ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾರ್ಮಿಕ ದಿನದ ವಿಶೇಷ

ಅರಿವು ಬಹು ಮುಖ್ಯ..! ಕೆ.ಶಿವು ಲಕ್ಕಣ್ಣವರ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕ ದಿನದ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕರ ದಿನಾಚರಣೆಯ ದಿನ. ಇದು ಮಹತ್ವದ ದಿವಾಗಿದೆ. ಮೇ ದಿನ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ ದಿನಕ್ಕೆಂಟು ಗಂಟೆಗಳ ನಿಗದಿತ ಕೆಲಸಕ್ಕಾಗಿ ಆರಂಭವಾದ ಹೋರಾಟವನ್ನು ಸ್ಮರಿಸುವ ಈ ದಿನವನ್ನು ಕಾರ್ಮಿಕರು ಇಡೀ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟದ ದಿನವನ್ನಾಗಿ ಆಚರಿಸುತ್ತಾರೆ. ಈ ಆಚರಣೆಗೆ ಒಂದು ಶತಮಾನಕ್ಕೂ ಮೀರಿದ ಸುದೀರ್ಘ ಇತಿಹಾಸವಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ಚಾರಿತ್ರಿಕ ಘಟನೆಯೊಂದರ ಹಿನ್ನೆಲೆಯಲ್ಲಿ ಆರಂಭವಾದ ಮೇ ದಿನಾಚರಣೆ ಹುಟ್ಟಿದ್ದು ಹೇಗೆಂದು ನೋಡೋಣ.ಅಮೆರಿಕದಲ್ಲಿ ಚಿಗುರೊಡೆದ ಕಾರ್ಮಿಕರ ಹೋರಾಟ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗ ನೀಡಿದ್ದವಾದರೂ ಕಾರ್ಮಿಕರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅವರು ದುಡಿಯುತ್ತಿದ್ದ ಕಾರ್ಖಾನೆಗಳಲ್ಲೂ ಸಹ ಮನುಷ್ಯರ ಜೀವನಕ್ಕೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನೂ ಮಾಲೀಕರು ಒದಗಿಸುತ್ತಿರಲಿಲ್ಲ. ಕೆಲಸಗಾರರನ್ನು ಗಾಣದೆತ್ತುಗಳಂತೆ ಅಸುರಕ್ಷಿತ ವಾತಾವರಣದಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಮಾಲೀಕರ ಲಾಭವನ್ನು ನಿಯಂತ್ರಿಸಿ ಕಾರ್ಮಿಕರಿಗೆ ಸವಲತ್ತು ನೀಡುವ ಯಾವುದೇ ಶಾಸನವೂ ಅಸ್ತಿತ್ವದಲ್ಲಿರಲಿಲ್ಲ. ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಮಾಲೀಕನ ಕಾರ್ಖಾನೆಯಲ್ಲಿ ದುಡಿಯಬೇಕಿದ್ದ ಕೆಲಸಗಾರರು ವಿಶ್ರಾಂತಿಯಿಂದ ಮತ್ತು ಕೌಟುಂಬಿಕ ಜೀವನದಿಂದ ವಂಚಿತರಾಗಿದ್ದರು. ಈ ರೀತಿ ಕಾರ್ಮಿಕರು ಹರಿಸಿದ ಬೆವರು ಮಾಲೀಕರ ಖಜಾನೆಯನ್ನು ತುಂಬಲು ಕಾರಣವಾಗಿತ್ತು ಮತ್ತು ಮಾಲೀಕರ ವರ್ಗ ಇನ್ನಷ್ಟು ಶ್ರೀಮಂತವಾಗುತ್ತಲೇ ಇತ್ತು. ಕಾರ್ಮಿಕರು ನೊಂದು ಬೆಂದು ಮಣ್ಣಾಗುತ್ತಲಿದ್ದರು. 8 ಗಂಟೆ ಕೆಲಸದ ನಿಗದಿಗಾಗಿ ಆಗ್ರಹ: ಹೀಗಿರುವಾಗ 19ನೇ ಶತಮಾನದ ಕೊನೆಯ ಭಾಗದಲ್ಲಿ ಅಮೆರಿಕಾದ ಕಾರ್ಖಾನೆಗಳಲ್ಲಿ ಅಲ್ಲಲ್ಲೇ ಸ್ಥಳೀಯವಾಗಿ ಕಾರ್ಮಿಕರಲ್ಲಿ ಮಡುಗಟ್ಟಿದ ನೋವು ಸಂಕಟಗಳು ಹೋರಾಟದ ಸಂಘಟಿತ ರೂಪವನ್ನು ಪಡೆಯಿತು. ಸಮಾಜವಾದಿ ನಾಯಕರ ನೇತೃತ್ವದಲ್ಲಿ ಮುಷ್ಕರಗಳನ್ನು ಸಂಘಟಿಸಿ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. 8 ಗಂಟೆಗಳ ಕೆಲಸ, 8 ಗಂಟೆಗಳ ವಿಶ್ರಾಂತಿ ಮತ್ತು 8 ಗಂಟೆಗಳ ಮನರಂಜನೆಯಂತೆ ದಿನದ 24 ಗಂಟೆಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಉದ್ಯೋಗ ಕ್ಷೇತ್ರಗಳಲ್ಲಿ ದಿನವೊಂದಕ್ಕೆ 8 ಗಂಟೆಗಳ ನಿಗದಿತ ಕೆಲಸಕ್ಕಾಗಿ ಕಾರ್ಮಿಕ ಸಂಘಗಳು ಆಗ್ರಹಿಸಿದವು. 1886ರ ಮೇ 1ರಿಂದ ಕಾನೂನಾತ್ಮಕವಾಗಿ 8 ಗಂಟೆ ಕೆಲಸ ಮಾಡಲಿದ್ದೇವೆಂದು 1884ರಲ್ಲಿ ಅಮೆರಿಕದ ಕಾರ್ಮಿಕ ಸಂಘಟನೆ ಘೋಷಿಸಿತ್ತು. ಚಿಕಾಗೊದಲ್ಲಿ 1886ರ ಮೇ 1 ರಂದು ಕಾರ್ಮಿಕರ ಮುಷ್ಕರ: ಅಮೆರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೆ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆ ಸಂಘಟಿಸಿತ್ತು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು. ರಸ್ತೆಗಳು ಬಿಕೋ ಎನುತ್ತಿದ್ದವು. ರೈಲುಗಳು ಸ್ತಬ್ಧಗೊಂಡಿದ್ದವು, ಯಂತ್ರಗಳನ್ನು ನಡೆಸುವವರಿಲ್ಲದೆ ಕಾರ್ಖಾನೆಗಳಲ್ಲಿ ಮೌನ ಆವರಿಸಿತ್ತು. ನಿರ್ಮಾಣ ಕೈಗಾರಿಕೆಯಲ್ಲಿ ದುಡಿಯುತ್ತಿದ್ದವರೂ ಸೇರಿದಂತೆ ಸುಮಾರು 1,85,000 ಕಾರ್ಮಿಕರು ಆ ಕಾಲದಲ್ಲಾಗಲೇ ಎಂಟು ಗಂಟೆ ಕೆಲಸದ ಪದ್ಧತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹಲವಾರು ಕ್ಷೇತ್ರಗಳ ಕಾರ್ಮಿಕರು ಮೇ 1ರ ಮುಷ್ಕರದಲ್ಲಿ ಕೈಜೋಡಿಸಿ ಕಾರ್ಮಿಕ ಚಳವಳಿಯ ಪ್ರವಾಹವನ್ನು ಸೇರಿಕೊಂಡರು. ಅನೇಕ ಕಾರ್ಮಿಕ ಸಂಘಗಳು ರಚನೆಯಾಗಿ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕರು ಮಾಲೀಕರ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟವನ್ನು ಶಾಂತಿಯುತವಾಗಿಯೇ ಮುಂದುವರಿಸಿದರು. ಸಮಾಜವಾದ ಕಾರ್ಮಿಕರಿಗೆ ನೆಮ್ಮದಿಯ ಬದುಕು ನೀಡಬಲ್ಲದೆಂಬುದರ ಬಗ್ಗೆ ಕಾರ್ಮಿಕ ಮುಖಂಡರ ಭಾಷಣಗಳು ಹೋರಾಟನಿರತ ಕಾರ್ಮಿಕರ ಮನಮುಟ್ಟುತ್ತಿದ್ದವು… ಹೇ ಮಾರ್ಕೆಟ್ ಸ್ಕ್ವೇರ್ ನರಮೇಧ ಮತ್ತು ಹುತಾತ್ಮ ಕಾರ್ಮಿಕ ನಾಯಕರು : ಮುಷ್ಕರದಿಂದ ದೂರ ಉಳಿದಿದ್ದ ಕಾರ್ಮಿಕರು ಪ್ರತಿದಿನವೂ ಬಂದು ಹೋರಾಟದಲ್ಲಿ ಸೇರ್ಪಡೆಯಾಗುತ್ತಲೇ ಇದ್ದರು. ಹೀಗೆ ಚಿಕಾಗೋ ನಗರದಲ್ಲೇ ಮುಷ್ಕರನಿರತ ಕಾರ್ಮಿಕರ ಸಂಖ್ಯೆ 1 ಲಕ್ಷ ಮುಟ್ಟಿತ್ತು. ಚಳವಳಿಯ ನೇತೃತ್ವ ವಹಿಸಿದ್ದ ಆಲ್ಬರ್ಟ್ ಪಾರ್ಸನ್ಸ್, ಜೊಹಾನ್ ಮಸ್ತ್, ಅಗಸ್ತ್ ಸ್ಪೈಸ್ ಮತ್ತು ಲೂಯಿ ಲಿಂಗ್ ಅಮೆರಿಕ ಕಾರ್ಮಿಕರ ಮನೆಮಾತಾದರು. ಅದೇ ಮೇ 3ರಂದು ಮ್ಯಾಕ್ ಕಾರ್ಮಿಕ್ ರೀಪರ್ ವರ್ಕ್ಸ್ ಎಂಬ ಕಾರ್ಖಾನೆಯ ಕಾರ್ಮಿಕರ ಮತ್ತು ಚಿಕಾಗೊ ಪೊಲೀಸರ ಮಧ್ಯೆ ಸಂಘರ್ಷ ಉಂಟಾಗಿ ಹಲವರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿ ಗುಂಡಿನ ದಾಳಿಗೈದರು. ಸ್ಥಳದಲ್ಲೇ ಕನಿಷ್ಟ ಇಬ್ಬರು ಸಾವನ್ನಪ್ಪಿ ಅನೇಕ ಜನ ಗಾಯಗೊಂಡರು. ಪೊಲೀಸರ ದುಷ್ಕೃತ್ಯವನ್ನು ಖಂಡಿಸಲು ಚಿಕಾಗೊ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಮೇ 4ರಂದು ಪ್ರತಿಭಟನಾ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆ ಮುಂದುವರೆದಂತೆ ಯಾರೋ ಬಾಂಬ್ ಎಸೆದು ಪೊಲೀಸರನ್ನು ರೊಚ್ಚಿಗೆಬ್ಬಿಸಿದ್ದು ಅದಕ್ಕಾಗೇ ಕಾಯುತ್ತಿದ್ದಂತಿದ್ದ ಪೊಲೀಸರು ಸಿಡಿಗುಂಡಿನ ಪ್ರಹಾರ ಕೈಗೊಂಡರು. ಈ ಘಟನೆಯಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿತು, ಆದರೆ ಬಾಂಬ್ ಎಸೆದವರಾರೆಂಬ ಸತ್ಯ ತಿಳಿಯುವ ಗೋಜಿಗೆ ಹೋಗಲಿಲ್ಲ. ಕಾರ್ಮಿಕ ಚಳವಳಿಯ ನಾಯಕತ್ವ ವಹಿಸಿದ್ದ ಸ್ಪೈಸ್, ಪಾರ್ಸನ್ಸ್, ಫಿಶರ್, ಎಂಗಲ್, ಲೂಯಿ ಅವರುಗಳನ್ನು ಹೇ ಮಾರ್ಕೆಟ್ ಸ್ಕ್ವೇರ್ ಪ್ರಕರಣದಲ್ಲಿ ಸಿಲುಕಿಸಿ, ಅನ್ಯಾಯವಾಗಿ 1887ರಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.ಅವರು ಪ್ರಾಣ ತೆತ್ತಿದ್ದು ಅವರು ಮಾಡಿದ ಕೃತ್ಯಗಳಿಂದಾಗಲ್ಲ, ಬದಲಿಗೆ ಅವರು ನಂಬಿ ಮಂಡಿಸುತ್ತಿದ್ದ ವಿಚಾರಗಳಿಂದಾಗಿ, ಶ್ರಮಜೀವಿಗಳ ಪರವಾದ ಸಮಾಜವಾದಿ ಸಿದ್ಧಾಂತಗಳಿಂದಾಗಿ ಎಂಬುದನ್ನು ಇಡೀ ಜಗತ್ತೇ ಮನಗಂಡಿದೆ ಎನ್ನುವುದಕ್ಕೆ ವಿಶ್ವ ಕಾರ್ಮಿಕರ ದಿನಾಚರಣೆಯೇ ಸಾಕ್ಷಿ. ಮೇ ದಿನಾಚರಣೆ – ತಪ್ಪಬೇಕೆಂದು ಕಾರ್ಮಿಕರ ಬವಣೆ: ವಿಶ್ವದ ಕಾರ್ಮಿಕರಿಗೆ 8 ಗಂಟೆ ಕೆಲಸ ಎಂದು ನಿಗದಿ ಮಾಡಿದ ಶಾಸನಕ್ಕೆ ಮತ್ತು ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳಗಳನ್ನು ಖಾತರಿಪಡಿಸುವಲ್ಲಿ ಈ ಎಲ್ಲಾ ಹೆಸರಿಸಬಹುದಾದ, ಪತ್ತೆಹಚ್ಚಲಾರದ ಸಾವಿರಾರು, ಲಕ್ಷಾಂತರ ಹೋರಾಟಗಾರರ/ರ್ತಿಯರ ತ್ಯಾಗವಿದೆ ಎಂಬುದನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುವ ಅಗತ್ಯವಿದೆ. ಹಕ್ಕುಗಳನ್ನು ಕಾರ್ಮಿಕರಿಗೆ ಯಾರೂ ದಾನವಾಗಿ ನೀಡಿಲ್ಲ. ಅಮೆರಿಕ ದೇಶದ ಚಿಕಾಗೊ ನಗರದಲ್ಲಿ ಜರುಗಿದ ಈ ಚಾರಿತ್ರಿಕ ಮೇ ದಿನದ ಹೋರಾಟವನ್ನು ಸ್ಮರಿಸುತ್ತಲೇ ಕಾರ್ಮಿಕರ ಹಿತ ಕಾಪಾಡುವುದು ಮತ್ತು ಹಕ್ಕುಗಳನ್ನು ಉಳಿಸಿ ಗಳಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಉದ್ದೇಶವೂ ಆಗಿರುತ್ತದೆ. ಇದಕ್ಕಾಗಿ ಕಾರ್ಮಿಕರು ತಮ್ಮ ವಿರುದ್ಧ ಆಳ್ವಿಕೆ ನಡೆಸುತ್ತಿರುವ ಶ್ರೀಮಂತರ ಕಾರ್ಪೊರೇಟ್ ರಾಜಕೀಯವನ್ನು ಅರ್ಥೈಸಿಕೊಳ್ಳಬೇಕಿದೆ, ಶ್ರಮಜೀವಿಗಳ ಪರವಾಗಿರುವ ಸಮಾಜವಾದದ ಅರಿವನ್ನೂ ಪಡೆಯಬೇಕಿದೆ. ಭಾರತದಲ್ಲಿ ಮೇ ದಿನಾಚರಣೆಯ ಆರಂಭ:: ಭಾರತದಲ್ಲಿ 1890ರಲ್ಲೇ ಬಾಂಬೆ ಹತ್ತಿ ಗಿರಣಿಗಳ ಸುಮಾರು 10000 ಕಾರ್ಮಿಕರು ಲೊಖಾಂಡೆ ಅವರ ನಾಯಕತ್ವದಲ್ಲಿ ಸಭೆ ಸೇರಿದ್ದರು. ಅಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಮಾತನಾಡಿದ್ದರು. ಸಭೆಯಲ್ಲಿ ವಾರದ ರಜೆಗಾಗಿ ಆಗ್ರಹಿಸಲಾಗಿ ಮಾಲೀಕರು ಒಪ್ಪಿಕೊಂಡರು. 1890 ರ ಸೆಪ್ಟೆಂಬರ್ 25ರಂದು ಬ್ರಿಟಿಷ್ ಭಾರತ ಸರ್ಕಾರ ಒಂದು ಆಯೋಗ ರಚಿಸಿತು. ಈ ಆಯೋಗ 1891ರಲ್ಲಿ ಫ್ಯಾಕ್ಟರಿ ಕಾನೂನಿಗೆ ಶಿಫಾರಸ್ಸು ಮಾಡಿತು. 1892 ಜನವರಿ 1ರಂದು ಈ ಶಾಸನವನ್ನು ಜಾರಿಗೆ ತರಲಾಗಿ, ಮಹಿಳೆಯರಿಗೆ 11 ಗಂಟೆಗಳ ಕೆಲಸ ಮತ್ತು ನಡುವೆ ಒಂದೂವರೆ ಗಂಟೆಗಳ ವಿಶ್ರಾಂತಿ ಹಾಗೂ ಮಕ್ಕಳಿಗೆ 7 ಗಂಟೆಗಳ ಕೆಲಸ ಎಂದು ನಿಗದಿಪಡಿಸಲಾಯಿತು. ಇದು ನಿಗದಿತ ಕೆಲಸದ ವೇಳೆಯ ಮೊದಲ ಶಾಸನವಾದರೂ ಇದರಲ್ಲಿ ಪುರುಷ ಕಾರ್ಮಿಕರಿಗೆ ಕೆಲಸದ ಸಮಯವನ್ನು ನಿಗದಿಗೊಳಿಸಿರಲಿಲ್ಲ. ವಾರದ ರಜೆಯೂ ಉಲ್ಲೇಖವಾಗಿತ್ತು… ನಂತರದಲ್ಲಿ ಕಾರ್ಮಿಕರ ಹೋರಾಟಗಳ ಫಲವಾಗಿ 1911ರಲ್ಲಿ ಪುರುಷ ಕಾರ್ಮಿಕರಿಗೆ 12 ಗಂಟೆಗಳ ಕೆಲಸವನ್ನು ನಿಗದಿಗೊಳಿಸಲು ಗಿರಣಿ ಕಾರ್ಮಿಕರು ಒಪ್ಪಿದರು. ಆದರೆ ಮೇ ದಿನಾಚರಣೆಯನ್ನು 1923ರ ವರೆಗೂ ಭಾರತದಲ್ಲಿ ಆಚರಿಸಿದ ದಾಖಲೆಯಿಲ್ಲ. 1920ರಲ್ಲಿ ಜನ್ಮ ತಳೆದ ದೇಶದ ಮೊಟ್ಟಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ ಮೇ ದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ 1927ರಿಂದ ಎಲ್ಲಾ ಪ್ರಾಂತ್ಯಗಳಲ್ಲೂ ಮೇ ದಿನವನ್ನು ಆಚರಿಸಲು ಆರಂಭಿಸಿತು. ಹೀಗೆ 1923ರಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕ್ರಮೇಣ ಭಾರತದೆಲ್ಲೆಡೆ ವ್ಯಾಪಿಸಿತು. ಈ ವರ್ಷದ ವಿಶ್ವ ಕಾರ್ಮಿಕ ದಿನಾಚರಣೆಯ ಘೋಷಣೆ: “ಸೃಷ್ಟಿಸುವವನಿಗೆ ಸೇರಬೇಕು ಸಂಪತ್ತು” ಜಗತ್ತಿನಾದ್ಯಂತ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲಿದೆ. ಭಾರತದ ಪರಿಸ್ಥಿತಿಯನ್ನು ಗಮನಿಸೋಣ. 2017ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73ರಷ್ಟು ಪಾಲು ಶೇ.1ರಷ್ಟು ಸಿರಿವಂತರು ಹಂಚಿಕೊಂಡಿದ್ದರೆ, ಭಾರತದ ಅತಿಬಡತನದಲ್ಲಿರುವ ಶೇ.50ರಷ್ಟು ಜನಸಂಖ್ಯೆ (67 ಕೋಟಿ ಭಾರತೀಯರು) ಕೇವಲ ಶೇ.1ರಷ್ಟು ಸಂಪತ್ತು ಹೆಚ್ಚಳವನ್ನು ಕಂಡಿದ್ದಾರೆಂದು ವರದಿಯಾಗಿದೆ. ಉದಾಹರಣೆಗೆ ಉದ್ಯಮಿಯಾಗಿರುವ ಅಂಬಾನಿ ಈ ವರ್ಷ ತನ್ನ ಆಸ್ತಿಯಲ್ಲಿ ಶೇ.25ರಷ್ಟು ಅಧಿಕೃತ ಹೆಚ್ಚಳ ತೋರುತ್ತಾನೆ. ಆದರೆ ನಮ್ಮ ದೇಶದ ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ, ಕಾರ್ಮಿಕರು ದಿನದೂಗಿಸಿದರೆ ಸಾಕೆಂದು ನಿಟ್ಟಿಸುರು ಬಿಡುವಂತಾಗಿದೆ! ಇದರರ್ಥ ಸಮಾಜದ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳಿಗೆ ಆ ಸಂಪತ್ತು ದಕ್ಕುತ್ತಿಲ್ಲ. ಇದಕ್ಕೆ ಕಾರಣ ಶ್ರಮಜೀವಿಗಳ ಬೆವರು ಶ್ರೀಮಂತರ ಜೇಬಿಗೆ ಲಾಭವಾಗಿ ಹರಿಯಲು ಬಂಡವಾಳಶಾಹಿ ಸರ್ಕಾರಗಳು ಮಾಡುವ ಕಾನೂನು ಕಟ್ಟಲೆಗಳೇ. ಆದ್ದರಿಂದ ಶ್ರಮಜೀವಿಗಳು ಈ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ತಮ್ಮ ಶ್ರಮದ ಫಲವನ್ನು ತಾವೇ ಉಣ್ಣಲು ರಾಜಕೀಯ ಚಿಂತನೆ ನಡೆಸುವುದು ಅಗತ್ಯವೂ ಅನಿವಾರ್ಯವೂ ಆಗಿದೆ.ಮೇ ದಿನಾಚರಣೆಯ ಹುತಾತ್ಮ ಅಗಸ್ಟ್ ಸ್ಪೈಸ್ ಗಲ್ಲಿಗೇರುವ ಮುನ್ನ ಆಳುವ ಶೋಷಕರಿಗೆ ಹೇಳುವ ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ..! ********

ಕಾರ್ಮಿಕ ದಿನದ ವಿಶೇಷ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಲೇಖನ

ಪ್ರತಿಯೊಬ್ಬರೂ ಕಾರ್ಮಿಕರೇ ಶೃತಿ ಮೇಲುಸೀಮೆ ಪ್ರತಿಯೊಬ್ಬರೂ ಕಾರ್ಮಿಕರೇ ಇಂದು ಮೇ ಒಂದು, ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಇದನ್ನು 1886, ಮೇ 4 ರಂದು ಚಿಕಾಗೋದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಖಂಡಿಸಿದ ಪ್ರತೀಕದ ಕುರುಹುವಾಗಿ ಆಚರಿಸುತ್ತಾ ಬರಲಾಗುತ್ತದೆ. ಈ ಕಾರ್ಮಿಕ ದಿನದ ಮೂಲ ಕುರುಹು ಇರುವುದು ಅಮೆರಿಕದಲ್ಲಿ, ಅಲ್ಲಿ ಕಾಲರಾಡೋ ರಾಜ್ಯ 1887ರಲ್ಲಿ ಮಾರ್ಚ್ 15 ರಂದು ಕಾರ್ಮಿಕ ದಿನ ಆಚರಣೆಗೆ ಕಾನೂನನ್ನು ಮಾನ್ಯ ಮಾಡಿತು. ಭಾರತದಲ್ಲಿ ಈ ದಿನವನ್ನು 1927ರಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದು ವಿಶ್ವದ ಅನೇಕ ಕಡೆಗಳಲ್ಲಿ ಮೆರವಣಿಗೆ, ಪ್ರದರ್ಶನ,ಭಾಷಣ,ಕ್ರೀಡೆಗಳ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬಲಾಢ್ಯರು ದುರ್ಬಲರ ಮೇಲೆ ಅನಾದರ ತೋರುತ್ತಾ, ತುಳಿತಕ್ಕೀಡು ಮಾಡುತ್ತಾ ಬಂದಿದ್ದಾರೆ. ಈ ದಬ್ಬಾಳಿಕೆಯು ಪ್ರಾಚೀನ ಕಾಲದ ಶೂದ್ರರು, ಮಧ್ಯಯುಗದಲ್ಲಿ ಗುಲಾಮರನ್ನು, ಆಧುನಿಕ ಯುಗದ ಆರಂಭದಲ್ಲಿ ಕಾರ್ಮಿಕರನ್ನು ಒಳಗೊಂಡಂತೆ ಮುಂದುವರೆದಿದೆ. ಯುಕ್ತಿ ಮತ್ತು ಶಕ್ತಿ ಇದ್ದರೆ ಇಡೀ ಜಗತ್ತನ್ನೇ ಆಳಬಹುದು ಎಂಬ ನಿದರ್ಶನಗಳು ಸಾಕಷ್ಟಿವೆ. ಪ್ರಸ್ತುತತೆಯನ್ನು ಗಮನಿಸುವುದಾದರೆ ಬಡವ ಬಲ್ಲಿದರ ನಡುವಿನ ಅಂತರ ಇಂದೆಂದಿಗಿಂತಲೂ ಹೆಚ್ಚುತ್ತಿದೆ. ಕೂಲಿ ಎಂಬ ಬಿಡಿಗಾಸು ನೀಡಿ,ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮನ್ನು ನಮ್ಮೆದುರೇ ಸದ್ದಿಲ್ಲದೆ ಶೋಷಿಸುತ್ತಿದ್ದರೆ. ನಮ್ಮ ಹಿಟ್ಟಿನ ಚೀಲಕ್ಕೆ ಕಲಬೆರಿಕೆಯಂತಹ ವಿಷದ ಪುಡಿ ಬೆರೆಸಿ ಕೊಡುತ್ತಿದ್ದರೂ ಕಾಣದಂತೆ ಕುರುಡಾಗಿವೆ ನಮ್ಮ ಕಣ್ಣುಗಳು. ಇಂತಹ ಸ್ಥಿತಿಯಲ್ಲಿರುವ ಸಮಾಜವನ್ನು ನಾವು ಉತ್ತಮ ಗೊಳಿಸಿಕೊಳ್ಳಬೇಕಿದೆ, ನಮ್ಮ ಮುಂದಿನ ಸಮಾಜಕ್ಕೆ ಬದುಕು ಎಂದರೆ ಕೇವಲ ದುಡಿತ, ಸಂಪಾದನೆ ಎಂದು ತಿಳಿಸದೆ, ಬದುಕಿರುವುದು ಬದುಕಲಿಕ್ಕೆ ವಿನಃ ಹಣ ಸಂಪಾದನೆಯೊಂದೇ ನಮ್ಮ ಗುರಿಯಾಗಬಾರದು ಎಂದು ತಿಳಿ ಹೇಳಬೇಕಿದೆ. ಒಂದಲ್ಲಾ ಒಂದು ವೃತ್ತಿ ಮಾಡುತ್ತಿರುವ ಪ್ರತಿಯೊಬ್ಬರು ಇಲ್ಲಿ ಕಾರ್ಮಿಕರೇ,ಯಾವುದೇ ಕೆಲಸ ಇರಲಿ ಅದರಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲಾ ಕೆಲಸನೂ ಸಮವಾದದ್ದು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಭರದಿಂದ, ಕೈ ಮೀರಿದ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿಸಿ ಏನೋ ಸಾಧಿಸುವ ಛಲದಿಂದ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರದೆ ಅವರ ಬಾಲ್ಯವನ್ನು ಕಿತ್ತುಕೊಳ್ಳದೆ, ಅವರಿಗೂ ಅವರ ಬದುಕಿನಲ್ಲಿ ಸೋಲು-ಗೆಲುವು ಮೆಟ್ಟಿ ನಿಂತು ಮೇರು ಪರ್ವತ ಏರಲು ಬಿಡಿ. ಜೊತೆಗಿದ್ದು ಬದುಕಿನ ದಡ ಸೇರಿಸಿ, ಆದರೆ ಅವರ ಜೀವನವನ್ನು ನೀವೇ ಜೀವಿಸಬೇಡಿ!!

ಕಾರ್ಮಿಕ ದಿನದ ವಿಶೇಷ-ಲೇಖನ Read Post »

ಇತರೆ

ಕಾರ್ಮಿಕ ದಿನದ ವಿಶೇಷ -ಲೇಖನ

ಲೇಖನ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಚಂದ್ರು ಪಿ ಹಾಸನ್ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ರ ಸನ್ನುಡಿ ಗಳಂತೆ ಭೂಮಿಯ ಪ್ರತಿಯೊಂದು ಜೀವಿಯು ಜನಿಸಿದ ಮೇಲೆ ತನ್ನದೇ ಆದ ನಿತ್ಯಕರ್ಮ ಗಳಿಂದ ಜೀವನ ನಡೆಸಬೇಕಾಗುತ್ತದೆ ಕಾರ್ಮಿಕ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿದೆ . ಕರ್ಮಯೋಗಿ ಕಾರ್ಮಿಕ ಅವನು ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಕೊಂಡು ತನಗಾಗಿ, ತನ್ನವರಿಗೆ, ನನಗೋಸ್ಕರ ದುಡಿಯುತ್ತಲೇ ಇರುವನು. ಈಗಿರುವಾಗ “ವಿಶ್ವದ ಕಾರ್ಮಿಕರೇ ಒಂದಾಗಿರಿ ಒಂದಾಗಿರಿ” ಇದು ವಿಶ್ವಕಾರ್ಮಿಕ ದಿನಾಚರಣೆಯ ಧ್ಯೇಯವಾಕ್ಯ. “ವಿಶ್ವದಾದ್ಯಂತ ಸಮಾಜವಾದೀ ಸ್ಥಾಪನೆಗೆ ಒಂದಾಗಬೇಕು” ಎಂಬುದು ಇದರ ಉದ್ದೇಶ ಸಮಾಜವಾದದ ಮುಖವಾಡ ಧರಿಸಿ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಅಸಮಾನತೆ ಅನ್ಯಾಯ ಶೋಷಣೆಗಳನ್ನು ಶಾಶ್ವತ ಗೊಳಿಸುತ್ತಿರುವ ರಾಷ್ಟ್ರದ ಆಳುವವರ್ಗಗಳ ಬಂಡಾಯ ಶಾಹಿ ಭೂಮಾಲಿಕ ವರ್ಗಗಳ ಶೋಷಿತ ಆಳ್ವಿಕೆಯನ್ನು ಕೊನೆಗೊಳಿಸಲು ರಾಷ್ಟ್ರದಲ್ಲಿನ ಶೋಷಿತ ಕಾರ್ಮಿಕರು ಹಾಗೂ ಇತರ ಎಲ್ಲಾ ಶೋಷಿತ ವರ್ಗಗಳು ಒಂದಾಗಿ ಈ ಶೊಷಕ  ವರ್ಗದ ಆಡಳಿತಕ್ಕೆ ಅಂತ್ಯ ಹಾಡದಿದ್ದರೆ ಸಂವಿಧಾನದಲ್ಲಿ ಘೋಷಿಸಲ್ಪಟ್ಟಿರುವ ಸಮಾಜವಾದವು ಕೇವಲ ಕಾಗದದ ಆಶ್ವಾಸನೆಯಾದೀತೆ ಹೊರತು ಸಾಮಾಜಿಕ ವಾಸ್ತವಿಕತೆ ಆಗಲಾರದು. ಅಂತೆಯೇ ಈ ಮೇ ದಿನಾಚರಣೆಯ ಸಂದೇಶ ‘ಶೋಷಿತ ಕಾರ್ಮಿಕರು ಒಗ್ಗೂಡಿ ಹೋರಾಟಕ್ಕೆ ಮುಂದಾಗಿ ಸಮಾಜವಾದಿ ಸಮಾಜ ಸ್ಥಾಪನೆಗೆ ಕಂಕಣಬದ್ಧರಾಗಬೇಕು’ ಎಂಬುದಾಗಿದೆ ಈ ಎಲ್ಲಾ ನಿಟ್ಟಿನಲ್ಲಿ ಕಾರ್ಮಿಕನು ತನಗೆ ತನ್ನವರಿಗಾಗಿ ಅವರಿಗೋಸ್ಕರ ಕಾರ್ಮಿಕ ಪ್ರಭುತ್ವದ ಅಡಿಯಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿ ಜೀವನ ಸಾಗಿಸುತ್ತಾ ಇಂತಹ ಒಂದು ನಿಟ್ಟಿನಲ್ಲಿ ನಡೆಯುತ್ತಿರುವ ಇವನಿಗೊಂದು ದಿನವನ್ನು ಮೀಸಲಿಟ್ಟರೆ ಅದಕ್ಕೆ ಶುಭ ಅರ್ಥ ಸಿಗಬಹುದೆಂಬ ಚಿಂತನೆಗಳು ಅನಾದಿಕಾಲದಿಂದ ಬೆಳೆದುಕೊಂಡು ಬಂದಿತ್ತು. ಕಾರ್ಮಿಕ ಪ್ರಭುತ್ವದ ಕುರುವಿಗಾಗಿ ಮೇ 1 ರಂದು ಉತ್ಸವ ಆಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದನಂತೆ . ಆದರೆ ವಾಸ್ತವವಾಗಿ  1889 ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಯಾವ ಪುರಾವೆಗಳು ದೊರಕಿಲ್ಲ 1889 ರಲ್ಲಿ ಪ್ಯಾರಿಸ್ನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ ಒಂದನೇ ತಾರೀಕು ಅಂತರಾಷ್ಟ್ರೀಯ ಉತ್ಸವವೆಂದು ಆಚರಿಸಬೇಕು ಎಂದು ನಿರ್ಧರಿಸಲಾಯಿತು ಅಲ್ಲದೆ ಮೇ ಒಂದರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯ ಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಹಾಗೆಯೇ ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ ಇದು ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವ ಹೆಚ್ಚಿದ್ದರಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯನ್ನು ಭಾಗವಹಿಸಿದ ಮೊಟ್ಟಮೊದಲ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿ ಇದ್ದ ಭಾರತೀಯ ನಾವಿಕರು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನು ಒಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು 1925ರಂದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ಭಾರತದಲ್ಲಿ ಅವರ ನೆನಪಿಗಾಗಿ ಈ ಮೇ 1 ರಂದು ಕಾರ್ಮಿಕ ದಿನವೆಂದು ಘೋಷಿಸಲಾಯಿತು. 1927 ರಿಂದ ಈಚೆಗೆ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕರ ಮುಖಂಡರು ಭಾಗವಹಿಸಿದ್ದರು, ಅದೇ ರೀತಿ ಎರಡನೇ ಮಹಾಯುದ್ಧದ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರು, ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳ ಒಟ್ಟಾಗಿ ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆ ಪ್ರದರ್ಶನ ನಡೆಸಿದ್ದರು. ಇವೆಲ್ಲದರ ಪರಿಣಾಮವಾಗಿ ಅಂದಿನಿಂದ ಇಂದಿನವರೆಗೆ ಭಾರತದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಪ್ರತಿವರ್ಷ ಮೇ 1. ನೇ ತಾರೀಕಿನಂದು ಆಚರಿಸಲಾಗುತ್ತಿದೆ. ಇದರ ಮಹತ್ವವನ್ನು ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟ್ರ ನಿರ್ಮಾಪಕ ರಷ್ಯಾ ಕ್ರಾಂತಿಕಾರಿ ನಾಯಕ ಲೆನಿನ್ ಬಣ್ಣಿಸಿದ್ದು ಹೀಗೆ “ಒಂದು ಸಂಪ್ರದಾಯ ಕ್ರಿಯೆಯಲ್ಲಿ ಶೋಷಿತವರ್ಗಗಳ ಹಾಗೂ ದೇಶಗಳ ವಿಮೋಚನೆಗಾಗಿ ನಡೆಸಬೇಕಾದ ಕ್ರಾಂತಿಕಾರಿ ಹೋರಾಟಗಳು ರಾಜಕೀಯ ಹೋರಾಟಗಳು ಸಾಮ್ರಾಜ್ಯಶಾಹಿ ವಿರೋಧಿ ಅಂತಾರರಾಷ್ಟ್ರೀಯ ಕಾರ್ಮಿಕವರ್ಗದ ಹೋರಾಟ ಅವಶ್ಯಕವಾದ ಚೈತನ್ಯವನ್ನು ಕಾರ್ಮಿಕರು ಬೆಳೆಸಿಕೊಳ್ಳಬೇಕಾದ ಮಹತ್ವದ ದಿನ ಇದು ತಮಗೆ ಸಂಬಂಧಿಸಿದ ದಿನನಿತ್ಯದ ಬೇಡಿಕೆಗಳಿಗಾಗಿ ಸಣ್ಣ ಸಣ್ಣ ಬೇಡಿಕೆಗಳಿಗಾಗಿ ಆಂದೋಲನ ನಡೆಸುವ ಸಂದರ್ಭವಲ್ಲ ಇದು ಅಂತರವನ್ನು ಅರಿತುಕೊಂಡು ಮೇ ದಿನವನ್ನು ಆಚರಿಸುವುದು ಅತ್ಯವಶ್ಯ” ಎಂದು ಈ ಒಂದು ಸಂದೇಶ ನಿಜಕ್ಕೂ ಅದ್ಭುತವಾಗಿದೆ ಒಂದು ನಿಟ್ಟಿನಲ್ಲಿ ಕಾರ್ಮಿಕ ದಿನ’ವನ್ನು ಆಚರಿಸಬೇಕಾಗಿದೆ ಒಬ್ಬ ಕಾರ್ಮಿಕನು ಇತರರ ಅಧೀನದಲ್ಲಿ ಅಂದರೆ ತಮ್ಮ ಸೇವಕ ದಾರರ, ಉದ್ಯೋಗದಾತರ ಗಣಿಗಳ ಅಥವಾ ಯಜಮಾನರ ಕೈಕೆಳಗೆ ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಕೆಲವು ಕಾನೂನುಗಳು ಇವನ್ನು ಕೈಗಾರಿಕ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದು ಕರೆಯಬಹುದು. ಉದ್ಯೋಗದಾತ ಅವನ ಅಧೀನದಲ್ಲಿ ಕೆಲಸ ಮಾಡುವವನಿಗೆ ಏರ್ಪಡುವ ಸಂಬಂಧವನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ ಯಜಮಾನ ಕಾರ್ಮಿಕರ ನಡುವಿನ ಸಂಬಂಧ ವಾಸ್ತವವಾಗಿ ಇರಲಿ ಅಥವಾ ಮುಂದೆ ಉದ್ಭವಿಸುವ ಅಂತದ್ದಾಗಿರಲಿ ಕಾರ್ಮಿಕನ ದುಡಿಮೆ ದೈಹಿಕವಾದ್ದಾಗಿರಲಿ, ಮಾನಸಿಕವಾದ್ದಾಗಿರಲಿ ಇಂಥ ಎಲ್ಲ ಸಂದರ್ಭಗಳಿಗೂ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತದೆ. ಸ್ವತಂತ್ರವಾಗಿ ದುಡಿಮೆ ಮಾಡುವ ಕಾರ್ಮಿಕ ಕಾನೂನು ಅನ್ವಯಿಸುವುದಿಲ್ಲ. ವ್ಯಾಪಕವಾದ ಅರ್ಥದಲ್ಲಿ ಪರಿಗಣಿಸಿದಾಗ ಸಂಘಟನೆ ನಿರುದ್ಯೋಗ ನಿವಾರಣೆ ಕೈಗಾರಿಕಾ ಸಂಬಂಧಗಳು, ಮುಷ್ಕರಗಳು, ಕಾರ್ಖಾನೆಗಳ ಬೀಗಮುದ್ರೆ ಸಂಬಂಧಿಸಿದ ಕಾನೂನು ಗಳನ್ನು ತೆಗೆದುಕೊಂಡು ಅದರಂತೆ ನಡೆಯುವುದು ಈ ದಿನದ ಮಹತ್ವ ಮತ್ತು ಅವರ ಕರ್ತವ್ಯವಾಗಿದೆ. ಕಾರ್ಮಿಕನಿಗೆ ತೊಂದರೆಯಾಗದಂತೆ, ನೆಮ್ಮದಿಗೆ ಭಂಗವಾಗದಂತೆ, ಅವನ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಈ ದಿನದ ಸಂದೇಶ ಹಾಗೂ ಉದ್ದೇಶ. ಕಾರ್ಮಿಕರ ದುಡಿಮೆಯ ಸಮಯದಲ್ಲಿ ಸಂಭವಿಸಬಹುದಾದ ಕ್ಷ ತಿ ಅಥವಾ ಸಾವಿಗೆ ಸೂಕ್ತ ಪರಿಹಾರ ನೀಡುವ ಕಾಯ್ದೆಯನ್ನು ಸರ್ಕಾರ ಅಂಗೀಕಾರ ಮಾಡಿದೆ ಈ ಎಲ್ಲಾ ಪ್ರಯೋಜನಗಳಿಂದ ಉದ್ಭವ ವಾದ ಕಾರ್ಮಿಕ ದಿನಾಚರಣೆ ಯನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಮುಖ್ಯವಾಗಿ ಆಚರಿಸುವ ಸಂಭ್ರಮದ ದಿನ, ಉತ್ಸವದ ದಿನ “ಲೇಬರ್ ಡೇ”. ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಯಲ್ಲಿ ಪ್ರತಿವರ್ಷ ಈ ದಿನದ ಮಹತ್ವವನ್ನು ಪ್ರಪಂಚದ ಹಲವು ದೇಶಗಳಲ್ಲಿ ಅತಿ ಸಡಗರದಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನದಂದು ಕಾರ್ಮಿಕ ಆಂದೋಲನ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ, ಅಲ್ಲದೆ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕರ ಮೆರವಣಿಗೆ ಪ್ರದರ್ಶನ ಏರ್ಪಡಿಸಿ ಮಾನವೀಯ ಮೌಲ್ಯಗಳೊಂದಿಗೆ ವಿಶೇಷತೆಯನ್ನು ಮತ್ತು ಕಾರ್ಮಿಕ – ಮಾಲೀಕರ ಸಹಭಾಗಿತ್ವವನ್ನು ಇಲ್ಲಿ ಜರುಗಬಹುದಾದ ಕಾರ್ಮಿಕ ಕಾನೂನುಗಳನ್ನು ಪರಸ್ಪರ ಆರೋಗ್ಯಕರ ಹಂಚಿಕೆಯಿಂದ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಬಹುದು **********

ಕಾರ್ಮಿಕ ದಿನದ ವಿಶೇಷ -ಲೇಖನ Read Post »

ಇತರೆ

ಬಸವ ಜಯಂತಿ

ಬಸವ ಜಯಂತಿ ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..! ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ… ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು… ಬಸವಣ್ಣನವರು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತ ಇದೆ.) … ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದವರು ಬಸವೇಶ್ವರರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನೀವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೂಡುವಂತಹುದು ಆದ್ದರಿಂದ ಅಕ್ಕನಿಗೆ ಕೋಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ… ಧಾರ್ಮಿಕ ಬೆಳವಣಿಗೆ— ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧವಾಗಿದೆ ಎಂದು ಬಸವಣ್ಣ ಸಾರಿದರು. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣನವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ ಎಂದೂ ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಟೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು… ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ. ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ. ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು… ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಈ ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ… ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗನಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ… ಸಾಮಾಜಿಕ ಸಮಾನತೆ– “ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ ಇವನಮ್ಮವ ಇವನಮ್ಮವ ಇವನಮ್ಮವ ನೆಂದಿನಸಯ್ಯಾ ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ.” ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು. ಜನಿವಾರ ಧರಿಸುವ ಬ್ರಾಹ್ಮಣ ಓದಿರಬಹುದು, ಬರೆದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ಕಾದಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ. ಆದರೆ ಉತ್ಪಾದನೆಯಲ್ಲಿ ತೊಡಗಿದ ಕಾಯಕಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೇ ಸುಖಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೊ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದವರು. ಅಂತೆಯೆ ಬಸವಣ್ಣನವರು ಕಟ್ಟಕಡೆಯ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. “ಜಾತಿ ಸಂಕರ ವಾದ ಬಳಿಕ ಕುಲವನರಸುವರೆ” ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು..! ********** ಕೆ.ಶಿವು.ಲಕ್ಕಣ್ಣವರ

ಬಸವ ಜಯಂತಿ Read Post »

ಇತರೆ

ಅಪ್ಪಟ ಕನ್ನಡದ ವಿನಯ

ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು ಬಡತನ. ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಂದ ಬಳುವಳಿಯಾಗಿ ಬಂದುದು ಅಭಿಜಾತ ಅಭಿನಯ. ಗುಬ್ಬಿ ಕಂಪನಿಯಲ್ಲಿ ತಂದೆಯ ಪಾತ್ರಾಭಿನಯ ಕಂಡು, ಕಲಿತು ಕೃಷ್ಣಲೀಲೆ ನಾಟಕದ ಬಾಲಪಾತ್ರದೊಂದಿಗೆ ರಂಗಭೂಮಿ ಪ್ರವೇಶ. ಗುಬ್ಬಿಕಂಪನಿ, ಸುಬ್ಬಯ್ಯನಾಯ್ಡು ಕಂಪನಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ರಂಗಾಭಿನಯ ತಿಳಿನೀರು ಕುಡಿದಂತೆ ಒಲಿದು ಬಂದುದು. ಮೇರುನಟನಾಗಿ ಬದುಕಿನುದ್ದಕ್ಕೂ ಡಾ. ರಾಜ್ ಬಾಳಿದ್ದು ವಿನಯವಂತಿಕೆ. ಅದು ಕನ್ನಡದ ವಿನಯ ಮತ್ತು ಅನನ್ಯತೆಯ ಅನುಸಂಧಾನ. ಸಿನೆಮಾದಲ್ಲಿ ಯಥೇಚ್ಛ ಅವಕಾಶಗಳಿದ್ದಾಗಲೂ ವೃತ್ತಿ ಕಂಪನಿ ನಾಟಕಗಳನ್ನು ರಾಜಕುಮಾರ ಮರೆಯಲಿಲ್ಲ. ಬನಶಂಕರಿ ಜಾತ್ರೆಯಲ್ಲಿ ಸಾಹುಕಾರ, ಬೇಡರ ಕಣ್ಣಪ್ಪ ನಾಟಕಗಳ ಪ್ರದರ್ಶನ. ಬನಶಂಕರಿಯಲ್ಲಿ ರಾಜಕುಮಾರ ಜತೆಗೆ ಚಿತ್ರಬ್ರಹ್ಮ ನಾಮಾಂಕಿತ ಜಿ. ವಿ. ಅಯ್ಯರ್, ಹಾಸ್ಯರಸಋಷಿ ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಮೈನಾವತಿ, ಹೀಗೆ ಅನೇಕ ರಂಗದಿಗ್ಗಜರು ಸೇರಿ ಮದ್ರಾಸ ಚಲನಚಿತ್ರ ಕಲಾವಿದರ ಸಂಘದಿಂದ ನಾಟಕಗಳ ಪ್ರದರ್ಶನ. ಆ ಕಾಲದಲ್ಲಿ ರಾಮಸಾಗರದ ಹನುಮಂತಪ್ಪ, ಡಾವಣಗೇರಿಯ ಆರ್. ಜಿ. ಶಿವಕುಮಾರ್ ಬನಶಂಕರಿ ಜಾತ್ರೆಯಲ್ಲಿ ಗುತ್ತಿಗೆ ಮೇಲೆ ಕ್ಯಾಂಪ್ ಮಾಡಿಸುತ್ತಿದ್ದರು. ನೆನಪಿರಲಿ ಈಗಿನ ಗುತ್ತಿಗೆದಾರರ ಕಲ್ಚರಲ್ ಮಾಫಿಯಾ ಅವರದಾಗಿರಲಿಲ್ಲ. ಅಭಿಮಾನಿಗಳನ್ನು ದೇವರೆಂದು ಕರೆದ ಕನ್ನಡದರತ್ನ ಡಾ. ರಾಜಕುಮಾರ ಅವರಂತಹ ಮಹಾನ್ ರಂಗಚೇತನ ಕನ್ನಡ ವೃತ್ತಿರಂಗಭೂಮಿಯಿಂದ ಬಂದವರೆಂಬ ಹೆಮ್ಮೆನಮ್ಮದು. ಅಂಥವರು ಬದುಕಿದ ರಂಗಭೂಮಿಯ ಆತ್ಮಗೌರವ ಕಟ್ಟುನಿಟ್ಟಾಗಿ ಕಾಪಾಡೋಣ ಎಂಬ ರಂಗಸಂಕಲ್ಪ ಅವರ ಜನ್ಮದಿನದಂದು ಮಾಡೋಣ. ***********

ಅಪ್ಪಟ ಕನ್ನಡದ ವಿನಯ Read Post »

ಇತರೆ

ಪ್ರಸ್ತುತ

ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ಕೂಡಿಹಾಕಿಕೊಂಡ ಸಂಪತ್ತುಗಳೆಲ್ಲವೂ ವೈರಾಣುವಿನ ಎದುರು ನಿಷ್ಪಲವಾದವು. ಯಾಕೆಂದರೆ , ಪ್ರಕೃತಿಯ ನಿಯಮದ ವಿರುದ್ಧವಾಗಿ ಮಾನವನ ಆಹಾರ ಪದ್ಧತಿ ಬೆಳೆದು ಬಂದಿತ್ತು. ಪಶು, ಪಕ್ಷಿ, ಪ್ರಾಣ ಗಳು ಇರುವುದೇ ತನ್ನ ಜಿವ್ಹಾ ಚಾಪಲ್ಯ ತಣ ಸುವುದಕ್ಕಾಗಿ ಎಂಬ ರೀತಿಯಲ್ಲಿ ಮಾನವರು ವರ್ತಿಸುತ್ತಿದ್ದಾರೆ. ಕೊರೊನಾ ಪೀಡಿತರ ಆಹಾರ ಪದ್ಧತಿಯನ್ನು ಗಮನಿಸಿದಾಗ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ. ಧಾನ್ಯ, ಹಣ್ಣು, ತರಕಾರಿಗಳೇ ಮಾನವನ ಸಹಜ ಆಹಾರವಾಗುವ ರೀತಿಯಲ್ಲಿ ಜೀರ್ಣಾಂಗಗಳನ್ನು ಪ್ರಕೃತಿ ರೂಪಿಸಿದೆ. ಮಾಂಸಾಹಾರ ಸೇವನೆ ಪ್ರಕೃತಿ ವಿರೋಧಿಯಾಗಿರುವುದರಿಂದ ಅಂಥವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಬಹು ಬೇಗ ರೋಗಗ್ರಸ್ತರಾಗುತ್ತಾರೆ. ಕೊರೊನಾ ವೈರಾಣುವಿನ ಕುರಿತು ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ. ಮನೆಯಿಂದ ಹೊರಗೆ ಬಂದರೆ ಕೊರೊನಾ ಭೂತ ಹೊತ್ತೊಯ್ದು ಸತ್ತೇ ಹೋಗುತ್ತೇವೆಂದು ಜನ ಭಯಭೀತರಾಗಿದ್ದಾರೆ. ಈ ವೈರಾಣುವಿನಿಂದ ಪೀಡಿತರಾಗಿ ಮರಣಹೊಂದಿದವರಲ್ಲಿ ಹೆಚ್ಚಿನವರು ಈಗಾಗಲೇ ಇತರೆ ರೋಗಗಳಿಂದ ಬಳಲುತ್ತಿರುವವರು ಎಂದು ಸಾಬೀತಾಗಿದೆ. ಭಾರತದಲ್ಲಿ ಸಂಭವಿಸಿದ ಕೊರೊನಾ ಸಾವುಗಳಲ್ಲಿ ಶೇಕಡಾ 85 ಜನರಿಗೆ ಗಂಭೀರ ಸ್ವರೂಪದ ಇತರೆ ಕಾಯಿಲೆಗಳಿದ್ದವೆಂದು ಸರ್ಕಾರವೇ ಹೇಳುತ್ತಿದೆ. ಮಧುಮೇಹ, ಕ್ಯಾನ್ಸರ್, ಕ್ಷಯ, ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಹುಬೇಗ ವೈರಾಣು ರೋಗಕ್ಕೆ ಬಲಿಯಾಗುತ್ತಾರೆಂಬುದು ಸಿದ್ಧವಾಗಿದೆ. ಪ್ರಕೃತಿ ವಿರೋಧಿ ಬದುಕಿನ ಜೀವನ ವಿಧಾನವೇ ಇಂತಹ ಕಾಯಿಲೆಗಳ ಮೂಲ ಕಾರಣವೆಂಬುದು ವೈದ್ಯ ವಿಜ್ಞಾನದ ಹೇಳಿಕೆ. ಕೊರೊನಾ ಪ್ರಸರಣ ತಡೆಯುತ್ತೇವೆಂಬ ಭ್ರಮೆಯಲ್ಲಿ ಹಲವು ದೇಶಗಳು ಲಾಕ್‍ಡೌನ್ ಘೋಷಿಸಿಕೊಂಡು, ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಂಡಿವೆ. ಇದರ ಪರಿಣಾವದಿಂದಾಗಿ ಕಲುಷಿತಗೊಂಡಿದ್ದ ಎಷ್ಟೋ ನದಿಗಳು ಶುದ್ಧವಾಗುತ್ತಿವೆ; ವಾಯುಮಾಲಿನ್ಯ ಕಡಿತಗೊಂಡಿದೆ, ಪರಿಸರ ಸ್ವಚ್ಛಗೊಳ್ಳುತ್ತಿದೆ, ಇದೇ ರೀತಿ ಲಾಕ್‍ಡೌನ್ ತೆರವುಗೊಂಡ ನಂತವೂ ಮುಂದುವರಿಯುತ್ತದೆಂದು ನಂಬಲು ಯಾವುದೇ ಆಧಾರಗಳಿಲ್ಲ. ಪ್ರಕೃತಿಯನ್ನು ದೋಚಿಯೇ ಮಾನವನ ಭೌತಿಕ ಸೌಲಭ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ತಪ್ಪುಗ್ರಹಿಕೆ ಹಾಗೂ ಸ್ವಾರ್ಥಕೇಂದ್ರಿತ ಚಿಂತನೆಯ ಆಧಾರದಲ್ಲಿ ರೂಪುಗೊಂಡಿರುವ ಬಂಡವಾಳವಾದಿ ಚಿಂತನೆಯಿಂದ ನಮ್ಮ ಆರ್ಥಿಕ ರೀತಿ- ನೀತಿಗಳು ರೂಪುಗೊಂಡಿವೆ. ದಶಕಗಳಿಂದಲೂ ಪರಿಸರಕ್ಕೆ ವಿಷ ಕಕ್ಕುತ್ತಿದ್ದ ಉದ್ಯಮಗಳು ಲಾಕ್‍ಡೌನ್ ತೆÉರವಿನ ನಂತರ ಕಾರ್ಯಾರಂಭ ಮಾಡಿ, ತಮ್ಮ ಮಾಲಿನ್ಯಕಾರಿ ಕ್ರಮವನ್ನು ಮುಂದುವರಿಸುತ್ತವೆ. ಇವುಗಳನ್ನು ತಡೆಯುವ, ಪರಿಸರ ಸ್ನೇಹಿ ಉದ್ಯಮನೀತಿಯನ್ನು ರೂಪಿಸಿಕೊಂಡಿರದ ಕಾರಣಕ್ಕಾಗಿ ಮುಂದೆ ಇನ್ನೊಂದು ದುರಂತಕ್ಕೆ ಆವ್ಹಾನ ನೀಡುವ ಸಿದ್ಧತೆ ನಡೆಸುತ್ತಿದ್ದೇವೆ. ಕಳೆದ 15 ವರ್ಷಗಳಿಂದೀಚೆಗೆ ಒಂದಾದ ನಂತರ ಒಂದರಂತೆ ವೈರಸ್‍ನ ಹೊಸ ಹೊಸ ರೂಪಗಳು ಮಾನವ ಸಮಾಜವನ್ನು ಕಾಡುತ್ತಿವೆ; ಆದರೂ ನಾವು ಇನ್ನೂ ಪಾಠ ಕಲಿತಿಲ್ಲ. ಚೀನಾ ದೇಶ ತೋಡಿದ ಲಾಕ್‍ಡೌನ್ ಎಂಬ ಖೆಡ್ಡಾದಲ್ಲಿ ಪಾಶ್ಚಾತ್ಯ ದೇಶಗಳು ಸುಲಭದಲ್ಲಿ ಬಿದ್ದವು. ಭಾರತ ತಾನಾಗಿಯೇ ಈ ಖೆಡ್ಡಾದಲ್ಲಿ ಹಾರಿ ಸಿಲುಕಿಕೊಂಡಿದೆ. ಅಂತರಾಷ್ಟ್ರೀಯ ಮನ್ನಣೆ ಗಳಿಸುವ ಉದ್ದೇಶದಿಂದ, ಯಾವ ಪೂರ್ವ ತಯಾರಿಯೂ ಇಲ್ಲದೆಯೇ ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದಾಗಿ ಕೋಟಿಗಟ್ಟಲೇ ಜನರು ಅನಗತ್ಯವಾಗಿ ತೊಂದರೆಗೆ ಸಿಲುಕಿದರು. ವೈರಿ ಪಡೆಯ ಮೇಲೆ ಆಕ್ರಮಣ ಮಾಡುವ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಲಾಕ್‍ಡೌನ್ ಘೋಷಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಸಾಕಷ್ಟು ಪೂರ್ವ ತಯಾರಿ, ಪೂರ್ವ ಸೂಚನೆಗಳನ್ನು ನೀಡಿ ಲಾಕ್‍ಡೌನ್ ಜಾರಿಗೆ ತಂದಿದ್ದರೆ ಇಷ್ಟೊಂದು ಆವಾಂತರಗಳಾಗುತ್ತಿರಲಿಲ್ಲ. ಪೋಲೀಸ್ ಬಲವನ್ನು ನೆಚ್ಚಿಕೊಂಡು ಜನರನ್ನು ಬಲವಂತವಾಗಿ ಮನೆಗೆ ಸೀಮಿತಗೊಳಿಸಬೇಕಿರಲಿಲ್ಲ. ಸರ್ಕಾರದ ಬೆದರಿಕೆ , ರೋಗದ ಭಯ ಯಾವುದನ್ನೂ ಲೆಕ್ಕಿಸದೇ, ತಮ್ಮ ಊರುಗಳಿಗೆ ವಾಪಸು ಹೋಗಲು ಜನರು ಸಾಲುಗಟ್ಟಿದರು; ನೂರಾರು ಕಿಲೋ ಮೀಟರ್ ನಡೆದೇ ಸಾಗಿದರು. ಕೆಲಸವನ್ನು ಕಳೆದುಕೊಂಡು, ದುಡಿಮೆಯ ಅವಕಾಶವಿಲ್ಲದೇ, ಉಪವಾಸ ಸಾಯುವುದಕ್ಕಿಂತ, ತಮ್ಮ ಊರನ್ನು ಸೇರಬೇಕೆಂಬ ತವಕ, ರೋಗ ಪೀಡಿತರಾಗಿ ತಮ್ಮ ಊರಿನಲ್ಲಿ ಸತ್ತರೂ ಚಿಂತೆಯಿಲ್ಲವೆಂಬ ಅವರ ಆಕ್ರಂದನ ಅಧಿಕಾರದಲ್ಲಿದ್ದವರಿಗೆ ಅರ್ಥವೇ ಆಗಲಿಲ್ಲ. ಯಾಕೆಂದರೆ ಈ ರೀತಿಯಾಗಿ ನಡೆಯುವ ಕಾರ್ಮಿಕರ ಮರುವಲಸೆಯನ್ನು ಅವರು ನಿರೀಕ್ಷಿಸಿರಲಿಲ್ಲ. ದಿನದ ದುಡಿಮೆಯನ್ನು ಆಧರಿಸಿಯೇ ಬದುಕಬೇಕಾದ ಸ್ಥಿತಿಯಲ್ಲಿರುವ ಕಾರ್ಮಿಕರು, ಸ್ವ- ಉದ್ಯೋಗಿಗಳು, ಚಿಕ್ಕ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ರೈತರುಗಳಿಗೆ ಆಗುವ ಕಷ್ಟವೂ ಸರ್ಕಾರ ನಡೆಸುವವರು ಗಂಭೀರವಾಗಿ ಪರಿಗಣ ಸಿಯೇ ಇಲ್ಲ. ಸರ್ಕಾರದಿಂದ ಒಂದಷ್ಟು ಕೊಡುಗೆಗಳನ್ನು ಕಾಲಕಾಲಕ್ಕೆ ಘೋಷಿಸಿ, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಂತುಷ್ಟಗೊಳಿಸಲು ಸಾಧ್ಯವೆಂದು ರಾಜಕಾರಣ ಗಳಿಗೆ ತಿಳಿದಿದೆ. ಅತಿ ಶ್ರೀಮಂತ ವರ್ಗ ಮತ್ತು ಆಳುವ ಪಕ್ಷಕ್ಕೆ ದೊಡ್ಡ ಮೊತ್ತದ ದೇಣ ಗೆ ನೀಡುವವರ ಹಿತಾಸಕ್ತಿ ಕಾಯುವುದೇ ತಮ್ಮ ಗುರಿ ಎಂಬಂತೆ ಸರ್ಕಾರದ ನೀತಿಗಳು ರೂಪುಗೊಳ್ಳುತ್ತಿವೆ. ಬಡವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ನೀಡಿ ಸಂತುಷ್ಟಿಗೊಳಿಸುವ ಪ್ರಯತ್ನ ನಡೆದಿದೆ. ಅಕ್ಕಿ, ಬೇಳೆಯ ಹೊರತಾಗಿ ಇತರ ವೆಚ್ಚಗಳಿಗಾಗಿ ಅವರು ಏನು ಮಾಡಬೇಕೆಂಬ ಕುರಿತು ಸರ್ಕಾರ ನಡೆಸುವವರಿಗೆ ಯೋಚನೆ ಇದ್ದಂತಿಲ್ಲ. ಅತ್ತ ಬಿಪಿಎಲ್ ಕಾರ್ಡ್ ಹೊಂದಿರದ, ಇತ್ತ ದೊಡ್ಡ ಉಳಿತಾಯವನ್ನೂ ಹೊಂದಿರದ ಸ್ವ- ಉದ್ಯೋಗಿಗಳು, ಚಿಕ್ಕ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರ ಸಂಕಷ್ಟಗಳ ಕುರಿತು ಲಾಕ್‍ಡೌನ್ ಮಾಡಿ ಒಂದು ತಿಂಗಳಾಗುತ್ತಿದ್ದರೂ ಸರ್ಕಾರದ ಸ್ಪಂದನೆಯಿಲ್ಲ. ಬಂಡವಾಳವಾದದ ಮೂಲತತ್ವವೇ ಲಾಭ ಗಳಿಕೆಯನ್ನು ಹೆಚ್ಚಿಸುವುದು. ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಶಕ್ತಿಯನ್ನು ಬಳಸಿ ಉದ್ಯಮ ನಡೆಸುವಾಗ, ಒಳಸುರಿಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕು ಹಾಗೂ ಮಾರಾಟ ಮಾಡುವಾಗ ಅತಿ ಹೆಚ್ಚು ಲಾಭ ಸಿಗಬೇಕೆಂಬ ನೀತಿ ಅನುಸರಿಸಲಾಗುತ್ತಿದೆ. ಇದು ನಿಸರ್ಗ ಹಾಗೂ ಮಾನವರ ಶೋಷಣೆಗೆ ಕಾರಣವಾಗುತ್ತದೆ. ಕೇಂದ್ರೀಕೃತ ಉದ್ದಿಮೆಗಳಿಂದಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ನಗರಗಳ ಅವ್ಯವಸ್ಥಿತ ಬೆಳವಣ ಗೆ, ಕೊಳೆಗೇರಿಗಳು ಹೆಚ್ಚುತ್ತವೆ. ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆಥಿರ್üಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ. ಆದರೆ ಮಾನವನ ದುರಾಸೆಯಿಂದಾಗಿ ಇದರ ವಿರುದ್ಧ ದಿಸೆಯಲ್ಲಿ ಸಮಾಜ ನಡೆಯುತ್ತಿದೆ. ಚಿಕ್ಕಪುಟ್ಟ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವದು ಅನಿವಾರ್ಯವಾಗುತ್ತಿದೆ. ಇಂತಹ ನಿಸರ್ಗ ವಿರೋಧಿ ವ್ಯವಸ್ಥೆಗೆ ಕಾರಣವಾದ ಬಂಡವಾಳವಾದವು ಪ್ರಕೃತಿ ವಿರೋಧಿ. ಇಡೀ ಜಗತ್ತು ಬಂಡವಾಳವಾದವನ್ನು ಅನುಸರಿಸುತ್ತಿರುವುದರಿಂದ ಹೊರ ಬರಲು ಪ್ರಕೃತಿ ಎಚ್ಚರಿಸುತ್ತಿದೆ. ಭಾರತದಲ್ಲಿ ಲಾಕ್‍ಡೌನ್ ಪ್ರಾರಂಭವಾದಾಗಿನಿಂದ ಮರುವಲಸೆಯ ಮಹಾಪರ್ವ ಪ್ರಾರಂಭವಾಗಿದೆ. ಇದು ಬಹು ಗಂಭೀರವಾದ ಸಮಸ್ಯೆಯೆಂಬುದನ್ನು ಆಳುವ ಪ್ರಭುಗಳು ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ. ಲಾಕ್‍ಡೌನ್‍ಗೂ ಮೊದಲೇ ಪ್ರಾರಂಭವಾದ ಆರ್ಥಿಕ ಹಿಂಜರಿತದಿಂದ ಅದಾಗಲೇ ಇದ್ದ ನಿರುದ್ಯೋಗ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ. ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮದಿಂದಾಗಿ ಸ್ಥಗಿತವಾಗಿರುವ ಉದ್ದಿಮೆ, ವ್ಯಾಪಾರ-ವಹಿವಾಟುಗಳು ಪ್ರಾರಂಭವಾಗಲು ತಿಂಗಳುಗಳೇ ಬೇಕು. ಪೂರ್ಣ ಪ್ರಮಾಣದಲ್ಲಿ ನಡೆಯಲು ಆರು ತಿಂಗಳಿನಲ್ಲೂ ಸಾಧ್ಯವಾಗದು. ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗದೇ, ಇರುವ ಉದ್ಯೋಗಾವಕಾಗಳು ಕ್ಷೀಣ ಸುವ ಸಾಧ್ಯತೆಗಳಿವೆ. ರೈತರು ಬೆಳೆದ ಬೆಳೆಗಳು ಹೊಲದಲ್ಲೇ ನಷ್ಟವಾಗುತ್ತಿವೆ ಅಥವಾ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಹೈನುಗಾರರು, ಪಶು ಸಂಗೋಪನಾಕಾರರು, ಮೀನುಗಾರರ ಪರಿಸ್ಥಿತಿ ಕೂಡಾ ಆಶಾದಾಯಕವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರ ಖರೀದಿ ಶಕ್ತಿ ಕುಂಠಿತವಾಗಿ ಇಡೀ ಅರ್ಥವ್ಯವಸ್ಥೆಯ ಹಿಂಜರಿತ ತೀವ್ರವಾಗುತ್ತದೆ. ಇವುಗಳ ಪರಿಣಾಮ ನಗರಗಳ ಉದ್ಯಮಗಳ ಹಿನ್ನೆಡೆ, ಉದ್ಯೋಗ ನಷ್ಟ ಹಾಗೂ ಕಾರ್ಮಿಕರ ಮರು ವಲಸೆಯಲ್ಲಿ ಹೆಚ್ಚಳವಾಗಲಿದೆ. ಈ ಮಹಾ ಮರುವಲಸೆಯ ಪರ್ವವನ್ನು ತಡೆಯುವ ಅಥವಾ ಅದನ್ನು ಪರಿಹರಿಸುವ ಯಾವ ಚಿಂತನೆ, ಕಾರ್ಯ ಯೋಜನೆಗಳು ಇಂದಿನ ಸರ್ಕಾರಗಳಿಗೆ ಇಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ನಿರುದ್ಯೋಗ, ಸಾಮಾಜಿಕ ಸಂಘರ್ಷಗಳು ಪ್ರಾರಂಭವಾಗಲಿವೆ. ಮಾರ್ಚ್‍ನಲ್ಲಿ 21 ದಿನಗಳ ಲಾಕ್‍ಡೌನ್ ಘೋಷಿಸುವಾಗ ಪ್ರಧಾನಿಯವರು ದೇಶವನ್ನು ರಕ್ಷಿಸುವ ಸಲುವಾಗಿ ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದರು. ಮನೆಯಲ್ಲಿ ಉಳಿಯದೇ ಹೊರಗೆ ಬಂದರೆ ಆರ್ಥಿಕವಾಗಿ ದೇಶ 21 ವರ್ಷಗಳಷ್ಟು ಹಿಂದೆ ಹೋಗುವುದಾಗಿ ಎಚ್ಚರಿಸಿದ್ದರು. ಕೇಂದ್ರದ ಶ್ರೀಮಂತರ ಪರ ಆರ್ಥಿಕ ನೀತಿ, ಅವೈಜ್ಞಾನಿಕ ರೀತಿಯಲ್ಲಿ ಅನುಷ್ಟಾನಗೊಳಿಸಿದ ನೋಟು ರದ್ದತಿ ಹಾಗೂ ಅಗತ್ಯವಲ್ಲದ ಲಾಕ್‍ಡೌನ್ ಹೇರಿಕೆಯಿಂದ ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಅವರಿಗೆ ಕಾಣುತ್ತಿಲ್ಲವೇ? ಹೆಚ್ಚಿನ ಭಾರತೀಯರು ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿರುವುದು ಅವರಿಗೆ ಗೋಚರಿಸುತ್ತಿಲ್ಲವೇ? ಬೆರಳೆಣ ಕೆಯ ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದರೂ, ಬುದ್ದಿಯನ್ನು ಒತ್ತೆಯಿಟ್ಟಿರುವ ಮಾಧ್ಯಮದವರು ಹಾಗೂ ಬುದ್ದಿಜೀವಿಗಳೆನಿಸಿಕೊಂಡವರು ಜೈಕಾರ ಹಾಕುತ್ತಿದ್ದಾರೆ. ಯಾಕೆಂದರೆ ಇವರು ಯೋಚಿಸುವುದಕ್ಕೂ ಲಾಕ್‍ಡೌನ್ ವಿಧಿಸಿಕೊಂಡಿದ್ದಾರೆ. ಬಂಡವಾಳಶಾಹಿಗಳ ಹಂಗಿನಲ್ಲಿರುವ, ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ತಮ್ಮ ಬುದ್ಧಿಶಕ್ತಿಯನ್ನೇ ಮಾರಾಟ ಮಾಡಿಕೊಂಡಿರುವವರು ಮಾಧ್ಯಮಗಳಲ್ಲಿ ಹೊಗಳುಭಟರಾಗಿದ್ದಾರೆ. ಒಪ್ಪೊತ್ತಿನ ತುತ್ತಿಗಾಗಿ ಪರಿತಪಿಸುವವರ ಕಷ್ಟ ಇವರಿಗೆ ಅರ್ಥವೇ ಆಗುವುದಿಲ್ಲ. ಸರ್ಕಾರದ ಹಾಗೂ ಫೋಟೊ ಪ್ರಿಯ ದಾನಿಗಳ ಔದಾರ್ಯದಲ್ಲೇ ಜನರು ಸದಾ ಬದುಕುತ್ತಿರಬೇಕೆಂದು ಇವರು ಬಯಸುತ್ತಾರೆ. ಸಾಂಕ್ರಾಮಿಕ ರೋಗ ನಿರ್ವಹಣಾ ತಜ್ಞರ ಅಭಿಪ್ರಾಯದಂತೆ ಲಾಕ್‍ಡೌನ್‍ನಿಂದ ಕೊರೊನಾ ನಿರ್ಮೂಲನೆ ಸಾಧ್ಯವಿಲ್ಲ. ಇದು ತೆರವುಗೊಂಡು ಓಡಾಟ ಪ್ರಾರಂಭವಾದೊಡನೆ ಸೋಂಕು ತಗಲುವವರ ಪ್ರಮಾಣ ಒಮ್ಮೆಲೇ ಹೆಚ್ಚಾಗಲಿದೆ. ( ಆ ಸಂದರ್ಭದಲ್ಲಿ ಲಾಕ್‍ಡೌನ್ ಸಮರ್ಥಕರು ಪುನಃ ಕ್ರಿಯಾಶೀಲರಾಗುತ್ತಾರೆ) ಆದರೆ ಅದಕ್ಕಾಗಿ ಗಾಬರಿ ಪಡಬೇಕಾದ ಅಗತ್ಯವಿಲ್ಲವೆಂದು ಅವರು ಹೇಳುತ್ತಾರೆ. 5 ರಿಂದ 60 ವಯಸ್ಸಿನವರಿಗೆ ಕೊರೊನಾ ಸೋಂಕು ತಗಲುವುದರಿಂದ ಅವರಿಗೆ ಹೆಚ್ಚಿನ ತೊಂದರೆಯೇನೂ ಆಗುವುದಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂದು ಪ್ರಚಾರ ಮಾಡುತ್ತಿರುವಷ್ಟು ಕೊರೊನಾ ಅಪಾಯಕಾರಿಯಲ್ಲವೆಂದು ವಾದಿಸುವವರ ಹೇಳಿಕೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗುತ್ತಿದೆ. ಶುದ್ಧ ಗಾಳಿಯ ಸೇವನೆ , ನಡಿಗೆ, ಧನಾತ್ಮಕ ಚಿಂತನೆಗಳು, ಮನಸ್ಸಿಗೆ ಉಲ್ಲಾಸ ನೀಡುವ ದೈಹಿಕ ಚಟುವಟಿಕೆಗಳಿಂದ ಉಸಿರಾಟ ಸಂಬಂಧಿತ ಕೊರೊನಾ ಹಾಗೂ ಇತರ ರೋಗಗಳ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು. ಹದಗೆಡುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಕೊರೊನಾ ನೆಪದ ಲಾಕ್‍ಡೌನ್ ತಲೆಗೆ ಕಟ್ಟಲು ಕೇಂದ್ರ ಪ್ರಯತ್ನಿಸುತ್ತಿದೆ ಎಂಬ ಆಪಾದನೆಗೆ ಪುಷ್ಠಿ ನೀಡುವಂತಹ ಹಲವು ಘಟನೆಗಳು ನಡೆಯುತ್ತಿವೆ. ಉದಾಹರಣೆಗಾಗಿ ಪಕ್ಷಾಂತರ ಪರ್ವ ನಡೆಸಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿರುವದು; ಲಾಕ್‍ಡೌನ್ ಸಂದರ್ಭದಲ್ಲೇ ವಿಡಿಯೋ ಸಂವಾದದ ಸಭೆ ನಡೆಸಿ ಶರಾವತಿ ಭೂಗರ್ಭ ವಿದ್ಯುತ್ ಯೋಜನೆಯ ಅಧ್ಯಯನಕ್ಕೆ ಸಮ್ಮತಿ ನೀಡಿರುವುದು; ಪ್ರಧಾನಮಂತ್ರಿ ಪರಿಹಾರ ನಿಧಿಯೆಂಬ ಖಾತೆಯಿರುವಾಗಲೂ ಪಿಎಂ ಕೇರಸ್ ಖಾತೆ ಪ್ರಾರಂಭ ಮಾಡಿರುವುದು; ವಿದೇಶಿ ನೇರ ಹೂಡಿಕೆಗೆ ಕೆಲವು ದೇಶಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವುದು ಇತ್ಯಾದಿ. ಸಾಂಕ್ರಾಮಿಕ ಶ್ವಾಸಕೋಶದ ರೋಗವಾದ ಕ್ಷಯದಿಂದ ಭಾರತದಲ್ಲಿ ಪ್ರತಿದಿನ ಸರಾಸರಿ 1200 ಜನರು ಸಾಯುತ್ತಿದ್ದರೂ, ಅದರ ಕುರಿತು ನೀಡಬೇಕಾದ ಕಾಳಜಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಮಹತ್ವವನ್ನು ಕೊರೊನಾಕ್ಕೆ ನೀಡುತ್ತಿರುವುದರ ಹಿನ್ನೆಲೆ ಏನು? ಹುಟ್ಟು– ಸಾವುಗಳನ್ನು ನಿರ್ಣಯಿಸುವುದು ಮಾನವನನ್ನು ಮೀರಿದ ಪ್ರಕೃತಿ ಶಕ್ತಿ ಎಂಬ ನಂಬಿಕೆಯನ್ನು ಹೂತು ಹಾಕಿ, ತಮ್ಮ ಸಾವನ್ನು ಮುಂದೂಡಲು ಆಡಳಿತ ನಡೆಸುವವರೇ ಸಮರ್ಥರು ಎಂದು ಬಿಂಬಿಸಲು ಯತ್ನಿಸುತ್ತಿರುವವರ ನಡೆ ಅಸಹ್ಯ ಹುಟ್ಟಿಸುತ್ತದೆ. ಆರ್ಥಿಕ, ಸಾಮಾಜಿಕ, ಬೌದ್ಧಿಕ

ಪ್ರಸ್ತುತ Read Post »

ಇತರೆ, ಕಾವ್ಯಯಾನ

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ ಚುಂಬಿಸೊ ದೇವತೆ ಈ ಧರಣಿ ಉಗುಳುವ ಬಾಯ್ಗಳ ತೆಗಳದೆ ತದುಕದೆ ತುತ್ತೀಯುವ ತಾಯಿ ಈ ಜನನಿ ಧರ್ಮವ ಕೇಳದೆ ಜಾತಿಯ ನೋಡದೆ ಎಲ್ಲರ ಹೊರುವಳು ಈ ಭೂಮಿ ಏನನೂ ಕೇಳದೆ ಎಲ್ಲವ ನೀಡುವ ಕರುಣಾ ಮಯಿಯೇ ಈ ಭೂಮಿ ಚಂದದ ಮಣ್ಣನು ರುಚಿ ರುಚಿ ಹಣ್ಣನು ಈಯುವ ದೇವತೆ ಈ ರಮಣಿ ಜೀವ ಜಲವನು ಉಸಿರಾಟಕೆ ಉಸಿರನು ಕರುಣಿಪ ಕರುಳೇ ಈ ಧರಣಿ ದುಡಿಯುವ ಕೈಗೆ ದುಡಿಮೆಯ ನೀಡುವ ಕೊಡುಗೈ ದೇವಿ ಈ ಭೂಮಿ ಸತ್ತರೂ ಎಸೆಯದೆ ಕೈಗಳ ಚಲ್ಲದೆ ಮಡಿಲನೆ ಕೊಡುವಳು ಈ ಜನನಿ ********

ಭೂಮಿ ದಿನ Read Post »

ಇತರೆ

ಪ್ರಸ್ತುತ

ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ.      ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ  ಎಂಬ ಭಾವನೆ ಮೂಡತೊಡಗುತ್ತದೆ.ಕೋಪ ನಿರ್ಲಕ್ಷ ಭಾವನೆಗಳು ಕೂಡ ವ್ಯಕ್ತವಾಗುತ್ತದೆ.ಮಕ್ಕಳ ಪ್ರತೀಕಾರದ,ಅಪರಾಧದ ಸ್ವಭಾವಗಳು  ದ್ವಿಗುಣಗೊಳ್ಳುತ್ತದೆ.    ಬರೀ   ಹೆತ್ತವರಾಗದೆ ಹೃದಯವಂತ ಹೆತ್ತವರಾಗಿ .ಪ್ರೀತಿ ವಾತ್ಸಲ್ಯದೊಂದಿಗೆ ಸ್ವತಂತ್ರ ಆಲೋಚನೆ ಮಾಡಲು ಪ್ರೇರಣೆ ನೀಡಿ.ಆತ್ಮವಿಶ್ವಾಸ,ಧೈರ್ಯ ವೃದ್ಧಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ  ಭಿನ್ನಾಭಿಪ್ರಾಯಗಳು ಬಂದಾಗ ಉಪಶಮನಕ್ಕೆ ಆಲೋಚನಾ ಶಕ್ತಿ ಮದ್ದಾಗುತ್ತದೆ‌.        ಉದ್ವೇಗ,ಭಾವಾತೀರೇಕ ಒಳಗಾಗದೆ ಸೌಮ್ಯ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ.ಮಕ್ಕಳ ಮುಂದೆ ಹುಲಿ ಸಿಂಹಗಳಂತೆ ಎಗರಾಡಿದರೆ ಮಕ್ಕಳು ಹರಿಣರಾಗುವರು. ಮೊನಚಾದ ಟೀಕೆಗಳು ಭವಿಷ್ಯಕ್ಕೆ ಕರಾಳವಾಗುವ ಸಂಭವ ಹೆಚ್ಚು.ಟೀಕೆಗಳು ಸಾಂಧರ್ಭಿಕವಾಗಿ ಸಂವಹನವಾಗಬೇಕೇ ಹೊರತು ಗೆಳೆಯರ ಮುಂದೆ ಮಾನ ಹೋಗುವಂತಹುದಾಗಬಾರದು.  ಅನುಭವಗಳೇ ವ್ಯವಹರಿಸುವ ಪಾಠ ಕಲಿಸುತ್ತದೆ . ತಾಳ್ಮೆ ಅಗತ್ಯ.ಮಕ್ಕಳು ಅನುಕರಣೆ ಮಾಡುತ್ತವೆ ಹಾಗಾಗಿ   ಮಕ್ಕಳ ಮುಂದಿರುವಾಗ ಹೆತ್ತವರ ವರ್ತನೆ ಮೊದಲು ಎಚ್ಚರಿಕೆಯದಾಗಿರಬೇಕು.         ಭಾವನೆಗಳು ಹೊಳೆಯ ಹರಿವಿನಂತೆ.ಹೊಳೆಯ ಹರಿವನ್ನು ನಿಧಾನವಾಗಿ ಹರಿಯ ಬಿಡಬೇಕೆ ಹೊರತು ಭೋರ್ಗರೆವ ಪ್ರವಾಹ ರೀತಿ ಇರಬಾರದು. ಭಾವಶಕ್ತಿಯನ್ನು ಗೌರವಿಸಬೇಕು.ಸರಿಯಾದ ದಾರಿ ಕಲ್ಪಿಸಬೇಕು.ಬಲವಂತ ಮಾರ್ಗಕ್ಕಿಂತ ಮಿಗಿಲಾಗಿ ಅನುಯಯಿಸುವಲ್ಲಿ ಶಕ್ತಿಯಿದೆ.ಹೀಗಾಗಿ ಮಕ್ಕಳ ಜೊತೆ ಉತ್ತಮ ಸಂಬಂಧಗಳನ್ನು ಸ್ಥಾಪಿಸುವುದು ಆದ್ಯ ಕರ್ತವ್ಯವಾಗಬೇಕಿದೆ.ಸಂವೇದನಾಶೀಲತೆಯಿಂದ ಮಕ್ಕಳ ವಿಚಾರಗಳನ್ನು ಆಲಿಸುವ ಮೂಲಕ ಅವರಲ್ಲಿ ಇತ್ಯಾತ್ಮಕ ಬದಲಾವಣೆ ಉಂಟಾಗಬಹುದು.ಮಕ್ಕಳು ಅಲಕ್ಷ್ಯದಿಂದ ಹತಾಶರಾಗುತ್ತಾರೆ.ಹೆತ್ತವರು ಮಕ್ಕಳನ್ನು ಹೃನ್ಮನದಿಂದ ಗೆಲ್ಲಬೇಕು.ಆಲೋಚನೆ ಪ್ರಾರಂಭವಾದರೆ ತಪ್ಪು ನಡುವಳಿಕೆಗಳನ್ನು ಅರಿಯಲಾರಂಭಿಸುತ್ತಾರೆ‌. ಮಕ್ಕಳೊಂದಿಗೆ ಎಚ್ಚರದಿಂದ ವ್ಯವಹರಿಸೋಣ, ಆತಂಕ ದೂರಮಾಡೋಣ. *********

ಪ್ರಸ್ತುತ Read Post »

ಇತರೆ

ಚರ್ಚೆ

ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ ? ಹೀಗಾಗಿ ದೊಡ್ಡ ದೊಡ್ಡ ಬಜೆಟ್ಟಿನ, ಯಥೇಚ್ಛ ಪ್ರಮಾಣದ ಆಮದಾನಿ ಬರುವ ಇಲಾಖೆಯ ಮಂತ್ರಿ ಪದವಿ ಮೇಲೆಯೇ ಅಧಿಕ ಕಣ್ಣುಗಳು. ಊಟದ ಜತೆಗೆ  ಉಪ್ಪಿನಕಾಯಿ ಸೈಡಿಗಿರಲಿ ಎಂಬಂತೆ ಆದಾಯದ ಖಾತೆಗಳ ಜತೆಗೆ ಇದನ್ನು  ನೆಂಚಿಗೆಗೆಂಬಂತೆ ಕನ್ನಡ-ಸಂಸ್ಕೃತಿ ಇಲಾಖೆಯ ಮಂತ್ರಿ ಪದವಿಯ ಬಳಕೆಯಾಗಿರುವುದೇ ಅಧಿಕ.   ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಂದೇ ಎಕ್ಸ್ ಕ್ಲೂಸಿವ್ ಆದಂತಹ ಸಚಿವರಾಗಿ ಪ್ರಮಾಣವಚನ ಪಡೆದು ಪೂರ್ಣ ಪ್ರಮಾಣದ ನ್ಯಾಯದೊರಕಿಸಿ ಕೊಟ್ಟ ನಿದರ್ಶನಗಳು ಕ್ವಚಿತ ಎಂದೇ ಖಚಿತವಾಗಿ ಹೇಳಬಹುದು. ಕೆ. ಎಚ್. ಶ್ರೀನಿವಾಸ್, ಡಾ. ಜೀವರಾಜ ಆಳ್ವ… ಹೀಗೆ ಒಂದೆರಡ್ಮೂರು  ನಿದರ್ಶನಗಳು ದೊರಕಬಹುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಇಂತಹ ನಿದರ್ಶನಗಳು ಇಲ್ಲವೆಂದೇ ಹೇಳಬಹುದು. ಬೇಕೋ ಬೇಡವೋ ಎನ್ನುವವರಿಗೆ ಇಲಾಖೆಯ ಉಸಾಬರಿ. ಹೀಗೆ ಬೇಡದವರಿಗೆ ಬೇಡದ ಖಾತೆ ದೊರಕಿದಾಗ ಇಲಾಖೆಯ ಅಭ್ಯುದಯ ಕನಸಿನ ಮಾತೇ. ಇದು ನಮ್ಮ ಕನ್ನಡದ ಸರ್ಕಾರಗಳು, ಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಕುರಿತಾಗಿ ಹೊಂದಿರುವ ಅನನ್ಯತೆಯೇ ? ಮಾತೆತ್ತಿದರೆ ಕನ್ನಡ ಮತ್ತು ಸಂಸ್ಕೃತಿ ಕುರಿತು ಅಪಾರ ಕಳಕಳಿ ತೋರುವ ರಾಜಕಾರಣಿಗಳಿಗೇ ಇಲಾಖೆ ಕುರಿತು ಖರೇ ಖರೇ ಕಾಳಜಿ ಇಲ್ಲ. ಪ್ರಾಯಶಃ ಅವರೆಲ್ಲರ ಲೆಕ್ಕಾಚಾರವೆಂದರೆ ಈ ಇಲಾಖೆಯ ಬಜೆಟ್ ಅಲ್ಪ ಪ್ರಮಾಣದ್ದು. ಅಜಮಾಸು ನಾಲ್ಕುನೂರು ಕೋಟಿ. ಪ್ರಾಯಶಃ  ಕೆಲವು ಪ್ರಾಧಿಕಾರ, ನಿಗಮ, ಮಂಡಳಿಗಳಿಗಿರಬಹುದಾದಷ್ಟು ಬಜೆಟ್. ಲಾಭಮಾಡಿ ತೋರಿಸಬೇಕೆಂದರೆ ಅದು ಕೆಲವರ ಪ್ರಕಾರ ಅನುತ್ಪಾದಿತ.    ಈ ಬಾರಿ ನಾಲ್ಕುನೂರು ಕೋಟಿಯಲ್ಲಿ ಅರ್ಧದಷ್ಟು ಹಣ ಮಾತ್ರ ಇಲಾಖೆಗೆ ಮೀಸಲಿಟ್ಟಿರುವಾಗ ಕನ್ನಡ ಸಂಸ್ಕೃತಿಯ ಕುರಿತು ಸರಕಾರದ ಕಾಳಜಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ಧದಷ್ಟು ಕಡಿಮೆ ಹಣದಲ್ಲಿ ಕನ್ನಡದ ಸಂಸ್ಕೃತಿ ಕೆಲಸ ಹೇಗೆ ಸಾಧ್ಯ ? ಹತ್ತಾರು ಉತ್ಸವ, ಇಪ್ಪತ್ತೆಂಟು ಜಯಂತಿ, ಹತ್ತಿಪ್ಪತ್ತು ಸಂಖ್ಯೆಯ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಮಾಡುವ ಪ್ರಮುಖ ಜವಾಬ್ದಾರಿ ಇಲಾಖೆಯದು.  ಸಣ್ಣದೊಂದು ಜಿಲ್ಲಾಮಟ್ಟದ ಕಚೇರಿಯಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿವರೆಗೂ ಸಾಮಾನ್ಯ ಕಲಾವಿದ, ಸಾಹಿತಿ, ಜನಪದರಿಗೆ ನಿಲುಕದ ಯೋಜನೆಗಳು. ಈಗೆಲ್ಲವೂ ಗಣಕೀಕರಣದ ಗಮ್ಮತ್ತು. ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಬೇಕು. ತಮಟೆ, ಡೊಳ್ಳು, ಹಲಗೆ, ನುಡಿಸುವ ಹಳ್ಳಿಯ ಅನಕ್ಷರಸ್ಥ ಕಲಾವಿದನಿಗಿದು ನಿಲುಕದ ನಕ್ಷತ್ರ. ಬಹುಪಾಲು ಬುದ್ದಿವಂತ, ಜಾಣರಿಗೇ ಆನ್ ಲೈನ್ ಅರ್ಜಿ ಸಲ್ಲಿಸುವುದು ಹರಸಾಹಸದ ಕೆಲಸ. ಕಡೆಯಪಕ್ಷ ಇದನ್ನಾದರೂ ಇಲಾಖೆ ಸರಳಗೊಳಿಸಬೇಕಿದೆ. ಆದರೆ ಕಲಾವಿದರಿಗೆ ಗೌರವಧನ ” ಆರ್ಟಿಜಿಎಸ್ ” ಮೂಲಕ ಸಲ್ಲಿಕೆಯಾಗುವುದು ಸ್ವಾಗತಾರ್ಹ. ಇನ್ನು ಮಾಸಾಶನ ಮಂಜೂರಾತಿಗಾಗಿ ಗ್ರಾಮೀಣ ಕಲಾವಿದರು ವರ್ಷಗಟ್ಟಲೇ ಕಾಯಬೇಕು. ಕೆಲವರು ಕಾದು ಕಾದೂ ಸತ್ತೇ ಹೋಗುತ್ತಾರೆ. ಹೀಗಾಗಿ ಮಾಸಾಶನ ಕೆಲವರ ಪಾಲಿಗೆ ಒಮ್ಮೊಮ್ಮೆ ಮರಣ ಶಾಸನದಂತಾಗಿದೆ.   ಸಂಸ್ಕೃತಿಯ ಸಂಪ್ರೀತಿ, ಅಂತಃಕರಣದ ಆಡುಂಬೊಲ ಆಗಬೇಕಿದ್ದ ಇಲಾಖೆ, ಇತರೆ ಬ್ಯುರೋಕ್ರಟಿಕ್ ಇಲಾಖೆಗಳ ತರಹ  ದಿನೆ ದಿನೇ ಸಂವಹನಶೀಲತೆ, ಸಹೃದಯತೆ, ಸಾಂಸ್ಕೃತಿಕ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ. ಜನಸಂಸ್ಕೃತಿಯಿಂದ ದೂರ ದೂರ ಸರಿಯುತ್ತಿದೆ. ಕೆಲವು ನಿರ್ದಿಷ್ಟವಾದ ವಾರ್ಷಿಕ ಅನುದಾನಗಳ ಮಂಜೂರಾತಿಯಲ್ಲಿ ಯಥೇಚ್ಛ ಭ್ರಷ್ಟಾಚಾರ. ಇದಕ್ಕಾಗಿಯೇ ಮಧ್ಯವರ್ತಿ ಏಜೆಂಟರುಗಳಿದ್ದಾರೆ. ಈ ಏಜೆಂಟರು ಸರ್ಕಾರದ ಉನ್ನತ ಅಧಿಕಾರ ಮಟ್ಟದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡುವಲ್ಲಿ ನಿಸ್ಸೀಮರು. ಒಬ್ಬರೇ ಬೇರೆ ಬೇರೆ ಹೆಸರುಗಳಲ್ಲಿ ಕಲಾತಂಡ ಕಟ್ಟಿಕೊಂಡಿರುತ್ತಾರೆ. ಅವರಿಗೆಲ್ಲ ಉಲ್ಲೇಖಿತ ಏಜೆಂಟರು ಅನುದಾನ, ಇತರೆ ಕಾರ್ಯಕ್ರಮ ಕೊಡಿಸುವಲ್ಲಿ, ನಡೆಯದ ಕಾರ್ಯಕ್ರಮಗಳ ಜಿಎಸ್ಟಿ ಸಮೇತವಾದ ವ್ಯವಸ್ಥಿತ ದಾಖಲೆಪತ್ರಗಳನ್ನು ಒದಗಿಸುವಲ್ಲಿ ಇವರು ನಿಪುಣ ಪ್ರಳಯಾಂತಕರು.    ಇಂತಹ (ಅ)ವ್ಯವಹಾರದಲ್ಲಿ ಬೆಂಗಳೂರಿಗೆ ಮಾತ್ರ ಅಗ್ರಸ್ಥಾನ ಎಂದುಕೊಳ್ಳಬೇಕಿಲ್ಲ. ದೂರದ ಬೀದರ, ಬಿಜಾಪುರಗಳೇನು ಹಿಂದೆ ಬಿದ್ದಿಲ್ಲ. ಇದೆಲ್ಲದಕ್ಕು ಅಧಿಕಾರಿಗಳ ಫುಲ್ ಸಹಕಾರವಿಲ್ಲದೇ ಸಾಧ್ಯವಿಲ್ಲ. ಕೆಲವು ಮಹಿಳಾ ಅಧಿಕಾರಿಗಳು ಸಹ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ನಿಗೂಢವೇನಲ್ಲ. ಯಾವುದೇ ಸೃಜನಶೀಲ ಕಲೆ ಸರಕಾರದ ಅನುದಾನಗಳನ್ನೇ ಅವಲಂಬಿಸಿ ಬದುಕಬಾರದು. ಹಾಗೆ ಬದುಕಿದಾಗ ಅವುಗಳ ಆತ್ಮಸಾಕ್ಷಿಯ ಗೌರವಕ್ಕೆ ಕುಂದುಂಟು. ಆತ್ಮಗೌರವ ಕಳೆದುಕೊಂಡ ಕಲೆ ಮತ್ತು ಕಲಾವಿದರು ಬಹುಕಾಲ ಬದುಕುವುದಿಲ್ಲ. ಹಾಗೆಂದು ಸರ್ಕಾರದ ಧನಸಹಾಯ ಬೇಡವೆಂಬುದಲ್ಲ. ಅನುದಾನಕ್ಕಾಗಿಯೇ ಕಲಾತಂಡಗಳೆಂಬುದಲ್ಲ. ಈಗ್ಗೆ ಆರೇಳು ದಶಕಗಳ ಹಿಂದೆ ಇಂತಹ ಯಾವ ಆಸೆಬುರುಕತನ ಇಲ್ಲದೇ ಬಹುಸಂಖ್ಯೆಯಲ್ಲಿ ನಾಟಕ ಸಂಸ್ಥೆಗಳು ನವರಸಭರಿತ ರಂಗಸಂಸ್ಕೃತಿಯ ಸಂಚಲನೆ ಮೂಡಿಸಿದ್ದವು. ಈಗಿನಂತೆ ಫುಲ್ ಕಾಮೆಡಿ ಎಂಬ ಟ್ಯಾಗ್ ಲೈನ್ ಹಾಕಿಕೊಂಡು, ಏಕರಸ ಪ್ರಧಾನದ  ಹಾಸ್ಯಕ್ಕಾಗಿಯೇ ನಾಟಕಗಳೆಂದು ಬಿಂಬಿತವಾಗಿರಲಿಲ್ಲ. ಹೌದು ಆಗ ಅಕ್ಷರಶಃ  ಹಾಸ್ಯರಸ ಋಷಿಗಳಿದ್ದರು.    ಸಂಸ್ಕೃತಿಯ ಸದವಕಾಶ ಮತ್ತು ಸೌಲಭ್ಯಗಳ ಕುರಿತು ಸಣ್ಣದೊಂದು ನಿದರ್ಶನ ಇಲ್ಲಿ ಉಲ್ಲೇಖಿಸುವೆ. ಅಮೆರಿಕೆಯ “ಅಕ್ಕ” ಫೆಸ್ಟಿವಲ್ ಸೇರಿದಂತೆ ಬಹುಪಾಲು ಅವಕಾಶಗಳು ಬೆಂಗಳೂರು ಕಡೆಯವರಿಗೇ ದಕ್ಕುತ್ತವೆ. ಅದಕ್ಕೆಲ್ಲ ದೊಡ್ಡಮಟ್ಟದ ಲಾಬಿ. ಯಾಕಂದರೆ ಬೆಂಗಳೂರು ಗು-ಲಾಬಿ ನಗರ ಅಲ್ಲವೇ ? ಹೀಗಾಗಿ ಮತ್ತೆ, ಮತ್ತೆ ಸಿಕ್ಕವರಿಗೇ ಮತ್ತೆ ಮತ್ತೆ ಅವಕಾಶಗಳು. ಒಂದು ಡಜನ್ನಿಗೂ ಹೆಚ್ಚಿಗಿರುವ ಅಕಾಡೆಮಿಗಳು, ಅಲ್ಲದೆ ಪ್ರಾಧಿಕಾರ, ಬಹುಪಾಲು ಪ್ರತಿಷ್ಠಾನಗಳು ಬೆಂಗಳೂರಿನಲ್ಲಿಯೇ ಗೂಟ ಹೊಡೆದುಕೊಂಡಿವೆ. ವಾಸ್ತವವಾಗಿ ಈಗ ಆಗಿರುವುದು ಕರ್ನಾಟಕದ ರಾಜಕೀಯ ಏಕೀಕರಣ. ಅದರಲ್ಲೂ ಎರಡು ಪ್ರಮುಖ ಜಾತಿಗಳ ಏಕೀಕರಣ. ಸಾಂಸ್ಕೃತಿಕ ಏಕೀಕರಣ ಆಗಬೇಕಿದೆ. ಅದರ ಮೂಲಕ ಸಮಗ್ರ ಕರ್ನಾಟಕದ ಸಾಂಸ್ಕೃತಿಕ ವಿಕೇಂದ್ರೀಕರಣದ  ಸಂಪನ್ನತೆ ಸಮೃದ್ಧಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನೀಡಿರುವ “ಸಾಂಸ್ಕೃತಿಕ ನೀತಿ ವರದಿ”ಯನ್ನು ಜಾರಿಗೆ ತರಬೇಕಿದೆ. ಸೋಜಿಗದ ಸಂಗತಿ ಎಂದರೆ ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬಂದಾಗಲೂ ಕನ್ನಡದ ಅಸ್ಮಿತೆ ಹಾಗೂ ಅಭಿವೃದ್ಧಿ ಕುರಿತಾದ ಇಂತಹ ಜನಸಂಸ್ಕೃತಿಪರ  ವರದಿಗಳನ್ನು ನೇಪಥ್ಯಕ್ಕೆ ನುಸುಳಿಸುವ ಹುನ್ನಾರಗಳು ಜಾಣತನದಿಂದಲೇ ಜರುಗುತ್ತವೆ.    ಕೆಲವು ಅಕಾಡೆಮಿಗಳು ಸಾಂಸ್ಕೃತಿಕ ಕ್ರಿಯಾಶೀಲತೆ ಕಳೆದುಕೊಂಡು ಸರಕಾರಿ ಕಚೇರಿಗಳಂತಾಗಿ ಅವು ಪ್ರಶಸ್ತಿಗಳನ್ನು ನೀಡುವ ಯಂತ್ರಗಳಾಗಿವೆ. ಮತ್ತೆ ಕೆಲವು ನೀಡಿದ ಪ್ರಶಸ್ತಿ ವಾಪಸು ಪಡೆಯುವ ನಿರ್ದಯ ಸ್ಥಿತಿ ತಲುಪಿವೆ. ಅವುಗಳ ಏಕತಾನತೆ ಮತ್ತು ಇತರೆ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ಇನ್ನೊಮ್ಮೆ ಬರೆದರಾಯಿತು. ಈ ಬಾರಿಯಂತು ಹಣದ ಕೊರತೆ ಎಂದು ಅವು ಕೊರಗುವಂತಾಗಿದೆ. ಸರಕಾರ ಯಾವ ಪಕ್ಷದ್ದೇ ಇರಲಿ ಕೆಲವರಿಗೆ ಕೆಲವು ಅಕಾಡೆಮಿಗಳ ಸದಸ್ಯತ್ವ ಖಾಯಂ. ಇಂತಹ ಅವಕಾಶವಾದಿಗಳ ಕುರಿತು ಸರ್ಕಾರ ಮತ್ತು ಇಲಾಖೆ ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ  ಕೋಟಿ, ಕೋಟಿ ಹಣ ಖರ್ಚುಮಾಡುವ ರಂಗಾಯಣಗಳು ಏಕತಾನೋತ್ಸವಗಳ ಕೊರೋನಾ ರೋಗದಿಂದ ಬಳಲುತ್ತಿವೆ. ದಶಕಗಳೇ ಕಳೆದರೂ ಜನ ಸಾಮಾನ್ಯರಿಗೆ ರಂಗಾಯಣಗಳ ಪೂರ್ಣ ಪರಿಚಯವೇ ಆಗಿಲ್ಲ. ಜಾಗತಿಕ ಮಟ್ಟದಲ್ಲಿ ಗುರುತರಗೊಂಡಿರುವ ಮೈಸೂರು ರಂಗಾಯಣ  ಜಿಲ್ಲೆಯಾಚೆ ಹೊರ ಜಿಲ್ಲೆಯ ಸಾಮಾನ್ಯ ರಂಗಾಸಕ್ತರ ಗಮನ ಸೆಳೆಯಲಿಲ್ಲ. ಇನ್ನು ಅವುಗಳ ರಂಗ ಸಂಸ್ಕೃತಿಯ ಲಾಭದ ವಿಷಯ ಬಹುದೂರದ ಮುಗಿಲಮಾತು. ಶೇಕಡಾ ಹತ್ತರಷ್ಟು ಜನರನ್ನೂ ರಂಗಾಯಣಗಳು ತಲುಪಿಲ್ಲ. ಜನಸಾಮಾನ್ಯರಿಗೆ ಇವರ ನಾಟಕಗಳು ಅರ್ಥವಾಗುವುದಿಲ್ಲ. ಸಾಮಾನ್ಯರಿಗಾಗಿ ರಂಗಾಯಣ ಅಲ್ಲ  ಬುದ್ದಿಜೀವಿಗಳಿಗೆ ರಂಗಾಯಣ ಎನ್ನುವಂತಾಗಿದೆ. ಅದಕ್ಕೆಂದೇ ಕೆಲವರ ಕಣ್ಣಿಗೆ ರಂಗಾಯಣಗಳು ಬಿಳಿಯಾನೆಗಳಂತೆ ಹೊಳೆಯುತ್ತಿವೆ.  ಜನಮಾನಸದಲ್ಲಿ ಕಂಪನಿ ಶೈಲಿಯ ವೃತ್ತಿ ನಾಟಕಗಳು ಇವತ್ತಿಗೂ ಜನಜನಿತ. ದುರಂತವೆಂದರೆ ಅವು ಸದಭಿರುಚಿ ಬೆಳೆಸುವ ರಂಗಪರಂಪರೆಯಿಂದ ದೂರ ಸರಿದಿವೆ. ಸೋಜಿಗವೆಂದರೆ ಇದುವೇ ಪ್ರಜಾಸತ್ತಾತ್ಮಕ  ರಂಗಸಂಸ್ಕೃತಿಯ ಗೆಲುವು‌ ಎಂಬಂತಾಗಿದೆ.   ಮೊನ್ನೆ, ಮೊನ್ನೆಯಷ್ಟೇ ನಿಧನರಾದ ಪಾಟೀಲ ಪುಟ್ಟಪ್ಪನಂಥವರು, ಅವರ ಪೂರ್ವದ ಕೆ. ವಿ. ಪುಟ್ಟಪ್ಪ, ದ. ರಾ. ಬೇಂದ್ರೆ, ಡಾ. ರಾಜಕುಮಾರ್ ಅಂಥವರು ಸರಕಾರದ ಸಾಂಸ್ಕೃತಿಕ ಮತ್ತು ಕನ್ನಡ ವಿರೋಧಿ ನೀತಿಗಳ ಕುರಿತು ಮಾತನಾಡಿದರೆ ಅಂದು ಪ್ರಭುತ್ವ ಕಣ್ಣು, ಕಿವಿ ತೆರೆದು ಗಂಭೀರವಾಗಿ ಆಲಿಸುತ್ತಿತ್ತು. ಕೂಡಲೇ ವಿಧಾನಸೌಧದ ಮೂರನೇ ಮಹಡಿ ಸೂಕ್ತ ಪರಿಹಾರಕ್ಕೆ  ಮುಂದಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರದ ಇಂತಹ ಅಸಡ್ಡೆತನಗಳ ಬಗ್ಗೆ ಯಾರಾದರೂ  ಧ್ವನಿ ಎತ್ತಿದರೆ ಸಾಕು, ಅದು ಯಾರ ಧ್ವನಿ ?, ಯಾವ ಧ್ವನಿ ? ಅದು ಎಡನೋ, ಬಲನೋ ? ಎಂದು ಅನುಮಾನಿಸುವ ಮಟ್ಟ ಮುಟ್ಟಿರುವುದು ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದು ಕನ್ನಡ ಸಂಸ್ಕೃತಿಯ ಕಡೆಗಣನೆ ಮಾತ್ರವಲ್ಲ. ಕನ್ನಡ ಭಾಷೆ, ಸಂಸ್ಕೃತಿ ಮಾತ್ರವಲ್ಲ ಒಟ್ಟು ಬದುಕಿನ ಮೇಲೆ ಬೀಸುತ್ತಿರುವ ವಿಷಮ ಪಾರಮ್ಯದ ಗಾಳಿಯ ದುರಿತಕಾಲವೆಂದೇ ಭಾವಿಸಬೇಕಾಗುತ್ತದೆ. **********

ಚರ್ಚೆ Read Post »

ಇತರೆ

ಪ್ರಸ್ತುತ

ಇದು  ಲಾಕ್ಡೌನ್ ಸಮಯ ರೇಶ್ಮಾ ಗುಳೇದಗುಡ್ಡಾಕರ್ ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ .     ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ .  ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ . ಮಹಾನಗರಿಗಳು ಮೌನವಾಗಿವೆ.  ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು ಇಂದು ಸ್ತಬ್ದವಾಗಿವೆ .ನರನಿಗೆ ಸೂಕ್ಷ್ಮ ಜೀವಿಯೊಂದು ಸೆಡ್ಡು ಹೊಡೆದು ಅವನ ಬಂಧಿಯಾಗಿಸಿದೆ .!? ನವಿಲುಗಳು ಹೊರ ಬಂದು ನರ್ತಿಸುತ್ತಿವೆ .! ಜಿಂಕೆಗಳು ,ಕಾಡು ಪ್ರಾಣಿಗಳು ವಾಹನಗಳ ಭಯವಿಲ್ಲದೆ ರಸ್ತೆ ಯಲ್ಲಿ ಸಂಚರಿಸುತ್ತಿವೆ . ಸೂಕ್ಷ್ಮವಾಗಿ  ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾನವ ಬಂಧಿಯಾದ ಆಗಾಧ ಬುದ್ಧಿಶಕ್ತಿ ಇದ್ದರೂ, ಪ್ರಾಣಿಗಳು ಸ್ವಂತ್ರವಾದವು .   ನೆರೆ , ಭೂಕಂಪ , ಸುನಾಮಿ ಯಂತಹ ಪ್ರಕೃತಿ ವಿಕೋಪ ಕಲಿಸದ ಪಾಠ ಸೂಕ್ಷ್ಮಾಣು ಜೀವಿ ಕಲಿಸಿತು . ವಿಶ್ವವನ್ನೆ ಒಂದು ಕುಟುಂಬ ಮಾಡಿ ಸಾವು ನೋವು ಎಲ್ಲರಿಗೂ ಒಂದೇ .ಎಂಬ ಮಂತ್ರ ಹೇಳಿತು .    ಸಾಂಕ್ರಾಮಿಕ ರೋಗಗಳು ಮನುಕುಲಕ್ಕೆ ಹೊಸದಲ್ಲ.  ಇತಿಹಾಸದ ಪುಟ ತೆರೆದು ನೋಡಿದಾಗ ಕಾಲರ ,ಸಿಡುಬು ಮೂಂತಾದ ರೋಗಗಳು ಮನುಕುಲಕ್ಕೆ ಮಾರಿಯಾಗಿ ಹೊಸ ಅನ್ವೇಷಣೆಯ.  ಉದಯಕ್ಕೆ ಕಾರಣವಾದವು, ಸಾಧನೆಯ ದಾರಿ ತೋರಿದವು ಎಂದರೆ ತಪ್ಪಾಗಲಾರದು . ಎರಡು ಶತಮಾನಗಳ ಹಿಂದೆ ಸಿಡುಬು ರೋಗ ಜನರ ಬದುಕನ್ನು ಕಸಿದಿತ್ತು .ಅಗ ಎಡ್ವರ್ಡ್‌ ಜನ್ನರ್ ಸಿಡುಬಿಗೆ ಲಸಿಕೆ ಅನ್ವೇಷಣೆ ಮಾಡಿದರು ಇದು  .ಹಲವಾರು ಜೀವಗಳನ್ನು ಉಳಿಸಲು ಕಾರಣವಾಯಿತು. ಇಂದು ಕೊರೊನಾ ವಿಶ್ವದಾದ್ಯಂತ ತನ್ನ ಅರ್ಭಟ ಮುಂದುವರೆಸಿದೆ . ಜನರ ಆರ್ಥಿಕ ,ಸಾಮಾಜಿಕ, ಮಾನಸಿಕ ,ದೈಹಿಕ ವಲಯಗಳ ಮೇಲೆ ಗಂಭೀರ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ ..! ಪರಿಣಾಮ ಲಾಕ್ ಡೌನ್ ಉಂಟಾಗಿದೆ .  ಮನೆಯಲ್ಲಿ ಇರುವದೇ  ಹಲವರಿಗೆ ಒಂದು ಸವಾಲು .ಗೃಹಿಣಿ ಯರಿಗೆ ಲಾಕ್ಡೌನ್ ಸೀಲ್ ಡೌನ್ ಹೆಚ್ಚು ವ್ಯತ್ಯಾಸ ಇಲ್ಲ .ಏಕೆಂದರೆ ಅಡುಗೆ ಮನೆಗೆ ರಜೆ ಘೋಷಣೆ  ಸಾದ್ಯವಿಲ್ಲ .ಬದಲಾಗಿ ಕೆಲಸ ಹೆಚ್ಚಿದೆ .ಮತ್ತೆ ಹಲವರಿಗೆ ಕಡಿಮೆಯಾಗಿದೆ.  ಲೋಕೋ ಬಿನ್ನರುಚಿಃ ಅಲ್ಲವೆ ? ನಮಗಾಗಿ ನಮ್ಮವರಿಗಾಗಿ ನಾವು ಮನೆಯಲ್ಲಿ ಉಳಿಯುವದು ಒಂದು ಜವಾಬ್ದಾರಿ .ನಾವು ಉಳಿಯೊಣ ಇತರರನ್ನು ಉಳಿಸೋಣ .ಸಾಮೂಹಿಕವಾಗಿ ಸೇರುವ ಸ್ಥಳಗಳನ್ನು ನಿಷೇಧಿಸೋಣ ನಮ್ಮವರ ಹಿತಕ್ಕಾಗಿ ಪ್ರಾರ್ಥನೆ, ಪೂಜೆ ಎಲ್ಲವನ್ನು ಮನೆಯಲ್ಲೇ ಮಾಡೋಣ .      ಸಾದ್ಯ ವಾದರೆ ಓದು ,ಕಲಿಕೆ ,ಬರವಣಿಗೆ ಎಂಬ ಹತ್ತು ಹಲವು ಬಗೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳೋಣ  .ನಮ್ಮ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ .ಆಸಕ್ತಿ ಬದ್ದತೆ ನಮ್ಮನ್ನು ಉತ್ತುಂಗಕ್ಕೆ ಒಯ್ಯುವುದರಲ್ಲಿ ಸಂಶಯವೇ ಇಲ್ಲ . ಬದುಕಿನಲ್ಲಿ ಬದಲಾವಣೆ ನಿರಂತರ .ಈ ಬದಲಾವಣೆಯನ್ನು ಋಣಾತ್ಮಕ ಅಥವಾ ಧನಾತ್ಮಕವಾಗಿ ನೋಡುವದು ನಮ್ಮ ಮನದ ನೋಟದಲ್ಲಿದೆ . ಹೀಗಾಗಿ ಅನಿವಾರ್ಯತೆಯನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ . ದಿನದಿನಕ್ಕೆ ಕರೋನಾ ತನ್ನ ವ್ಯಾಪ್ತಿ ಯನ್ನು ಹೆಚ್ಚಿಸಿಕೊಳ್ಳುತ್ತಿದೆ . ನಾವು ನಿಷೇಧವನ್ನು ಸಂಪೂರ್ಣವಾಗಿ ಬೆಂಬಲಿಸಿ ಪಾಲಿಸೋಣ  ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುತ್ತದೆ . ಎಲ್ಲವೂ ನಮ್ಮ ಮನಸ್ಥಿಯನ್ನು ಅವಲಂಬಿಸಿದೆ ಮತ್ತಷ್ಟು ಮಗದಷ್ಟು ಕಲಿಯೋಣ ಮನೆಯಲಿ ಇರೋಣ ಕರೋನ ಓಡಿಸೋಣ ‌. *******

ಪ್ರಸ್ತುತ Read Post »

You cannot copy content of this page

Scroll to Top