ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ. ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ 10ನೇ ವಯಸ್ಸಿನಲ್ಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು. ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು… ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾ ಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ 19 ಕವನ ಸಂಕಲನಗಳನ್ನೂ 12 ಗದ್ಯ,ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ, 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ, 5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು. ಇವರ ಹಲವು ಕವನ ಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನ ಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ , ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದ್ವನಿ ಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ… ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ. ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು,ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ… ಇದೇ ಕಾರಣದಿಂದಾಗಿಯೇ ‘ಉತ್ತನೆಲದ ಗೆರೆ’ ‘ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು’, ‘ಕೊಯ್ದ ಹಸಿಮರದ ಕಂಪು’, ‘ಸಮಾಜವಾದದ ರೊಟ್ಟಿಯ ತುಣುಕು’ ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ… ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. ‘ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು’ ಎಂಬಂಥ ಪದಚಮತ್ಕಾರಗಳೂ ಇರುತ್ತದೆ. ‘ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ… ಅದೇ ರೀತಿಯಲ್ಲಿ ಇವರ ‘ಇದು ಬರಿ ಬೆಡಗಲ್ಲೋ ಅಣ್ಣ’ ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ… ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬ ಕತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, ’73ನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದಾಗಿದೆ… ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನುಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ ಇವರು. ಡಾ.ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿತ್ತು… 2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನ ವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್.ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು… ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೇ ಸ್ವಯಂ ತೇಜೋಮಾನರಾಗಿದ್ದರು. ಯುಗದ ಕವಿಯಾಗಿದ್ದರು. ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿಯಾಗಿದೆ..! ಇಂತಹ ಸಹೃದಯ ಕವಿವರ್ಯರು ಇಂದು ನಮನ್ನಗಲಿದ್ದಾರೆ. ಅವರಿಗೆ ನಮಸ್ಕಾರಗಳು… ************************************** ಕೆ.ಶಿವು.ಲಕ್ಕಣ್ಣವರ

ನಿತ್ಯೋತ್ಸವ ಕವಿ Read Post »

ಇತರೆ

ಗುರುವಂದನೆ

ಗುರುವಂದನೆ ಪೂರ್ಣಿಮ ಸುರೇಶ್ ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ. ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ ಅನನ್ಯವಾದ ನಂಟು. ಅವರೇ ಹೇಳುತ್ತಿದ್ದಂತೆ ದಾಖಲೆ ಎನ್ನುವಷ್ಟು ಕಾರ್ಯಕ್ರಮಗಳಿಗೆ ಉಡುಪಿಯಲ್ಲಿರುವ ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅದು 2013 ಇರಬೇಕು ಅರಣ್ಯ ಇಲಾಖೆಯವರು ಪ್ರೊ ನಿಸಾರ್ ಅಹಮದ್ ಅವರನ್ನು ವನಮಹೋತ್ಸವ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಆಹ್ವಾನಿಸಿದ್ರು. ಜೊತೆಜೊತೆಗೆ ಅವರ ಒಪ್ಪಿಗೆಯಿಂದ ಬೇರೆ ಎರಡು ಸಾಹಿತ್ಯಕ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಉಡುಪಿಯ ಟಿ.ವಿ. ಚಾನಲ್ ನವರು ಸಾರ್ ಅವರ ಸಂದರ್ಶನ ಮಾಡುವಂತೆ ನನ್ನ ಕೇಳಿಕೊಂಡಿದ್ರು. ನನಗೆ ಒಂದು ಎರಡು ತಾಸಿನ ಸಮಯ. ನಾನು ತಯಾರಾಗಬೇಕಿತ್ತು. ನನಗೋ ಗೊಂದಲ..ಅಷ್ಟಿಷ್ಟು ನಿಸಾರ್ ಅವರ ಕವನ ಓದಿದ್ದು ಅಷ್ಟೆ. ಅದು ಹೊರತುಪಡಿಸಿ ಮತ್ತೇನು ಗೊತ್ತು. ಮಾತಿನ ನಡುವೆ ಅವರು ನನ್ನನ್ನು ಸಾಹಿತ್ಯದ ಬಗ್ಗೆ ಏನಾದ್ರೂ ಪ್ರಶ್ನಿಸಿದರೆ..? ನಾನೋ ಅರೆಬೆಂದ ಕಾಳು. ಏನು ಮಾಡಲಿ. ಓದಿದ್ದೂ ಕೂಡಲೇ ನೆನಪಿಗೂ ಬರುತ್ತಿಲ್ಲ…ಸಂದಿಗ್ಧತೆಯಲ್ಲೇ ಚಾನಲ್ ಹುಡುಗರೊಂದಿಗೆ ಅವರು ಉಳಿದುಕೊಂಡಿದ್ದ ವಸತಿಗೃಹಕ್ಕೆ ಹೋಗಿದ್ದೆ. ಆಗಷ್ಟೆ ಅವರು ನಮ್ಮ ಊರನ್ನು ತಲುಪಿದ್ರು. ಮುಖದಲ್ಲಿ ಆಯಾಸ. ಏನು? ಎನ್ನುವ ಪ್ರಶ್ನೆ ಯೊಂದಿಗೆ ಸರಿದು ಒಳಬರಲು ನಮಗೆ ದಾರಿಕೊಟ್ಟರು. ನಾನು ವಿಷಯವನ್ನು ಅವರಿಗೆ ತಿಳಿಸಿ ಅಂದೆ. “ಸಾರ್,ಸಂದರ್ಶನ ಎನ್ನುವ ಧೈರ್ಯ ನನ್ನೊಳಗಿಲ್ಲ. ನಿಮ್ಮನ್ನ ಮಾತನಾಡಿಸಬೇಕು, ಸಾಹಿತ್ಯದ ಮಾತುಗಳನ್ನು ಕೇಳಬೇಕು . ಮಗುವಿನ ಕುತೂಹಲ. ನಿಮ್ಮನ್ನ ಪೂರ್ತಿ ಓದಿಲ್ಲ. ತಪ್ಪುಗಳಿದ್ದರೆ ಕೋಪಿಸದಿರಿ.” ಸಾರ್,ಒಂದು ತಾಸು ಬರಹದ ಬಗ್ಗೆ,ಕವಿತೆಗಳ ಬಗ್ಗೆ,ಬದುಕಿನ ಬಗ್ಗೆ..ಮಾತನಾಡುತ್ತಲೇ ಹೋದರು. ನಡುನಡುವೆ ನನ್ನ ಪ್ರಶ್ನೆ..ಸಮಯದ ಮಿತಿ ತಿಳಿದು ಮಾತಿಗೆ ಚುಕ್ಕಿ ಇಟ್ಟಿದ್ದೆ. ಗೊತ್ತಿಲ್ಲ ಅಂದವಳು ಅದೆಷ್ಟು ಒಳ್ಳೆಯ ಪ್ರಶ್ನೆಗಳನ್ನು ಕೇಳಿರುವೆ ತಾಯಿ..ಎನ್ನುವ ಸರ್ಟಿಫಿಕೇಟ್ ನೀಡಿದ್ರು. ಮರುದಿನ ಅವರ ಇನ್ನೊಂದು ಕಾರ್ಯಕ್ರಮದಲ್ಲಿ ತನ್ನ ಮಾತಿನ ನಡುವೆ ಈ ಸಂದರ್ಶನದ ನೆನಪು ಮಾಡಿ..ಎಲ್ಲಿ ಆ ಹುಡುಗಿ.. ಇದ್ರೆ ಸ್ವಲ್ಪ ನಿಂತುಬಿಡಮ್ಮಾ. ಬಹಳ ಚೆನ್ನಾಗಿ ಸಂದರ್ಶನ ನಡೆಸಿದೆ ಎನ್ನುತ್ತ ನನ್ನ ಒಳಗೊಂದು ಪುಳಕದ ತೇರನ್ನೇ ಎಳೆದುಬಿಟ್ಟರು. ಸಾರ್..ನನ್ನನ್ನ ಆಶೀರ್ವದಿಸಿದರು. ಇಂತಹ ಆಶೀರ್ವಾದ ನನ್ನಂತಹ ಅದೆಷ್ಟೋ ಜನರಿಗೆ ಮೊಗೆದು ಕೊಡುವ ಸಿರಿವಂತಿಕೆ ಆ ಮೇರು ವ್ಯಕ್ತಿತ್ವಕ್ಕಿತ್ತು. ಮುಂದೆ ಉಡುಪಿಗೆ ಕಾರ್ಯಕ್ರಮಗಳಿಗಾಗಿ ಹಲವಾರು ಬಾರಿ ಸಾರ್ ಬಂದಿದ್ದರು. ನನ್ನ ಕವನ ಸಂಕಲನ ಅವರ ಕೈಗಿಟ್ಟು ಆಶೀರ್ವಾದ ಬೇಡಿದ್ದೆ. ಸಂಘಟಕಿಯಾಗಿ ನನ್ನ ಕೆಲಸದ ಬಗ್ಗೆ ಮೆಚ್ಚುಗೆ,ಹಾರೈಕೆ ನೀಡುತ್ತಲೇ ಉಡುಪಿಯೊಳಗೆ ಕಿರಿಯ ಸ್ನೇಹಿತರ,ಅಭಿಮಾನಿಗಳ ತಂಡವನ್ನೇ ನಿರ್ಮಿಸಿ ಬಿಟ್ಟರು. ಸಾರ್ ಬಂದಾಗಲೆಲ್ಲ ಸಿಹಿ ಕಂಡಾಗ ಮುಗಿ ಬೀಳುವ ಇರುವೆಗಳಂತೆ ಸೇರಿ ಬಿಡುತ್ತಿದ್ದರು . ಇವರಲ್ಲಿ ಗೂಡಂಗಡಿಯವರು, ಅರಣ್ಯ ಇಲಾಖೆಯ ಉದ್ಯೋಗಿಗಳು,ಸಾಹಿತಿಗಳು,ವ್ಯಾಪಾರಸ್ಥರು,ಉಪನ್ಯಾಸಕರು ವಿಧ್ಯಾರ್ಥಿಗಳು, ಎಲ್ಲ ಬಗೆಯ ಮನಸ್ಸುಗಳನ್ನು ಸೇರಿಸಿ ಮಾತು..ಪ್ರೀತಿ, ವಾತ್ಸಲ್ಯ ತುಂಬುತ್ತಿದ್ದರು. ಭೇಟಿಯಾದ ಪ್ರತಿಯೊಬ್ಬರ ಹೆಸರು ಅವರ ಮನಸ್ಸಿನಲ್ಲಿ ದಾಖಲಾಗುತ್ತಿತ್ತು. ಮಾತ್ರವಲ್ಲಅವರವಿಶೇಷತೆಗಳು,ಇಷ್ಟಗಳು,ಆಸಕ್ತಿಗಳ ಬಗ್ಗೆ ಥಟ್ಟಂತ ಹೇಳಿ ಬಿಡುತ್ತಿದ್ದರು. ಅದೊಂದು ಸಲ ಉಡುಪಿಗೆ ಬಂದಾಗ ಅವರ ಆಪ್ತರು ರಾತ್ರಿ ಊಟಕ್ಕೆ ಹೋಟೇಲಿಗೆ ಕರೆದಿದ್ರು. ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಅವರು ಉಳಿದುಕೊಂಡ ವಸತಿ ಗೃಹ ಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಕುಡುಕನೊಬ್ಬ ಎದುರಾದ. ಇವರನ್ನು ದಾಟಿ ಮುಂದೆ ಹೋಗುವ ಸಮಯದಲ್ಲಿ ಥಟ್ಟಂತ ನಿಂತು ಅವರಿಗೆ ಸೆಲ್ಯೂಟ್ ನೀಡಿದ. ಸಾರ್ ಕೂಡಲೇ ಅವನ ಭುಜ “ಸವರಿ ಎಲ್ಲಿಂದ ಬರುತ್ತಿರೋದು” ಅಂದ್ರು. ಅವನು ಯಾವುದೋ ಕಟ್ಟಡ ಕಾರ್ಮಿಕ. ಅಮಲಿನಲ್ಲೇ ಉತ್ತರಿಸಿದ. ಕೈಯಲ್ಲಿ ಪೊಟ್ಟಣವಿತ್ತು. ಇದೇನು ಎಂದು ಪ್ರಶ್ನಿಸಿದರು. ಪರೋಟ ಅಂದ. ಮನೆಯಲ್ಲಿ ಯಾರಿದ್ದಾರೆ. ಎಷ್ಟು ಮಕ್ಕಳು..ಯಾಕೆ ಕುಡಿತದ ಅಭ್ಯಾಸ.ತಗೋ ಓದುವ ನಿನ್ನ ಮಗಳಿಗೆ ಇರಲಿ ಎಂದು ತಮ್ಮ ಕಿಸೆಯಿಂದ ಹಣವನ್ನ ತೆಗೆದು ಅವನ ಕೈಗಿರಿಸಿದ್ರು. ಉಡುಪಿಯಲ್ಲಿ ಪರಿಚಯವಾದ ಪ್ರತಿಯೊಬ್ಬರ ಮನೆಯ ಸದಸ್ಯರ ಹೆಸರು,ಅವರ ಆಸಕ್ತಿ..ಅದರ ಬಗ್ಗೆ ವಿಚಾರಣೆ ಬಲುಆಸ್ಥೆಯಿಂದ ಮಾಡುತ್ತಿದ್ದವರು. ಒಮ್ಮೆ ಬೈಂದೂರಿನಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಡಿಗರ ವಿಚಾರಗೋಷ್ಠಿ ನಡೆಯುವುದಿತ್ತು. ಉಡುಪಿಯಿಂದ ನಾವು ಒಂದಷ್ಟು ಜನ ಅವರ ಜೊತೆ ಹೊರಟಿದ್ದೆವು. ದಾರಿ ಮಧ್ಯದಲ್ಲಿ ಶಿವರಾಮ ಕಾರಂತರ ಊರು ಕೋಟ ಬಂದಾಗ ಅಟೋ ನಿಲ್ದಾಣ ..ಕಾರು ಸ್ವಲ್ಪ ನಿಲ್ಲಿಸಪ್ಪ..ಇದು ಕಾರಂತರ ಓಡಾಡಿದ ಪುಣ್ಯಭೂಮಿ ಅಲ್ವಾ.ನಾನು 15 ವರ್ಷಗಳ ಹಿಂದೆ ಇಲ್ಲಿ ಬಂದಾಗ ಒಬ್ಬ ಆಟೋ ಡ್ರೈವರ್ ನನ್ನನ್ನು ಕರೆದುಕೊಂಡು ಹೋಗಿದ್ದ. ಅವನ ಹೆಸರು ಎಂದು ಹೆಸರು ಹೇಳಿ, ಅವನು ಇದ್ರೆ ಮಾತಾಡಿಸಿ ಬರುವೆ ಎನ್ನುತ್ತ ಅಲ್ಲಿ ವಿಚಾರಿಸಿ ಬಂದಿದ್ದರು. ಯಾವುದೇ ಹಮ್ಮುಬಿಮ್ಮುಗಳಿಲ್ಲ,ಜಾತಿ,ಮತ,ಧರ್ಮ ಎಲ್ಲವನ್ನು ಮೀರಿ ಮಾನವತೆಯ ಮಂತ್ರವನ್ನು ತಮ್ಮೊಳಗೆ ತುಂಬಿಕೊಂಡವರು. ತಮ್ಮ ಆಪ್ತರಿಗೆ ಅದನ್ನೇ ಬೋಧಿಸಿದವರು. ಸಾಹಿತ್ಯವೆಂದರೆ ಹೃದಯಗಳನ್ನು ಬೆಸೆಯುವ ಶ್ರೇಷ್ಠ ಮಂತ್ರ ಎನ್ನುತ್ತಿದ್ದರು. ಅವರ ಸಾಹಿತ್ಯ ಹಾಗೂ ಅವರು ಬೇರೆಯಲ್ಲ. ಬರೆದಂತೆ ಬದುಕಿದವರು. ತನ್ಮ ಕಾರ್ಯಕ್ರಮಕ್ಕೆ ಬಂದ ಪರಿಚಿತರ ಹೆಸರನ್ನು ಪ್ರೀತಿಯಿಂದ ಉಲ್ಲೇಖಿಸಿ ಗುರುತಿಸುತ್ತಿದ್ದರು. ಬೆಂಗಳೂರಿನಲ್ಲಿ ನಾಗರಬಾವಿಯ ಅವರ ಮನೆಯಲ್ಲಿ ಪ್ರಕಾಶ್ ಎನ್ನುವ ಒಬ್ಬ ಅನಾಥರಿದ್ದರು. ತನ್ನ ಊಟದಲ್ಲಿ ಅರ್ಧವನ್ನು ಅವನಿಗೆ ನೀಡಿ ಖರ್ಚಿಗೆ ಕೊಟ್ಟು ಸಾಕುತ್ತಿದ್ದರು. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದಂತಿತ್ತು. ಕೆಲವೊಮ್ಮೆ ಜೋರಾಗಿ ಕಿರುಚಿ ಸಾರ್ ಗೆ ಬಯ್ಯುತ್ತಿದ್ದ. ಅದನ್ನೂ ಮುಗುಳ್ನಗೆಯಿಂದ ಸ್ವೀಕರಿಸಿ ಅನುಕಂಪದಿಂದ ಹೇಳುತ್ತಿದ್ರು. ಪಾಪ,ಅವನಿಗೆ ಯಾರಿದ್ದಾರೆ ? ಲಕ್ಷ್ಮಣ್ ಎಂಬ ಹುಡುಗ ಕೇಬಲ್ ಕೆಲಸದಲ್ಲಿ ತೊಡಗಿಸಿಕೊಂಡವನು. ಸ್ವಂತ ಮಗನಿಗಿಂತ ಹೆಚ್ಚು ಎಂಬಂತೆ ಪ್ರೀತಿಸಿದರು. ಕ್ಯಾಮಾರ ಹಿಡಿದು ಫೋಟೋ ತೆಗೆಯುವ ಗೋವಿಂದರಾಜ್,ಅರಣ್ಯಾಧಿಕಾರಿಯಾಗಿ ನಿವೃತ್ತರಾದ ಯೋಗೇಶ್ವರ ದಂಪತಿಗಳು,ಪ್ರಕಾಶಚಂದ್ರ, ಭಾಸ್ಕರ್,ಕಲಾವಿದರು,ಸಿಹಿತಿಂಡಿ ತಯಾರಿಸುವ ಶ್ರೀಧರ್, ಬರಹಗಾರರಾದ ಪಾರ್ವತಿ ಐತಾಳ್,ಡಾ.ನಿಕೇತನ, ಡಾ.ಪ್ರಶಾಂತ್, ಡಾ.ಧನಂಜಯ್ ಕುಂಬ್ಳೆ, ರಾಜಕೀಯದಲ್ಲಿ ತೊಡಗಿಸಿಕೊಂಡ ಕುಯಿಲಾಡಿ ಸುರೇಶ್ ನಾಯಕ್,ಅಮೃತ್ ಶೆಣೈ,ಯು.ಆರ್,ಸಭಾಪತಿ, ಹೆಸರು ತಿಳಿಯದ ಬೀಡ ಮಾರುವ ಹುಡುಗ ಇನ್ನೂ ನನ್ನ ನೆನಪಿಗೆ ಸಿಗದ ಅದೆಷ್ಟೋ ಹೆಸರುಗಳು.. ಉಡುಪಿ, ಮಂಗಳೂರಿನ ಸ್ನೇಹ ಬಂಧುಗಳು. ಎಲ್ಲರೂ ಅವರಿಂದ ಪ್ರೀತಿಯ ಸವಿ ಉಂಡು ಪುಷ್ಠಿಗೊಂಡವರು. ತಮ್ಮ ಪರಿಧಿಯೊಳಗೆ ಇಣುಕಿದ ಎಲ್ಲ ಮನಸ್ಸುಗಳಿಗೂ ಲಗ್ಗೆ ಇಟ್ಟರು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಕಂದಾ..ಎತ್ತರಕ್ಕೆ ಬೆಳೆದಷ್ಟು ನಾವು ವಿನೀತರಾಗಬೇಕು. ಕನ್ನಡ ನಮ್ಮ ತಾಯಿ ಆಕೆಯನ್ನು ಪ್ರೀತಿಸಬೇಕು, ಮನುಷ್ಯತ್ವ ಒಂದೇ ನಮ್ಮೆಲ್ಲರನ್ನೂ ಜೊತೆಯಾಗಿ ನಡೆಸಬಲ್ಲದು. ಎನ್ನುತ್ತಿದ್ದ ಸಾರ್ , ಅಂತೆಯೇ ಬದುಕಿದವರು. ಇಂದು ಭೌತಿಕವಾಗಿ ನಮ್ಮೆಲ್ಲರ ನ್ನೂ ಅಗಲಿ ಶೂನ್ಯವೊಂದನ್ನು ಮನಸ್ಸಿನಲ್ಲಿ ನೆಟ್ಟಿದ್ದಾರೆ. ಆ ನಿರ್ವಾತ ದೊಳಗಿಂದ ಅವರ ಆದರ್ಶ,ಆ ಮೇರು ವ್ಯಕ್ತಿತ್ವದ ಪರಿಮಳ ಹೆಕ್ಕುತ್ತ ನಾವು ನಡೆಯಬೇಕಾಗಿದೆ. ನಿಮ್ಮ ಸಾವಿರದ ನೆನಪುಗಳು,ವಿಶಿಷ್ಟ ಭಾಷೆಯ ಬರಹಗಳು,ಚಿಂತನೆ, ಕಾವ್ಯ ನಮ್ಮ ಜೊತೆಗಿದೆ ಸಾರ್. ಅವು ಅಜರಾಮರ. ಮನದಾಳದ ನಮನಗಳು *******

ಗುರುವಂದನೆ Read Post »

ಇತರೆ

ನಿತ್ಯೋತ್ಸವವಿನ್ನು ನೆನಪು

ನಿಂತು ಹೋದ ನಿತ್ಯೋತ್ಸವ ಕೆ.ಎಸ್.ನಿಸಾರ್ ಅಹಮದ್ ನಿತ್ಯೋತ್ಸವ ಕವನ’ ನಿಲ್ಲಿಸಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್..! ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಕನ್ನಡ ಹಿರಿಯ ಕವಿ ಪ್ರೊ. ಕೆ.ಎಸ್‌ ನಿಸಾರ್ ಅಹಮದ್ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು… ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದವರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದವರು… ನಿಸಾರ್ ಅಹಮದ್ ಅವರಲ್ಲಿ 10ನೇ ವಯಸ್ಸಿನಲ್ಲೇ ಸಾಹಿತ್ಯಾಸಕ್ತಿ ಮೂಡಿತು. ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ 21ಕ್ಕೂ ಹೆಚ್ಚು ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ… ಅವುಗಳಲ್ಲಿ- ಮನಸು ಗಾಂಧಿ ಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ… 1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘು ಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದು ವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ… ಕುರಿಗಳು ಸಾರ್‌ ಕುರಿಗಳು, ರಾಜಕೀಯ ವಿಡಂಬನೆ ಕವನವಾಗಿದೆ. ಭಾರತವು ನಮ್ಮ ದೇಶ (ಸರ್‌ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಛಾ ಕವನದ ಕನ್ನಡ ಭಾಷಾಂತರ) ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ… ಅವರ ಕವನ ಸಂಕಲನಗಳು— ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ (1974), ಆಯ್ದ ಕವಿತೆಗಳು (1974), ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬಹಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು ಇವರ ಕವನ ಸಂಕಲನಗಳಾಗಿವೆ… ಅವರ ಗದ್ಯ ಸಾಹಿತ್ಯ– ‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೊ ಅಣ್ಣ’ ಷೇಕ್ಸ್ ಪಿಯರ್ನ‌ನ ಒಥೆಲ್ಲೊದ ಕನ್ನಡಾನುವಾದ, ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು- ಇವುಗಳು ನಿಸಾರ್ ಅಹಮದ್ ಅವರ ಗದ್ಯ ಕೃತಿಗಳಾಗಿವೆ… ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು— 2006 ರ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ, 2003ರ ನಾಡೋಜ ಪ್ರಶಸ್ತಿ, 2006 ರ ಅರಸು ಪ್ರಶಸ್ತಿಗೆ ಅವರು ಭಾಜನರಾಗಿದ್ದರು… 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಕೂಡ..! ಇಂತಹ ಕವಿ, ಸಾಹಿತಿ ಕೆ.ಎಸ್‌. ನಿಸಾರ್ ಅಹಮದ್ ರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇದೋ ಅನಂತಾನಂತ ನಮನಗಳು… ********** ಕೆ.ಶಿವು.ಲಕ್ಕಣ್ಣವರ

ನಿತ್ಯೋತ್ಸವವಿನ್ನು ನೆನಪು Read Post »

ಇತರೆ

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ ಉಸಿರು‌ ಬೆರೆತ ನಾಡು..ಎಂದು ನುಡಿವಲ್ಲಿ ಅವರ ಆಂತರ್ಯದ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ನಿತ್ಯೋತ್ಸವ * *೧೯೭೮ *ರಲ್ಲಿ ಇಡೀ ನಾಡಿನಾದ್ಯಂತ ಕನ್ನಡಿಗರ ತನು ಮನದಲ್ಲಿ ಚಿರಸ್ಥಾಯಿಯಾದ ಕವಿತೆಗಳ ಗುಚ್ಛ. “ಜೋಗದ ಸಿರಿ ಬೆಳಕಿನಲ್ಲಿ,ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ,ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ”… ಈ ‌ಕವಿತೆಯ ಸಾಲುಗಳು ನಾವ್ ಪ್ರೀತಿಸುವ ಕನ್ನಡಾಂಬೆಯ ಉಸಿರು ಪ್ರತಿಯೊಬ್ಬ ಕನ್ನಡಿಗನ ನಾಡಿ ಮಿಡಿತವೆಂದರೆ ತಪ್ಪಾಗಲಾದು. ಪ್ರೇಮಕವಿಯ ಅಂತರಂಗದಾ ಸೆಳೆತಗಳು* ನೆನೆದೆ ನೆನೆಯುವೆ. “ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ ನನ್ನ ದೈನ್ಯವ ನೊಂದು ಹೋಲಿಸಿದಾಗ ಕಣ್ಣಂಚ ಹೆದೆಯಲ್ಲಿಬಿಗಿಗೊಂಡ ನೋವೊಂದು ನೇರ ನಿನ್ನೆದೆಯತ್ತ ತೂರಿದಾಗ”. ಎಂಬ ಭಾವ ಕವಿಯ ಮನಸ್ಸಿಗಾದ ಗಾಯವನ್ನು ಸುಲಭವಾಗಿ ಅರ್ಥೈಸುವಂತೆ ನನ್ನ ನೆನಪು ಛಾಯೆಯಂತೆ ನಿನ್ನೆದುರಿಗೆ ನಿಲ್ಲುವಾಗ ನೆನೆಯದೆ ಇರಲಾರೆಯೆಂಬ ಸತ್ಯ ಪ್ರೇಮದ ಸ್ವರೂಪವಾಗಿದೆ. ** ನಾ ನಿನ್ನ ಕಂಡಾಗ… ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ಎಷ್ಟೊಂದು ಗೆಲುವಿತ್ತು,ಅಷ್ಟೊಂದು ನಗುವಿತ್ತು ಹಗಲೆಲ್ಲ ನಿನ್ನ ಧ್ಯಾನ,ಇರುಳೆಲ್ಲ ನಿನ್ನ ಸ್ವಪ್ನ ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ ನೀ ಸುಳಿದರೆನ್ನ ಬಳಿಗೆ ನೆರೆ ಬಂದ ಹಾಗೆ ಹೊಳೆಗೆ ನನ್ನೆದೆಯ ತೋಟದಲ್ಲಿ ಆಡಾಡು ಓ ನವಿಲೇ.. ನೆನೆದಾಗ ನಿನ್ನ ರೂಪ ಎದೆಗತ್ತಲಲ್ಲಿ ದೀಪ…! ” ಕವಿಯ ಸುಕೋಮಲ ಹೃದಯ ಪ್ರೇಮವೆಂಬ ಆಕಾಶದಲ್ಲಿ ಪ್ರೇಯಸಿಯ ನೆನೆದು ಅಗೋಚರ ಪ್ರೀತಿಯ ಸುಧೆಯ ಹರಿಸಿ ಆರಾಧಿಸುವ ಕಲೆ ಒಬ್ಬ ಪ್ರೇಮಿಗೆ ಮಾತ್ರ ದೇವರು ಕೊಟ್ಟ ವರವೆಂದರೆ ವಿಶೇಷವೆನಿಲ್ಲ..ಆ ಪ್ರೇಮಿ ಕವಿ ನಿಸ್ಸಾರರು. ** ನೆನಪು ಕವಿತೆ ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ ಗುಜರಾಯಿಸುತ ಪ್ರತಿಸಲವು ಉತ್ತರಕೆ ತತ್ತರಿಸಿ ಮುಖಭಂಗವಾಗಿರುವ ಹಣೆಬರಹ ಚಿತ್ತದ ‘ನಿರ್ಭಾಗ್ಯ’ ನಿನ್ನಾಸೆಗೆಳ್ಳುನೀರನು ಬಿಟ್ಡು ವರ್ಷಗಳ ಕಳೆದಿವೆ ಚಿಹ್ನೆಗಳು ಉಳಿದಿವೆ ನನ್ನೆದೆಯ ಹಸುರಲ್ಲಿ… ” ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹುದು ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು…….. ಪ್ರೇಮದ ಕರಿನೆರಳಿಗೆ ಆಘಾತವಾದ ಮನಸು ಚೇತರಿಸಿಕೊಂಡು ಬದುಕ ಕಟ್ಡಿದರು,ಪ್ರೇಮದ ಅಲೆಯಲಿ ನೋವ ಮರೆತು,ಮತ್ತೆ ಮರಳಲಾರದ ಸ್ಥಿತಿ ಪ್ರತಿಯೊಬ್ಬನದೆಂಬಂತೆ ನೆನಪ ಹಂಚಿರುವುದು.ನೊಂದವರಿಗೆ ಮಾದರಿ. ** ಬೇಸರವಾಗಿದೆ ಮಾತು ಕವಿತೆಯಂತು…… ಭಾರವಾಗಿದೆ ಮೌನ ನೋವು ಕರಗಿದ ಕಣ್ಣಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆ ಮುರಿದಂತೆ ಭಾವ ಕುಟಿಕಿದೆ ಮನದಲಿ ಮುರಿದ ಪ್ರೀತಿಯ ಮರೆಯೇ ಬಾಳಿನೊಳ ಹೊಕ್ಕಿರಲು ಸಾವ…ಭಯ ತಾನೆರಗಿತೋ ಯಾವ ಗವಿ ಗತ್ತಲಿನಲಿ ಮೌನಭಾರವ ಕನಸಿ‌ ಇದ್ದ ಹಕ್ಕೆಯ ಬಿಟ್ಟಿತೋ…. ಹೃದಯದಲಡಗಿದ ಪ್ರೀತಿ ಕಮರಿ ಕಣ್ಮರೆಯಾದ ಗಳಿಗೆಗಳು ಪುನಃ ಬೇರುರದೇ.ನಶಿಸುವ ಕ್ಷಣಗಳ ಕವಿಯು ಅನುಭವಿಸದೇ ಹೇಳಲಾರನೆಂಬುದಕೆ ಸಾಕ್ಷಿ… ನಿನ್ನ ಮೈತ್ರಿ..ಕವನದ ಸಾಲುಗಳು ಅತ್ಯದ್ಭುತ. ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೋಸಲ ಎನಿಸುವುದು,ನನಗಿಂತ ಇಲ್ಲ ಧನ್ಯ.ನನಾ ಪಾತ್ರನೋ ಏನೋ ನಿನ್ನಮಲ ಪ್ರೇಮಕ್ಕೆ,ನನಗಂತೂ ದಕ್ಕಿಹುದು ಜೀವದಾನ. ಬಾಳ ದುರ್ಗಮ ಪಥದ ಪಾದಯಾತ್ರೆ ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ…… ಕವಿ ನಿಸ್ಸಾರರ ಅಭೂತಪೂರ್ವ ಕವಿತೆಗಳಲ್ಲಿ ಒಂದಾದ ಕವಿತೆ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ…..ಕವಿಯೆಯಂತೂ ಇಹಪರ ಚಿಂತನೆಗೆ ಒರೆಹಚ್ಚದಿರಲಾರದು. ** ಇನ್ನೊಂದು ಕವನ “ಮತ್ತದೇ ಬೇಸರ”… ಕವಿತೆ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ ಆಸೆಗಳ ಹಿಂಡಿನ ತುಳಿತಕ್ಕೆ ಹೋಲನನ್ನೀದೇಹ ಬರುವೆಯೇ,ಬಾರೆಯೇ ನೀ ನೆನಿಸುತಿದೆ ಹಾ.ಸಂದೇಹ.. *ಕವಿ ಬರೆದ ಕವಿತೆ…. ಕವಿ ಬರೆದ ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೆ ಇರಿದಿರಿದು ಆಂತರ್ಯ ಸಂಚಯಿತ ಬಾಧೆಯನೇ ಸುರಿದೆರೆದು.. ಬರೆದಾಗ ಪ್ರೇಮದ ಕುಣಿಕೆ ಆಂತರ್ಯದಲಿ ಚಿಗುರೊಡೆದಿದ್ದು ಆಶ್ಚರ್ಯವೇ… ** ರೂಪ ಕವಿತೆ….ಅಮೂರ್ತದಿಂದ ಮೂರ್ತದೆಡೆಗೆ… ಕವಿತೆಯಲ್ಲಂತೂ ಕವಿಯ ತುಮುಲಗಳು,ತುಡಿತಗಳು, ಮೇಳೈಸಿದಂತೆ ” ಮತ್ತೆ ಆ ರೂಪ ಎದೆಗೆ ಹಾಯುತಿದೆ ಚಿತ್ತ ಸಂತಾಪದಲ್ಲಿ ಬೇಯುತಿದೆ. ಎಂದೋ ಹುಗಿದಂಥ ನೆನಹ ಕೆದಕುತಿದೆ ಮೌನದುತ್ತಾಪದಲ್ಲಿ ಹೊಗೆಯಿತಿದೆ ಇದ್ದಕ್ಕಿದ್ದಂತೆ ಹೃದಯ ಹೌಹಾರಿ ಸದ್ದೆ ಇರದಂತೆ ರೋಧಿಸಿದೆ ಬೇಲಿ ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ಜೀವ ಏನನ್ನೋ ಬೇಡಿ ದುಡುಕುತಿದೆ ….ಮತ್ತೆ ಆ ರೂಪ.! ಹೇಳುತ್ತಾ ಹೊರಟರೆ ಕವಿಯ ಮನವರಳುತ್ತಾ ಸಾಗುವುದು.ಕಾರಣ ಕನ್ನಡ ನಾಡಿನ ಅಪರೂಪದ ರತ್ನ..ಜಾತಿ ಮತ ಧರ್ಮ ಭೇದಗಳ ಮೆಟ್ಟಿನಿಂತು. ಸಾಗಿದ ಬದುಕು ದಿಗಂತದಂತೆ ಅನಂತ. ಕವಿಯೇ ಹೇಳುವಂತೆ… ಸಂಜೆ ಐದರಮಳೆ ಕವನ ಸಂಕಲನದೊಂದು ಕವಿತೆ… “ನಿಮ್ಮೊಡನಿದ್ದೂ ನಿಮ್ಮಂತಾಗದ ಜಗ್ಗಿದ ಕಡೆ ಬಾಗದೇ ನಾನು ನಾನೆ ಆಗಿ ಈ ನೆಲದಲ್ಲೆ ಬೇರೂತ್ತಿದ್ದರು ಬೀಗಿ ಪರಕೀಯವಾಗಿ ತಲೆಯೆತ್ತುವುದೆದೆ ನೋಡಿ ಅದು ಬಲು ಕಷ್ಟದ ಕೆಲಸ………..ವೆಂದು ನುಡಿಯುವಾಗ ಕವಿಯ ಅಂತರಾತ್ಮ ಎಷ್ಟೊಂದು ಮರುಗಿರಬಹುದು.. ಕವಿಯೆಲ್ಲವನ್ನು ಮೀರಿ ತನ್ನಾತ್ಮದೊಳು ನೆಲೆನಿಂತು ಸಾಗಿ ಮನೆಮನಗಳಲ್ಲಿ ಮನೆಮಾತಾಗಿರುವ ಅಚ್ಚ ಕನ್ನಡಿಗ ನಮ್ಮ ಮೆಚ್ಚಿನ ಕವಿ ನಿತ್ಯೋತ್ಸವದ ಹರಿಕಾರ….ಕೆ.ಎಸ್.ಎನ್…….ಇಂದು ನೆನಪಿನ ಬಿತ್ತಿಯೋಳು ಮಿನುಗುವ ನಕ್ಷತ್ರ. “ನಾದವಿರದ ಬದುಕು ಇದ್ದು ಸತ್ತಂತೆ ಎಂದು ಸಾರುತ್ತಾ”……ಬದುಕಿರುವಷ್ಟು ಗಳಿಗೆ ನಾಡು.ನುಡಿಗೆ ಮಿಸಲಿಟ್ಟು………..” ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ,ಕರೆವ ನೊಂದು ಬರದೆ ಹೋದೆ ನೀನು,ಮರೆತು ಹೋದೆ ನೀನು.” ನೋವಿನಧಾರೆಯ ನಮ್ಮೊಡಲಿಗಿಟ್ಟು ಮತ್ತದೇ ಬೇಸರದ ನಾದವಾಗಿ ಮರೆಯಾದ ಪ್ರೇಮ ಕವಿಗೆ ಕೋಟಿಕೋಟಿ ನಮನಗಳು. ************************** ಶಿವಲೀಲಾ ಹುಣಸಗಿ

ನುಡಿ ನಮನ Read Post »

ಇತರೆ

ನಿತ್ಯೋತ್ಸವದ ಕವಿಗೆ ನಮನ

ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು. ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ರಾಜಕಾರಣಿಗಳನ್ನು ಕುರಿತು ಬರೆದ ಕವಿತೆ ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಗೀತೆಯಾಗಿ ಪ್ರಸಿದ್ಧಿಯಾಗಿ ನಿಸಾರ್ ಅಹಮದ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕವಿತೆ. “ಕೃಷ್ಣನ ತುಂಟತನವನ್ನು ವರ್ಣಿಸುವ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮ, ಬೆಣ್ಣೆ ಕದ್ದು ಜಾರುತ ಬಿದ್ದು “ಈ ಹಾಡಿಗೆ ಮರುಳಾಗದವರಾರು. “ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ “ಎಂದು ಅಸಮಾನತೆ ವಿರುದ್ದ ಬರೆದ, ಕುರಿಗಳು ಸಾರ್ ಎಂದು ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ ಜೋಗದ ಸಿರಿಯ ಕವಿ ಕೆ ಎಸ್ ನಿಸಾರ್ ಅಹಮದ್ ಈ ನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಕವಿ. ಕನ್ನಡಾಂಬೆಯ ತೇರು ಎಳೆದಿರುವ, ಎಳೆಯುತ್ತಾ ಇರುವ ನನ್ನ ಅಚ್ಚುಮೆಚ್ಚಿನ ಅನೇಕ ಕವಿಗಳಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು. “ಎಲ್ಲಾ ಮರೆತಿರುವಾಗ ಇಲ್ಲಾ ಸಲ್ಲದ ನೆವವಾ ಹೂಡಿ ಬರದಿರು ಮತ್ತೆ ಹಳೆಯ ನೆನಪೇ “ಈ ಕವಿತೆ ನಾನು ಸದಾ ಗುನುಗುನಿಸುತ್ತಿದ್ದ ಅಚ್ಚುಮೆಚ್ಚಿನ ಭಾವಗೀತೆ ಯಾಗಿತ್ತು. ಗಾಂಧಿಬಜಾರು ಮತ್ತು ನಿತ್ಯೋತ್ಸವ ನಿಸಾರ್ ಅಹಮದ್ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.ಅದರಲ್ಲಿದ್ದ ಅಷ್ಟೂ ಹಾಡುಗಳೂ ಜನರಿಗೆ ಅತ್ಯಂತ ಇಷ್ಟವಾದ ಹಾಡುಗಳಾಗಿದ್ದವು.ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.ಸುಗಮ ಕ್ಷೇತ್ರದಲ್ಲಿ ಇವತ್ತಿಗೂ ಜನ ಆಸಕ್ತಿ ಮತ್ತು ಇಷ್ಟ ಪಟ್ಟು ಕೇಳುವ ಬಹುಪಾಲು ಗೀತೆಗಳಲ್ಲಿ ನಿಸಾರ್ ಅಹಮದ್ ಅವರ ಕವನಗಳ ಪಾಲು ಬಹುದೊಡ್ಡದು . ಇವರಿಗೂ ಸುಗಮ ಸಂಗೀತ ಕ್ಷೇತ್ರಕ್ಕೂ ಬಿಡಸಲಾರದ ನಂಟು.  ನಿಸಾರ್ ಕವನಗಳನ್ನು ಆಧರಿಸಿದ ಅನೇಕ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು . ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇವರ ರಚನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ. . ನಿತ್ಯೋತ್ಸವ ಕವಿಯೆಂದೇ ಮನೆಮಾತಾಗಿದ್ದ, ನಿಸಾರ್ ಅಹಮದ್ ಅವರು, ಸಾಹಿತ್ಯೋತ್ಸವ ನಿಲ್ಲಿಸಿದರು ಅನ್ನೋ ಸುದ್ದಿ ನಿಜಕ್ಕೂ ಆಘಾತಕಾರಿ ವಿಷಯ.ನಾಡು ನುಡಿಯ ಪ್ರಿಯರಾದ ನಿಸಾರ್ ಅಹಮದ್ ಎಂದರೆ ಎಲ್ಲರಿಗೂಅಚ್ಚುಮೆಚ್ಚು. ಅದ್ಬುತ ವ್ಯಕ್ತಿತ್ವದ ಅಪರೂಪದ ಕವಿ ಶ್ರೀ ನಿಸಾರ್ ಅಹಮದ್ ರವರು.ಅವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ . ನಿತ್ಯೋತ್ಸವದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ********** ಶೈಲಜ ಹಾಸನ

ನಿತ್ಯೋತ್ಸವದ ಕವಿಗೆ ನಮನ Read Post »

ಇತರೆ

ಹೆಣ್ಣು ಬದುಕಿನ ಘನತೆ

  ಹೆಣ್ಣು ಬದುಕಿನ ಘನತೆ ವಸುಂಧರಾ ಕದಲೂರು. ವಸುಂಧರಾ ಕದಲೂರು. ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ..      ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ  ಹೆಣ್ಣುಮಗುವಾಗಿ  ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು ಮಣ್ಣಾಗುತ್ತಿರುವ ಹೆಣ್ಣು ಭ್ರೂಣಗಳೆಷ್ಟೋ! ಸರ್ವೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಬಹುದು. ಆದರೆ ಅದು ನಿಖರ ಸತ್ಯವಾಗಿರದು. ಬೆಳಕಿಗೆ ಬಾರದ, ವರದಿಯಾಗದ ಅದೆಷ್ಟು ಹೆಣ್ಣು ಭ್ರೂಣ ಹತ್ಯೆ ದಿನಂಪ್ರತಿ ನಡೆಯುತ್ತಿಲ್ಲ? ಹಾಗೋ ಹೀಗೋ ಹೆಣ್ಣಾಗಿ ಹುಟ್ಟಿದ ಮೇಲೂ ವಿದ್ಯೆ, ಉದ್ಯೋಗದ ಅವಕಾಶ ನಿರಾಕರಣೆಯಾಗಿಲ್ಲ? ಮದುವೆ, ಬಸಿರು, ಹೆರುವುದು ಮೊದಲಾದವು ಇಂದಿಗೂ ಆಕೆಯ ಆಯ್ಕೆಯ ಪರಿಧಿಯೊಳಗೆ ಬರುವುದಿಲ್ಲ ಎಂಬುದು ಗುಟ್ಟೇನಲ್ಲಾ.      ಭ್ರೂಣ ಹತ್ಯೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಶೋಷಣೆ ಮೊದಲಾದವು ಯಾರೋ ನಿರಕ್ಷರಿಗಳ ಮನೆಯಲ್ಲೋ, ಬಡಕುಟುಂಬಗಳಲ್ಲೋ ನಡೆದುಬಿಡುವ ಸಾಮಾನ್ಯ ವಿದ್ಯಮಾನಗಳೆನ್ನುವುದು ಖಂಡಿತಾ ತಪ್ಪು. ಸ್ತ್ರೀ ಸಮಸ್ಯೆಗಳು ಲಿಂಗಾಧಾರಿತವಷ್ಟೇ. ಇದರಲ್ಲಿ ಜಾತಿ, ಕುಲ, ಶ್ರೀಮಂತಿಕೆ, ಸ್ಥರ, ಅಧಿಕಾರಸ್ಥಾನ ಎಲ್ಲವೂ ನಗಣ್ಯವಾಗುತ್ತವೆ.        ಮರ್ಯಾದಾ ಹತ್ಯೆಗಳು, ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಬಹಳ ಬೇಗ ಮದುವೆ, ಓದನ್ನು ನಿರಾಕರಿಸುವುದು ಅಥವಾ ಮೊಟಕುಗೊಳಿಸುವುದು, ಉದ್ಯೋಗದ ನಿರಾಕರಣೆ, ಭ್ರೂಣಲಿಂಗಪತ್ತೆ ಮಾಡಿಸುವುದು, ಗಂಡು ಸಂತಾನಕ್ಕಾಗಿಯೇ ಮೂರೋ ನಾಕೋ ಹಡೆಯುವಂತೆ ಮಾಡುವುದು, ವೇಶ್ಯಾವಾಟಿಕೆ, ಆಸ್ತಿ ಹಕ್ಕಿನ ನಿರಾಕರಣೆ…. ಹೇಳುತ್ತಾ ಹೊರಟರೆ ಶೋಷಣೆಯ ಹಲವು ರೂಪಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ.      ನಿಜಕ್ಕೂ ತನ್ನ  ಕೆಲಸದ ಸ್ಥಳದಲ್ಲಿ, ಅಕ್ಷರಿಗಳ ಎಡೆಯಲ್ಲಿ, ಬಡತನದ ನರಳಾಟವೋ, ಶ್ರೀಮಂತಿಕೆಯ ಡೌಲಿನ ನೆರಳೋ ಒಟ್ಟಿನಲ್ಲಿ ಸ್ತ್ರೀ ಮುಜುಗರಕ್ಕೆ ಒಳಗಾಗಿ ಅಭದ್ರತೆಯಿಂದ ನಲುಗುತ್ತಿರುವುದು ಇಂದು ಹೆಚ್ಚುಹೆಚ್ಚು ಬೆಳಕಿಗೆ ಬರುತ್ತಿದೆ. ಎಲ್ಲಾ ಪ್ರಕರಣಗಳು ಅಲ್ಲದಿದ್ದರೂ ಬಹಳಷ್ಟು ಹೊರಜಗತ್ತಿಗೆ ಗೊತ್ತಾಗುತ್ತಿವೆ. .   ಇನ್ನು ಸ್ತ್ರೀ ಶೋಷಣೆಯ ವಿರುದ್ಧ ದನಿ ಎತ್ತಿದರೆ ಸಾಕು ಅವಳಿಗೆ ‘ಮಹಿಳಾವಾದಿ’ ಎಂಬ ಪಟ್ಟ ಕಟ್ಟಲಾಗುತ್ತದೆ ಅಥವಾ ಆಕೆ ‘ಪುರುಷದ್ವೇಷಿ’ ಎಂದು ಬಿಂಬಿಸಲಾಗುತ್ತದೆ. ಹಾಗಾದರೆ  ಮಹಿಳೆಯಾಗಿ ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ? ಹಾಗೇನಾದರು ಆಕೆ ನಿರಂತರವಾಗಿ ಸ್ತ್ರೀ ಶೋಷಣೆಯ ವಿರುದ್ಧ ಮಾತನಾಡಿದರೆ ಆಕೆಗೆ ಬೇರೆ ವಿಚಾರಗಳ ಬಗ್ಗೆ ಮಾತನಾಡಲು ಬರುವುದಿಲ್ಲ. ಆಕೆ ನಾಲಾಯಕ್ ಎಂದು ನಿರ್ಧರಿಸಿಬಿಡುವ ಸ್ಥಬ್ಧ ಮನಸ್ಥಿತಿಯವರಿದ  ಹಾಗೆಯೇ ಸ್ತ್ರೀಯೊಬ್ಬಳು ತನ್ನ ಪರಿಸರದಲ್ಲಾಗುತ್ತಿರುವ  ಅನ್ಯಾಯಗಳ ವಿರುದ್ಧ ಕಿಂಚಿತ್ ಪ್ರತಿಭಟನೆ ತೋರಿದರೆ ಅಥವಾ ತನ್ನ ನಿಲವುಗಳನ್ನು ಖಚಿತವಾಗಿ ಸ್ಪಷ್ಟಪಡಿಸಿದರೆ, ನಾಳಿನ ಔದ್ಯೋಗಿಕ ಸವಾಲುಗಳನ್ನು ನಿಭಾಯಿಸಲು ಆಕೆಗೆ ಅವಕಾಶಗಳನ್ನು ನಿರಾಕರಿಸುವ ಹುನ್ನಾರಗಳನ್ನು ಮಾಡಲಾಗುತ್ತದೆ. ಷಡ್ಯಂತ್ರ ರಚಿಸಿ ಆಕೆಯ ವ್ಯಕ್ತಿತ್ವಕ್ಕೆ ಚ್ಯುತಿತರುವ ಕೆಲಸ ಮಾಡುತ್ತಾರೆ. ಆಕೆ ಧೈರ್ಯವಂತೆಯೂ ಗಟ್ಟಿಗಿತ್ತಿಯೂ ಆಗಿದ್ದರೆ, ಆಕೆಯ  ಕೌಟುಂಬಿಕ ಸಾಮರಸ್ಯ  ಹದಗೆಡಿಸುವ ಮಸಲತ್ತುಗಳನ್ನು ಹೊಸೆಯಲಾಗುತ್ತದೆ.       ಹಾಗಾದರೆ ಮಹಿಳೆಯರ ಕುರಿತು  ಮಾತನಾಡುವುದು ತಪ್ಪೇ?      ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ..? ಈ ಪ್ರಶ್ನೆ ಉತ್ತರ ಸಿಗುವುದಿರಲಿ, ಇಷ್ಟಕ್ಕೂ ಮಹಿಳೆ ಏಕೆ ಮಾತನಾಡಬೇಕು.!? ಹೇಳಿದಷ್ಟು ಮಾಡಿಕೊಂಡಿದ್ದರೆ ಸಾಕು ಎನ್ನುವ ಅಭಿಪ್ರಾಯಕ್ಕೇ ಹೆಚ್ಚು ಓಟು ಹಾಕುತ್ತಾರೆ.          ಈ ನೆಲದ ಸಂಸ್ಕೃತಿ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ವಿವಿಧ ಕಾಲಘಟ್ಟಗಳಲ್ಲಿ ಹರಿದು ಬಂದಿರುವ ಹಲವು ಬದಲಾವಣೆಗಳಿಗೆ ಒಗ್ಗಿಕೊಂಡೂ, ತನ್ನ  ಅಸ್ಮಿತೆ ಸಾರುತ್ತಿರುವ ಹೆಣ್ಣಿಗೆ ಸಾಮಾಜಿಕವಾಗಿ ಇಂದಿಗೂ ಸಮಾನಸ್ಥಾನದ ನಿರಾಕರಣೆಯಾಗುತ್ತಿದೆ. ಕೆಳಸ್ತರದಲ್ಲೇ ಇಟ್ಟು ನೋಡುವ, ಹಿರಿತನ ( seniority)ದಲ್ಲಿ ಮುಂಚೂಣಿಯಲ್ಲಿದ್ದರೂ ಅತ್ಯುನ್ನತ ಹುದ್ದೆಗಳನ್ನು, ಅವಕಾಶಗಳನ್ನು ನೇರವಾಗಿಯೇ ನಿರಾಕರಿಸಿರುವ/ ನಿರಾಕರಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.      ಇದರ ನಡುವಲ್ಲೂ ಹಲವು ಸ್ಥಾನಮಾನಗಳು ಹೆಣ್ಣಿನ ಪ್ರತಿಭೆಯ ಕಾರಣಕ್ಕೇ ದಕ್ಕುತ್ತಿರುವುದನ್ನೂ ಕಾಣಬಹುದು. ಹಾಗೆಂದು, ಮಹಿಳೆಯ ಮೇಲಾಗುತ್ತಿರುವ ದೈಹಿಕ ದಾಳಿಗಳ ವರದಿಗಳೇನೂ ಕಡಿಮೆಯಾಗಿಲ್ಲ. ವರದಿಮಾಡಲಾಗದ ಮಾನಸಿಕ ಹಿಂಸೆಗಳದೆಷ್ಟೋ…        ಮಹಿಳೆಯರ ಪ್ರಶ್ನೆ ಇಷ್ಟೇ…, ದೇಹ ಮನಸ್ಸು ತನ್ನದು ಅಲ್ಲವೇ ಅಲ್ಲ ಎಂದು ನಿರ್ಲಿಪ್ತವಾಗಿ ಬದುಕಬೇಕಾಗಿರುವ ತಮ್ಮ ಪರಿಸ್ಥಿತಿ ಎಂದಾದರು ಕೊನೆಗೊಂಡೀತೆ ? ಹೆಣ್ಣುಜೀವ ಒಂದು ಘನತೆಯ ಬದುಕನ್ನು ಕಂಡೀತೆ..?

ಹೆಣ್ಣು ಬದುಕಿನ ಘನತೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಮೇ 1 ಚಿಂತನೆ- ಚಿಂತೆಗಳು ಪೂರ್ಣಿಮಾ ಸುರೇಶ್ ಮೇ 1 ಚಿಂತನೆ- ಚಿಂತೆಗಳು ಮೇ ದಿನ ಅಂದರೆ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, (ಅಂತರರಾಷ್ಟ್ರೀಯ ಶೃಮಿಕ ದಿನಾಚರಣೆಯೂ ಹೌದು )ವರ್ಗ ಹೋರಾಟಗಳ ವಾರ್ಷಿಕ ದಿನಾಚರಣೆಯಾಗಿ ಕಾರ್ಮಿಕ ವರ್ಗ ಆಚರಿಸುತ್ತಿದ್ದಾರೆ. ಕಾರ್ಮಿಕರ ಸಭೆ, ವಿಚಾರಗೋಷ್ಠಿ,ಪ್ರದರ್ಶನ, ಹಕ್ಕುಗಳನ್ನು ಸಾಧಿಸಲು ಮೆರವಣಿಗೆ ಮುಂತಾದವುಗಳನ್ನು ಹಮ್ಮಿಕೊಳ್ಳುವ ಕಾರ್ಮಿಕರ ಉತ್ಸವದ ದಿನ . ಸಾರ್ವಜನಿಕ ರಜಾ ದಿನವಾಗಿಯೂ ಘೋಷಿತವಾಗಿದೆ .ದೇಶವೊಂದರ ಜೀವನಾಡಿಯಂತಿರುವ ಕಾರ್ಮಿಕರ ಬದುಕಿನ ಸಮಾನತೆಗಾಗಿ ಅವರ ಹೋರಾಟದ ಬದುಕನ್ನು ನೆನಪಿಸುವ ದಿನದ ಆಚರಣೆಯ ಹಿಂದೆ ಒಂದು ಇತಿಹಾಸವಿದೆ.         1886ರ ಮೇ 4 ರಂದು ಚಿಕಾಗೋದ ಇಲಿನಾಯ್ಸ ಪ್ರದೇಶದ ‘ಹೇ ಮಾರ್ಕಟ್’ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯು ಕಾರ್ಮಿಕ ಪ್ರಭುತ್ವ ಉದಯದ ಶುಭಗಳಿಗೆಯ ಕುರುಹಾಗಿ ಮೇ1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಆಚರಣೆ ಆರಂಭಗೊಂಡಿತು. ಬಂಡವಾಳಶಾಹಿ ಪ್ರಭುತ್ವದ ಶೋಷಣೆ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕಾರ್ಮಿಕರೆಲ್ಲರೂ ಒಂದಾಗಿ ಈ ದಿನವನ್ನು ಆಚರಣೆ ಮಾಡಬೇಕೆಂಬುದು ಈ ದಿನದ ಕರೆ .  ಕಾರ್ಮಿಕರ ಶ್ರೇಯಾಭಿವೃದ್ದಿಗಾಗಿ    ಕಾರ್ಮಿಕ ಸಂಘಟನೆಗಳೂ ರೂಪುಗೊಂಡವು. ಮೇ ದಿನ ಉತ್ಸವವಾಗಿಸಿತು..        ತಮ್ಮದೇ ಆದ ಸಂಘಟನೆಗಳನ್ನು  ಕಾರ್ಮಿಕರು ಕಟ್ಟಿಕೊಂಡಿರುವುದರಿಂದ ಸಂಘಟನೆಗಳು ಅವರ ಹೋರಾಟಕ್ಕೆ ಶಕ್ತಿ ನೀಡಿವೆ. ಇದರಿಂದಾಗಿ ಕಾರ್ಮಿಕ ವಲಯ ಇಂದು ಸಮಾಜದಲ್ಲಿ ಪ್ರಭಾವಶಾಲಿಯಾಗಿದೆ. ತಮ್ಮನ್ನು ತಾವು ನಾಯಕತ್ವದ ಹಾದಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಇವರು ಸಂಘಟಿತ ವಲಯದ ಕಾರ್ಮಿಕರು. ಇವರಲ್ಲಿ ಹಲವಾರು ಮಂದಿ ಕಾರ್ಮಿಕ ನಾಯಕರು ಸಮಾಜದ ನಾಯಕರಾಗಿ ಹಲವಾರು ಕ್ಷೇತ್ರಗಳಲ್ಲಿ ಮೂಡಿ ಬಂದಿದ್ದಾರೆ ಜಗತ್ತಿನಾದ್ಯಂತ ಇವರು ಮಹತ್ತರ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳೂ ಸಾಕಷ್ಟಿವೆ.  ಉದಾ:  ಮುಂಬೈಯ ಅತೀ ದೊಡ್ಡ ಕಾರ್ಮಿಕ ನಾಯರೆನಿಕೊಂಡಿದ್ದ ದಿವಂಗತ ಜಾರ್ಜ್ ಫರ್ನಾಂಡೀಸ್ ಕೂಡ ಒಬ್ಬರು        ಕಾರ್ಮಿಕ ದಿನಾಚರಣೆಯೆಂದರೆ ಸಮಾನ ಬದುಕಿನ ಹಕ್ಕೊತ್ತಾಯ, ಬಂಡವಾಳ ಶಾಹಿ ವ್ಯವಸ್ಥೆ, ಮೇಲ್ವರ್ಗದ ದಬ್ಬಾಳಿಕೆಯ ವಿರುದ್ದ ಶ್ರಮಿಕ ವರ್ಗದ ಹೋರಾಟದ ದಿನವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಇಂದಿನ ಕಾರ್ಮಿಕ ದಿನಾಚರಣೆ ಹೊಸ ದೃಷ್ಟಿಯಿಂದ ನೋಡಿ ಅರ್ಥಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂದೆ ಕಾರ್ಮಿಕರ ಹಕ್ಕುಗಳ ಜೊತೆಜೊತೆಗೆ ಕಾರ್ಮಿಕರ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಜಗತ್ತಿದೆ. ಕರೋನ ಎಂಬ ಮಾಹಾಮಾರಿ ಜಗತ್ತನ್ನೇ ಕಬಳಿಸಲು ಹೊರಟಂತೆ ವ್ಯಾಪಿಸಿ ಕೊಂಡಿದೆ. ಈ ಸಮರ ಯಾವುದೇ ಜಾಗತಿಕ ಸಮರಕ್ಕಿಂತ ಕಡಿಮೆಯಲ್ಲ. ಲಾಕ್ ಡೌನ್ ಎಂಬ  ಸೂತಕದ ಛಾಯೆಯಲ್ಲಿ ಜನರು ಮನೆಯೊಳಗೆ ಬಂಧಿಗಳಾಗಿದ್ದಾರೆ. ಇದರ ಪರಿಣಾಮ  ಶ್ರೀಮಂತ ವರ್ಗದಿಂದ ಕಟ್ಟಕಡೆಯ ಶ್ರಮಿಕನ ಮೇಲೂ ಅತ್ಯಂತ ಗಾಢ ಫಲಿತಾಂಶ ತಂದಿದೆ . ಅಂದರೆ ಕಾರ್ಮಿಕ ವರ್ಗದ ಮೇಲೆ ನಡೆದಿರುವ , ಮುಂದಿನ ದಿನಗಳಲ್ಲಿ ನಡೆಯಬಹುದಾದ ಪರಿಣಾಮಗಳು ಬಲು ಘೋರ ಹಾಗೂ ಭೀಕರ . ಈ ಹಿನ್ನಲೆಯಲ್ಲಿ ನಾವಿಂದು ಕಾರ್ಮಿಕ ದಿನಾಚರಣೆಯ  ಅಗತ್ಯ ಅನುಸರಿಸಬೇಕಾದ , ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.   ಕಾರ್ಮಿಕರೆಂದರೆ ಸಂಘಟಿತ ವಲಯದ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು.     ಸಂಘಟಿತ ವಲಯದ ಕಾರ್ಮಿಕರು  ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ದಕ್ಕಿಸಿಕೊಳ್ಳುವ ಶಕ್ತಿ ಹೊಂದಿರುವರು. ಇವರಿಗೆ ತಮ್ಮದೇ ಆದ ಸಂಘಟನೆಗಳು ಇರುವುದರಿಂದ ಈ ಸಂಘಟನೆಗಳು ಅವರ ಹೋರಾಟಕ್ಕೆ ನೈತಿಕ ಶಕ್ತಿ ನೀಡಿವೆ. ಇದರಿಂದ  ಈ ಕಾರ್ಮಿಕ ವಲಯ ಪ್ರಭಾವಶಾಲಿ ವಲಯವಾಗಿದೆ.  ಅಸಂಘಟಿತ ವಲಯದ ಕಾರ್ಮಿಕರು. ಇವರು ನಮಗೆ ಸಮಾಜದ ಮದ್ಯೆ ಎದ್ದು ತೋರುವುದಿಲ್ಲ. ಇವರಿಗೆ ತಮ್ಮ ಹಕ್ಕೊತ್ತಾಯ ನಡೆಸುವ ಸಂಘಟನಾ ಶಕ್ತಿಯೂ ಇರುವುದಿಲ್ಲ. ಯಾವೊಬ್ಬ ನಾಯಕರು ಇವರ ಪರವಾಗಿ ಧ್ವನಿ ಎತ್ತುವುದಿಲ್ಲ. ಅಂದಿನ ದುಡಿಮೆಯನ್ನು ಅಂದಿಗೆ ಖರ್ಚು ಮಾಡಿ ಬದುಕು ನಡೆಸುವ ದುರ್ಬಲ ವರ್ಗದವರೇ ಇವರಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು.ಹೋರಾಟದ ಮನೋಭಾವವೂ ಇವರಲ್ಲಿ ಬಹಳ ಕಡಿಮೆ. ಈ ಅಸಂಘಟಿತ ವಲಯದ ಕಾರ್ಮಿಕರಲ್ಲೂ ಒಂದೇ ಕಡೆ ನೆಲೆನಿಂತ ಕಾರ್ಮಿಕರು ಒಂದು ಕಡೆಯಾದರೆ ವಲಸೆ ಬಂದ ಕಾರ್ಮಿಕರದ್ದು ಮತ್ತೊಂದು ಬಗೆಯ ಭವಣೆಯ  ಬದುಕು . ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಹೋಗುವ ಈ  ಅಸಂಘಟಿತ ಕಾರ್ಮಿಕ ವರ್ಗ ನಗರಪ್ರದೇಶಗಳಲ್ಲಿ ಕೊಳೆಗೇರಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.        ಭಾರತದ ಇತಿಹಾಸವನ್ನೇ ತೆಗೆದರೆ ಮುಂಬಾಯಿಯ ಧಾರಾವಿಯ ಬ್ರಹತ್ ಕೊಳೆಗೇರಿ,ನವದೆಹಲಿ, ಕೊಲ್ಕತ್ತಾ, ಚೆನ್ನೈ ಯಂತಹ ಮಹಾನಗರಗಳ ಕೊಳೆಗೇರಿಗಳಲ್ಲಿ ಲಕ್ಷಾಂತರ ಕಾರ್ಮಿಕರು ವಾಸವಾಗಿದ್ದಾರೆ. ಇವರ ದುಡಿಮೆಯ ಹೆಚ್ಚಿನ ಪಾಲು ದುಶ್ಚಟಗಳಿಗೆ ಹೋಗುವುದೂ ಸತ್ಯ. ಇವರಲ್ಲಿ ದೊಡ್ಡ ಪ್ರಮಾಣದ ಹೋರಾಟದ ಮನೋಭಾವವೂ ಇಲ್ಲ. ಈ ಕಾರ್ಮಿಕರ ಸಾಮಾಜಿಕ ಹಾಗೂ ಸಾಂಸಾರಿಕ ಜೀವನ ಅತ್ಯಂತ ಬರ್ಬರ .ಇವರು ಅಂದಂದಿನ ದುಡಿಮೆ ಅಂದಿಗೆ ಉಣ್ಣುವುದರಿಂದ ಇವರಲ್ಲಿ ಉಳಿತಾಯವೂ ಬಹಳ ಕಡಿಮೆ. ಯಾವುದೇ ಕಾನೂನು ಹಾಗೂ ನಿಯಮಾವಳಿಯ ಹಿಡಿತದಿಂದ ಇವರನ್ನು ಹಿಡಿದಿಡುವುದೂ ಸಾಧ್ಯವಿಲ್ಲ. ಕಾನೂನಿನ ದೊಡ್ಡ ಸಹಕಾರವೂ ಇವರಿಗಿಲ್ಲ. ಇಂತಹ ಕಾರ್ಮಿಕರು ಬಲು ದೊಡ್ಡ ಸಂಖ್ಯೆಯಲ್ಲಿ ನಮ್ಮಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲಿ ಇದ್ದಾರೆ ಕೃಷಿ,ಕೂಲಿ,ಕೈಗಾರಿಕೆ,ಮೀನುಗಾರಿಕಾ ಉದ್ಯಮಗಳಲ್ಲು ತೊಡಗಿಸಿಕೊಂಡ ದಿನಗೂಲಿ ನೌಕರಿವರು .ಸಾಂಪ್ರದಾಯಿಕ ವೃತ್ತಿ ಮಾಡುವ ಶೃಮಿಕರಿವರು.     ಕೋವಿಡ್-19 ದಾಳಿಯ ನಂತರ ಇಂತಹ ಕಾರ್ಮಿಕ ವರ್ಗ ಬಲುದೊಡ್ಡ ಘಾತಕ್ಕೆ ಒಳಗಾಗಿದೆ .  ಇವರು ಆರ್ಥಿಕವಾಗಿ ನೆಲಕಚ್ಚಿರುವ ಶೃಮಿಕ ವರ್ಗ. ಅದರಲ್ಲೂ ಅಸಂಘಟಿತ  ಕಾರ್ಮಿಕರಲ್ಲಿ  ಯಾವುದೇ ನಿರ್ಧಿಷ್ಟ ಹೆಸರಲ್ಲಿ ಗುರುತಿಸಲ್ಪಡದ ಕಾರ್ಮಿಕರ ಗೋಳು ಅತೀ ದುಸ್ತರ ಎನ್ನಬಹುದು.     ‌‌‌ ಲಾಕ್ ಡೌನ್ ನಿಂದಾಗಿ ಸದ್ಯ  ಈ ಕಾರ್ಮಿಕರು ದುಡಿಮೆಗೆ ಹೊರಹೋಗುವಂತಿಲ್ಲ. ಒಳಗಡೆ ಕೊಳೆಗೇರಿಗಳಲ್ಲಿ, ಬೆಂಕಿಪೊಟ್ಟಣದಂತಹ ಜಾಗದಲ್ಲಿ  10 ಕ್ಕಿಂತಲೂ ಹೆಚ್ಚು ಜನರು ಇರಬೇಕಾದ ಅನಿವಾರ್ಯತೆ. ಇಲ್ಲಿ ರೋಗ ಒಬ್ಬರಿಗೆ ತಗುಲಿದರೆ ಉಳಿದವರೂ ಇದರ ಪರಿಣಾಮ ಎದುರಿಸಲೇಬೇಕು . ಆದ್ದರಿಂದ ಈ ಸಮಯದಲ್ಲಿ ಇಂತಹ ಜನರ ಬಗ್ಗೆ ಹೆಚ್ಚು ಯೋಚಿಸಬೇಕಾದ ಅನಿವಾರ್ಯತೆ  ನಮ್ಮ ಮುಂದಿದೆ      ಇವರಲ್ಲದೆ ಬೆಲೂನ್ ನಂತಹ ಪುಟ್ಟ ಸರಕುಗಳನ್ನು ಮಾರುವಂತವರು, ಭಿಕ್ಷಾಟಣೆ ಮಾಡಿ ಹೊಟ್ಟೆ ಹೊರೆಯುವ ಮಂದಿ,ದೇವದಾಸಿಯರು,ಯಕ್ಷಗಾನ ಕಲಾವಿದರು, ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ವಲಸೆ ಬಂದು ಟೆಂಟ್ ಕಟ್ಟಿ ವಾಸ ಮಾಡುವ, ಊರೂರು ತಿರುಗಿ  ಮಣ್ಣಿನ ಗೊಂಬೆ, ಅಲಂಕಾರಿಕ ವಸ್ತುಗಳಂತಹ ಸರಕುಗಳನ್ನು  ಮಾರಿ ಬದುಕು ಕಟ್ಟಿಕೊಂಡ ಜನರನ್ನು ಕಾರ್ಮಿಕರ ಯಾದಿಯಲ್ಲಿ ಸೇರ್ಪಡೆಗೊಳಿಸದಿರಲು ಸಾಧ್ಯವೇ? ಸದ್ಯ ಇಂತಹ ಕಾರ್ಮಿಕರ ಆರೋಗ್ಯ, ಖರ್ಚುವೆಚ್ಚಗಳ ಪಾಡೇನು? ಇವುಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿದ್ದಾರೆ?  ಕಾರ್ಮಿಕರ ಬಗ್ಗೆ ಇದುವರೆಗೂ ಇರುವ  ಸಿದ್ದ ಆಲೋಚನೆಯ ಮಾದರಿಯನ್ನು ಬದಲಿಸಲೇಬೇಕಾದ  ಅನಿವಾರ್ಯತೆ ಯನ್ನು ಕರೋನ ಎಂಬ ವೈರಸ್ ತಂದಿಟ್ಟಿದೆ ಕಾರ್ಮಿಕರು ತಮ್ಮ ಸ್ಥಳವನ್ನು ಬಿಟ್ಟು ವಲಸೆ ಹೋದಾಗ ಒಳಗಾಗುವ ಸಂಕಷ್ಟ ಅದರ ಪರಿಹಾರ ಹೇಗೆ ಎಂಬುದನ್ನು ಸರಕಾರ ಹಾಗೂ ಸಮಾಜ ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಾದ ಕಾಲವಿದು . ಯಾವ ಪ್ರದೇಶಗಳು ದೊಡ್ಡ ಕೈಗಾರಿಕಾ ಪ್ರದೇಶವಾಗಿರುವುದೋ ಅಲ್ಲಿ ಕೋವಿಡ್ ಹೆಚ್ಚು ಪ್ರಸಾರವಾಗಿದೆ. ಇಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಾಗಿರುತ್ತಾರೆ ಅವರಿಗೆ ನಿರ್ಧಿಷ್ಟ ಉತ್ತಮ ವಾಸ್ತವ್ಯ ಇರುವುದೂ ಕಷ್ಟ . ಭವಿಷ್ಯದ ದಿನಗಳಲ್ಲಿ ಕಾರ್ಮಿಕರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.  ಕಾರ್ಮಿಕರು ಬಲು ದೂರ ವಲಸೆ ಹೋಗದಂತೆ ವ್ಯವಸ್ಥೆ ಕಲ್ಪಿಸುವ, ಕ್ರಮ ತೆಗೆದುಕೊಳ್ಳಬೇಕಾದ ಗಂಭೀರ ಚಿಂತನೆಯನ್ನೂ ಮಾಡಬೇಕಾಗಿದೆ. ಇವರ ಸಂಬಳ ಮಾತ್ರವಲ್ಲ ಬದುಕು ಯಾವ ಬಗೆಯಲ್ಲಿ ಹಸಿರಾಗಿಡಬಹುದು ಎಂಬ ಬಗ್ಗೆಯೂ ಯೋಚಿಸಬೇಕು.    ಬದುಕು ಇದ್ದಾಗಷ್ಟೆ ದುಡಿಮೆ. ದುಡಿದಾಗ ತಕ್ಕ ಪ್ರತಿಫಲ ಸಿಗಬೇಕು ನಿಜ.  ಈ ನಿಟ್ಟಿನಲ್ಲಿ ಕಾರ್ಮಿಕರ ಹೋರಾಟ. ಆದರೆ ಈಗ ಬದುಕು ಉಳಿಸಿಕೊಳ್ಳುವುದೇ ದುಸ್ತರ ಎಂಬಂತಾಗಿದೆ. ಬದುಕುವ ಅವಕಾಶವೇ ಮಸುಕಾದರೆ..? ಜೀವ ಉಳಿಸಿಕೊಳ್ಖುವ ಪೇಚಾಟದಲ್ಲಿ ಅದೆಷ್ಟೋ ಶ್ರಮಿಕ ವರ್ಗ ಹೋರಾಟ ನಡೆಸುತ್ತಿದೆ. ಇವರಿಗೆ ಸಾವು ಹಾಗೂ ಬದುಕಿನ ನಡುವಿನ ಗೆರೆ ಮಾಯವಾದಂತಿದೆ. ಇವರ ನೋವು, ಸಂಕಟ ಅರ್ಥಮಾಡಿಕೊಳ್ಳುವವರು ಯಾರು? ಇವರ ಅಸ್ತಿತ್ವವೇ ಪ್ರಶ್ನಾರ್ಥಕವಲ್ಲವೇ ?ಇವರಿಗೆ ಉಂಟಾಗಿರುವ ಮಾನಸಿಕ ಅಘಾತ,ಮತ್ತೆ ಇವರು ಮೊದಲಿನಂತೆ ಕೆಲಸಕ್ಕೆ ಹೋಗಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈ ಕಾರ್ಮಿಕ ದಿನದಂದು ಹೆಚ್ಚು ಪ್ರಜ್ಞಾಪೂರ್ವಕ ಹೃದಯದಿಂದ ಚಿಂತಿಸಬೇಕಾದ ಅಗತ್ಯದಲ್ಲಿ ನಾವಿದ್ದೇವೆ . *************************

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ರಾಮಸ್ವಾಮಿ ಡಿ.ಎಸ್. ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ಮೇ ಒಂದನೇ ತಾರೀಖು ಬರುವ ವಾರ ಮೊದಲೇ ಬಂಟಿಂಗ್ಸ್, ಬ್ಯಾನರ್, ಪ್ಲಕಾರ್ಡುಗಳನ್ನು ಸಿದ್ಧಪಡಿಸಿ ಎಲ್ಲ ಕಛೇರಿಗಳ ಕಾರ್ಮಿಕ ಸಂಘಟನೆಗಳಿಗೆ ಮನವಿ ಪತ್ರ ಕಳಿಸಿ ಒಂದನೇ ತಾರೀಖಿನ ಬಹಿರಂಗ ಸಭೆ ಮತ್ತು ಮತಪ್ರದರ್ಶನಕ್ಕೆ ಬರಲು ಒತ್ತಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದವು. ನಾನಿರುವ ಊರಿನಲ್ಲಿ ದೊಡ್ಡ ಕಾರ್ಖಾನೆಗಳೇನೂ ಇಲ್ಲ. ಹಾಗಾಗಿ ನಮ್ಮ ಮೇ ದಿನದ ಸಭೆಗೆ ಬ್ಯಾಂಕ್, ಎಲ್ಲೈಸಿ, ಟೆಲಿಫೋನ್, ಅಂಚೆ ಕಛೇರಿಗಳ ನೌಕರರನ್ನು ಸೇರಿಸುತ್ತಿದ್ದೆವಾದರೂ ಉಳಿದ ಸರ್ಕಾರಿ ಕಛೇರಿಗಳ ಯಾವ ವರ್ಗವೂ ನಮ್ಮೊಂದಿಗೆ ಬರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ನೌಕರರು ಯಾವತ್ತೂ ನಮ್ಮ ಚಳವಳಿಗಳಲ್ಲಿ ಭಾಗವಹಿಸಿದ್ದೂ ಇಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಕ್ಷರ ದಾಸೋಹದ ನೌಕರರು ನಮ್ಮ ಜೊತೆ ಇರುತ್ತಾರೆ ಮತ್ತು ಅವರ ಸಂಖ್ಯೆಯೇ ನಮ್ಮ ಸಾರ್ವಜನಿಕ ಸಭೆಗಳಿಗೆ, ಮೆರವಣಿಗೆಗೆ ಶೋಭೆ ತರುವುದು. ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರ ಶ್ರಮ ಸಂಸ್ಥೆಯ ಲಾಭಕ್ಕೆ ಕಾರಣವಾದುದರಿಂದ ದುಡಿಯುವ ವರ್ಗಕ್ಕೆ ಸವಲತ್ತುಗಳಿಗಾಗಿ ಹಕ್ಕೊತ್ತಾಯ ಮಾಡುವುದು ವಿಹಿತ. ಸರ್ಕಾರಿ, ನಿಗಮ, ಮಂಡಲಿಗಳ ನೌಕರರಿಗೆ ಸಿಬ್ಬಂದಿ ಕಾಯ್ದೆ ಅನ್ವಯ ವಿವಿಧ ಸವಲತ್ತು ಇದ್ದರೂ ಅವರೆಲ್ಲ ತಮ್ಮ ಸಂಬಳ ಮತ್ತು ಇತರೆ ಸೌಲಭ್ಯಗಳಿಗಾಗಿ ಕಾಲಾನುಕಾಲದ ದ್ವಿಪಕ್ಷೀಯ ಸಂಧಾನದ ಮೂಲಕ ಸಾಧಿಸಿಕೊಳ್ಳುತ್ತಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆ ಆಯೋಗಗಳ ವರದಿಗೆ ತಕ್ಕಂತೆ ಕಾಲಕ್ಕೆ ತಕ್ಕನಾಗಿ ಆಗುತ್ತಲೇ ಇರುತ್ತವೆ. ಆದರೆ ಯಾವತ್ತೂ ಅಸಂಘಟಿತ ವಲಯದ ನೌಕರರು ಮಾತ್ರ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಮತ್ತು ಉದ್ಯೋಗ ಖಾತ್ರಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ನೌಕರರು ಮತ್ತು ಬೀಡಿ ಕಾರ್ಮಿಕರು ಬೆಂಗಳೂರಲ್ಲಿ ಆಗಾಗ ಧರಣಿ ಸತ್ಯಾಗ್ರಹಗಳ ಮೂಲಕ ಸುದ್ದಿಗೆ ಬರುತ್ತಾರಾದರೂ ಅವರ ಬೇಡಿಕೆ ಈಡೇರಿತೆ ಅಂದರೆ ಅದು ಯಾವತ್ತೂ ಮರೀಚಿಕೆಯಾಗಿಯೇ ಉಳಿದಿರುತ್ತೆ. ಇನ್ನು ಈ ವರ್ಗಕ್ಕೆ ಅಸಂಖ್ಯಾತ ಗಾರ್ಮೆಂಟ್ ಕೆಲಸಗಾರರು ಮತ್ತು ರಾಜ್ಯ ಸರ್ಕಾರದ ಅಧೀನದ ರಸ್ತೆ ಸಾರಿಗೆ ಸಂಸ್ಥೆಯ ನೌಕರರೂ ಸೇರುತ್ತಿದ್ದಾರೆ. ಈ ಎಲ್ಲ ನೌಕರರಿಗೆ ಕಾಲಾನುಕಾಲಕ್ಕೆ ವೇತನ ಪರಿಷ್ಕರಣೆ ಇತರೆ ಸೌಲಭ್ಯಗಳ ವಿಸ್ತರಣೆ ಆಗುವುದಿರಲಿ, ಕನಿಷ್ಠ ವಾರದ ರಜೆ, ಆರೋಗ್ಯ ಯೋಜನೆ ಇಲ್ಲದೇ ಅವರೆಲ್ಲ ತುಂಬ ಪರಿತಪಿಸುತ್ತಿದ್ದಾರೆ. ಸಂಘಟಿತ ನೌಕರ ವರ್ಗಕ್ಕೆ ಕಾಲಾನುಕಾಲದ ವೇತನ ಮತ್ತು ಇತರೆ ಸೌಲಭ್ಯಗಳು ಅಲ್ಪ ಸ್ವಲ್ಪ ತಗಾದೆ ಮತ್ತು ಹೋರಾಟಗಳಿಂದ ಸಿಕ್ಕುತ್ತವೆಯಾದರೆ ಈ ಅಸಂಘಟಿತ ವಲಯದ ನೌಕರರಿಗೆ ಯಾವ ಅನುಕೂಲಗಳೂ ಇಲ್ಲ. ಇನ್ನು ಅನುಮೋದಿತ ಸಂಸ್ಥೆಗಳ ನೌಕರರಂತೂ ಯಾವ ಹೋರಾಟ ಹಾರಾಟಗಳೂ ಇಲ್ಲದೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ಪಡೆಯುತ್ತಾರೆ. ಹಾಗಾದರೆ ಇವತ್ತಿನ ಮೇ ದಿನದ ಸಂದೇಶ ಮತ್ತು ಈ ದಿನದ ಅಗತ್ಯ ಯಾರಿಗಿದೆ? ನೌಕರರಿಗೆ ಕನಿಷ್ಠ ವೇತನ, ವಾರದ ರಜೆ ಮತ್ತು ಎಂಟು ಗಂಟೆಗೂ ಮೀರದ ದುಡಿಮೆಯ ಅವಧಿ ಮೇ ಚಳವಳಿಯ ಮೂಲ ಧ್ಯೇಯ. ಅದೀಗ ಸಂಘಟಿತ ವಲಯಕ್ಕೆ ಸುಲಭದಲ್ಲಿ ಸಿಗುತ್ತಿದೆ. ಆದರೆ ಅಸಂಘಟಿತ ವಲಯದ ಜೊತೆಗೇ ಈ ನಡುವೆ ಔಟ್ ಸೋರ್ಸ್ಡ್ ಎಂಬ ಕಂಟ್ರಾಕ್ಟ್ ನೌಕರರ ಮೇಲಣ ದಬ್ಬಾಳಿಕೆ ಮಿತಿ ಮೀರಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ ಯಾವ ಖಾತರಿಯೂ ಇಲ್ಲದ ಮತ್ತು ಕಂಟ್ರಾಕ್ಟರನ ಮೂಗಿನ ನೇರದ ಕಾನೂನಿನಡಿ ಇವರೆಲ್ಲ ನರಳುತ್ತಿದ್ದಾರೆ. ನಮ್ಮ ಬಹುತೇಕ ಕಾರ್ಮಿಕ ಸಂಘಟನೆಗಳು ಒಂದಲ್ಲ ಒಂದು ರಾಜಕೀಯ ಪಕ್ಷಗಳ ಕೂಸುಗಳೇ ಆಗಿರುವುದು ಸುಳ್ಳೇನಲ್ಲ. ಶಾಸನ ಸಭೆಯಲ್ಲಿ ಅನುಮೋದನೆ ಆಗದೆ ಯಾವುದೂ ಕಾನೂನಾಗಿ ಪರಿವರ್ತನೆ ಆಗುವುದಿಲ್ಲ. ಈ ಎಲ್ಲ ರಾಜಕೀಯ ಪಕ್ಷಗಳು ಮತ್ತದರ ಆಶ್ರಿತ ಸಂಘಟನೆಗಳು ಯಾಕಾಗಿ ಈ ಔಟ್ ಸೋರ್ಸಿಂಗ್ ಎನ್ನುವುದನ್ನು ಅನುಮೋದಿಸಿದವು ಎಂದು ಆಲೋಚಿಸಲು ಈ ಮೇ ದಿನದಲ್ಲಾದರೂ ನಾವು ಪ್ರಯತ್ನ ಪಡಬೇಕು. ಔಟ್ ಸೋರ್ಸಿಂಗ್ ಅಥವ ಹೊರ ಗುತ್ತಿಗೆ ಅನ್ನುವುದು ಕೆಳಹಂತದ ನೌಕರಿಗೆ ಮಾತ್ರ ಸೀಮಿತವಾದದ್ದು. ಅಂದರೆ ಕಸಗುಡಿಸುವುದು, ಪ್ಲಂಬಿಂಗ್, ಕ್ಲೀನಿಂಗ್, ಸ್ಯಾನಿಟೈಸಿಂಗ್, ಸೆಕ್ಯೂರಿಟಿ, ಲಿಫ್ಟ್ ಆಪರೇಷನ್ ತರದ ಕೆಲಸಗಳೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಈ ಹೊರ ಗುತ್ತಿಗೆಯಿಂದಲೇ ನಡೆಯುತ್ತಿದೆ. ಈ ನೌಕರರು ಆಯಾ ಕಛೇರಿಗಳಲ್ಲಿ ಕೆಲಸ ಮಾಡುತ್ತಾರಾದರೂ ಅವರ ಕಂಟ್ರಾಕ್ಟರ್ ಕೊಟ್ಟಷ್ಟಕ್ಕೆ ದುಡಿಯುತ್ತಾರೆ. ಆದರೆ ಈ ಕಂಟ್ರಾಕ್ಟರುಗಳು ಕನಿಷ್ಠ ಕೂಲಿಯ ಆಧಾರದಲ್ಲಿ ಬಿಲ್ಲು ಸಲ್ಲಿಸಿ ಸಂಬಂಧಿಸಿದ ಅಧಿಕಾರಿಯನ್ನು ಹಿಡಿದು ತಮ್ಮ ಹಣ ಪಡೆಯುತ್ತವಾದರೂ ನೌಕರರಿಗೆ ಮಾತ್ರ ಸಿಕ್ಕುವುದು ಎಳ್ಳು ಕಾಳು. ಹೊರಗುತ್ತಿಗೆ ಆಧಾರದ ನೌಕರಿಯನ್ನು, ಕಂಟ್ರಾಕ್ಟ್ ಆಧಾರದ ನೌಕರಿಯನ್ನು ಕನಿಷ್ಠ ಕೂಲಿ ಕೊಡದ ಉದ್ಯೋಗದಾತರನ್ನು ನಿವಾರಿಸದ ಹೊರತು ಮೇ ದಿನದ ಚಳವಳಿಗೆ ಯಾವ ಅರ್ಥವೂ ಇರುವುದಿಲ್ಲ. *****

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾವ್ಯಯಾನ

ಮೇ – ಒಂದು ಕಪ್ಪು ಹಾಡು ನೂರುಲ್ಲಾ ತ್ಯಾಮಗೊಂಡ್ಲು ಮೇ – ಒಂದು ಕಪ್ಪು ಹಾಡು ಕಾರ್ಲ್ ಮಾರ್ಕ್ಸ್ ನ ಹೆಣ ಹೊತ್ತ ಕೈಗಳಿನ್ನು  ಬೀದಿ ಬೀದಿ ತರಗೆಲೆಯಂತೆ ತೆವಳುತ್ತಲೇ ಇವೆ  ಸಂಜೆಯ ಸೂರ್ಯ ಸದ್ದಿಲ್ಲದೆ ನೋಡುತ್ತಾನೆ  ಕೈಗಳಿಗಂಟಿದ ಕತ್ತಲನ್ನು  ಶತಮಾನಗಳಿಂದಲೂ ಹೀಗೆ ಬದುಕು  ಸಂಕೇತಗಳಲ್ಲಿ ಹರಿದು ಹೋಗಿದೆ   ಸಂಜೆ ಮಲ್ಲಿಗೆಯ ಕನಸಿನಲ್ಲಿ  ಕಂಪಿನ ಹಿತವಿಲ್ಲ  ಖಾಲಿ ಜೋಬುಗಳ ತುಂಬ  ಸ್ವೇದದ ಕಮಟು   ಹೆಂಡತಿ ಮಕ್ಕಳು ಕೈ ನೀಡಿದಾಗ  ತಬ್ಬಿಕೊಳ್ಳುವ ಕೈಗಳಲ್ಲಿ ನಿತ್ರಾಣವಿಲ್ಲ  ಒಂದು ಹಗಲು ಅಥವಾ  ಒಂದು ಇರುಳು ಸವೆದ ಬದುಕಿನ  ಹಿಸಾಬು ಹಾಕಲು ಕೈಗೆರೆಗಳೇ ಅಳಿಸಿ ಹೋಗಿವೆ  ಬಂಡವಾಳ ಶಾಹಿಗಳ ಬೂಟುಗಳಲಿ  ಬತ್ತಿ ಹೋದ ನಸಿಬು  ಯೌವ್ವನದ ಜೋಲು ಗೆರೆಗಳಲಿ  ತಪ್ತ ನಗೆ-  ಸೌಧಗಳಲಿ ನೇತಾಡುವ ರಕ್ತ ನಾಳಗಳು ;  ಹೆಪ್ಪುಗಟ್ಟಿದ ಮೇದುಳ ತಾರುಗಳಲಿ  ತೊಟ್ಟಿಕ್ಕುವ ಕೀವ್…  ಕರುನಾಳು ಸೂರ್ಯ ತನ್ನ ರೆಕ್ಕೆಗಳನ್ನು ಅವುಚಿಕೊಳ್ಳುವಾಗ, ಮಾನವತೆಯ ಉಸಿರು  ದುಡಿದ ಕೈಗಳ ಹಾಡಾಗುತ್ತದೆ…   ಹ್ಞಾ , ಕರಿ ನೆರಳ ಕಪ್ಪು ಹಾಡಾಗುತ್ತದೆ.  ********                                                        

ಕಾವ್ಯಯಾನ Read Post »

You cannot copy content of this page

Scroll to Top