ಶರೀಫ್ ಜಯಂತಿ
ಶರೀಫ್ ಜಯಂತಿ ನೀವೂ ಬನ್ನಿ
ರಾಜೇಶ್ವರಿ ಬೋಗಯ್ಯ ಜಾಣ ಜಾಣೆಯರೆ , ಎನ್ನುತ್ತಾ ದಿಕ್ಕು ,ದೆಸೆಯಿಲ್ಲದೆ ಓದುವುದಕ್ಕೂ ,ಬರೆಯುವುದಕ್ಕೂ ಒಂದು ಗುರಿ ಇಲ್ಲದೆ ಸಿಕ್ಕಿದ್ದೇ ಓದುತ್ತಾ ಅಲೆಯುತ್ತಿದ್ದ ಅತ್ರಪ್ತ ಬ್ಯೂಟಿಫುಲ್ ಮನಸ್ಸುಗಳನ್ನು ಸೆಳೆದು ಕೂರಿಸಿದ್ದೇ ನಮ್ಮ ಜಾಣರಲ್ಲಿ ಜಾಣರು ಲಂಕೇಶರು. ಲಂಕೇಶರನ್ನು ನಾನ್ಯಾಕೆ ಓದಬೇಕು ? ಅಥವಾ ನಾನೇಕೆ ಲಂಕೇಶರನ್ನು ಓದುತ್ತೇನೆ ? ಎರಡೂ ಪ್ರಶ್ನೆಗಳು ಬೇರೆ ಬೇರೆ ಅನ್ನಿಸಿದರೂ ಉತ್ತರ ಮಾತ್ರ ಒಂದೇ. ಲಂಕೇಶರನ್ನಲ್ಲದೆ ಇನ್ಯಾರನ್ನು ಓದಬೇಕು ? ಇದು ನನ್ನ ಮರು ಪ್ರಶ್ನೆ. ಲಂಕೇಶರಿಗಿಂತ ಮೊದಲು ಯಾರ್ ಯಾರನ್ನೋ ಓದಿ ,ಅರಿವೆಗೆಟ್ಟು ,ಬುದ್ದಿಗೆಟ್ಟು ಅವರು ಬರೆದದ್ದೇ ನಿಜವೆಂದು ನಂಬಿ ಅವುಗಳನ್ನೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಾಗಿತ್ತು. ಕುಳಿತು ತೂಕಡಿಸುವಾಗ ಕತ್ತು ಬಲಪಕ್ಕಕ್ಕೇ ವಾಲುವಂತೆ ,ನಾನೂ ಆ ಕಡೆಯೇ ವಾಲುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಬಲಕ್ಕೆ ವಾಲಿದ್ದ ಕತ್ತನ್ನು ಸರಿಯಾಗಿಸಿ ಎಚ್ಚರಗೊಳ್ಳುವಂತೆ ಮಾಡಿದವರು ಲಂಕೇಶರು.ಆಗ ಎಚ್ಚರಗೊಂಡ ಮಿದುಳು ಮತ್ತೆ ತೂಕಡಿಸಲಿಲ್ಲ. ಗಿಡವಾಗಿದ್ದಾಗಲೇ ಬಗ್ಗಿಸಬೇಕು ಎಂಬಂತೆ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಎಚ್ಚರಗೊಳ್ಳಬೇಕೆಂದರೆ ಲಂಕೇಶರನ್ನು ಓದಬೇಕು. ಆ ವಿಶ್ವವಿದ್ಯಾಲಯದಲ್ಲಿ ಏನುಂಟು , ಏನಿಲ್ಲ ? ಸಾಣೆ ಹಿಡಿಯುವ ಚಕ್ರಕ್ಕೆ ಸಿಕ್ಕಿದ ಏನೇ ಆಗಲಿ ಹೊಳೆಯುವಂತೆ ತನ್ನ ತನ್ನ ಮಡಿಲಿಗೆ ಬಂದು ಬೀಳುವ ಎಲ್ಲರನ್ನೂ ತನ್ನ ಅರಿವಿನ ಸ್ನಾನ ಮಾಡಿಸಿ ಹೊಳೆಹೊಳೆಯುವಂತೆ ಮಾಡುವ ಶಕ್ತಿ ಲಂಕೇಶರ ಬರವಣಿಗೆಯಲ್ಲಿತ್ತು. ಏನುಂಟು , ಏನಿರಲಿಲ್ಲ ಲಂಕೇಶರಲ್ಲಿ. ಪೂಜಿಸಲು ಹರಿವಾಣದಲ್ಲಿರುವ ಎಲ್ಲಾ ಹಣ್ಣುಗಳಿರುವಂತೆ ಅವರ ಅರಿವಿನ ಹರಿವಾಣದಲ್ಲಿ ಇಲ್ಲದಿರುವ ವಿಷಯಗಳೇ ಇರಲಿಲ್ಲಿ. ಸಣ್ಣ ಹುಡುಗರಿಂದ ಹಿಡಿದು ವಯೋವೃದ್ಧರಿಗೂ ಏನಾದರೊಂದು ತಿಳುವಳಿಕೆ ನೀಡುವ ಪ್ರತಿಯೊಂದು ಹಾಳೆಯೂ ಬೆಲೆಬಾಳುವಂತಾದ್ದು. ಏನಾದರೊಂದು ಸಂದೇಶ ಇರುತ್ತಿದ್ದ ನೀಲು ,ಇರುತ್ತಿದ್ದ ಎಂಟತ್ತು ಪದಗಳಲ್ಲೇ ಓದುಗರಲ್ಲಿ ಕಚಗುಳಿ ಮೂಡಿಸುವ ,ಗಾಢ ಚಂತನೆಗಚ್ಚುವ ,ಅಬ್ಬಾ ನಮಗ್ಯಾಕೆ ಇದೆಲ್ಲಾ ಕಾಣಿಸುವುದಿಲ್ಲ ಎಂದೆನ್ನಿಸುವಂತೆ ಕಾಡಿಸುತ್ತಿದ್ದ ನೀಲು ಇವತ್ತಿಗೂ ಎಲ್ಲರ ಡಾರ್ಲಿಂಗ್. ಇನ್ನು ಮರೆಯುವ ಮುನ್ನ , ನನ್ನ ಅಚ್ಚುಮೆಚ್ಚಿನದು.ಯಾಕೆಂದರೆ ಅದರಲ್ಲಿ ಲಂಕೇಶರ ವೈಯಕ್ತಿಕ ಬರಹ ಸಾಕಷ್ಟು ಇರುತ್ತಿದ್ದರಿಂದ. ಯಾವೊಂದು ಚಿತ್ರ ನಟರ ವಿಷಯಕ್ಕಾಗಿ ಅತ್ಯಂತ ಕುತೂಹಲದಿಂದ ಪೇಪರ್ ಮತ್ತು ಮ್ಯಾಗಜಿನ್ಗಳನ್ನು ಓದುತ್ತಿದ್ದೆವೋ ಹಾಗೆಯೇ ಲಂಕೇಶರ , ಆ ವಾರದಲ್ಲಿ ಆಫೀಸಿಗೆ ಬಂದವರ ,ಹೋದವರ ,ಬೈದವರ ,ಸಣ್ಣತನವ ಕಂಡುಹಿಡಿದಿದ್ದರ , ಇಸ್ಪೀಟ್ ಆಡಿದ್ದರ ,ಕುಡಿದಿದ್ದರ ,ರೇಸಿಗೆ ಹೋಗಿ ದುಡ್ಡು ಕಳೆದಿದ್ದರಾ , ಹಾಗೇ ದುಡ್ಡಿನ ಬಗ್ಗೆ ಎಚ್ಚರವಿರಲಿ ಎಂದು ಹೇಳಿದ್ದರ , ಮುನಿಸಿಕೊಂಡಿದ್ದರ ,ನಕ್ಕರಾ ,ಬರೆದರಾ ಎಂಬ ಎಲ್ಲಾದರ ವಿವರಗಳು ಅಲ್ಲಿರುತ್ತಿದ್ದರಿಂದ ,ಅದನ್ನೆಲ್ಲ ಓದಿ ಆತ್ಮ ತ್ರಪ್ತಿಗೊಳ್ಳುತ್ತಿತ್ತು.ಹಾಗೇ ಅವರನ್ನು ಅನುಕರಿಸಿ ಒಳಗೊಳಗೇ ಹೆಮ್ಮೆ ಪಡುತ್ತಿದ್ದುದೂ ಉಂಟು. ಇನ್ನು ರಾಜಕೀಯವೋ , ಅವರ ರಕ್ತದಲ್ಲೇ ಸದಾ ಹರಿದಾಡುತ್ತಾ ಬಿಸಿಯಾಗಿಸುತ್ತಿದ್ದ ವಿಷಯವಾಗಿತ್ತು.ಅವರ ತೀಕ್ಷ್ಣ ಬರವಣಿಗೆಯಿಂದಲೇ ಕರ್ನಾಟಕ ರಾಜಕೀಯ ಏನೆಲ್ಲಾ ತಿರುವು ಪಡೆದಿತ್ತೆಂಬುದು ಎಲ್ಲರಿಗೂ ತಿಳಿದಿದೆ.ಎಲ್ಲಾ ಮಂತ್ರಿ,ಕಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಗಡಗಡ ನಡುಗಿಸಿದ್ದರಲ್ಲ.ಭ್ರಷ್ಟರು ಲಂಚಮುಟ್ಟುವಾಗ ದೇವರನ್ನು ನೆನೆಯದೆ (ದೇವರು ಯಾವಾಗ ಹೇಗೆ ಕಾಪಾಡುತ್ತಿದ್ದನೋ ಗೊತ್ತಿಲ್ಲ ) ಲಂಕೇಶರನ್ನು ನೆನೆದು ಹೆದರುತ್ತಿದ್ದರಲ್ಲ.ಚಾಟಿ ಏಟಿನಂತಿರುತ್ತಿದ್ದ ಅವರ ಬರಹಗಳಿಂದಲೇ ಚುರುಕು ಮುಟ್ಟಿಸಿಕೊಂಡು ಸುಮಾರಾಗಿ ಕೆಲಸ ಮಾಡಿದವರಿದ್ದಾರೆ.ಲಂಕೇಶರೆಂದರೆ ಕನಸಲ್ಲೂ ಬೆಚ್ಚಿಬೀಳುತ್ತ , ಅವರು ತೀರಿದಾಗ ಬೆಳಿಗ್ಗೆದ್ದು ಹಾಲು ಕುಡಿದವರಿದ್ದಾರೆ.ಒಬ್ಬ ಲೇಖಕನೆಂದರೆ ಹಾಗೇ ಇರಬೇಕಲ್ಲವೇ .ತಿದ್ದುತ್ತಾ ,ತೀಡುತ್ತಾ ,ಚಾಟಿಬೀಸುತ್ತಾ , ಕರ್ನಾಟಕದ ಜನರಿಗೆ ಒಂದಷ್ಟು ವರ್ಷಗಳ ಕಾಲ ನೆಮ್ಮದಿ ಕಾಣಿಸಿದ ಲಂಕೇಶ್ ಅವರು ಈಗ ಇರಬೇಕಿತ್ತು. ಈಗ ಇಡೀ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ , ದೌರ್ಜನ್ಯ ನೋಡಿ ಏನೇನು ಬರೆಯುತ್ತಿದ್ದರೋ , ಹೇಗೆಲ್ಲಾ ಎಚ್ಚರಿಸುತ್ತಿದ್ದರೋ , ಎಷ್ಟೆಲ್ಲಾ ಸಿಡುಕುತ್ತಿದ್ದರೋ , ಜೊತೆಯಲ್ಲಿ ಬೀದಿಗಿಳಿಯುತ್ತಿದ್ದರೋ ,ಕಣ್ಣೊರೆಸಿ ಸಮಾಧಾನ ಮಾಡುತ್ತಿದ್ದರೋ… ಸಿನಿಮಾದ ಮೋಹವನ್ನು ಮೀರಿದವರಾರಿದ್ದಾರೆ.ತಮ್ಮ ಬಿಡುವಿರದ ಸಮಯದಲ್ಲೂ ಸಿನಿಮಾದ ಮಾಯಾಲೋಕದೊಳಗೆ ಹೊಕ್ಕು ,ನಟಿಸಿ , ಸಾಹಿತ್ಯ ರಚಿಸಿ, ನಿರ್ದೇಶಿಸಿ,ಏನೂ ಪೆಟ್ಟುತಿನ್ನದೆ ಈಚೆಬಂದವರು ಲಂಕೇಶ್ ಅವರು.ಅದರಲ್ಲಿರುವ ಕಷ್ಟ, ನಷ್ಟ ಸಣ್ಣತನ ,ಮೋಹ ಎಲ್ಲವನ್ನೂ ವಿವರಿಸಿ ಬರೆದು ಹಾಗೇ ಎಚ್ಚರಿಕೆಯನ್ನೂ ಕೊಟ್ಟರು.ಸಿನಿಮಾ ಎಂದರೆ ಸಿನಿಕತನವೇ ಎಂದು ವಿವರಿಸಿದರು .ಯಾರನ್ನೂ ಬಿಡದ ಸಿನಿಮಾ ಮೋಹ ,ಯಾಕೆ ಬಿಡಬೇಕೆಂದು ಕೇಳಿದರು.ನಾವಂದುಕೊಂಡಿರುವ ಸಿನಿಮಾ ಎಂದರೆ ರಂಗು,ರಂಗಿನ ಲೋಕ ಎನ್ನುವ ಮಿಥ್ಯವನ್ನು ತೆಗೆದರು.ರಂಗೂ ಇದೆ ಆದರೆ ಮಂಗನಾಗಬೇಡಿ ಎಂದು ಹೇಳುತ್ತಲೇ , ದೇಶ ವಿದೇಶದ ನಟನಟಿಯರನ್ನು ಕರೆತಂದು ಪರಿಚಯಿಸಿದರು.ಕತೆಗಳನ್ನು ಹೇಳಿ ಹೇಗೆ ಅದರೊಳಗೆ ಹೊಕ್ಕುವುದು , ಚಕಿತಗೊಳ್ಳುವುದು ಮುಂತಾದವನ್ನು ಬರೆದು ಚಲನಚಿತ್ರ ಪ್ರಿಯರಿಗೆ ಸಮಾಧಾನ ನೀಡಿದರು.ಬರೆದಿದ್ದ ಕಾಲಂಗಳೆಲ್ಲ ಸೇರಿ ಒಂದು ಪುಸ್ತಕದ ಸಂಗ್ರಹವಾಗಿದೆ ಈ ನರಕ ,ಈ ಪುಲಕ ಎಂದು.ಯಾವುದೂ ಬರೀ ಒಣಬರಹವಾಗಿರದೆ ರಸಭರಿತವಾಗಿ ,ಕೊಂಕು ,ಗಿಂಕು ಸೇರಿಸಿ ಚಪ್ಪರಿಸಿ ಓದುವಂತಿರುತ್ತಿತ್ತು.ಸಿನಿಮಾದ ಓದು ಓದಿದ ಮೇಲೆ ಒಂದು ಮಧುರವಾದ ರೋಮಾಂಚನ ,ಕಚಗುಳಿಯ ಸವಿಯಿಲ್ಲದೆ ಇರದೇ ಇರಲಿಲ್ಲ. ಸಿನಿಮಾದವರ ಜೀವನ ಶೈಲಿಯ ಬಗ್ಗೆ ಹೇಳುತ್ತಾ ಒಂದು ಕಡೆ ಬರೆಯುತ್ತಾ , ಹಿಂದಿ ನಟಿಯರಾದ ,ಅಕ್ಕ ತಂಗಿಯರಾದ ತನುಜಾ ಮತ್ತು ನೂತನ್ , ಅವರಿಬ್ಬರೂ ಹೇಗೆ ವಿಭಿನ್ನ ಎಂದು , ನೂತನ್ ಅವರು ಬಹಳ ಮಡಿವಂತಿಕೆಯಿಂದ ಬದುಕಿದ್ದು ,ಬಹಳ ಬೇಗ ಸಾವನ್ನಪ್ಪಿದ್ದು ,ಆದರೆ ತನುಜಾರು ಜೀವನದ ಎಲ್ಲಾ ಜೀವಂತಿಕೆಯನ್ನು ,ಚಂದದ ಕ್ಷಣಗಳನ್ನು ಅನುಭವಿಸಿ ಈಗಲೂ ಎಷ್ಟು ಲವಲವಿಕೆಯಿಂದಿದ್ದಾರೆ ಎಂದಿದ್ದಾರೆ. ಎಂತಹ ಗೂಢಾರ್ಥ ಇದೆ ಇದರಲ್ಲಿ. ಯುವಜನರು ನಟನಟಿಯರನ್ನು ಆರಾಧಿಸುವುದನ್ನು ಬಿಟ್ಟು ಲಂಕೇಶರನ್ನು ಆರಾಧಿಸಲಿ, ಆಗ ನೋಡಲಿ ಅವರಲ್ಲಾಗುವ ಬದಲಾವಣೆ. ಬದುಕುವ ದಾರಿ ಸಿಗದೇನು ಅಲ್ಲಿ ? ಒಂದು ಆದರ್ಶ ರೂಪುಗೊಳ್ಳದಿದ್ದರೆ ಕೇಳಿ ಅಲ್ಲಿ ?ಸಿನಿಕತನದಿಂದ ಹೊರಬರದಿದ್ದರೆ ನೋಡಿ. ಮೋಹಿಸುವುದಿದ್ದರೆ ಲಂಕೇಶರನ್ನೇ ಮೋಹಿಸಲಿ, ನಂತರ ಅವರೇ ಒಂದು ರೂಪಕವಾಗುವುದಿಲ್ಲವೇನು ಪರೀಕ್ಷಿಸಲಿ !! ಯಾರೊಬ್ಬರ ಮೇಲಾದರೂ ಹುಚ್ಚು ಬೆಳೆಸಿಕೊಳ್ಳುವುದಿದ್ದರೆ ಲಂಕೇಶರ ಪುಸ್ತಕದ ಮೇಲೆ ಬೆಳೆಸಿಕೊಳ್ಳಲಿ.ರೂಪಾಂತರಗೊಳ್ಳಲಿ. ನಂದಿ ನೋಡದವರು ಹಂದಿಗೆ ಸಮವಂತೆ ಎನ್ನುವಂತೆ , ಲಂಕೇಶ್ರನ್ನು ಓದದವರು ….. ಏನು ಹೇಳುವುದು ಅವರ ದುರಾದೃಷ್ಟಕ್ಕೆ… ಈಗಿನ ವಿದ್ಯಾರ್ಥಿಗಳೋ, ಹೊಸದಾಗಿ ಓದುವುದಕ್ಕೆ ಸಾಹಿತಿಯನ್ನು ಹುಡುಕುತ್ತಿರುವವರೋ ಸುಮ್ಮನೆ ಲಂಕೇಶರನ್ನು ಹಿಡಿಯಲಿ ,ಆ ಹಿಡಿದ ಬೆರಳನ್ನು ತನ್ನ ಮುಷ್ಟಿಯಲ್ಲಿ ಇಟ್ಟು ಬೆಚ್ಚಿಗಿನ ಅನುಭವವನ್ನು ನೀಡುವುದು ಲಂಕೇಶರ ಮಮತಾಮಯಿ ಬರವಣಿಗೆಯಲ್ಲಿದೆ. ಅವರ ಕಾದಂಬರಿ ಮುಸ್ಸಂಜೆ ಕಥಾ ಪ್ರಸಂಗದಲ್ಲಿ ಬರುವ ಆಣೆಬಡ್ಡಿ ರಂಗಮ್ಮನ ಪಾತ್ರ ಎಷ್ಟು ಜೀವನ್ಮುಖಿಯದ್ದು.ಆಕೆ ಎಲ್ಲಾ ಸೋಗಲಾಡಿಗಳ ಒಳಹೊಕ್ಕು ಹಿಂದೂ ಮುಂದೂ ನೋಡದೆ ಮುಖವಾಡ ಕಳಚುವ ರೀತಿ ಇದೆಯಲ್ಲ … ಅದರಲ್ಲೂ ಮೇಟ್ರ ಎಂದು ಕೂಗಿ ಅವರಿಗೆ ಬೈಯ್ಯುವುದು ,ಅಣಕಿಸುವುದು ,ಮಾಡಿದರೆ ಮೇಷ್ಟ್ರು ಎಂದರೆ ದೇವರೆಂದೇ ಭಾವಿಸಿರುವ , ಭಯಭಕ್ತಿಯ ಭಾವ ಉದಯಿಸುವವರನ್ನು ,ಪೂಜಿಸುವಂತವರಿಗೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ನಾವೂ ಅಲ್ಲಿಂದ ಕಾಲು ಕೀಳಬೇಕೆನಿಸುವಂತೆ ಕಟ್ಟಿದ್ದಾರೆ. ನಾಗರಹಾವು ಕಥೆಯ ಮೇಷ್ಟೇ ಎಂದು ಹೇಳಿ ಅವರನ್ನು ಉಪ್ಪರಿಗೆಯ ಮೇಲೆ ಕೂರಿಸಿದ್ದನ್ನೂ ನೋಡಿದಾಗ ,ಅವೆರಡೂ ಪಾತ್ರಗಳು ಹೇಗೆ ವಿರುದ್ಧವಾದ ಪಾತ್ರ ಪೋಷಣೆಯಿದ್ದರೂ ಮನಸ್ಸಿನಲ್ಲುಳಿಯುತ್ತವೆ. ಆಣೆಬಡ್ಡಿ ರಂಗಮ್ಮನಂತ ಹೆಣ್ಣು ಮಗಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ತೀರಾ ಅನಿರೀಕ್ಷಿತ.ಆದರೆ ಬಹಳ ಅವಶ್ಯ.ಊರಿನ ಜನರನ್ನು ಎದುರಿಸಿ ನಿಂತ ರೀತಿ …. ನಾವೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತಾದ್ದು.ಈಗಿನ ಪ್ರತಿ ಊರಿಗೂ , ಒಂದೊಂದು ಮನೆಯಲ್ಲೂ ಇರಬೇಕಾಗಿರುವ ಸುಂದರ ಮನಸ್ಸು. ಎಲ್ಲಿ ನೋಡಿದರಲ್ಲಿ ಮಿತಿ ಮೀರಿ ನಡೆಯುತ್ತಿರುವ ದೌರ್ಜನ್ಯ ,ಮೋಸ , ಅಂತರ್ಜಾತೀಯ ಮದುವೆಗಳ ನಂತರದ ಕೊಲೆಗಳಿಗೆ ಉತ್ತರವೆಂಬಂತಿದೆ. ಹಾಗೆಯೇ ಅಕ್ಕ ಕಾದಂಬರಿಯಲ್ಲಿ ಅನಾಥ ಅಕ್ಕತಮ್ಮನ ಅನುಬಂಧ ಹೇಗಿರುತ್ತದೆ ಎಂಬುದನ್ನು ಕರುಳು ಕಿವುಚುವಂತೆ ಬರೆದಿದ್ದಾರೆ.ಒಬ್ಬರಿಗೊಬ್ಬರು ಹೇಗೆ ಆತುಕೊಂಡು , ಆವರಿಸಿಕೊಂಡು ಬೈದುಕೊಂಡು ,ತಳಮಳಿಸಿಕೊಂಡು ,ಹಂಬಲಿಸಿಕೊಂಡು ….. ಅಬ್ಬಾ ಬಡವರಾದರೇನು ಭಾವನೆಗಳಿಗೆ ಬಡತನವೇ ? ಪುಸ್ತಕದ ಕೊನೆಯಲ್ಲಿ ಬರೀತಾರೆ , ಸುತ್ತಲಿನ ಪ್ರಪಂಚವನ್ನು ಹಾಗೇ ನೋಡಿದರೆ ಎಲ್ಲವೂ ಕಾಣುವುದು.ಅದನ್ನೆಲ್ಲಾ ಗ್ರಹಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ದಾರಿಹೋಕ ನೋಡುವ, ಚಿಂತಿಸುವ ,ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ದರೆ ಅವನಿಗೆ ಒಂದಲ್ಲ ಒಂದು ದಿನ ಈ ಅಕ್ಕ ತಮ್ಮ ಸಿಗುತ್ತಾರೆ.ಕ್ಯಾತನ ಹಟ್ಟಿ ,ಅವನ ಅಕ್ಕ , ಅವರಿಬ್ಬರನ್ನು ಸುತ್ತುವರಿದ ರಾಜಕೀಯ ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ… ರಾಜಕೀಯ ಹೇಗೆ ಒಂದಕ್ಕೊಂದು ತಕ್ಕೆ ಹಾಕಿ ಬದುಕನ್ನು ಛಿದ್ರ ಮಾಡುತ್ತದೆ ಎಂದು ಬಹಳ ಸಂಕ್ಷಿಪ್ತವಾಗಿ ಹೆಣೆದಿದ್ದಾರೆ. ಮೇಲಿನೆರಡು ಉದಾಹರಣೆಗಳೇ ಸಾಕು ಜಗತ್ತಿನ ಅತೀ ಹೆಚ್ಚು ಬಾಧಿಸಲ್ಪಡುತ್ತಿರುವ ಸಮಸ್ಯೆಗಳ ಆಳಹೊಕ್ಕು ನೋಡುವುದಕ್ಕೆ ಮತ್ತು ಪರಿಹಾರವಿದೆ ಎಂದು ಹೇಳುವುದಕ್ಕೆ.ಒಂದು ಒಳಕಣ್ಣನ್ನು ಯಾವಾಗಲೂ ತೆರೆದಿಟ್ಟುಕೊಂಡಿರಿ ಎಂದು ,ಮನಸ್ಸಿನಾಳದಿಂದ ಮಿಡಿಯಿರಿ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಯ್ಯೋ ಅವರು ಈಗ ಇರಬೇಕಿತ್ತು ಎಂದು ಹಳಹಳಿಸುವುದು ಬಹುಶಃ ಲಂಕೇಶ್ ಎಂಬ ಸಾಹಿತಿಯೊಬ್ಬರಿಗೆ ಮಾತ್ರವೇ ಇರಬಹುದು.ಈಗಲಂತೂ ಅವರ ಕೊರತೆ ಬಹುವಾಗಿ ಕಾಡಿಸುತ್ತಿದೆ.ಈ ದುಷ್ಟ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯ ನೋಡಿ ಏನೇನೆಲ್ಲಾ ಬರೆಯುತ್ತಿದ್ದರೋ , ಹೇಗೆಲ್ಲಾ ಧೈರ್ಯ ತುಂಬುತ್ತಿದ್ದರೋ.ತೂಕಡಿಸುವವರು ಎಚ್ಚರಗೊಳ್ಳುವಂತೆ ಮಾಡುತ್ತಿದ್ದರೋ. ಇದುವರೆಗೂ ಲಂಕೇಶರನ್ನು ಓದದವರು ಒಮ್ಮೆ ಓದಲಿ ,ಮುಂದೆ ಬರೆಯಬೇಕೆಂದುಕೊಂಡವರು ವಾಸ್ತವವಾಗಿ ಬರೆಯುವುದು ಹೇಗೆಂಬುದನ್ನು ತಿಳಿಯಲಿ. ಇಷ್ಟಕ್ಕೇ ಮುಗಿಯದು ಲಂಕೇಶರ ದೈತ್ಯಾಕಾರದ ಫ್ರತಿಭೆಯ ಅವಲೋಕನ.ಹೇಳಲು ಇನ್ನೂ ನೂರಾರು ವಿಷಯಗಳಿವೆ. ಆದರೆ ನನಗೆ ದಕ್ಕಿರುವುದು ಇಷ್ಟು. ಅವರು ನಮ್ಮನ್ನು ಪೊರೆದ ರೀತಿ ,ಎಚ್ಚರಗೊಳಿಸಿದ ವೇಳೆ ,ತಿದ್ದಿದ ಪರಿ … ಒಂದು ತಂದೆ ,ಗೆಳೆಯ ,ಅಧ್ಯಾಪಕ ,ಪ್ರೇಮಿ ,ಎಲ್ಲಾ ಪಾತ್ರವನ್ನೂ ಜವಾಬ್ದಾರಿಯಿಂದ ನಿರ್ವಹಿಸಿ ಹೆಮ್ಮೆಯಿಂದ ನಿರ್ಗಮಿಸಿದರು. ಒಂದು ವಿಧದಲ್ಲಿ ದಂತಕಥೆಯಾಗಿದ್ದ ಲಂಕೇಶರನ್ನು ನೆನೆದರೆ ಅವರ ಜೀವಿತ ಕಾಲದಲ್ಲೇ ನಾನೂ ಇದ್ದೆನಾ ಎಂದು ರೋಮಾಂಚನಗೊಳ್ಳುವೆ.ಬಹುಶಃ ಈಗಿನ ಜನಾಂಗ ಅದರ ರೋಚಕತೆಯನ್ನನುಭವಿಸದೆ ಬಹಳ ನಷ್ಟವನ್ನುಭವಿಸಿದ್ದಾರೆ.ಬದುಕಿದ್ದಾಗ ದಂತಕಥೆಯಾಗಿದ್ದ ಲಂಕೇಶರು ಈಗ ಪ್ರತಿಪುಟದಲ್ಲೂ ,ಒಂದೊಂದು ಓದಿನಲ್ಲೂ ಜೀವಂತವಿದ್ದಾರೆ.ಮನೆಯ ಎಲ್ಲಾ ಕೋಣೆಗಳಲ್ಲೂ ಒಂದೊಂದು ಅವರ ಪುಸ್ತಕವನ್ನಿಟ್ಟು ಐದು ನಿಮಿಷ ಸಮಯ ಸಿಕ್ಕಿದರೂ ಸಾಕು ,ನಾಲ್ಕು ಹಾಳೆ ಓದಿದರೂ ಸಾಕು ಅಲ್ಲೇನೋ ತಿಳುವಳಿಕೆ ,ಒಂದು ಸಮಾಧಾನ ಸಿಕ್ಕಿರುತ್ತದೆ. ಯಾವ ಲೇಖಕ ಎಲ್ಲಾ ರಂಗದಲ್ಲೂ ಕೈ ಆಡಿಸಿದ್ದಾರೆ ? ಬರೆದ ಒಂದೊಂದು ಪದವೂ ಪ್ರಾಮಾಣಿಕವಾಗಿ ಬರೆದದ್ದರಿಂದಲೇ ,ಆತಂಕವಾದಾಗ ಈಗಲೂ ದಿನಕ್ಕೊಮ್ಮೆ ಯಾದರೂ ಲಂಕೇಶ್ ಕೈಗೆ ಬರಲೇಬೇಕು. ಮಾರ್ಚ್ ಎಂಟು , ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಂಕೇಶ್ ಅವರ ಹುಟ್ಟಿದ ದಿನ ಒಂದೇ ಆದದ್ದು ಕಾಕತಾಳೀಯವೇ ಇರಬಹುದು.ಆದರೆ ಒಂದಕ್ಕೊಂದು ಪೂರಕವಾಗಿ ಬೆಸೆದಿದೆ. ಮಹಿಳೆಯರ ಶಕ್ತಿಯ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಯಾವ ಮಹಿಳೆಯೂ ಹುಸಿಗೊಳಿಸಲಿಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಯಾವ ಮಹಿಳೆಯೂ ಬೆನ್ನು ತಿರುಗಿಸಿ ಹೋಗಿದ್ದಿಲ್ಲ. ಮಹಿಳೆಯರನ್ನು ಹುರುಪು ಗೊಳಿಸಿದ ರೀತಿಯಿಂದ ಎಲ್ಲಾ ಮಹಿಳೆಯರು ಲಂಕೇಶ್ ಪತ್ರಿಕೆ ಎಂಬ ನಿರಂತರ ಇಪ್ಪತ್ತೈದು ವರ್ಷಗಳ ಕಾಲ ನಡೆದ ಜಾತ್ರೆಯಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡರು. ಅದರಲ್ಲೂ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಲಂಕೇಶ್ ಅವರ ವಿಶೇಷ ಪ್ರೀತಿಗೆ ಕಾರಣರಾಗಿ ಎಷ್ಟೆಲ್ಲಾ ಅದ್ಭುತ ಕಥೆಗಳನ್ನು ಬರೆದ ಸಾರಾ ಅಬೂಬಕ್ಕರ್ ಅವರನ್ನು ಯಾವ ಓದುಗರೂ ಮರೆಯಲು ಸಾಧ್ಯವಿಲ್ಲ.ಅವರ ಧರ್ಮದವರಿಂದಲೇ ಬಹಿಕ್ಷಾರದ ಬೆದರಿಕೆ , ನಿರಂತರ ಅವಹೇಳನಕಾರಿ ಮಾತುಗಳು ಬಂದಾಗಲೂ ಈಗಲೂ ಗಟ್ಟಿಯಾಗಿ ತನ್ನ ನಿಲುವನ್ನು ಪ್ರಕಟಿಸುತ್ತಿದ್ದಾರೆ. ನಾವೆಲ್ಲ ಹಿಂದೆ ಸಾಮಾಜಿಕ ,ಪ್ರಣಯ , ಪತ್ತೇದಾರಿ ಕಾದಂಬರಿಗಳಲ್ಲೇ ಮುಳುಗೇಳುತ್ತಿದ್ದ ಸಮಯದಲ್ಲಿ ಮುಸ್ಲಿಂ ಸಮುದಾಯದ ಕಥೆ ಮತ್ತು ಅವರಲ್ಲಿರುವ ನಾನಾ ತರಹದ ,ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಪ್ರಪಂಚಕ್ಕೆ ಎಳೆದೊಯ್ದರು.ಆ ಮೂಲಕ ಆ ಧರ್ಮದವರ
ಲಂಕೇಶರನ್ನು ಏಕೆ ಓದಬೇಕು? Read Post »
ನಾನೇಕೆ ಲಂಕೇಶರನ್ನು ಓದುತ್ತೇನೆ ಬ ಬಸವರಾಜ ಕಹಳೆ ನೀಲವ್ವ ಓದಿದಷ್ಟು ವಿಸ್ತಾರ ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು. ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು. ಆಗಸದ ಕೆನ್ನೆಯನ್ನು ರಮ್ಯತೆಯಿಂದ ಚಿವುಟಿದ ಸಿಹಿ ಗುರುತಿನಂತೆ ಕಾಣುವ ನೀಲಿ ಸಾಲು. ಆದಿ ಅನಂತವನ್ನೂ ಹೇಳುವ ನೀಲು ಕಾಳಿ ಮಾರಿ ಮಸಣಿಯಂತೆಯೂ ಕಾಣುತ್ತಾಳೆ. ಈ ಬನದ ಕರಡಿ ಭಗವದ್ಗೀತೆಯನ್ನೂ ಹೇಳುತ್ತಾಳೆ. ಅವುಡುಗಚ್ಚಿದ ಸಾವಿತ್ರಿ, ಜಾನಕಿ, ಊರ್ಮಿಳೆ ಮಂಡೋದರಿ, ಪಂಚಾಲಿಯ ಅರೆಗನಸ್ಸನ್ನೂ ಗಟ್ಟಿಯಾಗಿ ಹೇಳುತ್ತಾಳೆ. ಇವಳ ಆತ್ಮವಿಶ್ವಾಸ ಸೃಷ್ಟಿಸಿದ ಬ್ರಹ್ಮನಿಗೂ ಇತ್ತೋ ಇಲ್ಲವೋ? ಅವ್ವ ಕವನದ ಸುಟ್ಟಷ್ಟು ಕಸುವು ಅನ್ನೋ ಸಾಲಿನ ಹಾಗೆ ನೀಲು ಪದ್ಯ ಓದಿದಷ್ಟು ವಿಸ್ತಾರವಾಗಿ ಕಾಣುತ್ತದೆ. ನನ್ನ ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ಈ ಸಾಲಿನಲ್ಲಿ ಬಹುಪಾಲು ಹಳ್ಳಿಗ ಮಕ್ಕಳು ತಮ್ಮ ತಾಯಂದಿರನ್ನು ಕಾಣುತ್ತಾರೆ. ನನ್ನವ್ವ ಫಲವತ್ತಾದ ಕಪ್ಪು ನೆಲ ಅನ್ನೋ ಸಾಲು, ನನ್ನ ಪಾಲಿಗೆ ಲಂಕೇಶರೇ ಜಗದ್ಗುರುವನ್ನಾಗಿ ಮಾಡಿದೆ. ಕಲಿಸಿದ ಗುರುವನ್ನೂ ಝಾಡಿಸೋ ಮನುಷ್ಯ ನಿಂತ ನೀರಲ್ಲ ಅನ್ನೋದು ರುಜುವಾತು ನೀಡುತ್ತದೆ. ಕವಿ ಅಡಿಗರ ಅರ್ಥ ಭೂತದಲ್ಲಿ ಅಡಗಿ ತಿಳಿಯದೆ ತೊಡೆಯ ನಡುವೆ ನಗುತ್ತಿದ್ದಳು ಹುಡುಗಿ ಒಂದು ವೈಜ್ಞಾನಿಕ ಸತ್ಯದಷ್ಟೇ ಖಚಿತವಾಗಿ ನಿಜವನ್ನು ಹೇಳದಿದ್ದರೆ ಕವಿ ಬರೆಯುವುದನ್ನು ನಿಲ್ಲಿಸಬೇಕು ಅನ್ನುವಂತಹ ವಾದ ಕವಿಯಾಗಿ ಗುರು ಲಂಕೇಶರಲ್ಲಿತ್ತು. ಒಬ್ಬ ಓದುಗನನ್ನು ಬೆಚ್ಚಿ ಬೀಳಿಸದ ಬರಹ ಬರಹವೇ ಅಲ್ಲ ಅಂತ್ಲೂ ನಂಬಿದ್ದರು ಮೇಷ್ಟ್ರು. ಹಾಗಾಗಿಯೇ ಮೇಷ್ಟ್ರು ಇಷ್ಟವಾಗುತ್ತಾರೆ. ಹೊಗಳಿಕೆಯ ಹೊನ್ನಶೂಲಕ್ಕೇರುತ್ತಿದ್ದ ಮಲ್ಲಿಗೆ ಜುಟ್ಟಿಡಿದು ಎಳೆದಿದ್ದು ನನಗೆ ರಾವಣ ತೃಪ್ತಿಯಷ್ಟೇ ಖುಷಿಯನ್ನು ಈ ಕ್ಷಣಕ್ಕೂ ನನಗೆ ನೀಡುತ್ತದೆ. ನನ್ನ ಹಸಿದ ಹಲ್ಲಿಗೆ ಇವಳ ಮೈಸೂರು ಮಲ್ಲಿಗೆ ಇದು ನನಗೆ ಅಣಕದಂತೆ ಕಾಣೋದಿಲ್ಲ. ಇದೂ ಸಹ ಪಂಪನೊಣಗಿಸದಷ್ಟೇ.. ಹಾಳೆ ಪವಿತ್ರವಲ್ಲ.. ಅಕ್ಷರ ಪವಿತ್ರ ಕೃಷ್ಣ, ಕೃಷ್ಣೆಯರಂತೆ ಕರಿಯ, ಕಾಳಿಯರತ್ತ ನಮ್ಮ ಗಮನ, ನಮ್ಮ ಶ್ರದ್ಧೆ ಹರಿಯಬೇಕಾಗಿದೆ. ಇದನ್ನು ಹಟದಿಂದ ಮತ್ತು ಪ್ರೀತಿಯಿಂದ, ಧೈರ್ಯದಿಂದ ಮತ್ತು ವಿನಯದಿಂದ ಸಾಧಿಸಬೇಕಾಗಿದೆ. ಈ ಸಂಕೇತ ಮತ್ತು ವಾಸ್ತವತೆಯ ಸಂದರ್ಭದಲ್ಲೇ ನಮ್ಮ `ಪಾಂಚಾಲಿ ಮತ್ತು `ಒಕ್ಕೂಟದ ಅಸ್ತಿತ್ವ ಇದೆ. 46 ವರ್ಷಗಳ ಹಿಂದೆ ಪಾಂಚಾಲಿ ವಿಶೇಷಾಂಕ ಸಂಚಿಕೆಯ ಮುನ್ನಡಿಯಲ್ಲಿ ಬರೆದ ಸಾಲುಗಳಿವು. 46 ವರ್ಷಗಳ ಹಿಂದಿನ ಸಾಲಿನಲ್ಲೂ ದೇಶದ ಸದ್ಯದ ಸ್ಥಿತಿಯ ಭ್ರೂಣವೊಂದು ಇನ್ನೂ ಅಲುಗಾಡುತ್ತಿದೆಯೇನೋ ಅನಿಸುತ್ತದೆ. ಈ ಕ್ಷಣಕ್ಕೂ ಅವರ ಅಕ್ಷರಗಳು ಪಾವಿತ್ರ್ಯತೆಯಿಂದ ಉಳಿದಿವೆ ಅಂದ್ರೆ ಅದಕ್ಕೆ ಕಾರಣ ಲಂಕೇಶ್ ಅನ್ನೋ ನೈತಿಕ ಎಚ್ಚರ ಹಾಗೂ ಸಾಕ್ಷಿ ಪ್ರಜ್ಞೆ. ಇನ್ನೂ ಇನ್ನೂ ಹಲವು ತಲೆಮಾರುಗಳನ್ನ ನಿರಂತರ ಕಾಡುವ ತಳಮಳ. ಕನ್ನಡದ ಎಲ್ಲ ಆಯಾಮಗಳಿಗೆ ಹೊಸತನದ ಹಿಗ್ಗು ತಂದ ಸಂಕ್ರಾಂತಿ. ಸಾಹಿತ್ಯದಿಂದ ರಾಜಕೀಯದವರೆಗೆ ಎಲ್ಲವುಗಳಲ್ಲೂ ವಿಜೃಂಭಿಸಿದ ರಾವಣ ಪ್ರತಿಭೆ. ಹುಳಿಮಾವಿನ ಮರವಲ್ಲ.. ಆಲದಮರ ವಿಶಿಷ್ಟ ಬರಹಗಾರ ಭ್ರಷ್ಟನಲ್ಲದ ರಾಜಕಾರಣಿ ಅತಿಸಹಜ ನಟ ನೆನಪಿನಲ್ಲುಳಿವ ನಾಟಕಕಾರ ಹರಿತ ಮಾತಿನ ವಿಮರ್ಶಕ ವಿಭಿನ್ನ ನಿರ್ದೇಶಕ ಮುಲಾಜಿಗೆ ಒಳಗಾಗದ ಪತ್ರಕರ್ತ ಧರ್ಮದ ಸೋಂಕಿಲ್ಲದ ದಾರ್ಶನಿಕ ಇಷ್ಟು ವಿಭಿನ್ನ ಆಯಾಮಗಳನ್ನ ಹೊಂದಿರುವ ದೊಡ್ಡ ಆಲದ ಮರ ಪಿ. ಲಂಕೇಶ್. ಆದ್ರೆ ತಮ್ಮನ್ನವ್ರು ಕರೆದುಕೊಂಡಿದ್ದು ಹುಳಿಮಾವಿನ ಮರ ಅಂತ. ಯಾಕಂದ್ರೆ ಅವ್ರೊಂಥರಾ ಹುಳಿ, ಸಿಹಿ, ಒಗರಿನ ಮಿಶ್ರಣ. ಅದು ನಿಜಕ್ಕೂ ಇಷ್ಟವಾಗುತ್ತದೆ. ಯಾಕಂದ್ರೆ ಅವರ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿರಲಿ ಅಲ್ಲಿ ಕಾಣಿಸೋದು ತುಂಬು ಜೀವನಪ್ರೀತಿ ಮತ್ತು ಮನುಷ್ಯ ಸಹಜ ಭಾವಗಳು. ಸೃಜನಶೀಲನೊಬ್ಬನ ಬರೆಯಲೇಬೇಕಾದ ಒತ್ತಡದಲ್ಲಿ ಹುಟ್ಟಿದ ಕನಸಿನ (ಅಸಲಿ) ಕೂಸು ಇವತ್ತಿಗೂ ಖುಷಿಯಿಂದ ಓದಿಸಿಕೊಳ್ಳುತ್ತದೆ. ಲಂಕೇಶ್ ಪತ್ರಿಕೆ ಅನ್ನೋ ಆಲದ ಮರದ ಕೆಳಗೆ ಓದಿದ ಜಾಣೆಯರ ಸಾಲಿನಲ್ಲಿ ನಾನು ಇದ್ದೀನಿ ಅನ್ನೋದು ಸಂತಸದ ಸಂಗತಿ. ಇದೇ ಪತ್ರಿಕೆಯ ಆಲದ ಮರಲ್ಲಿ ಅದೆಷ್ಟೋ ಹಕ್ಕಿಗಳು ಗೂಡು ಕಟ್ಟಿವೆ. ಅದೆಷ್ಟೋ ಮಂದಿ ತಮ್ಮ ವ್ಯಕ್ತಿತ್ವಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅದೆಷ್ಟೋ ಆಶಯಗಳಿಗೆ, ಬರಹಗಾರರಿಗೆ ವೇದಿಕೆಯಾಗಿದೆ. ಹೋರಾಟಗಳ ಪ್ರಣಾಳಿಕೆಯಾಗಿದೆ. ಈ ಪೈಕಿ ನನ್ನಲ್ಲೂ ಓದುವ ತುಡಿತವನ್ನು ಮೇಷ್ಟ್ರ ಬರಹ ತಾಯಿ ಎದೆಹಾಲಿನಂತೆಯೇ ಆಕರ್ಷಿಸುತ್ತದೆ. ಲಂಕೇಶ್ ಮೇಷ್ಟ್ರು ಯಾಕಿಷ್ಟವಾಗುತ್ತಾರೆ ಅಂತ ಹೇಳುತ್ತಾ ಹೋದ್ರೆ ಇದೊಂದು ಎಂದಿಗೂ ಮುಗಿಯದ ಕವಿತೆಯಂತದ್ದು. ಅವರು ಅವರ ಬರಹ ಸಮಸ್ತರನ್ನೂ ಸರ್ವಕಾಲಕ್ಕೂ ನಿರಂತರ ಕಾಡುವ ನೆನಪು. ನನಗೆ ಮೇಷ್ಟ್ರು ಎಷ್ಟು ಇಷ್ಟ ಅಂದ್ರೆ ನನ್ನ ಬ್ಲಾಗ್ ಹೆಸರೇ ಗುರು ಲಂಕೇಶ್. ********
ಲಂಕೇಶರನ್ನು ಏಕೆ ಓದಬೇಕು? Read Post »
ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ 20 ರಿಂದ 30 ದಿನಗಳ ವರೆಗಾದರೂ ಯಾವ ಹೆಂಗಸರನ್ನು ಕಂಡರೂ ಹೆದರುತ್ತಿದ್ದೆ, ಹೆಂಗಸರಿಗಿರುವ ಅವಕಾಶಗಳೆಲ್ಲಾ ಗಂಡಸರನ್ನು ತುಳಿಯಲೆಂದೇ ಇರುವ ಅಸ್ತ್ರಗಳು ಎಂದು ನಂಬಿಕೊಂಡು ಬೇರೆ ದಾರಿ ಇಲ್ಲದೆ, ಗಂಡೆಂಬ ದರ್ಪವನ್ನು ಹೇಗಾದರೂ ಪ್ರದರ್ಶನ ಮಾಡಬೇಕು ಎಂದು ಹಠ ತೊಟ್ಟಿದ್ದೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ತಂದಾಗ , ” ಬಡವರಿಗೆ ಅನ್ನ ಕೊಟ್ಟು ಸೋಂಬೇರಿಗಳನ್ನಾಗಿ ಮಾಡುತ್ತಿದ್ದೀರಿ ” ಎಂದು ಹೇಳಿಕೆ ಕೊಟ್ಟ ಭೈರಪ್ಪನವರ ಮಾತನ್ನ ಕೇಳಿ, ಇದೇ ಸತ್ಯ ಎಂದು ನಂಬಿ ಮಾನವೀಯತೆಯನ್ನು ಮರೆತು ವಾದಕ್ಕೆ ಇಳಿಯುವ ಅರೆಬುದ್ಧಿವಂತರನ್ನು ಎದುರುಗೊಳ್ಳುವವರೆಗೂ…. ನನಗೆ ಈ ಸಾಹಿತಿಗಳ ಮಹತ್ವ ಏನು , ಅವರ ಆಲೋಚನೆಗಳು ಸಮಾಜದ ಮೇಲೆ ಎಂತಹಾ ಪರಿಣಾಮವನ್ನು ಬೀರುತ್ತಿದೆ ಎನ್ನುವ ಸಂಪೂರ್ಣ ಚಿತ್ರಣ ತಲೆಗೆ ಬಂದಿರಲಿಲ್ಲ. ಇಂಥಹಾ ಅಸಹ್ಯ ಸಾಹಿತಿಗಳು ಮತ್ತು ಅವರು ಮಾಡುವ ರಾಜಕೀಯಗಳ ಮತ್ತದರ ಸಾಧ್ಯತೆಗಳ ಮುಂದೆ ನಿಮ್ಮ ಗಟ್ಟಿ ಸಾಹಿತ್ಯ ವಿಭಿನ್ನವಾಗಿ ನಿಂತಿದೆ. ಕವಿತೆಗಳಲ್ಲಿ ಬರಿಯ ಕಾಮ, ಮೋಹ, ಮಂಚದ ಸುತ್ತ ಸುತ್ತುತ್ತಾ ಹೆಣ್ಣನ್ನು/ಗಂಡನ್ನು, ರಂಜಿಸುವುದೇ ಕವಿತೆಯ ಉದ್ದೇಶ ಎಂದು ತಿಳಿದ ಸೋ ಕಾಲ್ಡ್ ಕವಿಗಳ ಕವಿತಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ, ನಿಮ್ಮ ನೀಲು ಕಾವ್ಯದ ನಾಲ್ಕೆ ನಾಲ್ಕು ಸಾಲುಗಳನ್ನ ಯಾರದೋ ಮೊಬೈಲಿನಲ್ಲಿ ಕಂಡಾಗ, ಇದೇನು ಹೀಗೆ ಎಂದು ಉಬ್ಬೇರಿಸಿ ಅಮಾಯಕನಂತೆ ಕಣ್ಣು ಬಿಟ್ಟ ನೆನಪು ನನಗೀಗಲೂ ಇದೆ. ಅಲ್ಲಿಂದಲೇ ನನ್ನ ನೋಟ ನಿಮ್ಮ ವಿಭಿನ್ನ ಬರಹಗಳೆಡೆಗೆ ತಿರುಗಿದ್ದು ಎಂದು ಹೇಳಬಹುದು. ಸ್ಟೆಲ್ಲಾ ಎಂಬ ಹುಡುಗಿಯ ರಂಗರೂಪವನ್ನ ಬೆಂಗಳೂರಿನ ಕಲಾಗ್ರಾಮದಲ್ಲಿ ನೋಡುತ್ತಿದ್ದಾಗ , ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಪ್ರೇಕ್ಷಕ, ಇದೇನು ನಾಟಕವೋ ಅಥವಾ ದೊಂಬರಾಟವೋ,,, ಅದೇನು ಪಾತ್ರಗಳು ತಂದಿದಾರಪ್ಪ ಇವ್ರು ?? ಅರೆ ಥತ್ ಎಂದು ಉಗುಳು ನುಂಗಿಕೊಂಡು ಬೈಗುಳ ಪೂರ್ಣವಾಗುವ ಮುನ್ನವೇ ,,, ಯಾರು ಬರೆದದ್ದು ಈ ನಾಟಕ ? ಎಂದು ಕೇಳಿದ್ದ. ಲಂಕೇಶ್, ಪಿ ಲಂಕೇಶ್ ಬರೆದದ್ದು ಎಂದು ನನ್ನ ಉತ್ತರ ಕೇಳಿದ ತಕ್ಷಣ , ಓಹ್ ಆ ಮಹಾನುಭಾವನೋ,,, ಅವನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ !!! ಎಂದು ಗೊಣಗುತ್ತಲೇ ಅರ್ಧ ನಾಟಕ ಬಿಟ್ಟು ಹೋದ. ಆ ವ್ಯಕ್ತಿಯನ್ನು ನೋಡಿ, ನಿಮ್ಮ ಬರಹದ ಪರಿಣಾಮ ಎಂಥಾದ್ದು ಎನ್ನುವ ಅಂದಾಜು ಸಿಕ್ಕಿದ್ದು. ಅಲ್ಲಿ ನಾಟಕದಲ್ಲಿ, ಅಸಹಾಯಕ ಹೆಣ್ಣು ಮಗಳನ್ನ ನಾವೇ ಕಟ್ಟಿಕೊಂಡ ಸಮಾಜ ಹೇಗೆಲ್ಲಾ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ವಿವರಣೆಗಾಗಿ ಅಲ್ಲಿಯತನಕ ಕಾಮದಿಂದಲೂ ಮೋಹದಿಂದಲೂ ಕಾಣುತ್ತಿದ್ದ ಪ್ರೇಯಸಿಯನ್ನ ಸಮಾಜದ ಮುಂದೆ ತನ್ನ ಸಂಗಾತಿ ಎಂದು ಹೇಳಿಕೊಳ್ಳಲು ಹಿಂಜರಿಯುವ ಯುವಕ ಆ ಕ್ಷಣದ ಪಾಲಾಯನಕ್ಕೆ ಈಕೆ ನನ್ನ ಸೋದರಿ ಇದ್ದಂತೆ ಎಂದು ಹೇಳಿಬಿಡುವ ಗಂಡಸಿನ ಲಜ್ಜೆಗೆಟ್ಟ ಬುದ್ಧಿಯನ್ನು ನೀವು ತೋರಿಸಿದ್ದಕ್ಕೊ ಏನೋ, ಬಹುಶಃ ಆ ಸಹ ಪ್ರೇಕ್ಷಕಕನ ಗಂಡು ಬುದ್ದಿ ಕುಪಿತಗೊಂಡಿರಬೇಕು. ಇದಕ್ಕೂ ಮುಂಚೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಈ ಥರದ ಪ್ರತಿಕ್ರಿಯೆಗಳನ್ನ ಕಂಡಿದ್ದೆ, ಕೇಳಿದ್ದೆ. ಪ್ರತಿಕ್ರಿಯೆಗಳು ಧನಾತ್ಮಕವೋ ಋಣಾತ್ಮಕವೋ, ಒಟ್ಟಿನಲ್ಲಿ ಕೃತಿ ಎದುರುಗೊಂಡಾಗ ಒಂದು ಧ್ವನಿ ಹುಟ್ಟುತ್ತದೆ ಎಂದರೆ, ಆ ಕೃತಿಯ ನಿರೂಪಕ ಗೆದ್ದಿದ್ದಾನೆ ಎಂದು ಅರ್ಥವಲ್ಲವೇ. ಈಗಿನ ಅಸಹ್ಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಮೊನ್ನೆ ಮೊನ್ನೆ, ಪ್ರಭುತ್ವವನ್ನು ಪ್ರಶ್ನಿಸಿ ರೂಪಕವಾಗಿ ಕಟ್ಟಿದ್ದ ಪದ್ಯವನ್ನು ಬರೆದು ವಾಚಿಸಿದ್ದಕ್ಕೆ ಸಿರಾಜ್ ಬಿಸರಳ್ಳಿ ಎಂಬ ಕವಿಯನ್ನು ಅರೆಸ್ಟ್ ಮಾಡಿದ್ದರಂತೆ. ಈ ಅಭಿವ್ಯಕ್ತಿ ಸ್ವತಂತ್ರ ಕಿತ್ತುಕೊಂಡ ಪ್ರಕ್ರಿಯೆಯನ್ನ ನಮ್ಮ ಮೀಡಿಯಾ ಬಾಂಧವರಿಂದ ಹಿಡಿದು, ಟ್ರೋಲ್ ಮಾಡುವ ಸಣ್ಣ ಪುಟ್ಟ ಚಿಲ್ಲರೆಗಳೂ ಸಹ ಸಂಭ್ರಮಿಸಿದ್ದರು. ಇಂಥಹ ಸಿರಾಜ್ ಬಿಸರಳ್ಳಿ ಯವರು ನಿಮ್ಮ್ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ದಿನ ಹುಟ್ಟುತ್ತಿದ್ದರು ಎಂದು ಕೇಳಿದಾಗ, ರೋಮಾಂಚನವಾಗುವುದಿಲ್ಲವೇ…!!! ಕನ್ನಡ ಹೋರಾಟಗಳು ಅಂಧಕಾರದ ರೂಪ ಪಡೆದ ಸಮಯದಲ್ಲಿ, ನಿಮ್ಮ ಲಂಕೇಶ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಕನ್ನಡ ಪರ ಹೋರಾಟಗಾರರು ನಿಮ್ಮನ್ನು ಹಿಡಿದು ಥಳಿಸಿದ್ದರಂತೆ. ಆದರೆ ಅದಾವಕ್ಕೂ ಎದೆಗುಂದದೆ ಮುಂದಿನ ದಿನವೂ ನಿಮ್ಮ ಬರಹದ ಹೋರಾಟ ಕಮ್ಮಿಯಾಗದೇ ಉಳಿದದ್ದನ್ನು ಕಂಡು ಅವರೇ ಸುಮ್ಮನಾದರಂತೆ. ಪ್ರಶಸ್ತಿಗಳಿಗೆ ಹಾತೊರೆದು ಸಮಯಸಾಧನೆಯಲ್ಲಿ ಮುಳುಗಿರುವ ನಮ್ಮ ಈ ಕಾಲದ ಹೊಸ ಸಾಹಿತಿಗಳನ್ನ ಕಂಡಾಗ , ನಿಮ್ಮ ನೇರ ನಿಷ್ಟುರವಾದ ಆ ಮಾತುಗಳೆಲ್ಲಾ ನೆನಪಿನಲ್ಲಿ ಉಳಿಯುತ್ತಿವೆ. ಮನೆ ಬಾಗಿಲಿಗೆ ಬಂದ ಪ್ರಶಸ್ತಿಯನ್ನು ಹಿಂದೆ ಕಳುಸಿದ ತೇಜಸ್ವಿಯಂಥವರು ನಿಮ್ಮೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದರು, ಎಂದಾಗಲಂತೂ…. ನಿಮ್ಮಗಳ ಆ ಒಗ್ಗಟ್ಟಿನ ಕಾಲದ ಮುಂದೆ ನಮ್ಮ ಕಾಲ ತೀರಾ ಸಪ್ಪೆ ಎನಿಸುತ್ತಿದೆ. ಅಧಿಕಾರವಿಲ್ಲದೆ ಏನೂ ಮಾಡಲಾಗುವುದಿಲ್ಲ, ಎಂದು ನಿಮ್ಮ ಕಾಲದ ಸಾಹಿತಿಗಳು ಆಗಲೇ ತಿಳಿದಿದ್ದರು ಅಲ್ಲವೇ.. ??? ವಿರುದ್ಧ ಅಭಿಪ್ರಾಯ ಹೊಂದಿದ ಸಂಘ ಪರಿವಾರದ ಪರವಾಗಿ ನಿಂತು ಸೋತು ಸುಣ್ಣವಾಗಿದ್ದ ಅಡಿಗರನ್ನ ಸಂತೈಸುತ್ತಲೇ , ಲೋಹಿಯಾ ತತ್ವಗಳನ್ನು ಒಪ್ಪಿಕೊಂಡು ಒಂದು ಸ್ವಂತ ಕರ್ನಾಟಕದ ಬಲಕ್ಕಾಗಿ ಸಾಹಿತ್ಯ ಲೋಕದಿಂದ ರಾಜಕೀಯ ಕ್ಷೇತ್ರದ ಕಡೆ ಅಲೋಚಿಸಿದ್ದ ನಿಮ್ಮ ಕರ್ನಾಟಕ ಪರ್ಯಟನೆ, ರಾಜಕೀಯವಾಗಿ ಸಾಹಿತಿಗಳು ಎಷ್ಟು ಮುಖ್ಯ ಎಂಬುದಾಗಿ ನಮಗೆಲ್ಲಾ ಮಾದರಿಯಾಗಿದೆ. ದೃಶ್ಯ ಮಾಧ್ಯಮ ಬೀರುವ ಪ್ರಭಾವವನ್ನು ಸೂಕ್ಷ್ಮವಾಗಿ ಅರಿತಿದ್ದ ನೀವು, ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಲ್ಲದೇ, ಯಶಸ್ಸನ್ನು ಪಡೆದ ಬಗೆಗೆ ಏನು ತಾನೇ ಹೇಳಲಿ… ??? ಟೀಕಿಸಿದರೆ ಸಾಲದು ಮಾಡಿ ತೋರಿಸಿ ಎಂದು ಫಟಾಪತ್ ಕಾಲೆಳೆಯುವ ಜನರ ಬಾಯನ್ನ ನಿಮ್ಮ ಪ್ರಯತ್ನಗಳು ಉತ್ತರ ನೀಡಿ ಮುಚ್ಚಿಸಿದ ಗೆಲುವಿಗೆ ನಾನೆಂದಿಗೂ ಅಭಿಮಾನಿಯಾಗಿಯೇ ಉಳಿಯುತ್ತೇನೆ. ಲಂಕೇಶರೇ …. ನಿಮ್ಮನ್ನು ನಾನೇಕೆ ಓದುತ್ತೇನೆ ಎಂಬುದು, ಇಂಥಹ ಮತ್ತಷ್ಟು ಕಾರಣಗಳಿಗೆ ಮುಂದುವರಿಯುತ್ತಲೇ ಇದೆ. **************************
ಲಂಕೇಶರನ್ನು ಏಕೆ ಓದಬೇಕು? Read Post »
ಲಂಕೇಶರನ್ನು ನಾನೇಕೆ ಓದುತ್ತೇನೆ ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು “ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ : ಸಹೃದಯರೇ, ‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು) ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರಾದ ಶ್ರೀಮತಿ ಎಂ. ಆರ್.ಕಮಲ ಮೇಡಂ ಅವರನ್ನು ನಾವು ಕೇಳಿಕೊಂಡಾಗ, ಅವರು ಖುಷಿಯಿಂದ ಈ ಕೆಲಸ ಮಾಡಿ ಕೊಡುವುದಾಗಿ, ಒಪ್ಪಿಕೊಂಡು ನಾವು ಕೇಳಿಕೊಂಡಿದ್ದ ಅವಧಿಯ ಒಳಗೆ, ಬರಹಗಳನ್ನು ಓದಿ, ಆ ಆರು ಬರಹಗಳಲ್ಲಿ ಎರಡನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ತೀರ್ಪುಗಾರರಿಗೆ ನಾವು ಬಹುಮಾನಕ್ಕೆ ಒಂದು ಬರಹವನ್ನು ಆಯ್ಕೆ ಮಾತ್ರ ಮಾಡಿ ಎಂದಿದ್ದೆವು. ಆದರೆ ಮೇಡಂ ಅವರು ಈ ಬರಹಗಳನ್ನು ಓದಿ ಮತ್ತೊಂದು ಬರಹದ ಮೌಲ್ಯದ ಬಗೆಗೂ ಒಳ್ಳೆಯ ಮಾತುಗಳನ್ನು ಹೇಳಿ, ಸಾಧ್ಯವಾದರೆ ಅದಕ್ಕೂ ಬಹುಮಾನ ನೀಡಿ ಎಂದಿದ್ದಾರೆ. ತೀರ್ಪುಗಾರರ ಮಾತಿಗೆ ಆಯೋಜಕರಾದ‘ ಮೈಸೂರು ಗೆಳೆಯರು’ ಸಹಮತ ಸೂಚಿಸಿ, ತೀರ್ಪುಗಾರರ ಅಪೇಕ್ಷೆಯಂತೆ ಮತ್ತೊಂದು ಬಹುಮಾನವನ್ನು ನೀಡೋಣ ಎಂದು ತೀರ್ಮಾನಿಸಿ.ಮತ್ತೊಂದು ತೀರ್ಪುಗಾರರ ಮೆಚ್ಚುಗೆಯ ಬಹುಮಾನವನ್ನು ನೀಡುತ್ತಿದ್ದೇವೆ. ಈ ಸ್ವರ್ಧೆಗೆ ತಮ್ಮ ಬರಹಗಳನ್ನು ಕಳುಹಿದ್ದವರು ಒಟ್ಟು ಆರು ಜನ. ಸ್ಪರ್ಧಿ -5 ಸುಪ್ರಿಯಾ, ಬೆಂಗಳೂರು ಸ್ಪರ್ಧಿ -4 ನವೀನ್ ಮಂಡಗದ್ದೆ. ಸ್ಪರ್ಧಿ -3 ಶ್ರೀಮತಿ ರಾಜೇಶ್ವರಿ ಭೋಗಯ್ಯ ಸ್ಪರ್ಧಿ -6 ನಾಗಸ್ವಾಮಿ ಮುತ್ತಿಗೆ, ಮೈಸೂರು. ಸ್ಪರ್ಧಿ -2 ಬಸವರಾಜು ಕಹಳೆ ಸ್ಪರ್ಧಿ -1 ಧನಂಜಯ್ ಎನ್ ಈ ಲೇಖನಗಳನ್ನು ಓದಿ, ಶ್ರೀ ಮತಿ ಎಂ.ಆರ್ ಕಮಲ ಮೇಡಂತಮ್ಮ ತೀರ್ಪನ್ನು ಹೀಗೆ ನೀಡಿ, ಎರಡು ಮಾತುಗಳನ್ನು ಬರೆದು ಕಳುಹಿಸಿದ್ದಾರೆ.ಇದು ಅವರ ತೀರ್ಪು ಮತ್ತು ಮಾತುಗಳು. Spardhi-1 (first prize)Spardhi-3 (2nd prize) ಒಂದೇ ಬಹುಮಾನ ಎಂದು ತಿಳಿದಿದೆ…ಆದರೂ ಕಳಿಸಿದ್ದೇನೆ… ಆಯ್ಕೆ ನಿಮಗೆ ಬಿಟ್ಟಿದ್ದು… ಒಬ್ಬ ಓದುಗ ಅನೇಕ ಲೇಖಕರನ್ನು ಓದುತ್ತ, ವಿಕಾಸಗೊಳ್ಳುತ್ತ ಪಕ್ವತೆಯನ್ನು ಪಡೆಯುವುದು ಓದಿನ ಬಹಳ ಮುಖ್ಯ ಕ್ರಮವಾದ್ದರಿಂದ ಮೊದಲು ಎಂದು ಆರಿಸಿದ್ದೇನೆ. ಎರಡನೇ ಬಹುಮಾನಕ್ಕೆ ಆಯ್ಕೆಯಾದವರು ಲಂಕೇಶ್ ಅವರನ್ನು ಗಂಭೀರವಾಗಿ ಓದಿದ್ದಾರೆ ಅನ್ನಿಸಿತು..———- ಈ ಸ್ವರ್ಧೆಯಲ್ಲಿ ಬಹುಮಾನ ಪಡೆದಧನಂಜಯ್ ಎನ್ ಮತ್ತು ಶ್ರೀ ಮತಿ ರಾಜೇಶ್ವರಿ ಭೋಗಯ್ಯ ಮೇಡಂ ಅವರಿಗೆ ಮೈಸೂರು ಗೆಳೆಯರ ಅಭಿನಂದನೆಗಳು ಮತ್ತು ನಾಳೆ ಮೈಸೂರಿನ ಕಲಾಮಂದಿರ ಆವರಣದಲ್ಲಿ ನಡೆಯಲಿರುವ ” ಲಂಕೇಶ್ ನೆನಪು” ಕಾರ್ಯಕ್ರಮದಲ್ಲಿ ವಿಜೇತರಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.ವಿಜೇತರನ್ನು ಕಾರ್ಯಕ್ರಮಕ್ಕೆ ಮೈಸೂರು ಗೆಳೆಯರು ಪ್ರೀತಿಯಿಂದ ಮತ್ತೊಮ್ಮೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ. * ಮೊದಲ ಬಹುಮಾನ : 1500 ರೂ ಮೌಲ್ಯದ ಪುಸ್ತಕಗಳು.* ತೀರ್ಪುಗಾರರ ಎರಡನೇ ಬಹುಮಾನ : 500 ರೂ ಮೌಲ್ಯದ ಪುಸ್ತಕಗಳು. * ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ “ಮೈಸೂರು ಗೆಳೆಯರು” ಕಡೆಯಿಂದ ಅನಂತ ಧನ್ಯವಾದಗಳು. * ಬರಹಗಳನ್ನು ಓದಿ, ಒಂದನ್ನು( ಎರಡನ್ನು) ಆಯ್ಕೆ ಮಾಡಿ ಕೊಟ್ಟ ಎಂ ಆರ್. ಕಮಲ ಮೇಡಂ ಅವರಿಗೆ ” ಮೈಸೂರು ಗೆಳೆಯರು” ಕಡೆಯಿಂದ ಪ್ರೀತಿಯ ಅನಂತ ಧನ್ಯವಾದಗಳು. ——ಮೈಸೂರು ಗೆಳೆಯರು ಈ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರ ಬರಹಗಳನ್ನು ಸಂಗಾತಿ ನಾಳೆಯಿಂದ ಸರಣಿ ರೂಪದಲ್ಲಿ ಪ್ರಕಟಿಸಲಿದೆ.ನಮ್ಮ ಓದುಗರು ಈ ಬರಹಗಳನ್ನುಓದುವುದು ಮಾತ್ರವಲ್ಲದೆ ಇತರೆಯವರಿಗು ಹಂಚಿ, ಲಂಕೇಶರ ವಿಚಾರದಾರೆಗಳನ್ನುಪಸರಿಸಬೇಕೆಂದು ಕೋರುತ್ತೇನೆ-ಸಂಪಾದಕ
ಲಂಕೇಶರನ್ನು ಏಕೆ ಓದಬೇಕು? Read Post »
ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ತ್ರಿವೇಣಿ ಜಿ.ಹೆಚ್ ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ? ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ ಹೇಳಿದರೆ ಇನ್ನೊಂದು ಕಡೆ ಯಾವ ಬಣ್ಣದ ಸೀರೆ ಉಟ್ಟು ಬರಬೇಕು ಎಂಬುದು ಕಾರ್ಯಕ್ರಮದ ಹೈಲೈಟ್ಸ್! ಸೆಲೆಬ್ರೇಷನ್ಸ್, ಸಾಧಕ ಮಹಿಳೆಯರಿಗೆ ಸನ್ಮಾನ, ಸೀರೆ, ಒಡವೆ, ಪರ್ಸು, ಅಂಗಡಿಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್..! ಮಹಿಳೆಯ ಸೇವೆ, ತ್ಯಾಗಗಳ ಕುರಿತು ಕವನ, ಲೇಖನ. ಎಲ್ಲಾ ಚಾನೆಲ್ಲುಗಳಲ್ಲಿ ಮಹಿಳೆಯರ ಕುರಿತು ಚರ್ಚೆ, ಮಾತು ಕಥೆ. ಅಲ್ಲಿಗೆ ಮತ್ತೊಂದು ವರ್ಷದವರೆಗೂ ಕಾಯಬೇಕು! ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹುಟ್ಟು ಹಾಗೂ ಅದು ನಡೆದು ಬಂದ ದಾರಿಯ ಬಗ್ಗೆ ತಿಳಿಯದೆಯೂ ಗಂಟೆಗಟ್ಟಲೆ ಕೊರೆಯುವರಿದ್ದಾರೆ. ಅದು ಶುರುವಾಗಿದ್ದು ಸಮಾನ ವೇತನದ ಬೇಡಿಕೆಯೊಂದಿಗೆ. ರಷ್ಯಾ ಹಾಗೂ ಡೆನ್ಮಾರ್ಕಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ. ‘ಇಂಟರ್ ನ್ಯಾಷನಲ್ ಗಾರ್ಮೆಂಟ್ ವುಮೆನ್ಸ್ ವರ್ಕರ್ಸ್ ಯುನಿಯನ್’ ಎಂಬ ಅಸೋಸಿಯೇಷನ್ ಅಡಿ. ಸಮಾನ ಅವಕಾಶ, ಸಮಾನ ವೇತನ.. ಶತಮಾನದ ಹಿಂದಿನ ಬೇಡಿಕೆಯೂ ಅದೇ.. ಇಂದಿನ ಬೇಡಿಕೆಯೂ ಅದೇ.. ಬೇಡಿಕೆ ಆಗಿರುವುದರಿಂದ ನೆರವೇರಿಯೇ ಇಲ್ಲವೇನೋ.. ಬೇಡಿಕೆ ಎಂದು ವರ್ಷವಿಡೀ ಕೆಲಸ ಮಾಡದೇ ಕೂರಲು ಆಗುವುದಿಲ್ಲ.. ವರ್ಷದಲ್ಲಿ ಒಂದು ದಿನ ಪ್ರಪಂಚದ ಗಮನ ತಮ್ಮೆಡೆಗೆ, ತಮಗಾಗಿರುವ ಅನ್ಯಾಯದೆಡೆಗೆ ಸೆಳೆಯಲು ಶುರುವಾಗಿದ್ದು ಮಹಿಳಾ ದಿನಾಚರಣೆ. ಗೆದ್ದದ್ದು ಕೆಲವು, ಹೋರಾಟ ಮುಂದುವರಿದಿರುವುದು ಹಲವು ವಿಚಾರಗಳಿಗೆ. ಗಮನ ಇತ್ತ ಹರಿದಿದೆ, ಪ್ರಪಂಚ ನಿಂತು, ತಿರುಗಿ ನೋಡಿದೆ, ಗಮನಿಸಿದೆ, ವಿಷಯ ಹರಡಿದೆ ಎಂಬುದೇ ಒಂದು ದೃಷ್ಠಿಯಲ್ಲಿ ಗೆಲುವು. ಹಲವು ರಂಗಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಇನ್ನೂ ಕನಸು. ಕೆಲವು ಕಡೆ ಸಮಾನ ವೇತನ ಸಿಕ್ಕರೂ ಅದರಿಂದ ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ . ಅತ್ಯಾಚಾರ ನಿಲ್ಲಬೇಕು, ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು, ರಾಜಕೀಯದಲ್ಲಿ ಪ್ರಾಶಸ್ತ್ಯ ಸಿಗಬೇಕು, ಅಧಿಕಾರ ಅವರಿಗೆ ಸಿಗಬೇಕು – ಇವೆಲ್ಲಾ, ರಸ್ತೆಗಿಳಿದು ಹೋರಾಟ ಮಾಡಿ ದಕ್ಕಿಸಿಕೊಳ್ಳುವುದಲ್ಲ. ರಸ್ತೆಗಿಳಿದು ವಿಚಾರವನ್ನು ಪ್ರಚಲಿತಗೊಳಿಸಬಹುದು. ಆದರೆ ದಕ್ಕಿಸಿಕೊಳ್ಳಲು ವಿದ್ಯಾಭ್ಯಾಸ ಕೊಡಬೇಕು. ತಿಳವಳಿಕೆ ಮೂಡಬೇಕು ಹಾಗೂ ಮನೋಭಾವದಲ್ಲಿ ಬದಲಾವಣೆ ಆಗಬೇಕು. ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದು. ಕ್ಷಮಿಸಿ.. ಸ್ವಾತಂತ್ರ್ಯ ಅಲ್ಲ, ಆರ್ಥಿಕ ಸಬಲತೆ ಎನ್ನಬಹುದು. ಏಕೆಂದರೆ ತಾನು ದುಡಿದ ಹಣದ ಮೇಲೆ ಆ ಮಹಿಳೆಗೆ ಹಕ್ಕಿರುವುದಿಲ್ಲ. ವಿದ್ಯಾಭ್ಯಾಸ ದೊರಕಿಸಿಕೊಟ್ಟ ಉದ್ಯೋಗದಿಂದ ಬಂದ ಸಂಬಳವನ್ನು ತಂದು ಮನೆಯ ಗಂಡಸಿಗೆ (ಅಪ್ಪ ಅಥವಾ ಗಂಡ) ಕೊಟ್ಟು, ತನ್ನ ಖರ್ಚಿಗೆ ಹಣ ಕೇಳುವ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು. ಮಹಿಳೆಗೆ ಮೀಸಲಿಟ್ಟ ಕ್ಷೇತ್ರದಲ್ಲಿ ಗಂಡ ಅಥವಾ ಅಪ್ಪ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಚುನಾವಣೆಗೆ ನಿಂತು ಗೆಲ್ಲುವ ಮಹಿಳೆ ಅಧಿಕಾರ ನಡೆಸುವುದಿಲ್ಲ. ಆ ಅಧಿಕಾರ ಮತ್ತೆ ಗಂಡ ಅಥವಾ ತಂದೆಯ ಹಕ್ಕು. ತನ್ನ ಒಡಲಿನಲ್ಲಿ ಮೂಡುವ ಹೆಣ್ಣು ಭ್ರೂಣದ ಸಂರಕ್ಷಣೆಯನ್ನು ಮಾಡಲಾರಳು ಆಧುನಿಕ ಕಾಲದ ಹೆಣ್ಣು. ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಬಲತೆಗಳ ಜೊತೆಗೆ ಮನೋಭಾವದ ಬದಲಾವಣೆ ಆಗಬೇಕಾಗಿರುವುದು ಇಂದಿನ ಪ್ರಧಾನ ಅವಶ್ಯಕತೆ. ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಇಬ್ಬರ ಮನೋಭಾವದಲ್ಲೂ ಬದಲಾವಣೆ ಆಗಬೇಕಾಗಿದೆ. ಸಮಾಜದ ಚಿಕ್ಕ unit ಆಗಿರುವ ಸಂಸಾರ ಅಂದರೆ ಫ್ಯಾಮಿಲಿಯ ಜವಾಬ್ದಾರಿ ಇಲ್ಲಿ ಅಖಂಡವಾಗಿದೆ. ಮಕ್ಕಳನ್ನು ಬೆಳೆಸುವ ತಂದೆತಾಯಂದಿರು ತುಂಬಾ ಜವಾಬ್ದಾರಿಯುತವಾಗಿ, ಸಮಾನವಾಗಿ ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು. ಬರೀ ಮಾತಲ್ಲಿ, ಕಥೆಯಲ್ಲಿ ಅಲ್ಲ.. ತಂದೆ ತನ್ನ ಹೆಂಡತಿಯನ್ನು ಗೌರವಿಸುವುದರ ಮೂಲಕ, ತಾಯಿ ಆತ್ಮವಿಶ್ವಾಸದಿಂದ ಇರುವ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ‘lead by example’ ಮಂತ್ರವಾಗಬೇಕು. ನಿರ್ಲಕ್ಷಿತವಾಗಿರುವ ಪ್ರೈಮರಿ ಶಾಲೆಯ ವಿದ್ಯಾಭ್ಯಾಸವನ್ನು ಸಬಲಗೊಳಿಸಬೇಕು. ಮೊಳಕೆಯಾಗಿ ಮನೆಯಲ್ಲಿ ಚಿಗುರೊಡೆದ ಪೈರಿಗೆ ನೀರೆರೆಯುವ ಕಾಯಕ ಆಗುವುದು ಪ್ರಾಥಮಿಕ ಶಾಲೆಯಲ್ಲಿ. ಸೂಕ್ತ ಪಾಠ, ದಕ್ಷ ಅಧ್ಯಾಪಕರು ವಿಜ್ಞಾನ, ಲೆಕ್ಕ, ಇತಿಹಾಸ, ಭಾಷೆಯ ಜೊತೆಗೆ ಸದೃಢ ಸಮಾಜಮುಖಿ, ಸಮಾನತೆಯ ಮನೋಭಾವ ಮಕ್ಕಳಲ್ಲಿ ಮೂಡುವಂತೆ, ಮೂಡಿದ್ದು ಬೆಳೆಯುವಂತೆ ಮಾಡಬೇಕು. ನಮಗೆ ಏನಿದ್ದರೂ celebrate ಮಾಡುವ ಹುಮ್ಮಸ್ಸು.. ಅದನ್ನೂ ಮಾಡುವ. Let us celebrate womanhood. ನಾವು ಹೆಣ್ಣು ಎಂದು ಹೆಮ್ಮೆಪಡುವ. ಸಮಾನತೆ ಬೇಕು ಅಂದರೆ ಗಂಡಿನಂತೆ ಆಗಬೇಕು ಎಂದಲ್ಲ.. ನಮಗೆ ಬೇಕಾದಂತೆ ಇರಬೇಕು.. ಯಾರಿಗೂ ಅಡಿಯಾಳಾಗಿ ಅಲ್ಲ. (ಯು.ಸುಮಾ ಅವರ ಲೇಖನದಿಂದ ಸ್ಪೂರ್ಥಿ) ****************
ನಿಲ್ಲದ ಅಮಾವಾಸ್ಯೆ ಚಂದ್ರಪ್ರಭ ನಿಲ್ಲದ ಅಮಾವಾಸ್ಯೆ…. ಈ ಸೃಷ್ಟಿ ನಿರಂತರ.. ಇಲ್ಲಿ ಯಾವ ಕಾರಣಕ್ಕೂ ಯಾವುದೂ ನಿಲ್ಲಲಾರದು ಅಂತ ಹೇಳೋಕೆ ನಮ್ಮಲ್ಲಿ ಪ್ರಚಲಿತ ಮಾತೊಂದಿದೆ.. ‘ಅಕ್ಕ ಸತ್ತರ ಅಮಾಸಿ ನಿಂದರೂದಿಲ್ಲ’ ಅಂತ. ಹೌದು, ಯಾವುದೂ ನಿಲ್ಲೂದಿಲ್ಲ. ಆದರೆ ಅದನ್ನು ನಡೆಯಿಸಿಕೊಂಡು ಹೋಗುವ ವ್ಯವಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರ್ತದೆ ಅನ್ನೊ ಸತ್ಯ ಯಾರ ಗಮನಕ್ಕೂ ಬಾರದೆ ಹೋಗ್ತದೆ ಅನ್ನೋದೇ ವಿಸ್ಮಯ. ಗಾಳಿ, ನೀರು, ಮಳೆ, ಬಿಸಿಲು.. ನಲ್ಲಿ ನೀರು, ದಿನಪತ್ರಿಕೆ, ತರಕಾರಿ, ಅಕ್ಕಿ,ಬೇಳೆ..ಪೆಟ್ರೋಲು,ಸೀಮೆ ಎಣ್ಣೆ, ಗ್ಯಾಸ್ ಒಲೆ.. ಯಾವುದಾದರೂ ಅಷ್ಟೇ. ಅದರಲ್ಲಿ ವ್ಯತ್ಯಯ ಆಗುವ ವರೆಗೆ ನಮ್ಮ ಗಮನ ಅತ್ತ ಹರಿಯುವುದೇ ಇಲ್ಲ. ಆದರೆ ಕವಿ ಕಣ್ಣಿಗೆ ಈ ಸಂಗತಿ ಬಿದ್ದಾಗ ಮೂಡಿದ ಸಾಲುಗಳು ಅದೆಷ್ಟು ಆಪ್ತ, ಸುಂದರ!! “ರಾಜ್ಯಗಳಳಿಯಲಿ ರಾಜ್ಯಗಳುರುಳಲಿ| ಹಾರಲಿ ಗದ್ದುಗೆ ಮುಕುಟಗಳು| ಮುತ್ತಿಗೆ ಹಾಕಲಿ ಸೈನಿಕರೆಲ್ಲ| ಬಿತ್ತುಳುವುದನವ ಬಿಡುವುದೇ ಇಲ್ಲ||” ಅಬ್ಬಾ…! ಎಂಥ ಸೂಕ್ಷ್ಮ ಗ್ರಹಿಕೆ, ಸಂವೇದನೆ!! ಇದೆಲ್ಲ ಯಾಕೀಗ ಅಂತೀರಾ? ಹ್ಞೂಂ… ಅದೆಂಥದೊ ವೈರಸ್ ಬಂದು ದೇಶಕ್ಕೆ ದೇಶವನ್ನೇ ಅಲ್ಲಾಡಿಸ್ತಿದೆ.. ಜಗತ್ತಿನ ಜನಗಳಲ್ಲಿ ಭಯ ಹುಟ್ಟಿಸಿದೆ. ಯಾರಾರಿಗೊ ಇನ್ನೂ ಯಾರಾರೊ ಹಿಂಬಾಲಕರು ಮುಂಬಾಲಕರು ಆಗಿ ದೇವರು.. ಭಕ್ತರು ಅಂತೆಲ್ಲ ಸೃಷ್ಟಿ ಆಗವ್ರೆ.. ಇನ್ನು ಕೆಲವರೊ.. ಗೆದ್ದು ಬೀಗುವ ತನಕ ಒಂದು ಬಣ್ಣ..! ಗೆದ್ದ ಬಳಿಕ ಇವರು ಆಶ್ರಯಿಸುವ ಛತ್ರ ಚಾಮರಗಳ ಬಣ್ಣವೇ ಬೇರೆ..!! ಮನುಷ್ಯರನ್ನು ತಮಗೆ ಹೋಲಿಸುವವರನ್ನು ಕಂಡು ಊಸರವಳ್ಳಿಗಳೂ ಆಕ್ರೋಶಗೊಂಡಿವೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ.. ಎಲ್ಲದರಲ್ಲಿ ಏನೆಲ್ಲ ಸ್ಥಿತ್ಯಂತರ ಕ್ಷಣ ಕ್ಷಣಕ್ಕೂ ಘಟಿಸುತ್ತಿವೆ. ಯುದ್ಧವಂತೆ.. ಕೊರೊನಾ, ಕೋವಿಡ್ ಅಂತೆ.. ದೇಶವಂತೆ..ಪ್ರೇಮವಂತೆ.. ಇದನ್ನೆಲ್ಲ ಬದಿಗೆ ತಳ್ಳಿ ಪರೀಕ್ಷಾ ತಿಂಗಳು ಬಂದೇ ಬಿಟ್ಟಿದೆ. ಪರೀಕ್ಷೆಗಳ ಹಬ್ಬ.. ಹಾವಳಿ. ಮೂಲಭೂತ ಸೌಕರ್ಯಗಳಿರುವ ಖಾಸಗಿ ಸಂಸ್ಥೆಗಳ ರೀತಿ ಒಂದು ಬಗೆಯದಾದರೆ ಎಲ್ಲ ಕೊರತೆಗಳನ್ನೂ ಕೊಡವಿ ಎದ್ದು ನಿಲ್ಲುವ ಸರಕಾರಿ ಸಂಸ್ಥೆಗಳದು ಮತ್ತೊಂದು ರೀತಿ. ಪರೀಕ್ಷೆ ನಡೆದಿದೆಯೆ ಇಲ್ಲಿ? ಎಂದು ಕೇಳುವಷ್ಟು ಸದ್ದಡಗಿದ ವಾತಾವರಣದಲ್ಲಿ ಪರೀಕ್ಷೆ ನಡೆದಿವೆ ಎಂದಿನಂತೆ. ಮೌಲ್ಯಮಾಪನ ನಡಪ್ರತಿಷ್ಠಾಪನೆಗಾಗಿ ಅವಸರ.. ಸಿಇಟಿ..ಇನ್ನೊಂದು ಮತ್ತೊಂದು ಬಂದೇ ಬಿಡ್ತವೆ. ಕವಲು ದಾರಿಯಲ್ಲಿ ನಿಂತ ಮಕ್ಕಳಿಗೆ ಆಯ್ಕೆಯ ಗೊಂದಲ. ದಿನಗಳು ಓಡುತ್ತಿವೆಯೆ..ಉರುಳುತ್ತಿವೆಯೆ.. ಒಂದೂ ಅರ್ಥವಾಗದ ಸನ್ನಿವೇಶದಲ್ಲಿ ಶಾಲೆಗಳು ಪುನಃ ಆರಂಭ ಆಗ್ತವೆ. ಸಮವಸ್ತ್ರ ತೊಡಿಸಿ ಮಗುವನ್ನು ಶಾಲೆಗೆ ಕಳಿಸಿ ಆಕೆ ತಾನೂ ಅಣಿಯಾಗುತ್ತಾಳೆ.. ಯಾವುದೊ ಸಂಕಿರಣದ ಆಶಯ ನುಡಿ.. ಇನ್ನಾವುದೊ ಚರ್ಚಾ ಕೂಟದ ಪ್ರಧಾನ ಭಾಷಣ.. ಅಮ್ಮನ ಮನೆಗೊಂದು ಭೇಟಿ.. ಮಿತ್ರರೊಂದಿಗೊಂದು ವಿಹಾರ.. ಎಲ್ಲವನ್ನೂ ತನ್ನೊಂದಿಗೆ ಕರೆದೊಯ್ಯುತ್ತಾಳೆ.. ಜೊತೆಗೆ ಬಸಿರು,ಬಾಣಂತನ,ಮುಟ್ಟು, ಸ್ರಾವಗಳೆಂಬ ಸಂಗಾತಿಗಳನ್ನೂ… ಓಟದ ನಡುವೆ ಪತ್ರಿಕೆ ಮೇಲೆ ಒಮ್ಮೆ ಕಣ್ಣಾಡಿಸುತ್ತಾಳೆ. ನೋಟು, ಜಿ ಎಸ್ ಟಿ, ರಾಜಕೀಯ, ಸಾಹಿತ್ಯ ಎಲ್ಲವನ್ನೂ ಒಮ್ಮೆ ನಿರುಕಿಸುತ್ತಾಳೆ.. ತನ್ನ ನಿಲುವನ್ನು ತಾ ಕಾಪಿಟ್ಟುಕೊಂಡು. ಕೂಸು,ಬಾಲೆ,ಯುವತಿ,ವೃದ್ಧೆ ಭೇದವಿಲ್ಲದೆ ನಡೆಯುವ ಅನಾಚಾರವನ್ನು ಮೆಟ್ಟುತ್ತ ಸಾಗುವ ಸಂಕಲ್ಪವನ್ನು ದೃಢಗೊಳಿಸಿಕೊಂಡು ಹೊಸ ದಾರಿಗಳನ್ನು ಅರಸುತ್ತಾಳೆ. ತನ್ನ ಅಸ್ಮಿತೆ, ಹಕ್ಕುಗಳ ಮರು ಪ್ರತಿಷ್ಠಾಪನೆಗಾಗಿ ದಿನವೊಂದರ ಆಚರಣೆ!! ಅಲ್ಲಿಯೂ ನಸು ನಕ್ಕು ಸಂಭ್ರಮಿಸುತ್ತಾಳೆ. ಎಲ್ಲ ಇಲ್ಲಗಳ ನಡುವೆಯೂ ಈ ಜಗತ್ತಿನ್ನೂ ಸುಂದರ ತಾಣವಾಗಿ ಉಳಿದಿರುವುದು ಹೇಗೆಂದು ಅಚ್ಚರಿ ಪಡುವವರಿಗೆ ಉತ್ತರ ಸಿಕ್ಕಿರಬಹುದು… *******
ನಮ್ಮೊಳಗಿನ ಬೆಳಕು ಬಿದಲೋಟಿರಂಗನಾಥ್ ಹೆಣ್ಣೆಂದರೇ ನಮ್ಮೊಳಗಿನ ಬೆಳಕು ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. ಆಗ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಾಂತಾಗುತ್ತದೆ.ಹೆಣ್ಣು ಕೇವಲ ಕಾಮದ ವಸ್ತುವಲ್ಲ.ಅವಳನ್ನು ಕಂಡರೆ ಪೂಜ್ಯಭಾವನೆ ಬರುವಂತಾಗಬೇಕು. ಕಾಲ ಬದಲಾಗಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ.ಪೈಲೆಟ್ ,ಪೊಲೀಸ್,ಡ್ರೈವರ್ ಕಂಡಕ್ಟರ್ ,ನ್ಯಾಯವಾದಿ,ನ್ಯಾಯಾಧೀಶರು ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಗಂಡಿಗೆ ಸಮಾನವಾಗಿ ಸ್ಪರ್ಧೆಗಿಳಿದಿದ್ದಾಳೆ.ಎಂಬುದು ಸಂತೋಷದಾಯಕ ವಿಷಯ. ಒಂದು ವಿಷಯ ಪ್ರಸ್ಥಾಪಿಸಲು ಇಷ್ಟಪಡುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಹೆಂಡತಿಯರನ್ನು ನಿಲ್ಲಿಸುವ ಮೂಲಕ ಹುದ್ದೆಯ ಸಕಲ ಜವಬ್ಧಾರಿಯನ್ನು ಪುರುಷಮಾಡುತ್ತಿರುವುದು ನೋವಿನ ಸಂಗತಿ.ಅದರಲ್ಲು ಗ್ರಹಚಾರ ತಪ್ಪಿ ಪಂಚಾಯಿತಿ ಅಧ್ಯಕ್ಷೆಯಾದರೇ ಮುಗಿದೇ ಹೋಯಿತು.ಆ ಚೇರಿನ ಮೇಲೆ ಗಂಡನ ದರ್ಬಾರು.ಯಾಕೆ ಅವಳ ಕೆಲಸ ಅವಳಿಗೆ ಮಾಡಲು ಬಿಡಲ್ಲ ಎಂಬುದು ವರ್ತಮಾನದ ದುಸ್ತಿತಿ ಎಂದು ನಾನದರೂ ಭಾವಿಸುತ್ತೇನೆ. ತನ್ನ ಅಧಿಕಾರದ ಹಕ್ಕನ್ನು ಸುಖವನ್ನು ಅವಳೂ ಅನುಭವಿಸಲಿ ಬಿಡಿ.ಅಲ್ಲ ಒಂದು ಚೆಕ್ ಗೆ ಸಹಿ ಹಾಕಲು ತನ್ನ ಗಂಡನ ಅನುಮತಿಬೇಕು ಎಂದ ಮೇಲೆ.ಅಧಿಕಾರ ಯಾತಕ್ಕೆ ಅವಳಿಗೆ ಎಂಬ ಪ್ರಶೆ ಮೂಡುತ್ತದೆ.ಈ ತರಹ ತನ್ನ ಕೈ ಗೊಂಬೆಯಾಗಿ ಮಾಡಿಕೊಳ್ಳುವ ಮನಸ್ತಿತಿಗಳು ಬದಲಾಗಬೇಕು.ಸಮಾನತೆಯಿಂದ ಕಾಣುವ ಮುಖೇನ ನವ ಸಮಾಜ ನಿರ್ಮಾಣದತ್ತ ಸಮಾಜ ಸಾಗಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇನ್ನು ಮಕ್ಕಳು ವಿಷಯಕ್ಕೆ ಬಂದರೆ ಗಂಡಾದರೇನು ಹೆಣ್ಣಾದರೇನು?ಎರಡೂ ಒಂದೇ ಅಲ್ಲವೆ.?ಹೆಣ್ಣಿಲ್ಲದೆ ಗಂಡು ಮಗುವಿನ ಜನನ ಸಾಧ್ಯವೆ ? ನೋಡುವ ದೃಷ್ಠಿಕೋನ ಬದಲಾಗಬೇಕು.ಆಗಂತ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕು ಕೊಟ್ಟ ಅಧಿಕಾರವನ್ನು ಸ್ವತಂತ್ರವನ್ನು ಸುಮ್ನೆ ದೂರುವ ಮೂಲಕ ಹಾಳು ಮಾಡಿಕೊಳ್ಳಬಾರದುಮಕ್ಕಳಿಗೆಶಿಕ್ಷಣ ಕೊಡಿಸುವಾಗಲು ಅಷ್ಟೆ ,ಈಗಲೂ ಹಳ್ಳಿಗಳಲ್ಲಿ “ಗಂಡು ಮಕ್ಕಳಲ್ಲವೆ ಓದಿಸು ಎಷ್ಟಾದರೂ ಓದಲಿ”ಎನ್ನುತ್ತ .ಹೆಣ್ಣೋ ಬಿಡಿಸಿ ಮದುವೆ ಮಾಡುವ ದುರಂತಗಳು ನಮ್ಕಾಮ ಕಣ್ಣುಮುಂದೆ ಇವೆ. ಮಡ್ಲಲ್ಲಿ ಬೆಂಕಿಕಟ್ಕಂಡು ಎಷ್ಟಂತ ತಿರುಗುತ್ತಿ” .ಎಂಬ ಉಡಾಫೆಯ ಮನೋಭಾವ ಬದಲಾಗುವ ಮೂಲಕ ಅವಳಿಗೆ ಗೌರವ ಕೊಡಬೇಕು ಆಗ ಭೂಮಿ ಮೇಲೆ ಹುಟ್ಟಿದ್ದಕ್ಕೂ ಸಾರ್ಥಕ್ಯ. ಹೆಣ್ಣಿಗೂ ಮನಸ್ಸಿದೆ ಅಂತಃಕರಣವಿದೆ ಅವಳೂ ಮನುಷ್ಯಳು ಎಂಬ ಮನೋಭಾವ ಬಂದಾಗ ಮಾತ್ರ ಬದುಕು ಹಸನಾಗುವುದು. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಹಪಾ ಹಪಿ ಬದಲಾಗಬೇಕು.ಹೆಣ್ಣಿಲ್ಲದ ಮನೆ ,ಬದುಕಿನಲ್ಲಿ ಬೆಳಕು ಕಂಡಿದ್ದು ಇಲ್ಲವೇ ಇಲ್ಲ.ಅವಳನ್ನು ಗೌರವಿಸುವ ಮೂಲಕ ಮಹಿಳಾ ದಿನಾಚಾರಣೆಗೆ ಇಂಬು ನಿಡೋಣ. ************************************
ಮಹಿಳಾ ಸಾಹಿತ್ಯ ಅಂದು ಇಂದು ಸುಜಾತಾ ರವೀಶ್ ಮಹಿಳಾ ಸಾಹಿತ್ಯ ಅಂದು ಇಂದು ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ. ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು ೧. ವೇದಕಾಲದಲ್ಲಿ ಮಹಿಳಾ ಸಾಹಿತ್ಯ ೨. ಜಾನಪದ ಸಾಹಿತ್ಯ ೩. ರಾಜಾಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ೪. ಜೈನ ಸಾಹಿತ್ಯ ೫. ವಚನ ಸಾಹಿತ್ಯ ೬. ದಾಸ ಸಾಹಿತ್ಯ ೭. ಹತ್ತೊಂಬತ್ತನೇ ಶತಮಾನದ ಸ್ತ್ರೀ ಸಾಹಿತ್ಯ ೮. ದಲಿತ ಬಂಡಾಯ ಸಾಹಿತ್ಯ ೯. ಇಪ್ಪತ್ತನೇ ಶತಮಾನದ ಮಹಿಳಾ ಸಾಹಿತ್ಯ ೧೦. ಪ್ರಸಕ್ತ ಅಂತರ್ಜಾಲ ಸಾಹಿತ್ಯ ವೇದ ಕಾಲದಲ್ಲಿ ಮಹಿಳಾ ಸಾಹಿತ್ಯ ಮಹಿಳೆಯರಿಗೆ ಉಪನಯನದ ಅರ್ಹತೆಯೂ ಇದ್ದಂತಹ ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಅವಕಾಶಗಳಿದ್ದವೆಂದು ತಿಳಿದುಬರುತ್ತದೆ. ಗಾರ್ಗಿ ಮೈತ್ರೇಯಿಯರಂತಹ ಪ್ರಕಾಂಡ ಪಂಡಿತರು ಸ್ವತಃ ಯಾಜ್ಞವಲ್ಕರಂತಹ ಜ್ಞಾನಿಗಳ ಮೆಚ್ಚುಗೆ ಗಳಿಸಿದ್ದರು. ಕನ್ನಡ ಸಾಹಿತ್ಯಕ್ಕೆ ನೇರ ಸಂಬಂಧವಿರದಿದ್ದರೂ ಈ ಸಂಸ್ಕೃತ ಮಹಿಳಾ ವಾಗ್ಮಿಗಳೇ ಇಂದಿನ ಸ್ತ್ರೀಯರಿಗೆ ಮೊದಲ ಪಂಕ್ತಿ ಹಾಕಿ ಕೊಟ್ಟವರೆಂದು ನೆನಪಿನಲ್ಲಿಡ ತಕ್ಕಂತಹ ಅಂಶ. ಜಾನಪದ ಸಾಹಿತ್ಯ ಕನ್ನಡ ಜಾನಪದ ಸಾಹಿತ್ಯವಂತೂ ಸ್ತ್ರೀಯರದ್ದೇ ಏಕಸ್ವಾಮ್ಯತೆ ಅನ್ನಬಹುದು. ಬೀಸುವ ಕಲ್ಲಿನ ಪದಗಳು, ಸಂಪ್ರದಾಯದ ಹಾಡುಗಳು, ಲಾಲಿ ಜೋಗುಳದ ಹಾಡುಗಳು ,ಆರತಿ ಹಾಡುಗಳು, ವ್ರತಗಳ ಹಾಡುಗಳು ಒಂದೇ ಎರಡೇ? ಈ ವಿಫುಲ ಜನಪದ ಸಾಹಿತ್ಯ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಂತಹವು ಸಂಗ್ರಹಿತವಾಗದೆ ಅಚ್ಚಾಗದೆ ಕಾಲನ ದಾಳಿಯಲ್ಲಿ ಎಷ್ಟೋ ನಾಶವಾಗಿದೆ .ಲೇಖಕಿಯರ ಹೆಸರಿರದ ಸಮೃದ್ಧ ಜಾನಪದ ಸಂಪತ್ತು ನಮ್ಮದು. ಯಶೋದಾ ಬಾಯಿ ಅವರ ಸೀತಾ ಪರಿತ್ಯಾಗ ರುಕ್ಮಿಣಿ ಕಲ್ಯಾಣ ಚಂದ್ರಾವಳಿ ,ಭಾಗೀರಥಮ್ಮ ಅವರ ಜನಪದ ಛಂದಸ್ಸಿನ ಕೀರ್ತನ ರಾಮಾಯಣ ಇದೇ ಮುಂತಾದವು ಸದ್ಯಕ್ಕೆ ಲಭ್ಯ ಸಂಗ್ರಹಿತ ಕೃತಿಗಳಲ್ಲಿ ಮುಖ್ಯವಾದವು. ಜಾನಪದ ಕಾವ್ಯದಲ್ಲಿ ಗಂಡಿನ ದಬ್ಬಾಳಿಕೆಯನ್ನು ಬರೀ ಸಹಿಸಿಕೊಳ್ಳದೆ ಅದರ ವಿರುದ್ಧ ದನಿ ಎತ್ತಿರುವುದು ಸ್ತ್ರೀ ಜನಮಾನಸದಲ್ಲಿ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಆಕ್ರೋಶ ಸಣ್ಣಗೆ ಹೊಗೆಯಾಡುವುದು ಗಮನಿಸಬಹುದು. ರಾಜಾ ಆಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ಶಾತವಾಹನರ ಕಾಲದಲ್ಲಿ ಇಮ್ಮಡಿ ಪುಲಿಕೇಶಿಯ ರಾಣಿ ವಿಜಯ ಮಹಾದೇವಿ (ವಿಜ್ಜಿಕೆ) ಕೌಮುದಿ ಮಹೋತ್ಸವ ಎಂಬ ಕಾವ್ಯವನ್ನು ರಚಿಸಿದ್ದಳು .ವಿಜಯನಗರದ ಸುವರ್ಣ ಯುಗದಲ್ಲಿ ಕೃಷ್ಣದೇವರಾಯರ ಪಟ್ಟದರಸಿ ತಿರುಮಲಾಂಬ ತನ್ನ ಪತಿಯ ಎರಡನೆಯ ಮದುವೆಯ ವಿಷಯವನ್ನು ಆಧರಿಸಿ ವರದಾಂಬಿಕಾ ಪರಿಣಯ ಎಂಬ ಕೃತಿಯನ್ನು ರಚಿಸಿದ್ದು ಗಂಗಾದೇವಿ ಎಂಬ ಕವಿಯತ್ರಿಯಿಂದ ವೀರ ಕಂಪಣರಾಯ ಚರಿತ ಎಂಬ ಗ್ರಂಥ ರಚಿಸಲ್ಪಟ್ಟಿತು. ಮೈಸೂರು ಅರಸರ ಕಾಲದಲ್ಲಿ ದೊಡ್ಡ ಕೃಷ್ಣರಾಜ ಒಡೆಯರ ರಾಣಿ ಚೆಲುವಾಂಬಯವರು ನಂದಿ ಕಲ್ಯಾಣ ಎಂಬ ಗ್ರಂಥವನ್ನು, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ,ಶೃಂಗಾರಮ್ಮ ಪದ್ಮಿನಿ ಕಲ್ಯಾಣವನ್ನು ರಚಿಸಿದರು. ಈ ಕಾಲದ ರಾಜಾಶ್ರಯದ ವನಿತೆಯರು ಧಾರ್ಮಿಕ ಆಧ್ಯಾತ್ಮದ ಬಗ್ಗೆ ಬರೆದರೆ ಹೊರತು ವ್ಯವಸ್ಥೆಗೆ ವಿರೋಧವಾಗಿಲ್ಲ. ಪುರುಷನ ಜೊತೆ ಸಮಾನತೆಗೆ ಧ್ವನಿ ಗೂಡಿಸಿಲ್ಲ. ಏನಿದ್ದರೂ ಅವರದ್ದು ತಣ್ಣಗಿನ ಮೆಲುದನಿಯ ಪ್ರತಿರೋಧ . ಜೈನ ಸಾಹಿತ್ಯ ಜೈನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಸ್ತ್ರೀ ಸಮಾನತೆ ಹಾಗೂ ಪ್ರಾಮುಖ್ಯತೆ ಎತ್ತಿ ಕಾಣುವ ಅಂಶವಾದರೂ ಜೈನ ಕವಿಯತ್ರಿಯರು ಬೆರಳೆಣಿಕೆಯಷ್ಟು ಮಾತ್ರ. ಅತ್ತಿಮಬ್ಬೆ ಕಾವ್ಯ ರಚನೆಗೆ ಸಹಕಾರ ಕೊಟ್ಟು ದಾನ ಚಿಂತಾಮಣಿ ಎನಿಸಿದಳು. ಅದೇ ಕಾಲದ ಕಂತಿ ಕನ್ನಡದ ಪ್ರಥಮ ಕವಿಯತ್ರಿ ಅಭಿನವ ವಾಗ್ದೇವಿ ಆದಿಕವೀಶ್ವರಿ ಎಂದೆಲ್ಲ ಬಿರುದಾಂಕಿತಳಾಗಿ ಕಂತಿ ಹಂಪನ ಸಮಸ್ಯೆಗಳು ಎಂಬ ಕೃತಿ ರಚಿಸಿದ್ದಾಳೆ. ಈ ಕಾಲದ ಕವಿಯತ್ರಿಯರು ಅಷ್ಟೇ ವ್ಯವಸ್ಥೆಗೆ ಹೊಂದಿ ನಡೆದರೆ ವಿನಃ ವಿರುದ್ಧ ಧ್ವನಿ ಎತ್ತಲಿಲ್ಲ ಎನ್ನುವುದು ಪರಿಗಣಿಸಬೇಕಾದ ಅಂಶ. ವಚನ ಸಾಹಿತ್ಯ (೧೨ ನೇ ಶತಮಾನ) ವಚನ ಸಾಹಿತ್ಯದ ಯುಗವನ್ನು ಕನ್ನಡ ಮಹಿಳಾ ಸಾಹಿತ್ಯದ ಸುವರ್ಣಯುಗ ಎನ್ನಬಹುದು. ಸಾಮಾಜಿಕ ಅನಿಷ್ಟ ವ್ಯವಸ್ಥೆಗಳ ವಿರುದ್ಧ ಸ್ತ್ರೀ ಬಂಡಾಯದ ಕಿಡಿ ಕೆದರಿದ್ದು ಆಗಲೇ .ಅಕ್ಕಮಹಾದೇವಿ ಅಕ್ಕಮ್ಮ ರೆಮ್ಮವ್ವೆ ಗಂಗಮ್ಮ ಲಕ್ಷಮ್ಮ ಇವುಗಳನ್ನು ಸ್ತ್ರೀ ಸಮಾನತೆಯ ಕೂಗಿನ ಪ್ರವಾದಿಗಳೆಂದರೆ ತಪ್ಪಾಗಲಾರದು .ಇನ್ನು ದಲಿತ ಕವಿಯತ್ರಿಯರು ಬಂಡಾಯದ ಕಹಳೆ ಊದಿದವರಲ್ಲಿ ಪ್ರಮುಖರೆಂದರೆ ಸೂಳೆ ಸಂಕವ್ವೆ ಹೊಲತಿ ಗುಡ್ಡವ್ವೆ, ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ ,ಕುಂಬಾರ ಕೇತಲಾದೇವಿ ಲಕ್ಕವ್ವ ಇವರುಗಳು ಮುಖ್ಯರು . ವಚನ ಸಾಹಿತ್ಯ ಕಾಲ ಸ್ತ್ರೀ ಶೋಷಣೆಯತ್ತ ಬರಿ ಬರವಣಿಗೆಯಲ್ಲಿ ಮಾತ್ರವಲ್ಲದೆ ಆಚರಣೆಯಲ್ಲೂ ಧ್ವನಿ ಎತ್ತಿ ಬದಲಾವಣೆಗೆ ನಾಂದಿ ಹಾಡಿತ್ತು . ಒಂದು ಸಾಮಾಜಿಕ ಕ್ರಾಂತಿಯತ್ತ ನಡೆದಿದ್ದ ವಚನ ಸಾಹಿತ್ಯದ ಹರಿವು ಕಲ್ಯಾಣ ಕ್ರಾಂತಿಯ ದಮನದೊಂದಿಗೆ ಅವಸಾನ ಹೊಂದಿ ಸ್ತ್ರೀವಾದ ಮತ್ತೆ ಮಾಯವಾದದ್ದು ಒಂದು ಸಾಮಾಜಿಕ ದುರಂತವಷ್ಟೇ ಅಲ್ಲದೇ ಮಹಿಳಾ ಸಾಹಿತ್ಯಕ್ಕೆ ತುಂಬಲಾರದ ನಷ್ಟವೆಂದರೆ ಅತಿಶಯೋಕ್ತಿಯಾಗಲಾರದು. ದಾಸ ಸಾಹಿತ್ಯ ದಾಸ ಸಾಹಿತ್ಯವೆಂದರೆ ಸಾಮಾನ್ಯ ಪುರುಷರಿಂದ ರಚನೆಯಾದ್ದದು ಎಂದುಕೊಳ್ಳುತ್ತೇವೆ ಆದರೆ ಸ್ತ್ರೀಯರ ಕೊಡುಗೆಯೂ ದಾಸ ಸಾಹಿತ್ಯಕ್ಕೆ ಸಂದಿದೆ. ಇಲ್ಲಿಯೂ ಸಹ ಸಂಗ್ರಹಿತವಾಗದೆ ಹೋದದ್ದು ಬಹಳಷ್ಟಿರಬಹುದು.. ಇವರಲ್ಲಿ ಪ್ರಮುಖರೆಂದರೆ ಚಿತ್ರದುರ್ಗದ ಅಂಬಾಬಾಯಿ ಗೋಪಾಲಕೃಷ್ಣ ವಿಠಲ ಅಂಕಿತ ನಾಮದಲ್ಲಿ ದ್ವಿಪದಿ ಛಂದಸ್ಸಿನಲ್ಲಿ ರಾಮಾಯಣ ರಚಿಸಿದ್ದಾರೆ. ಗಂಗಲಿಯ ಅವ್ವ , ಹರಪನಹಳ್ಳಿ ಭೀಮವ್ವ ನಾಡಿಗರ ಶಾಂತಾಬಾಯಿ ತುಳಸಾಬಾಯಿ ಹೆಳವನಕಟ್ಟೆ ಗಿರಿಯಮ್ಮ (ಇವರ ರಚನೆಗಳು ಚಂದ್ರಹಾಸ ಕತೆ ಸೀತಾ ಕಲ್ಯಾಣ ಉದ್ದಾಲಕ ಕಥೆ ಬ್ರಹ್ಮ ಕೊರವಂಜಿ ಮುಂತಾದ ಹಾಡು ಹಬ್ಬಗಳು) ವಿಧವೆಯರೇ ಹೆಚ್ಚಾಗಿ ಈ ದಾಸ ಸಾಹಿತ್ಯ ರಚನೆಗೆ ಮುಂದಾಗಿದ್ದು ಬರೀ ಆಧ್ಯಾತ್ಮಿಕದ ಕಡೆಗೆ ಒಲವು ಹೆಚ್ಚಾಗಿ ಕಂಡು ಬರುತ್ತದೆ. ೧೯ನೇ ಶತಮಾನದ ಸ್ತ್ರೀ ಸಾಹಿತ್ಯ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯಾನಂತರದ ಕಾಲಮಾನ ಘಟ್ಟದಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೊಸ ರೂಪು ರೇಷೆಗಳು ಮೂಡಿ ಸಾಮಾಜಿಕವಾಗಿ ಸಾಹಿತ್ಯ ರಚನೆಯು ಆರಂಭವಾಯಿತು. ಪತ್ರಿಕೆಗಳಲ್ಲಿ ಸ್ತ್ರೀಯರಿಂದ ಲೇಖನ ಪ್ರಬಂಧ ಕಥೆಗಳು ಪ್ರಕಟವಾಗಿರುವುದು ಮುಖ್ಯ ಅಂಶ. ಶಾಂತಾಬಾಯಿ ನೀಲಗಾರ ಅವರ ಉತ್ತಮ ಗೃಹಿಣಿ ಕನ್ನಡದ ಮೊದಲ ಮಹಿಳಾ ಕಾದಂಬರಿ ಎಂದು ಗುರುತಿಸಲಾಗಿದೆ. ತಿರುಮಲೆ ರಾಜಮ್ಮ ತಿರುಮಲಾಂಬಾ ಬೆಳಗೆರೆ ಜಾನಕಮ್ಮ ಕೊಡಗಿನ ಗೌರಮ್ಮ ಆರ್ ಕಲ್ಯಾಣಮ್ಮ ಜಯದೇವಿ ತಾಯಿ ಲಿಗಾಡೆ ಮುಂತಾದವರು ಈ ಅವಧಿಯ ಪ್ರಮುಖ ಲೇಖಕಿಯರು. ಪ್ರಚಲಿತ ಸ್ತ್ರೀ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳು ಮುಂತಾದವುಗಳ ವಿರುದ್ಧ ದನಿ ಎತ್ತಿರುವುದು ಈ ಕಾಲದ ಲೇಖಕಿಯರ ವೈಶಿಷ್ಟ್ಯ . ದಲಿತ ಬಂಡಾಯ ಸಾಹಿತ್ಯ ನಂತರದ ದಿನಗಳಲ್ಲಿ ಅಸ್ತಿತ್ವ ಕಂಡುಕೊಂಡ ದಲಿತ ಹಾಗೂ ಬಂಡಾಯ ಸಾಹಿತ್ಯದಲ್ಲಿ ಪುರುಷರಂತೆ ಸ್ತ್ರೀಯರ ಕೊಡುಗೆಯೂ ಅಪಾರ ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ್, ವೈದೇಹಿ ,ಅನುಪಮ ನಿರಂಜನ್ ಸಾರಾ ಅಬೂಬಕ್ಕರ್ ಇನ್ನೂ ಮುಂತಾದ ಅನೇಕ ಲೇಖಕಿಯರು ಈ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಕೆಲವರು . ಅಸ್ಪೃಶ್ಯತೆ ಸ್ತ್ರೀ ಶೋಷಣೆ ಬೆತ್ತಲೆ ಸೇವೆ ಮೊದಲಾದ ಸ್ತ್ರೀ ಸಂಬಂಧಿ ಹಾಗೂ ದಲಿತ ಸಂಬಂಧಿ ಸಮಸ್ಯೆಗಳಂತ ಜ್ವಲಂತ ಸಮಸ್ಯೆಗಳ ವಿರುದ್ಧ ಮಾತನಾಡಿ ಸುಧಾರಣೆಗೆ ಮುಂದಾದದ್ದು ವಿಶೇಷ . ೨೦ನೇ ಶತಮಾನದ ಮಹಿಳಾ ಸಾಹಿತ್ಯ ಇದು ಸಹ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇರು ಕಾಲವೆನ್ನಬಹುದು .ಸಣ್ಣಕಥೆ ಕಾದಂಬರಿಗಳ ಹೊಳೆಯೇ ಹರಿದು ಹೊಸ ಓದುಗರನ್ನು ಓದಿನ ಅಲೆಯನ್ನು ಸೃಷ್ಟಿಸಿತ್ತು. ತ್ರಿವೇಣಿ, ಉಷಾ ನವರತ್ನರಾಂ, ಎಂಕೆ ಇಂದಿರಾ, ಸಾಯಿಸುತೆ ,ಎಚ್ ಜಿ ರಾಧಾದೇವಿ ಅವರ ಕಾದಂಬರಿಗಳು ಹೊಸ ಸಂಚಲನವನ್ನೇ ಸೃಷ್ಟಿಸಿ ಕನ್ನಡ ಪ್ರೀತಿಗೆ ಕಾರಣವಾದವು .ಪ್ರತಿಭಾ ನಂದಕುಮಾರ್ ಹೇಮಾ ಪಟ್ಟಣಶೆಟ್ಟಿ ಮಾಲತಿ ಸವಿತಾ ನಾಗಭೂಷಣ ಮುಕ್ತಾಯಕ್ಕ ಸುನಂದಮ್ಮ ಮುಂತಾದವರು ಈ ಕಾಲದ ಹೆಸರಿಸಬೇಕಾದ ಲೇಖಕಿಯರ ಪಟ್ಟಿಗೆ ಸೇರುತ್ತಾರೆ . ಸಾಮಾಜಿಕವಾಗಿ ಆಗುತ್ತಿದ್ದ ಬದಲಾವಣೆಗಳು ಹಾಗೂ ಶೋಷಣೆಯು ಇನ್ನೊಂದು ರೂಪದಲ್ಲಿ ಮುಂದುವರಿದ ದ್ದನ್ನು ಎತ್ತಿ ಹೇಳುವ ಪ್ರಯತ್ನ ಈ ಕಾಲದಲ್ಲಾಯಿತು. ಪ್ರಸಕ್ತ ಅಂತರ್ಜಾಲ ಸಾಹಿತ್ಯ ಇಂದಿನ ಯುಗದ ಮುಖ್ಯ ಆಕರ್ಷಣೆ ಸಾಮಾಜಿಕ ಜಾಲ ತಾಣಗಳು. ಇವು ಬರಹಗಾರರ ಒಂದು ದೊಡ್ಡ ಪಡೆಯನ್ನೆ ಕಟ್ಟಿದೆ ಬೆಳೆಸುತ್ತಿದೆ .ಒಂದು ಸೀಮಿತ ಓದುಗರ ವರ್ಗವೇ ಹುಟ್ಟಿದೆ .ವಾಟ್ಸಾಪ್ ಫೇಸ್ ಬುಕ್ ನಲ್ಲಿನ ಸಾಹಿತ್ಯಿಕ ಗುಂಪುಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಸೇವೆಯನ್ನು ಸಲ್ಲಿಸುತ್ತಿದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುಗರ ಜೊತೆ ಸಂಭವಿಸಬಹುದಾದಂಥ ಚಿನ್ನದಂತಹ ಅವಕಾಶ ಕೊಡುವ ಈ ಸಾಹಿತ್ಯ ಪ್ರವರ್ಗ ಪ್ರಸಕ್ತ ಜನಪ್ರಿಯವಾಗಿರುವ ಮಾಧ್ಯಮ ಅದರದೇ ಆದಂತಹ ಕೆಲವು ಅಡೆತಡೆ ಇತಿಮಿತಿಗಳಿದ್ದರೂ ವೃತ್ತಿ ಗೃಹಕೃತ್ಯಗಳ ನಡುವೆ ಕಿಂಚಿತ್ತಾದರೂ ಬರೆಯುವ ಓದುವ ಹವ್ಯಾಸಕ್ಕೆ ನೀರೆರೆಯುತ್ತಿವೆ ಎಂದರೆ ತಪ್ಪಲ್ಲ . ೧೯೬೯ರಲ್ಲಿ ಸ್ಥಾಪಿತವಾದ ಶ್ರೀಮತಿ ಸರೋಜಿನಿ ಮಹಿಷಿ ಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ಮಾಡಿ ಸಮ್ಮೇಳನ ನಡೆಸಿದ ಕರ್ನಾಟಕ ಲೇಖಕಿಯರ ಸಂಘದ ಕಾಣಿಕೆಯೂ ಈ ನಿಟ್ಟಿನಲ್ಲಿ ಸ್ಮರಣಾರ್ಹ. ಶ್ರೀಮತಿ ಚಿ .ನಾ ಮಂಗಳ ಅವರ ಕಾಲೇಜಿನಲ್ಲಿ ೧೯೮೬ ರಿಂದ ಮಹಿಳಾ ಅಧ್ಯಯನ ಎಂಬ ಕೋರ್ಸ್ ಪ್ರಾರಂಭ ಮಾಡಿದ್ದು ಮಹಿಳಾ ಸಾಹಿತ್ಯದಲ್ಲಿನ ಮೈಲಿಗಲ್ಲು. ಮಹಿಳೆಯರ ಬದುಕಿನ ವಿವಿಧ ಬರಹ ಕುರಿತು ಮಹಿಳೆಯರೇ ರಚಿಸಿರುವ ಇಪ್ಪತ್ತ್ಮೂರು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ೧೯೭೫ರಲ್ಲಿ ಪ್ರಕಟವಾದವು. ಇದು ಸಹ ಮಹಿಳೆಯರಲ್ಲಿ ಬರೆಯುವ ಆಸಕ್ತಿಗೆ ನೀರೆರೆದವು . ಇಷ್ಟೆಲ್ಲಾ ಆದರೂ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀ ತನ್ನ ಅಸ್ತಿತ್ವದ ಛಾಪನ್ನು ಮೂಡಿಸಿ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾಳೆಯೇ ಎಂದರೆ ಇಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ .ಗಟ್ಟಿ ಅಧ್ಯಯನ ನಡೆಸಿ ಮೇರು ಕೃತಿಗಳನ್ನು ರಚಿಸುವಲ್ಲಿ ಮಹಿಳೆಯರು ಮುಂದಾಗಿಲ್ಲ. ಅದಕ್ಕೆ ಅವರದೇ ಆದ ಇತಿಮಿತಿಗಳ ರಬಹುದು .ಇರಲಿ ಅದು ಬೇರೆಯ ವಿಚಾರ. ಇಂದಿನ ಕಾಲದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶವಿರುವ ಸಂದರ್ಭದಲ್ಲಿ ಸಮಾನತೆಗೆ ಹೊಡೆದಾಡುವ ಬೇಡುವ ಸಂದರ್ಭಗಳಿಲ್ಲ ಆದರೂ ಅಭೀಷ್ಟ ರೀತಿಯಲ್ಲಿ ಮಹಿಳಾ ಸಾಹಿತಿಗಳು ಮುಂದೆ ಬಂದಿಲ್ಲ ಬೇರೆಲ್ಲ ರಂಗದಲ್ಲೂ ಬೆಳವಣಿಗೆ ಹೊಂದಿರುವ ಸ್ತ್ರೀ ತನ್ನ ಅನುಭವ ಸಾರವನ್ನು ಬರವಣಿಗೆಯಲ್ಲಿ ಹಿಡಿದಿಡುವ ಸಮರ್ಥ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಅಲ್ಲೊಂದು ಇಲ್ಲೊಂದು ಸುಧಾ ಮೂರ್ತಿ ಅವರಂತಹ ಉದಾಹರಣೆ ಹೊರತುಪಡಿಸಿ. ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳಾ ಸಾಹಿತ್ಯ ಪ್ರಗತಿಯತ್ತ ಸಾಗುತ್ತಿದ್ದರೂ ಸಂಖ್ಯಾತ್ಮಕವಾಗಿ ವೃದ್ಧಿ ಹೊಂದಿದ್ದರೂ ಗುಣಾತ್ಮಕ ಹಾಗೂ ವಿಶೇಷ ಹರಿವುಗಳ ಅಭಿವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕಿದೆ .ಭಿಡೆ ಬಿಟ್ಟು ಬರೆಯುವ ಮನೋಭಾವ ಹೆಚ್ಚಿಸಿಕೊಳ್ಳಬೇಕಾಗಿದೆ. ಸಾಮಾಜಿಕವಾಗಿ ಹೊಂದಿದಂತಹ ಸಮಾನತೆ ಗೆಲುವು ಅವಕಾಶಗಳನ್ನು ಸಾಹಿತ್ಯಿಕವಾಗಿಯೂ ಪ್ರಾತಿನಿಧಿ ಸಬೇಕಾಗಿದೆ. ಕನ್ನಡಕ್ಕೆ ಬಂದ ಎಂಟೂ ಜ್ಞಾನಪೀಠ ಪ್ರಶಸ್ತಿಗಳೂ ಮಹನೀಯರಿಗೇ. ಮುಂದಾದರೂ ಕನ್ನಡ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಲ್ಲಾ ಬರಲಿ ಎಂದು ಆಶಿಸೋಣ ಅಲ್ಲವೇ ? *******
ವ್ಯಾಖ್ಯಾನ ಬೇಕೇ? ಪದ್ಮಜಾ ಜೋಯಿಸ್ ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಹೆಣ್ಣಿಗೊಂದು ವ್ಯಾಖ್ಯಾನ ಬೇಕಾಗಿಲ್ಲ, ಹೆಣ್ಣೆಂದರೆ ಹೆಣ್ಣಷ್ಟೇ.. ಕೋಪ, ಅಸೂಯೆ, ಜಗಳ ಎಲ್ಲದರ ಹಿಂದೆಯೂ ಆಕೆಗಿರುವುದು ತನ್ನವರಿಗಾಗಿ ತಾನೆರೆವ ಮತ್ತು ತನಗಾಗಿ ತಾನು ಬಯಸುವ ನೈಜ ಪ್ರೀತಿ ಅಷ್ಟೇ… ಹೆಣ್ಣಾಗಿ ಹುಟ್ಟಿದ್ದೇ ನಮ್ಮ ಹಿರಿಮೆ ಇದೇ ನಮ್ಮ ಹೆಮ್ಮೆ… ವಿಶ್ವ ಮಹಿಳಾ ದಿನಾಚರಣೆಯ ಶುಭಕಾಮನೆಗಳು.. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ .. ಒಂದಿಷ್ಟು ಅಂತರಂಗದ ಆತ್ಮಾವಲೋಕನ… ಇನ್ನೊಬ್ಬರನ್ನು ಮುಕ್ತರಾಗಿಸಲು ಹಂಬಲಿಸುವ ನಾವೆಷ್ಟು ಮುಕ್ತರು ??? ಹೆಜ್ಜೆಜ್ಜೆಗೂ ಇದಿರಾಗುವ ಹಿತಶತೃಗಳು .. ಪ್ರತಿಷ್ಠೆಗಾಗಿ ಹೆಂಗಸರ ಸ್ವಂತಿಕೆ, ನೈತಿಕ ಸ್ಥೈರ್ಯ, ಆತ್ಮಾಭಿಮಾನ , ಪುಡಿರೌಡಿಗಳಿಗೆ ಬಲಿಯಿಟ್ಟು ದರ್ಪ ದೌರ್ಜನ್ಯ ಮೆರೆಯುವವರ ನಡುವಲ್ಲಿ ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ಬದುಕುವ ನಾವೆಷ್ಟು ಸ್ವತಂತ್ರರು ??? ಹೆಣ್ಣಿಗೆ ಹೆಣ್ಣೇ ಶತೃ ಇದೂ ಬಹುಭಾಗ ಯಾಕೆ ನಿಜವಾಗತ್ತೆ… ಇವರುಗಳಿಗಿಂತ ಪ್ರಾಣಿಗಳು ಮೇಲಲ್ಲವೇ ?? “ಶ್ರೀಲಕ್ಷ್ಮೀ ಅವತಾರ ಎಂದೇ ಕರೆಸಿಕೊಳ್ಳುವ ತನ್ನ ಜನ್ಮ ರಹಸ್ಯವೇ ಯಾರರರಿವಿಗೂ ಬಾರದ಼ಂತೆ ಕಾಪಿಟ್ಟುಕೊಂಡು ಬೆಳೆದ ಮನೆಯಲ್ಲೂ ಪರಕೀಯಳಾಗಿ ಕಟ್ಟಿಕೊಂಡವನಿಂದ ಸದಾ ಒಂದಲ್ಲೊಂದು ಕಾರಣಕ್ಕೆ ದೂರವಾಗಿಯೇ ಕಾಲ ಹಾಕುವ ಸೀತಾಮಾತೆ , ಬೀದಿ ಬಸವನೊಬ್ಬನ ಅಯೋಗ್ಯ ಮಾತುಗಳಿಗೆ ಬಲಿಯಾಗಿ ಸ್ವಪ್ರತಿಷ್ಠೆಗಾಗಿ ವ಼ಂಶದ ಕುಡಿ ಹೊತ್ತ ತುಂಬು ಗರ್ಭಿಣಿ ಧರ್ಮಪತ್ನಿಯ ಹೇಳದೇ ಕೇಳದೇ ಗಡಿಪಾರು ಮಾಡಿ ಕಾಡುಪಾಲು ಮಾಡುವ ರಾಮಚಂದ್ರನ ಆದರ್ಶವಾಗಿ ಮಾಡುವ ಈ ಸಮಾಜ ಈ ಸಂಬಂಧಗಳಿಂದ ಏನನ್ನ ತಾನೆ ನಿರೀಕ್ಷಿಸಬಹುದು ??? ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವಾ ?? ಇಂದಿಗೂ ಈ ಪರಿಪಾಠ ಬದಲಾಗೋಲ್ಲ ಎಲ್ಲ ಸಂಬಂಧಗಳಲ್ಲೂ.. ಹಚ್ಚಿಹಾಕೋ ಮನೆಹಾಳರಿದ್ದಷ್ಟು ಕಾಲ ಹೊರಹಾಕೋ ಮನೆಮ಼಼ಂದಿಯಿರ್ತಾರೆ, “ಪದೇ ಪದೇ ಅವಮಾನಿಸಿ ಹೊರಹಾಕುವ ಮತ್ತೆ ಕರೆಯುವ ಶ್ರೀರಾಮನ ನಡೆಯಿಂದ ಬೇಸತ್ತು ತಾಯ ಒಡಲಿಗೆ ಮರಳುವ ಸೀತೆಯೇ ನಮಗೆ ಆದರ್ಶವಾದರೇ…. ಮೊನ್ನೆ ಯಾರೋ ಕೇಳಿದ್ರು ಅದೇನು ಆಶ್ರಮ ?? ಅಬಲಾಶ್ರಮ ಮಾಡ್ತೀರಾ ?? ಯಾವುದೋ ಕಾಲದಲ್ಲಿ ಇದ್ದಿರಬಹುದು ಅಬಲೆ ಎಂಬ ಅನ್ವರ್ಥನಾಮದ ಹೆಣ್ಣು.. ಕಾಲಮಾನಕ್ಕೆ ತಕ್ಕಂತೆ ಪರಿಸ್ಥಿತಿಗನುಗುಣವಾಗಿ ಇಂದು ಹೆಣ್ಣು ತನ್ನ ದುಡಿಮೆ ತನ್ನ ಬದುಕು ತಾನೇ ನೋಡ್ಕೊಂಡು. ಬೇರೊಬ್ಬರ ಬದುಕಿಗೂ ಊರುಗೋಲಾಗಿದ್ದಾಳೆ.. ತಾನೂ ದುಡಿದು ನಾಲ್ವರ ದುಡಿಮೆಗೆ ದಾರಿಯಾಗೋ ಲಕ್ಷಾಂತರ ಮ಼ಂದಿ ಹೆಣ್ಮಕ್ಕಳು ನಮ್ಮ ನಡುವಿದ್ದಾರೆ… ಇಂಥವರು ಕಟ್ಟುವ ಸಂಸ್ಥೆಯಾಗಲೀ ಅದು ನೀಡುವ ನೆಲೆಯಾಗಲೀ ಅಬಲಾಶ್ರಮವಲ್ಲ ಸಬಲಾಶ್ರಮ ಅಲ್ಲವೆ ?? ನಂಗೆ ಕೆಲವರು ಯಾವಾಗಲೂ ಹೇಳ್ತಿದ್ರು ನೀನು ಧಿಕ್ಕರಿಸಿ ನಿಂತಂದು ನಿನ್ನ ಬದುಕು ನಿನ್ನದು… ಹೌದು ಬದುಕಿನಲ್ಲಿ ಇದುವರೆಗೂ ಮಾಡಬಾರದೆಂದುಕೊಂಡ ಒ಼ಂದು ಕೆಲಸ .. ಅದೇ ಕಾರಣಕ್ಕೆ ಪದೇ ಪದೇ ಶೋಷಣೆ ಅವಮಾನಕ್ಕೊಳಗಾಗುವ ಹಿಂಸೆ …. ನೋವು ನುಂಗಿ ನಗುವ ಯತ್ನ …. ಇಂದು ಮಗ ಹದಿನೆಂಟರ ಹೊಸ್ತಿಲಲ್ಲಿ ನಿಂತಿದ್ದಾನೆ.. ಬದುಕಿನುದ್ದಕ್ಕೂ ಉರಿದ ಹೆತ್ತ ತಾಯಿಯ ನೋವಿಗೆ ಅವಮಾನಕ್ಕೆ ಪ್ರತಿರೋಧಿಸುವ ಹಂತ ತಲುಪಿದ್ದಾನೆ… ಇದನ್ನು ಸರಿಯೆನ್ನಲಾ ತಪ್ಪೆನ್ನಲಾ ?? ಒಂದು ವೇಳೆ ಅಲ್ಲಗೆಳೆದರೇ ಶೋಷಣೆಯ ಒಪ್ಪಿಕೊಂಡಂತಾಗುವುದಿಲ್ಲವೆ ?? ಸ್ವಾವಲಂಬನೆಯ ಸ್ವಂತಿಕೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆತ್ನಿಸುವ ಸಾವಿರಾರು ತಾಯಂದಿರಿಗೆ ಇದು ಅವಮಾನವಲ್ಲವೆ ?? ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ಮಾನಸಿಕ ನೋವಿನಿಂದ ಮುಕ್ತಳಾಗಲು ಏಕಾಂತದ ಬದುಕನ್ನಾಯ್ದುಕೊಂಡು ನಂಗೂ ತನ್ನ ನಡವಳಿಕೆಯಿಂದ ನಿನ್ನ ಪಾಡಿಗೆ ನೀ ಬದುಕು ಎಂದು ತೋರಿಸಿದ , ತನ್ನ ಗಂಡನ ಆಸ್ತಿಯಲ್ಲಿ ತನಗೆ ಬಂದದ್ದರಲ್ಲಿ ನನಗೂ ಹಂಚಿ ನನ್ನ ಸ್ವಂತಿಕೆ ಸ್ವಾಭಿಮಾನದ ಬದುಕಿಗೆ ಊರುಗೋಲಾದ ನನ್ನ ಹೆತ್ತಮ್ಮ ಸ್ವರ್ಣರಿಗೆ ಮೊತ್ತ ಮೊದಲ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು… ಇಂದಿಗೆ ಈ ಹಿತಶತೃವಿನಂಥ ಸಾಮಾಜಿಕ ವ್ಯವಸ್ಥೆಯಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನನ್ನಮ್ಮನ ಭಿಕ್ಷೆ.. ಅಲ್ಲದೇ ಬೇರೇನೂ ಅಲ್ಲ… ಪ್ರತೀ ಹಂತದಲ್ಲೂ ನನ್ನನ್ನು ಇದರಿಂದ ವಿಮುಖಳಾಗಿಸುವ ಸಂಚು ನಡೀತಾನೇ ಇದೆ.. ಸಾಮಾಜಿಕವಾಗಿ ಅವಮಾನಿಸುವ ಕಂಗೆಡಿಸುವ ತುಳಿಯುವ ಕಾರಣಗಳಿಗಾಗಿ ಕಾದಿರುವ ಕೆಲವರು ಹೋದಲ್ಲಿ ಬಂದಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದಾರೆ… ನಾನು ಬೇಸತ್ತು ಬೆನ್ನು ಹಾಕಲೀ ಎಂಬುದೇ ಅವರ ಉದ್ದೇಶ , ಇದು ತಾವೇನನ್ನೂ ಮಾಡಲು ಯೋಗ್ಯತೆಯಿಲ್ಲದ ಹೆಂಗಸರ ಜಾತಿಗೆ ಅಪವಾದವಾದವರು ಇಂಥವರನ್ನು ಚಮಚಾಗಳಾಗಿಸಿಕೊಂಡು ವ್ಯವಸ್ಥಿತ ಬಲೆ ಹಣೆಯಲು ಪ್ರೇರೇಪಿಸುತ್ತಿದ್ದಾರೆ.. ರೋಸಿ ದೂರ ಹೋಗುತ್ತೇನೋ ಧಿಕ್ಕರಿಸಿ ಬದುಕುತ್ತೇನೋ ಭಗವಂತನಿಗೇ ಗೊತ್ತು.. ಆದರೇ ., ಇದು ಅಂತ್ಯವಲ್ಲ ಆರಂಭ ನಾನಲ್ಲದಿದ್ದರೂ ಇನ್ನೊಬ್ಬ ಮಹಿಳೆ ತಲೆ ಎತ್ತುತ್ತಾಳೆ .. ಸಾವಿರಾರು ಹೆಂಗಸರು ಜೊತೆಯಾಗುತ್ತಾರೆ ಪ್ರಬಲ ರಾಜಕಾರಣದ ಬೆಂಬಲದ ತಗೊಂಡು ಮೆರೆಯುವವರನ್ನೂ ಮಣ್ಣುಮುಕ್ಕಿಸುತ್ತಾರೆ… ಅಪ್ಪನನ್ನ ಕಳಕೊಂಡಾಗಲೇ ಅನಾಥತೆಯ ತೀವ್ರ ಅನುಭವ ಕಂಡುಂಡ ಜೀವಕ್ಕೀಗ ಬೀದಿಗೆ ಬೀಳುವ ತಿರುಪೆ ಎತ್ತುವ ಭಯವಿಲ್ಲ , ಯಾಕಂದರೇ ದುಡ್ಡಿಲ್ಲದೇ ಯಾರದೇ ಕೃಪಾಶ್ರಯವಿಲ್ಲದೇ ಸ್ವಂತ ಶ್ರಮದಿಂದ ಬದುಕುವ ಕಲೆ ಕರಗತವಾಗಿದೆ.. ಹೆತ್ತಮ್ಮನ ಕೃಪಾಶೀರ್ವಾದವಿದೆ…. ದಣಿವಾದರೇ ಒರಗಲು ಹೆತ್ತ ಮಗನ ಹೆಗಲಿದೆ… ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ಹೇಳುವ ಎಡೆಯಲ್ಲಿಯೇ ನಿರ಼ಂತರ ಕಣ್ಣೀರಿಟ್ಟ ಕಂಗಳೀಗ ಕಂಬನಿಯಿಲ್ಲದೇ ಬರಡಾಗಿದೆ… ಸಂಸ್ಕಾರದ ಹೆಸರಲ್ಲಿ ಸದಾ ಅವಮಾನ ಶೋಷಣೆಯ ದಬ್ಬಾಳಿಕೆಗೊಳಗಾದ ಮನವೀಗ ಹೊಸ ಹಾದಿಯತ್ತ ಹೆಜ್ಜೆಯೆತ್ತಿದೆ , ಸಹಿಸಿದಷ್ಟೂ ತುಳಿಯುವ… ಸುಮ್ಮನಿದ್ದಷ್ಟೂ ಶೋಷಿಸುವ ಪರಿಧಿಯಾಚೆಗೆ ಬದುಕಿದೆ… ಇದು ಬಹುಶಃ ಸಾವಿರಾರು ಮಹಿಳೆಯರ ಮಾತಾಗಲಾರದ ಧ್ವನಿ ಇರಬಹುದು…. ಬನ್ನಿ ನಮ್ಮ ಬದುಕ ಸ್ವಾಭಿಮಾನದಿಂದ ಬದುಕೋಣ ಸ್ವಾವಲಂಬಿಯಾಗೋಣ… ಕೊಲ್ಲುವವನೊಬ್ಬನಿದ್ದರೇ ಕಾಯೋನೊಬ್ಬನಿರುತ್ತಾನೆ.. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.ನಿಷ್ಕಲ್ಮಷತೆಯಿಂದ ಏನನ್ನಾದರೂ ಒಳ್ಳೇದ ಬಯಸೋ ಹೆಣ್ಮನಗಳಿಗೆ ವರ್ಷಪೂರ್ತಿ ಮಹಿಳಾ ದಿನಾಚರಣೆ.. ನನ್ನಬದುಕು #ನನ್ನಆದರ್ಶ #ನನ್ನಅಮ್ಮ ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು, ******************************
You cannot copy content of this page