ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ವರ್ತಮಾನ

“ಓಟದಿಂದ ಕಲಿಯುವ ಆಡಳಿತದ ಪಾಠ” ಗಜಾನನ ಮಹಾಲೆ  ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ರೀತಿಯ ಓಟಗಳಿರುತ್ತವೆ. 5000 ಮೀಟರ್‌ ಹಾಗೂ 100 ಮೀಟರ್‌ ಓಟಗಳ ಎರಡು ವಿಭಾಗದ ಮಧ್ಯೆ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸ ಓಡುವ ದೂರದ ಬಗ್ಗೆ ಮಾತ್ರವಲ್ಲ. ಓಡುವ ವಿಧಾನದಲ್ಲಿಯೂ ವ್ಯತ್ಯಾಸವಿದ್ದು ಸರಿಯಾದ ವಿಧಾನದಲ್ಲಿ ಓಡಿದ ಸ್ಪರ್ಧಿ ಮೊದಲಿಗನಾಗುವ ಸಂಭವ ಹೆಚ್ಚಿರುತ್ತದೆ. 100 ಮೀಟರ್ ಓಟದಲ್ಲಿ ಪ್ರಾರಂಭದಿಂದ ಅತ್ಯಂತ ವೇಗವಾಗಿ ಓಡಿದವರು ಮತ್ತು ಆ ಸಾಮರ್ಥ್ಯವಿದ್ದವರು ಪ್ರಥಮ ಸ್ಥಾನ ಗಳಿಸುತ್ತಾರೆ. 5000 ಮೀಟರ್ ಓಟದಲ್ಲಿ ಈ ವಿಧಾನ ಪ್ರಯೋಜನಕಾರಿಯಲ್ಲ. ಈ ವಿಭಾಗದಲ್ಲಿ ಮೊದಲು ನಿಧಾನವಾಗಿ ಪ್ರಾರಂಭಿಸಿ, ನಿರಂತರವಾಗಿ ಓಡುತ್ತಿದ್ದು,ಗುರಿಗೆ ಸಮೀಪ ಬಂದಾಗ ವೇಗವನ್ನು ಹೆಚ್ಚು ಮಾಡಿ ಗುರಿ ತಲುಪಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. 100 ಮೀಟರ್ ಓಟದಲ್ಲಿ ಓಡಿದಂತೆ ಮೊದಲೇ ವೇಗವಾಗಿ ಓಡಲು ಪ್ರಾರಂಭಿಸಿದರೆ, ಮಧ್ಯದಲ್ಲಿಯೇ ಸುಸ್ತಾಗಿ ಹೊರ ಹೋಗುವ ಸಂಭವ ಹೆಚ್ಚು. ಒಂದು ರಾಜ್ಯದ ಅಥವಾ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಓಟದ ಸ್ಪರ್ಧೆಯ ಟೆಕ್ನಿಕ್ನ ಅರಿವಿದ್ದರೆ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಅಥವಾ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಪ್ರಾರಂಭಿಸುವ ಯೋಜನೆಗಳು, ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಗಳು,ಆಡಳಿತದ ವಿವಿಧ ಹಂತಗಳಲ್ಲಿ ಮಾಡುವ ಬದಲಾವಣೆಗಳು, ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಮಾಡುವ ತಿದ್ದುಪಡಿಗಳು ಇವು ಯಶಸ್ವಿಯಾಗಬೇಕಾದರೆ, ಓಟದ ಟೆಕ್ನಿಕ್ ನ ಅರಿವಿದ್ದರೆ ಯಶಸ್ಸು ಸಾಧ್ಯ.  ಯಾವುದನ್ನು ವೇಗವಾಗಿ ಮಾಡಬೇಕು ಹಾಗೂ ಯಾವುದನ್ನು ನಿಧಾನವಾಗಿ ಪ್ರಾರಂಭಿಸಿ ಅನಂತರ ವೇಗವನ್ನು ಹೆಚ್ಚಿಸಬೇಕು ಎಂಬ ಅರಿವಿಲ್ಲದಿದ್ದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತು ಆಡಳಿತದ ವಿಷಯದಲ್ಲಿಯೂ ಅನ್ವಯಿಸುತ್ತದೆ… *********************************************************

ವರ್ತಮಾನ Read Post »

ಇತರೆ

ಶಿಕ್ಷಣ

ಶಿಕ್ಷಣದ ಸವಾಲುಗಳ ಬೆಟ್ಟು ಯಾರ ಕಡೆಗೆ? ಶೃತಿ ಮೇಲಿಸೀಮೆ ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವ ದಿವ್ಯಾಸ್ತ್ರವಾಗಿದೆ. ಈ ಶಿಕ್ಷಣವು ಮುಂದಿನ ಪೀಳಿಗೆಗೆ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ, ಯುವ ಪೀಳಿಗೆಯಲ್ಲಿ ಉತ್ತಮ ಆಲೋಚನೆ, ಭಾವನೆ, ನಿರಂತರತೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಪೂರ್ವ ಭಾರತದಲ್ಲಿ ವಿದ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು. ಪ್ರಸ್ತುತ ಎಷ್ಟೇ ಪದವಿಗಳನ್ನು ಹೊತ್ತಿದ್ದರೂ ಅವರು ಪಡೆದ ವಿದ್ಯೆ ಅವರಿಗೆ ವಿನಯವನ್ನು ನೀಡುತ್ತಿಲ್ಲ . ‘ಶಿಕ್ಷಣ’ ಎಂದರೇನು? ಬೀದಿಗೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಕಡ್ಡಾಯ ಶಿಕ್ಷಣವೆಂದು ಶಿಕ್ಷಣ ಕಲಿಯುವವರ ಪ್ರಮಾಣ ಹೆಚ್ಚಿಸಿ, ಹಣವನ್ನು ಕಿತ್ತು ಮಾರ್ಕ್ಸ್ ಕಾರ್ಡನಲ್ಲಿ ಡಿಗ್ರಿಗಳನ್ನು ಕೊಟ್ಟು ,ಸಂಬಳಕ್ಕಾಗಿ ವೃತ್ತಿ ಪಡೆಯುವಷ್ಟು ಸಾಕ್ಷರರನ್ನಾಗಿ ಮಾಡುವುದೇ? ಇಲ್ಲಾ ಅಲ್ಲವೇ ? ಯುವ ಪೀಳಿಗೆಯನ್ನು ವಿದ್ಯಾವಂತರಾಗಿಸುವ ಜೊತೆಗೆ ಜ್ವಲಂತ ಸವಾಲುಗಳನ್ನು ಅರಿತು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು,ಒದಗಿದ ಸವಾಲುಗಳನ್ನು ಎದುರಿಸಲು ಅನುವಾಗುವ ಸಂರಕ್ಷಣಾತ್ಮಕವಾದ ಜ್ಞಾನವನ್ನೂ, ವಿಚಾರವಂತಿಕೆಯನ್ನು ಬೆಳೆಸುವುದಾಗಿದೆ. ಆಗಿನ ಗುರುಕುಲ ಪದ್ದತಿಯು ಶಿಕ್ಷಣಕ್ಕಿಂತ ಇಂದಿನ ಶಿಕ್ಷಣವು ವ್ಯಾಪಕವಾಗಿ ಬೆಳದಿದೆ. ಈ ವ್ಯಾಪಕತೆ ಅವ್ಯವಸ್ಥಿತವಾಗಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳು ನಮ್ಮೆದುರು ನಾಯಿಕೊಡೆಯಂತೆ ಬೆಳೆಯುತ್ತಿವೆ. ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳಿಗೆ ಸರ್ಜರಿ ಮಾಡಲೇ ಬೇಕಾದ ತುರ್ತು ಇದೆ. ಯಾವುದೇ ಶಾಲೆಯಿರಲಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗಿದೆ,ಅವುಗಳ ಬಳಕೆಯನ್ನು ದಿನನಿತ್ಯದ ಬದುಕಲ್ಲಿ ಹೇಗೆ ಮಕ್ಕಳಲ್ಲಿ ರೂಢಿಸಿಕೊಳ್ಳಲಾಗಿದೆ ಎಂಬುದು ಮುಖ್ಯ. ಕೆಲವು ಕಡೆ ಕುಡಿಯುವ ನೀರಿನ ಸೌಲಭ್ಯಗಳಿದ್ದರೂ,ನೀರಿನ ಟ್ಯಾಂಕುಗಳಿದ್ದರೂ,ಅವುಗಳ ಶುದ್ಧತೆ ಎಷ್ಟರಮಟ್ಟಿಗಿದೆ? ಶಾಲೆಗೆ ಕಾಂಪೋಂಡ್ ಇದ್ದರಾಯಿತೇ!? ಆಟದ ಮೈದಾನ ವಿದ್ದರಾಯಿತೇ? ಕೇವಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೆಟ್ಟು ಮಾಡಿದರೆ ಸಾಲದು ಉಳಿದ ಸೌಲಭ್ಯದ ಬಳಕೆಯ ಮೇಲೂ ಬೆಳಕು ಬೀರಬೇಕಿದೆ. ಶಿಕ್ಷಕರೆಂದರೆ ಸಾಕು ‘ಗಂಟೆ ಹೊಡಿ, ಸಂಬಳ ತಗೋ’ ಎನ್ನುವ ಮಾತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ತಿಳಿಯದು ಆದರೆ ಇಂದಿನ ಶಿಕ್ಷಕ ಸಮುದಾಯವು ಶಿಕ್ಷಣ ನೀಡುವುದನ್ನು ಒಂದು ಸಂಬಳ ದೊರೆಯುವ ಕೆಲಸವನ್ನಾಗಿಯಷ್ಟೇ ಮಾಡುತ್ತಿದ್ದಾರೆ. ಶಿಕ್ಷಕರಾಗುವವರೆಗೆ ಏನೆಲ್ಲಾ ಕಷ್ಟಪಟ್ಟು ಸ್ಪರ್ಧಾತ್ಮಕವಾಗಿ ಓದಿರುತ್ತಾರೆ. ಆದರೆ, ಶಿಕ್ಷಕರಾಗಿ ಸೇರಿದ ನಂತರ ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಕಲಿಯುತ್ತಿಲ್ಲ, ತುಂಟಾಟ ಜಾಸ್ತಿ, ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಶಾಲೆಯಲ್ಲಿ ಅದು ಇಲ್ಲ ಇದು ಇಲ್ಲ. ಅಬ್ಬಬ್ಬಾ! ಇಂತಹ ಸಾಲು ಸಾಲು ಸಬೂಬುಗಳನ್ನು ನೀಡಿ ತಮ್ಮ ಕರ್ತವ್ಯಗಳಿಂದ ನುಣಿಚಿಕೊಂಡು ತಮ್ಮ ಸುತ್ತಾ ರಕ್ಷಣಾತಂತ್ರ ಹೆಣೆದುಕೊಂಡು ಬಿಡುತ್ತಾರೆ.ಇಂತಹ ಸವಾಲುಗಳನ್ನು ಸ್ವೀಕರಿಸಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಹೇಗೆ ಮಾಡವುದು ಎಂದು ಪ್ರಾಥಮಿಕವಾಗಿಯು ಚಿಂತನೆ ನೆಡೆಸುವುದಿಲ್ಲ. ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸವಾಲಿನ ಪ್ರಮುಖ ಕಾರಣ ‘ಪೋಷಕರ ನಿರಾಸಕ್ತಿ’ ಆಶ್ಚರ್ಯದಿಂದ ನೋಡದಿರಿ, ಶಾಲೆಗೆ ಕಳಿಸಲು ನಿರಾಸಕ್ತಿಯಂತೆ! ಇಡೀ ಸಮಾಜವೇ, ಬೆಳಗ್ಗೆ ಎದ್ದು ಮಕ್ಕಳಿಗೆ ಸ್ನಾನ ಮಾಡಿಸು, ಸಮವಸ್ತ್ರ ಹಾಕು, ಶಾಲೆಗೆ ಕಳುಹಿಸುವುದೇ ತಮ್ಮ ಬೆಳಗಿನ ಕರ್ತವ್ಯವೆನ್ನುವಂತೆ ಮಾಡುತ್ತಿರುವಾಗ ಪೋಷಕರ ನಿರಾಸಕ್ತಿಗೆ ಸಮಯವೆಲ್ಲಿದೆ ಹೇಳಿ? ಬಡತನ ವಿರಬಹುದು,ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಅವರನ್ನು ವಂಚಿಸುವ ಹಕ್ಕು ಪೋಷಕರಿಗಿಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಮಗುವಿಗೆ ಕಲಿಯಲ್ಲಿ ಆಸಕ್ತಿ ಮೂಡುತಿಲ್ಲ. ‘ಕುದರೆಯನ್ನ ಕೆರೆವರೆಗೂ ಕರೆದುಕೊಂಡು ಬರಬಹುದು ಕೆರೆನೀರು ಕುಡಿಸೋಕೆ ಆಗುತ್ತಾ’,ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆತರಬಹುದೇ ವಿನಃ ಹೆಚ್ಚಿನ ಆಸ್ಥೆ ವಹಿಸಿ ಶಾಲೆಯಲ್ಲಿ ಆ ಮಗುವನ್ನೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ವೃತ್ತಿ ಆಧಾರಿತವಾದ ಅಥವಾ ಕೌಶಲ್ಯ ಭರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಒದಗಿಸಿದ್ದೇ ಆದಲ್ಲಿ ಪೋಷಕರಿಗೂ, ಮಕ್ಕಳಿಗೂ ಅಔಪಚಾರಿಕ ಶಿಕ್ಷಣದ ನಿರಾಸಕ್ತಿ ಹೋಗಲಾಡಿಸ ಬಹುದಲ್ಲವೇ? ಎಷ್ಟೋ ಶಿಕ್ಷಕರು ಶಾಲೆಗಳಲ್ಲಿ ನಮಗೆ ಹೆಚ್ಚಿವರಿಯಾಗಿ ಜನಗಣತಿ,ಚುನಾವಣಾ ಕರ್ತವ್ಯ, ಮಗುವಿನ ವಿದ್ಯಾರ್ಥಿ ವೇತನ, ಆಧಾರ್ ಕಾರ್ಡ್, ಪಾಸ್ ಬುಕ್ ಮಾಡಿಸುವುದು ಸಾಲದಕ್ಕೆ ಇಲಾಖೆಗೆ ಮಾಹಿತಿ ನೀಡುವುದು, ವರದಿ ತಯಾರಿಸುವುದು ,ಬಿಸಿಯೂಟ ಹೀಗೆ ಸಮಯದ ವ್ಯರ್ಥವಾಗುತ್ತಿರುವುದರ ಬಗ್ಗೆ ದೂರುಗಳು ನೀಡುತ್ತಿರುತ್ತಾರೆ, ಆದರೇ ಎಷ್ಟು ಜನ ಶಿಕ್ಷಕರು ಶಾಲಾ ಸಮಯವನ್ನು ಶಾಲೆಗಾಗಿ ,ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ? ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆಯೇ? ಶಾಲಾ ವಿಶೇಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಯೇ? ಪ್ರತಿ ವರ್ಷ ಶೈಕ್ಷಣಿಕ ಪ್ರಗತಿಯ ಬಗ್ಗೆ ಬೊಬ್ಬೆ ಹೊಡೆಯುವರು ತಮ್ಮ ಬೋಧನಾ ಕೌಶಲ್ಯಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆಯೇ? ಎಂಬುದನ್ನೂ ಗಮನಿಸಬೇಕಿದೆ. ಗುಣಮಟ್ಟದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಧಾವಂತದಲ್ಲಿ ದಿನಕ್ಕೊಂದು ಹೊಸ ನಿಯಮಗಳನ್ನು ತರುತ್ತಿರುವುದಲ್ಲದೆ, ಅನಿಯಮಿತ ನೇಮಕಾತಿಯಿಂದಾಗಿ ಎಲ್ಲಾ ಹಂತದಲ್ಲೂ ಭ್ರಷ್ಠತೆಗೆ ಮಣೆ ಹಾಕುತ್ತಿದೆ. ನೇಮಕವಾದ ಶಿಕ್ಷಕರು ವಿಷಯವಾರುವಾಗಿರದೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿದೆ.ಸಾಲದಕ್ಕೆ ದೈಹಿಕ ಶಿಕ್ಷಣ, ಕಲಾ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ಇವುಗಳು ಕೇವಲ ಅಂಕಪಟ್ಟಿ ವಹಿಯ ದಾಖಲೆಗೆ ಸೀಮಿತವಾಗಿಯೇ ಉಳಿದಂತಿದ್ದು ಈ ವಿಷಯದ ಶಿಕ್ಷಕರ ನೇಮಕ ಕನ್ನಡಿಯೊಳಗಿನ ಗಂಟಂತಾಗಿದೆ. ಇನ್ನೂ ಶಿಕ್ಷರ ವರ್ಗಾವಣೆ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ,ಸುದ್ದಿಯಲ್ಲಿರುವ ಸಂಗತಿಯಾಗಿದೆ. ನಿರ್ದಿಷ್ಟ ನಿಯಮ ನಿರೂಪಿಸಿ, ನಿಯಮಿತವಾಗಿ ಕ್ರಮಗಳನ್ನು ಕೈಗೊಂಡಿದ್ದೇ ಆದಲ್ಲಿ, ತನು ಮನ ಸಮರ್ಪಣಾ ಭಾವದಿಂದ ಕೆಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಇದೆಲ್ಲದರ ಮಧ್ಯೆ ಮಾಹಿತಿ ತಂತ್ರಜ್ಞಾನದ, ಜಾಗತೀಕರಣದ, ಓಟದ ಜೊತೆ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಣ ವ್ಯವಸ್ಥೆ ಭಾರಕ್ಕೆ ಬಾಗಿದೆ. ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಎಲ್ಲಕ್ಕಿಂತ ಭಿನ್ನ ಮತ್ತು ವಿಶಾಲ ವ್ಯಾಪ್ತಿ ಹೊಂದಿರುವ ವ್ಯವಸ್ಥೆ .ಭಾರತದ ಭವಿಷ್ಯ ತರಗತಿ ಕೋಣೆಗಳಲ್ಲಿ ಮೂಲೆಗುಂಪಾಗದೆ, ನ್ಯೂನತೆಗಳೊಂದಿಗೆ ಬೆಳೆದರೂ, ಕೇಸರಲ್ಲಿ ಬೆಳೆದ ಕಮಲದಂತೆ ತನ್ನ ಪ್ರಾಮುಖ್ಯತೆ ಗಳಿಸಿ ಉಳಿಸಿಕೊಳ್ಳಬೇಕಿದೆ. ******************************************************************* ಪರಿಚಯ: ಶೃತಿ ಮೇಲಿಸೀಮೆ, ಹವ್ಯಾಸಿ ಬರಹಗಾರರು. ಗೆಣಿಕೆಹಾಳು( ಪೋಸ್ಟ್), ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ

ಶಿಕ್ಷಣ Read Post »

ಇತರೆ

ಭಾಷೆ

ಮರಳಿ ಮರಳಿ ಬರಲಿದೆ  ರಾಜ್ಯೋತ್ಸವ…… ಗಣೇಶ  ಭಟ್ಟ ಶಿರಸಿ ಪ್ರತಿ ವರ್ಷವೂ ನವೆಂಬರ್  ಮೊದಲನೇ ತಾರೀಕಿಗೆ  ಕನ್ನಡಿಗರಿಗೆ  ಸಂಭ್ರಮ. ಕನ್ನಡ ಭಾಷಿಕ  ಪ್ರದೇಶಗಳೆಲ್ಲವೂ ಸೇರಿ ಒಂದೇ ರಾಜ್ಯವಾದ  ದಿನ- ಕನ್ನಡದ ಹಬ್ಬವನ್ನು  ಅದ್ಧೂರಿಯಾಗಿ  ಆಚರಿಸುವ  ಹೊಸ ಹೊಸ  ವಿಧಾನಗಳನ್ನು  ಕನ್ನಡ  ಪ್ರೇಮಿಗಳು ಆವಿಷ್ಕರಿಸುತ್ತಿದ್ದಾರೆ.  ಕಿಲೋ ಮೀಟರ್‌ಗಳಷ್ಟು  ಉದ್ದದ ಕನ್ನಡ ಧ್ವಜದ ಮೆರವಣಿಗೆ , ಕನ್ನಡ ಪರ ಹಾಡುಗಳ  ಹಿನ್ನೆಲೆಯಲ್ಲಿ  ಕುಣಿತ, ಸ್ತಬ್ಧ ಚಿತ್ರಗಳ ಮೆರವಣಿಗೆ  ಇತ್ಯಾದಿ ಇತ್ಯಾದಿ…  ಆದರೆ  ಕನ್ನಡಿಗರ ಪಾಡು ಅಮಾಯಕತೆ, ಬಡತನ, ಶೋಷಣೆ,   ನಿರುದ್ಯೋಗಗಳ ಅದೇ ಹಳೇ ಹಾಡು. ಕನ್ನಡವನ್ನು ಉಳಿಸಿ, ಬೆಳೆಸುವ  ಕುರಿತು  ಚಿಂತನಾ ಗೋಷ್ಠಿಗಳು,  ಚರ್ಚೆಗಳು ನಡೆದು ಅಬ್ಬರದ ಹೇಳಿಕೆಗಳು ಬಿಡುಗಡೆಯಾಗುತ್ತವೆ.  ತಾವು  ಕನ್ನಡ ಭಾಷೆಗೆ ಉಪಕಾರ ಮಾಡುತ್ತಿದ್ದೇವೆಂಬ ಮನೋಭಾವ ಹೊಂದಿದವರು ತಮ್ಮಿಂದಲೇ ಕನ್ನಡದ ಉಳಿವು, ಉದ್ದಾರವೆಂದು  ತೋರಿಸಿಕೊಳ್ಳುತ್ತಾರೆ.    ಆದರೆ ನಮ್ಮಿಂದ  ಕನ್ನಡವಲ್ಲ, ಕನ್ನಡದಿಂದ  ನಮ್ಮ  ಅಸ್ಮಿತೆ,  ಅಸ್ತಿತ್ವ, ಉಳಿವು ಎಂಬ ಸತ್ಯದ  ಅರಿವು ಹಲವರಿಗೆ  ಇಲ್ಲವಾಗಿದೆ.  ನಾವು ಫಲಕಗಳಲ್ಲಿ  ಕನ್ನಡವನ್ನು  ಬಳಸಲಿ ಅಥವಾ ಬಳಸದೇ ಇರಲಿ, ಸರ್ಕಾರಿ ಕಛೇರಿಗಳಲ್ಲಿ  ಕನ್ನಡದ ಬಳಕೆ ಆಗಲಿ ಅಥವಾ ಆಗದೇ ಇರಲಿ ; ಕನ್ನಡ   ಮಾಧ್ಯಮದ  ಶಿಕ್ಷಣ  ಇರಲಿ ಅಥವಾ ಇಲ್ಲದಿರಲಿ; ಏನೇ ಆದರೂ  ಕನ್ನಡ ಉಳಿದೇ  ಉಳಿಯುತ್ತದೆ. ಬಳಕೆಯ ಭಾಷೆಯಾಗಿರುವ  ಬದಲಿಗೆ  ಗ್ರಂಥಸ್ಥ ಭಾಷೆಯಾಗಿ  ಉಳಿದೇ ಉಳಿಯುತ್ತದೆ. ಕನ್ನಡದ  ಬಳಕೆ ನಿಂತು ಹೋದರೆ  ಇಡೀ ಕನ್ನಡ  ಸಮುದಾಯ ತನ್ನ ಅಸ್ತಿತ್ವ ಕಳೆದುಕೊಂಡು ಗುಲಾಮಗಿರಿಗೆ  ತಳ್ಳಲ್ಪಡುತ್ತದೆ ಮತ್ತು ನಿರಂತರ ಶೋಷಣೆಗೆ  ತುತ್ತಾಗುತ್ತದೆ ಎಂಬ  ವಾಸ್ತವದ  ಅರಿವಾದಾಗ ಮಾತ್ರ ಕನ್ನಡ  ರಾಜ್ಯೋತ್ಸವಕ್ಕೆ  ಅರ್ಥ ಬರುತ್ತದೆ.    ಭೌಗೋಳಿಕ  ವೈಶಿಷ್ಟ್ಯಗಳು, ಪರಿಸರ-ಪ್ರಾಕೃತಿಕ ವೈವಿದ್ಯತೆಗಳಿಂದಾಗಿ ಮಾನವರ ರೂಪ,ಆಕಾರÀಗಳು ಭಿನ್ನವಾಗಿ ರೂಪುಗೊಂಡಿತು. ಅದೇ ವಿಧದಲ್ಲಿ  ಭಾಷೆಗಳೂ ಭೌಗೋಳಿಕವಾಗಿ ವಿಕಾಸಗೊಂಡವು.  ಇದರಿಂದಾಗಿ ಜಗತ್ತಿನಲ್ಲಿ  ವಿವಿಧ ಭಾಷೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ  ಯಾವುದೂ ಮೇಲಲ್ಲ ಅಥವಾ ಕೀಳಲ್ಲ.  ಆದರೆ ಆ ಭಾಷಿಕ  ಸಮುದಾಯದ  ಆಂತರಿಕ ಭಾವನೆಗಳ ಅಭಿವ್ಯಕ್ತಿಗೆ  ಅಲ್ಲಿಯದೇ ಭಾಷೆಯ ಬಳಕೆಯಾಗಿ, ಅವರಲ್ಲಿ  ಆತ್ಮವಿಶ್ವಾಸ ಮೂಡಿಸಿ,   ಒಂದು ಸಮುದಾಯವಾಗಿ ಬಾಳಲು ಸಹಾಯಕವಾಯಿತು.  ಕನ್ನಡಿಗರ   ವೈಶಿಷ್ಟ್ಯಪೂರ್ಣ ಅಸ್ತಿತ್ವಕ್ಕೆ  ಕನ್ನಡವೇ ಕಾರಣ. ಭಾಷಾ ಶಾಸ್ತ್ರಜ್ಞರು ಹೇಳುವಂತೆ  ತೆಲಗು ಮತ್ತು ಕನ್ನಡ  ಅತಿ ಹತ್ತಿರದ ಭಾಷೆಗಳು.  ಆದರೆ  ಕನ್ನಡಿಗರು  ಮತ್ತು ತೆಲುಗು  ಭಾಷಿಕರ  ಚಿಂತನಾ ಕ್ರಮ, ಜೀವನ ವಿಧಾನ , ನಂಬಿಕೆಗಳು, ಸಾಮಾಜಿಕ  ವ್ಯವಸ್ಥೆಗಳಲ್ಲಿ ಸಾಕಷ್ಟು  ಭಿನ್ನತೆಯನ್ನು ಗುರ್ತಿಸಬಹುದು.    ಯಾವುದೇ ಪ್ರದೇಶದ  ಜನರನ್ನು  ಒಂದುಗೂಡಿಸಲು ಅಲ್ಲಿಯ  ಭಾಷೆ ಸಹಕಾರಿ.  ಕನ್ನಡ ಭಾಷಿಕರ  ಸಮುದಾಯವನ್ನು  ಒಂದುಗೂಡಿಸಲು ಕನ್ನಡವೇ ಬೇಕು.  ಆದರೆ  ನಮ್ಮ  ಭಾಷಾ ಬಾಂಧವ್ಯಕ್ಕಿಂತ  ಹೆಚ್ಚಾಗಿ ಜಾತಿ, ಮತ,  ಪಂಥಗಳ  ಸಂಬಂಧಗಳೇ ಮೇಲುಗೈ ಸಾಧಿಸುತ್ತಿವೆ. ಈ ಅನಿಷ್ಟಕಾರಿ  ಪ್ರವೃತ್ತಿ ಕೇವಲ ಕರ್ನಾಟಕಕ್ಕೆ   ಮಾತ್ರ ಸೀಮಿತವಲ್ಲ.  ಇಡೀ ಭಾರತಕ್ಕೆ  ತಗಲಿರುವ  ಘೋರ ವ್ಯಾಧಿ. ಜಾತಿ, ಮತ, ಪಂಥಗಳ ಸಂಕುಚಿತತೆ, ಅತಾರ್ಕಿಕತೆಗಳಿಂದ  ಬಿಡುಗಡೆ ಹೊಂದಿ ಒಂದು ಸಮುದಾಯವಾಗಿ ಕನ್ನಡಿಗರು ತಮ್ಮನ್ನು ಗುರ್ತಿಸಿಕೊಳ್ಳಲು   ನಮ್ಮ ಭಾಷೆಯೇ ಅನಿವಾರ್ಯ.  ನಮ್ಮ ನಡುವಿನ  ಬೇಧ, ಭಾವಗಳನ್ನು ಮರೆತು ನಾವೆಲ್ಲರೂ ಕನ್ನಡಿಗರು  ಎಂಬ ಒಗ್ಗಟ್ಟಿನ ಮನೋಭಾವ ಮೂಡಿಸಲು ಸಾಧ್ಯವಾಗದಿದ್ದರೆ ರಾಜ್ಯೋತ್ಸವ ಆಚರಣೆ ಅರ್ಥಹೀನ.     ರಾಜ್ಯೋತ್ಸವದ   ಆಚರಣೆಗಾಗಿ  ರಾಜ್ಯ  ಸರ್ಕಾರ  ಸಾಕಷ್ಟು  ಹಣ ವ್ಯಯಿಸುತ್ತದೆ.  ಅದು ಬರೀ ಬಾಹ್ಯ ಆಡಂಬರಕ್ಕೇ ಖರ್ಚಾಗುತ್ತದೆಯೇ ಹೊರತು  ಕನ್ನಡ  ಸಮುದಾಯದಲ್ಲಿ  ಒಗ್ಗಟ್ಟು ಸಾಧಿಸಲು ಅಲ್ಲ.  ಕನ್ನಡ  ಬಳಸಿ,  ಉಳಿಸಿ,  ಬೆಳಸಿ ಎನ್ನುವ  ಭಾಷಣ ವೀರ ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಮುಂತಾದವರೆಲ್ಲರೂ ತಮ್ಮ ತಮ್ಮ ಸಂಕುಚಿತತೆ , ಸ್ವಾರ್ಥದ  ಚಿಪ್ಪಿನೊಳಗೇ ಇರ ಬಯಸುತ್ತಾರೆ.  ಬಲಿಷ್ಠ ಕನ್ನಡ ಸಮುದಾಯವನ್ನು   ರೂಪಿಸುವತ್ತ  ಇಂಥವರು  ಪ್ರಯತ್ನಿಸುವುದೇ ಇಲ್ಲ. ಇಂತಹ  ಗೋಸುಂಬೆಗಳನ್ನೇ ಆದರ್ಶವೆಂದು ಭಾವಿಸಿರುವ  ಜನಸಮಾನ್ಯರು   ಕೂಡಾ ಅದೇ ವಿಭಜಕ ಚಿಂತನೆಗಳ  ದಾಸರಾಗಿದ್ದಾರೆ.      ಕನ್ನಡ- ಕನ್ನಡ ಎಂದು ಘರ್ಜಿಸುವ  ಹೋರಾಟಗಾರರ ಬಾಯಿಯಿಂದಲೂ ಕನ್ನಡಿಗರನ್ನು ವಿಭಜಿಸಿರುವ  ಸಂಕುಚಿತತೆಯ ಸರಪಳಿಯನ್ನು ತುಂಡರಿಸುವ  ಘೋಷವಾಕ್ಯ   ಕೇಳಿ ಬರುವುದಿಲ್ಲ.  ಹಲವು ಸಂಘಟನೆಗಳು  ಪ್ರಾಮಾಣಿಕವಾಗಿ ಕನ್ನಡದ   ಕೆಲಸ ಮಾಡುತ್ತಿದ್ದಾರೆ.   ಆದರೆ ಕೆಲವು ರೋಲ್‌ಕಾಲ್  ಸಂಘಟನೆಗಳಿಂದಾಗಿ ಎಲ್ಲ ಕನ್ನಡ ಪರ ಸಂಘಟನೆಗಳನ್ನು  ಅನುಮಾನ,  ತಾತ್ಸಾರಗಳಿಂದ  ನೋಡುವ ಸನ್ನಿವೇಶ ನಿರ್ಮಾಣವಾಗಿದೆ.  ಕನ್ನಡ ಎನ್ನುವುದರ  ಜೊತೆಗೆ ಕನ್ನಡಿಗ ಎನ್ನುವ ಘೋಷಣೆಯೂ ಸ್ಥಾನ ಪಡೆದಾಗ ಈ ಹೋರಾಟಗಳ  ವಿಧಿ- ವಿಧಾನಗಳಲ್ಲಿ  ಮಹತ್ತರ  ಬದಲಾವಣೆಯಾಗಲಿದೆ.    ಕನ್ನಡ ಅನ್ನ  ಕೊಡುವ ಭಾಷೆಯಲ್ಲವೆಂದು  ಕೆಲವರ  ಹೇಳಿಕೆ-ಅತಾರ್ಕಿಕ, ಮೂರ್ಖತನದ್ದಾಗಿದ್ದರೂ ಕೂಡ  ಹೆಚ್ಚಿನ  ಜನ  ಇದನ್ನು   ನಂಬುವಂತೆ ಮಾಡಿದೆ.  ಶೇಕಡಾ ೯೦ ರಷ್ಟು ಕರ್ನಾಟಕದ   ನಿವಾಸಿಗಳು  ಕನ್ನಡದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.  ವೃತ್ತಿಪರ  ಕೋರ್ಸ್ಗಳನ್ನು ಅಧ್ಯಯನ  ಮಾಡಿ  ಮಾಸಿಕ ಲಕ್ಷಾಂತರ  ರೂಪಾಯಿ ಸಂಬಳ ಪಡೆಯುವ     ಕೆಲವರನ್ನು  ನೋಡಿ, ಇಂಗ್ಲೀಷ್‌ನಲ್ಲಿ  ಕಲಿತರೆ ಮಾತ್ರ ಇಷ್ಟೊಂದು ಗಳಿಕೆ ಸಾಧ್ಯವೆಂಬ ತಪ್ಪು  ಗ್ರಹಿಕೆಯೇ ಕನ್ನಡದ  ಅವಹೇಳನಕ್ಕೆ  ಕಾರಣ.    ಕನ್ನಡ   ಭಾಷಿಕರು ಒಂದೇ ರಾಜ್ಯದಲ್ಲಿ ಬಾಳಬೇಕೆಂದು ಬಯಸಿದ  ಹಿರಿಯರು,  ಕನ್ನಡಿಗರ  ಬದುಕು  ಉತ್ತಮವಾಗಿರಬೇಕೆಂದೂ ಬಯಸಿದ್ದರು. ಆದರೆ, ನಮ್ಮ ಕನ್ನಡ ನಾಡಿನಲ್ಲಿ ಇಂದು ಕನ್ನಡಿಗರೇ ಅನಾಥರಾಗಿರುವ  ಪರಿಸ್ಥಿತಿ ಉಂಟಾಗಿದೆ.  ಎಲ್ಲವೂ ಇದ್ದೂ,  ನಾವು ಏನೂ ಇಲ್ಲದಿರುವಂತವರಿದ್ದೇವೆ.    ಪ್ರತಿಯೋರ್ವ  ಕನ್ನಡಿಗನಿಗೂ ಕರ್ನಾಟಕದಲ್ಲೇ ದುಡಿಯುವ ಅವಕಾಶ  ಲಭ್ಯವಾಗಬೇಕು. ಬರ, ನೆರೆ,  ಪ್ರಾಕೃತಿಕ ವಿಕೋಪಗಳಿಂದಾಗಿ ಕನ್ನಡಿಗರು ತಮ್ಮ  ಮನೆ, ಊರು ತೊರೆದು ಪಕ್ಕದ ರಾಜ್ಯಗಳಿಗೆ  ಜೀವನೋಪಾಯಕ್ಕಾಗಿ ವಲಸೆ   ಹೋಗುವ   ಸ್ಥಿತಿ  ತಪ್ಪಬೇಕು.  ಇಂತಹ  ಕನ್ನಡ ನಾಡಿನ ನಿರ್ಮಾಣದ  ದೃಢಸಂಕಲ್ಪವನ್ನು ಮಾಡಿದರೆ ಮಾತ್ರ ರಾಜ್ಯೋತ್ಸವಕ್ಕೆ  ಬೆಲೆ ಬರುತ್ತದೆ.    ಪ್ರತಿಯೋರ್ವ ಕನ್ನಡಿಗನಿಗೂ ಕರ್ನಾಟಕದಲ್ಲೇ  ದುಡಿಯುವ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ತನ್ನ ಅವಲಂಬಿತರ  ಜೀವನದ  ಕನಿಷ್ಠ ಅಗತ್ಯತೆಗಳನ್ನು ಅಂದರೆ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷಧೋಪಚಾರ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಬಿಪಿಎಲ್  ಕಾರ್ಡ್ಗಾಗಿ  ಅರ್ಜಿ ಸಲ್ಲಿಸಿ ಕೈ ಜೋಡಿಸಿ ನಿಲ್ಲುವ  ದೈನ್ಯ ಸ್ಥಿತಿ  ಯಾವ ಕನ್ನಡಿಗನಿಗೂ  ಬರದಂತಹ  ಸ್ಥಿತಿಯನ್ನೂ ನಿರ್ಮಾಣ ಮಾಡುವ  ಪ್ರತಿಜ್ಞೆ ಮಾಡಿದಾಗ ಮಾತ್ರ ಕನ್ನಡ   ರಾಜ್ಯೋತ್ಸವ ಅರ್ಥಪೂರ್ಣ.    ಈ ಕನಸನ್ನು  ನನಸಾಗಿಸುವುದು ಸಾಧ್ಯವೇ ? ಎಂಬ ಪ್ರಶ್ನೆ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.  ಯಾಕೆಂದರೆ ಇಂದು ನಾವು ಅನುಸರಿಸುತ್ತಿರುವ   ಆರ್ಥಿಕ ನೀತಿ, ಶಾಲಾ- ಕಾಲೇಜುಗಳಲ್ಲಿ  ಕಲಿಯುವ  ಇಕೊನೊಮಿಕ್ಸ್ ಕಲಿಸುತ್ತಿರುವುದೇ  ಬಂಡವಾಳವಾದಿ ತತ್ವಗಳನ್ನು  ಅಂದರೆ ಬುದ್ದಿ ಮತ್ತು ಹಣ ಬಲದಿಂದ ಎಲ್ಲರಿಗೂ ಸಲ್ಲಬೇಕಾದ ನ್ಯಾಯಯುತ  ಪಾಲನ್ನು ಕೆಲವರಷ್ಟೇ ತಮ್ಮ  ಹತೋಟಿಯಲ್ಲಿ  ಇಟ್ಟುಕೊಂಡು ಇತರರನ್ನು  ಇಲ್ಲದವರನ್ನಾಗಿಸುವ  ಅಮಾನವೀಯ ವ್ಯವಸ್ಥೆ.   ಎಲ್ಲರ  ಸುಖಕ್ಕಾಗಿ, ಎಲ್ಲರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗದ ಕುರಿತಾಗಿ ಚಿಂತನೆ,  ಆವಿಷ್ಕಾರಗಳನ್ನು ಮಾಡುವ  ಕುರಿತು ತಥಾಕತಿಥ  ಆರ್ಥಿಕ ತಜ್ಞರು ಯೋಜಿಸುವುದೇ ಇಲ್ಲ.     ಲಾಭದಾಸೆಗಾಗಿ ಬರುವ ಹೊರಗಿನವರು ಬಂಡವಾಳ ಹೂಡುವುದರಿಂದ ಸ್ಥಳೀಯರ  ಅಭಿವೃದ್ಧಿಯಾಗುತ್ತದೆಂಬ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಕರ್ನಾಟಕದ  ಸಂಪನ್ಮೂಲಗಳನ್ನು ಆಧರಿಸಿ,  ಸಮಸ್ತ ಕನ್ನಡಿಗರ ಹಿತರಕ್ಷಣೆಯ ಗುರಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯ.  ಸರ್ಕಾರಕ್ಕೆ  ಹೆಚ್ಚಿನ ತೆರಿಗೆ  ಹರಿದು ಬರುವುದೇ ಸಮೃಧ್ಧತೆಯ  ಲಕ್ಷಣವಲ್ಲ.  ಪ್ರತಿಯೋರ್ವ ಕನ್ನಡಿಗನಿಗೂ ಫಲಪ್ರದ ಉದ್ಯೋಗಾವಕಾಶ ಸೃಷ್ಟಿಯಾದಾಗ  ಮಾತ್ರ ಸಮೃದ್ಧ ಕರ್ನಾಟಕ  ಅರ್ಥಪೂರ್ಣ.    ಇಂದಿನ  ರಾಜಕೀಯ  ಪಕ್ಷಗಳಿಂದ  ಸಮೃದ್ಧ  ಕರ್ನಾಟಕದ ನಿರೀಕ್ಷೆ ಇಟ್ಟುಕೊಳ್ಳುವುದು ಅವಾಸ್ತವ. ರಾಷ್ಟ್ರೀಯ  ಪಕ್ಷಗಳಿಗೆ  ಇಡೀ ದೇಶದಲ್ಲಿ  ಅಧಿಕಾರ  ಪಡೆಯುವುದೇ ಗುರಿ. ಪರಸ್ಪರ  ದೂಷಣೆ,  ಅವಹೇಳನಗಳಲ್ಲಿ ತೊಡಗಿರುವ  ಇವರೆಲ್ಲರೂ ನಂಬಿರುವ  ಆರ್ಥಿಕ ಸಿದ್ಧಾಂತವೇ  ಬಂಡವಾಳವಾದ. ಆರ್ಥಿಕ  ಅಸಮಾನತೆಯನ್ನು  ಸಹಜವೆಂದು  ಒಪ್ಪುವ  ಬಂಡವಾಳವಾದವನ್ನು  ಅನಸರಿಸಿ ಆರ್ಥಿಕ ನ್ಯಾಯ ಒದಗಿಸುವುದು ಬರೀ ಕನಸು.  ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸ್ವಾವಲಂಬನೆಯನ್ನು ಇಷ್ಟ ಪಡುವುದಿಲ್ಲ.  ರಾಜ್ಯಗಳ  ನೇತಾರರನ್ನು  ತಮ್ಮ ಅಡಿಯಾಳಿನಂತೆ ನಡೆಸಿಕೊಳ್ಳುವುದು  ಅವರ  ಜಾಯಮಾನ.  ತಮ್ಮ ಪಕ್ಷ ಅಧಿಕಾರದಲ್ಲಿದೆ,  ಹೈಕಮಾಂಡ್‌ಗೆ ನಿಯಮಿತವಾಗಿ ಕಪ್ಪ-  ಕಾಣಿಕೆ   ಸಲ್ಲುತ್ತಿದೆ ಎನ್ನುವುದರಲ್ಲೇ ಅವರ ಆಸಕ್ತಿ ಸೀಮಿತವಾಗಿದೆ.     ಪ್ರಾದೇಶಿಕ ಪಕ್ಷವೆಂದು ಕರೆಸಿಕೊಳ್ಳುವ  ಜೆಡಿಎಸ್‌ನ ಚಿಂತನೆಗಳು ಬಿಜೆಪಿ ಅಥವಾ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ.  ಇತರ  ರಾಜ್ಯಗಳಲ್ಲಿ ಅದರ ಅಸ್ತಿತ್ವ ಇಲ್ಲ ಎನ್ನುವ  ಕಾರಣದಿಂದಾಗಿಯೇ ಅದು  ಪ್ರಾದೇಶಿಕ  ಪಕ್ಷ.   ಕರ್ನಾಟಕವನ್ನು ಸ್ವಾವಲಂಬಿ ಸಮೃದ್ಧ ನಾಡನ್ನಾಗಿ ಪರಿವರ್ತಿಸುವ  ಯಾವುದೇ ಕನಸು ಅಥವಾ ಕಾರ್ಯಕ್ರಮ ಅವರಿಗಿಲ್ಲ.     ಇಂತಹ ಪರಿಸ್ಥಿತಿಯಲ್ಲಿ ಜನಾಂದೋಲನದಿಂದ ಮಾತ್ರ ಪರಿವರ್ತನೆ  ಸಾಧ್ಯ.  ಕರ್ನಾಟಕದ  ದುಡಿಮೆಯ  ಅವಕಾಶಗಳು ಕನ್ನಡಿಗರಿಗೇ ಮೀಸಲಿರಬೇಕೆಂಬ ಚಿಂತನೆ  ಕಳೆದ ಕೆಲವು ತಿಂಗಳುಗಳಿಂದ   ಪ್ರಚಾರದಲ್ಲಿದೆ.  ಈ ವಿಚಾರವನ್ನು  ಹರಿಬಿಟ್ಟ ಸಂಘಟನೆಗಳ ಹುರುಪು ಕಡಿಮೆಯಾದಂತೆ  ಕಾಣುತ್ತಿದೆ.  ಪ್ರಚಾರ ಪ್ರಿಯ  ನೇತಾರರು  ಬಹುಬೇಗ ನಿರಾಸೆ  ಅನುಭವಿಸುತ್ತಾರೆ.   ಯಾಕೆಂದರೆ ಇಂತಹ  ಚಳುವಳಿ ಜನಸಾಮಾನ್ಯರನ್ನು   ಒಳಗೊಳ್ಳುವಂತಾಗಲು ಸಮಯಬೇಕು.   ಪ್ರವಾಹದ ವಿರುದ್ಧ  ಸೆಣೆಸಾಡಬೇಕಾದ  ಕ್ಷೇತ್ರವಿದು.  ಪರ್ಯಾಯ ವ್ಯವಸ್ಥೆಯ ಕಲ್ಪನೆ ಇಲ್ಲದವರಿಂದ  ಇಂತಹ  ಹೋರಾಟವನ್ನು  ದೀರ್ಘಕಾಲದವರೆಗೆ  ಜೀವಂತವಾಗಿಡುವುದು  ಸಾಧ್ಯವಾಗಲಾರದು.  ಆದರೆ ಈ  ಚಿಂತನೆ , ಹೋರಾಟ ನಡೆದೇ ನಡೆಯುತ್ತದೆ.    ಸಾಮಾಜಿಕ- ಆರ್ಥಿಕ ಪರಿವರ್ತನೆಯಾಗುವಾಗ ಸೈದ್ಧಾಂತಿಕ ನೆಲೆಗಟ್ಟು ಅತಿ ಅಗತ್ಯ.  ನೇತಾರರಲ್ಲಿ ನೈತಿಕ   ಮೌಲ್ಯಗಳು ಮತ್ತು  ಸೈದ್ಧಾಂತಿಕ ಬದ್ಧತೆ ಇದ್ದಾಗ ಮಾತ್ರ ಬದಲಾವಣೆಯ ವೇಗ ತೀವ್ರವಾಗುತ್ತದೆ.  ಸಾಮೂಹಿಕ   ಮಾನಸಿಕತೆ  ಬದಲಾದಾಗ   ಮಾತ್ರ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ.  ಇದಕ್ಕಾಗಿ ಶ್ರಮಿಸುವ      ನೇತಾರರಿಗಾಗಿ  ಕನ್ನಡನಾಡು ಕಾಯುತ್ತ್ತಿದೆ.  ತಮ್ಮನ್ನೇ ವೈಭವೀಕರಿಸಿಕೊಳ್ಳುವವರು ಅಲ್ಪಕಾಲದವರೆಗೆ  ಮಿಂಚುತ್ತಾರೆ ಹಾಗೂ ಅಷ್ಟೇ ಬೇಗ ಮರೆಯಾಗುತ್ತಾರೆ.        ರಾಜ್ಯೋತ್ಸವದ ನೆಪದಲ್ಲಿ,  ಕನ್ನಡದ  ಹೆಸರಿನಲ್ಲಿ  ಕುಣಿದು  ಕುಪ್ಪಳಿಸುವವರು ಇಂದು ಗಂಭೀರವಾಗಿ  ಯೋಚಿಸಲೇಬೇಕಾಗಿದೆ.   ಕನ್ನಡ ನಾಡಿನ  ಸಂಪತ್ತನ್ನು  ಹೊರಗಿನವರು ಲೂಟಿ ಹೊಡೆಯುತ್ತಿದ್ದರೆ ಕನ್ನಡ  ನಾಡಿನ  ಉದ್ಯೋಗಾವಕಾಶಗಳು ಹೊರಗಿನವರ ಪಾಲಾಗುತ್ತಿವೆ.  ಕನ್ನಡಿಗರು  ನಿರುದ್ಯೋಗಿಗಳಾಗುತ್ತಿದ್ದಾರೆ.  ತಮ್ಮದೇ ನಾಡಿನಲ್ಲಿ  ನಿರಾಧಾರಿಗಳಾಗುತ್ತಿದ್ದಾರೆ. ಇಂತಹ ಅನ್ಯಾಯವನ್ನು  ಸರಿಪಡಿಸುವ  ಕುರಿತು ಕಾರ್ಯಪ್ರವೃತ್ತರಾಗಬೇಕಿದೆ. ರಾಜಕೀಯದ  ಥಳಕು, ಬಳುಕಿಗೆ  ಮರುಳಾಗಿ  ಕೇಂದ್ರ ನಾಯಕರ  ಗುಲಾಮಗಿರಿ ಮಾಡುತ್ತಾ,  ಕನ್ನಡಿಗರಿಗಾಗುತ್ತಿರುವ  ಅನ್ಯಾಯದ  ವಿರುದ್ಧ ಸೊಲ್ಲೆತ್ತದಿರುವ  ಜನಪ್ರತಿನಿಧಿಗಳಿಗೆ  ಬಿಸಿ ಮುಟ್ಟಿಸುವ ಕೆಲಸಮಾಡಬೇಕಿದೆ.    ಸಮೃದ್ಧ, ಸ್ವಾವಲಂಬಿ , ಸ್ವಾಭಿಮಾನಿ ಕರ್ನಾಟಕದ  ಕನಸನ್ನು ಕಾಣಬಲ್ಲವರು ಮಾತ್ರ ಇದನ್ನು  ನನಸಾಗಿಸಬಲ್ಲರು.   ವಿಕೇಂದ್ರೀಕೃತ  ಆರ್ಥಿಕ ವ್ಯವಸ್ಥೆಯ  ಜಾರಿಯಿಂದ  ಇದು ಸಾಧ್ಯ.  ನಮ್ಮ ನಡುವಿನ  ಹಲವು ಭೇದ  ಭಾವಗಳನ್ನು  ದೂರೀಕರಿಸಿ, ನಮ್ಮನ್ನು ನಾವು ಕನ್ನಡಿಗರೆಂದು  ಗುರ್ತಿಸಿಕೊಳ್ಳುವ  ಮನೋಭಾವದೊಂದಿಗೆ  ಈ ವರ್ಷದ ರಾಜ್ಯೋತ್ಸವ ಆಚರಿಸೋಣ.  ಡಿಜೆ ಸೌಂಡ್‌ನ  ಗೀತೆಗಳಿಗೆ  ಹೆಜ್ಜೆ ಹಾಕಿ ಕುಣಿಯುವಾಗ  ಅಸಹಾಯಕ ಕನ್ನಡಿಗರ  ಸ್ಥಿತಿಯನ್ನು  ಮರೆಯದಿರೋಣ.    ಶೋಷಣಾ  ರಹಿತ  ಕನ್ನಡನಾಡು  ಕಟ್ಟುವ  ದೃಢನಿರ್ಧಾರ  ತಳೆದು ರಾಜ್ಯೋತ್ಸವದ ಶುಭಾಶಯ ವಿನಿಮಯ  ಮಾಡಿಕೊಳ್ಳೋಣ.    ***********************************************************************         

ಭಾಷೆ Read Post »

ಇತರೆ

ಭಾಷೆ

ಭಾಷಾ ಮಾಧ್ಯಮವಲ್ಲ, ಶೈಕ್ಷಣಿಕ ವ್ಯವಸ್ಥೆಯೇ ಬದಲಾಗಬೇಕು! ಡಿ.ಎಸ್.ರಾಮಸ್ವಾಮಿ ಕರ್ನಾಟಕವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ನಡುವೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಯ ಮಾತುಗಳ ಸುತ್ತ ಹಬ್ಬಿಕೊಂಡಿರುವುದು ಭಾವನಾತ್ಮಕ ಅಂಶಗಳಾಗಿರುವುದರಿಂದ ಈ ವಿಷಯವನ್ನು ಕುರಿತಂತೆ ಹೊಸ ಚಿಂತನೆಗಳೇ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮನ್ನು ಕಾಡುತ್ತಿರುವ ನದಿ ನೀರಿನ ವಿಚಾರವೂ ಭಾವನಾತ್ಮಕವಾಗಿಯೇ ನಮ್ಮನ್ನು ಇಕ್ಕಟ್ಟಿಗೆ ತಳ್ಳಿರುವ ಸತ್ಯ ನಮ್ಮ ಮುಂದೆ ಢಾಳಾಗಿಯೇ ಇದೆ. ಈ ನೆಲದಲ್ಲಿ ತೀವ್ರ ಸ್ವರೂಪದ ಆಂದೋಲನಗಳೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ ಮತ್ತು ಕನ್ನಡ-ಕನ್ನಡಿಗರ ಉಳಿವು ಈ ವಿಷಯಗಳ ನಡುವೆಯೇ ನಡೆದಿದೆ, ನಡೆಯುತ್ತಿರುತ್ತದೆ. ಇಂದಿಗೂ ಕಾಗೋಡು ಸತ್ಯಾಗ್ರಹವನ್ನು ಹೊರತುಪಡಿಸಿದರೆ ಕನ್ನಡಿಗರಿಗೆ ನೆನಪಾಗುವುದು ಗೋಕಾಕ್ ಚಳುವಳಿ ಮಾತ್ರ. ೧೯೭೦ರ ದಶಕದ ದಲಿತ, ಬಂಡಾಯ ಮತ್ತು ಎಡಪಂಥೀಯ ಚಳುವಳಿಗಳು ಎಷ್ಟೇ ಪ್ರಖರವಾಗಿ ನಮ್ಮ ಮೇಲೆ ಪ್ರಭಾವಿಸಿದ್ದರೂ ಅವುಗಳು ನಮ್ಮ ಮನಸ್ಸಿನಿಂದ ಈಗಾಗಲೇ ಮಾಸಿಹೋಗುತ್ತಿವೆ. ಆದರೆ ಕನ್ನಡಪರ ಹೋರಾಟಗಳ ಕಾವು ಸದಾ ಕಾಡುತ್ತಲೇ ಇರುತ್ತದೆ. ಭಾಷೆಯ ಬಾಂಧವ್ಯದ ಸುತ್ತ ನಾವು ನಿರ್ಮಿಸಿಕೊಂಡಿರುವ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾಷೆಯ ವಿಭಿನ್ನ ಆಯಾಮಗಳನ್ನು ಹಾಗೂ ಭಾಷೆಯ ಬಳಕೆಯ ಸುತ್ತಲಿನ ಭಾವನಾತ್ಮಕ ಪ್ರಪಂಚವನ್ನು ಬಳಸಿಕೊಳ್ಳುತ್ತಿರುವ ಸಂಘಟನೆಗಳ ಸಂಖ್ಯೆ ನೂರಾರು. ಕನ್ನಡ ಭಾಷೆ ಅವಸಾನ ಹೊಂದುತ್ತಿದೆ ಎಂಬ ಮಿಥ್ಯೆಯನ್ನು, ಕನ್ನಡ ಭಾಷೆಯ ಬಳಕೆ ಕ್ಷೀಣ ಸುತ್ತಿದೆ ಎಂಬ ಭ್ರಮೆಯನ್ನು ಜನಮಾನಸದಲ್ಲಿ ಸೃಷ್ಟಿಸಿ ತಮ್ಮ ಕನ್ನಡತನವನ್ನು ಅಥವಾ ವೀರ ಕನ್ನಡಿಗ ಪರಂಪರೆಯನ್ನು ವೈಭವೀಕರಿಸಿಕೊಳ್ಳುವ ವೇದಿಕೆ-ಸಂಘ-ಸಂಸ್ಥೆಗಳೇ ಈ ಕಾಲದ ಗೊಂದಲಗಳ ಮೂಲ ಕಾರಣ. ಕನ್ನಡ ಮಾಧ್ಯಮ-ಆಂಗ್ಲ ಮಾಧ್ಯಮದ ನಡುವಿನ ಚರ್ಚೆ ಇಂದು ನೆನ್ನೆಯದಲ್ಲ. ಮೈಸೂರು ರಾಜ್ಯದ ನಂತರ  ಉದಯವಾದ ಅಖಂಡ ಕರ್ನಾಟಕದ ಕಾಲದಿಂದಲೂ ಇದು ನಡೆಯುತ್ತ ಬಂದಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವ ಸರ್ಕಾರದ ದೃಢ ನಿರ್ಧಾರಕ್ಕೀಗ ಉಚ್ಛ ನ್ಯಾಯಾಲಯದ ತಪರಾಕಿ ತಟ್ಟಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕದಲ್ಲಿ ಕನ್ನಡವನ್ನಷ್ಟೇ ಮಾತೃ ಭಾಷೆಯೆಂದು ಪರಿಗಣಿಸಲಾಗದೆಂಬ  ನ್ಯಾಯಾಲಯದ ಮಾತಿಗೆ ಸಹಜವಾಗಿಯೇ ಕನ್ನಡ ಪರ ಮನಸ್ಸುಗಳು ಕೆರಳಿವೆ. ಏಕೆಂದರೆ ಇಲ್ಲಿ ಭಾವನೆಗಳಷ್ಟೇ ಸಕ್ರಿಯವಾಗಿವೆಯೇ ವಿನಾ ವಾಸ್ತವತೆ ಹಿಂದೆ ಸರಿದಿದೆ. ಈ ಹಿಂದೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಯೋಚಿಸಿದಾಗಲೂ ಕನ್ನಡ ಪರ ದನಿಗಳು ಇದೇ ರೀತಿಯ ಕೂಗು ಹಬ್ಬಿಸಿದ್ದವು.   ಇಲ್ಲಿ ಪ್ರಶ್ನೆ ಇರುವುದು ಮತ್ತು ಇರಬೇಕಾದದ್ದು ಭಾಷೆಯ ಉಳಿವು-ಅಳಿವಿನ ಬಗ್ಗೆ ಅಲ್ಲ. ಬದಲಿಗೆ ಅದು ನಮ್ಮ ಭವಿಷ್ಯದ ಜನಾಂಗವನ್ನು ಸೃಷ್ಟಿಸುವ ಶೈಕ್ಷಣಿಕ ವ್ಯವಸ್ಥೆಯದ್ದು. ಶಿಕ್ಷಣ ಮಾಧ್ಯಮಕ್ಕೂ ಒಂದು ಭಾಷೆಯ ಉಳಿವಿಗೂ ಇರುವ ಸೂಕ್ಷ್ಮಸಂಬಂಧಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡುವುದಕ್ಕಿಂತಲೂ ಸಮಕಾಲೀನ ಸಂದರ್ಭದ ಅನಿವಾರ್ಯತೆ ಮತ್ತು ಭವಿಷ್ಯದ ಅವಶ್ಯಕತೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎನ್ನುವ ವಾದ ಸಮಂಜಸ. ಈ ನೆಲೆಯಲ್ಲಿ ಹಮ್ಮಿಕೊಳ್ಳುವ ಹೋರಾಟಗಳೂ ಸಮರ್ಥನೀಯ. ಆದರೆ ಪ್ರಸಕ್ತ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಮಧ್ಯಮ ಮತ್ತು ಬಡವರ್ಗದ ಜನತೆಗೆ ಅನಿವಾರ್ಯ ಎನಿಸಿರುವ ಅಂಗ್ಲ ಭಾಷೆಯನ್ನು ಬೋಧಿಸಿದಲ್ಲಿ ಅಪಾಯ ಏನಿದೆ? ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಜಾರಿಗೊಳಿಸಿದರೆ ಕನ್ನಡ ಭಾಷೆಯ ಬೆಳವಣಿಗೆ ಹೇಗೆ ಕುಂಠಿತವಾಗುತ್ತದೆ ? ಸರ್ಕಾರ ಕಡ್ಡಾಯ ಕನ್ನಡ ಕಲಿಕೆಯ ತನ್ನ ನಿರ್ಧಾರದಿಂದ ಹಿಂದೆ ಸರಿದ ಕೂಡಲೇ ಕನ್ನಡ ಮಾಧ್ಯಮ ಬಯಸುವವರ ಸಂಖ್ಯೆ ಕಡಿಮೆಯಾಗುವುದೇ ? ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವುದರಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದಾದರೆ, ಕರ್ನಾಟಕದಾದ್ಯಂತ ನಾಯಿಕೊಡೆಗಳಂತೆ ಬೆಳೆದಿರುವ ಆಂಗ್ಲ ಮಾಧ್ಯಮದ ಶಾಲೆಗಳ ಭರಾಟೆಯಲ್ಲಿ ಕನ್ನಡ ಎಂದೋ ನಶಿಸಿಹೋಗಬೇಕಿತ್ತು. ಹಾಗಾಗಿಲ್ಲವಲ್ಲ. ಅಥವಾ ಕನ್ನಡಪರ ಸಂಘಟನೆಗಳು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ವಿರೋಧಿಸುವುದಾದರೆ ಖಾಸಗಿ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಓದಲಿಚ್ಚಿಸುವ ಮಕ್ಕಳೆಲ್ಲರೂ ಅನಿವಾರ್ಯವಾಗಿ ಖಾಸಗಿ ಶಾಲೆಗಳನ್ನೇ ಆಶ್ರಯಿಸಬೇಕಾಗುತ್ತದೆಂಬ ಅರಿವು ಇವರಿಗಿಲ್ಲವೆ? ಮತ್ತು  ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯವಿಲ್ಲದ ಬಡ ಮಕ್ಕಳು ಕನ್ನಡ ಮಾಧ್ಯಮಕ್ಕೇ ಜೋತು ಬೀಳಬೇಕೇ ? ಇಲ್ಲಿ ಉದ್ಭವಿಸುವ ಪ್ರಶ್ನೆ ಆಯ್ಕೆಯ ಸ್ವಾತಂತ್ರದ್ದು. ಆಂಗ್ಲ ಮಾಧ್ಯಮವನ್ನೇ ವಿರೋಧಿಸುವುದಾದರೆ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಖಾಸಗಿ ಶಾಲೆಗಳ ವಿರುದ್ಧವೇ ತಮ್ಮ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆಯೇ ವಿನಾ ಸರ್ಕಾರದ ವಿರುದ್ಧವಲ್ಲ! ಅಲ್ಲಿಗೆ ಜನಸಾಮಾನ್ಯರ ಹಿತಾಸಕ್ತಿಯ ವಿರುದ್ಧ ಗುಡುಗುವ ಈ ಸಂಘಟನೆಗಳಿಗೆ ನಿಷೇದದ ಪ್ರಸ್ತಾಪ ಬರುವ ಕಾಲವೂ ದೂರವಿಲ್ಲ. ಇದರ ಜೊತೆಗೆ ಇಂದು ಎಷ್ಟು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂಬ ಸಮೀಕ್ಷೆಯನ್ನೇನ್ನಾದರೂ ಮಾಡಲಾಗಿದೆಯೇ ? ಅಥವಾ ರಾಜ್ಯದ ಜನತೆ ಯಾವ ಮಾಧ್ಯಮವನ್ನು ಬಯಸುತ್ತಾರೆ ಎಂಬ ಸಮೀಕ್ಷೆ ನಡೆಸಲಾಗಿದೆಯೇ ? ಸಂಘಟನಾತ್ಮಕ ಭಾವನೆಗಳು ಜನತೆಯ ಸಮಗ್ರ ಧೋರಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬ ಅಹಮಿಕೆಯನ್ನು ಬದಿಗಿಟ್ಟು ಯೋಚಿಸಿದಾಗ ಒಂದು ನಿರ್ದಿಷ್ಟ ವಿದ್ಯಮಾನವನ್ನು ಕುರಿತು ಆಂದೋಲನ ರೂಪಿಸುವ ಸಂಘಟನೆಗಳು ಜನತೆಯ ನೈಜ ಆಶಯಗಳನ್ನು ಅರಿಯಲು ಯತ್ನಿಸಿವೆಯೇ ಅನ್ನುವುದೂ ಮುಖ್ಯವಾಗುತ್ತದೆ. ಈ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಇಂದಿನವರೆಗೂ ಮಾಡಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಕನ್ನಡದ ಉಳಿವಿಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯತೆಯೇ ಇರಬಹುದು. ಆದರೆ ಕನ್ನಡ ಅಳಿಸಿಹೋಗುತ್ತಿದೆ ಎಂಬ ಕೂಗು ಅನವಶ್ಯಕ. ಭಾಷೆ ಎಂದಿಗೂ ಅಳಿಯುವುದಿಲ್ಲ. ಕನ್ನಡದಂತಹ ಪ್ರಾಚೀನ ಭವ್ಯ ಪರಂಪರೆಯುಳ್ಳ ಭಾಷೆ ಕ್ಷೀಣಿಸುವುದೂ ಇಲ್ಲ. ಸಮಕಾಲೀನ ಕಾಲಘಟ್ಟದಲ್ಲಿ, ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಯ ಉಂಟಾಗಿರಬಹುದು ಅಷ್ಟೆ. ಆದರೆ ಅದು ಮೇಲ್ನೋಟಕ್ಕೆ ಕಾಣುವ ಚಿತ್ರಣ. ನಗರೀಕೃತ ಮನಸ್ಸುಗಳು ಯೋಚಿಸುವ ರೀತಿಯೇ ಕೆಲವೊಮ್ಮೆ ತಳಮಟ್ಟದ ವಾಸ್ತವಗಳನ್ನು ಮರೆಮಾಚಿಸಿ ಬಿಟ್ಟಿರುತ್ತವೆ. ಕನ್ನಡ ಪರ ಕೂಗಿಗೂ ಇದು ಅನ್ವಯಿಸುತ್ತದೆ. ಭಾಷೆಯ ಉಳಿವು ಎಂದರೆ ಗ್ರಂಥಗಳಲ್ಲಡಗಿರುವ ಭಾಷಾ ಪಾಂಡಿತ್ಯದ ರಕ್ಷಣೆ ಮಾತ್ರವಲ್ಲ. ಭಾಷಿಕರ ಹಿತಾಸಕ್ತಿಗಳ ರಕ್ಷಣೆಯೂ ಹೌದು. ಕನ್ನಡ ಭಾಷಿಕರೆಂದರೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕುವ ಆರ್ಥಿಕ ಸಾಮರ್ಥ್ಯ, ಸಾಮಾಜಿಕ ಸ್ಥಾನಮಾನ ಮತ್ತು ಸಾಂಸ್ಕೃತಿಕ ಅವಕಾಶಗಳುಳ್ಳ ಮಧ್ಯಮ-ಮೇಲ್ ಮಧ್ಯಮ ವರ್ಗಗಳು ಅಥವಾ ಮೇಲ್ಜಾತಿಯವರು ಮಾತ್ರವಲ್ಲ. ನವ ಉದಾರವಾದ ಸೃಷ್ಟಿಸಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಆಂಗ್ಲ ಭಾಷಾ ಶಿಕ್ಷಣ ಒಂದು ಅನಿವಾರ್ಯತೆಯಾಗಿರುವುದು ಒಪ್ಪಲೇಬೇಕಾದ ಸತ್ಯ . ಈ ಅನಿವಾರ್ಯತೆಯನ್ನು ಪೂರೈಸುವ ಹೊಣೆಗಾರಿಕೆ ನಮ್ಮನ್ನಾಳುತ್ತಿರುವವರ ಮೇಲಿದೆ. ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಲಭ್ಯವಾಗುವುದಾದರೆ ಕನ್ನಡ ಭಾಷೆ ನಶಿಸುವುದಿಲ್ಲ ಬದಲಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಬಡವಿದ್ಯಾರ್ಥಿಗಳು ಕನ್ನಡದ ಮತ್ತು ಕರ್ನಾಟಕದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಇಲ್ಲಿ ಉಜ್ವಲ ಭವಿಷ್ಯಕ್ಕಾಗಿ ಆಂಗ್ಲ ಭಾಷೆ ಅಗತ್ಯ ಎಂದು ಭಾವಿಸಬೇಕಿಲ್ಲ. ಶೈಕ್ಷಣ ಕ ಪಯಣದಲ್ಲಿ ಮುನ್ನಡೆಯಲು ಲಭ್ಯವಿರುವ ಹಾರುಮಣೆಗಳಲ್ಲಿ ಆಂಗ್ಲ ಭಾಷೆಯೂ ಒಂದು ಎಂಬ ವಾಸ್ತವವನ್ನು ಗ್ರಹಿಸಬೇಕಷ್ಟೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುವುದೇ ಆದರೆ ಈ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸುವುದೇ ಸೂಕ್ತ. ಭಾಷಾ ಮಾಧ್ಯಮದ ವಿಚಾರವನ್ನು ಅಸ್ತಿತ್ವಗಳ ನೆಲೆಗಟ್ಟಿನಲ್ಲಿ ನೋಡಿದಾಗ ಭಾವನೆಗಳು ಮೇಲುಗೈ ಸಾಧಿಸುತ್ತವೆ. ವಾಸ್ತವಗಳು ದೂರಾಗುತ್ತವೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಾಂವಿಧಾನಿಕ ದೃಷ್ಟಿಕೋನದಿಂದ ಕೂಡಿದೆ. ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವ, ಸಮರ್ಥಿಸುವ ದನಿಗಳು ಈ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ. ಹಾಗಾದರೆ ಕನ್ನಡದ ಪ್ರಶ್ನೆ ಬಗೆಹರಿಯುವುದು ಹೇಗೆ ? ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿ ಮತ್ತು ಕನ್ನಡಪರ ದನಿಗಳ ಪ್ರಬುದ್ಧತೆ ಎರಡೂ ಇಲ್ಲಿ ಅಗ್ನಿಪರೀಕ್ಷೆಗೊಳಗಾಗಿರುವುದು ಸ್ಪಷ್ಟ.   ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಮತ್ತು ಕಲಿಕೆಯ ಮುಖ್ಯ ಮಾಧ್ಯಮ ಯಾವ ಭಾಷೆಯಲ್ಲಿರಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲವಲ್ಲ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದರಿಂದ ಮಕ್ಕಳಿಗೆ ಹೊರೆಯಾಗುತ್ತದೆ. ಕನ್ನಡಕ್ಕೆ ಅಪಾಯ, ಕನ್ನಡ ಸಂಸ್ಕೃತಿಗೆ ಅಪಾಯ ಎಂದು ಒಂದು ಗುಂಪಿನವರು ವಾದಿಸುತ್ತಿದ್ದರೆ ಮತ್ತೊಂದು ಗುಂಪಿನವರು ಇಂಗ್ಲಿಷ್ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಅತಿ ಅವಶ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಇಲ್ಲದಿದ್ದರೆ ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಇಂಗ್ಲಿಷ್ನಿಂದಲೇ ವಿಮೋಚನೆ ಎನ್ನುತ್ತಿದ್ದಾರೆ. ದುರಂತವೆಂದರೆ ಈ ಎರಡೂ ವಾದಗಳನ್ನು ಮಂಡಿಸುತ್ತಿರುವವರೆಲ್ಲರೂ  ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಎರಡೂ ವಾದಗಳೂ ವಿತಂಡವಾದಗಳೇ ಸರಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಂಸ್ಕೃತಿ ಇಷ್ಟೂ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಈ ಕನ್ನಡ ಸಂಸ್ಕೃತಿ ಎಂಬುದು ಇತರ ಎಲ್ಲಾ ಸಂಸ್ಕೃತಿಗಳಂತೆ ಚಲನಶೀಲವೇ ಆಗಿರುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನನ್ನು ಉಳಿಸಿಕೊಂಡಿದೆ. ಹೈದರ್, ಟಿಪ್ಪು ಬಹಮನಿ ಸುಲ್ತಾನರ ಆಡಳಿತದ ಅವಧಿಯಲ್ಲಿ ದಖ್ಖನಿ ಆಡಳಿತ ಭಾಷೆಯಾಗಿತ್ತು. ಹಾಗೆಂದು ಕನ್ನಡ ಮರೆಯಾಗಲಿಲ್ಲ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲಿಷ್ ಆಳುವವರ ಭಾಷೆಯಾಗಿತ್ತು. ಆಗಲೂ ಕನ್ನಡ ಮರೆಯಾಗಲಿಲ್ಲ. ಈ ಸವಾಲುಗಳನ್ನು ಎದುರಿಸಿ ಅದು ಉಳಿದುಕೊಂಡಿತು. ಈಗಲೂ ಅಷ್ಟೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಅದು ಎದುರಿಸಿ ಉಳಿದುಕೊಳ್ಳುತ್ತದೆ. ಈ ಸವಾಲುಗಳನ್ನು ಎದುರಿಸಲು ನಮ್ಮ ಭಾಷೆಯನ್ನು ಸಿದ್ಧಗೊಳಿಸಬೇಕು. ಅಂದರೆ ಹೊಸ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಚರ್ಚಿಸಬೇಕು. ಇದರ ಬದಲಿಗೆ ಕಂಪ್ಯೂಟರನ್ನು `ಗಣಕ ಯಂತ್ರ’ ಎಂದರೆ ಇಂಜಿನಿಯರನ್ನು ‘ಅಭಿಯಂತರ’ ಎಂದ ಮಾತ್ರಕ್ಕೆ ಕನ್ನಡ ಉದ್ಧಾರವಾಗುತ್ತದೆ ನಂಬಿದರೆ ಕನ್ನಡವನ್ನು ಶಿಶುವಿಹಾರದಿಂದ ಸ್ನಾತಕೋತ್ತರ ಮಟ್ಟದವರೆಗೆ ಕಡ್ಡಾಯ ಮಾಡಿದರೂ ಅದು ಉಳಿಯಲಾರದು. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತವರೆಲ್ಲರೂ ಇಂಗ್ಲಿಷ್ ಪಂಡಿತರಾಗಿ ಬಿಡುವುದಿಲ್ಲ. ನನ್ನ ತಲೆಮಾರಿನ ಹಾಗೂ ಅದಕ್ಕೂ ಹಿಂದಿನವರೆಲ್ಲರೂ ಹಳ್ಳಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದು ಕಾಲೇಜು ಮಟ್ಟದಲ್ಲಿ ಇಂಗ್ಲಿಷಿಗೆ ತೆರೆದುಕೊಂಡವರು. ನಾವೆಲ್ಲರೂ ಇಂಗ್ಲಿಷನ್ನು ಸಲೀಸಾಗಿ ಬಳಸುತ್ತಿಲ್ಲವೇ? ಹೌದು, ಕೆಲ ಸಂದರ್ಭಗಳಲ್ಲಿ ಇಂಗ್ಲಿಷ್ ಒಂದು ಸವಾಲು ಎನಿಸಿತ್ತು. ಆದರೆ ಅದೇನೂ ಮೀರಲಾರದ ಸವಾಲಾಗಿರಲಿಲ್ಲ. ಏಕೆಂದರೆ ನಮ್ಮ ಇಂಗ್ಲಿಷ್ ಈಗಿನವರ ಇಂಗ್ಲಿಷಿಗಿಂತ ಚೆನ್ನಾಗಿಯೇ ಇದೆ! ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವವರೆಲ್ಲ ಸರ್ವಜ್ಞರಾಗಿಬಿಡುವುದಿಲ್ಲ. ಏಕೆಂದರೆ ನಮಗಿರುವ ಸವಾಲು ಕಲಿಯುವ ಮಾಧ್ಯಮದ್ದಲ್ಲ. ಶಿಕ್ಷಣದ್ದು. ಈ ಸವಾಲನ್ನು ಎದುರಿಸುವ ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ಹಾದಿಯಾಗಿ ಮಾಧ್ಯಮದ ಕುರಿತ ಚರ್ಚೆಯನ್ನು ಅನವಶ್ಯಕವಾಗಿ ಬೆಳಸುತ್ತಿದ್ದೇವೆ. ನಮ್ಮ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಗಳೆರಡೂ ಈ ಕಾಲದ ಅಗತ್ಯವನ್ನು ಪೂರೈಸುತ್ತಿಲ್ಲ. ಜಗತ್ತು ಹಳ್ಳಿಯಾಗಿರುವ ಈ ಹೊತ್ತಿನಲ್ಲಿಯೂ ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳನ್ನು ಇವು ಒದಗಿಸುತ್ತಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಮಾಧ್ಯಮ ಯಾವುದಾಗಿರಬೇಕು ಎಂಬುದರ ಕುರಿತು ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ. ಮಕ್ಕಳ ಬೌದ್ಧಿಕ ವಿಕಸನಕ್ಕೆ ತಾಯ್ನುಡಿಯಲ್ಲೇ ಕಲಿಕೆಯಾಗಬೇಕು ಅನ್ನುವುದನ್ನು ಜಗತ್ತಿನ ವಿಜ್ಞಾನಿಗಳು, ಮನಶಾಸ್ತçಜ್ಞರು, ಕಲಿಕೆ ತಜ್ಞರು, ವಿಶ್ವಸಂಸ್ಥೆ ಸೇರಿದಂತೆ ಸಾವಿರಾರು ಜನರು ಪ್ರತಿಪಾದಿಸುತ್ತಾರೆ. ವಿಶ್ವಸಂಸ್ಥೆಯAತೂ

ಭಾಷೆ Read Post »

ಇತರೆ

ನನ್ನೊಳಗೆ!

ಕನಸಿನೂರಿಂದ…. -ಕನಸಿನೂರಿನವ ಮತ್ತದೆ ದ್ವಂದ್ವ! ಚಿತ್ತಭಿತ್ತಿಯಲಿ ಸ್ಥಿರವಾಗಿ ಉಳಿದ ಅ ಮೊಗವನೆಲ್ಲಿ ಕಂಡೆ, ಪಡೆಯದೆಲೆ ಕಳೆದುಕೊಂಡೆ? ನೆನಪಿಸಿಕೊ ಹೃದಯ ಕವಾಟವೆ ಕಣ್ಣೊಳಗೆ ಬಿಂಬವಾಗಿ ಎದೆಯೊಳಗೆ ಕಂಬವಾಗಿ ನರನಾಡಿಗಳಲಿ ಜೀವ ಮಿಡಿತವಾಗಿ ನಿಂತಾ ಮೊಗವ ಎಲ್ಲಿ ಕಂಡೆ ಹೇಗೆ ಕಳೆದುಕೊಂಡೆ. ಮೊದಲ ನೋಟದಲೇನು ತುಂಬಿಕೊಂಡೆ ಆ ಮುದ್ದು ಮೊಗದ ನಕ್ಷತ್ರಗಳ ಕಣ್ಣುಗಳನೊ  ಅದರೊಳಗಿನ ಬೆಳಕನ್ನೊ? ಆ ಬಿರಿಯದೆ ಬಿಗಿದ ತುಟಿಗಳ ಹಿಂದಿನ ಮೌನವನೊ? ಬಹಳ ವರುಷಗಳ ಹಿಂದೆ ಆ ಮುಖವನ್ನು ಮೊದಲ ಬಾರಿಗೆ ನೋಡಿದೆ. ಅದೇಕೊ ಆ  ಮುಖ ನನ್ನ ಸೆಳೆದುಬಿಟ್ಟಿತ್ತು.ಎಷ್ಟರ ಮಟ್ಟಿಗೆ ಹೃದಯದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿತೆಂದರೆ ಇವತ್ತಿನವರೆಗು ಬೇರ್ಯಾವ ಮುಖವು ಅದರ ಸ್ಥಳ  ಆಕ್ರಮಿಸಲಾಗಲಿಲ್ಲ.ಬಹುಶ:ಅದರ ನೆನಪುಗಳಲ್ಲೆ ನೂರಾರು ಪುಟಗಳ ಬರೆಯುತ್ತ ಹೋದೆ. ತೀರಾ ಮೊನ್ನೆ ಮೊನ್ನೆಯವರೆಗು  ಮತ್ತೆಂದಾದರು ಆ ಮುಖ ನೋಡುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ….. ಆದರೆ ನಾವು ನಂಬಲಿ ಬಿಡಲಿ ಕಾಲ ನಮ್ಮ ಜೊತೆ  ವಿಧಿಯ ಹೆಸರಿನಲ್ಲಿ ಆಟ ಆಡುತ್ತದೆ. ಅಂತಹದೊಂದು ಆಟದ ಭಾಗವಾಗಿ ಮತ್ತೆ ನಾನಾ ಮುಖವನ್ನು ನೋಡಿದೆ. ಮತ್ತೆ ಮತ್ತೆ ಆ ಮುಖ ನೋಡುವಾಗ ಮನಸು ಮಿತಿಗಳನ್ನು ಮೀರುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.. ಆ ಮುಖವನ್ನು ಬೊಗಸೆಯೊಳಗೆ ಹಿಡಿದುಕೊಂಡು ನುಡಿಯಬೇಕು-ಎಲ್ಲಿದ್ದೆಇಲ್ಲಿಯವರೆಗು?ಮತ್ತೆಕೆ ಬಂದೆ ನನ್ನೆದುರಿಗೆ ಅಂತ ಕೇಳಬೇಕೆನಿಸುತ್ತೆ.ಆ ದೈರ್ಯ ಸಾಲುತ್ತಿಲ್ಲ…ಸಾದ್ಯವಾದಷ್ಟು ಆ ಮೊಗದಿಂದ ದೂರ ಸರಿದು ಹೋಗಬೇಕೆನಿಸಿದಾಗೆಲ್ಲ  ಸಾವು ನೆನಪಾಗುತ್ತದೆ.ಅದಿಲ್ಲದೆಯೂ ಇಷ್ಟು ವರ್ಷಗಳಕಾಲ ಬದುಕಿದ್ದು ವ್ಯರ್ಥವೆನಿಸಿ ಆ ಮುಖವ ಮರೆಯಬೇಕೆಂದು ಶಪಥಗೈದು  ಹಗಲು ಮುಗಿಸುತ್ತೇನೆ. ಮತ್ತೆ ಬಂದ ಇರುಳಿನ ಸ್ವಪ್ನದೊಳಗಾ  ಮುಖ ಬಂದು ಕೇಳುತ್ತದೆ….ಇಷ್ಟು ವರ್ಷ ನನಗಾಗಿ ಕನಸಿದ್ದು ಸುಳ್ಳೇ? ಹೇಳು ಮತ್ತೇಕೆ ಮರೆಯಲೆತ್ನಿಸುವ ನಾಟಕ? ಉತ್ತರಿಸಲಾಗದೆ ತಡವರಿಸುತ್ತೇನೆ….. ಕರಗಿದ ಕತ್ತಲಿಗೆ ಕುಡಿಯೊಡೆದು ಬಂದ ಬೆಳಗು ಮತ್ತದೆ ಮುಖವನ್ನು ಎದುರು ನಿಲ್ಲಿಸುತ್ತದೆ. ಇದನ್ನು ಬದುಕಿನಕಡೆಯ ದಿನವೆಂದೊ-ಕಡೆಯ ಕ್ಷಣವೆಂದೊ ಅಂದುಕೊಂಡು ಹೇಳಿ ಬಿಡು ಮುಖಕ್ಕೆ ಮುಖ ಕೊಟ್ಟು ಅದರ ಕಣ್ಣುಗಳಲ್ಲಿ ನಿನ್ನಕಣ್ಣ ನೆಟ್ಟುಪ್ರೀತಿಸುತ್ತೇನೆಂದು! ಮತ್ತದೆ ದ್ವಂದ್ವ! ===============================

ನನ್ನೊಳಗೆ! Read Post »

ಇತರೆ

ಲಹರಿ

ಮಳೆಯಲ್ಲಿ ನೆನೆದ ನೆನಪು ಪ್ರಮೀಳಾ ಎಸ್.ಪಿ. ” ಮಳೆ”… ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು ನಮ್ಮ ರೈತಾಪಿ ಜನಗಳು.ಈಗಿನ ಕಾಲದ ಚಿಂತನಾ ರೀತಿಯೇ ಬೇರೆ.ಮಕ್ಕಳಿಗಂತೂ ಮಳೆ ಬಂತೆಂದರೆ ದೋಣಿ ತೇಲಿ ಬಿಡುವ,ಮರಳಲ್ಲಿ ಮನೆಕಟ್ಟುವ ಆಸೆ.ಪ್ರೇಮಿಗಳಿಗ ಪಾಲಿಗೆ ಅದು ಯಾವ ಮಳೆಯಾದರು ಮುಂಗಾರು ಮಳೆಯೇ!!.ಮಳೆಯಲಿ ಜೊತೆಯಲಿ ಹಾಡುವ ಆಸೆ.ತೊಪ್ಪೆಯಾಗುತ್ತಾ ನಾಲ್ಕು ಹೆಜ್ಜೆ ಹಾಕುವಾಸೆ.ಮೈ ಮರೆತು ಜಗ ಮರೆತು ಮಳೆಯೊಳಗೆ ಒಂದಾಗುವಾಸೆ. ಹನಿ ಮಳೆಯೋ,ಜಡಿ ಮಳೆಯೋ,ಸುರಿ ಮಳೆಯೋ,ಧಾರಾಕಾರ ಮಳೆಯೋ,ಮುಸಲಧಾರೆಯೋ,ಪ್ರೀತಿಯ ಮಧುರ ಕ್ಷಣಗಳನ್ನು ಮತ್ತೆಮತ್ತೆ ಮನ ಮಿಡಿಸುತ್ತದೆ.ಕೆಲಸಕ್ಕೆ ಹೋಗುವ ಹೆಂಗಸರಿಗೆ ಹೊಸ ಛತ್ರಿ,ಜರ್ಕಿನ್ ಕೊಳ್ಳೋ ಯೋಚನೆ.ಅಮ್ಮಂದಿರಿಗೆ ಎಲ್ಲ ರೀತಿಯ ಹಿಟ್ಟು ,ಮೆಣಸಿನ ಪುಡಿ, ಸಂಬಾರ ಪುಡಿ ಡಬ್ಬಿಗೆ ಕೆಡದಂತೆ ತುಂಬೋ ತವಕ.ರೈತರಿಗೆ ಬಿತ್ತನೆ ಬೀಜ ಗೊಬ್ಬರಕ್ಕೆ ಕಾಸು ಹೊಂದಿಸೋ ಚಿಂತೆ.ರೈತ ಮಹಿಳೆಯರಿಗೆ ಯಾವ ಸಂಘದಲ್ಲಿ ಎಷ್ಟು ಸಾಲ ತೆಗೆದುಕೊಡಬಹುದು ಅನ್ನೋ ಯೋಚನೆ,ಗದ್ದೆ ಬಯಲಿನವರಿಗೆ ಈ ಭಾರಿ ಎರೆಡು ಬೆಳೆ ತೆಗೆಯುವ ಆಸೆ, ಸರ್ಕಾರಕ್ಕೆ ಜೋರು ಮಳೆ ಬಂದು ಕಾವೇರಿ ವಿವಾದ ಬಗೆಹರಿಯಲಿ ಅನ್ನೋ ಚಿಂತೆ. ಮುದುಕರಿಗೆ ಈ ಭಾರಿ ಪಿಂಚಣಿ ಹಣದಲ್ಲಿ ಉದ್ದ ಕೊಡೆ ,ಮಳೆಗಾಲದ ಬೂಟು ತರಿಸಿಕೊಳ್ಳೋ ಆಸೆ.ನಂಗೆ ಮಳೆ ಬರಲಿ, ಆದರೆ ರಸ್ತೆ ಬೇಗ ಒಣಗಲಿ ಗಾಡಿ ಓಡಿಸಲು ಸುಲಭವಾಗಲಿ,ಶಾಲೆಗೆ ಯಾವುದೆ ತೊಂದರೆ ಇಲ್ಲದೆ ಸೇರುವಂತಾಗಲಿ ಅನ್ನೋ ಭಾವನೆ,ಶಾಲಾ ಮಕ್ಕಳಿಗೆ ಮಳೆಗಾಲದ ರಜೆ ಸಿಗಬಹುದು…ಎಂಬ ನಂಬಿಕೆ. ಹೀಗೆ ಮಳೆಯೊಂದಿಗೆ ಭಾವನೆಗಳ ಬೆಸುಗೆ… ನೆನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ ಕೆಲಸಕ್ಕೆ ಬಂದ ಸರೋಜಮ್ಮಬಹಳ ಸಪ್ಪಗಿದ್ದರು.ಕಾರಣ ಕೇಳದ ನಾನು ಕೆಲಸಕ್ಕೆ ಹೊರಡುವ ಆತುರದಲ್ಲಿದ್ದೆ. ಅವರೇ ನಿಂತು ಮಾತು ಶುರುಮಾಡಿದರು…”ಅಮ್ಮಾ ರಾತ್ರಿಯ ಮಳೆಗೆ ಮನೆಯಲ್ಲಿ ನೀರು ತುಂಬಿ ಹಾಸಿಗೆ ನೆನೆದು ಹೋಯಿತು.ಸೊಸೈಟಿ ಇಂದ ತಂದ ಅಕ್ಕಿ ಪೂರ್ತಿ ನೀರೊಳಗೆ ಮುಳುಗಿತು.ಇನ್ನೊಮ್ಮೆ ಅಕ್ಕಿ ಕೊಡೋವರೆಗೆ ಏನು ಮಾಡೋದು ?ಅದು ಅನ್ನ ಮಾಡಲು ಬರಲ್ಲ ..ತಿಂಡಿಗೆ ಆಗುತ್ತೆ,ಎಂದರು.ಗಂಡನಿಲ್ಲದ ಅವರು ವಿಧವೆ ಮಗಳನ್ನು ಮತ್ತು ಮೊಮ್ಮೊಗುವನ್ನು ಸಾಕಿಕೊಂಡು ಬದುಕು ನಡೆಸುತ್ತಿರುವುದು ನನಗೆ ಗೊತ್ತಿದ್ದ ವಿಷಯವಾಗಿತ್ತು.ಬಾಡಿಗೆ ಮನೆ ,ಕೂಲಿ ಕೆಲಸ, ಮದುವೆಯಾದರು ಮಗುವಿನೊಂದಿಗೆ ಮನೆಗೆ ಬಂದ ಮಗಳು.ಬಿ ಪಿ ಎಲ್ ಕಾರ್ಡಿನ ಅಕ್ಕಿ.ನನ್ನ ಯೋಚನೆ ಮುಂದುವರೆಯಿತೇ ಹೊರತೂ ಅವರಿಗೆ ಸಮಾಧಾನ ಹೇಳದೆ ಚಪಾತಿ ಲಟ್ಟಿಸಲು ಮುಂದಾದೆ. ನನ್ನನ್ನು ಸರೋಜಮ್ಮನ ಸ್ಥಾನದಲ್ಲಿ ಕಲ್ಪಿಸಿಕೊಂಡೆ. ಕಣ್ಣುಗಳು ಒದ್ದೆಯಾದವು.ಕವಿಗಳ ಕಲ್ಪನೆಯ ಮಳೆಗೂ ,ಕೊಡಗಿನಲ್ಲಿ ಧಾರಾಕಾರ ಸುರಿದು ಮನೆ ಮನ ಬಯಲು ಬೆಟ್ಟಗಳನ್ನೆಲ್ಲ ಕೊಚ್ಚಿ ಹಾವಳಿ ತಂದ ಮಳೆಗೂ,ಉತ್ತರ ಕರ್ನಾಟಕದಲ್ಲಿ ಅಬ್ಬರಿಸಿ ಹಾಳುಗೆಡವಿದ ಮಳೆಗೂ, ಸರೋಜಮ್ಮನ ಮನೆಯ ಹಾಸಿಗೆ ಅಕ್ಕಿ ನೆನೆಸಿ ಉಣ್ಣಲು ಉಡಲು ಮಲಗಲು ಇಲ್ಲದಂತೆ ಬದುಕನ್ನು ಚೆಲ್ಲಾಪಿಲ್ಲಿಯಾಗಿಸಿದ ಮಳೆಗೂ…ಯಾವ ಭಾವ ಬೆಸೆಯಬಹುದೆಂದು ತಿಳಿಯದೆ ಶೂನ್ಯಮನಸ್ಕಳಾಗಿ ಕೊರಗುತ್ತಾ ಕುಳಿತೆ. ಮತ್ತೆ ಮತ್ತೆ ಹುಚ್ಚು ಮಳೆ ಹೊಯ್ದು ಬದುಕು ಮೂರಾಬಟ್ಟೆಯಾಗದಿರಲಿ.ಬಡಜನರ ಬದುಕು ಕೊಚ್ಚಿ ಹೋಗದಿರಲಿ ದೇವರೆ ಎಂದು ಮೊರೆಯಿಟ್ಟೆ . ಇಲ್ಲಿಗೆ ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಗೆಳತಿಯರು ಒಂದಿಬ್ಬರು ಪ್ರೀತಿಯ ಮಳೆಯಲ್ಲಿ ತೊಪ್ಪೆಯಾದರಲ್ಲ.ಅಪ್ಪ ಅಮ್ಮನ ವಿರೋಧವಿದ್ದರೂ ತಾವು ಒಪ್ಪಿದವನೊಡನೆ ಹೆಜ್ಜೆ ಹಾಕಿದರಲ್ಲ.ಸುತ್ತಲಿನ ಸಮಾಜಕ್ಕೆ ಸೊಪ್ಪುಹಾಕದೆ,ತಪ್ಪನ್ನೇ ತಬ್ಬಿ ನಡೆದರಲ್ಲ.ಆಗಿನ್ನೂ ಈ “ಮುಂಗಾರು ಮಳೆ” ಯ ಪ್ರಭಾವ ಇಷ್ಟು ದಟ್ಟವಾಗಿ ಇರಲಿಲ್ಲ.” ಚಳಿ ಚಳಿ ತಾಳೆನು” ಹಾಡಿಗೆ ನಮ್ಮಂಥ ಸಾವಿರಾರು ಯುವಜನರು ಮಾರುಹೋಗಿದ್ದ ಕಾಲವದು.ಪ್ರೀತಿಯ ಬಲೆಯಲ್ಲಿ ಬಿದ್ದರೂ ಬಲಿಷ್ಠ ಪರಿಸರವನ್ನು ಎದುರಿಸಲಾಗದೆ ಎದೆಯೊಳಗೆ ಮುಚ್ಚಿಟ್ಟು ,ದಿಂಬಿನಲ್ಲಿ ಮುಖವಿಟ್ಟು ಕೋಣೆಯೊಳಗೆ ಬಿಕ್ಕಳಿಸುತ್ತಿದ್ದ ದಿನಗಳು ನೆನಪಾಗ ಹತ್ತಿವೆ.ಬಿಟ್ಟೂ ಬಿಡದಂತೆ ಟಪಟಪನೆ ಸುರಿವ ಮಳೆ ಹನಿಗಳ ನಿನಾದ ನೆನಪ ಸಾಲುಗಳಿಗೆ ಶ್ರುತಿ ಹಿಡಿದಿದೆ.ಮಾಗಿದ ಮನವನ್ನು ನೆಲದಂತೆ ಮೆದುವಾಗಿಸಿದೆ.ಹೊರಗೆ ಕಾಲಿಟ್ಟರೆ ಜಿಡಿಮಳೆ ಬೇಸರ ತರುತ್ತದೆ.ಹಳೆಯ ಪ್ರೇಮದ ಬೆಸುಗೆ ನೆನೆಯದಂತೆ ಮುಸುಕೆಳೆದಿದೆ.ಹೆದರಿ ಒಳಗೆ ಕೂರುವಂತಿಲ್ಲ.ಬದುಕನ್ನು ಕಟ್ಟಿಕೊಳ್ಳಬೇಕು.ರಾಶಿ ರಾಶಿ ಕೆಲಸಗಳು ಕಾಯುತ್ತಿವೆ.ಹೌದು ನನ್ನವರಿಗೀಗ ಧುಮ್ಮಿಕ್ಕುವ ಧಳಧಳನೆ ಸುರಿವ ಆರ್ಭಟ ಕಡಿಮೆಯಾಗಿದೆ.ಉತ್ತರೆ ಮಳೆಯಂತೆ ತತ್ತರಿಸುತ್ತಿದ್ದ ರೀತಿ ಸೌಮ್ಯವಾಗಿದೆ.ಮಕ್ಕಳಾದ ಮೇಲಂತೂ ಪ್ರೀತಿಯಲ್ಲಿ ಏನೋ ಕೊರತೆ ಕಾಡತೊಡಗಿದೆ.ಒರತೆ ಹಂಚಿಕೆಯಾಗಿದೆ.ಎಲ್ಲರಿಗೂ ಹೀಗೇನಾ?.ಸೊಲ್ಲು ಸೊಲ್ಲಿಗೂ ನನ್ನ ಹೆಸರನ್ನೇ ಜಪಿಸುತ್ತಾ ಸುತ್ತಲೇ ಸುಳಿಯುತ್ತಿದ್ದ ನಲ್ಲನಿಗೇನಾಗಿದೇ ?.ಒಲ್ಲೆನೆಂದರೂ ಬಿಡದೆ ಮೊಲ್ಲೆ ಮೊಗ್ಗುಗಳ ರಾಶಿ ಪೇರಿಸುತ್ತಿದ್ದ ಇನಿಯನೆಲ್ಲಿ ಕಳೆದು ಹೋದ?!.ಛೇ ಈ ಪ್ರೀತಿಯೊಂದು ಹುಚ್ಚು.ಬದುಕಿನ ವಸಂತಗಳು ಮುಗಿದು ಹೇಮಂತ ಬಂದರೂ ಮಳೆ ಮಾತ್ರ ನಿಲ್ಲುತಿಲ್ಲ .ಸವಿಜೇನಿನ ಇನಿದನಿಯಲಿ ಕೂಗುತಿದ್ದ ಕೋಗಿಲೆ ಗಾನ ನಿಲ್ಲಿಸಿಬಿಟ್ಟಿತೆ ?ಮಳೆ ತಂದ ಶೀತಲ ಮಾರುತಗಳಿಗೆ ಗಂಟಲು ಬಿಗಿಯಿತೆ?.ನೆನೆದ ಪುಕ್ಕಗಳಲಿ ಚಳಿ ಧಾಳಿಯಿಟ್ಟಿತೆ?. ಹೌದು ನಾವು ಈಗ ಮೊದಲಿನಂತಿಲ್ಲ.ಎಷ್ಟೊಂದು ಸುಧೀರ್ಘಕಾಲ ಸುಳಿವು ನೀಡದೇ ಸರಿದೇ ಹೋಯಿತಲ್ಲ.ವೈಶಾಖನಾಗಲೇ ಅಡಿಯಿಟ್ಟಿದ್ದಾನೆ.ಗಿಡಮರಗಳು ಬೋಳಾಗಿವೆ.ಬಿಸಿಯುಸಿರು ಬುಸುಗುಡುತ್ತಿದೆ.ಮತ್ತೆ ಮಳೆ ಬೇಕೆನಿಸುತ್ತಿದೆ…

ಲಹರಿ Read Post »

ಇತರೆ

ರಾಜ್ಯೋತ್ಸವದ ನೆಪದಲ್ಲೆರಡು ಮಾತು.

ಬಲಾಢ್ಯವಾಗಬೇಕಿರುವ ಕನ್ನಡಭಾಷಿಕ ಸಮುದಾಯ! ನಿಮ್ಮೆಲ್ಲರಿಗು  ಕನ್ನಡ ರಾಜ್ಯೋತ್ಷವದ ಶುಭಾಶಯಗಳು…ಈ ಸಂದರ್ಭದಲ್ಲಿ ನಿಮ್ಮೊಂದಿಗೆಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ:  ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೆÃಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ.ಇಂತಹ ನಿರಾಶಾದಾಯಕ  ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.   ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೆ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ  ಕನ್ನಡ ಭಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಭಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು  ಕೇವಲ ಭಾಷಿಕ ಚಳುವಳಿಗಳಾಗಿ: ಆಡಳಿತ ಭಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಪಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ  ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ,ಜಲ,ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.    ಅದರಲ್ಲು ಇವತ್ತಿನ ಜಾಗತೀಕರಣ ನಮ್ಮ ಸ್ಥಳೀಯ ಸಂಪನ್ಮೂಲಗಳನ್ನು ರಾಕ್ಷಸ ರೀತಿಯಲ್ಲಿ ನುಂಗುತ್ತ, ನಮ್ಮೊಳಗೆ ಕೊಳ್ಳುಬಾಕತನವನ್ನು ಸೃಷ್ಠಿಸಿ, ನಮ್ಮ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಜನಪದ ಪರಂಪರೆಗಳನ್ನೆಲ್ಲ ನಾಶ ಮಾಡುತ್ತ ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡ ಚಳುವಳಿ ತನ್ನ ಮಿತಿಯನ್ನು ಮೀರಿ ಬೆಳೆಯಬೇಕಿದೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖಾಸಗಿ ಬಂಡವಾಳಶಾಹಿ ಶಕ್ತಿಗಳು ದೈತ್ಯಾಕಾರವಾಗಿ ಬೆಳೆಯುತ್ತ ನಮ್ಮ ಬಹುಮುಖಿ ಸಂಸ್ಕೃತಿಯನ್ನು ಏಕರೂಪಿ ಸಂಸ್ಕೃತಿಯಾಗಿ ಬದಲಾಯಿಸಹೊರಟಿರುವ ಸಂಕೀರ್ಣಸನ್ನಿವೇಶದಲ್ಲಿ,(ಇದೀಗ ನಮ್ಮಾಳುವವರು ಸಹ ಏಕರಾಷ್ಟ,ಏಕಧರ್ಮ, ಏಕಭಾಷೆಯ ಹೆಸರಲ್ಲಿ ಸ್ಥಳೀಯವಾದುದನ್ನೆಲ್ಲ ಹೊಸಕಿ ಹಾಕಲು ಹೊರಟಂತಿದೆ) ಕನ್ನಡ ಚಳುವಳಿ ಎನ್ನುವುದು ಏಕಾಂಗಿಯಾಗಿ ನಿಲ್ಲದೆ  ಉಳಿದೆಲ್ಲ  ಚಳುವಳಿಗಳ ಜೊತೆ ಬೆರೆತು ಹೋರಾಡಿದರೆ ಮಾತ್ರ  ಕನ್ನಡ ಚಳುವಳಿ  ಕನ್ನಡ ಭಾಷಿಕ ಸಮುದಾಯದ ಚಳುವಳಿಯಾಗಿ ಗುರುತಿಸಿ ಕೊಳ್ಳಬಹುದು. ಅದು ನಮ್ಮ ನೆಲಜಲಗಳನ್ನು ಸಂರಕ್ಷಿಸಿಕೊಳ್ಳುವ ವಿಚಾರವಿರಲಿ, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಿರಲಿ, ದಲಿತ ಮತ್ತಿತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಾಪಾಡುವುದಿರಲಿ, ಶಿಕ್ಷಣದಲ್ಲಿ ಕನ್ನಡವೇ ಪ್ರದಾನ ಭಾಷೆಯಾಗುವ ವಿಚಾರವಿರಲಿ, ಕನ್ನಡಿಗರಿಗೆ ಉದ್ಯೊಗದಲ್ಲಿ ಆದ್ಯತೆ ನೀಡುವ ವಿಚಾರವೇ ಆಗಿರಲಿ,  ಇವೆಲ್ಲವೂ ಕನ್ನಡದ ಚಳುವಳಿ ಎಂಬ ಬಾವನೆ ಮೂಡಿದಾಗ ಮಾತ್ರ ಅಂತಹ ಚಳುವಳಿಗೆ ನಿಜವಾದ ಬಲ ಬರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡವೆಂದರೆ ಕೇವಲ ಭಾಷೆ ಮಾತ್ರವಲ್ಲ ಎಂಬುದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ.     ಕರ್ನಾಟಕದ ಎಲ್ಲ ಸಮಸ್ಯೆಗಳು ಕನ್ನಡದ ಸಮಸ್ಯೆಗಳೇ ಎಂಬ ಆರೋಗ್ಯಕಾರಿ ಮನೋಬಾವ ರೂಪುಗೊಂಡಾಗ ಮಾತ್ರ ನಾವು ಒಳಗಿನ ಮತ್ತು ಹೊರಗಿನ ಅನ್ಯ ಸಂಸ್ಕೃತಿಗಳ ಎದುರು ಹೋರಾಡಬಲ್ಲಂತಹ ಕಸುವು ಪಡೆಯಬಹುದಾಗಿದೆ. ಇಂತಹದೊಂದು  ಚಳುವಳಿಯನ್ನು ರೂಪಿಸಲು ನಮಗೆ ಸಾದ್ಯವಾದಾಗ ಮಾತ್ರ ಕರ್ನಾಟಕ ತನ್ನ ಹಕ್ಕುಗಳಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಬರುವುದಿಲ್ಲ. ಇಂತಹ ಕನ್ನಡ ಚಳುವಳಿಯಿಂದ ಮಾತ್ರ ಕನ್ನಡ ಭಾಷಿಕ ಸಮುದಾಯ ಸಶಕ್ತವಾಗಬಹುದು. ಕನ್ನಡ ಭಾಷಿಕ ಸಮುದಾಯ ಸಶಕ್ತವಾಗುವುದು ಎಂದರೆ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಎಂದರ್ಥ!      ಹೌದು ಇವತ್ತು ಎರಡು ಕಡೆಯಿಂದ ನಾವು ದುರ್ಬಲರಾಗುತ್ತ ಹೋಗುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಏಳು ದಶಕಗಳಿಂದ ಸರದಿಯಂತೆ ನಮ್ಮನ್ನು ಆಳುತ್ತ ಬರುತ್ತಿರುವ ರಾಷ್ಟ್ರೀಯ ಪಕ್ಷಗಳು ಭಾಷೆ,ನೆಲ,ಜಲಗಳ ವಿಷಯಗಳಲ್ಲಿ ನಮ್ಮ ಹಿತಾಸಕ್ತಿಯನ್ನು ಕಡೆಗಣಿಸುತ್ತ ರಾಜಕೀಯವಾಗಿ ಬಲಿಷ್ಠವಾಗಿರುವ ಇತರೇ ರಾಜ್ಯಗಳ ಹಿತಾಸಕ್ತಿಯನ್ನು ಕಾಯುತ್ತ ಬರುತ್ತಿವೆ. ಇನ್ನು ಎರಡನೆಯದಾಗಿ,ತೊಂಭತ್ತರ ದಶಕದ ನಂತರ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿ ವಿಶ್ವದ ಎಲ್ಲ ಬಗೆಯ ಬಂಡವಾಳಶಾಹಿ ಕಂಪನಿಗಳನ್ನು ತಂದು ನಮ್ಮ ನೆಲದಲ್ಲಿ ಬೀಡುಬಿಡಿಸಿದೆ. ಆ ಬಂಡವಾಳಶಾಹಿ ಶಕ್ತಿಗಳಿಗೆ ಪ್ರಾದೇಶಿಕ ಭಾಷೆ ಸಂಸ್ಕೃತಿಯನ್ನು ಕಾಪಾಡಬೇಕೆನ್ನುವ ಯಾವ ಜರೂರತ್ತೂ ಇರುವುದಿಲ್ಲ. ಜೊತೆಗೆ  ಯಾವ ಹಿಂಜರಿಕೆಯೂ ಇಲ್ಲದೆ  ನಮ್ಮ ನೆಲ-ಜಲವನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತ ಹೋಗುತ್ತವೆ. ಇನ್ನು ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ, ಸ್ಥಳೀಯರಿಗೆ ಉದ್ಯೋಗವೆಂಬುದೆಲ್ಲ ಅವುಗಳ ಪದಕೋಶದಲ್ಲಿ ಇರದ ಶಬ್ದಗಳು. ಹೀಗೆ ಎರಡೂ ಕಡೆಯಿಂದಲೂ ನಾವು ಶೋಷಿತರಾಗುತ್ತ ಹೋಗುತ್ತೇವೆ.   ಇದನ್ನು ತಪ್ಪಿಸಲು ಮತ್ತು  ನಮ್ಮ ನೆಲಜಲಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗ. ಕನ್ನಡ ಚಳುವಳಿ ಮತ್ತು  ತನ್ಮೂಲಕ ಕನ್ನಡಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಿಷ್ಠವಾಗಿಸುತ್ತ ಹೋಗುವುದು.ನಮ್ಮದೇ ಬಲಾಢ್ಯ ಪ್ರಭುತ್ವ ಮಾತ್ರ ನಮ್ಮದನ್ನೆಲ್ಲ ಕಾಪಾಡಬಹುದಾಗಿದೆ. ಕನ್ನಡವನ್ನು ಒಂದು ಪ್ರಬಲ ರಾಜಕೀಯಶಕ್ತಿಯಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ಕನ್ನಡಚಳುವಳಿಯನ್ನು ಬಲಗೊಳಿಸುತ್ತ ಹೋಗುವುದು. ಈಗಿರುವ ಹಲವು ಚಳುವಳಿಗಳ( ರೈತ, ದಲಿತ, ಕಾರ್ಮಿಕ, ಇತ್ಯಾದಿ)ನ್ನು ಕನ್ನಡದ ಹೆಸರಲ್ಲಿ ಒಟ್ಟಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ನಮಗಿದೆ.    ಇನ್ನು ಕನ್ನಡ ಭಾಷಿಕ ಸಮುದಾಯವೊಂದು ಬಲಾಢ್ಯ ರಾಜಕೀಯ ಶಕ್ತಿಯಾಗಲು ಈ ಚಳುವಳಿಗಳ ಒಳಗಿಂದಲೇ ಒಡಮೂಡಿಬರುವ ಒಂದು ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಅಗತ್ಯವಿದೆ. ಇದು ನಂತರದಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಸದ್ಯಕ್ಕೆ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಾಢ್ಯಗೊಳಿಸುವವತ್ತ  ಮಾತ್ರ ನೋಡಬೇಕಾಗಿದೆ. ಈ ದಿಸೆಯಲ್ಲಿ  ನಮ್ಮ ಎಲ್ಲ ಚಳುವಳಿಗಳೂ ಕನ್ನಡ ಚಳುವಳಿಯ ವಿಶಾಲವೇದಿಕೆಯ ಅಡಿಯಲ್ಲಿ ಬರಬೇಕಿದೆ( ಇದು ಕಷ್ಟದ ಕೆಲಸವೆಂದು ಕನ್ನಡಿಗರಿಗೆ ಅನಿಸಿದರೆ ಅದು ನಮ್ಮ ದುರಂತವಷ್ಟೆ!) ================================================

ರಾಜ್ಯೋತ್ಸವದ ನೆಪದಲ್ಲೆರಡು ಮಾತು. Read Post »

ಇತರೆ

ಚರ್ಚೆ

ಟಿಪ್ಪು ಸುಲ್ತಾನನ ಇತಿಹಾಸ ಪಠ್ಯದಿಂದ ತೆಗೆಯುವುದು ಎಷ್ಟು ಸರಿ ? ಡಾ.ಮಹಾಲಿಂಗ ಪೋಳ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಲವು ರಾಜ ಸಂಸ್ಥಾನಗಳ ಬೀಡಾಗಿತ್ತು.ಅವು ತಮ್ಮದೇಯಾದ ಗಡಿಯನ್ನು ಹೊಂದಿದ್ದವು.ತಮ್ಮ ಸಂಸ್ಥಾನದ ಗಡಿಯನ್ನು ವಿಸ್ತರಿಸಲಿಕ್ಕೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತಿದ್ದವು.ಅಲ್ಲದೇ ತಮ್ಮದೇಯಾದ ಸಂಸ್ಕೃತಿಯ ಪ್ರಸಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದವು.ಇದು ರಾಜಪ್ರಭುತ್ವ ಚಾಲ್ತಿಯಾದಾಗಿನಿಂದ ಬಂದದ್ದು.ಟಿಪ್ಪು ಕೂಡ ಈ ನಾಡಿನಲ್ಲಿ ಒಂದು ಸಂಸ್ಥಾನದ ರಾಜನಾಗಿದ್ದವ.ಅವನ ಸಂಸ್ಥಾನದ ಪ್ರದೇಶ ವಿಸ್ತರಿಸಲು ಪಕ್ಕದ ರಾಜ ಸಂಸ್ಥಾನಗಳ ಮೇಲೆ ದಾಳಿ ಮಾಡಿದ ಸರಿ.ಹಲವು ವಿರೋಧಿಗಳನ್ನು ಕೊಂದ ಸರಿ.ಈ ಕೆಲಸ ಟಿಪ್ಪು ಒಬ್ಬನು ಮಾತ್ರ ಮಾಡಿದನೆ ? ಆಗಿನ ಕಾಲದಲ್ಲಿ ಒಂದು ಸಂಸ್ಥಾನ ಇನ್ನೊಂದು ಸಂಸ್ಥಾನದ ಮೇಲೆ ಹಗೆ ಸಾಧಿಸಿ ದಾಳಿ ಮಾಡುವುದು ಸಾಮಾನ್ಯವಾಗಿತ್ತು.ಟಿಪ್ಪು ಹಿಂದುಗಳನ್ನು ಕೊಂದ ಅವನು ದುಷ್ಟ ಎಂದು ಈ ಕಾಲಘಟ್ಟದಲ್ಲಿ ನಿಂತು ತೀರ್ಮಾಣಿಸುವುದು ಎಷ್ಟು ಸರಿ ? ಯಾವುದೇ ಐತಿಹಾಸಿಕ ಘಟನೆಗಳನ್ನು ಆಯಾ ಸಂದರ್ಭದ ರಾಜನೀತಿಗೆ ಅನುಗುಣವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಇಂದಿನ ರಾಜಕೀಯ ತೆವಲುಗಳಿಗಾಗಿ ವಿಶ್ಲೇಷಣೆ ಮಾಡುವುದಲ್ಲ. ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಕಾರಣಕೊಟ್ಟು ಪಠ್ಯದಿಂದ ಅವನ ಇತಿಹಾಸ ಕೈಬಿಡುವುದಾದರೆ,ಹಿಂದೂ ಸಾಮ್ರಾಜ್ಯ ವಿಜಯನಗರದ ಮೇಲೆ ದಾಳಿಮಾಡಿ ಅವನತಿಗೆ ಕಾರಣವಾದ ಶಾಹಿ ಸುಲ್ತಾನರ ಇತಿಹಾಸ ,ರಕ್ಕಸ ತಂಗಡಗಿ ಯುದ್ಧದ ಕುರಿತಾಗಿ ಪಠ್ಯದಿಂದ ತೆಗೆದು ಹಾಕಬಹುದೇ ? ಧರ್ಮದ ಆಧಾರದ ಮೇಲೆ ಇತಿಹಾಸ ನಿರ್ಧರಿಸುವುದು ಸರಿಯಲ್ಲ.ರಾಮಾನುಜಚಾರ್ಯರನ್ನು ದೇಶಬಿಟ್ಟು ಓಡಿಸಿದ ಶೈವ ಧರ್ಮಿಯ ಕುಲೋತ್ತುಂಗ ಚೋಳನ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದು ವೈಷ್ಣವರು ಒತ್ತಾಯ ಮಾಡಿದರೆ ಹೇಗೆ ? ಹಾಗೆಯೇ ಕಲಚೂರಿ ಅರಸನ ಸೈನಿಕರ ವಚನಕಾರರನ್ನು ಬೆನ್ನಟ್ಟಿಕೊಂಡು ಹೋಗಿ ಕೊಂದ ಇತಿಹಾಸ ಗೊತ್ತೆ ಇದೆ.ಲಿಂಗಾಯತ ಸಮುದಾಯದವರೆಲ್ಲ ಕಲಚೂರಿಗಳ ಇತಿಹಾಸ ಪಠ್ಯದಲ್ಲಿ ಬೇಡ ಎಂದರೆ ಹೇಗೆ ? ಅಂದಿನ ರಾಜನೀತಿಗಳನ್ನು ಇಂದಿನ ರಾಜನೀತಿಯ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಾರದು. ಶಿವಾಜಿಯು ತನ್ನ ತಂದೆಯ ಬಂದನಕ್ಕೆ ಕಾರಣರಾದರು ಎಂಬ ಉದ್ದೇಶದಿಂದ ಮುಧೋಳ,ಜಮಖಂಡಿ ಸಂಸ್ಥಾನಗಳ ಮೇಲೆ ದಾಳಿ ಮಾಡಿದ.ಮುಧೋಳ ಸಂಸ್ಥಾನದ ಭಾಗಗಳನ್ನು ನಾಶಮಾಡಿ ಸುಟ್ಟುಹೋದನಂತೆ.ಹಾಗಾದರೆ ಮುಧೋಳ,ಜಮಖಂಡಿ ಭಾಗದವರು ಶಿವಾಜಿಯ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದರೆ ಅದಕ್ಕೆ ಅರ್ಥ ಬರುತ್ತದೆಯೆ ? ಒಂದು ಕಾಲಘಟ್ಟದ ಇತಿಹಾಸದಲ್ಲಿ ಹಲವು ಬದಲಾವಣೆಗೆ ಕಾರಣವಾದ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಬದಿಗಿಟ್ಟು ಇತಿಹಾಸ ಓದುವುದೆಂದರೆ ಅದು ನೈಜ ಇತಿಹಾಸಕ್ಕೆ ಮಾಡಿದ ಮೋಸ. ಹಿಂದೂ ರಾಜರಾರು ಬೇರೆ ಸಂಸ್ಥಾನದ ಮೇಲೆ ದಾಳಿ ಮಾಡಿಲ್ಲವೆ ? ಜನರನ್ನು ಕೊಂದಿಲ್ಲವೇ ? ಕೇವಲ ದಾಳಿ ಮಾಡುವುದು ವೈರಿಗಳನ್ನು ಕೊಲ್ಲುವ ವಿಷಯಗಳು ಮಾತ್ರ ಇತಿಹಾಸವೇ ? ಅದರಾಚೆಯಿರುವ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ವಿಷಯಗಳು ಇತಿಹಾಸದ ವಿಷಯವಾಗಿ ಓದಬೇಕಲ್ಲವೇ ? ಒಂದು ಕಾಲಘಟ್ಟದ ಇತಿಹಾಸವೆಂದರೆ ಒಂದುದಿನ ನಡೆದ ಘಟನೆಗಳು ಮಾತ್ರವಲ್ಲ ,ಅದು ಎಲ್ಲ ರೀತಿಯ ಅಂಶಗಳನ್ನು ಸೇರಿ ಒಂದು ಕಾಲಘಟ್ಟದ ಇತಿಹಾಸ ನಿರ್ಮಿಸುತ್ತವೆ. ಟಿಪ್ಪು ಒಬ್ಬ ಇಸ್ಲಾಂ ಧರ್ಮದ ರಾಜ ಎಂದ ಮಾತ್ರಕ್ಕೆ ಇತಿಹಾಸ ಬದಲಾಯಿಸಲು ಬರುವುದಿಲ್ಲ.ಅದು ಒಳ್ಳೆಯದಿರಲಿ,ಕೆಟ್ಟದ್ದಿರಲಿ ಅದು ಇತಿಹಾಸದ ಭಾಗ ಅದನ್ನು ನಾವು ವಸ್ತುನಿಷ್ಠವಾಗಿ ಓದಬೇಕು,ವಿಶ್ಲೇಷಿಸಬೇಕು.ಅದನ್ನು ಬಿಟ್ಟು ಅವನು ಮುಸ್ಲಿಂ,ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಇತಿಹಾಸ ಪಠ್ಯದಿಂದ ಕೈಬಿಡುವುದು ಎಷ್ಟು ಸರಿ ? ಇತಿಹಾಸದ ಘಟನೆಗಳನ್ನು ದಾಖಲೆಗಳ ಆಧಾರದಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಯಾವುದೋ ಪಂಥಕ್ಕೆ ಜೋತುಬಿದ್ದು ಕುರುಡಾಗಿ,ನೈಜತೆಯನ್ನು ಮರೆಮಾಚಿ ಹುಸಿ ಸಂಕಥನಗಳನ್ನು ಸೃಷ್ಟಿಸುವುದಲ್ಲ. ಯಾಕೇ ಹೀಗಾಗುತ್ತಿದೆ ? ಇದಕ್ಕೇ ಕಾರಣ ಯಾರು ? ಈ ವಿಷಯ ರಾಜಕೀಯವಾಗುತ್ತಿರುವುದು ಯಾಕೆ? ಇದರ ಬಗ್ಗೆ ಮಾತನಾಡುವವರೆಲ್ಲ ನೈಜ ಇತಿಹಾಸ ಓದಿದ್ದಾರೆಯೆ ? ಪಠ್ಯದಿಂದ ಹೊರತೆಗೆಯುವ ತೀರ್ಮಾಣ ತೆಗೆದುಕೊಂಡವರು ಇತಿಹಾಸ ತಜ್ಞರೇ ? ಈ ಪ್ರಶ್ನೆಗಳು ನಮ್ಮನ್ನು ಕಾಡಿದರೆ ಉತ್ತರ ಸಿಕ್ಕಬಹುದೇನೋ .. ನಮ್ಮ ಅಜ್ಜನ ಇತಿಹಾಸವೇ ನಮಗೆ ಗೊತ್ತಿಲ್ಲ ..! ಹಿಂದಿನ ಘಟನೆಗಳನ್ನು ಹೆಕ್ಕಿ ತಿಪ್ಪೆ ಕೆದಕಿ ಜನರ ಮನಸ್ಸನ್ನು ಹಾಳು ಮಾಡುವುದು ಸರಿಯೇ ? ======================================================== ಪರಿಚಯ: ಜಮಖಂಡಿಯಲ್ಲಿಉಪಬ್ಯಾಸಕರು

ಚರ್ಚೆ Read Post »

You cannot copy content of this page

Scroll to Top