಯಾವುದೋ ಕಾಣದ ಒಂದು ಅದೃಶ್ಯ ಮಂತ್ರದಂಡದಂತೆ ಅವಳನ್ನು ಕುಟುಂಬದ ಜವಾಬ್ದಾರಿಗಳು ನಿಯಂತ್ರಿಸುತ್ತಿರುವುದೆಂತಹ ದುರಂತ ಎನಿಸುತ್ತದೆ. ಪುರುಷನಿಗಿರುವ ಯಾವ ಸಹಕಾರ ಸೌಲಭ್ಯಗಳೂ ಅವಳಿಗೆ ಯಾವ ಅಡೆ ತಡೆಯಿಲ್ಲದೆ ಲಭ್ಯವಾಗುವುದಿಲ್ಲ..( ಬೇಕು ಎಂದರೆ ಎಲ್ಲವನ್ನೂ ಹೋರಾಡಿಯೇ ಪಡೆಯಬೇಕು) ಎಂಥಹುದೇ ಮನೆಯಲ್ಲಿರಲಿ ಅವಳು ತಾಯಿ, ಹೆಂಡತಿ, ಮಗಳು, ಜವಾಬ್ದಾರಿ ತೋರಿಸಬೇಕಾದ ಗೃಹಿಣಿಯಾಗಿ ಮೊದಲು ಕಾಣಬೇಕು. ಆನಂತರ ಅವಳು ಅವಳ ’ಹೆಸರಿ’ನವಳು. ಇದು ಸಾರ್ವಕಾಲಿಕ ಸತ್ಯವಾಗಿದೆ. ಹಾಗಾಗಿಯೇ ಅವಳಿಗೆ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ ಎನ್ನುವಂತಾಗಿರುವುದು. ಆಗಲಾದರೂ ಅವಳ ಹಗಲಿನ ಯೋಚನೆ ಯೋಜನೆಗಳನ್ನುಇರುಳಲ್ಲಿ ಸಾಕಾರಗೊಳಿಸಿಕೊಳ್ಳಲು ಸಮಯ ಸಿಗುತ್ತದೆಯೇ? ಆಗಲೂ ಆಕೆ ತಾಯಾಗಿ ’ಪೊರೆವ’ ಕರ್ತವ್ಯ ಮುಗಿಸುವಷ್ಟರಲ್ಲಿ ಮತ್ತೆ ಬೆಳಕಾಗಿಬಿಡುವುದು ಎಂತಹ ಚೋದ್ಯ ನೋಡಿ…ಅವಳ ’ಸಮಯ’ ಅವಳಿಗೆ ಸಿಕ್ಕುವುದೇ ಇಲ್ಲ. ಇಷ್ಟಾದರೂ ಇಲ್ಲಿನ ಕವಿತೆಗಳಲ್ಲಿ ಕತ್ತಲಿನ ದಾರಿಗೆ ಬೆಳಕ ನೀಡುವ ಕಂದೀಲಿನಂತ ಆಶಯವಿದೆ. ಸಾಮಾಜಿಕ, ಸಂಸ್ಕೃತಿ ಪರಿಸರ ನಾಡುನುಡಿಗಳ ಕುರಿತ ಕವಿತೆಗಳಲ್ಲೂ ಕವಿತಾ ಅವರು ಪ್ರೀತಿಯ, ಶಾಂತಿಯ, ಸತ್ಯದ ಬಿಳಿಯ ಬಾವುಟ ಹಿಡಿದು ಬೆಳಕಿನೆಡೆಗೆ ಸಾಗಲು ಬರುವುದಕ್ಕೆ ಗಮನ ಕೊಡುತ್ತಾರೆ.  ಹಾಗಾಗಿಯೇ ಜೀವನದ ಎಲ್ಲಾ ಮಜಲುಗಳಲ್ಲಿ ಪ್ರೀತಿಯ ಬೆಳಕು ಪಸರಿಸಬೇಕು… ಅದೇ ಸತ್ಯ ಎಂಬ ನಂಬಿಕೆಯೊಂದಿಗೆ ಬರೆಯುತ್ತಾರೆ. ’ಬೆಳಕಿನ ಬಿತ್ತನೆ’ ಯೇ ಸೊಗಸಾದ ಶೀರ್ಷಿಕೆ .ಅಜ್ನಾನದ ಕತ್ತಲಿಗೆ ಪ್ರೀತಿಯ ಬೆಳಕಿನ ಬಿತ್ತನೆ ಬಿತ್ತಿ ಸಹನೀಯ – ಸಮಬಾಳ್ವೆಯ ಆಶಯ ಹೊತ್ತ ಪುಟ್ಟ ಪುಟ್ಟ ಕವಿತೆಗಳು ಸಾಲುದೀಪದಂತೆ ಸಂಕಲನದುದ್ದಕ್ಕೂ ಚೆಂದದ ಬೆಳಕು ಬೀರುತ್ತಾ ಕುಳಿತಿವೆ. ಮಹಿಳಾ ಸಂವೇದನೆಯ ಸೂಕ್ಷ್ಮ ಒಳನೋಟಗಳನ್ನು ಸರಳವಾಗಿ ದಾಖಲಿಸುವ ಆಶಯದಲ್ಲಿ ಕವಿತೆಗಳು ಮನ ತಾಕುತ್ತವೆ. ********************** ಮಮತಾಶಂಕರ್

ಬಿಳಿಯ ಬಾವುಟ ಹಿಡಿದ ಕವಿತೆಗಳು Read Post »

ಪುಸ್ತಕ ಸಂಗಾತಿ

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು

ಪುಸ್ತಕ ಸಂಗಾತಿ ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.  ೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ ಮಹತ್ವವೇ ಅದು. ಜೊತೆಗಿದ್ದು ಒಂಟಿಯಾದ ಭಾವ, ಸರಸ, ವಿರಸ, ಹುಸಿಮುನಿಸು ಇವೆಲ್ಲವೂ `ಯುವಕಾವ್ಯ’ದ ಲಕ್ಷಣಗಳೇ. ಅವರ ಕಾವ್ಯಾತ್ಮಕತೆಗೊಂದು ಉದಾಹರಣೆ ನೋಡೋಣ: ನೆನಪಿದೆಯಾ ಅಂದು ನಾವಿಬ್ಬರೆ                                       ಬಿದ್ದ ಎಲೆಗಳನ್ನಾರಿಸುತ್ತಿದ್ದೆವು                                           ಚಳಿ ಬೆರಗಲಿ ನಮ್ಮ ನೋಡುತ್ತಿದ್ದರೂ                                       ಲೆಕ್ಕಿಸದೆ ( ಚಳಿಗೆ ಅದರುವ ಪದಗಳು) `ನೀನು ಮತ್ತು ಚಳಿ’ ಅದರ ವಿಸ್ಕೃತ ಭಾವವೇ ಕವನದ ಕೊನೆಯ ಭಾಗದಲ್ಲಿ , ಗೋರಿಯಲ್ಲಿ ಮಲಗಿದ                                              ಅವನ ಮೈ ಮೇಲೆ                                                  ತೊಟ್ಟು ಕಳಚಿದ ಎಲೆ   ಬೀಳುತ್ತದೆ                                                       ಸದ್ದೆಬ್ಬಿಸಿ ಈ ಚಳಿಯಲಿ                                                             ಇಲ್ಲಿ ಮಾತು ಮೌನಗಳ ಅನುಸಂಧಾನವೂ ಇದೆ. ಪ್ರೀತಿಯ ಉತ್ಕಟತೆಯೂ ಹರಳುಗಟ್ಟಿದೆ. ಇಷ್ಟೇ ಆಗಿದ್ದರೆ ಅಕ್ಷತಾ `ಗಜಲ’ ಬರೆದು `ಪ್ರೇಮ ಕವಯತ್ರಿ’ ಎಂದು ಬ್ರ್ಯಾಂಡ್ ಆಗುತ್ತಿದ್ದರು. ಆದರೆ ಹಾಗಾಗದೇ ಸ್ತ್ರೀ ಪರ ವಾದ, ಕಾಳಜಿ, ದಾಂಪತ್ಯದ ಬಂಧನ, ಒಲ್ಲದ ಗಂಡನ ಆಕ್ರೋಶ, ಹೆಣ್ಣು ಈಗಲೂ ದ್ವೀತಿಯ ದರ್ಜೆಯ ಪ್ರಜೆಯಾಗಿರುವುದು.. ಹೀಗೆ ಕವನಗಳು ಕುಡಿಯೊಡೆಯುತ್ತದೆ. ನಾನು ದೀಪ ಹಚ್ಚಬೇಕೆಂದಿದ್ದೆ ಎಂಬ ಶೀರ್ಷಿಕೆ ಕವನವನ್ನು ಪರಿಶೀಲಿಸಿದರೆ, ಇದು ಸ್ಪಷ್ಟವಾಗುತ್ತದೆ. ಹೆಣ್ಣಿನ ಆಶಯ ಒಂದು, ವಾಸ್ತವ ಬೇರೊಂದು. ಹೀಗೆ ವೈರುದ್ಯಗಳನ್ನು ಕಾಣಿಸುವ `ಕವಿತೆ’ ಇದು. ದೀಪ ಹಚ್ಚುತ್ತೇನೆ                                                ಎಲ್ಲರೆದೆಯಲ್ಲಿ ಎಂದೆ                                                ಸುದ್ದಿ ಮಾಡು ಎಲ್ಲ                                                               ಗೊತ್ತಾಗಲಿ ಎಂದರು                                                ಪುಕ್ಕಟ್ಟಿನ ಜಾಹೀರಾತಾಗಿಬಿಟ್ಟೆ ಹೀಗೆ ಹೆಣ್ಣಿನ ದುಸ್ಥಿತಿ ಈಗಲೂ ಮುಂದುವರೆದಿರುವದನ್ನು ನೋವಿನಿಂದ ಚಿತ್ರಿಸಿದ್ದಾರೆ. ಒಬ್ಬರ ಅಡಿಯಾಗಬೇಕಾದ ದುರವಸ್ಥೆಗೆ ಒತ್ತು ನೀಡಿದ್ದಾರೆ. ಕತ್ತಿ ರಕ್ತ ಮೀಯುತಿದೆ, ಮಸರಿಯಾಗಬಾರದು ಈ ಎರಡು ಕವನಗಳು ನನಗೆ ವಿಶಿಷ್ಟವೆನಿಸಿದ್ದು. ನೋವಿನ ಘಳಿಗೆಯೊಂದು ನಗುವ ಅರಸುತಿದೆ ಎಂಬ ಕವನದಲ್ಲಿ ಎರಡು ಧರ್ಮಗಳ ಆತ್ಮೀಯತೆ, ಬಾಲ್ಯ ಕಳೆಯುತ್ತಿದ್ದಂತೆ ಬೇರೆಯಾಗುವ ಪರಿ, ಹುಡುಗಿ ಬೆಳೆದಂತೆ ಮಸೀದಿಗೆ ಪ್ರವೇಶವಿಲ್ಲ ಎಂದು ಸಾರುವ ಫಲಕ ಆಗಲೇ ತಿಳಿದದ್ದು                                                     ನನ್ನ ಫ್ರಾಕಿನ ಅಳತೆ ಬದಲಾಗಿದೆಯೆಂದು      ಎಂಬ ಮಾತು ಧ್ವನಿಪೂರ್ಣವಾಗಿದೆ ( ಈಗ ಮಹಿಳೆಯರಿಗೆ ಮಸೀದಿಯ ಪ್ರತ್ಯೇಕ ಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ ಆ ಮಾತು ಬೇರೆ) ಗ್ರಾಮೀಣ ಭಾಗದಲ್ಲಿ ಮೂಲಭೂತವಾದಿ ಸ್ತ್ರೀ ಸಮಾನತೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ `ಸತ್ಯ’ವನ್ನು ಒಂದು ಕಥನ ಕವನದ ಗುಣವುಳ್ಳ ಕವನದ ಮೂಲಕ ಬಿಂಬಿಸಿದ್ದಾರೆ. ಇಲ್ಲಿ ನನಗೆ ಮಲೆಯಾಳಿ ಕಥೆಗಾರ್ತಿ ಪಿ ವತ್ಸಲಾ ಅವರ ನಾನು ಅನುವಾದಿಸಿದ ಕಥೆ ನೆನಪಾಯಿತು. ಸ್ತ್ರೀ ಪರ ಹೋರಾಟದ ಕಥನಗಳು ಮುಗಿಯದು. ಇದಲ್ಲದೆ ಪ್ರವಾಹದ ಅತಂತ್ರ ಬದುಕು, ಶ್ರಮಿಕರ, ರೈತರ ಕುರಿತು ಕಾಳಜಿಗಳು ಈ ಸಂಕಲನದಲ್ಲಿ ವ್ಯಕ್ತವಾಗಿವೆ. ಭತ್ತ ಬೆಳೆಯುವ ಹೊತ್ತು                                             ರೈತನ ಹಸ್ತದಂಚಿನಲಿ                                                                 ಜನಿಸಿದ ಜಲ ಒಟ್ಟಾರೆ ಅಕ್ಷತಾ ಅವರ ಈ ಕೃತಿ ಏಕಾಂತ ಲೋಕಾಂತವಾಗುವ ಪ್ರಕ್ರಿಯೆಯಲ್ಲಿರುವುದು ಸ್ವಾಗತಾರ್ಹವಾಗಿದೆ. ************************************************                                          ಡಾ.ಕಮಲಾಹೆಮ್ಮಿಗೆ                                                                                                                                                                                                                                                                                        

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು Read Post »

ಪುಸ್ತಕ ಸಂಗಾತಿ

ಬದರ್

ಪುಸ್ತಕ ಸಂಗಾತಿ ಬದರ್ (ಅಬಾಬಿಗಳ ಸಂಕಲನ) ಮೂಲ ಲೇಖಕರ ಪರಿಚಯ ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಮುಸಲ್ಮಾನರ ಬದುಕಿನ ಬವಣೆಗಳೇ ಇವರ ಬರಹಗಳಲ್ಲಿರುವ ಜೀವಸೆಲೆ. . ಅನುವಾದಕರ ಪರಿಚಯ ಪೂರ್ಣ ಹೆಸರು ಧನಪಾಲ ನಾಗರಾಜಪ್ಪ. ಜೂನ್ 20, 1987ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹುಟ್ಟಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಗಳು. ವೈದ್ಯಕೀಯ ಪ್ರಯೋಗಾಲಯದ ಡಿಪ್ಲೊಮಾ ಮಾಡಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ================ ಅಬಾಬಿಗಳನ್ನು ಯಾಕೆ ಅವಿಷ್ಕರಿಸಿದೇನೆಂದರೆ (ಮೂಲ ಲೇಖಕರು ಮಾತುಗಳು) ವರ್ತಮಾನ ತೆಲುಗು ಸಾಹಿತ್ಯ ವಿಸ್ತೃತವಾದುದ್ದಾಗಿದೆ. ಅಸ್ತಿತ್ವದಲ್ಲಿರುವ ಅನೇಕಾನೇಕ ಹೋರಾಟಗಳ ನಿಲಯವಿದು. ಈ ಕ್ರಮದಲ್ಲಿ ಭಾಷೆಯಲ್ಲಿನ ಸಂಕ್ಲಿಷ್ಟತೆಯನ್ನು ದೂರ ಮಾಡುತ್ತ ಜನ ಸಾಮಾನ್ಯರಿಗೆ ಹತ್ತಿರವಾಗುವಂತೆ ಕಾವ್ಯ ಸಂಕ್ಷಿಪ್ತ ರೂಪವನ್ನು ಪಡೆದುಕೊಳ್ಳುತ್ತಿರುವ ದೆಶೆಯಿದು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಕವಿಗಳಿಗೆ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತ ಚೈತನ್ಯವನ್ನು ತುಂಬುವ ಒಂದು ಹೊಸ ರೀತಿಯ ವಚನಾ ಪ್ರಕ್ರಿಯೆಯ ಅಗತ್ಯವಿದೆ ಎಂದು ನನಗನಿಸಿತು. ಈ ಆಲೋಚನೆ ಬಂದಿದ್ದೇ ತಡ ʼಅಬಾಬಿಗಳು’ ಎಂಬ ಹೊಸ ರೀತಿಯ ವಚನಾ ಪ್ರಕ್ರಿಯೆಯನ್ನು ಅವಿಷ್ಕರಿಸುವ ಉದ್ದೇಶದಿಂದ ಈ ʼಬದರ್‌ʼ ಅನ್ನು ನಿಮ್ಮ ಮುಂದೆ ತರುತ್ತಿದ್ದೇನೆ. “ಅಬಾಬಿಗಳು’’ ಎಂಬ ಈ ಹೊಸ ರೀತಿಯ ಕಾವ್ಯ ಪ್ರಕಾರಕ್ಕೆ ನಾನು ಪಂಚಪದಿಗಳನ್ನು ಆರಿಸಿಕೊಂಡಿದ್ದೇನೆ. ಮುಸಲ್ಮಾನರ ನಡವಳಿಕೆಗೆ ಪಂಚಸೂತ್ರಗಳು ಇರುವಂತೆಯೇ ಪ್ರತಿ ಅಬಾಬಿಯೂ ಐದು ಸಾಲುಗಳಿಂದ ಮುಗಿಯುತ್ತದೆ. ಸಮಸ್ಯೆ, ವಿಷಯ ವಿಶ್ಲೇಷಣೆ, ವಿವರಣೆ, ಆತ್ಮಾವಲೋಕನ, ಸಂದೇಶ ಇಲ್ಲವೆ ವ್ಯಂಗ್ಯವಾದ ವಿಡಂಬನೆಯಿಂದ ಅಬಾಬಿಗಳು ಮುಗಿಯುತ್ತವೆ. ಅಬಾಬಿಗಳು ಎಂಬ ಈ ಹೊಸ ಕಾವ್ಯ ಪ್ರಕಾರವನ್ನು ಕೇವಲ ಮುಸ್ಲಿಂ ಕವಿಗಳೇ ಮಾತ್ರವಲ್ಲದೆ ಶೋಷಿತ ವರ್ಗಕ್ಕೆ ಸೇರಿದ ಕವಿಗಳೆಲ್ಲರೂ ಅನುಸರಿಸಬೇಕು ಎಂಬುದು ನನ್ನ ಆಕಾಂಕ್ಷೆ. ಇಂದಿನ ಕವಿಗಳಷ್ಟೇ ಅಲ್ಲದೆ ಮುಂಬರುವ ಕವಿಗಳೂ ಸಹ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ವಿನಮ್ರತೆಯಿಂದ ಆಶಿಸುತ್ತೇನೆಷೇಕ್ ಕರೀಮುಲ್ಲಾ 1.ಈ ಭೂಮಿಯ ಸುತ್ತಲೂಕಗ್ಗತಲು ಕವಿದಿದೆಸೂರ್ಯೋದಯ ಆಗುವುದೋ? ಇಲ್ಲವೋ?ಕರೀಮ್!ಇನ್ನು ಬೆಳದಿಂಗಳ ರಾತ್ರಿಗಳಿಲ್ಲ. 2.ದುಃಖದ ಮಳೆಯಲ್ಲಿತೋಯ್ದು ಮುದ್ದೆ ಆಗುತ್ತಿದ್ದೇನೆ.ಕುರುಡು ಬಸ್ತಿಗೆ ಕನಿಕರವಿಲ್ಲ.ಕರೀಮ್!ಈ ನೆಲವಿಡೀ ನನ್ನ ಸಮಾಧಿಯಂತೆ ಭಾಸವಾಗುತ್ತಿದೆ. 3.ಕುರ್ತಾದ ಮೇಲೆ ಅತ್ತರು ವಾಸನೆಕುಕ್ಷಿಯಲ್ಲಿ ಕರಕಲು ಕಮಟು ವಾಸನೆಹಸಿವಿಗೂ ಮಿಗಿಲಾದ ಗೆಳೆಯನಿಲ್ಲ.ಕರೀಮ್!ರಾತ್ರಿ ಯಾಕೋ ಗಹಗಹಿಸಿ ನಗುತ್ತಿದೆ. 4.ರಿಕ್ಟರ್ ಮಾಪಕದ ಮೇಲೆ ದೇಶಭಕ್ತಿಬೀಳುತ್ತ ಏಳುತ್ತ ಪರದಾಡುತ್ತಿದೆ.ಗುಂಡಿಗೆಯನ್ನು ಸೀಳಿ ತೋರಿಸಂತಾನೆ.ಕರೀಮ್!ಕಾಷಾಯದ ಮೊಸಳೆ ಕಚ್ಚಿಹಿಡಿದಿದೆ ಅಂತ ಹೇಳು! 5.ಅವನ ಅಂಬುಮಹಾಟವಿಯನ್ನು ಸುಡುತ್ತಲೇ ಇದೆ.ಮೊಹಲ್ಲಾಗಳೆಲ್ಲಾ ಖಾಂಡವ ವನಗಳೇ!ಕರೀಮ್!ನಾಗಾಸ್ತ್ರದಂತೆ ಗುರಿ ತಪ್ಪದಿರಲಿ. 6.ಎದೆಯಲ್ಲಿ ಧಮನಿಗಳುಮುದುಡಿಕೊಳ್ಳುತ್ತಿವೆಭಯದಿಂದಲೋ, ಉದ್ವೇಗದಿಂದಲೋಕರೀಮ್!ಈ ರಾಜ್ಯ ಎಷ್ಟು ಮಂದಿಯ ಉಸಿರು ಕಸಿದಿದೆಯೋ! 7.ಹಕ್ಕಿಗಳೇ ಅಲ್ಲವೆ ಅಂತಬಾಣಗಳ ಬಿಡಬೇಡಅಬಾಬಿಲ್ ಪಕ್ಷಿಗಳಾಗಿ ದಂಡು ಕಟ್ಟುತ್ತವೆಕರೀಮ್!ಅಬ್ರಹಾ ಸೇನೆಯ ಗತಿ ಹೇಳು. 8.ಅವನ ಕಾರಿನ ಅಡಿಯಲ್ಲಿನಾವು ನಾಯಿಯ ಮರಿಗಳಂತೆಅವಕ್ಕೂ ಕೋರೆಗಳಿರುತ್ತವೆ ಅಂತ ಹೇಳು.ಕರೀಮ್!ಕರ್ಬಲಾ ವಿಸ್ತರಿಸುತ್ತಿದೆ ನೋಡು. 9.ಅವನು ನಮ್ಮನ್ನುಎದುರುಮತದವರು ಅಂತಾನೆತಲೆಗೆ ಮೆಟ್ಟುಕೊಂಡಿರುವ ಜೋಡುಗಳನ್ನು ನೋಡಿಕೊಳ್ಳುವುದಿಲ್ಲಕರೀಮ್!ನೀನು ಕಾಲುಗಳಿಂದಲೇ ನಡೆ. 10.ನನ್ನ ವರ್ಣಮಾಲೆಯ ಮೇಲೆಅವರು ಸಂಕೋಲೆಗಳ ಬಲೆ ಬೀಸಿದ್ದಾರೆ.ಅವು ಪರಿವಾಳಗಳಾಗಿ ಅಂಬರಕ್ಕೆ ಹಾರಿದವು.ಕರೀಮ್!ಹುರಿಯನ್ನು ಕತ್ತರಿಸುವ ಇಲಿ ಎಲ್ಲಿ?! 12.ಎದೆಯ ವೇದನೆಹಳೆಯ ಕಬ್ಬಿಣದ ಪೆಟ್ಟಿಗೆಯಂತಲ್ಲದೆಹೊಸ ಅಂಗಿಯಂತೆ ಹೊಳೆಯುತ್ತಿದೆಕರೀಮ್!ಹೊಲಿದ ಚಿಂದಿಗಳನ್ನು ಉಡುವುದರಲ್ಲಿ ನೀನು ದಿಟ್ಟನೇ. ====== ತೆಲುಗು ಮೂಲ: ಷೇಕ್ ಕರೀಮುಲ್ಲಾಕನ್ನಡಕ್ಕೆ : ಧನಪಾಲ ನಾಗರಾಜಪ್ಪ

ಬದರ್ Read Post »

ಪುಸ್ತಕ ಸಂಗಾತಿ

ಒಳಿತಿನ ಉಣಿಸಿನ ಕಥೆಗಳು…

ಪುಸ್ತಕ ಸಂಗಾತಿ ಒಳಿತಿನ ಉಣಿಸಿನ ಕಥೆಗಳು… “ಚಮತ್ಕಾರಿ ಚಾಕಲೇಟ” “ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.ಲೇಖಕರು: ಸೋಮು ಕುದರಿಹಾಳ.ಬೆಲೆ:100ರೂ.ಪ್ರಕಟಣೆ:2020.ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798 ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ ಮಕ್ಕಳ ಕಥಾ ಸಂಕಲನ ತರುವ ಮೂಲಕ ತಮ್ಮ ಸ್ನೇಹದ ವರ್ತುಲ ಇನ್ನೂ ವಿಸ್ತರಿಸಿಕೊಂಡಿದ್ದಾರೆ. ಇರಲಿ. ನಾನು ಶಿಕ್ಷಕನಾಗಿ ಬಹಳ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದರೂ ನನ್ನ ಆಲೋಚನೆಗಳೆಲ್ಲ ಮಕ್ಕಳ ಸುತ್ತಲೇ ಅರಳಿಕೊಳ್ಳುತ್ತಿರುತ್ತವೆ. ಅದು ಯಾವುದೋ ಮಗುವಿನ ತುಂಟಾಟವನ್ನೋ, ಪ್ರತಿಭೆಯನ್ನೋ, ಮಕ್ಕಳ ಸುತ್ತಲೂ ನಾವು ನಿರ್ಮಿಸಬೇಕಾದ ಪರಿಸರವನ್ನೋ, ಅವರ ಖುಷಿ ಹೆಚ್ಚಿಸುವ ಹಂಬಲವನ್ನೋ, ಮಕ್ಕಳು ಅನುಭವಿಸುವ ನೋವನ್ನೋ ಧ್ಯಾನಿಸುತ್ತಿರುತ್ತದೆ. ಹೌದು ಶಿಕ್ಷಕರಾಗಿದ್ದವರಿಗೆ ಹಾಗೂ ಮಕ್ಕಳ ಒಳಿತನ್ನು ಅಪಾರವಾಗಿ ಪ್ರೀತಿಸುವವರಿಗೆಲ್ಲ ಹಾಗೇ ಅನಿಸುತ್ತದೆ. ಇದೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಸೋಮು ಕುದರೀಹಾಳ ಅವರ ‘ಚಮತ್ಕಾರಿ ಚಾಕಲೇಟ’ ಕಥಾಸಂಕಲನ ಮಕ್ಕಳ ಸುತ್ತಲೇ ಹರಡಿಕೊಳ್ಳುತ್ತ ಒಂದಿಷ್ಟು ಮಕ್ಕಳಿಗೆ ಒಳಿತಿನ ಉಣಿಸನ್ನು ಉಣಿಸಬೇಕು ಎಂಬ ಚೌಕಟ್ಟನ್ನು ಹಾಕಿಕೊಳ್ಳುತ್ತ ಅರಳಿದ ಕಥೆಗಳು ಎಂದು ನನಗೆ ಅನಿಸುತ್ತದೆ. ಸೋಮು ಅವರು ಇಲ್ಲಿ ಮಕ್ಕಳ ಸುತ್ತಲಿನ ಹಲವಾರು ಸಂಗತಿಗಳನ್ನು ಕಥೆಯಾಗಿಸಿದ್ದಾರೆ. ಇಲ್ಲಿ ಕೆಲವು ಜಾನಪದ ಮಾದರಿಗಳಿವೆ ಹಾಗೂ ಅವನ್ನು ಇಂದಿನ ತುರ್ತಿಗೆ ಅಗತ್ಯವಾದ ಕುಲಾವಿ ಆಗಿಸುವ ಪ್ರಯತ್ನವೂ ಇದೆ. ಬಹು ಪ್ರಚಲಿತವಾದ ಕಾಗಕ್ಕ ಗುಬ್ಬಕ್ಜಕನ ಕಥೆಯನ್ನೇ ಮಕ್ಕಳು ಇಂದು ಉಪಯೋಗಿಸುವ ಮೊಬೈಲ ಬಳಕೆಗೆ ಬೇಕಾಗುವ ಡಾಟಾ ಕದಿಯುವ ಕಾಗೆಯನ್ನಾಗಿಸಿ ಗುಬ್ಬಿಗೆ ಮೋಸ ಮಾಡುವಂತೆÀ ಕಥೆಯನ್ನು ಹೆಣೆದಿದ್ದಾರೆ. ಡಾಟಾ… ಪಾಸವರ್ಡ… ಅದರ ಸಾಫಲ್ಯತೆ ಗೆಲ್ಲಾ ಮಕ್ಕಳು ವಿಸ್ತರಿಸಿ ತಿಳುವಳಿಕೆ ಮೂಡಲಿ ಎಂಬ ಹಂಬಲದೊಂದಿಗೆ ಮೋಸ ಸರಿಯಲ್ಲ ಎನ್ನುವ ತಿಳುವಳಿಕೆಯನ್ನೂ ಕಥೆ ಇಡಲಿ ಎಂಬ ಹಂಬಲವಿದೆ.   ಯಾರು ಹೆಚ್ಚು ಕಥೆಯಲ್ಲಿ ಪೆನ್ನು, ಪೆನ್ಸಿಲ್, ಕ್ರೆಯಾನ್ಸ, ರಬ್ಬರ ಮುಂತಾದ ಮಕ್ಕಳ ಬ್ಯಾಗಿನಲ್ಲಿ ಯಾವಾಗಲೂ ಇರುವ ಅವರಿಗೆ ಆಪ್ತವಾದ ವಸ್ತುಗಳ ಸಂಗತಿ ಇದೆ. ಇವೆಲ್ಲ ತಾನು ಹೆಚ್ಚು ತಾನು ಹೆಚ್ಚು ಎಂದು ಕಿತ್ತಾಡಿ ಚಲ್ಲಾಪಿಲ್ಲಿ ಆಗುವುದು ಇದರಿಂದಾಗಿ ಅವು ಕಸದ ಬುಟ್ಟಿ ಸೇರುವುದು ಇದೆ. ಎಲ್ಲರೂ ಒಂದಾಗಿರಬೇಕು, ಜಗಳವಾಡಬಾರದು ಎಂದು ಹೇಳುವ ಈ ಕಥೆ ಮಕ್ಕಳನ್ನು ಸೆಳೆಯುತ್ತದೆ. ಶಾಲೆಯಲ್ಲಿ ನಡೆಯುವ ವಾಸ್ತವ ಸಂಗತಿಯ ಎಳೆಯೊಂದನ್ನು ಹಿಡಿದು ಬರೆದಿರುವ ‘ತಿಮ್ಮನ ಸಾಲ’ ಕಥೆಯಲ್ಲಿ ತಿಮ್ಮ ಹಿರಿಯರೊಬ್ಬರಿಗೆ ಸಹಾಯ ಮಾಡುವುದಕ್ಕಾಗಿ ಕೌಜುಗ ಹಕ್ಕಿಯನ್ನು ಹಣಕ್ಕೆ ಪಡೆದು ಸಾಲಗಾರನಾಗುತ್ತಾನೆ. ಇದರಿಂದ ಮಕ್ಕಳೆಲ್ಲ ಅವನನ್ನು ಸಾಲಗಾರನೆಂದು ಹೀಯಾಳಿಸುತ್ತಾರೆ. ಆದರೆ ತಿಮ್ಮನ ನಿಜವಾದ ಉದ್ಧೇಶ ತಿಳಿದ ಶಿಕ್ಷಕರು ಅವನ ಕುರಿತಾದ ತಪ್ಪು ಅಭಿಪ್ರಾಯ ಹೋಗಲಾಡಿಸುತ್ತಾರೆ. ಹೀಗೆ ವಾಸ್ತವಕ್ಕೆ ಹತ್ತಿರವಾದ ಇಂತಹ ಕಥೆಗಳು ಮಕ್ಕಳನ್ನು ಹೆಚ್ಚುಬೇಗ ಆವರಿಸಿಕೊಳ್ಳುತ್ತವೆ ಎಂದು ನನಗೆ ಅನಿಸುತ್ತದೆ. ಅಜ್ಜ ಹೇಳುವ ಚಾಕಲೇಟ ತಿನ್ನುತ್ತ ಚೆನ್ನ ಎನ್ನುವ ಬಾಲಕ ಎಡಬಿಡದ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಗೆಲುವು ಕಾಣುವುದನ್ನು ‘ಚಮತ್ಕಾರಿ ಚಾಕಲೇಟ’ ಕಥೆÀ ಹೇಳುತ್ತದೆ. ಆತ್ಮವಿಶ್ವಾಸ ಮತ್ತು ಪ್ರಯತ್ನಗಳು ಮುಖ್ಯ ಎಂಬ ಸಂದೇಶ ನೀಡುತ್ತದೆ ಈ ಕಥೆ. ವಿಚಿತ್ರ ಸುದ್ದಿ ಹೇಳದಿದ್ದರೆ ಸಾಹುಕಾರ ಕೆಲಸದಿಂದ ತೆಗೆದುಹಾಕುತ್ತಿದ್ದ. ವಿಚಿತ್ರ ಸುದ್ದಿಯ ಮೂಲಕವೇ ಸಾಹುಕಾರ ರಾತ್ರಿ ಪೂರಾ ಸೈಕಲ್ ಹೊಡೆಯುವಂತೆ ಮಾಡಿ ಅವನಿಗೆ ಬುದ್ಧಿ ಕಲಿಸುವುದು ಒಂದು ಕಥೆಯಾದರೆ… ಅಜ್ಜ ಕೊಡುವ ಹಣದಿಂದ ಏನಾದರೂ ಖರೀದಿಸುವ ರೋಸಿ ಎನ್ನುವ ಬಾಲಕಿ ಅಂಗಡಿಯವನೊಬ್ಬನ ಮೋಸದಿಂದ ತೊಂದರೆಗೆ ಒಳಗಾಗುತ್ತಾಳೆ. ಆದರೆ ತನ್ನ ಜಾಣತನದಿಂದ ತಾನು ಕಳೆದುಕೊಂಡ ಹಣ ಪುನಹ ದೊರಕಿಸಿಕೊಳ್ಳುವ ಕಥೆ ಇನ್ನೊಂದು.  ‘ಮನಸ್ಸಿನಂತೆ ಫಲ’, ‘ಕೆಟ್ಟ ಮೇಲೆ ಬುದ್ಧಿ ಬಂತು’ ಮುಂತಾದ ಕಥೆಗಳ ತಲೆಬರಹಗಳೇ ಉದ್ಧೇಶಗಳನ್ನು ಹೇಳಿಬಿಡುತ್ತವೆಯಾದರೂ ಒಳ್ಳೆಯ ಮನಸ್ಸು, ಹಿರಿಯರ ಜಾಣ್ಮೆ ಎಲ್ಲ ನಮ್ಮ ಮುಂದೆ ಇಡುತ್ತ ಗೆಲುವು ಪಡೆಯುತ್ತವೆ. ಸೋಮು ಕುದರಿಹಾಳ ಅವರು ಮಕ್ಕಳ ಒಳಿತಿನ ವಿಸ್ತಾರಕ್ಕೆ ಯತ್ನಿಸುತ್ತ ಅವರಿಗೆ ಆಪ್ತವಾಗುವ ಕಥೆಗಳ ಮೂಲಕವೇ ಪಠ್ಯಗಳಿಗಿಂತಲೂ ವಿಸ್ತಾರದ ಉಣಿಸನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಮೊದಲ ಪ್ರಯತ್ನ. ದೊಡ್ಡವರಿಗಾಗಿಯೂ ಬರೆಯುತ್ತ, ಒಳ್ಳೊಳ್ಳೆಯ ಕವಿತೆಗಳನ್ನು ನೀಡುತ್ತ ನಮ್ಮ ಮುಂದಿರುವ ಸೋಮು ಅವರು ಮಕ್ಕಳ ಪ್ರೀತಿಯನ್ನು ಈ ಸಂಕಲನದ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಈ ಪ್ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾತ್ಮಕವಾಗಿ ಅರಳುವ ಎಲ್ಲ ಸಾಧ್ಯತೆಗಳಿಗೆ ಅವರು ತೆರೆದುಕೊಳ್ಳಿಲಿ ಎಂದು ಹೇಳುತ್ತ ಒಂದು ಒಳ್ಳೆಯ ಪ್ರಯತ್ನದೊಂದಿಗೆ ನಮ್ಮೊಂದಿಗಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತ… ತಾವೆಲ್ಲರೂ ಅವರ ಕಥಾ ಸಂಕಲನ ಓದಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ***************************************************** ತಮ್ಮಣ್ಣ ಬೀಗಾರ.

ಒಳಿತಿನ ಉಣಿಸಿನ ಕಥೆಗಳು… Read Post »

ಪುಸ್ತಕ ಸಂಗಾತಿ

ರಾಗವಿಲ್ಲದಿದ್ದರೂ ಸರಿ

ಪುಸ್ತಕ ಸಂಗಾತಿ ರಾಗವಿಲ್ಲದಿದ್ದರೂ ಸರಿ ಕೃತಿ…..ರಾಗವಿಲ್ಲದಿದ್ದರೂ ಸರಿ   ಗಜಲ್ ಸಂಕಲನ ಲೇಖಕರು.‌.‌‌‌‌ಉಮರ್ ದೇವರಮನಿ ಪ್ರಕಾಶಕರು…….ಸಮದ್ ಪ್ರಕಾಶನ  ಮಾನವಿ ಜಿ.ರಾಯಚೂರು * ಉಮರ್ ದೇವರಮನಿ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಾನವಿ ನಗರದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಭಾಷಾ  ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸ ಕರಾಗಿದ್ದರೂ ಪ್ರವೃತ್ತಿಯಲ್ಲಿಸಾಹಿತಿಗಳಾಗಿದ್ದಾರೆ.ಮೂರು ವರ್ಷಗಳ ಹಿಂದೆ ಕಾವ್ಯ ಕಡಲು ವಾಟ್ಸಪ್ ಗುಂಪಿನಲ್ಲಿ ಪರಿಚಯ ವಾದವರು ,ಆಗಾಗ ಗುಂಪಿನಲ್ಲಿ ಉತ್ತಮವಾದ ಗಜಲ್ಗಳನ್ನು  ಓದಲು ಹಾಕುತ್ತಿದ್ದರು.ಈಗ ಅವರು ತಮ್ಮ ಪ್ರಕಟಿತ ಮೊದಲ ಗಜಲ್ ಸಂಕಲನ *ರಾಗವಿಲ್ಲದಿದ್ದರೂ ಸರಿ * ಎಂಬ ಕೃತಿಯನ್ನು  ಓದಲು ಕಳಿಸಿಕೊಟ್ಟಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರ, ಕನಾ೯ಟಕ ಸರಕಾರ ಯುವ ಬರಹಗಾರರ ಚೊಚ್ಚಲು ಕೃತಿ ಪ್ರಕಟಿಸಲು ಕೊಡುವ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಉಮರ್ ದೇವರಮನಿ ಯವರು ಮಿತ ಭಾಷಿ,ಸಂವೇದನಾಶೀಲ ಕವಿಯಾಗಿದ್ದಾರೆ. ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಅನೇಕ ಉದು೯ ಕವಿಗಳ ಉದು೯ ಗಜಲ್ ಗಳನ್ನು ಓದಿ  ಆಳವಾಗಿ ಅದರ ಛಂದೋಬದ್ಧತೆ ಯನ್ನು ಗೇಯತೆ ಲಾಲಿತ್ಯ ತಿಳಿದುಕೊಂಡು ಕನ್ನಡ ಗಜಲ್ ಗಳ ಛಂದೋಬದ್ಧತೆ ಯನ್ನು ಅರಿತುಕೊಂಡು ಕನ್ನಡ ಗಜಲ್ಗಳನ್ನು ರಚಿಸಿ ಓದುಗರಿಗೆ ಉತ್ತಮವಾದ  ಕನ್ನಡ ಗಜಲ್ ಗಳ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಕನ್ನಡ ಗಜಲ್ ಸಂಕಲನಕ್ಕೆ ಖ್ಯಾತ ಹಿರಿಯ ಕವಿಯತ್ರಿ,ಗಜಲ್ ಕಾತಿ೯,ವಿಮರ್ಶಕಿ ಚಿಂತಕಿ ಹಾಗೂ ಸಹೃದಯಿ ಗಳಾದ ಮೆಹಬೂಬ್ ಬೀ ಶೇಖ ಅವರು ಸಂಕಲನಕ್ಕೆ ಮೌಲಿಕವಾದ ಮುನ್ನುಡಿ ಬರೆದಿದ್ದಾರೆ. ಮತ್ತು ಗಜಲ್ ಪರಂಪರೆ ಬಗ್ಗೆ ,ಗಜಲ್ಗಳಿಗೆ ಬಳಿಸುವ ಸಾಂಕೇತಿಕ  ಭಾಷೆಯ ಬಗ್ಗೆ ,ರೂಪಕಗಳ ಬಗ್ಗೆ, ಹಾಗೂ ಉಮರ್ ದೇವರಮನಿಯವರ “ರಾಗವಿಲ್ಲದಿದ್ದರೂ ಸರಿ” ಸಂಕಲನದ ಬಗ್ಗೆ ವಿಮಶಾ೯ತ್ಮಕವಾಗಿ ವಿವರವಾಗಿ ಬರೆದಿದ್ದಾರೆ, ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆ.           ಸಂಕಲನಕ್ಕೆ ಬೆನ್ನುಡಿಯನ್ನು ಹಿರಿಯ ಸಾಹಿತಿಗಳಾದ ಕೇಶವ ಮಳಗಿ ಯವರು ವಿಮಶಾ೯ತ್ಮಕ ವಾದ ಬೆನ್ನುಡಿಯನ್ನು ಬರೆದು ದೇರವಮನಿ ಯವರ ಬೆನ್ನುತಟ್ಟಿದ್ದಾರೆ.     ಶ್ರೇಷ್ಠ ಗಜಲ್ ಕಾರರಾದ”ಅಲ್ಲಮ” ಗಿರೀಶ ಜಕಾಪುರೆ ಯವರು ದೇವರಮನಿಯವರು ತಮ್ಮ ಇಷ್ಟವಾದ ಗಜಲ್ ಕಾರರೆಂದು ಸಂವೇದನಾಶೀಲ ಕವಿ ಎಂದು ಉತ್ತಮ ಗಜಲ್ ಸಾಹಿತ್ಯದ ಗಂಭೀರ ಗಜಲ್ ಕೃಷಿಕರೆಂದು ಹೇಳಿದ್ದಾರೆ.             ಹಿರಿಯ ಗಜಲ್ ಕಾರರಾದ ಡಾ.ಗೋವಿಂದ ಹೆಗಡೆ ಯವರು ಉಮರ್ ದೇವರಮನಿ ಯವರು ಗಜಲ್ನ ನಾಡಿ ಮಿಡಿತವನ್ನು ಬಲ್ಲವರಾಗಿದ್ದಾರೆಂದು,ಇದು ಇವರ ಮೊದಲ ಸಂಕಲನವಾಗಿದ್ದರೂ ಗಜಲ್ ಲೋಕದ ಹೊಸ ವಿಸ್ತಾರಗಳನ್ನು ನಮಗೆ ಕಾಣುವಂತೆ ಗಜಲ್ ಗಳನ್ನು ರಚಿಸಿದ್ದಾರೆಂದು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ                       ಜಬೀವುಲ್ಲಾ ಎಂ ಅಸದ್ ಅವರು ಗಜಲ್ ಕಾರರು ಹಾಗೂ ಚಿತ್ರಕಲಾವಿದರೂ ಆಗಿದ್ದು ಈ ಸಂಕಲನದ ಎಲ್ಲಾ ಗಜಲ್ ಗಳಿಗೆ ಅರ್ಥ ಪೂರ್ಣವಾದ ಸುಂದರ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆ, ಹಾಗೂ ಕೃತಿಯಲ್ಲಿ ಬೆರಗು ಹುಟ್ಟಿಸುವ ರೂಪಕಗಳು ,ಪರವಶಗೊಳಿಸುವ ಪ್ರತಿಮೆಗಳು ದಿವ್ಯ ಪ್ರಭೆಯ ಮೂಲಕ ಓದುಗನ ಮೈ ಮನಸ್ಸು ಗಳನ್ನು ಆವರಿಸಿ ದೈವಿಕ ಸಾಕ್ಷಾತ್ಕರವನ್ನು ಈ ಗಜಲ್ ಗಳು ಪ್ರಸಾದಿಸುತ್ತವೆಂದು,ತಮ್ಮ ಅನಿಸಿಕೆಯಲ್ಲಿ ಬರೆದಿದ್ದಾರೆ.    ಸಂಕಲನದ ಮುಖ ಪುಟವನ್ನು ರಟ್ಟಿಹಳ್ಳಿ ರಾಘವಾಂಕುರ  ಅವರು ಸೊಗಸಾಗಿ ಸಿದ್ದ ಪಡಿಸಿದ್ದಾರೆ.               ಉಮರ್ ದೇವರಮನಿ ಯವರ ವ್ಯಾಖ್ಯಾನ ದಲ್ಲಿ ಗಜಲ್ ಎಂದರೆ “ಆತ್ಮದೊಂದಗಿನ ಸಂವಾದ ,ಅದು ನನಗೆ ದಕ್ಕಿದ್ದಲ್ಲ ನನ್ನಾತ್ಮಕ್ಕೆ ದಕ್ಕಿದ್ದು,ಏಕಾಂತದಲ್ಲಿ ಪ್ರಾಥಿ೯ಸಿದ್ದು,ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳೊಂದಿಗಿನ  ನನ್ನ ಅಂತರಂಗದ ಮನುಷ್ಯತ್ವದ ನೋವಿನ ಪಿಸುನುಡಿಯ ರಾಗ” ಎಂದು ಹೇಳಿದ್ದಾರೆ. ಉಮರ್ ದೇವರಮನಿ ಯವರು ಕೇವಲ ಪ್ರೀತಿ ,ಪ್ರೇಮ,ವಿರಹ,ಗಳಿಗೆ ಮಾತ್ರ ಗಜಲ್ ಗಳನ್ನು ರಚಿಸದೆ ಸಮುದಾಯ ಎದುರಿಸುತ್ತಿರುವ ತಲ್ಲಣಗಳು   ಹಾಗೂ ಅವಮಾನಗಳನ್ನು ಮೂಕನಾಗಿ ನೋಡೂತ್ತಾ ಧಿಗ್ಬ್ರಾಂತಿ ಗೊಳಗಾಗಿ ಅವುಗಳಿಗೆ ಸ್ವಂದಿಸಿ ಗಜಲ್ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ” ಎಂಬ ಕನ್ನಡ ಗಜಲ್ ಸಂಕಲನದಲ್ಲಿ ಒಟ್ಟು ೫೩ ಗಜಲ್ಗಳಿದ್ದು ಪ್ರತಿಗಜಲ್ ಗಳಿಗೆ  ಶೀರ್ಷಿಕೆ ಯನ್ನು ಕೊಟ್ಟಿದ್ದಾರೆ ಮತ್ತು ಭಾವಕ್ಕೆ ತಕ್ಕಂತೆ ಕಲಾಕಾರರಿಂದ ಚಿತ್ರಗಳನ್ನು  ತೆಗೆದಸಿದ್ದಾರೆ.ಸಂಕಲನದ ಗಜಲ್ಗಳನ್ನು ಓದುತ್ತಾ ಹೋದಂತೆ ಗಜಲ್ ಗಳಿಗೆ ಬೇಕಾಗುವ ಭಾವತೀವ್ರತೆ,ರೂಪಕಗಳು,ಪ್ರತೀಕಗಳನ್ನು ಬಳಿಸಿ ಗಜಲ್ ರಚಿಸಿದ್ದಾರೆ.ಗಜಲ್ದ ಮಿಸ್ರಾ ಗಳು ಉದ್ದವಿರದೆ(ಚೋಟಿ ಬೆಹರ್)ಕಡಿಮೆ ಶಬ್ದ ಗಳಲ್ಲಿ ಹೆಚ್ಚಿನ ಭಾವತುಂಬಿದ್ದಾರೆ.ಈ ಸಂಕಲನದಲ್ಲಿ ಹೆಚ್ಚಿಗೆ ಗಮನಕ್ಕೆ ಬರುವ ಅಂಶವೆಂದರೆ ಬಹುತೇಕ ಗಜಲ್ ಗಳು ಸಮಾಜಮುಖಿಯಾಗಿವೆ.ಕವಿಯು ಸಮಾಜದ ದುಃಖವನ್ನು ತನ್ನದಾಗಿಸಿಕೊಂಡು ನೊಂದು ಗಜಲ್ ಮೂಲಕ ಸಾಂತ್ವನ ಹೇಳುತ್ತಾ ಮುಲಾಮ ಹಚ್ಚ ಬಯಸಿದ್ದಾರೆ.ವಿಶ್ವವೇ ಕುಟುಂಬ ಎಂಬಂತೆ ಕವಿಯು ವಿಶ್ವದ ನೋವಿಗೆ ನೊಂದು ಮನುಕುಲ ಉಧ್ಧಾರದ ಆಶಯವನ್ನು ಎತ್ತಿ ಹಿಡಿದಿದ್ದಾರೆ.ಗಜಲ್ ಕಾರರಿಗೆ ಇರಬೇಕಾದ ಧ್ಯಾನಸ್ಥ ಮನದಿಂದ ತನ್ನಾತ್ಮದೊಂದಿಗೆ ಸಂವಾದಿಸಿ ಗಜಲ್ ಗಳನ್ನು ರಚಿಸಿದ್ದಾರೆ. ಉಮರ್ ದೇವರಮನಿ ಯವರ “ರಾಗವಿಲ್ಲದಿದ್ದರೂ ಸರಿ ” ಎಂಬ ಗಜಲ್ ಸಂಕಲನದಲ್ಲಿ ಮುರದ್ದಫ್,ಗೈರಮುರದ್ದಫ್, ಮುಸಲ್ ಸಲ್, ಗೈರ್ ಮುಸಲ್ ಸಲ್ ,ಆಜಾದ್ ಗಜಲ್ ,ಮತ್ತು ರಾಜಕೀಯ ಗಜಲ್ ಗಳನ್ನು ಓದಬಹುದು.ಕೆಲವು ಗಜಲ್ಗಳು ಛಂದೋಬದ್ಧ ವಾಗಿದ್ದರೆ ಇನ್ನೂ ಕೆಲವು ಮುಕ್ತ ಛಂದಸ್ಸು ಗಳಾಗಿರುವುದರಿಂದ ದೇವರಮನಿ ಯವರು ತಮ್ಮ ಸಂಕಲನಕ್ಕೆ “ರಾಗವಿಲ್ಲದಿದ್ದರೂ ಸರಿ” ಎಂಬ ಶೀರ್ಷಿಕೆಯನ್ನು ಸಂಕಲನಕ್ಕೆ ಇಟ್ಟಂತೆ ಅನಿಸುತ್ತದೆ ಕೆಲವು ಗಜಲ್ ಗಳಲ್ಲಿ ಬಳಿಸಿದ ರೂಪಕಗಳು ವಚನ ಸಾಹಿತ್ಯ, ತತ್ವಪದಗಳ ಸಾಹಿತ್ಯ, ನುಡಿಗಟ್ಟುಗಳನ್ನು ಬಳಿಸಿದ್ದು ಕಂಡುಬರುತ್ತದೆ.ಮತ್ತು ಕೆಲವು ಗಜಲ್ ಗಳನ್ನು ಓದಿದಾಗ ಗಾಲಿಬ್ ಅವರ ಗಜಲ್ಗಳ ಛಾಯೆ ಬಿದ್ದಂತೆ ಭಾಸವಾಗುತ್ತದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಸಂಕಲನವು ಪ್ರೌಢತೆಯಿಂದ ಕೂಡಿದ್ದು ಯುವ ಗಜಲ್ ಕಾರರಿಗೆ ಮಾರ್ಗದರ್ಶನ ಮಾಡುವಂತಹ ಕೃತಿಯಾಗಿದೆ. *ನನ್ನ ಹೃದಯ ದಲ್ಲಿ ನೆಲೆಸಿದ ಮತ್ತು ಅನುರಾಗದ ಅಲೆಯನ್ನು ಎಬ್ಬಿಸಿದ ಕೆಲವು ಗಜಲ್ ಗಳ ಮಿಸ್ರಾ ಗಳನ್ನು ಇಲ್ಲಿ ಸಾದರ ಪಡಿಸಲು ಇಚ್ಛಿಸುವೆ * “ಪ್ರೀತಿಯ ಮೈಖಾನೆಯಲಿ ಅಪರಿಚಿತರು ಇರುವುದಿಲ್ಲ ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ” “ಕಲ್ಲು ಹೃದಯ ಗಳ ಮೇಲೆ ಹೂವು ಅರಳುವುದಿಲ್ಲ ನೀ ಪ್ರೀತಿಯ ಹನಿಯಾಗಬೇಕು ನನ್ನ ಈ ನೆಲಕೆ” “ ಚಿಗುರೊಡೆಯಬೇಕು ನಿನ್ನ ಎದೆಗೆ ಬಿದ್ದ ಬೀಜ ಹೇಗೆ ಉಸಿರಾಡುವುದು ಮೊಳಕೆ ಒಲವು ಮಣ್ಣಾಗು” “ಮೌನ ಮುರಿದು ಮಾತನಾಡಬೇಕಿದೆ”ಉಮರ್” ಮೂಕ ಮಗುವಿಗೆ ಎಂದು ಹಾಲು ಸಿಗಲೇ ಇಲ್ಲ” “ಮುಲ್ಲಾ ನೀನು ಕರೆಯಲಿಲ್ಲ ನಾ ಅಲ್ಲಾಹನಿಗಾಗಿ ಬರಲೇ ಇಲ್ಲ ಮಸೀದಿಯೇನೋ ಕಟ್ಟಿಸಿದೆ ನಮಾಜು ಅಲ್ಲಿ ಮಾಡಲೇ ಇಲ್ಲ” “ಮುಖ ಸ್ವಚ್ಛ ವಾಗುವುದಿಲ್ಲ ಕನ್ನಡಿಯನ್ನೆಷ್ಟೇ ಉಜ್ಜುತಿರು ನಿನ್ನ ಬಾಗಿಲು ತೆರೆಯುವುದಿಲ್ಲ ಬೇರೆ ಕದ ಎಷ್ಟೇ ತಟ್ಟುತಿರು” “ಎಲ್ಲರು ತಲೆದೂಗುತಿದ್ದಾರೆ ವಿರಹದ ಗೀತೆ ಕೇಳಿ ನೋವುಂಡ ಗಾಯ ಪ್ರೀತಿಯನು ಬೇಡುತಿದೆ” “ಬುದ್ಧ ಬಸವ ಏಸು ಪೈಗಂಬರರೇ ನೀವೆ ಕೇಳಿ ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ” “ತೂತು ಬಿದ್ದ ಹಡಗು ಎಂದೂ ದಡ ಸೇರುವುದಿಲ್ಲ ತುಕ್ಕು ಹಿಡಿದ ಕಬ್ಬಿಣ  ಎಂದೂ ತೂತು ಮುಚ್ಚುವುದಿಲ್ಲ” “ಇನ್ನೂ ಉಸಿರಾಡುವ ಹೆಣಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ ಬಿಕ್ಕಳಿಸಿತಿರುವ ಪ್ರಜೆಗಳ ಮೇಲೆ ಚುನಾವಣೆಗೆ ನಿಂತಿದ್ದಾರೆ” “ರೊಟ್ಟಿ ಕೇಳಿದರೆ ಹೇಸಿಗೆ ತಿನ್ನುಎನುವವರೆ ಹೆಚ್ಚು ಒಂದು ರೂಪಾಯಿ ಇವರಿಂದ ಕೊಡಲಾಗಲಿಲ್ಲ ಆನಂದ” “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ ” ಉಮರ್” ದ್ವೇಷವಾರಿಸಲು ಪ್ರೀತಿಯ ಒರತೆ ತೋಡಿಸುವುದಾದರೆ ತೋಡಿಸು” “ನಿನ್ನ ಹೂದೋಟದಲಿ ಹಾರಾಡುವ ಮರಿದುಂಬಿ ನಾ ಭರವಸೆಯ ಹೂ ಅರಳಿದಾಗಲೆಲ್ಲಾ ಹಗುರವಾಗುತ್ತೇನೆ”            ಉಮರ್ ದೇವರಮನಿ ಯವರು “ಉಮರ್” ಎಂಬ ತಖಲ್ಲುಸ್ (ಕಾವ್ಯನಾಮ) ವಾಗಿಟ್ಟುಕೊಂಡು ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ.ಈ ತಖಲ್ಲುಸ್ ಓದಿದಾಗ ವಿಶ್ವ ಕಂಡ ಮಹಾನ್ ಕವಿ “ಉಮರ್ ಖೈಯಾಮ್” ನೆನಪಾಗುತ್ತಾರೆ.ಉಮರ್ ದೇವರಮನಿ ಯವರ ಗಜಲ್ ರಚನೆ ಸರಳವಾಗಿ ,ವಾಸ್ತವವಾಗಿ, ಶಬ್ದ ಗಳ ಮಿತ ಬಳಿಕೆಯಲ್ಲಿ ಸಂವೇದನಾಶೀಲವಾದ ಭಾವ ತೀವ್ರತೆಯನ್ನು ತುಂಬಿದ್ದಾರೆ.ಗಜಲ್ ಒಂದು ಹಾಡುಗಬ್ಬ ವೆಂದು ಅವರು ಅರಿತಿದ್ದಾರೆ.ಪ್ರೀತಿ, ಪ್ರೇಮ ವಿರಹ , ವೈರಾಗ್ಯ, ಸಮಾನತೆ ,ಸ್ವಾತಂತ್ರ, ಶಾಂತಿ ಹೀಗೆ ಎಲ್ಲಾ ವಿಷಯಗಳಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ,ಲೌಕಿಕದಿಂದ ಅಲೌಕಿಕ ಕಡೆ ಕೊಂಡೊಯ್ಯತ್ತಾರೆ ಉಮರ್ ದೇವರಮನಿಯವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಓದುಗರಿಗೆ ತೃಪ್ತಿ ಪಡಿಸುತ್ತಾರೆಂಬ ಭರವಸೆಯ ಗಜಲ್ ಕಾರರಾಗಿದ್ದಾರೆ.ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಇವರಿಂದ  ಅನೇಕ ಗಜಲ್ ಕೃತಿಗಳು ಬರಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆನು. *****************************************************  ಪ್ರಭಾವತಿ ಎಸ್ ದೇಸಾಯಿ

ರಾಗವಿಲ್ಲದಿದ್ದರೂ ಸರಿ Read Post »

ಪುಸ್ತಕ ಸಂಗಾತಿ

ಮಾಯಾಕನ್ನಡಿ

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು

ಮಾಯಾಕನ್ನಡಿ Read Post »

You cannot copy content of this page

Scroll to Top